Home Blog

ತೋಂಟದಾರ್ಯ ಜಾತ್ರೆಯಲ್ಲಿ ಅವಘಡ: ವಿನಾಯಕ ಮಾನ್ವಿ ಸೇರಿ ಹಲವರ ವಿರುದ್ಧ ಕ್ರಿಮಿನಲ್ ಕೇಸ್!

ಗದಗ: ಜಿಲ್ಲೆಯ ಪ್ರಸಿದ್ಧ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಸಂಭ್ರಮದ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಜಾತ್ರೆಯ ಅತಿ ದೊಡ್ಡ ಆಕರ್ಷಣೆಯಾಗಿದ್ದ ‘ಡ್ಯಾನ್ಸಿಂಗ್ ಫ್ಲೋರ್’ ಮನರಂಜನಾ ಯಂತ್ರವು ಚಾಲನೆಯಲ್ಲಿರುವಾಗಲೇ ತಾಂತ್ರಿಕ ದೋಷದಿಂದ ಮುರಿದು ಬಿದ್ದಿದ್ದು, ಕನಿಷ್ಠ 21 ಜನರು ಗಾಯಗೊಂಡಿದ್ದಾರೆ.

ಭಾನುವಾರ ರಾತ್ರಿ ಸುಮಾರು 8:30ರ ಸುಮಾರಿಗೆ ಈ ಘಟನೆ ನಡೆದಿದೆ. ಯಂತ್ರವು ವೇಗವಾಗಿ ತಿರುಗುತ್ತಿದ್ದಾಗ ಅದರ ಕಬ್ಬಿಣದ ಸಲಾಕೆಗಳು ಹಾಗೂ ಪಾರ್ಶ್ವದ ಭಾಗಗಳು ಇದ್ದಕ್ಕಿದ್ದಂತೆ ಮುರಿದಿವೆ. ಪರಿಣಾಮವಾಗಿ ಯಂತ್ರದಲ್ಲಿದ್ದವರು ಒಬ್ಬರ ಮೇಲೊಬ್ಬರು ಬಿದ್ದಿದ್ದು, ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಗಾಯಾಳುಗಳಲ್ಲಿ 6 ವರ್ಷದ ಮಗು ಸೇರಿ ಮಹಿಳೆಯರು ಮತ್ತು ವಯಸ್ಕರು ಇದ್ದಾರೆ. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಲ್ಲಿ ಜಹೀರ ಅಹ್ಮದ್ ತಂದೆ ನಜೀರ ಅಹ್ಮದ್ ಖಾಜಿ (42 ವರ್ಷ), ಕಲಂದರ ತಂದೆ ಜಹೀರ ಅಹ್ಮದ್ ಖಾಜಿ (15 ವರ್ಷ), ಶಿಫಾ ತಂದೆ ಜಹೀರ ಅಹ್ಮದ್ ಖಾಜಿ (16 ವರ್ಷ), ಸಮೀನಾ ಕೋಂ. ಮೆಹಬೂಬ್ ಭಾಷಾ ಗಂಗಾವತಿ (18 ವರ್ಷ), ಸನಾ ತಂದೆ ಮೆಹಬೂಬ್ ಭಾಷಾ ಖಾಜಿ (15 ವರ್ಷ), ಸಗುಪ್ತಾ ತಂದೆ ಸಾದಿಕ್ ಭಾಷಾ ಖಾಜಿ (14 ವರ್ಷ), ಜ್ಯೋತಿ ತಂದೆ ರಾಜಪ್ಪ ಗಬ್ಬೂರ (18 ವರ್ಷ), ನಾಜಿಯಾ ಕೋಂ. ಸುಲೇಮಾನ್ ತೋಟಿಗಾರ (20 ವರ್ಷ), ಕಿರಣ ತಂದೆ ಉಮೇಶ ಹುಲ್ಲೂರ (25 ವರ್ಷ), ದೀಪಕ ತಂದೆ ಅನುರಾಜ ಹುಬ್ಬಳ್ಳಿ (29 ವರ್ಷ), ರಾಜೇಸಾಬ ತಂದೆ ಇಮಾಮಸಾಬ ಅಣ್ಣಿಗೇರಿ (23 ವರ್ಷ), ಸುಮನ್ ಕೋಂ. ಮಂಜು ನವಲಗುಂದ (28 ವರ್ಷ), ವಿಶಾಲ ತಂದೆ ಮಂಜು ನವಲಗುಂದ (06 ವರ್ಷ), ಸಲ್ಮಾ ತಂದೆ ಅಬಾದವುಲ್ಲಾ ಹಂದೂರ (17 ವರ್ಷ), ಖುಷಿ ತಂದೆ ಗಿರೀಶ ದಲಬಂಜನ (14 ವರ್ಷ), ಕಿರಣ ತಂದೆ ರಮೇಶ ಕಬಾಡಿ (21 ವರ್ಷ), ಮಾಹೀನ್ ತಂದೆ ಶಬ್ಬೀರ ಕಂದಗಲ್ (10 ವರ್ಷ), ರುಬಿನಾ ಕೋಂ. ಶಬ್ಬೀರ ಅಹ್ಮದ ಕಂದಗಲ್ (36 ವರ್ಷ), ಮುಸ್ತಾಕ ತಂದೆ ಬಾಬು ಸಾಬ ಹಳೆಮನಿ (25 ವರ್ಷ), ಪ್ರದೀಪಕುಮಾರ ತಂದೆ ಮಂಜುನಾಥ ಕಮ್ಮಾರ (25 ವರ್ಷ), ಸತೀಶ ಗಬ್ಬೂರ (22 ವರ್ಷ) ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತ್ರಾ ಸಮಿತಿ ಅಧ್ಯಕ್ಷರು, ಮ್ಯಾನೇಜರ್ ಹಾಗೂ ಡ್ಯಾನ್ಸಿಂಗ್ ಫ್ಲೋರ್ ಮಾಲೀಕರು ಸೇರಿದಂತೆ ಏಳು ಜನ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.

