“ತುಂಗಭದ್ರ ನೀರು ಬರುತ್ತಿದೆ ಎನ್ನುವ ಮಾತು ಮಾತ್ರ ಇದೆ; ಆದರೆ ಕಳೆದ 30 ದಿನಗಳಿಂದ ನಮ್ಮ ಮನೆಗಳಿಗೆ ಒಂದು ಹನಿ ನೀರೂ ಬಂದಿಲ್ಲ”ಸ್ಥಳೀಯ ನಿವಾಸಿಗಳು
ಭಗೀರಥನ ಓಣಿಯಲ್ಲೇ ನೀರಿನ ಬರ!
ಪಿಣರಾಯಿ ಮನೆ ಮೇಲೆ ಇ.ಡಿ ದಾಳಿ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ
“ರಾಜಕೀಯ ವಿರೋಧಿಗಳನ್ನು ಮಣಿಸಲು ತನಿಖಾ ಸಂಸ್ಥೆಗಳನ್ನು ಬಳಸುವುದು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೇರ ದಾಳಿ”ಬಿ. ಮಾಳಮ್ಮ
ಮಳೆಯ ಸಿಂಚನಕ್ಕೆ ಹಸಿರುಗೂಡಾದ ಕಪ್ಪತ್ತಗುಡ್ಡ


“ಈಗಾಗಲೇ ಸುರಿದ ಅಕಾಲಿಕ ಮಳೆ ಹಾಗೂ ಸದ್ಯದ ಮಳೆಯಿಂದ ಕಪ್ಪತ್ತಗುಡ್ಡ ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದೆ. ನೂರಾರು ಔಷಧೀಯ ಸಸ್ಯಗಳು ಹೂ ಬಿಟ್ಟಿವೆ. ಈ ಬಾರಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್ ಮುಕ್ತ ಚಾರಣಕ್ಕೆ ಒತ್ತು ನೀಡಲಾಗಿದೆ. ಪರಿಸರ ಹಾನಿಗೆ ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.”ಮಂಜುನಾಥ ಆರ್. ಮೇಗಲಮನಿಅರಣ್ಯ ವಲಯಾಧಿಕಾರಿ, ಕಪ್ಪತ್ತಗುಡ್ಡ, ಮುಂಡರಗಿ ತಾಲೂಕು
ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿ: ಸಂಗಮೇಶ ಹಾದಿಮನಿ
ಲಿಂಗಾಯತ ಧರ್ಮ ನಾಶಕ್ಕೆ ಸಂಚು: ಸಾಹಿತಿ ಬಸವರಾಜ ಸೂಳಿಭಾವಿ ವಾಗ್ದಾಳಿ
“ಹಿಂದೂ ಧರ್ಮಕ್ಕೆ ಯಾವುದೇ ಸ್ಪಷ್ಟ ಆಧಾರ ಇಲ್ಲ. ಧರ್ಮಗ್ರಂಥ ಇಲ್ಲ, ಸಂಸ್ಥಾಪಕರು ಇಲ್ಲ. ಆದರೆ ಲಿಂಗಾಯತ ಧರ್ಮಕ್ಕೆ ಬಸವಣ್ಣ, ಶಿವಶರಣರು ಮತ್ತು ವಚನಗಳೇ ಆಧಾರ. ಇದು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ ಸಮಾನತೆಯ ಧರ್ಮ”ಬಸವರಾಜ ಸೂಳಿಭಾವಿ, ಸಾಹಿತಿ
ಗೊಂದಲದ ವಾತಾವರಣದಲ್ಲಿ ಡಿಕೆಶಿ ಇನ್ನಿಂಗ್ಸ್ ಆರಂಭ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಡಿ.ಕೆ. ಶಿವಕುಮಾರ್ ಗೊಂದಲದ ವಾತಾವರಣದಲ್ಲಿ ತಮ್ಮ ಇನ್ನಿಂಗ್ಸನ್ನು ಆರಂಭಿಸುತ್ತಿದ್ದಾರೆ. ರಾಜ್ಯದ ಜನತೆ ಈಗಾಗಲೇ ಈ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರಿಗೆ ಅವಕಾಶ ಬಂದಾಗ ಈ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿನ ನಾಯಕತ್ವ ಬದಲಾವಣೆ ರಾಜ್ಯದ ಆಡಳಿತದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಇದು ಕಾಂಗ್ರೆಸ್ ದುರಾಡಳಿತದ ಮುಂದುವರೆದ ಭಾಗ. ರಾಜ್ಯದ ಆರ್ಥಿಕತೆಯ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಹಾನಿ ಮಾಡಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಆಗಿದ್ದು, ವ್ಯವಸ್ಥೆಯನ್ನು ಸುಧಾರಿಸಲು ಡಿ.ಕೆ. ಶಿವಕುಮಾರ್ ಅವರಿಗೆ ಸಮಯ ಸಿಗುತ್ತದೆಯೊ ಇಲ್ಲವೊ ಗೊತ್ತಿಲ್ಲ.
