Home Blog

‘ಆರೋಪಿಗಳನ್ನು ಗುರುತಿಸಬೇಡ’… ರೇಣುಕಾಸ್ವಾಮಿ ಕೇಸ್‌ನಲ್ಲಿ ಸಾಕ್ಷಿಗೆ ವಾಟ್ಸಾಪ್ ಬೆದರಿಕೆ! ಕೋರ್ಟ್‌ನಿಂದ ಭದ್ರತೆಗೆ ಆದೇಶ

ಬೆಂಗಳೂರು: ನಟ ದರ್ಶನ್ ಆರೋಪಿ ಆಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಹೊಸ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯಿಂದ ವಾಟ್ಸಾಪ್ ಕರೆ ಮಾಡಿ ಆರೋಪಿಗಳ ಪರವಾಗಿ ಸಾಕ್ಷ್ಯ ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ನ್ಯಾಯಾಲಯದಲ್ಲಿ ಕೇಳಿಬಂದಿದೆ.

ವಿಚಾರಣೆ ವೇಳೆ ಸಾಕ್ಷಿ, ಅಪರಿಚಿತ ವ್ಯಕ್ತಿಯೊಬ್ಬ ‘ಆರೋಪಿಗಳನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳು, ಬಾರ್‌ನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಪಡಿಸಿಕೊಂಡರು ಎಂದು ಹೇಳು, ಅಪಹರಣ ಮಾಡಿದವರನ್ನು ಗುರುತಿಸಲಾಗುವುದಿಲ್ಲ ಎಂದು ಹೇಳು, ಪೊಲೀಸ್ ಮಹಜರಿನ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳು’ ಎಂದು ಸೂಚಿಸಿದ್ದಾನೆ ಎಂದು ನ್ಯಾಯಾಧೀಶರ ಮುಂದೆ ತಿಳಿಸಿದ್ದಾರೆ.

ಇದರ ಜೊತೆಗೆ, ತಮ್ಮ ಬಾರ್ ಬಳಿ ಅಪರಿಚಿತ ವ್ಯಕ್ತಿಗಳ ಸಂಚಾರ ಹೆಚ್ಚಾಗಿದ್ದು, ನಿರಂತರ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಸಾಕ್ಷಿ ಹೇಳಿದ್ದಾರೆ.

ಈ ಹೇಳಿಕೆಯನ್ನು ದಾಖಲಿಸಿಕೊಂಡ 59ನೇ ಸಿಸಿಎಚ್ ನ್ಯಾಯಾಲಯ, ಸಾಕ್ಷ್ಯ ತಿರುಚುವ ಯತ್ನದ ಕುರಿತು ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಿದೆ. ಜೊತೆಗೆ, ಸಾಕ್ಷಿಯ ಹೇಳಿಕೆ ಪೂರ್ಣಗೊಳ್ಳುವವರೆಗೆ ಭದ್ರತೆ ಒದಗಿಸುವಂತೆ ತನಿಖಾಧಿಕಾರಿಗೆ ನಿರ್ದೇಶನ ನೀಡಿದೆ.

ಪ್ರಕರಣದಲ್ಲಿ ನಟ ದರ್ಶನ್ ಎ2 ಆರೋಪಿಯಾಗಿದ್ದು, ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ಮುಂದುವರಿದಿದೆ. ಇದೇ ವೇಳೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಹಿಂದಿರುವ ವ್ಯಕ್ತಿಗಳು ಯಾರು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ.

ಮೀಟರ್ ರೀಡಿಂಗ್ ಸ್ಥಗಿತ: ಜುಲೈ ಬಿಲ್ ಸರಾಸರಿ ಆಧಾರದಲ್ಲಿ ನೀಡಲು ಬೆಸ್ಕಾಂ ನಿರ್ಧಾರ!

ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಬೆಸ್ಕಾಂ ಗ್ರಾಹಕರಿಗೆ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ. ಬದಲಾಗಿ ಕಳೆದ ಮೂರು ತಿಂಗಳ ವಿದ್ಯುತ್ ಬಳಕೆಯ ಸರಾಸರಿ ಆಧಾರದ ಮೇಲೆ ಬಿಲ್ ನೀಡಲಾಗುತ್ತದೆ.

