Home Blog

ವಿವಾಹ ವಾರ್ಷಿಕೋತ್ಸವದಂದು ದರ್ಶನ್‌ಗೆ ಸಿಕ್ಕ ರಿಲೀಫ್; ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಜೊತೆ ವಿಶೇಷ ಭೇಟಿ

ಬೆಂಗಳೂರು: ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಇಂದು (ಮೇ 19) ಭಾವನಾತ್ಮಕ ಕ್ಷಣ ಸಿಕ್ಕಿದೆ. ತಮ್ಮ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಪುತ್ರ ವಿನೀಶ್ ಅವರನ್ನು ಸುಮಾರು ಹತ್ತು ತಿಂಗಳ ಬಳಿಕ ಮುಖಾಮುಖಿಯಾಗಿ ಭೇಟಿ ಮಾಡುವ ಅವಕಾಶ ದೊರೆತಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ನಂತರ ದರ್ಶನ್ ಜೈಲಿನಲ್ಲೇ ಇದ್ದು, ಕುಟುಂಬದ ಸದಸ್ಯರನ್ನು ಕೇವಲ ಭದ್ರತಾ ಸಿಬ್ಬಂದಿಯ ಸಮ್ಮುಖದಲ್ಲಿ ದೂರದಿಂದ ಮಾತ್ರ ಭೇಟಿಯಾಗುತ್ತಿದ್ದರು.

ಈ ನಡುವೆ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಡಿಜಿಪಿ ಅಲೋಕ್ ಕುಮಾರ್ ಅವರನ್ನು ಭೇಟಿಯಾಗಿ ವಿಶೇಷ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ದರ್ಶನ್ ಕೂಡ ಜೈಲು ಅಧಿಕಾರಿಗಳ ಬಳಿ ಇದೇ ಬೇಡಿಕೆ ಇಟ್ಟಿದ್ದರು.

ಅಂತಿಮವಾಗಿ ಜೈಲಧಿಕಾರಿಗಳು ಅರ್ಧ ಗಂಟೆಯ ಮುಖಾಮುಖಿ ಭೇಟಿಗೆ ಅನುಮತಿ ನೀಡಿದ್ದು, ದರ್ಶನ್ ಇರುವ ಕೊಠಡಿಯಲ್ಲೇ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಭೇಟಿ ಮಾಡಿ ಸಮಯ ಕಳೆದಿದ್ದಾರೆ.

ಹತ್ತು ತಿಂಗಳ ಬಳಿಕ ಕುಟುಂಬದ ಜೊತೆ ಹತ್ತಿರದಿಂದ ಮಾತನಾಡಿದ ದರ್ಶನ್ ಭಾವುಕರಾಗಿದ್ದರೆಂದು ಮೂಲಗಳು ತಿಳಿಸಿವೆ.

ಬೆಲೆ ಏರಿಕೆ, ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಮೋದಿ ಸರ್ಕಾರವೇ ಕಾರಣ: ತುಮಕೂರಿನಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ತುಮಕೂರು: ಇಂದಿನ ಬೆಲೆ ಏರಿಕೆ ಹಾಗೂ ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ ಅಂಗವಾಗಿ ತುಮಕೂರಿನಲ್ಲಿ ಆಯೋಜಿಸಿದ್ದ ‘ಸಾಧನಾ ಸಮಾವೇಶ’ದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಆರ್ಥಿಕ ಹಾಗೂ ಶಿಕ್ಷಣ ನೀತಿಗಳನ್ನು ತೀವ್ರವಾಗಿ ಟೀಕಿಸಿದರು.

ನರೇಂದ್ರ ಮೋದಿ ಅಮೆರಿಕಕ್ಕೆ ತೆರಳಿದಾಗ ಡೊನಾಲ್ಡ್ ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿದ್ದರು. ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇರಾನ್ ಮೇಲೆ ಯುದ್ಧವೂ ನಡೆಯಿತು. ಆದರೆ ಇರಾನ್ ಮೇಲೆ ದಾಳಿ ನಡೆದಾಗ ಮೋದಿ ಒಮ್ಮೆಯೂ ವಿಷಾದ ವ್ಯಕ್ತಪಡಿಸಲಿಲ್ಲ ಎಂದು ಹೇಳಿದರು.

ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನತೆಯಿಂದ ಇಂಧನ ದರ ಏರಿಕೆ ಉಂಟಾಗಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಬೆಲೆ ಏರಿಕೆ ಹೆಚ್ಚಾಗಿದೆ. ಈ ಸ್ಥಿತಿಗೂ ಪ್ರಧಾನಿ ಮೋದಿ ಅವರೇ ನೇರ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಇದೇ ವೇಳೆ ಉದ್ಯಮಿಗಳಾದ ಗೌತಮ್ ಅದಾನಿ ಹಾಗೂ ಮುಕೇಶ್ ಅಂಬಾನಿ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಮೋದಿ ಪ್ರಧಾನಿಯಾದ ಬಳಿಕ ಲಾಭ ಪಡೆದವರು ಅಂಬಾನಿ ಮತ್ತು ಅದಾನಿ ಮಾತ್ರ ಎಂದು ಟೀಕಿಸಿದರು.

2014ರಲ್ಲಿ ಗೌತಮ್ ಅದಾನಿ ಅವರ ಆಸ್ತಿ ಮೌಲ್ಯ ಸುಮಾರು 16 ಸಾವಿರ ಕೋಟಿ ರೂಪಾಯಿ ಇತ್ತು. ಇಂದು ಅದು ಲಕ್ಷಾಂತರ ಕೋಟಿಗೆ ಏರಿಕೆಯಾಗಿದೆ. ಅದೇ ರೀತಿ ಮುಕೇಶ್ ಅಂಬಾನಿಯವರ ಆರ್ಥಿಕ ಸ್ಥಿತಿಯೂ ಬಹಳಷ್ಟು ವೃದ್ಧಿಯಾಗಿದೆ.

ಆದರೆ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರದ ನೀತಿಗಳಿಂದ ಸಾಮಾನ್ಯ ಜನರ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದ್ದು, ಯುವಕರು ಹಾಗೂ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಮುಂದಿನ ಐಪಿಎಲ್ ನಲ್ಲಿ ಧೋನಿ ಆಡ್ತಾರಾ? ಸುರೇಶ್ ರೈನಾ ಕೊಟ್ಟ ಉತ್ತರ ಏನು?

ಚೆನ್ನೈ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ಐಪಿಎಲ್ ಭವಿಷ್ಯದ ಬಗ್ಗೆ ಮತ್ತೆ ಚರ್ಚೆಗಳು ಜೋರಾಗಿವೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಧೋನಿ, ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಮುಂದಿನ ಆವೃತ್ತಿಯಲ್ಲೂ ಅವರು ಆಡಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಕಳೆದ ಐದು ವರ್ಷಗಳಿಂದ ಧೋನಿ ನಿವೃತ್ತಿ ಕುರಿತ ಚರ್ಚೆಗಳು ನಡೆಯುತ್ತಲೇ ಇದ್ದರೂ, ಅವರು ಪ್ರತಿ ಬಾರಿ ಅಭಿಮಾನಿಗಳಿಗೆ ಅಚ್ಚರಿ ನೀಡುತ್ತಾ ತಂಡದೊಂದಿಗೆ ಮುಂದುವರಿದಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಚೆನ್ನೈ ತಂಡದ ಭಾಗವಾಗಿದ್ದರೂ, ಇದುವರೆಗೆ ಯಾವುದೇ ಪಂದ್ಯದಲ್ಲಿ ಮೈದಾನಕ್ಕಿಳಿದಿಲ್ಲ. ಇದರಿಂದ ಅವರ ಮುಂದಿನ ನಿರ್ಧಾರ ಕುರಿತು ಇನ್ನಷ್ಟು ಕುತೂಹಲ ಹೆಚ್ಚಾಗಿದೆ.

ಮೇ 18ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್‌ನ ತವರಿನ ಕೊನೆಯ ಪಂದ್ಯದಲ್ಲಿ ಧೋನಿ ಮೈದಾನಕ್ಕೆ ಬಂದು ಅಭಿಮಾನಿಗಳೊಂದಿಗೆ ಕ್ಷಣಗಳನ್ನು ಹಂಚಿಕೊಂಡರು. ಈ ವೇಳೆ ಅಭಿಮಾನಿಗಳಿಗೆ ಕೈಬೀಸುವುದರ ಜೊತೆಗೆ ಕೆಲವರಿಗೆ ಆಟೋಗ್ರಾಫ್ ನೀಡಿ, ಚೆಂಡುಗಳನ್ನು ಉಡುಗೊರೆಯಾಗಿ ನೀಡಿದರು.

