ಬೆಂಗಳೂರು: ವಿಮಾನ ದುರಂತದಲ್ಲಿ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ್ದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ.
ಅಜಿತ್ ಪವಾರ್ ಅವರದ್ದು ವಿಮಾನ ದುರಂತವಲ್ಲ ಅದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿ ಅವರ ಅಳಿಯ ರೋಹಿತ್ ರಾಜೇಂದ್ರ ಪವಾರ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಝೀರೋ ಎಫ್ಐಆರ್ ದಾಖಲಿಸಿದ್ದಾರೆ.
ಎಫ್ಐಆರ್ನಲ್ಲಿ, ಹಲವು ಆಂಶಗಳನ್ನ ಅಳವಡಿಸುವ ಮೂಲಕ ಇದೊಂದು ದುರಂತವಲ್ಲ ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ. ಹಾರಾಟದ ಅವಧಿ ಮುಗಿದಿದ್ದರೂ ವಿಮಾನ ಹಾರಾಡಿದ್ದು ಯಾಕೆ..? ಸುಮಾರು 8,000 ಗಂಟೆಗಳ ಕಾಲ ಹಾರಾಟ ನಡೆಸಿದ್ದರೂ ಅದನ್ನ ಮುಚ್ಚಿಡಲಾಗಿದೆ. ಡಿಜಿಸಿಎ ತನಿಖೆಯಲ್ಲಿ ವಿಮಾನವು ಹಾರಾಟಕ್ಕೆ ಯೋಗ್ಯವಾಗಿರಲಿಲ್ಲವೆಂದು ವರದಿ ನೀಡಿದ್ದರೂ ಬಳಸಿರುವುದು ಯಾಕೆ..? ಎಂದು ಹಲವು ಅನುಮಾನಗಳನ್ನು FIR ನಲ್ಲಿ ಉಲ್ಲೇಖ ಮಾಡಿದ್ದಾರೆ.
ಅಷ್ಟೆ ಅಲ್ಲ, ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದ ವಿಮಾನವನ್ನ ಭಾರತಕ್ಕೆ ತಂದು ಬಳಸಿದ್ದಾರೆಂದು ಆರೋಪಿಸಲಾಗಿದೆ. ಅಲ್ಲದೇ, ವಿಮಾನದ ಪೈಲಟ್ ಸುಮಿತ್ ಕಪೂರ್ ಈ ಹಿಂದೆ ಎರಡು ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದ ಅವರನ್ನ ಅಮಾನತು ಮಾಡಿದ್ದರು. ಆದ್ರೂ ಅದೇ ಪೈಲಟ್ರನ್ನ ನೇಮಿಸಲಾಗಿದೆ. ಇಂತಹ ಇತಿಹಾಸವಿದ್ದರೂ ಉಪಮುಖ್ಯಮಂತ್ರಿಗಳ ವಿಮಾನಕ್ಕೆ ಅವರನ್ನೇ ಪೈಲಟ್ ಆಗಿ ನೇಮಿಸಿದ್ದು ಯಾಕೆ!? ಈ ನಿರ್ಧಾರದ ಹಿಂದೆ ಯಾರು ಇದ್ದಾರೆಂಬುದನ್ನು ತನಿಖೆ ಮಾಡಬೇಕೆಂದು ಎಫ್ಐಆರ್ನಲ್ಲಿ ರೋಹಿತ್ ರಾಜೇಂದ್ರ ಪವಾರ್ ಉಲ್ಲೇಖಿಸಿದ್ದಾರೆ.
ಝೀರೋ ಎಫ್ಐಆರ್ ಎಂದರೇನು?
ಝೀರೋ ಎಫ್ಐಆರ್ ಎಂದರೆ ಅಪರಾಧ ನಡೆದ ಸ್ಥಳದ ಮಿತಿಯನ್ನು ಲೆಕ್ಕಿಸದೆ, ದೇಶದ ಯಾವುದೇ ಪೊಲೀಸ್ ಠಾಣೆಯಲ್ಲಿ ತಕ್ಷಣವೇ ದೂರು ದಾಖಲಿಸಬಹುದಾದ ವ್ಯವಸ್ಥೆ. ಇದಕ್ಕೆ ‘0’ ಸಂಖ್ಯೆ ನೀಡಿ, ನಂತರ ತನಿಖೆಗಾಗಿ ಸಂಬಂಧಿತ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ.

