Home Blog

ಮದುವೆ ತಡ ಆಗ್ತಿದ್ಯಾ!? ಶನಿ, ಮಂಗಳ ದೋಷ ಕಾರಣವಾ!? ಜ್ಯೋತಿಷ್ಯ ಹೇಳುವುದೇನು?

0

ಅನೇಕರು ಜೀವನದಲ್ಲಿ ಉತ್ತಮ ಉದ್ಯೋಗ, ಗೌರವಾನ್ವಿತ ಕುಟುಂಬ ಹಾಗೂ ಸುಸಂಸ್ಕೃತ ಬದುಕು ಹೊಂದಿದ್ದರೂ ಮದುವೆ ವಿಳಂಬವಾಗುತ್ತಿರುವುದನ್ನು ಕಾಣಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂತಹ ಸ್ಥಿತಿಗೆ ಜಾತಕದ ಗ್ರಹಸ್ಥಿತಿ ಮತ್ತು ದೋಷಗಳು ಪ್ರಮುಖ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಏಳನೇ ಮನೆ (ವಿವಾಹ ಸ್ಥಾನ) ಅತ್ಯಂತ ಪ್ರಮುಖವಾಗಿದೆ. ಈ ಮನೆಯ ಅಧಿಪತಿ ದುರ್ಬಲವಾಗಿದ್ದರೆ ಅಥವಾ 6, 8, 12ನೇ ಮನೆಗಳಲ್ಲಿ ಸ್ಥಿತಿಯಲ್ಲಿದ್ದರೆ ಮದುವೆ ವಿಳಂಬವಾಗುವ ಸಾಧ್ಯತೆ ಹೆಚ್ಚುತ್ತದೆ. ಜೊತೆಗೆ ಪಾಪ ಗ್ರಹಗಳ ದೃಷ್ಟಿಯೂ ಸಂಬಂಧಗಳಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು ಎಂದು ಜ್ಯೋತಿಷ್ಯರು ಹೇಳುತ್ತಾರೆ.

ಶನಿಯ ಪ್ರಭಾವದಿಂದ ಮದುವೆ ತಡವಾಗಬಹುದು ಎಂದು ನಂಬಿಕೆ ಇದೆ. ಆದರೆ ತಡವಾದ ಮದುವೆ ಹೆಚ್ಚು ಸ್ಥಿರವಾಗಿರುತ್ತದೆ ಎಂಬ ಅಭಿಪ್ರಾಯವೂ ಇದೆ. ಮತ್ತೊಂದೆಡೆ, ಮಂಗಳ ದೋಷ (ಕುಜ ದೋಷ) ಇದ್ದರೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಸಮಸ್ಯೆಗಳು ಎದುರಾಗಬಹುದು ಎಂದು ಹೇಳಲಾಗುತ್ತದೆ.

ಅದೇ ರೀತಿ, ರಾಹು ಮತ್ತು ಕೇತುಗಳ ಪ್ರಭಾವದಿಂದ ಸಂಬಂಧಗಳು ಅಂತಿಮ ಹಂತದಲ್ಲಿ ಮುರಿದು ಬೀಳುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಮದುವೆ ಪ್ರಕ್ರಿಯೆಯಲ್ಲಿ ಗೊಂದಲ ಮತ್ತು ವಿಳಂಬ ಉಂಟಾಗಬಹುದು.

ವಿವಾಹ ಜೀವನ ಸುಗಮವಾಗಲು ಸ್ತ್ರೀಯರ ಜಾತಕದಲ್ಲಿ ಗುರು ಮತ್ತು ಪುರುಷರ ಜಾತಕದಲ್ಲಿ ಶುಕ್ರ ಗ್ರಹಗಳು ಬಲವಾಗಿರಬೇಕು ಎಂದು ಜ್ಯೋತಿಷ್ಯರು ಅಭಿಪ್ರಾಯಪಡುತ್ತಾರೆ. ಈ ಗ್ರಹಗಳು ದುರ್ಬಲವಾಗಿದ್ದರೆ ವಿವಾಹ ಪ್ರಸ್ತಾಪಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹಣೆಬರಹದಲ್ಲಿ ಎಲ್ಲಿ ಬರೆದಿದೆಯೋ ಅಲ್ಲಿಂದಲೇ ಸ್ಪರ್ಧೆ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಚುನಾವಣಾ ಸಮಯದಲ್ಲಿ ನಿರ್ಧರಿಸಲಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ಎಲ್ಲೆಡೆ ನಮ್ಮ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ನನ್ನನ್ನೇ ಕರೆಯುತ್ತಾರೆ. ಆದ್ದರಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳಬೇಕಾಗುತ್ತದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.

