Home Blog

‘ದೇವಿ‌ ಮಹಾತ್ಮೆ’ ಸಿನಿಮಾದ ಆಡಿಯೋ ರೈಟ್ಸ್ ಖರೀದಿಸಿದ ‘ಹೊಂಬಾಳೆ ಮ್ಯೂಸಿಕ್’: ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭ!

ಭಾರತೀಯ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ‘ಹೊಂಬಾಳೆ ಫಿಲ್ಮ್ಸ್’ ಈಗ ಮ್ಯೂಸಿಕ್ ಕ್ಷೇತ್ರಕ್ಕೂ ಅಧಿಕೃತವಾಗಿ ಕಾಲಿಟ್ಟಿದೆ. ‘ಹೊಂಬಾಳೆ ಮ್ಯೂಸಿಕ್’ ಮೂಲಕ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಖರೀದಿಸುವ ಕಾರ್ಯ ಆರಂಭಿಸಿರುವ ಸಂಸ್ಥೆ, ತನ್ನ ಮೊದಲ ಖರೀದಿಯಾಗಿ ‘ದೇವಿ ಮಹಾತ್ಮೆ’ ಸಿನಿಮಾದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ಸೇರಿದಂತೆ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಹೊಂಬಾಳೆ, ಈಗ ಸಂಗೀತ ಮಾರುಕಟ್ಟೆಯಲ್ಲೂ ತನ್ನ ಹಾಜರಾತಿಯನ್ನು ಗಟ್ಟಿಗೊಳಿಸುತ್ತಿದೆ. ‘ದೇವಿ ಮಹಾತ್ಮೆ’ ಚಿತ್ರದ ಆಡಿಯೋ ಹಕ್ಕು ಹೊಂಬಾಳೆ ಮ್ಯೂಸಿಕ್‌ಗೆ ಸೇರುವುದರಿಂದ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಬಲ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ನಾಗರಾಜ ಸೋಮಯಾಜಿ ನಿರ್ದೇಶನದ ಈ ಚಿತ್ರವು ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಲಿಖಿತ್ ಪ್ರಸಾದ್ ಕೆ. ಶೆಟ್ಟಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಯುವಿಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿರಾಜನ್ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದ ತಾಂತ್ರಿಕ ವಿಭಾಗದಲ್ಲೂ ಬಲವಾದ ತಂಡ ಕೆಲಸ ಮಾಡುತ್ತಿದ್ದು, ಉಜ್ವಲ್ ಚಂದ್ರ ಅವರ ಸಂಕಲನ ಮತ್ತು ಎಸ್.ಕೆ. ರಾವ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್ ಸೇರಿದಂತೆ ಹಲವು ಲೇಖಕರು ಕೈಜೋಡಿಸಿದ್ದಾರೆ.

GT ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಫೈನಲ್ ಗೆ ಲಗ್ಗೆ ಇಟ್ಟ RCB; ವಿಜಯ್ ಮಲ್ಯ ಪೋಸ್ಟ್ ವೈರಲ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ, ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಆರ್ಸಿಬಿಯ ಭರ್ಜರಿ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ವಿಜಯ್ ಮಲ್ಯ, ತಮ್ಮ ಎಕ್ಸ್ ಖಾತೆಯಲ್ಲಿ ಕನ್ನಡದಲ್ಲೇ “ನಮ್ಮ ದೊಡ್ಡ ಸಿಂಹಗಳಿಗೆ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ. ಜೊತೆಗೆ, “ಧರ್ಮಶಾಲಾದಲ್ಲಿ ಅದ್ಭುತ ಗೆಲುವು ಸಾಧಿಸಿದ್ದೀರಿ. ಬೆಂಗಳೂರಿನ ಸಿಂಹಗಳಂತೆ ಗರ್ಜಿಸಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದ್ದೀರಿ” ಎಂದು ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ 92 ರನ್‌ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ತಂಡದ ನಾಯಕ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಹಾಗೂ 5 ಬೌಂಡರಿಗಳು ಸೇರಿದ್ದವು. ಕೊನೆಯ ಓವರ್‌ಗಳಲ್ಲಿ ಆರ್ಸಿಬಿ ಬ್ಯಾಟರ್‌ಗಳು ಅಬ್ಬರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

255 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ಕುಸಿತ ಕಂಡಿತು. ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್ ಬೇಗನೇ ವಿಕೆಟ್ ಕಳೆದುಕೊಂಡರು.

