ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಪವಾಡ ಪುರುಷ ಹಜರತ್ ಜಿಂದೆ ಶ್ಯಾವಲಿಯವರ 56ನೇ ಉರುಸು ಉತ್ಸವ ಬುಧವಾರ ಸಾವಿರಾರು ಹಿಂದೂ-ಮುಸಲ್ಮಾನರ ಶೃದ್ಧಾ ಭಕ್ತಿಯ ನಡುವೆ ಸಂಭ್ರಮದಿಂದ ಜರುಗಿತು. ಮುಸ್ಲಿಮ್ ಜಮಾತ ಅಂಜುಮನ್ ಏ ಇಸ್ಲಾಮ್ ಕಮಿಟಿಯ ಆಶ್ರಯದಲ್ಲಿ ಲಕ್ಕುಂಡಿ ಮತ್ತು ಕದಾಂಪೂರ ಗ್ರಾಮದ ಮಧ್ಯೆ ಇರುವ ಜಿಂದಾಶ್ಯಾವಲಿ ದರ್ಗಾದ ಗದ್ದುಗೆಗೆ ಭಕ್ತಾಧಿಗಳು ಸಕ್ಕರೆ ನೈವೇದ್ಯವನ್ನು ಅರ್ಪಿಸುವುದರ ಮೂಲಕ ತಮ್ಮ ಸಂಕಲ್ಪವನ್ನು ಸಮರ್ಪಿಸಿದರು.
ಬೆಳಿಗ್ಗೆ ಪುಷ್ಪ ಗುಚ್ಛ ಸಮರ್ಪಣೆಯ ಮೂಲಕ ಉರುಸು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಪೂರ್ವ ಗ್ರಾಮದಿಂದ ಮೆರವಣಿಗೆ ಮುಖಾಂತರ ಜಂದೀಸಾಬ ಮುಲ್ಲಾ ಅವರು ಹೊತ್ತುಕೊಂಡು ಬಂದಿದ್ದ ಗಂಧವನ್ನು ಗದ್ದುಗೆಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಭಕ್ತರು ಗಂಧವನ್ನು ಪಡೆದುಕೊಂಡು ಆಶೀರ್ವಾದವನ್ನು ಪಡೆದರು. ನಂತರ ಅನ್ನ ಸಂತರ್ಪಣೆ, ವಿಧಿ-ವಿಧಾನಗಳೊಂದಿಗೆ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನಡೆಯಿತು.
ರಾತ್ರಿ ಕಲಕತ್ತಾದ ಜಹಾಂಗೀರ್ ಅಲಮ್ನೂರಿ ಅವರಿಂದ ಬಯಾನ ಕಾರ್ಯಕ್ರಮ, ರಿವಾಯತ್ ಕವಾಲಿ, ಜಾನಪದ ಸಂಗೀತ ಕಾರ್ಯಕ್ರಮಗಳು ಜನಮನ ಸೆಳೆದವು. ವಿಶೇಷವಾಗಿ ಸಂದಲ್ ಗಂಧ ಮೆರವಣಿಗೆಯಲ್ಲಿ ಪಾಲ್ಗೊಂಡ ಗುಡಗೇರಿಯ ತಾಜ್ ಮ್ಯೂಜಿಕಲ್ ಬ್ರಾಸ್ ಬ್ಯಾಂಡ್ ಕಂಪನಿಯ ಕಲಾವಿದರು ಹಾಡಿದ ಕನ್ನಡ, ಹಿಂದಿ ರಸಮಂಜರಿ ಕಾರ್ಯಕ್ರಮ ಮಂತ್ರಮುಗ್ಧರನ್ನಾಗಿಸಿತು.