Home Blog Page 2

ಸುಡು ಬೇಸಿಗೆಯಲ್ಲಿ ಬೈಕ್ ಚಲಾಯಿಸುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆ, ತೀವ್ರ ಬಿಸಿಲಿನಲ್ಲಿ ದ್ವಿಚಕ್ರ ವಾಹನ ಸವಾರಿ ಮಾಡುವುದು ಚಾಲಕರಿಗೆ ಸವಾಲಿನ ಕೆಲಸವಾಗಿದೆ.

ಮಧ್ಯಾಹ್ನದ ಹೊತ್ತಿನಲ್ಲಿ ಹೆಚ್ಚಾಗುವ ಶಾಖ ದೇಹವನ್ನು ಬೇಗನೆ ದಣಿಗೊಳಿಸಿ, ಗಮನ ವಿಚಲಿತಗೊಳಿಸುವ ಮೂಲಕ ಅಪಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ. ವೈದ್ಯರು ಮತ್ತು ತಜ್ಞರ ಪ್ರಕಾರ, ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯವರೆಗೆ ಸಾಧ್ಯವಾದಷ್ಟು ಬೈಕ್ ಅಥವಾ ಸ್ಕೂಟರ್‌ನಲ್ಲಿ ಪ್ರಯಾಣಿಸುವುದನ್ನು ತಪ್ಪಿಸುವುದು ಒಳಿತು. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಈ ಸಮಯದಲ್ಲಿ ಹೊರಡಬೇಕು ಎಂದು ಸಲಹೆ ನೀಡಿದ್ದಾರೆ.

ಬಿಸಿಲಿನ ಹೊಡೆತದಿಂದ ರಕ್ಷಣೆಗಾಗಿ ಚಾಲಕರು ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಅತ್ಯಗತ್ಯ. ಜೊತೆಗೆ ಧೂಳು ಹಾಗೂ ಅಲ್ಟ್ರಾವಯೊಲೆಟ್ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಲು ಸನ್‌ಗ್ಲಾಸ್ ಬಳಸುವುದು ಅಗತ್ಯವಾಗಿದೆ. ಬಿಸಿ ಗಾಳಿಯಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ, ಪ್ರಯಾಣದ ವೇಳೆ ನೀರಿನ ಬಾಟಲಿ ಕೊಂಡೊಯ್ಯುವುದು ಹಾಗೂ ಆಗಾಗ್ಗೆ ನೀರು, ORS ಅಥವಾ ಎಳನೀರು ಸೇವಿಸುವುದು ಆರೋಗ್ಯಕ್ಕೆ ಸಹಕಾರಿ.

ದೀರ್ಘ ಪ್ರಯಾಣ ಮಾಡುವವರು ಮಧ್ಯ ಮಧ್ಯದಲ್ಲಿ ವಿರಾಮ ತೆಗೆದುಕೊಳ್ಳಬೇಕು. ತಲೆತಿರುಗುವಿಕೆ, ತಲೆನೋವು, ಅತಿಯಾದ ಬೆವರುವುದು ಅಥವಾ ಹಠಾತ್ ಆಯಾಸ ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸದೇ ತಕ್ಷಣ ವಾಹನ ನಿಲ್ಲಿಸಿ ನೆರಳಿನ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು ಮುಖ್ಯ ಎಂದು ತಜ್ಞರು ಸೂಚಿಸಿದ್ದಾರೆ.

ಇದಲ್ಲದೆ, ಬೇಸಿಗೆಯಲ್ಲಿ ಹಗುರವಾದ ಹಾಗೂ ಬೆಳಕು ಪ್ರತಿಬಿಂಬಿಸುವ ಬಟ್ಟೆಗಳನ್ನು ಧರಿಸುವುದು ಉತ್ತಮ. ಮೆಶ್ ರೈಡಿಂಗ್ ಜಾಕೆಟ್, ಪೂರ್ಣ ತೋಳಿನ ಟೀ-ಶರ್ಟ್, ಕೈಗವಸುಗಳು ಮತ್ತು ಆರಾಮದಾಯಕ ಪಾದರಕ್ಷೆಗಳು ಬಳಸುವುದರಿಂದ ಬಿಸಿಲಿನ ಪರಿಣಾಮವನ್ನು ಕಡಿಮೆ ಮಾಡಬಹುದು. ಚರ್ಮದ ರಕ್ಷಣೆಗಾಗಿ ಸನ್‌ಸ್ಕ್ರೀನ್ ಬಳಕೆ ಮಾಡುವುದು ಸಹ ಅಗತ್ಯವಾಗಿದೆ.

