ಗದಗ: ಗದಗ ಜಿಲ್ಲೆಯ ಶಿಲ್ಪಿಯೋರ್ವನಿಗೆ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಹ್ವಾನ ಬಂದಿದೆ. ಮುಂಡರಗಿ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಿ ನಾಗಮೂರ್ತಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಗೆ ಬರುವಂತೆ ಆಮಂತ್ರಣ ಬಂದಿದೆ. ನಾಗಮೂರ್ತಿ ಮೂಲತಃ ಕೊಪ್ಪಳ ಜಿಲ್ಲೆ ಕಾತರಕಿ ಗ್ರಾಮದ ನಿವಾಸಿ. ಮುಂಡರಗಿ ಪಟ್ಟಣದಲ್ಲಿ ಶಿಲ್ಪ ಕಲೆಯ ಶಾಪ್ ನಡೆಸುತ್ತಿದ್ದಾರೆ.
ಇವರು ಮೈಸೂರು ಜಿಲ್ಲೆ ಹೆಚ್ಡಿ ಕೋಟೆಯಲ್ಲಿ ದೊರೆಯುವ (ಕೃಷ್ಣ ಶಿಲೆ) ಕರಿಕಲ್ಲುಗಳನ್ನು ಬಳಸಿ ಮೂರ್ತಿ ತಯಾರಿಸುತ್ತಿದ್ದರು. ಇವರು ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಗಂಧ ಕಲಾ ಸಂಕಿರಣ ಕಲಾ ವಿದ್ಯಾಲಯ ವ್ಯಾಸಂಗ ಮಾಡಿದ್ದಾರೆ. ಐದಾರು ವರ್ಷಗಳಿಂದ ಶಿಲ್ಪ ಕಲೆಯ ಬಗ್ಗೆ ಮುಂಡರಗಿ ವೆಂಕಟೇಶ್ ಸುತಾರ ಎಂಬವರ ಹತ್ತಿರ ತರಬೇತಿ ಪಡೆದುಕೊಂಡು ಈಗ ತಾವೇ ಶಾಪ್ ಆರಂಭಿಸಿದ್ದಾರೆ. ಇವರ ಅದ್ಭುತ ಕಲಾ ಮೂರ್ತಿಗಳ ತಯಾರಿಕೆ ಗಮನಿಸಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಗೆ ಆಹ್ವಾನಿಸಲಾಗಿದೆ.