Home Blog

‘ಪವನ್ ಬಳಿಕ ಈಗ ರಾಮ್ ಚರಣ್’; ಮೆಗಾ ಕುಟುಂಬದ ಸ್ಟಾರ್‌ಗೆ ಮಣಿಕಟ್ಟು ಶಸ್ತ್ರಚಿಕಿತ್ಸೆ

ಕೊಯಮತ್ತೂರು: ‘ಪೆದ್ದಿ’ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ರಾಮ್ ಚರಣ್ ಆರೋಗ್ಯ ಸಮಸ್ಯೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ದಿನಗಳಿಂದ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ ಅವರು, ವೈದ್ಯರ ಸಲಹೆಯಂತೆ ಶೀಘ್ರದಲ್ಲೇ ಮೈನರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಚಿಕಿತ್ಸೆಗಾಗಿ ಕೊಯಮತ್ತೂರಿನ ಪ್ರತಿಷ್ಠಿತ ಗಂಗಾ ಆಸ್ಪತ್ರೆಗೆ ದಾಖಲಾಗಲಿದ್ದಾರೆ.

‘ಪೆದ್ದಿ’ ಚಿತ್ರದ ಪ್ರಚಾರದ ವೇಳೆಯೇ ರಾಮ್ ಚರಣ್ ಕೈಗೆ ಪ್ಲಾಸ್ಟರ್ ಧರಿಸಿಕೊಂಡು ಕಾಣಿಸಿಕೊಂಡಿದ್ದರು. ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದರೂ, ಚಿತ್ರದ ಪ್ರಚಾರಕ್ಕೆ ಅಡ್ಡಿಯಾಗಬಾರದೆಂದು ವೈದ್ಯರ ಸಲಹೆಯಂತೆ ಪ್ಲಾಸ್ಟರ್ ಧರಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಆದರೆ ಇತ್ತೀಚೆಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಗಾಯ ಸಂಪೂರ್ಣ ಗುಣಮುಖವಾಗಿಲ್ಲ ಎಂಬುದು ತಿಳಿದುಬಂದಿದೆ. ನಿರಂತರ ನೋವು ಮತ್ತು ಮಣಿಕಟ್ಟಿನ ಮೇಲಿನ ಒತ್ತಡದಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ.

ಶಸ್ತ್ರಚಿಕಿತ್ಸೆ ವೇಳೆ ಮೆಗಾಸ್ಟಾರ್ ಚಿರಂಜೀವಿ, ಸುರೇಖಾ, ಉಪಾಸನಾ ಸೇರಿದಂತೆ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲೇ ಜೊತೆಯಾಗಲಿದ್ದಾರೆ. ಖ್ಯಾತ ಅಸ್ಥಿ ತಜ್ಞ ಡಾ. ರಾಜಶೇಖರ್ ನೇತೃತ್ವದಲ್ಲಿ ವೈದ್ಯರ ತಂಡ ಚಿಕಿತ್ಸೆ ನೀಡಲಿದೆ.

ಗಮನಾರ್ಹ ಸಂಗತಿಯೆಂದರೆ, ಕೆಲವೇ ದಿನಗಳ ಹಿಂದೆ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಕೂಡ ಭುಜದ ಗಾಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮೆಗಾ ಕುಟುಂಬದ ಮತ್ತೊಬ್ಬ ಸ್ಟಾರ್ ನಟನಿಗೂ ಶಸ್ತ್ರಚಿಕಿತ್ಸೆ ಅಗತ್ಯವಾಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ‘ಪೆದ್ದಿ’ ಯಶಸ್ಸಿನ ಬಳಿಕ ರಾಮ್ ಚರಣ್ ಮುಂದಿನ ಚಿತ್ರವನ್ನು ನಿರ್ದೇಶಕ ಸುಕುಮಾರ್ ಜೊತೆ ಆರಂಭಿಸಲಿದ್ದಾರೆ.

