Home Blog

ಮಕ್ಕಳ ಮನ ಗೆಲ್ಲುವಲ್ಲಿ ಸೋಲಿಲ್ಲದ ‘ನಿಂಗು’ ಸೊಲಗಿ..!

ಶಿಕ್ಷಕರು ಸಾವಿರಾರು ಜನರಿರಬಹುದು. ಸಾಹಿತಿಗಳೂ ಅನೇಕರಿರಬಹುದು. ಆದರೆ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು, ಅವರ ಕನಸುಗಳಿಗೆ ಬಣ್ಣ ತುಂಬಿ, ಬದುಕಿಗೆ ದಿಕ್ಕು ತೋರಿಸುವ ಶಿಕ್ಷಕರು ಮಾತ್ರ ಅಪರೂಪ. ಅಂತಹ ಅಪರೂಪದ ವ್ಯಕ್ತಿತ್ವವೇ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಮಕ್ಕಳ ಅಚ್ಚುಮೆಚ್ಚಿನ ಸಾಹಿತಿ, ನಾಟಕಕಾರ ಹಾಗೂ ಶಿಕ್ಷಣ ಚಿಂತಕ ಡಾ. ನಿಂಗು ಸೊಲಗಿ.

ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ಶ್ರೀ ಜಗದ್ಗುರು ಬೂದೀಶ್ವರ ವಿದ್ಯಾಪೀಠದ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ನಿಂಗು ಸೊಲಗಿ ಆಯ್ಕೆಯಾಗಿರುವುದು ಕೇವಲ ಅವರಿಗಷ್ಟೇ ಸಂದ ಗೌರವವಲ್ಲ; ಮಕ್ಕಳ ಸಾಹಿತ್ಯ, ಶಿಕ್ಷಣ ಮತ್ತು ಸೃಜನಶೀಲತೆಗೆ ಸಂದ ಗೌರವವಾಗಿದೆ.

ರೋಣ ತಾಲೂಕಿನ ಕೌಜಗೇರಿ ಎಂಬ ಪುಟ್ಟ ಗ್ರಾಮದಲ್ಲಿ 1968ರ ಜುಲೈ 10ರಂದು ಬಡ ಕುಟುಂಬದಲ್ಲಿ ಜನಿಸಿದ ನಿಂಗು ಸೊಲಗಿ ಅವರ ಬಾಲ್ಯ ಸುಖಮಯವಾಗಿರಲಿಲ್ಲ. ಬಡತನ, ಸಂಕಷ್ಟ, ಅಭಾವಗಳ ನಡುವೆಯೇ ಶಿಕ್ಷಣದ ಕನಸನ್ನು ಕೈಬಿಡದೆ, ಪರಿಶ್ರಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಮುಂದೆ ಸಾಗಿದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು 1990ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಇಂದು ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ಮಕ್ಕಳ ಬದುಕಿಗೆ ಬೆಳಕಾಗಿದ್ದಾರೆ.

ಶಿಕ್ಷಕರಾಗಿ ಪಾಠ ಹೇಳುವುದರಲ್ಲೇ ಸೀಮಿತವಾಗದೆ, ಮಕ್ಕಳ ಕಲ್ಪನಾ ಲೋಕವನ್ನು ವಿಸ್ತರಿಸುವ ಸಾಹಿತ್ಯವನ್ನು ರಚಿಸಿದ್ದಾರೆ. ‘ಬನದಮ್ಮ’, ‘ಕಾಗೆ ಬಳಗ’, ‘ಕರುಳಿನ ಗೆಳೆಯ’, ‘ಬಾಳ ಜ್ಯೋತಿ’, ‘ಕನಸಿನ ಬಾಲೆ’, ‘ವಿದೇಶಕ್ಕೆ ಹಾರಿದ ಹಕ್ಕಿ’ ಸೇರಿದಂತೆ ಹಲವು ಮಕ್ಕಳ ನಾಟಕಗಳು ರಾಜ್ಯದ ವಿವಿಧ ವೇದಿಕೆಗಳಲ್ಲಿ ಪ್ರದರ್ಶನಗೊಂಡಿವೆ.

ಅವರ ಐತಿಹಾಸಿಕ ನಾಟಕ ‘ಬಂಡೆದ್ದ ಮುಂಡರಗಿ ಭೀಮರಾಯ’ ಬಾನುಲಿಯಲ್ಲಿ ಪ್ರಸಾರಗೊಂಡು ಜನಮನ್ನಣೆ ಪಡೆದಿರುವುದಷ್ಟೇ ಅಲ್ಲ, ಶಾಲಾ ಪಠ್ಯದಲ್ಲೂ ಸ್ಥಾನ ಪಡೆದಿರುವುದು ಅವರ ಸಾಹಿತ್ಯದ ಶಕ್ತಿಗೆ ಸಾಕ್ಷಿಯಾಗಿದೆ.

ಕವನ, ನಾಟಕ, ಸಂಶೋಧನೆ, ಮಕ್ಕಳ ಸಾಹಿತ್ಯ, ಜನಪದ, ಸಂಗೀತ, ಬೀದಿ ನಾಟಕ, ಪರಿಸರ ಜಾಗೃತಿ, ಬಾಲ್ಯ ವಿವಾಹ ತಡೆ, ಸಾಕ್ಷರತೆ, ವಿಶೇಷ ಮಕ್ಕಳ ಶಿಕ್ಷಣ—ಹೀಗೆ ಸ್ಪರ್ಶಿಸದ ಕ್ಷೇತ್ರವೇ ಇಲ್ಲ ಎನ್ನುವಷ್ಟು ವ್ಯಾಪಕವಾಗಿ ಅವರು ಕೆಲಸ ಮಾಡಿದ್ದಾರೆ. ಮಕ್ಕಳಿಗಾಗಿ ಬರೆದ ಹಾಡುಗಳಿಗೆ ತಾವೇ ರಾಗ ಸಂಯೋಜಿಸಿ ಧ್ವನಿಮುದ್ರಿಕೆ ಬಿಡುಗಡೆ ಮಾಡಿರುವುದು ಅವರ ಬಹುಮುಖ ಪ್ರತಿಭೆಯ ಮತ್ತೊಂದು ಮುಖ.

ಶಾಲೆಯ ನಾಲ್ಕು ಗೋಡೆಗಳೊಳಗೆ ಶಿಕ್ಷಣವನ್ನು ಸೀಮಿತಗೊಳಿಸದೆ, ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ, ಸೃಜನಶೀಲತೆ ಮತ್ತು ಜೀವನ ಕೌಶಲ್ಯ ಬೆಳೆಸುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಶಿಕ್ಷಣ ಇಲಾಖೆಯ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಾಹಿತ್ಯ ರಚಿಸಿ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

ಅವರ ಸಾಧನೆಗೆ ಕರ್ನಾಟಕ ಸರ್ಕಾರದ ರಾಷ್ಟ್ರಪ್ರಶಸ್ತಿ, ವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ, ಉತ್ತಮ ಶಿಕ್ಷಕ ಸಾಹಿತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಮಕ್ಕಳ ರಂಗಭೂಮಿ ಕುರಿತ ಸಂಶೋಧನೆಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌.ಡಿ. ಪದವಿ ನೀಡಿ ಗೌರವಿಸಿದೆ.

ಈ ಬಾರಿ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅವರ ಹೊಸ ಕೃತಿ ‘ನಂಗೂ ಬೇಕು ನಿಂಗೂ ಸಾಂಗು’ ಲೋಕಾರ್ಪಣೆಗೊಳ್ಳುತ್ತಿದೆ. ಕೇವಲ 21 ಪದ್ಯಗಳನ್ನು ಒಳಗೊಂಡ ಈ ಕೃತಿ, ಮಕ್ಕಳ ಚಿಂತನೆ, ಸಂಸ್ಕಾರ, ಕನ್ನಡ, ಪರಿಸರ, ವಿಜ್ಞಾನ, ಯೋಗ, ದೇಶಪ್ರೇಮ ಮತ್ತು ಜೀವನ ಮೌಲ್ಯಗಳನ್ನು ಸರಳ ಹಾಗೂ ಪರಿಣಾಮಕಾರಿ ಭಾಷೆಯಲ್ಲಿ ಪರಿಚಯಿಸುತ್ತದೆ. ಮಕ್ಕಳ ಮನಸ್ಸನ್ನು ಅರಿತು ಬರೆಯಬಲ್ಲ ಲೇಖಕರಿಂದ ಮಾತ್ರ ಇಂತಹ ಕೃತಿ ಸಾಧ್ಯ.

