Home Blog

ಅಯೋಧ್ಯೆ ದೇಣಿಗೆ ಪ್ರಕರಣ: ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಸಿಎಂ ಖಡಕ್ ಸೂಚನೆ!

ಬೆಂಗಳೂರು: ರಾಜ್ಯದ ಪ್ರಮುಖ ಮುಜರಾಯಿ ದೇವಸ್ಥಾನಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುಜರಾಯಿ ಇಲಾಖೆಯ ಉನ್ನತ ಮಟ್ಟದ ಸಭೆಯ ಬಳಿಕ ಈ ಕುರಿತು ಮಾತನಾಡಿದ ಮುಖ್ಯಮಂತ್ರಿ, ಭಕ್ತರ ಧಾರ್ಮಿಕ ಭಾವನೆಗಳ ರಕ್ಷಣೆ ಹಾಗೂ ದೇವಸ್ಥಾನಗಳ ಆಸ್ತಿ-ಪಾಸ್ತಿಗಳ ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಕೇಂದ್ರಗಳಿಗೆ ಸಂಬಂಧಿಸಿದ ಘಟನೆಗಳು ಹಾಗೂ ಕಳವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಭದ್ರತಾ ಮಾರ್ಗಸೂಚಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

ಪ್ರಮುಖ ಕ್ರಮಗಳು:

  • ಕಡ್ಡಾಯ ಸಿಸಿಟಿವಿ ವ್ಯವಸ್ಥೆ: ರಾಜ್ಯದ ಎ, ಬಿ ಹಾಗೂ ಸಿ ವರ್ಗದ ಎಲ್ಲಾ ಮುಜರಾಯಿ ದೇವಸ್ಥಾನಗಳ ಪ್ರವೇಶ ದ್ವಾರ, ಗರ್ಭಗುಡಿ ಸುತ್ತಮುತ್ತಲಿನ ಪ್ರದೇಶ, ಕಾಣಿಕೆ ಹುಂಡಿ ಇರುವ ಸ್ಥಳ ಹಾಗೂ ಪ್ರಸಾದ ವಿತರಣಾ ಕೇಂದ್ರಗಳಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.
  • ಪ್ರಸಾದ ವಿತರಣೆಗೆ ವಿಶೇಷ ನಿಗಾ: ಭಕ್ತರಿಗೆ ವಿತರಿಸುವ ಪ್ರಸಾದದ ಗುಣಮಟ್ಟ, ಪಾವಿತ್ರ್ಯತೆ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಮೇಲ್ವಿಚಾರಣೆ ನಡೆಸಲಾಗುತ್ತದೆ. ಅಗತ್ಯವಿರುವ ದೇವಸ್ಥಾನಗಳಲ್ಲಿ ಪ್ರಸಾದ ವಿತರಣಾ ಕೇಂದ್ರಗಳ ಬಳಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
  • ಹುಂಡಿ ಮತ್ತು ಕಾಣಿಕೆಗಳ ಭದ್ರತೆ: ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ಕಾಣಿಕೆ ಹಣ ಹಾಗೂ ಅಮೂಲ್ಯ ವಸ್ತುಗಳ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗುತ್ತದೆ. ಜೊತೆಗೆ, ಹುಂಡಿ ಎಣಿಕೆ ಪ್ರಕ್ರಿಯೆಯನ್ನು ಸಿಸಿಟಿವಿ ಕಣ್ಗಾವಲಿನಲ್ಲೇ ನಡೆಸುವಂತೆ ಸೂಚಿಸಲಾಗಿದೆ.

ಮುಖ್ಯಮಂತ್ರಿ, ದೇವಸ್ಥಾನಗಳ ಆಡಳಿತ ಮಂಡಳಿಗಳು ಸ್ಥಳೀಯ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು ಎಂದು ಸೂಚಿಸಿದ್ದಾರೆ. ಯಾವುದೇ ದೇವಸ್ಥಾನದಲ್ಲಿ ಭದ್ರತಾ ಲೋಪ ಕಂಡುಬಂದರೆ ಸಂಬಂಧಿತ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡೇಶ್ವರಿ, ಕಟೀಲು ಸೇರಿದಂತೆ ರಾಜ್ಯದ ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಈ ಹೊಸ ಭದ್ರತಾ ಕ್ರಮಗಳನ್ನು ತಕ್ಷಣದಿಂದಲೇ ಜಾರಿಗೆ ತರಲು ಸರ್ಕಾರ ನಿರ್ದೇಶನ ನೀಡಿದೆ.

