Home Blog

ಲಕ್ಷ್ಮೇಶ್ವರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ, ಆರೋಪಿ ಬಂಧನ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಗ್ಲಿ ಗ್ರಾಮದಲ್ಲಿ ಫೆ. 2 ರಂದು ಹಾಗೂ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಟ್ಟಿಯಲ್ಲಿ ನಡೆದ ಹಗಲು ಮನೆ ಕಳ್ಳತನ ಪ್ರಕರಣಗಳಲ್ಲಿ ಭಯ ಮೂಡಿಸಿದ್ದ ಕಳ್ಳನನ್ನು ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಾವೇರಿ ಜಿಲ್ಲೆಯ ರಾಮಾಪುರ ಗ್ರಾಮದ ನಿವಾಸಿ ಚಮನಸಾಬ್ ಚ. ಪಾಟೀಲ ಎಂದು ಗುರುತಿಸಲಾಗಿದೆ. ಆರೋಪಿಯಿಂದ 21 ಗ್ರಾಂ ಬಂಗಾರ ಆಭರಣಗಳು, 100 ಗ್ರಾಂ ಬೆಳ್ಳಿ ಆಭರಣಗಳು ಮತ್ತು ₹14,000 ನಗದು ವಶಪಡಿಸಲಾಯಿತು.

ಗದಗ ಜಿಲ್ಲೆ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಮತ್ತು ಗದಗ ಉತ್ತರ ವಿಭಾಗದ ಡಿಎಸ್‌ಪಿ ಮುರ್ತಜಾ ಖಾದ್ರಿ ಮಾರ್ಗದರ್ಶನದಲ್ಲಿ, ಸಿಪಿಐ ಬಿ.ವಿ. ನ್ಯಾಮಗೌಡ ನೇತೃತ್ವದಲ್ಲಿ, ಪಿಎಸ್‌ಐ ನಾಗರಾಜ್ ಗಡ್ಡ ಮತ್ತು ಪಿಎಸ್‌ಐ ಟಿ.ಕೆ. ರಾಠೋಡ್ ಅವರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಲಕ್ಷ್ಮೇಶ್ವರ ಪೊಲೀಸ್ ಸಿಬ್ಬಂದಿ, ಆರ್.ಎಸ್. ಯರಗಟ್ಟಿ, ಎಮ್.ಎ. ಶೇಖ್, ಎಮ್.ಎಸ್. ಬಳ್ಳಾರಿ, ಆನಂದ್ ಕಮ್ಮಾರ್, ಸಿ.ಎಸ್. ಮಠಪತಿ, ಡಿ.ಎಸ್. ನದಾಫ್, ಎಚ್.ಐ. ಕಲ್ಲಣ್ಣವರ, ಪಾಂಡುರಂಗ್ ರಾವ್, ಮದುಚಂದ್ರ ಧಾರವಾಡ, ಮಾರ್ತಾಂಡ ಉಪ್ಪಾರ, ಮಾಂತೇಶ ಐಗಾರ, ಗುರು ಬೂದಿಹಾಳ ಮತ್ತು ಟೆಕ್ನಿಕಲ್ ಸೆಲ್ ಗದಗದ ಸಂಜು ಕೊರಡೂರು ಸೇರಿದಂತೆ ತಂಡದೊಂದಿಗೆ ಕಾರ್ಯನಿರ್ವಹಿಸಿದರು.

ಈ ಕಾರ್ಯಕ್ಕೆ ಎಸ್‌ಪಿ ರೋಹನ್ ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಸುರಕ್ಷತೆಗೆ ಪೊಲೀಸ್ ದಳದ ಸಮರ್ಪಣೆ ಮತ್ತು ಧೈರ್ಯವನ್ನು ಪ್ರಶಂಸಿಸಿದ್ದಾರೆ.

ತಂದೆಯ ಧೂಮಪಾನ ಮಕ್ಕಳಿಗೂ ಅಪಾಯ: ಆತಂಕಕಾರಿ ಮಾಹಿತಿ ಬಹಿರಂಗ!

