ವಿಜಯಸಾಕ್ಷಿ ಸುದ್ದಿ, ಧಾರವಾಡ : ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ರೀತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಮತ್ತು ಅಕ್ರಮಗಳನ್ನು ತಡೆಗಟ್ಟಲು ಧಾರವಾಡ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿದೆ. ಶನಿವಾರ ಸಂಜೆ ಹಳಿಯಾಳ ಚೆಕ್ಪೋಸ್ಟ್ ನಲ್ಲಿ ಅಧಿಕಾರಿಗಳು ಕಾರ್ ತಪಾಸಣೆ ಮಾಡುವ ಸಂದರ್ಭದಲ್ಲಿ ಮಹಮ್ಮದ ಶಂಶುದ್ದೀನ್ ಎಂಬವರ ಬಳಿ ಸರಿಯಾದ ದಾಖಲೆ ಇರದ ರೂ.1.49 ಹಣ ಸಿಕ್ಕಿದ್ದು, ಸೀಜ್ ಮಾಡಿ, ಖಜಾನೆಯಲ್ಲಿ ಠೇವಣಿ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಳ್ನಾವರ ಪಟ್ಟಣ ನಿವಾಸಿಯಾದ ಮಹಮ್ಮದ ಶಂಶುದ್ದೀನ್ ಎಂಬವರು ಹುಬ್ಬಳ್ಳಿಯಿಂದ ಕಾರ್ ಮೂಲಕ ಅಳ್ನಾವರಗೆ ತೆರಳುವಾಗ ಹಳಿಯಾಳ ಚೆಕ್ ಪೋಸ್ಟ್ದಲ್ಲಿ ಅವರ ಕಾರ್ ತಪಾಸಣೆ ಮಾಡಿದಾಗ ಅವರ ಬಳಿ ರೂ.1.49 ಲಕ್ಷ ನಗದು ಹಣ ದೊರಕಿದೆ. ಅವರ ಬಳಿ ಇದ್ದ ದಾಖಲೆಗಳಿಗೂ ಮತ್ತು ಅವರಲ್ಲಿ ದೊರೆತ ಹಣಕ್ಕೂ ಸರಿಯಾದ ಹೊಂದಾಣಿಕೆ ಆಗದೇ ಇರುವದರಿಂದ ಅವರಲ್ಲಿನ ಹಣವನ್ನು ಮ್ಯಾಜಿಸ್ಟ್ರೇಟ್ ನೇತೃತ್ವದ ಎಫ್ಎಸ್ಟಿ ತಂಡದ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಎಫ್ಎಸ್ಟಿ ತಂಡವು ಪತ್ತೆಯಾದ ಹಣವನ್ನು ಖಜಾನೆಯಲ್ಲಿ ಠೇವಣಿ ಮಾಡಲು ಕ್ರಮವಹಿಸಿದೆ. ವಿಚಾರಣೆ ನಡೆಸಿ ಮುಂದಿನ ಕ್ರಮ ಜರುಗಿಸಲು ಸೀಜರ್ ಕಮಿಟಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.