ಒಟ್ಟಾರೆ, ಬೇಸಿಗೆಯ ತೀವ್ರ ಬಿಸಿಲಿನಲ್ಲಿ ಸ್ವಲ್ಪ ಜಾಗ್ರತೆ ಮತ್ತು ಮುನ್ನೆಚ್ಚರಿಕೆ ತೆಗೆದುಕೊಂಡರೆ, ಸುರಕ್ಷಿತವಾಗಿ ದ್ವಿಚಕ್ರ ವಾಹನ ಸವಾರಿ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಕ್ರಮ ಸಂಬಂಧಕ್ಕೆ ಅಡ್ಡಿ: 6 ತಿಂಗಳ ಗರ್ಭಿಣಿ ಪತ್ನಿಯನ್ನೇ ಮನೆಯಿಂದ ಹೊರಹಾಕಿದ ಪತಿ

ಬೆಂಗಳೂರು: ಅಕ್ರಮ ಸಂಬಂಧ ಬಯಲಾದ ನಂತರ ತನ್ನ ಆರು ತಿಂಗಳ ಗರ್ಭಿಣಿ ಪತ್ನಿಯನ್ನೇ ಮನೆಯಿಂದ ಹೊರಹಾಕಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬಿಎಂಟಿಸಿ ಸೆಕ್ಯೂರಿಟಿ ಇನ್‌ಚಾರ್ಜ್ ಜಗದೀಪ್ (42) ವಿರುದ್ಧ ಪತ್ನಿ ಶ್ವೇತಾ (32) ಗಂಭೀರ ಆರೋಪಗಳನ್ನು ಮಾಡಿದ್ದಾರೆ.

14 ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದ ಈ ದಂಪತಿಗಳು ಜಯನಗರ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು. ಆದರೆ ಇತ್ತೀಚೆಗೆ ಪತಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಶ್ವೇತಾ ಅನುಮಾನಗೊಂಡಿದ್ದಾರೆ.

ವಾಟ್ಸಾಪ್ ಸಂದೇಶಗಳ ಪರಿಶೀಲನೆಯಲ್ಲಿ ಜಗದೀಪ್‌ಗೆ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರುವ ವಿಷಯ ಬೆಳಕಿಗೆ ಬಂದಿದೆ. ಪ್ರಶ್ನಿಸಿದ ವೇಳೆ ಪತ್ನಿಯ ಮೇಲೆ ಹಲ್ಲೆ ನಡೆದಿದ್ದು, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಆರು ತಿಂಗಳ ಗರ್ಭಿಣಿಯಾಗಿರುವ ಶ್ವೇತಾಗೆ “ಮಗು ತೆಗೆಸಿಬಿಡು, ನೀನು ನನಗೆ ಬೇಡ” ಎಂದು ಹೇಳಿ ಮನೆಯಿಂದ ಹೊರಹಾಕಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಈಗ ಪತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶ್ವೇತಾ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಪ್ರತ್ಯೇಕ ಪಾಲಿಕೆ ವಿವಾದ ತಿರುವು: ಹುಬ್ಬಳ್ಳಿ-ಧಾರವಾಡ ವಿಭಜನೆಗೆ ಬಿಜೆಪಿ ಬ್ರೇಕ್

0

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆ ವಿಚಾರದಲ್ಲಿ ಹೊಸ ರಾಜಕೀಯ ತಿರುವು ಕಾಣಿಸಿಕೊಂಡಿದೆ. ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದರೂ, ಈಗ ಬಿಜೆಪಿ ಆಡಳಿತದಲ್ಲೇ ವಿರೋಧದ ನಿರ್ಣಯ ಹೊರಬಿದ್ದಿದೆ.