ಸಂಪುಟ ರಚನೆಯ ಕಸರತ್ತಿನಲ್ಲಿ ಆಂತರಿಕ ಭಿನ್ನಮತ ಹೊರಬರುತ್ತಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡದಿರುವುದರಿಂದ ಒಬಿಸಿ ಮತ್ತು ಎಸ್ಸಿ ಎಸ್ಟಿ ಸಮುದಾಯದವರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಗೊಂದಲದ ವಾತಾವರಣದಲ್ಲಿ ತಮ್ಮ ಇನ್ನಿಂಗ್ಸನ್ನು ಆರಂಭಿಸುತ್ತಿದ್ದಾರೆ. ಕರ್ನಾಟಕದ ಜನತೆ ಈಗಾಗಲೇ ಈ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಮುಂದೆ ಅವರಿಗೆ ಅವಕಾಶ ಬಂದಾಗ ಈ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ಹೇಳಿದರು.
ತೂಗು ಕತ್ತಿ
ಹೊಸ ಸಂಪುಟ ಸೇರಲು ಪ್ರಥಮ ಬಾರಿ ಆಯ್ಕೆಯಾದವರಿಂದ ಹಿಡಿದು ಐದಾರು ಬಾರಿ ಆಯ್ಕೆಯಾದವರೂ ಲಾಬಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಸಚಿವರು ಸ್ಥಾನ ಬಿಟ್ಟು ಕೊಡಲು ಸಿದ್ದರಿಲ್ಲ. ಹೀಗಾಗಿ ದೊಡ್ಡ ಮಟ್ಟದ ಪೈಪೋಟಿ ನಡೆಯುತ್ತಿದೆ. ಅಲ್ಲದೇ ನೂತನ ಸಂಪುಟ ರಚನೆಯಲ್ಲಿ ಸಿದ್ದರಾಮಯ್ಯ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಅಲ್ಲದೇ ಅವರು ರಾಜ್ಯ ರಾಜಕಾರಣದಲ್ಲಿಯೇ ಸಕ್ರೀಯರಾಗಿರುತ್ತೇನೆ ಎಂದು ಹೇಳಿರುವುದು ಅಪಾಯಕಾರಿ ಸಂದೇಶವಾಗಿದ್ದು ಇದು ಡಿ.ಕೆ.ಶಿವಕುಮಾರ್ ಮತ್ತು ಅವರ ಸರ್ಕಾರದ ಮೇಲೆ ತೂಗು ಕತ್ತಿ ನೇತಾಡಿದಂತಾಗುತ್ತದೆ ಎಂದು ಹೇಳಿದರು.
ಅಧಿಕೃತವಾಗಿ ಡಿಕೆಶಿಗೆ ಸಿಎಂ ಪಟ್ಟ! ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತ ಆಯ್ಕೆ
ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗುವುದು ಬಹುತೇಕ ಖಚಿತವಾಗಿತ್ತು. ಆದರೆ ಪಕ್ಷದ ಸಂಪ್ರದಾಯ ಮತ್ತು ಪ್ರಕ್ರಿಯೆಯಂತೆ ಶಾಸಕಾಂಗ ಪಕ್ಷದ ಸಭೆ ನಡೆಸಿ ಅಧಿಕೃತವಾಗಿ ನಾಯಕನ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ವೀಕ್ಷಕರಾದ ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಉಪಸ್ಥಿತರಿದ್ದರು. ಸಭೆಗೆ ಮುನ್ನ ವಿಧಾನಸೌಧದಲ್ಲಿರುವ ಅಜ್ಜಯ್ಯನ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್, ಬಳಿಕ ಸಭಾಂಗಣಕ್ಕೆ ಆಗಮಿಸಿ ಎಲ್ಲ ಶಾಸಕರ ಬಳಿಗೆ ತೆರಳಿ ಹಸ್ತಲಾಘವ ಮಾಡಿ ಅಭಿನಂದನೆ ಸ್ವೀಕರಿಸಿದರು.
