ವಿಜಯಸಾಕ್ಷಿ ಸುದ್ದಿ, ಗದಗ : ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಚುನಾವಣಾ ಅಖಾಡ ನಿಧಾನವಾಗಿ ರಂಗೇರತೊಡಗಿದೆ. ಬುಧವಾರ ಒಂದೇ ದಿನ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಇಡೀ ದಿನ ಮತಬೇಟೆಯಲ್ಲಿ ನಿರತರಾಗಿದ್ದರು. ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವಳಿ ನಗರದ ಮಠ, ದೇವಸ್ಥಾನಗಳಿಗೆ ಭೇಟಿ ನೀಡಿದರಲ್ಲದೆ, ಸಭೆ ನಡೆಸಿ ಮತ ಯಾಚಿಸಿದರು.
ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರಚಾರ ಸಭೆಯೊಂದಿಗೆ ಗಂಗಾಪುರ ಪೇಟೆಯಲ್ಲಿರುವ ದುರ್ಗಾದೇವಿ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದರು. ಜಿಲ್ಲಾ ಬಿಜೆಪಿ ಕಚೇರಿ, ಜಿಲ್ಲಾ ವಕೀಲರ ಸಂಘ, ಶಿವರತ್ನ ಪ್ಯಾಲೇಸ್ನಲ್ಲಿ ಮಾಜಿ ಸೈನಿಕರು, ಬೆಟಗೇರಿ ಶರಣಬಸವೇಶ್ವರ ನಗರದಲ್ಲಿ ಹಡಪದ ಅಪ್ಪಣ್ಣ ಸಮಾಜ, ಲಯನ್ಸ್ ಕ್ಲಬ್ ಹಾಲ್ನಲ್ಲಿ ನಿವೃತ್ತ ನೌಕರರು, ಸಂಭಾಪುರ ರಸ್ತೆಯ ಶಂಕರ ಮಠದಲ್ಲಿ ಬ್ರಾಹ್ಮಣ ಸಮಾಜ ಹಾಗೂ ಎಪಿಎಂಸಿ ವರ್ತಕರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಜೊತೆಗಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಗದಗ ತಾಲೂಕಿನ ನಾಗಾವಿ ಗ್ರಾ.ಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ನಂತರ ಸೊರಟೂರ, ಹರ್ತಿ, ಮುಳಗುಂದ, ಹುಲಕೋಟಿ ಹಾಗೂ ಬಿಂಕದಕಟ್ಟಿ ಗ್ರಾಮದಲ್ಲಿ ಸಭೆ ನಡೆಸಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯ ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ.
ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಮತದಾರರು ತೋರುವ ಪ್ರೀತಿ-ವಿಶ್ವಾಸ ನೋಡಿದರೆ, ಗೆಲುವು ನಿಶ್ಚಿತ ಎನ್ನುವ ವಾತಾವರಣ ಇದೆ. ಏನೇ ಆದರೂ ಎದುರಾಳಿ ಅಭ್ಯರ್ಥಿಯನ್ನು ಗೌರವದಿಂದ ಕಾಣುತ್ತೇನೆ ಎಂದರು.
ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ವಾಸಣ್ಣ ಕುರುಡಗಿ ಮುಂತಾದವರು ಜೊತೆಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಗದುಗಿನಲ್ಲಿ ಬಿಜೆಪಿ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದೇವೆ. ಈ ಬಾರಿ ಗದಗ ಜಿಲ್ಲೆಯಿಂದ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಬರುವ ವಿಶ್ವಾಸವಿದೆ. ಗದಗ ಕ್ಷೇತ್ರದ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಬಿಜೆಪಿಯೊಂದಿಗಿದ್ದಾರೆ. ಶೀಘ್ರವೇ ಅವರೂ ಪ್ರಚಾರ ನಡೆಸಲಿದ್ದಾರೆ ಎಂದರು.