Home Blog

ವೈದ್ಯಕೀಯ ಸೀಟು ಪಡೆದವರಿಗೆ ಬಿಗ್ ಅಪ್‌ಡೇಟ್; ಸೆ.21ರೊಳಗೆ ಕಾಲೇಜಿಗೆ ಪ್ರವೇಶ ಪಡೆಯಬೇಕು

0

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಬುಧವಾರ ಪ್ರಕಟಿಸಿದೆ.

ಈ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 19ರೊಳಗೆ ನಿಗದಿತ ಶುಲ್ಕ ಪಾವತಿಸಬೇಕು. ಬಳಿಕ ಸೀಟು ಖಾತರಿ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಂಡು, ಸೆಪ್ಟೆಂಬರ್ 21ರೊಳಗೆ ಸಂಬಂಧಪಟ್ಟ ಕಾಲೇಜಿಗೆ ತೆರಳಿ ಕಡ್ಡಾಯವಾಗಿ ಪ್ರವೇಶ ಪಡೆಯಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಒಟ್ಟು 12,010 ವೈದ್ಯಕೀಯ ಸೀಟುಗಳ ಪೈಕಿ 11,551 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನೂ 459 ವೈದ್ಯಕೀಯ ಸೀಟುಗಳು ಉಳಿದಿವೆ.

ಇನ್ನು ದಂತ ವೈದ್ಯಕೀಯ ಕೋರ್ಸ್‌ನ ಒಟ್ಟು 2,689 ಸೀಟುಗಳೂ ಈ ಸುತ್ತಿನಲ್ಲಿ ಸಂಪೂರ್ಣವಾಗಿ ಹಂಚಿಕೆಯಾಗಿವೆ ಎಂದು ಕೆಇಎ ತಿಳಿಸಿದೆ.

UPI ಬಳಕೆದಾರರಿಗೆ ಹೊಸ ಶುಲ್ಕ? ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ!

0

ನವದೆಹಲಿ: ಯುಪಿಐ ವಹಿವಾಟುಗಳ ಮೇಲಿನ ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (MDR) ನಿಯಮದ ವಿಚಾರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಅಮೆರಿಕದ ಒತ್ತಡಕ್ಕೆ ಮಣಿದು ಭಾರತೀಯರ ಮೇಲೆ ಯುಪಿಐ ಶುಲ್ಕದ ಹೊರೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹೊಸ ಶುಲ್ಕವನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮುಂದೆ ಶರಣಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವುದರಿಂದ ಭಾರತೀಯರ ಜೇಬಿಗೆ ಹೊರೆ ಬೀಳಲಿದೆ. ದೊಡ್ಡ ಮೊತ್ತದ ಯುಪಿಐ ಪಾವತಿಗಳ ಮೇಲಿನ ಹೊಸ MDR ನಿಯಮವನ್ನು ಹಿಂಪಡೆಯುವಂತೆ ಅವರು ಒತ್ತಾಯಿಸಿದ್ದಾರೆ.

ಆದರೆ, ರಾಹುಲ್ ಗಾಂಧಿ ಅವರ ಆರೋಪವನ್ನು ಕೇಂದ್ರ ಹಣಕಾಸು ಸಚಿವಾಲಯ ತಳ್ಳಿಹಾಕಿದ್ದು, ಯುಪಿಐ ಮೇಲಿನ MDR ನಿರ್ಧಾರದಲ್ಲಿ ಯಾವುದೇ ವಿದೇಶಿ ಪ್ರಭಾವವಿಲ್ಲ ಎಂದು ಸ್ಪಷ್ಟಪಡಿಸಿದೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ; ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಕೋರ್ಟ್‌ ಸಮ್ಮತಿ!

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡುವ ಪ್ರಕ್ರಿಯೆಗೆ 59ನೇ ಸಿಸಿಹೆಚ್‌ ಕೋರ್ಟ್‌ ಒಪ್ಪಿಗೆ ಸೂಚಿಸಿದೆ.

ಪ್ರದೋಷ್‌ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಮಾಫಿ ಸಾಕ್ಷಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ದರ್ಶನ್‌ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಮಾಫಿ ಸಾಕ್ಷಿ ಪ್ರಕ್ರಿಯೆ ಮುಂದೂಡುವಂತೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.

ಈ ಮೂಲಕ ದರ್ಶನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಈ ಆದೇಶ ನೀಡಿದ್ದಾರೆ.

ಈ ಹಿಂದೆ ಹೈಕೋರ್ಟ್‌, ಮಾಫಿ ಸಾಕ್ಷಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಷನ್‌ ಕೋರ್ಟ್‌ಗೆ ನೀಡಿದ್ದ ಆದೇಶವನ್ನು ಮಾರ್ಪಡಿಸಿ ಹೊಸ ಆದೇಶ ಹೊರಡಿಸುವಂತೆ ಸೂಚಿಸಿತ್ತು. ಅದರಂತೆ ಇದೀಗ ಸೆಷನ್‌ ಕೋರ್ಟ್‌ ಹೊಸ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಮುಂದಿನ ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆಯಿದೆ.

