Home Blog

ಜಗತ್ತಿಗೆ ಮಾನವೀಯತೆಯ ಬೆಳಕು ತೋರಿದ ಪ್ರವಾದಿ ಮುಹಮ್ಮದ್

ಕತ್ತಲೆಯ ನಡುವೆ ಬೆಳಕಿನ ಕಿರಣ ಮೂಡಿದಂತೆ, ಅಧರ್ಮ, ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳಿಂದ ಸಮಾಜ ನಲುಗುತ್ತಿದ್ದ ಕಾಲದಲ್ಲಿ ಮಾನವೀಯತೆಯ ಮಹತ್ವವನ್ನು ಜಗತ್ತಿಗೆ ಸಾರಿದವರು ಪ್ರವಾದಿ ಮುಹಮ್ಮದ್‌ ಸಲ್ಲಲ್ಲಾಹು ಅಲೈಹಿವಸಲ್ಲಂ. ಪ್ರೀತಿ, ದಯೆ, ಸಹೋದರತ್ವ, ಸಮಾನತೆ, ಶಾಂತಿ ಹಾಗೂ ಸೇವೆಯಂತಹ ಮೌಲ್ಯಗಳನ್ನು ಬದುಕಿನ ಭಾಗವಾಗಿಸಿದ ಅವರ ಆದರ್ಶಗಳು ಇಂದಿಗೂ ಮಾನವ ಸಮಾಜಕ್ಕೆ ದಾರಿದೀಪವಾಗಿವೆ. ಪ್ರವಾದಿಯವರ ಜನ್ಮದಿನವನ್ನು ಈದ್‌ ಮಿಲಾದ್‌ ಅಥವಾ ಮಿಲಾದುನ್ನಬಿ ಹೆಸರಿನಲ್ಲಿ ಆಚರಿಸುವುದು ಅವರ ಸಂದೇಶಗಳನ್ನು ಸ್ಮರಿಸುವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮಹತ್ವದ ಸಂದರ್ಭವಾಗಿದೆ.

ಅರಬ್‌ ನಾಡಿನಲ್ಲಿ ಅಜ್ಞಾನ ಮತ್ತು ಅಂಧಕಾರ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ರಬೀವುಲ್‌ ಅವ್ವಲ್‌ ತಿಂಗಳ 12ರಂದು ಪ್ರವಾದಿ ಮುಹಮ್ಮದ್‌ ಅವರ ಜನನವಾಯಿತು ಎಂಬುದು ಇಸ್ಲಾಮಿನ ನಂಬಿಕೆ. ಸಮಾಜದಲ್ಲಿ ಮೇಲು-ಕೀಳು, ಜಾತಿ-ವರ್ಣ, ಲಿಂಗಭೇದ, ಗುಲಾಮಗಿರಿ ಹಾಗೂ ಶೋಷಣೆಗಳು ಸಾಮಾನ್ಯವಾಗಿದ್ದ ಕಾಲದಲ್ಲಿ ಅವರು ಮಾನವರೆಲ್ಲರೂ ಸಮಾನರು ಎಂಬ ಸಂದೇಶ ಸಾರಿದರು. ಮನುಷ್ಯನ ಗೌರವವು ಅವನ ಸಂಪತ್ತು, ವರ್ಣ ಅಥವಾ ಸ್ಥಾನಮಾನದಿಂದ ನಿರ್ಧಾರವಾಗುವುದಿಲ್ಲ; ಅವನ ನಡತೆ ಮತ್ತು ಮಾನವೀಯತೆಯೇ ಮುಖ್ಯ ಎಂಬ ತತ್ವವನ್ನು ಪ್ರತಿಪಾದಿಸಿದರು.

ಹೆಣ್ಣು ಮಗು ಹುಟ್ಟುವುದೇ ಶಾಪ ಎಂಬ ಮನೋಭಾವವಿದ್ದ ಕಾಲದಲ್ಲಿ ಹೆಣ್ಣು ಮಕ್ಕಳ ಗೌರವ ಮತ್ತು ಹಕ್ಕುಗಳಿಗಾಗಿ ಧ್ವನಿ ಎತ್ತಿದವರು ಪ್ರವಾದಿ ಮುಹಮ್ಮದ್‌. ಹೆಣ್ಣು ಮಗುವನ್ನು ಪ್ರೀತಿಯಿಂದ ಸಾಕಿ, ಉತ್ತಮ ಶಿಕ್ಷಣ ನೀಡಿ ಬೆಳೆಸುವುದು ಕುಟುಂಬ ಹಾಗೂ ಸಮಾಜದ ಕರ್ತವ್ಯ ಎಂಬ ಸಂದೇಶ ನೀಡಿದರು. ಮಹಿಳೆಯರ ಶಿಕ್ಷಣ ಮತ್ತು ಗೌರವಕ್ಕೆ ಒತ್ತು ನೀಡುವ ಮೂಲಕ ಸ್ತ್ರೀಯರ ಸಾಮಾಜಿಕ ಸ್ಥಾನಮಾನವನ್ನು ಎತ್ತಿಹಿಡಿದರು.

ಶಾಂತಿ ಎಂಬುದು ಕೇವಲ ಯುದ್ಧವಿಲ್ಲದ ಸ್ಥಿತಿಯಲ್ಲ; ಪರಸ್ಪರ ಗೌರವ, ಸಹಿಷ್ಣುತೆ ಮತ್ತು ಸಹಬಾಳ್ವೆಯೇ ನಿಜವಾದ ಶಾಂತಿ ಎಂಬುದನ್ನು ಪ್ರವಾದಿಯವರ ಜೀವನ ಸಾರುತ್ತದೆ. ಅನ್ಯ ಧರ್ಮೀಯರನ್ನು ಗೌರವದಿಂದ ಕಾಣಬೇಕು, ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು, ದ್ವೇಷ ಮತ್ತು ಅಸೂಯೆಗಳನ್ನು ತೊರೆದು ಪ್ರೀತಿ ಹಾಗೂ ಸಹೋದರತ್ವದಿಂದ ಬದುಕಬೇಕು ಎಂಬ ಅವರ ಸಂದೇಶ ಇಂದಿನ ವಿಭಜಿತ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ.

ಪ್ರಾಮಾಣಿಕ ದುಡಿಮೆ ಹಾಗೂ ಧರ್ಮಮಾರ್ಗದ ಸಂಪಾದನೆಗೂ ಅವರು ವಿಶೇಷ ಮಹತ್ವ ನೀಡಿದರು. ಮೋಸ, ವಂಚನೆ ಮತ್ತು ಅನ್ಯಾಯದ ಮೂಲಕ ಸಂಪಾದಿಸುವುದನ್ನು ವಿರೋಧಿಸಿ, ಪ್ರತಿಯೊಬ್ಬರ ಪರಿಶ್ರಮಕ್ಕೆ ಗೌರವ ನೀಡುವಂತೆ ಬೋಧಿಸಿದರು. ಕಾರ್ಮಿಕನ ಬೆವರಿನ ಹನಿ ಆರುವ ಮುನ್ನವೇ ಅವನ ಸಂಭಾವನೆಯನ್ನು ನೀಡಬೇಕು ಎಂಬ ಸಂದೇಶದ ಮೂಲಕ ಶ್ರಮಜೀವಿಗಳ ಗೌರವ ಮತ್ತು ಹಕ್ಕುಗಳನ್ನು ಎತ್ತಿಹಿಡಿದರು.

ಗುಲಾಮಗಿರಿ ಮತ್ತು ವರ್ಣಭೇದದ ವಿರುದ್ಧವೂ ಪ್ರವಾದಿಯವರ ನಿಲುವು ಸ್ಪಷ್ಟವಾಗಿತ್ತು. ಹಜರತ್‌ ಬಿಲಾಲ್‌ ಅವರಂತಹ ಗುಲಾಮರನ್ನು ಸ್ವಾತಂತ್ರ್ಯದ ಬದುಕಿನತ್ತ ಕರೆದೊಯ್ಯುವ ಮೂಲಕ ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವ ಸಮಾನತೆಯ ತತ್ವವನ್ನು ಜಗತ್ತಿಗೆ ತೋರಿಸಿಕೊಟ್ಟರು.

ಸರಳತೆ ಮತ್ತು ತ್ಯಾಗವೂ ಅವರ ಬದುಕಿನ ಪ್ರಮುಖ ಗುಣಗಳಾಗಿದ್ದವು. ತಮ್ಮಲ್ಲಿದ್ದ ಸಂಪತ್ತು ಮತ್ತು ಸೌಲಭ್ಯಗಳನ್ನು ಅಗತ್ಯವಿರುವವರಿಗೆ ಹಂಚಿ, ಅತ್ಯಂತ ಸರಳ ಜೀವನ ನಡೆಸಿದರು. ದಾನ, ಸೇವೆ ಮತ್ತು ತ್ಯಾಗದ ಮೂಲಕ ಸಂಪಾದಿಸಿದ ಸತ್ಕಾರ್ಯಗಳೇ ಮನುಷ್ಯನ ನಿಜವಾದ ಸಂಪತ್ತು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿದರು.

ಪ್ರಾಣಿ, ಪಕ್ಷಿ, ಸಸ್ಯ ಹಾಗೂ ಪರಿಸರದ ಮೇಲಿನ ದಯೆಯನ್ನೂ ಅವರು ಬೋಧಿಸಿದರು. ಯಾವುದೇ ಜೀವಿಗೆ ಅನಗತ್ಯವಾಗಿ ಹಾನಿ ಮಾಡಬಾರದು, ಪ್ರಕೃತಿಯನ್ನು ಸಂರಕ್ಷಿಸಬೇಕು ಎಂಬ ಸಂದೇಶವು ಇಂದಿನ ಪರಿಸರ ಸಂಕಷ್ಟದ ಸಂದರ್ಭದಲ್ಲಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಹೀಗಾಗಿ ಈದ್‌ ಮಿಲಾದ್‌ ಕೇವಲ ಹಬ್ಬದ ಸಂಭ್ರಮಕ್ಕೆ ಸೀಮಿತವಾಗದೆ, ಪ್ರವಾದಿ ಮುಹಮ್ಮದ್‌ ಅವರ ಮಾನವೀಯ ಸಂದೇಶಗಳನ್ನು ನೆನಪಿಸಿಕೊಳ್ಳುವ ದಿನವಾಗಬೇಕು. ಪ್ರೀತಿ, ದಯೆ, ಶಾಂತಿ, ಸಮಾನತೆ, ಪ್ರಾಮಾಣಿಕತೆ ಹಾಗೂ ಸೇವೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಅವರ ಆದರ್ಶಗಳಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಇಂದಿನ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಲು ಪ್ರವಾದಿಯವರ ಮಾನವೀಯ ಮೌಲ್ಯಗಳು ಪ್ರತಿಯೊಬ್ಬರ ಬದುಕಿನ ದಾರಿದೀಪವಾಗಬೇಕು.

ಈದ್‌ ಮಿಲಾದ್‌ ಆಚರಣೆಯು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಪ್ರವಾದಿ ಮುಹಮ್ಮದ್‌ ಅವರ ಆದರ್ಶಗಳನ್ನು ನೆನಪಿಸಿಕೊಂಡು ಸಮಾಜದಲ್ಲಿ ಪ್ರೀತಿ, ಸಹೋದರತ್ವ ಮತ್ತು ಸೇವಾ ಮನೋಭಾವ ಬೆಳೆಸುವ ದಿನವಾಗಬೇಕು ಎಂದು ಸಮಾಜ ಸೇವಕ ಖಾಜಾಹುಸೇನ ಮಹಮ್ಮದರಫೀಕಸಾಬ ಹೊಸಪೇಟಿ, ಡಂಬಳ ಅಭಿಪ್ರಾಯಪಟ್ಟಿದ್ದಾರೆ.

