Home Blog

WPL 2027ಕ್ಕೆ ದಿನಾಂಕ ಫಿಕ್ಸ್; ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ಆಟಗಾರರ ಹರಾಜು!

0

ಮಹಿಳಾ ಪ್ರೀಮಿಯರ್ ಲೀಗ್‌ನ (WPL) 5ನೇ ಆವೃತ್ತಿಗೆ ಸಿದ್ಧತೆ ಆರಂಭವಾಗಿದ್ದು, 2027ರ ಟೂರ್ನಿಯ ವೇಳಾಪಟ್ಟಿ ಹಾಗೂ ಆಟಗಾರರ ಹರಾಜಿನ ದಿನಾಂಕವನ್ನು WPL ಪ್ರಕಟಿಸಿದೆ.

WPL ಅಧಿಕೃತ ಮಾಹಿತಿ ಪ್ರಕಾರ, 2027ರ ಆವೃತ್ತಿಯ ಪಂದ್ಯಗಳು ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿವೆ. ದೇಶದ ವಿವಿಧ ಭಾಗಗಳಲ್ಲಿ ಮಹಿಳಾ ಕ್ರಿಕೆಟ್‌ನ ಮತ್ತೊಂದು ರೋಚಕ ಆವೃತ್ತಿಗೆ ವೇದಿಕೆ ಸಿದ್ಧವಾಗಲಿದೆ.

ಇನ್ನು, ಟೂರ್ನಿಗೂ ಮುನ್ನ ನಡೆಯಲಿರುವ ಆಟಗಾರರ ಹರಾಜು ಅಕ್ಟೋಬರ್ 28ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಹರಾಜಿಗೂ ಮುನ್ನ ತಂಡಗಳು ತಮ್ಮ ಆಟಗಾರರನ್ನು ಉಳಿಸಿಕೊಳ್ಳಲು ಸೆಪ್ಟೆಂಬರ್ 28ರವರೆಗೆ ಗಡುವು ನೀಡಲಾಗಿದೆ.

2026ರ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿತ್ತು. ಇದೀಗ 2027ರ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲಲು ಎಲ್ಲಾ ತಂಡಗಳು ಸಿದ್ಧತೆ ಆರಂಭಿಸಲಿವೆ.

ಫಾಲ್ಕೆ ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಅನಂತ್ ನಾಗ್ ಮಾತು; ಮೋದಿ ಬಗ್ಗೆ ಹೇಳಿದ್ದೇನು?

0

ಬೆಂಗಳೂರು: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ನಟ ಅನಂತ್ ನಾಗ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಪ್ರಶಸ್ತಿ ರಾಷ್ಟ್ರೀಯ ಮಟ್ಟದಲ್ಲಿ ದೊರೆತಿರುವ ಮತ್ತೊಂದು ಗೌರವವಾಗಿದ್ದು, ಇದನ್ನು ಕರ್ನಾಟಕ ಹಾಗೂ ನಾಡಿನ ಜನತೆಗೆ ಅರ್ಪಿಸುವುದಾಗಿ ಅವರು ಹೇಳಿದ್ದಾರೆ.

ಈ ಹಿಂದೆ ಪದ್ಮಭೂಷಣ ಪ್ರಶಸ್ತಿ ದೊರೆತಾಗ ಅದನ್ನು ಕನ್ನಡಿಗರಿಗೆ ಅರ್ಪಿಸಿದ್ದೆ. ಇದೀಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ಕರ್ನಾಟಕಕ್ಕೆ ಅರ್ಪಿಸುತ್ತೇನೆ ಎಂದು ಅನಂತ್ ನಾಗ್ ತಿಳಿಸಿದ್ದಾರೆ.

ಪ್ರಶಸ್ತಿಯ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಮಾಡಿರುವುದು ತಮಗೆ ಬಹಳ ಖುಷಿ ನೀಡಿದೆ. ಪ್ರಧಾನಿಯವರೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವುದು ವಿಶೇಷವಾಗಿದೆ ಎಂದು ಅನಂತ್ ನಾಗ್ ಹೇಳಿದ್ದಾರೆ.

