Home Blog

ಬರದಿಂದ ರೈತರ ಸಂಕಷ್ಟ, ಸಭೆಯಲ್ಲಿ ರೀಲ್ಸ್ ನೋಡುತ್ತಾ ಅಧಿಕಾರಿಗಳ ಚಲ್ಲಾಟ! ಸಚಿವರ ವಾರ್ನಿಂಗ್‌ಗೂ ಡೋಂಟ್‌ ಕೇರ್‌?

0

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಾಡಳಿತ ಕಚೇರಿಯಲ್ಲಿ ಬರ ಪರಿಸ್ಥಿತಿ ಕುರಿತು ನಡೆದ ಸಭೆಯಲ್ಲಿ ಕೆಲ ಅಧಿಕಾರಿಗಳ ವರ್ತನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರು ಬರ ನಿರ್ವಹಣೆ ಕುರಿತು ಗಂಭೀರವಾಗಿ ಚರ್ಚೆ ನಡೆಸುತ್ತಿದ್ದರೆ, ಕೆಲ ಅಧಿಕಾರಿಗಳು ಮೊಬೈಲ್‌ನಲ್ಲಿ ರೀಲ್ಸ್ ವೀಕ್ಷಿಸುತ್ತಿದ್ದರು ಹಾಗೂ ಇನ್ನು ಕೆಲವರು ನಿದ್ದೆ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಗದಗ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಬರ ನಿರ್ವಹಣೆಯಲ್ಲಿ ಜಿಲ್ಲಾಡಳಿತದ ಕಾರ್ಯವೈಖರಿ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ಎನ್ನಲಾಗಿದೆ.

ಆದರೆ ಸಚಿವರ ಸಭೆಯಲ್ಲೇ ಕೆಲ ಅಧಿಕಾರಿಗಳು ಮೊಬೈಲ್‌ನಲ್ಲಿ ತಲ್ಲೀನರಾಗಿದ್ದ ದೃಶ್ಯಗಳು ಕಂಡುಬಂದಿವೆ. ಕೆಲವರು ರೀಲ್ಸ್ ವೀಕ್ಷಿಸುತ್ತಿದ್ದರೆ, ಇನ್ನೂ ಕೆಲ ಅಧಿಕಾರಿಗಳು ಸಭೆಯ ವೇಳೆ ನಿದ್ದೆ ಮಾಡುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ರೈತರು ಸಂಕಷ್ಟದಲ್ಲಿರುವಾಗ ಅಧಿಕಾರಿಗಳ ನಿರ್ಲಕ್ಷ್ಯ?

ಜಿಲ್ಲೆಯಲ್ಲಿ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ, ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದ ಮಹತ್ವದ ಸಭೆಯಲ್ಲಿ ಅಧಿಕಾರಿಗಳು ಈ ರೀತಿ ನಿರ್ಲಕ್ಷ್ಯ ತೋರಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಬರ ನಿರ್ವಹಣೆಯಲ್ಲಿನ ಲೋಪಗಳ ಬಗ್ಗೆ ಸಚಿವರು ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಸಚಿವರ ಎಚ್ಚರಿಕೆಯ ನಡುವೆಯೂ ಕೆಲ ಅಧಿಕಾರಿಗಳು ಸಭೆಯ ಗಂಭೀರತೆಯನ್ನು ಪರಿಗಣಿಸದೆ ಮೊಬೈಲ್ ಬಳಕೆ ಹಾಗೂ ನಿದ್ರೆಯಲ್ಲಿ ತೊಡಗಿದ್ದ ದೃಶ್ಯಗಳು ಚರ್ಚೆಗೆ ಗ್ರಾಸವಾಗಿವೆ.

ರೈತರ ಸಂಕಷ್ಟ ನಿವಾರಣೆ, ಕುಡಿಯುವ ನೀರು ಹಾಗೂ ಬರ ನಿರ್ವಹಣೆಯಂತಹ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ನಡೆದ ಸಭೆಯಲ್ಲೇ ಅಧಿಕಾರಿಗಳ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ನಿವೃತ್ತಿ ಹುದ್ದೆಗೆ ಮಾತ್ರ; ಸೇವೆಗೆ ಅಲ್ಲ: ಮುಪ್ಪಿನ ಬಸವಲಿಂಗ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಾನವನಿಗೆ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬುದ್ಧಿವಂತಿಕೆಯ ಜತೆಗೆ ಹೃದಯವಂತಿಕೆ, ವಿನಯ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಹುದ್ದೆ ಮತ್ತು ಅಧಿಕಾರಕ್ಕಿಂತ ವ್ಯಕ್ತಿಯ ಪ್ರಾಮಾಣಿಕತೆ, ನಿಷ್ಠೆ ಹಾಗೂ ನಡೆ-ನುಡಿಯೇ ಆತನ ಗೌರವವನ್ನು ನಿರ್ಧರಿಸುತ್ತದೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀ ಅನ್ನದಾನೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ನಡೆದ ನಿವೃತ್ತ ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಅವರ ಅಭಿನಂದನಾ ಹಾಗೂ ನಿವೃತ್ತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಮಾನವನ ಜೀವನವೇ ಒಂದು ದೊಡ್ಡ ಅವಕಾಶ. ದೊರೆತ ಅವಕಾಶವನ್ನು ಸಮಾಜ, ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಒಳಿತಿಗಾಗಿ ಬಳಸಿಕೊಳ್ಳಬೇಕು. ಬುದ್ಧಿವಂತಿಕೆ ಎಷ್ಟು ಮುಖ್ಯವೋ, ಹೃದಯ ಶ್ರೀಮಂತಿಕೆಯೂ ಅಷ್ಟೇ ಮುಖ್ಯ. ಬುದ್ಧಿಯೊಂದಿಗೆ ಹೃದಯವಂತಿಕೆಯನ್ನೂ ಬೆಳೆಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಇಂಗ್ಲಿಷ್ ಪ್ರಾಧ್ಯಾಪಕರಾಗಿ ಹಲವು ವರ್ಷ ಸೇವೆ ಸಲ್ಲಿಸಿ ಬಳಿಕ ಪ್ರಾಚಾರ್ಯರಾಗಿ ಸಂಸ್ಥೆಯನ್ನು ಮುನ್ನಡೆಸಿದ ಕೇಶಣ್ಣವರ ಅವರು ವಹಿಸಿಕೊಂಡ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದಾರೆ. ಸಂಸ್ಥೆಯ ಹಿತಕ್ಕಾಗಿ ತಮ್ಮ ಶಕ್ತಿಮೀರಿ ಸೇವೆ ಸಲ್ಲಿಸಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತಿಯಿಂದ ಕೇವಲ ಹುದ್ದೆಯ ಜವಾಬ್ದಾರಿ ಮುಗಿಯುತ್ತದೆ. ಆದರೆ ಸಂಸ್ಥೆ, ಗುರು-ಶಿಷ್ಯರು ಹಾಗೂ ಸಹೋದ್ಯೋಗಿಗಳೊಂದಿಗೆ ನಿರ್ಮಾಣವಾದ ಆತ್ಮೀಯ ಸಂಬಂಧಗಳು ಎಂದಿಗೂ ಮುಗಿಯುವುದಿಲ್ಲ. ಕೇಶಣ್ಣವರ ಅವರು ನಿವೃತ್ತಿಯ ನಂತರವೂ ತಮ್ಮ ಅನುಭವವನ್ನು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬಳಸಿಕೊಂಡು ಸೇವೆ ಮುಂದುವರಿಸಬೇಕು ಎಂದು ಸ್ವಾಮೀಜಿ ಆಶಿಸಿದರು.

