Home Blog

ಅಮೆರಿಕದ ಉತ್ತಮ ಮಾದರಿಗಳು ಭಾರತದಲ್ಲೂ ಜಾರಿಯಾಗಲಿ: ಡಿ.ಆರ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ವಿದೇಶ ಪ್ರವಾಸ ಕೇವಲ ಪ್ರವಾಸೋದ್ಯಮಕ್ಕೆ ಸೀಮಿತವಾಗದೆ, ಅಲ್ಲಿನ ಉತ್ತಮ ಆಡಳಿತ, ಶಿಸ್ತು, ತಂತ್ರಜ್ಞಾನ ಹಾಗೂ ನಾಗರಿಕ ವ್ಯವಸ್ಥೆಗಳನ್ನು ಅಧ್ಯಯನ ಮಾಡಿ ಸ್ವದೇಶದಲ್ಲಿ ಜಾರಿಗೊಳಿಸುವ ಪ್ರಯತ್ನಗಳು ನಡೆಯಬೇಕು ಎಂದು ರಾಜ್ಯ ವಿಕೇಂದ್ರೀಕರಣ ಹಾಗೂ ಯೋಜನಾ ಮಂಡಳಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದಲ್ಲಿ ಆಯೋಜಿಸಿದ್ದ ಲೇಖಕಿ ವೀಣಾ ತಿರ್ಲಾಪೂರ ಅವರ ‘ಸೀಮೆಯಾಚೆಗೆ ಒಂದು ಅಮೆರಿಕಾ ಪಯಣ’ ಪ್ರವಾಸ ಕಥನ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

“ವಿದೇಶಗಳಲ್ಲಿ ಕಂಡ ಉತ್ತಮ ವ್ಯವಸ್ಥೆಗಳು, ತಂತ್ರಜ್ಞಾನ ಹಾಗೂ ಅಭಿವೃದ್ಧಿ ಮಾದರಿಗಳನ್ನು ನಮ್ಮ ದೇಶದಲ್ಲೂ ಅಳವಡಿಸಿಕೊಂಡರೆ ಸಮಾಜದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯುತ್ತದೆ ಎಂದು ಡಿ.ಆರ್. ಪಾಟೀಲ ಹೇಳಿದರು.

ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ವಿದೇಶಗಳಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಿ, ಅಲ್ಲಿನ ಉತ್ತಮ ಅಂಶಗಳನ್ನು ಇಲಾಖೆಗಳ ಮೂಲಕ ಜಾರಿಗೊಳಿಸುವ ವ್ಯವಸ್ಥೆ ಕಡ್ಡಾಯಗೊಳಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕೃತಿ ಪರಿಚಯ ಮಾಡಿದ ಪ್ರಾಧ್ಯಾಪಕ ರಾಮಚಂದ್ರ ಪಡೆಸೂರ ಮಾತನಾಡಿ, ಅಮೆರಿಕದ ವಿವಿಧ ಪ್ರದೇಶಗಳು, ಅಲ್ಲಿನ ಜೀವನ ಶೈಲಿ, ಮೂಲಸೌಕರ್ಯಗಳು, ರಸ್ತೆ ವ್ಯವಸ್ಥೆ ಹಾಗೂ ನಾಗರಿಕ ಶಿಸ್ತು ಕುರಿತ ಸಮಗ್ರ ಚಿತ್ರಣವನ್ನು ಕೃತಿ ಒಳಗೊಂಡಿದೆ ಎಂದು ಹೇಳಿದರು.

“ಪ್ರವಾಸ ಕಥನವು ಕೇವಲ ಪ್ರವಾಸದ ಅನುಭವಗಳ ಸಂಕಲನವಲ್ಲ; ಅದು ಓದುಗರನ್ನು ಹೊಸ ಜಗತ್ತಿನತ್ತ ಕರೆದೊಯ್ಯುವ ಕಿಟಕಿಯಾಗಿದೆ” ಎಂದು ಅಭಿಪ್ರಾಯಪಟ್ಟರು.

ಲೇಖಕಿ ವೀಣಾ ತಿರ್ಲಾಪೂರ ಮಾತನಾಡಿ, ಅಮೆರಿಕದ ಜನರ ಪರಿಸರ ಕಾಳಜಿ ಮತ್ತು ಜೀವ ಸಂಕುಲದ ಮೇಲಿನ ಪ್ರೀತಿ ತಮ್ಮನ್ನು ಹೆಚ್ಚು ಆಕರ್ಷಿಸಿತು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪ್ರವಾಸ ಕಥನ ಸಾಹಿತ್ಯ ಪ್ರಕಾರದಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದು, ಲೇಖಕಿ ತಮ್ಮ ಅನುಭವಗಳನ್ನು ಅಕ್ಷರ ರೂಪದಲ್ಲಿ ದಾಖಲಿಸುವ ಮೂಲಕ ಓದುಗರಿಗೆ ಹೊಸ ಅನುಭವವನ್ನು ನೀಡಿದ್ದಾರೆ ಎಂದು ಶ್ಲಾಘಿಸಿದರು.

ಅಲ್ಲಿನ ನಾಗರಿಕ ಶಿಸ್ತು, ನಿಯಮ ಪಾಲನೆ ಹಾಗೂ ಪರಿಸರ ಕಾಳಜಿಯನ್ನು ಅಳವಡಿಸಿಕೊಂಡು ಭಾರತವನ್ನು ಇನ್ನಷ್ಟು ಸುಂದರ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಮೂಲಿಮನಿ ಮಾತನಾಡಿದರು. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಕುಂಬಾರ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಗಣ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು.

“ಪ್ರಾಣಿ, ಪಕ್ಷಿ ಸೇರಿದಂತೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಎಂಬ ಮೌಲ್ಯವನ್ನು ಅಮೆರಿಕದ ಜನರು ಆಚರಣೆಯಲ್ಲಿ ಪಾಲಿಸುತ್ತಿದ್ದಾರೆ. ಪರಿಸರದ ಮೇಲಿನ ಅವರ ಬದ್ಧತೆ ಮಾದರಿಯಾಗಿದೆ.”

