Home Blog

ಗದಗ ಮೀಡಿಯಾ ಕ್ರಿಕೆಟ್ ಲೀಗ್‌ಗೆ ಭರ್ಜರಿ ಚಾಲನೆ ; ನೈಟ್ ರೈಡರ್ಸ್, ರೂರಲ್ ಕಿಂಗ್ಸ್ ಜಯಭೇರಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಆಯೋಜಿಸಿರುವ ಗದಗ ಮೀಡಿಯಾ ಕ್ರಿಕೆಟ್‌ ಲೀಗ್‌ಗೆ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಸುರೇಶ ವಿ. ನಾಡಗೌಡರ ಟಾಸ್‌ ಮಾಡುವ ಮೂಲಕ ಚಾಲನೆ ನೀಡಿದರು. ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ನೈಟ್‌ ರೈಡರ್ಸ್‌ ತಂಡ ವಿನ್ನರ್ಸ್‌ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ವಿನ್ನರ್ಸ್‌ ತಂಡ ನಿಗದಿತ 10 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 76 ರನ್‌ ಗಳಿಸಿತು. ನಾಯಕ ಅನಿಲ ತೆಂಬದಮನಿ 35 ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ನೈಟ್‌ ರೈಡರ್ಸ್‌ ಪರ ಮಂಜು ಪತ್ತಾರ 3 ವಿಕೆಟ್‌ ಪಡೆದರೆ, ಸುರೇಶ ಕಡ್ಲಿಮಟ್ಟಿ, ಅರುಣಕುಮಾರ ಹಿರೇಮಠ ಹಾಗೂ ವಿಜಯ ಸೊರಟೂರ ತಲಾ ಒಂದು ವಿಕೆಟ್‌ ಪಡೆದರು.

77 ರನ್‌ಗಳ ಗುರಿ ಬೆನ್ನತ್ತಿದ ನೈಟ್‌ ರೈಡರ್ಸ್‌ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ನಾಯಕ ಸುರೇಶ ಕಡ್ಲಿಮಟ್ಟಿ 38, ಅರುಣಕುಮಾರ ಹಿರೇಮಠ 13 ಹಾಗೂ ಮಂಜು ಪತ್ತಾರ 12 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿನ್ನರ್ಸ್‌ ಪರ ಅನಿಲ ತೆಂಬದಮನಿ, ಪರಮೇಶ ಲಮಾಣಿ ಹಾಗೂ ಅಶೋಕ ಹೂಗಾರ ತಲಾ ಒಂದು ವಿಕೆಟ್‌ ಪಡೆದರು. 3 ವಿಕೆಟ್‌ ಹಾಗೂ 12 ರನ್‌ ಗಳಿಸಿದ ಮಂಜು ಪತ್ತಾರ ಆಲ್‌ರೌಂಡ್‌ ಪ್ರದರ್ಶನದೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆರ್‌ಸಿಬಿಗೆ ಶಾಕ್; ರೂರಲ್‌ ಕಿಂಗ್ಸ್‌ ಜಯಭೇರಿ

ಲೀಗ್‌ನ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರೂರಲ್‌ ಕಿಂಗ್ಸ್‌ ತಂಡ 7 ವಿಕೆಟ್‌ಗಳ ಅಂತರದಿಂದ ಜಯಗಳಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ ನಿಗದಿತ 10 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 89 ರನ್‌ ಗಳಿಸಿತು. ವಿನಾಯಕ ಚೌಡಾಪೂರ 31, ಫಿರೋಜ್ ಮೋಮಿನ್‌ 19 ಹಾಗೂ ರಾಘವೇಂದ್ರ ಕುಲಕರ್ಣಿ 13 ರನ್‌ ಗಳಿಸಿದರು. ರೂರಲ್‌ ಕಿಂಗ್ಸ್‌ ಪರ ಶಿವಾನಂದ ಹಿರೇಮಠ 4, ನಿಂಗನಗೌಡ ಹನಮಗೌಡ್ರ ಹಾಗೂ ಸಂಜೀವ್‌ ಪಾಂಡ್ರೆ ತಲಾ ಒಂದು ವಿಕೆಟ್‌ ಪಡೆದರು.

90 ರನ್‌ಗಳ ಗುರಿ ಬೆನ್ನತ್ತಿದ ರೂರಲ್‌ ಕಿಂಗ್ಸ್‌ 7 ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಶಿವಾನಂದ ಹಿರೇಮಠ 37 ಹಾಗೂ ನಿಂಗನಗೌಡ ಹನಮಗೌಡ್ರ 18 ರನ್‌ ಗಳಿಸಿದರು. ಆರ್‌ಸಿಬಿ ಪರ ಗಿರೀಶ ಕಮ್ಮಾರ, ಶಿವಕುಮಾರ ಕುಷ್ಟಗಿ ಹಾಗೂ ಫಿರೋಜ್‌ ಮೋಮಿನ್‌ ತಲಾ ಒಂದು ವಿಕೆಟ್‌ ಪಡೆದರು. 4 ವಿಕೆಟ್‌ ಹಾಗೂ 37 ರನ್‌ ಗಳಿಸಿದ ಶಿವಾನಂದ ಹಿರೇಮಠ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದಕ್ಕೂ ಮುನ್ನ ಗದಗ ಮೀಡಿಯಾ ಕ್ರಿಕೆಟ್‌ ಲೀಗ್‌ಗೆ ಚಾಲನೆ ನೀಡಿ ಮಾತನಾಡಿದ ಆರ್‌ಡಿಪಿಆರ್‌ ವಿವಿ ಕುಲಪತಿ ಸುರೇಶ ವಿ. ನಾಡಗೌಡರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಂತೆಯೇ ಪತ್ರಿಕಾರಂಗಕ್ಕೂ ಮಹತ್ವದ ಸ್ಥಾನವಿದೆ. ಸಮಾಜದ ಹಲವು ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪತ್ರಿಕೋದ್ಯಮ ಅಪಾರ ಕೊಡುಗೆ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಮಾರುತಿ ಜೋಗದಂಡಕರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಣಿ ಸದಸ್ಯ ಅರುಣಕುಮಾರ ಹಿರೇಮಠ, ವಿನ್ನರ್ಸ್‌ ತಂಡದ ಮಾಲೀಕರಾದ ಅನಂತ ಕಾರ್ಕಳ, ಸುನೀಲ್ ತೆಂಬದಮನಿ, ಟಿ.ಎನ್. ಭಾಂಡಗೆ, ರೂರಲ್‌ ಕಿಂಗ್ಸ್‌ನ ಜಗದೀಶ ಪೂಜಾರ, ಆರ್‌ಸಿಬಿಯ ಅಜಿತ ಹೊಂಬಾಳಿ, ನೈಟ್‌ ರೈಡರ್ಸ್‌ ತಂಡದ ಎಚ್.ಎಂ. ಶರೀಫನವರ, ಆನಂದ ಸಾಲಿಗ್ರಾಮ, ಆನಂದಯ್ಯ ವಿರಕ್ತಮಠ ಸೇರಿದಂತೆ ಕಾನಿಪ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

