Home Blog

ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ: ಕೇಂದ್ರಕ್ಕೆ ಚಂದ್ರಬಾಬು ನಾಯ್ಡು ಮನವಿ

ಕೊಪ್ಪಳ: ದಕ್ಷಿಣ ಭಾರತದ ಪ್ರಮುಖ ನದಿಗಳಾದ ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿ ಕರ್ನಾಟಕ ಸರ್ಕಾರ, ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ತುಂಗಭದ್ರಾ ಜಲಾಶಯದ ನೂತನ 33 ಸ್ಪಿಲ್‌ವೇ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವಿನ ಕೆನ್-ಬೆತ್ವಾ ಯೋಜನೆ ಹಾಗೂ ರಾಜಸ್ಥಾನ ಮತ್ತು ಮಧ್ಯಪ್ರದೇಶದ ನಡುವಿನ ಪಾರ್ವತಿ-ಕಾಳಿಸಿಂಧು-ಚಂಬಲ್ ನದಿ ಜೋಡಣೆ ಯೋಜನೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಕೈಗೆತ್ತಿಕೊಂಡಿರುವುದನ್ನು ಉಲ್ಲೇಖಿಸಿದ ನಾಯ್ಡು, ಇದೇ ಮಾದರಿಯಲ್ಲಿ ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಗೂ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ದೇಶದ ನೀರಿನ ಸಮಸ್ಯೆಗೆ ದೀರ್ಘಕಾಲಿಕ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ನದಿಗಳ ಜೋಡಣೆ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ಆದರೆ ಈ ಪ್ರಕ್ರಿಯೆಯಲ್ಲಿ ಯಾವುದೇ ರಾಜ್ಯದ ಹಕ್ಕುಗಳಿಗೆ ಧಕ್ಕೆಯಾಗಬಾರದು ಎಂದು ಸ್ಪಷ್ಟಪಡಿಸಿದ ಅವರು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನೀರಿನ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸುವ ರೀತಿಯಲ್ಲಿ ಯೋಜನೆ ಜಾರಿಯಾಗಬೇಕು ಎಂದು ಒತ್ತಿ ಹೇಳಿದರು.

ಮೂರು ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವ ಸಮಗ್ರ ಕ್ರಿಯಾ ಯೋಜನೆ ರೂಪಿಸುವುದರ ಜೊತೆಗೆ, ಅಗತ್ಯವಿದ್ದಲ್ಲಿ ತಮಿಳುನಾಡಿಗೂ ನೀರು ಪೂರೈಸುವ ವ್ಯವಸ್ಥೆಯನ್ನು ಪರಿಗಣಿಸಬೇಕು ಎಂದು ನಾಯ್ಡು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ 1983ರಲ್ಲಿ ಎನ್.ಟಿ. ರಾಮರಾವ್ ಅವರ ನೇತೃತ್ವದಲ್ಲಿ ಅವಿಭಜಿತ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಒಟ್ಟಾಗಿ ಸೇರಿ ಚೆನ್ನೈ ನಗರದ ಕುಡಿಯುವ ನೀರಿನ ಅಗತ್ಯಕ್ಕಾಗಿ 15 ಟಿಎಂಸಿ ನೀರನ್ನು ಒದಗಿಸಿದ್ದ ಐತಿಹಾಸಿಕ ಉದಾಹರಣೆಯನ್ನು ಅವರು ಸ್ಮರಿಸಿದರು.

“ಪ್ರಸ್ತುತ ದೇಶದಲ್ಲಿ ಒಂದೆಡೆ ಭಾರೀ ಪ್ರವಾಹ ಉಂಟಾಗುತ್ತಿದ್ದರೆ, ಮತ್ತೊಂದೆಡೆ ತೀವ್ರ ಬರಗಾಲ ಎದುರಾಗುತ್ತಿದೆ. ಈ ವರ್ಷ ಎಲ್ ನಿನೋ ಪರಿಣಾಮದಿಂದ ತುಂಗಭದ್ರಾ ಮತ್ತು ಆಲಮಟ್ಟಿ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರಿನ ಹರಿವು ಬಂದಿಲ್ಲ. ಇಂತಹ ಸವಾಲುಗಳನ್ನು ಎದುರಿಸಲು ದೇಶದ ನದಿಗಳನ್ನು ಪರಸ್ಪರ ಜೋಡಿಸುವುದು ಅತ್ಯಂತ ಅಗತ್ಯವಾಗಿದೆ” ಎಂದು ಹೇಳಿದರು.