– ಕೆ.ಆರ್. ದೊಡ್ಡಮನಿ, ಪತ್ರಕರ್ತರು, ಡಂಬಳ

ಮಾನವೀಯ ಮೌಲ್ಯಗಳ ಪ್ರತಿಪಾದಕ ಪ್ರವಾದಿ ಮುಹಮ್ಮದ್ (ಸ)

ಇಸ್ಲಾಂ ಜಗದೊಡೆಯನಾದ ಅಲ್ಲಾಹನ ಧರ್ಮ. ಮಾನವರ ಮಾರ್ಗದರ್ಶನಕ್ಕಾಗಿ ಅಲ್ಲಾಹನು ಪ್ರವಾದಿಗಳ ಮೂಲಕ ನೀಡುತ್ತ ಬಂದ ಸಂದೇಶವನ್ನು ಅಂತಿಮ ಪ್ರವಾದಿ ಮುಹಮ್ಮದ್ (ಸ) ಅವರ ಮೂಲಕ ಪರಿಪೂರ್ಣಗೊಳಿಸಿದನು ಎಂಬುದು ಇಸ್ಲಾಮಿನ ನಂಬಿಕೆ.

ಮಾನವ ಕುಲದ ಇತಿಹಾಸದಲ್ಲಿ ಪ್ರೀತಿ, ಕರುಣೆ, ಸಹೋದರತ್ವ, ನ್ಯಾಯ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕರಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರು ಅಗ್ರಗಣ್ಯರು. ವಿವಿಧ ಧರ್ಮಗಳ ಸದಾಶಯಗಳಂತೆ ಇಸ್ಲಾಂ ಧರ್ಮದ ಬೋಧನೆಯಲ್ಲಿಯೂ ಮಾನವೀಯ ಮೌಲ್ಯಗಳಿಗೆ ಮಹತ್ವವಿದೆ. ಪ್ರವಾದಿ (ಸ) ಅವರ ಜೀವನವನ್ನು ಅರಿತುಕೊಳ್ಳುವುದರಿಂದ ನಮ್ಮ ಬದುಕಿನ ಸತ್ವ ಮತ್ತು ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅವರ ಜೀವನ ಕೇವಲ ಮುಸ್ಲಿಮರಿಗೆ ಸೀಮಿತವಾದ ಧಾರ್ಮಿಕ ಮಾದರಿಯಲ್ಲ, ಸಮಸ್ತ ಮಾನವಕುಲಕ್ಕೆ ನೈತಿಕ ಬದುಕಿನ ದಾರಿದೀಪವಾಗಿದೆ.

ಕ್ರಿ.ಶ. 571ರಲ್ಲಿ ಅರೇಬಿಯಾದ ಮಕ್ಕಾ ನಗರದಲ್ಲಿ ಅಮೀನಾ ಮತ್ತು ಅಬ್ದುಲ್ಲಾ ದಂಪತಿಯ ಪುತ್ರನಾಗಿ ಮುಹಮ್ಮದ್ (ಸ) ಜನಿಸಿದರು. ಬಾಲ್ಯದಿಂದಲೇ ಸತ್ಯವಂತಿಕೆ, ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಗೆ ಹೆಸರಾಗಿದ್ದ ಅವರು ಜನರಿಂದ ‘ಅಲ್-ಅಮೀನ್’ ಎಂಬ ಗೌರವದ ಹೆಸರಿನಿಂದ ಕರೆಯಲ್ಪಟ್ಟರು. ಸತ್ಯ ಮತ್ತು ಪ್ರಾಮಾಣಿಕತೆಯೇ ಅವರ ಜೀವನದ ಪ್ರಮುಖ ಸಂದೇಶವಾಗಿತ್ತು.

ಏಕದೇವತ್ವ ಮತ್ತು ಮಾನವ ಸಮಾನತೆ

ಪ್ರವಾದಿ (ಸ) ಅವರು ಮನುಷ್ಯರೆಲ್ಲರೂ ದೇವರ ಮುಂದೆ ಸಮಾನರು ಎಂದು ಸಾರಿದರು. ಜಾತಿ, ವರ್ಣ, ಸಂಪತ್ತು, ಅಧಿಕಾರ ಅಥವಾ ಜನ್ಮದ ಆಧಾರದ ಮೇಲೆ ಒಬ್ಬ ಮನುಷ್ಯ ಮತ್ತೊಬ್ಬನಿಗಿಂತ ಶ್ರೇಷ್ಠನಲ್ಲ ಎಂಬ ಮಾನವೀಯ ಸಂದೇಶ ನೀಡಿದರು. ಮನುಷ್ಯನ ಶ್ರೇಷ್ಠತೆ ಅವನ ಜನ್ಮದಲ್ಲಲ್ಲ, ಅವನ ಸದಾಚಾರ, ನೀತಿ ಮತ್ತು ಸತ್ಕರ್ಮಗಳಲ್ಲಿ ಇದೆ ಎಂಬುದನ್ನು ಬೋಧಿಸಿದರು.

ಕರುಣೆ ಮತ್ತು ಪ್ರೀತಿ

ಪ್ರವಾದಿ (ಸ) ಅವರ ಬದುಕಿನ ಪ್ರತಿಯೊಂದು ಹಂತದಲ್ಲೂ ಕರುಣೆ ಮತ್ತು ಪ್ರೀತಿ ಎದ್ದು ಕಾಣುತ್ತದೆ. ಬಡವರು, ಅನಾಥರು, ವಿಧವೆಯರು, ದುರ್ಬಲರು ಹಾಗೂ ಸಮಾಜದ ಅಂಚಿನಲ್ಲಿದ್ದವರ ಬಗ್ಗೆ ಅವರು ವಿಶೇಷ ಕಾಳಜಿ ಹೊಂದಿದ್ದರು. ನೆರೆಹೊರೆಯವರ ಹಕ್ಕು ಮತ್ತು ಹೊಣೆಗಾರಿಕೆಗೆ ಮಹತ್ವ ನೀಡಿದರು. ತನ್ನ ನೆರೆಯವನು ಹಸಿದಿರುವಾಗ ತಾನು ಮಾತ್ರ ಹೊಟ್ಟೆ ತುಂಬಿಸಿಕೊಳ್ಳುವುದು ನಿಜವಾದ ಮಾನವೀಯತೆಯಲ್ಲ ಎಂಬ ಸಂದೇಶವನ್ನು ಸಾರಿದರು.

ಕ್ಷಮೆ ಅವರ ಜೀವನದ ಮತ್ತೊಂದು ಮಹಾನ್ ಗುಣ. ತಮ್ಮ ವಿರುದ್ಧ ಅನ್ಯಾಯ ಮಾಡಿದವರ ಮೇಲೂ ದ್ವೇಷ ಬೆಳೆಸದೆ, ಸಾಧ್ಯವಾದಲ್ಲಿ ಕ್ಷಮೆ ಮತ್ತು ಸೌಹಾರ್ದತೆಯ ದಾರಿಯನ್ನು ಆರಿಸಿದರು. ಮಕ್ಕಾ ವಿಜಯದ ಸಂದರ್ಭದಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆಸಿದವರಿಗೂ ಕ್ಷಮೆ ತೋರಿದ ಘಟನೆ ಮಾನವ ಇತಿಹಾಸದಲ್ಲಿನ ಅಪೂರ್ವ ಕ್ಷಮೆಯ ಸಂದೇಶವಾಗಿದೆ.

ಮಹಿಳೆಯರು, ಬಡವರು ಮತ್ತು ಅನಾಥರ ಕಾಳಜಿ

ಆ ಕಾಲದ ಸಮಾಜದಲ್ಲಿ ಮಹಿಳೆಯರ ಹಕ್ಕುಗಳು ನಿರ್ಲಕ್ಷ್ಯಕ್ಕೊಳಗಾಗಿದ್ದ ಸಂದರ್ಭದಲ್ಲಿ, ಪ್ರವಾದಿ (ಸ) ಅವರು ಮಹಿಳೆಯರ ಗೌರವ, ಹಕ್ಕು ಮತ್ತು ಮಾನವೀಯ ಸ್ಥಾನಮಾನವನ್ನು ಒತ್ತಿಹೇಳಿದರು. ಹೆಣ್ಣು ಮಕ್ಕಳನ್ನು ಕೀಳಾಗಿ ಕಾಣುವ ಮನೋಭಾವವನ್ನು ವಿರೋಧಿಸಿದರು. ಕುಟುಂಬದಲ್ಲಿ ಪ್ರೀತಿ, ಗೌರವ ಮತ್ತು ಜವಾಬ್ದಾರಿಯನ್ನು ಬೆಳೆಸುವಂತೆ ಬೋಧಿಸಿದರು.

ಅನಾಥರ ಆಸ್ತಿ ಕಬಳಿಸುವುದು, ಬಡವರನ್ನು ಶೋಷಿಸುವುದು, ತೂಕ-ಅಳತೆಯಲ್ಲಿ ಮೋಸ ಮಾಡುವುದು ಹಾಗೂ ವ್ಯಾಪಾರದಲ್ಲಿ ವಂಚಿಸುವುದನ್ನು ಖಂಡಿಸಿದರು. ದಾನ, ಝಕಾತ್ ಮತ್ತು ನೆರವಿನ ಮೂಲಕ ಸಮಾಜದ ದುರ್ಬಲ ವರ್ಗಗಳ ಬದುಕಿನಲ್ಲಿ ಬೆಳಕು ಮೂಡಿಸುವ ಸಂದೇಶ ನೀಡಿದರು.

ಶಾಂತಿ, ಜ್ಞಾನ ಮತ್ತು ಸಹಬಾಳ್ವೆ

ಪ್ರವಾದಿ (ಸ) ಅವರ ಬೋಧನೆಯಲ್ಲಿ ಶಾಂತಿ ಮತ್ತು ನ್ಯಾಯಕ್ಕೆ ಮಹತ್ವವಿತ್ತು. ವಿವಿಧ ಸಮುದಾಯಗಳ ನಡುವೆ ಪರಸ್ಪರ ಗೌರವ, ನ್ಯಾಯಯುತ ಸಂಬಂಧ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಅವರು ಪ್ರೋತ್ಸಾಹಿಸಿದರು. ಮದೀನಾದಲ್ಲಿ ವಿವಿಧ ಸಮುದಾಯಗಳೊಂದಿಗೆ ಸಾಮಾಜಿಕ ಒಪ್ಪಂದದ ಮೂಲಕ ಬದುಕನ್ನು ವ್ಯವಸ್ಥಿತಗೊಳಿಸಿದ ಅವರ ಪ್ರಯತ್ನವು ಬಹುಸಾಂಸ್ಕೃತಿಕ ಸಮಾಜದಲ್ಲಿ ಸಹಬಾಳ್ವೆಯ ಮಹತ್ವವನ್ನು ತೋರಿಸುತ್ತದೆ.

ಜ್ಞಾನಾರ್ಜನೆಗೂ ಅವರು ಮಹತ್ವ ನೀಡಿದರು. ಓದು, ಚಿಂತನೆ ಮತ್ತು ಜ್ಞಾನದಿಂದ ಮನುಷ್ಯ ತನ್ನ ಬದುಕನ್ನು ಉತ್ತಮಗೊಳಿಸಬೇಕು ಎಂಬ ಸಂದೇಶ ಅವರ ಬೋಧನೆಯ ಪ್ರಮುಖ ಭಾಗವಾಗಿತ್ತು. ಜ್ಞಾನವು ವೈಯಕ್ತಿಕ ಪ್ರಗತಿಗಷ್ಟೇ ಅಲ್ಲ, ಮಾನವ ಕಲ್ಯಾಣಕ್ಕೂ ಬಳಕೆಯಾಗಬೇಕು ಎಂಬ ದೃಷ್ಟಿಕೋನ ಅವರ ಜೀವನದಲ್ಲಿತ್ತು.