2028ರೊಳಗೆ ನಮ್ಮ ಗುರಿ ಸಾಧಿಸಬೇಕು. ಸದನದಲ್ಲಿ ನಮ್ಮ ಸಂಖ್ಯೆಯನ್ನು ನೋಡಿ ಕೆಲವರು ಅಪಹಾಸ್ಯ ಮಾಡಿದ್ದಾರೆ. ಆದರೆ ನಾವು ಪಕ್ಷವನ್ನು ಮತ್ತಷ್ಟು ಬಲಪಡಿಸಿ ತೋರಿಸುತ್ತೇವೆ ಎಂದು ಹೇಳಿದರು.

ಎನ್‌ಡಿಎ ಮೈತ್ರಿ ಸರ್ಕಾರ ರಚಿಸುವ ಗುರಿಯಿದೆ ಎಂದು ತಿಳಿಸಿದ ಅವರು, ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗುತ್ತದೆ. ನಮ್ಮ ಮುಖ್ಯ ಉದ್ದೇಶ ಗುರಿ ಸಾಧನೆ. ಜೆಡಿಎಸ್ ಎಲ್ಲಿದೆ ಎಂಬ ಪ್ರಶ್ನೆ ಕೇಳುವವರಿಗೆ ನಾವು ಕಾರ್ಯದಿಂದ ಉತ್ತರ ಕೊಡುತ್ತೇವೆ ಎಂದು ಹೇಳಿದರು.

ಆಸ್ತಿಯಲ್ಲಿ ಪಾಲು ಕೇಳಿದ ಕಾರಣ ಕೊಲೆ: ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

0

ಕಾರವಾರ: ಆಸ್ತಿಯಲ್ಲಿ ಪಾಲು ಕೇಳಿದ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಶಿರಸಿಯ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಿದ್ರಳ್ಳಿ ಗ್ರಾಮದ ಕೇಶವ ಪಾಂಡುರಂಗ ಕಿತ್ತೂರಕರ್ ತಮ್ಮ ಆಸ್ತಿಯಲ್ಲಿ ಪಾಲು ಕೇಳಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಅಕ್ಷಯ ಅಲಿಯಾಸ್ ಆಕಾಶ ಪಾಂಡುರಂಗ ಕಿತ್ತೂರಕರ್, ಪಾಂಡುರಂಗ ಕೀರಪ್ಪ ಕಿತ್ತೂರಕರ್ ಹಾಗೂ ಲತಾ ತುಳಸಾಯಿ ಪಾಂಡುರಂಗ ಕಿತ್ತೂರಕರ್ ಸೇರಿ ಐವರು ಸಂಚು ರೂಪಿಸಿ ಅವರನ್ನು ಕೊಲೆ ಮಾಡಿದ್ದರು.

ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ 2019ರ ಅಕ್ಟೋಬರ್ 15ರಂದು ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಬಿ.ಎಸ್. ಲೋಕಾಪುರ ಅವರು ತನಿಖೆ ನಡೆಸಿ, ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕಾರವಾರ ಪೀಠದ ಯಲ್ಲಾಪುರದ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ್ ಮಳಗಿಕರ್ ವಾದ ಮಂಡಿಸಿದ್ದರು.

ಹುಲಿಕಲ್ ಘಾಟ್ ದುರಂತ: ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ!

