ಕಡ್ಡಾಯ ಮತದಾನ ಪ್ರಜಾಪ್ರಭುತ್ವದ ಬುನಾದಿ

0
sveep
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯ ಮತದಾನದ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನು ಗಟ್ಟಿಗೊಳಿಸಬೇಕು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ಹೇಳಿದರು.

Advertisement

ಮುಂಡರಗಿ ಪಟ್ಟಣದ ತಾ.ಪಂ ಆವರಣದಲ್ಲಿ ಗದಗ ಜಿಲ್ಲಾ ಮತ್ತು ಮುಂಡರಗಿ ತಾಲೂಕು ಚುನಾವಣೆ ಸ್ವೀಪ್ ಸಮಿತಿ, ತಾ.ಪಂ ಮುಂಡರಗಿ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷಚೇತನರ ಮೂಲಕ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ ಧನಂಜಯ ಕುಂಬ್ಳೆ ಅವರೊಂದಿಗೆ ಜಂಟಿಯಾಗಿ ಚಾಲನೆ ನೀಡಿ ಅವರು ಮಾತನಾಡಿದರು.

ಮತದಾನ ಸಂವಿಧಾನ ನಮಗೆ ನೀಡಿರುವ ಅಮೂಲ್ಯ ಹಕ್ಕು. ಆಸೆ-ಆಮಿಷಗಳಿಗೆ ಒಳಗಾಗದೆ ಉತ್ತಮ ಎನಿಸಿದ ಅಭ್ಯರ್ಥಿಗೆ ಮತ ಚಲಾಯಿಸುವ ಕೆಲಸ ನಮ್ಮ ಪ್ರಮುಖ ಆದ್ಯತೆಯಾಗಬೇಕು. ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮತದಾನದ ಪ್ರಮಾಣ ನೂರರಷ್ಟಾದರೆ ಮತದಾನದ ಪ್ರಾಮುಖ್ಯತೆಗೆ ಅರ್ಥ ಬರುತ್ತದೆ. ಆ ಕಾರಣಕ್ಕಾಗಿ ಮತ ಚಲಾಯಿಸುವ ಮೂಲಕ ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ತಪ್ಪದೇ ಚಲಾಯಿಸಬೇಕು ಎಂದರು.

ಪಟ್ಟಣದ ತಾ.ಪಂ ಆವರಣದಿಂದ ಆರಂಭವಾದ ಮತದಾನ ಜಾಗೃತಿ ವಿಶೇಷಚೇತನರ ಬೈಕ್ ಜಾಥಾ ಬೃಂದಾವನ ವೃತ್ತ, ಮೇನ್ ಬಜಾರ್, ಬಸ್ ನಿಲ್ದಾಣ ಮಾರ್ಗವಾಗಿ ಸಂಚರಿಸುತ್ತಾ ಮತದಾನ ಜಾಗೃತಿ ಕುರಿತಾದ ವಿಶೇಷ ಘೋಷಣೆಗಳನ್ನು ಕೂಗುವುದರೊಂದಿಗೆ ಸಾರ್ವಜನಿಕರಲ್ಲಿ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.

ಜಾಥಾದಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಪ್ರವೀಣ್ ಗೋಣೆಮ್ಮನವರ, ಪಿಡಿಓ ಫಕ್ರುದ್ದೀನ್ ನದಾಫ, ತಾ.ಪಂ ಸಿಬ್ಬಂದಿಗಳು ಇದ್ದರು.

ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ತಹಸೀಲ್ದಾರ ಧನಂಜಯ ಮಾಲಗತ್ತಿ, ಸಾರ್ವಜನಿಕರು ಮತದಾನದಿಂದ ವಿಮುಖರಾಗದೆ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಜವಾಬ್ದಾರಿ ಮೆರೆಯಬೇಕು. ಮುಂಡರಗಿ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

 


Spread the love

LEAVE A REPLY

Please enter your comment!
Please enter your name here