ಬೆಸ್ಕಾಂ ಪ್ರಕಟಣೆ ಪ್ರಕಾರ, ಜುಲೈ ತಿಂಗಳ ವಿದ್ಯುತ್ ಬಿಲ್ ಅನ್ನು ಕಳೆದ ಮೂರು ತಿಂಗಳ ಸರಾಸರಿ ಬಳಕೆಯನ್ನು ಆಧರಿಸಿ ಸಿದ್ಧಪಡಿಸಿ, ಗ್ರಾಹಕರ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತದೆ.

ಆದರೆ ಎಚ್‌ಟಿ ಗ್ರಾಹಕರು, 40 ಎಚ್‌ಪಿ ಮತ್ತು ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್‌ಟಿ ಗ್ರಾಹಕರು, ಸೋಲಾರ್ ರೂಫ್‌ಟಾಪ್ ಬಳಕೆದಾರರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವವರಿಗೆ ಎಂದಿನಂತೆ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆಯೇ ಬಿಲ್ ನೀಡಲಾಗುತ್ತದೆ.

ಸರಾಸರಿ ಬಿಲ್‌ನಲ್ಲಿ ಹೆಚ್ಚು ಅಥವಾ ಕಡಿಮೆ ಮೊತ್ತ ಬಂದಿದ್ದರೆ, ಆಗಸ್ಟ್ ತಿಂಗಳಿಂದ ನೈಜ ಮೀಟರ್ ರೀಡಿಂಗ್ ಆರಂಭವಾದ ಬಳಿಕ ಅದನ್ನು ಮುಂದಿನ ಬಿಲ್‌ನಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

ಗೃಹ ಜ್ಯೋತಿ ಯೋಜನೆಯ ಪರಿಶೀಲನೆಗಾಗಿ ಮನೆಗಳಿಗೆ ಬರುವ ಬೆಸ್ಕಾಂ ಸಿಬ್ಬಂದಿ ಹಾಗೂ ಮೀಟರ್ ರೀಡರ್‌ಗಳಿಗೆ ಸಾರ್ವಜನಿಕರು ಸಹಕರಿಸಬೇಕು. ಈ ವೇಳೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಪಡಿತರ ಚೀಟಿ ಅಥವಾ ಜಾತಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲನೆಗಾಗಿ ತೋರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ಹಿಂದೂ ವಿವಾಹಕ್ಕೆ ನೋಂದಣಿ ಮಾತ್ರ ಸಾಕಾಗುವುದಿಲ್ಲ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು

ಅಹಮದಾಬಾದ್: ಕೇವಲ ವಿವಾಹ ನೋಂದಣಿ ಮಾಡಿಕೊಂಡರೆ ಹಿಂದೂ ವಿವಾಹ ಕಾನೂನುಬದ್ಧವಾಗುವುದಿಲ್ಲ. ಹಿಂದೂ ಸಂಪ್ರದಾಯದ ಪ್ರಕಾರ ಸಪ್ತಪದಿ ಸೇರಿದಂತೆ ಅಗತ್ಯ ವಿಧಿ-ವಿಧಾನಗಳು ನಡೆದಾಗ ಮಾತ್ರ ವಿವಾಹಕ್ಕೆ ಕಾನೂನು ಮಾನ್ಯತೆ ಸಿಗುತ್ತದೆ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಜೂನ್ 23ರಂದು ನ್ಯಾಯಮೂರ್ತಿಗಳಾದ ಇಲೇಶ್ ವೋರಾ ಮತ್ತು ಆರ್.ಟಿ. ವಚ್ಛಾನಿ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಹಿಂದೂ ವಿವಾಹವು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲ, ಅದು ಧಾರ್ಮಿಕ ಸಂಸ್ಕಾರ ಮತ್ತು ಪವಿತ್ರ ಬಂಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿ ಬ್ರಿಟನ್‌ನಲ್ಲಿ ನೆಲೆಸಿರುವ ಕೌಶಲ್ ಸೋನಾರ್ ಎಂಬುವರು, ಅಹಮದಾಬಾದ್‌ನ ಮಹಿಳೆಯೊಂದಿಗೆ ತಮ್ಮ ಹೆಸರಿನಲ್ಲಿ ನಡೆದಿರುವ ವಿವಾಹವನ್ನು ಅಮಾನ್ಯ ಎಂದು ಘೋಷಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