ವಿಚಾರಣೆ ವೇಳೆ ನ್ಯಾಯಾಲಯವು ಮಾಫಿ ಸಾಕ್ಷಿಯಾಗಲು ಒಪ್ಪಿಗೆ ಇದೆಯೇ ಎಂದು ಪ್ರದೋಷ್‌ ಅವರನ್ನು ಪ್ರಶ್ನಿಸಿದ್ದು, ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ.

ಆಲೂಗಡ್ಡೆ ಸಂಗ್ರಹಿಸುವಾಗ ಈ ತಪ್ಪು ಮಾಡಬೇಡಿ; ಆರೋಗ್ಯದ ಮೇಲೂ ಪರಿಣಾಮ ಬೀರಬಹುದು!

0

ತರಕಾರಿಗಳನ್ನು ಹೆಚ್ಚು ದಿನ ತಾಜಾವಾಗಿ ಇಡಲು ಸಾಮಾನ್ಯವಾಗಿ ಫ್ರಿಜ್‌ ಬಳಸುತ್ತೇವೆ. ಆದರೆ ಆಲೂಗಡ್ಡೆಯನ್ನು ಮಾತ್ರ ಫ್ರಿಜ್‌ನಲ್ಲಿ ಇಡುವುದನ್ನು ಬಹುತೇಕರು ತಪ್ಪಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಆಲೂಗಡ್ಡೆಯಲ್ಲಿರುವ ಪಿಷ್ಟದ ಮೇಲೆ ಕಡಿಮೆ ತಾಪಮಾನ ಬೀರುವ ಪರಿಣಾಮ.

ಆಲೂಗಡ್ಡೆಯಲ್ಲಿ ಪಿಷ್ಟದ ಪ್ರಮಾಣ ಹೆಚ್ಚಿರುತ್ತದೆ. ಫ್ರಿಜ್‌ನಲ್ಲಿರುವ ಕಡಿಮೆ ತಾಪಮಾನದಲ್ಲಿ ಪಿಷ್ಟದ ಒಂದು ಭಾಗ ಸಕ್ಕರೆಯಾಗಿ ಬದಲಾಗಬಹುದು. ಇದರಿಂದ ಆಲೂಗಡ್ಡೆಯ ರುಚಿಯಲ್ಲಿ ಸಿಹಿತನ ಹೆಚ್ಚಾಗುವ ಸಾಧ್ಯತೆಯಿದ್ದು, ಅದರ ವಿನ್ಯಾಸದಲ್ಲೂ ಬದಲಾವಣೆ ಕಾಣಿಸಬಹುದು. ವಿಶೇಷವಾಗಿ ಆಲೂಗಡ್ಡೆಯನ್ನು ಕರಿಯುವಾಗ ಅಥವಾ ಬೇಯಿಸುವಾಗ ಈ ವ್ಯತ್ಯಾಸ ಗೊತ್ತಾಗಬಹುದು.

ಆದರೆ ಫ್ರಿಜ್‌ನಲ್ಲಿ ಇಟ್ಟ ಆಲೂಗಡ್ಡೆ ತಕ್ಷಣವೇ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ ಎಂದರ್ಥವಲ್ಲ. ಮುಖ್ಯವಾಗಿ ರುಚಿ ಮತ್ತು ಅಡುಗೆಯ ಗುಣಮಟ್ಟದಲ್ಲಿ ಬದಲಾವಣೆ ಉಂಟಾಗಬಹುದು.

ಹಾಗಾದರೆ ಆಲೂಗಡ್ಡೆಯನ್ನು ಹೇಗೆ ಸಂಗ್ರಹಿಸಬೇಕು? ತಂಪಾದ, ಕತ್ತಲೆಯ ಹಾಗೂ ಗಾಳಿ ಸರಿಯಾಗಿ ಹರಿದಾಡುವ ಸ್ಥಳದಲ್ಲಿ ಇಡುವುದು ಸೂಕ್ತ. ಕಾಗದದ ಚೀಲ, ಜಾಲರಿಯ ಚೀಲ ಅಥವಾ ಗಾಳಿಯಾಡುವ ಬುಟ್ಟಿಯಲ್ಲಿ ಇಡಬಹುದು. ಪ್ಲಾಸ್ಟಿಕ್‌ ಚೀಲದಲ್ಲಿ ಗಾಳಿಯಾಡದಂತೆ ಮುಚ್ಚಿಡುವುದನ್ನು ತಪ್ಪಿಸುವುದು ಉತ್ತಮ.

