Home Blog

ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ: ಬಿಜೆಪಿ ರೈತ ಮೋರ್ಚಾ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಗದಗ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಡಿ.ವೈ. ಹುನಗುಂದ, ಹವಾಮಾನ ವೈಪರೀತ್ಯ, ಅಸಮರ್ಪಕ ಮಳೆ, ಬೆಳೆ ವೈಫಲ್ಯ, ದುಬಾರಿ ಬೀಜ ಹಾಗೂ ರಸಗೊಬ್ಬರ, ಮಾರುಕಟ್ಟೆಯ ಬೆಲೆ ಕುಸಿತದಿಂದ ಜಿಲ್ಲೆಯ ರೈತರು ಆರ್ಥಿಕವಾಗಿ ಸಂಪೂರ್ಣ ಕಂಗೆಟ್ಟಿದ್ದಾರೆ. ಬೆಳೆ ಬೆಳೆಯಲು ಮಾಡಿದ ಹೂಡಿಕೆಯನ್ನೂ ಮರಳಿ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಪರಿಹಾರ ಪ್ಯಾಕೇಜ್ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ರಾಜ್ಯ ಸರ್ಕಾರದ ಪರಿಹಾರ ನಿಧಿಯಡಿ ಬಾಕಿ ಉಳಿದಿರುವ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರದ ಮೊತ್ತವನ್ನು ಎರಡು ವಾರಗಳೊಳಗೆ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಡ್ಡಾಯವಾಗಿ ಜಾರಿಗೊಳಿಸಿ, ಖಾಸಗಿ ಮಧ್ಯವರ್ತಿಗಳ ಶೋಷಣೆ ತಪ್ಪಿಸಲು ಜಿಲ್ಲೆಯಲ್ಲಿ ಅಗತ್ಯ ಸಂಖ್ಯೆಯ ಸರ್ಕಾರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ಅಘೋಷಿತ ವಿದ್ಯುತ್ ಕಡಿತ ಹಾಗೂ ವೋಲ್ಟೇಜ್ ಏರಿಳಿತದಿಂದ ಪಂಪ್‌ಸೆಟ್‌ಗಳು ಹಾಳಾಗುತ್ತಿದ್ದು, ಹಗಲು ವೇಳೆಯಲ್ಲಿ ಕನಿಷ್ಠ ಏಳು ಗಂಟೆಗಳ ಗುಣಮಟ್ಟದ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ಹಿಂಗಾರು ಹಂಗಾಮಿಗೆ ಮುನ್ನವೇ ರೈತ ಸಂಪರ್ಕ ಕೇಂದ್ರ ಹಾಗೂ ಸಹಕಾರ ಸಂಘಗಳ ಮೂಲಕ ಸಬ್ಸಿಡಿ ದರದಲ್ಲಿ ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ವಿತರಿಸಬೇಕು. ನಕಲಿ ಕೃಷಿ ಪರಿಕರ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಅವರ ಪರವಾನಗಿ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ ಮಾತನಾಡಿ, ಸರಣಿ ಬೆಳೆ ವೈಫಲ್ಯದಿಂದ ಕಂಗಾಲಾಗಿರುವ ರೈತರಿಗೆ ಬ್ಯಾಂಕುಗಳು ಸಾಲ ವಸೂಲಾತಿ ಹೆಸರಿನಲ್ಲಿ ನೀಡುತ್ತಿರುವ ಕಿರುಕುಳವನ್ನು ತಕ್ಷಣ ನಿಲ್ಲಿಸಬೇಕು. ಕೃಷಿ ಸಾಲಮನ್ನಾ ಪ್ರಕ್ರಿಯೆಗೆ ಚಾಲನೆ ನೀಡುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಬರ ಕಾಮಗಾರಿಗಳನ್ನು ಆರಂಭಿಸಿ ಕೂಲಿಕಾರರ ಗುಳೆ ತಪ್ಪಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳನ್ನು ಜಿಲ್ಲಾಡಳಿತ ತಕ್ಷಣವೇ ರಾಜ್ಯ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲೆಯ ಪ್ರಮುಖ ಹೆದ್ದಾರಿಗಳನ್ನು ತಡೆದು, ಸರ್ಕಾರಿ ಕಚೇರಿಗಳ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ಎಚ್ಚರಿಕೆ ನೀಡಿತು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ
ಪ್ರಧಾನ ಕಾರ್ಯದರ್ಶಿ ಮಹೇಶ್ ಶಿರಹಟ್ಟಿ, ಅಶೋಕ್ ಬ್ಯಾಹಟ್ಟಿ, ಎಂ.ಎಸ್. ಕರಿಗೌಡ್ರ, ಚನ್ನವೀರಪ್ಪ ಹೂಗಾರ, ಫಕ್ಕೀರೇಶ ರಟ್ಟಿಹಳ್ಳಿ, ವೈ.ಪಿ. ಅಡ್ನೂರ, ಸಂತೋಷ ಅಕ್ಕಿ, ಭೀಮಸಿಂಗ್ ರಾಠೋಡ್, ದೇವರಾಜ ಮೇಟಿ, ಶಂಕರ ಕರಿಬಿಷ್ಟಿ, ರವಿ ವಗ್ಗನವರ, ಸುರೇಶ್ ಮರಳಪ್ಪನವರ, ಬುಡಪ್ಪ ಹಳ್ಳಿ, ಲಕ್ಷ್ಮಣ ರಣತೂರು, ಬಸವರಾಜ ಕುರ್ತಕೋಟಿ, ರಮೇಶ್ ಸಜ್ಜಗಾರ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

“ಮಳೆ ಇಲ್ಲ, ಬೆಳೆ ಇಲ್ಲ, ಪರಿಹಾರವೂ ಇಲ್ಲ. ರೈತರ ಬದುಕು ಉಳಿಸಬೇಕಾದರೆ ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ಸರ್ಕಾರ ನೆರವಿಗೆ ಬರಬೇಕು.” 