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರತ್ಯೇಕ ಪಾಲಿಕೆ ಬೇಡ ಎಂದು ಸ್ಪಷ್ಟ ನಿರ್ಣಯ ಕೈಗೊಂಡಿದ್ದು, ಬದಲಾಗಿ ಇಡೀ ಅವಳಿ ನಗರವನ್ನು “ಬೃಹತ್ ಮಹಾನಗರ ಪಾಲಿಕೆ” ಆಗಿಯೇ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ. ಈ ನಿರ್ಧಾರ ಧಾರವಾಡ ಭಾಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

82 ವಾರ್ಡ್‌ಗಳು ಹಾಗೂ 13 ಲಕ್ಷ ಜನಸಂಖ್ಯೆಯಿರುವ ಈ ಪಾಲಿಕೆಯಲ್ಲಿ ಧಾರವಾಡಕ್ಕೆ ಅನುದಾನ ಕಡಿಮೆ ಸಿಗುತ್ತಿದೆ ಎಂಬುದು ದೀರ್ಘಕಾಲದ ಆರೋಪವಾಗಿತ್ತು. ಇದೇ ಕಾರಣದಿಂದಲೇ ಪ್ರತ್ಯೇಕ ಪಾಲಿಕೆ ಬೇಡಿಕೆ ಬಲವಾಗಿತ್ತು.

ಆದರೆ ಬಿಜೆಪಿ ವಾದದ ಪ್ರಕಾರ, ವಿಭಜನೆಯಾದರೆ ಎರಡೂ ಪಾಲಿಕೆಗಳ ಜನಸಂಖ್ಯೆ 10 ಲಕ್ಷಕ್ಕಿಂತ ಕೆಳಗೆ ಇಳಿಯಲಿದೆ. ಇದರಿಂದ ಕೇಂದ್ರದ 16ನೇ ಹಣಕಾಸು ಆಯೋಗದಿಂದ ಬರುವ ಸಾವಿರಾರು ಕೋಟಿ ಅನುದಾನಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಇದಲ್ಲದೆ, ಧಾರವಾಡಕ್ಕೆ ಸೇರಿಸಬೇಕಿದ್ದ ಗ್ರಾಮ ಪಂಚಾಯತ್‌ಗಳ ವಿರೋಧ, ಹಾಗೂ ಆಡಳಿತಾತ್ಮಕ ಗೊಂದಲಗಳು ಯೋಜನೆಗೆ ಅಡ್ಡಿಯಾಗಿವೆ.

ಮೈಸೂರು ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆ ಮಾಡುವ ಸರ್ಕಾರದ ಯೋಜನೆಯ ನಡುವೆಯೇ, ಹುಬ್ಬಳ್ಳಿ-ಧಾರವಾಡ ವಿಚಾರವು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ತಂದೆಯ ಸ್ಮರಣೆ ಉಳಿಸಿದ ಶಾಂತಿವನ: ಸಿದ್ದು ಪಾಟೀಲ ಕಾರ್ಯಕ್ಕೆ ಸಚಿವ ಎಚ್.ಕೆ. ಪಾಟೀಲ ಮೆಚ್ಚುಗೆ

ಗದಗ: ಮಗನು ತಂದೆಯ ಅಸ್ತಿತ್ವದ ಮುಂದುವರಿಕೆಯ ವಾರಸುದಾರನಾಗಿದ್ದನ್ನು ಮಕ್ಕಳು ಮರೆಯಬಾರದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು. “ಮಗ ತಂದೆಯ ಪ್ರತಿರೂಪ” ಎಂಬುದು ಕೇವಲ ದೈಹಿಕ ಹೋಲಿಕೆಯಲ್ಲ, ಅದು ಆಳವಾದ ಭಾವನಾತ್ಮಕ ಮತ್ತು ಅನುವಂಶೀಯ ಬಂಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಐತಿಹಾಸಿಕ ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ದು ಪಾಟೀಲರು ತಮ್ಮ ತಂದೆಯ ಹೆಸರಲ್ಲಿ ನಿರ್ಮಿಸಿದ ದಿ. ಅಜ್ಜಣ್ಣ ಕೆ. ಪಾಟೀಲ ಶಾಂತಿವನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ದಿ. ಅಜ್ಜಣ್ಣ ಪಾಟೀಲ ಹಾಗೂ ರೇಣುಕಾ ಅಜ್ಜಣ್ಣ ಪಾಟೀಲರ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿದರು.

ತಂದೆಯಂತೆ ಸಿದ್ದು ಪಾಟೀಲರು ನಡೆ-ನುಡಿಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕೌಟುಂಬಿಕ, ಶೈಕ್ಷಣಿಕ ಹಾಗೂ ವ್ಯವಹಾರಿಕ ಚಿಂತನೆಗಳನ್ನು ಅಳವಡಿಸಿಕೊಂಡಿರುವುದು ಹೆಮ್ಮೆಗೇ ಕಾರಣವಾಗಿದೆ ಎಂದು ಅವರು ಹೇಳಿದರು.