‘ರಾಯನ್‌ಗಿಂತ ಉತ್ತಮ ಸಿನಿಮಾಗಳು ಇದ್ದವು’: ರಾಷ್ಟ್ರ ಪ್ರಶಸ್ತಿ ವಿವಾದದ ಬಗ್ಗೆ ಧನುಷ್ ನೇರ ಮಾತು

ಚೆನ್ನೈ: ‘ರಾಯನ್’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಘೋಷಣೆಯಾದ ಬಳಿಕ ಎದ್ದಿದ್ದ ಟೀಕೆಗಳ ಬಗ್ಗೆ ನಟ ಧನುಷ್ ಮೌನ ಮುರಿದಿದ್ದಾರೆ. ತಮ್ಮ ಚಿತ್ರಕ್ಕಿಂತ ಉತ್ತಮ ಸಿನಿಮಾಗಳು ಇದ್ದವು ಎನ್ನುವುದನ್ನು ಒಪ್ಪಿಕೊಂಡಿರುವ ಅವರು, ಪ್ರಶಸ್ತಿಯನ್ನು ವಿವಾದ ಮಾಡುವ ಬದಲು ತಮಿಳು ಚಿತ್ರರಂಗದ ಸಾಧನೆಯಾಗಿ ಗೌರವಿಸಬೇಕು ಎಂದು ಹೇಳಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪ್ರಕಟವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ‘ಮಹಾರಾಜ’ ಹಾಗೂ ‘ಮೆಯ್ಯಳಗನ್’ ಚಿತ್ರಗಳಿಗೆ ಪ್ರಶಸ್ತಿ ಸಿಗಬೇಕಿತ್ತು ಎಂಬ ಚರ್ಚೆ ಜೋರಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಧನುಷ್, ‘ಬೇರೆ ಸಿನಿಮಾಗಳು ಉತ್ತಮವಾಗಿದ್ದವು ಎನ್ನುವ ಅಭಿಪ್ರಾಯ ಸಹಜ. ಆದರೆ ಪ್ರಶಸ್ತಿ ತೀರ್ಪು ನನ್ನ ಕೈಯಲ್ಲಿರಲಿಲ್ಲ’ ಎಂಬ ಅರ್ಥದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿದರು.

ತಮ್ಮ ವೃತ್ತಿಜೀವನದ ಅನುಭವ ಹಂಚಿಕೊಂಡ ಅವರು, ‘ಪುದುಪೇಟ್ಟೈ’, ‘ವಡಾ ಚೆನ್ನೈ’, ‘ಕರ್ಣನ್’ ಮತ್ತು ‘ಮರಿಯನ್’ ಸಿನಿಮಾಗಳು ರಾಷ್ಟ್ರ ಪ್ರಶಸ್ತಿಗೆ ಅರ್ಹವಾಗಿದ್ದರೂ ಆಯ್ಕೆಯಾಗಲಿಲ್ಲ ಎಂದು ನೆನಪಿಸಿದರು. ಆ ಸಂದರ್ಭದಲ್ಲಿ ಯಾರೂ ಇಂತಹ ಮಟ್ಟದ ವಿವಾದ ಎಬ್ಬಿಸಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಪ್ರಶಸ್ತಿಗಳು ಯಾವಾಗಲೂ ನಮ್ಮ ನಿರೀಕ್ಷೆಯಂತೆ ಬರುವುದಿಲ್ಲ. ಈ ಬಾರಿ ನನಗೆ ಎರಡು ದೊಡ್ಡ ಗೌರವಗಳು ಲಭಿಸಿವೆ. ಅದನ್ನು ವೈಯಕ್ತಿಕ ಗೆಲುವಾಗಿ ಅಲ್ಲ, ತಮಿಳು ಸಿನಿರಂಗದ ಸಾಧನೆಯಾಗಿ ನೋಡಬೇಕು. ವಿವಾದಕ್ಕಿಂತ ಸಂಭ್ರಮಕ್ಕೆ ಹೆಚ್ಚಿನ ಸ್ಥಾನ ನೀಡೋಣ’ ಎಂದು ಧನುಷ್ ಅಭಿಮಾನಿಗಳಿಗೆ ಕರೆ ನೀಡಿದರು.