ಪರಶುರಾಮ ಸಮಗಾರ, ವಿಶ್ವನಾಥ ದೊಡ್ಡಮನಿ, ನೂರಅಹ್ಮದ ಧಾರವಾಡ, ನಾರಾಯಣ ದೊಡ್ಡಮನಿ, ಮಲ್ಲು ಬಾದನ, ವಿನಾಯಕ ಮಾನ್ವಿ (ಜಾತ್ರಾ ಕಮಿಟಿ ಅಧ್ಯಕ್ಷ), ಎಮ್.ಎಸ್. ಅಂಗಡಿ (ತೋಂಟದಾರ್ಯ ಮಠದ ಮ್ಯಾನೇಜರ್) ಹಾಗೂ ಇತರರು ವಿರುದ್ಧ ಪ್ರಕರಣ ದಾಖಲಾಗಿದೆ.

ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ತೋರಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ಅಡಿಯಲ್ಲಿ ಕಲಂ 289, 125(A), 125(B) ಹಾಗೂ 292 ರಡಿ ಮೊಕದ್ದಮೆ ಹೂಡಲಾಗಿದೆ. ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ತನಿಖೆಯನ್ನು ಪೊಲೀಸ್ ಉಪನಿರೀಕ್ಷಕಿ ಆರ್.ಆರ್. ಮುಂಡೆವಾಡಗಿ ಅವರು ಕೈಗೊಂಡಿದ್ದಾರೆ.

ಉತ್ತರ ಕನ್ನಡದಲ್ಲಿ ಹೃದಯವಿದ್ರಾವಕ ಘಟನೆ: 13 ವರ್ಷದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಉತ್ತರ ಕನ್ನಡ: ಜೋಯಿಡಾ ತಾಲೂಕಿನ ಚಾಪಾಲಿ ಗವಳಿವಾಡದಲ್ಲಿ ಆಘಾತಕಾರಿ ಘಟನೆ ನಡೆದಿದೆ.

