ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗಂಗಾಮತ ಸಮಾಜ ಬಾಂಧವರಿಂದ ಬುಧವಾರ ಗಂಗಾಮಾತಾ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಬೆಳಿಗ್ಗೆ ಪುರಸಭೆ ಸಮೀಪದ ಸುಣಗಾರ ಓಣಿಯ ಗಂಗಾದೇವಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಬಳಿಕ ಗಂಗಾದೇವಿ ಭಾವಚಿತ್ರದ ಮೆರವಣಿಗೆಯು ಪೂರ್ಣಕುಂಭ ಹಾಗೂ ವಾದ್ಯಗಳ ಸಮೇತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಭ್ರಮದಿಂದ ಸಾಗಿತು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಭರಮಣ್ಣ ಕಟ್ಟಿಮನಿ ಮಾತನಾಡಿ, ಭಗೀರಥನ ತಪಸ್ಸಿಗೆ ಮೆಚ್ಚಿ ಭೂಲೋಕಕ್ಕೆ ಅವತರಿಸಿದ ಗಂಗಾಮಾತೆ ಸಕಲ ಜೀವಜಗತ್ತಿನ ಆಶ್ರಯದಾತೆಯಾಗಿದ್ದು, ಜೀವಕೋಟಿಗಳಿಗೆ ಉಸಿರಾಗಿರುವ ಪವಿತ್ರ ದಿನವನ್ನು ಗಂಗಾಮಾತಾ ಜಯಂತಿಯಾಗಿ ಆಚರಿಸಲಾಗುತ್ತದೆ ಎಂದರು.
ಗಂಗಾಮಾತೆ ಜೀವಕೋಟಿಗಳಿಗೆ ಮೂಲಸೆಲೆ, ನೆಲೆ ಹಾಗೂ ಆಧಾರವಾಗಿರುವುದರಿಂದ ಪ್ರತಿಯೊಬ್ಬರೂ ಆಕೆಯನ್ನು ನಿತ್ಯ ಸ್ಮರಿಸಿ ಪೂಜಿಸಬೇಕು. ಗಂಗಾಮತ ಸಮಾಜದ ಬಾಂಧವರು ತಮ್ಮ ಸಾಂಪ್ರದಾಯಿಕ ಕಾಯಕದ ಜೊತೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲೂ ಮುನ್ನಡೆಯಬೇಕು. ಮಕ್ಕಳಿಗೆ ಸಂಸ್ಕಾರಯುತ ಹಾಗೂ ಉನ್ನತ ಶಿಕ್ಷಣ ಕಲ್ಪಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಮೆರವಣಿಗೆಯಲ್ಲಿ ಸಮಾಜದ ಮುಖಂಡರಾದ ಮಹದೇವಪ್ಪ ಕಟ್ಟಿಮನಿ, ಸೋಮಪ್ಪ ಸುಣಗಾರ, ಹೊನ್ನಪ್ಪ ಸುಣಗಾರ, ಸೋಮಪ್ಪ ತಂಡಿಗೇರ, ರವಿ ಸುಣಗಾರ, ಹೊಳಲಪ್ಪ ಕಟ್ಟಿಮನಿ, ಮಾಲತೇಶ ತಂಡಿಗೇರ, ಆಕಾಶ ಸವದತ್ತಿ, ರಾಜು ಸುಣಗಾರ, ಹನುಮಂತಪ್ಪ ಸುಣಗಾರ, ಕಿರಣ ಕಟ್ಟಿಮನಿ ಸೇರಿದಂತೆ ಸಮಾಜದ ಬಾಂಧವರು ಭಾಗವಹಿಸಿದ್ದರು.



