Home Blog

ಬೆಂಗಳೂರಿನ ಸೌತ್ ರುಚೀಸ್ ಹೋಟೆಲ್ ಮೇಲೆ FDA ದಾಳಿ; ಅವಧಿ ಮೀರಿದ ಆಹಾರ ಪತ್ತೆ!

0

ಬೆಂಗಳೂರು: ಗ್ರಾಹಕರಿಂದ ಬಂದ ದೂರುಗಳ ಆಧಾರದ ಮೇಲೆ FDA ಅಧಿಕಾರಿಗಳು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸೌತ್ ರುಚೀಸ್ ಹೋಟೆಲ್‌ ಮೇಲೆ ದಾಳಿ ನಡೆಸಿದ್ದಾರೆ.

ಪರಿಶೀಲನೆ ವೇಳೆ ಹೋಟೆಲ್‌ನ ಅಡುಗೆಮನೆಯಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಒಳಭಾಗದಲ್ಲಿ ಜಿರಳೆಗಳು ಓಡಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಡುಗೆಮನೆಯ ಹಲವು ಭಾಗಗಳಲ್ಲಿ ಅಸ್ವಚ್ಛತೆ ಇರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ.

ಇದಲ್ಲದೆ, ಕೊಬ್ಬರಿ ಪುಡಿ, ಸಾಂಬಾರ್ ಪುಡಿ, ರಸಂ ಪುಡಿ, ಮಶ್ರೂಮ್ ಹಾಗೂ ಸೌತ್ ರುಚೀಸ್ ಹೆಸರಿನ ಚಟ್ನಿ ಪುಡಿ ಸೇರಿದಂತೆ ಹಲವು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ತಪ್ಪಾಗಿ ಲೇಬಲ್ ಮಾಡಲಾಗಿದ್ದ ಆಹಾರ ಪದಾರ್ಥಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಾಗೂ ಅಡುಗೆಮನೆಯಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ, ಹೋಟೆಲ್‌ನ ಅಡುಗೆಮನೆಯನ್ನು ತಕ್ಷಣ ಸೀಜ್ ಮಾಡಲು FDA ಆಯುಕ್ತರು ಆದೇಶಿಸಿದ್ದಾರೆ.

ಅವಧಿ ಮೀರಿದ ಹಾಗೂ ನಿಯಮಾನುಸಾರ ಲೇಬಲ್ ಮಾಡದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದ್ದು, ಹೋಟೆಲ್ ಮಾಲೀಕ ಪ್ರದೀಪ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಕಾಮಗಾರಿಗಳು ಗುಣಮಟ್ಟದ್ದಾಗಿರಲಿ: ಮಿಥುನ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದಲ್ಲಿ ಕೈಗೊಳ್ಳುವ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ನಿಗದಿತ ಅನುದಾನಕ್ಕೆ ಅನುಗುಣವಾಗಿ ಕಾಮಗಾರಿ ನಿರ್ವಹಿಸಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಬೇಕು ಎಂದು ರೋಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಎರಡು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನಸಭೆ ಅಧ್ಯಕ್ಷ ಹಾಗೂ ತಮ್ಮ ತಂದೆ ಜಿ.ಎಸ್. ಪಾಟೀಲರು ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದು, ಅಗತ್ಯ ಅನುದಾನ ತರುವಲ್ಲಿ ಹಿಂದೆ ಬಿದ್ದಿಲ್ಲ. ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವುದು ಎಲ್ಲರ ಜವಾಬ್ದಾರಿ ಎಂದರು.

ರೋಣ-ಜಕ್ಕಲಿ-ನರೇಗಲ್ಲ-ಅಬ್ಬಿಗೇರಿ ರಸ್ತೆ ಸುಧಾರಣೆಗೆ ₹೧೫೦ ಲಕ್ಷ ಹಾಗೂ ಗಾಂಧಿ ಭವನ ನವೀಕರಣಕ್ಕೆ ₹೩೫ ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಗಳು ಶೀಘ್ರ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಬೇಕು. ಗಾಂಧಿ ಭವನದಲ್ಲಿ ಹಿಂದಿನಂತೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಬೇಕು ಹಾಗೂ ಕಟ್ಟಡ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ಪಪಂ ಮಾಜಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಪ್ರಿಯಾಂಕಾ ನಡುವಿನಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ರಾಷ್ಟ್ರ ನಿರ್ಮಾತೃಗಳಾಗಿದ್ದು, ಸಮರ್ಥ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಉಪನ್ಯಾಸಕಿ ಪ್ರಿಯಾಂಕಾ ನಡುವಿನಮನಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ, ಅವರಿಗೆ ಸೂಕ್ತ ಅವಕಾಶ ಕಲ್ಪಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ. ಗುರುಕುಲ ಪದ್ಧತಿಯಿಂದ ಎಐ ಶಿಕ್ಷಣದವರೆಗೆ ವ್ಯವಸ್ಥೆ ಬದಲಾಗಿದ್ದರೂ ಶಿಕ್ಷಕರ ಮಹತ್ವ ಕಡಿಮೆಯಾಗಿಲ್ಲ. ಯಾವುದೇ ತಂತ್ರಜ್ಞಾನ ಶಿಕ್ಷಕರಿಗೆ ಪರ್ಯಾಯವಾಗಲಾರದು, ಅವು ಪೂರಕವಾಗಿ ಕಾರ್ಯನಿರ್ವಹಿಸಬಹುದೇ ಹೊರತು ವಿದ್ಯಾರ್ಥಿಗಳಲ್ಲಿ ಭಾವನೆಗಳನ್ನು ತುಂಬಲು ಸಾಧ್ಯವಿಲ್ಲ ಎಂದರು.