13 ವರ್ಷದ 7ನೇ ತರಗತಿ ವಿದ್ಯಾರ್ಥಿನಿ ಗಂಗುಕವಳಿ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

ವಿದ್ಯಾರ್ಥಿನಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೂ ಅಕಸ್ಮಾತ್ ಈ ದುರಂತ ಸಂಭವಿಸಿದೆ. ಸಾವಿಗೆ ಮುನ್ನ ದಿನ ಸಂಜೆಯವರೆಗೂ ಆಕೆ ಸಹಜವಾಗಿ ಆಟವಾಡಿ ಸಂತೋಷದಿಂದ ಇದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.

ಆದರೆ ಮರುದಿನ ಬೆಳಗ್ಗೆ ವಾಂತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಆಕೆ ಅಚಾನಕ್ ಅಸ್ವಸ್ಥಗೊಂಡು ಅಸುನೀಗಿದ್ದಾಳೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಗ್ರಾಮಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.

ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ಅಕಾಲಿಕ ಮರಣದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗದಗ ಜಾತ್ರೆಯಲ್ಲಿ ಅವಘಡ ಕೇಸ್: ಮಠದ ಆಡಳಿತದ ವಿರುಧ್ದ ಸಂಬಂಧಿಕರ ಆಕ್ರೋಶ! ಆಸ್ಪತ್ರೆ ಮುಂದೆ ಮುಗಿಲುಮುಟ್ಟಿದ ಆಕ್ರಂದನ!

ಗದಗ: ತೋಂಟದಾರ್ಯ ಮಠದ ಜಾತ್ರೆಯಲ್ಲಿ ಸಂಭವಿಸಿದ ಭೀಕರ ಅವಘಡದಲ್ಲಿ 20ಕ್ಕೂ ಹೆಚ್ಚು ತೊಟ್ಟಿಲುಗಳು ಏಕಾಏಕಿ ಕಳಚಿ ಬಿದ್ದಿದ್ದು, ಬ್ರೇಕ್​ಡ್ಯಾನ್ಸ್ ಆಡುತ್ತಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಘಟನೆಯಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಗಾಯಾಳು ಸಂಬಂಧಿಗಳ ಆಕ್ರಂದನ, ಆಕ್ರೋಶ ಮುಗಿಲು ಮುಟ್ಟಿದೆ.

“ನಮ್ಮವರ ಕಣ್ಣೆದುರೇ ತೊಟ್ಟಿಲು ಕಳಚಿ ಬಿತ್ತು. ಜನರು ಕಿರುಚುತ್ತಾ ನೆಲಕ್ಕೆ ಬಿದ್ದ ದೃಶ್ಯ ಮರೆಯಲಾಗದು. ಮಕ್ಕಳು, ಮಹಿಳೆಯರು ಕಿರುಚುತ್ತಾ ನೆಲಕ್ಕೆ ಬಿದ್ದ ದೃಶ್ಯ ತುಂಬಾ ಭಯಾನಕವಾಗಿತ್ತು. ಕೆಲವರು ರಕ್ತದ ಗಾಯಗಳೊಂದಿಗೆ ನರಳುತ್ತಿದ್ದರು. ಅವರನ್ನು ಎತ್ತಿಕೊಂಡು ಆಸ್ಪತ್ರೆಗೆ ತರಬೇಕಾಯಿತು,” ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಈ ಘಟನೆಗೆ ತೋಂಟದಾರ್ಯ ಮಠದ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಜಾತ್ರೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಷ್ಟೇ ಅಲ್ಲದೆ ರಾತ್ರಿಯೇ ಮಠದ ಆವರಣದಲ್ಲಿ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೋಂಟದಾರ್ಯ ಮಠದ ಧನದಾಹಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು. ತಿಂಗಳುಗಳ ಕಾಲ ಜಾತ್ರೆ ನಡೆಸುವ ಅಗತ್ಯ ಹಾಗೂ ಸರಕಾರಿ ಜಾಗೆಯ ದುರ್ಬಳಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೂ ಸಂಘಟನೆಯ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಯಾವುದೇ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳದೆ ಇಂತಹ ಆಟೋಟಗಳಿಗೆ ಪರವಾನಗಿ ಕೊಟ್ಟವರು ಯಾರು ಎಂದು ‌ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿ ಮಳೆ ಅಲರ್ಟ್: ಮುಂದಿನ 3 ದಿನ ಗುಡುಗು ಸಹಿತ ಮಳೆಯ ಮುನ್ಸೂಚನೆ!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆರಾಯ ಆರ್ಭಟಿಸಿದ್ದು, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಶಾಂತಿನಗರ, ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ನಂದಿನಿ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಿಢೀರನೆ ಭಾರೀ ಮಳೆಯಾಗಿದೆ.

ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಮಳೆ ಬೀಳುವ ಸಾಧ್ಯತೆ ಇರುವುದಾಗಿ ತಿಳಿಸಿದೆ.

ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಬೀದರ್, ಕಲ್ಬುರ್ಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇ 5 ಮತ್ತು ಮೇ 7ರಂದು ಸಹ ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿಯಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ತೋಂಟದಾರ್ಯ ಜಾತ್ರೆಯಲ್ಲಿ ಭಾರಿ ಅವಘಡ: ಟೋರಾ-ಟೋರಾ ತೊಟ್ಟಿಲು ಮುರಿದು 18 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಗದಗ: ತೋಂಟದಾರ್ಯ ಮಠ ಜಾತ್ರೆಯಲ್ಲಿ ಭಾನುವಾರ ರಾತ್ರಿ ಭಾರಿ ಅವಘಡ ಸಂಭವಿಸಿದ್ದು, ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ 18 ಮಂದಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಜಾತ್ರೆಯಲ್ಲಿ ಜನಪ್ರಿಯವಾಗಿರುವ ‘ಟೋರಾ-ಟೋರಾ’ (ಡ್ಯಾನ್ಸಿಂಗ್ ಫ್ಲೈ ಜೋಕಾಲಿ) ಆಟದಲ್ಲಿ ತೊಟ್ಟಿಲುಗಳ ವೀಲ್ ಏಕಾಏಕಿ ಕಟ್ ಆದ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ತೊಟ್ಟಿಲುಗಳು ಮುರಿದು ಬಿದ್ದಿದ್ದು, ಅಲ್ಲಿ ಇದ್ದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಗಾಯಾಳುಗಳನ್ನು ತಕ್ಷಣವೇ ಅಂಬುಲೆನ್ಸ್ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸ್ಥಳದಲ್ಲಿ ಇದ್ದ ಪೋಷಕರು ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದರು.

ಘಟನೆ ನಡೆದ ಸ್ಥಳಕ್ಕೆ ಗದಗ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಗದಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಕಾಳಿ ನದಿಯಲ್ಲಿ ಮೊಸಳೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ದಾಂಡೇಲಿಯ ಕುಳಗಿ ರಸ್ತೆಯ ನಿವಾಸಿ ಆನಂದ ಲಲ್ಲೂಜಿ ಮಣ್ಣವಡ್ಡರ (42) ದಾಳಿಗೆ ಒಳಗಾದವರು. ಸಾರ್ವಜನಿಕ ಶೌಚಾಲಯ ಹದಗೆಟ್ಟಿರುವ ಹಿನ್ನೆಲೆ ನಿತ್ಯಕರ್ಮಕ್ಕಾಗಿ ಅವರು ಕಾಳಿ ನದಿಗೆ ಇಳಿದಿದ್ದ ವೇಳೆ ಮೊಸಳೆ ಏಕಾಏಕಿ ದಾಳಿ ನಡೆಸಿದೆ.

ದಾಳಿಯಿಂದ ಗಾಯಗೊಂಡ ಆನಂದ ಕಿರುಚಾಡಿದ ಧ್ವನಿ ಕೇಳಿ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಮೊಸಳೆಯನ್ನು ಓಡಿಸಿ ಅವರನ್ನು ರಕ್ಷಿಸಿದ್ದಾರೆ. ದಾಳಿಯಲ್ಲಿ ಅವರ ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ.

ಗಾಯಾಳುವಿಗೆ ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್‌ಐ ಅಮೀನ್ ಅತ್ತಾರ ಹಾಗೂ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಕ್ತಹೀನತೆ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಪೋಷಕರೇ ನಿಮ್ಮ ಮಕ್ಕಳ ಮೇಲಿರಲಿ ಜಾಗ್ರತೆ!