ವೀಣಾ ತಿರ್ಲಾಪೂರ, ಲೇಖಕಿ

ಶಂಕರ ಭಾರತಿ ಮಠದಲ್ಲಿ ಭಕ್ತಿ ಸಾಗರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಧಿಕ ಮಾಸದ ಅಂಗವಾಗಿ ಪಟ್ಟಣದ ಶಂಕರ ಭಾರತಿ ಮಠದಲ್ಲಿ ವಿಪ್ರ ಮಹಿಳಾ ಸಮಾಜದ ವತಿಯಿಂದ ಆಯೋಜಿಸಲಾದ ವಿಶೇಷ ಧಾರ್ಮಿಕ ಹಾಗೂ ಭಜನಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಅಧಿಕ ಮಾಸದ ಅವಧಿಯಲ್ಲಿ ವಿಷ್ಣು ಸಹಸ್ರನಾಮ ಪಠಣ, ಗೌರಿ ಪೂಜೆ, ಶಾರದಾ ಭಜನಾ ಮಂಡಳಿಯಿಂದ ನಿತ್ಯ ವಿಶೇಷ ಭಜನೆ ಹಾಗೂ ಕೋಲಾಟ ಕಾರ್ಯಕ್ರಮಗಳು ನಡೆದವು. ಮಾಸದ ಕೊನೆಯ ದಿನವಾದ ಭಾನುವಾರ ನಡೆದ ಮಂಗಲೋತ್ಸವದಲ್ಲಿ ವಿಪ್ರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿಗೀತೆಗಳು, ದಾಸರ ಪದಗಳು ಹಾಗೂ ದೇವರ ನಾಮಸ್ಮರಣೆಯ ಮೂಲಕ ಭಜನೆ ನಡೆಸಿದರು.

ಈ ವೇಳೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸಮಸ್ತ ಜನರ ಸುಖ-ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಪ್ರ ಸಮಾಜದ ಅಧ್ಯಕ್ಷ ಗೋಪಾಲ ಫಡ್ನಿಸ್ ಹಾಗೂ ಸೋಮೇಶ್ವರ ಭಕ್ತರ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಹಿಂದೂ ಧರ್ಮದಲ್ಲಿ ಅಧಿಕ ಮಾಸಕ್ಕೆ ವಿಶೇಷ ಮಹತ್ವವಿದ್ದು, ಈ ಮಾಸದ ಅಧಿಪತಿ ಶ್ರೀಮನ್ನಾರಾಯಣನಾಗಿದ್ದಾನೆ. ಈ ಅವಧಿಯಲ್ಲಿ ವಿಷ್ಣು ಸಹಸ್ರನಾಮ ಪಠಣ, ಜಪ-ತಪ, ಪೂಜೆ ಹಾಗೂ ದಾನಧರ್ಮಗಳನ್ನು ಆಚರಿಸುವುದರಿಂದ ಆತ್ಮಿಕ ಶಾಂತಿ ಮತ್ತು ಪುಣ್ಯ ಲಭಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸೀಮಂತಿನಿ ಕುಲಕರ್ಣಿ, ಶುಭಾ ಕುಲಕರ್ಣಿ, ಮೇಘಾ ಸಾಹುಕಾರ, ಸಾವಿತ್ರಿ ದೇಶಪಾಂಡೆ, ಲೀಲಾ ಕುಲಕರ್ಣಿ, ಮೀನಾಕ್ಷಿ ಸರದೇಶಪಾಂಡೆ, ಜಯಶ್ರೀ ಪಾಟೀಲ ಕುಲಕರ್ಣಿ, ರಾಧಿಕಾ ಕುಲಕರ್ಣಿ, ರಮಾ ರಾಯಚೂರ, ಜಯಮ್ಮ ಪಾಟೀಲ, ವೀಣಾ ಫಡ್ನಿಸ್, ಚೇತನಾ ಪೂಜಾರ ಸೇರಿದಂತೆ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

“ಅಧಿಕ ಮಾಸವು ಆತ್ಮಶುದ್ಧಿ, ಭಕ್ತಿ ಮತ್ತು ದಾನಧರ್ಮಗಳಿಗೆ ಮೀಸಲಾದ ಪವಿತ್ರ ಕಾಲ. ಈ ಅವಧಿಯಲ್ಲಿ ದೇವರ ನಾಮಸ್ಮರಣೆ ಮಾಡಿದರೆ ಜೀವನದಲ್ಲಿ ನೆಮ್ಮದಿ ಮತ್ತು ಸಾರ್ಥಕತೆ ದೊರೆಯುತ್ತದೆ.”

ಗುರುರಾಜ ಪಾಟೀಲ ಕುಲಕರ್ಣಿ

ಅಧ್ಯಕ್ಷರು, ಸೋಮೇಶ್ವರ ಭಕ್ತರ ಕಮಿಟಿ

ಮಾನ್ವಿ ಕಾಲೇಜಿಗೆ ರನ್ನರ್‌ಅಪ್ ಗೌರವ

0

ವಿಜಯಸಾಕ್ಷಿ ಸುದ್ದಿ, ಗದಗ: ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 12ನೇ ರಾಜ್ಯ ಮಟ್ಟದ ಕನ್ನಡ ಅಣಕು ನ್ಯಾಯಾಲಯ (ಮೂಟ್ ಕೋರ್ಟ್) ಸ್ಪರ್ಧೆಯಲ್ಲಿ ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಕಾಲೇಜು ರನ್ನರ್‌ಅಪ್ ಸ್ಥಾನ ಪಡೆದು ಗಮನ ಸೆಳೆದಿದೆ.

ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದು, ಜೊತೆಗೆ ಅತ್ಯುತ್ತಮ ವಾದ ಪತ್ರ (ಬೆಸ್ಟ್ ಮೆಮೋರಿಯಲ್) ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಶಿವಶಂಕರ್, ರಂಜಿತಾ ಜಿ. ಹಾಗೂ ಅರುಣ್ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರು, ನಿರ್ದೇಶಕರು, ಸ್ಥಳೀಯ ಆಡಳಿತ ಮಂಡಳಿ ಹಾಗೂ ಕಾಲೇಜಿನ ಬೋಧಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಮತ್ತು ಕಾನೂನು ಶಿಕ್ಷಣ ಕ್ಷೇತ್ರದಲ್ಲಿನ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಜೀವ್ ಎಂ. ಹುಲ್ಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕೆ ಒತ್ತಾಯ: ತುಮಕೂರು–ಬೆಂಗಳೂರು ಬೃಹತ್ ಪಾದಯಾತ್ರೆ ಆರಂಭ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ರೋಣ ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಅವರ ಅಭಿಮಾನಿ ಬಳಗದ ವತಿಯಿಂದ ತುಮಕೂರಿನಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ತುಮಕೂರಿನ ಸಿದ್ಧಗಂಗಾ ಮಠದಿಂದ ಮಂಗಳವಾರ ಆರಂಭವಾಗಲಿರುವ ಪಾದಯಾತ್ರೆಯು ಎರಡು ದಿನಗಳ ಕಾಲ ನಡೆಯಲಿದ್ದು, ಜೂನ್ 17 ಮತ್ತು 18ರಂದು ನೂರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಹೈ ಕಮಾಂಡ್‌ನ ಗಮನ ಸೆಳೆದು ಜಿ.ಎಸ್. ಪಾಟೀಲ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂಬುದು ಪಾದಯಾತ್ರೆಯ ಪ್ರಮುಖ ಉದ್ದೇಶವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ, ಗದಗ ಜಿಲ್ಲೆಯ ಅಭಿವೃದ್ಧಿಗೆ ಜಿ.ಎಸ್. ಪಾಟೀಲ ಅವರ ಕೊಡುಗೆ ಅಪಾರವಾಗಿದೆ. ಜನಪರ ಕಾಳಜಿ ಹಾಗೂ ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಅವರಿಗೆ ಸಚಿವ ಸ್ಥಾನ ನೀಡುವುದು ರಾಜ್ಯದ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಹೇಳಿದರು.

ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಸಿದ್ಧಗಂಗಾ ಮಠದ ಶಿವಕುಮಾರ್ ಶ್ರೀಗಳ ಗದ್ದುಗೆಯ ಆಶೀರ್ವಾದ ಪಡೆದು ಪಾದಯಾತ್ರೆ ಆರಂಭವಾಗಲಿದೆ.

ಪಾದಯಾತ್ರೆಯು ಫ್ರೀಡಂ ಪಾರ್ಕ್ ನಲ್ಲಿ ಸಮಾರೋಪಗೊಳ್ಳಲಿದ್ದು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸೇರಿದಂತೆ ಕಾಂಗ್ರೆಸ್ ಹೈ ಕಮಾಂಡ್‌ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕದ ಆಶಯಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

“ಗದಗ ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವುದು ಜನರ ಆಶಯವಾಗಿದೆ. ಈ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷದ ಹೈ ಕಮಾಂಡ್‌ ಗಮನಕ್ಕೆ ತರಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.”

ಯಲ್ಲಪ್ಪ ಎಚ್. ಬಾಬರಿ
ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷರು

ಸಾವಯವ ಕೃಷಿಯತ್ತ ತಿರುಗದಿದ್ದರೆ ಭೂಮಿ ಬರಡಾಗುತ್ತದೆ: ಸದಾನಂದಗೌಡ ಎಚ್ಚರಿಕೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಕೃಷಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡು ಬರಡಾಗುತ್ತಿದೆ. ರೈತರು ಸಾವಯವ ಕೃಷಿಯತ್ತ ಹೆಚ್ಚು ಒಲವು ತೋರಿಸಿ, ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಕರೆ ನೀಡಿದರು.

ತಾಲೂಕಿನ ಕಡಕೋಳ ಗ್ರಾಮದ ದೇವರಡ್ಡಿ ಅಗಸನಕೊಪ್ಪ ಕೃಷಿ ಆಶ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಯವ ಕೃಷಿ ಪದ್ಧತಿಯು ಮಣ್ಣಿನ ಆರೋಗ್ಯ ಸುಧಾರಿಸುವುದರ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ದೀರ್ಘಕಾಲಿಕ ಕೃಷಿ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಗೋಮಯ, ಕಾಂಪೋಸ್ಟ್, ಹಸಿರು ಗೊಬ್ಬರ ಸೇರಿದಂತೆ ವಿವಿಧ ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಮಾಲಿನ್ಯ ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾವಯವ ಕೃಷಿಯಿಂದ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚುವುದರೊಂದಿಗೆ ಸಾವಯವ ಕಾರ್ಬನ್ ಪ್ರಮಾಣವೂ ವೃದ್ಧಿಯಾಗುತ್ತದೆ. ಇದರಿಂದ ಉತ್ತಮ ಗುಣಮಟ್ಟದ ಉತ್ಪಾದನೆ, ಆರೋಗ್ಯಕರ ಆಹಾರ ಹಾಗೂ ದೀರ್ಘಾವಧಿಯಲ್ಲಿ ಕೃಷಿ ವೆಚ್ಚದ ಇಳಿಕೆಗೆ ಸಹ ನೆರವಾಗುತ್ತದೆ ಎಂದು ವಿವರಿಸಿದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಮಣ್ಣಿನಲ್ಲಿ ಶೇ.45ರಷ್ಟು ಖನಿಜಾಂಶ, ಶೇ.25ರಷ್ಟು ಗಾಳಿ, ಶೇ.25ರಷ್ಟು ನೀರು ಹಾಗೂ ಶೇ.5ರಷ್ಟು ಸಾವಯವ ಅಂಶಗಳಿದ್ದು, ಈ ಸಾವಯವ ಅಂಶಗಳೇ ಕೃಷಿಗೆ ಜೀವಾಳವಾಗಿವೆ ಎಂದರು.