ಹೆಚ್ಚುವರಿ ನೀರು ಲಭ್ಯವಿರುವ ನದಿಗಳಿಂದ ನೀರಿನ ಕೊರತೆಯಿರುವ ಪ್ರದೇಶಗಳಿಗೆ ನೀರು ಹರಿಸುವ ಮೂಲಕ ಬರಗಾಲದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಬಹುದು. ಜೊತೆಗೆ ರಾಜ್ಯಗಳು, ಜಿಲ್ಲೆಗಳು ಹಾಗೂ ರೈತರ ನಡುವೆ ಉಂಟಾಗುವ ನೀರಿನ ವಿವಾದಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟರು.

POCSO Case: ವಚನಾನಂದ ಶ್ರೀಗೆ ಹೈಕೋರ್ಟ್ʼನಿಂದ ಬಿಗ್ ಶಾಕ್; ನಿರೀಕ್ಷಣಾ ಜಾಮೀನು ರದ್ದು

ಬೆಂಗಳೂರು/ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ವಚನಾನಂದ ಸ್ವಾಮೀಜಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಹಿನ್ನಡೆ ನೀಡಿದ್ದು, ಈ ಹಿಂದೆ ಮಂಜೂರಾಗಿದ್ದ ನಿರೀಕ್ಷಣಾ (ಮುಂಗಡ) ಜಾಮೀನನ್ನು ರದ್ದುಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣ ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ನೀಡಿರುವ ಕ್ರಮದ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಬಳಿಕ ಅರ್ಜಿಯ ಅಂತಿಮ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ನಿರೀಕ್ಷಣಾ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಆದಾಗ್ಯೂ, ವಚನಾನಂದ ಸ್ವಾಮೀಜಿಗೆ ತಾತ್ಕಾಲಿಕ ನಿರಾಳತೆ ನೀಡಿರುವ ನ್ಯಾಯಾಲಯ, ನಿಯಮಿತ (ರೆಗ್ಯುಲರ್) ಜಾಮೀನು ಕೋರಿ ಅರ್ಜಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಿದೆ. ಅಲ್ಲಿಯವರೆಗೆ ನಿರೀಕ್ಷಣಾ ಜಾಮೀನಿನ ರಕ್ಷಣೆ ಮುಂದುವರಿಯಲಿದ್ದು, ತಕ್ಷಣದ ಬಂಧನದಿಂದ ತಾತ್ಕಾಲಿಕ ರಕ್ಷಣೆ ದೊರೆತಂತಾಗಿದೆ.

ಪ್ರಕರಣದ ವಿಚಾರಣೆ ವೇಳೆ, ಸ್ವಾಮೀಜಿ ವಿರುದ್ಧ ಗಂಭೀರ ಸ್ವರೂಪದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದನ್ನು ನ್ಯಾಯಾಲಯ ಗಮನಿಸಿದೆ. ಇಂತಹ ಗಂಭೀರ ಆರೋಪಗಳಿರುವ ಸಂದರ್ಭದಲ್ಲಿ ಪ್ರಕರಣ ದಾಖಲಾಗುವ ಮೊದಲುವೇ ನಿರೀಕ್ಷಣಾ ಜಾಮೀನು ನೀಡಿರುವ ವಿಧಾನ ಕಾನೂನುಬದ್ಧವಾಗಿ ಪ್ರಶ್ನಾರ್ಹವಾಗಿದೆ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತಪಡಿಸಿದೆ.

ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಾಲಯ, ನಿರೀಕ್ಷಣಾ ಜಾಮೀನು ನೀಡಿದ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿ ವಚನಾನಂದ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿತ್ತು. ಬಳಿಕ ನಡೆದ ಮುಂದಿನ ವಿಚಾರಣೆಯಲ್ಲಿ ಜಾಮೀನು ಆದೇಶವನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬಂದಿದೆ.

ಇದೀಗ ವಚನಾನಂದ ಸ್ವಾಮೀಜಿ ನಿಯಮಿತ ಜಾಮೀನು ಕೋರಿ ಸಂಬಂಧಪಟ್ಟ ನ್ಯಾಯಾಲಯದ ಮೊರೆ ಹೋಗುವ ಅವಕಾಶ ಹೊಂದಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳತ್ತ ಪ್ರಕರಣದ ಚಿತ್ತ ನೆಟ್ಟಿದೆ.

ವೈಭವ್ ಸೂರ್ಯವಂಶಿಗೆ ಡ್ರೆಸ್ಸಿಂಗ್ ರೂಮ್ ಪ್ರವೇಶ ನಿಷೇಧ! ಯಾಕೆ ಗೊತ್ತಾ..?

0

ಲಂಡನ್: ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರಿಗೆ ಐರ್ಲೆಂಡ್ ವಿರುದ್ಧದ ಪಂದ್ಯದ ವೇಳೆ ತಂಡದ ಮುಖ್ಯ ಡ್ರೆಸ್ಸಿಂಗ್ ರೂಮ್ ಬಳಸಲು ಅವಕಾಶ ನೀಡಲಾಗಿಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇದಕ್ಕೆ ಯುನೈಟೆಡ್ ಕಿಂಗ್‌ಡಮ್‌ನ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಟ್ಟುನಿಟ್ಟಿನ ಕಾನೂನುಗಳೇ ಕಾರಣವೆಂದು ತಿಳಿದುಬಂದಿದೆ.

ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಇನ್ನೂ ಅಪ್ರಾಪ್ತ ವಯಸ್ಕರಾಗಿರುವುದರಿಂದ, ಯುಕೆಯ ಮಕ್ಕಳ ಸುರಕ್ಷತಾ ನಿಯಮಗಳ ಪ್ರಕಾರ ಅವರನ್ನು ವಯಸ್ಕ ಆಟಗಾರರೊಂದಿಗೆ ಒಂದೇ ಖಾಸಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಇರಿಸಲು ಅವಕಾಶವಿಲ್ಲ. ಹೀಗಾಗಿ ಅವರಿಗಾಗಿ ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.

ಯುಕೆಯ ಕಾನೂನುಗಳ ಅನ್ವಯ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ರೀಡಾಪಟುಗಳನ್ನು ವಯಸ್ಕರ ಬಟ್ಟೆ ಬದಲಾಯಿಸುವ ಕೊಠಡಿ ಅಥವಾ ಖಾಸಗಿ ಸ್ಥಳಗಳಲ್ಲಿ ಇರಿಸುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ. ಅಪ್ರಾಪ್ತರ ಸುರಕ್ಷತೆ, ಗೌಪ್ಯತೆ ಹಾಗೂ ಹಕ್ಕುಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಗಳನ್ನು ಜಾರಿಗೆ ತರಲಾಗಿದೆ.

ಈ ಹಿನ್ನೆಲೆಯಲ್ಲಿ ವೈಭವ್ ಸೂರ್ಯವಂಶಿ ಪಂದ್ಯ ಹಾಗೂ ತರಬೇತಿ ಅವಧಿಯಲ್ಲಿ ಮಾತ್ರ ತಂಡದೊಂದಿಗೆ ಭಾಗವಹಿಸಬಹುದಾಗಿದ್ದು, ಡ್ರೆಸ್ಸಿಂಗ್ ರೂಮ್ ಸೇರಿದಂತೆ ಕೆಲವು ಖಾಸಗಿ ಸೌಲಭ್ಯಗಳನ್ನು ಪ್ರತ್ಯೇಕವಾಗಿ ಬಳಸಬೇಕಾಗಿದೆ.

ಕಾನೂನು ತಜ್ಞರ ಪ್ರಕಾರ, ಅಪ್ರಾಪ್ತರನ್ನು ವಯಸ್ಕರ ಡ್ರೆಸ್ಸಿಂಗ್ ರೂಮ್‌ನಲ್ಲಿ ಇರಿಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿ ಪರಿಗಣಿಸಬಹುದಾಗಿದ್ದು, ಸ್ಥಳೀಯ ನಿಯಮಗಳನ್ನು ಉಲ್ಲಂಘಿಸಿದರೆ ಸಂಬಂಧಿತ ಕ್ರೀಡಾ ಸಂಸ್ಥೆಗಳು ದಂಡ ಅಥವಾ ಕಾನೂನು ಕ್ರಮವನ್ನು ಎದುರಿಸಬೇಕಾಗಬಹುದು.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಜಾಗತಿಕ ಕ್ರಿಕೆಟ್ ಆಡಳಿತ ಸಂಸ್ಥೆಯಾಗಿದ್ದರೂ, ಪಂದ್ಯ ನಡೆಯುವ ದೇಶದ ಸ್ಥಳೀಯ ಕಾನೂನುಗಳಿಗೆ ಆದ್ಯತೆ ನೀಡಲೇಬೇಕು. ಹೀಗಾಗಿ ಯುಕೆಯಲ್ಲಿ ನಡೆಯುವ ಪಂದ್ಯಗಳ ಸಂದರ್ಭದಲ್ಲಿ ಅಲ್ಲಿನ ಮಕ್ಕಳ ರಕ್ಷಣಾ ನಿಯಮಗಳನ್ನು ಐಸಿಸಿ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಈ ಬೆಳವಣಿಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಅಪ್ರಾಪ್ತ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಇಂತಹ ನಿಯಮಗಳು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ತಂಡದ ಸದಸ್ಯನಾಗಿರುವ ಆಟಗಾರನನ್ನು ಪ್ರತ್ಯೇಕವಾಗಿ ಇರಿಸುವುದು ಆತನ ಮಾನಸಿಕ ಸ್ಥೈರ್ಯ ಹಾಗೂ ತಂಡದೊಂದಿಗೆ ಹೊಂದಾಣಿಕೆಗೆ ಪರಿಣಾಮ ಬೀರಬಹುದು ಎಂದು ಕೆಲವು ಮಾಜಿ ಆಟಗಾರರು ಮತ್ತು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಸಂಪುಟ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಒಟ್ಟು 13 ಸಚಿವರಿಗೆ ವಿವಿಧ ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಲಾಗಿದ್ದು, ಆಡಳಿತಾತ್ಮಕ ಕಾರ್ಯಗಳ ಸಮನ್ವಯ ಹಾಗೂ ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆಯ ಜವಾಬ್ದಾರಿ ನೀಡಲಾಗಿದೆ.

ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಸಚಿವ ಕೆ.ಹೆಚ್. ಮುನಿಯಪ್ಪ ಅವರಿಗೆ ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಜವಾಬ್ದಾರಿ ವಹಿಸಲಾಗಿದೆ.

ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ ಮತ್ತು ಮಂಡ್ಯ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದ್ದು, ಸಚಿವ ಎಂ.ಬಿ. ಪಾಟೀಲ್ ಅವರಿಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದೆ.

ಸಚಿವ ಕೆ.ಜೆ. ಜಾರ್ಜ್ ಅವರಿಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದ್ದು, ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರ ಹಾಗೂ ಹಾಸನ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ.

ಸಚಿವ ಈಶ್ವರ ಖಂಡ್ರೆ ಅವರಿಗೆ ಬೀದರ್ ಮತ್ತು ಗದಗ ಜಿಲ್ಲೆಗಳು, ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳ ಉಸ್ತುವಾರಿ ಹಂಚಿಕೆ ಮಾಡಲಾಗಿದೆ.

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದ್ದು, ಸಚಿವ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರಿಗೆ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ.

ಇನ್ನು ಸಚಿವ ಯು.ಟಿ. ಖಾದರ್ ಅವರಿಗೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಸಚಿವ ಬೈರತಿ ಸುರೇಶ್ ಅವರಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ.

ಹಾಗೆಯೇ, ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಹಂಚಿಕೆ ಮೂಲಕ ಸರ್ಕಾರ ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸುವ ಹಾಗೂ ಜಿಲ್ಲಾವಾರು ಅಭಿವೃದ್ಧಿ ಯೋಜನೆಗಳ ಅನುಷ್ಠಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶ ಹೊಂದಿದೆ.

ವಾರ್ತಾ ಇಲಾಖೆಗೆ ಐಪಿಎಸ್ ಟಚ್: ನೂತನ ಆಯುಕ್ತರಾಗಿ ಎಂ.ಎನ್. ಅನುಚೇತ್ ಅಧಿಕಾರ ಸ್ವೀಕಾರ

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಗುರುವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಇಲಾಖೆಯ ನಿರ್ಗಮಿತ ಆಯುಕ್ತ ಹಾಗೂ ಎಡಿಜಿಪಿ ಹೇಮಂತ್ ಎಂ. ನಿಂಬಾಳ್ಕರ್ ಅವರು ಅಧಿಕಾರ ಹಸ್ತಾಂತರ ಮಾಡಿದರು.

ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನೂತನ ಆಯುಕ್ತರಿಗೆ ಶುಭಾಶಯ ಕೋರಿದರು. ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜೊತೆಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆಯನ್ನು ಸಹ ಅನುಚೇತ್ ಅವರಿಗೆ ವಹಿಸಿದೆ.

ಕೋಲಾರ ಜಿಲ್ಲೆಯ ಮೂಲದ ಅನುಚೇತ್ ಅವರು ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, 2008ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ 2009ರ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು.

2011ರಲ್ಲಿ ಪುತ್ತೂರಿನಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಸೇವೆ ಆರಂಭಿಸಿದ ಅವರು, ಬಳಿಕ ಸಿಐಡಿ ಎಸ್ಪಿ, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹಾಗೂ ವಿವಿಧ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗೆ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಅವರು, ಸಂಚಾರ ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಅಳವಡಿಕೆಗೆ ವಿಶೇಷ ಕೊಡುಗೆ ನೀಡಿದ್ದರು.

