ಬೆಂಗಳೂರು: ನಗರದ ಕೆ.ಆರ್. ಸರ್ಕಲ್ನಲ್ಲಿ ಸಿಗ್ನಲ್ನಲ್ಲಿ ನಿಂತಿದ್ದ ಬಿಎಂಟಿಸಿ ಬಸ್ಗೆ ಮತ್ತೊಂದು ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಹಲವು ಪ್ರಯಾಣಿಕರು ಹಾಗೂ ಚಾಲಕರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಾಂತಿನಗರ 3ನೇ ಬಿಎಂಟಿಸಿ ಡಿಪೋದ ಚಾಲಕ ಅಭಿಷೇಕ್ ವಿರುದ್ಧ ನಿರ್ಲಕ್ಷ್ಯದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ವೇಳೆ ಅವರು ಕೆಎ-51 ಎಜೆ 6163 ನೋಂದಣಿ ಸಂಖ್ಯೆಯ ಬಸ್ ಚಲಾಯಿಸುತ್ತಿದ್ದರು.
ಪ್ರಾಥಮಿಕ ತನಿಖೆ ಪ್ರಕಾರ, ಕೆ.ಆರ್. ಸರ್ಕಲ್ ಜಂಕ್ಷನ್ನಲ್ಲಿ ಕೆಂಪು ಸಿಗ್ನಲ್ ಇದ್ದ ಕಾರಣ ಎಲ್ಲಾ ವಾಹನಗಳು ನಿಂತಿದ್ದವು. ಈ ವೇಳೆ ಅಭಿಷೇಕ್ ವೇಗವಾಗಿ ಬಸ್ ಚಲಾಯಿಸಿ, ಸಿಗ್ನಲ್ನಲ್ಲಿ ನಿಂತಿದ್ದ ಮತ್ತೊಂದು ಬಿಎಂಟಿಸಿ ಬಸ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಅಪಘಾತದ ಪರಿಣಾಮ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ದೂರುದಾರರ ಎಡಗಾಲಿನ ಮೂಳೆ ಮುರಿದಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಶರಣಮ್ಮ ಎಂಬ ಪ್ರಯಾಣಿಕರ ದವಡೆಯ ಹಲ್ಲು ಮುರಿದಿರುವುದಾಗಿ ತಿಳಿದುಬಂದಿದೆ. ಅಲ್ಲದೆ, ಸಿಗ್ನಲ್ನಲ್ಲಿ ನಿಂತಿದ್ದ ಬಸ್ನ ಚಾಲಕ ಪ್ರಕಾಶ್ ಅವರಿಗೂ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