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇತ್ತೀಚಿನ ಅಧ್ಯಯನವು ತಂದೆಯ ಧೂಮಪಾನದ ಅಭ್ಯಾಸವು ಮಕ್ಕಳ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವೈದ್ಯರು ನಡೆಸಿದ ಈ ಅಧ್ಯಯನವು “ಜರ್ನಲ್ ಆಫ್ ದ ಎಂಡೋಕ್ರೈನ್ ಸೋಸೈಟಿ”ಯಲ್ಲಿ ಪ್ರಕಟಗೊಂಡಿದ್ದು, ತಂದೆ ಧೂಮಪಾನ ಮಾಡುವವರಾಗಿದ್ದರೆ ಅವರ ಮಕ್ಕಳಲ್ಲಿ ಟೈಪ್-2 ಮಧುಮೇಹ, ಲಿವರ್ ಸಮಸ್ಯೆಗಳು ಸೇರಿದಂತೆ ಹಲವು ಮೆಟಾಬಾಲಿಕ್ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು ಎಂದು ತಿಳಿಸಿದೆ.

ಅಧ್ಯಯನದ ಪ್ರಕಾರ, ಧೂಮಪಾನ ಮಾಡುವ ಪುರುಷರ ಸ್ಪರ್ಮ್‌ನಲ್ಲಿ ಉಂಟಾಗುವ ಬದಲಾವಣೆಗಳು ಮಗುವಿನ ದೇಹದ ಶುಗರ್ ಮೆಟಾಬಾಲಿಸಮ್ ಹಾಗೂ ಇನ್ಸುಲಿನ್ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಸುಮಾರು 1000 ಧೂಮಪಾನಿಗಳ ಮೇಲೆ ನಡೆದ ಈ ಅಧ್ಯಯನದಲ್ಲಿ, ಅವರ ಮಕ್ಕಳಲ್ಲಿ ಸುಮಾರು 30% ಮಂದಿಗೆ ಮಧುಮೇಹದ ಲಕ್ಷಣಗಳು ಹಾಗೂ ಲಿವರ್ ಸಮಸ್ಯೆಗಳು ಕಂಡುಬಂದಿವೆ.

ಇದಲ್ಲದೆ, ಧೂಮಪಾನದ ವೇಳೆ ದೇಹಕ್ಕೆ ಸೇರುವ ನಿಕೋಟಿನ್ ಮೆಟಾಬಾಲಿಸಮ್ ಸಂಬಂಧಿತ ಪ್ರಮುಖ ಪ್ರಕ್ರಿಯೆಗಳನ್ನು ಹಾನಿಗೊಳಿಸಿ, ಇನ್ಸುಲಿನ್ ಕಾರ್ಯವಿಧಾನವನ್ನು ಬದಲಾಯಿಸುತ್ತದೆ. ಇದರ ಪರಿಣಾಮವಾಗಿ ಭವಿಷ್ಯದಲ್ಲಿ ಮಕ್ಕಳಿಗೂ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಆದರೆ ಈ ಅಧ್ಯಯನ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಹೆಚ್ಚಿನ ಮಟ್ಟದ ಸಂಶೋಧನೆ ಅಗತ್ಯವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ತಂದೆಯಾಗಲು ಬಯಸುವವರು ಧೂಮಪಾನದಿಂದ ದೂರವಿರುವುದು ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ರಂಜಾನ್ ಸಂಭ್ರಮ: ವಿವಾದಿತ ಈದ್ಗಾ ಮೈದಾನದಲ್ಲಿ ಲಕ್ಷಾಂತರ ಜನರಿಂದ ಪ್ರಾರ್ಥನೆ!

ಹುಬ್ಬಳ್ಳಿ: ಪವಿತ್ರ ರಂಜಾನ್ ಹಬ್ಬವನ್ನು ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ವಿವಾದಿತ ಈದ್ಗಾ ಮೈದಾನದಲ್ಲಿ ಲಕ್ಷಾಂತರ ಮುಸ್ಲಿಮರು ಏಕಕಾಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ಹಿನ್ನೆಲೆ ನಗರದ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಹೊಸೂರು ಹಾಗೂ ಕಮರಿಪೇಟೆ ಸೇರಿದಂತೆ ಪ್ರಮುಖ ವೃತ್ತಿಗಳಲ್ಲಿ ಸಂಚಾರ ಬಂದ್ ಮಾಡಿ, ಭಕ್ತರಿಗೆ ಅನುಕೂಲ ಕಲ್ಪಿಸಲಾಗಿತ್ತು.

