Home Blog

62ರ ಹರೆಯದಲ್ಲೂ ಅದ್ಭುತ ಸಾಹಸ: ಹಾಲುಗಂಭ ಏರಿ ಮೆಚ್ಚುಗೆಗೆ ಪಾತ್ರರಾದ ಶರಣಪ್ಪ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ವ್ಯಕ್ತಿಯೊಬ್ಬರು ಅಸಾಮಾನ್ಯ ಸಾಹಸ ಮೆರೆದಿದ್ದಾರೆ.

ಮನ್ನೇರಾಳ ಗ್ರಾಮದ ಶರಣಪ್ಪ ಗೊಲ್ಲರ ಅವರು ಎಣ್ಣೆ ಸವರಿ ಜಾರುತ್ತಿದ್ದ ಸುಮಾರು 120 ಅಡಿ ಎತ್ತರದ ಹಾಲುಗಂಭವನ್ನು ಲೀಲಾಜಾಲವಾಗಿ ಏರಿ ನೆರೆದಿದ್ದ ಸಾವಿರಾರು ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಂಪ್ರದಾಯದಂತೆ ಕಂಬದ ಮೇಲ್ಭಾಗದಲ್ಲಿ ಕೊಬ್ಬರಿ ಉತ್ತತ್ತಿ ಕಟ್ಟಲಾಗುತ್ತದೆ.

ಎಣ್ಣೆ ಸುರಿದು ಜಾರುವಂತಾಗಿದ್ದ ಕಂಬವನ್ನೂ ಲೆಕ್ಕಿಸದೆ, ಶರಣಪ್ಪ ಅವರು ತೋರಿದ ದೈಹಿಕ ಸಾಮರ್ಥ್ಯ ಮತ್ತು ಭಕ್ತಿಭಾವಕ್ಕೆ ಸ್ಥಳೀಯರು ಹಾಗೂ ಭಕ್ತರು ಶಹಬ್ಬಾಸ್ ಹೇಳಿದ್ದಾರೆ.

ಈ ಘಟನೆ ಜಾತ್ರೆಯ ವಿಶೇಷ ಆಕರ್ಷಣೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.

ರಾಜ್ಯದಲ್ಲಿ ಎಲ್‌ಪಿಜಿ ಅಭಾವ ತೀವ್ರ: ‘ಕರ್ನಾಟಕ ಬಂದ್’ ಎಚ್ಚರಿಕೆ ನೀಡಿದ ಆಟೋ ಚಾಲಕರು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಆಟೋ ಗ್ಯಾಸ್ ಅಭಾವ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಲ್‌ಪಿಜಿ ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ನಗರದ ಗಿರಿನಗರ, ಹೆಬ್ಬಾಳ, ಸಾರಕ್ಕಿ, ಸಜ್ಜನ್ ರಾವ್ ಸರ್ಕಲ್ ಸೇರಿದಂತೆ ಹಲವೆಡೆ ಚಾಲಕರು ದಿನಪೂರ್ತಿ ದುಡಿಮೆ ಬಿಟ್ಟು ಗ್ಯಾಸ್‌ಗಾಗಿ ಕಾಯುತ್ತಿದ್ದಾರೆ. ಸಮಸ್ಯೆ ಪರಿಹರಿಸದಿದ್ದರೆ ‘ಕರ್ನಾಟಕ ಬಂದ್’ ನಡೆಸುವುದಾಗಿ ಆಟೋ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