ಈ ಸಮ್ಮೇಳನದ ಮತ್ತೊಂದು ವಿಶೇಷವೆಂದರೆ, ಇದು ಮಕ್ಕಳಿಂದ… ಮಕ್ಕಳಿಗಾಗಿ… ಮಕ್ಕಳಿಗೋಸ್ಕರ… ನಡೆಯುತ್ತಿರುವ ಅಪರೂಪದ ಸಾಹಿತ್ಯ ಸಮ್ಮೇಳನ. ಮಕ್ಕಳ ವಿಜ್ಞಾನ ಪ್ರದರ್ಶನ, ಚಿಂತನಾತ್ಮಕ ಹರಟೆ, ಶರಣ ಸಾಹಿತ್ಯ ಗೋಷ್ಠಿಗಳು, “ಬಾಲ ಶರಣ ಸಿರಿ” ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಸಮ್ಮೇಳನದ ಮೆರುಗನ್ನು ಹೆಚ್ಚಿಸಲಿವೆ.

ಡಾ. ನಿಂಗು ಸೊಲಗಿ ಅವರಂತಹ ಸೃಜನಶೀಲ ಶಿಕ್ಷಕರು ಸಮಾಜಕ್ಕೆ ಸಿಗುವುದು ಅಪರೂಪ. ಅವರ ಬದುಕು ಪ್ರತಿಯೊಬ್ಬ ಶಿಕ್ಷಕನಿಗೂ, ಪ್ರತಿಯೊಬ್ಬ ವಿದ್ಯಾರ್ಥಿಗೂ, ಪ್ರತಿಯೊಬ್ಬ ಸಾಹಿತಿಗೂ ಪ್ರೇರಣೆ. ಮಕ್ಕಳಲ್ಲಿ ಕನಸು ಬಿತ್ತುವ ಈ ಮಹಾನ್ ಶಿಕ್ಷಣ ಸಾಧಕನಿಗೆ ಸರ್ವಾಧ್ಯಕ್ಷ ಸ್ಥಾನ ದೊರೆತಿರುವುದು ನಿಜಕ್ಕೂ ಸಮ್ಮೇಳನದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.

ಡಾ. ನಿಂಗು ಸೊಲಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಾಹಿತ್ಯ ಮತ್ತು ಶಿಕ್ಷಣ ಸೇವೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಸಮಸ್ತ ಶರಣ ಬಂಧುಗಳ ಆಶಯ.

Oplus_16908288

-ಶ್ರೀಮತಿ ಸುಧಾ ಹುಚ್ಚಣ್ಣವರ, ಜಿಲ್ಲಾಧ್ಯಕ್ಷರು, ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ

ಸಾಮರಸ್ಯದ ಅಕ್ಷರ ದೀವಿಗೆಯಂತಿದೆ ‘ಮನದಂಗಳದಿ…’

ಕನ್ನಡ ಸಾಹಿತ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳು ಹಾಗೂ ಸ್ತ್ರೀಸಂವೇದನೆಯನ್ನು ಸಮಾನವಾಗಿ ಹೊತ್ತ ಕೃತಿಗಳು ವಿರಳ. ಆ ನಿಟ್ಟಿನಲ್ಲಿ ಶ್ರೀಮತಿ ಸುರಯ್ಯಾ ಬೇಗಂ ಎಲ್. ಹಾದಿಮನಿಯವರ ಚೊಚ್ಚಲ ಕವನ ಸಂಕಲನ ‘ಮನದಂಗಳದಿ…’ ಗಮನಾರ್ಹ ಕೃತಿಯಾಗಿ ಹೊರಹೊಮ್ಮಿದೆ.

ಇದು ಕೇವಲ ಕವಿತೆಗಳ ಸಂಕಲನವಲ್ಲ, ಧಾರ್ಮಿಕ ಸಾಮರಸ್ಯ, ಮಾನವೀಯತೆ, ಸ್ತ್ರೀ ಮನಸ್ಸಿನ ತಲ್ಲಣ, ಸಾಮಾಜಿಕ ವೈರುಧ್ಯಗಳು ಹಾಗೂ ಬದುಕಿನ ತಾತ್ವಿಕ ಚಿಂತನೆಗಳನ್ನು ಒಳಗೊಂಡಿರುವ ವೈಚಾರಿಕ ಕಾವ್ಯಯಾನವಾಗಿದೆ. ಆದರ್ಶ ಶಿಕ್ಷಕರಾದ ಎಲ್.ಎಸ್. ಹಾದಿಮನಿಯವರ ಪುತ್ರಿಯಾಗಿರುವ ಸುರಯ್ಯಾ ಬೇಗಂ ಅವರು ಶಿಕ್ಷಣ, ಆಡಳಿತ ಮತ್ತು ಸಮಾಜಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ.

ಸರ್ಕಾರಿ ಅಧಿಕಾರಿಯಾಗಿ ಜವಾಬ್ದಾರಿಯುತ ಸೇವೆ ಸಲ್ಲಿಸುತ್ತಿರುವ ಅವರು, ಸಾಹಿತ್ಯದ ಮೂಲಕವೂ ತಮ್ಮ ಸಾಮಾಜಿಕ ಕಾಳಜಿಯನ್ನು ಅಭಿವ್ಯಕ್ತಗೊಳಿಸಿದ್ದಾರೆ. ಸಂಕಲನದ ಶೀರ್ಷಿಕೆ ಕವಿತೆಯಾದ ‘ಮನದಂಗಳದಿ…’ ಇಡೀ ಕೃತಿಯ ಆಶಯವನ್ನು ಪ್ರತಿಬಿಂಬಿಸುತ್ತದೆ. ಬಾಲ್ಯದ ಧರ್ಮಾತೀತ ಬಾಂಧವ್ಯ, ನೆರೆಹೊರೆಯ ಆತ್ಮೀಯತೆ ಹಾಗೂ ಜಾತಿ-ಧರ್ಮಗಳಾಚೆಯ ಮಾನವೀಯ ಸಂಬಂಧಗಳನ್ನು ನೆನಪಿಸಿಕೊಳ್ಳುವ ಕವಯಿತ್ರಿ, ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷದ ರಾಜಕಾರಣದ ನಡುವೆ ಸಾಮರಸ್ಯದ ಭಾರತವನ್ನು ಮರುನಿರ್ಮಿಸಬೇಕೆಂಬ ಆಶಯ ವ್ಯಕ್ತಪಡಿಸುತ್ತಾರೆ.

ಧಾರ್ಮಿಕ ನಂಬಿಕೆಯನ್ನು ಗೌರವಿಸುವ ಕವಯಿತ್ರಿ, ಅದರ ಹೆಸರಿನಲ್ಲಿ ನಡೆಯುವ ಡಾಂಭಿಕತೆಯನ್ನು ಮಾತ್ರ ಪ್ರಶ್ನಿಸುತ್ತಾರೆ. ‘ಕಣ್ಣು ಮುಚ್ಚಿದ ವಿರಾಗಿ’, ‘ದೇವ ನೀ ಅವತಾರ ತಾಳಲಿಲ್ಲ’, ‘ತೋರಿಕೆ’ ಮುಂತಾದ ಕವಿತೆಗಳಲ್ಲಿ ಆಚರಣೆಗಿಂತ ಮಾನವೀಯತೆಯೇ ಶ್ರೇಷ್ಠ ಎಂಬ ಸಂದೇಶವನ್ನು ನೀಡುತ್ತಾರೆ. ನಿಜವಾದ ಧರ್ಮವು ಕರುಣೆ, ದಾನ ಮತ್ತು ಆತ್ಮಶುದ್ಧಿಯಲ್ಲಿದೆ ಎಂಬುದನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸುತ್ತಾರೆ.