ಭೂಮಿಯ ಮೇಲ್ಭಾಗದ ಒಂದು ಅಡಿ ಮಣ್ಣು ಮಾತ್ರ ಕೃಷಿಗೆ ಯೋಗ್ಯವಾಗಿದ್ದು, ಅದನ್ನು ಸಂರಕ್ಷಿಸುವುದು ರೈತರ ಜವಾಬ್ದಾರಿಯಾಗಿದೆ. ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ನಿರಂತರವಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡಿದರೆ ಮಣ್ಣಿನ ಆರೋಗ್ಯ ಹದಗೆಡುತ್ತದೆ. ಮಣ್ಣು ಪರೀಕ್ಷೆಯ ವರದಿಯನ್ನು ಆಧರಿಸಿ ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ಗೊಬ್ಬರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಕೃಷಿ ತ್ಯಾಜ್ಯ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಪಂಚಗವ್ಯ, ಜೀವಾಮೃತ, ಜೈವಿಕ ಗೊಬ್ಬರ ಹಾಗೂ ಬೆಳೆ ಹೊದಿಕೆಗಳ ಬಳಕೆಯೊಂದಿಗೆ ಸಮಗ್ರ ಪೋಷಕಾಂಶ ನಿರ್ವಹಣೆ ಅಳವಡಿಸಿಕೊಂಡರೆ ಮಾತ್ರ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಶಾಸಕ ಡಾ. ಚಂದ್ರು ಕೆ. ಲಮಾಣಿ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಅತಿಯಾದ ಅಥವಾ ತಪ್ಪಾದ ಬಳಕೆಯಿಂದ ಮಣ್ಣಿನಲ್ಲಿರುವ ಸೂಕ್ಷ್ಮ ಪೋಷಕಾಂಶಗಳ ಸಮತೋಲನ ಹಾಳಾಗುತ್ತದೆ. ಜೊತೆಗೆ ಉಪಯುಕ್ತ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಜೀವಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಇದರಿಂದ ಭೂಮಿಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, ಫಕ್ಕೀರೇಶ ರಟ್ಟಿಹಳ್ಳಿ, ಬಸವರಾಜ ನಾವಿ, ಸುನೀಲ ಮಹಾಂತಶೆಟ್ಟರ, ಡಿ.ವೈ. ಹುನಗುಂದ, ಶಿವಪ್ರಕಾಶ ಮಹಾಜನಶೆಟ್ಟರ, ದೇವರಡ್ಡಿ ಅಗಸನಕೊಪ್ಪ, ಸರೋಜಮ್ಮ ಅಗಸನಕೊಪ್ಪ, ಸುರೇಶ ಕುಂಬಾರ, ತಿಪ್ಪಣ್ಣ ಕೊಂಚಿಗೇರಿ, ಜಾನು ಲಮಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

“ರಾಸಾಯನಿಕ ಗೊಬ್ಬರದ ಅತಿಬಳಕೆಯಿಂದ ಮಣ್ಣಿನ ಆರೋಗ್ಯ ಹದಗೆಡುತ್ತಿದೆ. ರೈತರು ಸಾವಯವ ಕೃಷಿಯತ್ತ ಮುಖ ಮಾಡಿದರೆ ಮಾತ್ರ ಭೂಮಿಯ ಫಲವತ್ತತೆ ಉಳಿಯಲಿದೆ.”

ಡಿ.ವಿ. ಸದಾನಂದಗೌಡ

ಮಾಜಿ ಮುಖ್ಯಮಂತ್ರಿ

ಪ್ರೊ. ಬಿ. ಕೃಷ್ಣಪ್ಪ ಜನ್ಮದಿನ: ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್-ಪೆನ್ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಮುಖ ಅಸ್ತ್ರ ಎಂಬ ಸಂದೇಶದೊಂದಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ವತಿಯಿಂದ ತಾಲೂಕಿನ ಚಿಂತರಪಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.

ಪ್ರೊ. ಬಿ. ಕೃಷ್ಣಪ್ಪ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ, ಶಿಕ್ಷಣದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಹೆಗ್ಡಳ್ ಪರಶುರಾಮ್, ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪ ಅವರ ಜೀವನ ಸಾಧನೆ ಹಾಗೂ ಸಾಮಾಜಿಕ ಹೋರಾಟಗಳನ್ನು ಸ್ಮರಿಸಿದರು. ವರ್ಣಭೇದ, ಜಾತಿ ವ್ಯವಸ್ಥೆ ಹಾಗೂ ಮೂಢನಂಬಿಕೆಗಳ ವಿರುದ್ಧ ಅವರು ನಡೆಸಿದ ಹೋರಾಟಗಳು ಸಮಾಜಕ್ಕೆ ದಿಕ್ಕು ತೋರಿವೆ ಎಂದು ಹೇಳಿದರು.

ತಾಲೂಕು ಸಂಘಟನಾ ಸಂಚಾಲಕ ದಶಮಾಪುರ ಮರಿಯಪ್ಪ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಮತ್ತು ಅಭಿವೃದ್ಧಿ ಸಾಧ್ಯ. ಸರ್ಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ಒದಗಿಸುತ್ತಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಂತರಪಳ್ಳಿ ದೇವೇಂದ್ರಪ್ಪ ಮಾತನಾಡಿ, ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಮಕ್ಕಳಿಗೆ ಪುಸ್ತಕ-ಪೆನ್ನು ವಿತರಿಸುತ್ತಿರುವ ದಲಿತ ಸಂಘರ್ಷ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ಯಾರಂಟಿ ಅಧ್ಯಕ್ಷ ಸೊನ್ನದ ಗುರುಬಸವರಾಜ್ ಮಾತನಾಡಿ, ಮಕ್ಕಳ ಮನಸ್ಸು ಖಾಲಿ ಪುಸ್ತಕದಂತೆ ಇರುತ್ತದೆ. ಉತ್ತಮ ಶಿಕ್ಷಣ ಮತ್ತು ಸಂಸ್ಕಾರಗಳಿಂದ ತಮ್ಮ ಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಂಘಟನಾ ಸಂಚಾಲಕ ಪ್ರಭಾಕರ ಆನಂದಳ್ಳಿ ಮಾತನಾಡಿ, “ಶಿಕ್ಷಣ ಎನ್ನುವುದು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು” ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರವನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯಗುರು ಬಸವರಾಜ್, ಗ್ರಾಮಸ್ಥರಾದ ಹುಲುಗಪ್ಪ, ಸುರೇಶ ಬಣಕಾರ, ಅಂಜಿನಪ್ಪ, ಪ್ರಕಾಶ, ಮಂಜು, ಕೊಟ್ರೇಶ ತಳವಾರ, ಶಿಕ್ಷಕರಾದ ವಾಮದೇವಪ್ಪ, ಭಾರತಿ, ವಿರುಪಾಕ್ಷಿ, ರಾಘವೇಂದ್ರ ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.

“ಶಿಕ್ಷಣವೇ ಸಮಾಜದ ಏಳಿಗೆಗೆ ಮೂಲಭೂತ ಅಸ್ತ್ರ. ವಿದ್ಯಾರ್ಥಿಗಳು ದೊರೆಯುತ್ತಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.”