ತಮ್ಮ ಪೋಷಕರಿಗೆ ವಿವಾಹ ಪ್ರಮಾಣಪತ್ರ ತೋರಿಸಿದ ಬಳಿಕವೇ ಈ ವಿಚಾರ ತಿಳಿಯಿತು. ತಮ್ಮ ಒಪ್ಪಿಗೆಯಿಲ್ಲದೆ ದಾಖಲೆಗಳಲ್ಲಿ ಸಹಿ ಪಡೆಯಲಾಗಿದೆ. ಯಾವುದೇ ಹಿಂದೂ ಸಂಪ್ರದಾಯದ ವಿವಾಹ ವಿಧಿ-ವಿಧಾನಗಳು ನಡೆದಿಲ್ಲ ಹಾಗೂ ಇಬ್ಬರೂ ಪತಿ-ಪತ್ನಿಯಾಗಿ ಎಂದಿಗೂ ಒಟ್ಟಿಗೆ ವಾಸಿಸಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆ ವೇಳೆ ಮಹಿಳೆಯೂ ಸಹ ಕುಟುಂಬ ನ್ಯಾಯಾಲಯದ ಮುಂದೆ ಯಾವುದೇ ವಿವಾಹ ವಿಧಿ-ವಿಧಾನಗಳು ನಡೆದಿಲ್ಲ ಹಾಗೂ ಇಬ್ಬರೂ ಪತಿ-ಪತ್ನಿಯಾಗಿ ಬದುಕಿಲ್ಲ ಎಂದು ಒಪ್ಪಿಕೊಂಡಿದ್ದರು. ಆದರೂ ಅರ್ಜಿಯನ್ನು ತಿರಸ್ಕರಿಸಿದ್ದ ಕುಟುಂಬ ನ್ಯಾಯಾಲಯದ ಆದೇಶ ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ.

ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 7 ಅನ್ನು ಉಲ್ಲೇಖಿಸಿದ ನ್ಯಾಯಾಲಯ, ಹಿಂದೂ ವಿವಾಹವು ಸಂಪ್ರದಾಯದ ಪ್ರಕಾರ ನಡೆಯಬೇಕು. ವಿಶೇಷವಾಗಿ ಸಪ್ತಪದಿ ಹಿಂದೂ ವಿವಾಹದ ಅತ್ಯಂತ ಪ್ರಮುಖ ವಿಧಿಯಾಗಿದ್ದು, ಅದು ನೆರವೇರಿದಾಗ ಮಾತ್ರ ವಿವಾಹಕ್ಕೆ ಧಾರ್ಮಿಕ, ಸಾಮಾಜಿಕ ಮತ್ತು ಕಾನೂನುಬದ್ಧ ಮಾನ್ಯತೆ ದೊರೆಯುತ್ತದೆ ಎಂದು ಸ್ಪಷ್ಟಪಡಿಸಿದೆ.