ಇನ್ನು ಆಲೂಗಡ್ಡೆಯನ್ನು ನೇರವಾಗಿ ಬೆಳಕಿಗೆ ಒಡ್ಡಬಾರದು. ಹೆಚ್ಚು ಬೆಳಕು ಬಿದ್ದಾಗ ಅದರ ಹೊರಭಾಗ ಹಸಿರು ಬಣ್ಣಕ್ಕೆ ತಿರುಗಬಹುದು. ಈ ಸಂದರ್ಭದಲ್ಲಿ ಗ್ಲೈಕೋಆಲ್ಕಲಾಯ್ಡ್ಸ್‌ ಎಂಬ ಸಂಯುಕ್ತಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಇವು ಹೆಚ್ಚಿನ ಪ್ರಮಾಣದಲ್ಲಿ ಸೇವನೆಯಾದರೆ ವಿಷಕಾರಿ ಪರಿಣಾಮ ಉಂಟುಮಾಡಬಹುದು.

ಹೀಗಾಗಿ ಆಲೂಗಡ್ಡೆಯನ್ನು ಫ್ರಿಜ್‌ನ ಬದಲು ತಂಪಾದ, ಕತ್ತಲೆಯ ಮತ್ತು ಗಾಳಿಯಾಡುವ ಸ್ಥಳದಲ್ಲಿ ಸಂಗ್ರಹಿಸುವುದು ಉತ್ತಮ. ಕೊಳೆತ, ಗಾಯಗೊಂಡ ಅಥವಾ ಹಸಿರು ಬಣ್ಣಕ್ಕೆ ತಿರುಗಿರುವ ಆಲೂಗಡ್ಡೆಯನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

ತಾಕತ್ತಿದ್ದರೆ ಹಿಂದೂಗಳಿಗೆ ಎಚ್ಚರಿಕೆ ನೀಡಿದಂತೆಯೇ ಮುಸ್ಲಿಮರಿಗೂ ಎಚ್ಚರಿಕೆ ನೀಡಲಿ: ಆರ್.ಅಶೋಕ್

0

ಬೆಂಗಳೂರು: ಗಣೇಶೋತ್ಸವದ ಸಂದರ್ಭದಲ್ಲಿ ಹಿಂದೂಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಕಾಂಗ್ರೆಸ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಿಂದೂ ಮುಖಂಡರಿಗೆ ಎಚ್ಚರಿಕೆ ನೀಡಿದ ರೀತಿಯಲ್ಲೇ ಎಲ್ಲ ಸಮುದಾಯಗಳಿಗೂ ಕಾನೂನು ಒಂದೇ ರೀತಿಯಲ್ಲಿ ಅನ್ವಯವಾಗಬೇಕು ಎಂದು ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌. ಅಶೋಕ್, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ತಾವು ಭಾವಿಸಿದ್ದೆ. ಆದರೆ ಟಿ. ನರಸೀಪುರ ಠಾಣೆಯ ಇನ್ಸ್‌ಪೆಕ್ಟರ್‌ ಪರವಾಗಿ ಅವರು ಮಾತನಾಡಿರುವುದು ಸರಿಯಲ್ಲ ಎಂದು ಟೀಕಿಸಿದರು.

ಟಿ. ನರಸೀಪುರ ಠಾಣೆಯ ಇನ್ಸ್‌ಪೆಕ್ಟರ್‌ ವಿರುದ್ಧ ಈ ಹಿಂದೆ ದಲಿತರ ಮೇಲೆ ಹಲ್ಲೆ ಹಾಗೂ ಮಹಿಳೆಯೊಬ್ಬರ ಬದುಕಿಗೆ ಸಂಬಂಧಿಸಿದ ಆರೋಪಗಳಿವೆ ಎಂದು ಆರ್‌. ಅಶೋಕ್‌ ಹೇಳಿದರು. ಇಂತಹ ಹಿನ್ನೆಲೆ ಇರುವ ಪೊಲೀಸ್‌ ಅಧಿಕಾರಿಯನ್ನು ಸರ್ಕಾರ ಸಮರ್ಥಿಸಿದರೆ, ಅದು ಪೊಲೀಸರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರ ದೇಶಭಕ್ತಿ ಕುರಿತು ಕಾಂಗ್ರೆಸ್‌ ನಾಯಕರು ಪ್ರಶ್ನಿಸುವ ಅಗತ್ಯವಿಲ್ಲ ಎಂದು ಹೇಳಿದ ಆರ್‌. ಅಶೋಕ್‌, ಕಾಂಗ್ರೆಸ್‌ ಪಕ್ಷದ ವಿರುದ್ಧ ಹಲವು ರಾಜಕೀಯ ಆರೋಪಗಳನ್ನು ಮಾಡಿದರು. “ನಮಗೆ ದೇಶಭಕ್ತಿಯ ಪಾಠ ಮಾಡಬೇಕಿಲ್ಲ” ಎಂದು ಹೇಳಿದರು.

ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸಿರುವ ಸರ್ಕಾರ, ಮಸೀದಿಗಳ ಮುಂಭಾಗವೂ ಮೆರವಣಿಗೆ ನಡೆಸದಂತೆ ನಿಯಮ ರೂಪಿಸಲಿ ಎಂದು ಆಗ್ರಹಿಸಿದರು. ಇದೇ ವೇಳೆ ಯಾವುದೇ ಧಾರ್ಮಿಕ ಸ್ಥಳದ ಮುಂದೆ ಮೆರವಣಿಗೆ ಅಥವಾ ಕಾರ್ಯಕ್ರಮ ನಡೆಸುವ ವಿಚಾರದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ಒತ್ತಾಯಿಸಿದರು.

ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟದ ಘಟನೆ ಕುರಿತು ಮಾತನಾಡಿದ ಅವರು, ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಹಿಂದೂ ಮುಖಂಡರಿಗೆ ನೋಟಿಸ್‌ ನೀಡಲಾಗಿದೆ ಎಂದು ಆರೋಪಿಸಿದರು. ಮದ್ದೂರಿಗೆ ತೆರಳಿ ಹಿಂದೂ ಮುಖಂಡರಿಗೆ ಬೆಂಬಲ ನೀಡುವುದಾಗಿ ಆರ್‌. ಅಶೋಕ್‌ ತಿಳಿಸಿದರು.

ಬಡವರ ನಿವೇಶನ ಯೋಜನೆ: ತಿಂಗಳಾಂತ್ಯದೊಳಗೆ ಭೂಮಿ ಗುರುತಿಸುವಂತೆ ಅಧಿಕಾರಿಗಳಿಗೆ ಪರಮೇಶ್ವರ್ ಸೂಚನೆ

0

ಬೆಂಗಳೂರು: ಬಡವರಿಗೆ ನಿವೇಶನ ನೀಡುವ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ, ಭೂಮಿ ಗುರುತಿಸುವ ಪ್ರಕ್ರಿಯೆಯನ್ನು ತಿಂಗಳಾಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಧಿಕಾರಿಗಳಿಗೆ ವಿವಿಧ ವಿಷಯಗಳ ಕುರಿತು ಅಗತ್ಯ ಸೂಚನೆಗಳನ್ನು ನೀಡಿದರು.

ಬಡವರಿಗೆ ನಿವೇಶನ ನೀಡುವ ಕಾರ್ಯಕ್ರಮ ಘೋಷಣೆಯಾದ ಬಳಿಕ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ನಿವೇಶನ ಸಿದ್ಧಪಡಿಸಲು ಅಗತ್ಯವಿರುವ ಭೂಮಿಯನ್ನು ಇನ್ನೂ ಗುರುತಿಸಿಲ್ಲ. ಹೀಗಾಗಿ ತಿಂಗಳಾಂತ್ಯದೊಳಗೆ ಭೂಮಿ ಗುರುತಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಭೂಮಿ ಗುರುತಿಸುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಗೆ ಅಗತ್ಯವಿರುವ ತಾಂತ್ರಿಕ ಸಹಕಾರವನ್ನು ಹಿರಿಯ ಅಧಿಕಾರಿಗಳು ನೀಡಲಿದ್ದಾರೆ ಎಂದು ಜಿ. ಪರಮೇಶ್ವರ ತಿಳಿಸಿದರು.

ಇದೇ ವೇಳೆ ಭಾರತ್ ಜೋಡೋ ಯುವ ಸಂಘ ಯೋಜನೆಯ ಅನುಷ್ಠಾನಕ್ಕೂ ಹೆಚ್ಚಿನ ವೇಗ ನೀಡುವಂತೆ ಸೂಚಿಸಿದರು. ಸಂಘಗಳ ನೋಂದಣಿ, ಮೆಂಟರ್‌ಗಳ ನೇಮಕ ಸೇರಿದಂತೆ ಸಂಘಗಳನ್ನು ಆರಂಭಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದೀಗ ಕೂಡಲೇ ಅರ್ಜಿ ನಮೂನೆಗಳನ್ನು ವಿತರಿಸಿ, ಅರ್ಜಿಗಳನ್ನು ಭರ್ತಿ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.

ಭಾರತ್ ಜೋಡೋ ಯುವಕ ಸಂಘವನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಿಂದ ಸರ್ಕಾರ ಮತ್ತು ಅಧಿಕಾರಿಗಳಿಗೆ ಉತ್ತಮ ಹೆಸರು ಬರಲಿದೆ ಎಂದು ಜಿ. ಪರಮೇಶ್ವರ ಹೇಳಿದರು.

ಜಾಸೇವಾ ಅಭಿಯಾನದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವುಗಳ ವಿಲೇವಾರಿಗೆ ಅಧಿಕಾರಿಗಳು ವೇಗ ನೀಡಬೇಕು ಎಂದು ಸೂಚಿಸಿದರು. ಪಹಣಿ ತಿದ್ದುಪಡಿ, ಪೋಡಿ ಹಾಗೂ ಪಿಂಚಣಿ ಸಮಸ್ಯೆ ಸೇರಿದಂತೆ ವಿವಿಧ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ತಿಳಿಸಿದರು.