ಆರ್‌ಡಿಪಿಆರ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಮರೇಶ ಯತಗಲ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಶಿಕ್ಷಕರ ಸೇವೆ ಸ್ಮರಣೀಯವಾಗಿದೆ ಎಂದರು.

ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ಸೋಮಣ್ಣವರ ಮಾತನಾಡಿ, ಶಿಕ್ಷಕರಿಗೆ ಬೋಧನೆಯೇತರ ಕೆಲಸಗಳ ಹೊರೆ ಹೆಚ್ಚಿದ್ದು, ಇದು ಗುಣಮಟ್ಟದ ಶಿಕ್ಷಣಕ್ಕೆ ಅಡಚಣೆಯಾಗಿದೆ. ಕೆಳಹಂತದಿಂದಲೇ ವಿದ್ಯಾರ್ಥಿಗಳ ಸಾಮರ್ಥ್ಯ ಬೆಳೆಸುವ ಯೋಜನೆ ರೂಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಾಲೆಗಳು ಸಂವಿಧಾನದ ಆಶಯಗಳನ್ನು ಈಡೇರಿಸುವ ಪವಿತ್ರ ತಾಣಗಳಾಗಿವೆ. ವ್ಯಕ್ತಿ ಮತ್ತು ಸಮಾಜದ ಉನ್ನತಿಗೆ ಶಿಕ್ಷಕರ ಸೇವೆ ಮಹತ್ವದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ. ಅಮರೇಶ ಯತಗಲ್ ಹಾಗೂ ಎಸ್.ಎಸ್. ಸೋಮಣ್ಣವರ ಅವರನ್ನು ಸನ್ಮಾನಿಸಲಾಯಿತು. ರಾಹುಲ ಗಿಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡರ ವಂದಿಸಿದರು. ಹಲವು ಗಣ್ಯರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ಮಳೆಗಾಗಿ ರೈತ ಮಹಿಳೆಯರಿಂದ ಗುರ್ಜಿಪೂಜೆ : ಉತ್ತಮ ಮಳೆ, ಸಮೃದ್ಧ ಬೆಳೆಗಾಗಿ ಪ್ರಾರ್ಥನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟು ಭೂಮಿ ಒಣಗುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ಹಳ್ಳದಕೇರಿ ಓಣಿಯ ರೈತ ಮಹಿಳೆಯರು ಸಾಂಪ್ರದಾಯಿಕ ಗುರ್ಜಿಪೂಜೆ ಆರಂಭಿಸಿದ್ದಾರೆ.

ಮುಂಗಾರು ಪೂರ್ವದಲ್ಲಿ ಸಾಮಾನ್ಯವಾಗಿ ಆಚರಿಸಲಾಗುವ ಈ ಸಂಪ್ರದಾಯದ ಮೂಲಕ ಉತ್ತಮ ಮಳೆಯಾಗಿ ಭೂಮಿ ತೇವಗೊಂಡು ಬಿತ್ತನೆ ಕಾರ್ಯ ಯಶಸ್ವಿಯಾಗಲಿ, ಬೆಳೆ ಸಮೃದ್ಧಿಯಾಗಿ ರೈತರ ಮನೆಗಳಲ್ಲಿ ಧಾನ್ಯ ತುಂಬಲಿ ಎಂದು ಪ್ರಾರ್ಥಿಸಲಾಗುತ್ತದೆ. ಮಳೆ ಹಾಗೂ ಕೃಷಿ ಅವಿನಾಭಾವ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಗುರ್ಜಿಪೂಜೆಯನ್ನು ಪ್ರಕೃತಿ ಆರಾಧನೆಯ ರೂಪದಲ್ಲಿಯೂ ಕಾಣಲಾಗುತ್ತದೆ.

ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬಿತ್ತನೆ ಮಾಡಿದ ಕೆಲವೆಡೆ ಬೆಳೆಗಳು ಒಣಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ನೀರು ಹಾಗೂ ಮೇವಿನ ಕೊರತೆಯ ಆತಂಕವೂ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಹಿಂಗಾರು ಹಂಗಿನಲ್ಲಾದರೂ ಉತ್ತಮ ಮಳೆಯಾಗಿ ಒಣಗಿದ ಭೂಮಿಗೆ ಜೀವ ದೊರೆಯಲಿ, ಹೊಲಗಳು ಹಸಿರಾಗಲಿ, ಕೆರೆ-ಕಟ್ಟೆಗಳು ತುಂಬಲಿ, ಜಾನುವಾರುಗಳಿಗೆ ನೀರು-ಮೇವು ದೊರೆಯಲಿ ಹಾಗೂ ರೈತರ ಸಂಕಷ್ಟ ದೂರವಾಗಲಿ ಎಂದು ಮಹಿಳೆಯರು ಗುರ್ಜಿಪೂಜೆ ಮೂಲಕ ಪ್ರಾರ್ಥಿಸಿದರು.