ಶಿವಮೊಗ್ಗ: ಹುಲಿಕಲ್ ಘಾಟ್‌ನಲ್ಲಿ ಸಂಭವಿಸಿದ ಭೂ ಕುಸಿತ ದುರಂತದಲ್ಲಿ ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ, ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುವ ವೇಳೆ ಮಣ್ಣು ಕುಸಿದು ಕಾರ್ಮಿಕರು ಮೃತಪಟ್ಟ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಮೃತ ಕಾರ್ಮಿಕರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರಿಗೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ,” ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದಿರುವುದಾಗಿ ಹೇಳಿದರು.

ಈ ದುರಂತದಲ್ಲಿ ಮೃತಪಟ್ಟವರು ಚಕ್ಕಾರು ಗ್ರಾಮದ ರಾಘು (37), ಹಾವೇರಿ ಜಿಲ್ಲೆಯ ನೆಲಗಲು ಗ್ರಾಮದ ರಾಜು (30) ಹಾಗೂ ಕಾರ್ಮಿಕ ಶಬ್ಬೀರ್ (40) ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರ ಮೃತದೇಹಗಳು ಗುರುವಾರ (ಏಪ್ರಿಲ್ 9) ಪತ್ತೆಯಾಗಿದ್ದರೆ, ಮತ್ತೊಬ್ಬರ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.

ಮೃತದೇಹಗಳನ್ನು ಶಿವಮೊಗ್ಗ ನಗರದ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇದೇ ದುರಂತದಲ್ಲಿ ಗಾಯಗೊಂಡ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳದಲ್ಲಿ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ನಡೆಸುತ್ತಿದ್ದ ರಕ್ಷಣಾ ಕಾರ್ಯಾಚರಣೆ ಇದೀಗ ಪೂರ್ಣಗೊಂಡಿದೆ.

ಮನೋರಮಾ ಪಿಯು ಕಾಲೇಜಿಗೆ 72% ಫಲಿತಾಂಶ: ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ

0

ಗದಗ: ನಗರದ ಮನೋರಮಾ ಸ್ವತಂತ್ರ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ. ಈ ಬಾರಿ ಕಾಲೇಜು ಒಟ್ಟು 72% ಫಲಿತಾಂಶ ಸಾಧಿಸಿದ್ದು, ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಪರೀಕ್ಷೆಯಲ್ಲಿ ಐಶ್ವರ್ಯ ಅವರು 94.33% ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದರೆ, ವಿಜಯಲಕ್ಷ್ಮಿ ಪೋಲಿಸ್ ಪಾಟೀಲ 94% ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಚಿನ್ನು ಪೂಜಾರ 92.5% ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದರೆ,

ಐಶ್ವರ್ಯ ಶಿದ್ಲೀಂಗ 89% ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. 7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 16 ವಿದ್ಯಾರ್ಥಿಗಳು ಪ್ರಥಮ ವರ್ಗದಲ್ಲಿ ಹಾಗೂ 13 ವಿದ್ಯಾರ್ಥಿಗಳು ದ್ವಿತೀಯ ವರ್ಗದಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಎನ್. ಎಂ. ಕುಡತರಕರ, ಪ್ರಾಚಾರ್ಯ ಬಿ. ಎಸ್. ಹಿರೇಮಠ, ಕಾರ್ಯದರ್ಶಿ ಮಂಜುನಾಥ ಕುಡತರಕರ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ ಹಾಗೂ ಪಿಯುಸಿ ವಿಭಾಗದ ಸಂಯೋಜಕಿ ಶಾಹೀದಾ ಶಿರಹಟ್ಟಿ ಸೇರಿದಂತೆ ಸಿಬ್ಬಂದಿ ವರ್ಗ ಶ್ಲಾಘಿಸಿದ್ದಾರೆ.

ಕುಂಭಮೇಳದ ಮೊನಾಲಿಸಾ ಮದುವೆ ವಿವಾದಕ್ಕೆ ಹೊಸ ತಿರುವು: ಪತಿ ವಿರುದ್ಧ ಪೋಕ್ಸೋ ಪ್ರಕರಣ!