ತಂದೆಯ ಗುಣಲಕ್ಷಣಗಳು ಮತ್ತು ಸ್ವಭಾವಗಳು ಮಗನಿಗೆ ಅನುವಂಶೀಯವಾಗಿ ವರ್ಗಾವಣೆಯಾಗುತ್ತವೆ ಎಂಬುದನ್ನು ಸಿದ್ದು ಪಾಟೀಲರ ವ್ಯಕ್ತಿತ್ವ ಸ್ಪಷ್ಟಪಡಿಸುತ್ತದೆ. ತಂದೆಯ ಹೆಸರಲ್ಲಿ ಶಾಂತಿವನ ನಿರ್ಮಿಸಿ, ಅದರೊಳಗೆ ತಂದೆ-ತಾಯಿಯ ಗದ್ದುಗೆ ನಿರ್ಮಿಸುವ ಮೂಲಕ ಪೂರ್ವಜರ ಅಸ್ತಿತ್ವವನ್ನು ಉಳಿಸಿ ಬೆಳೆಸುತ್ತಿರುವುದು ಕುಟುಂಬದ ಆದರ್ಶತೆಯ ಸಂಕೇತವಾಗಿದೆ ಎಂದು ಸಚಿವರು ಹೇಳಿದರು.

ಸುಮಾರು 6 ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಹಾಳು ಮಾಡದೆ ಶಾಂತಿವನವಾಗಿ ರೂಪಿಸಿರುವ ಸಿದ್ದು ಪಾಟೀಲರು, 3 ಬೋರ್‌ವೆಲ್‌ಗಳನ್ನು ತೆಗೆದು, ತೋಟದ ಬಾವಿಯ ನೀರನ್ನು ಬಳಸಿಕೊಂಡು ಅಡಿಕೆ, ಪಪ್ಪಾಯ, ಬಾಳೆ, ಗಂಧ, ನೆರಳೆ, ದ್ರಾಕ್ಷಿ, ಮಹಾಗಣಿ, ಆಬಾಲಿ, ಮಲ್ಲಿಗೆ ಮತ್ತು ಸೇವಂತಿಗೆ ಹೂವಿನ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಇದರಿಂದ ಅವರು ತಂದೆಯಂತೆ ಅನುಕರಣೀಯ ಕೃಷಿಕರಾಗಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ತಂದೆಯು ಕುಟುಂಬದ ಹೊಣೆಗಾರಿಕೆ ಮತ್ತು ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುತ್ತಾನೆ. ಅದೇ ಹಾದಿಯಲ್ಲಿ ಮಗ ಸಾಗುತ್ತಾನೆ ಎಂಬುದಕ್ಕೆ ಸಿದ್ದು ಪಾಟೀಲರು ಉತ್ತಮ ಉದಾಹರಣೆ ಎಂದು ಹೇಳಿದರು.

ತಂದೆ-ಮಗನ ನಡುವಿನ ಪ್ರೀತಿ ಮತ್ತು ಗೌರವವು ಅಪರೂಪದ, ಹೃದಯಸ್ಪರ್ಶಿ ಬಾಂಧವ್ಯವಾಗಿದ್ದು, ಅದನ್ನು ಅರಿತುಕೊಂಡರೆ ಕುಟುಂಬದ ನೆಲೆಗಟ್ಟು ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜನಪ್ರಿಯ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಕಾಂಗ್ರೆಸ್ ನಾಯಕ ದಶರಥ ಗಾಣಿಗೇರ ಹಾಗೂ ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

“ಕಾರ್ಮಿಕರಿಗೆ ದೊಡ್ಡ ಉಡುಗೊರೆ: ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಆರಂಭ”

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸಾವಿರಾರು ಕಾರ್ಮಿಕರಿಗೆ ಬಹುಕಾಲದ ನಿರೀಕ್ಷೆ ಇಂದು ಕೊನೆಗೂ ನೆರವೇರಿದೆ. ಮೂರು ವರ್ಷಗಳ ವಿಳಂಬದ ನಂತರ ನೂತನ ಇಎಸ್‌ಐ ಆಸ್ಪತ್ರೆ ಅಧಿಕೃತವಾಗಿ ಕಾರ್ಯಾರಂಭಗೊಂಡಿದೆ.

