Home Blog

ಚೆನ್ನೈ ಸೂಪರ್ ಕಿಂಗ್ಸ್ʼನ ಮುಂದಿನ ಕೋಚ್ ಆಗ್ತಾರಾ ದಿನೇಶ್ ಕಾರ್ತಿಕ್? ಮಾಜಿ ಆಟಗಾರ ಕೊಟ್ಟ ಕಾರಣಗಳೇನು?

0

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ದೀರ್ಘಕಾಲದ ಯಶಸ್ಸಿನ ಪ್ರಮುಖ ರೂವಾರಿ ಸ್ಟೀಫನ್ ಫ್ಲೆಮಿಂಗ್ ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೀಗಾಗಿ ಸಿಎಸ್‌ಕೆ ಮುಖ್ಯ ಕೋಚ್ ಸ್ಥಾನ ತೆರವಾಗಿದ್ದು, ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಐಪಿಎಲ್ ವಲಯದಲ್ಲಿ ಜೋರಾಗಿದೆ.

ಈ ಬೆನ್ನಲ್ಲೇ ಸಿಎಸ್‌ಕೆ ತಂಡದ ಮಾಜಿ ಆಟಗಾರ ಹಾಗೂ ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್, ಭಾರತದ ಮಾಜಿ ವಿಕೆಟ್‌ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ಹೆಸರನ್ನು ಬಲವಾಗಿ ಶಿಫಾರಸು ಮಾಡಿದ್ದಾರೆ. 2027ರ ಐಪಿಎಲ್ ಆವೃತ್ತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ದಿನೇಶ್ ಕಾರ್ತಿಕ್ ‘ಪರ್ಫೆಕ್ಟ್’ ಅಭ್ಯರ್ಥಿ ಎಂದು ಹೇಡನ್ ಅಭಿಪ್ರಾಯಪಟ್ಟಿದ್ದಾರೆ.

ದಿನೇಶ್ ಕಾರ್ತಿಕ್ ಅವರನ್ನು ಸಿಎಸ್‌ಕೆ ಕೋಚ್ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಹೇಡನ್ ಪರಿಗಣಿಸಲು ಪ್ರಮುಖ ಕಾರಣವೆಂದರೆ ಅವರ ಚೆನ್ನೈ ಹಾಗೂ ತಮಿಳುನಾಡಿನ ಕ್ರಿಕೆಟ್‌ನೊಂದಿಗಿನ ನಂಟು. ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಬೃಹತ್ ಫ್ರಾಂಚೈಸಿಗೆ ಸ್ಥಳೀಯ ಕ್ರಿಕೆಟ್ ಸಂಸ್ಕೃತಿಯನ್ನು ಆಳವಾಗಿ ಅರ್ಥಮಾಡಿಕೊಂಡಿರುವ ಕೋಚ್ ಅಗತ್ಯವಿದೆ ಎಂದು ಹೇಡನ್ ಹೇಳಿದ್ದಾರೆ.

ಚೆನ್ನೈ ಮೂಲದ ದಿನೇಶ್ ಕಾರ್ತಿಕ್, ತಮಿಳುನಾಡು ದೇಶೀಯ ಕ್ರಿಕೆಟ್ ತಂಡವನ್ನು ದೀರ್ಘಕಾಲ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಸ್ಥಳೀಯ ಆಟಗಾರರು, ಕ್ರಿಕೆಟ್ ವ್ಯವಸ್ಥೆ ಹಾಗೂ ಚೆನ್ನೈನ ಕ್ರಿಕೆಟ್ ಸಂಸ್ಕೃತಿಯ ಬಗ್ಗೆ ಅವರಿಗಿರುವ ಜ್ಞಾನ ಸಿಎಸ್‌ಕೆ ತಂಡಕ್ಕೆ ನೆರವಾಗಬಹುದು ಎಂಬುದು ಹೇಡನ್ ಅವರ ಅಭಿಪ್ರಾಯ.

ಇನ್ನು ದಿನೇಶ್ ಕಾರ್ತಿಕ್ ಅವರ ಕೋಚಿಂಗ್ ಸಾಮರ್ಥ್ಯವನ್ನು ತೋರಿಸುವ ಮತ್ತೊಂದು ಪ್ರಮುಖ ಅಂಶವೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗಿನ ಅವರ ಯಶಸ್ವಿ ಕಾರ್ಯನಿರ್ವಹಣೆ. ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಕಾರ್ತಿಕ್ ಕೆಲಸ ಮಾಡುತ್ತಿದ್ದು, ಅವರ ಮಾರ್ಗದರ್ಶನ ತಂಡಕ್ಕೆ ಮಹತ್ವದ ನೆರವು ನೀಡಿದೆ ಎಂದು ಹೇಡನ್ ಹೇಳಿದ್ದಾರೆ.

ಅಲ್ಲದೆ, ಐಪಿಎಲ್‌ನಂತಹ ಒತ್ತಡದ ಟೂರ್ನಿಯಲ್ಲಿ ಆಟಗಾರರನ್ನು ನಿಭಾಯಿಸುವ ಸಾಮರ್ಥ್ಯವೂ ದಿನೇಶ್ ಕಾರ್ತಿಕ್ ಅವರಲ್ಲಿದೆ ಎಂದು ಹೇಡನ್ ಅಭಿಪ್ರಾಯಪಟ್ಟಿದ್ದಾರೆ. ಸಿಎಸ್‌ಕೆ ತಂಡದಂತಹ ಯಶಸ್ವಿ ಫ್ರಾಂಚೈಸಿಯಲ್ಲಿ ಅಭಿಮಾನಿಗಳ ನಿರೀಕ್ಷೆ ಹಾಗೂ ಒತ್ತಡ ಯಾವ ಮಟ್ಟದಲ್ಲಿರುತ್ತದೆ ಎಂಬುದನ್ನು ಅರ್ಥಮಾಡಿಕೊಂಡು ಕೆಲಸ ಮಾಡುವ ಸಾಮರ್ಥ್ಯ ಡಿಕೆ ಅವರಲ್ಲಿದೆ ಎಂದು ಅವರು ಶ್ಲಾಘಿಸಿದ್ದಾರೆ.