ನವದೆಹಲಿ: ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಫರ್ಮಾನ್ ಖಾನ್ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಮೊನಾಲಿಸಾ ತನ್ನ ಪ್ರಿಯಕರ ಫರ್ಮಾನ್ ಖಾನ್ ರನ್ನು ವಿವಾಹವಾಗಿದ್ದಳು. ಆದರೆ ಮದುವೆಯ ಸಮಯದಲ್ಲಿ ಆಕೆ ಅಪ್ರಾಪ್ತೆಯಾಗಿದ್ದಳು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಫರ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಮದುವೆ ಸಂದರ್ಭದಲ್ಲೇ ಅವರ ವಯಸ್ಸು ಮತ್ತು ‘ಲವ್ ಜಿಹಾದ್’ ಆರೋಪ ಸೇರಿದಂತೆ ಹಲವು ವಿವಾದಗಳು ಎದ್ದಿದ್ದವು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (ಎನ್‌ಸಿಎಸ್‌ಟಿ) ಕೇರಳ ಹಾಗೂ ಮಧ್ಯಪ್ರದೇಶದಲ್ಲಿ ತನಿಖೆ ಆರಂಭಿಸಿತ್ತು.

ಆಯೋಗದ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ, ಮೊನಾಲಿಸಾ ಪಾರ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದವಳಾಗಿದ್ದು, ಮದುವೆ ಸಮಯದಲ್ಲಿ 18 ವರ್ಷ ತುಂಬಿರಲಿಲ್ಲ ಎಂಬುದು ದೃಢಪಟ್ಟಿದೆ. ಆಸ್ಪತ್ರೆ ದಾಖಲೆಗಳ ಪ್ರಕಾರ, ಆಕೆ 2009ರ ಡಿಸೆಂಬರ್ 30ರಂದು ಜನಿಸಿದ್ದು, 2026ರ ಮಾರ್ಚ್ 11ರಂದು ಮದುವೆಯಾಗಿದ್ದಾಳೆ. ಆ ವೇಳೆಗೆ ಆಕೆಗೆ ಕೇವಲ 16 ವರ್ಷ ವಯಸ್ಸು ಇತ್ತು.

ಮದುವೆ ವೇಳೆ ಆಕೆ 18 ವರ್ಷ ಪೂರೈಸಿದ್ದಾಳೆ ಎಂದು ತೋರಿಸಲು ನಕಲಿ ಜನನ ಪ್ರಮಾಣಪತ್ರ ಬಳಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದರ ಆಧಾರದ ಮೇಲೆ ಕೇರಳದ ದೇವಸ್ಥಾನದಲ್ಲಿ ಮದುವೆ ನಡೆಸಲಾಗಿದ್ದು, ನಂತರ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮದುವೆ ನೋಂದಣಿಯೂ ಮಾಡಲಾಗಿದೆ.

ತನಿಖೆ ಬಳಿಕ ಫರ್ಮಾನ್ ಖಾನ್ ವಿರುದ್ಧ ಬಿಎನ್‌ಎಸ್, ಪೊಕ್ಸೋ ಕಾಯ್ದೆ ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ವ್ಯಕ್ತಿಗಳು ಅಥವಾ ಸಂಸ್ಥೆಗಳು ಭಾಗಿಯಾಗಿದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದೇ ವೇಳೆ, ಎನ್‌ಸಿಎಸ್‌ಟಿ ಕೇರಳ ಮತ್ತು ಮಧ್ಯಪ್ರದೇಶ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದ್ದು, ಏಪ್ರಿಲ್ 22ರಂದು ನವದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಗಮನಾರ್ಹವಾಗಿ, ಕಳೆದ ವರ್ಷ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಮೊನಾಲಿಸಾ ತನ್ನ ವಿಶಿಷ್ಟ ಕಣ್ಣಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದಳು. ನಂತರ 2026ರ ಮಾರ್ಚ್ 11ರಂದು ಕೇರಳದ ಪೂವಾರಿನ ಅರುಮಾನೂರ್ ನೈನಾರ್ ದೇವಸ್ಥಾನದಲ್ಲಿ ಫರ್ಮಾನ್ ಖಾನ್ ರನ್ನು ವಿವಾಹವಾಗಿದ್ದಳು.

