Home Blog

ದುಲೀಪ್ ಟ್ರೋಫಿ ಫೈನಲ್: ಟಾಸ್ ಗೆದ್ದ ಇಶಾನ್ ಕಿಶನ್, ಸೌತ್ ಝೋನ್ ವಿರುದ್ಧ ಬ್ಯಾಟಿಂಗ್ ಆಯ್ಕೆ

0

ಚೆನ್ನೈ: ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯ ಆರಂಭಗೊಂಡಿದೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಈಸ್ಟ್ ಝೋನ್ ತಂಡದ ನಾಯಕ ಇಶಾನ್ ಕಿಶನ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ ತಿಲಕ್ ವರ್ಮಾ ನಾಯಕತ್ವದ ಸೌತ್ ಝೋನ್ ತಂಡ ಮೊದಲು ಬೌಲಿಂಗ್ ಮಾಡಲಿದೆ.

ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಸೆಂಟ್ರಲ್ ಝೋನ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿರುವ ಈಸ್ಟ್ ಝೋನ್, ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ನೀಡಲಿದ್ದಾರೆ. ಇನ್ನು ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮೇಲೆ ವಿಶೇಷ ನಿರೀಕ್ಷೆ ಮೂಡಿದೆ.

ವೈಭವ್ ಅವರೊಂದಿಗೆ ಅಭಿಮನ್ಯು ಈಶ್ವರನ್, ಕುಮಾರ್ ಕುಶಾಗ್ರಾ ಹಾಗೂ ಸುದೀಪ್ ಕುಮಾರ್ ಘರಾಮಿ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಶಮಿ ಜೊತೆಗೆ ಮುಖೇಶ್ ಕುಮಾರ್ ಮತ್ತು ಅಭಿಜಿತ್ ಕೆ. ಸರ್ಕಾರ್ ಇದ್ದಾರೆ. ಸ್ಪಿನ್ ಆಲ್‌ರೌಂಡರ್‌ಗಳಾದ ಶಹಬಾಝ್ ಅಹ್ಮದ್ ಹಾಗೂ ಅನುಕೂಲ್ ರಾಯ್ ಕೂಡ ತಂಡದ ಸಮತೋಲನ ಹೆಚ್ಚಿಸಿದ್ದಾರೆ.

ಈ ಫೈನಲ್‌ನಲ್ಲಿ ಕಣಕ್ಕಿಳಿಯಬೇಕಿದ್ದ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ ವೈಯಕ್ತಿಕ ಕಾರಣಗಳಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ.

ಇತ್ತ ಸೌತ್ ಝೋನ್ ತಂಡವೂ ಸ್ಟಾರ್ ಆಟಗಾರರಿಂದ ಕೂಡಿದೆ. ನಾಯಕ ತಿಲಕ್ ವರ್ಮಾ ತಂಡವನ್ನು ಮುನ್ನಡೆಸುತ್ತಿದ್ದು, ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಅಸ್ತ್ರವಾಗಿದ್ದಾರೆ. ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್ ಸೇರಿದಂತೆ ಪ್ರತಿಭಾವಂತ ಹಾಗೂ ಅನುಭವಿ ಬ್ಯಾಟರ್‌ಗಳು ತಂಡದಲ್ಲಿದ್ದಾರೆ.

ಹೀಗಾಗಿ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಈಸ್ಟ್ ಝೋನ್ ಹಾಗೂ ಸೌತ್ ಝೋನ್ ನಡುವಿನ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ.

ಈಸ್ಟ್ ಝೋನ್ ಪ್ಲೇಯಿಂಗ್ XI:

ಅಭಿಮನ್ಯು ಈಶ್ವರನ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಗ್ರಾ, ಸುದೀಪ್ ಕುಮಾರ್ ಘರಾಮಿ, ಇಶಾನ್ ಕಿಶನ್ (ನಾಯಕ), ಶಿಖರ್ ಮೋಹನ್, ಅನುಕೂಲ್ ರಾಯ್, ಎಂಡಿ ಕೌನೈನ್ ಖುರೈಶಿ, ಮೊಹಮ್ಮದ್ ಶಮಿ, ಅಭಿಜಿತ್ ಕೆ. ಸರ್ಕಾರ್, ಮುಖೇಶ್ ಕುಮಾರ್.

ಸೌತ್ ಝೋನ್ ಪ್ಲೇಯಿಂಗ್ XI:

ರಿಕಿ ಭುಯಿ, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶೇಕ್ ರಶೀದ್, ತಿಲಕ್ ವರ್ಮಾ (ನಾಯಕ), ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ತ್ರಿಪುರಾಣ ವಿಜಯ್, ಮೊಹಮ್ಮದ್ ಸಿರಾಜ್, ಚಾಮ ವಿ. ಮಿಲಿಂದ್, ಎಂಡಿ ನಿಧೀಶ್.

ಹೊಸ ಏರ್ʼಪೋರ್ಟ್ ನಿರ್ಮಾಣಕ್ಕೆ ವಿಜಯ್ ಸರ್ಕಾರದ ಮಹತ್ವದ ಹೆಜ್ಜೆ! ಎರಡು ಸ್ಥಳಗಳು ಶಾರ್ಟ್ʼಲಿಸ್ಟ್

0

ಚೆನ್ನೈ: ಟಿವಿಕೆ ನೇತೃತ್ವದ ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಮತ್ತೊಂದು ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು ಎರಡು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪರಂದೂರು ಏರ್‌ಪೋರ್ಟ್ ಯೋಜನೆಯನ್ನು ಅಧಿಕೃತವಾಗಿ ಕೈಬಿಟ್ಟ ನಂತರ ಈ ಬೆಳವಣಿಗೆ ನಡೆದಿದೆ ಎಂದು ಉನ್ನತ ಮೂಲಗಳನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಹೊಸ ವಿಮಾನ ನಿಲ್ದಾಣಕ್ಕಾಗಿ ಸಿಎಂ ವಿಜಯ್ ನೇತೃತ್ವದ ಸರ್ಕಾರ ಮಾನೆಲ್ಲೂರು ಹಾಗೂ ಚೆಯ್ಯೂರು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಪರಂದೂರು ಯೋಜನೆ ಕೈಬಿಟ್ಟ ಒಂದೇ ವಾರದಲ್ಲಿ ಈ ಎರಡೂ ಸ್ಥಳಗಳನ್ನು ಗುರುತಿಸಲಾಗಿದೆ.