ಸಿದ್ದಮ್ಮ ಗಡೇದ, ಲಕ್ಷ್ಮವ್ವ ದಾನಿ, ನೀಲವ್ವ ಗೊರವರ, ನೀಲಮ್ಮ ಸಾಲಾವಳಿಮಠ, ಮಾಲಾ ರಡ್ಡೇರ, ರೇಣುವ್ವ ಬೂದಿಹಾಳ, ರೇಣುಕಾ ದಾನಿ ಹಾಗೂ ಶಿವಕ್ಕ ಸಾಲಾವಳಿಮಠ ಸೇರಿದಂತೆ ರೈತ ಮಹಿಳೆಯರು ಪಾಲ್ಗೊಂಡಿದ್ದರು.

ಅಂಬೇಡ್ಕರ್–ಬುದ್ಧ–ಬಸವಣ್ಣ ಅವಹೇಳನ ಖಂಡಿಸಿ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದ ಹಿನ್ನೆಲೆಯಲ್ಲಿ ವೇದಮೂರ್ತಿ ಎಂಬುವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ–ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ದೊಡ್ಡಯಾಚೆನಹಳ್ಳಿಯ ವೇದಮೂರ್ತಿ ಅವರು ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮೀಸಲಾತಿ ಸೇರಿದಂತೆ ಸಂವಿಧಾನಾತ್ಮಕ ವಿಚಾರಗಳ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದಲ್ಲದೆ, ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆಯಿದೆ. ಹೀಗಾಗಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಪೌರಕಾರ್ಮಿಕರು ಭೇಟಿ ಮಾಡಿ, ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಮನವಿ ಮಾಡಿದಾಗ ಸಚಿವರು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆಯ ಸಂದರ್ಭದಲ್ಲಿ ಕನಿಷ್ಠ ವೇತನದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟವಾಗಿದ್ದು, ಪೌರಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಚಿವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಹಾಗೂ ಅವರ ವಿರುದ್ಧ ಕ್ರಮ ಜರುಗಿಸಿ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದರು.

ವಕೀಲ ಎಂ.ಬಿ. ನದಾಫ, ಪರವೀನಬಾನು ಹವಾಲ್ದಾರ, ಶರಣಪ್ಪ ಸೂಡಿ, ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಪುಷ್ಪಾ ಬಿಜಾಪುರ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಸಾಕ್ರುಬಾಯಿ ಗೋಸಾವಿ, ಮಕ್ತುಮಸಾಬ ಮುಲ್ಲಾನವರ, ಅಫ್ರೋಜಾ ಗುಳಗುಂದಿ, ಗೌಸಸಾಬ ಅಕ್ಕಿ, ರವಿ ಗೋಸಾವಿ, ಮಾಲಾ ಗೋಸಾವಿ ಸೇರಿದಂತೆ ವಿವಿಧ ಸ್ಲಂ ಪ್ರದೇಶಗಳ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅವಹೇಳನಕಾರಿ ಹೇಳಿಕೆ ನೀಡಿರುವ ವೇದಮೂರ್ತಿ ವಿರುದ್ಧ ಕಠಿಣ ಕ್ರಮ ಜರುಗಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು. ಪೌರಕಾರ್ಮಿಕರನ್ನು ಅವಮಾನಿಸಿದ ಸಚಿವ ಕೃಷ್ಣ ಬೈರೇಗೌಡ ಅವರೂ ಕ್ಷಮೆ ಕೇಳಬೇಕು.

— ಇಮ್ತಿಯಾಜ್ ಆರ್. ಮಾನ್ವಿ, ಸ್ಲಂ ಸಮಿತಿ ಅಧ್ಯಕ್ಷ

ಬರದ ನಡುವೆಯೇ ಜಾನುವಾರುಗಳಿಗೆ ‘ಅಜೋಲಾ’ ಪೌಷ್ಟಿಕ ಮೇವು!

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು/ಗದಗ: ಮಳೆಯ ಅಭಾವ, ಹಸಿರು ಮೇವಿನ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ಜಾನುವಾರು ಸಾಕಣೆದಾರರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ, ಜಾನುವಾರುಗಳಿಗೆ ಸ್ಥಳೀಯವಾಗಿಯೇ ಪೌಷ್ಟಿಕ ಪೂರಕ ಮೇವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ರಾಜ್ಯದಾದ್ಯಂತ ₹3.78 ಕೋಟಿ ವೆಚ್ಚದಲ್ಲಿ 12,000 ಅಜೋಲಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ.

ಜಾನುವಾರುಗಳಿಗೆ, ಅದರಲ್ಲೂ ಹಾಲು ನೀಡುವ ದನ-ಕರುಗಳಿಗೆ ಅಗತ್ಯವಾದ ಪ್ರೋಟೀನ್, ಖನಿಜಾಂಶ ಸೇರಿದಂತೆ ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಅಜೋಲಾವನ್ನು ಪೂರಕ ಆಹಾರವಾಗಿ ಬಳಸಬಹುದಾಗಿದೆ. ಹಸಿರು ಮೇವಿನ ಕೊರತೆಯ ಸಂದರ್ಭದಲ್ಲಿ ರೈತರಿಗೆ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಪರ್ಯಾಯ ಪೌಷ್ಟಿಕ ಮೇವಾಗಿ ಅಜೋಲಾ ನೆರವಾಗಲಿದೆ.

ರಾಜ್ಯದ 31 ಜಿಲ್ಲೆಗಳ 240 ತಾಲ್ಲೂಕುಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಜಿಲ್ಲಾವಾರು ಭೌತಿಕ ಮತ್ತು ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಪ್ರತಿ ಅಜೋಲಾ ಘಟಕಕ್ಕೆ ಗರಿಷ್ಠ ₹3,150 ವೆಚ್ಚ ಅಂದಾಜಿಸಲಾಗಿದೆ.