ನಗದು ಪತ್ತೆ ಪ್ರಕರಣ: ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

0

ನವದೆಹಲಿ: ಅಪಾರ ಪ್ರಮಾಣದ ನಗದು ಪತ್ತೆಯಾದ ಪ್ರಕರಣದಲ್ಲಿ ಸುದ್ದಿಯಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರ ಅಧಿಕೃತ ನಿವಾಸದಲ್ಲಿ ದೊಡ್ಡ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ಆರೋಪಗಳ ಹಿನ್ನೆಲೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಪ್ರಸ್ತುತ ಅವರು ಆಂತರಿಕ ವಿಚಾರಣೆಯನ್ನು ಎದುರಿಸುತ್ತಿದ್ದರು.

2025ರ ಮಾರ್ಚ್‌ನಲ್ಲಿ ದೆಹಲಿಯ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ ಸುಟ್ಟ ಹಾಗೂ ಅರ್ಧ ಸುಟ್ಟ ಸ್ಥಿತಿಯಲ್ಲಿದ್ದ ನಗದು ಕಟ್ಟುಗಳು ಪತ್ತೆಯಾಗಿದ್ದು ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು.

ಈ ಬೆಳವಣಿಗೆಗಳ ಬಳಿಕ ಅವರ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ಆರಂಭಿಸಲು ಲೋಕಸಭಾ ಸ್ಪೀಕರ್ ತನಿಖಾ ಸಮಿತಿಯನ್ನು ರಚಿಸಿದ್ದರು. ಈ ತನಿಖೆಯನ್ನು ಪ್ರಶ್ನಿಸಿ ನ್ಯಾಯಮೂರ್ತಿ ವರ್ಮಾ ಸುಪ್ರೀಂ ಕೋರ್ಟ್ ಮೊರೆ ಹೋದರೂ, ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿ ತನಿಖೆಗೆ ತಡೆ ನೀಡಲು ನಿರಾಕರಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಇದೀಗ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಗಮನಾರ್ಹವಾಗಿದೆ.

ರಾಜ್ಯಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್: ಬಿಹಾರದಲ್ಲಿ ಹೊಸ ಸಿಎಂ!?

0

ಪಾಟ್ನಾ: ನಿತೀಶ್ ಕುಮಾರ್ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದನ್ನು ಬಿಹಾರ ಮುಖ್ಯಮಂತ್ರಿ ಹುದ್ದೆಯಿಂದ ಹೊರಬರುವ ಮುನ್ಸೂಚನೆ ಎಂದು ಪರಿಗಣಿಸಲಾಗಿದ್ದು, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ದಾರಿ ತೆರೆದಿದೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಹಾರ ಉಪಮುಖ್ಯಮಂತ್ರಿಗಳಾದ ವಿಜಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಉಪಸ್ಥಿತರಿದ್ದರು.

ಹೊಸ ಹುದ್ದೆ ವಹಿಸಿಕೊಳ್ಳುವ ಮುನ್ನ ನಿತೀಶ್ ಕುಮಾರ್ ದೆಹಲಿಗೆ ಭೇಟಿ ನೀಡಿ, ಶೀಘ್ರದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಬಿಹಾರದಲ್ಲಿ ನನ್ನ ಹೆಚ್ಚಿನ ಕೆಲಸ ಪೂರ್ಣಗೊಂಡಿದೆ. ಈಗ ದೆಹಲಿಯ ಜವಾಬ್ದಾರಿಗಳತ್ತ ಗಮನಹರಿಸಲು ಬಯಸುತ್ತೇನೆ ಎಂದು  ಹೇಳಿದ್ದಾರೆ.