ಆರ್ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿದ ಗುಜರಾತ್ ತಂಡ 162 ರನ್‌ಗೆ ಆಲೌಟ್ ಆಯಿತು. ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಜೋಶ್ ಹ್ಯಾಜಲ್ವುಡ್ ಹಾಗೂ ರಸಿಖ್ ಸಲಾಂ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಭರ್ಜರಿ ಗೆಲುವಿನೊಂದಿಗೆ ಆರ್ಸಿಬಿ ಐಪಿಎಲ್ ಇತಿಹಾಸದಲ್ಲಿ ಐದನೇ ಬಾರಿ ಫೈನಲ್‌ಗೆ ಪ್ರವೇಶಿಸಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.

45 ವರ್ಷಗಳ ಆರ್ಟ್ ಆಫ್ ಲಿವಿಂಗ್ ಸಂಭ್ರಮ: ಬಾಲಿವುಡ್-ರಾಜಕೀಯ ತಾರೆಯರ ನಡುವೆ ಗುರೂಜಿ ಮಹೋತ್ಸವ!

ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45 ವರ್ಷಗಳ ಸಂಭ್ರಮಾಚರಣೆ ಭವ್ಯವಾಗಿ ನಡೆಯಿತು. ಕನಕಪುರ ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇಶದ ಚಿತ್ರರಂಗದ ಪ್ರಮುಖ ತಾರೆಯರು, ನಿರ್ದೇಶಕರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದರು.

ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸೇವಾ ಕಾರ್ಯಗಳನ್ನು ಗೌರವಿಸಲು ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ನಿರ್ದೇಶಕ ರಾಜ್ ಕುಮಾರ್ ಹಿರಾನಿ, ನಟ ವಿಕ್ರಾಂತ್ ಮಾಸ್ಸಿ, ಹಾಸ್ಯನಟ ಸುನಿಲ್ ಗ್ರೋವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಕ್ರಾಂತ್ ಮಾಸ್ಸಿ ಅವರು ಗುರೂಜಿ ಅವರ ಜೀವನಾಧಾರಿತ ‘ವೈಟ್’ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ತಿಳಿಸಿ ಭಾವುಕರಾದರೆ, ರಾಜ್ ಕುಮಾರ್ ಹಿರಾನಿ ಅವರು ತಮ್ಮ ತಂಡಕ್ಕೆ ಸುದರ್ಶನ ಕ್ರಿಯೆ ಕಲಿಸುವ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಗುರೂಜಿ ಅವರ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು. ವಿಶೇಷವಾಗಿ ನಡೆದ ‘ಇಂಟ್ಯೂಷನ್ ಫೆಸ್ಟ್’ನಲ್ಲಿ ಸಾವಿರಾರು ಮಕ್ಕಳು ಭಾಗವಹಿಸಿ ತಮ್ಮ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆ ತಂದರು.

ವಿಜಯ್ ಸಿಎಂ ಗೆಲುವು ನೋಡಿ ಪವನ್ ಕಲ್ಯಾಣ್ ಶಾಕ್: ‘ನನಗೆ ಸ್ವಲ್ಪ ಅಸೂಯೆ ಆಯ್ತು’ ಎಂದ ಡಿಸಿಎಂ!

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ರಾಜಕೀಯ ಯಶಸ್ಸಿನ ಬಗ್ಗೆ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನೀಡಿದ ತಮಾಷೆಯ ಹೇಳಿಕೆ ಇದೀಗ ಭಾರೀ ವೈರಲ್ ಆಗಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಜಯ್ ಅವರ ರಾಜಕೀಯ ಗೆಲುವನ್ನು ನೋಡಿ ತಮಗೆ “ಸ್ವಲ್ಪ ಅಸೂಯೆ ಆಯಿತು” ಎಂದು ಹೇಳಿದ್ದಾರೆ.