ತಮ್ಮ ಸಿನಿ ಪಯಣದಲ್ಲಿ ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರು ನೀಡಿರುವ ಪ್ರೀತಿ ಮತ್ತು ಬೆಂಬಲವನ್ನು ಸ್ಮರಿಸಿರುವ ಅನಂತ್ ನಾಗ್, ಇದೀಗ ದೊರೆತಿರುವ ಈ ರಾಷ್ಟ್ರೀಯ ಗೌರವವನ್ನು ನಾಡಿನ ಜನತೆಗೆ ಸಮರ್ಪಿಸುವುದಾಗಿ ತಿಳಿಸಿದ್ದಾರೆ.

ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಮನೆಗೆ ಆಘಾತ; ಫ್ರಿಡ್ಜ್ ಸ್ಫೋಟ ದುರಂತದಲ್ಲಿ ತಂದೆ-ಮಗನೂ ಸಾವು

0

ಬೆಳಗಾವಿ: ನಗರದ ಚವ್ಹಾಟ ಗಲ್ಲಿಯಲ್ಲಿ ನಡೆದ ಫ್ರಿಡ್ಜ್ ಸ್ಫೋಟ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಂದೆ ಹಾಗೂ ಮಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಗಜಾನನ ದಮೋನೆ (61) ಮತ್ತು ರೋಷನ್ ದಮೋನೆ (21) ಮೃತಪಟ್ಟವರು.

ಸೆಪ್ಟೆಂಬರ್ 14ರಂದು ಗಣೇಶೋತ್ಸವದ ಸಂಭ್ರಮದ ನಡುವೆಯೇ ದಮೋನೆ ಕುಟುಂಬ ವಾಸವಿದ್ದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಫ್ರಿಡ್ಜ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಇದೇ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಗಜಾನನ ದಮೋನೆ ಹಾಗೂ ರೋಷನ್ ದಮೋನೆ ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಕುಟುಂಬಸ್ಥರು ಬದುಕಿ ಬರಲಿ ಎಂದು ಪ್ರಾರ್ಥಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.

ತಂದೆ-ಮಗನ ಸಾವಿನೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಘಟನೆಯ ಕುರಿತು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವೈದ್ಯಕೀಯ ಸೀಟು ಪಡೆದವರಿಗೆ ಬಿಗ್ ಅಪ್‌ಡೇಟ್; ಸೆ.21ರೊಳಗೆ ಕಾಲೇಜಿಗೆ ಪ್ರವೇಶ ಪಡೆಯಬೇಕು

0

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಬುಧವಾರ ಪ್ರಕಟಿಸಿದೆ.

ಈ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 19ರೊಳಗೆ ನಿಗದಿತ ಶುಲ್ಕ ಪಾವತಿಸಬೇಕು. ಬಳಿಕ ಸೀಟು ಖಾತರಿ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಂಡು, ಸೆಪ್ಟೆಂಬರ್ 21ರೊಳಗೆ ಸಂಬಂಧಪಟ್ಟ ಕಾಲೇಜಿಗೆ ತೆರಳಿ ಕಡ್ಡಾಯವಾಗಿ ಪ್ರವೇಶ ಪಡೆಯಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಒಟ್ಟು 12,010 ವೈದ್ಯಕೀಯ ಸೀಟುಗಳ ಪೈಕಿ 11,551 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನೂ 459 ವೈದ್ಯಕೀಯ ಸೀಟುಗಳು ಉಳಿದಿವೆ.

ಇನ್ನು ದಂತ ವೈದ್ಯಕೀಯ ಕೋರ್ಸ್‌ನ ಒಟ್ಟು 2,689 ಸೀಟುಗಳೂ ಈ ಸುತ್ತಿನಲ್ಲಿ ಸಂಪೂರ್ಣವಾಗಿ ಹಂಚಿಕೆಯಾಗಿವೆ ಎಂದು ಕೆಇಎ ತಿಳಿಸಿದೆ.

UPI ಬಳಕೆದಾರರಿಗೆ ಹೊಸ ಶುಲ್ಕ? ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ!

