Home Blog

ಸಚಿವ ಸ್ಥಾನ ಕೇಳುವುದು ತಪ್ಪಲ್ಲ: ಸಂಪುಟ ಪುನರ್ ರಚನೆಗೆ ದಿನೇಶ್ ಗುಂಡೂರಾವ್ ಒತ್ತಾಯ

ಬೆಂಗಳೂರು: ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಸಂಪುಟ ಪುನರ್‌ರಚನೆ ಆಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಾಸಕರು ಸಚಿವ ಸ್ಥಾನಕ್ಕಾಗಿ ಪ್ರಯತ್ನಿಸುವುದು ಸಹಜ. ಪ್ರತಿಯೊಬ್ಬರಿಗೂ ಮಂತ್ರಿಯಾಗುವ ಆಸೆ ಇರುತ್ತದೆ ಎಂದು ಹೇಳಿದರು. ಹಿಂದೆ ತಾವು ಸಚಿವರಾಗಿದ್ದಾಗಲೂ ಸಂಪುಟ ಪುನರ್‌ರಚನೆ ನಡೆದಿತ್ತು ಎಂದು ಉಲ್ಲೇಖಿಸಿದರು.

ಬೇರೆಯವರಿಗೂ ಸಚಿವ ಸ್ಥಾನ ಸಿಗಬೇಕು ಎಂಬುದು ಸಹಜ. ಆದರೆ ಯಾರು ಸಚಿವರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಒಟ್ಟು ಸಚಿವರ ಪಟ್ಟಿಯನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಶಾಸಕರು ದೆಹಲಿಗೆ ತೆರಳಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಉಪಮುಖ್ಯಮಂತ್ರಿಗಳ ಹೇಳಿಕೆಗೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಶಾಸಕರು ತಮ್ಮ ಮಟ್ಟಿಗೆ ಪ್ರಯತ್ನಿಸುವುದು ತಪ್ಪಲ್ಲ ಎಂದು ಪುನರುಚ್ಚರಿಸಿದರು.

ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಸೇರಿ ಆರೋಪಿಗಳ ಶಿಕ್ಷೆ ಪ್ರಮಾಣ ನಾಳೆ ಪ್ರಕಟ

ಬೆಂಗಳೂರು: ಹುಬ್ಬಳ್ಳಿಯ ಬಿಜೆಪಿ ಕಾರ್ಯಕರ್ತ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಇತರ ಆರೋಪಿಗಳ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಾಗುವುದು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಕುರಿತು ದೀರ್ಘಕಾಲ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ಎಲ್ಲ ಆರೋಪಿಗಳ ವಾದ-ಪ್ರತಿವಾದಗಳನ್ನು ಆಲಿಸಿ ತೀರ್ಪನ್ನು ನಾಳೆಗೆ ಕಾಯ್ದಿರಿಸಿದ್ದಾರೆ.

ವಿಚಾರಣೆ ವೇಳೆ ಸಿಬಿಐ ಪರ ಸಹಾಯಕ ಸಾಲಿಸೇಟರ್ ಜನರಲ್ ಎಸ್.ವಿ. ರಾಜು ವಾದ ಮಂಡಿಸಿ, ಈ ಅಪರಾಧ ಅತ್ಯಂತ ಗಂಭೀರವಾಗಿದ್ದು ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆಯಾಗಿದೆ. ಆರೋಪಿಗಳು ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದು, ನ್ಯಾಯ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದಾರೆ. ಹೀಗಾಗಿ ಎಲ್ಲ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ಆರೋಪಿಗಳ ಪರ ವಕೀಲರು, ಶಿಕ್ಷೆ ಪ್ರಮಾಣವನ್ನು ಕಡಿಮೆಗೊಳಿಸಬೇಕೆಂದು ಕೋರಿದರು. ಆರೋಪಿಗಳಿಗೆ ಕುಟುಂಬದ ಜವಾಬ್ದಾರಿಗಳಿದ್ದು, ಮಾನವೀಯ ದೃಷ್ಟಿಯಿಂದ ಶಿಕ್ಷೆಯಲ್ಲಿ ಸಡಿಲಿಕೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.