ಆರ್‌ಟಿಸಿ ಹಾಗೂ ಪೋಡಿ ಪ್ರಕರಣಗಳ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ. ಆದರೂ ಅಧಿಕಾರಿಗಳಿಗೆ ಯಾವುದೇ ಗೊಂದಲ ಉಂಟಾದರೆ ಹಿರಿಯ ಅಧಿಕಾರಿಗಳಿಂದ ಅಗತ್ಯ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕಂದಾಯ ಆಯುಕ್ತೆ ಮೀನಾ ನಾಗರಾಜ್, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತ ವೆಂಕಟರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಕ್ಟೋಬರ್ 17ರ ರಾತ್ರಿ 7:50ಕ್ಕೆ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ: ಸರ್ಕಾರದಿಂದ 2 ಕೋಟಿ ರೂ. ಅನುದಾನ!

0

ಕೊಡಗು/ಮಡಿಕೇರಿ: ದಕ್ಷಿಣ ಭಾರತದ ಜೀವನದಿ ತಾಯಿ ಕಾವೇರಿಯ ತೀರ್ಥೋದ್ಭವ (Cauvery Theerthodbhava) ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪುಣ್ಯ ಕಾಲದ ಮುಹೂರ್ತ ನಿಗದಿಯಾಗಿದೆ. ಮಡಿಕೇರಿ ತಾಲೂಕಿನ ಜನ್ಮಭೂಮಿ ತಲಕಾವೇರಿ ಕ್ಷೇತ್ರದಲ್ಲಿ ಅಕ್ಟೋಬರ್ 17ರ ರಾತ್ರಿ 7:50ಕ್ಕೆ ಕಾವೇರಿ ತೀರ್ಥೋದ್ಭವ ನಡೆಯಲಿದೆ ಎಂದು ಪ್ರಕಟಿಸಲಾಗಿದೆ.

ಮೇಷ ಲಗ್ನದಲ್ಲಿ ತೀರ್ಥೋದ್ಭವ: ಈ ಬಾರಿ ಅತ್ಯಂತ ಶುಭಪ್ರದವಾದ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ಜರುಗಲಿದೆ. ಪವಿತ್ರ ತೀರ್ಥ ರೂಪಿಣಿಯಾಗಿ ತಾಯಿ ಕಾವೇರಿ ಪ್ರತ್ಯಕ್ಷಳಾಗುವ ಈ ದಿವ್ಯ ಕ್ಷಣವನ್ನು ಕಣ್ಣುಂಬಿಕೊಳ್ಳಲು ಹಾಗೂ ಪವಿತ್ರ ತೀರ್ಥ ಪ್ರೋಕ್ಷಣೆ ಪಡೆದುಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ ಧಾರ್ಮಿಕ ವಿಧಿವಿಧಾನಗಳಿಗೆ ಹಾಗೂ ಭಕ್ತರ ಅನುಕೂಲಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಸರ್ಕಾರದಿಂದ 2 ಕೋಟಿ ರೂಪಾಯಿ ಅನುದಾನ: ಕೊಡಗಿನ ಅಧಿದೇವತೆ ಕಾವೇರಿ ತೀರ್ಥೋದ್ಭವ ಸಂಭ್ರಮಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ರಾಜ್ಯ ಸರ್ಕಾರ ಸಾಥ್ ನೀಡಿದೆ. ಅಕ್ಟೋಬರ್ 17ರಂದು ನಡೆಯಲಿರುವ ಈ ಪವಿತ್ರ ಕಾವೇರಿ ತೀರ್ಥೋದ್ಭವ ಆಚರಣೆ ಹಾಗೂ ಸಿದ್ಧತೆಗಳಿಗಾಗಿ ಬರೋಬ್ಬರಿ 2 ಕೋಟಿ ರೂಪಾಯಿ ಅನುದಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತೀರ್ಥೋದ್ಭವದ ಹಿನ್ನೆಲೆಯಲ್ಲಿ ಇಡೀ ಕೊಡಗು ಜಿಲ್ಲೆಯಾದ್ಯಂತ ಧಾರ್ಮಿಕ ಸಂಭ್ರಮಾಚರಣೆಯ ವಾತಾವರಣ ನೆಲೆಸಿದೆ.

ಪ್ರದೋಷ್ʼಗೆ ಮತ್ತೊಂದು ಸಂಕಷ್ಟ? ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ ಉಲ್ಲೇಖಿಸಿ ‘ಮಾಫಿ ಸಾಕ್ಷಿ ಮಾಡಬೇಡಿ’ ಎಂದ ದರ್ಶನ್!

