ವಿಜಯಸಾಕ್ಷಿ ಸುದ್ದಿ, ಗದಗ : ಪ್ರಸಕ್ತ ಬಜೆಟ್ ರೈತರ ಸಾಲ ಮನ್ನಾ ನಿರೀಕ್ಷೆ ಹುಸಿಯಾಗಿಸಿದೆ. ಇದರೊಂದಿಗೆ ಉದ್ಯೋಗ ಸೃಷ್ಟಿಗೂ ಯಾವುದೇ ಯೋಜನೆ ನೀಡದ ಕಾಟಾಚಾರದ ಬಜೆಟ್ ಆಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಆರೋಪಿಸಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ ಎಂದು ಆರೋಪಿಸುವ ಸಿದ್ದರಾಮಯ್ಯ, ತಮ್ಮ ರಾಜ್ಯ ಬಜೆಟ್ನಲ್ಲಿ ಒಂದೇ ಒಂದು ಕೈಗಾರಿಕೆ ಸ್ಥಾಪನೆ, ಉದ್ಯೋಗ ಸೃಷ್ಟಿಗೆ ಕಾರ್ಯಕ್ರಮ ಘೋಷಣೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಟಾರ್ಟ್ಅಪ್ ಹಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಸ್ಟಾರ್ಟ್ಅಪ್ಗೆ ಯಾವ ಅನುದಾನವನ್ನೂ ಘೋಷಿಸಿಲ್ಲ. ಬೆರಳೆಣಿಕೆಯ ಕಡೆ ಕೌಶಲ್ಯ ಅಭಿವೃದ್ಧಿಗೆ ೧೫೦ ಕೋಟಿ ರೂ. ಮೀಸಲಿಟ್ಟಿದ್ದು ಹೊರತುಪಡಿಸಿ ಯಾವುದೇ ಬೃಹತ್ ಕಾರ್ಯಕ್ರಮ ಘೋಷಣೆ ಮಾಡಿಲ್ಲ ಎಂದರು.
ಜಿಲ್ಲೆಯವರೇ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರೂ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಯಾವುದೇ ಕೊಡುಗೆ ಲಭ್ಯವಾಗಿಲ್ಲ. ಒಟ್ಟಾರೆ ೮೦೪ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದರೂ ನಯಾ ಪೈಸೆ ಬಂದಿಲ್ಲ.
ಮೊನ್ನೆಯಷ್ಟೆ ಆಟೋ ಚಾಲಕರ ಸಮಾವೇಶದಲ್ಲಿ ಆಟೋ ಚಾಲಕರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ತರುವುದಾಗಿ ಘೋಷಣೆ ಮಾಡಿ ಮಾತು ಮರೆತಿದ್ದಾರೆ ಎಂದು ಸಚಿವರ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಈರಣ್ಣ ಬಾಳಿಕಾಯಿ, ಬಸವರಾಜ ಅಪ್ಪಣ್ಣವರ, ದೇವಪ್ಪ ಮಲ್ಲಸಮುದ್ರ, ಪ್ರಫುಲ್ ಪುಣೇಕರ್ ಮುಂತಾದವರು ಉಪಸ್ಥಿತರಿದ್ದರು.