ಸ್ತ್ರೀ ಸಂವೇದನೆ ಸಂಕಲನದ ಮತ್ತೊಂದು ಪ್ರಮುಖ ಆಯಾಮ. ‘ಸ್ವಗತ…’ ಕವಿತೆಯಲ್ಲಿ ಯಶೋಧರೆಯ ಅಂತರಂಗವನ್ನು ಚಿತ್ರಿಸುವ ಮೂಲಕ ಮಹಿಳೆಯ ತ್ಯಾಗ ಮತ್ತು ಸಮಾಜದ ದ್ವಂದ್ವ ನೀತಿಯನ್ನು ಪ್ರಶ್ನಿಸುತ್ತಾರೆ. ‘ಆತ್ಮಾವಲೋಕನ’, ‘ಕನಸು’ ಹಾಗೂ ‘ಗೆಳೆಯನಿಗೆ…’ ಕವಿತೆಗಳು ದಾಂಪತ್ಯ, ಪ್ರೀತಿ ಮತ್ತು ಬದುಕಿನ ಸೂಕ್ಷ್ಮ ಸಂಬಂಧಗಳನ್ನು ಮನಮುಟ್ಟುವಂತೆ ಕಟ್ಟಿಕೊಡುತ್ತವೆ.

‘ಅಪ್ಪ’, ‘ಅವ್ವ’, ‘ಭಿಕ್ಷುಕ’, ‘ಓ ನನ್ನ ಬಾಂಧವರೇ’ ಮುಂತಾದ ಕವಿತೆಗಳಲ್ಲಿ ಕುಟುಂಬ ಮೌಲ್ಯಗಳು, ರಾಜಕೀಯ ವಿಡಂಬನೆ ಹಾಗೂ ಮಾನವೀಯ ಕಳಕಳಿ ಜೀವಂತವಾಗಿ ಮೂಡಿಬಂದಿವೆ. ‘ಬದುಕು ಕ್ಷಣಿಕ’, ‘ಸಂದೇಶ’, ‘ಹುಚ್ಚು’ ಕವಿತೆಗಳು ಬದುಕಿನ ನಶ್ವರತೆ, ಅಹಂಕಾರದ ವ್ಯರ್ಥತೆ ಹಾಗೂ ಮನುಷ್ಯನ ಆತ್ಮಾವಲೋಕನದ ಅಗತ್ಯವನ್ನು ನೆನಪಿಸುತ್ತವೆ.

ಸುರಯ್ಯಾ ಬೇಗಂ ಅವರ ಭಾಷೆಯ ಪ್ರಮುಖ ಶಕ್ತಿ ಅದರ ಸರಳತೆ. ಉತ್ತರ ಕರ್ನಾಟಕದ ಆಡುಭಾಷೆಯ ಸೊಗಡು, ಸಂಭಾಷಣಾತ್ಮಕ ನಿರೂಪಣೆ ಹಾಗೂ ನೇರ ಅಭಿವ್ಯಕ್ತಿ ಕವಿತೆಗಳನ್ನು ಓದುಗರಿಗೆ ಇನ್ನಷ್ಟು ಆತ್ಮೀಯವಾಗಿಸುತ್ತವೆ. ಕ್ಲಿಷ್ಟ ರೂಪಕಗಳಿಗಿಂತ ಸರಳ ಪದಗಳ ಮೂಲಕವೇ ಅವರು ಗಾಢವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಕೆಲವೊಂದು ಕವಿತೆಗಳಲ್ಲಿ ವಿಚಾರಗಳು ನೇರ ಹೇಳಿಕೆಗಳಂತೆಯೇ ಕಾಣಿಸಿಕೊಂಡರೂ, ಅದು ಅವರ ಸಾಮಾಜಿಕ ಬದ್ಧತೆಯ ಅಭಿವ್ಯಕ್ತಿಯಾಗಿ ಓದುಗರನ್ನು ತಲುಪುತ್ತದೆ.

ಕೃತಿಗೆ ಡಾ. ಮೀನಾಕ್ಷಿ ಬಾಳಿ ಬರೆದ ಮುನ್ನುಡಿ ಹಾಗೂ ಶ್ರೀಮತಿ ಕೆ. ನೀಲಾ ಅವರ ಬೆನ್ನುಡಿ ಕವನ ಸಂಕಲನದ ಸಾಹಿತ್ಯಿಕ ಮೌಲ್ಯವನ್ನು ಮತ್ತಷ್ಟು ಎತ್ತಿ ಹಿಡಿದಿವೆ. ಕವಯಿತ್ರಿಯ ಮಾನವೀಯ ದೃಷ್ಟಿಕೋನ ಮತ್ತು ತಾಯ್ತನದ ಸಂವೇದನೆ ಅವರ ಕಾವ್ಯದ ಜೀವಾಳವಾಗಿದೆ ಎಂಬ ಅಭಿಪ್ರಾಯಗಳು ಈ ಸಂಕಲನದ ಮಹತ್ವವನ್ನು ದೃಢಪಡಿಸುತ್ತವೆ.

ಒಟ್ಟಾರೆಯಾಗಿ ‘ಮನದಂಗಳದಿ…’ ಕವನ ಸಂಕಲನವು ಕೇವಲ ಭಾವನೆಗಳ ಅಭಿವ್ಯಕ್ತಿಯಲ್ಲ; ಅದು ಸಾಮಾಜಿಕ ಜವಾಬ್ದಾರಿ, ಧಾರ್ಮಿಕ ಸಹಿಷ್ಣುತೆ, ಸ್ತ್ರೀ ಗೌರವ ಮತ್ತು ಮಾನವೀಯ ಪ್ರೀತಿಯ ಘೋಷಣೆಯಾಗಿದೆ. ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾದ ಸಾಮರಸ್ಯದ ಸಂದೇಶವನ್ನು ಕಾವ್ಯದ ಮೂಲಕ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಈ ಕೃತಿ ಯಶಸ್ವಿಯಾಗಿದೆ.

ಕನ್ನಡ ಸಾಹಿತ್ಯದಲ್ಲಿ ಅರ್ಥಪೂರ್ಣ ಕಾವ್ಯವನ್ನು ಆಸ್ವಾದಿಸಲು ಬಯಸುವ ಪ್ರತಿಯೊಬ್ಬ ಓದುಗರೂ ಓದಲೇಬೇಕಾದ ಸಂಕಲನ ಇದಾಗಿದೆ. ಶ್ರೀಮತಿ ಸುರಯ್ಯಾ ಬೇಗಂ ಎಲ್. ಹಾದಿಮನಿಯವರಿಂದ ಇಂತಹ ಇನ್ನಷ್ಟು ಪ್ರಬುದ್ಧ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಲಭಿಸಲಿ ಎಂಬ ಆಶಯ ಈ ಸಾಹಿತ್ಯಾವಲೋಕನದ ಸಮಾರೋಪವಾಗಿದೆ.

-ಅಮೀರನಾಯಕ (ಕಲ್ಲಿಗನೂರ), ಗದಗ

ಕರಾಟೆ ಕಣದಲ್ಲಿ ಲಕ್ಕುಂಡಿ ಪ್ರತಿಭೆಗಳ ಅಬ್ಬರ!

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಲಕ್ಕುಂಡಿಯ ಚೇತನ್ ಕರಾಟೆ ಕ್ಲಬ್‌ನಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು ಇತ್ತೀಚೆಗೆ ಗದಗದ ಕನಕ ಭವನದಲ್ಲಿ ಗೋಲ್ಡನ್ ಕರಾಟೆ ಕ್ಲಬ್ ಆಶ್ರಯದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.