ಈ ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಧೋನಿ ಅವರ ಮಾಜಿ ಸಹ ಆಟಗಾರ ಹಾಗೂ ಚೆನ್ನೈ ಅಭಿಮಾನಿಗಳಲ್ಲಿ ‘ಚಿನ್ನ ಥಲಾ’ ಎಂದೇ ಪ್ರಸಿದ್ಧರಾಗಿರುವ ಸುರೇಶ್ ರೈನಾ, ಧೋನಿ ಅವರ ಮುಂದಿನ ಐಪಿಎಲ್ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.

ಮುಂದಿನ ವರ್ಷವೂ ಆಡಬೇಕು ಎಂದು ನಾನು ಧೋನಿಗೆ ಕೇಳಿದ್ದೆ. ಅದಕ್ಕೆ ಅವರು ‘ನನ್ನ ದೇಹ ಸ್ವಲ್ಪ ದಣಿದಂತೆ ಅನಿಸುತ್ತಿದೆ’ ಎಂದು ಹೇಳಿದರು. ಆದರೆ ನಾನು ನೀವು ಮುಂದಿನ ವರ್ಷವೂ ಆಡಲೇಬೇಕು ಎಂದು ಒತ್ತಾಯಿಸಿದ್ದೇನೆ ಎಂದು ರೈನಾ ಹೇಳಿದ್ದಾರೆ.

ಅಂತಿಮ ನಿರ್ಧಾರ ಧೋನಿ ಅವರದ್ದೇ ಆಗಿದ್ದು, ಅವರು ಮುಂದಿನ ಆವೃತ್ತಿಯಲ್ಲಿ ಆಡಲು ಸಿದ್ಧರಾಗಿರಬಹುದು ಎಂಬ ಭಾವನೆ ಇದೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

ಜನರ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಮೋಜು-ಮಸ್ತಿ ಮಾಡುತ್ತಿದೆ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು:  ರಾಜ್ಯ ಸರ್ಕಾರ ಆಯೋಜಿಸಿರುವ ಸಾಧನಾ ಸಮಾವೇಶವನ್ನು ತೀವ್ರವಾಗಿ ಟೀಕಿಸಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜನರ ತೆರಿಗೆ ಹಣದಲ್ಲಿ ಮೋಜು-ಮಸ್ತಿ ಮಾಡಲು ಕಾಂಗ್ರೆಸ್ ಸರ್ಕಾರ ಈ ಸಮಾವೇಶ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವ ಸಾಧನೆಗಾಗಿ ಈ ಸಮಾವೇಶ ನಡೆಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರದ ವಿರುದ್ಧ ಸಾಮಾನ್ಯ ಜನರೇ ಹೆಚ್ಚು ಪ್ರಶ್ನೆ ಕೇಳುತ್ತಿದ್ದಾರೆ” ಎಂದು ಕಿಡಿಕಾರಿದರು.

ಸಾರಿಗೆ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸಿದ ನಿಖಿಲ್, ನೌಕರರ ಬಾಕಿ ವೇತನ ಮತ್ತು ಅರಿಯರ್ಸ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಹೇಳಿದರು.

“ಸಂಧಾನ ಸಭೆ ನಡೆದರೂ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಶಕ್ತಿ ಯೋಜನೆಯಡಿ ಉಚಿತ ಬಸ್ ಸೇವೆ ಘೋಷಿಸಿದ ಸರ್ಕಾರ, ಈಗ ಸಾರಿಗೆ ಇಲಾಖೆ ಯಾವ ಸ್ಥಿತಿಗೆ ಬಂದಿದೆ ಎಂಬುದಕ್ಕೆ ಉತ್ತರ ನೀಡಬೇಕು” ಎಂದು ಆಗ್ರಹಿಸಿದರು.

ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಂಸ್ಥೆಗಳ ನಿರ್ವಹಣೆಯನ್ನೂ ಟೀಕಿಸಿದ ಅವರು, “ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಹೊಸ ಬಸ್ ಖರೀದಿಸಿಲ್ಲ. ಬಸ್‌ಗಳಿಗೆ ಟಯರ್ ಬದಲಾಯಿಸುವ ಸ್ಥಿತಿಯೂ ಇಲ್ಲ. ಬಸ್ ನಿರ್ವಹಣೆಗೆ ಬೇಕಾದಷ್ಟು ಹಣ ಸರ್ಕಾರದ ಬಳಿ ಇಲ್ಲ” ಎಂದು ಆರೋಪಿಸಿದರು.