ಬಂಡೀಪುರ ಸಫಾರಿ ದುಬಾರಿ..! ಸೆಪ್ಟೆಂಬರ್ 1ರಿಂದ ಹೊಸ ದರ ಜಾರಿ, ಜೀಪ್ ಸಫಾರಿ ಶುಲ್ಕ ಡಬಲ್

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದೆ.

ಸಫಾರಿ ಸೇರಿದಂತೆ ಹಲವು ಪ್ರವಾಸೋದ್ಯಮ ಸೇವೆಗಳ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದ್ದು, ಹೊಸ ದರಗಳು 2026ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿವೆ.

ಅರಣ್ಯ ಇಲಾಖೆ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಬಸ್ ಸಫಾರಿ, ಜೀಪ್ ಸಫಾರಿ, ಖಾಸಗಿ ವಾಹನ ಪ್ರವೇಶ, ಕ್ಯಾಮೆರಾ ಬಳಕೆ ಹಾಗೂ ಅತಿಥಿಗೃಹಗಳ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ. ಇದರಿಂದ ಬಂಡೀಪುರ ಪ್ರವಾಸ ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ಬಂಡೀಪುರ ಸಫಾರಿ ಹೊಸ ದರಗಳು:

ಬಸ್ ಸಫಾರಿ:

  • ವಯಸ್ಕರಿಗೆ: ₹650ರಿಂದ ₹1,000ಕ್ಕೆ ಏರಿಕೆ
  • 12 ವರ್ಷದೊಳಗಿನ ಮಕ್ಕಳಿಗೆ: ₹350ರಿಂದ ₹500ಕ್ಕೆ ಹೆಚ್ಚಳ

ಜೀಪ್ ಸಫಾರಿ:

  • ವಯಸ್ಕರಿಗೆ: ₹750ರಿಂದ ₹1,500ಕ್ಕೆ ಏರಿಕೆ
  • ಮಕ್ಕಳಿಗೆ: ₹750 ದರ ನಿಗದಿ

ಈ ದರಗಳಲ್ಲಿ ನೇಚರ್ ಗೈಡ್ ಶುಲ್ಕ ಸೇರಿರುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಕ್ಯಾಮೆರಾ ಬಳಕೆಗೆ ಹೊಸ ನಿಯಮ:

ಹೊಸ ನಿಯಮದ ಪ್ರಕಾರ,

  • 200 ಮಿ.ಮೀ.ವರೆಗೆ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ಯಾವುದೇ ಶುಲ್ಕ ಇಲ್ಲ.
  • 200 ಮಿ.ಮೀ.ಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ₹1,500 + 18% GST ಪಾವತಿಸಬೇಕು.
  • ಖಾಸಗಿ ವಾಹನ ಪ್ರವೇಶ ಶುಲ್ಕ ಹೆಚ್ಚಳ

ಅರಣ್ಯ ಪ್ರದೇಶಕ್ಕೆ ಪ್ರವೇಶಿಸುವ ಖಾಸಗಿ ವಾಹನಗಳಿಗೂ ಹೊಸ ದರ ನಿಗದಿಯಾಗಿದೆ.

