ಶಿಕ್ಷಕರಾಗಿ, ಪತ್ರಕರ್ತರಾಗಿ, ಸಾಹಿತಿಗಳಾಗಿ, ಗ್ರಂಥಕಾರರಾಗಿ, ನಾಟಕಕಾರರಾಗಿ, ನಿರ್ದೇಶಕ- ನಟರಾಗಿ ಎಲ್ಲಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಈ ಎಲ್ಲದರಲ್ಲೂ ಸಾಧನೆ ಮಾಡಿ ಸೈ ಎನಿಸಿಕೊಂಡಿರುವ ನೀಲಕಮಲ ಕಾವ್ಯನಾಮದ ಇಮಾಮಅಲಿ ಕಾಶಿಮಸಾಬ ಕಮ್ಮಾರ, ಸಾಹಿತ್ಯ ಪ್ರಿಯರ ಬಾಯಲ್ಲಿ ಆಯ್ಕೆ ಕಮ್ಮಾರ ಎಂದೇ ಪ್ರಸಿದ್ಧರು.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿಯ ಕಾಶಿಮಸಾಬ ಹಾಗೂ ಮೋದಿನಬಿ ಪುಣ್ಯ ದಂಪತಿಗಳ ಉದರದಲ್ಲಿ ದಿ.22-07-1958ರಲ್ಲಿ ಜನಿಸಿದ ಕಮ್ಮಾರ ಸರ್ ತಮ್ಮ ಶೈಕ್ಷಣಿಕ ಜೀವನದಲ್ಲಿ ಎಲ್ಲರಿಗಿಂತಲೂ ಮುಂದಿದ್ದು, ಪ್ರಾಥಮಿಕ ಶಿಕ್ಷಣ ತಮ್ಮ ಸ್ವಗ್ರಾಮದಲ್ಲಿಯೇ ಮುಗಿಸಿ ನಂತರ ಮಾಧ್ಯಮಿಕ ಶಿಕ್ಷಣವನ್ನು ಅಣ್ಣಿಗೇರಿ ಮುಂಡರಗಿಯಲ್ಲಿ ಮುಗಿಸಿದರು. ಮುಂದೆ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ. ಪತ್ರಿಕೋದ್ಯಮದಲ್ಲಿ ಉತ್ತೀರ್ಣರಾಗಿದ್ದಾರೆ. ತಮ್ಮ ಹುಟ್ಟೂರಿನ ಶಾಲೆಯಲ್ಲಿಯೇ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಜಾತಿ, ಮತ, ಪಂಥ, ವರ್ಗ, ಮೇಲು-ಕೀಳುಗಳನ್ನು ಮರೆತ ಸಮಾನತೆಯ ಸಹಬಾಳ್ವೆಯ ಜೀವನ ಅವರದು. ಮಣಕವಾಡದ ಮಹಿಮಾ ಪುರುಷ ಶ್ರೀ ಗುರುಮೃತ್ಯುಂಜಯ ಗುರುಕುಲ ಆಶ್ರಮ ಕಟ್ಟಿರುವ ಇವರು ಪ್ರತಿ ಮಾಸಿಕ ಕೊನೆಯ ರವಿವಾರ ಆಧ್ಯಾತ್ಮ ಕುರಿತು ಚಿಂತನ ಕಾರ್ಯಕ್ರಮ ನಡೆಸುತ್ತಾರೆ. ಮಕ್ಕಳಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವದು ಇವರ ಹುಟ್ಟುಗುಣ.
