ವಿಜಯಸಾಕ್ಷಿ ಸುದ್ದಿ, ಗದಗ:
ಇಲ್ಲಿನ ಸ್ಟೇಷನ್ ರಸ್ತೆಯ ಗೌರಿ ಶಂಕರ್ ಲಾಡ್ಜ್ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು ಓ.ಸಿ. ಜೂಜಾಟದಲ್ಲಿ ತೊಡಗಿದ್ದ ಕುಖ್ಯಾತ ಮಟ್ಕಾ ಬುಕ್ಕಿ ಸೇರಿದಂತೆ ಮೂವರನ್ನು ಶಹರ ಪೊಲೀಸರು ಬಂಧಿಸಿದ್ದಾರೆ.
ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವುದಾಗಿ ಜನರಿಂದ ಹಣ ಪಡೆದು ಓ.ಸಿ ಕಲ್ಯಾಣಿ ಎಂಬ ಜೂಜಾಟದಲ್ಲಿ ತೊಡಗಿದ್ದ ಜೋಡ ಮಾರುತಿ ದೇವಸ್ಥಾನದ ಬಳಿಯ ಕಿಲ್ಲಾ ಓಣಿಯ ಮಾಧುಸಾ ರಾಮನಾಥಸಾ ಮಿಸ್ಕಿನ್, ಬೆಟಗೇರಿಯ ಮಂಜುನಾಥ್ ನಗರದ ಕಣವಿ ಪ್ಲಾಟ್ ನಿವಾಸಿ ಯಲ್ಲಪ್ಪ ಪರಶುರಾಮ ಢಗೆ ಹಾಗೂ ಜವಳಗಲ್ಲಿಯ ಪೆಂಟರ್ ಹುಚ್ಚಪ್ಪ ಜಟ್ಟೆಪ್ಪ ಅರಕೇರಿ ಎಂಬುವರನ್ನು ಶಹರ ಠಾಣೆಯ ಪಿಎಸ್ಐ ಜಿ ಟಿ ಜಕ್ಕಲಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 12ಸಾವಿರ ರೂಪಾಯಿಗಳನ್ನು ಹಾಗೂ ಚೀಟಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.