ಸಾರಿಗೆ ನೌಕರರಿಗೆ ಸಂಬಳ ಪಾವತಿ ವಿಚಾರದಲ್ಲೂ ಸರ್ಕಾರ ಸಮರ್ಪಕ ನಿರ್ಧಾರ ಕೈಗೊಂಡಿಲ್ಲ ಎಂದು ಟೀಕಿಸಿದ ಅವರು, “ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 4,500 ಇವಿ ಬಸ್‌ಗಳನ್ನು ಬೆಂಗಳೂರಿಗೆ ಒದಗಿಸದೇ ಹೋಗಿದ್ದರೆ ಪರಿಸ್ಥಿತಿ ಇನ್ನೂ ಹದಗೆಡುತ್ತಿತ್ತು” ಎಂದರು.

ಬೆಂಗಳೂರಿನ ಕಸ ಸಮಸ್ಯೆ ಕುರಿತು ಮಾತನಾಡಿದ ನಿಖಿಲ್, “ಒಮ್ಮೆ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುತ್ತಿದ್ದ ನಗರ ಇಂದು ಕಸದ ರಾಶಿಯಿಂದ ತುಂಬಿ ಗಾರ್ಬೇಜ್ ಸಿಟಿಯಾಗಿ ಬದಲಾಗಿದೆ. ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಉತ್ತರಾಖಂಡ ಮಾಜಿ ಸಿಎಂ ಭುವನ್ ಚಂದ್ರ ಖಂಡೂರಿ ನಿಧನ

ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಹಾಗೂ ನಿವೃತ್ತ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರು ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸೇನೆಯಲ್ಲಿ ಮಹತ್ವದ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ರಾಜಕೀಯ ಪ್ರವೇಶಿಸಿದ್ದ ಖಂಡೂರಿ, ಉತ್ತರಾಖಂಡ ರಾಜಕೀಯದಲ್ಲಿ ಪ್ರಾಮಾಣಿಕ ಮತ್ತು ಶಿಸ್ತಿನ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದರು.

ಅವರು ಎರಡು ಅವಧಿಗೆ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮೊದಲ ಬಾರಿ 2007ರಿಂದ 2009ರವರೆಗೆ ಹಾಗೂ ಎರಡನೇ ಬಾರಿ 2011ರಿಂದ 2012ರವರೆಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದರು.

ತಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ತಾಳಿ, ಪಾರದರ್ಶಕ ಹಾಗೂ ಶಿಸ್ತುಬದ್ಧ ಆಡಳಿತ ವ್ಯವಸ್ಥೆ ರೂಪಿಸಲು ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದರು. ಅವರ ಆಡಳಿತ ಶೈಲಿ ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸಿತ್ತು.

ಜನರಲ್ ಖಂಡೂರಿ ಅವರ ನಿಧನಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಧಾಮಿ, “ಭುವನ್ ಚಂದ್ರ ಖಂಡೂರಿ ಅವರ ನಿಧನ ರಾಷ್ಟ್ರೀಯ ರಾಜಕೀಯಕ್ಕೆ ತುಂಬಲಾಗದ ನಷ್ಟ. ರಾಜ್ಯದ ಅಭಿವೃದ್ಧಿ ಹಾಗೂ ಸುಶಾಸನಕ್ಕಾಗಿ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಖಂಡೂರಿ ಅವರ ಅಗಲಿಕೆಯಿಂದ ಉತ್ತರಾಖಂಡ ಮಾತ್ರವಲ್ಲದೆ ರಾಷ್ಟ್ರೀಯ ರಾಜಕೀಯ ವಲಯದಲ್ಲೂ ಶೋಕದ ವಾತಾವರಣ ನಿರ್ಮಾಣವಾಗಿದೆ. ಅವರ ಅಂತಿಮ ದರ್ಶನಕ್ಕೆ ರಾಜಕೀಯ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

 