ಕರ್ನಾಟಕ ಖಾಯಂ ನಿವಾಸಿ ಪ್ರಮಾಣಪತ್ರ ವಿತರಣೆಯನ್ನು ತುರ್ತಾಗಿ ಪರಿಶೀಲಿಸಿ ತಡೆಹಿಡಿಯಿರಿ: ಕೇಂದ್ರ ಗೃಹ ಸಚಿವರಿಗೆ ಶೋಭಾ ಕರಂದ್ಲಾಜೆ ಪತ್ರ

ಬೆಂಗಳೂರು: ಕರ್ನಾಟಕ ಖಾಯಂ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ಜಾರಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ತುರ್ತಾಗಿ ಪರಿಶೀಲಿಸುವಂತೆ ಕೋರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ರಾಜ್ಯ ಸರ್ಕಾರ ಹೊರಡಿಸಿರುವ ‘ಕರ್ನಾಟಕ ಖಾಯಂ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ), 2026’ ಅಧಿಸೂಚನೆಯು ಗಂಭೀರ ಸಾಂವಿಧಾನಿಕ, ಕಾನೂನು ಹಾಗೂ ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಪರಿಶೀಲನೆ ನಡೆಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

ಭಾರತದ ಸಂವಿಧಾನವು ದೇಶದ ಎಲ್ಲ ನಾಗರಿಕರಿಗೆ ಏಕರೂಪದ ಪೌರತ್ವವನ್ನು ನೀಡಿದೆ. ಇಂತಹ ಸಂದರ್ಭದಲ್ಲಿ “ಖಾಯಂ ನಿವಾಸಿ” ಎಂಬ ಪ್ರತ್ಯೇಕ ವರ್ಗವನ್ನು ರಾಜ್ಯ ಸರ್ಕಾರ ಸೃಷ್ಟಿಸಲು ಮುಂದಾಗಿರುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.

ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಧಿಕಾರವಿಲ್ಲದೆ ಈ ವರ್ಗೀಕರಣ ಮಾಡಲಾಗುತ್ತಿದ್ದು, ಇದು ಸಂವಿಧಾನದ 14ನೇ ವಿಧಿಯಲ್ಲಿರುವ ಸಮಾನತೆಯ ತತ್ವಕ್ಕೂ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ, ಪಿಆರ್‌ಸಿ ಪಡೆಯಲು ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು ಮುಖ್ಯವಾಗಿ ಸ್ಥಳೀಯ ಕಂದಾಯ ಅಧಿಕಾರಿಗಳ ಪರಿಶೀಲನೆ ಹಾಗೂ ನಿವಾಸದ ದಾಖಲೆಗಳ ಆಧಾರದ ಮೇಲೆ ಇರುವಂತೆ ಕಾಣುತ್ತಿವೆ. ಆದರೆ, ಕೇಂದ್ರದ ಸಮರ್ಥ ಪ್ರಾಧಿಕಾರಗಳ ಮೂಲಕ ಭಾರತೀಯ ಪೌರತ್ವವನ್ನು ಕಡ್ಡಾಯವಾಗಿ ಪರಿಶೀಲಿಸುವ ವ್ಯವಸ್ಥೆ ಇಲ್ಲದಿರುವುದು ಆತಂಕಕಾರಿ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಇದರ ಪರಿಣಾಮವಾಗಿ ಅಕ್ರಮ ವಲಸಿಗರು ಅಥವಾ ವಿದೇಶಿ ಪ್ರಜೆಗಳು ವಂಚನೆಯ ಮೂಲಕ ಖಾಯಂ ನಿವಾಸಿ ಪ್ರಮಾಣಪತ್ರ ಪಡೆದು, ಸರ್ಕಾರಿ ಸೌಲಭ್ಯಗಳು, ಶಿಕ್ಷಣ, ಉದ್ಯೋಗ ಹಾಗೂ ಇತರೆ ಹಕ್ಕುಗಳನ್ನು ಪಡೆಯುವ ಸಾಧ್ಯತೆ ಇದೆ. ಇದರಿಂದ ಅಕ್ರಮ ವಲಸೆಯನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಯತ್ನಗಳಿಗೆ ಧಕ್ಕೆಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.