ಪತ್ರಕರ್ತ ಶಿವಕುಮಾರ ಕುಷ್ಟಗಿ ಕಾರ್ಯಕ್ರಮ ನಿರೂಪಿಸಿದರು.

“ಪತ್ರಕರ್ತರಲ್ಲಿ ವೃತ್ತಿಬದ್ಧತೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ, ವಿಚಾರ ಸಂಕಿರಣದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪತ್ರಿಕೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಯಿಂದ ಅಗತ್ಯ ನೆರವು ನೀಡಲಾಗುವುದು.”

— ಸುರೇಶ ವಿ. ನಾಡಗೌಡರ, ಕುಲಪತಿ, ಆರ್‌ಡಿಪಿಆರ್‌ ವಿಶ್ವವಿದ್ಯಾಲಯ

ದ್ಯಾಮವ್ವನಕಟ್ಟಿಯ 206 ವರ್ಷಗಳ ದೈವೀ ಇತಿಹಾಸ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಒಕ್ಕಲಗೇರಿ ಓಣಿಯ ಶ್ರೀ ದ್ಯಾಮವ್ವನಕಟ್ಟಿ ಗ್ರಾಮದೇವತೆಯ ಕ್ಷೇತ್ರಕ್ಕೆ ಸುಮಾರು ಎರಡು ಶತಮಾನಗಳ ಇತಿಹಾಸವಿದೆ. ಪುಟ್ಟ ಮಣ್ಣಿನ ಗುಡಿಯಿಂದ ಆರಂಭಗೊಂಡ ಈ ಕ್ಷೇತ್ರ ಇಂದು ಸಾವಿರಾರು ಭಕ್ತರ ಆರಾಧನಾ ಕೇಂದ್ರವಾಗಿದೆ. ಇಲ್ಲಿನ ಜಗಲಿಕಟ್ಟಿ ಮೇಲಿರುವ ಐದು ಅಡಿ ಎತ್ತರದ ಬೃಹತ್ ರಥದ ಕಳಸವು 206 ವರ್ಷಗಳ ಹಿಂದಿನ ಇತಿಹಾಸಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿದೆ.

ಗದಗದ ಗ್ರಾಮದೇವತೆಗಳ ಹರಿಜಾತ್ರೆ ಕೇವಲ ಧಾರ್ಮಿಕ ಆಚರಣೆಯಲ್ಲ. ಇದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ನಂಬಿಕೆ, ಹರಕೆ, ಸಂಪ್ರದಾಯ ಮತ್ತು ಸಾಮಾಜಿಕ ಸಾಮರಸ್ಯದ ಪ್ರತೀಕ. 2026ರ ಹರಿಜಾತ್ರೋತ್ಸವ ಆಗಸ್ಟ್ 18ರಿಂದ 28ರವರೆಗೆ ನಡೆಯುತ್ತಿದ್ದು, ಗದಗ-ಬೆಟಗೇರಿ ನಗರವೇ ಜಗನ್ಮಾತೆಯ ಆರಾಧನೆಯಲ್ಲಿ ತೊಡಗಿದೆ.

ಆದಿಶಕ್ತಿಗೆ ನಿರ್ದಿಷ್ಟ ನಾಮರೂಪವಿಲ್ಲ ಎಂಬ ಆಧ್ಯಾತ್ಮಿಕ ಪರಿಕಲ್ಪನೆಯ ಪ್ರತಿರೂಪದಂತೆ ದ್ಯಾಮವ್ವನಕಟ್ಟಿ ಕಾಣುತ್ತದೆ. ಇಲ್ಲಿನ ಗರ್ಭಗುಡಿಯಲ್ಲಿ ಭವ್ಯ ಮೂರ್ತಿಯ ಬದಲಾಗಿ ಜಗಲಿಯ ಮೇಲಿರುವ ಗದ್ದುಗೆ ಹಾಗೂ ಅದರ ಮೇಲೆ ಗ್ರಾಮದೇವತೆಯ ಪಾದುಕೆಗಳೇ ಪ್ರಮುಖ ಆರಾಧನಾ ಸ್ವರೂಪ. ಭಕ್ತರ ಅನುಕೂಲಕ್ಕಾಗಿ ಆದಿಶಕ್ತಿಯ ಭಾವಚಿತ್ರವನ್ನು ಇರಿಸಲಾಗಿದ್ದರೂ, ಪಾದಗಟ್ಟಿಯೇ ಕ್ಷೇತ್ರದ ಮೂಲ ಆರಾಧನಾ ಕೇಂದ್ರವಾಗಿದೆ.

