ವಿಜಯಸಾಕ್ಷಿ ಸುದ್ದಿ ಗಜೇಂದ್ರಗಡ : ಇಲ್ಲಿನ ಗ್ರಾಮ ದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಗುರುವಾರ ಬೆಳಿಗ್ಗೆ ಸದ್ಭಕ್ತರು ಶೃದ್ಧಾ-ಭಕ್ತಿಯಿಂದ ದೇವಿಯ ಅಗ್ನಿಕುಂಡದಲ್ಲಿ ನಡೆದು ಭಕ್ತಿಯ ಪರಕಾಷ್ಠೆ ಮೆರೆದರು.
ಇಂತಹ ದೈವಿ ಆಚರಣೆಗಳು ಅಪರೂಪವೆನಿಸಿದರೂ ನಗರ ಹಾಗೂ ಗ್ರಾಮದ ಜನತೆ ತಮ್ಮ ಕಷ್ಟ-ಕಾರ್ಪಣ್ಯಗಳನ್ನು ದೂರಗೊಳಿಸಲು ದೇವಿಯ ಬಳಿ ಹರಕೆ ಹೊತ್ತು ತಮ್ಮ ದುಃಖವನ್ನು ಹೇಳಿಕೊಂಡು ಪರಿಹರಿಸುವಂತೆ ಅಗ್ನಿಕುಂಡ ಹಾಗೂ ಮಡಿಕೆಯನ್ನು ಒಲೆಯ ಮೇಲಿರಿಸಿ ಬಿಸಿ ಅಕ್ಕಿ ಪಾಯಿಸದಲ್ಲಿ ಕೈ ಹಾಕಿ ತಿರುವುದು ಭಕ್ತರ ಭಕ್ತಿಯು ಇಮ್ಮಡಿಗೊಳಿಸುವಂತೆ ಮಾಡುತ್ತದೆ.
ಆರಂಭದಲ್ಲಿ ದುರ್ಗಾದೇವಿಯನ್ನು ವಿಶೇಷವಾಗಿ ಪೂಜಿಸಿದ ನಂತರ ಹೂಗಳಿಂದ ಶೃಂಗರಿಸಿ, ರಂಗು-ರಂಗಿನ ರಂಗೋಲಿಯ ಚಿತ್ತಾರಗಳ ಬಿಡಿಸಿದ ಅಗ್ನಿಕುಂಡದಲ್ಲಿ ಪಾಲ್ಗೊಳುವ ಭಕ್ತರು ದೇವಿಯಲ್ಲಿ ವಿಶೇಷ ಹರಕೆಹೊತ್ತು ಬೆಳಿಗ್ಗೆ ಮಡಿಸ್ನಾನ ಮಾಡಿದ ಬಳಿಕ ಸಕಲವಾದ್ಯ ವೈಭವಗಳೊಂದಿಗೆ ಮೀಸಲು ನೀರನ್ನು ತಂದು ಮಡಿಕೆಯಲ್ಲಿ ಹಾಕಿ ಅಗ್ನಿಕುಂಡ ಪ್ರವೇಶಿಸುತ್ತಾರೆ. ನಂತರ ಅಗ್ನಿಕುಂಡ ಪ್ರದಕ್ಷಣೆ ಹಾಕುವ ಮೂಲಕ ಅಗ್ನಿಕುಂಡದಲ್ಲಿ ನಡೆದಾಡಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ದೇವಿಯ ಹರಿಕೆ ತೀರಿಸಿದರು.
ಭಕ್ತರು ದೇವಿಯಲ್ಲಿ ನಂಬಿಕೆಯನ್ನಿಟ್ಟು ಭಕ್ತಿಯಿಂದ ನಮಸ್ಕರಿಸಿ ತಮ್ಮ ಕಷ್ಟ ಪರಿಹರಿಸು ಎಂದು ಬೇಡಿಕೊಳ್ಳುವ ಪ್ರತಿಬಿಂಬವೇ ಈ ಅಗ್ನಿಕುಂಡದ ಪ್ರವೇಶ ಎಂಬುದು ಭಕ್ತರ ಮಾತಾಗಿದೆ. ಇಂತಹ ದೈವಿ ಆಚರಣೆಗೆ ನೆರೆಯ ರಾಜ್ಯದ ಭಕ್ತರೂ ತಂಡೋಪತಂಡವಾಗಿ ಹರಿದು ಬಂದಿದ್ದು ದುರ್ಗಾದೇವಿ ಜಾತ್ರಾ ಮಹೋತ್ಸವದ ವಿಶೇಷವಾಗಿತ್ತು.