ದಶಮಾಪುರ ಮರಿಯಪ್ಪ

ತಾಲೂಕು ಸಂಘಟನಾ ಸಂಚಾಲಕ, ದಲಿತ ಸಂಘರ್ಷ ಸಮಿತಿ

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಎಚ್.ಕೆ. ಪಾಟೀಲರು ತ್ಯಾಗ ಮಾಡಲಿ: ಕಾಂಗ್ರೆಸ್ ಮುಖಂಡ ಈರಣ್ಣ ಶೆಟ್ಟರ್

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನದ ಹಂಚಿಕೆ ವಿಚಾರ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ರೋಣ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಸಚಿವ ಎಚ್.ಕೆ. ಪಾಟೀಲರು ತ್ಯಾಗದ ಮನೋಭಾವ ಪ್ರದರ್ಶಿಸಿ ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಮುಖಂಡ ಈರಣ್ಣ ಶೆಟ್ಟರ್ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆ ರಾಜ್ಯದಲ್ಲಿಯೇ ಶಿಸ್ತಿನ ಕಾಂಗ್ರೆಸ್ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಸೌಹಾರ್ದಯುತವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚಿನ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಗೆ ಸಂಬಂಧಿಸಿದ ಬೆಳವಣಿಗೆಗಳು ಜಿಲ್ಲೆಯ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿವೆ ಎಂದು ಹೇಳಿದರು.

ಎಚ್.ಕೆ. ಪಾಟೀಲರು ಈಗಾಗಲೇ ಸಚಿವರಾಗಿ ಕಾರ್ಯನಿರ್ವಹಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದರೆ, ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ನಿರಂತರವಾಗಿ ದುಡಿಯುತ್ತಿರುವ ಜಿ.ಎಸ್. ಪಾಟೀಲರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಪಕ್ಷದ ಬಲವರ್ಧನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಸತತ ಎಂಟು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿರಿಯ ನಾಯಕರಾಗಿದ್ದಾರೆ ಎಂದು ವಿವರಿಸಿದರು.

ಇಂತಹ ಅನುಭವೀ ನಾಯಕನಿಗೆ ಸಚಿವ ಸ್ಥಾನ ನೀಡುವುದರಿಂದ ಪಕ್ಷದ ಸಂಘಟನೆಗೆ ಹೊಸ ಶಕ್ತಿ ದೊರೆಯಲಿದೆ. ಅಲ್ಲದೆ, ಪಕ್ಷಕ್ಕಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ನಾಯಕರಿಗೆ ನ್ಯಾಯ ದೊರೆತಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಅಸಮಾಧಾನದ ವಾತಾವರಣ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಎಚ್.ಕೆ. ಪಾಟೀಲರು ದೊಡ್ಡ ಮನಸ್ಸು ಮಾಡಿ, ತಮ್ಮ ಸಹೋದ್ಯೋಗಿ ಜಿ.ಎಸ್. ಪಾಟೀಲರಿಗೆ ಅವಕಾಶ ಕಲ್ಪಿಸಬೇಕು. ಇದರಿಂದ ಹಿರಿಯ ನಾಯಕರಿಗೆ ಗೌರವ ದೊರೆಯುವುದರ ಜೊತೆಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮತ್ತಷ್ಟು ಬಲಗೊಳ್ಳಲಿದೆ ಎಂದು ಶೆಟ್ಟರ್ ಹೇಳಿದರು.

“ನಾಲ್ಕು ದಶಕಗಳಿಂದ ಪಕ್ಷ ಕಟ್ಟಿದ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲಾ ಕಾಂಗ್ರೆಸ್ ಇನ್ನಷ್ಟು ಬಲಿಷ್ಠವಾಗಲಿದೆ. ಪಕ್ಷದ ಹಿತದೃಷ್ಟಿಯಿಂದ ಎಚ್.ಕೆ. ಪಾಟೀಲರು ದೊಡ್ಡ ಮನಸ್ಸು ಮಾಡಬೇಕು.”

ಈರಣ್ಣ ಶೆಟ್ಟರ್, ಕಾಂಗ್ರೆಸ್ ಮುಖಂಡ

‘ಮಿಸ್ಟರ್ ಕ್ಲೀನ್’ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಗದಗದಲ್ಲಿ ಒಕ್ಕೊರಲ ಬೇಡಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಗದಗ ಶಾಸಕ ಡಾ. ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಉಪಮುಖ್ಯಮಂತ್ರಿ ಹುದ್ದೆಗೂ ಪರಿಗಣಿಸಬೇಕು ಎಂಬ ಒತ್ತಾಯ ಗದಗ ಜಿಲ್ಲೆಯಲ್ಲಿ ಮತ್ತಷ್ಟು ತೀವ್ರಗೊಂಡಿದೆ. ವಿವಿಧ ಸಮಾಜಗಳ ಮುಖಂಡರು, ಅಭಿಮಾನಿ ಬಳಗಗಳು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಸೋಮವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿಗಳನ್ನು ನಡೆಸಿ ಕಾಂಗ್ರೆಸ್ ವರಿಷ್ಠರಿಗೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್.ಡಿ. ಚಂದಾವರಿ, ಎಚ್.ಕೆ. ಪಾಟೀಲರು ದೂರದೃಷ್ಟಿಯ ನಾಯಕರು. ಜನರ ಒಳಿತಿಗಾಗಿ 24/7 ದುಡಿಯುವ ಅಪರೂಪದ ರಾಜಕಾರಣಿ. ತಮ್ಮ ಅಧಿಕಾರಾವಧಿಯಲ್ಲಿ ಸಮಾಜದ ವಿವಿಧ ಸಮುದಾಯಗಳಿಗೆ ಭವನಗಳು, ಆರೋಗ್ಯ ಸೇವೆಗಳಿಗಾಗಿ ಆಸ್ಪತ್ರೆಗಳು, ಕ್ರೀಡಾ ಚಟುವಟಿಕೆಗಳಿಗೆ ಮೈದಾನಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಕೆರೆ-ಕಟ್ಟೆಗಳ ಅಭಿವೃದ್ಧಿ, ಉದ್ಯಾನವನಗಳ ನಿರ್ಮಾಣ ಹಾಗೂ ಆಶ್ರಯ ಮನೆಗಳ ನಿರ್ಮಾಣದಂತಹ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇಂತಹ ಕಳಂಕರಹಿತ ಹಾಗೂ ಅನುಭವಿ ರಾಜಕಾರಣಿಗೆ ಸಚಿವ ಸ್ಥಾನ ನೀಡುವುದು ಅನಿವಾರ್ಯ ಎಂದು ಒತ್ತಾಯಿಸಿದರು.