ಪ್ರಾಣಿಗಳು, ಸಸ್ಯಗಳು ಮತ್ತು ಪ್ರಕೃತಿಯ ಬಗ್ಗೆ ಕರುಣೆ ತೋರುವ ಸಂದೇಶವೂ ಅವರ ಬೋಧನೆಯಲ್ಲಿ ಕಾಣುತ್ತದೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯನ್ನೂ ಗೌರವದಿಂದ ಕಾಣಬೇಕು ಎಂಬ ಮನೋಭಾವ ಇಂದಿನ ಪರಿಸರ ಸಂಕಷ್ಟದ ಕಾಲದಲ್ಲಿಯೂ ಅತ್ಯಂತ ಪ್ರಸ್ತುತವಾಗಿದೆ.

ಇಂದಿನ ಸಮಾಜಕ್ಕೆ ಸಂದೇಶ

ಇಂದು ಜಗತ್ತು ಧರ್ಮ, ಜಾತಿ, ಭಾಷೆ, ದೇಶ ಮತ್ತು ವಿಚಾರಧಾರೆಗಳ ಹೆಸರಿನಲ್ಲಿ ವಿಭಜನೆಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಪ್ರವಾದಿ (ಸ) ಅವರ ಜೀವನ ಸಂದೇಶ ಮತ್ತಷ್ಟು ಪ್ರಸ್ತುತವಾಗುತ್ತದೆ.

ದ್ವೇಷಕ್ಕೆ ಬದಲಾಗಿ ಪ್ರೀತಿ,
ಹಿಂಸೆಗೆ ಬದಲಾಗಿ ಶಾಂತಿ,
ಅನ್ಯಾಯಕ್ಕೆ ಬದಲಾಗಿ ನ್ಯಾಯ,
ಅಹಂಕಾರಕ್ಕೆ ಬದಲಾಗಿ ವಿನಯ,
ವೈರತ್ವಕ್ಕೆ ಬದಲಾಗಿ ಕ್ಷಮೆ,
ಸ್ವಾರ್ಥಕ್ಕೆ ಬದಲಾಗಿ ಸೇವೆ — ಇವೇ ಅವರ ಜೀವನದ ಮಹತ್ವದ ಪಾಠಗಳು.

ಪ್ರವಾದಿ (ಸ) ಅವರನ್ನು ಗೌರವಿಸುವ ಅತ್ಯುತ್ತಮ ಮಾರ್ಗವೆಂದರೆ ಕೇವಲ ಅವರ ಹೆಸರನ್ನು ಸ್ಮರಿಸುವುದಲ್ಲ, ಅವರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು ನಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ಇಸ್ಲಾಂ ಧರ್ಮದ ಅಂತರಂಗದಲ್ಲಿ ಶಾಂತಿ, ನ್ಯಾಯ, ಕರುಣೆ ಮತ್ತು ಸೌಹಾರ್ದತೆಗೆ ಮಹತ್ವವಿದೆ. ನ್ಯಾಯಯುತ ಮಾರ್ಗವಿಲ್ಲದೆ ಶಾಂತಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ಸಂದೇಶವೂ ಅವರ ಬೋಧನೆಯಲ್ಲಿದೆ.

ಪ್ರವಾದಿ (ಸ) ಅವರ ಜೀವನ ಒಂದು ಧರ್ಮದ ಇತಿಹಾಸ ಮಾತ್ರವಲ್ಲ, ಅದು ಮಾನವೀಯತೆಯ ವಿಶ್ವವಿದ್ಯಾಲಯ. ಸತ್ಯ, ನ್ಯಾಯ, ಕರುಣೆ, ಸಹನೆ, ಕ್ಷಮೆ, ಸಹೋದರತ್ವ ಮತ್ತು ಶಾಂತಿಯ ಮೌಲ್ಯಗಳನ್ನು ಅವರು ತಮ್ಮ ಬದುಕಿನ ಮೂಲಕ ಸಾರಿದರು. ಸಹನೆ, ಪ್ರೀತಿ, ಕ್ಷಮೆ ಮತ್ತು ನ್ಯಾಯದಿಂದ ತಮ್ಮ ಹೃದಯವನ್ನು ಬೆಳಗಿಸಿಕೊಂಡು, ಆ ಬೆಳಕಿನ ಮೂಲಕ ಅಲ್ಲಾಹನ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿದರು.

ಇಂದಿನ ಜಗತ್ತಿಗೆ ಬೇಕಾಗಿರುವುದು ದ್ವೇಷದ ಗೋಡೆಗಳಲ್ಲ—ಪ್ರೀತಿಯ ಸೇತುವೆಗಳು. ಭಾರತವೆಂಬ ಹಡಗಿಗೆ ಬುದ್ಧನ ಕರುಣೆ, ಪ್ರವಾದಿ (ಸ) ಅವರ ಸಹೋದರತೆ, ಬಸವಣ್ಣನವರ ಸಮಾನತೆಯ ಚಿಂತನೆ, ಗಾಂಧೀಜಿಯವರ ಶಾಂತಿ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಆಶಯಗಳು ದಿಕ್ಕುದೀಪಗಳಾಗಬೇಕು. ಹಲವು ದಾರ್ಶನಿಕರ ಚಿಂತನೆಗಳ ಕುಲುಮೆಯಲ್ಲಿ ನಮ್ಮ ಸಂವಿಧಾನ ರೂಪುಗೊಂಡಿದೆ. ಮನುಷ್ಯನನ್ನು ಮನುಷ್ಯನಾಗಿ ಕಾಣುವ ಹೃದಯವೇ ಈ ದೇಶದ ನಿಜವಾದ ಶಕ್ತಿ.

ಪ್ರವಾದಿ (ಸ) ಅವರ ಯಾವುದೇ ಮೂರ್ತಿ ಅಥವಾ ಭಾವಚಿತ್ರವಿಲ್ಲದಿದ್ದರೂ, ಕೋಟ್ಯಂತರ ಅನುಯಾಯಿಗಳ ಹೃದಯದಲ್ಲಿ ಅವರು ವಿರಾಜಮಾನರಾಗಿದ್ದಾರೆ. ಅವರ ಜೀವನ ಸಂದೇಶ ಭಾವೈಕ್ಯತೆ ಮತ್ತು ಮಾನವೀಯತೆಯ ಬೀಜ ಬಿತ್ತುತ್ತದೆ.

“ಮಾನವೀಯತೆಯೇ ಮನುಷ್ಯನ ನಿಜವಾದ ಧರ್ಮ” ಎಂಬ ಆಶಯವನ್ನು ಬದುಕಿನಲ್ಲಿ ಸಾಕಾರಗೊಳಿಸುವುದೇ ಪ್ರವಾದಿ ಮುಹಮ್ಮದ್ (ಸ) ಅವರ ಜೀವನಕ್ಕೆ ಸಲ್ಲಿಸುವ ಶ್ರೇಷ್ಠ ಗೌರವ. ಬಹುತ್ವದ ಭಾರತದಲ್ಲಿ ಎಲ್ಲರೂ ಸಮಾನವಾಗಿ ಬಾಳಿ ಬದುಕಲು ನಮ್ಮ ಸಂಬಂಧಗಳು ಗಟ್ಟಿಯಾಗಬೇಕು. ಸ್ವಧರ್ಮನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯೊಂದಿಗೆ ಬದುಕುವ ಮಾರ್ಗವನ್ನು ಅಳವಡಿಸಿಕೊಳ್ಳಬೇಕು. ಆಗಲೇ ಈದ್ ಮಿಲಾದ್ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ.

— ಎ.ಎಸ್. ಮಕಾನದಾರ
ಕವಿ, ಪ್ರಕಾಶಕರು
ನಿರಂತರ ಪ್ರಕಾಶನ, ಗದಗ

ಧರ್ಮದ ಹೆಸರಿನ ಸ್ಪರ್ಧೆಗೆ ಪೈಗಂಬರ್‌ರ ಬದುಕೇ ಉತ್ತರ

ಧರ್ಮದ ಹೆಸರಿನಲ್ಲಿ ಇಂದು ಸ್ಪರ್ಧೆ ಹೆಚ್ಚುತ್ತಿದೆ. ಯಾರು ದೊಡ್ಡವರು, ಯಾರ ಧರ್ಮ ಶ್ರೇಷ್ಠ, ಯಾರ ಆಚರಣೆ ಹೆಚ್ಚು ವೈಭವಯುತ ಎಂಬ ಪೈಪೋಟಿಯ ನಡುವೆ ಮನುಷ್ಯ ಮಾತ್ರ ಎಲ್ಲೋ ಹಿಂದೆ ಸರಿಯುತ್ತಿದ್ದಾನೆ. ಮೆರವಣಿಗೆಗಳು, ಘೋಷಣೆಗಳು, ಸಾಮಾಜಿಕ ಮಾಧ್ಯಮಗಳ ಚರ್ಚೆಗಳ ನಡುವೆ ಹಸಿದವನ ಹೊಟ್ಟೆ, ಅನಾಥನ ಕಣ್ಣೀರು, ಬಡವನ ಬದುಕು ಮತ್ತು ನ್ಯಾಯಕ್ಕಾಗಿ ಕಾಯುತ್ತಿರುವ ಸಾಮಾನ್ಯ ಮನುಷ್ಯನ ನೋವು ಮಾತ್ರ ಹಾಗೆಯೇ ಉಳಿದಿದೆ.

ಇಂತಹ ಸಂದರ್ಭದಲ್ಲಿ ಈದ್ ಮಿಲಾದ್ ಉನ್ ನಬಿ ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯಬೇಕೇ? ಅಥವಾ ಪ್ರವಾದಿ ಮಹಮ್ಮದ್ ಪೈಗಂಬರ್‌ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಅವರು ಬದುಕಿ ತೋರಿಸಿದ ನ್ಯಾಯ, ಕರುಣೆ, ಸಮಾನತೆ, ಜ್ಞಾನ ಮತ್ತು ಮಾನವೀಯತೆಯ ದಾರಿಯನ್ನು ನೆನಪಿಸಿಕೊಳ್ಳಬೇಕೇ ಎಂಬುದು ನಮ್ಮ ಕಾಲದ ಮಹತ್ವದ ಚಿಂತನೆಯಾಗಿದೆ.

ಇತಿಹಾಸವನ್ನು ನೆನಪಿಸಿಕೊಳ್ಳುವುದು ಎಂದರೆ ಹಳೆಯ ಘಟನೆಗಳನ್ನು ಪುನರಾವರ್ತಿಸುವುದಲ್ಲ; ಅವು ವರ್ತಮಾನಕ್ಕೆ ನೀಡುವ ಪಾಠವನ್ನು ಅರಿಯುವುದು. ಪ್ರವಾದಿ ಮಹಮ್ಮದ್ ಪೈಗಂಬರ್‌ (ಸ) ಅವರ ಬದುಕು ಇದೇ ಸಂದೇಶವನ್ನು ನೀಡುತ್ತದೆ.

ಜ್ಞಾನದ ಮೂಲಕ ಬದಲಾವಣೆಯ ಪಯಣ

ಇಸ್ಲಾಮಿಕ್ ಪರಂಪರೆಯ ಪ್ರಕಾರ, ಪ್ರವಾದಿ ಮಹಮ್ಮದ್ ಪೈಗಂಬರ್‌ (ಸ) ಅವರು ಕ್ರಿ.ಶ. 571ರಲ್ಲಿ ಮಕ್ಕಾದಲ್ಲಿ ಜನಿಸಿದರು. ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಜನರ ವಿಶ್ವಾಸ ಗಳಿಸಿ ‘ಅಲ್-ಅಮೀನ್’ ಎಂಬ ಗೌರವ ಪಡೆದರು.