ಇತ್ತೀಚೆಗೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದ ಚಾಲಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಚಾಲಕರ ಅಹವಾಲು ಆಲಿಸಿದ ಸಚಿವರು, ಏಪ್ರಿಲ್ 10ರಂದು ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಇದೇ ವೇಳೆ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿರುವ ಮುನಿಯಪ್ಪ, ರಾಜ್ಯದಲ್ಲಿ ಎಲ್‌ಪಿಜಿ ಅಭಾವ ತೀವ್ರವಾಗಿದ್ದು, ಕೆಲವು ಖಾಸಗಿ ಬಂಕ್‌ಗಳಲ್ಲಿ ಹೆಚ್ಚುವರಿ ದರ ವಸೂಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ನಿಗದಿತ ದರದಲ್ಲಿ ಪೂರೈಕೆ ಖಚಿತಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇತ್ತ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಗ್ಯಾಸ್ ಪೂರೈಕೆ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನೊಂದೆಡೆ, ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು, ತಕ್ಷಣ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಏಪ್ರಿಲ್ 9ರಂದು ‘ಕರಾಳ ದಿನ’ ಆಚರಿಸಿ ಆಟೋಗಳಿಗೆ ಕಪ್ಪು ಬಾವುಟ ಕಟ್ಟಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜ್ಯಾದ್ಯಂತ ಬಂದ್ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಒಟ್ಟಾರೆ, ಎಲ್‌ಪಿಜಿ ಅಭಾವದಿಂದ ಸಂಕಷ್ಟಕ್ಕೀಡಾದ ಆಟೋ ಚಾಲಕರು ತಕ್ಷಣ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದು, ಸರ್ಕಾರದ ಕ್ರಮಗಳತ್ತ ಕಾದುನೋಡುತ್ತಿದ್ದಾರೆ.

ರಾಜ್ಯದಲ್ಲಿ ವಾಯು ಗುಣಮಟ್ಟ ಸುಧಾರಣೆ: ಇನ್ನೂ ಆರೋಗ್ಯಕ್ಕೆ ಅಪಾಯ ಎಂದ ತಜ್ಞರು

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಾಯು ಗುಣಮಟ್ಟದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ.

ಇತ್ತೀಚಿನ ದಿನಗಳಲ್ಲಿ ಉಸಿರಾಟಕ್ಕೂ ಕಷ್ಟವಾಗುವ ಮಟ್ಟಕ್ಕಿಳಿದಿದ್ದ ಗಾಳಿಯ ಗುಣಮಟ್ಟ ಇದೀಗ ಸ್ವಲ್ಪ ಉತ್ತಮಗೊಂಡಿದ್ದು, ಜನರಲ್ಲಿ ಆತಂಕ ಕಡಿಮೆಯಾಗುತ್ತಿದೆ.

ಆದರೆ, ತಜ್ಞರ ಪ್ರಕಾರ ವಾಯು ಗುಣಮಟ್ಟ ಇನ್ನೂ ಸಂಪೂರ್ಣ ಸುರಕ್ಷಿತ ಮಟ್ಟಕ್ಕೇನೂ ತಲುಪಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ಇಂದು ವಿವಿಧ ನಗರಗಳ ಗಾಳಿಯ ಗುಣಮಟ್ಟ ಸೂಚ್ಯಂಕ ವಿವರಗಳು ಹೀಗಿವೆ:
ಬೆಂಗಳೂರು – 94
ಮಂಗಳೂರು – 87
ಮೈಸೂರು – 93
ಬೆಳಗಾವಿ – 128
ಕಲಬುರ್ಗಿ – 71
ಶಿವಮೊಗ್ಗ – 54
ಬಳ್ಳಾರಿ – 66
ಹುಬ್ಬಳ್ಳಿ – 146
ಉಡುಪಿ – 89
ವಿಜಯಪುರ – 86

ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಗಾಳಿಯ ಗುಣಮಟ್ಟ ಇದೀಗ 94ಕ್ಕೆ ತಲುಪಿದ್ದು, ಮಧ್ಯಮ ಮಟ್ಟದಲ್ಲಿದೆ. ಉಡುಪಿ ಮತ್ತು ಮಂಗಳೂರು ಸೇರಿದಂತೆ ಕರಾವಳಿ ಭಾಗಗಳಲ್ಲೂ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ.