ಪೊಲೀಸ್ ಇಲಾಖೆಯಲ್ಲಿ ನಡೆಸಿದ ಪರಿಣಾಮಕಾರಿ ತನಿಖೆ ಹಾಗೂ ಆಡಳಿತಾತ್ಮಕ ಸಾಧನೆಗಾಗಿ ಅವರಿಗೆ ಕೇಂದ್ರ ಗೃಹ ಸಚಿವರ ಅತ್ಯುತ್ತಮ ತನಿಖಾ ಪದಕವೂ ಲಭಿಸಿದೆ. ವಾರ್ತಾ ಇಲಾಖೆಗೆ ತಂತ್ರಜ್ಞಾನ ಆಧಾರಿತ ಕಾರ್ಯಪದ್ಧತಿ ಮತ್ತು ಆಡಳಿತಾತ್ಮಕ ಚುರುಕುತನ ತರುವ ನಿರೀಕ್ಷೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್, ಸಿದ್ದೇಶ್ವರಪ್ಪ ಜಿ.ಬಿ., ಸಿ.ಆರ್. ನವೀನ್, ಉಪನಿರ್ದೇಶಕರಾದ ಬಿ.ಕೆ. ರಾಮಲಿಂಗಪ್ಪ, ಶಫಿ ಸಾದುದ್ದೀನ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ತುಂಗಭದ್ರಾ ಡ್ಯಾಂ ರೆಕಾರ್ಡ್ ರಿನೋವೇಶನ್: ಹಳೆಯ ಗೇಟ್‌ಗಳಿಗೆ ವಿದಾಯ – 33 ನೂತನ ಗೇಟ್ ಉದ್ಘಾಟನೆಗೆ 3 ರಾಜ್ಯದ ಸಿಎಂ ಭಾಗಿ

0

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ 73 ವರ್ಷಗಳ ಬಳಿಕ ನಡೆದ ಕ್ರೆಸ್ಟ್ ಗೇಟ್ ಬದಲಾವಣೆ ಕಾರ್ಯ ದೇಶದ ನೀರಾವರಿ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿ ಗುರುತಿಸಿಕೊಂಡಿದೆ. 33 ನೂತನ ಗೇಟ್‌ಗಳ ಲೋಕಾರ್ಪಣೆ ಗುರುವಾರ ಅಧಿಕೃತವಾಗಿ ನೆರವೇರಿಸಲಾಯಿತು.

ಮುನಿರಾಬಾದ್ ಸಮೀಪದ ಜಲಾಶಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಜಲಶಕ್ತಿ ಸಚಿವರು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದು ಅಪರೂಪದ ರಾಜಕೀಯ ಹಾಗೂ ಆಡಳಿತಾತ್ಮಕ ಸಮಾಗಮವಾಗಿ ಗಮನ ಸೆಳೆಯಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎನ್. ಚಂದ್ರಬಾಬು ನಾಯ್ಡು, ಎ. ರೇವಂತ್ ರೆಡ್ಡಿ ಹಾಗೂ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಮುಖ ಹಂತವಾಗಿ 18 ರಿಂದ 21ನೇ ಕ್ರೆಸ್ಟ್ ಗೇಟ್‌ಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ರಿಮೋಟ್ ಮೂಲಕ ನೂತನ ಗೇಟ್‌ಗಳ ಉದ್ಘಾಟನೆ ನಡೆಯಿತು. ನಾಲ್ವರು ನಾಯಕರು ಪ್ರತ್ಯೇಕವಾಗಿ ಗೇಟ್‌ಗಳನ್ನು ಚಾಲನೆಗೊಳಿಸಿದರು.

ಈ ನವೀಕರಣದ ಹಿನ್ನೆಲೆ 2024ರ ಆಗಸ್ಟ್‌ನಲ್ಲಿ 19ನೇ ಗೇಟ್ ಕೊಚ್ಚಿ ಹೋಗಿದ್ದ ಘಟನೆ ಪ್ರಮುಖ ಕಾರಣವಾಗಿತ್ತು. ಅದರ ನಂತರ ಕೇಂದ್ರ ಜಲಶಕ್ತಿ ಆಯೋಗ ಹಾಗೂ ಡ್ಯಾಂ ಸುರಕ್ಷತಾ ತಂಡ ನಡೆಸಿದ ತಾಂತ್ರಿಕ ಪರಿಶೀಲನೆ ಆಧಾರವಾಗಿ 33 ಗೇಟ್‌ಗಳನ್ನು ಬದಲಾಯಿಸಲು ಶಿಫಾರಸು ಮಾಡಲಾಗಿತ್ತು. ಸುಮಾರು 51 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಪೂರ್ಣಗೊಂಡಿದೆ. ಹಳೆಯ ಗೇಟ್‌ಗಳು 1953ರಿಂದ ಸೇವೆಯಲ್ಲಿ ಇದ್ದವು ಎಂಬುದು ಅಧಿಕಾರಿಗಳ ಮಾಹಿತಿ.

ಪ್ರತಿ ಗೇಟ್ 20 ಅಡಿ ಎತ್ತರ, 60 ಅಡಿ ಅಗಲ ಹಾಗೂ 48.50 ಟನ್ ತೂಕ ಹೊಂದಿದ್ದು, ಜಲಾಶಯದ ಸುರಕ್ಷತೆ ಹಾಗೂ ನೀರಿನ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ.

