Home Blog

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಸಾವಿನ ಸಂಖ್ಯೆ 47ಕ್ಕೆ ಏರಿಕೆ, ನೂರಾರು ಮಂದಿಗೆ ಗಾಯ

0

ಕೊಲಂಬಿಯಾ: ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಕನಿಷ್ಠ 47 ಮಂದಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.

ಭೂಕಂಪ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ.

ಭೂಕಂಪದ ಕೇಂದ್ರಬಿಂದು ಕೊಲಂಬಿಯಾದ ಚೊಕೊ ಪ್ರದೇಶದ ಸ್ಯಾನ್ ಜೋಸ್ ಡೆಲ್ ಪಾಲ್ಮಾರ್ ಪಟ್ಟಣದ ಸಮೀಪ ದಾಖಲಾಗಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 7.34ರ ಸುಮಾರಿಗೆ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಪಟ್ಟಣದಿಂದ ಪೂರ್ವಕ್ಕೆ ಸುಮಾರು 3 ಮೈಲಿ ದೂರದಲ್ಲಿತ್ತು ಎಂದು ವರದಿಯಾಗಿದೆ.

ಯುಎಸ್ ಜಿಯೋಲಾಜಿಕಲ್ ಸರ್ವೇ ಹಾಗೂ ಕೊಲಂಬಿಯಾದ ಭೂಕಂಪಶಾಸ್ತ್ರ ಸಂಸ್ಥೆಯ ಮಾಹಿತಿ ಪ್ರಕಾರ, ಭೂಕಂಪವು ಭೂಮಿಯ ಮೇಲ್ಮೈಯಿಂದ ಸುಮಾರು 107 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಇದರ ತೀವ್ರ ಕಂಪನಗಳು ರಾಜಧಾನಿ ಬೊಗೋಟಾ ಸೇರಿದಂತೆ ನೆರೆಯ ಈಕ್ವೆಡಾರ್‌ನಲ್ಲೂ ಅನುಭವವಾಗಿವೆ.

ಭೂಕಂಪದ ತೀವ್ರತೆಗೆ ಹತ್ತಾರು ಕಟ್ಟಡಗಳು ನೆಲಸಮಗೊಂಡಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸೇನೆ ಹಾಗೂ ದುರಂತ ನಿರ್ವಹಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

6 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ:

ಭೂಕಂಪದಿಂದ ಕಟ್ಟಡಗಳು ಹಾಗೂ ಮೂಲಸೌಕರ್ಯಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಪಶ್ಚಿಮ ಕೊಲಂಬಿಯಾದ 6 ಪ್ರಮುಖ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಕಾಲಿ ಸೇರಿದಂತೆ ವಿವಿಧ ನಗರಗಳಲ್ಲಿ ಕಟ್ಟಡಗಳ ಅಡಿಯಲ್ಲಿ ಜನರು ಸಿಲುಕಿರುವ ಸಾಧ್ಯತೆ ಇರುವುದರಿಂದ ರಕ್ಷಣಾ ತಂಡಗಳು ಕಾರ್ಯಾಚರಣೆ ತೀವ್ರಗೊಳಿಸಿವೆ.

ಭೂಕಂಪದ ಪರಿಣಾಮದ ಸಂಪೂರ್ಣ ಪ್ರಮಾಣ ಇನ್ನಷ್ಟೇ ತಿಳಿದುಬರಬೇಕಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.

ಉತ್ತರಾಖಂಡದಲ್ಲಿ ಭೀಕರ ಪ್ರವಾಹ: ಕ್ಷಣಾರ್ಧದಲ್ಲೇ ಕೊಚ್ಚಿಹೋದ ಸೇತುವೆ; ವಾಹನಗಳು ಕೂದಲೆಳೆ ಅಂತರದಲ್ಲಿ ಪಾರು

0

ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ನೀತಿ ಕಣಿವೆಯಲ್ಲಿ ಭಾರಿ ಮಳೆಯಿಂದಾಗಿ ನದಿಯಲ್ಲಿ ಪ್ರವಾಹದ ಪ್ರಮಾಣ ಹೆಚ್ಚಾಗಿದ್ದು, ನೀರಿನ ರಭಸಕ್ಕೆ ಲೋಹದ ಸೇತುವೆಯೊಂದು ಕ್ಷಣಾರ್ಧದಲ್ಲೇ ಕೊಚ್ಚಿಹೋದ ಘಟನೆ ನಡೆದಿದೆ.

ಭಾರಿ ಮಳೆಯಿಂದಾಗಿ ನದಿಯಲ್ಲಿ ಕೆಸರು ಮಿಶ್ರಿತ ನೀರು ರಭಸವಾಗಿ ಹರಿದುಬಂದಿದ್ದು, ಸೇತುವೆಗೆ ಅಪ್ಪಳಿಸಿದ ನೀರಿನ ವೇಗಕ್ಕೆ ಕೆಲವೇ ಸೆಕೆಂಡುಗಳಲ್ಲಿ ಸೇತುವೆ ಬುಡಮೇಲಾಗಿ ನದಿಯ ದಂಡೆಯತ್ತ ಕೊಚ್ಚಿಕೊಂಡು ಹೋಗಿದೆ.

ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸೇತುವೆ ಕೊಚ್ಚಿಹೋಗುವ ಸಂದರ್ಭದಲ್ಲಿ ನದಿಯ ಪಕ್ಕದ ರಸ್ತೆಯಲ್ಲಿ ಟ್ರಕ್ ಹಾಗೂ ಎಸ್‌ಯುವಿ ಕಾರೊಂದು ಸಂಚರಿಸುತ್ತಿದ್ದವು. ಅಪಾಯವನ್ನು ಅರಿತ ಚಾಲಕರು ಕೆಲವೇ ಕ್ಷಣಗಳ ಮುನ್ನ ವಾಹನಗಳನ್ನು ಹಿಂತಿರುಗಿಸಿದ್ದರಿಂದ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.

ಸೇತುವೆ ಕೊಚ್ಚಿಹೋದ ಪರಿಣಾಮ ನೀತಿ ಕಣಿವೆ ಪ್ರದೇಶದ ಮುಖ್ಯ ಪಟ್ಟಣದೊಂದಿಗಿನ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಪ್ರವಾಹದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಪರಿಸ್ಥಿತಿಯ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

‘ಬಾಂಗ್ಲಾದೇಶಿ ವಲಸಿಗರು’ ಎಂದು ಶಂಕೆ; ಮಂಡ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ತಡೆದ ಹಿಂದೂ ಕಾರ್ಯಕರ್ತರು

0

ಮಂಡ್ಯ: ಅಕ್ರಮ ಬಾಂಗ್ಲಾದೇಶಿ ವಲಸಿಗರು ಪ್ರಯಾಣಿಸುತ್ತಿದ್ದಾರೆಂಬ ಶಂಕೆಯ ಮೇಲೆ ಹಿಂದೂ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಬಸ್‌ ತಡೆದು ಪರಿಶೀಲನೆ ನಡೆಸಿದ ಘಟನೆ ಮಂಡ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸುಮಾರು 30 ಮಂದಿ ಪ್ರಯಾಣಿಸುತ್ತಿದ್ದರು. ಇವರನ್ನು ಬಾಂಗ್ಲಾದೇಶ ಮೂಲದವರು ಎಂದು ಶಂಕಿಸಿದ ಕಾರ್ಯಕರ್ತರು ಬಸ್‌ ತಡೆದು ವಿಚಾರಣೆ ನಡೆಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರಂಭಿಕ ವಿಚಾರಣೆಯಲ್ಲಿ ಬಸ್‌ನಲ್ಲಿದ್ದವರು ಅಸ್ಸಾಂ ಮೂಲದ ಕಾರ್ಮಿಕರಾಗಿದ್ದು, ಕೊಡಗಿನ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ತೆರಳುತ್ತಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಆದರೂ ಪ್ರಯಾಣಿಕರ ಗುರುತು ಹಾಗೂ ದಾಖಲೆಗಳ ಕುರಿತು ಸಂಪೂರ್ಣ ಖಚಿತಪಡಿಸಿಕೊಳ್ಳಲು ಪೊಲೀಸರು ಎಲ್ಲರನ್ನೂ ನಿರಾಶ್ರಿತ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅವರ ಆಧಾರ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ಮುಂದುವರಿದಿದೆ.

ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕವಷ್ಟೇ ಪ್ರಯಾಣಿಕರ ಮೂಲ ಹಾಗೂ ಗುರುತಿನ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಡಗಿನಲ್ಲಿ ದಾರುಣ ಘಟನೆ: ಶೌಚಾಲಯದ ಗುಂಡಿಗೆ ಬಿದ್ದ ಮಹಿಳೆ, ರಕ್ಷಿಸಲು ಹೋದ ವ್ಯಕ್ತಿ ಸಾವು

0

ಮಡಿಕೇರಿ: ಶುಂಠಿ ಕೀಳಲು ತೆರಳಿದ್ದ ಮಹಿಳೆಯೊಬ್ಬರು ಹಳೆಯ ಶೌಚಾಲಯದ ಗುಂಡಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಮುಂದಾದ ವ್ಯಕ್ತಿಯೂ ವಿಷಕಾರಿ ಅನಿಲದ ಪರಿಣಾಮ ಮೃತಪಟ್ಟಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸತೋಟ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಮೃತರನ್ನು ನಿತ್ಯ (46) ಹಾಗೂ ಜನಾರ್ದನ (43) ಎಂದು ಗುರುತಿಸಲಾಗಿದೆ.