ಡಿ.ವೈ. ಹುನಗುಂದ, ಜಿಲ್ಲಾಧ್ಯಕ್ಷ, ಬಿಜೆಪಿ ರೈತ ಮೋರ್ಚಾ

ನಿಖರ ದತ್ತಾಂಶವೇ ಅಭಿವೃದ್ಧಿಯ ದಿಕ್ಸೂಚಿ: ಸಿ.ಆರ್. ಮುಂಡರಗಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪಾರದರ್ಶಕ, ಜವಾಬ್ದಾರಿಯುತ ಹಾಗೂ ಜನಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸಲು ನಿಖರವಾದ ಅಂಕಿ-ಅಂಶಗಳು ಮತ್ತು ಆಡಳಿತಾತ್ಮಕ ದತ್ತಾಂಶದ ಸಮರ್ಪಕ ಬಳಕೆ ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ವತಿಯಿಂದ ಭಾರತೀಯ ಸಂಖ್ಯಾಶಾಸ್ತ್ರದ ಪಿತಾಮಹ ಪ್ರೊ. ಪಿ.ಸಿ. ಮಹಲನೋಬಿಸ್ ಅವರ ಜನ್ಮದಿನದ ಅಂಗವಾಗಿ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ (ಮಹಲನೋಬಿಸ್ ದಿನಾಚರಣೆ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ವರ್ಷದ ಧ್ಯೇಯವಾದ “ಆಡಳಿತಾತ್ಮಕ ದತ್ತಾಂಶದ ಸಾಮರ್ಥ್ಯವನ್ನು ಮುಕ್ತಗೊಳಿಸುವುದು” ಎಂಬ ಪರಿಕಲ್ಪನೆಯನ್ನು ಪ್ರತಿಯೊಂದು ಸರ್ಕಾರಿ ಇಲಾಖೆಯ ಕಾರ್ಯವೈಖರಿಯಲ್ಲಿ ಅಳವಡಿಸಿಕೊಳ್ಳಬೇಕು. ವಿಶ್ವಾಸಾರ್ಹ ದತ್ತಾಂಶದ ಆಧಾರದ ಮೇಲೆ ತೆಗೆದುಕೊಳ್ಳುವ ನಿರ್ಧಾರಗಳು ಆಡಳಿತದ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸುತ್ತವೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಜಯದೇವಿ ಅರಕೇರಿಮಠ ಮಾತನಾಡಿ, ಆಡಳಿತಾತ್ಮಕ ದತ್ತಾಂಶವನ್ನು ಕೇವಲ ದಾಖಲೆಯಾಗಿ ಸಂಗ್ರಹಿಸಿಡದೇ, ಅಭಿವೃದ್ಧಿ ಯೋಜನೆಗಳ ರೂಪುರೇಷೆ, ನೀತಿ ನಿರೂಪಣೆ ಹಾಗೂ ದೈನಂದಿನ ಆಡಳಿತಾತ್ಮಕ ನಿರ್ಧಾರಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಮಾನವ ಅಭಿವೃದ್ಧಿ ಸೂಚ್ಯಂಕ ಸೇರಿದಂತೆ ವಿವಿಧ ಅಭಿವೃದ್ಧಿ ಮಾನದಂಡಗಳ ನಿರ್ಧಾರದಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಮಹತ್ವದ್ದಾಗಿದೆ. ದೇಶದ ಆರ್ಥಿಕ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಪ್ರೊ. ಪಿ.ಸಿ. ಮಹಲನೋಬಿಸ್ ಅವರ ಕೊಡುಗೆ ಶಾಶ್ವತವಾಗಿ ಸ್ಮರಣೀಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಬಿ.ಎಸ್. ಪಾಟೀಲ ಮಾತನಾಡಿ, ಇಲಾಖೆಯ ಸಿಬ್ಬಂದಿ ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ನಿಖರತೆಗೆ ಆದ್ಯತೆ ನೀಡಿ, ಜನಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿವೃತ್ತ ಹಿರಿಯ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಬಿ.ಎಲ್. ಕೊಪ್ಪಳ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಸಾಂಖ್ಯಿಕ ನಿರೀಕ್ಷಕಿ ಶ್ರುತಿ ಕದಂ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಅರ್ಜುನ ಕಾರ್ಯಕ್ರಮ ನಿರೂಪಿಸಿದರು. ಗಣತಿದಾರ ಕಾವ್ಯ ಕುಸ್ಲಾಪೂರು ವಂದಿಸಿದರು.

“ನಿಖರ ಅಂಕಿ-ಅಂಶಗಳ ಆಧಾರದ ಮೇಲೆ ರೂಪಿಸುವ ನೀತಿಗಳು ಮತ್ತು ಯೋಜನೆಗಳೇ ಪರಿಣಾಮಕಾರಿ ಆಡಳಿತಕ್ಕೆ ಬಲ ನೀಡುತ್ತವೆ.”

– ಸಿ.ಆರ್. ಮುಂಡರಗಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ

ಜು.19ರಂದು ರಾಷ್ಟ್ರೀಯ ಭೋವಿ ಜನೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಜುಲೈ 19ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಷ್ಟ್ರೀಯ ಭೋವಿ ಜನೋತ್ಸವ ಭೋವಿ ಸಮಾಜದ ಐಕ್ಯತೆ, ಹಕ್ಕುಗಳು ಮತ್ತು ಭವಿಷ್ಯದ ಬೇಡಿಕೆಗಳನ್ನು ಪ್ರತಿಧ್ವನಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ಭೋವಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ರವಿ ಪೂಜಾರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಗುರುಗಳ ಜನ್ಮೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಮಾಜದ ಬಾಂಧವರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಲಿದ್ದು, ವಧು–ವರರ ಸಮಾವೇಶ ಮತ್ತು ಬೃಹತ್ ರಕ್ತದಾನ ಶಿಬಿರ ಕೂಡ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉದ್ಘಾಟಿಸಲಿದ್ದು, ವಿವಿಧ ರಾಜ್ಯಗಳ ಭೋವಿ ಸಮಾಜದ ಮುಖಂಡರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಭೋವಿ ಸಮಾಜವನ್ನು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರವಿ ಗುಂಜಿಕರ್ ತಿಳಿಸಿದರು.

ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಿಂದ ಚಿತ್ರದುರ್ಗಕ್ಕೆ ತೆರಳಲು ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, 10 ಸಾವಿರಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಯಕ್ಕ ಕಳ್ಳಿ, ರಾಘವೇಂದ್ರ ಧಾರವಾಡ, ಆಂಜನೇಯ ಕಟಗಿ, ಹುಚ್ಚಪ್ಪ ಸಂದಕದ, ಸೋಮು ಗುಡಿ, ಪರಶುರಾಮ ಕರಡಿಕೊಳ್ಳ, ಪವನ್ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಒಳಮೀಸಲಾತಿಯಲ್ಲಿ ಭೋವಿ ಸಮಾಜಕ್ಕೆ ನ್ಯಾಯ ಸಿಗಬೇಕು. ಸಚಿವ ಸಂಪುಟದಲ್ಲಿ ಸಮಾಜಕ್ಕೆ ಪ್ರಾತಿನಿಧ್ಯ, ಕಲ್ಲು ಗಣಿಗಾರಿಕೆ ಕ್ಷೇತ್ರದಲ್ಲಿ ಮೀಸಲಾತಿ, ವಿಧಾನ ಪರಿಷತ್‌ನಲ್ಲಿ ಅವಕಾಶ ಹಾಗೂ ವಿಶ್ವವಿದ್ಯಾಲಯಗಳ ಕುಲಪತಿ ನೇಮಕಾತಿಯಲ್ಲಿ ಸಮಾಜಕ್ಕೆ ಆದ್ಯತೆ ನೀಡಬೇಕು.”