0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಗೆ ಸಂಬಂಧಿಸಿದ ಆದೇಶವನ್ನು ತಡೆಹಿಡಿಯುವಂತೆ ಕೋರಿ ನಟ ದರ್ಶನ್ ಪರ ವಕೀಲರು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇಂದು ಅರ್ಜಿಯ ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ಪ್ರದೋಷ್ ಪರ ವಕೀಲರು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ನಡುವೆ ತೀವ್ರ ವಾದ-ಪ್ರತಿವಾದ ನಡೆಯಿತು.

ದರ್ಶನ್ ಪರ ವಕೀಲರು, ಪ್ರದೋಷ್ ಜೈಲಿನಲ್ಲಿದ್ದ ವೇಳೆ ಅಕ್ರಮವಾಗಿ ಮೊಬೈಲ್ ಫೋನ್ ಬಳಕೆ ಮಾಡಿದ್ದಾನೆ ಎಂದು ಆರೋಪಿಸಿದರು. ಬೇರೊಬ್ಬರ ಹೆಸರಿನಲ್ಲಿ ನಂಬರ್ ನೋಂದಾಯಿಸಿ ತನ್ನ ಪತ್ನಿಗೆ ಕರೆ ಮಾಡಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಕೋರ್ಟ್‌ಗೆ ತಿಳಿಸಿದರು.

ಜೈಲಾಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲೂ ಅಕ್ರಮ ಕರೆ ಮಾಡಿರುವುದು ದೃಢಪಟ್ಟಿದೆ ಎಂದು ದರ್ಶನ್ ಪರ ವಕೀಲರು ವಾದಿಸಿದರು. ಜೈಲಿನಿಂದ ಹೊರಬರಲು ಪ್ರದೋಷ್ ಹಲವರೊಂದಿಗೆ ಸಂಪರ್ಕ ಸಾಧಿಸಿದ್ದಾನೆ ಎನ್ನಲಾಗಿದ್ದು, ಆತನ ಮೇಲೆ ಯಾರಾದರೂ ಒತ್ತಡ ಹೇರಿರುವ ಸಾಧ್ಯತೆಯೂ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಈ ಪ್ರಕರಣದ ಸಂಪೂರ್ಣ ತನಿಖೆ ಮುಗಿಯುವವರೆಗೆ ಪ್ರದೋಷ್‌ನನ್ನು ಮಾಫಿ ಸಾಕ್ಷಿ ಎಂದು ಪರಿಗಣಿಸಬಾರದು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಬೇಕು ಹಾಗೂ ಜೈಲಿನಲ್ಲಿನ ಅಕ್ರಮದ ತನಿಖೆ ಪೂರ್ಣಗೊಂಡ ಬಳಿಕವೇ ಮಾಫಿ ಸಾಕ್ಷಿ ವಿಚಾರದಲ್ಲಿ ಆದೇಶ ಹೊರಡಿಸಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ವಿಶೇಷ ಸರ್ಕಾರಿ ಅಭಿಯೋಜಕರು, ಜೈಲಿನಲ್ಲಿ ನಡೆದಿದೆ ಎನ್ನಲಾದ ಘಟನೆ ಹಾಗೂ ಪ್ರದೋಷ್ ಮಾಫಿ ಸಾಕ್ಷಿಯಾಗುವ ವಿಚಾರ ಎರಡು ಪ್ರತ್ಯೇಕ ವಿಷಯಗಳು ಎಂದು ವಾದಿಸಿದರು. ಜೈಲು ಮ್ಯಾನುಯಲ್ ಪ್ರಕಾರ ಖೈದಿಗಳಿಗೆ ಮೂರು ಫೋನ್ ನಂಬರ್‌ಗಳಿಗೆ ಕರೆ ಮಾಡಲು ಅವಕಾಶವಿದೆ. ಆದರೆ ಪ್ರದೋಷ್ ತನ್ನ ಮಿತಿಯನ್ನು ಮೀರಿ ಮತ್ತೊಬ್ಬರ ಹೆಸರಿನಲ್ಲಿ ಪತ್ನಿಯ ನಂಬರ್ ನೋಂದಾಯಿಸಿಕೊಂಡು ಮಾತನಾಡಿದ್ದಾನೆ ಎನ್ನುವುದು ಆರೋಪವಾಗಿದೆ ಎಂದು ತಿಳಿಸಿದರು.

ಹೈಕೋರ್ಟ್ ಈಗಾಗಲೇ ಒಂದು ವಾರದೊಳಗೆ ಆದೇಶ ನೀಡುವಂತೆ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಕಾಶ ನೀಡುವ ಅಗತ್ಯವಿಲ್ಲ. ದರ್ಶನ್ ಪರ ಸಲ್ಲಿಸಿರುವ ಮೆಮೋಗೆ ಕಾನೂನು ಮಾನ್ಯತೆ ಇಲ್ಲ ಹಾಗೂ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ಸರ್ಕಾರಿ ಅಭಿಯೋಜಕರು ವಾದಿಸಿದರು.