‘ನಿಮ್ಮ ಮುಂದೆ ಸಾಯೋಕೆ ಆಗಲ್ಲ’ : ಭಾವುಕ ಪತ್ರ ಬರೆದಿಟ್ಟು ನಾಪತ್ತೆಯಾದ ಅಪ್ರಾಪ್ತ ಅಕ್ಕ-ತಂಗಿ

0

ಮಂಡ್ಯ: ತಾಯಿ ಬೈದಿದ್ದಕ್ಕೆ ಮನನೊಂದು ಇಬ್ಬರು ಅಪ್ರಾಪ್ತ ಸಹೋದರಿಯರು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮನೆಯಿಂದ ತೆರಳುವ ಮುನ್ನ ಅವರು ಬರೆದಿಟ್ಟಿರುವ ಭಾವುಕ ಪತ್ರ ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಸುಜಾತಾ (16) ಮತ್ತು ರುಕ್ಮಿಣಿ (14) ಎಂಬ ಸಹೋದರಿಯರು ತಮ್ಮ ತಂದೆ ರಾಮಚಂದ್ರ ಅವರ ಮನೆಯಿಂದ ಕಾಣೆಯಾಗಿದ್ದಾರೆ. ಕುಟುಂಬದವರ ಮಾಹಿತಿ ಪ್ರಕಾರ, ಮನೆಯಲ್ಲಿನ ಸಣ್ಣ ವಿಚಾರಕ್ಕೆ ತಾಯಿ ಬೈದಿದ್ದರು ಎನ್ನಲಾಗಿದೆ.

ಮನೆಯಲ್ಲೇ ಬರೆದಿಟ್ಟು ಹೋಗಿರುವ ಪತ್ರದಲ್ಲಿ, ‘ಅಮ್ಮ-ಅಪ್ಪ ಸಾರಿ… ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ. ನಾವು ದೂರ ಹೋಗಿ ಸತ್ತಿದ್ದೇವೆ’ ಎಂದು ಉಲ್ಲೇಖಿಸಲಾಗಿದೆ. ಈ ಬರಹ ಕಂಡ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.

ತಕ್ಷಣವೇ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದ ಪೋಷಕರು ಮಕ್ಕಳ ಪತ್ತೆಗೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವಿಧ ಕಡೆಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ.

ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆತಂಕದಲ್ಲಿದ್ದು, ಬಾಲಕಿಯರು ಸುರಕ್ಷಿತವಾಗಿ ಪತ್ತೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

‘ನನ್ನ ಜಾತಿ ನಿಮಗೆ ಗೊತ್ತೇ?’: ಗಡ್ಕರಿ ವಿರುದ್ಧ ನಾನಾ ಪಾಟೇಕರ್ ಆಕ್ರೋಶ

ನಾಗ್ಪುರ: ನಟ ನಾನಾ ಪಾಟೇಕರ್ ಅವರು ನಾಗ್ಪುರದ ರೇಷ್ಮಿಬಾಗ್‌ನಲ್ಲಿ ನಡೆದ ‘ಜಲಕ್ರಾಂತಿ’ ಸಮಾವೇಶದಲ್ಲಿ ಜಾತಿ ಮತ್ತು ಧರ್ಮದ ರಾಜಕಾರಣದ ವಿರುದ್ಧ ತೀವ್ರವಾಗಿ ಮಾತನಾಡಿದ್ದಾರೆ. ವೇದಿಕೆಯಲ್ಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಉದ್ದೇಶಿಸಿ, ‘ನನ್ನ ಜಾತಿ ನಿಮಗೆ ಗೊತ್ತೇ?’ ಎಂದು ಪ್ರಶ್ನಿಸುವ ಮೂಲಕ ಗಮನ ಸೆಳೆದಿದ್ದಾರೆ.

ತಮ್ಮ ಭಾಷಣದಲ್ಲಿ ಅವರು ಬಾಲ್ಯದ ಶಿಕ್ಷಣ ಮತ್ತು ತಾಯಿಯ ನೈತಿಕ ಬೋಧನೆಗಳನ್ನು ನೆನಪಿಸಿಕೊಂಡರು. ‘ಮಾನವ ಜನ್ಮವೇ ಜಾತಿ, ಮಾನವೀಯತೆಯೇ ಧರ್ಮ’ ಎಂಬ ಸಂದೇಶವನ್ನು ತಾಯಿ ನೀಡಿದ್ದನ್ನು ಅವರು ಉಲ್ಲೇಖಿಸಿದರು.

