ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ದೊರೆಯುವ ಪಡಿತರ ಅಕ್ಕಿಗಾಗಿ ಫಲಾನುಭವಿಗಳು ಶನಿವಾರ ದಿನವಿಡೀ ಸರತಿ ಸಾಲಿನಲ್ಲಿ ನಿಂತು ಪರದಾಡಿದ ದೃಶ್ಯ ಮುಳಗುಂದ ಪಟ್ಟಣದ ನ್ಯಾಯಬೆಲೆ ಅಂಗಡಿಗಳ ಮುಂದೆ ಕಂಡುಬಂತು.
ಆನ್ಲೈನ್ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಉಂಟಾದ ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳ ದೃಢೀಕರಣ ಹಾಗೂ ಪಡಿತರ ವಿತರಣೆಯಲ್ಲಿ ವಿಳಂಬ ಉಂಟಾಗಿತ್ತು. ಪರಿಣಾಮವಾಗಿ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಪಡಿತರ ಅಕ್ಕಿ ಪಡೆಯಲಾಗದೆ ತೀವ್ರ ಸಂಕಷ್ಟ ಅನುಭವಿಸಿದರು.
ಕೆಲವರು ಶನಿವಾರ ಬೆಳಗ್ಗೆ 5 ಗಂಟೆಯಿಂದಲೇ ನ್ಯಾಯಬೆಲೆ ಅಂಗಡಿಗಳ ಮುಂದೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದರು. ರಾತ್ರಿ 10 ಗಂಟೆಯಾದರೂ ಕೆಲವರಿಗೆ ತಮ್ಮ ಸರದಿ ಬಾರದ ಸ್ಥಿತಿ ನಿರ್ಮಾಣವಾಗಿದ್ದು, ಅನ್ನಭಾಗ್ಯದ ಅಕ್ಕಿಗಾಗಿ ಇಡೀ ದಿನ ಕಾಯಬೇಕಾದ ದುಸ್ಥಿತಿ ಫಲಾನುಭವಿಗಳದ್ದಾಗಿತ್ತು.
ಸರ್ವರ್ ಸಮಸ್ಯೆಯಿಂದ ವಿತರಣೆ ವಿಳಂಬ
ಪಡಿತರ ವಿತರಣೆಗೆ ಅಗತ್ಯವಿರುವ ಆನ್ಲೈನ್ ವ್ಯವಸ್ಥೆಯಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಣ ಸೇರಿದಂತೆ ವಿತರಣಾ ಪ್ರಕ್ರಿಯೆಗೆ ತೀವ್ರ ಅಡ್ಡಿಯಾಗಿತ್ತು. ಗಂಟೆಗಟ್ಟಲೆ ಕಾಯುತ್ತಿದ್ದರೂ ಅಕ್ಕಿ ಪಡೆಯಲು ಸಾಧ್ಯವಾಗದೆ ಅನೇಕ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದರು.
ವೃದ್ಧರು, ಮಹಿಳೆಯರ ಗೋಳು
ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ನಿಂತವರಲ್ಲಿ ಹೆಚ್ಚಿನವರು ವೃದ್ಧರು ಹಾಗೂ ಮಹಿಳೆಯರಾಗಿದ್ದರು. ದೀರ್ಘಕಾಲ ನಿಂತುಕೊಳ್ಳಲಾಗದೆ ಕೆಲ ವೃದ್ಧರು ಅಸ್ವಸ್ಥಗೊಂಡು ಮನೆಗೆ ಮರಳುವಂತಾಗಿತ್ತು.
ಈ ತಿಂಗಳ ಪಡಿತರ ಅಕ್ಕಿ ದೊರೆಯುತ್ತದೆಯೋ ಇಲ್ಲವೋ ಎಂಬ ಆತಂಕವೂ ಫಲಾನುಭವಿಗಳನ್ನು ಕಾಡುತ್ತಿತ್ತು. ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ಕುಟುಂಬಗಳು ಅನ್ನಭಾಗ್ಯದ ಅಕ್ಕಿಯನ್ನೇ ನಂಬಿಕೊಂಡಿರುವುದರಿಂದ ಸರ್ವರ್ ಸಮಸ್ಯೆ ಅವರ ಜೀವನದ ಮೇಲೆ ನೇರ ಪರಿಣಾಮ ಬೀರುವಂತಾಗಿತ್ತು.