ಗಾಳಿಯ ಗುಣಮಟ್ಟದ ವರ್ಗೀಕರಣ ಹೀಗಿದೆ:
ಉತ್ತಮ – 0 ರಿಂದ 50
ಮಧ್ಯಮ – 50 ರಿಂದ 100
ಕಳಪೆ – 100 ರಿಂದ 150
ಅನಾರೋಗ್ಯಕರ – 150 ರಿಂದ 200
ಗಂಭೀರ – 200 ರಿಂದ 300
ಅಪಾಯಕಾರಿ – 300ಕ್ಕೂ ಹೆಚ್ಚು

ಒಟ್ಟಾರೆ, ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡರೂ, ಇನ್ನೂ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ಅಗತ್ಯವಿದೆ ಎಂದು ತಜ್ಞರು ಸೂಚಿಸಿದ್ದಾರೆ.

ಕೊಲ್ಕತ್ತಾ-ಪಂಜಾಬ್ ಪಂದ್ಯ ಮಳೆಯಿಂದ ರದ್ದು: RCB ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಜಿಗಿದ ಶ್ರೇಯಸ್ ಪಡೆ

0

ಕೋಲ್ಕತ್ತಾ: ಈಡನ್ ಗಾರ್ಡನ್ ನಲ್ಲಿ ಸೋಮವಾರ ನಡೆಯಬೇಕಾಗಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ಮಳೆಯ ಕಾರಣದಿಂದ ರದ್ದಾಗಿದೆ.

ಮೊದಲು ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಪಂದ್ಯ ಕೇವಲ 3.4 ಓವರ್‌ಗಳಷ್ಟೇ ನಡೆಯಿತು. ನಂತರ ಆರಂಭವಾದ ಮಳೆ ಆಟವನ್ನು ಸಂಪೂರ್ಣವಾಗಿ ಅಡ್ಡಿಪಡಿಸಿತು.

ಮಳೆ ಬರುವಷ್ಟರಲ್ಲಿ ಕೆಕೆಆರ್ 3.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿತ್ತು. ನಾಯಕ ರಹಾನೆ ಹಾಗೂ ಅಂಗ್‌ಕ್ರಿಶ್ ರಘುವಂ ಕ್ರೀಸ್‌ನಲ್ಲಿ ಇದ್ದರು. ಎರಡನೇ ಓವರ್‌ನಲ್ಲಿ ಕ್ಸೇವಿಯರ್ ಬಾರ್ಟ್ಲೆಟ್ ಎರಡು ವಿಕೆಟ್ ಕಬಳಿಸಿ ಕೆಕೆಆರ್‌ಗೆ ಆಘಾತ ನೀಡಿದ್ದರು.

ಬಳಿಕ ಮಳೆ ಮುಂದುವರಿದ ಕಾರಣ ಪಂದ್ಯವನ್ನು ರದ್ದುಪಡಿಸಲಾಗಿದ್ದು, ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಗಿದೆ. ಇದು ಕೆಕೆಆರ್‌ಗೆ ಈ ಸೀಸನ್‌ನ ಮೊದಲ ಪಾಯಿಂಟ್ ಆಗಿದೆ.

ಇನ್ನೊಂದೆಡೆ, ಪಂಜಾಬ್ ಕಿಂಗ್ಸ್ 5 ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಉತ್ತಮ ಪ್ರದರ್ಶನ ತೋರಿಸುತ್ತಿದೆ. 4 ಪಾಯಿಂಟ್‌ಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಸ್ಥಾನದಲ್ಲಿದೆ.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ನಿವೃತ್ತ ಅಕೌಂಟೆಂಟ್ ಮನೆ ಮೇಲೆ ‘ಲೋಕಾ’ ದಾಳಿ

ಚಿತ್ರದುರ್ಗ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.