ಕಾರ್ಯಕ್ರಮದ ಸಂದರ್ಭದಲ್ಲಿ ನವಲಿ ಸಮಾನಾಂತರ ಜಲಾಶಯ, ಹೂಳು ಸಮಸ್ಯೆ ಹಾಗೂ ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಗಳ ಕುರಿತು ಅನೌಪಚಾರಿಕ ಚರ್ಚೆ ನಡೆದಿರುವ ಸಾಧ್ಯತೆಯೂ ಇದೆ. ಈ ಕುರಿತು ಕರ್ನಾಟಕ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಿರುವುದು ಗಮನಾರ್ಹ.

ಸಾವಿರಾರು ರೈತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮಕ್ಕಾಗಿ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಸಹ ಉಪಸ್ಥಿತರಿದ್ದು ತಾಂತ್ರಿಕ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

42 ಕಳ್ಳತನದ ಬೈಕ್ ಪತ್ತೆ; ಕೋರ್ಟ್ ಅಲೆದಾಟಕ್ಕೆ ಬ್ರೇಕ್, ಠಾಣೆಯಲ್ಲೇ ವಾಹನ ಹಸ್ತಾಂತರ

ದೇವನಹಳ್ಳಿ: ಸರಣಿ ಬೈಕ್ ಕಳ್ಳತನ ಪ್ರಕರಣ ಭೇದಿಸಿರುವ ವಿಜಯಪುರ ಠಾಣೆ ಪೊಲೀಸರು 42 ಕಳ್ಳತನದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಇದೀಗ ಅವುಗಳನ್ನು ಮಾಲೀಕರಿಗೆ ಮರಳಿಸುವ ಕಾರ್ಯಕ್ಕೂ ಹೊಸ ಮಾದರಿ ರೂಪಿಸಿದ್ದಾರೆ. ಕಳೆದುಹೋದ ಬೈಕ್‌ಗಳ ನಿರೀಕ್ಷೆಯನ್ನೇ ಕೈಬಿಟ್ಟಿದ್ದ ಸಂತ್ರಸ್ತರಿಗೆ ಇದು ಸಂತಸದ ಸುದ್ದಿಯಾಗಿದೆ.

ಸಾಮಾನ್ಯವಾಗಿ ಕಳ್ಳತನವಾದ ವಾಹನ ಪತ್ತೆಯಾದ ಬಳಿಕ ಅದನ್ನು ಪಡೆಯಲು ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ಆದರೆ ವಿಜಯಪುರ ಪೊಲೀಸರು ಜಾರಿಗೆ ತಂದಿರುವ ಜನಸ್ನೇಹಿ ಕ್ರಮದಡಿ, ವಾಹನ ಮಾಲೀಕರು ಅಗತ್ಯ ದಾಖಲೆಗಳು ಮತ್ತು ಬಾಂಡ್ ಸಲ್ಲಿಸಿ ನೇರವಾಗಿ ಪೊಲೀಸ್ ಠಾಣೆಯಲ್ಲೇ ತಮ್ಮ ಬೈಕ್‌ಗಳನ್ನು ವಾಪಸ್ ಪಡೆಯುತ್ತಿದ್ದಾರೆ.

ಕಳ್ಳತನದ ವಾಹನಗಳನ್ನು ಕೇವಲ 2 ರಿಂದ 3 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಖಲೀಲ್ ಅಹ್ಮದ್ ಬಂಧನದ ಬಳಿಕ 42 ಬೈಕ್‌ಗಳು ಪತ್ತೆಯಾಗಿದ್ದು, ಸಾರ್ವಜನಿಕರು ಪೊಲೀಸರ ಕಾರ್ಯಾಚರಣೆ ಮತ್ತು ವಾಹನ ವಾಪಸ್ ನೀಡುವ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಯುವುದಕ್ಕೂ ಮುನ್ನ ಕೃಷಿ ತಾಪಂಡಗೆ ಸಂದೇಶ ಕಳುಹಿಸಿದ್ದ ವೈಶಾಕ್

ಬೆಂಗಳೂರು: ನಟಿ ಕೃಷಿ ತಾಪಂಡ ಅವರ ಆರ್‌ಆರ್ ನಗರ ನಿವಾಸದಲ್ಲಿ ಉದ್ಯಮಿ ವೈಶಾಕ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಮುನ್ನ ವೈಶಾಕ್, “ನನಗೆ ಜೀವನವೇ ಸಾಕಾಗಿದೆ, ಬದುಕಲು ಇಷ್ಟವಿಲ್ಲ” ಎಂದು ನಟಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ‘ಕ್ಷೇಮವನ’ದಲ್ಲಿದ್ದ ಕೃಷಿ ತಾಪಂಡ, ಯಾವುದೇ ತಪ್ಪು ನಿರ್ಧಾರ ಕೈಗೊಳ್ಳಬೇಡ ಎಂದು ಸಮಾಧಾನಪಡಿಸಿ, ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರು.