— ರವಿ ಪೂಜಾರ, ರಾಜ್ಯ ಕಾರ್ಯಾಧ್ಯಕ್ಷ, ಭೋವಿ ಸಮಾಜ

ಜುಲೈ 12ರಂದು ಪಂಚಮಸಾಲಿ ಸಾಧಕರಿಗೆ ಪ್ರತಿಭಾ ಪುರಸ್ಕಾರ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಜುಲೈ 12ರಂದು ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಸಮಾಜದ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2,230ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಆಯ್ಕೆಯಾದವರಿಗೆ ಗೌರವಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕೂಡಲ ಸಂಗಮದ ಶ್ರೀ ಬಸವಮೃತ್ಯುಂಜಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ. ಪಾಟೀಲ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಮುರಗೇಶ ನಿರಾಣಿ, ಶಾಸಕ ಅರವಿಂದ ಬೆಲ್ಲದ, ಮಾಜಿ ಸಚಿವ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಶಿವಲೀಲಾ ಕುಲಕರ್ಣಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಮೇಶ ರೋಣದ, ಚಂದ್ರು ಪಾಟೀಲ, ಶರಣಪ್ಪ ಗೋಳಗೊಣಕಿ, ಕೆ.ವಿ. ಗದಗಿನ, ರವಿ ಮಾನೆ, ಕುಮಾರ ಗದಗಿನ, ಸಂಗಮೇಶ ಗೊಂದಿ, ಮಂಜುನಾಥ ಬಾಣದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅಕ್ರಮ ಗರಸು ದಂಧೆಗೆ ಕಡಿವಾಣ ಹಾಕಿ!

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ನಾಗಾವಿ ಹಾಗೂ ಕಳಸಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಗಳಲ್ಲಿ ಅಕ್ರಮವಾಗಿ ಗರಸು ಮತ್ತು ಮ್ಯಾಂಗನೀಸ್ (ಅದಿರು) ಗಣಿಗಾರಿಕೆ ನಡೆಯುತ್ತಿದ್ದು, ತಕ್ಷಣವೇ ದಂಧೆ ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಈ ಕುರಿತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಕರವೇ ಗದಗ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ರಾತ್ರಿ-ಹಗಲು ಎನ್ನದೆ ಯಾವುದೇ ಅಧಿಕಾರಿಗಳ ಭಯವಿಲ್ಲದೆ ಅಕ್ರಮ ಗಣಿಗಾರಿಕೆ ಹಾಗೂ ಸಾಗಣೆ ನಡೆಯುತ್ತಿದೆ. ಇದರಿಂದ ಕೆಲ ಅಧಿಕಾರಿಗಳ ಪಾತ್ರದ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.

ಗುಡ್ಡ ಹಾಗೂ ಗೋಮಾಳ ಜಾಗಗಳಲ್ಲಿ ಭಾರಿ ಗಾತ್ರದ ಗುಂಡಿಗಳನ್ನು ತೋಡಿ ಗರಸು ಮತ್ತು ಮ್ಯಾಂಗನೀಸ್ ಸಾಗಿಸಲಾಗುತ್ತಿದೆ. ಈ ಗುಂಡಿಗಳಲ್ಲಿ ರೈತರು ಹಾಗೂ ಜಾನುವಾರುಗಳು ಬಿದ್ದು ಪ್ರಾಣ ಕಳೆದುಕೊಳ್ಳುವಂತಹ ಅಪಾಯ ಎದುರಾಗಿದೆ. ಆದ್ದರಿಂದ ಕೂಡಲೇ ಗುಂಡಿಗಳನ್ನು ಮುಚ್ಚಿ, ತಂತಿ ಬೇಲಿ ಅಳವಡಿಸಿ ಸಾರ್ವಜನಿಕರು ಹಾಗೂ ಜಾನುವಾರುಗಳ ಸುರಕ್ಷತೆ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗರಸು ಮತ್ತು ಮ್ಯಾಂಗನೀಸ್ ಸಾಗಣೆಯನ್ನು ತಕ್ಷಣವೇ ತಡೆದು ಕಾನೂನು ಕ್ರಮ ಕೈಗೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದರೆ ಗದಗ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾರುತಿ ಈಳಗೇರ, ಹನುಮಂತ ಪೂಜಾರ, ತೌಶೀಫ್ ಡಾಲಾಯತ್, ಬಸವರಾಜ ಮೇಟಿ, ಲಕ್ಷ್ಮೀ ಹಿತ್ತಲಮನಿ, ಹುಸೇನಸಾಬ ಕುಂಡಾಲಿ, ದಾವಲಸಾಬ ತಹಶೀಲ್ದಾರ, ರವಿ ಮಲ್ಲಾಡದ, ಮುಸ್ತಾಫ ದಾವಣಗೇರಿ, ಹುಸೇನ ಅಕ್ಕಿ, ರೂಪಾ ಅಬ್ಬಿಗೇರಿ, ಖಾಸಿಂಸಾಬ್ ವಾಲಿಕಾರ, ಇಸಾರಅಹಮ್ಮದ್ ನದಾಫ್, ಸಿರಾಜ್ ಹೊಸಮನಿ, ಕುಮಾರ ರೆವಣ್ಣನವರ, ಪ್ರಕಾಶ ನಂದಿಕೋಡೆ, ಯೂಸೂಫ್ ಗದಗ, ಪ್ರಶಾಂತ್ ನವಲಗುಂದ ಹಾಗೂ ಶಂಭು ಹಿರೇಮಠ ಉಪಸ್ಥಿತರಿದ್ದರು.

ಆತ್ಮಶುದ್ಧಿಗೆ ‘ಶಾಂತಿನಾಥ ವಿಧಾನ’ದ ಮಹತ್ವ: ಮುನಿಶ್ರೀ ವಿದಿತಸಾಗರ ಮಹಾರಾಜರು

0

ವಿಜಯಸಾಕ್ಷಿ ಸುದ್ದಿ, ಗದಗ: ಜೈನ ಧರ್ಮದ ವಿಧಿವಿಧಾನಗಳು ಆತ್ಮದ ಶುದ್ಧೀಕರಣ ಹಾಗೂ ಕರ್ಮಗಳ ವಿನಾಶಕ್ಕೆ ಮಹತ್ವದ ಸಾಧನಗಳಾಗಿದ್ದು, ‘ಶ್ರೀ ಶಾಂತಿನಾಥ ವಿಧಾನ’ ಅತ್ಯಂತ ಪವಿತ್ರ ಮತ್ತು ಪ್ರಭಾವಶಾಲಿ ಪೂಜಾ ಆಚರಣೆಯಾಗಿದೆ ಎಂದು ಚರ್ಯಾಶಿರೋಮಣಿ ಪರಮಪೂಜ್ಯ ಮುನಿಶ್ರೀ ವಿದಿತಸಾಗರ ಮಹಾರಾಜರು ಹೇಳಿದರು.

ನಗರದ ಹುಡ್ಕೋ ಕಾಲೋನಿಯ ಸಚ್ಚಿದಾನಂದ ಮಠದ ಭವನದಲ್ಲಿ ಗದಗ ಜಿಲ್ಲಾ ದಿಗಂಬರ ಜೈನ ಸಂಘ ಆಯೋಜಿಸಿದ್ದ ‘ಶ್ರೀ ಶಾಂತಿನಾಥ ವಿಧಾನ’ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜೈನ ಪರಂಪರೆಯ 16ನೇ ತೀರ್ಥಂಕರರಾದ ಶಾಂತಿನಾಥರನ್ನು ‘ಶಾಂತಿಯ ಅಧಿದೇವತೆ’ಯಾಗಿ ಆರಾಧಿಸಲಾಗುತ್ತದೆ. ಈ ವಿಧಾನ ಆಚರಿಸುವುದರಿಂದ ಮನಸ್ಸಿನಲ್ಲಿರುವ ಒತ್ತಡ, ಕೋಪ, ಕ್ರೌರ್ಯ ದೂರವಾಗಿ ಅಹಿಂಸೆ ಮತ್ತು ವಿಶ್ವಶಾಂತಿಯ ಸಂದೇಶ ಬಲಗೊಳ್ಳುತ್ತದೆ ಎಂದು ತಿಳಿಸಿದರು.