ಕೃಷ್ಣಾ ನದಿಯಲ್ಲಿ ಕುರಿಗಾಹಿಯ ಮೇಲೆ ಮೊಸಳೆ ದಾಳಿ! ಬಲಗೈ ಕಟ್

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಬಳಿ ಕೃಷ್ಣಾ ನದಿಯಲ್ಲಿ ಮೊಸಳೆ ದಾಳಿ ನಡೆದಿದ್ದು, ಕುರಿಗಾಹಿಯೊಬ್ಬರ ಬಲಗೈ ತುಂಡಾಗಿದೆ. ಮೊಸಳೆ ದಾಳಿಗೆ ಒಳಗಾದ ಹೊನ್ನಗುಡೆಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುರಿ ಮರಿಗಳಿಗೆ ನೀರು ತರಲು ಕೃಷ್ಣಾ ನದಿಗೆ ಹೋದ ವೇಳೆ ಏಕಾಏಕಿ ಮೊಸಳೆ ದಾಳಿ ನಡೆಸಿದೆ. ಕೈ ಕಚ್ಚಿಕೊಂಡು ನದಿಯೊಳಗೆ ಎಳೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿದೆ.

ಆದರೆ ಧೈರ್ಯವಾಗಿ ಹೋರಾಡಿದ ಹೊನ್ನಗುಡೆಪ್ಪ ಮೊಸಳೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವೇಳೆ, ಬಲಗೈ ತುಂಡಾಗಿದೆ. ಗಾಯಾಳುವನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಭಾಗದಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ನದಿ ತೀರದ ಜನರಲ್ಲಿ ಭೀತಿ ಹೆಚ್ಚಾಗಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಮೊಸಳೆಗಳ ನಿಯಂತ್ರಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜೊತೆಗೆ ಗಾಯಾಳುವಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆ ಇನ್ನೂ ಅಂತ್ಯಗೊಂಡಿಲ್ಲ: ಬಾಲಕೃಷ್ಣ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆ ಇನ್ನೂ ಅಂತ್ಯಗೊಂಡಿಲ್ಲ ಎಂದು ಶಾಸಕ ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ಈ ಗೊಂದಲವನ್ನು ಹೈಕಮಾಂಡ್ ಸರಿಯಾಗಿ ಪರಿಹರಿಸದಿದ್ದರೆ ಪಕ್ಷದ ಬೆಳವಣಿಗೆಗೆ ತೊಂದರೆ ಉಂಟಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬೈಎಲೆಕ್ಷನ್ ಫಲಿತಾಂಶದ ಬಳಿಕ ಮತ್ತೆ ನಾಯಕತ್ವ ವಿಚಾರ ಚರ್ಚೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆಯನ್ನು ನಮ್ಮಂತಹವರ ಬಳಿ ಕೇಳುವುದು ಸೂಕ್ತವಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರು ಬೇರೆ ಇದ್ದಾರೆ ಎಂದರು.

ನಾಯಕತ್ವದ ಅಂತಿಮ ತೀರ್ಮಾನ ಹೈಕಮಾಂಡ್ ಕೈಯಲ್ಲಿದ್ದು, ನಾವು ಅದನ್ನು ಒಪ್ಪಲೇಬೇಕು. ನಮಗೆ ಟಿಕೆಟ್ ನೀಡಿದ್ದು ಕೂಡ ಹೈಕಮಾಂಡ್ ಆಗಿರುವುದರಿಂದ ಅವರ ಆದೇಶಕ್ಕೆ ನಾವು ಬದ್ಧರಾಗಿರಬೇಕು ಎಂದು ಹೇಳಿದರು.

ಇನ್ನೂ ಪಕ್ಷದ ಒಳಗಿನ ಗೊಂದಲವನ್ನು ಶೀಘ್ರವಾಗಿ ಪರಿಹರಿಸಬೇಕು. ಇಲ್ಲವಾದರೆ ಅದು ಪಕ್ಷದ ಮುಂದಿನ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಕುಮಾರಸ್ವಾಮಿ ಜೊತೆ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದು ಸ್ಪಷ್ಟವಿಲ್ಲ. ಕೆಲವರು ಸುಮ್ಮನೆ ಹೇಳಿಕೊಳ್ಳುತ್ತಾರೆ ಎಂದು ಹೇಳಿದರು. ಜೊತೆಗೆ, ಪಕ್ಷಕ್ಕೆ ಸೇರಲು ಓಪನ್ ಆಫರ್ ನೀಡುವ ಬಗ್ಗೆ ಮಾತನಾಡಿದ ಅವರು, ಅದು ಅವರ ರಾಜಕೀಯ ಶೈಲಿ ಎಂದು ಲೇವಡಿ ಮಾಡಿದರು.