ಹಳೆಯ ಕೃತಪುರ ಗ್ರಾಮದಲ್ಲಿ ಗ್ರಾಮದೇವತೆಯರಿಗಾಗಿ ಇದ್ದ ಪುಟ್ಟ ಮಣ್ಣಿನ ಗುಡಿಯೇ ಮುಂದೆ ದ್ಯಾಮವ್ವನಕಟ್ಟಿಯಾಗಿ ಪ್ರಸಿದ್ಧಿಯಾಯಿತು. ಕಿಲ್ಲಾ ಓಣಿಯಿಂದ ಗ್ರಾಮದೇವತೆಗಳನ್ನು ತವರು ಮನೆಗೆ ಬರುವ ಹೆಣ್ಣುಮಕ್ಕಳಂತೆ ವಾದ್ಯಮೇಳದೊಂದಿಗೆ ಒಕ್ಕಲಗೇರಿಗೆ ಕರೆತರುವ ಸಂಪ್ರದಾಯವಿತ್ತು. ಇದೇ ಕಾರಣಕ್ಕೆ ದ್ಯಾಮವ್ವ-ದುರಗವ್ವ ಗ್ರಾಮದೇವತೆಗಳ ತವರುಮನೆ ಎಂಬ ಭಾವನೆ ಜನಮನದಲ್ಲಿ ಗಟ್ಟಿಯಾಯಿತು.

ಸುಮಾರು ಆರು-ಏಳು ದಶಕಗಳ ಹಿಂದೆ ಅಬ್ಬಿಗೇರಿ ಮನೆತನದ ಶ್ರೀ ಬಸಪ್ಪ ಕರಬಸಪ್ಪ ಅಬ್ಬಿಗೇರಿ ಅವರು ಪುಟ್ಟ ಮಣ್ಣಿನ ಗುಡಿಯನ್ನು ಬೃಹತ್ ದೇವಾಲಯವನ್ನಾಗಿ ನಿರ್ಮಿಸಲು ಮುಂದಾದರು. ಸಂಗಯ್ಯ ಗುಡ್ಡಿಮಠ, ವಿರುಪಾಕ್ಷಗೌಡ ಪೊಲೀಸ್‌ಪಾಟೀಲ, ನಾಗಯ್ಯ ಶಿವಪ್ಪಯ್ಯನಮಠ, ಯಲ್ಲಪ್ಪ ಗುಗ್ಗರಿ, ಶಿವಪ್ಪ ಮಾನ್ವಿ, ಫಕ್ಕೀರಪ್ಪ ಕಂಬಳಿ ಸೇರಿದಂತೆ ವಿವಿಧ ಸಮುದಾಯಗಳ ಅನೇಕರು ಕೈಜೋಡಿಸಿದರು. ಹೀಗಾಗಿ ದ್ಯಾಮವ್ವನಕಟ್ಟಿ ಸರ್ವರ ಭಕ್ತಿಯ ಕ್ಷೇತ್ರವಾಗಿ ಬೆಳೆಯಿತು.

ಈ ಕ್ಷೇತ್ರದ ಇತಿಹಾಸದಲ್ಲಿ 1820ರ ರಥದ ಕಳಸಕ್ಕೆ ವಿಶೇಷ ಸ್ಥಾನವಿದೆ. ಕಳಸದ ಮೇಲಿನ ಲಿಖಿತ ಉಲ್ಲೇಖದ ಪ್ರಕಾರ, ‘1820, ಆಗಸ್ಟ್ 3, ಮಾನ್ವಿಯವರು ಕೊಡಿಸಿದ್ದು, ಗ್ರಾಮದೇವತೆಯರ ರಥದ ಕಳಸ’ ಎಂಬ ದಾಖಲೆಯಿದೆ. ಆಗ 18 ಗಾಲಿಯ ಬೃಹತ್ ರಥದಲ್ಲಿ ಗ್ರಾಮದೇವತೆಗಳನ್ನು ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಸಲಾಗುತ್ತಿತ್ತು.

ಆದರೆ ಮೂರನೇ ವರ್ಷದ ರಥೋತ್ಸವದಲ್ಲಿ ಒಕ್ಕಲಗೇರಿಯ ದ್ಯಾಮವ್ವನ ಪಾದಗಟ್ಟಿಗೆ ಬಂದ ರಥ ಮುಂದೆ ಸಾಗಲಿಲ್ಲ ಎನ್ನುವುದು ಕ್ಷೇತ್ರದ ನಂಬಿಕೆ. ಎಷ್ಟೇ ಪ್ರಯತ್ನಿಸಿದರೂ ರಥ ಕದಲದ ಹಿನ್ನೆಲೆಯಲ್ಲಿ, ಪ್ರತಿವರ್ಷ ರಥೋತ್ಸವ ನಡೆಸುವ ಬದಲು 12 ವರ್ಷಕ್ಕೊಮ್ಮೆ ಹರಕೆ ತೀರಿಸುವ ಜಾತ್ರೆ ನಡೆಸಲು ದೈವದ ಜನರು ನಿರ್ಧರಿಸಿದರು. ರಥದ ಕಳಸವನ್ನು ದ್ಯಾಮವ್ವನ ಜಗಲಿಯ ಮೇಲಿನ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯವೂ ಅಂದಿನಿಂದ ಆರಂಭವಾಯಿತು. ಹೀಗೆ ‘ಹರಕೆ ಜಾತ್ರೆ’ ಮುಂದೆ ‘ಹರಿಜಾತ್ರೆ’ಯಾಗಿ ಪ್ರಸಿದ್ಧಿಯಾಯಿತು.

ಹರಿಜಾತ್ರೆಯಲ್ಲಿ ಗ್ರಾಮದೇವತೆಗಳ ಮೂರ್ತಿಗಳಿಗೆ ಬಣ್ಣ-ಅಲಂಕಾರ ಮಾಡಿ ತಡರಾತ್ರಿ ಕಿಲ್ಲಾ ಓಣಿಯಿಂದ ಒಕ್ಕಲಗೇರಿಗೆ ಕರೆತರಲಾಗುತ್ತದೆ. ಬೆಳಗಿನ ಜಾವ ಪ್ರತಿಷ್ಠಾಪಿಸಿ ಕಣ್ಣು ಬರೆಯುವ ವಿಶೇಷ ವಿಧಿ ನೆರವೇರಿಸಲಾಗುತ್ತದೆ. ಕನ್ನಡಿಯಲ್ಲಿ ಪ್ರತಿಬಿಂಬ ನೋಡುತ್ತಾ ಕಣ್ಣು ಬರೆಯುವುದು ಇಲ್ಲಿನ ಅಪರೂಪದ ಆಚರಣೆ.

