Home Blog

ಬೇರೆಯವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಪ್ರೇಯಸಿ: ಕೋಪದಿಂದ ಬೈಕ್​ಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

0

ಶಿವಮೊಗ್ಗ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಗೆ ತಿರುಗಿದ್ದ ಸಂಬಂಧದಲ್ಲಿ ಯುವತಿ ಬೇರೊಬ್ಬನನ್ನು ಮದುವೆಯಾಗಲು ಮುಂದಾದ ಹಿನ್ನೆಲೆ ಆಕ್ರೋಶಗೊಂಡ ಯುವಕನೊಬ್ಬ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ. ಶಿವಮೊಗ್ಗದ ವೆಂಕಟೇಶ ನಗರದಲ್ಲಿ ನಡೆದ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಡ್ಯ ಮೂಲದ ಮಣಿಕಂಠನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಮಣಿಕಂಠನಿಗೆ ಇನ್‌ಸ್ಟಾಗ್ರಾಂ ಮೂಲಕ ಶಿವಮೊಗ್ಗದ ಯುವತಿಯ ಪರಿಚಯವಾಗಿತ್ತು. ಯುವತಿಯ ಮೇಲಿನ ಪ್ರೀತಿಯಿಂದ ಮಂಡ್ಯದಿಂದ ಶಿವಮೊಗ್ಗಕ್ಕೆ ಬಂದಿದ್ದ ಆತ, ಇಲ್ಲಿಯೇ ವಾಸವಾಗಿದ್ದ ಎನ್ನಲಾಗಿದೆ.

ಈ ನಡುವೆ ಯುವತಿಗೆ ಬೇರೊಬ್ಬ ಯುವಕನೊಂದಿಗೆ ವಿವಾಹ ನಿಶ್ಚಯವಾಗಿದ್ದು, ನಿಶ್ಚಿತಾರ್ಥವೂ ನೆರವೇರಿತ್ತು. ಇದರಿಂದ ಅಸಮಾಧಾನಗೊಂಡ ಮಣಿಕಂಠ, ಕಳೆದ ರಾತ್ರಿ ಮದ್ಯ ಸೇವಿಸಿ ಯುವತಿಯ ಮನೆ ಸಮೀಪಕ್ಕೆ ತೆರಳಿದ್ದಾನೆ.

ವೆಂಕಟೇಶ ನಗರದ ತುಂಗಾ ಕಾಲುವೆ ಮುಂಭಾಗದಲ್ಲಿ ನಿಲ್ಲಿಸಿದ್ದ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಬೆಂಕಿ ಪಕ್ಕದಲ್ಲಿದ್ದ ಯುವತಿಯ ಸಹೋದರನ ಬೈಕ್‌ಗೂ ತಗುಲಿದ್ದು, ಎರಡು ಬೈಕ್‌ಗಳು ಭಾಗಶಃ ಹಾನಿಗೊಳಗಾಗಿವೆ.

ಘಟನೆಯ ಬಳಿಕ ಬೈಕ್ ಮಾಲೀಕ ಜಯನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ದೃಶ್ಯಾವಳಿಗಳ ಆಧಾರದಲ್ಲಿ ಮಣಿಕಂಠನೇ ಕೃತ್ಯ ಎಸಗಿರುವುದು ದೃಢಪಟ್ಟಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಜೆಪಿ ಪ್ರತಿಭಟನಾ ಮೆರವಣಿಗೆಗೆ ತಡೆ ನಿರಾಕರಿಸಿದ ಸುಪ್ರೀಂ ಕೋರ್ಟ್: ಸೆ.10ಕ್ಕೆ ಮುಂದಿನ ವಿಚಾರಣೆ