ಗ್ರಾಮೀಣ ಭಾಗದ ಮಕ್ಕಳು ತಮ್ಮ ಊರಿನಲ್ಲಿಯೇ ಶಿಕ್ಷಣ ಪಡೆಯಬೇಕು ಎಂಬ ಹಿರಿಯರ ದೂರದೃಷ್ಟಿ ಹಾಗೂ ತ್ಯಾಗದ ಫಲವಾಗಿ ಸಂಸ್ಥೆ ಬೆಳೆದಿದೆ. ಸಂಸ್ಥೆಯ ನಿರ್ಮಾಣದ ಹಿಂದೆ ಇರುವ ಹಿರಿಯರ ಪರಿಶ್ರಮವನ್ನು ಇಂದಿನ ಪೀಳಿಗೆ ಮರೆಯಬಾರದು. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ನಿಷ್ಠೆ, ವಿನಯ ಹಾಗೂ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಮಕ್ಕಳ ಶಿಕ್ಷಣದಲ್ಲಿ ಕೇವಲ ಅಂಕ ಗಳಿಕೆಗೆ ಒತ್ತು ನೀಡದೆ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಶಿಕ್ಷಣವು ವಿದ್ಯಾರ್ಥಿಗಳನ್ನು ಜ್ಞಾನಿಗಳನ್ನಾಗಿ ಮಾಡುವ ಜತೆಗೆ ಉತ್ತಮ ಮನುಷ್ಯರನ್ನಾಗಿ ರೂಪಿಸಬೇಕು. ಹಿಂದಿನ ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಅದರ ಪ್ರಗತಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಚೇರ್ಮನ್ ಡಾ. ಎಸ್.ಎ. ಪಾಟೀಲ ಮಾತನಾಡಿದರು. ಎಸ್.ಎ.ವಿ.ವಿ.ಪಿ ಸಮಿತಿಯ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಡಾ. ಜಿ.ಕೆ. ಕಾಳೆ, ಬಿ.ಎಫ್. ಚೇಗರಡ್ಡಿ, ಸೊಮಣ್ಣ ಹರ್ಲಾಪೂರ ಮುಖ್ಯ ಅತಿಥಿಗಳಾಗಿ ಮಾತನಾಡಿ ಕೇಶಣ್ಣವರ ಅವರ ಸೇವೆಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಹಾಗೂ ಅವರ ಪತ್ನಿಯನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ. ಆರ್.ಆರ್. ಪಾಟೀಲ ನಿರೂಪಿಸಿದರು. ಡಾ. ಡಿ.ಎಲ್. ಪಾಟೀಲ ವಂದಿಸಿದರು. ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಕೇಶಣ್ಣವರ ಅವರ ಬಂಧುಗಳು, ಅಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

“ನಿವೃತ್ತಿಯಿಂದ ಕೇವಲ ಹುದ್ದೆಯ ಜವಾಬ್ದಾರಿ ಮುಗಿಯುತ್ತದೆ. ಸಂಸ್ಥೆ, ಗುರು-ಶಿಷ್ಯರು ಹಾಗೂ ಸಹೋದ್ಯೋಗಿಗಳೊಂದಿಗೆ ನಿರ್ಮಾಣವಾದ ಆತ್ಮೀಯ ಸಂಬಂಧಗಳು ಎಂದಿಗೂ ಮುಗಿಯುವುದಿಲ್ಲ.”
— ಮುಪ್ಪಿನ ಬಸವಲಿಂಗ ಸ್ವಾಮೀಜಿ

IPLಗೂ ಗುಡ್‌ಬೈ ಹೇಳಿದ ಅಜಿಂಕ್ಯ ರಹಾನೆ; KKRಗೆ ಹೊಸ ನಾಯಕನ ಹುಡುಕಾಟ!

0

ಮುಂಬೈ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಟೀಮ್‌ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ ಸೇರಿದಂತೆ ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೂ ವಿದಾಯ ಹೇಳಿದ್ದಾರೆ.

ಇದರೊಂದಿಗೆ ಭಾರತೀಯ ಕ್ರಿಕೆಟ್‌ನಲ್ಲಿ ರಹಾನೆ ಅವರ ಸುದೀರ್ಘ ಪಯಣ ಅಂತ್ಯಗೊಂಡಿದೆ.

ತಮ್ಮ ಕೊನೆಯ ಐಪಿಎಲ್‌ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ರಹಾನೆ, ಇದೀಗ ಐಪಿಎಲ್‌ಗೂ ವಿದಾಯ ಹೇಳಿರುವುದರಿಂದ ಕೆಕೆಆರ್‌ ಫ್ರಾಂಚೈಸಿ ಮುಂದಿನ ಆವೃತ್ತಿಗೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

6 ತಂಡಗಳ ಪರ ಆಡಿದ್ದ ರಹಾನೆ;

ಅಜಿಂಕ್ಯ ರಹಾನೆ ತಮ್ಮ ಐಪಿಎಲ್‌ ವೃತ್ತಿಜೀವನದಲ್ಲಿ ಒಟ್ಟು ಆರು ತಂಡಗಳ ಪರ ಆಡಿದ್ದಾರೆ. ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳನ್ನು ಅವರು ಪ್ರತಿನಿಧಿಸಿದ್ದರು.

ಇವುಗಳಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಾಯಕತ್ವವನ್ನೂ ರಹಾನೆ ವಹಿಸಿದ್ದರು. ತಮ್ಮ ಕೊನೆಯ ಐಪಿಎಲ್‌ ಪಂದ್ಯವನ್ನು ಕೆಕೆಆರ್‌ ನಾಯಕನಾಗಿಯೇ ಆಡಿದ ಅವರು, ಇದೀಗ ಇದೇ ತಂಡದ ಮೂಲಕ ಐಪಿಎಲ್‌ ವೃತ್ತಿಜೀವನಕ್ಕೂ ತೆರೆ ಎಳೆದಿದ್ದಾರೆ.

ರಹಾನೆ ಐಪಿಎಲ್‌ ಅಂಕಿಅಂಶ:

ಅಜಿಂಕ್ಯ ರಹಾನೆ ಐಪಿಎಲ್‌ನಲ್ಲಿ ಒಟ್ಟು 212 ಪಂದ್ಯಗಳನ್ನು ಆಡಿದ್ದು, 5,367 ರನ್‌ಗಳನ್ನು ಗಳಿಸಿದ್ದಾರೆ. ಅವರ ಬ್ಯಾಟಿಂಗ್‌ ಸರಾಸರಿ 30.15 ಆಗಿದೆ. ಐಪಿಎಲ್‌ ವೃತ್ತಿಜೀವನದಲ್ಲಿ ಅವರು 2 ಶತಕ ಹಾಗೂ 35 ಅರ್ಧಶತಕಗಳನ್ನು ಬಾರಿಸಿದ್ದಾರೆ.