ಒಂಬತ್ತು ದಿನಗಳ ಕಾಲ ಭಕ್ತರು ವಿವಿಧ ನಿಯಮಗಳನ್ನು ಪಾಲಿಸುತ್ತಾರೆ. ಉಡಿ ತುಂಬುವುದು, ಕಾಯಿ ಒಡೆಯುವುದು, ಭಂಡಾರ ಲೇಪಿಸುವುದು, ಮೆರವಣಿಗೆ ಸೇರಿದಂತೆ ಹಲವು ಧಾರ್ಮಿಕ ವಿಧಿಗಳು ನಡೆಯುತ್ತವೆ. ಈ ಜಾತ್ರೆ ಎಲ್ಲ ಜಾತಿ-ಧರ್ಮದವರಿಗೂ ಮುಕ್ತವಾಗಿದ್ದು, ಹರಕೆ ತೀರಿಸುವುದೇ ಇದರ ಮೂಲ ಆಶಯವಾಗಿದೆ.

2026ರ ಹರಿಜಾತ್ರೆಯ ಅಂಗವಾಗಿ ಆಗಸ್ಟ್ 18ರಿಂದ ಉಡಿ ತುಂಬುವ ಕಾರ್ಯಕ್ರಮ ಆರಂಭಗೊಂಡಿದ್ದು, ಆಗಸ್ಟ್ 25ರಂದು ಊರ ದೇವರಿಗೆ ಉಡಿ ತುಂಬಿ ಕಾಯಿ ಒಡೆಯಲಾಗುತ್ತದೆ. ಆಗಸ್ಟ್ 26ರಂದು ಗ್ರಾಮದೇವತೆಗಳನ್ನು ಮೆರವಣಿಗೆಯಲ್ಲಿ ಕಿಲ್ಲಾ ಓಣಿಗೆ ಕಳಿಸಿಕೊಡಲಾಗುತ್ತದೆ. 27ರಂದು ಸೇವೆ ಸಲ್ಲಿಸಿದ ಭಕ್ತರು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಗುತ್ತದೆ. 28ರಂದು ರುದ್ರಾಭಿಷೇಕ, ಹೋಮ-ಹವನ ಹಾಗೂ ಮಹಾಪ್ರಸಾದ ನಡೆಯಲಿದೆ.

— ಜಿ.ಬಿ. ಹಾವಣಗಿ, ಶಿಕ್ಷಕರು

ಅರ್ಥಪೂರ್ಣವಾಗಿ ನಾರಾಯಣ ಗುರು ಜಯಂತಿ ಆಚರಿಸಿ: ಡಾ. ದುರಗೇಶ್

0

ವಿಜಯಸಾಕ್ಷಿ ಸುದ್ದಿ, ಗದಗ: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆ.28ರಂದು ಅರ್ಥಪೂರ್ಣವಾಗಿ, ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಿಸಿ ಗಣ್ಯರು ಹಾಗೂ ಸಾರ್ವಜನಿಕರಿಗೆ ವಿತರಿಸಬೇಕು. ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯಿತಿಗಳು ಹಾಗೂ ತಾಲೂಕು ಮಟ್ಟದಲ್ಲಿಯೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರತಿಭಾವಂತರು, ಸಾಧಕರಿಗೆ ಸನ್ಮಾನ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳು, ಪದವಿ ಹಂತದಲ್ಲಿ ಚಿನ್ನದ ಪದಕ ಪಡೆದವರು, ಕ್ರೀಡಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಮಾಜದ ಹಿರಿಯರನ್ನು ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ, ಚಿಂತನೆ ಹಾಗೂ ಸಾಮಾಜಿಕ ಕೊಡುಗೆಗಳ ಕುರಿತು ಆಳವಾದ ಅಧ್ಯಯನ ನಡೆಸಿದವರಿಂದ ವಿಶೇಷ ಉಪನ್ಯಾಸ ಆಯೋಜಿಸುವಂತೆ ತಿಳಿಸಿದರು.

ಕಾರ್ಯಕ್ರಮದ ವೇದಿಕೆ, ಊಟೋಪಹಾರ ಸೇರಿದಂತೆ ಅಗತ್ಯ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ಪುಸ್ತಕ ಬಿಡುಗಡೆ ಮಾಡುವ ಬಗ್ಗೆಯೂ ಚರ್ಚೆ ನಡೆಯಿತು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀಕ್ಷಕ ರಾಜಕುಮಾರ ಸೊಪಡ್ಲ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಗಣ್ಯರು ಹಾಗೂ ಹಿರಿಯರು ಉಪಸ್ಥಿತರಿದ್ದರು.

“ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಆದರ್ಶ ಹಾಗೂ ಸಾಮಾಜಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅರ್ಥಪೂರ್ಣವಾಗಿ ನಡೆಸಬೇಕು.”

— ಡಾ. ದುರಗೇಶ್ ಕೆ.ಆರ್., ಅಪರ ಜಿಲ್ಲಾಧಿಕಾರಿ

ಕಾಡುಹಂದಿಗಳ ಹಾವಳಿ: ಮೆಕ್ಕೆಜೋಳ ಬೆಳೆ ನಾಶ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಬೆಣಕಲ್ಲು ಗ್ರಾಮದಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ರೈತರ ಮೆಕ್ಕೆಜೋಳ ಬೆಳೆಗಳಿಗೆ ಹಾನಿಯಾಗಿದೆ.