ಸಮಾಜದಲ್ಲಿ ವ್ಯಕ್ತಿಯ ಗುರುತನ್ನು ಜಾತಿಯಿಂದ ನಿರ್ಧರಿಸುವ ಪ್ರವೃತ್ತಿಯನ್ನು ಅವರು ಕಟುವಾಗಿ ಟೀಕಿಸಿದರು. ಶಿಕ್ಷಣ ಮತ್ತು ಮಾನವೀಯತೆ ಇಲ್ಲದೆ ಜಾತಿವಾದವನ್ನು ನಿರ್ಮೂಲ ಮಾಡುವುದು ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಅವರು ನಿತಿನ್ ಗಡ್ಕರಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ನೀರಿನ ಸಂರಕ್ಷಣೆಯ ವಿವಿಧ ಯೋಜನೆಗಳನ್ನೂ ಮೆಚ್ಚಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಇತ್ತೀಚೆಗೆ ನಾನಾ ಪಾಟೇಕರ್ ಅವರು ನಟನೆಯಿಂದ ದೂರ ಸರಿಯುವ ಸೂಚನೆ ನೀಡಿದ್ದು, ಇದು ಅಭಿಮಾನಿಗಳಿಗೆ ಬೇಸರ ತಂದಿತ್ತು.

ಅಭಿಮಾನಿಗಳ ಜೊತೆ 40ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಶಿವರಾಜ್‌ಕುಮಾರ್-‌ ಗೀತಾ ಜೋಡಿ

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಇಂದು ತಮ್ಮ 40ನೇ ವಿವಾಹ ವಾರ್ಷಿಕೋತ್ಸವವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡಿದ್ದಾರೆ. 1986ರಲ್ಲಿ ವಿವಾಹವಾದ ಈ ದಂಪತಿ ನಾಲ್ಕು ದಶಕಗಳ ದಾಂಪತ್ಯ ಜೀವನವನ್ನು ಪೂರೈಸಿದ್ದಾರೆ.

ಈ ವಿಶೇಷ ದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಶಿವರಾಜ್ ಕುಮಾರ್ ನಿವಾಸದ ಮುಂದೆ ಸೇರಿ ದಂಪತಿಗೆ ಹಾರ, ಹೂವು ಮತ್ತು ಶುಭಾಶಯಗಳನ್ನು ಸಲ್ಲಿಸಿದರು. ಶಿವರಾಜ್ ಮತ್ತು ಗೀತಾ ಇಬ್ಬರೂ ಅಭಿಮಾನಿಗಳನ್ನು ಭೇಟಿಯಾಗಿ ಆತ್ಮೀಯವಾಗಿ ಮಾತನಾಡಿದರು.

ದಂಪತಿ ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡು, ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸಿ ಸಂತೋಷ ಹಂಚಿಕೊಂಡರು. ಅಭಿಮಾನಿಗಳು ಜೈಕಾರಗಳೊಂದಿಗೆ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

ಪ್ರತಿ ವರ್ಷವೂ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತ ಬಂದಿದ್ದು, ಈ ವರ್ಷವೂ ಅದೇ ಉತ್ಸಾಹ ಮುಂದುವರಿದಿದೆ.

ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮೌನಿ ರಾಯ್ ಗ್ಲಾಮರ್ ಶೋ: ವಿಚ್ಛೇದನದ ಬಳಿಕವೂ ಹೈ-ಫ್ಯಾಶನ್

ಫ್ರಾನ್ಸ್: ವೈಯಕ್ತಿಕ ಜೀವನದ ವಿವಾದಗಳ ನಡುವೆಯೂ ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ವೃತ್ತಿಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಉದ್ಯಮಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ಸುದ್ದಿಯ ಬೆನ್ನಲ್ಲೇ ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

ಫ್ರೆಂಚ್ ರಿವೇರಾದಿಂದ ಮೌನಿ ರಾಯ್ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ‘ಕಾನ್ ಮತ್ತು ಗೊಂದಲಗಳು! ಶುಭೋದಯ’ ಎಂಬ ಕ್ಯಾಪ್ಷನ್‌ ಸಹ ಅಭಿಮಾನಿಗಳ ಗಮನ ಸೆಳೆದಿದೆ.

ಕಪ್ಪು ಮತ್ತು ಬಿಳುಪು ಸಂಯೋಜನೆಯ ಹೈ-ಫ್ಯಾಶನ್ ಡ್ರೆಸ್‌ನಲ್ಲಿ ಮೌನಿ ರಾಯ್ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಕೋಟ್, ಸ್ಟಾಕಿಂಗ್ಸ್ ಮತ್ತು ಬೂಟುಗಳೊಂದಿಗೆ ಸ್ಟೈಲಿಷ್ ಲುಕ್‌ನಲ್ಲಿ ಮಿಂಚಿದ್ದಾರೆ.