ಮೂರು ವರ್ಷಗಳ ಕಾಲ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಗೂ ಪ್ರಮುಖ ಕೊಡುಗೆ ನೀಡಿದ್ದಾರೆ.
ಜೂನ್ 3ರಂದು ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
IPL 2026 Final: ಫೈನಲ್ ಗೆದ್ದರೂ ಸಂಭ್ರಮಿಸುವಂತಿಲ್ಲ: ಸಂಭ್ರಮಾಚರಣೆಗೆ ಖಡಕ್ ರೂಲ್ಸ್ ಜಾರಿ ಮಾಡಿದ ಪೊಲೀಸರು
ಬೆಂಗಳೂರು: ಐಪಿಎಲ್ 2026ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಫೈನಲ್ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದ್ದು,
ಮೇ 31ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ನಗರ ಪೊಲೀಸರು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.
ಪಂದ್ಯದ ಫಲಿತಾಂಶದ ನಂತರ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಆಯುಕ್ತರ ಕಚೇರಿ ವಿಶೇಷ ಸೂಚನೆಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಹಾಗೂ ಕ್ರಿಕೆಟ್ ಅಭಿಮಾನಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಮನವಿ ಮಾಡಿದೆ.
ಪೊಲೀಸರ ಸೂಚನೆಯಂತೆ, ಪಂದ್ಯ ಮುಗಿದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ವಿಜಯೋತ್ಸವ ಅಥವಾ ಗುಂಪು ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ. ರಸ್ತೆಗಳಿಗೆ ಮುಖಮಾಡಿ ಎಲ್ಇಡಿ ವಾಲ್ಗಳನ್ನು ಅಳವಡಿಸುವುದಕ್ಕೂ ನಿರ್ಬಂಧ ಹೇರಲಾಗಿದೆ. ಅಲ್ಲದೆ, ಸಂಬಂಧಿತ ಅನುಮತಿ ಪಡೆಯದೇ ಮಾಲ್ಗಳು, ಪಬ್ಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಹೊರಭಾಗದಲ್ಲಿ ಬೃಹತ್ ಪರದೆಗಳನ್ನು ಅಳವಡಿಸಿ ಪಂದ್ಯ ಪ್ರಸಾರ ಮಾಡುವಂತಿಲ್ಲ.
ಇದೇ ವೇಳೆ ಪಟಾಕಿ ಸಿಡಿಸುವುದು ಹಾಗೂ ಅಪಾಯಕಾರಿ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಂದ್ಯ ಗೆಲುವಿನ ಸಂಭ್ರಮದಲ್ಲಿ ರಸ್ತೆಗಳಲ್ಲಿ ಬೈಕ್ ರ್ಯಾಲಿ, ವ್ಹೀಲಿಂಗ್, ಸ್ಟಂಟ್ಗಳು ಅಥವಾ ಅತಿವೇಗದ ಚಾಲನೆ ನಡೆಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಗಲಾಟೆ ಸೃಷ್ಟಿಸುವುದು, ಅಸಭ್ಯ ವರ್ತನೆ ತೋರುವುದು ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಯಾವುದೇ ಕೃತ್ಯಗಳ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಅಭಿಮಾನಿಗಳು ಟ್ರಾಫಿಕ್ ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜೊತೆಗೆ, ಬೇರೆ ತಂಡಗಳ ಅಭಿಮಾನಿಗಳನ್ನು ಕೆಣಕುವುದು, ನಿಂದಿಸುವುದು ಅಥವಾ ಪ್ರಚೋದನಾತ್ಮಕ ವರ್ತನೆ ತೋರಿಸುವುದನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿರುವ ಪೊಲೀಸರು, ದ್ವೇಷಪೂರಿತ ಪೋಸ್ಟ್ಗಳು, ಸುಳ್ಳು ಸುದ್ದಿಗಳು ಅಥವಾ ವದಂತಿಗಳನ್ನು ಹಂಚಿಕೊಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಒಟ್ಟಾರೆ, ಐಪಿಎಲ್ ಫೈನಲ್ ಪಂದ್ಯದ ಸಂಭ್ರಮವು ನಗರದ ಶಾಂತಿ ಮತ್ತು ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರದಂತೆ ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕು. ಪಂದ್ಯವನ್ನು ಆನಂದಿಸಿ, ಆದರೆ ಕಾನೂನು ಮತ್ತು ಪೊಲೀಸ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ಬೆಂಗಳೂರು ಪೊಲೀಸರ ಮನವಿಯಾಗಿದೆ.


