ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ಗುಗ್ಗಳೋತ್ಸವವು ವಿಜೃಂಭಣೆಯಿಂದ ಹಾಗೂ ಭಕ್ತಿಭಾವದಿಂದ ಜರುಗಿತು.
ಕಳೆದ ಸುಮಾರು 10 ವರ್ಷಗಳಿಂದ ದೇವಸ್ಥಾನದಲ್ಲಿ ಗುಗ್ಗಳೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಏಳು ಕುಟುಂಬಗಳ ಗುಗ್ಗಳ ಸೇವೆ ನೆರವೇರಿಸಲಾಯಿತು.
ಶ್ರೀ ವೀರಭದ್ರನ ಉಡುಪಾದ ಕಾಶಿ ಧರಿಸಿದ ಬಾಲ ಪುರವಂತರ ನೃತ್ಯ ಹಾಗೂ ವಡುಪು ಹೇಳುವ ವಿಶಿಷ್ಟ ಶೈಲಿ ನೆರೆದಿದ್ದ ಭಕ್ತರ ಗಮನ ಸೆಳೆಯಿತು. ವೀರ ಪುರವಂತರ ಕಾಶಿ ಧರಿಸಿದ ಅಲಂಕಾರದಲ್ಲಿ ಶ್ರೀ ವೀರಭದ್ರಸ್ವಾಮಿಯು ಕಂಗೊಳಿಸುತ್ತಿದ್ದು, ಇಡೀ ದೇವಸ್ಥಾನ ಆವರಣ ಭಕ್ತಿಮಯ ವಾತಾವರಣದಿಂದ ತುಂಬಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಗುಗ್ಗಳದ ಹಿನ್ನೆಲೆ, ಅದರ ಪರಂಪರೆ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಕುರಿತು ಶರತ್ ಘಾರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಯಳವತ್ತಿ ಕಾರ್ಯಕ್ರಮ ನಿರೂಪಿಸಿದರು.
ಗುಗ್ಗಳೋತ್ಸವದಲ್ಲಿ ಶ್ರೀ ವೀರಭದ್ರೇಶ್ವರ ಸದ್ಭಕ್ತ ಮಂಡಳಿಯ ಸರ್ವ ಸದಸ್ಯರು ವಿವಿಧ ಸೇವೆಗಳಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯಕ್ರಮದ ಬಳಿಕ ಸಮಸ್ತ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆಯ ಶ್ರೀ ಪ್ರಭು ರಾಮಚಂದ್ರ ಪುರಂತರ ಪರಿವಾರದವರು ಅನ್ನಪ್ರಸಾದ ಸೇವೆ ನೆರವೇರಿಸಿದರು.
ಧಾರ್ಮಿಕ ಪರಂಪರೆ, ಭಕ್ತಿ ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಸಾರಿದ ಸಾಮೂಹಿಕ ಗುಗ್ಗಳೋತ್ಸವವು ಭಕ್ತಾದಿಗಳಿಗೆ ವಿಶೇಷ ಆಧ್ಯಾತ್ಮಿಕ ಅನುಭವ ನೀಡುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು.