‘ಬಾಂಬೆ ಸ್ಟೋರೀಸ್’ ಸಿನಿಮಾದ ಪ್ರದರ್ಶನಕ್ಕಾಗಿ ಅವರು ಸಹ-ನಟಿ ಅನುಪ್ರಿಯಾ ಗೊಯೆಂಕಾ ಜೊತೆ ಕಾನ್‌ಗೆ ತೆರಳಿದ್ದಾರೆ. ಇದು ಕಾನ್ ಫೆಸ್ಟಿವಲ್‌ನಲ್ಲಿ ಅವರ ಎರಡನೇ ಭಾಗವಹಿಸುವಿಕೆ.

ವಿಚ್ಛೇದನದ ಕುರಿತು ಹರಡಿದ್ದ ವದಂತಿಗಳಿಗೆ ಸೂರಜ್ ನಂಬಿಯಾರ್ ಸ್ಪಷ್ಟನೆ ನೀಡಿದ್ದು, ಎಲ್ಲಾ ಸುದ್ದಿಗಳನ್ನು ಸುಳ್ಳು ಎಂದು ಹೇಳಿ, ಯಾವುದೇ ಆರ್ಥಿಕ ವಿವಾದ ಅಥವಾ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ ಎಂದು ತಿಳಿಸಿದ್ದಾರೆ.

“ರೈತರ ಆತಂಕಕ್ಕೆ ಅಂತ್ಯ: ಚಿಕ್ಕಮಗಳೂರಿನಲ್ಲಿ ದೈತ್ಯ ಕಾಡುಕೋಣ ಸೆರೆ

ಚಿಕ್ಕಮಗಳೂರು: ರೈತರಿಗೆ ತೀವ್ರ ಕಾಟ ನೀಡುತ್ತಿದ್ದ ಕಾಡುಕೋಣಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆರಂಭಿಸಿದ್ದ ‘ಆಪರೇಷನ್ ಕಾಡುಕೋಣ’ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮೂರು ಕಾಡುಕೋಣಗಳ ಪೈಕಿ ಒಂದು ದೈತ್ಯ ಕಾಡುಕೋಣವನ್ನು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ಕಳೆದ ಎರಡು ದಿನಗಳಿಂದ ಅರಣ್ಯ ಸಿಬ್ಬಂದಿ ನಡೆಸಿದ ಸಂಘಟಿತ ಕಾರ್ಯಾಚರಣೆ ಬಳಿಕ ಈ ಯಶಸ್ಸು ಸಾಧಿಸಲಾಗಿದ್ದು, ರೈತ ಸಮುದಾಯದಲ್ಲಿ ಆತಂಕದ ವಾತಾವರಣ ಕಡಿಮೆಯಾಗಿದೆ. ಈ ರೀತಿಯ ಕಾರ್ಯಾಚರಣೆ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ನಡೆದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಸೆರೆ ಸಿಕ್ಕ ಕಾಡುಕೋಣವನ್ನು ತಕ್ಷಣವೇ ಶಿವಮೊಗ್ಗದ ತ್ಯಾವರೆಕೊಪ್ಪ ವನ್ಯಜೀವಿ ಉದ್ಯಾನಕ್ಕೆ ಸ್ಥಳಾಂತರಿಸಲಾಗಿದೆ.

ಮಲೆನಾಡಿನ ಹಲವು ಭಾಗಗಳಲ್ಲಿ ಬೆಳೆ ನಾಶ ಹಾಗೂ ಜನರ ಮೇಲೆ ದಾಳಿ ಭೀತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಕಾರ್ಯಾಚರಣೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಘಟನೆ ಸ್ಥಳಕ್ಕೆ ಭೇಟಿ ನೀಡಿದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅರಣ್ಯ ಸಿಬ್ಬಂದಿಯ ಕಾರ್ಯವನ್ನು ಪ್ರಶಂಸಿಸಿದ್ದಾರೆ.

ಆದರೆ ಪರಿಸರವಾದಿಗಳು ಈ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಕಾಡುಕೋಣಗಳು ಒತ್ತಡಕ್ಕೆ ಒಳಗಾದರೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

error: Content is protected !!