  • ಕಾರು: ₹100 + 18% GST
  • ಲಘು ವಾಣಿಜ್ಯ ವಾಹನ (LCV): ₹200 + 18% GST
  • ಬಸ್: ₹300 + 18% GST

ಸ್ವಂತ ವಾಹನದ ಮೂಲಕ ಸಫಾರಿಗೆ ಹೊಸ ದರ

ಅನುಮತಿ ಪಡೆದ ಪ್ರದೇಶಗಳಿಗೆ ಸ್ವಂತ ಜೀಪ್, ಎಲ್‌ಸಿವಿ ಅಥವಾ ಬೋಟ್ ಮೂಲಕ ತೆರಳುವವರಿಗೆ:

  • ವಯಸ್ಕರು: ₹600
  • ಮಕ್ಕಳು: ₹300
  • ಜೀಪ್: ₹2,500
  • ಎಲ್‌ಸಿವಿ: ₹3,500
  • ಬೋಟ್: ₹3,500

ಪ್ರವಾಸೋದ್ಯಮದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಆದರೆ ದರ ಏರಿಕೆಯಿಂದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಪ್ರವಾಸಿಗರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕಾಡುಹಂದಿ ಬೇಟೆಗೆ ಹಾಕಿದ್ದ ವಿದ್ಯುತ್ ತಂತಿಗೆ ವ್ಯಕ್ತಿ ಬಲಿ; ಶವ ಹೂತು ಹಾಕಿದ್ದ ಮೂವರು ಅರೆಸ್ಟ್

ಚಿಕ್ಕಮಗಳೂರು: ಕಾಡುಹಂದಿ ಶಿಕಾರಿಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೊಣ್ಣೆಕೋರನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಗ್ರಾಮದ ಕರಿಯಪ್ಪ (55) ಎಂದು ಗುರುತಿಸಲಾಗಿದೆ. ಘಟನೆ ಬಳಿಕ ವಿಷಯ ಹೊರಬಾರದಂತೆ ಶವವನ್ನು ಗುಟ್ಟಾಗಿ ಹೂತು ಹಾಕಿದ್ದ ಮೂವರು ಆರೋಪಿಗಳನ್ನು ಯಗಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಣ್ಣೆಕೋರನಹಳ್ಳಿ ಗ್ರಾಮದ ಬಳಿ ಚಂದ್ರಪ್ಪ, ಕೆಂಚಪ್ಪ ಮತ್ತು ಯದುಕುಮಾರ್ ಎಂಬವರು ಕಾಡುಹಂದಿ ಬೇಟೆಯಾಡುವ ಉದ್ದೇಶದಿಂದ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿದ್ದರು ಎನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ಅಲ್ಲಿಗೆ ತೆರಳಿದ್ದ ಕರಿಯಪ್ಪ ಅವರು ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಿಂದ ಆತಂಕಗೊಂಡ ಆರೋಪಿಗಳು, ಪ್ರಕರಣದಿಂದ ತಪ್ಪಿಸಿಕೊಳ್ಳಲು ಕರಿಯಪ್ಪ ಅವರ ಶವವನ್ನು ಯಾರಿಗೂ ತಿಳಿಯದಂತೆ ಹೂತು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ.

ಇತ್ತ ಕರಿಯಪ್ಪ ಅವರು ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದ್ದಾರೆ. ಯಾವುದೇ ಸುಳಿವು ಸಿಗದಿದ್ದಾಗ ಯಗಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆಗೆ ಸಂಬಂಧಿಸಿದ ಮಾಹಿತಿ ಲಭ್ಯವಾಗಿದೆ. ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ.

ಘಟನೆ ಖಂಡಿಸಿ ಗ್ರಾಮಸ್ಥರು ಯಗಟಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಸದ್ಯ ಮೂವರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕಲಬುರಗಿಯಲ್ಲಿ ಬರ್ಬರ ಕೊಲೆ..! ವೈನ್ ಶಾಪ್ ಮುಂದೆ ವ್ಯಕ್ತಿ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು!