ವ್ಯಾಪಾರ, ಉದ್ಯೋಗ, ಶಿಕ್ಷಣ, ಕುಟುಂಬ ಜೀವನದಲ್ಲಿನ ವಿಘ್ನಗಳು ಹಾಗೂ ಪ್ರಾಕೃತಿಕ ವಿಕೋಪಗಳಿಂದ ರಕ್ಷಣೆಗಾಗಿ ಈ ವಿಧಾನವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಜಲ, ಚಂದನ, ಅಕ್ಷತೆ, ಪುಷ್ಪ, ದೀಪ, ಧೂಪ, ಫಲ ಹಾಗೂ ಅರ್ಘ್ಯ ಎಂಬ ಅಷ್ಟದ್ರವ್ಯಗಳಿಂದ ತೀರ್ಥಂಕರರಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ ಎಂದು ವಿವರಿಸಿದರು.

ಸಂಘದ ಗೌರವಾಧ್ಯಕ್ಷ ಡಾ. ಅಪ್ಪಣ್ಣ ಹಂಜೆ ಮಾತನಾಡಿ, ಗದಗ ಪ್ರದೇಶದಲ್ಲಿ 7ನೇ ಶತಮಾನದಿಂದಲೇ ಜೈನ ಮುನಿಗಳು ಹಾಗೂ ಆರ್ಯಿಕೆಯರು ಧರ್ಮಪ್ರಭಾವನೆ ನಡೆಸುತ್ತ ಬಂದಿದ್ದು, ಆ ಪರಂಪರೆಯನ್ನು ಮುನಿಶ್ರೀ ವಿದಿತಸಾಗರ ಮಹಾರಾಜರು ಮುಂದುವರಿಸುತ್ತಿರುವುದು ಜಿಲ್ಲೆಯ ಜೈನ ಸಮಾಜದ ಸೌಭಾಗ್ಯ ಎಂದರು.

ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಮಾತನಾಡಿ, ಗದಗ ನಗರದಲ್ಲಿ ಬಸದಿ ಹಾಗೂ ಸಭಾಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವ ಭರವಸೆಯನ್ನು ಸಚಿವ ಎಚ್.ಕೆ. ಪಾಟೀಲ ನೀಡಿದ್ದಾರೆ. ಸರ್ಕಾರ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಶೀಘ್ರದಲ್ಲೇ ಬಸದಿ ನಿರ್ಮಿಸಿ ಜೈನ ಧಾರ್ಮಿಕ ಮತ್ತು ಲೋಕಕಲ್ಯಾಣ ಚಟುವಟಿಕೆಗಳನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಕಾಶ ಮುತ್ತಿನ, ಸಂಕಪ್ಪ ನಾವಳ್ಳಿ, ಎಂ.ಟಿ. ಕಬ್ಬಿಣ, ಸಂಜೀವಕುಮಾರ್ ಪಾಂಡ್ರೆ, ಎ.ಎನ್. ಬಸ್ತಿ, ನಾಗರಾಜ ತುಕೋಳ, ಯಶವಂತ ಸಿದ್ದಣ್ಣವರ, ಸುಭಾಷ ಅಂಗಡಿ, ಅನಂತರಾಜ ಬಸ್ತಿ, ರವಿ ಮುತ್ತಿನ, ಎ.ವೈ. ಇಂಚಲ, ಹನಮಂತಗೌಡ ಮತಗಟ್ಟಿ, ಬಿ.ಎಸ್. ನಾವಳ್ಳಿ, ಪರಿಮಳಾ ಕುಲಕರ್ಣಿ, ಸಹನಾ ಹಂಜೆ, ಸುಮನ ಮುತ್ತಿನ, ಶೋಭಕ್ಕ ಇಂಚಲ, ವಸಂತಮಾಲಾ ದೇಸಾಯಿ, ಅನಂತಮತಿ ಬಸ್ತಿ, ಸುಪ್ರಿಯಾ ನಾವಳ್ಳಿ, ಮಧುಮತಿ ಕಬ್ಬಿಣ ಸೇರಿದಂತೆ ಜಿಲ್ಲೆಯ ಶ್ರಾವಕ-ಶ್ರಾವಿಕೆಯರು ಅಷ್ಟದ್ರವ್ಯಗಳಿಂದ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಪ್ರಕಾಶ ಮುತ್ತಿನ ವಂದಿಸಿದರು. ಶಾಂತಿನಾಥ ತೀರ್ಥಂಕರರಿಗೆ ಮಹಾಮಂಗಳಾರತಿ ನೆರವೇರಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮ ಸಂಪನ್ನವಾಯಿತು.

ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ; ಕರಾವಳಿಗೆ ವ್ಯಾಪಕ ವರ್ಷಧಾರೆಯ ಮುನ್ಸೂಚನೆ!

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಜುಲೈ 12ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕೆಲವೆಡೆ ಕೂಡ ಮಳೆಯಾಗುವ ನಿರೀಕ್ಷೆ ಇದೆ.

ಇನ್ನು ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ದಾಖಲೆ ಮಳೆ:

ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ತೋಟದೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು 82 ಮಿ.ಮೀ. ಮಳೆಯಾಗಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಲ್ಯಾಡಿಯಲ್ಲಿ 75.5 ಮಿ.ಮೀ., ಹಾಸನ ಜಿಲ್ಲೆಯ ಸಕಲೇಶಪುರದ ಹೊಗದಹಳ್ಳದಲ್ಲಿ 71.5 ಮಿ.ಮೀ., ಕೊಡಗಿನ ವಿರಾಜಪೇಟೆಯ ಬಿರುನಾನಿಯಲ್ಲಿ 71 ಮಿ.ಮೀ. ಮಳೆಯಾಗಿದೆ.

ಶಿವಮೊಗ್ಗದ ಆಗುಂಬೆಯಲ್ಲಿ 50 ಮಿ.ಮೀ., ಉತ್ತರ ಕನ್ನಡದ ಹೊನ್ನಾವರದ ನಗರಬಸ್ತಿಕೇರಿಯಲ್ಲಿ 43 ಮಿ.ಮೀ., ಉಡುಪಿ ಜಿಲ್ಲೆಯ ಕುಂದಾಪುರದ ಹೊಸಂಗಡಿಯಲ್ಲಿ 38 ಮಿ.ಮೀ. ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೋರಮಂಗಲದಲ್ಲಿ 36 ಮಿ.ಮೀ. ಮಳೆಯಾಗಿದೆ.