ಸುಮಾರು ₹101.14 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರ“ಕಾರ್ಮಿಕರಿಗೆ ದೊಡ್ಡ ಉಡುಗೊರೆ: ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಆರಂಭ” ನಿರ್ಮಿಸಿರುವ ಈ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, ಕಾರ್ಮಿಕರಿಗೆ ಸ್ಥಳೀಯ ಮಟ್ಟದಲ್ಲೇ ತುರ್ತು ವೈದ್ಯಕೀಯ ಸೇವೆ ಒದಗಿಸುವ ಗುರಿಯನ್ನು ಹೊಂದಿದೆ. ಇನ್ನು ಮುಂದೆ ಚಿಕಿತ್ಸೆಗಾಗಿ ಬೆಂಗಳೂರಿನತ್ತ ಓಡಬೇಕಾದ ಅನಿವಾರ್ಯತೆ ಇಲ್ಲ.

ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವೀಯ ಅವರಿಂದ ಉದ್ಘಾಟನೆಗೊಂಡ ಈ ಆಸ್ಪತ್ರೆ, ಕೈಗಾರಿಕಾ ಕಾರ್ಮಿಕರ ಆರೋಗ್ಯ ಭದ್ರತೆಗೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಡಾ. ಕೆ. ಸುಧಾಕರ್ ಹಾಗೂ ಶಾಸಕ ಧೀರಜ್ ಮುನಿರಾಜ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಆದರೆ ಮೂರು ವರ್ಷಗಳ ತಡದ ನಂತರ ಆರಂಭವಾದ ಈ ಯೋಜನೆ ಈಗ ನಿಜವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದೇ ಮುಂದಿನ ದೊಡ್ಡ ಪ್ರಶ್ನೆ.

ನೂರಾರು ಜೀವ ಉಳಿಸಿದ್ದ ವೈದ್ಯನಿಗೆ ಸಿಗಲಿಲ್ಲ ಚಿಕಿತ್ಸೆ : ಗಡಿಯ ಗ್ರಾಮದಲ್ಲಿ ಹೃದಯವಿದ್ರಾವಕ ಅಂತ್ಯ

ಕಾರವಾರ, ಮೇ 03: ನೂರಾರು ಜನರಿಗೆ ಹೊಸ ಜೀವನ ನೀಡಿದ ವೈದ್ಯನೇ ಕೊನೆಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕರ್ನಾಟಕ-ಗೋವಾ ಗಡಿಯ ಡಿಗ್ಗಿ ಗ್ರಾಮದಲ್ಲಿ ನಡೆದಿದೆ. ಡಾ. ಲೆನ್ವರ್ ಲೋಬೋ ಅವರ ಅಕಾಲಿಕ ಮರಣ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಈ ಕೂಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲದ ಪರಿಸ್ಥಿತಿಯಲ್ಲಿ ಕಳೆದ ಮೂರು ವರ್ಷಗಳಿಂದ ಡಾ. ಲೋಬೋ ಸೇವೆ ಸಲ್ಲಿಸುತ್ತಿದ್ದರು. ಶಿರಸಿಯ ಸ್ಕೋಡಾ ವೇಸ್ ಸಂಸ್ಥೆ ಕರಾರಿನಡಿ ಇಲ್ಲಿ ಆಸ್ಪತ್ರೆ ನಡೆಸಲಾಗುತ್ತಿದ್ದು, ಗೋವಾ ಗಡಿಯ ಭಾಗಗಳಿಂದಲೂ ಜನರು ಚಿಕಿತ್ಸೆಗಾಗಿ ಇಲ್ಲಿ ಆಗಮಿಸುತ್ತಿದ್ದರು.

ಅವರ ಚಿಕಿತ್ಸೆ ಮೂಲಕ ಅನೇಕರು ಗುಣಮುಖರಾಗಿದ್ದು, ಗ್ರಾಮಸ್ಥರ ನಂಬಿಕೆಯ ಆಧಾರವಾಗಿದ್ದರು. ಆದರೆ ವಿಧಿಯಾಟ ಕ್ರೂರವಾಗಿ ತಿರುಗಿತು.