ಪವನ್ ಕಲ್ಯಾಣ್ ತಮ್ಮ ಭಾಷಣದಲ್ಲಿ, ವಿಜಯ್ ಅವರು ತಮಿಳುನಾಡು ಚುನಾವಣೆಯಲ್ಲಿ ಆರಾಮವಾಗಿ ಗೆದ್ದ ರೀತಿಯನ್ನು ಉಲ್ಲೇಖಿಸಿ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ‘ಕಟೌಟ್‌ಗಳು ಮತ್ತು ಹೊಲೊಗ್ರಾಮ್‌ಗಳ ಮೂಲಕವೂ ಗೆದ್ದು ಸಿಎಂ ಆದರು, ಆದರೆ ನಾನು 15 ವರ್ಷ ಹೋರಾಟ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಅದೇ ವೇಳೆ ರಾಜಕೀಯ ಹಾದಿ ಮತ್ತು ರಾಜ್ಯಗಳ ಪರಿಸ್ಥಿತಿಗಳನ್ನು ಹೋಲಿಸುವುದು ಸರಿಯಲ್ಲ ಎಂದು ಪವನ್ ಸ್ಪಷ್ಟಪಡಿಸಿದ್ದಾರೆ. ಆಂಧ್ರ ಮತ್ತು ತಮಿಳುನಾಡು ರಾಜಕೀಯ ಸ್ವಭಾವ ವಿಭಿನ್ನವಾಗಿರುವುದರಿಂದ ಹೋಲಿಕೆ ಅರ್ಥಹೀನ ಎಂದು ಹೇಳಿದ್ದಾರೆ.

ಅವರ ಈ ಹೇಳಿಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ರಾಜ್ಯದ ಶಂಕಿತ ಎಬೋಲಾ ಪ್ರಕರಣ ನೆಗೆಟಿವ್: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಶಂಕಿತ ಎಬೋಲಾ ವೈರಸ್ ಪ್ರಕರಣದ ಲ್ಯಾಬ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಉಗಾಂಡದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯೊಬ್ಬರಲ್ಲಿ ಎಬೋಲಾ ವೈರಸ್‌ಗೆ ಸಂಬಂಧಿಸಿದ ಕೆಲವು ರೋಗಲಕ್ಷಣಗಳು ಕಂಡುಬಂದ ಹಿನ್ನೆಲೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು.

ಮಹಿಳೆಯನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಕ್ವಾರಂಟೈನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೊತೆಗೆ ಅವರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿತ್ತು.

ಇದೀಗ ಲ್ಯಾಬ್ ವರದಿ ನೆಗೆಟಿವ್ ಬಂದಿದ್ದು, ಮಹಿಳೆಗೆ ಎಬೋಲಾ ಸೋಂಕು ತಗುಲಿಲ್ಲ ಎಂಬುದನ್ನು ಆರೋಗ್ಯ ಇಲಾಖೆಯ ತಜ್ಞ ವೈದ್ಯರು ಖಚಿತಪಡಿಸಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದ ರಾಜ್ಯದ ಜನರಲ್ಲಿ ಮೂಡಿದ್ದ ಆತಂಕ ಕಡಿಮೆಯಾಗಿದ್ದು, ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ.

ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತಾ ಲೋಪ; 78 ಗ್ರಾಂ ಚಿನ್ನ ಮತ್ತು ಅಮೂಲ್ಯ ವಜ್ರಾಭರಣ ನಾಪತ್ತೆ

ತಿರುವನಂತಪುರಂ: ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಅಮೂಲ್ಯ ಚಿನ್ನಾಭರಣ ಹಾಗೂ ವಜ್ರಾಭರಣ ನಾಪತ್ತೆಯಾಗಿರುವ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ. ದೇವಸ್ಥಾನದ ಖಜಾನೆ ಭದ್ರತೆ ಹಾಗೂ ನಿರ್ವಹಣೆ ಕುರಿತಾಗಿ ಇದೀಗ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ.