ಪಂಚಮಸಾಲಿ ಸಮಾಜದ ಪರವಾಗಿ ಮಾತನಾಡಿದ ಅನಿಲ್‌ಕುಮಾರ ಪಾಟೀಲ, “ಉತ್ತರ ಕರ್ನಾಟಕದ ಹುಲಿ” ಎಂದೇ ಖ್ಯಾತರಾಗಿರುವ ಎಚ್.ಕೆ. ಪಾಟೀಲರು ಯಾವುದೇ ಖಾತೆ ನೀಡಿದರೂ ಅಭಿವೃದ್ಧಿಯ ಛಾಪು ಮೂಡಿಸಿದವರು. ರಾಜ್ಯದ ಅಭಿವೃದ್ಧಿ ಹಾಗೂ ಉತ್ತರ ಕರ್ನಾಟಕದ ಹಿತದೃಷ್ಟಿಯಿಂದ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.

ಗದಗ ಜಿಲ್ಲೆಯ ಸವಿತಾ ಸಮಾಜದ ಹಿರಿಯರು ಹಾಗೂ ಎಚ್.ಕೆ. ಪಾಟೀಲ ಅಭಿಮಾನಿ ಬಳಗದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸವಿತಾ ಸಮಾಜದ ಮುಖಂಡ ದೀಪಕ್ ರಾಯಚೂರು, ಕಳೆದ ನಾಲ್ಕು ದಶಕಗಳಿಂದ ಕಳಂಕರಹಿತ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಎಚ್.ಕೆ. ಪಾಟೀಲರು ಅಧಿಕಾರ ಸಿಕ್ಕಾಗಲೆಲ್ಲ ಪಾರದರ್ಶಕ ಆಡಳಿತ ಹಾಗೂ ಜನಸೇವೆಯ ಮೂಲಕ ಜನಮನ ಗೆದ್ದಿದ್ದಾರೆ. ಇಂತಹ “ಮಿಸ್ಟರ್ ಕ್ಲೀನ್” ನಾಯಕರಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಗದಗ ಜಿಲ್ಲೆ ಮಾತ್ರವಲ್ಲದೆ ಇಡೀ ಉತ್ತರ ಕರ್ನಾಟಕದ ಜನತೆಗೆ ನೋವುಂಟು ಮಾಡಿದೆ ಎಂದು ಹೇಳಿದರು.

ಗದಗ ನಗರದಲ್ಲಿ ಎರಡು ರೂಪಾಯಿಗೆ 20 ಲೀಟರ್ ಶುದ್ಧ ಕುಡಿಯುವ ನೀರು ದೊರೆಯುವಂತೆ ಯೋಜನೆ ರೂಪಿಸಿ ಜಾರಿಗೊಳಿಸಿದ ಭಗೀರಥ ಎಚ್.ಕೆ. ಪಾಟೀಲರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ವೇಳೆ ದೇಶದಲ್ಲೇ ಮಾದರಿಯಾಗುವ ಗ್ರಾಮೀಣ ಅಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾಗ ಮೋಡ ಬಿತ್ತನೆ ಮೂಲಕ ಕೃತಕ ಮಳೆಯ ಪ್ರಯತ್ನ, ಉತ್ತರ ಕರ್ನಾಟಕದ ಜನರಿಗೆ ನ್ಯಾಯ ದೊರಕುವ ನಿಟ್ಟಿನಲ್ಲಿ ಸಂಚಾರಿ ಪೀಠಗಳ ಸ್ಥಾಪನೆ ಸೇರಿದಂತೆ ಅನೇಕ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.

ವಯೋವೃದ್ಧರ ಕಣ್ಣಿನ ತಪಾಸಣೆ, ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ, ಅಂಗವಿಕಲರಿಗೆ ಕೃತಕ ಕಾಲುಗಳ ವಿತರಣೆ, ಹೃದಯ ಹಾಗೂ ಕಿಡ್ನಿ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ಉಚಿತ ಚಿಕಿತ್ಸೆಯಂತಹ ಮಾನವೀಯ ಕಾರ್ಯಗಳ ಮೂಲಕ ಜನಸೇವೆಯನ್ನು ಜೀವನ ಧ್ಯೇಯವನ್ನಾಗಿಸಿಕೊಂಡಿರುವ ಎಚ್.ಕೆ. ಪಾಟೀಲರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ರಾಜ್ಯಕ್ಕೆ ಅವರ ಅನುಭವದ ಲಾಭ ದೊರಕುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸಚಿವ ಸ್ಥಾನ ನೀಡುವ ಬದಲು ಸಭಾಧ್ಯಕ್ಷ ಸ್ಥಾನ ನೀಡಿ ಅವರ ರಾಜಕೀಯ ಸಾಮರ್ಥ್ಯವನ್ನು ಸೀಮಿತಗೊಳಿಸುವ ಪ್ರಯತ್ನ ಮಾಡಬಾರದು. ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತದ ಪ್ರತೀಕವಾಗಿರುವ ಎಚ್.ಕೆ. ಪಾಟೀಲರಿಗೆ ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿ ನೀಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜು ಗೌಡರ, ವೆಂಕಟೇಶ್ ರಾಂಪುರ, ಗಂಗಣ್ಣ ಗೌಡರ್, ಪಾಂಡಪ್ಪ ರಾಂಪುರ, ಪರಶುರಾಮ್ ಕೋಟೆಕಲ್, ಪಂಪಣ್ಣ ರಾಯಚೂರು, ಮಂಜುನಾಥ್ ಬಯಲಗುಡ್ಡ, ವೆಂಕಟೇಶ್ ಬಯಲಗುಡ್ಡ, ಮುರಳಿ ವಲ್ಲೂರ್, ರವಿಕುಮಾರ ಹಡಪದ್, ರಾಘವೇಂದ್ರ ರಾಂಪುರ, ರಾಘವೇಂದ್ರ ಬಯಲಗುಡ್ಡ, ಶ್ರೀನಿವಾಸ್ ರಾಂಪುರ, ಜಗದೀಶ್ ರಾಂಪುರ, ಪರಶುರಾಮ್ ಆದೋನಿ, ಮಂಜುನಾಥ್ ಕಡಬುರ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

“ಜನಸೇವೆ, ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳ ಮೂಲಕ ನಾಲ್ಕು ದಶಕಗಳಿಂದ ಜನರ ವಿಶ್ವಾಸ ಗಳಿಸಿರುವ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ಮಾತ್ರವಲ್ಲ, ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡಬೇಕು.”