ಪುಣ್ಯಕ್ಷೇತ್ರಗಳ ಯಾತ್ರೆಯಿಂದ ಜೀವನ ಸಾರ್ಥಕ: ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಪುಣ್ಯಕ್ಷೇತ್ರಗಳ ಯಾತ್ರೆ ಹಾಗೂ ದರ್ಶನದಿಂದ ಮಾನವ ಜನ್ಮ ಸಾರ್ಥಕವಾಗುವುದಲ್ಲದೆ ಪುಣ್ಯದ ಫಲವೂ ಲಭಿಸುತ್ತದೆ. ಆದ್ದರಿಂದ ಕೈಕಾಲು ಗಟ್ಟಿಯಾಗಿರುವಾಗಲೇ ಪವಿತ್ರ ಕ್ಷೇತ್ರಗಳ ಯಾತ್ರೆ ಕೈಗೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಅಡ್ನೂರು ಬೃಹನ್ಮಠದ ಪರಮಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ನಗರದ ಶ್ರೀ ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ನಡೆದ ಶ್ರೀಮಠದ 349ನೇ ಮಾಸಿಕ ಶಿವಾನುಭವ ಹಾಗೂ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪುಣ್ಯಕ್ಷೇತ್ರಗಳ ದರ್ಶನದಿಂದ ಆಧ್ಯಾತ್ಮಿಕ ನೆಮ್ಮದಿ ಹಾಗೂ ಬದುಕಿಗೆ ಹೊಸ ಅರ್ಥ ಸಿಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಶ್ರೀ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ವೇ. ಶ್ರೀ ಮಹೇಶ್ವರ ಸ್ವಾಮಿಗಳು, ಲಿಂಗೈಕ್ಯ ಗಂಗಾಧರ ಮಹಾಸ್ವಾಮಿಗಳು, ಉದ್ಯಮಿ ಕೆ. ಸುಧಾಕರ್ ರಾವ್, ಶಿಕ್ಷಣ ತಜ್ಞ ಡಾ. ಬಿ.ಎಫ್. ದಂಡಿನ ಹಾಗೂ ಸಂಗೀತ ಸೇವಕ ಪಾಂಡುರಂಗ ಕುರ್ತಕೋಟಿ ಅವರ ಸಮಾಜಮುಖಿ ಸೇವೆಯನ್ನು ಸ್ಮರಿಸಿದರು.

ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದ ಪ್ರೊ. ವಿರೂಪಾಕ್ಷಯ್ಯ ಹೊಸಳ್ಳಿಮಠ ಮಾತನಾಡಿ, ಕೇದಾರನಾಥ ಹಾಗೂ ಬದರಿನಾಥದಂತಹ ಹಿಮಾಲಯದ ಪುಣ್ಯಕ್ಷೇತ್ರಗಳ ದರ್ಶನ ಜೀವನದಲ್ಲಿ ಒಮ್ಮೆಯಾದರೂ ಪಡೆಯುವುದು ಪ್ರತಿಯೊಬ್ಬರಿಗೂ ಸಿಗಬೇಕಾದ ಅಪರೂಪದ ಭಾಗ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾನುಭವ ಸಮಿತಿಯ ಅಧ್ಯಕ್ಷ ಹಾಗೂ ಸಾಹಿತಿ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿ, ಶಾರದಾ, ಕೇದಾರ, ಬದರಿನಾಥ ಸೇರಿದಂತೆ ಪವಿತ್ರ ಕ್ಷೇತ್ರಗಳ ಯಾತ್ರೆಯಿಂದ ಮನಸ್ಸಿಗೆ ಶಾಂತಿ ದೊರೆಯುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕೇದಾರನಾಥ-ಬದರಿನಾಥ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಮಾಡಿದ ಪ್ರೊ. ವಿರೂಪಾಕ್ಷಯ್ಯ ಹೊಸಳ್ಳಿಮಠ ದಂಪತಿ, ವಿಜಯಕುಮಾರ ಹಿರೇಮಠ ದಂಪತಿ, ಸಾಹಿತಿ ಡಾ. ರಾಜೇಂದ್ರ ಎಸ್. ಗಡಾದ ಹಾಗೂ ಶ್ರೀಮತಿ ಜ್ಯೋತಿ ಗಡಾದ, ಕಬಾಡಿ ಸಹೋದರ ದಂಪತಿ ಅವರನ್ನು ಶ್ರೀಮಠದ ವತಿಯಿಂದ ಗುರುರಕ್ಷೆ ನೀಡಿ ಸನ್ಮಾನಿಸಲಾಯಿತು.

ಗುರುಪೂರ್ಣಿಮೆ ಕುರಿತು ಸುಜಾತ ದೊಡ್ಡಮನಿ ಉಪನ್ಯಾಸ ನೀಡಿದರೆ, ಲಿಂಗೈಕ್ಯ ಗಂಗಾಧರ ಮಹಾಸ್ವಾಮಿಗಳ ಕುರಿತು ಚನ್ನಬಸಯ್ಯ ಹೇಮಗಿರಿಮಠ ನುಡಿನಮನ ಸಲ್ಲಿಸಿದರು. ಇದೇ ವೇಳೆ ಥೈಲ್ಯಾಂಡ್ ಪ್ರವಾಸ ಮುಗಿಸಿಕೊಂಡು ಬಂದ ಸವಿತಾ ಹೊಸಳ್ಳಿಮಠ–ಗುರಪ್ಪ ನಿಡಗುಂದಿ ದಂಪತಿ ಹಾಗೂ ಹುಟ್ಟುಹಬ್ಬದ ಅಂಗವಾಗಿ ಶ್ರೀಮತಿ ಬಳಿಗಾರ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೊ. ಸಿ. ಲಿಂಗಾರೆಡ್ಡಿ, ಚನ್ನಬಸಪ್ಪ ಕಾಳಗಿ, ಡಾ. ಎಲ್.ವಿ. ಪಾಟೀಲ, ಬಿ.ಎಂ. ಬೀಳೆಯಲಿ, ಜಿ.ಎಂ. ಯಾನಂಶೆಟ್ಟಿ, ಸುಶೀಲಾ ಕೋಟಿ ಸೇರಿದಂತೆ ಶಿವಾನುಭವ ಸಮಿತಿಯ ಸದಸ್ಯರು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

ಜೀವನದಲ್ಲಿ ಒಮ್ಮೆಯಾದರೂ ಕೇದಾರ-ಬದರಿನಾಥ ದರ್ಶನ ಮಾಡಿ

ಹಿಮಾಲಯದ ಕೇದಾರನಾಥ, ಬದರಿನಾಥ ಸೇರಿದಂತೆ ಪವಿತ್ರ ಕ್ಷೇತ್ರಗಳ ದರ್ಶನ ಜೀವನದಲ್ಲಿ ಒಮ್ಮೆಯಾದರೂ ಪಡೆಯಬೇಕು. ಇಂತಹ ಯಾತ್ರೆಗಳು ಆಧ್ಯಾತ್ಮಿಕ ನೆಮ್ಮದಿ ನೀಡುವುದರ ಜೊತೆಗೆ ಬದುಕಿನ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದ ಪ್ರೊ. ವಿರೂಪಾಕ್ಷಯ್ಯ ಹೊಸಳ್ಳಿಮಠ ಹೇಳಿದರು.

ಜನಸಂಖ್ಯೆ ನಿಯಂತ್ರಿಸಿ, ಜೀವಸಂಕುಲ ಉಳಿಸಿ

“ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಬಡತನ ಮತ್ತು ಅಸಮಾನತೆಗಳು ಮಾನವ ಅಭಿವೃದ್ಧಿಗೆ ದೊಡ್ಡ ಸವಾಲಾಗಿವೆ” ಎಂಬ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಾತು ಇಂದಿಗೂ ಪ್ರಸ್ತುತವಾಗಿದೆ.