ನಿರ್ಮಿತಿ ಕೇಂದ್ರದ ನಿವೃತ್ತ ಅಕೌಂಟೆಂಟ್ ಸುಶೀಲಮ್ಮ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸುಶೀಲಮ್ಮ ಅವರು ಒಂದು ವರ್ಷದ ಹಿಂದೆ ವಿಆರ್‌ಎಸ್ ಪಡೆದಿದ್ದರು. ಅಕೌಂಟೆಂಟ್ ಆಗಿದ್ದ ವೇಳೆ ಆದಾಯಕ್ಕಿಂತ ಹೆಚ್ಚು ಹಣ ಮತ್ತು ಆಸ್ತಿ ಗಳಿಸಿರುವ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ, ಚಿತ್ರದುರ್ಗದ ಮೆದೇಹಳ್ಳಿ ಬಡಾವಣೆ ಹಾಗೂ ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮದ ತೋಟದ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.

ಲೋಕಾಯುಕ್ತ ಎಸ್ಪಿ ವಾಸು ದೇವರಾಮ್ ಮತ್ತು ಡಿವೈಎಸ್ಪಿ ಮೃತ್ಯುಂಜಯ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬೈಕ್–ಟಿಟಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಮದುವೆಯಿಂದ ವಾಪಸ್ ವೇಳೆ ದುರಂತ – ಓರ್ವನಿಗೆ ಗಂಭೀರ ಗಾಯ

ಗದಗ: ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮದ ಬಳಿ ಬೈಕ್ ಹಾಗೂ ಟಿಟಿ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಮೃತರನ್ನು ನವೀನ್ (21) ಮತ್ತು ಶೋಭಾ (21) ಎಂದು ಗುರುತಿಸಲಾಗಿದ್ದು, ಇವರು ಗೊಗೇರಿ ಗ್ರಾಮದ ನಿವಾಸಿಗಳಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಭಿಷೇಕ್  ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಒಂದೇ ಬೈಕ್‌ನಲ್ಲಿ ಮೂವರು ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಘಟನೆ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಹಿಂದೂಗಳನ್ನು ಬಿಜೆಪಿ ಗುತ್ತಿಗೆ ಪಡೆದಿಲ್ಲ: ಸಚಿವ ಸಂತೋಷ್ ಲಾಡ್ ವಾಗ್ದಾಳಿ

ದಾವಣಗೆರೆ: ಹಿಂದೂಗಳನ್ನು ಬಿಜೆಪಿಯವರು ಗುತ್ತಿಗೆ ಪಡೆದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತೀವ್ರ ವಾಗ್ದಾಳಿ ನಡೆಸಿದರು. ನಗರದ ಬೂದಿಹಾಳ್ ರಸ್ತೆಯ ತಾಜ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಚಾರ ಸಭೆಯ ಬಳಿಕ ಮಾತನಾಡಿದ ಅವರು,

ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳಿದ್ದು, ಅವನ್ನು ಬಿಜೆಪಿಯವರು ಕಟ್ಟಿಲ್ಲ. ನಾನೂ ಹಿಂದೂನೇ, ನಮ್ಮ ಪೂರ್ವಜರೂ ದೇವಾಲಯಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ಪ್ರತಿ ಮನೆಗೆ ತಿಂಗಳಿಗೆ 7ರಿಂದ 8 ಸಾವಿರ ರೂಪಾಯಿ ಪ್ರಯೋಜನ ಸಿಗುತ್ತಿದೆ ಎಂದು ಅವರು ತಿಳಿಸಿದರು.

ಬಿಜೆಪಿಯವರು ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರ ಬಿಟ್ಟು ಮುಸ್ಲಿಂ ಸಮುದಾಯದ ವಿರುದ್ಧ ಮಾತನಾಡುವುದನ್ನೇ ಪ್ರಮುಖವಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹಿರಿಯ ನಾಯಕ ಸಿದ್ದರಾಮಯ್ಯ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಬಳಸಿದ ಪದಗಳು ಸರಿಯಲ್ಲ ಎಂದು ಟೀಕಿಸಿದರು. ರಾಜಕೀಯದಲ್ಲಿ ಭಾಷೆಯ ಮಟ್ಟ ಇಳಿಯುತ್ತಿರುವುದರ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಟೀಕೆ ನಡೆಸಿದ ಅವರು, ಸಾಮಾಜಿಕ ಜಾಲತಾಣಗಳ ಮೇಲಿನ ನಿಯಂತ್ರಣದ ಪ್ರಯತ್ನಗಳ ಬಗ್ಗೆ ಪ್ರಶ್ನೆ ಎತ್ತಿದರು. ಬಿಜೆಪಿ ಅಧಿಕಾರದಲ್ಲಿರುವುದರಿಂದ ತಮ್ಮ ಸಾಧನೆಗಳ ಬಗ್ಗೆ ಉತ್ತರಿಸಬೇಕೆಂದು ಆಗ್ರಹಿಸಿದರು.