ಸ್ಟೀಫನ್ ಫ್ಲೆಮಿಂಗ್ ಅವರ ನಿರ್ಗಮನದ ಬಳಿಕ ಸಿಎಸ್‌ಕೆ ಮುಖ್ಯ ಕೋಚ್ ಹುದ್ದೆಗೆ ಎಂ.ಎಸ್. ಧೋನಿ, ಮೈಕಲ್ ಹಸ್ಸಿ ಹಾಗೂ ಇಯಾನ್ ಮಾರ್ಗನ್ ಸೇರಿದಂತೆ ಹಲವು ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ಆದರೆ ಈ ಕುರಿತು ಸಿಎಸ್‌ಕೆ ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಮ್ಯಾಥ್ಯೂ ಹೇಡನ್ ಅವರ ದಿನೇಶ್ ಕಾರ್ತಿಕ್ ಕುರಿತ ಹೇಳಿಕೆ ಸದ್ಯಕ್ಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಸಿಎಸ್‌ಕೆ ಅಂತಿಮವಾಗಿ ಯಾರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಸ್ಟೀಫನ್ ಫ್ಲೆಮಿಂಗ್ ಅವರ ಸುದೀರ್ಘ ಪಯಣ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಸಿಎಸ್‌ಕೆ ತಂಡದಲ್ಲಿ ಹೊಸ ಯುಗ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ‘ಮುಂದಿನ ಕೋಚ್ ಯಾರು?’ ಎಂಬ ಪ್ರಶ್ನೆಗೆ ದಿನೇಶ್ ಕಾರ್ತಿಕ್ ಅವರ ಹೆಸರು ಇದೀಗ ಪ್ರಮುಖವಾಗಿ ಕೇಳಿಬರುತ್ತಿದ್ದು, ಅಂತಿಮ ನಿರ್ಧಾರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಶತಕ ಬಾರಿಸಿ ಟಿಮ್ ಸೈಫರ್ಟ್ ಡಿಫರೆಂಟ್ ಸೆಲೆಬ್ರೇಷನ್: ಸೆಂಚುರಿ ಬಳಿಕ ಕಿವೀಸ್ ಆಟಗಾರನ ಸಂಭ್ರಮ ವೈರಲ್!

0

ಕೆರಿಬಿಯನ್ ಪ್ರೀಮಿಯರ್ ಲೀಗ್‌ (CPL 2026)ನ 17ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್ ಟಿಮ್ ಸೈಫರ್ಟ್ ಸ್ಫೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸೈಫರ್ಟ್, ಕೇವಲ 61 ಎಸೆತಗಳಲ್ಲಿ ಅಜೇಯ 105 ರನ್ ಬಾರಿಸುವ ಮೂಲಕ ಈ ಆವೃತ್ತಿಯ ಮೊದಲ ಶತಕ ದಾಖಲಿಸಿದ್ದಾರೆ.

https://x.com/CPL/status/2092775538163081700

ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಟಿಆರ್‌ಕೆ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಸೈಫರ್ಟ್, ತಮ್ಮ ಅಮೋಘ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸೇಂಟ್ ಲೂಸಿಯಾ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಶತಕ ಪೂರ್ಣಗೊಳಿಸಿದ ಬಳಿಕ ಟಿಮ್ ಸೈಫರ್ಟ್ ಅವರ ಸಂಭ್ರಮಾಚರಣೆ ಕೂಡ ಅಭಿಮಾನಿಗಳ ಗಮನ ಸೆಳೆಯಿತು. ಶತಕದ ಬಳಿಕ ಹೆಲ್ಮೆಟ್ ತೆಗೆದು ಬ್ಯಾಟ್ ಎತ್ತಿದ ಸೈಫರ್ಟ್, ಮೈದಾನದಲ್ಲೇ ವಿಭಿನ್ನ ರೀತಿಯಲ್ಲಿ ಕುಣಿದು ಸಂಭ್ರಮಿಸಿದರು. ನ್ಯೂಜಿಲೆಂಡ್ ಆಟಗಾರನ ಈ ಮೋಜಿನ ನೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

211 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಕ್ಕೆ ಸೇಂಟ್ ಲೂಸಿಯಾ ಕಿಂಗ್ಸ್ ಬೌಲರ್‌ಗಳು ಯಾವುದೇ ಅವಕಾಶ ನೀಡಲಿಲ್ಲ. ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಟಿಕೆಆರ್ ತಂಡ ನಿಗದಿತ ಓವರ್‌ಗಳಲ್ಲಿ 175 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸೇಂಟ್ ಲೂಸಿಯಾ ಕಿಂಗ್ಸ್ 36 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಇನ್ನು ಟಿಮ್ ಸೈಫರ್ಟ್ ಅವರ ಈ ಶತಕವು ಅವರ ಸದ್ಯದ ಅಮೋಘ ಫಾರ್ಮ್‌ಗೆ ಮತ್ತೊಂದು ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಯುಕೆಯಲ್ಲಿ ನಡೆದ ‘ದಿ ಹಂಡ್ರೆಡ್ 2026’ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೈಫರ್ಟ್, ಟೂರ್ನಿಯ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿಯನ್ನೂ ಗೆದ್ದಿದ್ದರು.

ಇದೀಗ ಅದೇ ಅದ್ಭುತ ಫಾರ್ಮ್ ಅನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಮುಂದುವರಿಸಿರುವ ಸೈಫರ್ಟ್, ಸಿಪಿಎಲ್‌ನಲ್ಲಿ ಎರಡು ಶತಕಗಳನ್ನು ದಾಖಲಿಸಿದ ಬ್ಯಾಟರ್‌ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಇದಕ್ಕೂ ಮುನ್ನ 2025ರ ಸಿಪಿಎಲ್ ಆವೃತ್ತಿಯಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಪರ ಆಡಿದ್ದ ಸೈಫರ್ಟ್, ಆಂಟಿಗುವಾ ಮತ್ತು ಬಾರ್ಬುಡಾ ಫಾಲ್ಕನ್ಸ್ ವಿರುದ್ಧ ಕೇವಲ 53 ಎಸೆತಗಳಲ್ಲಿ ಅಜೇಯ 125 ರನ್ ಸಿಡಿಸಿದ್ದರು. ಇದೀಗ ಮತ್ತೊಮ್ಮೆ ಅದೇ ತಂಡದ ಪರ ಅಬ್ಬರಿಸಿರುವ ಅವರು, ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧ 61 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿ ತಮ್ಮ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.