ಪೊಲೀಸ್ ಮಹಾನಿರ್ದೇಶಕರು ಗೃಹ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿ ಪ್ರಕಾರ, ದೇವಸ್ಥಾನದ ಸಂಗ್ರಹದಲ್ಲಿದ್ದ ಸುಮಾರು 78 ಗ್ರಾಂ ಚಿನ್ನಾಭರಣಗಳು ಹಾಗೂ ‘ವೈರಂ ನಾಮ’ ಎಂದು ಕರೆಯಲಾಗುವ ಅಮೂಲ್ಯ ವಜ್ರಾಭರಣ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಜೊತೆಗೆ ದೇವಸ್ಥಾನದ ಪ್ರಸ್ತುತ ಭದ್ರತಾ ವ್ಯವಸ್ಥೆಯ ಮೇಲೂ ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ದೇವಸ್ಥಾನದ ದಾಖಲೆಗಳ ಪ್ರಕಾರ, ‘ವೈರಂ ನಾಮ’ ವಜ್ರಾಭರಣವನ್ನು ಕೆಲವು ತಿಂಗಳುಗಳ ಹಿಂದೆ ದುರಸ್ತಿಗಾಗಿ ಹೊರಗೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ ಇದುವರೆಗೆ ಅದನ್ನು ದೇವಸ್ಥಾನಕ್ಕೆ ಮರಳಿ ತಂದು ಒಪ್ಪಿಸಿಲ್ಲ ಎಂದು ತಿಳಿದುಬಂದಿದೆ. ಇದೇ ರೀತಿ, ಆರು ತಿಂಗಳ ಹಿಂದೆ ದುರಸ್ತಿಗೆ ಕಳುಹಿಸಿದ್ದ ಚಿನ್ನದ ದೀಪವೂ ನಾಪತ್ತೆಯಾಗಿರುವ ಮಾಹಿತಿ ಬಹಿರಂಗವಾಗಿದೆ.

ಶತಮಾನಗಳ ಇತಿಹಾಸ ಹೊಂದಿರುವ ಈ ದೇವಸ್ಥಾನದ ಅಮೂಲ್ಯ ವಸ್ತುಗಳು ಕಾಣೆಯಾಗಿರುವುದು ಭಕ್ತರು ಹಾಗೂ ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ದೇವಸ್ಥಾನದ ಖಜಾನೆ ನಿರ್ವಹಣೆ, ಮೇಲ್ವಿಚಾರಣೆ ಹಾಗೂ ಭದ್ರತಾ ಕ್ರಮಗಳ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಪೊಲೀಸ್ ಮಹಾನಿರ್ದೇಶಕರು ಹಲವು ಶಿಫಾರಸುಗಳನ್ನು ಮಾಡಿದ್ದಾರೆ. ದೇವಸ್ಥಾನದಲ್ಲಿರುವ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಸುರಕ್ಷಿತ ಭೂಗತ ಕೊಠಡಿಗಳಿಗೆ ಸ್ಥಳಾಂತರಿಸುವುದು, ಭಕ್ತರ ಕಾಣಿಕೆಗಳನ್ನು ವಿಶೇಷ ಲಾಕರ್‌ಗಳಲ್ಲಿ ಸಂಗ್ರಹಿಸುವುದು ಹಾಗೂ ದೇವಸ್ಥಾನದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕಡ್ಡಾಯ ಭದ್ರತಾ ತಪಾಸಣೆ ನಡೆಸುವಂತೆ ಸಲಹೆ ನೀಡಲಾಗಿದೆ.

ಕರ್ತವ್ಯನಿರತ ಪೊಲೀಸ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವು!