0

ನವದೆಹಲಿ: ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ನಡೆಯಲಿರುವ ಸಿಜೆಪಿ ಪ್ರತಿಭಟನಾ ಮೆರವಣಿಗೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿ. ಮೊಹಾನ್ ಅವರನ್ನೊಳಗೊಂಡ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ಸೆಪ್ಟೆಂಬರ್ 5ರಂದು ಸಿಜೆಪಿ ಕರೆ ನೀಡಿರುವ ಪ್ರತಿಭಟನಾ ಮೆರವಣಿಗೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಲಿದೆ ಎಂದು ಊಹಿಸಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸಿಜೆಪಿ ಮೆರವಣಿಗೆಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿದಾರರಿಗೆ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೇರವಾಗಿ ಮಧ್ಯಪ್ರವೇಶಿಸುವ ಬದಲು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುವಂತೆ ನ್ಯಾಯಾಲಯ ಸೂಚಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಎಂದು ಪೀಠ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳ ವಿರುದ್ಧ ನಡೆದಿದೆ ಎನ್ನಲಾದ ಪೊಲೀಸ್ ಹಿಂಸಾಚಾರ ಆರೋಪಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಮುಂದೆ ಈ ಪ್ರಕರಣವನ್ನು ಸಲ್ಲಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಈ ಸಂಬಂಧದ ಇತರ ಬಾಕಿ ಅರ್ಜಿಗಳೊಂದಿಗೆ ಪ್ರಕರಣವನ್ನು ಸೆಪ್ಟೆಂಬರ್ 10ರಂದು ವಿಚಾರಣೆಗೆ ಪಟ್ಟಿ ಮಾಡುವಂತೆ ಪೀಠ ನಿರ್ದೇಶಿಸಿದೆ.

ಸಿಜೆಪಿ ಸೆಪ್ಟೆಂಬರ್ 5ರಂದು ದೆಹಲಿಯ ಇಂಡಿಯಾ ಗೇಟ್‌ನಿಂದ ನವದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಯುವ ಪ್ರತಿಭಟನಾಕಾರರಿಗೆ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿ ಈ ಮೆರವಣಿಗೆಗೆ ಕರೆ ನೀಡಲಾಗಿದೆ.

ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಸಿಜೆಪಿ ಆರೋಪಿಸಿದೆ. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಯುವ ಸಂಘಟನೆಗಳು ಹಾಗೂ ಯುವಜನರು ಭಾಗವಹಿಸುವ ನಿರೀಕ್ಷೆಯಿದೆ.

ನಿರ್ಮಾಣ ಹಂತದ ಮನೆಯಲ್ಲೇ ಖೋಟಾ ನೋಟು ದಂಧೆ: ಅಂತರಜಿಲ್ಲಾ ಗ್ಯಾಂಗ್‌ನ ಐವರು ಪೊಲೀಸರ ವಶಕ್ಕೆ!

0

ರಾಮನಗರ: ಸಾರ್ವಜನಿಕರ ಕಣ್ಣುತಪ್ಪಿಸಿ ನಿರ್ಮಾಣ ಹಂತದ ಮನೆಯಲ್ಲೇ ಖೋಟಾ ನೋಟುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಅಂತರಜಿಲ್ಲಾ ಗ್ಯಾಂಗ್‌ನ ಜಾಲವನ್ನು ಐಜೂರು ಪೊಲೀಸರು ಭೇದಿಸಿದ್ದಾರೆ. ರಾಮನಗರದ ಶಾಂತಿಲಾಲ್ ಲೇಔಟ್‌ನ ಕಟ್ಟಡವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಐವರನ್ನು ವಶಕ್ಕೆ ಪಡೆದು, ನಕಲಿ ನೋಟು ತಯಾರಿಕೆಗೆ ಬಳಸುತ್ತಿದ್ದ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಶಾಂತಿಲಾಲ್ ಲೇಔಟ್‌ನಲ್ಲಿ ಸಂತೋಷ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡವನ್ನು ಆರೋಪಿಗಳು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಯಾರಿಗೂ ಅನುಮಾನ ಬಾರದಂತೆ ಅಲ್ಲಿಯೇ ನಕಲಿ ನೋಟು ಮುದ್ರಿಸಿ, ಬಳಿಕ ಅವುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷ ಕಾಗದದ ಶೀಟ್‌ಗಳನ್ನು ಹೊರಗಿನಿಂದ ತರಿಸಿಕೊಂಡು, ನಿರ್ದಿಷ್ಟ ರಾಸಾಯನಿಕ ಲೇಪನ ಮಾಡಿ ₹200 ಹಾಗೂ ₹500 ಮುಖಬೆಲೆಯ ನೋಟುಗಳನ್ನು ಅಸಲಿ ನೋಟಿನಂತೆ ಕಾಣುವ ರೀತಿಯಲ್ಲಿ ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ಮುದ್ರಣದ ಬಳಿಕ ಶೀಟ್‌ಗಳನ್ನು ಅಚ್ಚುಕಟ್ಟಾಗಿ ಕತ್ತರಿಸಿ, ಬಂಡಲ್‌ಗಳಾಗಿ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಆಧರಿಸಿ ಐಜೂರು ಪೊಲೀಸರು ದಿಢೀರ್ ದಾಳಿ ನಡೆಸಿ ದಂಧೆಯನ್ನು ಬಯಲಿಗೆಳೆದಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಮತ್ತು ಬೆರಳಚ್ಚು ತಜ್ಞರನ್ನು ಒಳಗೊಂಡ SOCO ತಂಡವೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನೋಟು ತಯಾರಿಕೆಗೆ ಬಳಸಿದ್ದ ರಾಸಾಯನಿಕ, ವಿಶೇಷ ಕಾಗದ ಹಾಗೂ ಇತರ ಮಹತ್ವದ ಸಾಕ್ಷ್ಯಗಳನ್ನು ತಂಡ ವಶಕ್ಕೆ ಪಡೆದುಕೊಂಡಿದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲೂ ಇದೇ ಮಾದರಿಯ ಖೋಟಾ ನೋಟು ತಯಾರಿಕಾ ಜಾಲ ಪತ್ತೆಯಾಗಿತ್ತು. ಮಹಮ್ಮದ್ ಇದ್ರೀಸ್ ಎಂಬಾತನ ನೂತನ ಕಟ್ಟಡದಲ್ಲಿ ದಂಧೆ ನಡೆಯುತ್ತಿತ್ತು ಎನ್ನಲಾಗಿದ್ದು, ಮಾಹಿತಿ ಆಧರಿಸಿ ಉಪ್ಪಿನಂಗಡಿ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿ ಏಳು ಆರೋಪಿಗಳನ್ನು ಬಂಧಿಸಿದ್ದರು.

