ಕೊಪ್ಪಳದ ಜಾತ್ರೆ ಮುಗಿಸಿ ಕಣಗಿನಹಾಳಕ್ಕೆ ಹೊರಟಿದ್ದ ಮೃತರು….
ವಿಜಯಸಾಕ್ಷಿ ಸುದ್ದಿ, ಗದಗ
ಎರಡು ಬೈಕ್ ಗಳ ಮಧ್ಯೆ ಡಿಕ್ಕಿ ಸಂಭವಿಸಿ ರಸ್ತೆಯಲ್ಲಿ ಬಿದ್ದಿದ್ದ ಇಬ್ಬರ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ರಾತ್ರಿ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ಜರುಗಿದೆ.
ಮೃತರನ್ನು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಅಲ್ಲಾಸಾಬ್ ನದಾಫ್ (60) ಹಾಗೂ ರಮಜಾನ ಬೇಗಂ(22) ಎಂದು ಗುರುತಿಸಲಾಗಿದೆ.

ಮೃತರು ಒಂದೇ ಬೈಕ್ ನಲ್ಲಿದ್ದರು. ಗಾಯಗೊಂಡ ಲಲಿತಾ ಹಂಚಿನಾಳ ಹಾಗೂ ಅಪ್ಪಣ್ಣ ಹಿರೇಮಠ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತ ಅಲ್ಲಾಸಾಬ ತನ್ನ ಸಣ್ಣ ಮಗಳಾದ ರಮಜಾನಬಿ ಅವಳನ್ನು ಕರೆದುಕೊಂಡು ಗದಗ ತಾಲೂಕಿನ ಕಣಗಿನಹಾಳ ಗ್ರಾಮದ ಮತ್ತೊಬ್ಬ ಮಗಳ ಮನೆಗೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ಕೊಪ್ಪಳದಿಂದ ಗದಗ ಕಡೆ ಬರುತ್ತಿತ್ತು ಎನ್ನಲಾಗಿದ್ದು, ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸುದ್ದಿ ತಿಳಿದು ಮುಂಡರಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.