Home Blog

ಕಿಮ್ಸ್ ಆಸ್ಪತ್ರೆಗೆ ಡಿಕೆ ಶಿವಕುಮಾರ್ ಭೇಟಿ: ಸಚಿವ ಡಿ. ಸುಧಾಕರ್ ಆರೋಗ್ಯ ವಿಚಾರಣೆ!

ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಆಸ್ಪತ್ರೆಗೆ ದಾಖಲಾಗಿರುವ ಸಚಿವ ಡಿ. ಸುಧಾಕರ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಧಾಕರ್ ಅವರನ್ನು ಡಿಕೆ ಶಿವಕುಮಾರ್ ಭೇಟಿ ಮಾಡಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಮಾಹಿತಿಯ ಪ್ರಕಾರ, ಸಚಿವ ಡಿ. ಸುಧಾಕರ್ ಅವರು ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರಸ್ತುತ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ವೈದ್ಯರೊಂದಿಗೆ ಚರ್ಚೆ ನಡೆಸಿ ಚಿಕಿತ್ಸೆ ಕುರಿತು ಸಂಪೂರ್ಣ ಮಾಹಿತಿ ಪಡೆದರು.

ಈ ವೇಳೆ ಶಾಸಕ ರಘುಮೂರ್ತಿ ಕೂಡ ಡಿಸಿಎಂ ಜೊತೆ ಉಪಸ್ಥಿತರಿದ್ದರು. ಆಸ್ಪತ್ರೆ ಭೇಟಿ ವೇಳೆ ಡಿಕೆ ಶಿವಕುಮಾರ್ ಅವರು ಸಚಿವ ಸುಧಾಕರ್ ಅವರ ಶೀಘ್ರ ಚೇತರಿಕೆಗಾಗಿ ಹಾರೈಸಿದ್ದು, ಕುಟುಂಬ ಸದಸ್ಯರಿಗೆ ಧೈರ್ಯ ಮತ್ತು ಬೆಂಬಲ ನೀಡಿದ್ದಾರೆ.

 

ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಭೀಕರ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ!

ಉಡುಪಿ: ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಸಿಟಿ ಬಸ್ ನಿಲ್ದಾಣದ ಸಮೀಪದಲ್ಲಿರುವ ‘ಖಾದರ್ ಕಮರ್ಷಿಯಲ್’ ಸಂಕೀರ್ಣದಲ್ಲಿ ಇಂದು ಭಾರಿ ಅಗ್ನಿ ಅವಘಡ ಸಂಭವಿಸಿದೆ.

ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಕಟ್ಟಡದೊಳಗೆ ವ್ಯಾಪಿಸಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಮೊದಲು ಹಾರ್ಡ್‌ವೇರ್ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿದ್ದ ಸುಡುವ ಪದಾರ್ಥಗಳಿಂದಾಗಿ ಅಗ್ನಿ ವೇಗವಾಗಿ ಹರಡಿದೆ. ನಂತರ ಪಕ್ಕದ ಮೊಬೈಲ್ ಅಂಗಡಿಗೂ ಬೆಂಕಿ ತಗುಲಿದ್ದು, ಅಂಗಡಿಗಳಲ್ಲಿದ್ದ ಬೆಲೆಬಾಳುವ ಹ್ಯಾಂಡ್‌ಸೆಟ್‌ಗಳು ಹಾಗೂ ಹಾರ್ಡ್‌ವೇರ್ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ದಟ್ಟ ಹೊಗೆ ಇಡೀ ಪ್ರದೇಶವನ್ನು ಆವರಿಸಿಕೊಂಡು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದರು. ಜನನಿಬಿಡ ಪ್ರದೇಶವಾದ ಕಾರಣ ಕಾರ್ಯಾಚರಣೆ ಸವಾಲಾಗಿದ್ದರೂ, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿರುವುದರಿಂದ ವ್ಯಾಪಾರಿಗಳಿಗೆ ಭಾರೀ ನಷ್ಟವಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ಖಾಸಗಿ ಬಸ್ ಪಲ್ಟಿ: 25 ಮಂದಿ ಪ್ರಯಾಣಿಕರಿಗೆ ಗಾಯ!

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟಿಯ ಅಪಾಯಕಾರಿ ನಾಲ್ಕನೇ ತಿರುವಿನಲ್ಲಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.

ಧರ್ಮಸ್ಥಳದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮೂಡಿಗೆರೆಯತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 25 ಮಂದಿ ಪ್ರಯಾಣಿಕರಿದ್ದು, ಅಪಘಾತದ ರಭಸಕ್ಕೆ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಬಸ್ ಪ್ರಪಾತಕ್ಕೆ ಬೀಳದೆ ರಸ್ತೆಯಲ್ಲೇ ಪಲ್ಟಿಯಾದ ಕಾರಣ ಭಾರೀ ದುರಂತ ತಪ್ಪಿದೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗಳಿಗೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ತಕ್ಷಣ ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪಲ್ಟಿಯಾದ ಬಸ್ ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಗಿದೆ. ಘಾಟಿ ಪ್ರದೇಶದ ಕಡಿದಾದ ತಿರುವುಗಳಲ್ಲಿ ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ನಿಶ್ಚಿತಾರ್ಥದ ಹಿಂದಿನ ರಾತ್ರಿ ಯುವತಿ ನಾಪತ್ತೆ: ಲವ್ ಜಿಹಾದ್ ಆರೋಪ, ಗ್ರಾಮದಲ್ಲಿ ಸಂಚಲನ