ರಾತ್ರಿ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡರೂ ತಕ್ಷಣ ಆಸ್ಪತ್ರೆಗೆ ಹೋಗಲು ವಾಹನ ಇರಲಿಲ್ಲ, ಮೊಬೈಲ್ ನೆಟ್ವರ್ಕ್ ಸಹ ಲಭ್ಯವಿರಲಿಲ್ಲ. ಬೆಳಗಿನ ಜಾವ ವಾಹನ ತರಿಸಿಕೊಂಡು ಜೋಯಿಡಾ ಕಡೆಗೆ ಹೊರಟಾಗ, ಎದೆನೋವು ಮತ್ತಷ್ಟು ತೀವ್ರವಾಗಿ ದಾರಿ ಮಧ್ಯದಲ್ಲೇ ಜೀವ ಕಳೆದುಕೊಂಡರು.

ಜೀವ ಉಳಿಸುವ ವೈದ್ಯನಿಗೇ ಚಿಕಿತ್ಸೆ ಸಿಗದ ವಾಸ್ತವ. ಇದು ಕೇವಲ ದುರಂತವಲ್ಲ, ವ್ಯವಸ್ಥೆಯ ಸ್ಪಷ್ಟ ವೈಫಲ್ಯವಾಗಿದೆ.

“ಮತ ಎಣಿಕೆಗೆ ಕೌಂಟ್‌ಡೌನ್: ನಾಳೆ 5 ರಾಜ್ಯಗಳ ತೀರ್ಪ — ಯಾರಿಗೆ ಅಧಿಕಾರ, ಯಾರಿಗೆ ಆಘಾತ?”

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 4ರಂದು ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ರಾಜ್ಯಗಳ ಜನತೆಯ ತೀರ್ಪು ಬಹಿರಂಗವಾಗಲಿದೆ.

ಚುನಾವಣಾ ಆಯೋಗದ ನಿಯಮಿತ ಪ್ರಕ್ರಿಯೆಯಂತೆ ಮೊದಲು ಅಂಚೆ ಮತಪತ್ರಗಳ ಎಣಿಕೆ, ಬಳಿಕ ಇವಿಎಂ ಮತಗಳ ಎಣಿಕೆ ನಡೆಯಲಿದೆ. ದೇಶದಾದ್ಯಂತ ಕಟ್ಟುನಿಟ್ಟಿನ ಭದ್ರತೆಯಲ್ಲಿ ಏಕಕಾಲದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

824 ಕ್ಷೇತ್ರಗಳ ಈ ಮಹಾ ಚುನಾವಣೆಯ ಫಲಿತಾಂಶ ಕೇವಲ ಸರ್ಕಾರ ರಚನೆಗೆ ಸೀಮಿತವಲ್ಲ — ರಾಷ್ಟ್ರಮಟ್ಟದ ರಾಜಕೀಯ ಶಕ್ತಿಪರೀಕ್ಷೆ. ಮಧ್ಯಾಹ್ನದೊಳಗೆ ಟ್ರೆಂಡ್ ಸ್ಪಷ್ಟವಾಗುವ ನಿರೀಕ್ಷೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಪೈಪೋಟಿ ದೇಶದ ಗಮನ ಸೆಳೆದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಭಾವ ಪರೀಕ್ಷೆಗೆ ಇಳಿದಿದೆ.

ಇನ್ನೊಂದೆಡೆ ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ತನ್ನ ಗಡಿಯನ್ನು ಕಾಪಾಡಿಕೊಳ್ಳಲು ಸಜ್ಜಾಗಿದೆ.

ಫಾಲ್ಟಾ ಕ್ಷೇತ್ರದಲ್ಲಿ ಅಕ್ರಮಗಳ ಹಿನ್ನೆಲೆಯಲ್ಲಿ ಮರು ಮತದಾನ ಆದೇಶಿಸಲಾಗಿದ್ದು, ಅದರ ಫಲಿತಾಂಶ ಮೇ 24ರಂದು ಪ್ರಕಟವಾಗಲಿದೆ.

“ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ? ಪೊಲೀಸರ ವಿರುದ್ಧ ಗಂಭೀರ ಆರೋಪ — ಶಾಸಕ ಅಬ್ಬಯ್ಯ ಕಿಡಿ”

0

ಹುಬ್ಬಳ್ಳಿ: ವ್ಯಾಪಾರ ಮತ್ತು ಶಿಕ್ಷಣದ ಹಬ್ ಆಗಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆಯೇ ಪ್ರಶ್ನಾರ್ಥಕವಾಗಿದೆ. ಪೊಲೀಸರೇ ಹಣಕ್ಕಾಗಿ ಜನರನ್ನು ಪೀಡಿಸುತ್ತಿದ್ದಾರೆ, ಅಕ್ರಮ ದಂಧೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಈ ಕುರಿತು ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅವಳಿ ನಗರದಲ್ಲಿ ಪೊಲೀಸ ಇಲಾಖೆಯಲ್ಲಿ ಏನೂ ಸರಿಯಿಲ್ಲ. ಕೆಲವರು ರಿಯಲ್ ಎಸ್ಟೇಟ್ ದಂಧೆಗಳಲ್ಲಿ ತೊಡಗಿಸಿಕೊಂಡು, ಅಕ್ರಮ ಚಟುವಟಿಕೆಗಳಿಗೆ ಕೈಜೋಡಿಸುತ್ತಿದ್ದಾರೆ” ಎಂದು ಅವರು ಕಿಡಿಕಾರಿದ್ದಾರೆ.

ಧಾರವಾಡದಲ್ಲಿ ವಿದ್ಯಾರ್ಥಿಯೋರ್ವ ಪೊಲೀಸರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳಿಕ ಆರೋಪಗಳು ಮತ್ತಷ್ಟು ಗಂಭೀರವಾಗಿವೆ. ನ್ಯಾಯ ಕೊಡಿಸಬೇಕಾದವರೇ ಅನ್ಯಾಯದ ದಾರಿಗೆ ಇಳಿದಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಕ್ರಿಕೆಟ್ ಬೆಟ್ಟಿಂಗ್, ಅಕ್ರಮ ಅಕ್ಕಿ ಸಾಗಾಟ ಸೇರಿದಂತೆ ಹಲವು ಕಾನೂನುಬಾಹಿರ ಚಟುವಟಿಕೆಗಳು ಪೊಲೀಸರ ಮೂಗಿನ ನೇರದಲ್ಲಿ ನಡೆಯುತ್ತಿದ್ದರೂ ಕಠಿಣ ಕ್ರಮ ಕಾಣಿಸುತ್ತಿಲ್ಲ ಎಂಬುದು ಮತ್ತೊಂದು ಆರೋಪ.

ಈ ಹಿನ್ನೆಲೆ, ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕು ಎಂದು ಶಾಸಕ ಅಬ್ಬಯ್ಯ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಸಿಎಂ ಅವರನ್ನು ಭೇಟಿಯಾಗಿ ಕೂಡಾ ಈ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.

ತಲೆಸುತ್ತಿ ಬಿದ್ದ ಕ್ಷಣವೇ ದುರಂತ: ಬಾಲಕನ ಮೇಲೆ ಬಸ್ ಹರಿದು ಸಾವು!

ಬೆಂಗಳೂರು: ತಂದೆಗೆ ಔಷಧಿ ತರಲು ಮನೆಯಿಂದ ಹೊರಟಿದ್ದ 11 ವರ್ಷದ ಬಾಲಕನೊಬ್ಬ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಬಾಲಕನನ್ನು ವರುಣ್ (11) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ಸುಮಾರು 9 ಗಂಟೆಗೆ ವರುಣ್ ರಸ್ತೆ ದಾಟಲು ಬ್ಯಾರಿಕೇಡ್ ಬಳಿ ನಿಂತಿದ್ದ ವೇಳೆ, ತಲೆಸುತ್ತಿ ಹಿಂದಕ್ಕೆ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಹಾದುಹೋಗುತ್ತಿದ್ದ ಖಾಸಗಿ ಬಸ್‌ನ ಹಿಂಬದಿ ಚಕ್ರ ಆತನ ಎದೆಯ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪ್ರಾಥಮಿಕ ಶಂಕೆಯಂತೆ ಬಿಸಿಲಿನ ತಾಪದಿಂದ ಹೀಟ್‌ಸ್ಟ್ರೋಕ್ ಆಗಿ ತಲೆಸುತ್ತು ಬಂದಿರಬಹುದೆಂದು ಹೇಳಲಾಗುತ್ತಿದೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕ ದೃಶ್ಯ ಸ್ಥಳೀಯರನ್ನು ಕಂಗೆಡಿಸಿದೆ.