ಸುಮಾರು ನಲವತ್ತು ವರ್ಷ ವಯಸ್ಸಿನಲ್ಲಿ ಹಿರಾ ಗುಹೆಯಲ್ಲಿ ಮೊದಲ ವಹೀ ದೊರೆಯಿತು. ‘ಇಕ್ರಾ’ ಎಂಬ ಜ್ಞಾನದ ಕರೆಯೊಂದಿಗೆ ಅವರ ಪ್ರವಾದಿತ್ವದ ಅಧ್ಯಾಯ ಆರಂಭವಾಯಿತು. ಸತ್ಯ, ನ್ಯಾಯ, ಕರುಣೆ, ದಾನ, ಅನಾಥರ ರಕ್ಷಣೆ, ಬಡವರ ಕಾಳಜಿ ಮತ್ತು ಮಾನವ ಘನತೆ ಅವರ ಬೋಧನೆಯ ಪ್ರಮುಖ ಅಂಶಗಳಾಗಿದ್ದವು.

ಆ ಕಾಲದ ಅರೇಬಿಯಾದಲ್ಲಿ ಬುಡಕಟ್ಟು ಪ್ರಭಾವ, ಅಸಮಾನತೆ, ಶೋಷಣೆ ಮತ್ತು ದುರ್ಬಲರ ಮೇಲಿನ ಅನ್ಯಾಯ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಪ್ರವಾದಿಯ ಸಂದೇಶ ಧಾರ್ಮಿಕ ಬೋಧನೆಯಷ್ಟೇ ಅಲ್ಲದೆ ಸಾಮಾಜಿಕ ಪರಿವರ್ತನೆಯ ಧ್ವನಿಯಾಯಿತು.

ಸಹಬಾಳ್ವೆಯ ಸಮಾಜಕ್ಕೆ ಮಾದರಿ

ಕ್ರಿ.ಶ. 622ರ ಹಿಜ್ರಾ ಬಳಿಕ ಮದೀನಾದಲ್ಲಿ ವಿವಿಧ ಸಮುದಾಯಗಳ ನಡುವೆ ಸಾಮಾಜಿಕ ವ್ಯವಸ್ಥೆ ರೂಪಿಸುವಲ್ಲಿ ಪ್ರವಾದಿ ಪ್ರಮುಖ ಪಾತ್ರ ವಹಿಸಿದರು. ಮದೀನಾ ಒಪ್ಪಂದವು ವಿಭಿನ್ನ ಸಮುದಾಯಗಳ ಸಹಬಾಳ್ವೆ ಮತ್ತು ಪರಸ್ಪರ ಹೊಣೆಗಾರಿಕೆಯ ಮಹತ್ವವನ್ನು ಸಾರುತ್ತದೆ.

ಹುಡೈಬಿಯಾ ಒಪ್ಪಂದವು ಸಂಘರ್ಷದ ಸಂದರ್ಭದಲ್ಲಿಯೂ ತಾಳ್ಮೆ, ಸಂಧಾನ ಮತ್ತು ದೂರದೃಷ್ಟಿಗೆ ಮಹತ್ವವಿದೆ ಎಂಬುದನ್ನು ತೋರಿಸಿತು. ಕ್ರಿ.ಶ. 630ರಲ್ಲಿ ಮಕ್ಕಾ ವಿಜಯದ ಬಳಿಕ ಪ್ರತೀಕಾರಕ್ಕಿಂತ ಕ್ಷಮೆಗೆ ಆದ್ಯತೆ ನೀಡಿದ್ದು ಅಧಿಕಾರಕ್ಕಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶ ನೀಡುತ್ತದೆ.

ಧರ್ಮದ ನಿಜವಾದ ಶಕ್ತಿ ಸೇವೆಯಲ್ಲಿ

ಇಂದಿನ ರಾಜಕೀಯ ಪೈಪೋಟಿಯಲ್ಲಿ ಧರ್ಮವನ್ನು ಮತಗಳ ಲೆಕ್ಕಾಚಾರಕ್ಕೆ ಬಳಸುವುದು, ಸಮುದಾಯಗಳ ನಡುವೆ ಅನುಮಾನ ಬಿತ್ತುವುದು ಅಪಾಯಕಾರಿ. ಧರ್ಮದ ನಿಜವಾದ ಶಕ್ತಿ ಪ್ರದರ್ಶನದಲ್ಲಲ್ಲ, ಸೇವೆಯಲ್ಲಿ ಕಾಣಬೇಕು. ಮೆರವಣಿಗೆ ಮತ್ತು ಅಲಂಕಾರದ ಜತೆಗೆ ಬಡ ವಿದ್ಯಾರ್ಥಿಗೆ ಪುಸ್ತಕ, ಹಸಿದವನಿಗೆ ಆಹಾರ, ಅನಾಥನಿಗೆ ನೆರವು ಹಾಗೂ ರೋಗಿಗೆ ಚಿಕಿತ್ಸೆಯ ಸಹಾಯ ದೊರೆತಾಗ ಆಚರಣೆಗೆ ನಿಜವಾದ ಸಾಮಾಜಿಕ ಅರ್ಥ ಬರುತ್ತದೆ.

ಯುವಕರು ತಂತ್ರಜ್ಞಾನವನ್ನು ದ್ವೇಷ ಹರಡುವುದಕ್ಕೆ ಬಳಸದೆ ಶಿಕ್ಷಣ, ರಕ್ತದಾನ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆಗೆ ಬಳಸಬೇಕು. ಯಾವುದೇ ಮಾಹಿತಿಯನ್ನು ಹಂಚುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸುವ ವಿವೇಕವೂ ಬೆಳೆಸಿಕೊಳ್ಳಬೇಕು.

ಈದ್ ಮಿಲಾದ್ ಕೇವಲ ಒಂದು ದಿನದ ಸಂಭ್ರಮವಾಗದೆ, ನಮ್ಮ ಬದುಕನ್ನು ಪರಿಶೀಲಿಸುವ ಸಂದರ್ಭವಾಗಲಿ. ರಾಜಕೀಯದಲ್ಲಿ ನ್ಯಾಯ, ಧರ್ಮದಲ್ಲಿ ಮಾನವೀಯತೆ, ಸಮಾಜದಲ್ಲಿ ಸಮಾನತೆ ಮತ್ತು ಮಾತಿನಲ್ಲಿ ಸತ್ಯ ನೆಲೆಗೊಳ್ಳಲಿ.

ಈದ್ ಮಿಲಾದ್‌ನಲ್ಲಿ ಮನೆಗಳು ಮಾತ್ರ ಬೆಳಗದೆ, ಮನುಷ್ಯರ ಬದುಕು ಬೆಳಗಲಿ.

ದೀಪದ ಬೆಳಕಿಗಿಂತ ಬದುಕಿನ ಬೆಳಕು ಮುಖ್ಯ

ಈದ್ ಮಿಲಾದ್ ಎಂದರೆ ಬೀದಿಗಳಲ್ಲಿ ಬೆಳಗುವ ದೀಪಗಳಷ್ಟೇ ಅಲ್ಲ, ಕತ್ತಲಲ್ಲಿ ಬದುಕುತ್ತಿರುವ ಮನೆಯೊಳಗೆ ಹೊತ್ತಿಸುವ ಆಶೆಯ ದೀಪವೂ ಹೌದು. ಹಸಿದವನಿಗೆ ನೀಡಿದ ಒಂದು ತುತ್ತು, ಅನಾಥನ ತಲೆಯ ಮೇಲೆ ಇಟ್ಟ ಸಾಂತ್ವನದ ಕೈ ಹಾಗೂ ನೋವಿನಲ್ಲಿರುವವನಿಗೆ ನೀಡಿದ ಭರವಸೆಯ ಮಾತು ದೀರ್ಘಕಾಲ ಉಳಿಯುತ್ತವೆ. ಪೈಗಂಬರ್‌ (ಸ) ಅವರ ಜನ್ಮವನ್ನು ಸ್ಮರಿಸುವ ಈದ್ ಮಿಲಾದ್, ಮನುಷ್ಯನೊಳಗಿನ ಮಾನವೀಯತೆಯನ್ನು ಎಚ್ಚರಿಸುವ ಪವಿತ್ರ ನೆನಪಾಗಲಿ.

– ಸಿಕಂದರ ಎಂ. ಆರಿ, ವಕೀಲರು

ಅಂತಿಮ ಪ್ರವಾದಿ ಮುಹಮ್ಮದ್ (ಸ): ಮಾನವೀಯತೆಯ ದಾರಿದೀಪ

ಕ್ರಿ.ಶ. 571ರ ರಬೀಉಲ್ ಅವ್ವಲ್ ತಿಂಗಳ 9ನೇ ತಾರೀಖು ಸೋಮವಾರ. ಮಕ್ಕಾ ನಗರದಲ್ಲಿ ಅಬ್ದುಲ್ಲಾ ಮತ್ತು ಅಮೀನಾ ದಂಪತಿಯ ಪುತ್ರನಾಗಿ ಮುಹಮ್ಮದ್ (ಸ) ಜನಿಸಿದರು. ಮಗುವಿನ ಜನನದ ಸುದ್ದಿ ತಿಳಿದು ಓಡೋಡಿ ಬಂದ ದಾಸಿ ಬರ್ಕಾ, “ಸರದಾರರೇ, ಶುಭವಾಗಲಿ. ಅಮ್ಮಾ ಚಂದ್ರನಂತಹ ಸುಂದರ ಮಗುವಿಗೆ ಜನ್ಮ ನೀಡಿದ್ದಾರೆ” ಎಂದು ಸಂತಸದ ಸುದ್ದಿ ತಿಳಿಸಿದಳು. ಮಗುವನ್ನು ಕಂಡ ಅಬ್ದುಲ್ ಮುತ್ತಲಿಬ್ ಅವರ ಹೃದಯ ಆನಂದದಿಂದ ತುಂಬಿತು. ಅವರು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿ, “ಈ ಮಗುವನ್ನು ಸಂರಕ್ಷಿಸು” ಎಂದು ಪ್ರಾರ್ಥಿಸಿದರು.

ಆದರೆ ಈ ಮುದ್ದು ಬಾಲಕನ ಬದುಕಿನಲ್ಲಿ ಬಾಲ್ಯದಲ್ಲಿಯೇ ದುಃಖದ ಸರಮಾಲೆ ಆರಂಭವಾಯಿತು. ತಂದೆ ಅಬ್ದುಲ್ಲಾ ಅವರನ್ನು ಜನನಕ್ಕೂ ಮುನ್ನವೇ ಕಳೆದುಕೊಂಡಿದ್ದರು. ನಂತರ ತಾಯಿ ಅಮೀನಾ ಅವರನ್ನೂ ಕಳೆದುಕೊಂಡರು. ತಾಯಿಯ ಮೃತದೇಹವನ್ನು ಅಪ್ಪಿಕೊಂಡು ಬಿಕ್ಕಿಬಿಕ್ಕಿ ಅತ್ತ ಬಾಲಕ ಮುಹಮ್ಮದ್ (ಸ) ಅವರಿಗೆ ತಾತ ಅಬ್ದುಲ್ ಮುತ್ತಲಿಬ್ ಆಸರೆಯಾದರು. ಆದರೆ ವಿಧಿಯಾಟದಿಂದ ತಾತನನ್ನೂ ಕಳೆದುಕೊಂಡರು. ಹೀಗೆ ಮುಂದೆ ಜಗತ್ತಿನ ಅನಾಥರಿಗೆ ಆಸರೆಯಾಗಬೇಕಿದ್ದವರು ಸ್ವತಃ ಅನಾಥರ ನೋವನ್ನು ಅನುಭವಿಸಿ ಬೆಳೆದರು.