ವಿದೇಶಿ ಲೀಗ್‌ನಲ್ಲಿ ಹೊಸ ಇನಿಂಗ್ಸ್;

ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ರಹಾನೆ ಅವರಿಗೆ ವಿದೇಶಿ ಟಿ20 ಲೀಗ್‌ನಿಂದ ಅವಕಾಶ ದೊರೆತಿದೆ. ಬಿಸಿಸಿಐ ನಿಯಮಗಳ ಪ್ರಕಾರ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವ ಅವಕಾಶ ಹೊಂದಿರುತ್ತಾರೆ.

ಆಗಸ್ಟ್‌ 26ರಿಂದ ಆರಂಭವಾಗಲಿರುವ ಚೊಚ್ಚಲ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನಲ್ಲಿ ರಹಾನೆ ‘ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್’ ತಂಡದ ಪ್ರಮುಖ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟೀವ್ ವಾ ಈ ತಂಡದ ಸಹ-ಮಾಲೀಕರಾಗಿದ್ದು, ರಹಾನೆ ಅವರ ನಾಯಕತ್ವದ ಗುಣಗಳನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ರಹಾನೆ, ಇದೀಗ ವಿದೇಶಿ ಟಿ20 ಲೀಗ್‌ ಮೂಲಕ ತಮ್ಮ ಕ್ರಿಕೆಟ್‌ ಜೀವನದ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ.

‘ಟಾಕ್ಸಿಕ್’ ಟ್ರೈಲರ್‌ ರಿಲೀಸ್; ಗ್ಯಾಂಗ್‌ಸ್ಟರ್‌ ಅವತಾರದಲ್ಲಿ ಯಶ್‌ ಅಬ್ಬರ, ಹೆಚ್ಚಿದ ನಿರೀಕ್ಷೆ!

0

ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್‌ ಫಾರ್‌ ಗ್ರೋನ್‌-ಅಪ್ಸ್‌’ ಸಿನಿಮಾದ ಬಹುನಿರೀಕ್ಷಿತ ಟ್ರೈಲರ್‌ ಇಂದು ಬಿಡುಗಡೆಯಾಗಿದೆ.

ನಿರ್ದೇಶಕಿ ಗೀತು ಮೋಹನ್‌ದಾಸ್‌ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

‘ಕೆಜಿಎಫ್‌’ ಸರಣಿಯ ಬಳಿಕ ಯಶ್‌ ಅವರ ಮುಂದಿನ ಸಿನಿಮಾ ಹೇಗಿರಲಿದೆ ಎಂಬ ನಿರೀಕ್ಷೆಗೆ ‘ಟಾಕ್ಸಿಕ್’ ಟ್ರೈಲರ್‌ ವಿಭಿನ್ನ ರೀತಿಯಲ್ಲಿ ಉತ್ತರ ನೀಡಿದೆ. ಡಾರ್ಕ್‌ ಹಿನ್ನೆಲೆ, ರಾ ಆ್ಯಕ್ಷನ್‌, ಗ್ಯಾಂಗ್‌ಸ್ಟರ್‌ ಜಗತ್ತು, ಅಧಿಕಾರದ ಆಟ, ದ್ರೋಹ ಹಾಗೂ ಸಂಕೀರ್ಣ ಸಂಬಂಧಗಳ ಝಲಕ್‌ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿದೆ.

ವಿಭಿನ್ನ ಲುಕ್‌ನಲ್ಲಿ ಯಶ್‌:

ಟ್ರೈಲರ್‌ನ ಆರಂಭದಿಂದಲೇ ಅಪರಾಧ ಹಾಗೂ ಮಾಫಿಯಾ ಜಗತ್ತಿನ ಕರಾಳ ವಾತಾವರಣವನ್ನು ಕಟ್ಟಿಕೊಡಲಾಗಿದೆ. ಯಶ್‌ ಹಲವು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದು, ಅವರ ರಗಡ್‌ ಗೆಟಪ್‌ ಅಭಿಮಾನಿಗಳ ಗಮನ ಸೆಳೆದಿದೆ.

ಅಧಿಕಾರಕ್ಕಾಗಿ ನಡೆಯುವ ಸಂಘರ್ಷ, ಮಾಫಿಯಾ ಜಗತ್ತಿನ ಹಿಡಿತ ಹಾಗೂ ಪಾತ್ರಗಳ ನಡುವಿನ ದ್ರೋಹದ ಆಟದ ನಡುವೆ ಯಶ್‌ ನಿರ್ವಹಿಸಿರುವ ಪಾತ್ರ ಹೇಗೆ ಸಾಗುತ್ತದೆ ಎಂಬ ಕುತೂಹಲವನ್ನು ಟ್ರೈಲರ್‌ ಮೂಡಿಸಿದೆ.

ಇದರೊಂದಿಗೆ ಪ್ರೀತಿ, ಸಂಬಂಧ ಹಾಗೂ ಭಾವನಾತ್ಮಕ ಸಂಘರ್ಷಗಳಿಗೂ ಸಿನಿಮಾದಲ್ಲಿ ಪ್ರಮುಖ ಸ್ಥಾನವಿರುವಂತೆ ಕಾಣುತ್ತಿದೆ. ಹೀಗಾಗಿ ‘ಟಾಕ್ಸಿಕ್‌’ ಕೇವಲ ಆ್ಯಕ್ಷನ್‌ ಚಿತ್ರವಲ್ಲದೆ, ಪಾತ್ರಗಳ ಸಂಕೀರ್ಣ ಸಂಬಂಧಗಳನ್ನೂ ಒಳಗೊಂಡಿರುವ ಸಿನಿಮಾ ಎಂಬ ಸುಳಿವು ಸಿಕ್ಕಿದೆ.

ಗ್ಯಾಂಗ್‌ಸ್ಟರ್‌ ಆಗಿ ಹೊಸ ಅವತಾರ:

ಈಗಾಗಲೇ ಬಿಡುಗಡೆಯಾಗಿದ್ದ ‘ಲೇಡೀಸ್‌ ಆ್ಯಂಡ್‌ ಲೇಡೀಸ್‌’ ಇಂಟ್ರೊಡಕ್ಷನ್‌ ವೀಡಿಯೋ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಟ್ರೈಲರ್‌ ಬಿಡುಗಡೆಯಾಗಿರುವುದರಿಂದ ಚಿತ್ರದ ಪ್ರಚಾರಕ್ಕೆ ಮತ್ತಷ್ಟು ವೇಗ ಸಿಕ್ಕಿದೆ.

‘ಟಾಕ್ಸಿಕ್‌’ ಸಿನಿಮಾದ ಕಥೆ 1940ರಿಂದ 1970ರ ಅವಧಿಯ ಗೋವಾದ ಡ್ರಗ್‌ ಟ್ರೇಡ್‌ ಹಾಗೂ ಮಾಫಿಯಾ ಜಗತ್ತಿನ ಹಿನ್ನೆಲೆಯನ್ನು ಹೊಂದಿದೆ ಎನ್ನಲಾಗುತ್ತಿದೆ. ಆ ಕಾಲಘಟ್ಟದ ಅಪರಾಧ ಜಾಲ ಹಾಗೂ ಅದರ ಹಿಂದಿನ ಅಧಿಕಾರದ ಆಟವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರುವ ಪ್ರಯತ್ನ ಚಿತ್ರದಲ್ಲಿರುವಂತೆ ಟ್ರೈಲರ್‌ ಸೂಚಿಸಿದೆ.