0

ನವದೆಹಲಿ: ಯುಪಿಐ ವಹಿವಾಟುಗಳ ಮೇಲಿನ ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (MDR) ನಿಯಮದ ವಿಚಾರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಅಮೆರಿಕದ ಒತ್ತಡಕ್ಕೆ ಮಣಿದು ಭಾರತೀಯರ ಮೇಲೆ ಯುಪಿಐ ಶುಲ್ಕದ ಹೊರೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹೊಸ ಶುಲ್ಕವನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮುಂದೆ ಶರಣಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವುದರಿಂದ ಭಾರತೀಯರ ಜೇಬಿಗೆ ಹೊರೆ ಬೀಳಲಿದೆ. ದೊಡ್ಡ ಮೊತ್ತದ ಯುಪಿಐ ಪಾವತಿಗಳ ಮೇಲಿನ ಹೊಸ MDR ನಿಯಮವನ್ನು ಹಿಂಪಡೆಯುವಂತೆ ಅವರು ಒತ್ತಾಯಿಸಿದ್ದಾರೆ.

ಆದರೆ, ರಾಹುಲ್ ಗಾಂಧಿ ಅವರ ಆರೋಪವನ್ನು ಕೇಂದ್ರ ಹಣಕಾಸು ಸಚಿವಾಲಯ ತಳ್ಳಿಹಾಕಿದ್ದು, ಯುಪಿಐ ಮೇಲಿನ MDR ನಿರ್ಧಾರದಲ್ಲಿ ಯಾವುದೇ ವಿದೇಶಿ ಪ್ರಭಾವವಿಲ್ಲ ಎಂದು ಸ್ಪಷ್ಟಪಡಿಸಿದೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ; ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಕೋರ್ಟ್‌ ಸಮ್ಮತಿ!

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡುವ ಪ್ರಕ್ರಿಯೆಗೆ 59ನೇ ಸಿಸಿಹೆಚ್‌ ಕೋರ್ಟ್‌ ಒಪ್ಪಿಗೆ ಸೂಚಿಸಿದೆ.

ಪ್ರದೋಷ್‌ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಮಾಫಿ ಸಾಕ್ಷಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ದರ್ಶನ್‌ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಮಾಫಿ ಸಾಕ್ಷಿ ಪ್ರಕ್ರಿಯೆ ಮುಂದೂಡುವಂತೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.

ಈ ಮೂಲಕ ದರ್ಶನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಈ ಆದೇಶ ನೀಡಿದ್ದಾರೆ.

ಈ ಹಿಂದೆ ಹೈಕೋರ್ಟ್‌, ಮಾಫಿ ಸಾಕ್ಷಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಷನ್‌ ಕೋರ್ಟ್‌ಗೆ ನೀಡಿದ್ದ ಆದೇಶವನ್ನು ಮಾರ್ಪಡಿಸಿ ಹೊಸ ಆದೇಶ ಹೊರಡಿಸುವಂತೆ ಸೂಚಿಸಿತ್ತು. ಅದರಂತೆ ಇದೀಗ ಸೆಷನ್‌ ಕೋರ್ಟ್‌ ಹೊಸ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಮುಂದಿನ ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆಯಿದೆ.

ವಿಚಾರಣೆ ವೇಳೆ ನ್ಯಾಯಾಲಯವು ಮಾಫಿ ಸಾಕ್ಷಿಯಾಗಲು ಒಪ್ಪಿಗೆ ಇದೆಯೇ ಎಂದು ಪ್ರದೋಷ್‌ ಅವರನ್ನು ಪ್ರಶ್ನಿಸಿದ್ದು, ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ.

ಆಲೂಗಡ್ಡೆ ಸಂಗ್ರಹಿಸುವಾಗ ಈ ತಪ್ಪು ಮಾಡಬೇಡಿ; ಆರೋಗ್ಯದ ಮೇಲೂ ಪರಿಣಾಮ ಬೀರಬಹುದು!

0

ತರಕಾರಿಗಳನ್ನು ಹೆಚ್ಚು ದಿನ ತಾಜಾವಾಗಿ ಇಡಲು ಸಾಮಾನ್ಯವಾಗಿ ಫ್ರಿಜ್‌ ಬಳಸುತ್ತೇವೆ. ಆದರೆ ಆಲೂಗಡ್ಡೆಯನ್ನು ಮಾತ್ರ ಫ್ರಿಜ್‌ನಲ್ಲಿ ಇಡುವುದನ್ನು ಬಹುತೇಕರು ತಪ್ಪಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಆಲೂಗಡ್ಡೆಯಲ್ಲಿರುವ ಪಿಷ್ಟದ ಮೇಲೆ ಕಡಿಮೆ ತಾಪಮಾನ ಬೀರುವ ಪರಿಣಾಮ.

