HomeArt and Literatureಗುರು ಎಂಬ ಬೆಳಕು: ಅಕ್ಷರದಾಚೆ ಬದುಕು ಕಲಿಸುವ ಶಿಕ್ಷಕ

ಗುರು ಎಂಬ ಬೆಳಕು: ಅಕ್ಷರದಾಚೆ ಬದುಕು ಕಲಿಸುವ ಶಿಕ್ಷಕ

ಮನುಷ್ಯನ ಬದುಕಿನಲ್ಲಿ ಕೆಲವು ವ್ಯಕ್ತಿಗಳ ಪ್ರಭಾವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಮಹತ್ವದ ವ್ಯಕ್ತಿಗಳಲ್ಲಿ ಶಿಕ್ಷಕರ ಸ್ಥಾನ ಅತ್ಯಂತ ವಿಶಿಷ್ಟವಾದುದು. ತಾಯಿ-ತಂದೆಯರು ಮಗುವಿಗೆ ಜನ್ಮ ನೀಡಿದರೆ, ಶಿಕ್ಷಕರು ಆ ಬದುಕಿಗೆ ಜ್ಞಾನ, ಸಂಸ್ಕಾರ, ಮೌಲ್ಯ ಮತ್ತು ಸರಿಯಾದ ದಿಕ್ಕನ್ನು ನೀಡುತ್ತಾರೆ. ಹೀಗಾಗಿ ಶಿಕ್ಷಕ ಎಂದರೆ ಕೇವಲ ಪಾಠ ಬೋಧಿಸುವ ವ್ಯಕ್ತಿಯಲ್ಲ; ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿ, ಕನಸುಗಳಿಗೆ ರೆಕ್ಕೆ ನೀಡುವ ಮಾರ್ಗದರ್ಶಿ.

ಪ್ರತಿ ವರ್ಷ ಸೆಪ್ಟೆಂಬರ್ 5ರಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತದ ಮಹಾನ್ ತತ್ವಜ್ಞಾನಿ, ಶಿಕ್ಷಣತಜ್ಞ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಕರ ಸೇವೆ, ತ್ಯಾಗ, ಸಮರ್ಪಣೆ ಹಾಗೂ ಸಮಾಜ ನಿರ್ಮಾಣದಲ್ಲಿ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ಮಹತ್ವದ ದಿನ ಇದಾಗಿದೆ.

ಶಾಲೆಯ ಮೊದಲ ದಿನ ಮಗುವಿನ ಕೈಹಿಡಿದು ಅಕ್ಷರ ಲೋಕಕ್ಕೆ ಪರಿಚಯಿಸುವ ಶಿಕ್ಷಕ, ಮುಂದೆ ಅದೇ ಮಗುವಿನ ಕನಸುಗಳಿಗೆ ರೆಕ್ಕೆ ಕಟ್ಟುತ್ತಾನೆ. ಪುಸ್ತಕದ ಪಾಠದ ಜೊತೆಗೆ ಬದುಕಿನ ಪಾಠವನ್ನೂ ಕಲಿಸುತ್ತಾನೆ. ಸೋತಾಗ ಕುಗ್ಗದೆ ಮತ್ತೆ ಪ್ರಯತ್ನಿಸುವುದು, ತಪ್ಪಾದಾಗ ತಿದ್ದಿಕೊಳ್ಳುವುದು, ಯಶಸ್ಸಿನ ಸಂದರ್ಭದಲ್ಲಿ ವಿನಯದಿಂದ ಇರುವುದು ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ಕಲಿಸುವವನೇ ನಿಜವಾದ ಶಿಕ್ಷಕ.