ಶಿವಮೊಗ್ಗ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತರನ್ನು ಈರಣ್ಣ ಗುಡಾದಾರ್ (26) ಎಂದು ಗುರುತಿಸಲಾಗಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರಾದ ಈರಣ್ಣ ಗುಡಾದಾರ್ ಕಳೆದ ಏಳು ವರ್ಷಗಳಿಂದ ಕೆಎಸ್ಆರ್ಪಿ 8ನೇ ಪಡೆಯ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಘಟನೆ ವೇಳೆ ಏಕಾಏಕಿ ಕುಸಿದು ಬಿದ್ದ ಈರಣ್ಣರನ್ನು ಸಹೋದ್ಯೋಗಿಗಳು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಷ್ಟು ದುಃಖಕರ ಸಂಗತಿಯೆಂದರೆ, ಈರಣ್ಣ ಗುಡಾದಾರ್ ಅವರು ಕೇವಲ 18 ದಿನಗಳ ಹಿಂದಷ್ಟೇ ಅದ್ದೂರಿಯಾಗಿ ವಿವಾಹವಾಗಿದ್ದರು. ಯುವ ಪೊಲೀಸ್ ಸಿಬ್ಬಂದಿಯ ಅಕಾಲಿಕ ನಿಧನ ಕುಟುಂಬಸ್ಥರು, ಸ್ನೇಹಿತರು ಹಾಗೂ ಪೊಲೀಸ್ ವಲಯದಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.

ಬಸ್‌ನಲ್ಲಿ ಟಿಕೆಟ್ ಕೊಡ್ತಿದ್ದ ‘ಶಿವಾಜಿ ರಾವ್’: ವೈರಲ್ ಆದ ತಲೈವಾ ರಜನಿಕಾಂತ್‌ನ ಅಪರೂಪದ ಐಡಿ ಕಾರ್ಡ್!

ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹಳೆಯ ಬಸ್ ಕಂಡಕ್ಟರ್ ಐಡಿ ಕಾರ್ಡ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಲೈವಾ ಸಿನಿ ಜೀವನ ಆರಂಭಕ್ಕೂ ಮುನ್ನ ನಡೆಸಿದ್ದ ಸಾಮಾನ್ಯ ಜೀವನದ ಕಥೆ ಮತ್ತೆ ಚರ್ಚೆಗೆ ಬಂದಿದೆ.

ವೈರಲ್ ಆಗಿರುವ ಗುರುತಿನ ಚೀಟಿಯಲ್ಲಿ ‘ಶಿವಾಜಿ ರಾವ್ ಗಾಯಕ್ವಾಡ್’ ಎಂಬ ಹೆಸರಿನೊಂದಿಗೆ ಅವರು ಬೆಂಗಳೂರಿನ ಬಿಟಿಎಸ್ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಾಹಿತಿ ಇದೆ. ಶ್ರೀನಗರ ಡಿಪೋ ವ್ಯಾಪ್ತಿಯ 10A ರೂಟ್‌ನಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

1971ರಲ್ಲಿ ಸೇವೆಗೆ ಸೇರಿದಾಗ ಅವರಿಗೆ ತಿಂಗಳಿಗೆ ಕೇವಲ ₹275 ಸಂಬಳ ಸಿಗುತ್ತಿತ್ತು. ಆದರೆ ಟಿಕೆಟ್ ಕೊಡುವಾಗ ತೋರಿಸುತ್ತಿದ್ದ ವಿಶಿಷ್ಟ ಸ್ಟೈಲ್ ಮತ್ತು ಧ್ವನಿಯೇ ಅವರನ್ನು ಸಾಮಾನ್ಯ ಕಂಡಕ್ಟರ್‌ಗಿಂತ ವಿಭಿನ್ನವಾಗಿಸಿತ್ತು.

ನಂತರ ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್ ಸೇರಿ, ನಿರ್ದೇಶಕ ಕೆ. ಬಾಲಚಂದರ್ ಅವರ ಮೂಲಕ ಚಿತ್ರರಂಗ ಪ್ರವೇಶಿಸಿದ ಶಿವಾಜಿ ರಾವ್, ‘ರಜನಿಕಾಂತ್’ ಎಂಬ ಹೆಸರಿನಲ್ಲಿ ವಿಶ್ವಪ್ರಸಿದ್ಧ ನಟರಾದರು.