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಅನಿಮಿಯಾ ಅಂದರೆ ರಕ್ತಹೀನತೆ ಸಮಸ್ಯೆ ಹೆಚ್ಚುತ್ತಿರುವುದು ವೈದ್ಯರಲ್ಲಿ ಚಿಂತೆಗೆ ಕಾರಣವಾಗಿದೆ.

ಈ ಸಮಸ್ಯೆ ಕೇವಲ ದೌರ್ಬಲ್ಯಕ್ಕೆ ಮಾತ್ರ ಸೀಮಿತವಾಗದೆ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತಿದೆ. ತಜ್ಞರ ಪ್ರಕಾರ, ಮಕ್ಕಳಲ್ಲಿ ರಕ್ತಹೀನತೆಗೆ ಪ್ರಮುಖ ಕಾರಣ ಐರನ್ ಕೊರತೆ. ಹೀಮೋಗ್ಲೋಬಿನ್ ಉತ್ಪಾದನೆಗೆ ಐರನ್ ಅಗತ್ಯವಾಗಿದ್ದು, ಆಹಾರದಲ್ಲಿ ಇದರ ಕೊರತೆ ಇದ್ದರೆ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ವಿಟಮಿನ್ ಬಿ-12 ಹಾಗೂ ಫೋಲಿಕ್ ಆಮ್ಲದ ಕೊರತೆಯೂ ರಕ್ತಹೀನತೆಗೆ ಕಾರಣವಾಗಬಹುದು. ಸರಿಯಾದ ಪೌಷ್ಟಿಕಾಂಶವಿಲ್ಲದ ಆಹಾರ ಪದ್ಧತಿ, ಅತಿಯಾದ ತಿನಿಸು ಆಹಾರ ಸೇವನೆ ಹಾಗೂ ಅಸಮತೋಲನ ಆಹಾರವೂ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಇನ್ನೂ ಪುನಃಪುನಃ ಸೋಂಕುಗಳು, ಅಜೀರ್ಣ ಸಮಸ್ಯೆಗಳು, ಹೊಟ್ಟೆಯಲ್ಲಿ ಹುಳುಗಳಿರುವುದು, ಸಮಯಕ್ಕಿಂತ ಮೊದಲು ಜನನ ಅಥವಾ ಕಡಿಮೆ ತೂಕದ ಮಕ್ಕಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಲಕ್ಷಣಗಳು ಹೇಗಿರುತ್ತವೆ?

ರಕ್ತಹೀನತೆಯ ಆರಂಭಿಕ ಲಕ್ಷಣಗಳಲ್ಲಿ ಸುಸ್ತು, ದೌರ್ಬಲ್ಯ, ಆಟದಲ್ಲಿ ಆಸಕ್ತಿ ಕಡಿಮೆಯಾಗುವುದು ಸಾಮಾನ್ಯ. ಚರ್ಮ ಬಿಳಿಯಾಗುವುದು, ತುಟಿಗಳ ಬಣ್ಣ ಕಡಿಮೆಯಾಗುವುದು ಪ್ರಮುಖ ಸೂಚನೆಗಳಾಗಿವೆ. ಕೆಲವೊಮ್ಮೆ ತಲೆ ಸುತ್ತುವುದು, ಉಸಿರಾಟದ ತೊಂದರೆ, ಹೃದಯ ಬಡಿತ ಹೆಚ್ಚಾಗುವುದು ಕಾಣಿಸಬಹುದು. ಜೊತೆಗೆ ಚಿಡಿಚಿಡಿ ಸ್ವಭಾವ, ಆಹಾರ ಆಸಕ್ತಿ ಕಡಿಮೆಯಾಗುವುದು ಮತ್ತು ಓದಿನಲ್ಲಿ ಗಮನ ಕಡಿಮೆಯಾಗುವುದು ಕೂಡ ಲಕ್ಷಣಗಳಾಗಿವೆ.

ತಡೆಗೆ ಏನು ಮಾಡಬೇಕು?