ಬಾಗಲಕೋಟೆ ಮತ್ತು ತುಮಕೂರು ಜಿಲ್ಲೆಗಳಿಗೆ ತಲಾ 500, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗಳಿಗೆ ತಲಾ 450 ಘಟಕಗಳನ್ನು ಹಂಚಿಕೆ ಮಾಡಲಾಗಿದೆ. ಬೀದರ್, ಚಿಕ್ಕಬಳ್ಳಾಪುರ, ಧಾರವಾಡ, ಹಾಸನ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ತಲಾ 400 ಘಟಕಗಳು; ಕೊಪ್ಪಳ, ಮಂಡ್ಯ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಿಗೆ ತಲಾ 350 ಘಟಕಗಳನ್ನು ನಿಗದಿಪಡಿಸಲಾಗಿದೆ.

ಚಿತ್ರದುರ್ಗ, ದಾವಣಗೆರೆ, ಕೋಲಾರ, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ತಲಾ 300; ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ಕೊಡಗು ಹಾಗೂ ರಾಮನಗರ ಜಿಲ್ಲೆಗಳಿಗೆ ತಲಾ 250 ಘಟಕಗಳ ಗುರಿ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 200 ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಕಡಿಮೆ ಜಾಗ, ಕಡಿಮೆ ವೆಚ್ಚದಲ್ಲೇ ಘಟಕ

ಅಜೋಲಾ ಘಟಕಗಳನ್ನು ರೈತರ ಮನೆ ಅಥವಾ ಕೊಟ್ಟಿಗೆಯ ಸಮೀಪವೇ ಕಡಿಮೆ ಜಾಗದಲ್ಲಿ ನಿರ್ಮಿಸಬಹುದಾಗಿದೆ. ಸುಮಾರು 10 ಅಡಿ ಉದ್ದ, 4 ಅಡಿ ಅಗಲ ಹಾಗೂ 1 ಅಡಿ ಆಳದ ಘಟಕವನ್ನು ನಿರ್ಮಿಸಲಾಗುತ್ತದೆ.

ಪ್ರತಿ ಘಟಕದ ₹3,150 ವೆಚ್ಚದಲ್ಲಿ ಯುವಿ-ಸ್ಟೆಬಿಲೈಸ್ಡ್ ಎಚ್‌ಡಿಪಿಇ ಶೀಟ್‌ಗೆ ₹1,350, ನೆರಳು ಬಲೆ ಹಾಗೂ ಬಿದಿರು/ಜಿಐ ಫ್ರೇಮ್‌ಗೆ ₹650, ಫಲವತ್ತಾದ ಮಣ್ಣು, ಸಗಣಿ ಮತ್ತು ಸೂಪರ್ ಫಾಸ್ಫೇಟ್ ಮಿಶ್ರಣಕ್ಕೆ ₹250 ಹಾಗೂ ಎರಡು ಕೆ.ಜಿ. ಅಜೋಲಾ ತಳಿ/ಬೀಜಕ್ಕೆ ₹200 ವೆಚ್ಚವಾಗಲಿದೆ. ಸಾಮಗ್ರಿಗಳಿಗೆ ₹2,450 ಹಾಗೂ ಸ್ಥಳ ಸಿದ್ಧತೆ, ತೊಟ್ಟಿ ಅಳವಡಿಕೆ, ಸಂರಕ್ಷಣೆ ಮತ್ತು ಬೀಜ ಬಿತ್ತನೆಗೆ ಎರಡು ಮಾನವ ದಿನಗಳ ಕೂಲಿ ವೆಚ್ಚವಾಗಿ ₹700 ನಿಗದಿಪಡಿಸಲಾಗಿದೆ.

ಸ್ವಚ್ಛ ನೀರಿರುವ ಸ್ಥಳಕ್ಕಷ್ಟೇ ಆದ್ಯತೆ

ಜಿಲ್ಲೆಗೆ ನಿಗದಿಪಡಿಸಿದ ಗುರಿಯನ್ನು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿವಾರು ಹಂಚಿಕೆ ಮಾಡಿ, ಸೂಕ್ತ ಸ್ಥಳ ಮತ್ತು ನೀರಿನ ಲಭ್ಯತೆ ಹೊಂದಿರುವ ಜಾನುವಾರು ಸಾಕಣೆದಾರರನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಲಾಗುತ್ತದೆ. ಕಲುಷಿತ ನೀರಿನಲ್ಲಿ ಅಜೋಲಾ ಬೆಳೆಸುವುದರಿಂದ ಮಾಲಿನ್ಯಕಾರಕಗಳ ಅಪಾಯ ಇರುವ ಹಿನ್ನೆಲೆಯಲ್ಲಿ ಸ್ವಚ್ಛ ನೀರಿನ ಲಭ್ಯತೆ ಇರುವ ಸ್ಥಳಗಳನ್ನಷ್ಟೇ ಆಯ್ಕೆ ಮಾಡಲಾಗುತ್ತದೆ.

