ನ. 14 ರಂದು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ
ವಿಜಯಸಾಕ್ಷಿ ಸುದ್ದಿ, ರೋಣ
ರೋಣ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ಆಯ್ಕೆಗೊಂಡಿದ್ದು ನ. ೧೪ ರಂದು ಕೆಪಿಸಿಸಿ ಕಚೇರಿಯಲ್ಲಿ ಉಮೇದುವಾರಿಕೆ ಬಯಸಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ ಹೇಳಿದರು.
ಅವರು ಶನಿವಾರ ಅಕ್ಕ ಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿದ ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿ.ಎಸ್.ಪಾಟೀಲರು ರೋಣ ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕ್ಷೇತ್ರದಲ್ಲಿರುವ ಸರ್ವ ಜನಾಂಗದವರನ್ನು ತಮ್ಮ ಕುಟುಂಬದ ಸದಸ್ಯರಂತೆ ಇಂದಿಗೂ ಕಾಣುತ್ತಾ ಬಂದಿದ್ದಾರೆ. ಇಂಥಹ ನಾಯಕರನ್ನು ನಾವು ಪಡೆದಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ೨೦೨೩ಕ್ಕೆ ನಡೆಯುವ ವಿಧಾನ ಸಭೆಯ ಚುನಾವಣೆಗೆ ರೋಣ ಮತಕ್ಷೇತ್ರದ ಅಭ್ಯರ್ಥಿಯಾಗಿ ಜಿ.ಎಸ್.ಪಾಟೀಲ ಸ್ಪರ್ಧಿಸಲಿದ್ದು, ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಎಚ್.ಎಸ್.ಸೋಂಪುರ ಮಾತನಾಡಿ, ಜಿ. ಎಸ್. ಪಾಟೀಲರು ಮಾತೃ ಹೃದಯ ಹೊಂದಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಮಾತೃ ಹೃದಯಿ ಪಾಟೀಲರನ್ನು ಅಭೂತ ಪೂರ್ವವಾಗಿ ಗೆಲ್ಲಿಸಬೇಕು. ರೋಣದಲ್ಲಿ ಜರುಗಿದ ಪೂರ್ವಭಾವಿ ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಬಂದಿರುವ ಕಾರ್ಯಕರ್ತರನ್ನು ಕಂಡರೆ ಸಾಕು ಜಿ.ಎಸ್.ಪಾಟೀಲರ ತಾಯಿ ಹೃದಯ ಇರುವುದನ್ನು ಸಾಕ್ಷೀಕರಿಸುತ್ತದೆ. ಹೀಗಾಗಿ ಕ್ಷೇತ್ರದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಬೇಕು ಎಂದರು.
ಮಾಜಿ ಶಾಸಕ ಜಿ.ಎಸ್.ಪಾಟೀಲ, ವಿ. ಆರ್. ಗುಡಿಸಾಗರ, ವಿ. ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ, ಆನಂದ ಚಂಗಳಿ, ಇಸ್ಮಾಯಿಲ್ ಹೊರಪೇಟಿ, ಅಂದಪ್ಪ ಬಿಚ್ಚೂರ, ಪರಶುರಾಮ ಅಳಗವಾಡಿ, ಪ್ರಭು ಮೇಟಿ, ಬಸವರಾಜ ನವಲಗುಂದ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.