ಶಿಕ್ಷಣ ತಜ್ಞರಾದ ಇವರು ಕಳೆದ 43 ವರ್ಷಗಳಿಂದ ಗೃಹ ಪಾಠ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಯ್ಕೆ ಕೋಚಿಂಗ್ ಸೆಂಟರ್ ಹೆಸರಿನಲ್ಲಿ ಕ್ಲಾಸ್ಗಳನ್ನು ಪ್ರಾರಂಭಿಸಿ ಬಡ ಮಕ್ಕಳಿಗೆ ಉಚಿತ ಟ್ಯೂಷನ್ ಹೇಳಿ ಅನೇಕ ಮಕ್ಕಳ ಬಾಳಿಗೆ ಜ್ಯೋತಿಯಾಗಿದ್ದಾರೆ. ಸರಳತೆ, ಅಷ್ಟೇ ಕಟ್ಟುನಿಟ್ಟಾದ ಶಿಸ್ತಿನ ಜೀವನಕ್ಕೆ ಬದುಕಿನ ಸೂತ್ರಗಳನ್ನು ಅಳವಡಿಸಿಕೊಂಡ ಅವರು ಎಲ್ಲದರಲ್ಲೂ ಒಳಿತನ್ನೇ ಕಾಣುವ, ಒಳಿತನ್ನೇ ಬಯಸುವ ಸ್ನೇಹಜೀವಿ. ಅವರ ಮನಸ್ಸು ವಿಶಾಲ, ಯಾವುದೇ ಮುಚ್ಚು ಮರೆ ಇಲ್ಲದೆ ನಿರ್ಭಿಡೆಯಿಯಿಂದ ಮಾತನಾಡಿ ತಮ್ಮೊಳಗಿನ ಅಂತರಂಗವನ್ನು ಬಿಚ್ಚಿಡುವ ಸ್ವಭಾವ ಅವರದು. ಅನ್ಯಾಯದ ಜೊತೆಗೆ ರಾಜಿಯಾಗದೆ ವಜ್ರಕ್ಕಿಂತ ಕಠೋರವಾಗುತ್ತಾರೆ. ನ್ಯಾಯದ ಪರ ಇದ್ದಾಗ ಹೂವಿಗಿಂತ ಮೃದುವಾಗುತ್ತಾರೆ.
ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿರುವ ಸಮಯದಲ್ಲಿ ಅವರು ಯಾವುದೇ ಆಸೆ-ಆಮಿಷಕ್ಕೆ, ಮುಲಾಜಿಗೆ ಒಳಗಾಗದೆ ನೇರ ನಿಷ್ಠುರ ನಡೆನುಡಿಯ, ದಿಟ್ಟ, ವಸ್ತುನಿಷ್ಠ ವರದಿ ಮಾಡುವ ಮೂಲಕ ಪತ್ರಕರ್ತ ವೃತ್ತಿಗೆ ಗೌರವ ತಂದಿದ್ದಾರೆ.
ಮಣಕವಾಡದ ಲಿಂ. ಮೃತ್ಯುಂಜಯ ಅಪ್ಪನವರ ಪರಮ ಭಕ್ತರಾಗಿರುವ ಕಮ್ಮಾರ ಗುರುಗಳು `ಮೃತ್ಯುಂಜಯ ಅಪ್ಪ ನನ್ನ ರಕ್ತದ ಕಣಕಣದಲ್ಲಿ ಇದ್ದಾರೆ’ ಎಂದು ಹೇಳಿಕೊಳ್ಳುವ ಅವರ ಸ್ವಭಾವ ಮೆಚ್ಚುವಂತಿದೆ.
ಮಣಕವಾಡ ಮಾಣಿಕ್ಯ, ಮಣಕವಾಡ ಸಿರಿ ಎಂಬ ಎರಡು ಪವಿತ್ರ ಗ್ರಂಥ ಲೋಕಾರ್ಪಣೆ ಮಾಡಿದ ಬಳಿಕ ಪೂಜ್ಯ ಮೃತ್ಯುಂಜಯ ಶರಣರ ಕೃಪಾ ಬಲದಿಂದ ಸದಾ ಪೂಜ್ಯರ ನಾಮಸ್ಮರಣೆ, ಆಧ್ಯಾತ್ಮಿಕ ಚಿಂತನೆ ಮಾಡುತ್ತ ಅವರ ದೈವದ ದಿಕ್ಕೇ ಬದಲಾಯಿತು. ಚಂದನ ಟಿವಿಯಲ್ಲಿ `ತಾಯಿ’ ಕುರಿತು ಉಪನ್ಯಾಸ ನೀಡಿ ಜನಮಾನಸದಲ್ಲಿ ಉಳಿದಿದ್ದಾರೆ. ಇವರ ಎಲ್ಲಾ ಕಾರ್ಯಗಳಿಗೆ ಅವರ ಶ್ರೀಮತಿ ರಜಿಯಾಬೇಗಂ ಹಾಗೂ ಮೂವರು ಮಕ್ಕಳಾದ ಆಲಂ, ಅಸ್ಲಂ, ಅಕ್ರಂ ಅವರು ಪ್ರೋತ್ಸಾಹ ನೀಡುತ್ತಿದ್ದಾರೆ. ವಿದ್ಯಾವಂತರಾದ ಅವರ ಮಕ್ಕಳು ಸಹ ಆದರ್ಶವನ್ನು ಮೈಗೂಡಿಸಿಕೊಂಡು ತಂದೆಯವರ ಹೆಸರು ಮತ್ತಷ್ಟು ರಾರಾಜಿಸುವಂತೆ ಮಾಡುತ್ತಿದ್ದಾರೆ.