ಫಲಾನುಭವಿಗಳಿಗೆ ಅಜೋಲಾ ಉತ್ಪಾದನೆ, ಕೊಯ್ಲು, ಸ್ವಚ್ಛತೆ, ಸಂಸ್ಕರಣೆ ಹಾಗೂ ಜಾನುವಾರುಗಳಿಗೆ ನೀಡುವ ವಿಧಾನ ಕುರಿತು ತಾಂತ್ರಿಕ ತರಬೇತಿ ನೀಡಲಾಗುತ್ತದೆ. ಯೋಜನೆಯನ್ನು VB-G RAM G ಮಾರ್ಗಸೂಚಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗೆ ಒಳಪಟ್ಟು ಅನುಷ್ಠಾನಗೊಳಿಸಲಾಗುತ್ತದೆ.

ಪ್ರತಿ ಘಟಕದ ಫಲಾನುಭವಿಯ ವಿವರ, ಆಧಾರ್, ಜಿಪಿಎಸ್ ಸ್ಥಳ ಹಾಗೂ ಘಟಕದ ಕಾರ್ಯನಿರ್ವಹಣೆಯ ಮೊದಲು ಮತ್ತು ನಂತರದ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ದಾಖಲಿಸಲಾಗುತ್ತದೆ. ಜಿಲ್ಲಾ ಉಪನಿರ್ದೇಶಕರು ಮಾಸಿಕ ವೇಳಾಪಟ್ಟಿ ಸಿದ್ಧಪಡಿಸಿ ಯೋಜನೆ ಅನುಷ್ಠಾನಗೊಳಿಸಲಿದ್ದು, ಪ್ರತಿ ತಿಂಗಳ 5ರೊಳಗೆ ಪ್ರಗತಿ ವರದಿಯನ್ನು ರಾಜ್ಯ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.

ಅಜೋಲಾ ಯೋಜನೆಯ ಪ್ರಮುಖ ಅಂಶಗಳು

  • ಒಟ್ಟು ವೆಚ್ಚ: ₹3.78 ಕೋಟಿ
  • ಒಟ್ಟು ಘಟಕಗಳು: 12,000
  • ಜಿಲ್ಲೆಗಳು: 31
  • ತಾಲ್ಲೂಕುಗಳು: 240
  • ಪ್ರತಿ ಘಟಕದ ವೆಚ್ಚ: ₹3,150
  • ಗದಗ ಜಿಲ್ಲೆಯ ಗುರಿ: 350 ಘಟಕ
  • ಗದಗಕ್ಕೆ ಅನುದಾನ: ₹11.02 ಲಕ್ಷ
  • ಘಟಕದ ಗಾತ್ರ: 10 × 4 × 1 ಅಡಿ

ಗದಗ ಜಿಲ್ಲೆಗೆ 350 ಘಟಕ

ಗದಗ ಜಿಲ್ಲೆಯ ಏಳು ತಾಲ್ಲೂಕುಗಳಿಗೆ 350 ಅಜೋಲಾ ಘಟಕಗಳ ಗುರಿ ನೀಡಲಾಗಿದ್ದು, ಇದಕ್ಕಾಗಿ ₹11.02 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಗೆ 750, ವಿಜಯಪುರಕ್ಕೆ 650, ಉತ್ತರ ಕನ್ನಡಕ್ಕೆ 600 ಹಾಗೂ ಕಲಬುರಗಿಗೆ 550 ಘಟಕಗಳ ಗುರಿ ನೀಡಲಾಗಿದೆ.

ರಾತ್ರಿ ಪದೇಪದೇ ಎಚ್ಚರವಾಗುವುದನ್ನು ನಿರ್ಲಕ್ಷಿಸಬೇಡಿ; ಕಾರಣ ಹೀಗಿರಬಹುದು!

0

ರಾತ್ರಿ ಮಲಗಿದ ಬಳಿಕ ಒಮ್ಮೆ ಎಚ್ಚರವಾಗುವುದು ಸಾಮಾನ್ಯ. ಆದರೆ ಪ್ರತಿದಿನ ಅಥವಾ ಪದೇಪದೇ ನಿದ್ರೆ ಭಂಗವಾಗಿ, ಎಚ್ಚರವಾದ ಬಳಿಕ ಮತ್ತೆ ನಿದ್ರೆ ಬರದೆ ಪರದಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು.

ಬೆಳಗ್ಗೆ ಎದ್ದಾಗ ದಣಿವು, ಹಗಲಿನಲ್ಲಿ ನಿದ್ರೆ, ಕಿರಿಕಿರಿ ಅಥವಾ ಏಕಾಗ್ರತೆ ಕಡಿಮೆಯಾಗುತ್ತಿದ್ದರೆ ನಿದ್ರೆಗೆ ಅಡ್ಡಿಯಾಗುತ್ತಿರುವ ಕಾರಣವನ್ನು ಪತ್ತೆಹಚ್ಚುವುದು ಅಗತ್ಯ.

ರಾತ್ರಿ ಪದೇಪದೇ ಎಚ್ಚರವಾಗಲು ಒತ್ತಡ, ಆತಂಕ, ಮಲಗುವ ಕೋಣೆಯಲ್ಲಿ ಹೆಚ್ಚು ಬೆಳಕು ಅಥವಾ ಶಬ್ದ, ಅತಿಯಾದ ಬಿಸಿ ಅಥವಾ ಚಳಿ ಹಾಗೂ ಅಸೌಕರ್ಯದ ಹಾಸಿಗೆ ಅಥವಾ ದಿಂಬು ಕಾರಣವಾಗಬಹುದು.

