ಬೆಂಗಳೂರು: ಎಚ್.ಡಿ. ಕುಮಾರಸ್ವಾಮಿಗೆ ಗುಂಡಿಗೆ ಇದ್ದರೆ ಯಾರ ಮನೆ ಬಾಗಿಲನ್ನು ಯಾರು ಬಡಿದರು ಎಂಬ ಚರ್ಚೆಗೆ ತಮ್ಮ ಜೊತೆ ಬರುವಂತೆ ಸಚಿವ ಚೆಲುವರಾಯಸ್ವಾಮಿ ಸವಾಲು ಹಾಕಿದ್ದಾರೆ. ರಾತ್ರಿ 9 ಗಂಟೆಗೆ ಹೋಗಿ ಯಾರ ಮನೆ ಬಾಗಿಲು ಬಡಿದರು ಎಂಬ ಕುಮಾರಸ್ವಾಮಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ಕುಮಾರಸ್ವಾಮಿಗೆ ಗುಂಡಿಗೆ ಇದ್ದರೆ ತಮ್ಮ ಜೊತೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಎರಡು ದಿನ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದ ಅವರು,
ಆ ಸಂದರ್ಭದಲ್ಲಿ ದೇವೇಗೌಡರು ಅಧಿವೇಶನ ಆರಂಭಕ್ಕೂ ಮುನ್ನ ಬೆಳಗ್ಗೆ 10 ಗಂಟೆ ಒಳಗೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಬರುವಂತೆ ತಮಗೆ ಜವಾಬ್ದಾರಿ ವಹಿಸಿದ್ದರೆಂದೂ, ಆ ಸಂದರ್ಭದಲ್ಲಿ ತಾವೇ ಕುಮಾರಸ್ವಾಮಿ ಅವರ ಮನೆ ಬಾಗಿಲು ಬಡಿದಿದ್ದಾಗಿಯೂ ತಿಳಿಸಿದರು. ಅದು ತಪ್ಪಾಗಿದ್ದರೆ ಕುಮಾರಸ್ವಾಮಿ ಸ್ಪಷ್ಟನೆ ನೀಡಲಿ, ಆ ಎರಡು ದಿನ ಅವರು ಎಲ್ಲಿ ಕಾಣೆಯಾಗಿದ್ದರು ಎಂದು ಚೆಲುವರಾಯಸ್ವಾಮಿ ಪ್ರಶ್ನಿಸಿದರು.
ತಮ್ಮ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಬಳಿ ಏನೂ ಇಲ್ಲವೆಂದೂ, ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲು ತಮ್ಮ ಬಳಿ ಸಾಕಷ್ಟಿದೆಯೆಂದೂ ಹೇಳಿದ ಚೆಲುವರಾಯಸ್ವಾಮಿ, ಧೈರ್ಯವಿದ್ದರೆ ವಿಧಾನಸೌಧದಲ್ಲಿ ಅಥವಾ ಅವರು ಸೂಚಿಸುವ ಟಿವಿ ಚಾನೆಲ್ನಲ್ಲಿ ಚರ್ಚೆಗೆ ಬರುವಂತೆ ಸವಾಲು ಹಾಕಿದರು. ತಾವು ದೆಹಲಿಗೆ ತೆರಳಿದ್ದು ನೀರಾವರಿ ಯೋಜನೆ ಮತ್ತು ಕುಡಿಯುವ ನೀರಿನ ಕುರಿತು ಜಲಶಕ್ತಿ ಸಚಿವರು ನಡೆಸಿದ ಸಭೆಗಾಗಿ ಎಂದು ಸ್ಪಷ್ಟಪಡಿಸಿದ ಅವರು,
ಈ ಸಭೆಯನ್ನು ಪ್ರಧಾನಮಂತ್ರಿಗಳೇ ಉದ್ದೇಶಿಸಿ ಮಾತನಾಡಿದ್ದರೆಂದೂ, ಈ ವಿಷಯ ಕ್ಯಾಬಿನೆಟ್ ಸಚಿವರಿಗೂ ಗೊತ್ತಿಲ್ಲವೆಂದೂ ಹೇಳಿದರು. ವಾರಕ್ಕೆ ಮೂರು ದಿನ ರಾಜ್ಯದಲ್ಲೇ ಇರುತ್ತೇನೆಂದೂ, ನೀರು ಬಿಡಿಸಲು ದೆಹಲಿಗೆ ಹೋಗಿಲ್ಲವೆಂದೂ ಸ್ಪಷ್ಟಪಡಿಸಿದ ಚೆಲುವರಾಯಸ್ವಾಮಿ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ದೆಹಲಿಯಲ್ಲಿ ಕುಳಿತು ನೀರು ಬಿಡಿಸುತ್ತಿದ್ದುದರಿಂದಲೇ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿ, ಮಾಜಿ ಸಿಎಂ ಆದವರು ಮಾತನಾಡುವ ರೀತಿ ಹೀಗಿರಬಾರದು ಎಂದು ಕಿಡಿಕಾರಿದರು.