ಪೌರತ್ವ, ವಲಸೆ, ವಿದೇಶಿಯರು ಹಾಗೂ ಆಂತರಿಕ ಭದ್ರತೆ ಸಂಬಂಧಿತ ವಿಷಯಗಳು ಕೇಂದ್ರ ಸರ್ಕಾರದ ವಿಶೇಷ ಅಧಿಕಾರ ವ್ಯಾಪ್ತಿಗೆ ಸೇರಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಖಾಯಂ ನಿವಾಸಿ ಸ್ಥಾನಮಾನ ನೀಡುವ ಕ್ರಮವು ಸಾಂವಿಧಾನಿಕ ವ್ಯವಸ್ಥೆಯಲ್ಲೇ ಹಸ್ತಕ್ಷೇಪ ಮಾಡುವಂತಾಗಿದ್ದು, ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ‘ಕರ್ನಾಟಕ ಖಾಯಂ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ), 2026’ ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಬೇಕು. ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅಧಿಸೂಚನೆಯ ಅನುಷ್ಠಾನವನ್ನು ತಡೆಹಿಡಿಯುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಜೊತೆಗೆ, ಯಾವ ಸಾಂವಿಧಾನಿಕ ಹಾಗೂ ಕಾನೂನುಬದ್ಧ ಅಧಿಕಾರದ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ ಎಂಬ ಬಗ್ಗೆ ರಾಜ್ಯ ಸರ್ಕಾರದಿಂದ ವಿವರವಾದ ವರದಿ ಪಡೆಯಬೇಕು ಎಂದು ಶೋಭಾ ಕರಂದ್ಲಾಜೆ ಪತ್ರದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಿವಿಲ್ ಮೊಕದ್ದಮೆಗಳ ಪ್ರಥಮ ಮೇಲ್ಮನವಿ ಇನ್ಮುಂದೆ ಜಿಲ್ಲಾ ನ್ಯಾಯಾಲಯಗಳಲ್ಲೇ ವಿಚಾರಣೆ: ರಾಜ್ಯ ಕಾನೂನು ತಿದ್ದುಪಡಿಗೆ ಹೈಕೋರ್ಟ್ ಮನ್ನಣೆ

ಬೆಂಗಳೂರು: ಹೈಕೋರ್ಟ್‌ನಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಾವಿರಾರು ಸಿವಿಲ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಮಹತ್ವದ ಕಾನೂನು ತಿದ್ದುಪಡಿಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.

ಈ ತೀರ್ಪಿನಿಂದ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯಗಳ ಆದೇಶಗಳ ವಿರುದ್ಧ ಸಲ್ಲಿಸುವ ಪ್ರಥಮ ಮೇಲ್ಮನವಿಗಳನ್ನು ಜಿಲ್ಲಾ ನ್ಯಾಯಾಲಯಗಳಿಗೆ ವರ್ಗಾಯಿಸುವ ಪ್ರಕ್ರಿಯೆಗೆ ಕಾನೂನುಬದ್ಧ ಮಾನ್ಯತೆ ದೊರೆತಿದೆ.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಕರ್ನಾಟಕ ಹೈಕೋರ್ಟ್ (ತಿದ್ದುಪಡಿ) ಕಾಯ್ದೆ–2023’ ಹಾಗೂ ‘ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ಕಾಯ್ದೆ–2023’ ಸಂವಿಧಾನಬಾಹಿರ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರನ್ನೊಳಗೊಂಡ ವಿಭಾಗೀಯ ಪೀಠ ವಜಾಗೊಳಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಇಟ್ಟಸಂದ್ರ ಗ್ರಾಮದ ನಾರಾಯಣಮ್ಮ ಹಾಗೂ ರಾಯಚೂರಿನ ಬಾಬುರಾವ್ ಸೇರಿದಂತೆ ಇತರರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ತಿದ್ದುಪಡಿ ಕಾಯ್ದೆಗಳ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ.

ಪ್ರಸ್ತುತ ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ಸಾವಿರಾರು ಪ್ರಥಮ ಮೇಲ್ಮನವಿಗಳು ಬಾಕಿ ಇರುವುದನ್ನು ಉಲ್ಲೇಖಿಸಿದ ನ್ಯಾಯಪೀಠ, ಈ ತಿದ್ದುಪಡಿಯಿಂದ ರಾಜ್ಯದ ಸುಮಾರು 200 ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಇಂತಹ ಮೇಲ್ಮನವಿಗಳ ವಿಚಾರಣೆ ನಡೆಸಲು ಅವಕಾಶ ಸಿಗಲಿದೆ ಎಂದು ತಿಳಿಸಿದೆ.

ನ್ಯಾಯದಾನವನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಮೇಲ್ಮನವಿಗಳ ವಿಚಾರಣಾ ವ್ಯವಸ್ಥೆಯನ್ನು ವಿಕೇಂದ್ರೀಕರಿಸುವುದು ಕಾಲದ ಅಗತ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇನ್ನು ಮುಂದೆ ಜಿಲ್ಲೆ ಹಾಗೂ ತಾಲೂಕುಗಳ ಹಿರಿಯ ಸಿವಿಲ್ ನ್ಯಾಯಾಧೀಶರು ನೀಡುವ ಆದೇಶಗಳ ವಿರುದ್ಧದ ಪ್ರಥಮ ಮೇಲ್ಮನವಿಗಳನ್ನು ನೇರವಾಗಿ ಹೈಕೋರ್ಟ್‌ಗೆ ಸಲ್ಲಿಸಲು ಅವಕಾಶ ಇರುವುದಿಲ್ಲ. ಅಂತಹ ಮೇಲ್ಮನವಿಗಳನ್ನು ಸಂಬಂಧಿತ ಜಿಲ್ಲಾ ನ್ಯಾಯಾಲಯಗಳೇ ವಿಚಾರಣೆ ನಡೆಸಲಿವೆ. ಆದರೆ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಗಳ ಆದೇಶಗಳ ವಿರುದ್ಧದ ಮೇಲ್ಮನವಿಗಳು ಎಂದಿನಂತೆ ಹೈಕೋರ್ಟ್‌ನ ಪ್ರಧಾನ ಪೀಠದಲ್ಲೇ ವಿಚಾರಣೆಗೆ ಒಳಪಡಲಿವೆ.

ಈ ಪ್ರಕರಣದ ಸಂಬಂಧ ಏಕಸದಸ್ಯ ಪೀಠವು ತಿದ್ದುಪಡಿ ಕಾಯ್ದೆಗೆ 2007ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ತಿದ್ದುಪಡಿ ಮಾಡಿದೆ. ಈಗಾಗಲೇ ಹೈಕೋರ್ಟ್‌ನಲ್ಲಿ ಇತ್ಯರ್ಥಗೊಂಡಿರುವ ಪ್ರಕರಣಗಳನ್ನು ಮರುಪರಿಶೀಲಿಸುವ ಅಗತ್ಯವಿಲ್ಲ. ಪ್ರಸ್ತುತ ಬಾಕಿ ಇರುವ ಪ್ರಕರಣಗಳನ್ನು ಮಾತ್ರ ಜಿಲ್ಲಾ ನ್ಯಾಯಾಲಯಗಳಿಗೆ ವರ್ಗಾಯಿಸಲಾಗುವುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಜನತೆ

ಬೆಂಗಳೂರು: ನಗರದ ಹೊರವಲಯದ ಬ್ಯಾಡರಹಳ್ಳಿ ಹಾಗೂ ಭಾರತನಗರ ಪ್ರದೇಶಗಳಲ್ಲಿ ಚಿರತೆ ಆತಂಕ ಇನ್ನೂ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಒಂದೇ ಪ್ರದೇಶದಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.

ನಿನ್ನೆ ಇಡೀ ದಿನ ಅರಣ್ಯ ಇಲಾಖೆ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿರಲಿಲ್ಲ. ಆದರೆ, ಮಂಗಳವಾರ ರಾತ್ರಿ ಸುಮಾರು 9.30ರ ವೇಳೆಗೆ ಹಾಗೂ ಬುಧವಾರ ಮುಂಜಾನೆ 4.30ರ ಸುಮಾರಿಗೆ ಮತ್ತೆ ಅದೇ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ.

ಚಿರತೆ ರಸ್ತೆಯಲ್ಲಿ ವೇಗವಾಗಿ ಓಡಿ ಬೇಲಿಯನ್ನು ಹಾರಿ ತೆರಳುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಿರಂತರ ಕಾರ್ಯಾಚರಣೆಯ ನಡುವೆಯೂ ಚಿರತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸುವುದರ ಜೊತೆಗೆ ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನಕ್ಕೂ ಕಾರಣವಾಗಿದೆ.

ಚಿರತೆಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಇಂದಿನ ಕಾರ್ಯಾಚರಣೆಯಲ್ಲಿ ಡ್ರೋನ್‌ಗಳನ್ನೂ ಬಳಸಲು ಸಿದ್ಧತೆ ನಡೆಸಿದೆ. ಚಿರತೆ ಚಲನವಲನವನ್ನು ನಿಖರವಾಗಿ ಪತ್ತೆಹಚ್ಚುವ ಉದ್ದೇಶದಿಂದ ತಾಂತ್ರಿಕ ನೆರವು ಪಡೆದು ಶೋಧ ಕಾರ್ಯ ತೀವ್ರಗೊಳಿಸಲಾಗುತ್ತಿದೆ.