ಬಾಗಲಕೋಟೆ, ದಾವಣಗೆರೆಯಲ್ಲಿ ಬಿಜೆಪಿಗೆ ದೊಡ್ಡ ಅಂತರದ ಗೆಲುವು ಸಿಗಲಿದೆ: ಆರ್.ಅಶೋಕ್

ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಬಿಜೆಪಿಗೆ ದೊಡ್ಡ ಅಂತರದ ಗೆಲುವು ಸಿಗಲಿದೆ. ಕಾಂಗ್ರೆಸ್‍ಗೆ ಎರಡೂ ಕಡೆ ಸಮಸ್ಯೆಗಳಿವೆ. ದಾವಣಗೆರೆಯಲ್ಲಿ ಮುಸ್ಲಿಮರು ಓಟ್ ಹಾಕಲ್ಲ ಅಂತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಸೋಲುವ ಸುಳಿವು ಸಿಕ್ಕ ಕೂಡಲೇ ಕೇರಳಕ್ಕೆ ಹೋದ ಮುಖ್ಯಮಂತ್ರಿ ಬಾಗಲಕೋಟೆಗೆ ದೌಡಾಯಿಸಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭವೃದ್ಧಿ ಮಾಡಿದ್ದರೆ, ಗ್ಯಾರಂಟಿಗಳನ್ನು ಸರಿಯಾಗಿ ಕೊಟ್ಟಿದ್ದರೆ ಇಷ್ಟು ಕಷ್ಟ ಯಾಕೆ ಪಡಬೇಕಿತ್ತು. ಇವರು ಅಭಿವೃದ್ಧಿ ಮಾಡಿದ್ದರೆ ಜನರೇ ಹತ್ತಿರ ಬಂದು ನಿಮಗೆ ಓಟ್ ಹಾಕುತ್ತೇವೆ ಅಂತ ಹೇಳುತ್ತಿದ್ದರು. ಆದರೆ ಹಾಗೆ ಇಲ್ಲ ಎಂದರು.

ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಏನೂ ಆಗಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ಸಾಲಗಾರರ ರಾಜ್ಯವನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದರು. ಅಭಿವೃದ್ಧಿ ಹೋಗಲಿ; ಗ್ಯಾರಂಟಿ ಸಹ ಸರಿಯಾಗಿ ಕೊಡಲಿಲ್ಲ. ಅನ್ನಭಾಗ್ಯವನ್ನು ಕನ್ನಭಾಗ್ಯ ಮಾಡಿದ್ದಾರೆ. ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ಆಗಿರುವುದಿಂದ ಜನರೇ ಪಾಠ ಕಲಿಸಲಿದ್ದಾರೆ ಎಂದು ವಿಶ್ಲೇಷಿಸಿದರು.

ಎರಡೂ ಕಡೆ ಕಾಂಗ್ರೆಸ್ ನವರೇ ಬಂದು ಒಳಗೊಳಗೆ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಬಡವರನ್ನು ಗೆಲ್ಲಿಸಿ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಬಡವರು. ಆದ್ದರಿಂದ ಸಿದ್ದರಾಮಯ್ಯ ಸಹ ನಮ್ಮ ಪರ ಪ್ರಚಾರ ಮಾಡಿದ್ದಾರೆ ಎಂದು ನುಡಿದರು.