ಹಿಂದೂ ವಿವಾಹವು ಕೇವಲ ಆಚರಣೆ ಅಥವಾ ಔತಣಕೂಟವಲ್ಲ. ಅದು ಪರಸ್ಪರ ಗೌರವ, ನಂಬಿಕೆ ಮತ್ತು ಜೀವನಪರ್ಯಂತದ ಬಾಂಧವ್ಯದ ಮೇಲೆ ನಿರ್ಮಾಣವಾಗುವ ಪವಿತ್ರ ಸಂಬಂಧವಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಫುಟ್‌ಪಾತ್ ಅತಿಕ್ರಮಣ ಬಿಡಿ, ಇಲ್ಲದಿದ್ದರೆ ಕಠಿಣ ಕ್ರಮ: ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ

ಬೆಂಗಳೂರು: ನಗರದ ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡಿರುವವರು ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ನಡೆಯುತ್ತಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಮಾತನಾಡಿದ ಅವರು, ಪಾದಚಾರಿ ಮಾರ್ಗಗಳಲ್ಲಿ ಸುರಕ್ಷಿತವಾಗಿ ಸಂಚರಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಗರದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವ್ಯಾಪಾರಿಗಳು ತಮ್ಮ ಅಂಗಡಿಗಳ ವ್ಯಾಪ್ತಿಯಲ್ಲೇ ವ್ಯಾಪಾರ ಮಾಡಬೇಕು. ಆದರೆ ಸಾರ್ವಜನಿಕರಿಗಾಗಿ ನಿರ್ಮಿಸಿರುವ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ವ್ಯಾಪಾರ ನಡೆಸುವುದು ಕಾನೂನುಬಾಹಿರ. ಆದ್ದರಿಂದ ಒತ್ತುವರಿ ಮಾಡಿಕೊಂಡಿರುವವರು ತಕ್ಷಣವೇ ಅದನ್ನು ತೆರವುಗೊಳಿಸಬೇಕು ಎಂದು ಸಚಿವರು ಹೇಳಿದರು.

ನಗರದಲ್ಲಿ ಅನೇಕ ಫುಟ್‌ಪಾತ್‌ಗಳು ಅಂಗಡಿಗಳು, ವಾಹನ ನಿಲುಗಡೆ ಹಾಗೂ ಇತರೆ ಅತಿಕ್ರಮಣಗಳಿಂದ ಸಾರ್ವಜನಿಕರಿಗೆ ಬಳಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆದು ಅಪಘಾತಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷಕ್ಕೆ ಸರಾಸರಿ 300 ಮಂದಿ ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಫುಟ್‌ಪಾತ್‌ಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಮುಕ್ತಗೊಳಿಸುವಂತೆ ನಾಗರಿಕರಿಂದ ಸಾಕಷ್ಟು ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBA) ಹಾಗೂ ಪೊಲೀಸರು ಜಂಟಿಯಾಗಿ ನಗರದ ವಿವಿಧ ಭಾಗಗಳಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೊದಲ ಹಂತದಲ್ಲಿ ಹೆಚ್ಚು ಜನಸಂದಣಿ ಇರುವ ಪ್ರಮುಖ ರಸ್ತೆಗಳಲ್ಲಿ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದರು.

ನಾಗುರಿ ದುರಂತದ ಹಿಂದೆ ನಿರ್ಲಕ್ಷ್ಯ? ಮನೆ ಮೇಲೆ ಕುಸಿದ ಕಾಂಪೌಂಡ್ ಗೋಡೆ; ಮೂವರು ಬಲಿ: 5 ಲಕ್ಷ ಪರಿಹಾರ

0

ಮಂಗಳೂರು: ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಇಬ್ಬರು ಪುಟ್ಟ ಬಾಲಕಿಯರು ಸೇರಿ ಮೂವರು ಮೃತಪಟ್ಟ ಪ್ರಕರಣದಲ್ಲಿ ಭಾರಿ ನಿರ್ಲಕ್ಷ್ಯದ ಶಂಕೆ ವ್ಯಕ್ತವಾಗಿದೆ. ಮನೆಯ ಮೇಲೆ ಕುಸಿದ ಕಾಂಪೌಂಡ್ ಗೋಡೆಯೇ ದುರಂತಕ್ಕೆ ಕಾರಣವಾಗಿರಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಮನೆಯ ಹಿಂಭಾಗದ ಕಾಂಪೌಂಡ್ ಗೋಡೆ ಮಳೆ ನೀರಿನ ಒತ್ತಡಕ್ಕೆ ಕುಸಿದು ನೇರವಾಗಿ ಮನೆಯ ಮೇಲೆ ಬಿದ್ದಿದೆ. ಪರಿಣಾಮ ಮನೆಯೊಳಗಿದ್ದ ಆರು ಮಂದಿ ಮಣ್ಣಿನಡಿ ಸಿಲುಕಿಕೊಂಡರು. ತುರ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಓರ್ವ ಪುರುಷ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿದ್ದರೂ, ಓರ್ವ ಮಹಿಳೆ ಹಾಗೂ ನಾಲ್ಕು ವರ್ಷದ ಪರಿ, ಎಂಟು ವರ್ಷದ ಅನಾಮಿಕ ಮೃತಪಟ್ಟಿದ್ದಾರೆ.