ಕುಮಿತೆ ಹಾಗೂ ಕಾಟಾ ವಿಭಾಗದಲ್ಲಿ ಸಮರ್ಥ ಕೌಜಗೇರಿ, ಚೇತನಕುಮಾರ ಮುಂದೇಲಿ ದ್ವಿತೀಯ ಸ್ಥಾನ, ದೀಕ್ಷಾ ಮುಂದೇಲಿ ತೃತೀಯ ಸ್ಥಾನ, ಪ್ರದ್ಯುಮ್ನ ತಿಮ್ಮಾಪೂರ ಕುಮಿತೆಯಲ್ಲಿ ಪ್ರಥಮ ಹಾಗೂ ಕಾಟಾದಲ್ಲಿ ತೃತೀಯ ಸ್ಥಾನ, ಜೀವನ್ ರಾಯಣ್ಣವರ ಎರಡೂ ವಿಭಾಗಗಳಲ್ಲಿ ತೃತೀಯ ಸ್ಥಾನ, ವಿನಯ ಚಬ್ಬರಭಾವಿ ಕುಮಿತೆಯಲ್ಲಿ ಪ್ರಥಮ ಹಾಗೂ ಕಾಟಾದಲ್ಲಿ ತೃತೀಯ ಸ್ಥಾನ, ವರುಣ ಹಿರೇಹಾಳ ಎರಡೂ ವಿಭಾಗಗಳಲ್ಲಿ ದ್ವಿತೀಯ ಸ್ಥಾನ, ಪ್ರಿಯಾಂಕ ನಂದಪ್ಪನವರ ಹಾಗೂ ಉಮೇರಾ ಯು.ಎನ್. ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ, ವಿರಾಟ್ ಚಬ್ಬರಭಾವಿ ಎರಡೂ ವಿಭಾಗಗಳಲ್ಲಿ ತೃತೀಯ ಸ್ಥಾನ ಹಾಗೂ ನಾಗರಾಜ ಕಟ್ಟಿ ಕುಮಿತೆಯಲ್ಲಿ ದ್ವಿತೀಯ ಮತ್ತು ಕಾಟಾದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.

ಸಾಧನೆಗೈದ ಕ್ರೀಡಾಪಟುಗಳನ್ನು ಅಭಿನಂದಿಸಲು ಏರ್ಪಡಿಸಿದ್ದ ಸಮಾರಂಭದಲ್ಲಿ ಪಿಡಿಒ ಅಮೀರನಾಯಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್. ಪೂಜಾರ, ನೀಲಕಂಠ ಮುಕ್ಕಣವರ, ಅಶೋಕ ಬೂದಿಹಾಳ ಹಾಗೂ ಉಸ್ಮಾನಲಿ ನಮಾಜಿ ಅವರು ಕ್ರೀಡಾಪಟುಗಳನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ಶಿಹಾನ್ ಹಬೀಬ ಹಾಗೂ ಗಂಗಾಧರ ಸಾಸ್ವಿಹಳ್ಳಿ ಅವರ ಸೇವೆಯನ್ನು ಗಣ್ಯರು ಶ್ಲಾಘಿಸಿದರು.

ಅಕ್ಷರ ಕಲಿಸಿದ ಶಾಲೆಗೆ ಮರಳಿದ ಶಿಷ್ಯರು!

0

ವಿಜಯಸಾಕ್ಷಿ ಸುದ್ದಿ, ಗದಗ: ಬದುಕಿನ ಹಾದಿಗಳು ಬದಲಾಗಿದ್ದರೂ ಅಕ್ಷರ ಕಲಿಸಿದ ಶಾಲೆ, ಬದುಕಿಗೆ ದಾರಿ ತೋರಿದ ಗುರುಗಳು ಮತ್ತು ಬಾಲ್ಯದ ಸ್ನೇಹ ಎಂದಿಗೂ ಮರೆಯಾಗುವುದಿಲ್ಲ ಎಂಬುದನ್ನು ಗದಗದ ಶ್ರೀ ಸಿ.ಡಿ.ಒ. ಜೈನ್ ಎಜುಕೇಶನ್ ಸೊಸೈಟಿ ಪ್ರೌಢಶಾಲೆಯ 2006ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಮತ್ತೊಮ್ಮೆ ಸಾಬೀತುಪಡಿಸಿದರು.

ಶಾಲೆಯಲ್ಲಿ ಆಯೋಜಿಸಿದ್ದ ‘ಗುರುವಂದನೆ ಹಾಗೂ ಸ್ನೇಹಿತರ ಸಮ್ಮಿಲನ’ ಕಾರ್ಯಕ್ರಮದಲ್ಲಿ ಸುಮಾರು 20 ವರ್ಷಗಳ ಬಳಿಕ ಒಂದಾದ ಸಹಪಾಠಿಗಳು ತಮ್ಮ ಶಾಲಾ ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಿ ಭಾವುಕರಾದರು. ವಿವಿಧ ಉದ್ಯೋಗ, ವ್ಯಾಪಾರ ಹಾಗೂ ಸೇವಾ ಕ್ಷೇತ್ರಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಮತ್ತೆ ಅದೇ ಶಾಲೆಯಂಗಳದಲ್ಲಿ ಭೇಟಿಯಾದ ಕ್ಷಣಗಳು ಭಾವನಾತ್ಮಕ ವಾತಾವರಣ ನಿರ್ಮಿಸಿದವು.

ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಶಿಕ್ಷಕರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಶಿಕ್ಷಣದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದ ಗುರುಗಳ ಸೇವೆಯನ್ನು ಸ್ಮರಿಸಿ, ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿ ಎಂದು ಆಶಯ ವ್ಯಕ್ತಪಡಿಸಲಾಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಶಾಲೆಯ ನಿವೃತ್ತ ಹಾಗೂ ಹಾಲಿ ಶಿಕ್ಷಕರನ್ನು ಹೂಮಾಲೆ, ಶಾಲು ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಗುರುಗಳ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದರು. ಹಲವು ವರ್ಷಗಳ ಬಳಿಕ ತಮ್ಮ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಕಂಡ ಶಿಕ್ಷಕರು ಸಂತಸ ವ್ಯಕ್ತಪಡಿಸಿದರು.

ಸುಮಾರು ಎರಡು ದಶಕಗಳ ಹಿಂದೆ ಒಂದೇ ತರಗತಿಯಲ್ಲಿ ಓದಿದ ಸ್ನೇಹಿತರು ಮತ್ತೆ ಭೇಟಿಯಾಗಿ ಹಳೆಯ ತರಗತಿ ಕೊಠಡಿಗಳು, ಬ್ಲ್ಯಾಕ್‌ಬೋರ್ಡ್‌, ಬೆಂಚುಗಳು, ಶಿಕ್ಷಕರ ಬೋಧನೆ, ಶಾಲೆಯ ತುಂಟಾಟ, ಶಿಕ್ಷೆ ಹಾಗೂ ಆಟದ ದಿನಗಳನ್ನು ನೆನೆದು ನಗೆಗಡಲಲ್ಲಿ ತೇಲಿದರು. ಹಲವು ವರ್ಷಗಳ ಬಳಿಕ ಭೇಟಿಯಾದ ಸ್ನೇಹಿತರು ಪರಸ್ಪರ ಆತ್ಮೀಯವಾಗಿ ಅಪ್ಪಿಕೊಂಡ ದೃಶ್ಯ ಕಾರ್ಯಕ್ರಮದ ವಿಶೇಷವಾಗಿತ್ತು.

ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ವಾಟ್ಸಾಪ್‌ ಗುಂಪಿನ ಮೂಲಕ ಸಂಪರ್ಕ ಸಾಧಿಸಿ ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು.

ಕಾರ್ಯಕ್ರಮದ ಸ್ಮರಣಾರ್ಥ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.