ಗ್ರಾಮದ ರೈತ ಟಿ. ಮೇಘರಾಜ ಅವರು 2.50 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ಕಾಡುಹಂದಿಗಳು ಹಾಳು ಮಾಡಿವೆ. ತೆನೆ ಬರುವ ಹಂತದಲ್ಲಿದ್ದ ಬೆಳೆಯ ಬಹುತೇಕ ಭಾಗ ನಾಶವಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ 15–20 ದಿನಗಳಿಂದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದೆ. ಹಗಲು-ರಾತ್ರಿ ಹೊಲ ಕಾಯುತ್ತಿದ್ದರೂ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ನಾಶವಾಗುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗಾಗಲೇ ಬರಗಾಲದ ಹೊಡೆತದಿಂದ ತತ್ತರಿಸಿರುವ ರೈತರಿಗೆ ಕಾಡುಹಂದಿಗಳ ಹಾವಳಿ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳು ಕಾಡುಹಂದಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಂಡು, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ದ್ಯಾಮವ್ವ–ದುರ್ಗಮ್ಮ ಹರಿಜಾತ್ರೆ: ಆ.20ರಂದು ರಾತ್ರಿ ಡೊಳ್ಳಿನ ಪದ, ಜುಗಲಬಂದಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗ್ರಾಮದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ 12 ವರ್ಷಕ್ಕೊಮ್ಮೆ ನಡೆಯುವ ಹರಿಜಾತ್ರಾ ಮಹೋತ್ಸವದ ಅಂಗವಾಗಿ ಆ.20ರಂದು ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಗದುಗಿನ ಬ್ರಹ್ಮಮಠದ ಪೂಜ್ಯ ಜ. ಸದಾಶಿವಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸುವರು. ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಉಪಸ್ಥಿತರಿರುವರು.

ಸಾಮಾಜಿಕ ಕಾರ್ಯಕರ್ತ ಮಹೇಶ ದಾಸರ, ಗಣ್ಯ ವ್ಯಾಪಾರಸ್ಥ ಶರಣಪ್ಪ ಸಾಸನೂರ, ಯುವ ಧುರೀಣ ಸಂಗಮೇಶ ಕವಳಿಕಾಯಿ, ಉದ್ಯಮದಾರ ಸಾಗರ ಪವಾರ ಹಾಗೂ ಗಣ್ಯ ವ್ಯಾಪಾರಸ್ಥ ಪಕೀರಸಾ ಬಾಂಡಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ನಗರಸಭೆ ಸದಸ್ಯರಾದ ಶ್ವೇತಾ ದಂಡಿನ, ವಿಜಯಲಕ್ಷ್ಮಿ ದಿಂಡೂರ, ಗೂಳಪ್ಪ ಮುಷಿಗೇರಿ, ಪ್ರಕಾಶ ಅಂಗಡಿ, ಚಂದ್ರಶೇಖರ ತಡಸದ ಹಾಗೂ ಜಾತ್ರಾ ಕಮಿಟಿ ಕಾರ್ಯದರ್ಶಿ ಗಂಗಾಧರ ಮೇಲಗಿರಿ ಅತಿಥಿಗಳಾಗಿ ಉಪಸ್ಥಿತರಿರುವರು.

ಸಭೆಯ ಬಳಿಕ ರಾತ್ರಿ 8.30ಕ್ಕೆ ಡೋಣಿಯ ನಿಂಗಪ್ಪ ಗುಡ್ಡದ ಅವರಿಂದ ಡೊಳ್ಳಿನ ಪದ ಹಾಗೂ ರಾಮದುರ್ಗದ ತಂಡದಿಂದ ಜುಗಲಬಂದಿ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ದ್ಯಾಮವ್ವ–ದುರ್ಗಮ್ಮ ದೇವಿಯರ ಹರಿಜಾತ್ರೋತ್ಸವ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದನ್ನು ಖಂಡಿಸಿ ಹಾಗೂ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಯಿತು.

ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವ ಬಿ. ನಾಗೇಂದ್ರ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಿಗಮದ ಹಣ ಬೇನಾಮಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿಯೂ ಹಣ ವರ್ಗಾವಣೆಯ ಕುರಿತು ಉಲ್ಲೇಖವಾಗಿತ್ತು. ಬಿಜೆಪಿ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದ ತನಿಖೆ ಹಾಗೂ ಆರೋಪಗಳು ಇನ್ನೂ ಚರ್ಚೆಯಲ್ಲಿರುವಾಗಲೇ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಿಗಮದ ಹಣದ ಅಕ್ರಮದಲ್ಲಿ ಸಚಿವ ನಾಗೇಂದ್ರ ಅವರ ಪಾತ್ರದ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದರೂ, ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದು ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾದ ಹಣದ ಅಕ್ರಮದಿಂದ ಆ ಸಮಾಜಕ್ಕೆ ಅನ್ಯಾಯವಾಗಿದೆ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ಬಿಜೆಪಿ ಜನಪ್ರತಿನಿಧಿಗಳು ವಿಧಾನಮಂಡಲ ಅಧಿವೇಶನ ಸುಗಮವಾಗಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಭ್ರಷ್ಟಾಚಾರದ ಆರೋಪಗಳು ಸರ್ಕಾರವನ್ನು ಸುತ್ತುವರಿದಿದ್ದು, ಆಡಳಿತದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ರಾಜ್ಯದಲ್ಲಿ ‘ತುಘಲಕ್‌ ಸರ್ಕಾರ’ದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಎಲ್ಲ ವರ್ಗದ ಜನರನ್ನು ಸಮರ್ಪಕವಾಗಿ ತಲುಪುತ್ತಿಲ್ಲ. ಸರ್ಕಾರ ಒಂದು ಕೋಮಿನ ಓಲೈಕೆಗೆ ಆದ್ಯತೆ ನೀಡುತ್ತಿದೆ ಎಂಬ ಆರೋಪವನ್ನೂ ಬಿಜೆಪಿ ಮುಖಂಡರು ಮಾಡಿದರು. ಕಾಂಗ್ರೆಸ್‌ ಸರ್ಕಾರದ ಆಡಳಿತದಿಂದ ಜನರು ಬೇಸರಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ರಾಘವೇಂದ್ರ ಯಳವತ್ತಿ, ವಿನಾಯಕ ಮಾನ್ವಿ, ವಿಜಯಕುಮಾರ ಗಡ್ಡಿ, ಸಿದ್ದಣ್ಣ ಪಲ್ಲೇದ, ಹೇಮಗಿರೀಶ ಹಾವಿನಾಳ, ಐ.ಎಸ್. ಪೂಜಾರ, ನಾಗರಾಜ ತಳವಾರ, ಅನಿಲ್ ಅಬ್ಬಿಗೇರಿ, ನಿರ್ಮಲಾ ಕೊಳ್ಳಿ, ವಂದನಾ ವೆರ್ಣೇಕರ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

“ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾದ ಹಣದ ಅಕ್ರಮದಿಂದ ಆ ಸಮಾಜಕ್ಕೆ ಅನ್ಯಾಯವಾಗಿದೆ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ.”

— ರಾಜು ಕುರಡಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಯಿಯ ಪ್ರೀತಿಯಂತೆ ಸಿಕ್ಕ ಆತ್ಮೀಯತೆ: ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಎಚ್.ಕೆ. ಪಾಟೀಲ ಭಾವುಕ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಶಾಸಕ ಎಚ್.ಕೆ. ಪಾಟೀಲ ಅವರ ಜನ್ಮದಿನಾಚರಣೆಯನ್ನು ಆತ್ಮೀಯವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪರಮಾತ್ಮನ ಆಶೀರ್ವಾದ ಪಡೆದು ಮಾತನಾಡಿದ ಶಾಸಕ ಎಚ್.ಕೆ. ಪಾಟೀಲ ಅವರು, ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ದೊರೆತ ಆತ್ಮೀಯತೆಯನ್ನು ಸ್ಮರಿಸಿದರು.

ರಾಜಕಾರಣಿ ಹಾಗೂ ಸಚಿವನಾದ ಬಳಿಕ ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರು ಹಾಗೂ ಪ್ರಖ್ಯಾತ ವಕೀಲರ ಸಭೆ-ಸಮಾರಂಭಗಳಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಧೈರ್ಯವಾಗಿ ಮಾತನಾಡಿದ್ದೇನೆ. ಆದರೆ, ಇಂದು ಈ ಆಧ್ಯಾತ್ಮಿಕ ಸಭೆಯಲ್ಲಿ ಮಾತನಾಡಲು ನನಗೆ ಪದಗಳೇ ಸಿಗುತ್ತಿಲ್ಲ. ಇಲ್ಲಿ ತೋರಿದ ಪ್ರೀತಿ-ಮಮತೆ ನನ್ನ ತಾಯಿಯ ಪ್ರೀತಿಯನ್ನು ನೆನಪಿಸಿದೆ ಎಂದರು.

ದೀಪ ಬೆಳಗಿಸಿ, ಕೇಕ್ ಕತ್ತರಿಸಿ ತಮ್ಮ ಜನ್ಮದಿನ ಆಚರಿಸಿದ ರೀತಿಯು ತಾಯಿಯ ಪ್ರೀತಿಯನ್ನು ನೆನಪಿಸಿತು. ತಮ್ಮ ತಾಯಿ ಮಾಡುತ್ತಿದ್ದ ಆಚರಣೆಗಳನ್ನು ಇಲ್ಲಿನ ಸಹೋದರಿಯರು ಮುಂದುವರಿಸಿಕೊಂಡು ಹೋಗುತ್ತಿರುವಂತೆ ಭಾಸವಾಯಿತು. ಪ್ರತಿವರ್ಷವೂ ಈ ಪವಿತ್ರ ಸ್ಥಳಕ್ಕೆ ಆಗಮಿಸಿ ಎಲ್ಲರ ಆಶೀರ್ವಾದ ಪಡೆಯಲು ಬಯಸುವುದಾಗಿ ಅವರು ಹೇಳಿದರು.

ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ. ಜಯಂತಿ ಅಕ್ಕ ಅವರು ಸ್ವಾಗತಿಸಿ ಅಭಿನಂದಿಸಿದರು. ಸ್ವಾತಂತ್ರ್ಯ ದಿನದ ಅಂಗವಾಗಿ ಆಂತರಿಕ ಸ್ವಾತಂತ್ರ್ಯದ ಮಹತ್ವದ ಕುರಿತು ಸಂದೇಶ ನೀಡಿದರು.

ನಂತರ ನೆರೆದಿದ್ದವರಿಗೆ ರಾಜಯೋಗ ಧ್ಯಾನದ ಅಭ್ಯಾಸ ಮಾಡಿಸಿ, ವ್ಯಸನಮುಕ್ತ ಜೀವನ ನಡೆಸುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿಯ ಡಾ. ಶ್ರೀಮತಿ ವಿದ್ಯಾ, ಡಾ. ವೇಮನ್ ಸಾವಕಾರ್, ಜಿಲ್ಲಾಸ್ಪತ್ರೆಯ ಡಾ. ಗಿರೀಶ್ ನಾಗರಾಳ, ಆಂಜನೇಯ ಕಟಗಿ, ವರದರಾಜ್ ಹೆಬ್ಸೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಿ.ಕೆ. ರೇಖಾ ವಂದಿಸಿದರು.