ಪರಿ ಮನೆಯ ಮುಂದೆ ಆಟವಾಡುತ್ತಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಂದಮ್ಮನ ದುರಂತ ಸಾವಿಗೆ ಸಾರ್ವಜನಿಕರು ಕಂಬನಿ ಮಿಡಿಯುತ್ತಿದ್ದಾರೆ.

ದುರಂತದ ಬೆನ್ನಲ್ಲೇ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾಂಪೌಂಡ್ ಗೋಡೆಯ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿದೆಯೇ ಎಂಬ ಬಗ್ಗೆ ತಾಂತ್ರಿಕ ತಜ್ಞರಿಂದ ಪರಿಶೀಲನೆ ಆರಂಭಿಸಲಾಗಿದೆ. ಅನಧಿಕೃತ ಗುಡ್ಡ ಅಗೆತ ಅಥವಾ ಕಾಮಗಾರಿ ದೋಷ ಪತ್ತೆಯಾದರೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಜಿಲ್ಲಾಧಿಕಾರಿ ನಿಧಿಯಿಂದ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದ್ದು, ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ಆಷಾಢ ಮಾಸ! ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ: ಈ ದಿನಗಳಂದು ಖಾಸಗಿ ವಾಹನಗಳ ಪ್ರವೇಶ ನಿರ್ಬಂಧ

ಮೈಸೂರು: ಮೈಸೂರಿನ ಪ್ರಸಿದ್ಧ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಲಕ್ಷಾಂತರ ಭಕ್ತರು ದೇವಿ ಚಾಮುಂಡೇಶ್ವರಿಯ ದರ್ಶನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ.

ಈ ವರ್ಷ ಜುಲೈ 17ರಿಂದ ಆಗಸ್ಟ್ 7ರವರೆಗೆ ನಡೆಯುವ ವಿಶೇಷ ಪೂಜಾ ದಿನಗಳಿಗೆ ಭಕ್ತರಿಗೆ ಸುಗಮ ದರ್ಶನ ಕಲ್ಪಿಸಲು ಅಧಿಕಾರಿಗಳು ಸಭೆ ನಡೆಸಿ ಸಿದ್ಧತೆಗಳನ್ನು ಅಂತಿಮಗೊಳಿಸಿದ್ದಾರೆ.

ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪಾರ್ಕಿಂಗ್, ದರ್ಶನ ವ್ಯವಸ್ಥೆ ಹಾಗೂ ಮೂಲ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಈ ಕುರಿತು ಮಾತನಾಡಿದ ಸಚಿವರು, ಕಳೆದ ಬಾರಿ ವಿಐಪಿಗಳ ಸಂಚಾರದಿಂದ ಸಾಮಾನ್ಯ ಭಕ್ತರಿಗೆ ತೊಂದರೆ ಆಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ವ್ಯವಸ್ಥೆ ಸುಧಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮುಖ್ಯವಾಗಿ ಆಷಾಢ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಚಾಮುಂಡಿಬೆಟ್ಟದ ಮೇಲ್ಭಾಗಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಭಕ್ತರು ತಮ್ಮ ವಾಹನಗಳನ್ನು ಲಲಿತ ಮಹಲ್ ಬಳಿ ನಿಲ್ಲಿಸಬೇಕಾಗಿದ್ದು, ಅಲ್ಲಿಂದ ಚಾಮುಂಡಿಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಸಾಗುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಶ್ ‘ಟಾಕ್ಸಿಕ್’ಗೆ ಹೊಸ ಟ್ವಿಸ್ಟ್! ‘ಲೇಡಿಸ್ & ಲೇಡಿಸ್’ ಟೀಸರ್‌ನಲ್ಲಿ ಐದು ಪವರ್‌ಫುಲ್ ಮಹಿಳಾ ಪಾತ್ರಗಳ ರಿವೀಲ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಮತ್ತೊಂದು ಪ್ರಮುಖ ಅಪ್‌ಡೇಟ್ ಹೊರಬಿದ್ದಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ‘ಲೇಡಿಸ್ & ಲೇಡಿಸ್’ ಟೀಸರ್ ಮೂಲಕ ಸಿನಿಮಾದಲ್ಲಿ ನಟಿಸಿರುವ ಐವರು ಪ್ರಮುಖ ನಟಿಯರ ಪಾತ್ರಗಳನ್ನು ಅಧಿಕೃತವಾಗಿ ಪರಿಚಯಿಸಿದ್ದು, ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಶಿ ಈ ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಪ್ರತಿಯೊಬ್ಬರಿಗೂ ವಿಭಿನ್ನ ಲುಕ್ ಹಾಗೂ ಪ್ರತ್ಯೇಕ ಕ್ಯಾರೆಕ್ಟರ್ ಶೇಡ್ ನೀಡಲಾಗಿದ್ದು, ಮಹಿಳಾ ಪಾತ್ರಗಳಿಗೂ ಕಥೆಯಲ್ಲಿ ನಿರ್ಣಾಯಕ ಸ್ಥಾನವಿದೆ ಎಂಬುದು ಸ್ಪಷ್ಟವಾಗಿದೆ.

ಸ್ಟೈಲಿಷ್ ವಿಷ್ಯುಯಲ್ಸ್, ಗ್ಲಾಮರ್, ಆ್ಯಕ್ಷನ್ ಮತ್ತು ಡಾರ್ಕ್ ಥೀಮ್‌ನೊಂದಿಗೆ ಮೂಡಿಬಂದಿರುವ ಟೀಸರ್ ಆರಂಭದಲ್ಲೇ ‘ಡೇಂಜರ್’ ವಾರ್ನಿಂಗ್ ಮೂಲಕ ಕುತೂಹಲ ಹೆಚ್ಚಿಸುತ್ತದೆ. ‘ಮಕ್ಕಳು ದೂರವಿರಿ… ಪೋಷಕರೇ ಎಚ್ಚರ… ಅಜ್ಜ-ಅಜ್ಜಿಯರೂ ನಿಮ್ಮ ರಿಸ್ಕ್’ ಎಂಬ ಸಂದೇಶ ಚಿತ್ರದ ವಿಭಿನ್ನ ಪ್ರಸ್ತುತಿಯನ್ನು ಸೂಚಿಸುತ್ತದೆ.

ಟೀಸರ್‌ನಲ್ಲಿನ ಯಶ್ ಅವರ ‘ಲೇಡಿಸ್ & ಲೇಡಿಸ್… ಒಬ್ಬೊಬ್ಬರಾಗಿ ಬರ್ತೀರಾ, ಒಟ್ಟೊಟ್ಟಿಗೇ ಬರ್ತೀರಾ?’ ಎಂಬ ಡೈಲಾಗ್ ಅಭಿಮಾನಿಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ನಯನತಾರಾ ಉಗ್ರ ವ್ಯಕ್ತಿತ್ವದಲ್ಲಿ, ಕಿಯಾರಾ ಅಡ್ವಾಣಿ ಗ್ಲಾಮರಸ್ ಲುಕ್‌ನಲ್ಲಿ, ತಾರಾ ಸುತಾರಿಯಾ ಅಗ್ರೆಸಿವ್ ಅವತಾರದಲ್ಲಿ, ರುಕ್ಮಿಣಿ ವಸಂತ್ ಗಟ್ಟಿಯಾದ ಪಾತ್ರದಲ್ಲಿ ಹಾಗೂ ಹುಮಾ ಖುರೇಶಿ ತೀವ್ರ ಅಭಿವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಯಶ್ ಪಾತ್ರದ ಸುತ್ತಲೇ ನಿರ್ಮಾಣವಾಗಿದ್ದ ‘ಟಾಕ್ಸಿಕ್’ ಕುತೂಹಲಕ್ಕೆ ಇದೀಗ ಐದು ಮಹಿಳಾ ಪಾತ್ರಗಳ ಸೇರ್ಪಡೆ ಹೊಸ ಆಯಾಮ ನೀಡಿದೆ. ‘ಲೇಡಿಸ್ & ಲೇಡಿಸ್’ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಗರಿಗೆದರಿದೆ.

ಎಲ್‌ಪಿಜಿ ದರದಲ್ಲಿ ಕುಸಿತ! ಆಟೋ ಚಾಲಕರಿಗೆ ಬಿಗ್ ರಿಲೀಫ್, ಲೀಟರ್ ಎಸ್ಟು ಗೊತ್ತಾ?

ಬೆಂಗಳೂರು: ನಿರಂತರ ಎಲ್‌ಪಿಜಿ ದರ ಏರಿಕೆಯಿಂದ ಕಂಗೆಟ್ಟಿದ್ದ ಆಟೋ ಚಾಲಕರಿಗೆ ಕೊನೆಗೂ ಸ್ವಲ್ಪ ನಿರಾಳ ಸಿಕ್ಕಿದೆ.

ಪ್ರಮುಖ ಇಂಧನ ವಿತರಕ ಸಂಸ್ಥೆಯಾದ ಟೋಟಲ್ ಎನರ್ಜೀಸ್ ತನ್ನ ಬಂಕ್‌ಗಳಲ್ಲಿ ಆಟೋ ಎಲ್‌ಪಿಜಿ ದರವನ್ನು ಪ್ರತಿ ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿತಗೊಳಿಸಿದೆ.

ಇದರಿಂದಾಗಿ ಆಟೋ ಎಲ್‌ಪಿಜಿ ದರವು ಈಗ ಸುಮಾರು ₹85ರ ಆಸುಪಾಸಿಗೆ ಇಳಿದಿದೆ ಎಂದು ವರದಿಯಾಗಿದೆ. ಆದರೆ ನಗರದಿಂದ ನಗರಕ್ಕೆ ಸಾಗಣೆ ವೆಚ್ಚದ ಆಧಾರದಲ್ಲಿ ದರದಲ್ಲಿ ಸ್ವಲ್ಪ ವ್ಯತ್ಯಾಸ ಇರುವ ಸಾಧ್ಯತೆಯೂ ಇದೆ.

ಹಿಂದಿನ ಕೆಲವು ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಂಘರ್ಷಗಳಿಂದಾಗಿ ಕಚ್ಚಾ ತೈಲ ಮತ್ತು ಗ್ಯಾಸ್ ಪೂರೈಕೆ ಅಸ್ಥಿರಗೊಂಡಿತ್ತು. ಇದರ ಪರಿಣಾಮವಾಗಿ ಎಲ್‌ಪಿಜಿ ದರವು ದಾಖಲೆಯ ಮಟ್ಟಕ್ಕೆ ಏರಿತ್ತು. ದಿನನಿತ್ಯ ಆಟೋ ಓಡಿಸುವ ಚಾಲಕರಿಗೆ ಇದು ದೊಡ್ಡ ಆರ್ಥಿಕ ಹೊರೆ ಆಗಿತ್ತು.