ಆದರೆ ನಟಿ ಮನೆಗೆ ತಲುಪುವಷ್ಟರಲ್ಲಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಳಿಕ ಕೃಷಿ ತಾಪಂಡ ರಾಜರಾಜೇಶ್ವರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ತಂಡದ ಏಕಾಗ್ರತೆಗೆ ಧಕ್ಕೆ ತಂದಿದ್ದು ನನ್ನ ತಪ್ಪು: ಅಮಾನತು ಬಳಿಕ ಭಾವನಾತ್ಮಕವಾಗಿ ಕ್ಷಮೆ ಕೇಳಿದ ಬೆನ್ ಸ್ಟೋಕ್ಸ್

0

ಲಂಡನ್: ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಅಮಾನತುಗೊಂಡು ಹೊರಗುಳಿದಿದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಇದೀಗ ಮತ್ತೆ ತಂಡಕ್ಕೆ ಮರಳಿದ್ದಾರೆ. ತಂಡಕ್ಕೆ ವಾಪಸಾದ ಬೆನ್ನಲ್ಲೇ ತಮ್ಮ ನಡೆ ಇಡೀ ತಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಒಪ್ಪಿಕೊಂಡಿರುವ ಸ್ಟೋಕ್ಸ್, ಸಹ ಆಟಗಾರರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಜೂನ್ 8ರಂದು ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಮುಕ್ತಾಯವಾದ ಬಳಿಕ ಬೆನ್ ಸ್ಟೋಕ್ಸ್ ಮತ್ತು ವೇಗದ ಬೌಲರ್ ಗಸ್ ಅಟ್ಕಿನ್ಸನ್ ಲಂಡನ್‌ನ ನೈಟ್‌ಕ್ಲಬ್‌ಗೆ ಭೇಟಿ ನೀಡಿದ್ದರು. ಈ ವೇಳೆ ನಡೆದ ಘಟನೆಯ ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ತನಿಖೆ ನಡೆಸಿತ್ತು.

ತನಿಖೆಯಲ್ಲಿ ಕ್ಲಬ್‌ನಲ್ಲಿ ನಡೆದ ಸಂಘರ್ಷದಲ್ಲಿ ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಅವರ ಯಾವುದೇ ನೇರ ತಪ್ಪು ಕಂಡುಬರದಿದ್ದರೂ, ತಂಡದ ಕರ್ಫ್ಯೂ ನಿಯಮ ಉಲ್ಲಂಘಿಸಿದ್ದ ಕಾರಣ ಇಬ್ಬರಿಗೂ ಲಿಖಿತ ಎಚ್ಚರಿಕೆ ನೀಡಿ ಎರಡನೇ ಟೆಸ್ಟ್ ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು. ಹೀಗಾಗಿ ಎರಡನೇ ಪಂದ್ಯದಲ್ಲಿ ಸ್ಟೋಕ್ಸ್ ತಂಡದಿಂದ ಹೊರಗುಳಿದಿದ್ದರು.

ಈಗ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಬೆನ್ ಸ್ಟೋಕ್ಸ್, ತಮ್ಮ ತಪ್ಪಿನಿಂದಾಗಿ ತಂಡದ ವಾತಾವರಣದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿದೆ ಎಂದು ಒಪ್ಪಿಕೊಂಡರು.

“ಒಬ್ಬ ನಾಯಕನಾಗಿ ನಡೆದ ಘಟನೆಗೆ ಸಂಪೂರ್ಣ ಜವಾಬ್ದಾರಿ ನನ್ನದೇ. ನನ್ನ ನಡೆ ತಂಡದ ಗಮನವನ್ನು ಬೇರೆಡೆ ಸೆಳೆದಿತು. ಇಂಗ್ಲೆಂಡ್ ಪರ ಹೊಸದಾಗಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜೇಮ್ಸ್ ರಿವ್, ಜೋರ್ಡನ್ ಕಾಕ್ಸ್ ಹಾಗೂ ಸೋನಿ ಬೇಕರ್ ಅವರ ವಿಶೇಷ ಕ್ಷಣಗಳು ಈ ವಿವಾದದ ನಡುವೆ ಮಂಕಾದವು,” ಎಂದು ಸ್ಟೋಕ್ಸ್ ಹೇಳಿದ್ದಾರೆ.

ಇದರ ಜೊತೆಗೆ, ತಮ್ಮ ಅನುಪಸ್ಥಿತಿಯಲ್ಲಿ ಜೋ ರೂಟ್ ನಾಯಕತ್ವದಲ್ಲಿ ಕಣಕ್ಕಿಳಿದ ಇಂಗ್ಲೆಂಡ್ ತಂಡವು ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 253 ರನ್‌ಗಳ ಭಾರಿ ಸೋಲು ಅನುಭವಿಸಿತು. ಈ ಸೋಲಿನ ಬಳಿಕ ಹಂಗಾಮಿ ನಾಯಕ ಜೋ ರೂಟ್ ಟೀಕೆಗೆ ಗುರಿಯಾಗಬೇಕಾಯಿತು ಎಂಬುದನ್ನೂ ಸ್ಟೋಕ್ಸ್ ಉಲ್ಲೇಖಿಸಿದರು.