 ದೀಪಕ್ ರಾಯಚೂರು

ಜಿಲ್ಲಾ ಸವಿತಾ ಸಮಾಜದ ಮುಖಂಡ

“ಯಾವ ಖಾತೆ ಕೊಟ್ಟರೂ ಅಭಿವೃದ್ಧಿಯ ಛಾಪು ಮೂಡಿಸುವ ಸಾಮರ್ಥ್ಯ ಎಚ್.ಕೆ. ಪಾಟೀಲರದ್ದು. ಉತ್ತರ ಕರ್ನಾಟಕದ ಧ್ವನಿಯಾಗಿರುವ ಅವರಿಗೆ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಸಿಗಲೇಬೇಕು.”

ಅನಿಲ್‌ಕುಮಾರ ಪಾಟೀಲ

ಪಂಚಮಸಾಲಿ ಸಮಾಜ ಮುಖಂಡ

ಅಸಮಾನತೆಯ ವಿರುದ್ಧ ಕನ್ನಡಿಗರು ಒಂದಾಗಬೇಕು: ಅಹಿಂಸಾ ಚೇತನ್

0

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ಜಾತಿ, ಧರ್ಮ, ಭಾಷೆ ಅಥವಾ ಯಾವುದೇ ಜನಾಂಗ ನಮ್ಮ ಶತ್ರುಗಳಲ್ಲ. ಅಸಮಾನತೆ ಮತ್ತು ಅನ್ಯಾಯದ ವ್ಯವಸ್ಥೆಯೇ ನಮ್ಮ ನಿಜವಾದ ಶತ್ರು ಎಂದು ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಹೇಳಿದರು.

ನಗರದ ಬಾಬು ಜಗಜೀವನರಾಂ ಸಭಾಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಲಿತ ಸಂಘರ್ಷ ಸಮಿತಿ ಶಿಕ್ಷಣ, ಸಾಮಾಜಿಕ ಜಾಗೃತಿ ಹಾಗೂ ಪ್ರತಿಭಾವಂತರ ಪ್ರೋತ್ಸಾಹದ ಮೂಲಕ ಮಹತ್ವದ ಕಾರ್ಯ ಮಾಡುತ್ತಿದೆ. ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿಯುವವರನ್ನು ಯುವಕರು ಆದರ್ಶವಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ಇಂದಿನ ಯುವ ಪೀಳಿಗೆಯಲ್ಲಿ ಹೋರಾಟದ ಮನೋಭಾವ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಜಾಗೃತ ಹೋರಾಟ ನಡೆಸುವ ಮೂಲಕ ಅಂಬೇಡ್ಕರ್, ಪುಲೆ ಹಾಗೂ ಪೆರಿಯಾರ್ ಅವರ ಕನಸಿನ ಸಮಾನತೆಯ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು ಹಾಗೂ ಪೌರ ಕಾರ್ಮಿಕರಿಗೂ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ತಮ್ಮಣ್ಣವರ ವಹಿಸಿದ್ದರು. ರಾಜ್ಯಾಧ್ಯಕ್ಷ ಮಾರುತಿ ಮಡ್ಡಮನಿ ಅಂಬೇಡ್ಕರ್ ಹಾಗೂ ಪುಲೆ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ರೋಣ ತಾಲೂಕು ಅಧ್ಯಕ್ಷ ಮಿಥುನ್ ಪಾಟೀಲ, ಕಾಂಗ್ರೆಸ್ ವಕ್ತಾರ ಸಂಗಮೇಶ ಕೊಳ್ಳಿ ಹಾಗೂ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್. ಬಳ್ಳಾರಿ ಮಾತನಾಡಿದರು.

ವೇದಿಕೆಯಲ್ಲಿ ವಿರೂಪಾಕ್ಷಪ್ಪ ರಾಮಗೀರಿ, ಆನಂದ ಶಿಂಗಾಡಿ, ಸಿದ್ದಪ್ಪ ಲಿಂಗದಾಳ, ಶರೀಫ್ ಬಿಳಿಯಲಿ, ಬಾಲರಾಜ್ ಅರಬರ, ರಮೇಶ್ ಚಲವಾದಿ, ಶಂಭು ಕಾಳೆ, ಶಿವಪುತ್ರಪ್ಪ ಚಲವಾದಿ, ಬಸವರಾಜ ಬಿಳಿಯಲಿ, ಅನಿಲ್ ಕಾಳೆ, ರಾಘವೇಂದ್ರ ಬಿನ್ನಾಳ, ಪರಶು ಕಾಳೆ, ನಿತೀಶ ಘಟ್ಟೆಣ್ಣವರ, ಶರಣು ಕಾಳೆ, ಹನುಮಂತ ಘಟ್ಟೆಣ್ಣವರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ರಾಮಚಂದ್ರ ಹಂಸನೂರು ಕಾರ್ಯಕ್ರಮ ನಿರೂಪಿಸಿದರು.

“ಶಿಕ್ಷಿಸು, ಸಂಘಟಿಸು, ಹೋರಾಟ ಮಾಡು ಎಂಬುದು ಡಾ. ಅಂಬೇಡ್ಕರ್ ಸಮಾಜಕ್ಕೆ ನೀಡಿದ ಕ್ರಾಂತಿಕಾರಿ ಸಂದೇಶ. ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಪುಲೆ ಹಾಗೂ ಪೆರಿಯಾರ್ ಅವರ ಸಿದ್ಧಾಂತಗಳ ಆಧಾರದ ಮೇಲೆ ಸಮ ಸಮಾಜ ಕಟ್ಟಿದಾಗ ಮಾತ್ರ ನ್ಯಾಯಯುತ ಮತ್ತು ಪ್ರಗತಿಪರ ಸಮಾಜ ನಿರ್ಮಾಣ ಸಾಧ್ಯ.” 