ಆದರೆ ಈಗ ಜಾಗತಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸ್ಥಿರವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಇಂಧನ ಲಭ್ಯತೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಹಂತ ಹಂತವಾಗಿ ದರ ಇಳಿಕೆ ಕಾಣುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಬೆಲೆ ಇಳಿಕೆಯಿಂದ ಆಟೋ ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ. “ದಿನದ ಆದಾಯದಲ್ಲಿ ದೊಡ್ಡ ಭಾಗ ಗ್ಯಾಸ್‌ಗೆ ಹೋಗುತ್ತಿತ್ತು. ಈಗ ಸ್ವಲ್ಪ ಉಸಿರಾಡುವ ಅವಕಾಶ ಸಿಕ್ಕಿದೆ” ಎಂದು ಅವರು ಹೇಳಿದ್ದಾರೆ.

ಈ ದರ ಇಳಿಕೆಯಿಂದ ಸಾರ್ವಜನಿಕ ಸಾರಿಗೆ ಮೇಲಿನ ಒತ್ತಡವೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್! ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಏರಿಕೆ; ಇವತ್ತಿನ ದರಪಟ್ಟಿ ಇಲ್ಲಿದೆ

ನವದೆಹಲಿ: ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ.

ಮಾಹಿತಿಯ ಪ್ರಕಾರ, ಚಿನ್ನದ ದರ ಗ್ರಾಮ್‌ಗೆ ಸುಮಾರು ₹60 ರೂನಷ್ಟು ಹೆಚ್ಚಳವಾಗಿದೆ. ಇದರಿಂದ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ ₹1,29,050ಕ್ಕೆ ತಲುಪಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ ₹1,40,780 ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,29,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,40,780 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,29,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,078 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,905 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,559 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:

    • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,078 ರೂ
    • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,905 ರೂ
    • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ.

ವಿಜಯಪುರದಲ್ಲಿ ಕೋಚ್ ಡಿಪೋ ಸ್ಥಾಪನೆಗೆ ಮನವಿ: ಕೇಂದ್ರಕ್ಕೆ ಎಂ.ಬಿ. ಪಾಟೀಲ್ ಪತ್ರ!

ಬೆಂಗಳೂರು: ವಿಜಯಪುರದಲ್ಲಿ ರೈಲ್ವೆ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲು ಕೋಚ್ ಡಿಪೋ ಸ್ಥಾಪಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಸಹಾಯಕ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತು ಈಗಾಗಲೇ ಸಚಿವ ಸೋಮಣ್ಣ ಅವರೊಂದಿಗೆ ಚರ್ಚೆ ನಡೆದಿದ್ದು, ಅಧಿಕೃತವಾಗಿ ಕೇಂದ್ರ ರೈಲ್ವೆ ಸಚಿವರಿಗೂ ಪತ್ರ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ವಿಜಯಪುರ ರೈಲು ನಿಲ್ದಾಣದ ಆವರಣದಲ್ಲಿ ಇದ್ದ ಗೂಡ್ಸ್ ಶೆಡ್ ಅನ್ನು ಅಲಿಯಾಬಾದ್‌ಗೆ ಸ್ಥಳಾಂತರಿಸಿರುವುದರಿಂದ ಕೋಚ್ ಡಿಪೋ ಸ್ಥಾಪನೆಗೆ ಅಗತ್ಯವಾದ ಜಾಗ ಲಭ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಡಿಪೋ ಸ್ಥಾಪನೆಯಾದರೆ ವಿಜಯಪುರವನ್ನು ಪ್ರಮುಖ ರೈಲು ನಿರ್ವಹಣಾ ಹಬ್ ಆಗಿ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿಜಯಪುರವು ಚಾರಿತ್ರಿಕ ಹಾಗೂ ಪ್ರವಾಸಿ ತಾಣವಾಗಿರುವುದರಿಂದ ವರ್ಷಪೂರ್ತಿ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಹಬ್ಬ, ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಹೆಚ್ಚಿನ ಜನದಟ್ಟಣೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಮತ್ತೊಂದು ಆಗಮನ ಹಾಗೂ ನಿರ್ಗಮನ ದ್ವಾರವನ್ನು ಅಭಿವೃದ್ಧಿಪಡಿಸಬೇಕು ಎಂಬುದೂ ಮನವಿಯಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.