ಪ್ರಾರ್ಥನೆ ಬಳಿಕ ಅಂಜುಮನ್ ಇಸ್ಲಾಮಿಕ್ ಸಂಸ್ಥೆಯ ಮುಖಂಡರು ಹಾಗೂ ಮುಸ್ಲಿಂ ನಾಯಕರು 3 ಸಾವಿರ ಮಠಕ್ಕೆ ತೆರಳಿ ದೇವರ ದರ್ಶನ ಪಡೆದು ಭಾವೈಕ್ಯತೆ ಮೆರೆದರು. ಮಠದ ಪೀಠಾಧಿಪತಿ ಗೈರಾಗಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಮುಸ್ಲಿಂ ಭಕ್ತರಿಗೆ ಆಶೀರ್ವಾದ ನೀಡಿ ಹಬ್ಬದ ಶುಭಾಶಯ ಕೋರಿದರು.

 

ಬಿಳೂರು ಗ್ರಾಮದಲ್ಲಿ ಅದ್ಧೂರಿ ಕೆರೆ ಬೇಟೆ: 800ಕ್ಕೂ ಹೆಚ್ಚು ಜನ ಭಾಗಿ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಳೂರು ಗ್ರಾಮದಲ್ಲಿ ಸಂಪ್ರದಾಯಬದ್ಧ ಕೆರೆ ಬೇಟೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ದೂರದ ಊರುಗಳಿಂದ 800ಕ್ಕೂ ಹೆಚ್ಚು ಜನರು ಬಿದಿರಿನ ಕಡ್ಡಿಗಳಿಂದ ತಯಾರಿಸಿದ ಕುಣಿಗಳನ್ನು ಹಿಡಿದು ಮೀನು ಶಿಕಾರಿಗೆ ಇಳಿದಿದ್ದರು. ಬಿಳೂರು ಶ್ರೀ ಕಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರತಿ ಕುಣಿಗೆ 800 ರೂಪಾಯಿ ಶುಲ್ಕ ನಿಗದಿಪಡಿಸಲಾಗಿತ್ತು.

ಮೀನುಗಾರರಲ್ಲಿ ಕೆಲವರಿಗೆ ಉತ್ತಮ ಪ್ರಮಾಣದಲ್ಲಿ ಮೀನು ಸಿಕ್ಕಿದ್ದರೆ, ಇನ್ನೂ ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ಸಿಕ್ಕಿದ್ದು ಕಂಡುಬಂತು. ಕೆಲವರು ಮೀನು ಸಿಗದೇ ಹಿಂತಿರುಗಿದರೂ ಯಾವುದೇ ಅಸಮಾಧಾನ ವ್ಯಕ್ತಪಡಿಸದೆ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ತಮ್ಮ ಕೊಡುಗೆ ನೀಡಿದ ಸಂತೋಷದಲ್ಲಿ ಮನೆಮಾತಾದರು. ಕಳೆದ ವರ್ಷ ಇದೇ ಕೆರೆ ಬೇಟೆಯಲ್ಲಿ ಹೆಚ್ಚು ಮೀನು ಸಿಕ್ಕಿದ್ದನ್ನು ಸ್ಥಳೀಯರು ಸ್ಮರಿಸಿದರು.

ಕಾರ್ಯಕ್ರಮವನ್ನು ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಯುತವಾಗಿ ಮುಕ್ತಾಯಗೊಂಡಿತು. ಒಟ್ಟಾರೆ, ಬಿಳೂರಿನ ಕೆರೆ ಬೇಟೆ ಸಂಭ್ರಮವು ಸಂಪ್ರದಾಯ, ಸಹಕಾರ ಮತ್ತು ಭಕ್ತಿಯ ಸಂಕೇತವಾಗಿ ಮತ್ತೊಮ್ಮೆ ಯಶಸ್ವಿಯಾಗಿ ನೆರವೇರಿತು.

ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ: ಐವರು ಗಂಭೀರ, 25ಕ್ಕೂ ಹೆಚ್ಚು ಜನರಿಗೆ ಗಾಯ!

ದಾವಣಗೆರೆ: ತಾಲೂಕಿನ ಆನಗೋಡು ಸಮೀಪ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಸುಮಾರು 800ಕ್ಕೂ ಅಧಿಕ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ, ಕೆಲ ಯುವಕರು ಹೆಜ್ಜೇನು ಗೂಡಿಗೆ ಕಲ್ಲು ಹೊಡೆದ ಪರಿಣಾಮ ಏಕಾಏಕಿ ಜೇನು ಹುಳಗಳು ದಾಳಿ ನಡೆಸಿವೆ.

ದಾಳಿಯಿಂದ ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ ಅನೇಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಹೆಜ್ಜೇನು ದಾಳಿಯ ತೀವ್ರತೆಯಿಂದ 80ಕ್ಕೂ ಹೆಚ್ಚು ಜನರಿಗೆ ತೊಂದರೆ ಉಂಟಾಗಿದ್ದು, ಸ್ಥಳೀಯರು ಒಣ ಹುಲ್ಲಿಗೆ ಬೆಂಕಿ ಹಚ್ಚಿ ಹೊಗೆ ಮೂಲಕ ಜೇನು ಹುಳಗಳನ್ನು ಓಡಿಸಿದ್ದಾರೆ. ಮಾಯಕೊಂಡ ಶಾಸಕ ಬಸವಂತಪ್ಪ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆಗೆ ಸಹಕಾರ ನೀಡಿದ್ದಾರೆ.

ಏಕಾಏಕಿ ಹೊತ್ತಿಕೊಂಡ ಬೆಂಕಿ: 400ಕ್ಕೂ ಅಧಿಕ ಹತ್ತಿ ಚೀಲಗಳು ಸುಟ್ಟುಕರಕಲು!

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿಯಿಂದಾಗಿ 400ಕ್ಕೂ ಅಧಿಕ ಹತ್ತಿ ಚೀಲಗಳು ಸುಟ್ಟು ಕರಕಲಾಗಿರುವ ಘಟನೆ ಜರುಗಿದೆ.

ಘಟನೆಯಲ್ಲಿ ನಾಗಯ್ಯ ಮಿಣಜಗಿ ಎಂಬ ರೈತನಿಗೆ ಸೇರಿದ್ದ ಹತ್ತಿ ಚೀಲಗಳು ಬೆಂಕಿಗಾಹುತಿಯಾಗಿದೆ. ಹಳೆಯ ಪಾಳುಬಿದ್ದ ಶಾಲೆಯ ಕಟ್ಟಡದಲ್ಲಿ ನಾಗಯ್ಯ ಅವರು ಹತ್ತಿ ಚೀಲಗಳನ್ನು ಸಂಗ್ರಹಸಿಟ್ಟಿದ್ದರು.

ಏಕಾಏಕಿ ಹತ್ತಿ ಚೀಲಗಳಿಗೆ ಬೆಂಕಿ ಆವರಿಸಿದ ಪರಿಣಾಮ 400ಕ್ಕೂ ಅಧಿಕ ಚೀಲಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಂದಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಾಲ್ಡೀವ್ಸ್‌ನಲ್ಲಿ ಸ್ಪೀಡ್ ಬೋಟ್ ಅಪಘಾತ: ರೇಮಂಡ್ಸ್ ಮುಖ್ಯಸ್ಥ ಗೌತಮ್ ಸಿಂಘಾನಿಯಾಗೆ ಗಾಯ, ಇಬ್ಬರು ಭಾರತೀಯರು ನಾಪತ್ತೆ

0

ಮಾಲೆ: ಮಾಲ್ಡೀವ್ಸ್‌ನಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಸ್ಪೀಡ್ ಬೋಟ್ ಮಗುಚಿ ಬಿದ್ದ ಪರಿಣಾಮ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಗಾಯಗೊಂಡಿದ್ದು, ಇಬ್ಬರು ಭಾರತೀಯರು ಇನ್ನೂ ನಾಪತ್ತೆಯಾಗಿದ್ದಾರೆ.