ಈಗಾಗಲೇ ನಾಡಿನ ಹಲವಾರು ಸಂಘ, ಸಂಸ್ಥೆಗಳು ಇವರ ಪ್ರತಿಭೆ ಗುರುತಿಸಿ `ಪುಟ್ಟರಾಜ ಸಾಹಿತ್ಯ ಪೋಷಕ’, `ಸಾಮರಸ ಕವಿ’, `ಶರಣ ಸಾಹಿತಿ’, `ಸಾಹಿತ್ಯ ಸುಧೆ’, `ಪತ್ರಿಕಾ ಶ್ರೀಗಂಧ’ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಮ್ಮಾರವರ ಸಾಧನೆಗೆ ಸಿಕ್ಕ ಪ್ರತಿಫಲ.
ಗದುಗಿನ ಗಾನ ಗಂಧರ್ವ ಕಲಾ ಟ್ರಸ್ಟ್ ಹಾಗೂ ದೇವಗಿರಿಯ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಪಾಠಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ ೩ರಂದು ದೇವಗಿರಿಯಲ್ಲಿ ಜರುಗಲಿರುವ ಸಮಾರಂಭದಲ್ಲಿ ಸಾಹಿತಿ ಆಯ್ಕೆ ಕಮ್ಮಾರ ಅವರಿಗೆ `ಸಾಹಿತ್ಯಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಸಂದರ್ಭದಲ್ಲಿ ಆಯ್ಕೆ ಕಮ್ಮಾರ ಬರೆದ `ಭೂಲೋಕದ ಭಗವಂತ’ ಪವಿತ್ರ ಗ್ರಂಥ ಲೋಕಾರ್ಪಣೆಗೊಳ್ಳುವುದು.
ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಟ್ಟರಾಜರ ಕೃಪೆಗೆ ಪಾತ್ರರಾಗಬೇಕೆಂದು ನಮ್ಮ ಆಶಯ.
– ಶಿವಶಂಕರಪ್ಪ ಡಿ.ಆರಟ್ಟಿ.
ಹಿರೇಹಂದಿಗೋಳ, ಗದಗ.
ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಅವರ ಸಾಹಿತ್ಯ ಕೃಷಿಯಲ್ಲಿ ಪೂಜ್ಯ ಲಿಂ.ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ, ಪೂಜ್ಯ ಲಿಂ. ಮೃತ್ಯುಂಜಯ ಶರಣರ, ಪೂಜ್ಯ ಲಿಂ.ಸಿದ್ದಗಂಗಾ ಶಿವಕುಮಾರ ಮಹಾಸ್ವಾಮಿಗಳವರ ಕುರಿತು ಗ್ರಂಥ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಗ್ರಂಥ ರಚಿಸಿದ್ದಾರೆ. ಇವರು ಕನ್ನಡ, ಹಿಂದಿ, ಇಂಗ್ಲಿಷ ಮತ್ತು ತೆಲುಗು ಭಾಷೆಗಳನ್ನು ಬಲ್ಲರು. ಕಮ್ಮಾರ ಗುರುಗಳ ಅಭಿಮಾನಿಗಳು, ಶಿಷ್ಯಂದಿರು, ಸ್ನೇಹಿತರು ಕಮ್ಮಾರರು 60ರ ಅಂಚಿನಲ್ಲಿದ್ದಾಗ ಅವರ ಕುರಿತು `ಒಲುಮೆಯ ಆಯ್ಕೆ’ ಎಂಬ ಅಭಿನಂದನಾ ಗ್ರಂಥ ಹೊರತಂದಿದ್ದಾರೆ.