‘ಕೆಜಿಎಫ್‌’ಗಿಂತ ವಿಭಿನ್ನ ಜಗತ್ತು:

‘ಕೆಜಿಎಫ್‌’ನಲ್ಲಿ ರಾಕಿ ಭಾಯ್‌ ಪಾತ್ರದ ಮೂಲಕ ಮಾಸ್‌ ಪ್ರೇಕ್ಷಕರನ್ನು ರಂಜಿಸಿದ್ದ ಯಶ್‌, ‘ಟಾಕ್ಸಿಕ್‌’ನಲ್ಲಿ ಮತ್ತೊಂದು ವಿಭಿನ್ನ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ ಗಮನಿಸಿದರೆ ಸಿನಿಮಾದಲ್ಲಿ ಮಾಸ್‌ ಅಂಶಗಳ ಜೊತೆಗೆ ಕಥೆ, ಪಾತ್ರಗಳ ಸಂಬಂಧ, ಭಾವನೆ ಹಾಗೂ ಡಾರ್ಕ್‌ ಕ್ರೈಂ ಜಗತ್ತಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಕಂಡುಬರುತ್ತದೆ.

ಯಶ್‌ ಅವರ ಹೊಸ ಅವತಾರ, ಗೀತು ಮೋಹನ್‌ದಾಸ್‌ ಅವರ ವಿಭಿನ್ನ ನಿರೂಪಣೆ ಹಾಗೂ ಅದ್ಧೂರಿ ಮೇಕಿಂಗ್‌ ‘ಟಾಕ್ಸಿಕ್‌’ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಕರ್ನಾಟಕದಲ್ಲಿ ವರುಣನ ಆರ್ಭಟ; ನಾಳೆ ಉಡುಪಿ ಸೇರಿ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ.

ಕಳೆದ ಕೆಲ ದಿನಗಳಿಂದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳ ಒಳಹರಿವಿನ ಪ್ರಮಾಣವೂ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮತ್ತೆ ಮಳೆ ಎಚ್ಚರಿಕೆ ನೀಡಿದೆ.

ನಾಳೆ ರಾಜ್ಯದ 6 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಉಳಿದ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಬೆಂಗಳೂರಲ್ಲೂ ಮಳೆ:

ರಾಜಧಾನಿ ಬೆಂಗಳೂರಿನಲ್ಲೂ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಶುಕ್ರವಾರ ಸಂಜೆ ನಗರದ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರಿಗೆ ಮಳೆ ಅಡ್ಡಿಯಾಗಿದ್ದು, ನಗರದ ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ.

ಮಳೆ ಹಾಗೂ ಗಾಳಿಯ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಮುಂದಿನ ದಿನಗಳಲ್ಲಿಯೂ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ:

ಹವಾಮಾನ ಇಲಾಖೆ ಮುನ್ಸೂಚನೆಯಂತೆ ರಾಜ್ಯದ ಕೆಲವೆಡೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯನ್ನೂ ಇಲಾಖೆ ತಿಳಿಸಿದೆ.

ಭಾರೀ ಮಳೆಯ ಸಂದರ್ಭದಲ್ಲಿ ನದಿ, ಹಳ್ಳ-ಕೊಳ್ಳ ಹಾಗೂ ತಗ್ಗು ಪ್ರದೇಶಗಳ ಬಳಿ ತೆರಳದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಅನಗತ್ಯ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಮಳೆ ಕೈಕೊಟ್ಟಿದ್ದರಿಂದ ಆತಂಕದಲ್ಲಿದ್ದ ರೈತರಿಗೆ ಇದೀಗ ಉತ್ತಮ ಮಳೆಯಾಗುತ್ತಿರುವುದು ಕೊಂಚ ನೆಮ್ಮದಿ ತಂದಿದೆ. ಜಲಾಶಯಗಳ ಒಳಹರಿವು ಹೆಚ್ಚುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗುವ ನಿರೀಕ್ಷೆ ಮೂಡಿದೆ.

ಮೆಣಸಿನಕಾಯಿ ದರ ಕುಸಿತ; ಕಟಾವು ಮಾಡದೇ ಗಿಡದಲ್ಲೇ ಬೆಳೆ ಬಿಟ್ಟ ರೈತರು!

ಧಾರವಾಡ: ಜಿಲ್ಲೆಯಲ್ಲಿ ಈ ಬಾರಿ ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆ ಕೈಕೊಟ್ಟರೂ ಬೋರ್‌ವೆಲ್‌, ಕೃಷಿ ಹೊಂಡ ಹಾಗೂ ತುಂತುರು ಹನಿ ನೀರಾವರಿ ಮೂಲಕ ಬೆಳೆಗಳನ್ನು ಉಳಿಸಿಕೊಂಡಿದ್ದ ರೈತರಿಗೆ ಇದೀಗ ಮಾರುಕಟ್ಟೆ ದರ ಕುಸಿತ ಮತ್ತೊಂದು ಆಘಾತ ನೀಡಿದೆ. ಉತ್ತಮವಾಗಿ ಬೆಳೆದ ಮೆಣಸಿನಕಾಯಿಗೆ ನಿರೀಕ್ಷಿತ ಬೆಲೆ ಸಿಗದ ಹಿನ್ನೆಲೆಯಲ್ಲಿ ಹಲವು ರೈತರು ಕಾಯಿ ಕಟಾವು ಮಾಡದೇ ಗಿಡದಲ್ಲೇ ಬಿಟ್ಟಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಮೆಣಸಿನಕಾಯಿ ಪ್ರಮುಖ ಬೆಳೆಯಾಗಿದೆ. ಈ ಬಾರಿಯೂ ರೈತರು ಉತ್ತಮ ತಳಿಯ ಸಸಿಗಳನ್ನು ದುಬಾರಿ ಬೆಲೆಗೆ ಖರೀದಿಸಿ ನಾಟಿ ಮಾಡಿದ್ದರು. ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಬೆಳೆಯೂ ಚೆನ್ನಾಗಿ ಬಂದಿತ್ತು. ಆದರೆ ಬಳಿಕ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಬೋರ್‌ವೆಲ್‌ ಹಾಗೂ ಕೃಷಿ ಹೊಂಡಗಳಿಂದ ನೀರು ಹಾಯಿಸಿ ಬೆಳೆಯನ್ನು ಉಳಿಸಿಕೊಂಡಿದ್ದರು.