ಇದರ ಜೊತೆಗೆ ಸಂಜೆ ಅಥವಾ ರಾತ್ರಿ ಹೆಚ್ಚು ಚಹಾ, ಕಾಫಿ ಸೇರಿದಂತೆ ಕೆಫೀನ್‌ಯುಕ್ತ ಪಾನೀಯ ಸೇವಿಸುವುದರಿಂದ ಕೆಲವರ ನಿದ್ರೆಗೆ ತೊಂದರೆಯಾಗಬಹುದು. ಆಲ್ಕೋಹಾಲ್ ಸೇವನೆಯೂ ನಿದ್ರೆಯ ನಿರಂತರತೆಯ ಮೇಲೆ ಪರಿಣಾಮ ಬೀರಬಹುದು. ಪದೇಪದೇ ಮೂತ್ರವಿಸರ್ಜನೆ, ನೋವು, ಕೆಲವು ಔಷಧಿಗಳು ಹಾಗೂ ಇತರ ಆರೋಗ್ಯ ಸಮಸ್ಯೆಗಳೂ ರಾತ್ರಿ ನಿದ್ರೆ ಭಂಗಕ್ಕೆ ಕಾರಣವಾಗಬಹುದು.

ಇನ್ಸೋಮ್ನಿಯಾ ಅಥವಾ ನಿದ್ರಾಹೀನತೆ ಎಂದರೆ ನಿದ್ರೆ ಬರಲು ಕಷ್ಟವಾಗುವುದು ಮಾತ್ರವಲ್ಲ. ರಾತ್ರಿ ಪದೇಪದೇ ಎಚ್ಚರವಾಗುವುದು, ಎಚ್ಚರವಾದ ಬಳಿಕ ಮತ್ತೆ ನಿದ್ರೆ ಬಾರದಿರುವುದು ಅಥವಾ ಬೆಳಗಿನ ಜಾವ ಬೇಗ ಎಚ್ಚರವಾಗಿ ಮತ್ತೆ ನಿದ್ರೆ ಮಾಡಲು ಸಾಧ್ಯವಾಗದಿರುವುದೂ ಇದರ ಲಕ್ಷಣಗಳಾಗಬಹುದು.

ಈ ಸಮಸ್ಯೆ ನಿರಂತರವಾದರೆ ಹಗಲಿನಲ್ಲಿ ದಣಿವು, ಕಿರಿಕಿರಿ, ನೆನಪಿನ ಶಕ್ತಿ ಹಾಗೂ ಏಕಾಗ್ರತೆಯಲ್ಲಿ ತೊಂದರೆ ಉಂಟಾಗಬಹುದು.

ರಾತ್ರಿ ಮಲಗುವಾಗ ಜೋರಾಗಿ ಗೊರಕೆ ಹೊಡೆಯುವುದು, ನಿದ್ರೆಯಲ್ಲಿ ಉಸಿರಾಟ ನಿಂತಂತೆ ಕಾಣಿಸುವುದು, ಏಕಾಏಕಿ ಉಸಿರಿಗಾಗಿ ಎಚ್ಚರವಾಗುವುದು, ಬೆಳಗ್ಗೆ ತಲೆನೋವು ಹಾಗೂ ಹಗಲಿನಲ್ಲಿ ಅತಿಯಾದ ನಿದ್ರೆ ಸ್ಲೀಪ್ ಅಪ್ನಿಯಾದ ಸೂಚನೆಗಳಾಗಿರಬಹುದು.

ಸ್ಲೀಪ್ ಅಪ್ನಿಯಾದಲ್ಲಿ ನಿದ್ರೆಯ ಸಮಯದಲ್ಲಿ ಉಸಿರಾಟ ಪದೇಪದೇ ಅಡ್ಡಿಯಾಗುತ್ತದೆ. ಕೆಲವೊಮ್ಮೆ ವ್ಯಕ್ತಿಗಿಂತ ಅವರ ಕುಟುಂಬದ ಸದಸ್ಯರೇ ಈ ಲಕ್ಷಣಗಳನ್ನು ಮೊದಲು ಗಮನಿಸುತ್ತಾರೆ.

ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಒಂದೇ ಸಮಯಕ್ಕೆ ಏಳುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ. ಹಗಲಿನಲ್ಲಿ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಮಲಗುವ ಮುನ್ನ ಮೊಬೈಲ್, ಟಿವಿ ಹಾಗೂ ಲ್ಯಾಪ್‌ಟಾಪ್ ಬಳಕೆಯನ್ನು ಕಡಿಮೆ ಮಾಡಿ.

ಸಂಜೆಯ ಬಳಿಕ ಕೆಫೀನ್ ಸೇವನೆಯನ್ನು ಮಿತಿಗೊಳಿಸಿ. ಮಲಗುವ ಕೋಣೆ ಶಾಂತ, ಕತ್ತಲೆ ಹಾಗೂ ಆರಾಮದಾಯಕ ತಾಪಮಾನ ಹೊಂದಿರುವಂತೆ ನೋಡಿಕೊಳ್ಳಿ.

ನಿದ್ರೆಯ ಸಮಸ್ಯೆ ನಿರಂತರವಾಗಿ ಮುಂದುವರಿದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ ಸ್ವಯಂ ನಿದ್ರೆ ಮಾತ್ರೆಗಳನ್ನು ಸೇವಿಸದೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ವಿಶೇಷವಾಗಿ ಗೊರಕೆಯೊಂದಿಗೆ ಉಸಿರಾಟ ನಿಲ್ಲುವುದು ಅಥವಾ ಹಗಲಿನಲ್ಲಿ ತೀವ್ರ ನಿದ್ರೆ ಕಾಣಿಸಿಕೊಳ್ಳುತ್ತಿದ್ದರೆ ಸ್ಲೀಪ್ ಅಪ್ನಿಯಾ ಪರೀಕ್ಷೆ ಅಗತ್ಯವಿದೆಯೇ ಎಂಬುದನ್ನು ವೈದ್ಯರಿಂದ ತಿಳಿದುಕೊಳ್ಳುವುದು ಉತ್ತಮ.