ಕಬ್ಬಿನ ಗದ್ದೆಯಲ್ಲಿ 4 ಚಿರತೆ ಮರಿಗಳು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

0

ರಾಮನಗರ: ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದಲ್ಲಿ ಕಬ್ಬಿನ ಗದ್ದೆಯೊಂದರಲ್ಲಿ ನಾಲ್ಕು ಚಿರತೆ ಮರಿಗಳು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ರೈತ ನಾಗೇಶ್ ಅವರ ಕಬ್ಬಿನ ಗದ್ದೆಯಲ್ಲಿ ಸುಮಾರು ನಾಲ್ಕೈದು ದಿನಗಳ ಪ್ರಾಯದ ನಾಲ್ಕು ಚಿರತೆ ಮರಿಗಳು ಕಂಡುಬಂದಿವೆ. ಮರಿಗಳನ್ನು ಕಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಮರಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವುಗಳ ತಾಯಿ ಚಿರತೆ ಸುತ್ತಮುತ್ತಲೇ ಇರುವ ಸಾಧ್ಯತೆಯಿದ್ದು, ಅದರ ಚಲನವಲನದ ಮೇಲೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ನಿಗಾ ಇರಿಸಿದೆ. ಚಿರತೆಯನ್ನು ಸೆರೆಹಿಡಿಯಲು ಸೂಕ್ತ ಸ್ಥಳದಲ್ಲಿ ಬೋನ್ ಅಳವಡಿಸುವ ಕಾರ್ಯಕ್ಕೂ ಇಲಾಖೆ ಮುಂದಾಗಿದೆ.

ಕಬ್ಬಿನ ಗದ್ದೆಯಲ್ಲಿ ಏಕಾಏಕಿ ನಾಲ್ಕು ಚಿರತೆ ಮರಿಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದ್ದು, ಅರಣ್ಯ ಇಲಾಖೆ ಮುಂದಿನ ಕ್ರಮದತ್ತ ಗಮನಹರಿಸಿದೆ.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸರ್ಕಾರದ ‘ಮಾಸ್ಟರ್ ಪ್ಲ್ಯಾನ್’: ಖಾದರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

0

ಬೆಂಗಳೂರು: ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಸಂಪುಟದ ಉಪಸಮಿತಿ ರಚಿಸಿದೆ.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗೃಹ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ್ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉಪಸಮಿತಿಯ ಸದಸ್ಯರಾಗಿದ್ದಾರೆ.

ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವುದು, ಪರೀಕ್ಷೆ ಮತ್ತು ನೇಮಕಾತಿಗೆ ನಿಗದಿತ ವೇಳಾಪಟ್ಟಿ ರೂಪಿಸುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಸಮಿತಿ ಪರಿಶೀಲಿಸಲಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣ, ಕೋಚಿಂಗ್ ಕೇಂದ್ರಗಳ ಮೇಲ್ವಿಚಾರಣೆ ಹಾಗೂ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಮೇಲಿನ ಶಿಕ್ಷಣದ ಆರ್ಥಿಕ ಹೊರೆಯನ್ನು ತಗ್ಗಿಸುವ ಮಾರ್ಗಗಳ ಬಗ್ಗೆಯೂ ಉಪಸಮಿತಿ ಅಧ್ಯಯನ ನಡೆಸಲಿದೆ.

ಇದರ ಜತೆಗೆ ಸರ್ಕಾರಿ ಶಾಲೆಗಳು, ಪಿಯು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಣೆ, ಶಿಕ್ಷಕರ ಕೊರತೆ ನಿವಾರಣೆ, ಪ್ರಯೋಗಾಲಯ, ಗ್ರಂಥಾಲಯ ಮತ್ತು ಹಾಸ್ಟೆಲ್ ಸೇರಿದಂತೆ ಅಗತ್ಯ ಸೌಲಭ್ಯಗಳ ಅಭಿವೃದ್ಧಿಗೂ ಆದ್ಯತೆ ನೀಡಲಿದೆ.

ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಮತ್ತು ಅಗತ್ಯ ಸುಧಾರಣಾ ಕ್ರಮಗಳ ಕುರಿತು ಉಪಸಮಿತಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಿದೆ.

ನೇಪಾಳ ಪ್ರವಾಹದಲ್ಲಿ ಕನ್ನಡಿಗರಿಗೆ ಸಂಕಷ್ಟ: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಬೆಂಗಳೂರಿನ ನಾಲ್ವರು ಎನ್‌ಆರ್‌ಐ ನಾಪತ್ತೆ

0

ಬೆಂಗಳೂರು: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ನಡುವೆ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಬೆಂಗಳೂರಿನ ಮೂಲದ ನಾಲ್ವರು ಎನ್‌ಆರ್‌ಐ ಕನ್ನಡಿಗರು ನಾಪತ್ತೆಯಾಗಿದ್ದಾರೆ.

ಮೂಲತಃ ಬೆಂಗಳೂರಿನವರಾಗಿದ್ದು, ಸದ್ಯ ಅಮೆರಿಕದಲ್ಲಿ ನೆಲೆಸಿರುವ ನಾಲ್ವರು ಯಾತ್ರಿಕರು ಮಾನಸ ಸರೋವರ ಯಾತ್ರೆಗಾಗಿ ಅಮೆರಿಕದಿಂದ ನೇಪಾಳಕ್ಕೆ ತೆರಳಿದ್ದರು. ಪ್ರವಾಹ ಸಂಭವಿಸಿದ ಪ್ರದೇಶದಲ್ಲಿದ್ದ ಚೀನಾ ರಾಯಭಾರ ಕಚೇರಿಗೆ ತೆರಳಿದ್ದ ಅವರು, ದುರಂತದ ಬಳಿಕ ಸ್ನೇಹಿತರು ಹಾಗೂ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ನಾಲ್ವರು ನಾಪತ್ತೆಯಾಗಿರುವ ಕುರಿತು ಅವರ ಸ್ನೇಹಿತರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದು, ಪತ್ತೆ ಹಾಗೂ ರಕ್ಷಣೆಗೆ ನೆರವು ಕೋರಿದ್ದಾರೆ.

ಕರ್ನಾಟಕದ ಇಬ್ಬರು ಸುರಕ್ಷಿತ

ಇದೇ ವೇಳೆ ಹೈದರಾಬಾದ್‌ನ 23 ಮಂದಿ ಹಾಗೂ ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 25 ಮಂದಿಯ ತಂಡ ನೇಪಾಳ ಪ್ರವಾಸ ಕೈಗೊಂಡಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಹಾಗೂ ಸಂಗಮೇಶ್ ಕನಕಪುರ ಅವರನ್ನು ಕೆಎಸ್‌ಡಿಎಂಎ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದೆ.