ಮೆಣಸಿನಕಾಯಿ ಬೆಳೆಗೆ ನೀರುಣಿಸಲು ಹಾಗೂ ನಿರ್ವಹಣೆ ಮಾಡಲು ರೈತರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಇದೀಗ ಗಿಡಗಳು ಮೈತುಂಬಾ ಕಾಯಿಯನ್ನು ಬಿಟ್ಟಿದ್ದು, ಕಟಾವಿಗೆ ಸಿದ್ಧವಾಗಿವೆ. ಆದರೆ ಇದೇ ಸಮಯದಲ್ಲಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರದಲ್ಲಿ ತೀವ್ರ ಕುಸಿತ ಕಂಡುಬಂದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಸದ್ಯ ಕೆಲವೆಡೆ 10 ಕೆಜಿ ಮೆಣಸಿನಕಾಯಿಗೆ ಕೇವಲ 80ರಿಂದ 100 ರೂಪಾಯಿ ದರ ನಿಗದಿಯಾಗುತ್ತಿದೆ ಎನ್ನಲಾಗಿದೆ. ಈ ದರದಲ್ಲಿ ಮಾರಾಟ ಮಾಡಿದರೆ ರೈತರಿಗೆ ಕಟಾವು ವೆಚ್ಚವೂ ಸಿಗದ ಪರಿಸ್ಥಿತಿ ಎದುರಾಗಿದೆ. ಮೆಣಸಿನಕಾಯಿ ಕೀಳಲು ಕಾರ್ಮಿಕರಿಗೆ ಕೂಲಿ ನೀಡಬೇಕು. ಬಳಿಕ ವಾಹನದ ಮೂಲಕ ಮಾರುಕಟ್ಟೆಗೆ ಸಾಗಿಸಬೇಕು. ಹೀಗಾಗಿ ಮಾರುಕಟ್ಟೆ ದರಕ್ಕಿಂತ ಕಟಾವು ಮತ್ತು ಸಾಗಣೆ ವೆಚ್ಚವೇ ಹೆಚ್ಚಿನದಾಗುವ ಆತಂಕ ರೈತರಲ್ಲಿದೆ.

ಕನಿಷ್ಠ ಕೆಜಿಗೆ 25 ರೂಪಾಯಿ ದರ ಸಿಕ್ಕರೆ ಇದುವರೆಗೆ ಮಾಡಿರುವ ಖರ್ಚನ್ನಾದರೂ ಸರಿದೂಗಿಸಬಹುದು. ಅದಕ್ಕಿಂತ ಹೆಚ್ಚಿನ ದರ ಸಿಕ್ಕಾಗ ಮಾತ್ರ ರೈತರಿಗೆ ಲಾಭವಾಗಲಿದೆ. ಇಲ್ಲವಾದರೆ ಇಷ್ಟು ದಿನ ಬೆಳೆಗಾಗಿ ಮಾಡಿದ ಖರ್ಚು ವ್ಯರ್ಥವಾಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು ಮತ್ತೊಮ್ಮೆ ಕಾಯಿ ಕಟಾವಿಗೆ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಕಟಾವು ಮಾಡಿದ ಬಳಿಕವೂ ಸೂಕ್ತ ಬೆಲೆ ಸಿಗದಿದ್ದರೆ ನಷ್ಟ ಮತ್ತಷ್ಟು ಹೆಚ್ಚಾಗಲಿದೆ. ಇದೇ ಕಾರಣಕ್ಕೆ ಕೆಲ ರೈತರು ಕಾಯಿ ಕೀಳದೇ ಗಿಡದಲ್ಲೇ ಬಿಟ್ಟಿದ್ದಾರೆ.

ಇದೀಗ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ಬೆಳೆ ಕಟಾವು ಮಾಡಿ ಒಂದಷ್ಟು ಆದಾಯ ಗಳಿಸಿ, ಮುಂದಿನ ಬೆಳೆಗೆ ಸಿದ್ಧತೆ ಮಾಡಿಕೊಳ್ಳುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಮೆಣಸಿನಕಾಯಿಗೆ ಸೂಕ್ತ ಬೆಲೆ ಸಿಗದಿರುವುದು ಮುಂದಿನ ಬೆಳೆಯ ಯೋಜನೆಗೂ ಹೊಡೆತ ನೀಡುವ ಆತಂಕ ಮೂಡಿಸಿದೆ.

ಬೆಳೆ ಬಂದರೂ ಬೆಲೆ ಸಿಗದಿದ್ದರೆ ರೈತರ ಸಂಕಷ್ಟ ತಪ್ಪುವುದಿಲ್ಲ. ಉತ್ತಮ ಇಳುವರಿ ಪಡೆದಿದ್ದರೂ ಮಾರುಕಟ್ಟೆಯಲ್ಲಿ ಸೂಕ್ತ ದರ ದೊರೆಯದಿರುವುದು ಅನ್ನದಾತರ ಪಾಲಿಗೆ ಮತ್ತೊಂದು ಸಂಕಷ್ಟವಾಗಿ ಪರಿಣಮಿಸಿದೆ.

ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಜೀವಾಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಖಾದ್ರಿ ಶಾಮಣ್ಣ ಟ್ರಸ್ಟ್ ಇಂದು ಶೇಷಾದ್ರಿಪುರಂ ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, ಖಾದ್ರಿ ಶಾಮಣ್ಣ ಟ್ರಸ್ಟ್‌ ವತಿಯಿಂದ ಪ್ರತಿವರ್ಷ ಅವರ ಹೆಸರಿನಲ್ಲಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಈ ಬಾರಿ ಪ್ರಜಾವಾಣಿಯ ನಿವೃತ್ತ ಸಹಾಯಕ ಸಂಪಾದಕ ಉದಯ್‌ಕುಮಾರ್‌ ಅವರನ್ನು ಆಯ್ಕೆ ಮಾಡಿದ್ದಾರೆ ಎಂದರು. ಈ ವೇಳೆ ಪ್ರಶಸ್ತಿಗೆ ಭಾಜನರಾದ ಉದಯ್‌ಕುಮಾರ್‌ ಅವರಿಗೆ ಖಾದ್ರಿ ಶಾಮಣ್ಣ ಟ್ರಸ್ಟ್‌ ವತಿಯಿಂದ ಅಭಿನಂದಿಸಿದರು.

ಮುಂದುವರಿದು ಮಾತನಾಡಿದ ಅವರು, ಪತ್ರಿಕೋದ್ಯಮದಲ್ಲಿ ಅನನ್ಯ ಸೇವೆಯನ್ನು ಮಾಡಿ, ಪತ್ರಿಕಾ ಧರ್ಮವನ್ನು ಹಾಗೂ ಅದರ ಮೌಲ್ಯವನ್ನು ಎತ್ತಿ ಹಿಡಿದ ಕೆಲಸವನ್ನು ಮಾಡಿರುವುದಕ್ಕೆ ಈ ಪ್ರಶಸ್ತಿ ಸಂದಾಯವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಮುಖ್ಯವಾಗಿ, ಯುವಕರಲ್ಲಿ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಪತ್ರಿಕೋದ್ಯಮ ಬಹಳ ಮುಖ್ಯವಾಗಿದ್ದು, ಅದು ಪ್ರಜಾಪ್ರಭುತ್ವದ ಜೀವಾಳ ಎಂದರು.

ನಮ್ಮ ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅಸಮಾನತೆ ಇದ್ದು, ಅದನ್ನು ಹೋಗಲಾಡಿಸುವುದು ಯಾರೂ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿರುತ್ತಾರೋ ಅವರ ಜವಾಬ್ದಾರಿಯೂ ಆಗಿದೆ ಎಂದು ತಿಳಿಸಿದರು.