ಭೂಮಿ ಮನುಷ್ಯನ ಅಗತ್ಯಗಳನ್ನು ಪೂರೈಸಬಲ್ಲದು, ಆದರೆ ಮನುಷ್ಯನ ಅತಿಯಾದ ಆಸೆಗಳನ್ನು ಪೂರೈಸಲು ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಏರುತ್ತಿರುವ ಜನಸಂಖ್ಯೆ ಆಹಾರ, ನೀರು, ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಪರಿಸರದ ಮೇಲೆ ಭಾರೀ ಒತ್ತಡವನ್ನುಂಟು ಮಾಡುತ್ತಿದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣವು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಹೊಣೆಗಾರಿಕೆಯಾಗಿದೆ.

ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಸಮಸ್ಯೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತದೆ.

1987ರ ಜುಲೈ 11ರಂದು ವಿಶ್ವದ ಜನಸಂಖ್ಯೆ 500 ಕೋಟಿಯನ್ನು ದಾಟಿತ್ತು. ಈ ಬೆಳವಣಿಗೆ ವಿಶ್ವಸಂಸ್ಥೆಯ ಗಮನ ಸೆಳೆದಿದ್ದು, 1989ರಿಂದ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ನೇತೃತ್ವದಲ್ಲಿ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತಿದೆ. ಇಂದು 200ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಭಾರತವು 2023ರಿಂದ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ ಅಭಿವೃದ್ಧಿಗೆ ಶಕ್ತಿಯಾಗಬಹುದಾದರೂ, ಅದನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಅದು ನಿರುದ್ಯೋಗ, ಬಡತನ, ವಸತಿ ಸಮಸ್ಯೆ, ನೀರಿನ ಅಭಾವ, ಪರಿಸರ ಮಾಲಿನ್ಯ ಹಾಗೂ ಸಂಪನ್ಮೂಲಗಳ ಕೊರತೆಯಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಜನಸಂಖ್ಯೆ ಹೆಚ್ಚಳದ ಪರಿಣಾಮಗಳು

  • ನಿರುದ್ಯೋಗ ಮತ್ತು ಬಡತನ ಹೆಚ್ಚಳ.
  • ಕೃಷಿ ಭೂಮಿ ಹಾಗೂ ಅರಣ್ಯ ಪ್ರದೇಶಗಳ ಕ್ಷೀಣತೆ.
  • ಕುಡಿಯುವ ನೀರಿನ ಕೊರತೆ.
  • ಪರಿಸರ ಮಾಲಿನ್ಯ ಮತ್ತು ಹವಾಮಾನ ಬದಲಾವಣೆ.
  • ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಮೇಲೆ ಹೆಚ್ಚುವರಿ ಒತ್ತಡ.
  • ನಗರೀಕರಣದ ವೇಗದಿಂದ ಮೂಲಸೌಕರ್ಯಗಳ ಕೊರತೆ.

ಏಕೆ ಜಾಗೃತಿ ಅಗತ್ಯ?

ವಿಶ್ವ ಜನಸಂಖ್ಯಾ ದಿನವು ಕೇವಲ ಆಚರಣೆಯ ದಿನವಲ್ಲ. ಇದು ಜವಾಬ್ದಾರಿಯುತ ಕುಟುಂಬ ನಿರ್ಮಾಣ, ಮಹಿಳಾ ಸಬಲೀಕರಣ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಸಂಕಲ್ಪದ ದಿನವಾಗಿದೆ.

ಈ ದಿನದ ಪ್ರಮುಖ ಉದ್ದೇಶಗಳು

  • ಕುಟುಂಬ ಯೋಜನೆ ಕುರಿತು ಅರಿವು ಮೂಡಿಸುವುದು.
  • ತಾಯಿ ಮತ್ತು ಶಿಶು ಆರೋಗ್ಯಕ್ಕೆ ಆದ್ಯತೆ ನೀಡುವುದು.
  • ಮಹಿಳೆಯರ ಶಿಕ್ಷಣ ಮತ್ತು ಹಕ್ಕುಗಳನ್ನು ಬಲಪಡಿಸುವುದು.
  • ಲಿಂಗ ಸಮಾನತೆ ಉತ್ತೇಜಿಸುವುದು.
  • ಸಂತಾನೋತ್ಪತ್ತಿ ಆರೋಗ್ಯ ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವುದು.
  • ಯುವಜನರಲ್ಲಿ ಜವಾಬ್ದಾರಿಯುತ ಜೀವನ ಮೌಲ್ಯಗಳನ್ನು ಬೆಳೆಸುವುದು.

ಜನಸಂಖ್ಯೆ ನಿಯಂತ್ರಣವು ಕಾನೂನಿನಿಂದ ಮಾತ್ರ ಸಾಧ್ಯವಲ್ಲ. ಶಿಕ್ಷಣ, ಅರಿವು, ಮಹಿಳಾ ಸಬಲೀಕರಣ ಮತ್ತು ಕುಟುಂಬ ಯೋಜನೆಯ ಯಶಸ್ವಿ ಅನುಷ್ಠಾನದಿಂದ ಮಾತ್ರ ಶಾಶ್ವತ ಫಲಿತಾಂಶ ಸಾಧ್ಯ. ಇಂದು ನಾವು ತೆಗೆದುಕೊಳ್ಳುವ ಜವಾಬ್ದಾರಿಯುತ ನಿರ್ಧಾರಗಳೇ ಮುಂದಿನ ಪೀಳಿಗೆಗೆ ಸುರಕ್ಷಿತ ಭವಿಷ್ಯವನ್ನು ಕಟ್ಟಿಕೊಡಲಿವೆ.

ಜನಸಂಖ್ಯೆಯನ್ನು ನಿಯಂತ್ರಿಸಿದರೆ ಮಾತ್ರ ಪ್ರಕೃತಿಯನ್ನು ಉಳಿಸಬಹುದು, ಪ್ರಕೃತಿ ಉಳಿದರೆ ಮಾತ್ರ ಜೀವಸಂಕುಲ ಉಳಿಯುತ್ತದೆ.

-ಬಸವರಾಜ ಎಂ. ಯರಗುಪ್ಪಿ
ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು
ರಾಮಗೇರಿ, ತಾ. ಲಕ್ಷ್ಮೇಶ್ವರ, ಜಿ. ಗದಗ.

ನೋವನ್ನು ಕಾವ್ಯವಾಗಿಸಿದ ಅಕ್ಷರಯೋಗಿಗೆ ‘ಕನಕ–ಶರೀಫ ಕಾವ್ಯ ಪುರಸ್ಕಾರ’

ಕೆಲವು ಬದುಕುಗಳು ಹುಟ್ಟುವುದಿಲ್ಲ, ರೂಪುಗೊಳ್ಳುತ್ತವೆ. ಕೆಲವು ಕವಿಗಳು ಕವಿತೆಗಳನ್ನು ಬರೆಯುವುದಿಲ್ಲ; ತಮ್ಮ ಬದುಕನ್ನೇ ಕಾವ್ಯವನ್ನಾಗಿ ರೂಪಿಸುತ್ತಾರೆ. ಇನ್ನೂ ಕೆಲವು ವ್ಯಕ್ತಿತ್ವಗಳು ತಮ್ಮ ಜೀವನದ ಪ್ರತಿಯೊಂದು ನೋವನ್ನು ಸಮಾಜಕ್ಕೆ ಬೆಳಕಾಗಿಸುವ ಶಕ್ತಿಯಾಗಿ ಪರಿವರ್ತಿಸುತ್ತವೆ. ಅಂತಹ ಅಪರೂಪದ ವ್ಯಕ್ತಿತ್ವವೇ ‘ಬಯಲ ಬೆಳಕಿನ ಕವಿ’ ಎ. ಎಸ್. ಮಕಾನದಾರ.