ಶುಕ್ರವಾರ ಮುಂಜಾನೆ ವಿ ಫೆಲಿಧೂ ಪ್ರದೇಶದ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ ಬೋಟ್ ಏಕಾಏಕಿ ಪಲ್ಟಿಯಾಗಿದ್ದು, ದೋಣಿಯಲ್ಲಿ ಒಟ್ಟು ಏಳು ಮಂದಿ ಇದ್ದರು ಎಂದು ತಿಳಿದು ಬಂದಿದೆ.

ಅಪಘಾತದ ನಂತರ ಗೌತಮ್ ಸಿಂಘಾನಿಯಾ ಅವರನ್ನು ತಕ್ಷಣ ರಕ್ಷಿಸಿ ಏರ್ ಲಿಫ್ಟ್ ಮೂಲಕ ಮುಂಬೈಗೆ ಕರೆದೊಯ್ಯಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ಮಾಲ್ಡೀವ್ಸ್ ಅಧಿಕಾರಿಗಳ ಪ್ರಕಾರ, ದೋಣಿಯಲ್ಲಿ ಯುನೈಟೆಡ್ ಕಿಂಗ್‌ಡಮ್ ಮತ್ತು ರಷ್ಯಾದ ಇಬ್ಬರು ಮಹಿಳೆಯರು ಹಾಗೂ ಐದು ಭಾರತೀಯರು ಇದ್ದರು. ಅಪಘಾತದ ವೇಳೆ ರಷ್ಯಾದ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು. ಇವರಲ್ಲಿ ಇಬ್ಬರು ಭಾರತೀಯರು ಇನ್ನೂ ನಾಪತ್ತೆಯಾಗಿದ್ದು, ಅವರಲ್ಲಿ ಖ್ಯಾತ ರ‍್ಯಾಲಿ ಚಾಲಕ ಹರಿ ಸಿಂಗ್ ಕೂಡ ಸೇರಿದ್ದಾರೆ.

ಸ್ಥಳೀಯ ಪೊಲೀಸ್ ಹಾಗೂ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ಅಲೆಗಳ ಅಬ್ಬರದಿಂದ ಹುಡುಕಾಟ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಣಿಗಲ್ ಚುನಾವಣೆ ಕೇಸ್: ಬ್ಯಾಲೆಟ್ ಪೇಪರ್ ಅಕ್ರಮ ಆರೋಪ – ಶಾಸಕ ರಂಗನಾಥ್ ಬಂಧನಕ್ಕೆ ಛಲವಾದಿ ಒತ್ತಾಯ!

ಬೆಂಗಳೂರು: ಕುಣಿಗಲ್ ಸೊಸೈಟಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅಕ್ರಮ ನಡೆದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಶಾಸಕ ರಂಗನಾಥ್ ಅವರನ್ನು ತಕ್ಷಣ ಬಂಧಿಸಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಜಿಬಿಎ ಚುನಾವಣೆಯಲ್ಲಿ ಸರ್ಕಾರವೇ ಬ್ಯಾಲೆಟ್ ಪೇಪರ್ ಅಕ್ರಮಕ್ಕೆ ಕೈ ಹಾಕುತ್ತಿದೆ ಎಂದು ತೀವ್ರ ಆರೋಪಿಸಿದರು. ಕುಣಿಗಲ್ ಸಂತೆ ಮಾತೂರ್‌ನಲ್ಲಿ ನಡೆದ ಸೊಸೈಟಿ ಚುನಾವಣೆಯಲ್ಲಿ, ಅಧಿಕಾರಿಯೊಬ್ಬರು ಸ್ವತಃ ಬ್ಯಾಲೆಟ್ ಪೇಪರ್‌ನಲ್ಲಿ ಮತ ಚಲಾಯಿಸಿ ನಂತರ ಬಾಕ್ಸ್‌ಗೆ ಹಾಕಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.

