ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಸುಮಾರು ಹತ್ತು ದಿನಗಳಿಂದ ನಾಯಿಮರಿ ಹೊತ್ತು ಥೇಟ್ ತನ್ನ ಸಂತಾನವೆಂಬಂತೆ ಸಾಕುತ್ತಿದ್ದ ಮಂಗಣ್ಣ ಈಗ ದುಃಖದ ಜೊತೆಗೆ ಆಕ್ರೋಶಗೊಂಡು ಕಂಡಕಂಡವರ ಮೇಲೆ ಎರಗಲು ಮುಂದಾಗಿದೆ. ಮಂಗಣ್ಣನ ಈ ಸ್ಥಿತಿಗೆ ಕಾರಣ, ನಾಯಿಮರಿಯ ಮರಣ!
ಇದನ್ನೂ ಓದಿ ಮಂಗನ ಮಡಿಲಲ್ಲಿ ನಾಯಿಮರಿ; ಇದೆಂಥಾ ಮೂಕಪ್ರೀತಿ?
ಹೌದು.. ಆಗಷ್ಟೇ ಜನಿಸಿ, ಇನ್ನೂ ಕಣ್ಣು ಬಿಡದ ಪುಟ್ಟ ನಾಯಿಮರಿಯನ್ನು ಮಂಗಣ್ಣ ತನ್ನ ಕಂಕುಳಲ್ಲಿ ಇಟ್ಟುಕೊಂಡು ನಗರದ ಹಾತಲಗೇರಿ ರಸ್ತೆಯ ವಿವೇಕಾನಂದ ರಸ್ತೆಯ ಬಡಾವಣೆಗಳಲ್ಲಿ ಓಡಾಡುತ್ತಿತ್ತು. ಈ ಬಗ್ಗೆ ವಿಜಯಸಾಕ್ಷಿ ವರದಿ ಮಾಡಿತ್ತು.
ಇದು ಮಂಗಣ್ಣನ ಮಮಕಾರವೋ? ನಾಯಿಮರಿಯ ಸಂಕಟವೋ? ಎಂಬ ದ್ವಂದ್ವ ಜನರಲ್ಲಿತ್ತು. ಮಂಗಣ್ಣ ಆ ನಾಯಿಮರಿಯನ್ನು ಹೀಗೇ ಹೊತ್ತು ತಿರುಗಿದರೆ ತೊಂದರೆ ಉದ್ಭವಿಸುವ ಆತಂಕವೂ ಜನರದ್ದಾಗಿತ್ತು. ಹಾಗಾಗಿ ಜನ ನಾಯಿಮರಿಯನ್ನು ಮಂಗಣ್ಣನಿಂದ ಬಿಡಿಸಲು ಶತಾಯಗತಾಯ ಪ್ರಯತ್ನ ಮಾಡಿದರೂ ಮಂಗಣ್ಣ ಯಾರನ್ನೂ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ.
ಕೊನೆಗೂ ಜನರ ಆತಂಕ ನಿಜವಾಗಿದೆ. ನಾಯಿಮರಿ ಅಸುನೀಗಿದೆ. ಇದರಿಂದ ದುಃಖದ ಜೊತೆಗೆ ಮತ್ತಷ್ಟೂ ಆಕ್ರೋಶಗೊಂಡಿರುವ ಮಂಗಣ್ಣ ಹತ್ತಿರ ಬಂದವರ ಮೇಲೆ ಎರಗಿ ಕ್ರೋಧ ವ್ಯಕ್ತಪಡಿಸುತ್ತಿದೆ ಎನ್ನಲಾಗಿದೆ.
ನಾಯಿಮರಿಯ ಜೀವ ಹೋದರೂ ಜೊತೆಯಲ್ಲೇ ಕರೆದೊಯ್ಯುತ್ತಿರುವ ಮಂಗಣ್ಣನನ್ನು ಹಿಡಿಯಲು ಅರಣ್ಯ ಇಲಾಖೆ “ಆಪರೇಷನ್ ಮಂಕಿ” ಕಾರ್ಯಾಚರಣೆ ನಡೆಸಲು ಮುಂದಾಗಿದೆ.