ದುಡಿಮೆ ಬಿಟ್ಟು ಪಡಿತರಕ್ಕಾಗಿ ಕಾಯುವ ಸ್ಥಿತಿ
ಮುಳಗುಂದ ಪ್ರದೇಶವು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಪ್ರಸಕ್ತ ವರ್ಷ ಸಮರ್ಪಕ ಮುಂಗಾರು ಮಳೆಯಾಗದೆ ರೈತರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಪಸ್ವಲ್ಪ ಉಳಿದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿರುವ ಸಂದರ್ಭದಲ್ಲೇ, ಅನೇಕ ಕುಟುಂಬಗಳು ತಮ್ಮ ದಿನನಿತ್ಯದ ಜೀವನಕ್ಕಾಗಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅವಲಂಬಿಸಿವೆ.
ಆದರೆ ಶನಿವಾರ ಸರ್ವರ್ ಸಮಸ್ಯೆಯಿಂದ ಕೂಲಿ ಕಾರ್ಮಿಕರು ತಮ್ಮ ದಿನದ ಕೆಲಸಕ್ಕೆ ತೆರಳದೆ ದಿನವಿಡೀ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಒಂದೆಡೆ ದುಡಿಮೆ ಇಲ್ಲ, ಇನ್ನೊಂದೆಡೆ ಪಡಿತರವೂ ಸಿಗುತ್ತಿಲ್ಲ ಎಂಬ ಪರಿಸ್ಥಿತಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದವು.
“ನಮ್ಮ ಗೋಳು ಕೇಳುವವರು ಯಾರು?” ಎಂಬ ಪ್ರಶ್ನೆ ಫಲಾನುಭವಿಗಳಿಂದ ಕೇಳಿಬರುತ್ತಿತ್ತು.
ಪಡಿತರ ಅಕ್ಕಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಸಾಕಷ್ಟು ಕುಟುಂಬಗಳು, ಈ ತಿಂಗಳ ಅಕ್ಕಿ ದೊರೆಯದಿದ್ದರೆ ದಿನನಿತ್ಯದ ಜೀವನ ನಿರ್ವಹಣೆ ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಡಿತರ ವಿತರಣೆಯಲ್ಲಿ ಪದೇಪದೇ ತಾಂತ್ರಿಕ ಹಾಗೂ ಸರ್ವರ್ ಸಮಸ್ಯೆಗಳು ಉಂಟಾಗುತ್ತಿರುವುದರಿಂದ ಸರ್ಕಾರ ಮತ್ತು ಆಹಾರ ಇಲಾಖೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಫಲಾನುಭವಿಗಳ ಒತ್ತಾಯವಾಗಿತ್ತು.
ಕೂಲಿ ಕಾರ್ಮಿಕರು ತಮ್ಮ ಕೆಲಸ ಬಿಟ್ಟು ದಿನವಿಡೀ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಗೆ ತೆರೆ ಎಳೆಯಬೇಕು. ಪಡಿತರ ವಿತರಣೆಗೆ ಸುಗಮವಾದ ತಾಂತ್ರಿಕ ವ್ಯವಸ್ಥೆ ಕಲ್ಪಿಸಿ, ಯಾವುದೇ ಫಲಾನುಭವಿಯೂ ಪಡಿತರದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಗದಗ ಜಿಲ್ಲೆಯಲ್ಲಿ ಪಡಿತರ ವಿತರಣೆಯ ಶೇ.79ರಷ್ಟು ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಶೇ.21ರಷ್ಟು ವಿತರಣೆಯನ್ನು ಮುಂದಿನ ಮೂರು ದಿನಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು.
— ಎಸ್.ಡಿ. ಪಾಟೀಲ, ಆಹಾರ ಇಲಾಖೆ ಉಪನಿರ್ದೇಶಕ
ಸರ್ವರ್ ಸಮಸ್ಯೆಯಿಂದ ಕೂಲಿ ಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ದಿನದ ಕೆಲಸ ಬಿಟ್ಟು ಪಡಿತರಕ್ಕಾಗಿ ಕಾಯಬೇಕಾಗಿದೆ. ಫಲಾನುಭವಿಗಳಿಗೆ ತೊಂದರೆಯಾಗದಂತೆ ಸುಗಮವಾದ ಸರ್ವರ್ ವ್ಯವಸ್ಥೆ ಕಲ್ಪಿಸಬೇಕು.
— ರಿಯಾಜ್ ಮುಲ್ಲಾ, ಫಲಾನುಭವಿ, ಮುಳಗುಂದ