“ನಾವು ಕಲಿಸಿದ ಅಕ್ಷರಗಳು ಇಂದು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವಾಗಿ ರೂಪುಗೊಂಡಿರುವುದನ್ನು ನೋಡುವುದೇ ಶಿಕ್ಷಕರಿಗೆ ಸಿಗುವ ಅತ್ಯಂತ ದೊಡ್ಡ ಗೌರವ” ಎಂದು ಶಿಕ್ಷಕರು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಕೋಲಾರ ಮೇಡಂ, ಜೋಷಿ ಮೇಡಂ, ಮಾನ್ವಿ ಸರ್, ರಡ್ಡಿ ಸರ್ ಹಾಗೂ ಹಳೆಯ ವಿದ್ಯಾರ್ಥಿಗಳಾದ ಡಾ. ಜೆತಿಂದ್ರ, ಅಜಯ್ ಅಬ್ಬಿಗೇರಿ, ಆನಂದ್, ವಿಕಾಸ್, ಉದಯ್, ರಾಜೀವ್, ರೀಮಾ, ಪ್ರಿಯಾ, ದೀಪ, ಪ್ರತಿಭಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪರಿಸರ ಸಂರಕ್ಷಣೆಗೆ ಹಸಿರು ಸಂಕಲ್ಪ

ಗುರುವಂದನೆ ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಗುರುಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು. “ಒಬ್ಬ ವಿದ್ಯಾರ್ಥಿ – ಒಂದು ಸಸಿ” ಎಂಬ ಸಂದೇಶದೊಂದಿಗೆ ಹಸಿರು ಉಳಿಸುವ ಜವಾಬ್ದಾರಿಯನ್ನು ಸಮಾಜಕ್ಕೆ ಸಾರಿದರು.

ರೈಲ್ವೆಗಾಗಿ ‘ದೆಹಲಿ ಚಲೋ’ ಹೋರಾಟಕ್ಕೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ–ಹರಪನಹಳ್ಳಿ ನೂತನ ರೈಲ್ವೆ ಮಾರ್ಗ ಕಾಮಗಾರಿಯನ್ನು ತಕ್ಷಣ ಆರಂಭಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮುಂಡರಗಿ ತಾಲೂಕು ರೈಲ್ವೆ ಹೋರಾಟ ಸಮಿತಿ ‘ದೆಹಲಿ ಚಲೋ’ ಅಭಿಯಾನಕ್ಕೆ ಚಾಲನೆ ನೀಡಿದೆ.

ಸಮಿತಿಯ ಅಧ್ಯಕ್ಷ ಬಸವರಾಜ ಎಸ್. ದೇಸಾಯಿ ನೇತೃತ್ವದ ನಿಯೋಗವು ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ನವದೆಹಲಿಗೆ ಪ್ರಯಾಣ ಬೆಳೆಸಿದ್ದು, ಕೇಂದ್ರ ರೈಲ್ವೆ ಸಚಿವರು ಹಾಗೂ ರೈಲ್ವೆ ಮಂಡಳಿಯ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಗೆ ಸಂಬಂಧಿಸಿದ ಮನವಿ ಸಲ್ಲಿಸಲು ನಿರ್ಧರಿಸಿದೆ.

ನಿಯೋಗದಲ್ಲಿ ಮುತ್ತಪ್ಪ ಪಾವಡಶೆಟ್ಟಿ, ನಿತಿನ್ ವಿ. ದೊಡ್ಡಣ್ಣವರ, ಧವಳ ಸಾಹೇಬ್ ಮುಲ್ಲಾ, ಸಚಿನ್‌ಕುಮಾರ್ ಬಿ. ದೇಸಾಯಿ ಸೇರಿದಂತೆ ಸಮಿತಿಯ ಪ್ರಮುಖ ಸದಸ್ಯರು ಪಾಲ್ಗೊಂಡಿದ್ದಾರೆ.

ದೆಹಲಿಯಲ್ಲಿ ಧರಣಿ ನಡೆಸುವ ಮೂಲಕ ಯೋಜನೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಮಿತಿ ಮುಂದಾಗಿದೆ.

ಗದಗ–ಹರಪನಹಳ್ಳಿ ರೈಲು ಮಾರ್ಗವು ಮುಂಡರಗಿ ಹಾಗೂ ಹೂವಿನಹಡಗಲಿ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದು, ಈ ಯೋಜನೆ ಜಾರಿಯಾದರೆ ಗ್ರಾಮೀಣ ಪ್ರದೇಶದ ಸಂಚಾರ, ರೈತರ ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ಉತ್ತೇಜನ ದೊರೆಯಲಿದೆ ಎಂದು ಸಮಿತಿ ತಿಳಿಸಿದೆ.

“ರೈಲ್ವೆ ಸಂಪರ್ಕದ ವಿಷಯದಲ್ಲಿ ಈ ಭಾಗದ ಜನರು ದಶಕಗಳಿಂದ ನಿರ್ಲಕ್ಷ್ಯ ಅನುಭವಿಸುತ್ತಿದ್ದಾರೆ. ಗದಗ–ಹರಪನಹಳ್ಳಿ ರೈಲು ಮಾರ್ಗ ಈ ಭಾಗದ ಅಭಿವೃದ್ಧಿಗೆ ಜೀವನಾಡಿಯಾಗಲಿದೆ. ಸರ್ಕಾರದಿಂದ ಶೀಘ್ರ ಸ್ಪಂದನೆ ದೊರೆಯದಿದ್ದರೆ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ.”

ಬಸವರಾಜ ಎಸ್. ದೇಸಾಯಿ, ಅಧ್ಯಕ್ಷರು, ಮುಂಡರಗಿ ತಾಲೂಕು ರೈಲ್ವೆ ಹೋರಾಟ ಸಮಿತಿ

ಬರದ ಸಂಕಷ್ಟದಲ್ಲಿ ರೈತರಿಗೆ ಕೃಷಿ ಇಲಾಖೆ ಸಲಹೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರು ಅನುಸರಿಸಬೇಕಾದ ಆಗಸ್ಟ್ ಮೊದಲ ವಾರದ ಪರ್ಯಾಯ ಬೆಳೆ ನಿರ್ವಹಣಾ ಕ್ರಮಗಳನ್ನು ಕೃಷಿ ಇಲಾಖೆ ಪ್ರಕಟಿಸಿದೆ.

ಹೆಸರು ಬೆಳೆಗೆ ವಿಶೇಷ ಕಾಳಜಿ

ಹೆಸರು ಬೆಳೆಯಲ್ಲಿ ತೇವಾಂಶದ ಕೊರತೆಯನ್ನು ನೀಗಿಸಲು ಬಿತ್ತನೆಯಾದ 30 ಹಾಗೂ 45ನೇ ದಿನಗಳಲ್ಲಿ ಶೇ.1ರ 19:19:19 ಅಥವಾ ಪೊಟ್ಯಾಸಿಯಂ ನೈಟ್ರೇಟ್ ನೀರಿನಲ್ಲಿ ಕರಗುವ ಗೊಬ್ಬರವನ್ನು ಎಲೆಗಳ ಮೇಲೆ ಸಿಂಪಡಿಸಬೇಕು. ಹೂ ಬಿಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿ ಪ್ರತಿ ಲೀಟರ್ ನೀರಿಗೆ 7-8 ಗ್ರಾಂ ಪಲ್ಸ್ ಬೂಸ್ಟರ್ ಅಥವಾ ಪಲ್ಸ್ ಮ್ಯಾಜಿಕ್ ಬೆರೆಸಿ ಸಿಂಪಡಿಸಿದರೆ ಉತ್ತಮ. ಸಾಧ್ಯವಾದರೆ ಒಂದು ಜೀವರಕ್ಷಕ ನೀರಾವರಿ ಒದಗಿಸಬೇಕು.

ಗೋವಿನ ಜೋಳಕ್ಕೆ ಮೇಲುಗೊಬ್ಬರ, ಕೀಟ ನಿಯಂತ್ರಣಕ್ಕೆ ಒತ್ತು

ಗೋವಿನ ಜೋಳದಲ್ಲಿ ಮಣ್ಣಿನಲ್ಲಿ ತೇವಾಂಶವಿದ್ದರೆ ಪ್ರತಿ ಎಕರೆಗೆ 44 ಕೆ.ಜಿ. ಯೂರಿಯಾವನ್ನು ಎರಡು ಹಂತಗಳಲ್ಲಿ ಮೇಲುಗೊಬ್ಬರವಾಗಿ ನೀಡಬೇಕು. ತೇವಾಂಶ ಕೊರತೆಯಿದ್ದರೆ 19:19:19 ಅಥವಾ ಪೊಟ್ಯಾಸಿಯಂ ನೈಟ್ರೇಟ್ ದ್ರಾವಣವನ್ನು ಸಿಂಪಡಿಸಬೇಕು. ಪ್ರತಿ ಎಕರೆಗೆ 200 ಲೀಟರ್ ಜೀವಾಮೃತ ಬಳಸುವುದು ಹಾಗೂ ಜೀವರಕ್ಷಕ ನೀರಾವರಿ ನೀಡುವುದು ಸೂಕ್ತ.