ಮಹಿಳಾ ಶಿಕ್ಷಣದಿಂದ ಕುಟುಂಬದ ಪ್ರಗತಿ ಸಾಧ್ಯ: ಶಂಕರ ಹಲಗತ್ತಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಶಿಕ್ಷಣ ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕಾಗಿದ್ದು, ಮಹಿಳಾ ಶಿಕ್ಷಣದಿಂದ ಕುಟುಂಬ, ಸಮಾಜ ಹಾಗೂ ದೇಶದ ಪ್ರಗತಿ ಸಾಧ್ಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ನಗರದ ಶ್ರೀಮತಿ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಹಾಗೂ ಸುಶೀಲ ಮುರಿಗೆಪ್ಪ ಶೇಷಗಿರಿ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ವತಿಯಿಂದ ಆಯೋಜಿಸಿದ್ದ ‘ಮಹಿಳೆ: ಶಿಕ್ಷಣ ಹಾಗೂ ಆರೋಗ್ಯ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಶಿಕ್ಷಿತ ತಾಯಿ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದರ ಜತೆಗೆ ಅವರ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಸೂಕ್ತ ಕಾಳಜಿ ವಹಿಸಬಲ್ಲಳು. ಒಬ್ಬ ಪುರುಷ ಶಿಕ್ಷಣ ಪಡೆದರೆ ಒಬ್ಬ ವ್ಯಕ್ತಿ ಕಲಿತಂತಾಗುತ್ತದೆ; ಆದರೆ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ” ಎಂದು ಶಂಕರ ಹಲಗತ್ತಿ ಹೇಳಿದರು.

ಕೇವಲ ಪದವಿ ಪಡೆಯುವುದೇ ಶಿಕ್ಷಣದ ಅಂತಿಮ ಗುರಿಯಲ್ಲ. ಶಿಕ್ಷಣವೆಂದರೆ ವ್ಯಕ್ತಿಯೊಳಗಿನ ಅರಿವಿನ ವಿಸ್ತರಣೆ ಹಾಗೂ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಬದುಕುವ ಕಲಿಕೆಯಾಗಬೇಕು. ಮಹಿಳಾ ಶಿಕ್ಷಣವು ಕುಟುಂಬದ ಅಭಿವೃದ್ಧಿಗೆ ಮಾತ್ರವಲ್ಲದೆ ಇಡೀ ಸಮಾಜದ ಪ್ರಗತಿಗೂ ಕಾರಣವಾಗುತ್ತದೆ ಎಂದರು.

ಪ್ರಸೂತಿ ಹಾಗೂ ಹೆರಿಗೆ ತಜ್ಞೆ ಡಾ. ಗೀತಾ ಭರತ್ ಉತ್ತೂರ ‘ಮಹಿಳೆ: ಶಿಕ್ಷಣ ಹಾಗೂ ಆರೋಗ್ಯ’ ವಿಷಯದ ಕುರಿತು ಉಪನ್ಯಾಸ ನೀಡಿ, ಕುಟುಂಬ ನಿರ್ವಹಣೆಯ ಒತ್ತಡದಲ್ಲಿ ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಆರೋಗ್ಯವಾಗಿದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

“ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು. ರಕ್ತಹೀನತೆ, ಖಿನ್ನತೆ, ಸುಸ್ತು, ಥೈರಾಯ್ಡ್ ಸಮಸ್ಯೆ ಹಾಗೂ ಋತುಚಕ್ರದ ಅಸಮತೆಯಂತಹ ಸಮಸ್ಯೆಗಳು ಕಂಡುಬಂದರೆ ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಸಮತೋಲನ ಆಹಾರ, ನಿಯಮಿತ ದೈಹಿಕ ಚಟುವಟಿಕೆ ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ” ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯ ಡಾ. ಜೆ.ಎಂ. ನಾಗಯ್ಯ ಹಾಗೂ ಆಡಳಿತಾಧಿಕಾರಿ ಎಸ್.ಕೆ. ಹೊಸಂಗಡಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯೆ ಪ್ರೊ. ರಾಜೇಶ್ವರಿ ಶೆಟ್ಟರ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅಶ್ವಿನಿ ಪಾಟೀಲ ಪರಿಚಯಿಸಿದರು. ಚೇತನ ಎಂ.ವ್ಹಿ. ನಿರೂಪಿಸಿದರು. ಡಾ. ದತ್ತಾ ಕಾಮಕರ ವಂದಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಉಪನ್ಯಾಸಕರು, ವಿಜಯಕುಮಾರ ಗಿಡ್ನವರ ದಂಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯುವಕರ ಭವಿಷ್ಯಕ್ಕೆ ಶರಣರ ತತ್ವಗಳು ದಾರಿದೀಪ: ಅನ್ನದಾನೀಶ್ವರ ಶ್ರೀ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: 12ನೇ ಶತಮಾನದ ಶಿವಶರಣರ ತತ್ವೋಪದೇಶಗಳು ಇಂದಿನ ಪೀಳಿಗೆಯ ಭವಿಷ್ಯ ರೂಪಿಸಲು ಸಹಕಾರಿಯಾಗಿದ್ದು, ಯುವಕರು ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.

ಲಕ್ಕುಂಡಿಯ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ ಶರಣರ ತತ್ವ ಚಿಂತನೆ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡಿ, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ನಿರ್ಮಾಣವಾಗುವ ಹಲವು ಸಿನಿಮಾಗಳು ಕೆಲವೇ ದಿನಗಳಲ್ಲಿ ಜನರ ನೆನಪಿನಿಂದ ಮರೆಯಾಗುತ್ತವೆ. ಆದರೆ 12ನೇ ಶತಮಾನದ ಶರಣರ ಜೀವನ ಚರಿತ್ರೆ, ಅವರು ನಡೆದ ದಾರಿ, ಮಾರ್ಗದರ್ಶನ, ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕತೆಯ ಕಥೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ ಎಂದರು.

12ನೇ ಶತಮಾನದ ಶರಣರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ, ಮಾರ್ಗದರ್ಶನ, ಅವರ ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕತೆಯ ಕಥೆಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಹೇಳಿದರು.

ನಿವೃತ್ತ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ, ಸನಾತನ ಧರ್ಮದ ಪ್ರತಿಯೊಂದು ಧಾರ್ಮಿಕ ಆಚರಣೆಗೂ ವೈಜ್ಞಾನಿಕ ಹಿನ್ನೆಲೆ ಇದೆ. ಶ್ರಾವಣ ಮಾಸದ ಆಚರಣೆಗೂ ವಿಶೇಷ ಅರ್ಥವಿದ್ದು, ಶರಣರ ತತ್ವ ಚಿಂತನೆಯ ಪ್ರವಚನದ ಮೂಲಕ ಅದರ ಮಹತ್ವವನ್ನು ತಿಳಿದುಕೊಳ್ಳಬಹುದು ಎಂದರು.

ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ನಜೀರಅಹ್ಮದ್ ಕಿರಿಟಗೇರಿ ಮಾತನಾಡಿ, ಇಂದಿನ ಯುವಕರು ಧಾರ್ಮಿಕ ಕಾರ್ಯಕ್ರಮಗಳಿಂದ ವಿಮುಖರಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದರು.

ಗದಗದ ಡಾ. ಗಿರಿಜಾ ಹಸಬಿ ಅವರು ಪ್ರವಚನ ಆರಂಭಿಸಿದರು. ಷಡಕ್ಷರಯ್ಯ ಬದ್ನಿಮಠ ಹಾಗೂ ವೀರಣ್ಣ ಕರಿಯಲ್ಲಪ್ಪನವರ ಸಂಗೀತ ಸೇವೆ ಸಲ್ಲಿಸಿದರು.

ಶಂಕ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ಗ್ರಾ.ಪಂ. ಮಾಜಿ ಸದಸ್ಯ ಬಸವರಾಜ ಯಲಿಶಿರುಂದ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ವೀರಯ್ಯ ಗಂಧದ, ನಿಂಗಪ್ಪ ಗುಂಜಳ, ಬಸಪ್ಪ ರೇವಡಿ, ಅಶೋಕ ಕಣವಿ, ಗಂಗಾಧರ ತಿಮ್ಮಾಪೂರ ಹಾಗೂ ಸೇವಾ ಸಮಿತಿ ಅಧ್ಯಕ್ಷ ಮುತ್ತಪ್ಪ ನೋಟಗಾರ ವೇದಿಕೆಯಲ್ಲಿದ್ದರು.

ಬಸವರಾಜ ಕಣವಿ ಸ್ವಾಗತಿಸಿದರು. ಅಮರೇಶ ಕರೆಕಲ್ಲ ನಿರೂಪಿಸಿದರು. ಶಿವಯೋಗಿ ಡಿಗ್ಗಾವಿ ವಂದಿಸಿದರು.

“ಶರಣರು ತಾವು ನುಡಿದಂತೆ ನಡೆದು ಈ ಸಮಾಜಕ್ಕೆ ಇಂದಿಗೂ ಮಾದರಿಯಾಗಿದ್ದಾರೆ. ಅವರ ತತ್ವ, ನೀತಿ ಹಾಗೂ ಸಂಸ್ಕಾರಗಳು ಯುವಕರಿಗೆ ಸ್ಪೂರ್ತಿದಾಯಕವಾಗಿವೆ. ಶ್ರಾವಣ ಮಾಸದಲ್ಲಿ ಶರಣರ ತತ್ವ ಚಿಂತನೆ ಹಾಗೂ ಉಪದೇಶಗಳನ್ನು ಶ್ರವಣ ಮಾಡಬೇಕು.”

— ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು

ಅಂಕಕ್ಕಿಂತ ಕಲಿಕೆಯೇ ಮುಖ್ಯ: ಸಾಧಕ ವಿದ್ಯಾರ್ಥಿಗಳಿಗೆ ‘ಈ ವಾರದ ತಾರೆಗಳು’ ಗೌರವ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಆನಂದ ಆಶ್ರಮ ರಸ್ತೆಯಲ್ಲಿರುವ ಪ್ರಕಲ್ಪ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 3ನೇ ಸಾಪ್ತಾಹಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ‘ಈ ವಾರದ ತಾರೆಗಳು’ ಎಂದು ಗುರುತಿಸಿ ಪ್ರೋತ್ಸಾಹಿಸಲಾಯಿತು.

ಅಂಕಗಳಿಗಿಂತ ಕಲಿಕೆಯೇ ಹೆಚ್ಚು ಮುಖ್ಯವಾಗಿದ್ದು, ವಿದ್ಯಾರ್ಥಿಗಳು ನಿರಂತರವಾಗಿ ತಮ್ಮ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳುವುದೇ ನಿಜವಾದ ಯಶಸ್ಸು ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಪರೀಕ್ಷೆಯ ಫಲಿತಾಂಶವನ್ನು ವಿದ್ಯಾರ್ಥಿಗಳ ಪ್ರಗತಿಯನ್ನು ಗುರುತಿಸುವ ಹಾಗೂ ಮುಂದಿನ ಸಾಧನೆಗೆ ಪ್ರೇರೇಪಿಸುವ ಸಾಧನವಾಗಿ ಬಳಸಲಾಯಿತು.

ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಶಿಕ್ಷಕರ ಮಾರ್ಗದರ್ಶನ ಹಾಗೂ ಪ್ರೋತ್ಸಾಹವೂ ಪ್ರಮುಖ ಪಾತ್ರ ವಹಿಸಿತು. ಮುಕ್ತಾ ಭಜಂತ್ರಿ, ಪುಷ್ಪಾ ಮೇಗೇರಿ, ನಜಿಯಾ ಎನ್.ಎ. ಅಲಡ್ಕಟ್ಟಿ, ಪರ್ವೀನ್ ಉಕ್ಕಳ್ಳಿ, ಹೀನಾ, ಸುರೇಖಾ, ಶೋಭಾ, ತೇಜಶ್ವಿನಿ ಹಾಗೂ ಅನುಪಮಾ ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ವಿದ್ಯಾರ್ಥಿಗಳು ತಮ್ಮ ಫಲಿತಾಂಶದಿಂದ ಆತ್ಮವಿಶ್ವಾಸ ಪಡೆದು ಮುಂದಿನ ಪರೀಕ್ಷೆಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ಶಿಕ್ಷಕರು ಹುರಿದುಂಬಿಸಿದರು.