ಇಬ್ಬರೂ ಸುರಕ್ಷಿತವಾಗಿದ್ದು, ಅವರನ್ನು ಅಪಾಯದ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ರಕ್ಷಿಸಲ್ಪಟ್ಟ ಇಬ್ಬರು ಕನ್ನಡಿಗರನ್ನು ನೇಪಾಳದಿಂದ ನವದೆಹಲಿಗೆ ಕರೆತರಲು ರಾಜ್ಯ ಸರ್ಕಾರ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುತ್ತಿದೆ. ಮತ್ತೊಂದೆಡೆ, ನಾಪತ್ತೆಯಾಗಿರುವ ಬೆಂಗಳೂರಿನ ನಾಲ್ವರು ಎನ್‌ಆರ್‌ಐ ಕನ್ನಡಿಗರ ಪತ್ತೆಗಾಗಿ ಅಧಿಕಾರಿಗಳು ಸಂಪರ್ಕ ಹಾಗೂ ರಕ್ಷಣಾ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

ಡೈನಾಮಿಕ್ ಕುಟುಂಬದಲ್ಲಿ ಮದುವೆ ಸಂಭ್ರಮ: ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಣಮ್ ದೇವರಾಜ್

ಬೆಂಗಳೂರು: ಡೈನಾಮಿಕ್ ಸ್ಟಾರ್ ದೇವರಾಜ್ ಕುಟುಂಬದಲ್ಲಿ ಮತ್ತೊಂದು ಸಂಭ್ರಮ ಮನೆಮಾಡಿದೆ. ದೇವರಾಜ್ ಅವರ ಕಿರಿಯ ಪುತ್ರ ಹಾಗೂ ನಟ ಪ್ರಣಮ್ ದೇವರಾಜ್ ಅವರು ತಮ್ಮ ಪ್ರೇಯಸಿ ನಮಿತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಆಪ್ತರು, ಕುಟುಂಬದ ಹಿರಿಯರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಣಮ್ ಮತ್ತು ನಮಿತಾ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ತಮ್ಮ ಸಂಬಂಧವನ್ನು ವೈವಾಹಿಕ ಜೀವನದತ್ತ ಕೊಂಡೊಯ್ಯುವ ಅಧಿಕೃತ ಹೆಜ್ಜೆ ಇಟ್ಟಿದ್ದಾರೆ.

ಈ ವಿಶೇಷ ಸಮಾರಂಭದ ಉಸ್ತುವಾರಿಯನ್ನು ಪ್ರಣಮ್ ಅವರ ಸಹೋದರ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ವಹಿಸಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಆತ್ಮೀಯರು ನವಜೋಡಿಗೆ ಶುಭ ಹಾರೈಸಿದರು.

ಪ್ರಣಮ್ ಮತ್ತು ನಮಿತಾ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಎಂದು ಮೂಲಗಳು ತಿಳಿಸಿದ್ದು, ವಿವಾಹದ ದಿನಾಂಕ ಇನ್ನಷ್ಟೇ ಅಧಿಕೃತವಾಗಿ ಪ್ರಕಟವಾಗಬೇಕಿದೆ.

ಪ್ರಣಮ್ ದೇವರಾಜ್ ‘ಕುಮಾರಿ 21 ಎಫ್’ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿದ್ದರು. ಬಳಿಕ ‘ಸನ್ ಆಫ್ ಮುತ್ತಣ್ಣ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಕಮರ್ಷಿಯಲ್ ಯಶಸ್ಸಿನ ನಿರೀಕ್ಷೆಯಲ್ಲಿರುವ ಪ್ರಣಮ್, ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುತ್ತಿದ್ದಾರೆ.

ಇದೀಗ ಸಿನಿಮಾದಾಚೆಗಿನ ಬದುಕಿನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿರುವ ಪ್ರಣಮ್ ದೇವರಾಜ್ ಮತ್ತು ನಮಿತಾ ಜೋಡಿಗೆ ಅಭಿಮಾನಿಗಳು ಹಾಗೂ ಸ್ಯಾಂಡಲ್‌ವುಡ್‌ನಿಂದ ಶುಭಾಶಯಗಳು ಹರಿದುಬರುತ್ತಿವೆ.

ಸರ್ಕಾರಕ್ಕೆ ಎದುರಾದ ಸಂಕಷ್ಟ ತಪ್ಪಿಸಲು ನಾಗೇಂದ್ರ ರಾಜೀನಾಮೆ? ಇಂದು ಹೈಕಮಾಂಡ್ ಜೊತೆ ಡಿಕೆಶಿ ಚರ್ಚೆ ಸಾಧ್ಯತೆ!

0

ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಅನುಮತಿ ಕೋರಿರುವ ಬೆನ್ನಲ್ಲೇ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