ಮಕ್ಕಳಿಗೆ ಸಮತೋಲನ ಆಹಾರ ನೀಡುವುದು ಅತ್ಯಂತ ಮುಖ್ಯ. ಹಸಿರು ತರಕಾರಿಗಳು, ಬೇಳೆಕಾಳುಗಳು, ಹಣ್ಣುಗಳು ಹಾಗೂ ಐರನ್ ಸಮೃದ್ಧ ಆಹಾರಗಳನ್ನು ನೀಡಬೇಕು. ವಿಟಮಿನ್ ಸಿ ಇರುವ ಆಹಾರಗಳು ಐರನ್ ಶೋಷಣೆಗೆ ಸಹಕಾರಿ. ಜೊತೆಗೆ ಸ್ವಚ್ಛತೆ ಕಾಪಾಡುವುದು ಮತ್ತು ನಿಯಮಿತ ಆರೋಗ್ಯ ತಪಾಸಣೆ ಮಾಡಿಸುವುದು ಅಗತ್ಯ.

ಸರಿಯಾದ ಆಹಾರ ಮತ್ತು ಆರೈಕೆಯಿಂದ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ದ್ರಾಕ್ಷಿಗೆ ಭಾರೀ ಬೇಡಿಕೆ: ‘ದಿಲ್ ಖುಷ್’ ತಳಿಯಿಂದ ರೈತರಿಗೆ ಲಾಭ!

ಚಿಕ್ಕಬಳ್ಳಾಪುರ: ಹಣ್ಣು ಹಾಗೂ ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ ದ್ರಾಕ್ಷಿ ಬೆಳೆ ರೈತರಿಗೆ ಸಂತಸ ತಂದಿದೆ.

ಜಿಲ್ಲೆಯಾದ್ಯಂತ ಸುಮಾರು 5,000 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ದ್ರಾಕ್ಷಿ ಬೆಳೆಯಲಾಗಿದ್ದು, ‘ದಿಲ್ ಖುಷ್’ ತಳಿಗೆ ವಿಶೇಷ ಬೇಡಿಕೆ ವ್ಯಕ್ತವಾಗಿದೆ. ತೀವ್ರ ಬಿಸಿಲಿನ ನಡುವೆಯೂ ಈ ತಳಿಯ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಆಕರ್ಷಣೆ ಕಂಡುಬಂದಿದೆ. ಇದರ ಪರಿಣಾಮವಾಗಿ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದ್ದು, ವ್ಯಾಪಾರಿಗಳು ನೇರವಾಗಿ ತೋಟಗಳಿಗೆ ಭೇಟಿ ನೀಡಿ ಪ್ರತಿ ಕಿಲೋಗ್ರಾಂ ದ್ರಾಕ್ಷಿಗೆ 50 ರೂಪಾಯಿ ನೀಡಿ ಖರೀದಿ ಮಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ದ್ರಾಕ್ಷಿಯ ಇಳುವರಿ ಕಡಿಮೆಯಾಗಿರುವ ಹಿನ್ನೆಲೆ, ಅಲ್ಲಿನ ವ್ಯಾಪಾರಿಗಳು ಇದೀಗ ಚಿಕ್ಕಬಳ್ಳಾಪುರದ ರೈತರತ್ತ ಮುಖ ಮಾಡಿದ್ದಾರೆ. ಇದು ಸ್ಥಳೀಯ ರೈತರಿಗೆ ವರದಾನವಾಗಿ ಪರಿಣಮಿಸಿದೆ.

ಇನ್ನೂ ಈ ದ್ರಾಕ್ಷಿಗೆ ಬಾಂಗ್ಲಾದೇಶ ಸೇರಿದಂತೆ ನೆರೆಯ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ವ್ಯಾಪಾರಿಗಳು ಮುಂಗಡ ಹಣ ನೀಡಿ ತೋಟದಲ್ಲೇ ದ್ರಾಕ್ಷಿಯನ್ನು ಖರೀದಿಸುತ್ತಿರುವುದು ರೈತರ ಆದಾಯವನ್ನು ಹೆಚ್ಚಿಸಿದೆ.