ಯಕ್ಷಗಾನ ಕಲಾವಿದರಿಗೆ ಬೆದರಿಕೆ: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ FIR

0

ಮಂಗಳೂರು: ಧರ್ಮಸ್ಥಳ ಪ್ರಕರಣದ ಹಿನ್ನೆಲೆ ಸುದ್ದಿಯಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಇದೀಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ‘ಬುರುಡೆ ಗ್ಯಾಂಗ್’ ಎಂಬ ಯಕ್ಷಗಾನ ಪ್ರಸಂಗದ ವಿಚಾರವಾಗಿ ಯಕ್ಷಗಾನ ಕಲಾವಿದರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಆರೋಪ ಅವರ ವಿರುದ್ಧ ಕೇಳಿಬಂದಿದೆ.

ಈ ಸಂಬಂಧ ಪುತ್ತೂರು ಮಹಿಳಾ ಠಾಣೆ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ತಿಮರೋಡಿ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಧರ್ಮಸ್ಥಳ ಪ್ರಕರಣದಂತೆ ಕಥಾವಸ್ತು ಹೊಂದಿರುವ ‘ಬುರುಡೆ ಗ್ಯಾಂಗ್’ ಯಕ್ಷಗಾನ ಪ್ರಸಂಗ ನಿರ್ಮಾಣಗೊಂಡಿತ್ತು.

ಇದರಿಂದ ಅಸಮಾಧಾನಗೊಂಡ ತಿಮರೋಡಿ ಏಪ್ರಿಲ್ 11ರಂದು ಯಕ್ಷಗಾನ ಹಾಸ್ಯ ಕಲಾವಿದ ಪ್ರಜ್ವಲ್ ಗುರುನಾಯನಕೆರೆಗೆ ಕರೆ ಮಾಡಿ, ಕಲಾವಿದರಾದ ದಿನೇಶ್ ಶೆಟ್ಟಿಗಾರ್ ಮತ್ತು ನಟ ಮಂದಾರ ಸುಂದರ ರೈ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಅವರ ತಾಯಂದಿರ ಕುರಿತು ಕೂಡ ಅವಮಾನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕರೆಗಿನ ಆಡಿಯೋವನ್ನು ಪ್ರಜ್ವಲ್ ಅವರು ಸಂಬಂಧಿತ ಕಲಾವಿದರಿಗೆ ಕಳುಹಿಸಿದ್ದು, ಅದನ್ನು ಕೇಳಿ ಅವರು ಮನಸ್ತಾಪಗೊಂಡಿದ್ದಾರೆ. ಈ ಹಿನ್ನೆಲೆ ಮಂದಾರ ಸುಂದರ ರೈ ನೀಡಿದ ದೂರಿನಡಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ FIR ದಾಖಲಾಗಿದ್ದು, ದಿನೇಶ್ ಶೆಟ್ಟಿಗಾರ್ ತಾಯಿ ಲೀಲಾವತಿ ಶೆಟ್ಟಿಗಾರ್ ನೀಡಿದ ದೂರಿನಡಿ ಮಹಿಳಾ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಆಡಿಯೋದಲ್ಲಿರುವ ವಿಷಯ:

ಆಡಿಯೋದಲ್ಲಿ ತಿಮರೋಡಿ ಯಕ್ಷಗಾನ ಕಲಾವಿದರ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು ಕೇಳಿಸುತ್ತದೆ. “ಒಂದು ಮಗುವಿಗೆ ಅನ್ಯಾಯವಾಗಿರುವ ವಿಷಯದಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ. ಅದನ್ನು ಹಾಸ್ಯ ಮಾಡುವುದು ಸರಿಯಲ್ಲ. ಯಕ್ಷಗಾನಕ್ಕೆ ತನ್ನದೇ ಆದ ಗೌರವವಿದೆ, ಇಂತಹ ಕಥೆ ಮಾಡುವ ಮೊದಲು ಜಾಗ್ರತೆ ಇರಬೇಕು” ಎಂದು ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ರಾಜ್ಯಾದ್ಯಂತ ಬಿಸಿಲಿನ ಕಾಟ: ಕಲಬುರಗಿಯಲ್ಲಿ 45°C, ಬೆಂಗಳೂರಿನಲ್ಲಿ ಉಷ್ಣತೆ ಏರಿಕೆ!

ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ದಿನೇದಿನೇ ಏರಿಕೆಯಾಗುತ್ತಿದ್ದು, ಜನರು ತೀವ್ರ ಬೇಗೆಯಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ 44°–45°C ತಾಪಮಾನ ದಾಖಲಾಗಿದ್ದು, ಆತಂಕ ಹೆಚ್ಚಿಸಿದೆ.

ಇನ್ನೊಂದೆಡೆ ಬೆಂಗಳೂರಿನಲ್ಲಿ ಬುಧವಾರ 35.8°C ತಾಪಮಾನ ದಾಖಲಾಗಿದ್ದು, ಕಳೆದ ಕೆಲ ದಿನಗಳಿಂದ ಏಪ್ರಿಲ್ ತಿಂಗಳ ಹಿಂದಿನ ದಾಖಲೆಗಳನ್ನು ಮೀರುವ ಮಟ್ಟದಲ್ಲಿ ಉಷ್ಣತೆ ಏರಿಕೆಯಾಗುತ್ತಿದೆ.

ಹವಾಮಾನ ಇಲಾಖೆ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36°C ರಿಂದ 37°C ನಡುವೆ ಇರಲಿದೆ. ಮಂಗಳವಾರ 36.6°C ದಾಖಲಾಗಿದ್ದು, ಈ ವರ್ಷದಲ್ಲೇ ಅತ್ಯಂತ ಬಿಸಿಯಾದ ದಿನವಾಗಿತ್ತು. ಮುಂದಿನ ದಿನಗಳಲ್ಲಿ 38°C ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಕೆಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ ಇದ್ದರೂ, ಅದು ಸೀಮಿತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಲಿದೆ.

ಇದೇ ವೇಳೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಆರೆಂಜ್ ಹಾಗೂ ಯೆಲ್ಲೋ ಹೀಟ್‌ವೇವ್ ಅಲರ್ಟ್ ನೀಡಲಾಗಿದೆ. ಕಲಬುರಗಿಯ ಅವ್ರಾದ್ ಬಿ ಪ್ರದೇಶದಲ್ಲಿ 45°C, ಚಿಂಚೋಳಿ ಮತ್ತು ಅಫ್ಜಲ್ಪುರದಲ್ಲಿ 44°C ಕ್ಕೂ ಅಧಿಕ ತಾಪಮಾನ ದಾಖಲಾಗಿದೆ.

ಸಾಮಾನ್ಯಕ್ಕಿಂತ 3°C ರಿಂದ 4°C ಹೆಚ್ಚು ತಾಪಮಾನ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ಕಲಬುರಗಿ ಜಿಲ್ಲಾಧಿಕಾರಿ ನಾಗರಿಕರಿಗೆ ಬೆಳಿಗ್ಗೆ 11:30ರಿಂದ ಸಂಜೆ 5ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಲು ಸೂಚಿಸಿದ್ದಾರೆ.

ಇನ್ನೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಗದಗ, ಹಾವೇರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಬಿಸಿ ಮತ್ತು ತೇವಾಂಶಯುಕ್ತ ಹವಾಮಾನದ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಲೋಕಸಭೆಯಲ್ಲಿ ಗದ್ದಲ ಮಧ್ಯೆ ಮಹಿಳಾ ಮೀಸಲಾತಿ ಮಸೂದೆ ಮಂಡನೆ

0

ನವದೆಹಲಿ: ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಮಹಿಳಾ ಮೀಸಲಾತಿ ಸೇರಿದಂತೆ ಮಹತ್ವದ ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆ ಜೊತೆಗೆ, ಕ್ಷೇತ್ರ ಪುನರ್ವಿಂಗಡಣೆ ಹಾಗೂ ಲೋಕಸಭೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯೂ ಇದರಲ್ಲಿ ಒಳಗೊಂಡಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಸೂದೆ ಮಂಡಿಸಿದ ವೇಳೆ, ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸದನದಲ್ಲಿ ಗದ್ದಲ ಉಂಟಾಯಿತು.

ಲೋಕಸಭೆ ಬಲ ಹೆಚ್ಚಿಸುವ ಪ್ರಸ್ತಾವನೆ

ಈ ಮಸೂದೆಯ ಪ್ರಕಾರ, ಪ್ರಸ್ತುತ 543 ಸದಸ್ಯರಿರುವ ಲೋಕಸಭೆಯನ್ನು 850 ಸದಸ್ಯರ ತನಕ ವಿಸ್ತರಿಸುವ ಉದ್ದೇಶವಿದೆ. ಇದರಲ್ಲಿ ರಾಜ್ಯಗಳಿಂದ 815 ಸದಸ್ಯರು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35 ಸದಸ್ಯರು ಆಯ್ಕೆಯಾಗುವಂತೆ ಯೋಜನೆ ರೂಪಿಸಲಾಗಿದೆ. ಆದರೆ, ಈ ಬದಲಾವಣೆ ಕ್ಷೇತ್ರ ಪುನರ್ವಿಂಗಡಣೆಯ ಬಳಿಕವೇ ಜಾರಿಯಾಗಲಿದೆ.

ಮಹಿಳಾ ಮೀಸಲಾತಿ ವಿವಾದ

ಮಹಿಳೆಯರಿಗೆ 33% ಮೀಸಲಾತಿ ನೀಡುವ ‘ನಾರಿ ಶಕ್ತಿ ವಂದನ ಅಧಿನಿಯಮ’ ಜಾರಿಗೆ ಸರ್ಕಾರ ಮುಂದಾಗಿದ್ದರೂ, ಅದನ್ನು ಕ್ಷೇತ್ರ ಪುನರ್ವಿಂಗಡಣೆಗೆ ಕಟ್ಟಿ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷಗಳು, ಇದು ಮೀಸಲಾತಿಯನ್ನು ವಿಳಂಬಗೊಳಿಸುವ ತಂತ್ರ ಎಂದು ಆರೋಪಿಸಿವೆ.

ಇದೇ ವಿಚಾರವಾಗಿ ಕಾಂಗ್ರೆಸ್ ಮುಖಂಡ  ಜೈರಾಮ್ ರಮೇಶ್ ಕೂಡ ಪ್ರಶ್ನೆ ಎತ್ತಿದ್ದು, “ಈಗಲೇ ಜಾರಿಗೆ ತರಲು ಏನು ಅಡ್ಡಿ?” ಎಂದು ಕೇಳಿದ್ದಾರೆ.

ಡಿಲಿಮಿಟೇಶನ್ ಮಸೂದೆ

‘ಡಿಲಿಮಿಟೇಶನ್ ಮಸೂದೆ, 2026’ ಮೂಲಕ ಹಳೆಯ 2002ರ ಕಾಯ್ದೆಯನ್ನು ರದ್ದುಗೊಳಿಸಿ, ಹೊಸ ಆಯೋಗವನ್ನು ರಚಿಸಲು ಸರ್ಕಾರ ಮುಂದಾಗಿದೆ. ಈ ಆಯೋಗವು ಇತ್ತೀಚಿನ ಜನಗಣತಿ ಅಂಕಿಅಂಶಗಳ ಆಧಾರದ ಮೇಲೆ ಕ್ಷೇತ್ರಗಳ ಗಡಿಗಳನ್ನು ಮರುನಿರ್ಧರಿಸಲಿದೆ.

ಕೇಂದ್ರಾಡಳಿತ ಪ್ರದೇಶಗಳಿಗೂ ಮೀಸಲಾತಿ

ಇದೇ ವೇಳೆ, ದೆಹಲಿ, ಜಮ್ಮು-ಕಾಶ್ಮೀರ ಮತ್ತು ಪುದುಚೇರಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲೂ ಮಹಿಳೆಯರಿಗೆ 33% ಮೀಸಲಾತಿ ಜಾರಿಗೆ ತರಲು ಮತ್ತೊಂದು ತಿದ್ದುಪಡಿ ಮಸೂದೆ ಮಂಡಿಸಲಾಗಿದೆ.

ಮಹಿಳಾ ಮೀಸಲಾತಿಗೆ ಮೋದಿ ಸ್ವಾಗತ: ಮಹಿಳೆಯರನ್ನು ಗೌರವಿಸುವುದು ದೇಶದ ಗೌರವ ಎಂದ ಪ್ರಧಾನಿ

0

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಮಹಿಳಾ ಮೀಸಲಾತಿ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ  ಸ್ವಾಗತ ಸೂಚಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, “ದೇಶವು ಮಹಿಳಾ ಸಬಲೀಕರಣದತ್ತ ಐತಿಹಾಸಿಕ ಹೆಜ್ಜೆ ಇಡಲು ಸಜ್ಜಾಗಿದೆ” ಎಂದು ತಿಳಿಸಿದ್ದಾರೆ.

ಇಂದಿನಿಂದ ಆರಂಭವಾಗುತ್ತಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಮಹತ್ವದ ಚರ್ಚೆಗಳು ನಡೆಯಲಿವೆ. “ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ನೀಡುವ ಗೌರವವೇ ರಾಷ್ಟ್ರಕ್ಕೆ ನೀಡುವ ಗೌರವ” ಎಂದು ಮೋದಿ ಬರೆದುಕೊಂಡಿದ್ದಾರೆ.

ಇದಲ್ಲದೆ, ಮಹಿಳೆಯರು ಸಮಾಜದಲ್ಲಿ ಜ್ಞಾನ ಹರಡುವಲ್ಲಿ ಹಾಗೂ ಅಜ್ಞಾನವನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂಬ ಅರ್ಥದ ಸಂಸ್ಕೃತ ಶ್ಲೋಕವನ್ನೂ ಅವರು ಹಂಚಿಕೊಂಡಿದ್ದಾರೆ.

ಏಪ್ರಿಲ್ 16ರಿಂದ 18ರವರೆಗೆ ನಡೆಯಲಿರುವ ಈ ವಿಶೇಷ ಅಧಿವೇಶನದಲ್ಲಿ, 2029ರ ಸಾರ್ವತ್ರಿಕ ಚುನಾವಣೆಗಳಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಜಾರಿಗೆ ತರಲು ಸಂಬಂಧಿಸಿದ ತಿದ್ದುಪಡಿ ಮಸೂದೆ ಚರ್ಚೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

SSLC ತೃತೀಯ ಭಾಷೆಗೆ ಗ್ರೇಡ್ ಬೇಡ: ಅಂಕಗಳೇ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು: ಪ್ರಸ್ತುತ ಸಾಲಿನಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲು ಅಂಕಗಳನ್ನು ನೀಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಕುರಿತು ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ ಸೇರಿ ಮೂವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 2025-2026ನೇ ಸಾಲಿನಿಂದ ತೃತೀಯ ಭಾಷಾ ವಿಷಯಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ನಿರ್ಧಾರವನ್ನು ಸರ್ಕಾರ ಕೊನೆಯ ಕ್ಷಣದಲ್ಲಿ ತೆಗೆದುಕೊಂಡಿದೆ ಎಂದು ಆಕ್ಷೇಪಿಸಿದರು. ಇದಕ್ಕೂ ಮುನ್ನ ಮಂಡಳಿ ಹೊರಡಿಸಿದ್ದ ಮಾರ್ಗಸೂಚಿಯ ಪ್ರಕಾರ, 100 ಅಂಕಗಳ ವ್ಯವಸ್ಥೆ (80 ಲಿಖಿತ + 20 ಆಂತರಿಕ) ಜಾರಿಯಲ್ಲಿತ್ತು ಎಂದು ಹೇಳಿದರು.