‘ಗಿಮಿಕ್’ ಅಲ್ಲ, ‘ಗ್ರೇಟ್ ಜಾಬ್’: ಸಿಎಂ ಎಪಿಎಂಸಿ ಭೇಟಿಗೆ ಹೈಕೋರ್ಟ್‌ ಮೆಚ್ಚುಗೆ

0

ಬೆಂಗಳೂರು: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದನ್ನು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಪ್ರಶಂಸಿಸಿದ್ದಾರೆ.

ಕಾರ್ಮಿಕ ಪ್ರಕರಣವೊಂದರ ವಿಚಾರಣೆ ವೇಳೆ ಸಿಎಂ ಭೇಟಿಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಯಾರಾದರೂ ಇದನ್ನು ಗಿಮಿಕ್ ಎಂದು ಕರೆಯಬಹುದು. ಆದರೆ ಇದು ‘ಗ್ರೇಟ್ ಜಾಬ್’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಭೇಟಿ ವೇಳೆ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಶುಂಠಿ ದರಗಳನ್ನು ಪರಿಶೀಲಿಸಿದ್ದರು. ಅಲ್ಲದೆ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರೊಂದಿಗೆ ಮಾತನಾಡಿದ್ದನ್ನು ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಉಲ್ಲೇಖಿಸಿದ್ದಾರೆ.

ಎಪಿಎಂಸಿ ಮಳಿಗೆಗಳು ಕೆಲವರ ಹೆಸರಿನಲ್ಲಿದ್ದು, ಬೇರೆಯವರು ಅಲ್ಲಿ ಬಾಡಿಗೆದಾರರಾಗಿ ವ್ಯವಹಾರ ನಡೆಸುತ್ತಿರುವ ಪರಿಸ್ಥಿತಿಯ ಬಗ್ಗೆಯೂ ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ್ದಾರೆ.

ದೇವನಹಳ್ಳಿ: ಕಪ್ಪು ಪಲ್ಸರ್‌ನಲ್ಲಿ ಬಂದು ಸರಗಳ್ಳತನ; ಖದೀಮರಿಗಾಗಿ ಪೊಲೀಸರ ಶೋಧ!

0

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊರವಲಯದಲ್ಲಿ ಕದ್ದ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು ಸರಣಿ ಸರಗಳ್ಳತನ ನಡೆಸಿದ್ದಾರೆ.

ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಖದೀಮರು ನೆಲಮಂಗಲದಲ್ಲಿ ಕಪ್ಪು ಬಣ್ಣದ ಪಲ್ಸರ್ ಬೈಕ್ ಕಳವು ಮಾಡಿ ಅದೇ ಬೈಕ್‌ನಲ್ಲಿ ಸರಗಳ್ಳತನ ನಡೆಸಿದ್ದಾರೆ. ಹೊಸಕೋಟೆ ಹಾಗೂ ದೇವನಹಳ್ಳಿ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದು, ನಂದಗುಡಿ, ಸೂಲಿಬೆಲೆ ಹಾಗೂ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ.

ಮಾಲೂರು ಹಾಗೂ ದೇವನಹಳ್ಳಿ ಭಾಗದಲ್ಲೂ ಸರಗಳ್ಳತನಕ್ಕೆ ಖದೀಮರು ಯತ್ನಿಸಿದ್ದಾರೆ. ಆದರೆ ಈ ಎರಡೂ ಕಡೆ ಕೃತ್ಯ ವಿಫಲವಾಗಿದೆ.

ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಪೀಣ್ಯ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದ ಖದೀಮರು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಆರೋಪಿಗಳು ಏಕಾಏಕಿ ದಾಳಿ ನಡೆಸಿ ನೆಲಕ್ಕೆ ಬೀಳಿಸಿ ಮಾಂಗಲ್ಯ ಸರ ಕಿತ್ತುಕೊಂಡಿದ್ದರು. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ದೇಹದಲ್ಲಿ ಮ್ಯಾಗ್ನೀಷಿಯಂ ಕಡಿಮೆಯಾಗಿದೆಯೇ? ಈ ಸೂಚನೆಗಳನ್ನು ನಿರ್ಲಕ್ಷಿಸಬೇಡಿ

0

ದೇಹದ ಆರೋಗ್ಯಕ್ಕೆ ವಿಟಮಿನ್‌ಗಳಷ್ಟೇ ಅಲ್ಲ, ವಿವಿಧ ಖನಿಜಾಂಶಗಳೂ ಅಗತ್ಯ. ಅವುಗಳಲ್ಲಿ ಮ್ಯಾಗ್ನೀಷಿಯಂ ಪ್ರಮುಖವಾದದ್ದು. ಸ್ನಾಯು ಮತ್ತು ನರಗಳ ಕಾರ್ಯ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ರಕ್ತದೊತ್ತಡದ ನಿರ್ವಹಣೆ, ಶಕ್ತಿ ಉತ್ಪಾದನೆ ಹಾಗೂ ಮೂಳೆಗಳ ಆರೋಗ್ಯದಲ್ಲಿ ಮ್ಯಾಗ್ನೀಷಿಯಂ ಪ್ರಮುಖ ಪಾತ್ರ ವಹಿಸುತ್ತದೆ.

