Home Blog

ಚಿಕ್ಕಮಗಳೂರು: ನರ್ಸ್ ಆಗಿದ್ದ ಕಾಫಿನಾಡ ಮಹಿಳೆ ಹೊಳೆಗೆ ಹಾರಿ ಆತ್ಮಹತ್ಯೆ!

0

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುಡುಬ ಸಮೀಪ ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತಳನ್ನು ರನ್ಯಾ ಬೇಸಿಲ್ (30) ಎಂದು ಗುರುತಿಸಲಾಗಿದೆ.

ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಮೂಲದ ರನ್ಯಾ, ಶಿವಮೊಗ್ಗದಲ್ಲಿರುವ ನಾರಾಯಣ ಹೃದಯಾಲಯದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.

ನಿನ್ನೆ ಸಹ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳಿದ್ದ ಅವರು, ಸಂಜೆ ಮತ್ತೆ ಮುಡುಬ ಸಮೀಪಕ್ಕೆ ತೆರಳಿ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದ ರನ್ಯಾಗೆ ಇಬ್ಬರು ಮಕ್ಕಳಿದ್ದು, ಅವರ ಪತಿ ಕಾಫಿ ಬೆಳೆಗಾರರಾಗಿದ್ದಾರೆ.

ಈ ಕುರಿತು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಡಿ.ಕೆ. ಶಿವಕುಮಾರ್ ವಿಶ್ವಾಸ

ಹುಬ್ಬಳ್ಳಿ: ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಗೆಲುವು ಸಾಧಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಎಲ್‌ಪಿಜಿ ದರ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಜನರಲ್ಲಿ ಅಸಮಾಧಾನ ಮೂಡಿದೆ. ಈ ಕಾರಣದಿಂದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಹೇಳಿದರು.

ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರ “ಆಟೋ ಚಾಲಕರು ಗ್ಯಾಸ್ ಬಿಟ್ಟು ಪೆಟ್ರೋಲ್ ಬಳಸಿ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇರಾನ್‌ನಿಂದ ಬಂದ ಎಲ್‌ಪಿಜಿ ಹಡಗುಗಳನ್ನು ಗುಜರಾತ್‌ಗೆ ಕಳುಹಿಸಿರುವುದನ್ನು ಪ್ರಶ್ನಿಸಿದರು.

ಮಂಗಳೂರು ಅಥವಾ ಕೇರಳಕ್ಕೆ ಕಳುಹಿಸಿದ್ದರೆ ರಾಜ್ಯಕ್ಕೆ ಅನುಕೂಲವಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರ ಉತ್ತರ ಭಾರತಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ, ದಕ್ಷಿಣ ಭಾರತದ ಕಡೆ ಗಮನ ಹರಿಸುತ್ತಿಲ್ಲ ಎಂದು ಟೀಕಿಸಿದರು.

12 ವರ್ಷಗಳಿಂದ ಡ್ರಗ್ಸ್​ ಪೆಡ್ಲಿಂಗ್ ನಡೆಸುತ್ತಿದ್ದ ನೈಜೀರಿಯಾ ಪ್ರಜೆ ಅರೆಸ್ಟ್.!

0

ಬೆಂಗಳೂರು: ಕಳೆದ 12 ವರ್ಷಗಳಿಂದ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ನೈಜೀರಿಯಾ ಮೂಲದ ಇಮ್ಯಾನ್ಯುಯಲ್ ಎಂಬಾತನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.

2014ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಇಮ್ಯಾನ್ಯುಯಲ್, ಬಳಿಕ ಬೆಂಗಳೂರಿನಲ್ಲಿ ನೆಲೆಸಿ ಸ್ಥಳೀಯ ಮಹಿಳೆಯನ್ನು ಮದುವೆಯಾಗಿದ್ದನು. ನಗರದಲ್ಲೇ 4-5 ಮನೆಗಳನ್ನು ಬಾಡಿಗೆಗೆ ಪಡೆದು ಡ್ರಗ್ಸ್ ಜಾಲವನ್ನು ನಡೆಸುತ್ತಿದ್ದನೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈತ ಹೊರ ರಾಜ್ಯ ಹಾಗೂ ವಿದೇಶಗಳಿಂದ ಸಬ್ ಪೆಡ್ಲರ್‌ಗಳಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದನು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಹೆಬ್ಬಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದಾಳಿಯ ವೇಳೆ ಎಂಡಿಎಮ್‌ಎ (MDMA), ಎಲ್‌ಎಸ್‌ಡಿ (LSD) ಸೇರಿದಂತೆ ವಿವಿಧ ಸಿಂಥೆಟಿಕ್ ಡ್ರಗ್ಸ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜಪ್ತಿಯಾದ ಮಾದಕ ವಸ್ತುಗಳ ಮೌಲ್ಯ ಸುಮಾರು ₹14 ಕೋಟಿ ಎಂದು ಅಂದಾಜಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

‘ಜೈಲರ್ 2’ನಲ್ಲಿ ಶಾರುಖ್ ಖಾನ್ ಇಲ್ಲ: ಅತಿಥಿ ಪಾತ್ರ ಆಫರ್ ನಿರಾಕರಣೆ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿರುವ ನಡುವೆ, ಶಾರುಖ್ ಖಾನ್ ಅಭಿನಯದ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗೆ ತೆರೆ ಬಿದ್ದಿದೆ.

ಚಿತ್ರದಲ್ಲಿ ಶಿವರಾಜ್ ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್ ಸೇರಿದಂತೆ ಹಲವು ಸ್ಟಾರ್‌ಗಳು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಪಟ್ಟಿಗೆ ಶಾರುಖ್ ಖಾನ್ ಸೇರುತ್ತಾರೆ ಎಂಬ ಮಾತು ಕೇಳಿಬಂದಿತ್ತು.

ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ, ಶಾರುಖ್ ಖಾನ್ ಈ ಆಫರ್‌ನ್ನು ನಿರಾಕರಿಸಿದ್ದಾರೆ. ‘ಜೈಲರ್ 2’ಗಾಗಿ ಐದು ದಿನಗಳ ಶೂಟಿಂಗ್ ಬೇಡಿಕೆ ಇತ್ತು ಎನ್ನಲಾಗಿದ್ದು, ಆರಂಭದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರೂ, ನಂತರ ತಮ್ಮ ಮುಂದಿನ ಸಿನಿಮಾ ಕಿಂಗ್ ಮೇಲೆ ಗಮನಹರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.

‘ಕಿಂಗ್’ ಸಿನಿಮಾಕ್ಕಾಗಿ ಈಗಾಗಲೇ ತಮ್ಮ ಲುಕ್ ಬದಲಿಸಿಕೊಂಡಿರುವ ಶಾರುಖ್, ಮತ್ತೊಂದು ಚಿತ್ರದಿಗಾಗಿ ಲುಕ್ ಬದಲಾಯಿಸಲು ಇಚ್ಛಿಸದಿರುವುದು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಜೊತೆಗೆ, ‘ಕಿಂಗ್’ ಬಿಡುಗಡೆಗಿಂತ ಮೊದಲು ಬೇರೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಾರದು ಎಂಬ ನಿರ್ಧಾರವೂ ಇದಕ್ಕೆ ಕಾರಣವಾಗಿದೆ.

ಈ ಹಿಂದೆ ಶಾರುಖ್ ಖಾನ್ ಅಭಿನಯದ ‘ರಾ 1’ ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅದಕ್ಕೆ ಪ್ರತಿಯಾಗಿ ‘ಜೈಲರ್ 2’ನಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇದ್ದರೂ, ಅದು ಸಾಕಾರವಾಗಿಲ್ಲ.

‘ಜೈಲರ್ 2’ ಸಿನಿಮಾ ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ‘ಕಿಂಗ್’ ಚಿತ್ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಪರಿಚಯ: ಮಹಿಳೆಗೆ ಬ್ಲ್ಯಾಕ್ ಮೇಲ್! ಇಬ್ಬರ ಬಂಧನ

0

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಬೆಳೆಸಿ ಮಹಿಳೆಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆಆರ್ ಪುರಂ ಪೊಲೀಸರು ಬಂಧಿಸಿದ್ದಾರೆ.

ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್‌ಚಾಟ್ ಮೂಲಕ ವಿವಾಹಿತ ಮಹಿಳೆಗೆ ಪರಿಚಯವಾದ ಆರೋಪಿಗಳು, ನಂತರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಕಾಲ್ ಮತ್ತು ಚಾಟಿಂಗ್ ಆರಂಭಿಸಿದ್ದರು. ಬಳಿಕ ವಾಟ್ಸಾಪ್ ವಿಡಿಯೋ ಕಾಲ್ ವೇಳೆ ಮಹಿಳೆಯ ಖಾಸಗಿ ಕ್ಷಣಗಳನ್ನು ಸ್ಕ್ರೀನ್‌ಶಾಟ್ ತೆಗೆದು ಸಂಗ್ರಹಿಸಿಕೊಂಡಿದ್ದರು.

ಈ ಚಿತ್ರಗಳು ಮತ್ತು ವಿಡಿಯೋಗಳನ್ನು ಮಹಿಳೆಯ ಗಂಡ, ಕುಟುಂಬದವರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಬೆದರಿಸಿ, ಆರೋಪಿಗಳು ಹಂತ ಹಂತವಾಗಿ ಹಣ ಮತ್ತು ಚಿನ್ನಾಭರಣ ಪಡೆದುಕೊಂಡಿದ್ದಾರೆ.

ಆರೋಪಿಗಳ ಕಾಟಕ್ಕೆ ಬೇಸತ್ತ ಮಹಿಳೆ ಬಳಿಕ ಈ ವಿಷಯವನ್ನು ತನ್ನ ಗಂಡನ ಗಮನಕ್ಕೆ ತಂದಿದ್ದು, ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆಂಧ್ರಪ್ರದೇಶ ಮೂಲದ ಚೆನ್ನೂರು ಮಹೇಶ್ ಮತ್ತು ವನ್ನೂರು ಸ್ವಾಮಿ ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ 571 ಗ್ರಾಂ ಚಿನ್ನಾಭರಣ ಹಾಗೂ ₹25 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಮೊಬೈಲ್‌ಗಳಲ್ಲಿ ಇನ್ನೂ ಹಲವಾರು ಮಹಿಳೆಯರು ಮತ್ತು ಯುವತಿಯರ ಫೋಟೋ ಹಾಗೂ ವಿಡಿಯೋಗಳು ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಪಂಚಮಸಾಲಿ ಪೀಠಾಧಿಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು: ಬೆಂಗಳೂರು ಮೂಲದ ಮಹಿಳೆಯೊಬ್ಬರು ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದು, ಪ್ರಕರಣ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಸಂಬಂಧ ಮಹಿಳೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ, ಸ್ವಾಮೀಜಿ ತಮ್ಮ ಖಾಸಗಿ ವಿಡಿಯೋ ಮಾಡಿ ಲೈಂಗಿಕವಾಗಿ ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಿಳೆಯ ಹೇಳಿಕೆಯ ಪ್ರಕಾರ, ಅವರು ಸ್ವಾಮೀಜಿಯ ಭಕ್ತೆಯಾಗಿದ್ದು, ಪರಿಚಯದ ನೆಪದಲ್ಲಿ ಮಠಕ್ಕೆ ಕರೆಸಿ ವಿಶ್ವಾಸ ದುರುಪಯೋಗ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾರಂತೆ. ಅಲ್ಲದೆ, ಅವರ ತಿಳುವಳಿಕೆಯಿಲ್ಲದೆ ಖಾಸಗಿ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವಿಡಿಯೋವನ್ನು ಆಧಾರ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಾ, ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ತಾನು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಮಹಿಳೆ ತಿಳಿಸಿದ್ದಾರೆ.

ಇತ್ತೀಚೆಗೆ ಸ್ವಾಮೀಜಿಯದ್ದೆನ್ನಲಾದ ವಿಡಿಯೋ ವೈರಲ್ ಆಗಿರುವ ಹಿನ್ನೆಲೆ, ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ. ದೂರು ಆಧರಿಸಿ ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಗುಂಡೇಟಿಗೆ ಬಲಿಯಾದ ಚಿರತೆ: ಕಳ್ಳಬೇಟೆ ಶಂಕೆ, ತನಿಖೆಗೆ ಸಚಿವರ ಆದೇಶ

ಮೈಸೂರು: ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಪಿರಿಯಾಪಟ್ಟಣ ತಾಲೂಕಿನ ಗುಳೆದಹಳ್ಳದ ಪ್ರದೇಶದಲ್ಲಿ ಸುಮಾರು 2 ವರ್ಷದ ಹೆಣ್ಣು ಚಿರತೆಯ ಶವ ಪತ್ತೆಯಾಗಿದ್ದು, ಇದು ಕಳ್ಳಬೇಟೆಯ ಪ್ರಕರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಸೋಮವಾರ ಪತ್ತೆಯಾದ ಈ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬೇಟೆಗಾರರು ನಾಡಬಂದೂಕಿನಿಂದ ಗುಂಡು ಹಾರಿಸಿ ಚಿರತೆಯನ್ನು ಕೊಂದಿರಬಹುದೆಂದು ಶಂಕಿಸಲಾಗಿದೆ. ಘಟನೆ ಎರಡು ದಿನಗಳ ಹಿಂದೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮರಣೋತ್ತರ ಪರೀಕ್ಷೆ ವೇಳೆ ಚಿರತೆಯ ದೇಹದೊಳಗೆ ಮೂರು ಗುಂಡುಗಳು ಪತ್ತೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಸಾವಿನ ನಿಖರ ಕಾರಣ ತಿಳಿಯಲು ಅಂಗಾಂಗಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಬಂಧಿತ ವಲಯದ ಮುಖ್ಯ ಅರಣ್ಯಾಧಿಕಾರಿಗಳಿಗೆ ಸಚಿವರು ಲಿಖಿತ ಸೂಚನೆ ನೀಡಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ಅರಣ್ಯ ಪ್ರದೇಶಗಳಲ್ಲಿ ಗಸ್ತು ವೈಫಲ್ಯ ಕಂಡುಬಂದರೆ ಸಂಬಂಧಿತ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಈ ಘಟನೆ ವನ್ಯಜೀವಿ ಕಳ್ಳಬೇಟೆ ಇನ್ನೂ ನಡೆಯುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದು, ಅರಣ್ಯ ಅಪರಾಧ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಚರ್ಚೆಗೆ ಕಾರಣವಾಗಿದೆ.

Gold Rate Today: ಮತ್ತೆ ಕುಸಿದ ಚಿನ್ನದ ಬೆಲೆ! ಹೀಗಿದೆ ಇಂದಿನ ಬಂಗಾರ-ಬೆಳ್ಳಿ ದರ ವಿವರ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿದ್ದರೂ, ಮೂಲ್ಯ ಲೋಹಗಳ ಬೆಲೆಯಲ್ಲಿ ಇಂದು ಅಲ್ಪ ಇಳಿಕೆ ಕಂಡುಬಂದಿದೆ. ವಿಶೇಷವಾಗಿ ಚಿನ್ನದ ದರ ಕುಸಿದರೆ, ಬೆಳ್ಳಿ ಬೆಲೆ ತಟಸ್ಥವಾಗಿಯೇ ಉಳಿದಿದೆ.

ಏಪ್ರಿಲ್ 7, 2026ರ ಮಂಗಳವಾರದಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 10 ಗ್ರಾಂಗೆ 820 ರೂ ಇಳಿಕೆಯಾಗಿದ್ದು, ಪ್ರಸ್ತುತ ದರ 1,49,840 ರೂಪಾಯಿಗೆ ತಲುಪಿದೆ. 1 ಗ್ರಾಂ ಚಿನ್ನದ ಬೆಲೆ 82 ರೂ ಇಳಿಕೆಯಾಗಿದ್ದು, 14,984 ರೂ ಆಗಿದೆ.

ಇನ್ನೊಂದೆಡೆ 22 ಕ್ಯಾರೆಟ್ ಚಿನ್ನದ ದರದಲ್ಲೂ ಇಳಿಕೆ ದಾಖಲಾಗಿದೆ. 1 ಗ್ರಾಂಗೆ 75 ರೂ ಇಳಿಕೆಯಾಗಿದ್ದು, 13,735 ರೂ ಆಗಿದೆ. 10 ಗ್ರಾಂಗೆ 750 ರೂ ಇಳಿಕೆಯಾಗಿದ್ದು, 1,37,350 ರೂಪಾಯಿಗೆ ತಲುಪಿದೆ.

ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. 1 ಗ್ರಾಂ ಬೆಲೆ 250 ರೂ ಇದ್ದು, 1 ಕೆಜಿ ಬೆಲೆ 2,50,000 ರೂಪಾಯಿಯಾಗಿ ಮುಂದುವರಿದಿದೆ.

ಇರಾನ್–ಅಮೆರಿಕ ಸಂಘರ್ಷದ ಪರಿಣಾಮವಾಗಿ ಡಾಲರ್ ಮೌಲ್ಯದಲ್ಲಿ ಏರಿಳಿತ ಉಂಟಾಗುತ್ತಿದ್ದು, ಇದರ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅನಿಶ್ಚಿತತೆ ಮುಂದುವರಿದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ವೀರಶೈವರ, ಶ್ರೀಮಂತರ ಪಾಲಾದ ಅಖಿಲ ಭಾರತ ವೀರಶೈವ ಮಹಾಸಭಾ: ಬಿ.ಪಿ.ಹರೀಶ್ ಟೀಕೆ

ದಾವಣಗೆರೆ: ನಿನ್ನೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರು ವೀರಶೈವ ಸಮಾಜದ ಸಭೆ ನಡೆಸಿ ದಾವಣಗೆರೆಯ ಜನತೆಗೆ ಬಹಳಷ್ಟು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಶಾಸಕ ಬಿ.ಪಿ.ಹರೀಶ್ ಅವರು ಆಕ್ಷೇಪಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾವು ದುಡ್ಡಿದ್ದಂತ, ಕೇವಲ ಕಾಂಗ್ರೆಸ್ ವೀರಶೈವರ ಹಾಗೂ ಶ್ರೀಮಂತರ ಪಾಲಾಗಿದೆ ಎಂದು ಟೀಕಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಭ್ರಷ್ಟಾಚಾರ ಮಾಡಲು, ರಾಜಕೀಯ ಪಕ್ಷಗಳನ್ನು ಹೆದರಿಸಿ ಮಂತ್ರಿ ಸ್ಥಾನ ಪಡೆಯಲು ಈ ಮಹಾಸಭಾವನ್ನು ಇವರು ದುರುಪಯೋಗ ಪಡಿಸಿಕೊಂಡಿದ್ದಾರೆ. ಬಡ ವೀರಶೈವರಿಗೆ ಇವರ ಕೊಡುಗೆ ಇಲ್ಲ ಎಂದು ಟೀಕಿಸಿದರು.

ಈಶ್ವರ ಖಂಡ್ರೆ ಅವರು ಬಹಳ ಮುಜುಗರದಿಂದ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಭ್ಯರ್ಥಿ ಸಮರ್ಥ ಅವರ ತಂದೆಯ ಒಡೆತನದ ಸಕ್ಕರೆ ಕಾರ್ಖಾನೆ, ಡಿಸ್ಟಿಲರೀಸ್‍ನಿಂದ ಕೈಗಾರಿಕಾ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೇ ನೇರವಾಗಿ ತುಂಗಭದ್ರಾ ನದಿಗೆ ಬಿಡಲಾಗುತ್ತಿದೆ. ಅರಣ್ಯ ಸಚಿವರಾದ ತಮ್ಮ ಅಡಿಯಲ್ಲೇ ಮಾಲಿನ್ಯ ನಿಯಂತ್ರಣ ಮಂಡಳಿಯೂ ಇದೆ. ಇಂಥ ಅಭ್ಯರ್ಥಿ ಪರವಾಗಿ ತಾವು ಮಾತನಾಡಿದ್ದು ಸರಿಯೇ ಎಂದು ಕೇಳಿದರು.

ರೈತರ ಜಮೀನಿನ ಬೆಳೆಗಳ ಮೇಲೆ ಹಾರು ಬೂದಿ ದೂಳು ಬೀಳುತ್ತಿದೆ. ಬಡ ರೈತರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ ಸದನದಲ್ಲಿ ಎತ್ತಿದಾಗ ಖಂಡ್ರೆಯವರು ಸುಳ್ಳು ಮಾಹಿತಿ ಕೊಟ್ಟಿದ್ದರು. ಖಂಡ್ರೆಯವರೇ, ಮಲ್ಲಿಕಾರ್ಜುನ್ ಅವರ ದುರಾಡಳಿತ, ಕುಡಿಯುವ ನೀರಿನ ಮೇಲಿನ ದುಷ್ಪರಿಣಾಮ ನಿಮಗೆಲ್ಲ ಗೊತ್ತಿದೆ. ಎವಿಕೆ ಕಾಲೇಜು ಸ್ಥಾಪಿಸಿ ಯುವತಿಯರಿಗೆ ಶಿಕ್ಷಣ ಸಿಗುವಂತೆ ಮಾಡಿದ್ದಾಗಿ ಹೇಳಿದ್ದೀರಿ.

ಖಂಡ್ರೆಯವರೇ, ಸುಳ್ಳು ಮಾಹಿತಿ ಕೊಡದಿರಿ. ದಾವಣಗೆರೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಲು ರಾಜನಳ್ಳಿ, ಅಜ್ಜಂಪುರ ಮನೆತನದವರು, ದಾನಿಗಳು ದೊಡ್ಡ ಕೊಡುಗೆ ನೀಡಿದ್ದಾರೆ. ಚಿಗಟೇರಿ ಆಸ್ಪತ್ರೆಯನ್ನು ಆ ಮನೆತನದವರ ಕೊಡುಗೆ ಮೂಲಕ ಸ್ಥಾಪಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಆ ಕೊಡುಗೆ ನೀಡಿದ್ದಾಗಿ ಸುಳ್ಳು ಹೇಳಿದ್ದೀರಲ್ಲವೇ ಎಂದು ಕೇಳಿದರು.

ದ್ವಿತೀಯ PUC ಫಲಿತಾಂಶಕ್ಕೆ ಮುಹೂರ್ತ ನಿಗದಿ: ರಿಸಲ್ಟ್​ ಯಾವಾಗ ಗೊತ್ತಾ?

ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಫಲಿತಾಂಶ ಪ್ರಕಟಣೆ ಮುಂದೂಡಲ್ಪಟ್ಟಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳು ನಿರಾಸೆಗೊಂಡಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದರೂ, ಕೆಲವು ತಾಂತ್ರಿಕ ಅಡಚಣೆಗಳಿಂದ ಪ್ರಕಟಣೆ ವಿಳಂಬವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೀಗ ಲಭ್ಯವಾಗಿರುವ ಹೊಸ ಮಾಹಿತಿಯ ಪ್ರಕಾರ, ದ್ವಿತೀಯ ಪಿಯುಸಿ ಫಲಿತಾಂಶವನ್ನು ಏಪ್ರಿಲ್ 9ರಂದು ಪ್ರಕಟಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ಪರೀಕ್ಷೆಗಳು ನಡೆದಿದ್ದು, ಸುಮಾರು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮೊದಲಿಗೆ ಏಪ್ರಿಲ್ 7ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಲಾಗಿದ್ದರೂ, ಅಧಿಕೃತ ಘೋಷಣೆ ಆಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿತ್ತು.

ಇನ್ನೂ ಫಲಿತಾಂಶ ಆನ್‌ಲೈನ್‌ನಲ್ಲಿ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಫಲಿತಾಂಶ ಪರಿಶೀಲಿಸಬಹುದು.

ಇದಲ್ಲದೆ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ರಾಜ್ಯದ ಕೆಲವು ಭಾಗಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಇದರ ಪರಿಣಾಮವಾಗಿ ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲು ಚುನಾವಣಾ ಆಯೋಗದ ಅನುಮತಿ ಅಗತ್ಯವಿದ್ದು, ಇದೇ ಕಾರಣದಿಂದ ಪ್ರಕಟಣೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

error: Content is protected !!