ಉತ್ತರ ಸಾಹಿತ್ಯ ವೇದಿಕೆ, ಹೆಬಸೂರು ನೀಡುವ 2024ನೇ ಸಾಲಿನ ಪ್ರತಿಷ್ಠಿತ ‘ಕನಕ–ಶರೀಫ ಕಾವ್ಯ ಪುರಸ್ಕಾರ’ಕ್ಕೆ ಮಕಾನದಾರರು ಆಯ್ಕೆಯಾಗಿರುವುದು ಕೇವಲ ಒಬ್ಬ ಕವಿಗೆ ಸಂದ ಗೌರವವಲ್ಲ. ಅದು ಬದುಕಿನ ನೋವನ್ನು ಸಾಹಿತ್ಯದ ಸೌಂದರ್ಯವನ್ನಾಗಿ ರೂಪಿಸಿದ ಮಾನವೀಯ ಕಾವ್ಯಕ್ಕೆ ಸಂದ ಅಭಿವಂದನೆ.

ಮಕಾನದಾರರನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಅವರ ಕವಿತೆಗಿಂತ ಅವರ ಬದುಕನ್ನು ಓದಬೇಕು. ಅವರ ಬದುಕನ್ನು ಓದಿದಾಗಲೇ ಅವರ ಸಾಹಿತ್ಯದ ಆಳ ಅರ್ಥವಾಗುತ್ತದೆ. ಏಕೆಂದರೆ ಅವರು ಕಲ್ಪನೆಯ ಲೋಕದಲ್ಲಿ ಕವಿತೆ ಕಟ್ಟಿದವರಲ್ಲ; ಅನುಭವದ ಗಾಯಗಳಲ್ಲೇ ಪದಗಳನ್ನು ಅರಳಿಸಿದವರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರಿನಲ್ಲಿ ಜನಿಸಿದ ಮಕಾನದಾರರ ಬಾಲ್ಯ ಸುಖದ ತೊಟ್ಟಿಲಲ್ಲ, ಹಸಿವಿನ ಹಾದಿಯಲ್ಲೇ ಬೆಳೆದದ್ದು. ಹನ್ನೆರಡು ಮಕ್ಕಳ ದೊಡ್ಡ ಕುಟುಂಬದಲ್ಲಿ ಒಂಬತ್ತನೆಯ ಮಗನಾಗಿ ಜನಿಸಿದ ಅವರು ಬದುಕಿನ ವಿಶ್ವವಿದ್ಯಾಲಯದಲ್ಲೇ ಪದವಿ ಪಡೆದವರು.

ಟೇಲರಿಂಗ್ ಅಂಗಡಿಯಲ್ಲಿ ಕಾಜಿ ಗುಂಡಿ ಹೊಲಿಯುವುದರಿಂದ ಆರಂಭವಾದ ಬದುಕಿನ ಪಯಣ, ಹೊಲದ ಕೂಲಿ, ಬೈಕ್ ರಿಪೇರಿ ಅಂಗಡಿ, ನೇಕಾರಿಕೆ, ಹಣ್ಣಿನ ವ್ಯಾಪಾರ, ಐಸ್‌ಕ್ರೀಂ ಮಾರಾಟ, ಪುಸ್ತಕದ ಅಂಗಡಿಯಲ್ಲಿ ಕೆಲಸ, ರಾತ್ರಿ ವೈನ್‌ಶಾಪ್‌ನಲ್ಲಿ ದುಡಿಮೆ ಹೀಗೆ ಹತ್ತಾರು ಉದ್ಯೋಗಗಳನ್ನು ದಾಟುತ್ತಾ ಸಾಗಿತು. ಬದುಕು ಯಾವ ಕೆಲಸ ಕೊಟ್ಟಿತೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತಲೇ ಅಕ್ಷರಗಳನ್ನು ಹೃದಯದಲ್ಲಿ ಸಂಗ್ರಹಿಸಿಕೊಂಡರು.

ಆದ್ದರಿಂದಲೇ ಅವರ ಕಾವ್ಯದಲ್ಲಿ ಕಣ್ಣೀರು ಕೇವಲ ರೂಪಕವಲ್ಲ; ಅದು ಬದುಕಿನ ಅನುಭವ. ನೋವು ಇದೆ, ಆದರೆ ನಿರಾಶೆ ಇಲ್ಲ. ಬಡತನ ಇದೆ, ಆದರೆ ಸೋಲಿನ ಭಾವನೆ ಇಲ್ಲ. ವಿರಹ ಇದೆ, ಆದರೆ ದ್ವೇಷ ಇಲ್ಲ. ಅವರ ಪ್ರತಿಯೊಂದು ಸಾಲಿನಲ್ಲೂ ಹರಿಯುವುದು ಮಾನವೀಯತೆಯ ನಿರ್ಮಲ ಹೊಳೆ.

ಮಕಾನದಾರರ ಕಾವ್ಯ ಓದುತ್ತಿದ್ದಂತೆ ಸೂಫಿ ಸಂತರ ಪ್ರೇಮದರ್ಶನವೂ ಕೇಳಿಸುತ್ತದೆ; ಬಸವಾದಿ ಶಿವಶರಣರ ಸಮಾನತೆಯ ಸಂದೇಶವೂ ಮೊಳಗುತ್ತದೆ. ಕನಕದಾಸರ ಮಾನವತೆಯ ಕಳಕಳಿ ಮತ್ತು ಶಿಶುನಾಳ ಶರೀಫರ ವಿಶ್ವಮಾನವತೆಯ ಕನಸು ಅವರ ಕಾವ್ಯದಲ್ಲಿ ಹೊಸ ರೂಪ ಪಡೆಯುತ್ತದೆ. ಅದಕ್ಕಾಗಿಯೇ ಅವರಿಗೆ ಲಭಿಸಿರುವ ‘ಕನಕ–ಶರೀಫ ಕಾವ್ಯ ಪುರಸ್ಕಾರ’ ಅವರ ಸಾಹಿತ್ಯದ ತಾತ್ವಿಕ ಎತ್ತರಕ್ಕೆ ಸಲ್ಲುವ ಗೌರವವಾಗಿದೆ.