ಆಲೂಗಡ್ಡೆಯಲ್ಲಿ ಪಿಷ್ಟದ ಪ್ರಮಾಣ ಹೆಚ್ಚಿರುತ್ತದೆ. ಫ್ರಿಜ್‌ನಲ್ಲಿರುವ ಕಡಿಮೆ ತಾಪಮಾನದಲ್ಲಿ ಪಿಷ್ಟದ ಒಂದು ಭಾಗ ಸಕ್ಕರೆಯಾಗಿ ಬದಲಾಗಬಹುದು. ಇದರಿಂದ ಆಲೂಗಡ್ಡೆಯ ರುಚಿಯಲ್ಲಿ ಸಿಹಿತನ ಹೆಚ್ಚಾಗುವ ಸಾಧ್ಯತೆಯಿದ್ದು, ಅದರ ವಿನ್ಯಾಸದಲ್ಲೂ ಬದಲಾವಣೆ ಕಾಣಿಸಬಹುದು. ವಿಶೇಷವಾಗಿ ಆಲೂಗಡ್ಡೆಯನ್ನು ಕರಿಯುವಾಗ ಅಥವಾ ಬೇಯಿಸುವಾಗ ಈ ವ್ಯತ್ಯಾಸ ಗೊತ್ತಾಗಬಹುದು.

ಆದರೆ ಫ್ರಿಜ್‌ನಲ್ಲಿ ಇಟ್ಟ ಆಲೂಗಡ್ಡೆ ತಕ್ಷಣವೇ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ ಎಂದರ್ಥವಲ್ಲ. ಮುಖ್ಯವಾಗಿ ರುಚಿ ಮತ್ತು ಅಡುಗೆಯ ಗುಣಮಟ್ಟದಲ್ಲಿ ಬದಲಾವಣೆ ಉಂಟಾಗಬಹುದು.

ಹಾಗಾದರೆ ಆಲೂಗಡ್ಡೆಯನ್ನು ಹೇಗೆ ಸಂಗ್ರಹಿಸಬೇಕು? ತಂಪಾದ, ಕತ್ತಲೆಯ ಹಾಗೂ ಗಾಳಿ ಸರಿಯಾಗಿ ಹರಿದಾಡುವ ಸ್ಥಳದಲ್ಲಿ ಇಡುವುದು ಸೂಕ್ತ. ಕಾಗದದ ಚೀಲ, ಜಾಲರಿಯ ಚೀಲ ಅಥವಾ ಗಾಳಿಯಾಡುವ ಬುಟ್ಟಿಯಲ್ಲಿ ಇಡಬಹುದು. ಪ್ಲಾಸ್ಟಿಕ್‌ ಚೀಲದಲ್ಲಿ ಗಾಳಿಯಾಡದಂತೆ ಮುಚ್ಚಿಡುವುದನ್ನು ತಪ್ಪಿಸುವುದು ಉತ್ತಮ.

ಇನ್ನು ಆಲೂಗಡ್ಡೆಯನ್ನು ನೇರವಾಗಿ ಬೆಳಕಿಗೆ ಒಡ್ಡಬಾರದು. ಹೆಚ್ಚು ಬೆಳಕು ಬಿದ್ದಾಗ ಅದರ ಹೊರಭಾಗ ಹಸಿರು ಬಣ್ಣಕ್ಕೆ ತಿರುಗಬಹುದು. ಈ ಸಂದರ್ಭದಲ್ಲಿ ಗ್ಲೈಕೋಆಲ್ಕಲಾಯ್ಡ್ಸ್‌ ಎಂಬ ಸಂಯುಕ್ತಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಇವು ಹೆಚ್ಚಿನ ಪ್ರಮಾಣದಲ್ಲಿ ಸೇವನೆಯಾದರೆ ವಿಷಕಾರಿ ಪರಿಣಾಮ ಉಂಟುಮಾಡಬಹುದು.