“ಲಾರ್ಡ್ಸ್‌ನಲ್ಲಿ ಮೊದಲ ಟೆಸ್ಟ್ ಗೆಲುವಿನ ಸಂಭ್ರಮಾಚರಣೆಯ ವೇಳೆ ಮಧ್ಯರಾತ್ರಿ ಕರ್ಫ್ಯೂ ನಿಯಮ ಉಲ್ಲಂಘಿಸಿ ನೈಟ್‌ಕ್ಲಬ್‌ನಲ್ಲಿ ಉಳಿದುಕೊಂಡದ್ದು ನನ್ನ ತಪ್ಪು. ಈ ಘಟನೆ ಇಡೀ ತಂಡದ ಏಕಾಗ್ರತೆಗೆ ಧಕ್ಕೆ ತಂದಿತು. ಅದಕ್ಕಾಗಿ ನಾನು ತಂಡದ ಎಲ್ಲ ಸದಸ್ಯರ ಬಳಿ ಕ್ಷಮೆ ಕೇಳುತ್ತೇನೆ,” ಎಂದು ಸ್ಟೋಕ್ಸ್ ತಿಳಿಸಿದ್ದಾರೆ.

ಧಾರವಾಡ ಜಿಲ್ಲಾ ಕೋರ್ಟ್ʼಗೆ ಮತ್ತೆ ಬಾಂಬ್ ಬೆದರಿಕೆ: ವಾರದೊಳಗೆ 2ನೇ ಬಾರಿ ಆತಂಕ ಸೃಷ್ಟಿಸಿದ ದುಷ್ಕರ್ಮಿಗಳು

ಧಾರವಾಡ: ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ವಾರದೊಳಗೆ ಎರಡನೇ ಬಾರಿ ಬಾಂಬ್ ಬೆದರಿಕೆ ಬಂದಿದ್ದು, ಇ-ಮೇಲ್ ಮೂಲಕ ಕಳುಹಿಸಲಾದ ಸಂದೇಶದಿಂದ ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಜಿಲ್ಲಾ ನ್ಯಾಯಾಲಯದ ಆಡಳಿತ ಕಚೇರಿಗೆ ಬಂದಿರುವ ಇ-ಮೇಲ್‌ನಲ್ಲಿ ಕೋರ್ಟ್ ಹಾಗೂ ನ್ಯಾಯಾಲಯ ಸಂಕೀರ್ಣದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬೆದರಿಕೆ ಹಾಕಲಾಗಿದೆ. ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಶೋಧ ಕಾರ್ಯಾಚರಣೆ ಆರಂಭಿಸಿದರು.

ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಸಾರ್ವಜನಿಕರನ್ನು ಕೋರ್ಟ್ ಆವರಣದಿಂದ ಹೊರಗೆ ತೆರಳುವಂತೆ ಸೂಚಿಸಲಾಯಿತು. ಬಳಿಕ ಪೊಲೀಸರು ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ನ್ಯಾಯಾಲಯ ಸಂಕೀರ್ಣದಲ್ಲಿ ಸಮಗ್ರ ತಪಾಸಣೆ ನಡೆಸಿದರು.

ಇದೇ ರೀತಿಯ ಬೆದರಿಕೆ ಸಂದೇಶ ಜೂನ್ 19ರಂದು ಕೂಡ ಧಾರವಾಡ ಜಿಲ್ಲಾ ನ್ಯಾಯಾಲಯದ ಆಡಳಿತ ಕಚೇರಿಗೆ ಬಂದಿತ್ತು. ಮಧ್ಯಾಹ್ನ 2 ಗಂಟೆಗೆ ನ್ಯಾಯಾಲಯದಲ್ಲಿ 23 ಸೈನೈಡ್ ಅನಿಲ ಗುಂಡುಗಳು ಸ್ಫೋಟಗೊಳ್ಳಲಿವೆ ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಈ ಬೆದರಿಕೆ ಸಂದೇಶದಿಂದ ನ್ಯಾಯಾಲಯದ ಸುತ್ತಮುತ್ತ ಆತಂಕದ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಆಗಮಿಸಿದ್ದ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿತ್ತು. ಸದ್ಯ ಮತ್ತೊಮ್ಮೆ ಬಂದಿರುವ ಬೆದರಿಕೆ ಸಂದೇಶದ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇ-ಮೇಲ್ ಕಳುಹಿಸಿದವರ ಪತ್ತೆಗೆ ಮುಂದಾಗಿದ್ದಾರೆ.

error: Content is protected !!