ಕವಿಯಾಗಿ ಮಾತ್ರವಲ್ಲದೆ ಕಥೆಗಾರ, ಅಂಕಣಕಾರ, ಸಂಪಾದಕ, ಪ್ರಕಾಶಕ, ಉಪನ್ಯಾಸಕ ಹಾಗೂ ಸಂಘಟಕರಾಗಿ ಅವರು ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ನಾಲ್ವತ್ತಕ್ಕೂ ಹೆಚ್ಚು ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಅವರು, ‘ಅಕ್ಕಡಿ ಸಾಲು’, ‘ಪ್ಯಾರಿ ಪದ್ಯ’, ‘ದರ್ವೇಶಿ ಪದ್ಯ’, ‘ಉಸಿರ ಗಂಧ ಸೋಕಿ’, ‘ಒಂದು ಮೌನದ ಬೀಜ’, ‘ಬದುಕು ಬೆಳಕು’, ‘ನೆಲದ ನುಡಿ’ ಸೇರಿದಂತೆ ಅನೇಕ ಕೃತಿಗಳ ಮೂಲಕ ಓದುಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

ಅವರ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ?’ ಹಾಗೂ ‘ಲಾಂದ್ರದ ಬೆಳಕಲ್ಲಿ ಅವ್ವ’ ಕವಿತೆಗಳು ವಿಶ್ವವಿದ್ಯಾಲಯಗಳ ಪದವಿ ಪಠ್ಯಕ್ರಮದಲ್ಲಿ ಸ್ಥಾನ ಪಡೆದಿರುವುದು ಅವರ ಸಾಹಿತ್ಯದ ಸಾಮಾಜಿಕ ಪ್ರಸ್ತುತತೆಗೆ ಸಾಕ್ಷಿಯಾಗಿದೆ.

ಆದರೆ ಮಕಾನದಾರರ ದೊಡ್ಡ ಸಾಧನೆ ಪುಸ್ತಕಗಳ ಸಂಖ್ಯೆಯಲ್ಲ; ಅವರು ರೂಪಿಸಿದ ಮನುಷ್ಯರ ಸಂಖ್ಯೆಯಲ್ಲಿ. ‘ನಿರಂತರ ಪ್ರಕಾಶನದ ಮೂಲಕ ನೂರಾರು ಹೊಸ ಲೇಖಕರಿಗೆ ಅವಕಾಶ ಕಲ್ಪಿಸಿದ ಅವರು, ತಮ್ಮ ಹೆಸರು ಬೆಳೆಯುವುದಕ್ಕಿಂತ ಇನ್ನೊಬ್ಬ ಲೇಖಕ ಬೆಳೆಯಬೇಕು ಎಂಬ ಮನೋಭಾವವನ್ನು ಬದುಕಿನಲ್ಲಿ ಅನುಸರಿಸಿದರು.

“ಮಕಾನದಾರರು ಬರೆದದ್ದಕ್ಕಿಂತ ಬರೆಸಿದ್ದೇ ಹೆಚ್ಚು” ಎಂಬ ಮಾತು ಸಾಹಿತ್ಯ ವಲಯದಲ್ಲಿ ಕೇಳಿಬರುವುದು ಅವರ ವ್ಯಕ್ತಿತ್ವದ ನಿಜವಾದ ಪರಿಚಯ.

ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಲೇ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪುರಸ್ಕಾರ ಪಡೆದ ಅವರು, ನಿವೃತ್ತಿಯ ಬಳಿಕವೂ ವಿಶ್ರಾಂತಿ ಪಡೆಯದೆ ಸಮಾಜಸೇವೆಯ ದಾರಿಯನ್ನೇ ಆರಿಸಿಕೊಂಡರು. ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳಲ್ಲಿ ಆಹಾರ ಕಿಟ್ ವಿತರಣೆ, ಕನ್ನಡ ಶಾಲೆಗಳ ಉಳಿವಿಗಾಗಿ ಜಾಗೃತಿ, ಭಾವೈಕ್ಯತಾ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು ಹೀಗೆ ಅವರ ಸೇವೆ ನಿರಂತರವಾಗಿದೆ.

ಅವರ ಕೃತಿಗಳು ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಆದರೆ ಅನುವಾದಿಸಲಾಗದ ಒಂದು ಸಂಗತಿ ಇದೆ—ಅದು ಅವರ ಮಾನವೀಯತೆ. ಭಾಷೆಯ ಎಲ್ಲೆಗಳನ್ನು ಮೀರಿ ಅದು ನೇರವಾಗಿ ಓದುಗರ ಹೃದಯವನ್ನು ತಲುಪುತ್ತದೆ.

ಇಂದು ಕನ್ನಡ ಸಾಹಿತ್ಯದಲ್ಲಿ ಕವಿಗಳು ಅನೇಕರಿದ್ದಾರೆ. ಆದರೆ ಬದುಕನ್ನೇ ಕಾವ್ಯವನ್ನಾಗಿ ರೂಪಿಸಿಕೊಂಡವರು ವಿರಳ. ಮಕಾನದಾರರು ಆ ವಿರಳ ಸಾಲಿನ ಅಕ್ಷರಯೋಗಿ.

ಅವರು ಕವಿತೆ ಬರೆಯುವುದಿಲ್ಲ; ಬದುಕನ್ನು ಬರೆಯುತ್ತಾರೆ. ಪದಗಳನ್ನು ಜೋಡಿಸುವುದಿಲ್ಲ; ಮನುಷ್ಯರನ್ನು ಜೋಡಿಸುತ್ತಾರೆ. ಬೆಳಕನ್ನು ಹುಡುಕುವುದಿಲ್ಲ; ತಾವೇ ಬೆಳಕಾಗುತ್ತಾರೆ. ಅದಕ್ಕಾಗಿಯೇ ಗದಗಿನ ಸಾಹಿತ್ಯ ಲೋಕ ಅವರನ್ನು ಪ್ರೀತಿಯಿಂದ ‘ಬಯಲ ಬೆಳಕಿನ ಕವಿ’ ಎಂದು ಕರೆಯುತ್ತದೆ.

ಜುಲೈ 11ರಂದು ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನಲ್ಲಿ ಪ್ರದಾನವಾಗಲಿರುವ ‘ಕನಕ–ಶರೀಫ ಕಾವ್ಯ ಪುರಸ್ಕಾರ’ ಕೇವಲ ಒಬ್ಬ ಸಾಹಿತಿಯ ಗೌರವವಲ್ಲ. ಅದು ಕನ್ನಡ ಸಾಹಿತ್ಯದ ಮಾನವೀಯ ಪರಂಪರೆಗೆ ಸಲ್ಲುವ ಗೌರವದ ನಮನ.

ನೋವನ್ನು ಪದಗಳನ್ನಾಗಿ, ಪದಗಳನ್ನು ಪ್ರೀತಿಯನ್ನಾಗಿ, ಪ್ರೀತಿಯನ್ನು ಮಾನವೀಯತೆಯನ್ನಾಗಿ ರೂಪಿಸಿದ ಈ ಅಪರೂಪದ ಅಕ್ಷರಯೋಗಿ ಇನ್ನೂ ದೀರ್ಘಕಾಲ ಕನ್ನಡ ಸಾರಸ್ವತ ಲೋಕವನ್ನು ಬೆಳಗಲಿ. ಏಕೆಂದರೆ ಮಕಾನದಾರರಂತಹವರು ಬರೆಯುವವರೆಗೂ ಕನ್ನಡ ಸಾಹಿತ್ಯದ ಬಯಲಿನಲ್ಲಿ ಬೆಳಕು ಎಂದಿಗೂ ಮಂಕಾಗುವುದಿಲ್ಲ.

– ಅಮೀರನಾಯಕ (ಕಲ್ಲಿಗನೂರ), ಗದಗ