ಅಡುಗೆ ಅನಿಲ ಸಮಸ್ಯೆ ಇಡೀ ದೇಶಕ್ಕೆ ಆಗಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲ. ರಾಹುಲ್ ಗಾಂಧಿ ಅವರು ಮೆಚ್ಚುವ ದೇಶ ಪಾಕಿಸ್ತಾನದಲ್ಲಿ ಪೆಟ್ರೋಲ್ 500 ರೂ. ಆಗಿದೆ. ಇದೆಲ್ಲ ತಿಳಿಯದ ಡಿ.ಕೆ ಶಿವಕುಮಾರ್ ಅವರು ಗ್ಯಾಸ್ ಸಮಸ್ಯೆಗೆ ಪ್ರಧಾನಿ ಮೋದಿ ಕಾರಣ ಎಂದು ಟೀಕೆ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.

ಕೇರಳ ಮೂಲದ ಶರಣ್ಯ ಪತ್ತೆ: ತಾಯಿಯ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಂದನೆ

0

ತಿರುವನಂತಪುರ: ಕೊಡಗಿನ ತಡಿಯಂಡಮೊಳ್ ಅರಣ್ಯದಲ್ಲಿ ಚಾರಣ ಮಾಡುವಾಗ ನಾಪತ್ತೆಯಾಗಿದ್ದ ಕೇರಳ ಮೂಲದ ಶರಣ್ಯ ಅವರ ತಾಯಿಯ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಂದಿಸಿದ್ದು, ಈಕೆಯ ಪತ್ತೆಯಾಗಾಗಿ ನಡೆಯುತ್ತಿದ್ದ ಕಾರ್ಯಾಚರಣೆ ತೀವ್ರಗೊಳಿಸುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ನಂತರ ಶರಣ್ಯ ಅವರನ್ನು ಭಾನುವಾರ ಸಂಜೆ ಪತ್ತೆ ಮಾಡಲಾಗಿದೆ.

ಸಧ್ಯ ಕೇರಳ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಶರಣ್ಯ ಅವರ ತಾಯಿ ಒರ್ಕಟ್ಟೇರಿಯಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದ ವೇಳೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಮಗಳ ನಾಪತ್ತೆ ವಿಚಾರವನ್ನು ತಿಳಿಸಿದರು. ವೇದಿಕೆಯಿಂದಲೇ ರಾಜ್ಯದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕಾರ್ಯಾಚರಣೆ ಮಾಹಿತಿ ಪಡೆದ ಶಿವಕುಮಾರ್ ಅವರು, ಕಾರ್ಯಾಚರಣೆ ತೀವ್ರಗೊಳಿಸುವಂತೆ ಸೂಚನೆ ನೀಡಿದರು.

ಶರಣ್ಯ ಪತ್ತೆ ಮಾಡಿದ ಅಧಿಕಾರಿಗಳು, ಬುಡಕಟ್ಟು ಜನರಿಗೆ ಡಿಸಿಎಂ ಅಭಿನಂದನೆ

ಶರಣ್ಯ ಪತ್ತೆಯಾಗಿರುವ ವಿಚಾರವಾಗಿ ತಿರುವನಂತಪುರದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಮಾತನಾಡಿದ್ದು, “ಕಳೆದ ಎರಡು ದಿನಗಳಿಂದ ಕೇರಳಂನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ನಿನ್ನೆ ಮಧ್ಯಾಹ್ನ ಪ್ರಚಾರ ಮಾಡುವಾಗ ಕೊಡಗಿನ ಅರಣ್ಯದಲ್ಲಿ ಟ್ರೆಕಿಂಗ್ ಗೆ ತೆರಳಿ ನಾಪತ್ತೆಯಾಗಿದ್ದ ಶರಣ್ಯ ಅವರ ತಾಯಿ ನನ್ನನ್ನು ಭೇಟಿ ಮಾಡಿ ಆಕೆಯ ಪತ್ತೆಗೆ ಮನವಿ ಸಲ್ಲಿಸಿದ್ದರು.