ಆ ಪ್ರಕರಣದಲ್ಲಿ ಸಿರಾಜುದ್ದೀನ್ (34), ಇರ್ಷಾದ್ (31), ಇಬ್ರಾಹಿಂ (60), ಸಲ್ಮಾನ್ ಪಾರೀಸ್ (25), ಶರೀಫ್ (51), ಸಂದೀಪ್ ಪುಂಡಲೀಕ ಶೋಳಂಬಿ (30) ಹಾಗೂ ಮಹಮ್ಮದ್ ನಬಾಸ್ (37) ಬಂಧಿತರಾಗಿದ್ದರು.

42 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ; 57 ವರ್ಷಗಳ ಹಳೆಯ ದಾಖಲೆ ಮುರಿದ ವೈಭವ್ ಸೂರ್ಯವಂಶಿ!

0

ಚೆನ್ನೈ: 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಹೆಸರಿಗೆ ಮತ್ತೊಂದು ಮಹತ್ವದ ದಾಖಲೆ ಸೇರ್ಪಡೆಯಾಗಿದೆ. ಹಾಲಿ ಚಾಂಪಿಯನ್ ಸೆಂಟ್ರಲ್ ಝೋನ್ ವಿರುದ್ಧ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡದ ಪರ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಸೂರ್ಯವಂಶಿ, ಟೂರ್ನಮೆಂಟ್ ಇತಿಹಾಸದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ನಾಯಕ ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ಪೂರ್ವ ವಲಯ ತಂಡವನ್ನು ಮುನ್ನಡೆಸಬೇಕಿದ್ದ ಸೂರ್ಯವಂಶಿ, ಬ್ಯಾಟಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದರು. ತಮ್ಮ ಎಂದಿನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಮುಂದುವರಿಸಿದ ಅವರು, ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಸೂರ್ಯವಂಶಿ ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ಗಳು ಹಾಗೂ ಐದು ಬೌಂಡರಿಗಳು ಸೇರಿದ್ದವು. ಶತಕದತ್ತ ಮುನ್ನುಗ್ಗುತ್ತಿದ್ದ ಅವರು ಮೈಲಿಗಲ್ಲು ತಲುಪಲು ಕೇವಲ 8 ರನ್‌ಗಳ ಅಂತರದಲ್ಲಿದ್ದಾಗ ವಿಕೆಟ್ ಒಪ್ಪಿಸಿದರು.

ಆದರೂ ಅರ್ಧಶತಕದೊಂದಿಗೆ ಸೂರ್ಯವಂಶಿ ದುಲೀಪ್ ಟ್ರೋಫಿಯಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಈ ಮೂಲಕ 57 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಲಕ್ಷ್ಮಣ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. 1969ರಲ್ಲಿ ಲಕ್ಷ್ಮಣ್ ಸಿಂಗ್ ಅವರು 16 ವರ್ಷ 23 ದಿನಗಳ ವಯಸ್ಸಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಬಾರಿಸಿದ್ದರು.

ಇದೀಗ ವೈಭವ್ ಸೂರ್ಯವಂಶಿ ಕೇವಲ 15 ವರ್ಷ 157 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಸಿಡಿಸಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2025ರಲ್ಲಿ 16 ವರ್ಷ 307 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಗಳಿಸಿದ್ದ ಪಿಯೂಷ್ ಚಾವ್ಲಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರರು:

1. ವೈಭವ್ ಸೂರ್ಯವಂಶಿ – 15 ವರ್ಷ 157 ದಿನಗಳು
2. ಲಕ್ಷ್ಮಣ್ ಸಿಂಗ್ (1969) – 16 ವರ್ಷ 23 ದಿನಗಳು
3. ಪಿಯೂಷ್ ಚಾವ್ಲಾ (2025) – 16 ವರ್ಷ 307 ದಿನಗಳು

15ನೇ ವಯಸ್ಸಿನಲ್ಲೇ ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿಯೊಂದರಲ್ಲಿ ದಾಖಲೆ ನಿರ್ಮಿಸಿರುವ ವೈಭವ್ ಸೂರ್ಯವಂಶಿ, ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೊಬ್ಬ ಯುವ ಪ್ರತಿಭೆಯಾಗಿ ಗಮನ ಸೆಳೆಯುತ್ತಿದ್ದಾರೆ.

US ಓಪನ್ʼನಲ್ಲಿ ಜೊಕೊವಿಚ್ʼಗೆ ಬಿಗ್ ಶಾಕ್: ಟೆನ್ನಿಸ್ ಕೋರ್ಟ್ʼನಲ್ಲೇ ವಾಂತಿ, 2ನೇ ಸುತ್ತಿನಲ್ಲೇ ಟೂರ್ನಿಯಿಂದ ಔಟ್!

0

ವಾಷಿಂಗ್ಟನ್: ಟೆನಿಸ್ ದಿಗ್ಗಜ ಹಾಗೂ 24 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳ ಒಡೆಯ ನೊವಾಕ್ ಜೊಕೊವಿಚ್ ಅವರಿಗೆ ಸಿನ್ಸಿನಾಟಿ ಓಪನ್‌ನಲ್ಲಿ ಭಾರೀ ಆಘಾತ ಎದುರಾಗಿದೆ. ಅರ್ಜೆಂಟೀನಾದ ಥಿಯಾಗೊ ಟಿರಾಂಟೆ ವಿರುದ್ಧದ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲು ಕಂಡ ಜೊಕೊವಿಚ್, ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಪಂದ್ಯದ ಆರಂಭದಲ್ಲಿ ಜೊಕೊವಿಚ್ ಭರ್ಜರಿ ಆಟ ಪ್ರದರ್ಶಿಸಿದರು. ಮೊದಲ ಸೆಟ್‌ನಲ್ಲಿ 6-2 ಅಂತರದಲ್ಲಿ ಗೆದ್ದು ಪಂದ್ಯದಲ್ಲಿ ಮುನ್ನಡೆ ಸಾಧಿಸಿದರು. ಆದರೆ, ನಂತರದ ಎರಡು ಸೆಟ್‌ಗಳಲ್ಲಿ ಟಿರಾಂಟೆ ತಿರುಗೇಟು ನೀಡಿದರು. ಎರಡನೇ ಹಾಗೂ ಮೂರನೇ ಸೆಟ್‌ಗಳನ್ನು ತಲಾ 6-4 ಅಂತರದಲ್ಲಿ ಗೆದ್ದ ಟಿರಾಂಟೆ, ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಪಂದ್ಯದ ವೇಳೆ ಜೊಕೊವಿಚ್ ತೀವ್ರ ಸುಸ್ತಿನಿಂದ ಬಳಲಿದಂತೆ ಕಂಡುಬಂದಿದ್ದು, ಕೋರ್ಟ್‌ನಲ್ಲೇ ಅಸ್ವಸ್ಥರಾದರು. ಬಳಿಕ ವೈದ್ಯರು ಹಾಗೂ ಫಿಸಿಯೋಥೆರಪಿಸ್ಟ್‌ಗಳು ಅವರಿಗೆ ಚಿಕಿತ್ಸೆ ನೀಡಿದರು. ಈ ನಡುವೆಯೂ ಜೊಕೊವಿಚ್ ಹೋರಾಟ ಮುಂದುವರಿಸಿದರು.