ಮಾನೆಲ್ಲೂರು ಚೆನ್ನೈನಿಂದ ಸುಮಾರು 60 ಕಿ.ಮೀ. ದೂರದಲ್ಲಿದ್ದರೆ, ಚೆಯ್ಯೂರು ನಗರದಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಪ್ರಸ್ತಾವಿತ ವಿಮಾನ ನಿಲ್ದಾಣ ಚೆನ್ನೈ ಮಹಾನಗರ ಪ್ರದೇಶಕ್ಕೆ (ಸಿಎಂಎ) ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ.

ಚೆನ್ನೈ ಬಳಿಯ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆ ಕೈಬಿಟ್ಟ ನಿರ್ಧಾರ ಘೋಷಿಸಿದ ನಂತರ ವಿಜಯ್ ಸರ್ಕಾರ ವಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿದೆ.

Breaking News: ಬೆಂಗಳೂರಲ್ಲಿ ತಡರಾತ್ರಿ ಅಗ್ನಿ ಅವಘಡ; 5 ಬೈಕ್‌ಗಳು ಬೆಂಕಿಗಾಹುತಿ!

0

ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡನಾಗಮಂಗಲದ ಕೇಂಬ್ರಿಡ್ಜ್ ಶಾಲೆ ಬಳಿ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.

ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಐದು ಬೈಕ್‌ಗಳು ಬೆಂಕಿಗಾಹುತಿಯಾಗಿವೆ.

ಮನೆಯ ಪಾರ್ಕಿಂಗ್ ಸ್ಥಳದಲ್ಲಿ ಬಾಡಿಗೆದಾರರು ನಿಲ್ಲಿಸಿದ್ದ ಬೈಕ್‌ಗಳು ಏಕಾಏಕಿ ಹೊತ್ತಿ ಉರಿದಿವೆ. ಬೈಕ್‌ಗಳ ಜೊತೆಗೆ ಎಲೆಕ್ಟ್ರಿಕ್ ಮೀಟರ್ ಬೋರ್ಡ್‌ಗೂ ಬೆಂಕಿ ತಗುಲಿದ್ದು, ಮನೆಯ ಬಾಗಿಲು ಹಾಗೂ ಕಿಟಕಿಗಳಿಗೂ ಬೆಂಕಿ ಆವರಿಸಿದೆ.

ಅಚ್ಚರಿ ಎಂಬಂತೆ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಜೊತೆಗೆ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಮತ್ತೊಂದು ಬೈಕ್‌ಗೂ ಬೆಂಕಿ ತಗುಲಿದೆ. ಹೀಗಾಗಿ ಬೆಂಕಿ ಅವಘಡದ ಬಗ್ಗೆ ಹಲವು ಅನುಮಾನಗಳು ಮೂಡಿವೆ.

ಬೆಂಕಿ ಆಕಸ್ಮಿಕವಾಗಿ ಕಾಣಿಸಿಕೊಂಡಿತೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಬಾಡಿಗೆ ಮನೆಯ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

BMW ಬೈಕ್ ಡಿಕ್ಕಿ: ಸ್ವಿಫ್ಟ್ ಕಾರಿನಲ್ಲಿದ್ದ 25 ವರ್ಷದ ಯುವಕ ಸಾವು!

ಚಿಕ್ಕಬಳ್ಳಾಪುರ: ಸ್ವಿಫ್ಟ್ ಕಾರಿಗೆ BMW RR ಬೈಕ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಯುವಕ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಚಿಕ್ಕಸಣ್ಣೆ ಗೇಟ್ ಸಿಗ್ನಲ್ ಬಳಿ ನಡೆದಿದೆ.

ಮೃತ ಯುವಕನನ್ನು ದೇವನಹಳ್ಳಿ ತಾಲೂಕಿನ ನರಗನಹಳ್ಳಿ ಗ್ರಾಮದ ನಿವಾಸಿ ನವೀನ್ ಕುಮಾರ್ (25) ಎಂದು ಗುರುತಿಸಲಾಗಿದೆ.

ಚಿಕ್ಕಸಣ್ಣೆ ಗೇಟ್ ಸಿಗ್ನಲ್ ಬಳಿ ಸ್ವಿಫ್ಟ್ ಕಾರು ತೆರಳುತ್ತಿದ್ದ ವೇಳೆ BMW RR ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ BMW ಬೈಕ್ ಸವಾರ ರಾಕೇಶ್ ಬೈಕ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕಾರಿನಲ್ಲಿ ಏಕಾಏಕಿ ಬೆಂಕಿ; ಎಚ್ಚೆತ್ತು ಕೆಳಗಿಳಿದ ಇಬ್ಬರು, ವಾಹನ ಸುಟ್ಟು ಭಸ್ಮ!

ಮಂಡ್ಯ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಚಲಿಸುತ್ತಿದ್ದ ಕಾರೊಂದು ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಮಂಡ್ಯ ಹೊರವಲಯದ ಇಂಡುವಾಳು ಬಳಿ ನಡೆದಿದೆ.

ಅದೃಷ್ಟವಶಾತ್‌ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಲ್ಲಿ ನೆಲೆಸಿರುವ ಸ್ಕನದ್‌ ಎಂಬುವವರಿಗೆ ಸೇರಿದ KA-05 ME-7634 ನೋಂದಣಿ ಸಂಖ್ಯೆಯ ಕಾರು ಬೆಂಕಿಗಾಹುತಿಯಾಗಿದೆ. ಸ್ಕನದ್‌ ಹಾಗೂ ಮತ್ತೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಬಟ್ಟೆ ವ್ಯಾಪಾರ ಮುಗಿಸಿಕೊಂಡು ಮೈಸೂರಿನತ್ತ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಇಬ್ಬರೂ ಕಾರಿನಿಂದ ಕೆಳಗಿಳಿದು ಪ್ರಾಣ ಉಳಿಸಿಕೊಂಡಿದ್ದಾರೆ.

