ವಿಜಯಸಾಕ್ಷಿ ಸುದ್ದಿ, ಬಾಗಲಕೋಟ
ರಜೆಗೆಂದು ಊರಿಗೆ ಬಂದಿದ್ದ ಭಾರತೀಯ ಸೇನೆಯ ಯೋಧನನ್ನು ಆತನ ಭಾವನೇ ( ಪತ್ನಿಯ ಸಹೋದರ) ಚಾಕು ಇರಿದು ಕೊಲೆ ಮಾಡಿರುವ ಅಮಾನುಷ ಘಟನೆ ಬಾಗಲಕೋಟ ಜಿಲ್ಲೆಯಲ್ಲಿ ನಡೆದಿದೆ.
ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದ ಕರಿಸಿದ್ಧಪ್ಪ ಕಳಸದ(೨೫ ವರ್ಷ) ಕೊಲೆಗೀಡಾದ ದುರ್ದೈವಿ ಸೈನಿಕನಾಗಿದ್ದು, ಧರಿಗೌಡ ಧೂಳಪ್ಪನವರ್ ಕೃತ್ಯ ನಡೆಸಿದ ಆರೋಪಿಯಾಗಿದ್ದಾನೆ.
ಘಟನೆಯ ವಿವರ
ಯೋಧ ಕರಿಸಿದ್ಧಪ್ಪ ರಾಜಸ್ಥಾನದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ನಾಲ್ಕು ದಿನಗಳ ಹಿಂದೆ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ. ಎರಡು ವರ್ಷಗಳ ಹಿಂದೆ ವಿದ್ಯಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ ಕರಿಸಿದ್ಧಪ್ಪ, ಗುರುವಾರ ರಾತ್ರಿ ಊಟ ಮಾಡುವ ಸಮಯದಲ್ಲಿ ಹೆಂಡತಿಯೊಂದಿಗೆ ಯಾವುದೋ ವಿಷಯಕ್ಕೆ ಜಗಳವಾಡಿದ್ದರು ಎನ್ನಲಾಗಿದೆ.
ಇದಾದ ಬಳಿಕ ವಿದ್ಯಾ ತನ್ನ ಸಹೋದರ ಧರಿಗೌಡನಿಗೆ ಫೋನ್ ಮಾಡಿ ತನ್ನ ಗಂಡ ಜಗಳವಾಡುತ್ತಿರುವ ಬಗ್ಗೆ ತಿಳಿಸಿ ಕೂಡಲೇ ಮನೆಗೆ ಬರುವಂತೆ ತಿಳಿಸಿದ್ದಾಳೆ. ಕೋಪದಲ್ಲಿಯೇ ಸಹೋದರಿಯ ಮನೆಗೆ ಬಂದ ಆರೋಪಿ ಧರಿಗೌಡ, ಅದೇ ಸಿಟ್ಟಿನಲ್ಲಿ ಚಾಕುವಿನಿಂದ ಭಾವನಾದ ಕರಿಸಿದ್ಧಪ್ಪನಿಗೆ ಇರಿದಿದ್ದಾನೆ ಎನ್ನಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯೋಧ ಕರಿಸಿದ್ಧಪ್ಪ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣದ ತನಿಖೆ ನಡೆಸಿದ್ದಾರೆ.