ಎರಡನೇ ಸೆಟ್‌ನ ಒಂದು ಗೇಮ್ ಬರೋಬ್ಬರಿ 18 ನಿಮಿಷಗಳ ಕಾಲ ನಡೆದಿದ್ದು, ಪಂದ್ಯ ಮತ್ತಷ್ಟು ಕಠಿಣವಾಗುವಂತೆ ಮಾಡಿತು. ಮೂರನೇ ಸೆಟ್‌ನಲ್ಲಿ ಉಭಯ ಆಟಗಾರರು 4-4ರ ಹಂತದವರೆಗೂ ಸಮಬಲದ ಹೋರಾಟ ನಡೆಸಿದರು. ಆದರೆ ನಿರ್ಣಾಯಕ ಹಂತದಲ್ಲಿ ಟಿರಾಂಟೆ ಬ್ರೇಕ್ ಪಡೆದುಕೊಂಡರು. ಬಳಿಕ ತಮ್ಮ ಸರ್ವ್ ಉಳಿಸಿಕೊಂಡು ಪಂದ್ಯವನ್ನು ಗೆದ್ದು ವೃತ್ತಿಜೀವನದ ಮಹತ್ವದ ಗೆಲುವು ದಾಖಲಿಸಿದರು.

ಪಂದ್ಯ ಒಟ್ಟು 2 ಗಂಟೆ 44 ನಿಮಿಷಗಳ ಕಾಲ ನಡೆಯಿತು. ವಿಶ್ವದ 50ನೇ ಶ್ರೇಯಾಂಕದ ಆಟಗಾರರಾಗಿರುವ ಥಿಯಾಗೊ ಟಿರಾಂಟೆಗೆ ಇದು ನೊವಾಕ್ ಜೊಕೊವಿಚ್ ವಿರುದ್ಧದ ಮೊದಲ ಗೆಲುವಾಗಿದೆ. ಅಲ್ಲದೆ, ಟೆನಿಸ್ ದಿಗ್ಗಜನ ವಿರುದ್ಧದ ಈ ಗೆಲುವು ಟಿರಾಂಟೆ ಅವರ ವೃತ್ತಿಜೀವನದ ಪ್ರಮುಖ ಗೆಲುವುಗಳಲ್ಲೊಂದಾಗಿ ಗುರುತಿಸಿಕೊಂಡಿದೆ.

ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ನಿಲುವೇನು? ರಾಯರೆಡ್ಡಿ ಹೇಳಿಕೆ ವಿಚಾರ ಪ್ರಸ್ತಾಪಿಸಿ ರವಿಕುಮಾರ್ ಪ್ರಶ್ನೆ

0

ಬೆಂಗಳೂರು: ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ನಿಲುವೇನು ಎಂಬುದನ್ನು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್ ಆಗ್ರಹಿಸಿದ್ದಾರೆ.

ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರವಿಕುಮಾರ್, ಹಿಂದೂ ಧರ್ಮ ಕಾಂಗ್ರೆಸ್ ದೃಷ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ ಎಂದು ರಾಯರೆಡ್ಡಿ ಹಾಗೂ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ. ಇಸ್ಲಾಂ ಧರ್ಮ ಶ್ರೇಷ್ಠವಾದರೆ ಹಿಂದೂ ಧರ್ಮದ ಬಗ್ಗೆ ಏನು ಹೇಳುತ್ತೀರಿ, ಬಸವಣ್ಣನವರ ಬಗ್ಗೆ ಏನು ಹೇಳುತ್ತೀರಿ ಎಂದು ಅವರು ಪ್ರಶ್ನಿಸಿದರು.

ಹಿಂದೂ ಧರ್ಮವನ್ನು ಜಗತ್ತಿನಾದ್ಯಂತ ಪಾಲಿಸಲಾಗುತ್ತಿದ್ದು, ಶ್ರೇಷ್ಠ ವಿಚಾರಗಳನ್ನು ಈ ಧರ್ಮ ನೀಡಿದೆ ಎಂದು ಪ್ರತಿಪಾದಿಸಿದ ರವಿಕುಮಾರ್, ರಾಯರೆಡ್ಡಿ ಅವರು ಹಿಂದೂ ಧರ್ಮದಲ್ಲೇ ಹುಟ್ಟಿದವರಲ್ಲವೇ ಎಂದು ಪ್ರಶ್ನಿಸಿದರು. ಹಿಂದೂ ಧರ್ಮ ಕಾಂಗ್ರೆಸ್‌ಗೆ ಶ್ರೇಷ್ಠವೋ ಅಥವಾ ಕಳಪೆಯೋ ಎಂಬುದನ್ನು ಪಕ್ಷ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು,