ಈ ಪ್ರಕರಣದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಧ್ಯಪ್ರವೇಶಿಸಿದ್ದು, ನಾಗೇಂದ್ರ ಸಚಿವರಾಗಿ ಮುಂದುವರಿಯುವ ಕುರಿತು ಸರ್ಕಾರದಿಂದ ಸ್ಪಷ್ಟನೆ ಕೇಳಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರ ಮಧ್ಯಪ್ರವೇಶದ ಬಳಿಕ ಸರ್ಕಾರಕ್ಕೆ ಮುಜುಗರ ತಪ್ಪಿಸಲು ನಾಗೇಂದ್ರ ಸಚಿವ ಸ್ಥಾನ ತ್ಯಜಿಸುವ ಪ್ರಸ್ತಾಪ ಮುಂದಿಟ್ಟಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತನಾಡಿ ರಾಜೀನಾಮೆ ನೀಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ಡಿ.ಕೆ. ಶಿವಕುಮಾರ್ ಗುರುವಾರ ನವದೆಹಲಿಗೆ ತೆರಳಲಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಶಿವಕುಮಾರ್, ನಾಗೇಂದ್ರ ನಿರಪರಾಧಿ ಎಂದು ಪುನರುಚ್ಚರಿಸಿದ್ದು, ತಮ್ಮ ದೆಹಲಿ ಪ್ರವಾಸಕ್ಕೂ ನಾಗೇಂದ್ರ ರಾಜೀನಾಮೆ ಪ್ರಸ್ತಾಪಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ಸೆಪ್ಟೆಂಬರ್ 1ರಿಂದ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ 10 ದಿನಗಳ ಪಾದಯಾತ್ರೆಯೂ ಈ ರಾಜೀನಾಮೆ ಪ್ರಸ್ತಾಪಕ್ಕೆ ಮತ್ತೊಂದು ಕಾರಣವಾಗಿರಬಹುದು ಎನ್ನಲಾಗಿದೆ. ರಾಯಚೂರಿನಿಂದ ಆರಂಭವಾಗಿ ಬಳ್ಳಾರಿಯಲ್ಲಿ ಅಂತ್ಯಗೊಳ್ಳಲಿರುವ ಈ ಪಾದಯಾತ್ರೆ ಮೂಲಕ, ಪರಿಶಿಷ್ಟ ಪಂಗಡದ ನಾಯಕ ಸಮುದಾಯದ ಪ್ರಾಬಲ್ಯವಿರುವ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಎಸ್‌ಟಿ ಸಮುದಾಯದ ಸಚಿವರು ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರ್ಬಳಕೆ ಮಾಡಿದ್ದಾರೆ ಎಂಬ ರಾಜಕೀಯ ಸಂದೇಶ ನೀಡಲು ಬಿಜೆಪಿ ಮುಂದಾಗಿದೆ.

ಈ ನಡುವೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಶಿವಕುಮಾರ್, ನಾಗೇಂದ್ರ ನಿರಪರಾಧಿಯಾಗಿದ್ದರೂ ಪಕ್ಷದ ಹಿತದೃಷ್ಟಿಯಿಂದ ಒತ್ತಡದಿಂದಾಗಿ ಎರಡು ವರ್ಷಗಳ ಹಿಂದೆ ಅವರು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು ಎಂದರು. ನಾಗೇಂದ್ರ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಅವರ ನಾಯಕತ್ವದ ಮೇಲೆ ವಿಶ್ವಾಸವಿದೆ ಎಂದ ಅವರು, ಅವರ ರಾಜೀನಾಮೆಯನ್ನು ಅಂಗೀಕರಿಸುವ ಯಾವುದೇ ಯೋಜನೆ ಸದ್ಯಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅನೈತಿಕ ಸಂಬಂಧದ ಶಂಕೆ! ಯುವಕನ ಮನೆಗೆ ನುಗ್ಗಿ ಬಡಿಗೆ-ಕಟ್ಟಿಗೆಯಿಂದ ಥಳಿಸಿ ಭೀಕರ ಕೊಲೆ, ಮಹಿಳೆ ಸೇರಿ ನಾಲ್ವರು ಅರೆಸ್ಟ್!

0

 ಲಕ್ಷ್ಮೇಶ್ವರ:- ಅನೈತಿಕ ಸಂಬಂಧದ ಶಂಕೆಯಿಂದ ಹುಟ್ಟಿಕೊಂಡ ದ್ವೇಷ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಜರುಗಿದೆ.

ಎಸ್, ತಾಲೂಕಿನ ಪುಟಂಗಾವ್ ಬಡ್ನಿ ಗ್ರಾಮದಲ್ಲಿ ಯುವಕನ ಮನೆಯ ಅಂಗಳದಲ್ಲೇ ಬಡಿಗೆ ಹಾಗೂ ಕಟ್ಟಿಗೆ ಮಣೆಯಿಂದ ಭೀಕರವಾಗಿ ಥಳಿಸಿ ಆರೋಪಿಗಳು ಕೊಲೆಗೈದಿದ್ದಾರೆ. ಈರಣ್ಣ ಷಣ್ಮುಖಪ್ಪ ಅಗಸಿಬಾಗಿಲು(34) ಕೊಲೆಯಾದ ಯುವಕ. ಈತ ವೃತ್ತಿಯಲ್ಲಿ ಕುರಿಕಾಯುತ್ತಿದ್ದ ಎನ್ನಲಾಗಿದೆ.

ಮೃತ ಈರಣ್ಣ ಹಾಗೂ ಗ್ರಾಮದ ರೇಣುಕಾ ನಡುವೆ ಅನೈತಿಕ ಸಂಬಂಧವಿದೆ ಎಂಬ ಶಂಕೆಯೇ ಈ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವಿಷಯವಾಗಿ ಈ ಹಿಂದೆ ಹಲವು ಬಾರಿ ಜಗಳ ನಡೆದಿದ್ದು, ಸುಮಾರು ಎರಡು ವರ್ಷಗಳ ಹಿಂದೆ ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ರಾಜೀ ಮಾಡಿಸಿದ್ದರು ಎನ್ನಲಾಗಿದೆ. ಆದರೆ, ಸಂಶಯ ಮತ್ತು ದ್ವೇಷ ಮಾತ್ರ ಕೊನೆಗೊಂಡಿರಲಿಲ್ಲ ಎಂಬುದು ಈ ಕೊಲೆ ಪ್ರಕರಣದಿಂದ ಬೆಳಕಿಗೆ ಬಂದಿದೆ.

ಮನೆಯೊಳಗೆ ನುಗ್ಗಿ ಮಾರಣಾಂತಿಕ ಹಲ್ಲೆ:

ಬುಧವಾರ ರಾತ್ರಿ ಸುಮಾರು 8.30ರ ವೇಳೆಗೆ ಆರೋಪಿಗಳು ಈರಣ್ಣನ ಮನೆಗೆ ತೆರಳಿ ಜಗಳ ಆರಂಭಿಸಿದ್ದಾರೆ ಎನ್ನಲಾಗಿದೆ. ಮನೆಯ ಅಂಗಳದ ಹೊಸ್ತಿಲಲ್ಲಿ ಕುಳಿತಿದ್ದ ಈರಣ್ಣನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳು, ಬಡಿಗೆ ಹಾಗೂ ಮನೆಯಲ್ಲಿದ್ದ ಕಟ್ಟಿಗೆ ಮಣೆಯಿಂದ ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ಬಳಿಕ ಕಾಲಿನಿಂದ ಒದ್ದು ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತೀವ್ರ ರಕ್ತಗಾಯಗೊಂಡ ಈರಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ರೇಣುಕಾ, ಪತಿ, ತಾಯಿ ಮತ್ತು ಸಹೋದರನ ಬಂಧನ:

ಪ್ರಕರಣಕ್ಕೆ ಸಂಬಂಧಿಸಿದಂತೆ ಹನಮವ್ವ ಕೋಂ ಮುದಿಯಪ್ಪ ಭೋವಿ (40), ಧರ್ಮರಾಜ ತಂದೆ ಮುದಿಯಪ್ಪ ಭೋವಿ (24), ರೇಣುಕಾ ಕೋಂ ಆಂಜನೇಯ ಕಳಸಾಪುರ (22) ಹಾಗೂ ಆಂಜನೇಯ ತಂದೆ ಸೋಮಣ್ಣ ಕಳಸಾಪುರ (32) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರೇಣುಕಾ, ಆಕೆಯ ಪತಿ ಆಂಜನೇಯ, ತಾಯಿ ಹನಮವ್ವ ಹಾಗೂ ಸಹೋದರ ಧರ್ಮರಾಜ ಸೇರಿ ಈರಣ್ಣನನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೃತ ಈರಣ್ಣನ ಸಹೋದರ ಸಂತೋಷ್ ಷಣ್ಮುಖಪ್ಪ ಅಗಸಿಬಾಗಿಲು ನೀಡಿದ ದೂರಿನ ಮೇರೆಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 159/2026 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಈ ಪ್ರಕರಣದಲ್ಲಿ ಆರಂಭದಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಂಡ್ಯ ರೈತರಿಗೆ ಗುಡ್‌ನ್ಯೂಸ್..! ಕೆಆರ್‌ಎಸ್‌ಗೆ ಭರ್ಜರಿ ನೀರು; ಕಾವೇರಿ ಹೋರಾಟಕ್ಕೆ ಬೀಳುತ್ತಾ ಬ್ರೇಕ್?

0

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಬುಧವಾರ ಬೆಳಗ್ಗೆ 9,438 ಕ್ಯೂಸೆಕ್ ಇದ್ದ ಒಳಹರಿವು ಇದೀಗ 17,427 ಕ್ಯೂಸೆಕ್‌ಗೆ ಏರಿಕೆಯಾಗಿದೆ.

ಕೇವಲ ಎರಡು ದಿನಗಳ ಹಿಂದೆ 1,682 ಕ್ಯೂಸೆಕ್‌ನಷ್ಟಿದ್ದ ಒಳಹರಿವು ಹಲವು ಪಟ್ಟು ಹೆಚ್ಚಾಗಿರುವುದು ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತಸ ಮೂಡಿಸಿದೆ. ಜತೆಗೆ, ಕಾವೇರಿ ನೀರು ಹಂಚಿಕೆ ವಿಚಾರದಲ್ಲೂ ಕರ್ನಾಟಕಕ್ಕೆ ತಾತ್ಕಾಲಿಕ ನಿರಾಳತೆ ಸಿಕ್ಕಂತಾಗಿದೆ.

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 109.75 ಅಡಿ ನೀರಿನ ಮಟ್ಟ ದಾಖಲಾಗಿದೆ. 49.452 ಟಿಎಂಸಿ ಒಟ್ಟು ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 31.471 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದಿಂದ ಸದ್ಯ 4,514 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಇದೇ ರೀತಿ ಮಳೆ ಮುಂದುವರಿದು ಒಳಹರಿವು ಹೆಚ್ಚಾದರೆ, ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ ಬೀಳುವ ಸಾಧ್ಯತೆಯಿದೆ. ಹೆಚ್ಚಿನ ನೀರು ಸಂಗ್ರಹವಾದರೆ ಮಂಡ್ಯ ಜಿಲ್ಲೆಯ ರೈತರ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗುವ ನಿರೀಕ್ಷೆಯಿದೆ.

ಇನ್ನೊಂದೆಡೆ, ರಾಜ್ಯ ಸರ್ಕಾರ ಸದ್ಯ ನಾಲ್ಕು ಕಟ್ಟು ಪದ್ಧತಿಯಲ್ಲಿ ಮಾತ್ರ ನೀರು ಪೂರೈಸುವುದಾಗಿ ತಿಳಿಸಿದ್ದು, ಭತ್ತ ಮತ್ತು ಕಬ್ಬು ಬೆಳೆಯದಂತೆ ರೈತರಿಗೆ ಮನವಿ ಮಾಡಿದೆ. ಆದರೆ ಕೆಆರ್‌ಎಸ್‌ಗೆ ಒಳಹರಿವು ಇದೇ ಪ್ರಮಾಣದಲ್ಲಿ ಮುಂದುವರಿದರೆ ಕೃಷಿಗೆ ಹೆಚ್ಚಿನ ನೀರು ಲಭ್ಯವಾಗುವ ನಿರೀಕ್ಷೆ ರೈತರಲ್ಲಿದೆ.

ಕಬಿನಿ ಜಲಾಶಯಕ್ಕೂ ಉತ್ತಮ ಒಳಹರಿವು:

ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ಉತ್ತಮ ಒಳಹರಿವು ಮುಂದುವರಿದಿದೆ. 84 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಸದ್ಯ 72.76 ಅಡಿ ನೀರಿನ ಮಟ್ಟವಿದೆ.

ಕಬಿನಿಯಲ್ಲಿ 13.07 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಳಹರಿವು 7,676 ಕ್ಯೂಸೆಕ್ನಷ್ಟಿದೆ. ನದಿ ಹಾಗೂ ವಿವಿಧ ಕಾಲುವೆಗಳಿಗೆ ಒಟ್ಟು 7,760 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ನದಿಗೆ 6,100 ಕ್ಯೂಸೆಕ್ ಹಾಗೂ ಕಾಲುವೆಗಳಿಗೆ 1,660 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ಇತರೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ:

ಕೆಆರ್‌ಎಸ್ ಜಲಾಶಯ

  • ಗರಿಷ್ಠ ಮಟ್ಟ: 124.80 ಅಡಿ
  • ಪ್ರಸ್ತುತ ಮಟ್ಟ: 109.75 ಅಡಿ
  • ಒಳಹರಿವು: 17,427 ಕ್ಯೂಸೆಕ್
  • ಹೊರಹರಿವು: 4,514 ಕ್ಯೂಸೆಕ್
  • ಒಟ್ಟು ಸಾಮರ್ಥ್ಯ: 49.452 ಟಿಎಂಸಿ
  • ಪ್ರಸ್ತುತ ಸಂಗ್ರಹ: 31.471 ಟಿಎಂಸಿ