ಮಾಹಿತಿ ಪ್ರಕಾರ, ನಿತ್ಯ ಅವರು ಮನೆಗೆ ಅಗತ್ಯವಿದ್ದ ಶುಂಠಿ ತರಲು ಸಂಬಂಧಿಕರ ಮನೆಗೆ ತೆರಳಿದ್ದರು. ಬಳಿಕ ಗದ್ದೆಯಿಂದ ಶುಂಠಿ ತೆಗೆದುಕೊಂಡು ಬರುವುದಾಗಿ ಹೇಳಿ ಗದ್ದೆಯತ್ತ ತೆರಳಿದ್ದಾರೆ. ಈ ವೇಳೆ ಗದ್ದೆ ಸಮೀಪದಲ್ಲಿದ್ದ ಹಳೆಯ ಶೌಚಾಲಯದ ಗುಂಡಿ ಏಕಾಏಕಿ ಕುಸಿದ ಪರಿಣಾಮ ನಿತ್ಯ ಅವರು ಗುಂಡಿಯೊಳಗೆ ಬಿದ್ದಿದ್ದಾರೆ.

ಇದನ್ನು ಗಮನಿಸಿದ ಜನಾರ್ದನ ಅವರು ನಿತ್ಯ ಅವರನ್ನು ರಕ್ಷಿಸಲು ಗುಂಡಿಯೊಳಗೆ ಇಳಿದಿದ್ದಾರೆ. ಆದರೆ, ಗುಂಡಿಯೊಳಗೆ ಸಂಗ್ರಹವಾಗಿದ್ದ ವಿಷಕಾರಿ ಅನಿಲದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಮಡಿಕೇರಿ ಶಾಸಕ ಮಂತರ್ ಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮಲೆನಾಡಿನಲ್ಲಿ ವರುಣನ ಅಬ್ಬರ; ಮನೆ ಹಿಂಭಾಗಕ್ಕೆ ಕುಸಿದ ಧರೆ, ಕುಟುಂಬ ಸ್ಥಳಾಂತರ!

0

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೊಂಚ ವಿರಾಮ ನೀಡಿದ್ದ ಮಳೆ ಮತ್ತೆ ಆರ್ಭಟ ಮುಂದುವರಿಸಿದೆ.

ಕೊಪ್ಪ, ಶೃಂಗೇರಿ, ಕಳಸ ಹಾಗೂ ಮೂಡಿಗೆರೆ ತಾಲೂಕುಗಳ ಹಲವು ಭಾಗಗಳಲ್ಲಿ ಬಿಟ್ಟು ಬಿಟ್ಟು ನಿರಂತರವಾಗಿ ಗಾಳಿ-ಮಳೆ ಸುರಿಯುತ್ತಿದ್ದು, ಭೂಮಿಯ ತೇವಾಂಶ ಹೆಚ್ಚಾಗಿ ಧರೆ ಕುಸಿತ ಸೇರಿದಂತೆ ಹಲವು ಅವಾಂತರಗಳು ಸಂಭವಿಸುತ್ತಿವೆ.

ಕೊಪ್ಪ ತಾಲೂಕಿನ ಅಂಬಳಿಕೆ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯಿಂದ ಪವನ್ ಎಂಬುವವರ ಮನೆಯ ಸಮೀಪದ ಧರೆ ಕುಸಿಯಲಾರಂಭಿಸಿದೆ. ಈಗಾಗಲೇ ಧರೆ ಕುಸಿದು ಮನೆಯ ಹಿಂಭಾಗದವರೆಗೆ ಮಣ್ಣು ಬಂದಿದೆ. ಮಳೆ ಇನ್ನಷ್ಟು ಹೆಚ್ಚಾದರೆ ಸುಮಾರು 100 ಅಡಿ ಎತ್ತರದ ಧರೆ ಕುಸಿದು ಮನೆ ಮೇಲೆ ಬೀಳುವ ಆತಂಕ ಎದುರಾಗಿದೆ. ಮನೆಯೊಳಗೂ ಮಣ್ಣು ಮಿಶ್ರಿತ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನೆಯನ್ನು ಖಾಲಿ ಮಾಡಿದ್ದಾರೆ.

ಇನ್ನು ಮಲೆನಾಡು ಭಾಗದಲ್ಲಿ ನಿರಂತರ ಗಾಳಿ-ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪದೇಪದೇ ಗುಡ್ಡ ಕುಸಿಯುತ್ತಿದೆ. ಶೃಂಗೇರಿ ತಾಲೂಕಿನ ಕಡೇಮನೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೃಹತ್ ಗುಡ್ಡ ಕುಸಿದಿದ್ದು, ಕಾರ್ಕಳ-ಮಂಗಳೂರು-ಶೃಂಗೇರಿ ನಡುವಿನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಮರಗಳ ಸಮೇತ ಗುಡ್ಡದ ಮಣ್ಣು ರಸ್ತೆಗೆ ಕುಸಿದು ಬಿದ್ದಿದ್ದು, ಭಾರೀ ಪ್ರಮಾಣದ ಮಣ್ಣು ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ನಿರಂತರ ಮಳೆಯಿಂದಾಗಿ ಗುಡ್ಡದ ಮಣ್ಣು ಆಗಾಗ ಜಾರುತ್ತಿರುವುದರಿಂದ ತೆರವು ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದೆ.

ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಪ್ರಯಾಣಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮಳೆ ಹೆಚ್ಚಾದ ಸಂದರ್ಭದಲ್ಲಿ ಈ ಭಾಗದಲ್ಲಿ ಭೂಮಿಯ ತೇವಾಂಶ ಹೆಚ್ಚಾಗಿ ಧರೆ ಕುಸಿತ ಪ್ರಕರಣಗಳು ಹೆಚ್ಚುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಲೆನಾಡಿನಲ್ಲಿ ಮತ್ತೆ ಮಳೆ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರಿಗೆ ಸೂಚಿಸಲಾಗಿದೆ.

ಬೆಂಗಳೂರು ತಾಜ್ ಹೋಟೆಲ್‌ನಲ್ಲಿ ಘೋರ ದುರಂತ; ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆಗೆ ಯತ್ನ!

0

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ತಾಜ್ ಹೋಟೆಲ್‌ನಲ್ಲಿ ತಂದೆಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿ ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಮೃತ ಮಕ್ಕಳನ್ನು ಶೇಕ್ ಜೆಹರಾ (5) ಹಾಗೂ ಶೇಕ್ ಜೋಯಾ (10) ಎಂದು ಗುರುತಿಸಲಾಗಿದೆ. ಮಕ್ಕಳ ತಂದೆ ಇಮ್ರಾನ್‌ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿ ಪ್ರಕಾರ, ಇಮ್ರಾನ್‌ ಬೆಂಗಳೂರಿನ ನಾಗವಾರ ನಿವಾಸಿಯಾಗಿದ್ದು, Zimmy ಕ್ಯಾಬ್‌ ಸಂಸ್ಥೆಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮಕ್ಕಳನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಹೋಟೆಲ್‌ನಲ್ಲಿ ಮುಂಚಿತವಾಗಿ ಕೊಠಡಿ ಬುಕ್ ಮಾಡಿದ್ದ ಎನ್ನಲಾಗುತ್ತಿದೆ.

ತಾಜ್ ಹೋಟೆಲ್‌ನ ನಾಲ್ಕನೇ ಮಹಡಿಯ ಕೊಠಡಿಯಲ್ಲಿ ಇಬ್ಬರು ಮಕ್ಕಳನ್ನು ನೇಣು ಹಾಕಿ ಹತ್ಯೆ ಮಾಡಿದ ಬಳಿಕ ಇಮ್ರಾನ್‌ ತಾನು ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರ ನೋವಿನಿಂದ ಆತ ಚೀರಾಡಿದಾಗ ಹೋಟೆಲ್ ಸಿಬ್ಬಂದಿಗೆ ಘಟನೆ ತಿಳಿದುಬಂದಿದೆ. ಕೂಡಲೇ ಸಿಬ್ಬಂದಿ ಕೊಠಡಿಗೆ ತೆರಳಿ ಇಮ್ರಾನ್‌ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಏರ್‌ಪೋರ್ಟ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರು ಮಕ್ಕಳ ಸಾವಿಗೆ ಹಾಗೂ ಇಮ್ರಾನ್‌ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪಂಚಮಸಾಲಿ ಸಹಕಾರಿಗೆ ₹5.11 ಲಕ್ಷ ನಿವ್ವಳ ಲಾಭ

0

ವಿಜಯಸಾಕ್ಷಿ ಸುದ್ದಿ, ಗದಗ: ವೀರಶೈವ ಪಂಚಮಸಾಲಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ಗದಗ ಸಂಸ್ಥೆಯ 2025–26ನೇ ಸಾಲಿನ 30ನೇ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ ಭಾನುವಾರ ಎಪಿಎಂಸಿ ಯಾರ್ಡ್‌ನ ಸ್ಟೇಟ್ ಬ್ಯಾಂಕ್ ಎದುರಿನ ಸಹಕಾರಿ ಕಚೇರಿ ಆವರಣದಲ್ಲಿ ನಡೆಯಿತು.

ಸಹಕಾರಿ ಅಧ್ಯಕ್ಷ ಎಸ್.ಎಂ. ಪಾಟೀಲ (ಮಲ್ಲಸಮುದ್ರ) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2025–26ನೇ ಸಾಲಿನ ಲೆಕ್ಕಪತ್ರ, ಜಮಾ–ಖರ್ಚು, ಲಾಭ–ಹಾನಿ, ಅಢಾವೆ ಪತ್ರಿಕೆ ಹಾಗೂ ಲೆಕ್ಕಪರಿಶೋಧನಾ ವರದಿಯ ಅನುಪಾಲನಾ ವರದಿ ಸೇರಿದಂತೆ ಅಜೆಂಡಾದ 1ರಿಂದ 23ರವರೆಗಿನ ವಿಷಯಗಳನ್ನು ಚರ್ಚಿಸಿ ಸರ್ವಾನುಮತದಿಂದ ಅನುಮೋದಿಸಲಾಯಿತು.

ಸಹಕಾರಿಯ ಮ್ಯಾನೇಜರ್ ವಿ.ಸಿ. ಕರಡಿ ಅವರು ಸಭೆಯಲ್ಲಿ ಸಂಸ್ಥೆಯ ಸಂಪೂರ್ಣ ಮಾಹಿತಿಯನ್ನು ಸದಸ್ಯರಿಗೆ ವಿವರಿಸಿದರು. 2026–27ನೇ ಸಾಲಿನ ಅಂದಾಜು ಆಯ–ವ್ಯಯ ಪತ್ರಿಕೆಯನ್ನೂ ಸಭೆಯಲ್ಲಿ ಮಂಡಿಸಲಾಯಿತು.