ಕಲಬುರಗಿ: ನಗರದ ಹಳೆ ಆರ್‌ಟಿಓ ರಸ್ತೆಯ ವೈನ್ ಶಾಪ್‌ವೊಂದರ ಮುಂಭಾಗದಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಕಲಬುರಗಿಯ ಆದರ್ಶ ನಗರದ ನಿವಾಸಿ ರವಿ ಗುತ್ತೆದಾರ್ (46) ಎಂದು ಗುರುತಿಸಲಾಗಿದೆ. ಟೀ ಪಾಯಿಂಟ್‌ಗಳು ಹಾಗೂ ಸಭೆ-ಸಮಾರಂಭಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ರವಿ, ನಿನ್ನೆ ರಾತ್ರಿ ಮದ್ಯ ಖರೀದಿಸಲು ವೈನ್ ಶಾಪ್‌ಗೆ ಬಂದಿದ್ದರು.

ಮದ್ಯ ಖರೀದಿಸಿ ಹೊರಬಂದು ವಾಹನದ ಮೇಲೆ ಕುಳಿತುಕೊಳ್ಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರವಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ರವಿ ಗುತ್ತೆದಾರ್ ವಿರುದ್ಧ 2021ರಲ್ಲಿ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆ ಸಂಬಂಧ ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಶಿವಗಂಗೆ ಬೆಟ್ಟದಲ್ಲಿ ಮಂಗನ ಹೈಡ್ರಾಮಾ; ಯುವತಿಯ ಮೊಬೈಲ್ ಕಸಿದು ಗೋಪುರ ಏರಿದ ಕೋತಿ!

ನೆಲಮಂಗಲ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ಮಂಗವೊಂದು ಪ್ರವಾಸಿಗರಿಗೆ ವಿಚಿತ್ರ ಅನುಭವ ನೀಡಿದ ಘಟನೆ ನಡೆದಿದೆ.

ಶಿವಗಂಗೆ ಬೆಟ್ಟ ವೀಕ್ಷಣೆಗೆ ಬಂದಿದ್ದ ಯುವತಿಯೊಬ್ಬರ ಕೈಯಲ್ಲಿದ್ದ ಮೊಬೈಲ್‌ ಅನ್ನು ಏಕಾಏಕಿ ಕಸಿದುಕೊಂಡ ಮಂಗ, ನೇರವಾಗಿ ದೇವಾಲಯದ ಗೋಪುರದ ಶಿಖರ ಏರಿ ಕುಳಿತುಕೊಂಡಿದೆ.

ಮೊಬೈಲ್ ವಾಪಸ್ ಪಡೆಯಲು ಯುವತಿ ಹಾಗೂ ಆಕೆಯ ಜೊತೆಗಿದ್ದವರು ಸಾಕಷ್ಟು ಪ್ರಯತ್ನಪಟ್ಟರೂ ಮಂಗ ಕೆಳಗೆ ಬರಲಿಲ್ಲ. ಸುಮಾರು ಒಂದು ಗಂಟೆ ಕಾಲ ಮೊಬೈಲ್ ಹಿಡಿದುಕೊಂಡೇ ಪ್ರವಾಸಿಗರನ್ನು ಸತಾಯಿಸಿದ ಕೋತಿ, ಕೊನೆಗೆ ಮೊಬೈಲ್ ಅನ್ನು ಕೆಳಗೆ ಎಸೆದಿದೆ.

ಮೊಬೈಲ್ ಕೈಗೆ ಸಿಕ್ಕಿದ್ದರಿಂದ ಯುವತಿ ನಿಟ್ಟುಸಿರು ಬಿಟ್ಟರೂ, ಫೋನ್‌ಗೆ ಸಣ್ಣಪುಟ್ಟ ಹಾನಿಯಾಗಿರುವುದು ಕಂಡು ಕೊಂಚ ಬೇಸರಗೊಂಡಿದ್ದಾರೆ.

ಶಿವಗಂಗೆ ಬೆಟ್ಟದಲ್ಲಿ ಮಂಗಗಳ ಕಾಟ ಸಾಮಾನ್ಯವಾಗಿದ್ದು, ಪ್ರವಾಸಿಗರು ತಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಸೂಚಿಸಿದ್ದಾರೆ.