ಬಾಲ್ಯದಿಂದಲೇ ಮುಹಮ್ಮದ್ (ಸ) ಅವರ ಚಿಂತನೆ ವಿಶಿಷ್ಟವಾಗಿತ್ತು. ಆಡು-ಒಂಟೆಗಳನ್ನು ಮೇಯಿಸುತ್ತಿದ್ದಾಗಲೂ ಇತರ ಬಾಲಕರಂತೆ ಕೇವಲ ಆಟದಲ್ಲಿ ತಲ್ಲೀನರಾಗದೆ, ನೀಲಾಕಾಶ, ಎತ್ತರದ ಪರ್ವತಗಳು, ವಿಶಾಲ ಭೂಮಿ ಮತ್ತು ಪ್ರಕೃತಿಯ ವೈಚಿತ್ರ್ಯವನ್ನು ಗಮನಿಸುತ್ತಿದ್ದರು. “ಈ ಆಕಾಶವನ್ನು ಯಾರು ನಿರ್ಮಿಸಿದರು? ಈ ಪರ್ವತಗಳನ್ನು ಯಾರು ಸೃಷ್ಟಿಸಿದರು? ಮನುಷ್ಯನನ್ನು ಸೃಷ್ಟಿಸಿದವನು ಯಾರು?” ಎಂಬ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡುತ್ತಿದ್ದವು. ಸೃಷ್ಟಿಯ ಹಿಂದಿರುವ ಮಹಾನ್ ಸೃಷ್ಟಿಕರ್ತನನ್ನು ಅರಿಯುವ ದಾಹ ಅವರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು.

ಯೌವನಕ್ಕೆ ಕಾಲಿಟ್ಟ ಮುಹಮ್ಮದ್ (ಸ) ಅವರು ಸತ್ಯ, ಪ್ರಾಮಾಣಿಕತೆ, ವಿವೇಕ, ಸಜ್ಜನಿಕೆ ಮತ್ತು ಉತ್ತಮ ನಡತೆಯಿಂದ ಜನರ ಗೌರವಕ್ಕೆ ಪಾತ್ರರಾದರು. ಏಕಾಂತವಾಸ ಮತ್ತು ಧ್ಯಾನ ಅವರಿಗೆ ಹೆಚ್ಚು ಪ್ರಿಯವಾಗತೊಡಗಿತು. ಜೀವನದ ಉದ್ದೇಶ, ಸೃಷ್ಟಿಯ ರಹಸ್ಯ ಮತ್ತು ಸೃಷ್ಟಿಕರ್ತನ ಕುರಿತು ಅವರು ಆಳವಾಗಿ ಚಿಂತಿಸುತ್ತಿದ್ದರು.

ಮಕ್ಕಾ ನಗರದ ಹೊರವಲಯದಲ್ಲಿರುವ ನೂರ್ ಪರ್ವತದ ಹಿರಾ ಗುಹೆ ಅವರ ಧ್ಯಾನಸ್ಥಳವಾಯಿತು. ಹಗಲಿರಲಿ, ರಾತ್ರಿಯಿರಲಿ, ಅವರು ಅಲ್ಲಿ ಸೃಷ್ಟಿಕರ್ತನ ಧ್ಯಾನ ಮತ್ತು ಆರಾಧನೆಯಲ್ಲಿ ತಲ್ಲೀನರಾಗುತ್ತಿದ್ದರು. ಕೊನೆಗೆ ಕ್ರಿ.ಶ. 610ರಲ್ಲಿ ಅವರ ಜೀವನದ ಮಹತ್ವದ ಘಳಿಗೆ ಬಂದಿತು. ಜಿಬ್ರೀಲ್ (ಅ) ಅವರು ಅವರ ಬಳಿಗೆ ಆಗಮಿಸಿ “ಓದಿರಿ” ಎಂದು ಹೇಳಿದರು. “ನಾನು ಓದು ಬಲ್ಲವನಲ್ಲ” ಎಂದು ಮುಹಮ್ಮದ್ (ಸ) ಉತ್ತರಿಸಿದರು. ಬಳಿಕ ಪವಿತ್ರ ಕುರಾನಿನ ಸೂರ ಅಲ್-ಅಲಕ್‌ನ ಮೊದಲ ಐದು ವಚನಗಳು ಅವತೀರ್ಣವಾದವು.

“ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ ಓದಿರಿ. ಅವನು ಮಾನವನನ್ನು ಹೆಪ್ಪುಗಟ್ಟಿದ ರಕ್ತದ ಪಿಂಡದಿಂದ ಸೃಷ್ಟಿಸಿದನು…” ಎಂಬ ದಿವ್ಯವಾಣಿ ಜ್ಞಾನ ಮತ್ತು ಸತ್ಯದ ಹೊಸ ಬೆಳಕನ್ನು ಮಾನವಕುಲಕ್ಕೆ ನೀಡಿತು. ಇದರೊಂದಿಗೆ ಮುಹಮ್ಮದ್ (ಸ) ಅವರು ಅಂತಿಮ ಪ್ರವಾದಿಯಾಗಿ ತಮ್ಮ ಧರ್ಮಪ್ರಚಾರದ ಪವಿತ್ರ ಕಾರ್ಯವನ್ನು ಆರಂಭಿಸಿದರು.

ಆರಂಭದಲ್ಲಿ ಧರ್ಮಪ್ರಚಾರ ಗುಪ್ತವಾಗಿ ನಡೆಯಿತು. ನಂತರ ಅಲ್ಲಾಹನ ಏಕತ್ವದ ಸಂದೇಶವನ್ನು ಬಹಿರಂಗವಾಗಿ ಸಾರಲಾರಂಭಿಸಿದರು. “ಅಲ್ಲಾಹನಲ್ಲದೆ ಆರಾಧ್ಯನಿಲ್ಲ” ಎಂಬ ಸಂದೇಶದೊಂದಿಗೆ ನಮಾಝ್, ಉಪವಾಸ, ಝಕಾತ್ ಮತ್ತು ಹಜ್‌ನ ಮಹತ್ವವನ್ನು ಬೋಧಿಸಿದರು. ಆದರೆ ಅವರ ಸಂದೇಶ ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿರಲಿಲ್ಲ. ಸತ್ಯ, ನ್ಯಾಯ, ದಯೆ, ಕ್ಷಮೆ, ಸಹೋದರತ್ವ, ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ಜೀವನದ ಆಧಾರವನ್ನಾಗಿ ಮಾಡಿಕೊಳ್ಳುವಂತೆ ಕರೆ ನೀಡಿದರು.

ಅನಾಥರು, ಬಡವರು, ದೀನರು ಮತ್ತು ಅಸಹಾಯಕರ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಹೇಳಿದರು. ಅಹಂಕಾರ, ದ್ವೇಷ, ಅನ್ಯಾಯ ಮತ್ತು ಶೋಷಣೆಯಿಂದ ದೂರವಿದ್ದು, ಪರಸ್ಪರ ಪ್ರೀತಿ ಮತ್ತು ಕರುಣೆಯಿಂದ ಬದುಕುವಂತೆ ಬೋಧಿಸಿದರು. ಅವರ ಜೀವನವೇ ಅವರು ಸಾರಿದ ಸಂದೇಶದ ಪ್ರಾಯೋಗಿಕ ಮಾದರಿಯಾಗಿತ್ತು.

ಸಂಕಷ್ಟ ಬಂದಾಗ ಸಹನೆ, ಅಧಿಕಾರ ಸಿಕ್ಕಾಗ ವಿನಯ, ಸಂಪತ್ತು ದೊರೆತಾಗ ದಾನಶೀಲತೆ, ವಿರೋಧ ಎದುರಾದಾಗ ಕ್ಷಮೆ—ಇವೆಲ್ಲ ಮುಹಮ್ಮದ್ (ಸ) ಅವರ ಬದುಕಿನ ಮಹತ್ವದ ಗುಣಗಳಾಗಿದ್ದವು. ತಮ್ಮ ಅಂತಿಮ ದಿನಗಳಲ್ಲಿಯೂ ಬಡವರು ಮತ್ತು ದೀನರ ಬಗ್ಗೆ ಕಾಳಜಿ ವಹಿಸಿದರು. ತಮ್ಮಲ್ಲಿದ್ದ ಸಂಪತ್ತನ್ನು ದಾನ ಮಾಡಿದರು, ಗುಲಾಮರನ್ನು ಮುಕ್ತಗೊಳಿಸಿದರು.

ಕ್ರಿ.ಶ. 632ರಲ್ಲಿ 63ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದರು. ಆದರೆ ಅವರ ದೇಹ ಮಾತ್ರ ಇಹಲೋಕದಿಂದ ಮರೆಯಾಯಿತು, ಅವರ ಆದರ್ಶ ಮತ್ತು ಸಂದೇಶ ಇಂದಿಗೂ ಕೋಟ್ಯಂತರ ಜನರ ಬದುಕಿಗೆ ದಾರಿದೀಪವಾಗಿದೆ.

ಈದ್ ಮೀಲಾದ್ ಆಚರಣೆಯ ನಿಜವಾದ ಆಶಯವು ಕೇವಲ ಪ್ರವಾದಿಯವರ ಜನನವನ್ನು ಸ್ಮರಿಸುವುದರಲ್ಲಿ ಸೀಮಿತವಾಗಬಾರದು. ಅವರ ಜೀವನದ ಸಂದೇಶವನ್ನು ಅರಿತು, ಸತ್ಯ, ಕರುಣೆ, ಸಹನೆ, ಕ್ಷಮೆ, ಸರಳತೆ ಮತ್ತು ಮಾನವೀಯತೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.

ಅನಾಥರ ಕಣ್ಣೀರು ಒರೆಸೋಣ. ಬಡವರ ನೆರವಿಗೆ ನಿಲ್ಲೋಣ. ದ್ವೇಷದ ಬದಲು ಪ್ರೀತಿ, ಅನ್ಯಾಯದ ಬದಲು ನ್ಯಾಯ, ಅಹಂಕಾರದ ಬದಲು ವಿನಯ ಮತ್ತು ಹಿಂಸೆಯ ಬದಲು ಶಾಂತಿಯನ್ನು ಆಯ್ಕೆ ಮಾಡೋಣ. ಇದೇ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ನಮಗೆ ನೀಡುವ ಮಹತ್ತರ ಸಂದೇಶ.

ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಸಂದೇಶ ಎಲ್ಲರಿಗೂ ಸನ್ಮಾರ್ಗದ ದಾರಿದೀಪವಾಗಲಿ. ಈದ್ ಮೀಲಾದ್‌ನ ಪವಿತ್ರ ಸಂದರ್ಭದಲ್ಲಿ ಮಾನವೀಯತೆ, ಶಾಂತಿ ಮತ್ತು ಸಹೋದರತ್ವದ ಬೆಳಕು ನಮ್ಮೆಲ್ಲರ ಬದುಕಿನಲ್ಲಿ ಬೆಳಗಲಿ.

ಡಾ. ತಯಬಅಲಿ ಅ. ಹೊಂಬಳ

ಮಕ್ಕಳ ಸಾಹಿತಿ,

ಗದಗ

ಜಾತ್ರೆಗಳು ಸಹಬಾಳ್ವೆಯಿಂದ ಬದುಕಲು ಕಲಿಸುತ್ತವೆ: ಕೃಷ್ಣಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಜಾತಿ, ಮತ, ಪಂಥಗಳ ಎಲ್ಲೆ ಮೀರಿ ಮಾನವೀಯತೆ, ಪರಸ್ಪರ ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಜಾತ್ರೆಗಳು ಸಾರುತ್ತವೆ. ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಜಾತ್ರೆಗಳು ಸಾರುವ ಮೌಲ್ಯಗಳು ಹೊಸ ಸಮಾಜ ಕಟ್ಟಲು ಸಹಕಾರಿಯಾಗಲಿವೆ ಎಂದು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ನಗರದ ಒಕ್ಕಲಗೇರಿ ಓಣಿಯ ದ್ಯಾಮವ್ವನಕಟ್ಟಿ ಬಳಿ 18 ವರ್ಷಗಳ ಬಳಿಕ ನಡೆಯುತ್ತಿರುವ ಗದಗ-ಬೆಟಗೇರಿ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತ್ರೆಗಳು ಸಮಾಜದಲ್ಲಿ ರಚನಾತ್ಮಕ ಕಾರ್ಯಗಳಿಗೆ ಹಾಗೂ ಸೇವೆಯ ಮೂಲಕ ಸಾಮಾಜಿಕ ಬದಲಾವಣೆಗೆ ಅವಕಾಶ ಕಲ್ಪಿಸುವ ನೆಪವಾಗಿವೆ. ಆದರೆ ಪದ್ಧತಿ, ಸಂಸ್ಕೃತಿ ಒಂದೆಡೆಯಾದರೆ ಯುವಕರ ನಡೆ ಮತ್ತೊಂದೆಡೆ ಸಾಗುತ್ತಿರುವುದು ವಿಪರ್ಯಾಸ. ನಕಾರಾತ್ಮಕ ಮತ್ತು ಸಕಾರಾತ್ಮಕದ ನಡುವಿನ ಸೂಕ್ಷ್ಮ ಗೆರೆಯನ್ನು ಗಮನಿಸಿ ಯುವ ಸಮುದಾಯ ಮುನ್ನಡೆಯಬೇಕು. ಆಗ ಸಮಾಜದಲ್ಲಿ ಸಹಬಾಳ್ವೆ, ಭ್ರಾತೃತ್ವ ಹಾಗೂ ಒಗ್ಗಟ್ಟು ಬಲಗೊಳ್ಳಲಿದೆ ಎಂದರು.