ನಾನು ತಕ್ಷಣವೇ ವೇದಿಕೆಯಲ್ಲೇ ನಮ್ಮ ರಾಜ್ಯದ ಅಧಿಕಾರಿಗಳು ಹಾಗೂ ಬುಡಕಟ್ಟು ನಾಯಕರನ್ನು ಸಂಪರ್ಕ ಮಾಡಿದೆ. ನಿನ್ನೆ ಬೆಳಗ್ಗೆ ಕೂಡ ಮಾಧ್ಯಮ ಸ್ನೇಹಿತರು ಈ ವಿಚಾರವಾಗಿ ನನಗೆ ಪ್ರಶ್ನೆ ಮಾಡಿದ್ದರು. ದೇವರ ನಾಡಿನಲ್ಲಿ ನಾನಿದ್ದು, ಅಯ್ಯಪ್ಪಸ್ವಾಮಿ ಹಾಗೂ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ನಮ್ಮ ಅರಣ್ಯ ಅಧಿಕಾರಿಗಳು, ಪೊಲೀಸರು ಹಾಗೂ ಬುಡಕಟ್ಟು ಜನರು ಸೇರಿ ಸುಮಾರು 170ಕ್ಕೂ ಜನರ ತಂಡ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿ, ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದ್ದ ಶರಣ್ಯ ಅವರನ್ನು ಪತ್ತೆ ಮಾಡಿದ್ದಾರೆ.

ಒಂದು ದಿನ ಧಾರಾಕಾರ ಮಳೆಯ ನಡುವೆ ಊಟವಿಲ್ಲದೆ, ಕೇವಲ ನೀರು ಸೇವಿಸುತ್ತಾ ಕಾಲ ಕಳೆದಿದ್ದಾರೆ. ಕಾಡಿ‌ನಲ್ಲಿ ಸಿಲುಕಿದ್ದ ಈ ಹುಡುಗಿ ಬಹಳ ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ನಿನ್ನೆ ಸಂಜೆಯೇ ಈಕೆಯ ಪತ್ತೆಯಾದ ಸುದ್ದಿ ಬಂದಿದ್ದು, ಈ ವಿಚಾರವನ್ನು ಬಹಳ ಸಂತೋಷದಿಂದ ಹಂಚಿಕೊಳ್ಳುತ್ತಿರುವೆ. ಈಕೆಯ ಪತ್ತೆಗೆ ಸಹಕರಿಸಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ಹೋಗಿ ಐಟಿ ಉದ್ಯೋಗಿ ದುರಂತ ಸಾವು!

ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿ ಅಭಿಷೇಕ್ (27) ಮುಳುಗಿ ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ಎನ್‌.ಆರ್‌. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪ ನಡೆದಿದೆ.

ಅಭಿಷೇಕ್ ಅವರು ಸ್ನೇಹಿತನ ಮದುವೆ ನಿಮಿತ್ತ ಸ್ನೇಹಿತರೊಂದಿಗೆ ಬನ್ನೂರು ಗ್ರಾಮದ ಹೋಂಸ್ಟೇನಲ್ಲಿ ತಂಗಿದ್ದರು. ಈ ವೇಳೆ ಸ್ನೇಹಿತರೊಂದಿಗೆ ಭದ್ರಾ ನದಿಗೆ ಈಜಲು ತೆರಳಿದಾಗ, ಆಕಸ್ಮಿಕವಾಗಿ ನೀರಿನಲ್ಲಿ ನಾಪತ್ತೆಯಾಗಿದ್ದರು.

ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯಾಚರಣೆ ನಡೆಸಿದರು. ಬಳಿಕ ಬನ್ನೂರು ಗ್ರಾಮದ ಸಮೀಪದಲ್ಲೇ ಅಭಿಷೇಕ್ ಅವರ ಮೃತದೇಹ ಪತ್ತೆಯಾಯಿತು.

ಮೃತ ಅಭಿಷೇಕ್ ಗದಗ ಮೂಲದವರಾಗಿದ್ದು, ಬೆಂಗಳೂರಿನ ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!