2025–26ನೇ ಸಾಲಿನಲ್ಲಿ ಸಹಕಾರಿಯು ₹5,11,104.28 ನಿವ್ವಳ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ.10ರಷ್ಟು ಲಾಭಾಂಶ (ಡಿವಿಡೆಂಡ್) ವಿತರಿಸಲು ಘೋಷಿಸಲಾಯಿತು.

ಸಭೆಯ ಆರಂಭದಲ್ಲಿ ಸಹಕಾರಿ ಸದಸ್ಯರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಎರಡು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಐ.ಬಿ. ಅವರಾದಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ವಿ.ಎಸ್. ಉಪ್ಪಿನ ಸ್ವಾಗತಿಸಿದರು.

ಸಮಾಜದ ಆಶಯದಂತೆ ಸಭೆಯಲ್ಲಿ ಪಂಚಮಸಾಲಿ ವಧು–ವರರ ಮಾಹಿತಿ ಕೇಂದ್ರವನ್ನು ಆರಂಭಿಸಲಾಯಿತು. ಇದರ ಪ್ರಯೋಜನವನ್ನು ಸಮಾಜದ ಎಲ್ಲರೂ ಪಡೆದುಕೊಳ್ಳುವಂತೆ ಮನವಿ ಮಾಡಲಾಯಿತು. ಮಲ್ಲಪ್ಪ ಯ. ಹುಣಸಿಕಟ್ಟಿ (ಹೊಂಬಳ) ಅವರು ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. ನಿವೃತ್ತ ಜಿಲ್ಲಾ ಸರ್ಜನ್ ಡಾ. ಆರ್.ಎನ್. ಪಾಟೀಲ ಅವರು ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಿದರು.

ವೇದಿಕೆಯಲ್ಲಿ ಸಹಕಾರಿ ಉಪಾಧ್ಯಕ್ಷ ಡಿ.ಎನ್. ಆಸಂಗಿ, ನಿರ್ದೇಶಕರಾದ ಎಸ್.ಬಿ. ಕಲಕೇರಿ, ಎಸ್.ಎಲ್. ನೀಲಗುಂದ, ವಿ.ಎಸ್. ಉಪ್ಪಿನ, ಸವಿತಾ ಎಂ. ಪಾಟೀಲ ಹಾಗೂ ರಾಜೇಶ್ವರಿ ಐ. ಕಣವಿ ಉಪಸ್ಥಿತರಿದ್ದರು.

ನಿರ್ದೇಶಕ ಎಸ್.ಎಲ್. ನೀಲಗುಂದ ವಂದನಾರ್ಪಣೆ ಸಲ್ಲಿಸಿ, ಸಂಸ್ಥೆಯ ಸದಸ್ಯರು, ನೌಕರ ವರ್ಗ ಹಾಗೂ ಪಿಗ್ಮಿ ಏಜೆಂಟರಿಗೆ ಕೃತಜ್ಞತೆ ಸಲ್ಲಿಸಿದರು.

12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸಹಕಾರಿ ಸದಸ್ಯರ ಮಕ್ಕಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಸ್‌ಎಸ್‌ಎಲ್‌ಸಿಯ 7 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 5 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕೊನೆಯ ಎಸೆತದವರೆಗೂ ರೋಚಕ ಹೋರಾಟ: ನೈಟ್ ರೈಡರ್ಸ್‌ಗೆ 2 ರನ್‌ಗಳ ಗೆಲುವು!

0

ವಿಜಯಸಾಕ್ಷಿ ಸುದ್ದಿ, ಗದಗ: ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿರುವ ಗದಗ ಮೀಡಿಯಾ ಕ್ರಿಕೆಟ್ ಲೀಗ್ (GMCL) ಪಂದ್ಯಾವಳಿಯ ಅಂಗವಾಗಿ ಭಾನುವಾರ ನಡೆದ ಎರಡನೇ ಅಭ್ಯಾಸ ಪಂದ್ಯಾವಳಿಯಲ್ಲಿ ಪತ್ರಕರ್ತ ಎಚ್.ಎಂ. ಶರೀಫನವರ್ ನೇತೃತ್ವದ ನೈಟ್ ರೈಡರ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆಯಿತು.

ನಾಲ್ಕು ತಂಡಗಳಾದ ನೈಟ್ ರೈಡರ್ಸ್, ರೂರಲ್ ಕಿಂಗ್ಸ್, ಆರ್‌ಸಿಬಿ ಹಾಗೂ ವಿನ್ನರ್ಸ್ ನಡುವೆ ನಡೆದ ಪಂದ್ಯಾವಳಿಯಲ್ಲಿ ನೈಟ್ ರೈಡರ್ಸ್ ತಂಡ ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದರೆ, ಫೈನಲ್‌ನಲ್ಲಿ ರೂರಲ್ ಕಿಂಗ್ಸ್ ವಿರುದ್ಧ ಕೇವಲ 2 ರನ್‌ಗಳ ಅಂತರದಲ್ಲಿ ರೋಚಕ ಜಯ ದಾಖಲಿಸಿತು.

