ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದು, ಇದನ್ನು ‘ಮಿಸ್ಟರ್ ನರೇಂದ್ರ ಮೋದಿ ಅವರ ಕೊಡುಗೆ’ ಎಂದು ವ್ಯಂಗ್ಯವಾಡಿದ್ದಾರೆ.
ಇಂಧನ ದರ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿಫಲ ವಿದೇಶಾಂಗ ನೀತಿಯೇ ಪ್ರಮುಖ ಕಾರಣ ಎಂದು ಆರೋಪಿಸಿದ ಅವರು, ಇತರ ದೇಶಗಳೊಂದಿಗೆ ಸಮರ್ಪಕ ಸಂಬಂಧ ಕಾಪಾಡಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಜನರು ತಮ್ಮ ದುಡಿಮೆಯ ಹಣದಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಬೆಲೆ ಏರಿಕೆಯನ್ನು ನಿಯಂತ್ರಿಸಿ ಜನರಿಗೆ ಪರಿಹಾರ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ದೂರಿದರು.
ಈ ವೇಳೆ ಪ್ರಧಾನಿ ನೀಡಿರುವ ಕೆಲ ಹೇಳಿಕೆಗಳನ್ನು ಉಲ್ಲೇಖಿಸಿದ ಡಿ.ಕೆ. ಶಿವಕುಮಾರ್, ಚಿನ್ನ ಖರೀದಿಸಬೇಡಿ, ಎಣ್ಣೆ ಬಳಸಬೇಡಿ ಎಂದು ಹೇಳುವುದು ವಾಸ್ತವಿಕತೆಯಿಂದ ದೂರವಾದ ಮಾತು. ಮಾಂಗಲ್ಯ ಸರವು ಪ್ರತಿಯೊಬ್ಬರ ಜೀವನದಲ್ಲೂ ಮಹತ್ವದ್ದು. ಅದನ್ನು ಖರೀದಿಸಬೇಡಿ ಎಂದು ಹೇಳುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಇದೇ ವೇಳೆ ಬಿಡದಿ ಟೌನ್ಶಿಪ್ ಯೋಜನೆ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ತಾವು ಬಿಡದಿಗೆ ಭೇಟಿ ನೀಡುವುದಾಗಿ ಸ್ಪಷ್ಟಪಡಿಸಿದರು.
ನಾನು ಬಿಡದಿಗೆ ಹೋಗುತ್ತೇನೆ. ರೈತರು ನನ್ನ ವಿರುದ್ಧ ಘೋಷಣೆ ಕೂಗಬಹುದು, ಕಲ್ಲು ತೂರಾಟ ನಡೆಸಬಹುದು. ಅದಕ್ಕೆ ನಾನು ಹೆದರುವುದಿಲ್ಲ. ಕುಮಾರಸ್ವಾಮಿಯವರು ಈ ಹಿಂದೆ ಆರಂಭಿಸಿದ್ದ ಕೆಲಸವನ್ನೇ ನಾನು ಮುಂದುವರಿಸುತ್ತಿದ್ದೇನೆ ಎಂದು ಹೇಳಿದರು.
ಬಿಡದಿ ಯೋಜನೆ ಕುರಿತು ಚರ್ಚೆಗೆ ದಿನಾಂಕ ನಿಗದಿಪಡಿಸಿದರೆ ತಾವು ಸಿದ್ಧ ಎಂದು ಕುಮಾರಸ್ವಾಮಿಗೆ ಡಿ.ಕೆ. ಶಿವಕುಮಾರ್ ಬಹಿರಂಗ ಸವಾಲು ಹಾಕಿದರು.