ಸೈನಿಕ ಹುಳು ಹಾಗೂ ಲದ್ದಿ ಹುಳುವಿನ ಬಾಧೆ ಕಂಡುಬಂದರೆ ಎಮಾಮೆಕ್ಟಿನ್ ಬೆಂಜೋಯೇಟ್ ಅಥವಾ ಕ್ಲೋರಂಟ್ರಾನಿಲಿಪ್ರೋಲ್ ಔಷಧವನ್ನು ಸಂಜೆ ವೇಳೆಯಲ್ಲಿ ಸಿಂಪಡಿಸುವಂತೆ ಸಲಹೆ ನೀಡಲಾಗಿದೆ.

ಶೇಂಗಾ ಬೆಳೆಗೆ ಜಿಪ್ಸಮ್ ಮತ್ತು ಎಲೆ ಸಿಂಪರಣೆ

ಶೇಂಗಾ ಬೆಳೆಯಲ್ಲಿ ಮಣ್ಣಿನ ತೇವಾಂಶ ಕಾಪಾಡಲು ಅಂತರ ಬೇಸಾಯ ಮಾಡಬೇಕು. ಬಿತ್ತನೆಯಾದ 35ರಿಂದ 40 ದಿನಗಳಲ್ಲಿ ಪ್ರತಿ ಎಕರೆಗೆ 200 ಕೆ.ಜಿ. ಜಿಪ್ಸಮ್ ಹಾಕಿ ಮಣ್ಣಿನಲ್ಲಿ ಬೆರೆಸಬೇಕು. ತೇವಾಂಶದ ಕೊರತೆಯಿದ್ದರೆ ಶೇ.2ರ ಯೂರಿಯಾ ಅಥವಾ ಶೇ.1ರ ಪೊಟ್ಯಾಸಿಯಂ ನೈಟ್ರೇಟ್ ದ್ರಾವಣವನ್ನು ಸಿಂಪಡಿಸುವುದರ ಜೊತೆಗೆ ಜೀವಾಮೃತ ಬಳಸಬೇಕು.

ಬಿತ್ತನೆಯಾಗದ ಜಮೀನಿಗೆ ಪರ್ಯಾಯ ಸಲಹೆ

ಇನ್ನೂ ಬಿತ್ತನೆಯಾಗದ ಜಮೀನಿನಲ್ಲಿ ಆಗಸ್ಟ್‌ನಲ್ಲಿ ಮಳೆಯಾದರೆ ಕಡಿಮೆ ಅವಧಿಯ ಹಾಗೂ ಬರನಿರೋಧಕ ಬೆಳೆಗಳಾದ ಸಜ್ಜೆ (ವಿಪಿಎಂವಿ-9) ಮತ್ತು ನವಣೆ (ಎಚ್‌ಎನ್-46) ಬಿತ್ತನೆ ಮಾಡಬಹುದು. ಇಲ್ಲವೇ ಚೌಕ ಮಡಿಗಳು ಅಥವಾ ಬೋದು-ಹರಿ ಸಾಲುಗಳನ್ನು ನಿರ್ಮಿಸಿ ಮಳೆ ನೀರನ್ನು ಜಮೀನಿನಲ್ಲೇ ಹಿಂಗಿಸಿ ಹಿಂಗಾರು ಬೆಳೆಗಳಿಗೆ ತೇವಾಂಶ ಸಂರಕ್ಷಿಸಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.

“ಮಳೆ ಕೊರತೆಯ ಹಿನ್ನೆಲೆಯಲ್ಲಿ ರೈತರು ಬೆಳೆ ನಿರ್ವಹಣಾ ಕ್ರಮಗಳನ್ನು ತಪ್ಪದೇ ಅನುಸರಿಸಿದರೆ ಬೆಳೆ ನಷ್ಟವನ್ನು ಗಣನೀಯವಾಗಿ ತಗ್ಗಿಸಬಹುದು.”

ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕಿ, ಗದಗ ಜಿಲ್ಲೆ

2030 ಗುರಿ ಸಾಕಾರಕ್ಕೆ ಭಾರತ ಸಜ್ಜು

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತವು ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ಅನುಷ್ಠಾನದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 2030ರ ಗುರಿ ತಲುಪುವ ವಿಶ್ವಾಸ ಮೂಡಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಹೇಳಿದರು.

ಗದಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತ ವ್ಯಾಪ್ತಿಯ ವಿವಿಧ ಇಲಾಖೆಗಳ ‘ಸಿ’ ವೃಂದದ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಆಯೋಜಿಸಿದ್ದ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಪರಿಚಯಾತ್ಮಕ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ 24.8 ಕೋಟಿ ಜನರು ಬಹುಮಟ್ಟದ ಬಡತನದಿಂದ ಹೊರಬಂದಿರುವುದು, ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ, ಉಚಿತ ಆಹಾರ ಧಾನ್ಯ ವಿತರಣೆ, ಪೋಷಣ ಅಭಿಯಾನ, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಹಾಗೂ ಗ್ರಾಮೀಣ ಭಾಗದಲ್ಲಿ ತಾಯಿ-ಮಗು ಆರೋಗ್ಯ ಸೇವೆಗಳ ವಿಸ್ತರಣೆಯಂತಹ ಕ್ರಮಗಳು ಸುಸ್ಥಿರ ಅಭಿವೃದ್ಧಿಯ ಮಹತ್ವದ ಮೈಲಿಗಲ್ಲುಗಳಾಗಿವೆ ಎಂದು ತಿಳಿಸಿದರು.

“ಸಮಾನತೆ ಮತ್ತು ಹಸಿರು ಭವಿಷ್ಯದತ್ತ ಭಾರತ ಮುನ್ನಡೆ”

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಜಯದೇವಿ ಅಡಕೇರಿಮಠ ಮಾತನಾಡಿ, ಶುದ್ಧ ಇಂಧನ, ಡಿಜಿಟಲ್ ಮೂಲಸೌಕರ್ಯ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಸಮಾನತೆಯ ಮೂಲಕ ಭಾರತ ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳು ದೇಶದ ಹಸಿರು ಮತ್ತು ಸಮೃದ್ಧ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿವೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ ಮಾತನಾಡಿ, ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್, ಪಿಎಂ-ಕುಸುಮ್ ಯೋಜನೆ, ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಹಾಗೂ ಎಸ್‌ಡಿಜಿ ಇಂಡಿಯಾ ಇಂಡೆಕ್ಸ್ ಮೂಲಕ ದೇಶ ಅಭಿವೃದ್ಧಿಯ ಹೊಸ ದಿಕ್ಕಿನತ್ತ ಸಾಗುತ್ತಿದೆ ಎಂದು ವಿವರಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಬಿ. ಮಡ್ಲೂರ ಮಾತನಾಡಿ, ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಜನಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಉಪಪ್ರಾಚಾರ್ಯ ಐ.ಜೆ. ಪಾಪಣ್ಣ ಮಾತನಾಡಿ, 2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಅಗತ್ಯ ವಾತಾವರಣ ಈಗಾಗಲೇ ನಿರ್ಮಾಣವಾಗಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ನಿರೀಕ್ಷಿತ ಸಾಧನೆ ಸಾಧ್ಯವಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಕರ್ನಾಟಕ ಕೇಂದ್ರದ ಸಂಯೋಜಕ ಡಾ. ಸಿದ್ದರಾಮ ಎಚ್.ಎಂ. ವಿಶೇಷ ಉಪನ್ಯಾಸ ನೀಡಿದರು. ತರಬೇತಿ ಸಂಸ್ಥೆಯ ಬೋಧಕರಾದ ಎಸ್.ಎಂ. ಸುಣಗಾರ, ಆರ್.ಎಂ. ಹರಿಜನ, ಮಂಜುನಾಥ ಪತ್ತಾರ, ಶಂಕರ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

“ಸುಸ್ಥಿರ ಅಭಿವೃದ್ಧಿ ಗುರಿಗಳ ಅನುಷ್ಠಾನದಲ್ಲಿ ಭಾರತ ಸಾಧಿಸಿರುವ ಪ್ರಗತಿ ವಿಶ್ವದ ಗಮನ ಸೆಳೆದಿದ್ದು, 2030ರ ಗುರಿ ತಲುಪುವ ವಿಶ್ವಾಸ ಮತ್ತಷ್ಟು ಬಲಗೊಂಡಿದೆ.”