ಮೀನುಗಾರರು, ಪ್ರವಾಸಿಗರಿಗೆ ಎಚ್ಚರಿಕೆ! ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಎರಡು ದಿನ ಹಲವು ಜಿಲ್ಲೆಗಳಲ್ಲಿ ಮಳೆ ಹಾಗೂ ಬಿರುಗಾಳಿಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ವಿಶೇಷವಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಜುಲೈ 27 ಮತ್ತು 28ರಂದು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಈ ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯೂ ಇದೆ.

ಉತ್ತರ ಒಳನಾಡಿನಲ್ಲೂ ಮಳೆ ಸಾಧ್ಯತೆ:

ಜುಲೈ 27ರಂದು ಬೆಳಗಾವಿ, ಧಾರವಾಡ, ಹಾವೇರಿ, ಗದಗ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಧಾರಣದಿಂದ ಮಧ್ಯಮ ಮಳೆಯಾಗುವ ಮುನ್ಸೂಚನೆ ಇದೆ. ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ.

ಜುಲೈ 28ರಂದು ಬೀದರ್, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ಸೇರಿ ದಕ್ಷಿಣ ಒಳನಾಡಿಗೂ ಮಳೆ ಮುನ್ಸೂಚನೆ:

ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ದಾವಣಗೆರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಜುಲೈ 27ರಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಇನ್ನು ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ 30ರಿಂದ 40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ.

ಕರಾವಳಿಯಲ್ಲಿ ಮುಂದುವರಿದ ಮಳೆಯ ಅಬ್ಬರ:

ಕಳೆದ 24 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಮುಂಗಾರು ಚುರುಕಾಗಿದ್ದು, ಹಲವು ಕಡೆ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮಂಕಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ತಲಾ 12 ಸೆಂ.ಮೀ. ಮಳೆಯಾಗಿದೆ.

ಇನ್ನು ಬೆಳ್ತಂಗಡಿಯಲ್ಲಿ 9 ಸೆಂ.ಮೀ., ಕಾರ್ಕಳದಲ್ಲಿ 8 ಸೆಂ.ಮೀ., ಧರ್ಮಸ್ಥಳ ಹಾಗೂ ಮಂಗಳೂರು ವೀಕ್ಷಣಾಲಯದಲ್ಲಿ ತಲಾ 7 ಸೆಂ.ಮೀ. ಮಳೆ ದಾಖಲಾಗಿದೆ.

ಗುಡುಗು, ಮಿಂಚು ಹಾಗೂ ಬಿರುಗಾಳಿಯ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ.

ಬನ್ನೇರುಘಟ್ಟ ರಸ್ತೆಯಲ್ಲಿ ಹೈಡ್ರಾಮಾ: ಸ್ವಿಫ್ಟ್ ಕಾರಿನ ಕೀ ಕಿತ್ತು ಓಡಿದ ಇನ್ನೋವಾ ಚಾಲಕ!

ಬೆಂಗಳೂರು: ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ರಸ್ತೆ ಅಪಘಾತದ ಬಳಿಕ ಇನ್ನೋವಾ ಹಾಗೂ ಸ್ವಿಫ್ಟ್ ಕಾರು ಚಾಲಕರ ನಡುವೆ ಸಿನಿಮಾ ಮಾದರಿಯ ಚೇಸಿಂಗ್ ನಡೆದಿದ್ದು, ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ಇನ್ನೋವಾ ಕಾರು ಸ್ವಿಫ್ಟ್ ಕಾರಿಗೆ ಸ್ಪರ್ಶಿಸಿದ ಬಳಿಕ ಎರಡೂ ವಾಹನಗಳು ರಸ್ತೆ ಬದಿಯಲ್ಲಿ ನಿಂತಿದ್ದವು. ಈ ವೇಳೆ ಇನ್ನೋವಾ ಚಾಲಕ ಸ್ವಿಫ್ಟ್ ಕಾರಿನ ಕೀ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.