ಮುಂದಿನ ಮೂರು ಅಥವಾ ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಂತರ ಮತ್ತೊಬ್ಬರಿಗೆ ಸಿಎಂ ಹುದ್ದೆ ನೀಡಲಾಗುತ್ತದೆ ಎಂದು ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಿತೀಶ್ ಕುಮಾರ್ ಬಿಹಾರದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ. 1985ರಲ್ಲಿ ಶಾಸಕರಾಗಿ ರಾಜಕೀಯ ಜೀವನ ಆರಂಭಿಸಿದ ಅವರು, ಬಳಿಕ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2005ರಲ್ಲಿ ಮೊದಲ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು, ದೇಶದ ಅನುಭವಿ ಮತ್ತು ಹಿರಿಯ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಮೂರು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶ್ರೀನಂದ, 2 ಸಾವಿರ ಅಡಿ ಕೆಳಗೆ ಶವವಾಗಿ ಪತ್ತೆ!

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ ಇಂದು  ಪತ್ತೆಯಾಗಿದೆ. ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಶವ ಪತ್ತೆಯಾದುದು ದೃಢಪಟ್ಟಿದೆ.

ಏಪ್ರಿಲ್ 7ರಂದು ಕೇರಳದಿಂದ ಚಿಕ್ಕಮಗಳೂರಿಗೆ ಬಂದಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ ವೇಳೆ ಬಾಲಕಿ ಹಠಾತ್ತಾಗಿ ನಾಪತ್ತೆಯಾಗಿದ್ದಳು. ಈ ಘಟನೆ ನಂತರ ಪೊಲೀಸರು ತಕ್ಷಣ ಶೋಧ ಕಾರ್ಯಾಚರಣೆ ಆರಂಭಿಸಿದ್ದರು.

ಬಾಲಕಿಯ ಪತ್ತೆಗಾಗಿ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಎಎನ್ಎಫ್ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ದಟ್ಟ ಅರಣ್ಯ ಮತ್ತು ಕಡಿದಾದ ಪರ್ವತ ಪ್ರದೇಶವಾಗಿರುವುದರಿಂದ ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನೂ ಬಳಸಲಾಗಿತ್ತು.

ಮೂರು ದಿನಗಳ ತೀವ್ರ ಶೋಧ ಕಾರ್ಯದ ನಂತರ ಇಂದು ಮಾಣಿಕ್ಯಧಾರಾದ ಆಳವಾದ ಪ್ರಪಾತದ ಕೆಳಭಾಗದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಈ ಘಟನೆ ಕುಟುಂಬಸ್ಥರಲ್ಲಿಯೂ ಹಾಗೂ ಸಾರ್ವಜನಿಕರಲ್ಲಿ ತೀವ್ರ ದುಃಖ ಮೂಡಿಸಿದ್ದು, ಕೇರಳದಿಂದ ಬಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!

0

ಚಾಮರಾಜನಗರ: ಸಾಮಾನ್ಯವಾಗಿ ಕಳ್ಳರಿಗೆ ಯಾವುದಕ್ಕೂ ಭಯವಿಲ್ಲ ಎಂಬ ಮಾತಿದೆ. ಆದರೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದ ಘಟನೆ ಎಲ್ಲರನ್ನೂ ಆಶ್ಚರ್ಯಕ್ಕೆ ಒಳಪಡಿಸಿದೆ.

ದೇವಸ್ಥಾನದ ಹುಂಡಿ ಕದಿಯಲು ಬಂದ ಖದೀಮನು, ಕಳ್ಳತನಕ್ಕೂ ಮುನ್ನ ದೇವರಿಗೆ ಕೈ ಮುಗಿದು ಕುಂಕುಮ ಹಚ್ಚಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗ್ರಾಮದ ಶಕ್ತಿ ದೇವತೆ ಪಟ್ಟದರಾಣಿ ದೇವಾಲಯದಲ್ಲಿ ಈ ಕಳ್ಳತನ ನಡೆದಿದ್ದು, ಈ ಹಿಂದೆಯೂ ಹುಂಡಿ ಹಣ ಕಳುವಾಗಿದ್ದ ಕಾರಣದಿಂದ ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಅದರಲ್ಲೇ ಈ ಘಟನೆಯ ಸಂಪೂರ್ಣ ದೃಶ್ಯ ದಾಖಲಾಗಿದೆ.

ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.

error: Content is protected !!