ಮ್ಯಾಗ್ನೀಷಿಯಂ ಕೊರತೆಯಾದರೆ ಏನಾಗುತ್ತದೆ?

ಮ್ಯಾಗ್ನೀಷಿಯಂ ಕೊರತೆ ಆರಂಭಿಕ ಹಂತದಲ್ಲಿ ಸ್ಪಷ್ಟವಾಗಿ ಗೋಚರಿಸದೇ ಇರಬಹುದು. ಆದರೆ ಕೆಲವರಲ್ಲಿ ನಿರಂತರ ದಣಿವು, ದೌರ್ಬಲ್ಯ, ಹಸಿವು ಕಡಿಮೆಯಾಗುವುದು, ವಾಕರಿಕೆ, ಸ್ನಾಯು ಸೆಳೆತ ಹಾಗೂ ಕಾಲುಗಳಲ್ಲಿ ಮರಗಟ್ಟಿದ ಅನುಭವ ಕಾಣಿಸಿಕೊಳ್ಳಬಹುದು.

ಕೊರತೆ ತೀವ್ರವಾದರೆ ಕೈ-ಕಾಲುಗಳಲ್ಲಿ ಜುಮ್ಮೆನಿಸುವುದು, ಸ್ನಾಯುಗಳ ಅಸಹಜ ಸೆಳೆತ ಹಾಗೂ ಹೃದಯ ಬಡಿತದಲ್ಲಿ ಅಸಹಜತೆ ಸೇರಿದಂತೆ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇಂತಹ ಸಮಸ್ಯೆಗಳು ನಿರಂತರವಾಗಿ ಕಂಡುಬಂದರೆ ಸ್ವಯಂ ಔಷಧಿ ಸೇವಿಸುವ ಬದಲು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

ಮ್ಯಾಗ್ನೀಷಿಯಂ ಕೊರತೆಯಿಂದ ಕ್ಯಾನ್ಸರ್ ಬರುತ್ತದೆಯೇ?

ಮ್ಯಾಗ್ನೀಷಿಯಂ ಕೊರತೆಯೇ ನೇರವಾಗಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದನ್ನು ಪ್ರಸ್ತುತ ಲಭ್ಯವಿರುವ ಮಾಹಿತಿಯಿಂದ ದೃಢಪಡಿಸಲು ಸಾಧ್ಯವಿಲ್ಲ. ಮ್ಯಾಗ್ನೀಷಿಯಂ ದೇಹದ ಹಲವು ಜೈವಿಕ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸಿದರೂ, ಅದರ ಕೊರತೆ ಮತ್ತು ಕ್ಯಾನ್ಸರ್ ನಡುವೆ ನೇರ ಕಾರಣ-ಪರಿಣಾಮ ಸಂಬಂಧವನ್ನು ದೃಢಪಡಿಸಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ. ಹೀಗಾಗಿ ಮ್ಯಾಗ್ನೀಷಿಯಂ ಕಡಿಮೆಯಾಗಿದೆ ಎಂದಾಕ್ಷಣ ಕ್ಯಾನ್ಸರ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ.

ಯಾವ ಆಹಾರಗಳಲ್ಲಿ ಮ್ಯಾಗ್ನೀಷಿಯಂ ಸಿಗುತ್ತದೆ?

ಮ್ಯಾಗ್ನೀಷಿಯಂ ಪಡೆಯಲು ದುಬಾರಿ ಆಹಾರಗಳನ್ನೇ ಅವಲಂಬಿಸುವ ಅಗತ್ಯವಿಲ್ಲ. ಬಾದಾಮಿ, ಗೋಡಂಬಿ, ಎಳ್ಳು, ಕುಂಬಳಕಾಯಿ ಬೀಜಗಳು, ಪಾಲಕ್‌ನಂತಹ ಹಸಿರು ಸೊಪ್ಪುಗಳು, ಕಡಲೆ, ರಾಜ್ಮಾ, ಬೇಳೆಕಾಳುಗಳು ಮತ್ತು ಸಂಪೂರ್ಣ ಧಾನ್ಯಗಳು ಉತ್ತಮ ಮೂಲಗಳಾಗಿವೆ.

ಭಾರತೀಯ ಆಹಾರ ಪದ್ಧತಿಯಲ್ಲಿ ರಾಗಿ, ಸಜ್ಜೆ, ಕಡಲೆ, ಬೇಳೆ, ವಿವಿಧ ಬೀಜಗಳು ಹಾಗೂ ಹಸಿರು ಸೊಪ್ಪುಗಳನ್ನು ನಿಯಮಿತವಾಗಿ ಸೇರಿಸಿಕೊಳ್ಳುವುದರಿಂದ ಮ್ಯಾಗ್ನೀಷಿಯಂ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಪಡೆಯಲು ಸಹಾಯವಾಗಬಹುದು.

ಆಹಾರದ ಮೂಲಕ ಪೋಷಕಾಂಶಗಳನ್ನು ಪಡೆಯುವುದು ಸಾಮಾನ್ಯವಾಗಿ ಉತ್ತಮ ವಿಧಾನವಾಗಿದ್ದು, ಮ್ಯಾಗ್ನೀಷಿಯಂ ಸಪ್ಲಿಮೆಂಟ್‌ಗಳನ್ನು ವೈದ್ಯರ ಸಲಹೆಯಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು.