Home Blog

ಪಾರ್ಟಿ ವೇಳೆ ದುರಂತ: ಹೊಂಡದಲ್ಲಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು!

0

ನೊಯ್ಡಾ: ಉತ್ತರ ಪ್ರದೇಶದ ನೊಯ್ಡಾದಲ್ಲಿ ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ ಹರ್ಷಿತ್ ಭಟ್ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಅಮಿಟಿ ವಿಶ್ವವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಪರೀಕ್ಷೆಗಳ ನಂತರ ಪಾರ್ಟಿಗಾಗಿ ಸೂಪರ್‌ನೋವಾ ಸಮೀಪದ ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಹರ್ಷಿತ್ ನೀರು ತುಂಬಿದ ಹೊಂಡದ ಬಳಿ ಸ್ನಾನಕ್ಕೆ ಇಳಿದಾಗ ಅಕಸ್ಮಾತ್ ಆಳವಾದ ನೀರಿಗೆ ಜಾರಿ ಮುಳುಗಲು ಆರಂಭಿಸಿದ್ದಾನೆ.

ಆತನನ್ನು ರಕ್ಷಿಸಲು ಮೂವರು ಸ್ನೇಹಿತರು ಕೂಡ ನೀರಿಗೆ ಇಳಿದರೂ, ಅವರು ಸಹ ಸಂಕಷ್ಟಕ್ಕೆ ಸಿಲುಕಿದ್ದರು. ಇವರ ಕಿರುಚಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಹರ್ಷಿತ್ ಭಟ್ ಅವರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಇನ್ನು ಉಳಿದ ಮೂವರು ಸ್ನೇಹಿತರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಿಖರ ಕಾರಣ ತಿಳಿಯಲು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಬಿಪಿ ರೋಗಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ! ಈ ಆಹಾರಗಳಲ್ಲಿ ಹಿಡನ್ ಸೋಡಿಯಂ ಇರಬಹುದು ಎಚ್ಚರ!

0

ಸಾಮಾನ್ಯವಾಗಿ ಉಪ್ಪಿನ ಪ್ರಮಾಣ ಹೆಚ್ಚು ಇರುವ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವೆಂದು ತಿಳಿದಿದ್ದರೂ, ಆರೋಗ್ಯಕರವೆಂದು ಕಾಣುವ ಕೆಲವು ಆಹಾರಗಳಲ್ಲೂ ‘ಹಿಡನ್ ಸೋಡಿಯಂ’ ಇರುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ವಿಶೇಷವಾಗಿ ಹೈ ಬ್ಲಡ್ ಪ್ರೆಷರ್ ಸಮಸ್ಯೆ ಇರುವವರು ಉಪ್ಪಿನ ಸೇವನೆಯಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಎಲ್ಲಾ ಉಪ್ಪಿನ ರುಚಿ ಇರುವ ಆಹಾರಗಳಲ್ಲಿ ಮಾತ್ರ ಸೋಡಿಯಂ ಇರುತ್ತದೆ ಎಂಬುದು ತಪ್ಪು ಕಲ್ಪನೆ. ದಿನನಿತ್ಯ ಸೇವಿಸುವ ಕೆಲವು ಆಹಾರಗಳಲ್ಲಿ ಉಪ್ಪಿನ ರುಚಿ ಸ್ಪಷ್ಟವಾಗಿ ಗೊತ್ತಾಗದಿದ್ದರೂ, ಅವುಗಳಲ್ಲಿ ಸಾಕಷ್ಟು ಪ್ರಮಾಣದ ಸೋಡಿಯಂ ಅಡಗಿರುತ್ತದೆ. ವೈದ್ಯಕೀಯವಾಗಿ ಇದನ್ನು ‘ಹಿಡನ್ ಸೋಡಿಯಂ’ ಎಂದು ಕರೆಯಲಾಗುತ್ತದೆ. ಇದು ನಿಧಾನವಾಗಿ ದೇಹದಲ್ಲಿ ಜಮೆಯಾಗುತ್ತಾ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

ಉದಾಹರಣೆಗೆ, ಬ್ರೆಡ್ ಅನ್ನು ಹಲವರು ಲಘು ಮತ್ತು ಆರೋಗ್ಯಕರ ಆಹಾರವೆಂದು ಪರಿಗಣಿಸುತ್ತಾರೆ. ಆದರೆ ಒಂದು ಬ್ರೆಡ್ ಸ್ಲೈಸ್‌ನಲ್ಲೇ 150 ರಿಂದ 230 ಮಿಲಿಗ್ರಾಂ ಸೋಡಿಯಂ ಇರಬಹುದು. ಇದೇ ರೀತಿ ಸಂಸ್ಕರಿಸಿದ ಆಹಾರಗಳಲ್ಲಿ ಸಹ ಹೆಚ್ಚುವರಿ ಉಪ್ಪು ಇರುವ ಸಾಧ್ಯತೆ ಇದೆ. ಇವುಗಳನ್ನು ನಿಯಂತ್ರಣವಿಲ್ಲದೆ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ ಗರಿಷ್ಠ 5 ಗ್ರಾಂ ಉಪ್ಪು ಮಾತ್ರ ಸೇವಿಸಬೇಕು. ಆದರೆ ಬಹುತೇಕ ಜನರು ಅರಿವಿಲ್ಲದೆ ಇದಕ್ಕಿಂತ ಹೆಚ್ಚು ಉಪ್ಪು ಸೇವಿಸುತ್ತಿದ್ದಾರೆ. ಬ್ರೆಡ್, ಸೀರಿಯಲ್‌ಗಳಂತಹ ಆಹಾರಗಳಿಂದಲೇ ದೇಹಕ್ಕೆ ಹೆಚ್ಚುವರಿ ಸೋಡಿಯಂ ಸೇರುತ್ತಿದೆ.

ಆದ್ದರಿಂದ, ಆಹಾರ ಸೇವಿಸುವಾಗ ಅದರ ಲೇಬಲ್ ಪರಿಶೀಲಿಸಿ, ಸೋಡಿಯಂ ಪ್ರಮಾಣ ಗಮನಿಸುವುದು ಅತ್ಯಗತ್ಯ. ಈ ಮೂಲಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಬಹುದು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಡಿಜೆ ಹಳ್ಳಿಯಲ್ಲಿ ಹಸುಗಳ ಶೆಡ್​​ಗೆ ಬೆಂಕಿ ಪ್ರಕರಣ: ಉದ್ದೇಶಪೂರ್ವಕವಾಗಿಯೇ ನಡೆದಿರೋ ಕೃತ್ಯ!

ಬೆಂಗಳೂರು: ನಗರದ ಡಿಜೆ ಹಳ್ಳಿ ಸಮೀಪದ ಶಾಂಪುರ ರಸ್ತೆಯಲ್ಲಿ ನಿನ್ನೆ ಸಂಭವಿಸಿದ್ದ ಅಗ್ನಿ ದುರಂತಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ.

ಬೆಂಕಿ ಅವಘಡದಲ್ಲಿ ಶೆಡ್‌ನಲ್ಲಿ ಇದ್ದ 20 ಹಸುಗಳ ಪೈಕಿ ಆರು ಮೂಕಪ್ರಾಣಿಗಳು ದಾರುಣವಾಗಿ ಸಾವನ್ನಪ್ಪಿದ್ದವು.

ಆರಂಭದಲ್ಲಿ ಇದು ಆಕಸ್ಮಿಕ ಅಗ್ನಿ ಅವಘಡ ಎಂದು ಶಂಕಿಸಲಾಗಿತ್ತು. ಆದರೆ ಇದೀಗ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗವಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಶೆಡ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಡಿಜೆ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬೆಂಕಿ ಹಚ್ಚಿದ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಲ್ಫ್ ಯುದ್ಧ ಎಫೆಕ್ಟ್: ಈರುಳ್ಳಿ ಬೀಜದ ದರ ದಿಢೀರ್ ಕುಸಿತ; ರೈತ ಕಂಗಾಲು!

ಬೀದರ್: ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಕೃಷಿ ಕ್ಷೇತ್ರಕ್ಕೂ ತಟ್ಟಿದ್ದು, ಬೀದರ್ ಜಿಲ್ಲೆಯ ಈರುಳ್ಳಿ ಬೀಜ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯುದ್ಧದ ಹಿನ್ನೆಲೆ ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿ, ಈರುಳ್ಳಿ ಬೀಜದ ಬೆಲೆ ಗಣನೀಯವಾಗಿ ಕುಸಿತಗೊಂಡಿದೆ. ಕಳೆದ ವರ್ಷ ಒಂದು ಕ್ವಿಂಟಾಲ್ ಈರುಳ್ಳಿ ಬೀಜಕ್ಕೆ ಸುಮಾರು 1.20 ಲಕ್ಷ ರೂಪಾಯಿ ಸಿಗುತ್ತಿದ್ದರೆ, ಈ ವರ್ಷ ದರ ಅರ್ಧದಷ್ಟು ಇಳಿದು ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಬೀದರ್ ಜಿಲ್ಲೆಯಲ್ಲಿ ಗುಣಮಟ್ಟದ ಈರುಳ್ಳಿ ಬೀಜ ಉತ್ಪಾದನೆಯಾಗುವುದರಿಂದ ಹೈದರಾಬಾದ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಅಲ್ಲಿಂದ ದಲ್ಲಾಳಿಗಳು ವಿದೇಶಗಳಿಗೆ ರಫ್ತು ಮಾಡುತ್ತಿದ್ದರು.

ಆದರೆ ಮಧ್ಯ ಪ್ರಾಚ್ಯದ ಯುದ್ಧದಿಂದ ರಫ್ತು ಕಡಿಮೆಯಾಗಿದ್ದು, ದಲ್ಲಾಳಿಗಳು ಕಡಿಮೆ ದರಕ್ಕೆ ಖರೀದಿ ಮಾಡುತ್ತಿರುವುದು ರೈತರ ಸಂಕಷ್ಟವನ್ನು ಹೆಚ್ಚಿಸಿದೆ. ಜಿಲ್ಲೆಯಲ್ಲೇ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆ ಬೆಳೆದಿದ್ದು, ಕಡಿಮೆ ನೀರಿನಲ್ಲಿ ಬೆಳೆದು ಉತ್ತಮ ಆದಾಯ ನೀಡುವ ಕಾರಣದಿಂದ ರೈತರು ಹೆಚ್ಚಿನ ಆಸಕ್ತಿ ತೋರಿದ್ದರು. ಒಂದು ಎಕರೆ ಬೆಳೆ ಬೆಳೆಯಲು 70 ರಿಂದ 80 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಪ್ರಸ್ತುತ ದರ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದು, “ಬೆಲೆ ಇಳಿಕೆಯಿಂದ ನಾವು ಹೈರಾಣಾಗಿದ್ದೇವೆ” ಎಂದು ರೈತ ಬಸವರಾಜ್ ಅಳಲು ತೋಡಿಕೊಂಡಿದ್ದಾರೆ.

ಯುದ್ಧದ ಪರಿಣಾಮ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮೇಲೂ ಬಿದ್ದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

 

ಕುಡಿಯುವ ನೀರಿಗಾಗಿ ಗ್ರಾ. ಪಂ. ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ್ದ 80 ಜನರ ವಿರುದ್ಧ ಎಫ್ಐಆರ್

ರಾಯಚೂರು: ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಹಾಕಿ, ಪ್ರತಿಭಟನೆ ಮಾಡಿದ್ದ 80 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಹಾಕಿ ಸುಮಾರು 80ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ಮಾಡಿದ್ದರು. PDO ದೂರು ದಾಖಲಿಸಿ ಇದೀಗ ಆ 80 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸಚಿವ ಶರಣಪ್ರಕಾಶ್ ಪಾಟೀಲ್ ಆದೇಶಿಸಿದ್ದಾರೆ.

ಕುಡಿಯುವ ನೀರಿಗೆ ಆಗ್ರಹಿಸಿ ಏ.3ರಂದು ಸರ್ಜಾಪುರ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಹಾಕಿ, ಪ್ರತಿಭಟನೆ ಮಾಡಿದ್ದರು. ಇದರಿಂದ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಆರೋಪಿಸಿ 80 ಜನ ಗ್ರಾಮಸ್ಥರ ವಿರುದ್ಧ ಪಿಡಿಓ ಶೋಭಾರಾಣಿ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನ ಅನ್ವಯ ಇದೀಗ FIR ದಾಖಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆಕ್ರೋಶ ಹೊರ ಹಾಕಿರುವ ಗ್ರಾಮಸ್ಥರು, ಕೂಡಲೇ ಕೇಸ್ ವಾಪಸ್ ಪಡೆಯಬೇಕು ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಲಿಂಗಸುಗೂರು ಎಸಿ ಕಚೇರಿ ಮುಂದೆ ಹೋರಾಟ ಮಾಡಿದ್ದರು. ಹೀಗಾಗಿ ಘಟನೆಗೆ ಸಂಬಂಧಿಸಿದಂತೆ ಸಚಿವ ಶರಣಪ್ರಕಾಶ್ ಪಾಟೀಲ್ ಕ್ರಮಕ್ಕೆ ಮುಂದಾಗಿದ್ದಾರೆ.

ಪುಣೆ ಮೂಲದ ಉದ್ಯಮಿಗೆ ಬೆದರಿಸಿ ಹಣ ಸುಲಿಗೆ: ಚಿತ್ರದುರ್ಗ ನಗರಸಭೆ ಮಾಜಿ ಸದಸ್ಯ ಅರೆಸ್ಟ್!

ಚಿತ್ರದುರ್ಗ: ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿಯಿಂದ ಹಣ ಸುಲಿಗೆ ಮಾಡಿದ ಪ್ರಕರಣ ಸಂಬಂಧ ಚಿತ್ರದುರ್ಗ ಪೊಲೀಸರು ನಗರಸಭೆಯ ಮಾಜಿ ಸದಸ್ಯ ಚಂದ್ರಶೇಖರ್ ಅಲಿಯಾಸ್ ಖೋಟಾ ನೋಟು ಚಂದ್ರನನ್ನು ಬಂಧಿಸಿದ್ದಾರೆ.

ಆರೋಪಿಗೆ ಸಾಥ್ ನೀಡಿದ್ದ ಮಂಗಳೂರು ಮೂಲದ ಕುಖ್ಯಾತ ವಂಚಕ ರೋಷನ್ ಸಾಲ್ಡಾನ ಎಂಬಾತನನ್ನೂ ವಶಕ್ಕೆ ಪಡೆಯಲಾಗಿದೆ. ಚಂದ್ರನಿಗೆ ಸಂಬಂಧಿತ ಬ್ಯಾಂಕ್ ಅಕೌಂಟ್‌ನಲ್ಲಿ ಇದ್ದ 50 ಲಕ್ಷ ರೂಪಾಯಿ ಹಣವನ್ನು ಫ್ರೀಜ್ ಮಾಡಲಾಗಿದೆ. ಪೊಲೀಸರು ರಾಜ್ಯ ಮತ್ತು ಹೊರರಾಜ್ಯದ ಉದ್ಯಮಿಗಳಿಗೆ ವಂಚನೆ ಮಾಡುವ ಜಾಲವನ್ನು ಪತ್ತೆಹಚ್ಚಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಚಿತ್ರದುರ್ಗ ನಗರಸಭೆಗೆ ಎರಡು ಬಾರಿ ಜೆಡಿಎಸ್‌ನಿಂದ ಸದಸ್ಯನಾಗಿ ಆಯ್ಕೆ ಆಗಿದ್ದ ಚಂದ್ರ, ಖೋಟಾ ನೋಟು, ಹಣ ಡಬ್ಲಿಂಗ್ ದಂಧೆಯ ಕಿಂಗ್ ಪಿನ್ ಆಗಿದ್ದು, ಅನೇಕ ಪ್ರಕರಣಗಳ ಆರೋಪಿ ಕೂಡ ಹೌದು. ಇದೇ ವಿಚಾರವಾಗಿ ಅನೇಕ ಸಲ ಜೈಲಿಗೆ ಹೋಗಿ ಬಂದರೂ ಈತ ತನ್ನ ಕರಾಳ ದಂಧೆ ಮಾತ್ರ ಬಿಟ್ಟಿರಲಿಲ್ಲ. ಇದೀಗ ಹೊಸ ರೀತಿಯ ವಂಚನೆಗೆ ಮುಂದಾಗಿದ್ದ ಆರೋಪಿ, ಕಡಿಮೆ ಬಡ್ಡಿದರದಲ್ಲಿ ಕೋಟಿಗಟ್ಟಲೆ ಹಣ ಸಾಲ ನೀಡುವುದಾಗಿ ನಂಬಿಸಿ ಉದ್ಯಮಿಗಳನ್ನು ಬುಟ್ಟಿಗೆ ಬೀಳಿಸುತ್ತಿದ್ದ. ವರ್ಷಕ್ಕೆ ಶೇ. 3ರ ಬಡ್ಡಿದರದಲ್ಲಿ ಐವತ್ತು ಕೋಟಿ–ನೂರು ಕೋಟಿ ರೂ. ಫೈನಾನ್ಸ್ ನೀಡುವುದಾಗಿ ನಂಬಿಸಲು ಏಜೆಂಟ್‌ಗಳನ್ನು ನೇಮಿಸಿಕೊಂಡಿದ್ದಾನೆ.

ಇದೇ ರೀತಿ ಪುಣೆ ಮೂಲದ ಉದ್ಯಮಿ ಗುರುರಾಜ್ ಚರಂತಿಮಠ ಎಂಬುವರಿಗೆ ಕರೆ ಮಾಡಿದ್ದ ಈತನ ಸಹಚರ ರೋಷನ್ ಸಾಲ್ಡಾನ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿದ್ದ. 52 ಕೋಟಿ ರೂ.ಫೈನಾನ್ಸ್ ಮಾಡಲು ಕಾಗದಪತ್ರ ಮತ್ತು ಭದ್ರತೆಗಾಗಿ 75 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ. ಅದರಂತೆ 50 ಲಕ್ಷ ರೂಪಾಯಿಯನ್ನು RTGS ಮೂಲಕ ಗುರುರಾಜ್​​ ನೀಡಿದ್ದರು. ಬಳಿಕ 25 ಲಕ್ಷ ರೂಪಾಯಿ ನಗದು ನೀಡಲೆಂದು ಆಗಮಿಸಿದವರನ್ನು ಚಿತ್ರದುರ್ಗದ ಕೋಟೆ ರಸ್ತೆಯಲ್ಲಿರುವ ಚಂದ್ರಶೇಖರ್ ಮನೆಗೆ ಕರೆಸಿಕೊಳ್ಳಲಾಗಿತ್ತು. ಅಲ್ಲಿ ಚಾಕು ತೋರಿಸಿ ಬೆದರಿಸಿದ್ದ ಆರೋಪಿಗಳು ಹಣ ಕಿತ್ತುಕೊಂಡು ಕಳುಹಿಸಿದ್ದರು. 2023ರ ಮೇ ತಿಂಗಳ 26ರಂದು ಈ ಘಟನೆ ನಡೆದಿತ್ತಾದ್ದರೂ ನಿನ್ನೆ ಅಂದರೆ 2026ರ ಏಪ್ರಿಲ್​​ 07ರಂದು ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಪೋಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಕೈಗೊಂಡಿದ್ದಾರೆ.

 

ಬೇಸಿಗೆಯಲ್ಲಿ ಬಿಸಿನೀರು ಅಥವಾ ತಣ್ಣೀರು.. ಕುಡಿಯಲು ಯಾವುದು ಬೆಸ್ಟ್?

0

ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚಾಗುವುದು ಸಹಜ. ಉಷ್ಣತೆ ಹೆಚ್ಚುತ್ತಿರುವ ಈ ಸಮಯದಲ್ಲಿ ಹೈಡ್ರೇಷನ್ ಬಹಳ ಮುಖ್ಯವಾಗಿದೆ.

ಆದರೆ ಹೆಚ್ಚಿನವರು ಬಿಸಿನೀರಿನ ಬದಲು ತಣ್ಣೀರನ್ನು ಕುಡಿಯುವುದನ್ನು ಇಷ್ಟಪಡುವರು. ಫ್ರಿಡ್ಜ್‌ನಲ್ಲಿಟ್ಟ ಐಸ್ ನೀರು ಅಥವಾ ತಂಪಾದ ನೀರು ತಕ್ಷಣ ತಂಪು ನೀಡುತ್ತದೆ, ಆದರೂ ಆರೋಗ್ಯ ತಜ್ಞರು ಹೇಳುವುದು ವಿಭಿನ್ನ.

ತಣ್ಣೀರು ಕುಡಿಯುವುದರಿಂದ ಸಂಭವಿಸಬಹುದಾದ ಪರಿಣಾಮಗಳು:

  • ತಣ್ಣೀರನ್ನು ಹೆಚ್ಚು ಪ್ರಮಾಣದಲ್ಲಿ ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನವಾಗಬಹುದು.
  • ಊಟದ ನಂತರ ತಣ್ಣೀರನ್ನು ಕುಡಿಯುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಅಜೀರ್ಣ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಬಿಸಿನೀರು ಅಥವಾ ಉಗುರು ಬೆಚ್ಚಗಿನ ನೀರಿನ ಲಾಭಗಳು:

  • ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  • ರಕ್ತಸಂಚಾರವನ್ನು ಉತ್ತೇಜಿಸುತ್ತದೆ ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
  • ಬೆಳಿಗ್ಗೆ ಬೆಚ್ಚಗಿನ ನೀರು ಕುಡಿಯುವುದರಿಂದ ಮೆಟಾಬಾಲಿಸಂ ಹೆಚ್ಚುತ್ತದೆ.

ಸಾಮಾನ್ಯ ತಾಪಮಾನದಲ್ಲಿ ನೀರು ಕುಡಿಯುವುದು:

  • ತಣ್ಣೀರು ಅಥವಾ ತುಂಬಾ ಬಿಸಿನೀರಿಗಿಂತ ಉಗುರು ಬೆಚ್ಚಗಿನ ನೀರು ಆರೋಗ್ಯಕ್ಕೆ ಉತ್ತಮ.
  • ದೇಹವನ್ನು ಸಮತೋಲನದಲ್ಲಿ ಇಡುತ್ತದೆ ಮತ್ತು ಜೀರ್ಣಕ್ರಿಯೆಗೆ ಹಾನಿ ಮಾಡುವುದಿಲ್ಲ.
  • ಹೊರಗೆ ಹೋಗಿ ಬಂದ ತಕ್ಷಣ ತಣ್ಣೀರು ಕುಡಿಯುವುದನ್ನು ತಪ್ಪಿಸುವುದು ಉತ್ತಮ.

ದಿನನಿತ್ಯ ಕುಡಿಯುವ ನೀರಿನ ಪ್ರಮಾಣ:

  • ದೇಹದಲ್ಲಿ ನೀರಿನ ಕೊರತೆ ಇಲ್ಲದಂತೆ ದಿನಕ್ಕೆ ಕನಿಷ್ಠ 2.5–3 ಲೀಟರ್ ನೀರು ಕುಡಿಯಬೇಕು.
  • ಹೆಚ್ಚಿನ ಬೆವರು ಅಥವಾ ತೀವ್ರ ಶ್ರಮದ ಸಂದರ್ಭಗಳಲ್ಲಿ ಇನ್ನಷ್ಟು ನೀರು ಕುಡಿಯಬಹುದು.
  • ಹಣ್ಣಿನ ರಸ, ಜ್ಯೂಸ್, ಎಳನೀರು ಮುಂತಾದವುಗಳೂ ಸಹ ಸೇವಿಸಬಹುದು.

 

ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ನೀಡಿದ ವಿವಾದಾತ್ಮಕ ಹೇಳಿಕೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇರಳದಲ್ಲಿ ನಡೆದ ತಮ್ಮ ಭಾಷಣದ ಕೆಲವು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ.

ಆ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಪ್ರಾಮಾಣಿಕ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಗುಜರಾತ್ ಜನರ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಾಗಿರಲಿಲ್ಲ. ಅವರಿಗೆ ನನಗೆ ಸದಾ ಗೌರವವಿದೆ ಮತ್ತು ಮುಂದೆಯೂ ಹಾಗೆಯೇ ಇರುತ್ತದೆ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಖರ್ಗೆ ಹೇಳಿದ್ದೇನು?
ಏಪ್ರಿಲ್ 5, 2026ರಂದು ಕೇರಳದ ಇಡುಕ್ಕಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಖರ್ಗೆ, ಕೇರಳದ ಜನರು ಹೆಚ್ಚು ವಿದ್ಯಾವಂತರಾಗಿದ್ದು, ಅವರನ್ನು ಸುಲಭವಾಗಿ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುಜರಾತ್ ಅಥವಾ ಇತರ ಪ್ರದೇಶಗಳ ಅನಕ್ಷರಸ್ಥರನ್ನು ಮರುಳು ಮಾಡಬಹುದು, ಆದರೆ ಕೇರಳದ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿಕೆ ನೀಡಿದ್ದರು.

ಹಾಸ್ಟೆಲ್ ಹಿಂಭಾಗದಲ್ಲಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳು ಅರೆಸ್ಟ್

0

ಬೆಂಗಳೂರು: ಯಲಹಂಕ ಉಪನಗರದ ಬಾಯ್ಸ್ ಹಾಸ್ಟೆಲ್ ಹಿಂಭಾಗದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮುಹಮ್ಮದ್ ನಿಶಾದ್ ಮತ್ತು ಆದೇಶ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳನ್ನು ಮುಹಮ್ಮದ್ ನಿಶಾದ್ ಮತ್ತು ಆದೇಶ್ ಎಂದು ಗುರುತಿಸಲಾಗಿದೆ. ಹಾಸ್ಟೆಲ್ ಹಿಂಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ, ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ತಂದ ಗಾಂಜಾವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರೆಂದು ತನಿಖೆ ವೇಳೆ ಪತ್ತೆ ಹಿಡಿಯಲಾಗಿದೆ.

ಆರೋಪಿಗಳ ವಿರುದ್ಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಇಬ್ಬರೂ ಹೆಚ್ಚಿನ ವಿಚಾರಣೆಗೆ ಒಳಪಡಿಸಲ್ಪಟ್ಟಿದ್ದಾರೆ.

ಆಟೋ ಗ್ಯಾಸ್ ಕೊರತೆಯ ವದಂತಿಗಳಿಗೆ ಜನ ಕಿವಿಗೊಡಬಾರದು: ಆಹಾರ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯ ಬಗ್ಗೆ ಹರಡುವ ವದಂತಿಗಳಿಗೆ ಜನ ಕಿವಿಗೊಡಬಾರದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸ್ಪಷ್ಟನೆ ನೀಡಿದೆ.

ಕಳೆದ ಕೆಲವು ದಿನಗಳಿಂದ ಅನಿಲದ ಕೊರತೆಯ ಸುದ್ದಿ ವೈರಲ್ ಆಗುತ್ತಿದ್ದು, ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ದೀರ್ಘ ಸರತಿಗಳಲ್ಲಿ ನಿಂತಿದ್ದಾರೆ. ಈ ಕುರಿತಾಗಿ ಮಾಧ್ಯಮಗಳಲ್ಲಿ ಹರಡುತ್ತಿರುವ ವರದಿಗಳು ಸುಳ್ಳು ಮತ್ತು ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಇಲಾಖೆಯು ಸೂಚಿಸಿದೆ.

ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ತಾತ್ಕಾಲಿಕ ಕೊರತೆ ಕಂಡುಬಂದಿದ್ದು, ಸರಕಾರದ ಸ್ವಾಮ್ಯದ ತೈಲ ಕಂಪನಿಗಳಾದ IOC, BPC ಮತ್ತು HPC ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಸಲಾಗುತ್ತಿದೆ. ಏಪ್ರಿಲ್ 2ರಿಂದ 6ರವರೆಗೆ ಸರಾಸರಿ 83.58 ಮೆಟ್ರಿಕ್ ಟನ್ ಅನಿಲವನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ತಿಳಿಸಿದೆ.

ಸರ್ಕಾರ ಈ ಮೂಲಕ ಆಟೋ ಮಾಲೀಕರಿಗೆ ಮತ್ತು ಚಾಲಕರಿಗೆ ಮನವಿ ಮಾಡುತ್ತಿದೆ: ಸುಳ್ಳು ವದಂತಿಗಳನ್ನು ನಂಬದೆ, ಸಾರ್ವಜನಿಕ ವ್ಯವಸ್ಥೆಯನ್ನು ಅವಮಾನಿಸಬೇಡಿ; ಅನಿಲ ಪೂರೈಕೆ ಸಂಪೂರ್ಣವಾಗಿ ಸ್ಥಿರವಾಗಿ ನಡೆಯುತ್ತಿದೆ.

error: Content is protected !!