ಹೀಗಾಗಿ ಆಲೂಗಡ್ಡೆಯನ್ನು ಫ್ರಿಜ್‌ನ ಬದಲು ತಂಪಾದ, ಕತ್ತಲೆಯ ಮತ್ತು ಗಾಳಿಯಾಡುವ ಸ್ಥಳದಲ್ಲಿ ಸಂಗ್ರಹಿಸುವುದು ಉತ್ತಮ. ಕೊಳೆತ, ಗಾಯಗೊಂಡ ಅಥವಾ ಹಸಿರು ಬಣ್ಣಕ್ಕೆ ತಿರುಗಿರುವ ಆಲೂಗಡ್ಡೆಯನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

ತಾಕತ್ತಿದ್ದರೆ ಹಿಂದೂಗಳಿಗೆ ಎಚ್ಚರಿಕೆ ನೀಡಿದಂತೆಯೇ ಮುಸ್ಲಿಮರಿಗೂ ಎಚ್ಚರಿಕೆ ನೀಡಲಿ: ಆರ್.ಅಶೋಕ್

0

ಬೆಂಗಳೂರು: ಗಣೇಶೋತ್ಸವದ ಸಂದರ್ಭದಲ್ಲಿ ಹಿಂದೂಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಕಾಂಗ್ರೆಸ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಿಂದೂ ಮುಖಂಡರಿಗೆ ಎಚ್ಚರಿಕೆ ನೀಡಿದ ರೀತಿಯಲ್ಲೇ ಎಲ್ಲ ಸಮುದಾಯಗಳಿಗೂ ಕಾನೂನು ಒಂದೇ ರೀತಿಯಲ್ಲಿ ಅನ್ವಯವಾಗಬೇಕು ಎಂದು ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌. ಅಶೋಕ್, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ತಾವು ಭಾವಿಸಿದ್ದೆ. ಆದರೆ ಟಿ. ನರಸೀಪುರ ಠಾಣೆಯ ಇನ್ಸ್‌ಪೆಕ್ಟರ್‌ ಪರವಾಗಿ ಅವರು ಮಾತನಾಡಿರುವುದು ಸರಿಯಲ್ಲ ಎಂದು ಟೀಕಿಸಿದರು.

ಟಿ. ನರಸೀಪುರ ಠಾಣೆಯ ಇನ್ಸ್‌ಪೆಕ್ಟರ್‌ ವಿರುದ್ಧ ಈ ಹಿಂದೆ ದಲಿತರ ಮೇಲೆ ಹಲ್ಲೆ ಹಾಗೂ ಮಹಿಳೆಯೊಬ್ಬರ ಬದುಕಿಗೆ ಸಂಬಂಧಿಸಿದ ಆರೋಪಗಳಿವೆ ಎಂದು ಆರ್‌. ಅಶೋಕ್‌ ಹೇಳಿದರು. ಇಂತಹ ಹಿನ್ನೆಲೆ ಇರುವ ಪೊಲೀಸ್‌ ಅಧಿಕಾರಿಯನ್ನು ಸರ್ಕಾರ ಸಮರ್ಥಿಸಿದರೆ, ಅದು ಪೊಲೀಸರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರ ದೇಶಭಕ್ತಿ ಕುರಿತು ಕಾಂಗ್ರೆಸ್‌ ನಾಯಕರು ಪ್ರಶ್ನಿಸುವ ಅಗತ್ಯವಿಲ್ಲ ಎಂದು ಹೇಳಿದ ಆರ್‌. ಅಶೋಕ್‌, ಕಾಂಗ್ರೆಸ್‌ ಪಕ್ಷದ ವಿರುದ್ಧ ಹಲವು ರಾಜಕೀಯ ಆರೋಪಗಳನ್ನು ಮಾಡಿದರು. “ನಮಗೆ ದೇಶಭಕ್ತಿಯ ಪಾಠ ಮಾಡಬೇಕಿಲ್ಲ” ಎಂದು ಹೇಳಿದರು.

ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸಿರುವ ಸರ್ಕಾರ, ಮಸೀದಿಗಳ ಮುಂಭಾಗವೂ ಮೆರವಣಿಗೆ ನಡೆಸದಂತೆ ನಿಯಮ ರೂಪಿಸಲಿ ಎಂದು ಆಗ್ರಹಿಸಿದರು. ಇದೇ ವೇಳೆ ಯಾವುದೇ ಧಾರ್ಮಿಕ ಸ್ಥಳದ ಮುಂದೆ ಮೆರವಣಿಗೆ ಅಥವಾ ಕಾರ್ಯಕ್ರಮ ನಡೆಸುವ ವಿಚಾರದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ಒತ್ತಾಯಿಸಿದರು.

ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟದ ಘಟನೆ ಕುರಿತು ಮಾತನಾಡಿದ ಅವರು, ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಹಿಂದೂ ಮುಖಂಡರಿಗೆ ನೋಟಿಸ್‌ ನೀಡಲಾಗಿದೆ ಎಂದು ಆರೋಪಿಸಿದರು. ಮದ್ದೂರಿಗೆ ತೆರಳಿ ಹಿಂದೂ ಮುಖಂಡರಿಗೆ ಬೆಂಬಲ ನೀಡುವುದಾಗಿ ಆರ್‌. ಅಶೋಕ್‌ ತಿಳಿಸಿದರು.

ಬಡವರ ನಿವೇಶನ ಯೋಜನೆ: ತಿಂಗಳಾಂತ್ಯದೊಳಗೆ ಭೂಮಿ ಗುರುತಿಸುವಂತೆ ಅಧಿಕಾರಿಗಳಿಗೆ ಪರಮೇಶ್ವರ್ ಸೂಚನೆ

0

ಬೆಂಗಳೂರು: ಬಡವರಿಗೆ ನಿವೇಶನ ನೀಡುವ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ, ಭೂಮಿ ಗುರುತಿಸುವ ಪ್ರಕ್ರಿಯೆಯನ್ನು ತಿಂಗಳಾಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಧಿಕಾರಿಗಳಿಗೆ ವಿವಿಧ ವಿಷಯಗಳ ಕುರಿತು ಅಗತ್ಯ ಸೂಚನೆಗಳನ್ನು ನೀಡಿದರು.

ಬಡವರಿಗೆ ನಿವೇಶನ ನೀಡುವ ಕಾರ್ಯಕ್ರಮ ಘೋಷಣೆಯಾದ ಬಳಿಕ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ನಿವೇಶನ ಸಿದ್ಧಪಡಿಸಲು ಅಗತ್ಯವಿರುವ ಭೂಮಿಯನ್ನು ಇನ್ನೂ ಗುರುತಿಸಿಲ್ಲ. ಹೀಗಾಗಿ ತಿಂಗಳಾಂತ್ಯದೊಳಗೆ ಭೂಮಿ ಗುರುತಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಭೂಮಿ ಗುರುತಿಸುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಗೆ ಅಗತ್ಯವಿರುವ ತಾಂತ್ರಿಕ ಸಹಕಾರವನ್ನು ಹಿರಿಯ ಅಧಿಕಾರಿಗಳು ನೀಡಲಿದ್ದಾರೆ ಎಂದು ಜಿ. ಪರಮೇಶ್ವರ ತಿಳಿಸಿದರು.

ಇದೇ ವೇಳೆ ಭಾರತ್ ಜೋಡೋ ಯುವ ಸಂಘ ಯೋಜನೆಯ ಅನುಷ್ಠಾನಕ್ಕೂ ಹೆಚ್ಚಿನ ವೇಗ ನೀಡುವಂತೆ ಸೂಚಿಸಿದರು. ಸಂಘಗಳ ನೋಂದಣಿ, ಮೆಂಟರ್‌ಗಳ ನೇಮಕ ಸೇರಿದಂತೆ ಸಂಘಗಳನ್ನು ಆರಂಭಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದೀಗ ಕೂಡಲೇ ಅರ್ಜಿ ನಮೂನೆಗಳನ್ನು ವಿತರಿಸಿ, ಅರ್ಜಿಗಳನ್ನು ಭರ್ತಿ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.

ಭಾರತ್ ಜೋಡೋ ಯುವಕ ಸಂಘವನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಿಂದ ಸರ್ಕಾರ ಮತ್ತು ಅಧಿಕಾರಿಗಳಿಗೆ ಉತ್ತಮ ಹೆಸರು ಬರಲಿದೆ ಎಂದು ಜಿ. ಪರಮೇಶ್ವರ ಹೇಳಿದರು.

ಜಾಸೇವಾ ಅಭಿಯಾನದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವುಗಳ ವಿಲೇವಾರಿಗೆ ಅಧಿಕಾರಿಗಳು ವೇಗ ನೀಡಬೇಕು ಎಂದು ಸೂಚಿಸಿದರು. ಪಹಣಿ ತಿದ್ದುಪಡಿ, ಪೋಡಿ ಹಾಗೂ ಪಿಂಚಣಿ ಸಮಸ್ಯೆ ಸೇರಿದಂತೆ ವಿವಿಧ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ತಿಳಿಸಿದರು.