ಇದಲ್ಲದೆ, ಯುಪಿಎಸ್‌ಸಿ ಹಾಗೂ ಬ್ಯಾಂಕಿಂಗ್ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರೇಡ್ ಪರಿಗಣಿಸಲಾಗುವುದಿಲ್ಲ. ಕೇವಲ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಹೀಗಾಗಿ ಗ್ರೇಡ್ ನೀಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಯಾಗಬಹುದು ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದೆಯೇ ಎಂದು ಪ್ರಶ್ನಿಸಿತು. ಸರ್ಕಾರಿ ವಕೀಲರು, ಸದ್ಯ ಕರಡು ಅಧಿಸೂಚನೆ ಮಾತ್ರ ಹೊರಬಂದಿದೆ ಎಂದು ತಿಳಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಹಾಲಿ ಇರುವ ನಿಯಮಗಳು ಹಾಗೂ ಮಾರ್ಗಸೂಚಿಯ ಪ್ರಕಾರವೇ 2025-2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಅಂಕಗಳನ್ನು ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ರಷ್ಯಾ, ಇರಾನ್ ತೈಲ ಖರೀದಿಗೆ ಭಾರತಕ್ಕೆ ನೀಡಿದ ವಿನಾಯಿತಿಯಲ್ಲಿ ಬದಲಾವಣೆ ಇಲ್ಲ: ಅಮೆರಿಕ

0

ವಾಷಿಂಗ್ಟನ್: ಅಮೆರಿಕ ಸರ್ಕಾರವು ಇರಾನ್ ಮತ್ತು ರಷ್ಯಾದ ತೈಲ ಖರೀದಿಗೆ ನೀಡಿದ್ದ ನಿರ್ಬಂಧ ವಿನಾಯಿತಿಯನ್ನು ಇನ್ನು ಮುಂದೆ ನವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರವು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮಾತನಾಡಿ, ರಷ್ಯಾ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನು ಮುಂದುವರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ, ಇಂಧನ ಪೂರೈಕೆಯನ್ನು ಸಮತೋಲನಗೊಳಿಸಲು ನೀಡಿದ್ದ ತಾತ್ಕಾಲಿಕ ವಿನಾಯಿತಿಗಳನ್ನು ಈಗ ಹಿಂತೆಗೆದುಕೊಳ್ಳಲಾಗುತ್ತಿದೆ.

ಈ ವಿನಾಯಿತಿಗಳ ಪ್ರಮುಖ ಪ್ರಯೋಜನವನ್ನು ಭಾರತ ಸೇರಿದಂತೆ ಹಲವು ದೇಶಗಳು ಪಡೆದುಕೊಂಡಿದ್ದವು. ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಸಮಸ್ಯೆಗಳ ಹಿನ್ನೆಲೆ, ಭಾರತಕ್ಕೆ ಬರುತ್ತಿದ್ದ ಅನೇಕ ತೈಲ ಹಡಗುಗಳು ಅಡಕವಾಗಿದ್ದವು. ಇದರಿಂದ ರಷ್ಯಾದ ತೈಲ ಖರೀದಿಗೆ ತಾತ್ಕಾಲಿಕ ಅನುಮತಿ ನೀಡಲಾಗಿತ್ತು.

ಅಮೆರಿಕ ಈ ಹಿಂದೆ ಇಂಧನ ಬೆಲೆ ಏರಿಕೆಯನ್ನು ನಿಯಂತ್ರಿಸಲು ಹಾಗೂ ಯುದ್ಧಕಾಲದಲ್ಲಿ ಪೂರೈಕೆ ಅಡಚಣೆಗಳನ್ನು ಕಡಿಮೆ ಮಾಡಲು ಸೀಮಿತ ಅವಧಿಗೆ ವಿನಾಯಿತಿ ನೀಡಿತ್ತು. ಮಾರ್ಚ್ 20ರಂದು ಇರಾನ್ ತೈಲಕ್ಕೂ ಇದೇ ರೀತಿಯ ಸಡಿಲಿಕೆ ನೀಡಲಾಗಿದ್ದು, ಸುಮಾರು 140 ಮಿಲಿಯನ್ ಬ್ಯಾರೆಲ್ ತೈಲ ಜಾಗತಿಕ ಮಾರುಕಟ್ಟೆಗೆ ತಲುಪಲು ಸಹಾಯ ಮಾಡಿತ್ತು.

ಈ ವಿನಾಯಿತಿ ಏಪ್ರಿಲ್ 19ರಂದು ಮುಕ್ತಾಯಗೊಳ್ಳಲಿದ್ದು, ಬಳಿಕ ಜಾಗತಿಕ ತೈಲ ಸರಬರಾಜು ಮತ್ತು ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

error: Content is protected !!