ನಗರ ವಿಸ್ತರಣೆ ಮತ್ತು ಕಾಡು ಪ್ರದೇಶಗಳ ಕುಗ್ಗುವಿಕೆಯಿಂದ ಕಾಡುಪ್ರಾಣಿಗಳ ಸಹಜ ಆವಾಸಸ್ಥಾನಗಳು ನಾಶವಾಗುತ್ತಿದ್ದು, ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಅವು ನಗರ ಪ್ರದೇಶಗಳಿಗೆ ಪ್ರವೇಶಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೊರ ಓಡಾಡದಂತೆ ಹಾಗೂ ಚಿರತೆ ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪೂಜೆ ನೆಪದಲ್ಲಿ ಬಾಬಾ ಅಪಹರಣ; ಹಲ್ಲೆ ನಡೆಸಿ ₹4.25 ಲಕ್ಷ ದೋಚಿದ ನಾಲ್ವರು ಅರೆಸ್ಟ್

0

ಬೆಂಗಳೂರು: ಮನೆಯಲ್ಲಿ ಶಾಂತಿ ಪೂಜೆ ಮಾಡಿಸುವ ನೆಪದಲ್ಲಿ ಬಾಬಾರನ್ನು ಅಪಹರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ₹4.25 ಲಕ್ಷ ದೋಚಿದ ಪ್ರಕರಣವನ್ನು ಸಂಪಿಗೆಹಳ್ಳಿ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ತುಮಕೂರು ಮೂಲದ ಆರಿಫ್ ಮತ್ತು ಆದಿಲ್, ಚಿಕ್ಕಬಾಣಾವರದ ಇಮ್ರಾನ್ ಹಾಗೂ ಆರ್‌.ಟಿ. ನಗರದ ಕಾದೀರ್ ಎಂದು ಗುರುತಿಸಲಾಗಿದೆ. ಯಲಹಂಕ ನಿವಾಸಿ ಬಾಬಾ ಮೊಹಮ್ಮದ್ ತಾರಿಕ್ ಹುಸೇನ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಕೆಲ ದಿನಗಳ ಹಿಂದೆ ಆರೋಪಿ ಆರಿಫ್, ಶಾಂತಿ ಪೂಜೆ ಮಾಡಿಸಬೇಕೆಂದು ಹೇಳಿ ಬಾಬಾ ತಾರಿಕ್ ಅವರನ್ನು ಸಂಪರ್ಕಿಸಿದ್ದ. ಮುಂಗಡವಾಗಿ ₹10 ಸಾವಿರವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದ. ಆದರೆ ಕಾರಣಾಂತರಗಳಿಂದ ಮೂರು ದಿನಗಳ ಕಾಲ ತಾರಿಕ್ ಪೂಜೆಗೆ ತೆರಳಿರಲಿಲ್ಲ.

ಜೂನ್ 29ರಂದು ಆರಿಫ್, ಬಾಬಾರನ್ನು ಕರೆತರಲು ಕಾರು ಕಳುಹಿಸುವುದಾಗಿ ತಿಳಿಸಿದ್ದ. ಕಾರು ಬಂದ ಬಳಿಕ ತಾರಿಕ್ ತೆರಳಲು ನಿರಾಕರಿಸಿದರೂ ಆರೋಪಿಗಳು ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಳಿಕ ಅವರನ್ನು ತುಮಕೂರು ಹೊರವಲಯಕ್ಕೆ ಕರೆದೊಯ್ದಾಗ ಇನ್ನೂ ಮೂವರು ಆರೋಪಿಗಳು ಅಲ್ಲೇ ಕಾಯುತ್ತಿದ್ದರು. ಈ ವೇಳೆ ಆರೋಪಿ ಆದಿಲ್, ಹಿಂದೆ ಶಾಂತಿ ಪೂಜೆಗಾಗಿ ನೀಡಿದ್ದ ಹಣದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಗಳವಾಡಿ ಹಣವನ್ನು ಮರಳಿಸುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ತಾರಿಕ್ ನಿರಾಕರಿಸಿದಾಗ ನಾಲ್ವರೂ ಸೇರಿ ಲಾಂಗ್ ಹಾಗೂ ಮಚ್ಚುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಲ್ಲೆಯ ಬಳಿಕ ಆರೋಪಿಗಳು ಬಾಬಾರ ಮೊಬೈಲ್ ಪಾಸ್‌ವರ್ಡ್ ಹಾಗೂ ಯುಪಿಐ ಪಿನ್ ಪಡೆದುಕೊಂಡು ಬ್ಯಾಂಕ್ ಖಾತೆಯಲ್ಲಿದ್ದ ಹಣದ ವಿವರ ಪರಿಶೀಲಿಸಿದ್ದಾರೆ. ಮೊದಲ ಹಂತದಲ್ಲಿ ₹13 ಸಾವಿರವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ.

ಆ ರಾತ್ರಿ ಬಾಬಾರನ್ನು ಅಜ್ಞಾತ ಸ್ಥಳದಲ್ಲಿ ಬಂಧನದಲ್ಲಿರಿಸಿದ್ದ ಆರೋಪಿಗಳು, ಮರುದಿನ ಬ್ಯಾಂಕ್ ದಾಖಲೆಗಳನ್ನು ವಾಟ್ಸಾಪ್ ಮೂಲಕ ಪಡೆದು ಖಾಸಗಿ ಬ್ಯಾಂಕ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಬಾಬಾರಿಂದಲೇ ಹಣ ಹಿಂಪಡೆಯುವ ಅರ್ಜಿಗೆ ಸಹಿ ಹಾಕಿಸಿ, ಬ್ಯಾಂಕ್‌ನಿಂದ ₹4.25 ಲಕ್ಷ ನಗದು ಡ್ರಾ ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಪಡೆದ ಬಳಿಕ ಆರೋಪಿಗಳು ತಾರಿಕ್ ಅವರನ್ನು ಕಾರಿನಲ್ಲಿ ದಾಬಸ್‌ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಹೊರವಲಯಕ್ಕೆ ಕರೆದುಕೊಂಡು ಹೋಗಿ, ಘಟನೆ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮೊಬೈಲ್ ಹಿಂತಿರುಗಿಸಿ ಪರಾರಿಯಾಗಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಸಂಪಿಗೆಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಲು ನಯನತಾರಾ ಪಡೆದ ಸಂಭಾವನೆ ಇಷ್ಟೊಂದಾ?

ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ಮೂಡಿಸಿರುವ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಇದೀಗ ನಯನತಾರಾ ಅವರ ಸಂಭಾವನೆ ವಿಚಾರದಿಂದ ಮತ್ತೆ ಸುದ್ದಿಯಲ್ಲಿದೆ. ವರದಿಗಳ ಪ್ರಕಾರ, ಚಿತ್ರದಲ್ಲಿನ ಪ್ರಮುಖ ಪಾತ್ರಕ್ಕಾಗಿ ನಯನತಾರಾ ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ಇಂಡಿಯಾ ಸಿನಿಮಾಗೆ ಮೊದಲಿಗೆ 15 ಕೋಟಿ ರೂಪಾಯಿ ಸಂಭಾವನೆ ನೀಡುವಂತೆ ನಯನತಾರಾ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಹಲವು ಸುತ್ತಿನ ಮಾತುಕತೆಗಳ ಬಳಿಕ 12 ಕೋಟಿ ರೂಪಾಯಿಗೆ ಒಪ್ಪಂದ ಅಂತಿಮಗೊಂಡಿದೆ ಎಂದು ಸಿನಿ ವಲಯದಲ್ಲಿ ಮಾಹಿತಿ ಹರಿದಾಡುತ್ತಿದೆ.

ಚಿತ್ರದಲ್ಲಿ ನಯನತಾರಾ ಅವರ ಪಾತ್ರ ಪ್ರಮುಖವಾಗಿದ್ದರೂ, ಅವರಿಗೆ ಹೆಚ್ಚಿನ ಸ್ಕ್ರೀನ್ ಟೈಮ್ ಇರುವುದಿಲ್ಲ ಎನ್ನಲಾಗುತ್ತಿದೆ. ಆದರೂ ಅವರ ಜನಪ್ರಿಯತೆ, ಮಾರುಕಟ್ಟೆ ಮೌಲ್ಯ ಮತ್ತು ಪಾತ್ರದ ತೂಕವನ್ನು ಪರಿಗಣಿಸಿ ನಿರ್ಮಾಪಕರು ಭಾರೀ ಸಂಭಾವನೆ ನೀಡಲು ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ‘ಟಾಕ್ಸಿಕ್’ ಚಿತ್ರ ಈಗಾಗಲೇ ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ‘ತಬಾಹಿ’ ವಿಡಿಯೋ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ಚಿತ್ರದಲ್ಲಿ ನಟಿಸಿರುವ ಕಿಯಾರಾ ಅಡ್ವಾಣಿಗೂ 15 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂಬ ವರದಿಗಳು ಗಮನ ಸೆಳೆಯುತ್ತಿವೆ.

ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ: ‘ಮೈಸಾ’ಗಾಗಿ ಅಂಡರ್‌ವಾಟರ್ ಫೈಟ್ ಮುಗಿಸಿದ ರಶ್ಮಿಕಾ

20 ಗಂಟೆಗಳ ಕಾಲ ನೀರಿನಡಿಯೇ ಸಾಹಸ ದೃಶ್ಯಗಳಲ್ಲಿ ನಟಿಸಿ, ಯಾವುದೇ ಡೂಪ್ ಬಳಸದೇ ರಶ್ಮಿಕಾ ಮಂದಣ್ಣ ‘ಮೈಸಾ’ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ಪ್ರಧಾನ ಸಿನಿಮಾದ ಅಂಡರ್‌ವಾಟರ್ ಫೈಟ್ ಸೀಕ್ವೆನ್ಸ್‌ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ ಆಗಿ ಮೂಡಿಬರುತ್ತಿರುವ ‘ಮೈಸಾ’ ಚಿತ್ರದಲ್ಲಿ ರಶ್ಮಿಕಾ ಇದುವರೆಗೆ ಕಾಣಿಸದ ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್‌ಗಳು ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸಿವೆ.

ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ಸಾಮಾನ್ಯವಾಗಿ ಬಾಡಿ ಡಬಲ್ ಬಳಸುವ ಸಂಪ್ರದಾಯವಿದ್ದರೂ, ಈ ಚಿತ್ರದಲ್ಲಿ ರಶ್ಮಿಕಾ ಸ್ವತಃ ಎಲ್ಲಾ ಫೈಟ್ ಸೀನ್‌ಗಳನ್ನು ನಿರ್ವಹಿಸಿದ್ದಾರೆ. ಎರಡು ದಿನಗಳ ಕಾಲ ನಿರಂತರವಾಗಿ ನೀರಿನಲ್ಲಿ ಉಳಿದು ಸುಮಾರು 20 ಗಂಟೆಗಳ ಅಂಡರ್‌ವಾಟರ್ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಚಿತ್ರೀಕರಣದ ಅಪರೂಪದ ಚಿತ್ರಗಳನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದು ಭಾರತೀಯ ಸಿನಿ ಇತಿಹಾಸದಲ್ಲಿ ಮಹಿಳಾ ಪ್ರಧಾನ ಸಿನಿಮಾಗೆ ಹೊಸ ಮಾನದಂಡವಾಗಲಿದೆ ಎಂದು ಹೇಳಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆಯಾಗಲಿದ್ದು, ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ.

‘ತಪ್ಪಿದ್ದರೆ ಅದು ನನ್ನದು’: ಮಾಜಿ ಪತ್ನಿ ಎದುರಲ್ಲೇ ವಿಚ್ಛೇದನದ ಹೊಣೆ ಹೊತ್ತ ಸೊಹೈಲ್ ಖಾನ್

ಮುಂಬೈ: ನಾಲ್ಕು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ಬಾಲಿವುಡ್ ನಟ ಸೊಹೈಲ್ ಖಾನ್ ಈಗ ಮೊದಲ ಬಾರಿಗೆ ತಮ್ಮ ವೈವಾಹಿಕ ಬದುಕಿನ ಬಗ್ಗೆ ಮೌನ ಮುರಿದಿದ್ದಾರೆ. ಮಾಜಿ ಪತ್ನಿ ಸೀಮಾ ಸಜ್ದೇಹ್ ಎದುರಲ್ಲೇ “ನಮ್ಮ ಸಂಬಂಧ ಮುರಿದಿದ್ದರೆ ಅದರ ಹೊಣೆ ನನ್ನದು” ಎಂದು ಒಪ್ಪಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

‘ಅಲೈಯನ್ಸ್’ ರಿಯಾಲಿಟಿ ಶೋ ಪ್ರೋಮೋದಲ್ಲಿ ಮಾತನಾಡಿದ ಸೊಹೈಲ್, “25 ವರ್ಷಗಳ ಸುಂದರ ಜೀವನವನ್ನು ನಾವು ಒಟ್ಟಿಗೆ ಕಳೆದಿದ್ದೇವೆ. ತಪ್ಪು ನಡೆದಿದ್ದರೆ ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಈ ಹೇಳಿಕೆ ಕೇಳಿ ಸೀಮಾ ಸಂತಸ ವ್ಯಕ್ತಪಡಿಸಿದ್ದು, ವೇದಿಕೆಯಲ್ಲಿದ್ದವರು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸೊಹೈಲ್ ಅವರ ಪ್ರೌಢ ನಿಲುವಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, “ನಿಜವಾದ ಜವಾಬ್ದಾರಿ ಎಂದರೆ ಇದೇ”, “ಸಂಬಂಧ ಮುರಿದರೂ ಗೌರವ ಉಳಿಸಿಕೊಂಡಿದ್ದಾರೆ” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

1998ರಲ್ಲಿ ವಿವಾಹವಾಗಿದ್ದ ಸೊಹೈಲ್ ಮತ್ತು ಸೀಮಾ 2020ರಲ್ಲಿ ವಿಚ್ಛೇದನ ಪಡೆದಿದ್ದರು. ಇಬ್ಬರು ಮಕ್ಕಳ ಪಾಲನೆ-ಪೋಷಣೆಯನ್ನು ಇಂದಿಗೂ ಜಂಟಿಯಾಗಿ ನೋಡಿಕೊಳ್ಳುತ್ತಿದ್ದು, ವಿಚ್ಛೇದನದ ಬಳಿಕವೂ ಪರಸ್ಪರ ಗೌರವದ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.

ಮಣಿಪಾಲ್‌ ಬಳಿ ಕಂದಕಕ್ಕೆ ಉರುಳಿದ ಶಾಲಾ ಬಸ್: 8 ವಿದ್ಯಾರ್ಥಿಗಳಿಗೆ ಗಾಯ, ಓರ್ವನ ಸ್ಥಿತಿ ಗಂಭೀರ!

ಉಡುಪಿ: ಮಣಿಪಾಲದ ಕೊಡಂಗೆಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ.

ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಏಳು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮಣಿಪಾಲದ ಖಾಸಗಿ ಶಾಲೆಗೆ ಸೇರಿದ ಬಸ್ ಮಕ್ಕಳನ್ನು ಕರೆದುಕೊಂಡು ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಬಿದ್ದಿದೆ ಎನ್ನಲಾಗಿದೆ.

ಬಸ್‌ನಲ್ಲಿದ್ದ ವಿದ್ಯಾರ್ಥಿಗಳ ಪೈಕಿ ಓರ್ವನ ತಲೆಗೆ ತೀವ್ರ ಪೆಟ್ಟಾಗಿದ್ದು, ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗಿದೆ.

ಅಪಘಾತದ ವೇಳೆ ರಸ್ತೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಇತರ ಮಕ್ಕಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ.

ಘಟನೆ ಕುರಿತು ಮಣಿಪಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

China Fire Accident: ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ, 28 ಮಂದಿ ಸಜೀವ ದಹನ!

0

ಬೀಜಿಂಗ್: ಚೀನಾದ ಫುಜಿಯಾನ್ ಪ್ರಾಂತ್ಯದ ಜಿಂಜಿಯಾಂಗ್‌ನಲ್ಲಿರುವ ಶೂ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 28 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಶೂ ಉತ್ಪಾದನೆಗೆ ಪ್ರಸಿದ್ಧವಾಗಿರುವ ಜಿಂಜಿಯಾಂಗ್‌ನ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ವೇಳೆ ಸುಮಾರು 240 ಮಂದಿ ಇದ್ದರು ಎನ್ನಲಾಗಿದೆ. ಬೆಂಕಿಯ ತೀವ್ರತೆಗೆ ಹಲವರು ನಾಪತ್ತೆಯಾಗಿದ್ದು, 200ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಅಗ್ನಿ ಅವಘಡದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರ್ಖಾನೆಯಿಂದ ದಟ್ಟ ಹೊಗೆ ಹೊರಬರುತ್ತಿರುವುದು ಹಾಗೂ ಛಾವಣಿಯ ಮೇಲೆ ಕೆಲವರು ಸಿಲುಕಿರುವ ದೃಶ್ಯಗಳು ಕಂಡುಬಂದಿವೆ. ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಘಟನಾ ಸ್ಥಳದಲ್ಲಿ ನೂರಾರು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಸಿಲುಕಿದ್ದವರ ರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ. ಕಾರ್ಖಾನೆಯೊಂದಿಗೆ ಸಂಬಂಧ ಹೊಂದಿರುವ ಕೆಲ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಂಪನಿಯ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ನಿರ್ಲಕ್ಷ್ಯದಿಂದ ಸಾವು-ನೋವುಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕೈಗಾರಿಕಾ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಸೂಚಿಸಿದ್ದಾರೆ.

‘ಶೂ ರಾಜಧಾನಿ’ ಜಿಂಜಿಯಾಂಗ್:

ಫುಜಿಯಾನ್ ಪ್ರಾಂತ್ಯದ ಜಿಂಜಿಯಾಂಗ್ ನಗರವನ್ನು ಚೀನಾದ ‘ಶೂ ರಾಜಧಾನಿ’ ಎಂದು ಕರೆಯಲಾಗುತ್ತದೆ. ವಿಶ್ವದ ಕ್ರೀಡಾ ಶೂಗಳ ಸುಮಾರು 20 ಶೇಕಡಾ ಉತ್ಪಾದನೆ ಇಲ್ಲಿ ನಡೆಯುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಚೀನಾದ ವಿವಿಧ ಕೈಗಾರಿಕೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ, ಸುರಕ್ಷತಾ ನಿಯಮಗಳನ್ನು ಕಠಿಣಗೊಳಿಸುವ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.