ಇಬ್ಬರೂ ಕಾರಿನಿಂದ ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸಿದೆ. ಪರಿಣಾಮ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.

ಗರ್ಭಿಣಿಯರ ತೂಕ ಏಕೆ ಹೆಚ್ಚಾಗುತ್ತೆ? ಕಾರಣ ಮಗು ಮಾತ್ರವಲ್ಲ; ಇಲ್ಲಿದೆ ಸಂಪೂರ್ಣ ಮಾಹಿತಿ

0

ಗರ್ಭಧಾರಣೆಯ ನಂತರ ಮಹಿಳೆಯ ದೇಹದಲ್ಲಿ ಹಲವು ಸಹಜ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.

ಹೊಟ್ಟೆ ದೊಡ್ಡದಾಗುವುದು, ಸ್ತನಗಳ ಗಾತ್ರ ಹೆಚ್ಚಾಗುವುದು ಹಾಗೂ ದೇಹದ ಆಕಾರದಲ್ಲಿ ಬದಲಾವಣೆ ಉಂಟಾಗುವುದರ ಜೊತೆಗೆ ತೂಕವೂ ಹೆಚ್ಚಾಗುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದಕ್ಕೆ ಕೇವಲ ಗರ್ಭದಲ್ಲಿರುವ ಮಗು ಬೆಳೆಯುವುದು ಮಾತ್ರ ಕಾರಣವಲ್ಲ.

ಗರ್ಭದಲ್ಲಿರುವ ಮಗು ಬೆಳೆಯುತ್ತಾ ಹೋದಂತೆ ಅದರ ತೂಕ ಹೆಚ್ಚಾಗುತ್ತದೆ. ಮಗುವಿಗೆ ಪೋಷಕಾಂಶ ಹಾಗೂ ಆಮ್ಲಜನಕ ಒದಗಿಸುವ ಪ್ಲಾಸೆಂಟಾ, ಮಗುವನ್ನು ಸುತ್ತುವರಿದಿರುವ ಆಮ್ನಿಯೋಟಿಕ್ ದ್ರವ ಮತ್ತು ಮಗುವಿಗೆ ಸ್ಥಳ ಕಲ್ಪಿಸಲು ದೊಡ್ಡದಾಗುವ ಗರ್ಭಕೋಶ ಕೂಡ ಒಟ್ಟು ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ.

ಇದರ ಜೊತೆಗೆ ಗರ್ಭಾವಸ್ಥೆಯಲ್ಲಿ ದೇಹದಲ್ಲಿನ ರಕ್ತದ ಪ್ರಮಾಣವೂ ಹೆಚ್ಚಾಗುತ್ತದೆ. ಬೆಳೆಯುತ್ತಿರುವ ಮಗುವಿಗೆ ಅಗತ್ಯವಾದ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ತಲುಪಿಸಲು ಹೆಚ್ಚಿನ ರಕ್ತಪರಿಚಲನೆ ಅಗತ್ಯವಾಗುತ್ತದೆ. ದೇಹದಲ್ಲಿ ನೀರು ಮತ್ತು ಇತರ ದ್ರವಗಳ ಪ್ರಮಾಣವೂ ಹೆಚ್ಚಾಗಬಹುದು. ಇದರಿಂದ ಕೆಲ ಮಹಿಳೆಯರಲ್ಲಿ ಕೈ, ಕಾಲು ಮತ್ತು ಪಾದಗಳಲ್ಲಿ ಊತ ಕಾಣಿಸಿಕೊಳ್ಳಬಹುದು.

ಸ್ತನ ಮತ್ತು ದೇಹದಲ್ಲಿ ಕೊಬ್ಬಿನ ಪ್ರಮಾಣವೂ ಹೆಚ್ಚಳ:

ಹೆರಿಗೆಯ ನಂತರ ಮಗುವಿಗೆ ಹಾಲುಣಿಸಲು ದೇಹ ಸಿದ್ಧವಾಗುವ ಸಂದರ್ಭದಲ್ಲಿ ಸ್ತನದ ಅಂಗಾಂಶಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಇದೇ ವೇಳೆ ಗರ್ಭಾವಸ್ಥೆಯಲ್ಲಿ ದೇಹವು ನಿರ್ದಿಷ್ಟ ಪ್ರಮಾಣದ ಕೊಬ್ಬನ್ನು ಸಂಗ್ರಹಿಸಿಕೊಳ್ಳುತ್ತದೆ. ಇದು ತಾಯಿ ಮತ್ತು ಮಗುವಿಗೆ ಅಗತ್ಯವಾಗುವ ಹೆಚ್ಚುವರಿ ಶಕ್ತಿಯ ಸಂಗ್ರಹವಾಗಿ ಕಾರ್ಯನಿರ್ವಹಿಸುತ್ತದೆ.

ಗರ್ಭಿಣಿಯರು ಎಷ್ಟು ತೂಕ ಹೆಚ್ಚಿಸಿಕೊಳ್ಳಬೇಕು?

ಗರ್ಭಾವಸ್ಥೆಯಲ್ಲಿ ಎಷ್ಟು ತೂಕ ಹೆಚ್ಚಾಗಬೇಕು ಎಂಬುದು ಎಲ್ಲ ಮಹಿಳೆಯರಿಗೂ ಒಂದೇ ಆಗಿರುವುದಿಲ್ಲ. ಗರ್ಭಧಾರಣೆಗೆ ಮುನ್ನದ ತೂಕ ಮತ್ತು BMI ಆಧರಿಸಿ ಸೂಕ್ತ ತೂಕ ಹೆಚ್ಚಳದ ಪ್ರಮಾಣ ಬದಲಾಗುತ್ತದೆ.

ಸಾಮಾನ್ಯ ತೂಕ ಹೊಂದಿರುವ ಮಹಿಳೆಯರು ಒಂದೇ ಮಗುವಿನ ಗರ್ಭಧಾರಣೆಯಲ್ಲಿ ಸಾಮಾನ್ಯವಾಗಿ 11ರಿಂದ 16 ಕೆ.ಜಿ. ವರೆಗೆ ತೂಕ ಹೆಚ್ಚಿಸಿಕೊಳ್ಳುವುದು ಶಿಫಾರಸು ಮಾಡಲಾಗುತ್ತದೆ. ಕಡಿಮೆ ತೂಕ ಅಥವಾ ಅಧಿಕ ತೂಕ ಹೊಂದಿರುವ ಮಹಿಳೆಯರಲ್ಲಿ ಈ ಪ್ರಮಾಣ ಭಿನ್ನವಾಗಿರಬಹುದು.

ಹೀಗಾಗಿ ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದನ್ನು ಕೇವಲ ‘ದಪ್ಪವಾಗುವುದು’ ಎಂದು ಪರಿಗಣಿಸುವ ಅಗತ್ಯವಿಲ್ಲ. ಮಗು ಬೆಳೆಯಲು, ಹೆರಿಗೆಗೆ ಸಿದ್ಧವಾಗಲು ಮತ್ತು ಹೆರಿಗೆಯ ನಂತರ ಮಗುವಿಗೆ ಹಾಲುಣಿಸಲು ದೇಹ ತನ್ನನ್ನು ತಾನೇ ಸಿದ್ಧಪಡಿಸಿಕೊಳ್ಳುವ ಸಹಜ ಪ್ರಕ್ರಿಯೆಯೇ ಇದು.

ಆದರೆ ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ತೂಕ ಹೆಚ್ಚಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಮುಖ್ಯ. ಸಮತೋಲಿತ ಆಹಾರ ಹಾಗೂ ವೈದ್ಯರು ಅನುಮತಿಸಿದ ಸುರಕ್ಷಿತ ದೈಹಿಕ ಚಟುವಟಿಕೆ ಆರೋಗ್ಯಕರ ಗರ್ಭಾವಸ್ಥೆಗೆ ಸಹಾಯ ಮಾಡಬಹುದು.

ಅಂತಾರಾಜ್ಯ ಕಾರು ಕಳ್ಳರ ಜಾಲ ಭೇದಿಸಿದ ಗದಗ ಪೊಲೀಸರು: ಇಬ್ಬರ ಬಂಧನ

0

ಗದಗ: ರಾತ್ರಿ ವೇಳೆ ನಿಲ್ಲಿಸಿದ್ದ ಕಾರುಗಳ ಬಾಗಿಲು ಲಾಕ್‌ಗಳನ್ನು ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಕೀ-ಪ್ರೋಗ್ರಾಮಿಂಗ್‌ ಸಾಧನದ ಮೂಲಕ ತೆರೆದು ಕಾರುಗಳನ್ನು ಕಳವು ಮಾಡುತ್ತಿದ್ದ ಅಂತಾರಾಜ್ಯ ಕಾರು ಕಳ್ಳರ ಜಾಲವನ್ನು ಗದಗ ಗ್ರಾಮೀಣ ಪೊಲೀಸರು ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿದ್ದು, ಅವರಿಂದ ಎರಡು ಕಾರುಗಳು, ಕಾರು ಕಳವಿಗೆ ಬಳಸುತ್ತಿದ್ದ ವೃತ್ತಿಪರ ಕೀ-ಪ್ರೋಗ್ರಾಮಿಂಗ್‌ ಸಾಧನ ಸೇರಿದಂತೆ ಒಟ್ಟು ₹27.15 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.

ಗದಗ ತಾಲೂಕಿನ ಹುಲಕೋಟಿ ಗ್ರಾಮದ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿ ಗುದ್ನಯ್ಯಸ್ವಾಮಿ ತಂದೆ ವೀರಯ್ಯ ಅಜ್ಜನವರಮಠ ಅವರಿಗೆ ಸೇರಿದ ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಕಾರು (KA-35/N-5642) ಜುಲೈ 31ರ ರಾತ್ರಿ 11ರಿಂದ ಆಗಸ್ಟ್‌ 1ರ ಬೆಳಗ್ಗೆ 6.30ರ ನಡುವಿನ ಅವಧಿಯಲ್ಲಿ ಕಳವಾಗಿತ್ತು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 199/2026, ಕಲಂ 303(2) ಬಿ.ಎನ್.ಎಸ್.-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರಿನ ಎಂಜಿನ್‌ ನಂ. SJF4G14119, ಚಾಸಿಸ್‌ ನಂ. MA1TA2SJXF2G45551 ಎಂದು ದಾಖಲಾಗಿದೆ.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ಅಂದಿನ ಪೊಲೀಸ್‌ ಅಧೀಕ್ಷಕ ರೋಹನ್‌ ಜಗದೀಶ್, ಐಪಿಎಸ್, ಗದಗ ಹಾಗೂ ಗದಗ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ, ಗದಗ ಗ್ರಾಮೀಣ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರ ಗಡೇದ ಅವರ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿತು.

ಆ.28ರಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಗದಗ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು, ಪೆಟ್ರೋಲಿಂಗ್‌ ಮಾಡುತ್ತ ಸಾರಿಗೆ ನಗರ ಕಡೆಗೆ ತೆರಳುತ್ತಿದ್ದಾಗ ಕಳಸಾಪುರ ಕ್ರಾಸ್‌ ಹತ್ತಿರ ಹೆದ್ದಾರಿಯಲ್ಲಿ ಬಿಳಿ ಬಣ್ಣದ ಗುಜರಾತ್‌ ಪಾಸಿಂಗ್‌ ಇರುವ ಕ್ರೇಟಾ ಕಾರೊಂದು ನಿಂತಿರುವುದು ಕಂಡುಬಂದಿದೆ.

ಕಾರಿನ ಬಳಿಗೆ ತೆರಳಿ ಪರಿಶೀಲಿಸಿದಾಗ ಅದರೊಳಗೆ ಇಬ್ಬರು ವ್ಯಕ್ತಿಗಳು ಮಲಗಿರುವುದು ಕಂಡುಬಂದಿದೆ. ಅವರನ್ನು ಎಬ್ಬಿಸಿ ಹೆಸರು-ವಿಳಾಸ ವಿಚಾರಿಸಿದಾಗ ಅನುಮಾನಾಸ್ಪದವಾಗಿ ಕಂಡುಬಂದಿದ್ದು, ವಾಹನದ ದಾಖಲೆಗಳನ್ನೂ ಹಾಜರುಪಡಿಸದ ಹಿನ್ನೆಲೆಯಲ್ಲಿ ಇಬ್ಬರನ್ನೂ ಠಾಣೆಗೆ ಕರೆತಂದು ಸುದೀರ್ಘ ವಿಚಾರಣೆ ನಡೆಸಲಾಗಿದೆ.

ವಿಚಾರಣೆ ವೇಳೆ ಅವರು ತಮ್ಮ ಹೆಸರು ಅರವಿಂದಕುಮಾರ ತಂದೆ ಗಂಗಾರಾಮ್‌ ಬಿಷ್ಣೋಯಿ (35), ಜಾತಿ ಹಿಂದೂ ಬಿಷ್ಣೋಯಿ, ವೃತ್ತಿ ಚಾಲಕ, ಸಾ. ಸಿಲ್ಲು, ತಾ. ಗುಡಾಮಾಲಾನಿ, ಜಿ. ಬಾರಮೇರ್‌, ರಾಜಸ್ಥಾನ, ಹಾಗೂ ರಾಮಜೀವನ್‌ ತಂದೆ ಕೃಷ್ಣಾರಾಮ್‌ ಬಿಷ್ಣೋಯಿ (30), ಜಾತಿ ಹಿಂದೂ ಬಿಷ್ಣೋಯಿ, ವೃತ್ತಿ ಕೃಷಿಕ, ಸಾ. ಕೋಜಾ, ತಾ. ಗುಡಾಮಾಲಾನಿ, ಜಿ. ಬಾರಮೇರ್‌, ರಾಜಸ್ಥಾನ ಎಂದು ತಿಳಿಸಿದ್ದಾರೆ.

ವಿಚಾರಣೆಯಲ್ಲಿ ಮತ್ತೋರ್ವ ಆರೋಪಿ ವಿಕಾಸ್‌ಕುಮಾರ @ ವಿಕ್ಕಿ ತಂದೆ ಲೇಕರಾಜ್‌ ಬಿಷ್ಣೋಯಿ (30), ಜಾತಿ ಹಿಂದೂ ಬಿಷ್ಣೋಯಿ, ವೃತ್ತಿ ಕೃಷಿಕ, ಸಾ. ದಾತಾ, ತಾ. ಸಾಂಚೋರ್‌, ಜಿ. ಜಾಲೋರ್‌, ರಾಜಸ್ಥಾನ ಎಂಬಾತನೂ ತಮ್ಮೊಂದಿಗೆ ಸೇರಿಕೊಂಡಿದ್ದಾನೆ ಎಂದು ಆರೋಪಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಗಳ ಹೇಳಿಕೆಯಂತೆ, ಜುಲೈ 31ರಂದು ರಾತ್ರಿ ಸುಮಾರು 1 ಗಂಟೆ ವೇಳೆಗೆ ಹುಲಕೋಟಿಗೆ ಬಂದಿದ್ದ ಅವರು Autel ಕಂಪನಿಯ Professional Key Programming Tools ಬಳಸಿ ಸ್ಕಾರ್ಪಿಯೋ ಕಾರಿನ ಡೋರ್‌ ಲಾಕ್‌ ತೆರೆಯುವ ಮೂಲಕ ಕಾರನ್ನು ಕಳವು ಮಾಡಿದ್ದಾರೆ. ಬಳಿಕ ಗ್ರಾಮಗಳ ಮಾರ್ಗವಾಗಿ ನರಗುಂದ ದಾಟಿ ಯರಗಟ್ಟಿ ಕಡೆಗೆ ತೆರಳುತ್ತಿದ್ದಾಗ ಕಾರು ಕೆಟ್ಟು ನಿಂತಿದೆ.

ಕಾರು ಸ್ಥಳದಲ್ಲೇ ನಿಲ್ಲಿಸಿ ತಾವು ತೆಗೆದುಕೊಂಡು ಬಂದಿದ್ದ ಕ್ರೇಟಾ ಕಾರಿನಲ್ಲಿ ರಾಜಸ್ಥಾನದತ್ತ ತೆರಳಿದ್ದರು. ಸುಮಾರು 5–6 ದಿನಗಳ ಹಿಂದೆ ಅರವಿಂದಕುಮಾರ ಮತ್ತು ರಾಮಜೀವನ್‌ ಇದೇ ಕ್ರೇಟಾ ಕಾರನ್ನು ಬಳಸಿಕೊಂಡು ಕರ್ನಾಟಕಕ್ಕೆ ಬಂದು ಈ ಹಿಂದೆ ಸ್ಕಾರ್ಪಿಯೋ ಕಾರು ಕಳವು ಮಾಡಿದ್ದರು ಎನ್ನಲಾಗಿದೆ. ಕಳವು ಮಾಡಿದ ಕಾರನ್ನು ಅರ್ಧ ದಾರಿಯಲ್ಲಿ ಬಿಟ್ಟು ಹೋಗಿದ್ದು, ನಂತರ ಅದನ್ನು ಯಾರಾದರೂ ಮೆಕ್ಯಾನಿಕ್‌ ಹುಡುಕಿ ಚಾಲನೆ ಮಾಡಿಕೊಂಡು ತೆಗೆದುಕೊಂಡು ಹೋಗಬಹುದು ಎಂಬ ಉದ್ದೇಶದಿಂದ ಗದಗಕ್ಕೆ ಮೆಕ್ಯಾನಿಕ್‌ ಹುಡುಕಲು ಬಂದಿದ್ದಾಗಿ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ
ಮಹೀಂದ್ರಾ ಸ್ಕಾರ್ಪಿಯೋ ಕಾರು — ಬಿಳಿ ಬಣ್ಣ, ನೋಂದಣಿ ಸಂಖ್ಯೆ KA-35/N-5642, ಎಂಜಿನ್‌ ನಂ. SJF4G14119, ಚಾಸಿಸ್‌ ನಂ. MA1TA2SJXF2G45551. ಅಂದಾಜು ಮೌಲ್ಯ ₹8.15 ಲಕ್ಷ, ಹ್ಯುಂಡೈ ಕ್ರೇಟಾ ಕಾರು — ಬಿಳಿ ಬಣ್ಣ, ನೋಂದಣಿ ಫಲಕ ಇಲ್ಲ, ಕೀ ಸಮೇತ. ಎಂಜಿನ್‌ ನಂ. D4FARM285428, ಚಾಸಿಸ್‌ ನಂ. MALPB813LRM095165. ಅಂದಾಜು ಮೌಲ್ಯ ₹18 ಲಕ್ಷ, AUTEL ಕಂಪನಿಯ ನೀಲಿ ಮತ್ತು ಕಪ್ಪು ಬಣ್ಣದ Professional Key Programming Tool — ಅಂದಾಜು ಮೌಲ್ಯ ₹1 ಲಕ್ಷ,
ಕಳ್ಳತನಕ್ಕೆ ಬಳಸಿದ್ದ ಗುಲಾಬಿ ಬಣ್ಣದ ಒಂದು ಹಾಗೂ ಹಸಿರು ಬಣ್ಣದ ಒಂದು ಸ್ಕ್ರೂ ಡ್ರೈವರ್‌ ಹಾಗೂ
ಆರೋಪಿಗಳು ಹಾಜರುಪಡಿಸಿದ ಸ್ಕಾರ್ಪಿಯೋ ಕಾರಿನ ನಕಲಿ ಕೀ ಸೇರಿದಂತೆ ಒಟ್ಟು ₹27,15,000 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಗದಗ ಗ್ರಾಮೀಣ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರ ಗಡೇದ, ಪಿಎಸ್‌ಐಗಳಾದ ಎಸ್‌.ಬಿ. ಕವಲೂರ, ಪ್ರದೀಪ್‌ ತೋಟಗೇರ, ಸಿಬ್ಬಂದಿಗಳಾದ ಎಂ.ಬಿ. ವಡ್ಡಟ್ಟಿ, ಪ್ರಕಾಶ ಗಾಣಿಗೇರ, ಅನೀಲ ಬನ್ನಿಕೊಪ್ಪ, ಮಹೇಶ ಗೊಳಗೊಳಕಿ, ಎಂ.ಐ. ಪಾಟೀಲ, ಗುರು ಬೂದಿಹಾಳ ಹಾಗೂ ಗದಗದ ಎ.ಆರ್‌.ಎಸ್‌.ಐ. ಟೆಕ್ನಿಕಲ್‌ ಸೆಲ್‌ನ ಸಂಜು ಕೊರಡೂರ ಅವರು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪೊಲೀಸ್‌ ತಂಡದ ಉತ್ತಮ ಕಾರ್ಯಕ್ಕೆ ಗದಗ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೌರಸೇವಾ ನೌಕರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ನರಗುಂದ: ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನರಗುಂದ ಪುರಸಭೆ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೆ. 3ರಂದು ನಡೆಯಿತು.

ಚುನಾವಣಾಧಿಕಾರಿ ಸಂಗಮೇಶ ಬ್ಯಾಳಿ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶಾಖೆಯ ಅಧ್ಯಕ್ಷರಾಗಿ ಮುತ್ತಪ್ಪ ಪಿ. ನೀಲಗುಂದ, ಉಪಾಧ್ಯಕ್ಷರಾಗಿ ಮಹಾದೇವಪ್ಪ ಎಸ್. ಜೋಗಣ್ಣವರ ಹಾಗೂ ಕಾರ್ಯದರ್ಶಿಯಾಗಿ ರೆಹಮಾನ್ ಎ. ನದಾಫ್ ಅವರು ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆಯಲ್ಲಿ ಕರ್ನಾಟಕ ಪೌರಸೇವಾ ನೌಕರರ ಸೇವಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಲಾಲಸಾಬ ಮನಿಯಾರ, ರಾಜ್ಯ ಪರಿಷತ್ ಸದಸ್ಯ ಸಿದ್ದು ಹುಣಸಿಮರದ, ಗದಗ ಜಿಲ್ಲಾಧ್ಯಕ್ಷ ಮಹೇಶ ಹಡಪದ, ಕೊಪ್ಪಳ ಜಿಲ್ಲಾಧ್ಯಕ್ಷ ವಸಂತ ಬೆಲ್ಲದ, ಗದಗ ಜಿಲ್ಲಾ ನಿರ್ದೇಶಕರಾದ ಪಂಚಾಕ್ಷರಿ ದೊಡ್ಮನಿ ಹಾಗೂ ದ್ಯಾಮಣ್ಣ ರಾಮಗಿರಿ ಸೇರಿದಂತೆ ನರಗುಂದ ಪುರಸಭೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

‘ಅಹವಾಲು ನಿಮ್ಮದು; ಪರಿಹಾರ ನಮ್ಮದು’: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕರು ಸಲ್ಲಿಸುವ ಅಹವಾಲುಗಳನ್ನು ಸ್ವೀಕರಿಸಿ ಕಡತಕ್ಕೆ ಸೀಮಿತಗೊಳಿಸದೆ, ಸಮಸ್ಯೆ ಬಗೆಹರಿಯುವವರೆಗೆ ನಿರಂತರ ಅನುಸರಣೆ ನಡೆಸಿ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ ‘ಪ್ರಜಾ ಸೇವಾ ಅಭಿಯಾನ–ಜನ ಸಂಪರ್ಕ ಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಹಾಗೂ ‘ಅಹವಾಲು ನಿಮ್ಮದು, ಪರಿಹಾರ ನಮ್ಮದು’ ಎಂಬ ಆಶಯದೊಂದಿಗೆ ನಡೆಯುತ್ತಿರುವ ಅಭಿಯಾನವು ಸರ್ಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ. ಸಾರ್ವಜನಿಕರು ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸುವುದು ಇದರ ಉದ್ದೇಶವಾಗಿದೆ ಎಂದರು.

ಪ್ರತಿ ಶನಿವಾರ ಅಹವಾಲುಗಳ ಪರಿಶೀಲನೆ

ಪ್ರತಿ ಮನೆಗೂ ಅಹವಾಲು ಸಲ್ಲಿಸಲು ಅರ್ಜಿ ನಮೂನೆಗಳನ್ನು ನೀಡಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸ್ಪಷ್ಟವಾಗಿ ನಮೂದಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಜನ ಸಂಪರ್ಕ ಸಭೆಯಲ್ಲಿ ಸ್ವೀಕರಿಸಿದ ಅಹವಾಲುಗಳ ಮೇಲೆ ಕೈಗೊಂಡ ಕ್ರಮಗಳ ಕುರಿತು ಪ್ರತಿ ಶನಿವಾರ ಪರಿಶೀಲನೆ ನಡೆಸಲಾಗುವುದು. ಸಮಸ್ಯೆ ಇತ್ಯರ್ಥವಾಗುವವರೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಅನುಸರಣೆ ಮಾಡಲಾಗುವುದು ಎಂದು ಶ್ರೀಧರ್ ತಿಳಿಸಿದರು.

ಸರ್ಕಾರದ ವಿವಿಧ ಯೋಜನೆಗಳು, ಸೌಲಭ್ಯಗಳು ಹಾಗೂ ಇಲಾಖೆಗಳ ಸೇವೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಯಾವುದೇ ಕಾರಣಕ್ಕೂ ಅರ್ಹರು ಸೌಲಭ್ಯಗಳಿಂದ ವಂಚಿತರಾಗಬಾರದು. ಸಾರ್ವಜನಿಕರು ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪೊಲೀಸ್, ಅರಣ್ಯ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಕೆಲವು ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು. ಸ್ಥಳ ಪರಿಶೀಲನೆ, ದಾಖಲೆ ಪರಿಶೀಲನೆ ಅಥವಾ ಇಲಾಖೆಯ ಅನುಮತಿ ಅಗತ್ಯವಿದ್ದ ಪ್ರಕರಣಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ವಹಿಸಿ, ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಜನರ ಸಮಸ್ಯೆಗಳನ್ನು ಕೇವಲ ಅರ್ಜಿಗಳಾಗಿ ಪರಿಗಣಿಸದೆ, ಅವುಗಳ ಹಿಂದಿರುವ ವಾಸ್ತವಿಕ ಪರಿಸ್ಥಿತಿಯನ್ನು ಅರಿತು ಪರಿಹಾರ ಕಲ್ಪಿಸುವುದೇ ಜನ ಸಂಪರ್ಕ ಸಭೆಯ ಉದ್ದೇಶವಾಗಿದೆ. ಈ ಮೂಲಕ ಆಡಳಿತ ಮತ್ತು ಸಾರ್ವಜನಿಕರ ನಡುವಿನ ನೇರ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಹಾಯಕ ಆಯುಕ್ತ ಗಂಗಪ್ಪ ಎಂ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್. ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ವೆಂಕಟೇಶ್ ಆಲ್ಕೋಡ ಮತ್ತು ತಂಡ ನಾಡಗೀತೆ ಪ್ರಸ್ತುತಪಡಿಸಿದರು.

ಅಧಿಕಾರಿಗಳಿಗೆ ಸ್ಪಷ್ಟ ಹೊಣೆಗಾರಿಕೆ

ಅಹವಾಲು ಸ್ವೀಕರಿಸಿದ ಬಳಿಕ ಅದನ್ನು ಯಾವ ಇಲಾಖೆಗೆ ವಹಿಸಲಾಗಿದೆ, ಕೈಗೊಂಡ ಕ್ರಮವೇನು ಹಾಗೂ ಸಮಸ್ಯೆ ಇತ್ಯರ್ಥವಾಗಿದೆಯೇ ಎಂಬುದರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಲಿದೆ. ಹೀಗಾಗಿ ಜನ ಸಂಪರ್ಕ ಸಭೆ ಕೇವಲ ಅಹವಾಲು ಸ್ವೀಕಾರ ಕಾರ್ಯಕ್ರಮವಾಗದೆ, ಪರಿಹಾರಕ್ಕೆ ಹೊಣೆಗಾರಿಕೆ ನಿಗದಿಪಡಿಸುವ ವೇದಿಕೆಯಾಗಿ ರೂಪುಗೊಳ್ಳಲಿದೆ.

ಸಾರ್ವಜನಿಕರಿಂದ ಸ್ವೀಕರಿಸುವ ಪ್ರತಿಯೊಂದು ಅರ್ಜಿಯೂ ಸಂಬಂಧಿಸಿದ ಇಲಾಖೆಯ ಗಮನಕ್ಕೆ ಹೋಗಬೇಕು. ಅರ್ಜಿ ಸ್ವೀಕರಿಸಿ ಅಲ್ಲಿಗೇ ಕೈಬಿಡುವ ವ್ಯವಸ್ಥೆ ಇದಲ್ಲ. ಸಮಸ್ಯೆ ಬಗೆಹರಿಯುವವರೆಗೆ ಅನುಸರಣೆ ನಡೆಸಲಾಗುವುದು. ಅರ್ಜಿಯ ಕುರಿತು ಕೈಗೊಂಡ ಕ್ರಮ ಹಾಗೂ ದೊರೆತ ಪರಿಹಾರದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ.

— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಜನರ ಸಮಸ್ಯೆಗಳಿಗೆ ಅಧಿಕಾರಿಗಳ ಸ್ಪಂದನೆ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಜಿಲ್ಲಾಡಳಿತ, ತಾಲೂಕು ಆಡಳಿತ, ಡಂಬಳ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ 175 ಅರ್ಜಿಗಳು ಸಲ್ಲಿಕೆಯಾದವು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಯರಿಸ್ವಾಮಿ, ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ಪ್ರಜಾಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪಿಂಚಣಿ, ಪಹಣಿ, ಪಡಿತರ ಚೀಟಿ, ಕಂದಾಯ, ವಿದ್ಯುತ್, ಕುಡಿಯುವ ನೀರು, ಚರಂಡಿ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳು ಹಾಗೂ ದೂರುಗಳನ್ನು ಸ್ವೀಕರಿಸಲಾಯಿತು. ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ನಿಗದಿತ ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಯಲಿವಾಳ ಹಾಗೂ ಬಿಇಒ ಗಂಗಾಧರ ಅಣ್ಣಿಗೇರಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸುವುದು ಅಭಿಯಾನದ ಉದ್ದೇಶವಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಡಂಬಳ ಹೋಬಳಿಯ ವಿವಿಧ ಗ್ರಾಮಗಳಿಂದ ಸಲ್ಲಿಕೆಯಾದ ಅರ್ಜಿಗಳಲ್ಲಿ ಆಶ್ರಯ ಮನೆಗಳ ಬೇಡಿಕೆ ಹೆಚ್ಚಿನ ಸಂಖ್ಯೆಯಲ್ಲಿತ್ತು. ಡಂಬಳ ಎಪಿಎಂಸಿಯಲ್ಲಿ ವಿದ್ಯುತ್ ದೀಪ ಅಳವಡಿಕೆ, ಸಿದ್ಧಲಿಂಗಪ್ಪ ಪ್ಲಾಟ್‌ಗೆ ತೆರಳುವ ರಸ್ತೆಯ ಕಂಬಗಳಿಗೆ ಬೀದಿ ದೀಪ, ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ, ನೂತನ ಕೆರೆ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು.

ಮುಂಡರಗಿ ಉಪತಹಸೀಲ್ದಾರ್ ಬಿ.ಎಸ್. ಕನ್ನೂರ ಅವರು ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದರು.

ಸಮಾಜ ಕಲ್ಯಾಣ ಇಲಾಖೆಯ ಅಂತರಜಾತಿ ವಿವಾಹ ಪ್ರೋತ್ಸಾಹ ಯೋಜನೆಯಡಿ ಜಂತ್ಲಿ ಶಿರೂರ ಗ್ರಾಮದ ರವಿ ಕೋಟೆಪ್ಪ ಹೊಸಮನಿ ಮತ್ತು ರಕ್ಷಿತಾ ದಂಪತಿಗೆ ₹1.50 ಲಕ್ಷ ಮೊತ್ತದ ಠೇವಣಿ ಬಾಂಡ್ ವಿತರಿಸಲಾಯಿತು. ಅಂಗವಿಕಲರ ಹಾಗೂ ವೃದ್ಧಾಪ್ಯ ಮಾಶಾಸನದ ಮಂಜೂರಾತಿ ಪತ್ರಗಳನ್ನು ಸ್ಥಳದಲ್ಲಿಯೇ ನೀಡಲಾಯಿತು.

ಕಾರ್ಯಕ್ರಮಕ್ಕೆ ಕೆಲವು ಇಲಾಖೆಗಳ ಸ್ಥಳೀಯ ಅಧಿಕಾರಿಗಳು ಆಗಮಿಸದೆ ತಮ್ಮ ಸಿಬ್ಬಂದಿಯನ್ನು ಕಳುಹಿಸಿರುವುದು ಕಂಡುಬಂತು.

ಕಾರ್ಯಕ್ರಮದಲ್ಲಿ ಇಒ ವಿಜಯಕುಮಾರ ಬೆಣ್ಣಿ, ತೋಟಗಾರಿಕಾ ಹಿರಿಯ ಅಧಿಕಾರಿ ಮಹಮ್ಮದ್ ರಫೀಕ್ ತಾಂಬೋಟಿ, ಡಂಬಳ ಉಪ ತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ಅರಣ್ಯ ವಲಯ ಅಧಿಕಾರಿ ಮಂಜುನಾಥ ಮೇಗಲಮನಿ, ಪಶುವೈದ್ಯಾಧಿಕಾರಿ ಡಾ. ಎಸ್.ವಿ. ತಿಗರಿಮಠ, ಉಪತಹಸೀಲ್ದಾರ್ ಚಿದಾನಂದ ಬಳೂಟಗಿ, ಕಾರ್ಯಪಾಲಕ ಅಭಿಯಂತರ ನಾಗೇಂದ್ರ ಪಟ್ಟಶೆಟ್ಟರ್, ಸಿಪಿಐ ಅಯ್ಯನಗೌಡ ಪಾಟೀಲ, ಡಂಬಳ ಗ್ರಾಪಂ ಆಡಳಿತಾಧಿಕಾರಿ ಗುರುರಾಜ ಚವ್ಹಾಣ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಬದಲು ಜನರ ಸಮಸ್ಯೆಗಳನ್ನು ಅವರ ಬಳಿಯೇ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ನೀಡುವುದು ಪ್ರಜಾಸೇವಾ ಆಂದೋಲನದ ಉದ್ದೇಶ. ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ರವಾನಿಸಿ, ನಿಯಮಾನುಸಾರ ಶೀಘ್ರ ಪರಿಹಾರ ಒದಗಿಸಲಾಗುವುದು.

— ಯರಿಸ್ವಾಮಿ, ತಹಸೀಲ್ದಾರ್