ಇಂದು ಸಾವಿರಾರು ಕೋಟಿ ಮೌಲ್ಯದ ಬ್ರ್ಯಾಂಡ್ ಆಗಿರುವ ರಜನಿಕಾಂತ್ ಅವರ ಈ ಹಳೆಯ ಐಡಿ ಕಾರ್ಡ್ ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣಗಳನ್ನು ನೀಡಿದೆ. ‘ಒಬ್ಬ ಸಾಮಾನ್ಯ ಯುವಕನ ಕನಸು ಹೇಗೆ ಇತಿಹಾಸವಾಯಿತು’ ಎಂಬ ಚರ್ಚೆ ಈಗ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

‘2500 ಅಡಿ ಕಣಿವೆಯ ಅಂಚಿನಲ್ಲಿ ವಿಜಯ್ ಜೊತೆ ಫೈಟ್’: ಶೂಟಿಂಗ್ ನೆನೆದು ಬೆಚ್ಚಿಬಿದ್ದ ನಟ ಅಭಿಮನ್ಯು ಸಿಂಗ್!

‘ಗಬ್ಬರ್ ಸಿಂಗ್’ ಖ್ಯಾತಿಯ ನಟ ಅಭಿಮನ್ಯು ಸಿಂಗ್, ದಳಪತಿ ವಿಜಯ್ ನಟನೆಯ ‘ವೇಲಾಯುಧಂ’ ಚಿತ್ರದ ಶೂಟಿಂಗ್ ವೇಳೆ ನಡೆದಿದ್ದ ಭಯಾನಕ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಚಲಿಸುವ ರೈಲಿನ ಮೇಲೆ ನಡೆದ ಸಾಹಸ ದೃಶ್ಯ ವೇಳೆ ತಾವು ಮತ್ತು ವಿಜಯ್ ಸಾವಿನ ಅಂಚಿಗೆ ಹೋಗಿದ್ದೆವು ಎಂದು ಹೇಳಿದ್ದಾರೆ.

ಕೊಯಮತ್ತೂರಿನ ಸಮೀಪದ ಸಣ್ಣ ರೈಲು ನಿಲ್ದಾಣದಲ್ಲಿ ಈ ಆ್ಯಕ್ಷನ್ ಸೀನ್ ಚಿತ್ರೀಕರಣ ನಡೆದಿತ್ತು. ವಿಶೇಷ ರೈಲಿನ ಮೇಲೆ ವಿಜಯ್ ಮತ್ತು ಅಭಿಮನ್ಯು ಸಿಂಗ್ ಫೈಟ್ ಮಾಡುವ ದೃಶ್ಯಕ್ಕಾಗಿ ದೊಡ್ಡ ಮಟ್ಟದ ಸಿದ್ಧತೆ ಮಾಡಲಾಗಿತ್ತು. ಆದರೆ ರೈಲು ವೇಗ ಪಡೆಯುತ್ತಿದ್ದಂತೆ ಪರಿಸ್ಥಿತಿ ಅಪಾಯಕಾರಿ ತಿರುವು ಪಡೆದುಕೊಂಡಿತು.

‘ರೈಲು 70-80 ಕಿಲೋಮೀಟರ್ ವೇಗದಲ್ಲಿ ಓಡುತ್ತಿತ್ತು. ಆ ವೇಗದಲ್ಲಿ ರೈಲಿನ ಮೇಲೆಯೇ ಫೈಟ್ ಮಾಡಬೇಕಿತ್ತು. ಮುಂದೆ ಭಾರೀ ಎತ್ತರದ ರೈಲ್ವೆ ಸೇತುವೆ ಕಾಣುತ್ತಿದ್ದಂತೆ ನನ್ನ ಕಾಲೇ ನಡುಗಿತ್ತು. ಒಂದು ತಪ್ಪು ಹೆಜ್ಜೆ ಇಟ್ಟಿದ್ದರೆ ನೇರವಾಗಿ ಆಳವಾದ ಕಣಿವೆಗೆ ಬೀಳಬೇಕಾಗಿತ್ತು’ ಎಂದು ಅಭಿಮನ್ಯು ಸಿಂಗ್ ಹೇಳಿದ್ದಾರೆ.