ತಕ್ಷಣ ಜಾಗೃತನಾದ ಸ್ವಿಫ್ಟ್ ಕಾರು ಚಾಲಕ, ಸ್ಥಳದಲ್ಲಿದ್ದ ಬೈಕ್ ಸವಾರನ ನೆರವು ಪಡೆದು ಇನ್ನೋವಾ ಕಾರನ್ನು ಬೆನ್ನಟ್ಟಿದ್ದಾರೆ. ಬಳಿಕ ಚಾಲಕನನ್ನು ತಡೆದು ಪೊಲೀಸ್ ಠಾಣೆಗೆ ತೆರಳುವಂತೆ ಸೂಚಿಸಿದ್ದಾರೆ.

ಆದರೆ, ಠಾಣೆಗೆ ಬರುವುದಾಗಿ ಹೇಳಿದ ಇನ್ನೋವಾ ಚಾಲಕ ಮತ್ತೆ ರ್ಯಾಶ್ ಡ್ರೈವಿಂಗ್ ಮಾಡುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಮತ್ತೊಮ್ಮೆ ಬೈಕ್‌ನಲ್ಲಿ ಬೆನ್ನಟ್ಟಿದ ಸ್ವಿಫ್ಟ್ ಚಾಲಕ, ಕೊನೆಗೂ ಇನ್ನೋವಾ ಕಾರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಳಿಮಾವು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಕೆ.ಎಸ್. ಈಶ್ವರಪ್ಪ ವಿರುದ್ಧ ಗೆದ್ದಿದ್ದ ಮಾಜಿ ಶಾಸಕ ಚಂದ್ರಶೇಖರಪ್ಪ ವಿಧಿವಶ!

ಶಿವಮೊಗ್ಗ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಮೊಗ್ಗ ನಗರ ಕ್ಷೇತ್ರದ ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ (78) ಅವರು ನಿಧನರಾಗಿದ್ದಾರೆ.

ಕಳೆದ ಎರಡು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಚಂದ್ರಶೇಖರಪ್ಪ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಮಾಜಿ ಶಾಸಕರ ಪಾರ್ಥಿವ ಶರೀರ ಸದ್ಯ ಆಸ್ಪತ್ರೆಯಲ್ಲಿದ್ದು, ರಾತ್ರಿ ವೇಳೆಗೆ ಕುಟುಂಬಸ್ಥರು ಶಿವಮೊಗ್ಗಕ್ಕೆ ತರಲಿದ್ದಾರೆ. ನಾಳೆ ಸಂಜೆ ವೇಳೆಗೆ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹೆಚ್.ಎಂ. ಚಂದ್ರಶೇಖರಪ್ಪ ಅವರು 1999ರಿಂದ 2004ರ ಅವಧಿಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. ಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿದ್ದ ಅವರು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಮಾಜಿ ಶಾಸಕರ ವೇದಿಕೆಯ ರಾಜ್ಯ ಅಧ್ಯಕ್ಷರಾಗಿ ಹಾಗೂ ವೀರಶೈವ-ಲಿಂಗಾಯತ ಮಹಾಸಭಾದ ಮಾಜಿ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಚಂದ್ರಶೇಖರಪ್ಪ ಅವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಿರಿಯ ರಾಜಕೀಯ ನಾಯಕರ ಅಗಲಿಕೆಯಿಂದ ಕಾಂಗ್ರೆಸ್ ವಲಯದಲ್ಲಿ ಶೋಕ ಆವರಿಸಿದೆ.

 

ಪತ್ರಕರ್ತರ ಮುಖವಾಡ, ಪೊಲೀಸರ ಸೋಗು; ಸುಲಿಗೆ ಮಾಡುತ್ತಿದ್ದ ನಾಲ್ವರು ಯೂಟ್ಯೂಬರ್‌ಗಳು ಅರೆಸ್ಟ್!