“ನಮ್ಮ ಏಜೆಂಟ್ ಆ ಅಧಿಕಾರಿಯನ್ನು ಹಿಡಿದುಕೊಟ್ಟಿದ್ದರೂ, ಪೊಲೀಸರು ಆರೋಪಿಯನ್ನು ಬಂಧಿಸದೇ ತಪ್ಪಿಸಿಕೊಳ್ಳಲು ಅವಕಾಶ ನೀಡಿದ್ದಾರೆ. ಆದರೆ ಅಕ್ರಮ ಬಯಲಿಗೆಳೆದ ವ್ಯಕ್ತಿಯ ಮೇಲೆಯೇ FIR ದಾಖಲಿಸಲಾಗಿದೆ. ಅಕ್ರಮ ಮಾಡಿದವರ ವಿರುದ್ಧ ಕ್ರಮವೇ ಇಲ್ಲ. ಇದು ಯಾವ ರೀತಿಯ ನ್ಯಾಯ?” ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇಂತಹ ಮಾಲ್‌ಪ್ರಾಕ್ಟೀಸ್ ಸಾಮಾನ್ಯವಾಗಿದೆ ಎಂದು ಟೀಕಿಸಿದ ಅವರು, ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು, ತಪ್ಪು ಆರೋಪದಲ್ಲಿ ಪ್ರಕರಣ ದಾಖಲಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಾಸಕ ರಂಗನಾಥ್ ಈ ಅಕ್ರಮದ ಹಿಂದೆ ಇದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ಅವರು, “ತಕ್ಷಣ ಬಂಧನ ಮಾಡಬೇಕು. ಇಲ್ಲದಿದ್ದರೆ ಈ ವಿಷಯವನ್ನು ಸದನದಲ್ಲಿ ಎತ್ತಿ ರಾಜ್ಯ ಮಟ್ಟದಲ್ಲಿ ಬಹಿರಂಗ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.

IPL 2026: RCB ಟಿಕೆಟ್ ಹಂಟ್ ಶುರು! ಚಿನ್ನಸ್ವಾಮಿಯಲ್ಲಿ ಪಂದ್ಯಗಳಿಗೆ ಭಾರೀ ಕ್ರೇಜ್ – ಮೆಟ್ರೋ ಫ್ರೀ!

0

ಬೆಂಗಳೂರು: 2026ರ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಲ್ಲಿ ಟಿಕೆಟ್ ಕ್ರೇಜ್ ಗರಿಗೆದರಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತವರಿನ ಪಂದ್ಯಗಳಿಗೆ ಕರ್ನಾಟಕ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವುದರಿಂದ, ಟಿಕೆಟ್‌ಗಳಿಗೆ ಭಾರೀ ಬೇಡಿಕೆ ನಿರೀಕ್ಷೆಯಾಗಿದೆ.

ಆರ್‌ಸಿಬಿ ಮ್ಯಾನೆಜ್‌ಮೆಂಟ್ ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭಿಸುವುದಾಗಿ ಘೋಷಿಸಿದೆ. ಟಿಕೆಟ್‌ಗಳು ಕೇವಲ ಆರ್‌ಸಿಬಿ ಅಧಿಕೃತ ವೆಬ್‌ಸೈಟ್ ಮತ್ತು ಆ್ಯಪ್‌ನಲ್ಲಿ ಮಾತ್ರ ಲಭ್ಯವಿರಲಿವೆ. ಮೊದಲ ಹಂತದಲ್ಲಿ ಸದಸ್ಯರಿಗೆ ಅವಕಾಶ ನೀಡಲಾಗುತ್ತದೆ, ನಂತರ ಸಾರ್ವಜನಿಕರಿಗೆ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಮಾರ್ಚ್ 28ರಂದು ಚಿನ್ನಸ್ವಾಮಿ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಮೊದಲ ಪಂದ್ಯ ಆಡಲಿದ್ದು, ಏಪ್ರಿಲ್ 5ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಪಂದ್ಯ ವೀಕ್ಷಣೆಗೆ ಬರುವ ಅಭಿಮಾನಿಗಳಿಗೆ ಈ ಬಾರಿ ವಿಶೇಷ ಸೌಲಭ್ಯ – RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ! ಈ ಕುರಿತು ಸಿದ್ಧತೆಗಳು ನಡೆಯುತ್ತಿವೆ.

