ವಿಜಯಸಾಕ್ಷಿ ಸುದ್ದಿ, ಗದಗ:
ನೀ ಹುಲಕೋಟಿಗೆ ಬರಬೇಡ…ನೀ ಬಂದ್ರೆ ಡೇಂಜರ್ ಆಗುತ್ತೆ. ಹೀಗಂತ ವ್ಯಕ್ತಿಯೊಬ್ಬ ನೇರವಾಗಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಬೆದರಿಕೆ ಹಾಕಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಹುಲಕೋಟಿಯಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ವೀಕ್ಷಣೆಗೆ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಜೊತೆಗೆ ಆಗಮಿಸಿದ್ದೆ. ನಾ ಹುಲಕೋಟಿಗೆ ಬಂದ ಸುದ್ದಿ ಹಬ್ಬುತ್ತಿದ್ದಂತೆಯೇ ಇಡೀ ಊರಿನ ವಿದ್ಯುತ್ ಪೂರೈಕೆ ನಿಲ್ಲಿಸಲಾಗಿದೆ. ಕತ್ತಲಿನಲ್ಲಿ ಸಮುದಾಯ ಭವನದ ಕಾಮಗಾರಿ ವೀಕ್ಷಣೆ ಮಾಡಿದೆ ಎಂದಿದ್ದಾರೆ.
ಕಾಮಗಾರಿ ವೀಕ್ಷಣೆ ನಂತರ ಕಾರ್ಯಕರ್ತ ನಾರಾಯಣ ಎಂಬುವವರು ಮನೆಗೆ ಹೋಗಿ ವಾಪಸು ವಾಹನ ಹತ್ತುವಾಗ ಏಕಾಏಕಿ ವ್ಯಕ್ತಿಯೊಬ್ಬ ಬಂದವನೇ ನೀ ಹುಲಕೋಟಿಗೆ ಬರಬೇಡ….ಬಂದ್ರೆ ಡೇಂಜರ್ ಆಗುತ್ತೆ….ಅಂತ ಏಕವಚನದಲ್ಲಿಯೇ ದಮ್ಕಿ ಹಾಕಿದ ಎಂದು ಅವರು ಆರೋಪಿಸಿದ್ದಾರೆ.
ಈ ಹಿಂದೆಯೂ ಚುನಾವಣಾ ಪ್ರಚಾರ ಸಂದರ್ಭದಲ್ಲಿಯೂ ಈ ರೀತಿ ಕರೆಂಟ್ ತಗೆಯೋದು ಮಾಡಿದ್ದಾರೆ. ಇಂತಹದ್ದೆಕ್ಕೆಲ್ಲಾ ಹೆದರುವ ಮಾತಿಲ್ಲ. ಈಗಾಗಲೇ ಅವರಿಗೆ ಭಯ ಆರಂಭವಾಗಿದೆ.
ಗ್ರಾಮದಲ್ಲಿ ನನ್ನನ್ನು ಪ್ರೀತಿಸುವ ಜನ ಇದ್ದಾರೆ. ನಾನೇನೂ ಹೊರಗಿನವನಲ್ಲ. ನಾನು ಕೂಡ ಹುಲಕೋಟಿ ಗ್ರಾಮದ ಮೊಮ್ಮಗ. ಈಗಾಗಲೇ ಗ್ರಾಮದಲ್ಲಿ ಜನ ಬದಲಾಗಿದ್ದು, ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅನಿಲ ಮೆಣಸಿನಕಾಯಿ ಹೇಳಿದ್ದಾರೆ.
ನಾ ಹುಲಕೋಟಿಗೆ ಆಗಮಿಸುವ ಸುದ್ದಿ ಕೇಳಿದ ಅಭಿಮಾನಿಗಳು, ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು. ಇದನ್ನೆಲ್ಲಾ ನೋಡಿದಾಗ ಗ್ರಾಮದ ಜನ ಬದಲಾವಣೆ ಆಗಿದ್ದು ಖುಷಿ ತಂದಿದೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅಭಿಪ್ರಾಯ ಪಟ್ಟಿದ್ದಾರೆ.