ಆರ್‌ಟಿಸಿ ಹಾಗೂ ಪೋಡಿ ಪ್ರಕರಣಗಳ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ. ಆದರೂ ಅಧಿಕಾರಿಗಳಿಗೆ ಯಾವುದೇ ಗೊಂದಲ ಉಂಟಾದರೆ ಹಿರಿಯ ಅಧಿಕಾರಿಗಳಿಂದ ಅಗತ್ಯ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕಂದಾಯ ಆಯುಕ್ತೆ ಮೀನಾ ನಾಗರಾಜ್, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತ ವೆಂಕಟರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಕ್ಟೋಬರ್ 17ರ ರಾತ್ರಿ 7:50ಕ್ಕೆ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ: ಸರ್ಕಾರದಿಂದ 2 ಕೋಟಿ ರೂ. ಅನುದಾನ!

0

ಕೊಡಗು/ಮಡಿಕೇರಿ: ದಕ್ಷಿಣ ಭಾರತದ ಜೀವನದಿ ತಾಯಿ ಕಾವೇರಿಯ ತೀರ್ಥೋದ್ಭವ (Cauvery Theerthodbhava) ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪುಣ್ಯ ಕಾಲದ ಮುಹೂರ್ತ ನಿಗದಿಯಾಗಿದೆ. ಮಡಿಕೇರಿ ತಾಲೂಕಿನ ಜನ್ಮಭೂಮಿ ತಲಕಾವೇರಿ ಕ್ಷೇತ್ರದಲ್ಲಿ ಅಕ್ಟೋಬರ್ 17ರ ರಾತ್ರಿ 7:50ಕ್ಕೆ ಕಾವೇರಿ ತೀರ್ಥೋದ್ಭವ ನಡೆಯಲಿದೆ ಎಂದು ಪ್ರಕಟಿಸಲಾಗಿದೆ.

ಮೇಷ ಲಗ್ನದಲ್ಲಿ ತೀರ್ಥೋದ್ಭವ: ಈ ಬಾರಿ ಅತ್ಯಂತ ಶುಭಪ್ರದವಾದ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ಜರುಗಲಿದೆ. ಪವಿತ್ರ ತೀರ್ಥ ರೂಪಿಣಿಯಾಗಿ ತಾಯಿ ಕಾವೇರಿ ಪ್ರತ್ಯಕ್ಷಳಾಗುವ ಈ ದಿವ್ಯ ಕ್ಷಣವನ್ನು ಕಣ್ಣುಂಬಿಕೊಳ್ಳಲು ಹಾಗೂ ಪವಿತ್ರ ತೀರ್ಥ ಪ್ರೋಕ್ಷಣೆ ಪಡೆದುಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ ಧಾರ್ಮಿಕ ವಿಧಿವಿಧಾನಗಳಿಗೆ ಹಾಗೂ ಭಕ್ತರ ಅನುಕೂಲಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಸರ್ಕಾರದಿಂದ 2 ಕೋಟಿ ರೂಪಾಯಿ ಅನುದಾನ: ಕೊಡಗಿನ ಅಧಿದೇವತೆ ಕಾವೇರಿ ತೀರ್ಥೋದ್ಭವ ಸಂಭ್ರಮಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ರಾಜ್ಯ ಸರ್ಕಾರ ಸಾಥ್ ನೀಡಿದೆ. ಅಕ್ಟೋಬರ್ 17ರಂದು ನಡೆಯಲಿರುವ ಈ ಪವಿತ್ರ ಕಾವೇರಿ ತೀರ್ಥೋದ್ಭವ ಆಚರಣೆ ಹಾಗೂ ಸಿದ್ಧತೆಗಳಿಗಾಗಿ ಬರೋಬ್ಬರಿ 2 ಕೋಟಿ ರೂಪಾಯಿ ಅನುದಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತೀರ್ಥೋದ್ಭವದ ಹಿನ್ನೆಲೆಯಲ್ಲಿ ಇಡೀ ಕೊಡಗು ಜಿಲ್ಲೆಯಾದ್ಯಂತ ಧಾರ್ಮಿಕ ಸಂಭ್ರಮಾಚರಣೆಯ ವಾತಾವರಣ ನೆಲೆಸಿದೆ.