ಸಂವಿಧಾನದ ಸಮಾನತೆಯ ಆಶಯವನ್ನು ಪಾಲಿಸುವವರು ಇಂದು ಅಗತ್ಯವಾಗಿದ್ದಾರೆ. ಮತ್ತೊಬ್ಬರ ವಿಚಾರಧಾರೆಯನ್ನು ಒಪ್ಪಿ, ಸ್ವೀಕರಿಸಿ, ಗೌರವಿಸಿ ಮುನ್ನಡೆಯುವುದೇ ಭ್ರಾತೃತ್ವದ ಕಲ್ಪನೆ. ಇದನ್ನು ಸಮಾಜ ಸ್ವೀಕರಿಸಿದರೆ ಪ್ರಗತಿ ಸಾಧ್ಯ. ಭ್ರಾತೃತ್ವದ ಭಾವನೆ ವ್ಯಕ್ತಪಡಿಸಲು ಹಿಂಜರಿದರೆ ಸಮಾಜ ನಿರೀಕ್ಷಿಸಿದಷ್ಟು ಬದಲಾವಣೆ ತರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜಾತ್ರೆಗಳು ಸಾರುವ ಸಹೋದರತ್ವ, ಭ್ರಾತೃತ್ವ ಮತ್ತು ಮಾನವೀಯತೆಯ ಮೌಲ್ಯಗಳನ್ನು ಆಚರಣೆಗೆ ತರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿದರು.

ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಷರಸಾಬ ಬಬರ್ಚಿ, ನಗರಸಭಾ ಸದಸ್ಯರಾದ ಮೆಹಬೂಬಸಾಬ ನದಾಫ್ ಹಾಗೂ ಬರಕತ್ ಅಲಿ ಮುಲ್ಲಾ ಮಾತನಾಡಿ, ಹರಿಜಾತ್ರೆ ಜಿಲ್ಲೆಯಲ್ಲಿ ಅತ್ಯಂತ ಪ್ರಭಾವ ಬೀರಿದೆ. ಇದಕ್ಕೆ ಕಾರಣರಾದ ಎಲ್ಲರೂ ಅಭಿನಂದನಾರ್ಹರು. ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಎಂತಹ ಕಾರ್ಯವನ್ನಾದರೂ ಯಶಸ್ವಿಗೊಳಿಸಬಹುದು ಎಂಬುದಕ್ಕೆ ಜಾತ್ರೆ ನಿದರ್ಶನವಾಗಿದೆ ಎಂದರು.

ಪಂ. ಹೂಲಿ ಆಚಾರ್ಯ ಮಾತನಾಡಿ, ಮಹಾಭಾರತದಲ್ಲಿ ವೀರತ್ವ, ಬುದ್ಧಿ, ಧರ್ಮ, ಲೋಕನೀತಿ ಹಾಗೂ ವೇದಧರ್ಮದ ಸಾರವಿದೆ. ಮಹಾಭಾರತವನ್ನು ಓದುವುದರಿಂದ ಭಾವಶುದ್ಧಿಯಾಗುತ್ತದೆ. ಕರ್ಣನ ತ್ಯಾಗ, ಅರ್ಜುನನ ಶೌರ್ಯ, ಶ್ರೀಕೃಷ್ಣನ ಮಾರ್ಗದರ್ಶನ ಸೇರಿದಂತೆ ಕುರುಕ್ಷೇತ್ರ ಯುದ್ಧದ ಹಲವು ಪ್ರಸಂಗಗಳು ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದರು.

ಜಾತ್ರಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಮೋಹನ ಕಮತರ, ಶಿವಯೋಗಿ ತೆಂಗಿನಕಾಯಿ, ಸಿದ್ದಣ್ಣ ಸಂಗನಾಳ, ಬಸಪ್ಪ ವಜ್ರಬಂಡಿ, ವಿನೋದ ಮೊರಬದ, ಸಂತೋಷ ಕಬಾಡರ, ಈರಣ್ಣ ಮೇಟಿ, ಮಂಜುನಾಥ, ಶೇಖಪ್ಪ ಸುನೀತ, ವೆಂಕಣ್ಣ ಈರಣ್ಣ ಹೇಮಾದ್ರಿ, ರವಿ ಹುಡೇದ, ಈಶಪ್ಪ ಸೇರಿದಂತೆ ಗಣ್ಯರು, ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.

ಶ್ರೀಮತಿ ವಿಜಯಲಕ್ಷ್ಮಿ ವೀರಶೆಟ್ಟರ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಸಂಸ್ಕೃತಿಯೇ ನಮ್ಮ ಹೆಮ್ಮೆ. ಜಾತ್ರೆಗಳು ಸಹಬಾಳ್ವೆಯ ಅವಕಾಶವನ್ನು ಒದಗಿಸುತ್ತವೆ. ಹಿರಿಯರು ಹಾಕಿಕೊಟ್ಟ ಮೌಲ್ಯಗಳ ಅಡಿಯಲ್ಲಿ ನಡೆಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ಸಂಕಲ್ಪವನ್ನು ಜಾತ್ರೆಗಳ ಮೂಲಕ ಅನುಷ್ಠಾನಗೊಳಿಸಬೇಕು.

— ಕೆ.ಎಚ್. ಪಾಟೀಲ

ಕಲಿಯುಗ ವಿನಾಶದ ಅಂಚಿನಲ್ಲಿದೆ ; ದೇವರು–ಧರ್ಮದ ಆರಾಧನೆ ಅಗತ್ಯ: ಅಭಿನವ ಸಿದ್ದಲಿಂಗ ಶ್ರೀ

0

ವಿಜಯಸಾಕ್ಷಿ ಸುದ್ದಿ, ಗದಗ: ದೇವರು, ಧರ್ಮ ಹಾಗೂ ನಂಬಿಕೆ ಕಳೆದುಕೊಳ್ಳುತ್ತಿರುವ ಈ ಕಲಿಯುಗ ವಿನಾಶದ ಅಂಚಿಗೆ ಬಂದು ನಿಂತಿದೆ. ಮಾನವ ಕುಲದ ರಕ್ಷಣೆ ಗುರು, ಧ್ಯಾನ, ದಾನ, ಧರ್ಮ ಹಾಗೂ ದೇವರ ಆರಾಧನೆಯಿಂದ ಮಾತ್ರ ಸಾಧ್ಯ ಎಂದು ಧಾರವಾಡದ ಸಿದ್ದಸುಕ್ಷೇತ್ರ ನಯಾನಗರದ ಶ್ರೀಗುರು ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.

ನಗರದ ಒಕ್ಕಲಗೇರಿ ಓಣಿಯ ದ್ಯಾಮವ್ವನಕಟ್ಟಿ ಬಳಿ ನಡೆಯುತ್ತಿರುವ ಗದಗ-ಬೆಟಗೇರಿ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧಿಕಾರ, ಜಾತಿ, ಗತ್ತು, ದೌಲತ್ತು ತಾಯಿಯ ಎದುರು ನಡೆಯುವುದಿಲ್ಲ. ತಾಯಿಗೆ ತಲೆಬಾಗಿ ನಡೆದರೆ ತಲೆ ಎತ್ತಿ ಬದುಕುವಂತಹ ಜೀವನವನ್ನು ಆಕೆ ನೀಡುತ್ತಾಳೆ. ದೇವರಿಗೆ ಶರಣಾದರೆ ಬದುಕು ಸುಂದರವಾಗುತ್ತದೆ. ಮಾನವ ಜೀವನದ ನಿಜವಾದ ಸುಖ ದೇವರು ಮತ್ತು ಗುರುವಿನ ಆಶೀರ್ವಾದವನ್ನು ಅವಲಂಬಿಸಿದೆ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಹಿಂದಿನ ಪೂಜ್ಯರು ನುಡಿದಿದ್ದ ಹಲವು ಭವಿಷ್ಯವಾಣಿಗಳು ಇಂದಿನ ಕಾಲದಲ್ಲಿ ಸತ್ಯವಾಗುತ್ತಿವೆ. ‘ಕಲ್ಲುಕೋಳಿ ಕೂಗ್ಯಾವ’ ಎಂದರೆ ಮೊಬೈಲ್ ಹಾಗೂ ‘ಜೀವವಿಲ್ಲದ ಹಕ್ಕಿ ಹಾರಾವ’ ಎಂದರೆ ವಿಮಾನ ಎಂದು ಅವರು ವ್ಯಾಖ್ಯಾನಿಸಿದರು.

ಗವಿಸಿದ್ದೇಶ್ವರ ಶಾಖಾಮಠದ ಪೂಜ್ಯ ಶ್ರೀ ಶಿವಶಾಂತವೀರ ಮರಿಸ್ವಾಮೀಜಿ ಮಾತನಾಡಿ, ಶ್ರೀ ದ್ಯಾಮಮ್ಮ ಮತ್ತು ದುರ್ಗಮ್ಮ ದೇವಿಯರ ಜಾತ್ರೆ ಹರಕೆ ತೀರಿಸುವ ಜತೆಗೆ ಅರಿವಿನ ಹಾಗೂ ಅನ್ನದಾಸೋಹದ ಜಾತ್ರೆಯಾಗಿದೆ. ಇಂದಿನ ಮಕ್ಕಳು ಸಂಸ್ಕಾರ ಮರೆಯುತ್ತಿದ್ದು, ಪಾಲಕರು ಮೊಬೈಲ್‌ನಲ್ಲಿ ಮುಳುಗಿದ್ದಾರೆ. ಮಕ್ಕಳಲ್ಲಿ ಸಂಸ್ಕಾರ ಹಾಗೂ ಅರಿವು ಮೂಡಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.

ದೇವರು ಕೊಟ್ಟಿದ್ದನ್ನು ಹಂಚಿಕೊಂಡು ಅದರಲ್ಲಿ ಸುಖಪಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇದಕ್ಕಿಂತ ಪುಣ್ಯದ ಕಾರ್ಯ ಬೇರೊಂದಿಲ್ಲ ಎಂದು ಶಿವಶಾಂತವೀರ ಮರಿಸ್ವಾಮೀಜಿ ಹೇಳಿದರು.

