ವೀರಶೈವ ಧರ್ಮವನ್ನು ವಿಶ್ವಮಟ್ಟದಲ್ಲಿ ಪ್ರಕಾಶಗೊಳಿಸಿದವರು ರಂಭಾಪುರಿ ಜಗದ್ಗುರುಗಳು; ಆನಂದಯ್ಯ ಕಲ್ಮಠ

0
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ/ಸವಣೂರು

Advertisement

ವೀರಶೈವ ಧರ್ಮವನ್ನು ವಿಶ್ವಮಟ್ಟದಲ್ಲಿ ಪ್ರಕಾಶಗೊಳಿಸಿ, ಸತ್ಯ ಸನಾತನತೆಯನ್ನು ಧರ್ಮದ ದಂಡಯಾತ್ರೆಯ ಮೂಲಕವಾಗಿ ಜನಮಾನಸಕ್ಕೆ ನೀಡಿದ ಮಹಾಪ್ರಭು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಭಗವತ್ಪಾದರು ಎಂದು ಗಣ್ಯ ವರ್ತಕರಾದ ಆನಂದಯ್ಯ ಕಲ್ಮಠ ಹೇಳಿದರು.

ಅವರು ನಗರದ ಶ್ರೀ ರಂಭಾಪುರೀಶ ನಿವಾಸದಲ್ಲಿ ಜರುಗಿದ ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 67ನೇ ವರ್ಷದ ಜನ್ಮ ಮಹೋತ್ಸವ ಪೂಜಾ ಸಮಾರಂಭದಲ್ಲಿ ಮಾತನಾಡಿದರು.

ಹುಬ್ಬಳ್ಳಿ ತಾಲೂಕಿನ ಹಳ್ಳಿಯಾಳ ಗ್ರಾಮದಲ್ಲಿ 1956 ರಲ್ಲಿ ಚನ್ನಬಸಯ್ಯ-ಚನ್ನಬಸಮ್ಮನವರ ಪುಣ್ಯ ಗರ್ಭದಲ್ಲಿ ಜನ್ಮ ತಳೆದು ಪುರದ ಪುಣ್ಯವೆಂದಂತೆ ಬಾಲ್ಯದಲ್ಲಿಯೇ ಸ್ವಾಮಿತ್ವದ ಮಹತ್ವ ತಿಳಿಸಿದ ಮಹಾಮೇರುಗಳು.

ನಿರಂತರ ಸಾಧನೆಯ ಮೂಲಕ ಧಾರ್ಮಿಕ ನೆಲೆಗಟ್ಟನ್ನು ಅತ್ಯಂತ ಶುದ್ಧಬದ್ಧತೆಯಲ್ಲಿ ಕರಗತಮಾಡಿಕೊಳ್ಳುವುದರ ಮೂಲಕ ಹಂತ ಹಂತವಾಗಿ ಬೆಳೆದವರು. 1992 ರಲ್ಲಿ ವೀರಶೈವ ಪಂಚಪೀಠಗಳಲ್ಲಿ ಪ್ರಥಮ ಪೀಠವಾದ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸ ಮಹಾಸಂಸ್ಥಾನ ಪೀಠವನ್ನು ಆರೋಹಣ ಮಾಡಿ ಸತ್ ಸಂಕಲ್ಪದ ಸರಿದಾರಿಯಲ್ಲಿ ಯೋಜನಾಷ್ಠಕಗಳನ್ನು ನಿರೂಪಿಸಿ ಅವೆಲ್ಲವುಗಳನ್ನೂ ಅನಾವರಣಗೊಳಿಸಿದ ಸಿದ್ಧ ಸಾಧಕರು.

ನಾಡಿನ ತುಂಬೆಲ್ಲ ಪ್ರವಾಸದ ಮೂಲಕ ಸಂಚರಿಸಿ ಧರ್ಮ-ಸಿದ್ಧಾಂತ-ತತ್ವಗಳನ್ನು ಬೋಧಿಸಿ ಪರಿವರ್ತನಾಶೀಲ ಸಮಾಜವನ್ನು ಕಟ್ಟಿ ಬೆಳೆಸಿದ ಧೀಮಂತರು. ಅವರು ಮಾಡಿದ ಸಾಧನೆಗಳು ಅನೇಕ.

