ವಿಜಯಸಾಕ್ಷಿ ಸುದ್ದಿ, ಗದಗ : ಯುಕ್ತಿ, ಶಕ್ತಿಯ ಗುಣಗಳನ್ನು ಮೇಳೈಸಿಕೊಂಡು ಸದಾ ಕಾಯಕದಲ್ಲಿ ತೊಡಗಿ ಯಶಸ್ಸು ಹೊಂದುತ್ತಾ ಸಾಗುತ್ತಿರುವ ಅದ್ವಿತೀಯ ಪ್ರತಿಭಾ ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಂಗಳೂರು ರಾಜ್ಯ ಮಟ್ಟದ ಅತ್ಯುತ್ತಮ ಸಂಪನ್ಮೂಲ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸದ್ಯ ಗದಗ ಶಹರ ವಲಯದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಸಾವಿರಾರು ಶಿಕ್ಷಕರಿಗೆ ಅನೇಕ ಬೋಧನಾ ತಂತ್ರಗಳ ಮೂಲಕ ತರಬೇತಿಯನ್ನು ನೀಡುತ್ತಾ ಪ್ರಸಕ್ತ ವರ್ತಮಾನಕ್ಕೆ ತಕ್ಕಂತೆ ಜ್ಞಾನ ಪ್ರಸಾರದ ಮಾರ್ಗದರ್ಶನ ಮಾಡುತ್ತಾ ಶಿಕ್ಷಣ ಇಲಾಖೆಯಲ್ಲಿ ಎಲ್ಲರಿಗೂ ಮೆಚ್ಚಿನ ವ್ಯಕ್ತಿಯಾಗಿದ್ದಾರೆ.
ಶಿಕ್ಷಣ ಇಲಾಖೆಯು 2017ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕನ್ನಡ ನಾಡು-ನುಡಿಯ ಸೇವೆ ಮಾಡಿದ್ದಾರೆ. ಅಲ್ಲದೆ, ವಿವಿಧ ಅಧ್ಯಾತ್ಮಿಕ, ಸಾಂಸ್ಕೃತಿಕ ಸಂಘಟನೆಗಳ ಮೂಲಕ ಸಮಾಜ ಸೇವೆ ಮಾಡುತ್ತಾ ಕ್ರಿಯಾಶೀಲ ವ್ಯಕ್ತಿ ಎನ್ನಿಸಿಕೊಂಡಿದ್ದಾರೆ.
ಇವರ ಶೈಕ್ಷಣಿಕ, ಸಾಹಿತ್ಯಿಕ, ಸಾಮಾಜಿಕ ಕ್ಷೇತ್ರಗಳಲ್ಲಿನ ಸಾಧನೆ ಗುರುತಿಸಿ ಇವರಿಗೆ ಡಾ. ಎ.ಬಿ. ಹಿರೇಮಠ ಪ್ರತಿಷ್ಠಾನ ಮತ್ತು ಅಶ್ವಿನಿ ಪ್ರಕಾಶನ ಗದಗ ವತಿಯಿಂದ ರಾಜ್ಯ ಮಟ್ಟದ `ಶ್ರೀ ಗುರು ಪುಟ್ಟರಾಜ ಶ್ರೀ ಸದ್ಭಾವನಾ’ ಪ್ರಶಸ್ತಿಗೆ ಆಯ್ಕೆ ಮಾಡಿದೆ.