ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದ ಜಾತ್ರಾಮಹೋತ್ಸವ ಅಂಗವಾಗಿ ಮಾ.8ರಿಂದ 10ರವರೆಗೆ ಶ್ರೀಕ್ಷೇತ್ರದಲ್ಲಿ ಮುಕ್ತಿಮಂದಿರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ನೇತೃತ್ವದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮತ್ತು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಧರ್ಮಜಾಗೃತಿ ಸಮಾರಂಭ ಜರುಗಲಿದೆ.
ಈ ಕುರಿತು ಮಾಹಿತಿ ನೀಡಿದ ಮುಕ್ತಿಮಂದಿರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಪ್ರತಿವರ್ಷದಂತೆ ಶ್ರೀ ಕ್ಷೇತ್ರದಲ್ಲಿ ಶಿವರಾತ್ರಿಯ ನಿಮಿತ್ಯ ಲೋಕೋತ್ತರ ಶಿವಪೂಜೆಯು ನಡೆಯಲಿದೆ. ತ್ರಿಕೋಟಿ ಶಿವಲಿಂಗ ಸ್ಥಾಪನೆ ಸಿದ್ಧತೆ ಹಿನ್ನೆಲೆಯಲ್ಲಿ ಮುಕ್ತಿಮಂದಿರದಲ್ಲಿ ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ಸಾಕಷ್ಟು ಪ್ರಮಾಣದ ಭಕ್ತ ಸಮೂಹ ಹರಿದು ಬರಲಿದೆ.
ಶಿವರಾತ್ರಿಯ ಜಾತ್ರಾಮಹೋತ್ಸವ ಅಂಗವಾಗಿ ಮಾ. 8ರಂದು ಪ್ರಾತಃಕಾಲ ಶ್ರೀ ಜಗದ್ಗುರು ಪಂಚಾಚಾರ್ಯ ದ್ವಜಾರೋಹಣ, ಲಿಂ. ವೀರಗಂಗಾಧರ ಜಗದ್ಗುರುಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಬೆಳಿಗ್ಗೆ 9ಕ್ಕೆ ಶಿವದೀಕ್ಷೆ, ಅಯ್ಯಾಚಾರ ಜರುಗುವುದು. ಸಂಜೆ 5ಕ್ಕೆ ಜ. ಪಂಡಿತಾರಾಧ್ಯರ ಮತ್ತು ವಿಶ್ವಾರಾಧ್ಯರ ಜಯಂತಿ ನಿಮಿತ್ತ ರಥೋತ್ಸವ ಜರುಗುವುದು. ರಾತ್ರಿ ಮಾನವ ಧರ್ಮ ಮಂಟಪದಲ್ಲಿ ಜ.ರೇಣುಕಾಚಾರ್ಯರು, ಶ್ರೀ ಜಗದ್ಗುರುಗಳವರ ಮಂಗಳಮೂರ್ತಿಗೆ ಮಹಾರುದ್ರಾಭಿಷೇಕ, ಪಟ್ಟಾಧ್ಯಕ್ಷರ ಸಡಗರದ ಮಹಾಶಿವಪೂಜೆ, ನಾಮಸ್ಮರಣೆ ಜರುಗಲಿದೆ.
ಮಾ.9ರಂದು ವಿಶೇಷ ಪೂಜಾ ಕಾರ್ಯಕ್ರಮ, ಸಂಜೆ ಶಿವ ಪಾರ್ವತಿ ಮಹಾರಥೋತ್ಸವ, ಧರ್ಮಸಭೆ ನಡೆಯಲಿದೆ. ಮಾ.10ರಂದು ಅಮವಾಸ್ಯೆ ವೃತಾಚರಣೆ, ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳ ಕತೃ ಗದ್ದುಗೆಗೆ ಮಹಾಪೂಜಾ ಕೈಂಕರ್ಯಗಳು, ಮಧ್ಯಾಹ್ನ 12ಕ್ಕೆ ಸುಲ್ತಾನಪುರ ಗ್ರಾಮಸ್ಥರಿಂದ ವಿಶ್ವಶಕ್ತಿ ಭಾವಚಿತ್ರದ ಮೆರವಣಿಗೆ, 3ಕ್ಕೆ ಲಿಂ. ಜ.ವೀರಗಂಗಾಧರರ ಮಹಾಮಂಗಲ ಮೂರ್ತಿಯ ಅಡ್ಡಪಲ್ಲಕ್ಕಿ ಮಹೋತ್ಸವ, ಕಡುಬಿನ ಕಾಳಗ, ಅನ್ನದ ಹೊಳೆ-ಹೊನ್ನಿನ ಮಳೆ ಜರುಗುವುದು. ಸಂಜೆ 4ಕ್ಕೆ ಬಾಳೇಹೊನ್ನೂರ ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಂಗಳವರ ದಿವ್ಯಸಾನಿಧ್ಯದಲ್ಲಿ ಧರ್ಮಜಾಗೃತಿ ಸಮಾರಂಭ ಜರುಗಲಿದೆ. ನಾಡಿನ ಹರಗುರುಚರಮೂರ್ತಿಗಳು, ಮಂತ್ರಿಗಳು, ಶಾಸಕರು, ರಾಜಕಾರಣಿಗಳು, ಗಣ್ಯಮಾನ್ಯರು ಸೇರಿ ಅಪಾರ ಭಕ್ತಸಮೂಹ ಪಾಲ್ಗೊಳ್ಳಲಿದೆ ಎಂದು ಪಟ್ಟಾಧ್ಯಕ್ಷರು ತಿಳಿಸಿದರು.