ಒಗ್ಗಟ್ಟಿಗೆ ಸಾಕ್ಷಿಯಾದ ಹರಿಜಾತ್ರೆ

ರತ್ನಾಕರ ವಾಣಿ ದಿನಪತ್ರಿಕೆ ಸಂಪಾದಕ ಜಗದೀಶ ಪೂಜಾರ ಮಾತನಾಡಿ, 12 ವರ್ಷಗಳಿಗೊಮ್ಮೆ ನಡೆಯುವ ಈ ಹರಿಜಾತ್ರೆಯಲ್ಲಿ ದರ್ಶನ ಪಡೆಯುವುದೇ ಸೌಭಾಗ್ಯ. ಪ್ರತಿದಿನ ಭಕ್ತರಿಗೆ ಪ್ರಸಾದ ವ್ಯವಸ್ಥೆ, ವಿಶೇಷ ಸಾಲು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ದಾನಿಗಳು ತನು-ಮನದಿಂದ ಸೇವೆ ಸಲ್ಲಿಸುತ್ತಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಹರಿಜಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದರು.

ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸಿದ್ದರು. ಗದಗ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಶ್ರೀ ನೀಲಮ್ಮತಾಯಿ ಅಸುಂಡಿ, ಫಕ್ಕೀರಪ್ಪ ಹೆಬಸೂರ, ನಿವೃತ್ತ ನ್ಯಾಯಾಧೀಶ ಎಸ್.ಜಿ. ಪಲ್ಲೇದ, ರಾಜಶೇಖರ ಕಲ್ಲೂರ ಸೇರಿದಂತೆ ಗಣ್ಯರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.

ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎಂಬುದಕ್ಕೆ ಈ ಹರಿಜಾತ್ರೆ ಸಾಕ್ಷಿಯಾಗಿದೆ. ಜಾತಿ-ಮತ ಭೇದ ಮರೆತು ಹಿರಿಯರು, ಕಿರಿಯರು ಒಗ್ಗೂಡಿ ಈ ಪುಣ್ಯದ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲರೂ ಒಂದಾಗುವುದಕ್ಕೆ ಈ ಜಾತ್ರೆ ನೆಪವಾಗಿದೆ.

— ಜಗದೀಶ ಪೂಜಾರ, ಸಂಪಾದಕ, ರತ್ನಾಕರ ವಾಣಿ ದಿನಪತ್ರಿಕೆ

ಸೆ. 21,22ಕ್ಕೆ ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ

0

ವಿಜಯಸಾಕ್ಷಿ ಸುದ್ದಿ, ಗದಗ: ಕಪ್ಪತ್ತಗಿರಿ ಫೌಂಡೇಶನ್ (ರಿ.) ಕಳಸಾಪೂರ–ಗದಗ ಹಾಗೂ ಕಪ್ಪತ್ತಗಿರಿ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ 2026-27ನೇ ಸಾಲಿನ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಎರಡು ದಿನಗಳ ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ ಹಾಗೂ ವಿಚಾರ ಸಂಕಿರಣವನ್ನು ಸೆ.20 ಮತ್ತು 21ರಂದು ಗದಗ ನಗರದಲ್ಲಿ ಆಯೋಜಿಸಲಾಗಿದೆ.

ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜ್ಞಾನ ನೀಡುವುದರ ಜತೆಗೆ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇಂತಹ ನಿಷ್ಠಾವಂತ, ಪ್ರಾಮಾಣಿಕ, ಪ್ರಬುದ್ಧ ಹಾಗೂ ಶೈಕ್ಷಣಿಕ ಪರಿಣಿತಿ ಹೊಂದಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಫೌಂಡೇಶನ್‌ನ ಪ್ರಮುಖ ಉದ್ದೇಶವಾಗಿದೆ.

ಈ ಉದ್ದೇಶದಿಂದ ಫೌಂಡೇಶನ್ ಪ್ರತಿವರ್ಷ ಶಿಕ್ಷಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಉತ್ತಮ ಶಿಕ್ಷಕರನ್ನು ಗುರುತಿಸಿ ಅವರ ಸೇವೆಯನ್ನು ಗೌರವಿಸುತ್ತಾ ಬಂದಿದೆ. ಗದಗ ಜಿಲ್ಲೆಯ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ, ರೋಣ, ಗಜೇಂದ್ರಗಡ ಹಾಗೂ ಗದಗ ಶಹರ ವ್ಯಾಪ್ತಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ಶಿಕ್ಷಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತಿದೆ.

ವಿಶೇಷವಾಗಿ, ಈ ವರ್ಷ ರಾಜ್ಯದ ಪ್ರತಿ ಜಿಲ್ಲೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಮಹತ್ವದ ಉದ್ದೇಶವನ್ನು ಫೌಂಡೇಶನ್ ಹೊಂದಿದೆ. ಕ್ರಿಯಾಶೀಲ ಹಾಗೂ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಫೌಂಡೇಶನ್ ವತಿಯಿಂದ ಗುರುತಿಸಿ, ಅವರು ಸೇವೆ ಸಲ್ಲಿಸುತ್ತಿರುವ ಶಾಲೆ, ಕಾಲೇಜು ಅಥವಾ ಮನೆ ವಿಳಾಸಕ್ಕೆ ಆಯ್ಕೆ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗುತ್ತದೆ.

ಸೆ.20ರಂದು ಭಾನುವಾರ ಹಾಗೂ ಸೆ.21ರಂದು ಸೋಮವಾರ ಎರಡು ದಿನಗಳ ಕಾಲ ಗದಗ ನಗರದಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ ಮತ್ತು ವಿಚಾರ ಸಂಕಿರಣ ನಡೆಯಲಿದೆ ಎಂದು ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಮ. ಇಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಫೌಂಡೇಶನ್ ಸಂಚಾಲಕರಾದ ರಮೇಶ ನಾಯ್ಕ (ಮೊ. 9686611343), ತೋಟಯ್ಯ ಗುಡ್ಡಿಮಠ (ಮೊ. 9901132516) ಹಾಗೂ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಮ. ಇಟಗಿಮಠ (ಮೊ. 7795293736) ಅವರನ್ನು ಸಂಪರ್ಕಿಸಬಹುದು.

ಪಾಂಡುರಂಗ ದೇವಸ್ಥಾನದಲ್ಲಿ ಜ್ಞಾನೇಶ್ವರಿ ಪಾರಾಯಣ ರಜತ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಶ್ರಾವಣ ಮಾಸದ ಶ್ರೀ ಜ್ಞಾನೇಶ್ವರಿ ಪಾರಾಯಣದ ರಜತ ಮಹೋತ್ಸವ ಹಾಗೂ ಶ್ರೀ ಪಾಂಡುರಂಗ–ರಕುಮಾಯಿ ನೂತನ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವ ಆ.25ರಿಂದ 29ರವರೆಗೆ ಐದು ದಿನಗಳ ಕಾಲ ಭಕ್ತಿಭಾವದಿಂದ ನಡೆಯಲಿದೆ.

ಮಹೋತ್ಸವದ ಅಂಗವಾಗಿ ಕಾಕಡಾ ಆರತಿ, ಜ್ಞಾನೇಶ್ವರಿ ಪಾರಾಯಣ, ಮಂಚರಿಗಾಥಾ ಭಜನೆ, ಪ್ರವಚನ, ನಾಮಜಪ, ಕೀರ್ತನೆ, ಜಾಗರ ಭಜನೆ ಹಾಗೂ ಭಾರೂಡ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಭಕ್ತರಿಗೆ ಉಪಹಾರ ಹಾಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಆ.26ರಂದು ಬೆಳಿಗ್ಗೆ 7.50ಕ್ಕೆ ಪಂಡರಪುರದ ಚೈತನ್ಯ ಸದ್ಗುರು ಶ್ರೀ ಗೋಪಾಲ ಮಹಾರಾಜ ಹಾಗೂ ಶ್ರೀ ಪ್ರಭಾಕರ ದಾದಾ ಭುಜಂಗರಾವ್ ಬೋಧಲೆ ಮಹಾರಾಜ ಅವರ ಅಮೃತಹಸ್ತದಿಂದ ಶ್ರೀ ಪಾಂಡುರಂಗ–ರಕುಮಾಯಿ ನೂತನ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.

ಆ.28ರಂದು ‘ವಾರಕರಿ ರತ್ನ’ ಹ.ಭ.ಪ. ತುಕಾರಾಮ ಪವಾರ, ಕೊಲ್ಲಾಪುರ ಅವರ ಕೀರ್ತನೆ ಹಾಗೂ ರಾತ್ರಿ ಜಾಗರ ಭಜನೆ, ಭಾರೂಡ ನಡೆಯಲಿದೆ. ಆ.29ರಂದು ಬೆಳಿಗ್ಗೆ ಕಾಕಡಾ ಆರತಿ, ಪಾರಾಯಣ ಹಾಗೂ ಮಂಚರಿಗಾಥಾ ಭಜನೆ ಬಳಿಕ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಹ.ಭ.ಪ. ಸುನೀಲ ಬಾಬರ ಗುರೂಜಿ, ಕಲಬುರಗಿ ಅವರಿಂದ ಕಾಲಾ ಕೀರ್ತನೆ ನಡೆಯಲಿದೆ.

ಬಳಿಕ ‘ವಾರಕರಿ ರತ್ನ’ ಹ.ಭ.ಪ. ತುಕಾರಾಮ ಪವಾರ, ಕೊಲ್ಲಾಪುರ ಅವರ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಶಾಸಕ ರಾಮಣ್ಣ ಲಮಾಣಿ ಹಾಗೂ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಪಾಂಡುರಂಗ–ರಕುಮಾಯಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

ಕಪ್ಪತ್ತಗುಡ್ಡದ ಮಡಿಲಲ್ಲಿ ಕವಿತೆಗಳ ಕಂಪು: ಮಳೆಯ ನಡುವೆ ಕವಿ ಸಮ್ಮೇಳನಕ್ಕೆ ತೆರೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮಳೆಯ ಸಿಂಚನದ ನಡುವೆಯೇ ಕವಿಗಳು ಕವಿತೆಗಳನ್ನು ವಾಚಿಸುವ ಮೂಲಕ ಕಪ್ಪತ್ತಗುಡ್ಡದ ಪರಿಸರದಲ್ಲಿ ನಡೆದ ಜಿಲ್ಲಾ ಮಟ್ಟದ ಕವಿ ಸಮ್ಮೇಳನದ ಸಮಾರೋಪ ಸಮಾರಂಭ ಗಮನ ಸೆಳೆಯಿತು.

ಕವಿಗಳು ಜನಮಾನಸವನ್ನು ತಿದ್ದುವ ಶಕ್ತಿ ಹೊಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕವಿಗಳಿಗೆ ಅಪಾರ ಮನ್ನಣೆ ಇದೆ. ಕಪ್ಪತ್ತಗುಡ್ಡದ ಪರಿಸರ ಹೊಸ ಕವಿಗಳಿಗೆ ಬರವಣಿಗೆಯ ಚೈತನ್ಯ ಹಾಗೂ ಸ್ಫೂರ್ತಿ ನೀಡಲಿ ಎಂದು ಬಸವಬೆಟ್ಟ ಕಡಕೋಳ-ಕಪ್ಪತಗಿರಿಯ ಶರಣೆ ಓಂಕಾರೇಶ್ವರಿ ಮಾತಾಜಿ ಹೇಳಿದರು.