ದ್ರಾಕ್ಷಿ ಬೆಳೆಗಾರರಾದ ವೆಂಕಟರೆಡ್ಡಿ ಹಾಗೂ ಚಿಕ್ಕನಾಗವಳ್ಳಿ ಗ್ರಾಮದ ಕೊಂಡಪ್ಪನವರಂತಹ ಅನೇಕ ರೈತರು ಈ ಬಾರಿ ಉತ್ತಮ ಬೆಲೆ ಮತ್ತು ಬೇಡಿಕೆಯಿಂದ ಸಂತಸ ವ್ಯಕ್ತಪಡಿಸಿದ್ದಾರೆ.

ಅಂತರಗಂಗೆ ಅರಣ್ಯದಲ್ಲಿ ಬೆಂಕಿ: ಅಪಾರ ಕಾಡು ನಾಶ, ಪ್ರಾಣಿ ಸಂಕುಲಕ್ಕೆ ಆತಂಕ

ಕೋಲಾರ: ಜಿಲ್ಲೆಯ ಹೊರವಲಯದಲ್ಲಿರುವ ಪ್ರಸಿದ್ಧ ಅಂತರಗಂಗೆ ಪ್ರದೇಶದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಈ ಅವಘಡದಿಂದ ಅಪಾರ ಪ್ರಮಾಣದ ಕಾಡು ಸಂಪತ್ತು ನಾಶವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರತಿದಿನ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶದಲ್ಲಿ, ಜನರು ನಡೆದುಕೊಂಡು ಹೋಗುವ ದಾರಿಯ ಮಧ್ಯೆ ಬೆಟ್ಟದ ಕೆಲವು ಭಾಗಗಳಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದು ತಿಳಿದುಬಂದಿದೆ. ಪರಿಣಾಮವಾಗಿ ದೊಡ್ಡ ಪ್ರಮಾಣದ ಕಾಡು ಬೆಂಕಿಗಾಹುತಿಯಾಗಿದ್ದು, ಅಲ್ಲಿದ್ದ ಸಣ್ಣಪುಟ್ಟ ಪ್ರಾಣಿ–ಪಕ್ಷಿಗಳೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು.

ಅಂತರಗಂಗೆ ಬೆಟ್ಟ ಪ್ರದೇಶದಲ್ಲಿ ವಾಸಿಸುವ ಪ್ರಾಣಿ ಸಂಕುಲಕ್ಕೆ ಈ ಘಟನೆ ಭಾರೀ ಆತಂಕ ಉಂಟುಮಾಡಿದ್ದು, ಪದೇಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕಿಡಿಗೇಡಿಗಳ ಇಂತಹ ಕೃತ್ಯಗಳಿಂದ ಅಪಾರ ಕಾಡು ಸಂಪತ್ತು ನಾಶವಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವಘಡ: ಡಿಕೆ ಶಿವಕುಮಾರ್ ತೆರಳಿದ ಬೆನ್ನಲ್ಲೇ ಬೆಂಕಿ!

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ನಡೆದ 151 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವಘಡವೊಂದು ಸಂಭವಿಸಿದೆ.

ಕಾರ್ಯಕ್ರಮದ ವೇದಿಕೆ ಮೇಲಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೆರಳಿದ ಬೆನ್ನಲ್ಲೇ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ.

ಅದೇ ವೇಳೆ ಸಚಿವ ಈಶ್ವರ ಖಂಡ್ರೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಸಿಬ್ಬಂದಿ ತಕ್ಷಣವೇ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೊಗೆ ಹೆಚ್ಚಾದ ಹಿನ್ನೆಲೆ ಸ್ಥಳೀಯರು ಗಾಬರಿಗೊಂಡರು.

ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ ಫೈರ್ ಉಪಕರಣಗಳ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಮಾರಂಭದಲ್ಲಿ ಭಾಗವಹಿಸಿದ್ದವರು ಹಾಗೂ ಅಧಿಕಾರಿಗಳು ತಕ್ಷಣದ ಕ್ರಮದಿಂದ ದೊಡ್ಡ ದುರಂತ ತಪ್ಪಿದ ಹಿನ್ನೆಲೆಯಲ್ಲಿ ನೆಮ್ಮದಿ ವ್ಯಕ್ತಪಡಿಸಿದ್ದಾರೆ.

error: Content is protected !!