ಬೆಳಗಾವಿ: ಪೊಲೀಸರ ಸೋಗು ಹಾಕಿ, ಪತ್ರಕರ್ತರ ಮುಖವಾಡದಲ್ಲಿ ಗಾಂಜಾ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ ₹60 ಸಾವಿರ ಸುಲಿಗೆ ಮಾಡಿದ ಆರೋಪದಡಿ ನಾಲ್ವರು ಯೂಟ್ಯೂಬರ್‌ಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

ಜುಲೈ 18ರಂದು ಹುಕ್ಕೇರಿ ತಾಲೂಕಿನ ಕೋಟಭಾಗಿ ಗ್ರಾಮದ ಮಹಿಬೂಬ್ ಬಾಬುಸಾಬ್ ಜಮಾದಾರ್ ಎಂಬುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬಲವಂತವಾಗಿ ಎರಡು ಗಾಂಜಾ ಪೊಟ್ಟಣಗಳನ್ನು ನೀಡಿ ₹1,000 ಪಡೆದಿದ್ದ. ಬಳಿಕ ಕೆಲವೇ ಸಮಯದಲ್ಲಿ ಕಾರಿನಲ್ಲಿ ಬಂದ ನಾಲ್ವರು ಆರೋಪಿಗಳು ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಮಹಿಬೂಬ್ ಅವರನ್ನು ಕಬ್ಬಿನ ಗದ್ದೆಗೆ ಕರೆದೊಯ್ದಿದ್ದಾರೆ.

“ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯ” ಎಂದು ಬೆದರಿಸಿದ ಆರೋಪಿಗಳು, ಗಾಂಜಾ ಪೊಟ್ಟಣಗಳೊಂದಿಗೆ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿದ್ದಾರೆ. ನಂತರ ಹುಕ್ಕೇರಿ ಪೊಲೀಸ್ ಠಾಣೆ ಬಳಿ ಕರೆದುಕೊಂಡು ಹೋಗಿ, “ಪ್ರಕರಣ ದಾಖಲಿಸಿ ಹಿಂಡಲಗಾ ಜೈಲಿಗೆ ಕಳುಹಿಸುತ್ತೇವೆ, ಹಣ ಕೊಟ್ಟು ಪ್ರಕರಣ ಮುಗಿಸಿಕೊಳ್ಳಿ” ಎಂದು ಬೆದರಿಸಿ ₹2ರಿಂದ ₹3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಭಯಗೊಂಡ ಮಹಿಬೂಬ್ ಅವರಿಂದ ಅಂತಿಮವಾಗಿ ₹60 ಸಾವಿರ ನಗದು ಪಡೆದುಕೊಂಡಿದ್ದು, ಚಿತ್ರೀಕರಿಸಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ಜುಲೈ 24ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಹುಕ್ಕೇರಿ ಪಟ್ಟಣದ ಕಲ್ಲಪ್ಪ ಬಸವಣ್ಣಿ ಮಾಳಾಜ, ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿಯ ಮಲ್ಲಿಕಾರ್ಜುನ ಸಿದ್ಧಪ್ಪ ಜುಲಫಿ, ಬೆಳಗಾವಿಯ ಪೃಥ್ವಿರಾಜ್ ನಾರಾಯಣ ಚೌಹಾಣ್ ಹಾಗೂ ಗಣೇಶಪುರದ ಡೇವಿಡ್ ಜಾಕೋಬ್ ತಂಗೇರಾಳ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಮಾರುತಿ ಎರ್ಟಿಗಾ ಕಾರು, ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್, ಎರಡು ಮೊಬೈಲ್ ಫೋನ್‌ಗಳು ಹಾಗೂ ಸುಲಿಗೆ ಮಾಡಿದ ₹34 ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಹುಕ್ಕೇರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.