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 84 ಅಡಿ
  • ಪ್ರಸ್ತುತ ಮಟ್ಟ: 72.76 ಅಡಿ
  • ಸಂಗ್ರಹ: 13.07 ಟಿಎಂಸಿ
  • ಒಳಹರಿವು: 7,676 ಕ್ಯೂಸೆಕ್
  • ನದಿಗೆ ಹೊರಹರಿವು: 6,100 ಕ್ಯೂಸೆಕ್
  • ಕಾಲುವೆಗಳಿಗೆ ಹೊರಹರಿವು: 1,660 ಕ್ಯೂಸೆಕ್
  • ಒಟ್ಟು ಹೊರಹರಿವು: 7,760 ಕ್ಯೂಸೆಕ್

ತುಂಗಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 1,633 ಅಡಿ
  • ಪ್ರಸ್ತುತ ಮಟ್ಟ: 1,630.41 ಅಡಿ
  • ಒಟ್ಟು ಸಾಮರ್ಥ್ಯ: 105.788 ಟಿಎಂಸಿ
  • ಪ್ರಸ್ತುತ ಸಂಗ್ರಹ: 95.619 ಟಿಎಂಸಿ
  • ತಕ್ಷಣದ ಒಳಹರಿವು: 14,525 ಕ್ಯೂಸೆಕ್
  • ಕಳೆದ 24 ಗಂಟೆಗಳ ಸರಾಸರಿ ಒಳಹರಿವು: 15,952 ಕ್ಯೂಸೆಕ್
  • ಹೊರಹರಿವು: 8,551 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ

  • ಪ್ರಸ್ತುತ ಮಟ್ಟ: 1,797.20 ಅಡಿ
  • ಒಳಹರಿವು: 9,245 ಕ್ಯೂಸೆಕ್
  • ಲೈವ್ ಸ್ಟೋರೇಜ್: 58.83%
  • ಇಂದಿನ ಏರಿಕೆ: 0.20 ಅಡಿ

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ: 2,922 ಅಡಿ
  • ಪ್ರಸ್ತುತ ಮಟ್ಟ: 2,914.30 ಅಡಿ
  • ಪ್ರಸ್ತುತ ಸಂಗ್ರಹ: 30.092 ಟಿಎಂಸಿ
  • ಒಳಹರಿವು: 2,210 ಕ್ಯೂಸೆಕ್
  • ನದಿಗೆ ಹೊರಹರಿವು: 1,800 ಕ್ಯೂಸೆಕ್
  • ಕಾಲುವೆಗೆ ಹೊರಹರಿವು: 3,700 ಕ್ಯೂಸೆಕ್

ಒಟ್ಟಾರೆ ರಾಜ್ಯದ ಪ್ರಮುಖ ಜಲಾಶಯಗಳಿಗೆ ಉತ್ತಮ ಒಳಹರಿವು ಮುಂದುವರಿದಿದ್ದು, ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದರಿಂದ ರೈತರಲ್ಲಿ ಆಶಾಭಾವನೆ ಮೂಡಿದೆ.

ಕೊಹ್ಲಿ–ಕುಂಬ್ಳೆ ನಡುವಿನ ಅಸಮಾಧಾನದ ಅಸಲಿ ಕಾರಣವೇನು? ಅಂದಿನ ಟೀಂ ಇಂಡಿಯಾ ವಿವಾದದ ಬಗ್ಗೆ ವಿವಿಎಸ್ ಲಕ್ಷ್ಮಣ್ ಹೇಳಿದ್ದೇನು..?

0

ಮುಂಬೈ: ಭಾರತೀಯ ಕ್ರಿಕೆಟ್‌ನ ಅತ್ಯಂತ ಚರ್ಚಿತ ಅಧ್ಯಾಯಗಳಲ್ಲಿ ಒಂದಾಗಿರುವ ಅನಿಲ್ ಕುಂಬ್ಳೆ ಅವರ ಮುಖ್ಯ ಕೋಚ್ ಹುದ್ದೆಯ ನಿರ್ಗಮನ ಹಾಗೂ ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯದ ಕುರಿತು ಟೀಂ ಇಂಡಿಯಾದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಹಲವು ಮಹತ್ವದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಅಂದು ಕ್ರಿಕೆಟ್ ಸಲಹಾ ಸಮಿತಿಯ (CAC) ಸದಸ್ಯರಾಗಿದ್ದ ಲಕ್ಷ್ಮಣ್, ಖಾಸಗಿ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ.

ಅನಿಲ್ ಕುಂಬ್ಳೆ ಅವರನ್ನು ಬಿಸಿಸಿಐ ಅಥವಾ ಕ್ರಿಕೆಟ್ ಸಲಹಾ ಸಮಿತಿ ವಜಾಗೊಳಿಸಿರಲಿಲ್ಲ. ಬದಲಿಗೆ, ತಂಡದಲ್ಲಿನ ಪರಿಸ್ಥಿತಿಗಳು ಅವರನ್ನು ರಾಜೀನಾಮೆ ನೀಡುವಂತೆ ಮಾಡಿದ್ದವು ಎಂದು ವಿವಿಎಸ್ ಲಕ್ಷ್ಮಣ್ ಸ್ಪಷ್ಟಪಡಿಸಿದ್ದಾರೆ.

2019ರ ಏಕದಿನ ವಿಶ್ವಕಪ್‌ಗೂ ಮುನ್ನ ಅನಿಲ್ ಕುಂಬ್ಳೆ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ರವಿಶಾಸ್ತ್ರಿ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಈ ಬೆಳವಣಿಗೆ ಅಂದು ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕುಂಬ್ಳೆ ಅವರ ಕೋಚಿಂಗ್ ಶೈಲಿಯ ಬಗ್ಗೆ ವಿರಾಟ್ ಕೊಹ್ಲಿಗೆ ಅಸಮಾಧಾನವಿತ್ತು ಹಾಗೂ ಅವರೊಂದಿಗೆ ಕೆಲಸ ಮಾಡಲು ಕೊಹ್ಲಿ ಆರಾಮದಾಯಕವಾಗಿರಲಿಲ್ಲ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಆದರೆ ಅನಿಲ್ ಕುಂಬ್ಳೆ ಅವರಿಗೆ ವಿರಾಟ್ ಕೊಹ್ಲಿ ವಿರುದ್ಧ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿರಲಿಲ್ಲ ಎಂದು ಲಕ್ಷ್ಮಣ್ ಸ್ಪಷ್ಟಪಡಿಸಿದ್ದಾರೆ. ಕುಂಬ್ಳೆ ಅವರ ಕೋಚಿಂಗ್ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ಉತ್ತಮವಾಗಿ ಬೆಳವಣಿಗೆ ಕಂಡಿತ್ತು. ತಂಡದ ಪಂದ್ಯದ ಫಲಿತಾಂಶಗಳೇ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದ್ದವು ಎಂದು ಅವರು ಹೇಳಿದ್ದಾರೆ.