ಹಿಂದೆ ಖಾದ್ರಿ ಶಾಮಣ್ಣನವರು ಇದ್ದ ಕಾಲದಲ್ಲಿ ಪತ್ರಿಕೋದ್ಯಮದ ಅನುಭವವನ್ನು, ಅದರ ಮೌಲ್ಯಗಳನ್ನು ಎತ್ತಿಹಿಡಿವಂತಹ ಕೆಲಸವನ್ನು ಮಾಡುತ್ತಿದ್ದರು. ನಾನು ಖಾದ್ರಿ ಶಾಮಣ್ಣನವರನ್ನು ಬಹಳ ಹತ್ತಿರದಿಂದ ಬಲ್ಲೆ. ಯಾಕೆಂದರೆ ಅವರು ಸಮಾಜವಾದಿಗಳಾಗಿದ್ದರು. ಹಾಗಾಗಿ ನಾನು ಅವರನ್ನು ಆಗಾಗ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಭೇಟಿ ಮಾಡುತ್ತಿದ್ದೆ ಎಂದು ಅವರ ಒಡನಾಟವನ್ನು ನೆನಪಿಸಿಕೊಂಡರು.

ಖಾದ್ರಿ ಶಾಮಣ್ಣನವರು ಕನ್ನಡಪ್ರಭ ಪತ್ರಿಕೆಯ ಸಂಪಾದಕರಾಗಿದ್ದರು. ಅವರ ಸಂಪಾದಕೀಯವೇ ಬಹಳ ಪ್ರಮುಖವಾಗಿರುತ್ತಿತ್ತು. ಎಷ್ಟೇ ಗಂಭೀರ ವಿಷಯವಾದರೂ, ಗಾಢ ವಿಷಯವಾದರೂ ಕೂಡ ಅವರು ಬಳಸುವ ಭಾಷೆ ಬಹಳ ಸರಳವಾಗಿರುತ್ತಿತ್ತು. ಹೀಗಾಗಿ ಅದು ಜನರಿಗೆ ಬೇಗ ತಲುಪುತ್ತಿತ್ತು. ಅವರು ರಾಜಕಾರಣಿಯಾಗಿರಲಿಲ್ಲ, ಆದರೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಜೊತೆಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದ ವ್ಯಕ್ತಿಯಾಗಿದ್ದರು. ಸಂವಿಧಾನದ ಮೇಲೆ ಅವರಿಗಿದ್ದ ಬದ್ಧತೆ ಅಪಾರವಾದುದ್ದು.

ಪ್ರತಿಯೊಬ್ಬರು ಕೂಡ ಸಂವಿಧಾನವನ್ನು ತಿಳಿದುಕೊಳ್ಳುವುದು ಅವಶ್ಯಕ, ಅದರಲ್ಲೂ ಪತ್ರಿಕೋದ್ಯಮದಲ್ಲಿ ಇರುವವರು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ ಎಂದರು. ಸಂವಿಧಾನ ನಿಮಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದೆ, ಆ ಸ್ವಾತಂತ್ರ್ಯವನ್ನು ಸರಿಯಾದ ದಾರಿಯಲ್ಲಿ ಉಪಯೋಗಿಸುವಂತಹದ್ದು ಅತ್ಯಂತ ಅವಶ್ಯಕ. ಇಲ್ಲದೇ ಹೋದರೆ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಪತ್ರಕರ್ತರಿಗೆ ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮದ ದಾರಿ ಬದಲಾಗುತ್ತಿದೆ. ಕೆಲವು ಪತ್ರಿಕೋದ್ಯಮ ಸಂಸ್ಥೆಗಳು ಅದರ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಿಕೆಗಳು ನಿಷ್ಪಕ್ಷಪಾತವಾಗಿ ನೈಜ ವಿಷಯಗಳನ್ನು ಜನರ ಎದುರು ಇಡಬೇಕು. ನಮ್ಮ ಸಮಾಜ ಅಸಮಾನತೆಯಿಂದ ಕೂಡಿದೆ. ಅದನ್ನು ಹೋಗಲಾಡಿಸುವುದು ನಮ್ಮಂತಹ ರಾಜಕಾರಣಿಗಳ ಹಾಗೂ ಪತ್ರಕರ್ತರ ಜವಾಬ್ದಾರಿಯಾಗಿದೆ. ಅಸಮಾನತೆ ಮುಂದುವರಿದರೆ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದರು.

ಸಂವಿಧಾನ ಬಂದು ಈಗಾಗಲೇ 76 ವರ್ಷಗಳೇ ಆಗಿದೆ, ಆದರೂ ಇನ್ನೂ ಅಸಮಾನತೆ ಕಾಡುತ್ತಲೇ ಇದೆ. ಸಮಾಜದಲ್ಲಿ ಪ್ರಭಾವಿಗಳು, ಪ್ರಭಾವ ಉಳ್ಳದವರು, ಧ್ವನಿಯಿರುವವರು, ಧ್ವನಿ ಇಲ್ಲದವರು ಇದ್ದಾರೆ. ಹೀಗಾಗಿ ನಾವು ಯಾವಾಗಲೂ ಕೂಡ ಸಮಾಜದಲ್ಲಿ ಬಡವರು, ಮಹಿಳೆಯರು, ಹಿಂದುಳಿದವರು, ರೈತರು ಹಾಗೂ ಅಲ್ಪಸಂಖ್ಯಾತರು ಹೀಗೆ ಶೋಷಿತರ ಧ್ವನಿಯಾಗಿ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ನಾನು ಕೂಡ ಸಮಾಜಸೇವೆಯ ಕೆಲಸವನ್ನು ಮಾಡಬೇಕು ಎಂದು ರಾಜಕೀಯವನ್ನು ಆಯ್ಕೆ ಮಾಡಿಕೊಂಡೆ. ಶ್ರೀಮಂತರಾಗಿರುವವರು ಇನ್ನೂ ಕೂಡ ಶ್ರೀಮಂತರಾಗಬೇಕು ಎಂದು ಕೆಲಸ ಮಾಡಬಾರದು. ಅಸಮಾನತೆಯನ್ನು ಹೋಗಲಾಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು. ಸಂವಿಧಾನದ ಆಶಯವೇ ಸಮಾಸಮಾಜ ನಿರ್ಮಾಣ. ಜಾತಿವ್ಯವಸ್ಥೆ ಹೋಗಲಾಡಿಸಬೇಕು ಎಂದರೆ ಪತ್ರಕೋದ್ಯಮದವರು ಜಾತ್ಯತೀತವಾಗಿವಾಗಿ ಕೆಲಸವನ್ನು ಮಾಡಬೇಕು ಎಂದರು.

ಪತ್ರಿಕೋದ್ಯಮದ ಸಂಸ್ಥೆಗಳು ಸಮಾಜದಲ್ಲಿರುವ ಅಸಮಾನತೆಯನ್ನು ನೋಡಿಕೊಂಡು, ಸಮಸಮಾಜ ನಿರ್ಮಾಣ ಮಾಡುವಂತಹ ಕೆಲಸವನ್ನು ಮಾಡಬೇಕು ಎಂದು ಕರೆಕೊಟ್ಟರು. ಕೆಲವು ಪತ್ರಿಕೋದ್ಯಮಿಗಳು ಅಧಿಕಾರ ಯಾವ ಪಕ್ಷದಲ್ಲಿರುತ್ತದೆಯೋ ಅವರ ಹಿಂದೆ ಸುತ್ತುವಂತ, ಅವರ ಪರವಾಗಿ ನಿಲ್ಲುವಂತಹ ಕೆಲಸವನ್ನು ಮಾಡುತ್ತಾರೆ ಎಂದು ನುಡಿದರು.