ಸಾಹಿತ್ಯಿಕ, ಶೈಕ್ಷಣಿಕವಾಗಿ, ಸಾಂಸ್ಕೃತಿಕ, ಸಂಸ್ಕಾರಯುತ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಅಭಿವ್ಯಕ್ತಿಯ ಕಾರ್ಯಬಂಧುತ್ವವನ್ನು ಗಟ್ಟಿಗೊಳಿಸಿದವರು. ಅವರ ಬದುಕು ಇಂದಿನವರಿಗೆಲ್ಲ ಆದರ್ಶಮಯವಾಗಿದೆ. ಅವರ ಆಶೀರ್ವಾದ, ಮಾರ್ಗದರ್ಶನ ಸದಾ ಸಮಾಜದ ಮೇಲಿರಲೆಂದು ಪ್ರಾರ್ಥನೆಯ ನುಡಿಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿರಂತರ 35 ವರ್ಷಗಳಿಂದ ಧಾರ್ಮಿಕ ಸೇವೆ ಸಲ್ಲಿಸಿದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ವೀರಣ್ಣ ಹಾಲಪ್ಪ ಪವಾಡದವರಿಗೆ ಶ್ರೀ ರಂಭಾಪುರೀಶ್ವರ ಸಮಾಜೋಸಾಂಸ್ಕೃತಿಕ ಸೇವಾ ಸಂಸ್ಥೆಯು “ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಕಾರುಣ್ಯ ಸಿರಿ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು. ಗಂಗಾಧರಸ್ವಾಮಿ ಸಾಲಿಮಠ ಪ್ರಶಸ್ತಿ ವಿವರ ನೀಡಿದರು. ಹುರಳಿಕುಪ್ಪಿಯ ವೀರಯ್ಯ ಹಿರೇಮಠ ಪ್ರಶಸ್ತಿ ವಾಚನ ಮಾಡಿದರು.

ಕಾರ್ಯಕ್ರಮದನ್ವಯ ಗಣ್ಯ ವ್ಯಾಪಾರಸ್ಥರಾದ ರವತಪ್ಪ ಬಿಕ್ಕಣ್ಣನವರ ಶ್ರೀ ರಂಭಾಪುರಿ ಜಗದ್ಗುರುಗಳವರ ವೈಶಿಷ್ಠಪೂರ್ಣತೆಯುಳ್ಳ 2023 ನೇ ಮಾಹೆಯ ದಿನದರ್ಶಿಕೆ ಬಿಡುಗಡೆಗೊಳಿಸಿದರು.

ವೀರಯ್ಯ ಸಾಲಿಮಠ, ಈರಪ್ಪ ಕಾಶೆಟ್ಟಿ, ಸೋಮಯ್ಯ ಕಂಬಾಳಿಮಠ, ಗುರುಪಾದಪ್ಪ ಶಿಗ್ಗಾಂವಿ, ಶಿವಾನಂದ ಕುಲಕರ್ಣಿ, ಫಕ್ಕೀರಯ್ಯ ಹಿರೇಮಠ, ಶಂಭಣ್ಣ ಗುಂಡೂರ, ಚನ್ನಬಸಪ್ಪ ಗುಂಡೂರ, ರಾಜಶೇಖರಯ್ಯ ಗುರುಸ್ವಾಮಿಮಠ, ಮಂಜುನಾಥ ಪಿತಾಂಬ್ರಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು. ಡಾ. ಗುರುಪಾದಯ್ಯ ವೀ. ಸಾಲಿಮಠ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗಿಸಲಾಯಿತು.


Spread the love

LEAVE A REPLY

Please enter your comment!
Please enter your name here