ಸನಾತನ ಧರ್ಮ ಹಾಗೂ ರಾಮನ ಅಸ್ತಿತ್ವದ ಬಗ್ಗೆ ಈ ಹಿಂದೆಯೂ ಕಾಂಗ್ರೆಸ್ ನಾಯಕರು ಪ್ರಶ್ನೆ ಎತ್ತಿದ್ದರು ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲೇ ಸಚಿವರು ಇಂತಹ ಹೇಳಿಕೆ ನೀಡಲು ಸಾಧ್ಯವಾಗುತ್ತಿದೆ ಎಂದು ಅವರು ಆರೋಪಿಸಿದರು. ರಾಯರೆಡ್ಡಿ ಹೇಳಿಕೆ ಬಗ್ಗೆ ಸಿಎಂ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ರವಿಕುಮಾರ್ ಒತ್ತಾಯಿಸಿದರು.

ಭಾನುವಾರ ಬಿಜೆಪಿ ಕಚೇರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ಕುರಿತೂ ಪ್ರತಿಕ್ರಿಯಿಸಿದ ರವಿಕುಮಾರ್, ಬಿಜೆಪಿ ಕಚೇರಿಗೆ ಸೂಕ್ತ ಭದ್ರತೆ ಒದಗಿಸದಿದ್ದರೆ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಭಾನುವಾರ ಸಂಜೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದು, ಇಂತಹ ಘಟನೆ ಇದೇ ಮೊದಲಲ್ಲ, ಈವರೆಗೆ 19ನೇ ಬಾರಿ ಈ ರೀತಿ ನಡೆದಿದೆ ಎಂದು ಅವರು ಆರೋಪಿಸಿದರು. ರಾಜ್ಯದಲ್ಲಿ ಪೊಲೀಸ್ ಇಲಾಖೆ ಏನು ಮಾಡುತ್ತಿದೆ, ಕಾರ್ಯಕರ್ತರು ಕಚೇರಿ ಸಮೀಪ ಬರುವವರೆಗೆ ಪೊಲೀಸರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ ಅವರು, ಪೊಲೀಸರು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರಾ ಎಂದೂ ಪ್ರಶ್ನಿಸಿದರು.

ಆಗಸ್ಟ್ʼನಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆ ಸ್ಥಗಿತ: ಕೇಂದ್ರದ ಪಾಲಿನ ಅಕ್ಕಿ, ರಾಗಿ ಮಾತ್ರ ವಿತರಣೆ

0

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ ತಿಂಗಳ ಅನ್ನಭಾಗ್ಯ ಅಕ್ಕಿ ವಿತರಣೆಗೆ ಬ್ರೇಕ್ ಬಿದ್ದಿದ್ದು, ಈ ತಿಂಗಳ ಪಡಿತರ ವಿತರಣೆ ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರದಿಂದ ಈವರೆಗೆ 10 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತಿತ್ತಾದರೂ, ಈ ತಿಂಗಳು ಕೇಂದ್ರ ಸರ್ಕಾರದ ಪಾಲಿನ 4 ಕೆ.ಜಿ. ಅಕ್ಕಿ ಹಾಗೂ 6 ಕೆ.ಜಿ. ರಾಗಿಯನ್ನಷ್ಟೇ ವಿತರಿಸಲಾಗುತ್ತಿದೆ.

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಮಾಡದಿರುವುದೇಕೆ ಎಂಬ ಪ್ರಶ್ನೆ ಎದ್ದಿದೆ. ಮಲ್ಲೇಶ್ವರಂನ ನ್ಯಾಯಬೆಲೆ ಅಂಗಡಿಯಲ್ಲಿ ಪ್ರಸ್ತುತ ಕೇಂದ್ರ ಸರ್ಕಾರದ ಪಾಲಿನ 4 ಕೆ.ಜಿ. ಅಕ್ಕಿ ಮತ್ತು 6 ಕೆ.ಜಿ. ರಾಗಿ ಮಾತ್ರ ವಿತರಣೆಯಾಗುತ್ತಿದೆ. ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ 10 ಕೆ.ಜಿ. ಅಕ್ಕಿ ವಿತರಣೆ ಪುನರಾರಂಭವಾಗಲಿದೆ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಡಿಕೆಶಿ ಕ್ಷಮೆ ಕೇಳಿಸಬೇಕು ಇಲ್ಲವೇ ಸಚಿವ ಸ್ಥಾನ ವಜಾ ಮಾಡಿ: ಸಚಿವ ರಾಯರೆಡ್ಡಿ ಹೇಳಿಕೆಗೆ ಆರ್.ಅಶೋಕ್ ಆಕ್ಷೇಪ