ಆರ್‌ಸಿಬಿಗೆ ವಿಕೆಟ್‌ ನಷ್ಟವಿಲ್ಲದೆ ಸೋಲು

ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ನೈಟ್ ರೈಡರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ನಿಗದಿತ 10 ಓವರ್‌ಗಳಲ್ಲಿ 82 ರನ್ ಗಳಿಸಿತು. ತಂಡದ ಪರ ಆರಂಭಿಕರಾದ ವಿನಾಯಕ ಚೌಡಾಪುರ 18 ಹಾಗೂ ವೀರೇಶ ಉಮನಾಬಾದಿ 13 ರನ್ ಗಳಿಸಿದರು.

ನೈಟ್ ರೈಡರ್ಸ್ ಪರ ಅರುಣಕುಮಾರ ಹಿರೇಮಠ 2 ವಿಕೆಟ್, ಸುರೇಶ ಕಡ್ಲಿಮಟ್ಟಿ ಹಾಗೂ ಮಂಜು ಪತ್ತಾರ ತಲಾ ಒಂದು ವಿಕೆಟ್ ಪಡೆದರು.

82 ರನ್‌ಗಳ ಗುರಿ ಬೆನ್ನತ್ತಿದ ನೈಟ್ ರೈಡರ್ಸ್ ಕೇವಲ 6 ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗಡಿ ತಲುಪಿತು. ನಾಯಕ ಸುರೇಶ ಕಡ್ಲಿಮಟ್ಟಿ 48 ಹಾಗೂ ಆರಂಭಿಕ ಉಮೇಶ ಸಜ್ಜನ 22 ರನ್ ಗಳಿಸಿ ಅಜೇಯರಾಗಿ ಉಳಿದರು.

ವಿನ್ನರ್ಸ್ ವಿರುದ್ಧ ರೂರಲ್ ಕಿಂಗ್ಸ್ ಅಬ್ಬರ

ಎರಡನೇ ಪಂದ್ಯದಲ್ಲಿ ವಿನ್ನರ್ಸ್ ತಂಡವನ್ನು ರೂರಲ್ ಕಿಂಗ್ಸ್ 9 ವಿಕೆಟ್‌ಗಳಿಂದ ಮಣಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿನ್ನರ್ಸ್ ತಂಡ 10 ಓವರ್‌ಗಳಲ್ಲಿ 93 ರನ್ ಗಳಿಸಿತು. ಅನಿಲ ತೆಂಬದಮನಿ 25, ಅಶೋಕ 17 ಹಾಗೂ ಶಂಭು 12 ರನ್ ಗಳಿಸಿದರು.

ರೂರಲ್ ಕಿಂಗ್ಸ್ ಪರ ಸಂಜೀವ ಪಾಂಡ್ರೆ 3, ನಿಂಗನಗೌಡ ಹನಮಗೌಡ್ರ 2 ಹಾಗೂ ಶಿವಾನಂದ ಹಿರೇಮಠ 1 ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ರೂರಲ್ ಕಿಂಗ್ಸ್ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಆರಂಭಿಕರಾದ ಶಿವಾನಂದ ಹಿರೇಮಠ 48 ಹಾಗೂ ನಿಂಗನಗೌಡ ಹನಮಗೌಡ್ರ 31 ರನ್ ಗಳಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

2 ರನ್‌ಗಳ ರೋಚಕ ಗೆಲುವು; ಸೋಲಿಗೆ ಸೇಡು

ಬಳಿಕ ನಡೆದ ನೈಟ್ ರೈಡರ್ಸ್ ಹಾಗೂ ರೂರಲ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯವೇ ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ಭಾನುವಾರ ರೂರಲ್ ಕಿಂಗ್ಸ್ ವಿರುದ್ಧ ಕಂಡಿದ್ದ ಸೋಲಿಗೆ ನೈಟ್ ರೈಡರ್ಸ್ ತಂಡ ಈ ಪಂದ್ಯದಲ್ಲಿ ಕೇವಲ 2 ರನ್‌ಗಳ ಅಂತರದ ಗೆಲುವಿನ ಮೂಲಕ ಸೇಡು ತೀರಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೈಟ್ ರೈಡರ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ 89 ರನ್ ಗಳಿಸಿತು. ಅರುಣಕುಮಾರ ಹಿರೇಮಠ 25, ಉಮೇಶ ಸಜ್ಜನ 17, ಮಂಜು ಪತ್ತಾರ 13 ಹಾಗೂ ಸಂಗನಗೌಡ ಖಾನಪ್ಪಗೌಡ್ರ 11 ರನ್ ಗಳಿಸಿದರು.

ರೂರಲ್ ಕಿಂಗ್ಸ್ ಪರ ಸಂಜೀವ ಪಾಂಡ್ರೆ 2 ವಿಕೆಟ್, ಶಿವಾನಂದ ಹಿರೇಮಠ ಹಾಗೂ ನಿಂಗನಗೌಡ ಹನಮಗೌಡ್ರ ತಲಾ ಒಂದು ವಿಕೆಟ್ ಪಡೆದರು.