ಎ.ಎ. ಕಂಬಾಳಿಮಠ, ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್, ಗದಗ

ಮೊದಲು ಶಿಕ್ಷಣ… ನಂತರ ಜೀವನದ ನಿರ್ಧಾರ!

0

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿನಿಯರು ಮೊದಲು ಶಿಕ್ಷಣ ಪೂರ್ಣಗೊಳಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ತಮ್ಮ ಕಾಲ ಮೇಲೆ ತಾವು ನಿಲ್ಲುವವರೆಗೆ ಪ್ರೀತಿ, ಪ್ರಣಯ ಅಥವಾ ಮದುವೆಯಂತಹ ನಿರ್ಧಾರಗಳಿಗೆ ಮುಂದಾಗದೆ ಭವಿಷ್ಯ ಮತ್ತು ಗುರಿ ಸಾಧನೆಗೆ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರೊಂದಿಗೆ ಸಂವಾದ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಯೋಸಹಜವಾಗಿ ಉಂಟಾಗುವ ಆಕರ್ಷಣೆಗೆ ಮರುಳಾಗಿ ಮನೆ ಬಿಟ್ಟು ಹೋಗುವಂತಹ ನಿರ್ಧಾರಗಳು ಇಡೀ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ, ಗುರಿ ಮತ್ತು ವೃತ್ತಿ ಬದುಕಿನತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿಯೊಬ್ಬ ಪೋಷಕರ ಕನಸು ತಮ್ಮ ಮಗಳು ಸ್ವಾವಲಂಬಿಯಾಗಿ ಯಾರ ಮುಂದೆಯೂ ಕೈಚಾಚದಂತಾಗಬೇಕು ಎಂಬುದಾಗಿದೆ. ಆ ಕನಸನ್ನು ನನಸು ಮಾಡಲು ಹೆಣ್ಣುಮಕ್ಕಳು ವಿದ್ಯಾಭ್ಯಾಸದೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ವಿದ್ಯಾರ್ಥಿನಿಯರು ಎಚ್ಚರಿಕೆ ವಹಿಸಬೇಕು. ತಮ್ಮ ಪ್ರೊಫೈಲ್‌ಗಳನ್ನು ಖಾಸಗಿಯಾಗಿ ಇಟ್ಟುಕೊಂಡು ಅಪರಿಚಿತರ ಸ್ನೇಹ ವಿನಂತಿಗಳನ್ನು ಸ್ವೀಕರಿಸಬಾರದು. ನಕಲಿ ಪ್ರೀತಿ, ಡೇಟಿಂಗ್ ಆ್ಯಪ್‌ಗಳು ಹಾಗೂ ಮಾನವ ಕಳ್ಳಸಾಗಣೆ ಜಾಲಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಎಚ್ಚರಿಕೆ ನೀಡಿದರು.

ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ ಪ್ರತಿದಿನ ಕನಿಷ್ಠ ನಾಲ್ಕರಿಂದ ಆರು ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡಬೇಕು. ಶ್ರಮ, ಶಿಸ್ತು ಹಾಗೂ ಗುರಿಯೊಂದಿಗೆ ಮುನ್ನಡೆದರೆ ಐಎಎಸ್, ಐಪಿಎಸ್, ನ್ಯಾಯಾಧೀಶರು, ವಕೀಲರು ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.

ಮಹಿಳೆಯರಿಗೆ ಗೌರವ ನೀಡುವ ಸಂಸ್ಕೃತಿ ಮನೆಯಲ್ಲಿಯೇ ಆರಂಭವಾಗಬೇಕು. “ಯತ್ರ ನಾರ್ಯಸ್ತು ಪೂಜ್ಯಂತೆ” ಎಂಬ ಮಾತು ಕೇವಲ ಪಠ್ಯಕ್ಕೆ ಸೀಮಿತವಾಗದೆ ಜೀವನದಲ್ಲಿ ಅಳವಡಿಕೆಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಆರ್., ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಎಂ. ಗಂಗಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣ್ಣಬರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ವಿ. ಬಳ್ಳಾರಿ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ಎಸ್.ಎನ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಬಸವರಾಜ ಈರಣ್ಣನವರ್ ಅವರ ತಂಡ ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧಾ ಮಣ್ಣೂರು ಸ್ವಾಗತಿಸಿದರು. ಎಸ್.ಎಸ್. ಗೌಡರ್ ಕಾರ್ಯಕ್ರಮ ನಿರೂಪಿಸಿದರು.

“ಶಿಕ್ಷಣ ಮತ್ತು ಸ್ವಾವಲಂಬನೆಯೇ ವಿದ್ಯಾರ್ಥಿನಿಯರ ಮೊದಲ ಗುರಿಯಾಗಬೇಕು. ತಮ್ಮ ಕಾಲ ಮೇಲೆ ತಾವು ನಿಲ್ಲುವವರೆಗೆ ಪ್ರೀತಿ ಅಥವಾ ಮದುವೆಯಂತಹ ನಿರ್ಧಾರಗಳಿಗೆ ಮುಂದಾಗಬಾರದು.”

ಡಾ. ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ

ವಿದ್ಯಾರ್ಥಿ ಜೀವನವೇ ಭವಿಷ್ಯದ ಭದ್ರ ಬುನಾದಿ: ಪಿಎಸ್‌ಐ ನಾಗರಾಜ ಗಡಾದ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಬದುಕಿನ ನಿರ್ಣಾಯಕ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಆತ್ಮವಿಶ್ವಾಸ, ಶಿಸ್ತು ಮತ್ತು ಗುರಿಯೊಂದಿಗೆ ಮುನ್ನಡೆದರೆ ಯಶಸ್ಸು ಖಚಿತ ಎಂದು ಪಿಎಸ್‌ಐ ನಾಗರಾಜ ಗಡಾದ ಹೇಳಿದರು.

ಪಟ್ಟಣದ ಪುರಸಭೆ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ 2026-27ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತಂದೆ-ತಾಯಿಗಳು ಮಕ್ಕಳ ಭವಿಷ್ಯಕ್ಕಾಗಿ ಅಪಾರ ತ್ಯಾಗ ಮಾಡುತ್ತಾರೆ. ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ, ಶಿಸ್ತು, ಸಂಯಮ ಮತ್ತು ಸನ್ನಡತೆಯೊಂದಿಗೆ ಬದುಕಿದರೆ ಅದೇ ಪಾಲಕರಿಗೆ ಹಾಗೂ ಸಮಾಜಕ್ಕೆ ನೀಡುವ ಅತ್ಯುತ್ತಮ ಕೊಡುಗೆಯಾಗುತ್ತದೆ ಎಂದು ಹೇಳಿದರು.

ಕಾಲೇಜಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಸಾಧನೆಯ ಗುರಿಯೊಂದಿಗೆ ಮುನ್ನಡೆಯಬೇಕು. ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಚಾರ್ಯ ಎ.ವೈ. ಕಳ್ಳಿಮನಿ ಮಾತನಾಡಿ, ಪುರಸಭೆ ಪದವಿ ಪೂರ್ವ ಮಹಾವಿದ್ಯಾಲಯವು ಸುಮಾರು 76 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಇಲ್ಲಿಂದ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಾಲೇಜಿನ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದ್ದು, ಮುಂದೆಯೂ ಇನ್ನಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ರೂಪುಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ನೀಲಪ್ಪ ಗೊರವರ, ಯಶವಂತ ಸೂರಣಗಿ ಹಾಗೂ ಅನ್ನಪೂರ್ಣ ದುರ್ಗಣ್ಣವರ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ನೂತನ ವಿದ್ಯಾರ್ಥಿ ಸಂಸತ್ತಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್.ಜಿ. ಹುಳಕನವರ, ಮಂಜುನಾಥ ಬೂದಿಹಾಳ, ಎಚ್.ಎಲ್. ಕೋರಿ, ಎಂ.ಎಲ್. ಬೋದ್ಲೆಖಾನ್, ಎಫ್.ಎಂ. ಚಕಾರದ, ಪಿ.ಡಿ. ದೇಶಪಾಂಡೆ, ಎಫ್.ಜಿ. ಕರೆಪ್ಪಗೌಡ್ರ, ಜಿ.ಪಿ. ಹಿರೇಮಠ, ಐ.ಎಂ. ಸಂಗಟಾಳೂರ, ಡಿ.ಎಂ. ಪೂಜಾರ, ಬಿ.ಜೆ. ಪಾಟೀಲ, ಎಂ.ಆರ್. ಬನ್ನಿಕೊಪ್ಪ ಸೇರಿದಂತೆ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನಾಗವೇಣಿ ಶರಸೂರಿ, ನಾಗಲಕ್ಷ್ಮಿ ಪಾಟೀಲ ಹಾಗೂ ಪವಿತ್ರಾ ಕಿಳ್ಳಿಕ್ಯಾತರ ಕಾರ್ಯಕ್ರಮ ನಿರೂಪಿಸಿದರು.

“ಮೊಬೈಲ್‌ಗೆ ಮಿತಿ ಹಾಕಿ, ಗುರಿಗೆ ಗತಿ ಕೊಡಿ. ಶಿಸ್ತು, ಸಂಯಮ ಮತ್ತು ಪರಿಶ್ರಮವೇ ಯಶಸ್ಸಿನ ನಿಜವಾದ ಸೂತ್ರ.”

ನಾಗರಾಜ ಗಡಾದ, ಪಿಎಸ್‌ಐ

ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಕಣ್ಣಿನ ಆರೋಗ್ಯ ತಪಾಸಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕೆಎಸ್‌ಆರ್‌ಟಿಸಿ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿಯ ಕಣ್ಣಿನ ಆರೋಗ್ಯ ಕಾಪಾಡುವ ಮೂಲಕ ಸುರಕ್ಷಿತ ರಸ್ತೆ ಸಂಚಾರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಡಾ. ಮೆಹರವಾಡೆ ಕಣ್ಣಿನ ಆಸ್ಪತ್ರೆ ಹಾಗೂ ಮಾ. ಕುಷ್ಮಾಂಡಾ ಟ್ರಸ್ಟ್ ವತಿಯಿಂದ ‘ಮಿಷನ್ ನೇತ್ರ ಯಾತ್ರೆ’ ಅಭಿಯಾನವನ್ನು ಗದಗ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆಸಲಾಯಿತು.

ಅಭಿಯಾನದಡಿ ಜಿಲ್ಲೆಯ ಎಲ್ಲ ಕೆಎಸ್‌ಆರ್‌ಟಿಸಿ ಡಿಪೋಗಳಲ್ಲಿ ಉಚಿತ ಸಮಗ್ರ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳು, ಆಡಳಿತ ಸಿಬ್ಬಂದಿ ಸೇರಿದಂತೆ ಡಿಪೋದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಕಣ್ಣಿನ ಪರೀಕ್ಷೆ ನಡೆಸಲಾಯಿತು.

ದೀರ್ಘಕಾಲ ವಾಹನ ಚಾಲನೆ, ಧೂಳು, ಬಿಸಿಲು ಹಾಗೂ ನಿರಂತರ ಕೆಲಸದ ಒತ್ತಡದಿಂದ ಉಂಟಾಗುವ ದೃಷ್ಟಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವ ಉದ್ದೇಶದಿಂದ ಅನುಭವಿ ನೇತ್ರ ತಜ್ಞರು ಮತ್ತು ಆಪ್ಟೊಮೆಟ್ರಿಸ್ಟ್‌ಗಳು ಆಧುನಿಕ ಉಪಕರಣಗಳ ಮೂಲಕ ತಪಾಸಣೆ ನಡೆಸಿದರು. ಈ ವೇಳೆ ಹಲವರಲ್ಲಿ ದೃಷ್ಟಿದೋಷ, ಆರಂಭಿಕ ಹಂತದ ಮೋತಿಬಿಂದು, ಡ್ರೈ ಐ, ಅಲರ್ಜಿ ಹಾಗೂ ವಯೋಸಹಜ ಕಣ್ಣಿನ ಸಮಸ್ಯೆಗಳು ಪತ್ತೆಯಾಗಿದ್ದು, ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ಸಲಹೆ ನೀಡಲಾಯಿತು.

ದೃಷ್ಟಿದೋಷ ಹೊಂದಿದ್ದ ಸಿಬ್ಬಂದಿಗೆ ಅಗತ್ಯ ಪವರ್‌ನ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು. ಕನ್ನಡಕ ಧರಿಸಿದ ಬಳಿಕ ರಸ್ತೆ ಸೂಚನಾ ಫಲಕಗಳನ್ನು ಸ್ಪಷ್ಟವಾಗಿ ಗುರುತಿಸಲು ಹಾಗೂ ಸುರಕ್ಷಿತವಾಗಿ ವಾಹನ ಚಾಲನೆ ಮಾಡಲು ಅನುಕೂಲವಾಗಿದೆ ಎಂದು ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.

ಶಿಬಿರದಲ್ಲಿ ಕಣ್ಣಿನ ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮವೂ ನಡೆಯಿತು. ನಿಯಮಿತ ಕಣ್ಣಿನ ತಪಾಸಣೆಯ ಮಹತ್ವ, ವೈದ್ಯರ ಸಲಹೆಯಂತೆ ಕನ್ನಡಕ ಬಳಕೆ, ವಾಹನ ಚಾಲನೆಯ ವೇಳೆ ಕಣ್ಣಿನ ಒತ್ತಡ ಕಡಿಮೆ ಮಾಡಿಕೊಳ್ಳುವ ವಿಧಾನಗಳು, ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣದಿಂದ ದೃಷ್ಟಿ ರಕ್ಷಣೆ ಸೇರಿದಂತೆ ಹಲವು ವಿಷಯಗಳ ಕುರಿತು ಸಿಬ್ಬಂದಿಗೆ ಅರಿವು ಮೂಡಿಸಲಾಯಿತು.

ಉತ್ತಮ ದೃಷ್ಟಿಯು ಸುರಕ್ಷಿತ ವಾಹನ ಚಾಲನೆಯ ಮೂಲಾಧಾರವಾಗಿದ್ದು, ಈ ಅಭಿಯಾನದ ಮೂಲಕ ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಆರೋಗ್ಯದ ಜೊತೆಗೆ ಸಾವಿರಾರು ಪ್ರಯಾಣಿಕರ ಸುರಕ್ಷತೆಯನ್ನೂ ಪರೋಕ್ಷವಾಗಿ ಕಾಪಾಡುವ ಕಾರ್ಯ ನಡೆದಿದೆ. ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿಯೂ ಇಂತಹ ಸಮುದಾಯ ನೇತ್ರ ಆರೈಕೆ ಕಾರ್ಯಕ್ರಮಗಳನ್ನು ವಿಸ್ತರಿಸುವುದಾಗಿ ಡಾ. ಮೆಹರವಾಡೆ ಕಣ್ಣಿನ ಆಸ್ಪತ್ರೆ ತಿಳಿಸಿದೆ.