ಈ ವೇಳೆ ವಿಜಯ್ ತುಂಬಾ ಕೂಲ್ ಆಗಿ ವರ್ತಿಸಿದ್ದರು. ‘ಭಯಪಡಬೇಡಿ, ನಾವು ಒಬ್ಬರನ್ನೊಬ್ಬರು ಕಾಪಾಡಿಕೊಳ್ಳುತ್ತೇವೆ’ ಎಂದು ಧೈರ್ಯ ತುಂಬಿದ್ದರು ಎಂದು ಅವರು ತಿಳಿಸಿದ್ದಾರೆ.

ಅಂತಿಮವಾಗಿ ಯಾವುದೇ ಅನಾಹುತವಿಲ್ಲದೆ ಶೂಟಿಂಗ್ ಮುಗಿದರೂ, ಆ ದಿನದ ಅನುಭವ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಭಯಾನಕ ಕ್ಷಣವಾಗಿ ಉಳಿದಿದೆ ಎಂದು ಅಭಿಮನ್ಯು ಸಿಂಗ್ ಹೇಳಿದ್ದಾರೆ.

ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ಬೆಳಗ್ಗೆ ರಾಜಭವನಕ್ಕೆ ಭೇಟಿ ನೀಡಿ ಅಧಿಕೃತ ನಿರ್ಧಾರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗಳಿಗೆ ಇದೀಗ ಅಧಿಕೃತ ಸ್ಪಷ್ಟತೆ ಸಿಕ್ಕಂತಾಗಿದೆ.

ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ 11:30ಕ್ಕೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜೀನಾಮೆ ಕುರಿತ ವೇಳಾಪಟ್ಟಿಯೂ ಇದೀಗ ಸ್ಪಷ್ಟವಾಗಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ರಾಜೀನಾಮೆ ಸಲ್ಲಿಸುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವರು ಹಾಗೂ ಆಪ್ತ ಶಾಸಕರಿಗೆ ಉಪಹಾರ ಕೂಟಕ್ಕೆ ಆಹ್ವಾನ ನೀಡಿದ್ದಾರೆ. ಈ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಒಳಚರ್ಚೆಗಳ ಬಗ್ಗೆ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಳಿಕ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಸಿದ್ದರಾಮಯ್ಯ, ನಂತರ ಸುದ್ದಿಗೋಷ್ಠಿ ನಡೆಸಿ ರಾಜ್ಯ ರಾಜಕೀಯದ ಇತ್ತೀಚಿನ ಬೆಳವಣಿಗೆಗಳು ಹಾಗೂ ತಮ್ಮ ನಿರ್ಧಾರದ ಕುರಿತು ಸ್ಪಷ್ಟನೆ ನೀಡುವ ಸಾಧ್ಯತೆಯಿದೆ.

ಇದೇ ವೇಳೆ ಇಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 62ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ನೆಹರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ದೇಶದ ಅಭಿವೃದ್ಧಿಗೆ ನೆಹರು ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಕಾರ್ಯಕ್ರಮದ ಬಳಿಕ ಮಾಧ್ಯಮಗಳು ದೆಹಲಿ ಪ್ರವಾಸ ಹಾಗೂ ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಪ್ರಶ್ನಿಸಿದರೂ, ಮುಖ್ಯಮಂತ್ರಿ ಯಾವುದೇ ವಿವರವಾದ ಪ್ರತಿಕ್ರಿಯೆ ನೀಡಲಿಲ್ಲ. ರಾಜಕೀಯ ಬೆಳವಣಿಗೆಗಳ ಕುರಿತು ಪ್ರಶ್ನೆ ಕೇಳಿದಾಗ, ನಾಳೆ ಮಾತನಾಡುತ್ತೇನೆ, ಏನೇ ಇದ್ದರೂ ನಾಳೆಯೇ ಮಾತನಾಡುತ್ತೇನೆ ಎಂದು ಒಂದೇ ಸಾಲಿನಲ್ಲಿ ಉತ್ತರಿಸಿ ಸಿದ್ದರಾಮಯ್ಯ ಅಲ್ಲಿಂದ ತೆರಳಿದ್ದರು.

error: Content is protected !!