ಘಟನೆಗೆ ಸಂಬಂಧಿಸಿದಂತೆ ಹೆಣ್ಣೂರು–ಬಾಗಲೂರು ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನೂ ಸ್ಥಳೀಯರು ಕಾರಣವೆಂದು ಆರೋಪಿಸಿದ್ದಾರೆ. ಕಾಮಗಾರಿಯಿಂದಾಗಿ ಸಂಚಾರ ಗೊಂದಲ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೂಡ ಅಪಘಾತ ಸಂಭವಿಸಿ ಡೆಲಿವರಿ ಬಾಯ್ ಒಬ್ಬರು ಮೃತಪಟ್ಟಿದ್ದರು ಎಂಬ ಮಾಹಿತಿ ಇದೆ.

ಘಟನೆ ಸಂಬಂಧ ಹೆಣ್ಣೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಮೇಲ್ನೋಟಕ್ಕೆ ಚಾಲಕನ ತಪ್ಪು ಸ್ಪಷ್ಟವಾಗದಿದ್ದರೂ, ಸಾವಿನ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.


ಮಂಟಪದಲ್ಲೇ ಗಂಡನ ಮದುವೆ ನಿಲ್ಲಿಸಿದ ಗರ್ಭಿಣಿ ಪತ್ನಿ: ಮುಂದೇನಾಯ್ತು ಗೊತ್ತಾ?

ದೊಡ್ಡಬಳ್ಳಾಪುರ: ಮನೆಯವರ ಒತ್ತಡಕ್ಕೆ ಮಣಿದು ಮೊದಲ ಪತ್ನಿಗೆ ವಂಚಿಸಿ ಎರಡನೇ ಮದುವೆಗೆ ಮುಂದಾಗಿದ್ದ ವರನ ಮದುವೆಯನ್ನು ಆತನ ಗರ್ಭಿಣಿ ಪತ್ನಿಯೇ ಮಂಟಪಕ್ಕೆ ಬಂದು ತಡೆದ ಘಟನೆ ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳ ಮೂಲದ ಮಹಿಳೆಯನ್ನು ಪ್ರೀತಿಸಿ ಕುಮಾರ್ ಎಂಬ ಯುವಕ ಒಂದು ವರ್ಷದ ಹಿಂದೆ ಮದುವೆಯಾಗಿದ್ದಾನೆ. ಸದ್ಯ ಆತನ ಮೊದಲ ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ಆದರೆ ಮನೆಯವರ ಒತ್ತಡಕ್ಕೆ ಮಣಿದ ಕುಮಾರ್, ಮೊದಲ ಮದುವೆಯ ವಿಷಯವನ್ನು ಮರೆಮಾಚಿ ಮತ್ತೊಬ್ಬ ಯುವತಿಯೊಂದಿಗೆ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ಕುರಿತು ತಿಳಿದುಕೊಂಡ ಗರ್ಭಿಣಿ ಪತ್ನಿ, ತಡರಾತ್ರಿ ಕೇರಳದಿಂದ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ಮದುವೆ ಶಾಸ್ತ್ರ ಆರಂಭವಾಗುವ ಮುನ್ನವೇ ಅವರು ಕಲ್ಯಾಣ ಮಂಟಪಕ್ಕೆ ಪ್ರವೇಶಿಸಿ, ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿ ಮದುವೆಯನ್ನು ತಡೆದಿದ್ದಾರೆ.

ತಮ್ಮ ಮದುವೆಯ ದಾಖಲೆಗಳು ಹಾಗೂ ಗರ್ಭಿಣಿಯಾಗಿರುವ ವಿಷಯವನ್ನು ತಿಳಿಸಿ ನ್ಯಾಯಕ್ಕಾಗಿ ಅವರು ಆಗ್ರಹಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ಪೊಲೀಸರು ವರ ಕುಮಾರ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಮೊದಲ ಮದುವೆಯ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹಸೆಮಣೆ ಏರಬೇಕಿದ್ದ ವರ ಈಗ ಪೊಲೀಸ್ ವಶದಲ್ಲಿದ್ದು, ಎರಡನೇ ಮದುವೆಗೆ ಸಿದ್ಧವಾಗಿದ್ದ ಯುವತಿಯ ಕುಟುಂಬಸ್ಥರು ಕಂಗಾಲಾಗಿದ್ದಾರೆ.

error: Content is protected !!