ಸಮಾಜವನ್ನು ಒಡೆಯುವಂತಹ, ಸುಳ್ಳು ಸುದ್ದಿಗಳಿಗೆ ಪ್ರಚಾರವನ್ನು ನೀಡುವಂತಹ ಕೆಲಸವನ್ನು ಮಾಧ್ಯಮಗಳು ಮಾಡಬಾರದು. ಮೌಢ್ಯಗಳಿಂದಲೇ ಜಾತಿ ವ್ಯವಸ್ಥೆ ಹೆಚ್ಚಾಗಿರುವಂತಹದ್ದು, ಅಸಮಾನತೆ ಹೆಚ್ಚಾಗಿರುವಂತದ್ದು ಹೀಗಾಗಿ ಮೌಢ್ಯಗಳಿಗೆ ಹೆಚ್ಚು ಒತ್ತು ನೀಡಬಾರದು ಎನ್ನುವ ಕರೆ ನೀಡಿದರು.

ಮೌಢ್ಯಗಳನ್ನು ಆಚರಣೆ ಮಾಡುವ ಕೆಲವು ಪತ್ರಿಕೋದ್ಯಮಗಳನ್ನು ಖಂಡಿಸುವ ಕೆಲಸ ಮಾಡಿದ್ದೆ. ಪತ್ರಿಕಾ ಸ್ವಾಂತ್ರ್ಯವನ್ನು ಯಾವುದೇ ಕಾರಣಕ್ಕೂ ದುರುಪಯೋಗ ಮಾಡಬಾರದು.

ಪತ್ರಿಕಾ ಸ್ವಾತಂತ್ರ್ಯಕ್ಕೆ ನಾನು ಹೆಚ್ಚು ಒತ್ತು ಕೊಡುವವನಾಗಿದ್ದು, ಈ ಕಾರಣಕ್ಕಾಗಿ ನಮ್ಮ ಪಕ್ಷದ ಬಗ್ಗೆ ಯಾರೂ ಏನೇ ಬರೆದರೂ ಅಥವಾ ನನ್ನ ಬಗ್ಗೆಯೇ ಬರೆದರೂ, ಟೀಕೆ ಮಾಡಿದರೂ ಯಾವುದೇ ಪತ್ರಿಕಾ ಸಂಸ್ಥೆಯವರಿಗೆ, ಪತ್ರಕರ್ತರಿಗೆ ಇವತ್ತಿನವರೆಗೂ ಫೋನ್‌ ಮಾಡಿಲ್ಲ, ಮಾಡೋದು ಇಲ್ಲ ಎಂದು ತಮ್ಮ ಅನುಭವವನ್ನು ತಿಳಿಸಿದರು.

ಖಾದ್ರಿ ಶಾಮಣ್ಣನವರು ಇವತ್ತು ಬದುಕಿರುತ್ತಿದ್ದರೇ, ಪತ್ರಿಕೋದ್ಯಮದ ಮೌಲ್ಯಗಳನ್ನು, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಿದ್ದರು ಎಂದರು. ಅವರ ಹೆಸರಿನಲ್ಲಿ ಪತ್ರಿಕೋದ್ಯಮದ ಶಕ್ತಿಯಿದೆ. ಅವರೊಬ್ಬ ಮಾದರಿ ಪತ್ರಕರ್ತರು, ಮಾರ್ಗದರ್ಶಕರು ಎಂದು ಹೇಳಿದರು.

ಬಿಡದಿ ಪಾದಯಾತ್ರೆ ಬಗ್ಗೆ ಬಿಜೆಪಿ ನಾಯಕರ ಜತೆ ಹೆಚ್.ಡಿ.ಕುಮಾರಸ್ವಾಮಿ ಚರ್ಚೆ

ಬೆಂಗಳೂರು: ಜಾತ್ಯತೀತ ಜನತಾದಳದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಬಿಡದಿ ಬೃಹತ್ ಪಾದಯಾತ್ರೆಗೆ ಮಿತ್ರಪಕ್ಷ ಬಿಜೆಪಿ ನೈತಿಕ ಬೆಂಬಲ ವ್ಯಕ್ತಪಡಿಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ನಡೆದ ಜೆಡಿಎಸ್ ಮತ್ತು ಬಿಜೆಪಿ ಹಿರಿಯ ನಾಯಕರ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು ಕೇಂದ್ರ ಸಚಿವರು. ಬಿಡದಿ ಟೌನ್ ಶಿಪ್ ಯೋಜನೆಯ ಬಗ್ಗೆ ನಾವು ಅತ್ಯಂತ ವಿವರವಾಗಿ ಚರ್ಚೆ ನಡೆಸಿದ್ದೇವೆ ಹಾಗೂ ಮುಂಬರುವ ವಿಧಾನಕಲಾಪದಲ್ಲಿ ಪ್ರಸ್ತಾಪಿಸಲು ಉದ್ದೇಶಿಸಿರುವ ವಿವಿಧ ವಿಷಯಗಳ ಬಗ್ಗೆ ಸಮಾಲೋಚಿಸಿದ್ದೇವೆ ಎಂದು ಅವರು ಹೇಳಿದರು.

ಬಿಡದಿ ಪಾದಯಾತ್ರೆಯ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೂ ಹಮ್ಮಿಕೊಳ್ಳಲಾಗಿದೆ. ನಿಖಿಲ್ ಕುಮಾರಸ್ವಾಮಿ ಅವರು ಪಾದಯಾತ್ರೆಯ ನೇತೃತ್ವ ವಹಿಸಿದ್ದಾರೆ. ಬಿಜೆಪಿ ನಾಯಕರು ಕೂಡ ಪಾದಯಾತ್ರೆಯ ಬಗ್ಗೆ ಅತ್ಯಂತ ಸಕಾರಾತ್ಮಕ ಮನಸ್ಸು ಹೊಂದಿದ್ದು, ಅವರು ಕೂಡ ಪಾದಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳಿಸಿದ್ದಾರೆ ಎಂದು ಅವರು ತಿಳಿಸಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಸೇರಿದಂತೆ ಬಿಜೆಪಿಯ ಅನೇಕ ಹಿರಿಯ ನಾಯಕರು ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಅಲ್ಲದೆ, ಮುಂಬರುವ ವಿಧಾನಮಂಡಲ ಕಲಾಪದಲ್ಲಿ ಬಿಡದಿ ಟೌನ್ಶಿಪ್ ವಿಷಯ ಹಾಗೂ ನೈಸ್ ಯೋಜನೆಯ ಅಕ್ರಮಗಳ ಬಗ್ಗೆ ಧ್ವನಿ ಎತ್ತಲು ನಿರ್ಧರಿಸಲಾಗಿದೆ. ಈ ಬಗ್ಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಒಮ್ಮತದಿಂದ ಹೋರಾಟ ನಡೆಸಲಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಎರಡೂ ಪಕ್ಷಗಳ ನಡುವೆ ಸಮನ್ವಯ ಕೊರತೆ ಆಗಬಾರದು ಎಂಬ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಡದಿ ಪಾದಯಾತ್ರೆ ನಡೆಯುತ್ತಿದೆ. ನಾನೇ ಪಾದಯಾತ್ರೆಗೆ ಚಾಲನೆ ನೀಡುತ್ತೇನೆ ಎಂದರು ಸಚಿವರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದು ಸರಿ ಇಲ್ಲ ಎಂಬುದಕ್ಕೆ ಅನೇಕ ನಿದರ್ಶನಗಳು ಇವೆ. ಸಂಪುಟ ವಿಸ್ತರಣೆಗೆ ತಿಂಗಳಗಟ್ಟಲೆ ಸಮಯ ತೆಗೆದುಕೊಂಡರು. ಈಗ ಖಾತೆ ಹಂಚಿಕೆ ಕೂಡ ನಡೆದಿಲ್ಲ. ಸರ್ಕಾರದ ಕಾರ್ಯವೈಖರಿ ನೋಡಿದರೆ ತುಂಬಾ ನಿರಾಶೆಯಾಗುತ್ತದೆ, ಖಾತೆ ಹಂಚಿಕೆ ವಿಷಯ ಕಾಂಗ್ರೆಸ್ ದಿವಾಳಿತನ ತೋರುತ್ತದೆ ಸಚಿವರು ಕಟುವಾಗಿ ಟೀಕಿಸಿದರು.