ಪ್ರದೋಷ್ ವಿರುದ್ಧದ ಜೈಲು ಅಕ್ರಮದ ಆರೋಪಕ್ಕೂ ಆತ ಮಾಫಿ ಸಾಕ್ಷಿಯಾಗುವುದಕ್ಕೂ ನೇರ ಸಂಬಂಧವಿಲ್ಲ ಎಂದು ವಾದಿಸಿದ ಸರ್ಕಾರಿ ಅಭಿಯೋಜಕರು, ವಿನಯ್ ಕುಲಕರ್ಣಿ ಪ್ರಕರಣದಲ್ಲೂ ಹಳೆಯ ಪ್ರಕರಣಗಳಿದ್ದರೂ ಬಸವರಾಜ್ ಮುತ್ತಗಿಯನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು ಎಂದು ಉದಾಹರಣೆ ನೀಡಿದರು. ಹೈಕೋರ್ಟ್ ಆದೇಶದಂತೆ ನ್ಯಾಯಾಲಯ ಮುಂದುವರಿಯಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಆರೋಪಿ ಪ್ರದೋಷ್ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾನೆ. “ಜೈಲು ಅಧಿಕಾರಿಗಳೇ ನನಗೆ ಐಡಿ ಕ್ರಿಯೇಟ್ ಮಾಡಿಕೊಟ್ಟಿದ್ದರು. ನನಗೆ ಯಾವುದೇ ಸಿಸ್ಟಮ್ ಆಕ್ಸೆಸ್ ಇಲ್ಲ. ಮೊದಲು ಲೀಗಲ್ ಎಂದಿದ್ದ ಅಧಿಕಾರಿಗಳೇ ಈಗ ಇಲ್ಲೀಗಲ್ ಎನ್ನುತ್ತಿದ್ದಾರೆ” ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ.

ಕಳೆದ ಎರಡು-ಮೂರು ದಿನಗಳಿಂದ ತನ್ನನ್ನು ಗುರಿಯಾಗಿಸಿ ಕ್ಯಾಂಟೀನ್ ವ್ಯವಸ್ಥೆ ತೆಗೆದುಹಾಕಲಾಗಿದೆ. ಒಂದು ತಿಂಗಳು ಸೆಲ್‌ನಲ್ಲಿ ಇರಬೇಕು ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬೆದರಿಸಲಾಗುತ್ತಿದೆ ಎಂದು ಪ್ರದೋಷ್ ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾನೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆ ಹಾಗೂ ಜೈಲಿನಲ್ಲಿನ ಅಕ್ರಮ ಮೊಬೈಲ್ ಬಳಕೆ ಆರೋಪದ ವಿಚಾರಗಳು ಇದೀಗ ನ್ಯಾಯಾಲಯದ ಮುಂದಿನ ವಿಚಾರಣೆಯಲ್ಲಿ ಮಹತ್ವ ಪಡೆದುಕೊಂಡಿವೆ.

ಬೆಳಗಾವಿಯಲ್ಲಿ ಬೆಚ್ಚಿಬೀಳಿಸಿದ ಡಬಲ್ ಮರ್ಡರ್: ಗ್ರಾಮ ಪಂಚಾಯಿತಿ ಆವರಣದಲ್ಲೇ ತಂದೆ, ಮಗಳ ಬರ್ಬರ ಹತ್ಯೆ!

0

ಬೆಳಗಾವಿ: ಆಸ್ತಿ ದಾಖಲೆ ಪಡೆಯಲು ಗ್ರಾಮ ಪಂಚಾಯಿತಿಗೆ ಬಂದಿದ್ದ ತಂದೆ-ಮಗಳನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.

ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಹತ್ಯೆಯಾದವರು. ಘಟನೆಯಲ್ಲಿ ರುದ್ರಪ್ಪ ಅವರ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರುದ್ರಪ್ಪ ಹಾಗೂ ಅವರ ಸಹೋದರರ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಹಲವು ದಿನಗಳಿಂದ ವಿವಾದವಿತ್ತು ಎನ್ನಲಾಗಿದೆ. 38 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಮೂವರು ಸಹೋದರರ ನಡುವೆ ವ್ಯಾಜ್ಯ ನಡೆದಿದ್ದು, ಆಸ್ತಿಯನ್ನು ಮೂವರಿಗೆ ಹಂಚಿಕೆ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು ಎನ್ನಲಾಗಿದೆ.

ಈ ನಡುವೆ ರುದ್ರಪ್ಪ ಅವರಿಗೆ ಬಂದಿದ್ದ ಜಮೀನನ್ನು ಅವರು ಈಗಾಗಲೇ ಮಾರಾಟ ಮಾಡಿದ್ದರು ಎನ್ನಲಾಗಿದ್ದು, ಉಳಿದ ಜಮೀನಿನಲ್ಲೂ ತಮಗೆ ಪಾಲು ಬೇಕೆಂದು ಅವರು ಒತ್ತಾಯಿಸಿದ್ದರು ಎನ್ನಲಾಗಿದೆ. ರುದ್ರಪ್ಪ ಅವರ ಹೆಸರಿನಲ್ಲಿ ಆಸ್ತಿ ಇರುವುದು ಕೂಡ ಕುಟುಂಬದೊಳಗಿನ ಜಗಳಕ್ಕೆ ಕಾರಣವಾಗಿತ್ತು ಎಂದು ಹೇಳಲಾಗಿದೆ.