89 ರನ್‌ಗಳ ಗುರಿ ಬೆನ್ನತ್ತಿದ ರೂರಲ್ ಕಿಂಗ್ಸ್ ತಂಡ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಶುರಾಮ ಹಳ್ಳದ 26, ಪ್ರಕಾಶ ಗುದ್ದಿನ 20 ಹಾಗೂ ನಿಂಗನಗೌಡ ಹನಮಗೌಡ್ರ 10 ರನ್ ಗಳಿಸಿದರು.

ನೈಟ್ ರೈಡರ್ಸ್ ಪರ ಸುರೇಶ ಕಡ್ಲಿಮಟ್ಟಿ ಹಾಗೂ ಉಮೇಶ ಸಜ್ಜನ ತಲಾ 2 ವಿಕೆಟ್, ಮಂಜು ಪತ್ತಾರ ಹಾಗೂ ಸಂಗನಗೌಡ ಖಾನಪ್ಪಗೌಡ್ರ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಸಂದರ್ಭದಲ್ಲಿ ಕಾನಿಪ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಅರುಣಕುಮಾರ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ಹಿರಿಯ ವರದಿಗಾರರಾದ ಅನಂತ ಕಾರ್ಕಳ, ಅನಿಲ ತೆಂಬದಮನಿ, ಸುನಿಲ ತೆಂಬದಮನಿ, ಸಂಪಾದಕರಾದ ಎಚ್.ಎಂ. ಶರೀಫನವರ್, ಜಗದೀಶ್ ಎಸ್.ಪಿ., ಆನಂದ ಸಾಲಿಗ್ರಾಮ ಸೇರಿದಂತೆ ಸಂಪಾದಕರು, ವರದಿಗಾರರು ಹಾಗೂ ಛಾಯಾಗ್ರಾಹಕರು ಉಪಸ್ಥಿತರಿದ್ದರು.

ಗದಗ ಮೀಡಿಯಾ ಕ್ರಿಕೆಟ್ ಲೀಗ್‌ನ ಕ್ರೀಡಾ ಸಮಿತಿ ಪದಾಧಿಕಾರಿಗಳಾದ ವೆಂಕಟೇಶ ಇಮರಾಪುರ, ಸಂತೋಷ ಕೊಣ್ಣೂರ ಹಾಗೂ ರುದ್ರಗೌಡ ಪಾಟೀಲ ಸೇರಿದಂತೆ ಹಲವರು ಪಂದ್ಯಾವಳಿಯ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ತಂಡದ ಎಲ್ಲ ಆಟಗಾರರ ಪರಿಶ್ರಮವೇ ಗೆಲುವಿಗೆ ಕಾರಣ

“ನಮ್ಮ ತಂಡದ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ವಿಜೇತ ತಂಡವಾಗಿ ಹೊರಹೊಮ್ಮಲು ಕಾರಣರಾಗಿದ್ದಾರೆ. ದಿನನಿತ್ಯದ ಅಭ್ಯಾಸದಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಒಟ್ಟಾರೆಯಾಗಿ ಕ್ರೀಡಾ ಮನೋಭಾವದಿಂದ ನಾಲ್ಕು ತಂಡಗಳ ಮಾಲೀಕರು, ನಾಯಕರು ಹಾಗೂ ಆಟಗಾರರು ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ನಾಲ್ಕೂ ತಂಡಗಳು ಮತ್ತಷ್ಟು ಉತ್ತಮ ಪ್ರದರ್ಶನ ನೀಡಲಿ.”

– ಎಚ್.ಎಂ. ಶರೀಫನವರ್, ನೈಟ್ ರೈಡರ್ಸ್ ತಂಡದ ಮಾಲೀಕರು

ಶಾಲೆಯಲ್ಲಿ ಚೆಸ್ ನೋಡುತ್ತಿದ್ದ SSLC ವಿದ್ಯಾರ್ಥಿ ಏಕಾಏಕಿ ಕುಸಿದು ಸಾವು!

0

ಶಿವಮೊಗ್ಗ: ಶಾಲೆಯಲ್ಲಿ ಚೆಸ್ ಆಟ ವೀಕ್ಷಿಸುತ್ತಿದ್ದ ವೇಳೆ ಏಕಾಏಕಿ ಕುಸಿದುಬಿದ್ದ SSLC ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಜಿ.ಕೆ. ವಿನಯ್ (15) ಎಂದು ಗುರುತಿಸಲಾಗಿದೆ. ಶಾಲೆಯಲ್ಲಿ ಇತರ ವಿದ್ಯಾರ್ಥಿಗಳು ಚೆಸ್ ಆಡುತ್ತಿದ್ದುದನ್ನು ವಿನಯ್ ಕುಳಿತು ನೋಡುತ್ತಿದ್ದ ವೇಳೆ ದಿಢೀರ್ ಕುಸಿದುಬಿದ್ದಿದ್ದಾನೆ. ಕೂಡಲೇ ಶಿಕ್ಷಕರು ಆತನನ್ನು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.