ಇಂದಿನ ತಂತ್ರಜ್ಞಾನ ಯುಗದಲ್ಲಿ ಜ್ಞಾನ ಮತ್ತು ಮಾಹಿತಿಯನ್ನು ಪಡೆಯಲು ಅನೇಕ ಮಾರ್ಗಗಳಿವೆ. ಮೊಬೈಲ್, ಇಂಟರ್‌ನೆಟ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಸಾಧನಗಳು ನಮ್ಮ ಕೈಯಲ್ಲಿವೆ. ಆದರೆ ಯಾವುದು ಸರಿಯಾದ ಜ್ಞಾನ? ಅದನ್ನು ಹೇಗೆ ಬಳಸಬೇಕು? ಬದುಕಿನಲ್ಲಿ ಯಾವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು? ಎಂಬುದನ್ನು ತಿಳಿಸಿಕೊಡುವ ಮಾನವೀಯ ಮಾರ್ಗದರ್ಶನದ ಅಗತ್ಯ ಎಂದಿಗೂ ಕಡಿಮೆಯಾಗುವುದಿಲ್ಲ.

ಒಬ್ಬ ವಿದ್ಯಾರ್ಥಿ ಮುಂದೆ ವೈದ್ಯನಾಗಬಹುದು, ವಿಜ್ಞಾನಿಯಾಗಬಹುದು, ಅಧಿಕಾರಿಯಾಗಬಹುದು, ಉದ್ಯಮಿಯಾಗಬಹುದು ಅಥವಾ ಸಮಾಜ ಸೇವಕನಾಗಬಹುದು. ಆದರೆ ಆತನ ಯಶಸ್ಸಿನ ಪಯಣದ ಆರಂಭದಲ್ಲಿ ದಾರಿ ತೋರಿಸಿದ ಒಬ್ಬ ಶಿಕ್ಷಕನ ಪ್ರೇರಣೆ ಖಂಡಿತವಾಗಿಯೂ ಇರುತ್ತದೆ. ಕೆಲವೊಮ್ಮೆ ಶಿಕ್ಷಕರ ಒಂದೇ ಒಂದು ಮಾತು ವಿದ್ಯಾರ್ಥಿಯ ಬದುಕನ್ನೇ ಬದಲಾಯಿಸಬಲ್ಲದು. “ನೀನು ಮಾಡಬಲ್ಲೆ” ಎಂಬ ಶಿಕ್ಷಕರ ವಿಶ್ವಾಸದ ಮಾತು ಆತ್ಮವಿಶ್ವಾಸ ಕಳೆದುಕೊಂಡ ವಿದ್ಯಾರ್ಥಿಗೆ ಹೊಸ ಧೈರ್ಯ ನೀಡುತ್ತದೆ.

ಶಿಕ್ಷಕರನ್ನು ಗೌರವಿಸುವುದು ಎಂದರೆ ಕೇವಲ ಒಂದು ದಿನ ಹೂವು ನೀಡಿ ಶುಭಾಶಯ ಹೇಳುವುದಲ್ಲ. ಅವರು ಕಲಿಸಿದ ಉತ್ತಮ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.

ಅಕ್ಷರ ಕಲಿಸುವವರು ಹಲವರಿರಬಹುದು; ಆದರೆ ಅಕ್ಷರದಾಚೆ ಬದುಕಿನ ಅರ್ಥ ಕಲಿಸುವವರೇ ನಿಜವಾದ ಗುರು.

ದೀಪವು ತಾನು ಬೆಳಗುತ್ತಾ ಸುತ್ತಲಿನ ಕತ್ತಲೆಯನ್ನು ದೂರ ಮಾಡುವಂತೆ, ಶಿಕ್ಷಕನು ತನ್ನ ಜ್ಞಾನವನ್ನು ಹಂಚಿಕೊಳ್ಳುತ್ತಾ ಅನೇಕ ಬದುಕುಗಳಿಗೆ ಬೆಳಕಾಗುತ್ತಾನೆ. ಇಂತಹ ಜ್ಞಾನದೀಪಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಲಿ.

ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

ಶ್ರೀಮತಿ ಚಂದ್ರಕಲಾ ಎಂ. ಇಟಗಿಮಠ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img