ಇಂದು ಜಮೀನಿನ ದಾಖಲೆ ಮಾಡಿಸಲು ರುದ್ರಪ್ಪ ಗ್ರಾಮ ಪಂಚಾಯಿತಿಗೆ ಬಂದಿದ್ದರು. ಅವರು ಧಾರವಾಡದಿಂದ ಬಾಡಿಗೆ ಕಾರಿನಲ್ಲಿ ಗ್ರಾಮಕ್ಕೆ ಬಂದಿರುವ ವಿಚಾರ ತಿಳಿದ ಬಳಿಕ, ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪ ಅವರ ಪುತ್ರ ಮಡಿವಾಳಪ್ಪ ಕುಂದರಗಿ ಸೇರಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಗ್ರಾಮ ಪಂಚಾಯಿತಿ ಆವರಣದಲ್ಲೇ ರುದ್ರಪ್ಪ ಅವರ ಮೇಲೆ ಕೊಡಲಿ, ಕುಡಗೋಲು ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ವೇಳೆ ತಂದೆಯನ್ನು ರಕ್ಷಿಸಲು ಮುಂದಾದ ಪುತ್ರಿ ಶಶಿಕಲಾ ಅವರ ಮೇಲೂ ದಾಳಿ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ತಂದೆ-ಮಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬದ ಆಸ್ತಿ ವಿವಾದವೇ ಹತ್ಯೆಗೆ ಕಾರಣವೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸತೀಶ್ ಜಾರಕಿಹೊಳಿ ತವರು ಜಿಲ್ಲೆ ಬೆಳಗಾವಿಗೆ ಅಮಿತ್ ಶಾ ಎಂಟ್ರಿ! KLE ಆಸ್ಪತ್ರೆ ಉದ್ಘಾಟನೆ

0

ಬೆಳಗಾವಿ/ಧಾರವಾಡ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 18 ಮತ್ತು 19ರಂದು ಕರ್ನಾಟಕಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ನಡೆದಿರುವ ಬೆನ್ನಲ್ಲೇ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಸೆಪ್ಟೆಂಬರ್ 18ರಂದು ರಾತ್ರಿ 10 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿರುವ ಅಮಿತ್ ಶಾ, ನಗರದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೆಪ್ಟೆಂಬರ್ 19ರಂದು ಬೆಳಗ್ಗೆ ಹುಬ್ಬಳ್ಳಿ ಹೊರವಲಯದ ಗಬ್ಬೂರು ಬೈಪಾಸ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೆಎಲ್‌ಇ ಸಂಸ್ಥೆಯ 1,500 ಹಾಸಿಗೆಗಳ ಹೈಟೆಕ್ ಆಸ್ಪತ್ರೆ ಹಾಗೂ ನೂತನ ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ಬಳಿಕ ಸೆಪ್ಟೆಂಬರ್ 19ರ ಸಂಜೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಇಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಒಡೆತನದ ‘ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ’ಯ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ಇನ್ನು ಸತೀಶ್ ಜಾರಕಿಹೊಳಿ ಅವರ ತವರು ಜಿಲ್ಲೆಯಾದ ಬೆಳಗಾವಿಗೆ ಅಮಿತ್ ಶಾ ಭೇಟಿ ನೀಡುತ್ತಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಜೊಲ್ಲೆ ಕುಟುಂಬ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಜಾರಕಿಹೊಳಿ ಸಹೋದರರ ಬೆಂಬಲದಿಂದಲೇ ಅಣ್ಣಾಸಾಹೇಬ್ ಜೊಲ್ಲೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು ಎಂಬುದು ಗಮನಾರ್ಹ.

ಇದೀಗ ಸತೀಶ್ ಜಾರಕಿಹೊಳಿ ವಿರುದ್ಧದ ಇ.ಡಿ. ತನಿಖೆಯ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಅಮಿತ್ ಶಾ ಚಿಕ್ಕೋಡಿಗೆ ಭೇಟಿ ನೀಡುತ್ತಿರುವುದು ಹಲವು ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ. ಆದರೆ, ಅವರ ಪ್ರವಾಸದ ಅಧಿಕೃತ ಕಾರ್ಯಕ್ರಮಗಳಲ್ಲಿ ಆಸ್ಪತ್ರೆ ಹಾಗೂ ಸಹಕಾರಿ ಸಂಸ್ಥೆ ಕಟ್ಟಡ ಉದ್ಘಾಟನೆ ಪ್ರಮುಖವಾಗಿ ನಿಗದಿಯಾಗಿದೆ.