ಆದರೆ ವಿನಯ್ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಈ ವೇಳೆ ಮಾರ್ಗಮಧ್ಯೆಯೇ ವಿನಯ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ವಿನಯ್‌ನ ತಂದೆ-ತಾಯಿ ಶಿಕಾರಿಪುರದವರಾಗಿದ್ದು, ಆಯನೂರು ಸಮೀಪದ ತಮ್ಮಡಿಹಳ್ಳಿಯಲ್ಲಿರುವ ಅಜ್ಜನ ಮನೆಯಲ್ಲಿ ವಾಸವಿದ್ದು ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ಥಿಯ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಶಾಲಾ ಶಿಕ್ಷಕರು, ಸಹಪಾಠಿಗಳು ಆಘಾತಕ್ಕೊಳಗಾಗಿದ್ದಾರೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಇನ್ನು ಮಗನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ವಿನಯ್ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಳ್ಳಿಯಲ್ಲಿ ‘ಪಂಚಾಯಿತಿ’ ಕನ್ನಡ ಚಿತ್ರದ ಚಿತ್ರೀಕರಣ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ನೇಟಿವ್ ಕ್ರಿಯೇಷನ್ಸ್ ಅಡಿಯಲ್ಲಿ ದೊಡ್ಡ ನಾಗಯ್ಯ ನಿರ್ಮಿಸುತ್ತಿರುವ ಹಾಗೂ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನದ ‘ಪಂಚಾಯಿತಿ’ ಕನ್ನಡ ಚಲನಚಿತ್ರದ ಚಿತ್ರೀಕರಣ ಧಾರವಾಡ ಸಮೀಪದ ಶಿವಳ್ಳಿಯಲ್ಲಿ ಭರದಿಂದ ಸಾಗಿದೆ.

ಹುಬ್ಬಳ್ಳಿ, ಶಿವಳ್ಳಿ, ಹೆಬಸೂರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಚಿತ್ರದ ಕಥೆ ಉತ್ತರ ಕರ್ನಾಟಕದ ಹಾಲಳ್ಳಿ ಎಂಬ ಗ್ರಾಮದ ಗ್ರಾಮ ಪಂಚಾಯಿತಿ ಚುನಾವಣೆಯ ಸುತ್ತ ಹೆಣೆದಿದೆ. ಪಂಚಾಯಿತಿ ಅಧ್ಯಕ್ಷರ ಹಠಾತ್ ನಿಧನದಿಂದ ಆರಂಭವಾಗುವ ಸಂಘರ್ಷ ಕ್ರಮೇಣ ಇಡೀ ಗ್ರಾಮದ ರಾಜಕೀಯ ಸ್ವರೂಪವನ್ನೇ ಬದಲಿಸುವ ಕಥಾವಸ್ತುವನ್ನು ಹೊಂದಿದೆ.

ಚುನಾವಣಾ ಕಣಕ್ಕೆ ಸ್ಥಳೀಯ ಶಾಸಕರ ಪ್ರವೇಶ, ಹಣದ ಪ್ರಭಾವ, ಜಾತಿ ಹಾಗೂ ಸಾಮಾಜಿಕ ಸಮೀಕರಣಗಳು ಮತ್ತು ಸ್ಥಳೀಯ ಅಸಮಾಧಾನಗಳು ಕಥೆಯಲ್ಲಿ ಪ್ರಮುಖವಾಗಿ ಮೂಡಿಬರಲಿವೆ. ಚಿತ್ರದ ಪ್ರಮುಖ ಪಾತ್ರವಾದ ‘ಪಾಟೀಲ’ ಇಂದಿನ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದೆ.

ಚಿತ್ರದ ಕಥೆಯನ್ನು ಅರವಿಂದ ಮಿತ್ರ ಬರೆದಿದ್ದು, ಪಿ. ಶೇಷಾದ್ರಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಗುರುಪ್ರಸಾದ್ ಕಾಶಿ ಛಾಯಾಗ್ರಹಣ ಹಾಗೂ ಕೆಂಪರಾಜ್ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ.

ಚಿತ್ರದಲ್ಲಿ ಉತ್ತರ ಕರ್ನಾಟಕದ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದ್ದು, ಮುಖ್ಯ ಭೂಮಿಕೆಯಲ್ಲಿ ಗೋಕುಲ್ ರಾಜ್, ಬಿಂದು, ಜಗದೀಶ್ ಮೂಕಿ, ಶ್ರುತಿ ಬಿಸರಹಳ್ಳಿ ಹಾಗೂ ಬಸವರಾಜ್ ತಿರ್ಲಾಪುರ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

ಸಹ ನಿರ್ದೇಶಕರಾಗಿ ಟಿ.ಆರ್. ಪ್ರಭು, ವಿದ್ಯಾಶ್ರೀ ಹಾಗೂ ಪ್ರಕಾಶ್‌ರಾಜಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್‌ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ದೊಡ್ಡ ನಾಗಯ್ಯ ಬಂಡವಾಳ ಹೂಡಿದ್ದಾರೆ.