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತುಗಳ ಆಶ್ರಯದಲ್ಲಿ ಕಪ್ಪತ್ತಗುಡ್ಡದ ಸೆರಗಿನ ದೇವರೆಡ್ಡಿ ಅಗಸನಕೊಪ್ಪ ಕೃಷಿ ಆಶ್ರಮದಲ್ಲಿ ನಡೆದ ಜಿಲ್ಲಾ ಮಟ್ಟದ ಕವಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಮ್ಮೇಳನದಲ್ಲಿ ವಾಚಿಸಲಾದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಉತ್ತಮ ಕವಿತೆಗಳು ಅಧ್ಯಯನಶೀಲತೆಯಿಂದ ಮೂಡಿಬರುತ್ತವೆ. ಕಮ್ಮಟಗಳನ್ನು ಸಂಘಟಿಸುವ ಮೂಲಕ ಯುವ ಕವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ದೇವರೆಡ್ಡಿ ಅಗಸನಕೊಪ್ಪ, ಬಸವರಾಜ ಪಲ್ಲೇದ ಮಾಗಡಿ, ಸಮ್ಮೇಳನ ಸಂಯೋಜಕರಾದ ಸುರೇಶ ಕುಂಬಾರ, ರಮಾಕಾಂತ ಕಮತಗಿ, ಪಿ.ಆರ್. ಹಿರೇಮಠ, ನಿಂಗಪ್ಪ ಮಾಚೇನಹಳ್ಳಿ, ಶರಣಪ್ಪ ಹರ್ಲಾಪೂರ, ಪ್ರಗತಿಪರ ರೈತರಾದ ಯಲ್ಲಪ್ಪ ನಾವಿ, ಕಡಕೋಳ ಹಾಗೂ ತಿಪ್ಪಣ್ಣ ಕೆಳಗಡೆ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ರಾಷ್ಟ್ರಧ್ವಜಾರೋಹಣವನ್ನು ಸುಶೀಲಮ್ಮ ಅಗಸನಕೊಪ್ಪ, ನಾಡಧ್ವಜಾರೋಹಣವನ್ನು ಮಾಜಿ ಸಚಿವ ಎಸ್.ಎಸ್. ಪಾಟೀಲ ಕಲಕೇರಿ ಹಾಗೂ ಪರಿಷತ್ ಧ್ವಜಾರೋಹಣವನ್ನು ವಿವೇಕಾನಂದಗೌಡ ಪಾಟೀಲ ನೆರವೇರಿಸಿದರು.

ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಹಾಗೂ ಸಾಮರಸ್ಯ ನಡಿಗೆಯನ್ನು ನಂದಿವೇರಿಮಠದ ಶಿವಕುಮಾರಸ್ವಾಮಿಗಳ ಸಮ್ಮುಖದಲ್ಲಿ ಶ್ರೀ ಕಪ್ಪತ್ತಮಲ್ಲೇಶ್ವರ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಶಿರಹಟ್ಟಿ-ಕಡಕೋಳ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಉದ್ಘಾಟಿಸಿದರು. ಕೆ.ಎ. ಬಳಿಗೇರ, ವೀರಣ್ಣ ಮಜ್ಜಗಿ, ರುದ್ರಣ್ಣ ಗುಳಗುಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ವಿವಿಧ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಿತು.

ಭಾವಗಳು ಅರಳಿದಾಗಲೇ ಜಗತ್ತಿನಲ್ಲಿ ಶಾಂತಿ ಸಾಧ್ಯ: ತೋಂಟದ ಸಿದ್ಧರಾಮ ಶ್ರೀ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತ ಅನೇಕತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಪ್ರತಿಯೊಂದರಲ್ಲೂ ವೈವಿಧ್ಯತೆಯನ್ನು ಒಳಗೊಂಡಿರುವ ವಿಶ್ವದ ಏಕೈಕ ದೇಶ ಭಾರತ. ಈ ಬಹುತ್ವವೇ ಭಾರತದ ಅಸ್ಮಿತೆಯಾಗಿದೆ ಎಂದು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.

ನಗರದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2812ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯ ಡಾ. ಮಹಮ್ಮದ್ ಅಶ್ರಫ್ ದಸ್ತಗಿರಿಸಾಹೇಬ್ ಸಮುದ್ರಿ ಅವರು ರಚಿಸಿರುವ ‘ಭಾವೈಕ್ಯತೆಯ ಬೆಳಕು’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ನಿವೃತ್ತ ಶಿಕ್ಷಕ ಚೆನ್ನಯ್ಯ ತೋಟಯ್ಯ ಹಿರೇಮಠ ಹಾಗೂ ನಿವೃತ್ತ ಶಿಕ್ಷಕ ಎಸ್.ಎಂ. ವಾಲಿ ಅವರನ್ನು ಗೌರವಿಸಿ ಆಶೀರ್ವದಿಸಲಾಯಿತು.

ಜಗತ್ತಿನ ಹಲವು ಭಾಗಗಳಲ್ಲಿ ಇಂದು ಯುದ್ಧಗಳು ನಡೆಯುತ್ತಿದ್ದು, ಜನರು ಭಯಗ್ರಸ್ತ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಜಗತ್ತಿನಲ್ಲಿ ಶಾಂತಿ, ನೆಮ್ಮದಿ ಮತ್ತು ಪ್ರೀತಿ ನೆಲೆಸಬೇಕಾದರೆ ಮನುಷ್ಯರ ನಡುವೆ ಭಾವನೆಗಳು ಅರಳಬೇಕು. ಪರಸ್ಪರ ಪ್ರೀತಿ, ದಯೆ ಮತ್ತು ಭ್ರಾತೃತ್ವದ ಭಾವನೆ ಬೆಳೆಸುವ ಅಗತ್ಯವಿದೆ ಎಂದರು.

ವಿವಿಧ ಕಾಲಘಟ್ಟಗಳಲ್ಲಿ ಸಮಾಜದ ಒಳಿತಿಗಾಗಿ ಅನೇಕ ಪ್ರವಾದಿಗಳು, ಸಮಾಜ ಸುಧಾರಕರು ಹಾಗೂ ಹೋರಾಟಗಾರರು ಜನ್ಮತಳೆದಿದ್ದಾರೆ. ಅವರು ತಮ್ಮ ಜೀವನದ ಮೂಲಕ ಇಡೀ ಮನುಕುಲದ ಬಗ್ಗೆ ಪ್ರೀತಿ ಮತ್ತು ದಯೆ ಬೆಳೆಸುವ ಸಂದೇಶ ನೀಡಿದ್ದಾರೆ. ಮುಹಮ್ಮದ್ ಪೈಗಂಬರ್, ಜಗಜ್ಯೋತಿ ಬಸವೇಶ್ವರ, ಬುದ್ಧ, ಮಹಾವೀರ ಸೇರಿದಂತೆ ಮಹನೀಯರ ಆದರ್ಶ ಮತ್ತು ಮೌಲ್ಯಗಳನ್ನು ಇಂದಿನ ಸಮಾಜ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಇಂತಹ ಮಾನವೀಯ ಮೌಲ್ಯಗಳನ್ನು ‘ಭಾವೈಕ್ಯತೆಯ ಬೆಳಕು’ ಕೃತಿ ಒಳಗೊಂಡಿದೆ ಎಂದು ಹೇಳಿದರು.

ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಹಿರಿಯರನ್ನು ಗೌರವಿಸಿ ಮಾತನಾಡಿದ ಅವರು, ಕಣ್ಣಿಗೆ ಕಾಣದ ದೇವರಿಗಿಂತ ಕಣ್ಣಿಗೆ ಕಾಣುವ ತಂದೆ-ತಾಯಿ, ಹಿರಿಯರು ಹಾಗೂ ಗುರುಗಳನ್ನು ಗೌರವಿಸುವ ಸಮಾಜವೇ ಸುಸಂಸ್ಕೃತ ಸಮಾಜ. ಹೊಸ ತಲೆಮಾರು ಹಿರಿಯರನ್ನು ಗೌರವಿಸುವ ಹಾಗೂ ಅವರ ಅನುಭವಗಳನ್ನು ಅನುಸರಿಸುವ ಗುಣ ಬೆಳೆಸಿಕೊಳ್ಳಬೇಕು. ಹಳೆ ಬೇರು, ಹೊಸ ಚಿಗುರು ಇದ್ದಾಗಲೇ ಮರ ಸೊಬಗಾಗಿರುವಂತೆ, ಮನೆಯಲ್ಲಿ ಹಿರಿಯರು ಇದ್ದಾಗ ಕುಟುಂಬಕ್ಕೆ ಶೋಭೆ ಬರುತ್ತದೆ ಎಂದರು.

ಕೃತಿ ಪರಿಚಯ ಮಾಡಿದ ಗದಗ ಜಮಾತ್-ಎ-ಇಸ್ಲಾಂ ಅಧ್ಯಕ್ಷ ಎ.ಐ. ಶೇಖ ಮಾತನಾಡಿ, ‘ಭಾವೈಕ್ಯತೆಯ ಬೆಳಕು’ ಎಲ್ಲರನ್ನು ಒಂದುಗೂಡಿಸುವ ಹಾಗೂ ಏಕತೆಯನ್ನು ಸಾಧಿಸುವ ಅಪರೂಪದ ಕೃತಿಯಾಗಿದೆ. ಲೇಖಕ ಡಾ. ಸಮುದ್ರಿ ಅವರು ಭಾರತದ ಬಹುತ್ವವನ್ನು ಎತ್ತಿಹಿಡಿದಿರುವುದರ ಜೊತೆಗೆ, ಮೊದಲು ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಪ್ರತಿಪಾದಿಸಿದ್ದಾರೆ. ಕೃತಿಯನ್ನು ಯುವಕರಿಗೆ ಅರ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಕೃತಿಯ ಲೇಖಕ ಡಾ. ಎಂ.ಡಿ. ಸಮುದ್ರಿ ಮಾತನಾಡಿ, ಕೃತಿ ರಚನೆಗೆ ತಂದೆ-ತಾಯಿ, ಕುಟುಂಬ, ಗುರುಗಳು ಸೇರಿದಂತೆ ಅನೇಕರು ನೀಡಿದ ಸಹಾಯ-ಸಹಕಾರವನ್ನು ಸ್ಮರಿಸಿ, ಅವರಿಗೆ ಚಿರಋಣಿಯಾಗಿರುವುದಾಗಿ ಹೇಳಿದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣವನ್ನು ಕುಮಾರಿ ಸ್ಫೂರ್ತಿ ಸೈದಾಪುರ ಹಾಗೂ ವಚನ ಚಿಂತನವನ್ನು ಪುಷ್ಪಾವತಿ ಮನೋಹರ ಮಾಲಿಪಾಟೀಲ ನೆರವೇರಿಸಿದರು. ದಾಸೋಹ ಸೇವೆಯನ್ನು ವಿವಿಧ ಕುಟುಂಬಗಳ ವತಿಯಿಂದ ಕೈಗೊಳ್ಳಲಾಯಿತು.

ಶರಣೆ ಗಿರಿಜಕ್ಕ ಧರ್ಮರಡ್ಡಿ ಅವರು ‘ಶರಣರು ಕಂಡ ಅನಾದಿ ಬಸವಣ್ಣ’ ವಿಷಯದ ಕುರಿತು ಪ್ರವಚನ ನೀಡಿದರು. ಹಿರಿಯರಾದ ಡಾ. ಜಿ.ಬಿ. ಪಾಟೀಲ, ಶಿವನಗೌಡ ಗೌಡರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ವೀ. ಪುರದ ಸ್ವಾಗತಿಸಿದರು. ಶಿವಾನುಭವ ಸಮಿತಿಯ ಚೇರ್ಮನ್ ಡಾ. ರಮೇಶ ಮ. ಕಲ್ಲನಗೌಡರ ಕಾರ್ಯಕ್ರಮ ನಿರೂಪಿಸಿದರು.

ಜಗತ್ತಿನಲ್ಲಿ ಶಾಂತಿ, ನೆಮ್ಮದಿ ಮತ್ತು ಪ್ರೀತಿ ಮೂಡಬೇಕಾದರೆ ಮನುಷ್ಯರ ಮಧ್ಯೆ ಭಾವಗಳು ಅರಳಬೇಕು. ಮುಹಮ್ಮದ್ ಪೈಗಂಬರ್, ಬಸವೇಶ್ವರ, ಬುದ್ಧ, ಮಹಾವೀರ ಸೇರಿದಂತೆ ಮಹನೀಯರ ಮಾನವೀಯ ಆದರ್ಶ ಮತ್ತು ಮೌಲ್ಯಗಳನ್ನು ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ.

— ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