ರಾಜ್ಯ ಹಿಂದೆಂದೂ ಸಿಲುಕಿರದಷ್ಟು ತೀವ್ರ ಬರಕ್ಕೆ ತುತ್ತಾಗಿದೆ. ಸರ್ಕಾರ ಜನರಿಗೆ ನೆರವಾಗುವಲ್ಲಿ ವಿಫಲವಾಗಿದೆ. ಈ ಬಗ್ಗೆಯೂ ಪ್ರಸ್ತಾಪಿಸಿ ಹೋರಾಟ ಮಾಡಲು ನಿರ್ಧರಿಸಲಾಯಿತು ಎಂದು ಸಚಿವರು ಮಾಹಿತಿ ನೀಡಿದರು.

ಬಿಡದಿ ವಿಚಾರದಲ್ಲಿ ಸದನದಲ್ಲೂ ಚರ್ಚೆ ಆಗಲೇಬೇಕು. ರೈತರ ಮಹಿಳೆಯರ ಹೋರಾಟವನ್ನು ಇಡೀ ರಾಜ್ಯ ನೋಡುತ್ತಿದೆ. ರೈತರು ಭೂಮಿ ಕೊಡಲು ತಯಾರಿಲ್ಲ. ಕೇವಲ ರೈತರ ಭೂಮಿಯನ್ನು ಲೂಟಿ ಒಡೆಯಲು ಯೋಜನೆಯನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಜೊತೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇನೆ ಎಂದು ಸಚಿವರು ಹೇಳಿದರು.

ಇದಲ್ಲದೆ, ವಾಲ್ಮೀಕಿ ಹಗರಣ, ಬೆಂಗಳೂರಿನಲ್ಲಿ ಅಸಮರ್ಪಕ ಕಸ ವಿಲೇವಾರಿ, ಕೆಪಿಎಸ್ಸಿ ಅಕ್ರಮಗಳು, ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳು, ಗೃಹಲಕ್ಷ್ಮಿ ಯೋಜನೆಯ ಹಣ ದುರ್ಬಳಕೆ ಮುಂತಾದ ವಿಷಯಗಳ ಬಗ್ಗೆ ಎರಡು ಪಕ್ಷಗಳು ದನಿಯ ಎತ್ತುತ್ತವೆ ಎಂದು ಸಚಿವರು ಹೇಳಿದರು.

ಸಭೆಯಲ್ಲಿ ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕ ಪಕ್ಷದ ನಾಯಕ ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಲೋಕಸಭೆ ಸದಸ್ಯ ಎಂ. ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮಾಜಿ ಸಚಿವ ಸಿ.ಸಿ. ಪಾಟೀಲ್ ಮುಂತಾದವರು ಭಾಗಿಯಾಗಿದ್ದರು.

ಸ್ನ್ಯಾಕ್ಸ್ ಪ್ಯಾಕೆಟ್‌ನಲ್ಲಿ ಗಾಂಜಾ ಚಾಕ್ಲೆಟ್ ಇಟ್ಟು ಮಾರಾಟ: ಆರೋಪಿ ಅರೆಸ್ಟ್‌

0

ಬೆಳಗಾವಿ: ಸ್ನ್ಯಾಕ್ಸ್ ಪ್ಯಾಕೆಟ್‌ಗಳನ್ನೇ ಗಾಂಜಾ ಮಾರಾಟದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ ಆರೋಪಿಯನ್ನು ಉದ್ಯಮಬಾಗ ಪೊಲೀಸರು ಬಂಧಿಸಿದ್ದಾರೆ. ಕಾಲೇಜೊಂದರ ಸಮೀಪ ಸ್ನ್ಯಾಕ್ಸ್ ಪ್ಯಾಕೆಟ್‌ಗಳಲ್ಲಿ ಗಾಂಜಾ ತುಂಬಿಸಿ ಚಾಕ್ಲೆಟ್ ರೂಪದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಭೋಲು ಪ್ರಜಾಪತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆರೋಪಿ ಗಾಂಜಾವನ್ನು ಚಾಕ್ಲೆಟ್ ರೂಪದಲ್ಲಿ ಪ್ಯಾಕ್ ಮಾಡಿ ಸ್ನ್ಯಾಕ್ಸ್ ಪ್ಯಾಕೆಟ್‌ಗಳಲ್ಲಿ ಬಚ್ಚಿಟ್ಟು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಕಾಲೇಜು ಸಮೀಪ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆ ವೇಳೆ ₹54 ಸಾವಿರ ಮೌಲ್ಯದ 6 ಕೆಜಿ ಗಾಂಜಾ, ಒಂದು ಮೊಬೈಲ್ ಫೋನ್ ಹಾಗೂ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹94 ಸಾವಿರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಗಾಂಜಾ ಮಾರಾಟದ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದೂ ಸೇರಿದಂತೆ ಪ್ರಕರಣದ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೋಡಿ ಬಿದ್ದ ಅಂಬ್ಲಿಗೋಳ ಜಲಾಶಯ: ರೈತರ ಸಮೃದ್ಧಿಗಾಗಿ ಬಾಗಿನ ಅರ್ಪಿಸಿದ ಸಂಸದ ರಾಘವೇಂದ್ರ

0

ಶಿವಮೊಗ್ಗ: ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಶಿಕಾರಿಪುರ ತಾಲೂಕಿನ ಪ್ರಮುಖ ಜಲಮೂಲವಾಗಿರುವ ಅಂಬ್ಲಿಗೋಳ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ.

ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಬಿ.ವೈ. ರಾಘವೇಂದ್ರ, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿರುವುದಾಗಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ವರುಣದೇವನ ಕೃಪೆಯಿಂದ ಶಿಕಾರಿಪುರ ತಾಲೂಕು ಮಾತ್ರವಲ್ಲದೆ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಸಮೃದ್ಧಿಯಾಗಲಿ. ರೈತ ಕುಟುಂಬಗಳಲ್ಲಿ ಸುಖ, ಶಾಂತಿ ಮತ್ತು ಸಂತಸ ನೆಲೆಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಬಾಗಿನ ಅರ್ಪಣೆ ಬಳಿಕ ಬಿ.ವೈ. ವಿಜಯೇಂದ್ರ ಹಾಗೂ ಬಿ.ವೈ. ರಾಘವೇಂದ್ರ ಅವರು ಶಿಕಾರಿಪುರ ಪಟ್ಟಣದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.