ಇತ್ತೀಚೆಗೆ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಸುರಕ್ಷತೆ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. ಗೇಟ್‌ಗಳು, ಎಂಟ್ರಿ-ಎಕ್ಸಿಟ್ ಮಾರ್ಗಗಳು ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ವಿಶೇಷ ಪ್ಲಾನ್ ಸಿದ್ಧಪಡಿಸಲಾಗಿದೆ. ಗರುಡಮಾಲ್, ಸೇಂಟ್ ಜೋಸೆಫ್ ಶಾಲೆಗಳು ಮತ್ತು ಫ್ರೀಡಂಪಾರ್ಕ್‌ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇರಲಿದೆ.

ಮೂರನೇ ವ್ಯಕ್ತಿಯ ವೆಬ್‌ಸೈಟ್‌ಗಳಿಂದ ಟಿಕೆಟ್ ಖರೀದಿಸಬೇಡಿ ಎಂದು ಆರ್‌ಸಿಬಿ ಎಚ್ಚರಿಕೆ ನೀಡಿದ್ದು, ಕಳೆದ ವರ್ಷದ ₹2,300 ರಿಂದ ₹42,000ರವರೆಗೆ ಟಿಕೆಟ್ ದರ ಇರಬಹುದೆಂಬ ನಿರೀಕ್ಷೆ ಇದೆ.

ಬೈ ಎಲೆಕ್ಷನ್| ನಾಳೆ ಬೆಳಗ್ಗೆ ಒಳಗೆ ಕಾಂಗ್ರೆಸ್ ಟಿಕೆಟ್ ಘೋಷಣೆ – ರಣದೀಪ್ ಸುರ್ಜೇವಾಲಾ!

ಬೆಂಗಳೂರು: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಸಂಜೆ ಅಥವಾ ನಾಳೆ ಬೆಳಗ್ಗೆಯೊಳಗೆ ಘೋಷಿಸಲಾಗುವುದು ಎಂದು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ಕುರಿತು ವ್ಯಾಪಕವಾಗಿ ಚರ್ಚೆ ನಡೆಸಲಾಗಿದ್ದು, ಯಾವುದೇ ಕಾರ್ಯಕರ್ತರ ಅಭಿಪ್ರಾಯವನ್ನು ನಿರ್ಲಕ್ಷಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಶುಕ್ರವಾರ ತಡರಾತ್ರಿವರೆಗೂ ಚರ್ಚೆ ನಡೆದಿದ್ದು, ಎಲ್ಲಾ ಮಟ್ಟದ ನಾಯಕರ ಅಭಿಪ್ರಾಯಗಳನ್ನು ಪರಿಗಣಿಸಲಾಗಿದೆ ಎಂದರು.

ಇನ್ನೊಂದೆಡೆ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪ್ರತಿಕ್ರಿಯಿಸಿ, ಟಿಕೆಟ್ ಆಕಾಂಕ್ಷಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸುರ್ಜೇವಾಲಾ ಮತ್ತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ವೀಕ್ಷಕರು ಕ್ಷೇತ್ರಗಳಿಗೆ ಭೇಟಿ ನೀಡಿ ಸರ್ವೇ ನಡೆಸಿ ವರದಿ ಸಲ್ಲಿಸಿದ್ದು, ಎಲ್ಲಾ ಸಮುದಾಯಗಳ ಮನವಿಗಳನ್ನು ಪರಿಗಣಿಸಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಮರ್ಥ್ಯ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದೇ ಪಕ್ಷದ ಉದ್ದೇಶ ಎಂದು ಅವರು ಹೇಳಿದರು.

error: Content is protected !!