0

ಬೆಂಗಳೂರು: ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಅವರ 6ನೇ ಗ್ಯಾರಂಟಿಯನ್ನು ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ’ ಎಂದು ಲೇವಡಿ ಮಾಡಿದ್ದಾರೆ ಎಂದು ಅಶೋಕ್ ಟೀಕಿಸಿದ್ದಾರೆ.

ರಾಯರೆಡ್ಡಿ ಹೇಳಿಕೆಗೆ ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಆರ್. ಅಶೋಕ್, ‘ಹಿಂದೂಗಳ ಮತ ಬೇಕಾದಾಗ ದೇವಸ್ಥಾನ ಸುತ್ತುವ ಸಿಎಂ ಶಿವಕುಮಾರ್, ಅಧಿಕಾರ ಸಿಕ್ಕ ಬಳಿಕ ತಮ್ಮದೇ ಸಂಪುಟದ ಸಚಿವರು ಹಿಂದೂ ಧರ್ಮದ ಬಗ್ಗೆ ಹೇಳಿಕೆ ನೀಡಿದಾಗ ಮೌನ ವಹಿಸುತ್ತಿರುವುದೇಕೆ’ ಎಂದು ಪ್ರಶ್ನಿಸಿದ್ದಾರೆ.

ಸಚಿವ ಬಸವರಾಜ ರಾಯರೆಡ್ಡಿ ಅವರು ‘ಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ಮಠಕ್ಕೆ ಹೋಗುವುದಿಲ್ಲ’ ಎಂದು ನೀಡಿರುವ ಹೇಳಿಕೆ ರಾಜ್ಯದ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ಧರ್ಮದ ಬಗ್ಗೆ ವೈಯಕ್ತಿಕ ನಂಬಿಕೆ ಇರಬಹುದಾದರೂ, ಸಚಿವ ಸ್ಥಾನದಲ್ಲಿದ್ದುಕೊಂಡು ಹಿಂದೂ ಸಂಪ್ರದಾಯ ಹಾಗೂ ಮಠ-ಮಾನ್ಯಗಳ ಬಗ್ಗೆ ಈ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ರಾಯರೆಡ್ಡಿ ಹೇಳಿಕೆಗಿಂತಲೂ ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೌನ ವಹಿಸಿರುವುದೇ ಹೆಚ್ಚು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅಶೋಕ್ ಅಭಿಪ್ರಾಯಪಟ್ಟಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಧೋರಣೆಯನ್ನು ತೋರಿಸುತ್ತದೆ ಎಂದೂ ಅವರು ಆರೋಪಿಸಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ ಅವರು ರಾಯರೆಡ್ಡಿ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಬೇಕು ಹಾಗೂ ಸಾರ್ವಜನಿಕ ಕ್ಷಮೆಯಾಚನೆ ಮಾಡಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ. ಇದಕ್ಕೆ ಸಚಿವರು ಸಿದ್ಧರಿಲ್ಲದಿದ್ದರೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಈ ಎರಡನ್ನೂ ಮಾಡದಿದ್ದರೆ ಮುಖ್ಯಮಂತ್ರಿಗಳ ಮೌನವೇ ಉತ್ತರವಾಗಲಿದೆ ಎಂದು ಅಶೋಕ್ ಹೇಳಿದ್ದಾರೆ.

‘ಸಾಲ ಕೊಡಿಸುತ್ತೇವೆ’ ಎಂದು ಕಾರಿಗೆ ಕರೆದೊಯ್ದು ಪತಿ ಹತ್ಯೆ: ತನಿಖೆಯಲ್ಲಿ ಬಯಲಾಯ್ತು ಪತ್ನಿಯ ಪ್ಲ್ಯಾನ್!

0

ದಾವಣಗೆರೆ: ಪತಿಯ ಕೊಲೆಗೆ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ₹2 ಲಕ್ಷ ಸುಪಾರಿ ನೀಡಿದ ಆರೋಪ ಪ್ರಕರಣ ಜಗಳೂರಿನಲ್ಲಿ ಬಯಲಾಗಿದೆ. ದೊಣೆಹಳ್ಳಿ ಹೊಸೂರು ಗ್ರಾಮದ ಬಸವರಾಜ್ (37) ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಂಚಿನ ಹಿಂದಿನ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.

ಬಸವರಾಜ್ ಪತ್ನಿ ಸುನೀತಾ ಹಾಗೂ ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಈ ವಿಚಾರ ಬಸವರಾಜ್‌ಗೆ ತಿಳಿದ ಬಳಿಕ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದರಿಂದ ಬಸವರಾಜ್‌ನನ್ನು ಹತ್ಯೆ ಮಾಡಲು ಇಬ್ಬರೂ ಸೇರಿ ಹಂತಕರಿಗೆ ₹2 ಲಕ್ಷ ಸುಪಾರಿ ನೀಡಿದ್ದರು ಎನ್ನಲಾಗಿದೆ. ಸಾಲ ಕೊಡಿಸುವುದಾಗಿ ನಂಬಿಸಿ ಬಸವರಾಜ್‌ನನ್ನು ದೊಣೆಹಳ್ಳಿ ಕ್ರಾಸ್‌ನಿಂದ ಕಾರಿನಲ್ಲಿ ಕರೆದೊಯ್ದು ಬಳಿಕ ಹತ್ಯೆ ಮಾಡಲಾಗಿತ್ತು.

ಗಂಡ ನಾಪತ್ತೆಯಾಗಿದ್ದಾನೆ ಎಂದು ಸುನೀತಾ ದೂರು ನೀಡಿದ್ದರಿಂದ ಪ್ರಕರಣ ಆರಂಭದಲ್ಲಿ ನಾಪತ್ತೆ ಪ್ರಕರಣದಂತೆ ದಾಖಲಾಗಿತ್ತು. ಆದರೆ ತಾಂತ್ರಿಕ ಮಾಹಿತಿ ಹಾಗೂ ವಿಚಾರಣೆ ವೇಳೆ ಹತ್ಯೆಯ ಹಿಂದಿನ ಸಂಚು ಬಯಲಾಗಿದೆ.

ಕೃತ್ಯದಲ್ಲಿ ಭಾಗಿಯಾಗಿದ್ದ ಓಂಕಾರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಜಗಳೂರು ಪೊಲೀಸರು ಬಲೆ ಬೀಸಿದ್ದಾರೆ.

ಚಾಕಲೇಟ್ ಕದ್ದಿದ್ದಕ್ಕೆ ಬಾಲಕನ ಮೇಲೆ ಹಲ್ಲೆ: ಆರೋಪಿ ಬಂಧನ!

0

ವಿಜಯಪುರ: ಚಾಕಲೇಟ್ ಕದ್ದಿದ್ದಾನೆ ಎಂಬ ಆರೋಪಕ್ಕೆ ಬಾಲಕನಿಗೆ ಹಲ್ಲೆ ನಡೆಸಿದ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆಲಮೇಲ ತಾಲೂಕಿನ ಮಲಘಾಣ ಗ್ರಾಮದಲ್ಲಿ ನಡೆದ ಘಟನೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಮಲಘಾಣ ಗ್ರಾಮದ ಅಂಗಡಿಯೊಂದರಲ್ಲಿ ಚಾಕಲೇಟ್ ಕದ್ದಿದ್ದಾನೆ ಎಂದು ಆರೋಪಿಸಿ ಅಂಗಡಿ ಮಾಲೀಕ ಅಶೋಕ್ ಪತ್ತಾರ ಬಾಲಕನಿಗೆ ಥಳಿಸಿದ್ದಾನೆ ಎನ್ನಲಾಗಿದೆ.

ಬಾಲಕನ ಮೇಲೆ ಹಲ್ಲೆ ನಡೆಸಿದ ವಿಚಾರ ತಿಳಿದ ಬಳಿಕ ಆತನ ತಂದೆ ರೆಹಮಾನ್ ವಾಲೀಕಾರ್ ಅವರು ಆಲಮೇಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹಲ್ಲೆ ಆರೋಪ ಎದುರಿಸುತ್ತಿರುವ ಅಂಗಡಿ ಮಾಲೀಕ ಅಶೋಕ್ ಪತ್ತಾರನನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.