ಅಹಿಂಸಾ ಚೇತನ್

ಅಧಿಕಾರಿಗಳ ಗೈರುಹಾಜರಿಗೆ ಎಐ ಬ್ರೇಕ್..! ‘ಕರ್ತವ್ಯ’ ಆ್ಯಪ್ ಜಾರಿ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಗೈರುಹಾಜರಿ, ಬಯೋಮೆಟ್ರಿಕ್ ದುರ್ಬಳಕೆ ಹಾಗೂ ಸಾರ್ವಜನಿಕರಿಗೆ ಅಧಿಕಾರಿಗಳು ಸಿಗದಿರುವ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಕರ್ತವ್ಯ’ (ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್-ಕೆಎಎಎಂಎಸ್) ಎಂಬ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅತ್ಯಾಧುನಿಕ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಇಲಾಖಾ ಕಾರ್ಯದರ್ಶಿಗಳೊಂದಿಗೆ ನಡೆಸಿದ ಮೊದಲ ಸಭೆಯಲ್ಲಿಯೇ ಸರ್ಕಾರಿ ನೌಕರರು ಕಚೇರಿ ವೇಳೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ‘ಕರ್ತವ್ಯ’ ವ್ಯವಸ್ಥೆ ಅನುಷ್ಠಾನಗೊಳ್ಳುತ್ತಿದೆ.

ಈ ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಹಾಜರಾತಿ ದಾಖಲಿಸಿ ಕಚೇರಿಯಿಂದ ಹೊರ ಹೋಗುವ ಸಾಧ್ಯತೆ ಇತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಎಐ ಆಧಾರಿತ ಮುಖ ಗುರುತಿಸುವಿಕೆ ಹಾಗೂ ಜಿಯೋಫೆನ್ಸಿಂಗ್ ತಂತ್ರಜ್ಞಾನದ ಮೂಲಕ ಉದ್ಯೋಗಿ ಕಚೇರಿ ವ್ಯಾಪ್ತಿಯಲ್ಲೇ ಇದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

‘ಕರ್ತವ್ಯ’ ಸಾಫ್ಟ್‌ವೇರ್‌ನ್ನು ಯಾವುದೇ ಖಾಸಗಿ ಸಂಸ್ಥೆಯ ನೆರವಿಲ್ಲದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಸೆಂಟರ್ ಫಾರ್ ಇ-ಗವರ್ನೆನನ್ಸ್ (ಸಿಇಜಿ) ಹಾಗೂ ಕರ್ನಾಟಕ ಎಐ ಸೆಲ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದರಿಂದ ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚ ಉಳಿತಾಯವಾಗಿದ್ದು, ದತ್ತಾಂಶ ಸುರಕ್ಷತೆ ಹಾಗೂ ಸ್ವಾಯತ್ತತೆ ಹೆಚ್ಚಿದೆ.

ಅದೇ ರೀತಿ ಪ್ರತಿದಿನ ಆ್ಯಪ್ ಮೂಲಕ ಹಾಜರಾತಿ ದಾಖಲಿಸುವವರ ಸಂಖ್ಯೆ 1.85 ಲಕ್ಷದಿಂದ 2.32 ಲಕ್ಷಕ್ಕೆ ಏರಿಕೆಯಾಗಿದ್ದು, ಸಕ್ರಿಯ ಬಳಕೆಯಲ್ಲಿ ಶೇ.25ರಷ್ಟು ಹೆಚ್ಚಳ ದಾಖಲಾಗಿದೆ.

ಪ್ರಸ್ತುತ 42 ಇಲಾಖೆಗಳ 4.78 ಲಕ್ಷಕ್ಕೂ ಹೆಚ್ಚು ನೌಕರರನ್ನು ಈ ವ್ಯವಸ್ಥೆಗೆ ಒಳಪಡಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ 1.68 ಲಕ್ಷಕ್ಕೂ ಹೆಚ್ಚು ನೌಕರರು ಈಗಾಗಲೇ ನೋಂದಾಯಿಸಿಕೊಂಡಿದ್ದು, ದೈನಂದಿನ ಹಾಜರಾತಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 66 ಸಾವಿರಕ್ಕೂ ಅಧಿಕ ನೋಂದಣಿಯೊಂದಿಗೆ ಎರಡನೇ ಸ್ಥಾನದಲ್ಲಿದೆ.

ಮೊಬೈಲ್ ಆ್ಯಪ್ ಮೂಲಕವೇ ಹಾಜರಾತಿ ದಾಖಲಿಸುವ ವ್ಯವಸ್ಥೆ ಇರುವುದರಿಂದ ಬಯೋಮೆಟ್ರಿಕ್ ಯಂತ್ರಗಳ ಮುಂದೆ ಸಾಲಿನಲ್ಲಿ ನಿಲ್ಲುವ ಅಗತ್ಯ ತಪ್ಪಿದೆ. ಜೊತೆಗೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳು ದಿನನಿತ್ಯ ಈ ವ್ಯವಸ್ಥೆಯ ಡ್ಯಾಶ್‌ಬೋರ್ಡ್‌ನ್ನು ಪರಿಶೀಲಿಸಲಿದ್ದಾರೆ.

ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಪ್ರಕಾರ, ಅಧಿಕಾರಿಗಳ ಲಭ್ಯತೆ ಖಚಿತವಾಗುವುದರಿಂದ ಸಾರ್ವಜನಿಕರಿಗೆ ಸೇವೆಗಳು ವೇಗವಾಗಿ ಹಾಗೂ ಸುಲಭವಾಗಿ ದೊರೆಯಲಿದ್ದು, ಡಿಜಿಟಲ್ ಆಡಳಿತದಲ್ಲಿ ಕರ್ನಾಟಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಒಂದೇ ವಾರದಲ್ಲಿ 25% ಏರಿಕೆ

ಯೋಜನೆಗೆ ಸರ್ಕಾರಿ ನೌಕರರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಕಳೆದ ವಾರ 2.46 ಲಕ್ಷ ಇದ್ದ ನೋಂದಣಿ ಸಂಖ್ಯೆ ಈಗ 3.01 ಲಕ್ಷಕ್ಕೆ ಏರಿಕೆಯಾಗಿದೆ. ಕೇವಲ ಒಂದೇ ವಾರದಲ್ಲಿ 55 ಸಾವಿರಕ್ಕೂ ಅಧಿಕ ನೌಕರರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ.

error: Content is protected !!