ಅನಿಲ್ ಕುಂಬ್ಳೆ ಅವರಿಗೆ ಆರಂಭದಲ್ಲಿ ಕೇವಲ ಒಂದು ವರ್ಷದ ಒಪ್ಪಂದ ನೀಡಲಾಗಿತ್ತು ಎಂಬ ವಿಚಾರದ ಬಗ್ಗೆಯೂ ವಿವಿಎಸ್ ಲಕ್ಷ್ಮಣ್ ಸ್ಪಷ್ಟನೆ ನೀಡಿದ್ದಾರೆ. ಕೋಚ್‌ಗೆ ಒಂದು ವರ್ಷದ ಒಪ್ಪಂದ ನೀಡಬೇಕೇ ಅಥವಾ ಮೂರು ವರ್ಷಗಳ ಒಪ್ಪಂದ ನೀಡಬೇಕೇ ಎಂಬುದು ಬಿಸಿಸಿಐ ಮತ್ತು ಕುಂಬ್ಳೆ ನಡುವಿನ ವಿಚಾರವಾಗಿತ್ತು. ಇದರಲ್ಲಿ ಕ್ರಿಕೆಟ್ ಸಲಹಾ ಸಮಿತಿಗೆ ಯಾವುದೇ ಪಾತ್ರವಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಸಿಎಸಿಯ ಪ್ರಮುಖ ಜವಾಬ್ದಾರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯುತ್ತಮ ಕೋಚ್‌ರನ್ನು ಆಯ್ಕೆ ಮಾಡುವುದು. ಆ ಸಂದರ್ಭದಲ್ಲಿ ಭಾರತ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅನಿಲ್ ಕುಂಬ್ಳೆ ಅವರೇ ಸೂಕ್ತ ಅಭ್ಯರ್ಥಿ ಎಂದು ಸಿಎಸಿ ನಿರ್ಧರಿಸಿತ್ತು ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

ಕುಂಬ್ಳೆ ಅವರ ಒಂದು ವರ್ಷದ ಒಪ್ಪಂದ ಮುಕ್ತಾಯಗೊಂಡ ಬಳಿಕ ಬಿಸಿಸಿಐ ಮತ್ತೊಮ್ಮೆ ಕೋಚ್ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಸಿಎಸಿಗೆ ಸೂಚಿಸಿತ್ತು. ಅರ್ಜಿ ಸಲ್ಲಿಸಿದ್ದ ಇತರ ಅಭ್ಯರ್ಥಿಗಳ ಕಾರ್ಯಕ್ಷಮತೆಯೊಂದಿಗೆ ಕುಂಬ್ಳೆ ಅವರ ಕೆಲಸವನ್ನು ಹೋಲಿಕೆ ಮಾಡಿದ ಸಿಎಸಿ, ಕುಂಬ್ಳೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿತ್ತು.

ಹೀಗಾಗಿ 2019ರ ಏಕದಿನ ವಿಶ್ವಕಪ್‌ವರೆಗೂ ಅನಿಲ್ ಕುಂಬ್ಳೆ ಅವರನ್ನೇ ಭಾರತ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಸಬೇಕು ಎಂದು ಸಿಎಸಿ ಬಿಸಿಸಿಐಗೆ ಶಿಫಾರಸು ಮಾಡಿತ್ತು ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಸಿಎಸಿಯ ಸಂಪೂರ್ಣ ಬೆಂಬಲ ಕುಂಬ್ಳೆ ಅವರಿಗೆ ಇದ್ದರೂ, ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯ ಹಾಗೂ ತಂಡದೊಳಗಿನ ವಾತಾವರಣ ಸಂಕೀರ್ಣಗೊಂಡ ಪರಿಣಾಮ ಪರಿಸ್ಥಿತಿ ಬದಲಾಗಿತ್ತು. ಅಂತಿಮವಾಗಿ ಅನಿಲ್ ಕುಂಬ್ಳೆ ಸ್ವತಃ ರಾಜೀನಾಮೆ ನೀಡಿದರು ಎಂದು ಲಕ್ಷ್ಮಣ್ ವಿವರಿಸಿದ್ದಾರೆ.

ಅಂದು ತಾವು ಕುಂಬ್ಳೆ ಅವರ ಸ್ಥಾನದಲ್ಲಿದ್ದಿದ್ದರೆ, ಆ ಪರಿಸ್ಥಿತಿಗಳನ್ನು ಗಮನಿಸಿ ಬಹುಶಃ ತಾವೂ ಇದೇ ರೀತಿಯ ರಾಜೀನಾಮೆ ನಿರ್ಧಾರ ಕೈಗೊಳ್ಳುತ್ತಿದ್ದೆ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಹೀಗಾಗಿ ಅನಿಲ್ ಕುಂಬ್ಳೆ ಅವರ ನಿರ್ಗಮನವು ಬಿಸಿಸಿಐ ಅಥವಾ ಸಿಎಸಿಯ ನೇರ ವಜಾ ನಿರ್ಧಾರವಾಗಿರಲಿಲ್ಲ. ಬದಲಿಗೆ, ತಂಡದೊಳಗಿನ ಭಿನ್ನಾಭಿಪ್ರಾಯಗಳು ಹಾಗೂ ಸಂಕೀರ್ಣಗೊಂಡ ಪರಿಸ್ಥಿತಿಗಳೇ ಕುಂಬ್ಳೆ ರಾಜೀನಾಮೆಗೆ ಪ್ರಮುಖ ಕಾರಣವಾಗಿದ್ದವು ಎಂಬುದು ಲಕ್ಷ್ಮಣ್ ಅವರ ಹೇಳಿಕೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.