0

ಹಾವೇರಿ: ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಕುಟುಂಬವೊಂದು ರಾತ್ರೋರಾತ್ರಿ ಸಂಭವಿಸಿದ ಘಟನೆದಿಂದ ಆಘಾತಕ್ಕೆ ಒಳಗಾಗಿದೆ. ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಯುವತಿಯೊಬ್ಬಳು ಯುವಕನೊಂದಿಗೆ ನಾಪತ್ತೆಯಾಗಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಗ್ರಾಮದ ನಿವಾಸಿ ಶಂಕ್ರಮ್ಮ ಅವರ ನಿಶ್ಚಿತಾರ್ಥ ಇಂದು (ಏಪ್ರಿಲ್ 26) ನಿಗದಿಯಾಗಿದ್ದು, ಕುಟುಂಬಸ್ಥರು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರು. ಜೊತೆಗೆ ಮೇ 11ರಂದು ವಿವಾಹ ನಿಶ್ಚಯವಾಗಿತ್ತು. ಆದರೆ ನಿಶ್ಚಿತಾರ್ಥದ ಹಿಂದಿನ ರಾತ್ರಿ ಯುವತಿ ನಾಪತ್ತೆಯಾಗಿರುವುದು ಕುಟುಂಬಕ್ಕೆ ಭಾರೀ ಆಘಾತ ತಂದಿದೆ.

ಪೋಷಕರ ಆರೋಪದ ಪ್ರಕಾರ, ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬ ಯುವಕ ಯುವತಿಯನ್ನು ಪ್ರೇರೇಪಿಸಿ ಕರೆದೊಯ್ದಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಘಟನೆ ಬೆಳಕಿಗೆ ಬಂದ ತಕ್ಷಣ ಹಿಂದೂಪರ ಸಂಘಟನೆಗಳು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು “ವ್ಯವಸ್ಥಿತ ಲವ್ ಜಿಹಾದ್” ಎಂದು ಆರೋಪಿಸಿದ್ದಾರೆ. ಯುವತಿಯನ್ನು ಶೀಘ್ರ ಪತ್ತೆಹಚ್ಚಿ ಕುಟುಂಬಕ್ಕೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿ ಹಾಗೂ ಆರೋಪಿಯ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಮಡಿಕೇರಿಯಲ್ಲಿ ಶಿಕ್ಷಕಿಯ ಆತ್ಮಹತ್ಯೆ: ವಿದ್ಯಾರ್ಥಿಗಳಿಗೆ ವಿದಾಯದ ಬಳಿಕ ಮನೆಯಲ್ಲಿ ಗುಂಡಿಕ್ಕಿಕೊಂಡು ಅಂತ್ಯ

0

ಮಡಿಕೇರಿ: ಕೊಡಗು ಜಿಲ್ಲೆಯ ಚೇರಂಬಾಣೆ ಗ್ರಾಮದಲ್ಲಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ದಾರುಣ ಘಟನೆಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಿಗೆ ವಿದಾಯ ಹೇಳಿದ ಕೆಲವೇ ಹೊತ್ತಿನಲ್ಲಿ ಈ ದುರ್ಘಟನೆ ನಡೆದಿರುವುದು ಇನ್ನಷ್ಟು ನೋವುಂಟು ಮಾಡಿದೆ.

ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರೋಹಿಣಿ (51) ಅವರು ಜೀವನದ ಬೇಸರದಿಂದ ಮನೆಯಲ್ಲಿ ಇದ್ದ ಗನ್ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಈ ಘಟನೆ ಸ್ಥಳೀಯರಲ್ಲಿ ಮತ್ತು ಶಿಕ್ಷಣ ವಲಯದಲ್ಲಿ ತೀವ್ರ ಆಘಾತ ಉಂಟುಮಾಡಿದ್ದು, ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಶಿಕ್ಷಕಿಯನ್ನು ಕಳೆದುಕೊಂಡ ನೋವಿನಲ್ಲಿ ಮುಳುಗಿದ್ದಾರೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣಗಳ ಕುರಿತು ಪೊಲೀಸರು ಸವಿಸ್ತಾರ ತನಿಖೆ ಕೈಗೊಂಡಿದ್ದಾರೆ.

ಪ್ರೇಮದ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ? ಆಶು ರೆಡ್ಡಿ ವಿರುದ್ಧ NRI ದೂರು

ಹೈದರಾಬಾದ್: ಬಿಗ್‌ಬಾಸ್ ತೆಲುಗು ಮಾಜಿ ಸ್ಪರ್ಧಿ ಹಾಗೂ ನಟಿ ಆಶು ರೆಡ್ಡಿ ವಿರುದ್ಧ ಪ್ರೇಮದ ಹೆಸರಿನಲ್ಲಿ ಭಾರೀ ಹಣ ವಂಚನೆ ಆರೋಪ ಕೇಳಿಬಂದಿದ್ದು, ಪ್ರಕರಣ ಇದೀಗ ಪೊಲೀಸರ ತನಿಖೆಗೆ ಒಳಪಟ್ಟಿದೆ.

ಸತ್ಯನಾರಾಯಣ ಎಂಬವರು ತಮ್ಮ ಮಗ ಧರ್ಮೇಂದ್ರ ಪರವಾಗಿ ನೀಡಿದ ದೂರಿನಲ್ಲಿ, 2018ರಲ್ಲಿ ಆರಂಭವಾದ ಪರಿಚಯ ಪ್ರೇಮಕ್ಕೆ ತಿರುಗಿ, ಮದುವೆಯಾಗುವುದಾಗಿ ನಂಬಿಸಿ ನಟಿ ಹಲವು ವರ್ಷಗಳ ಕಾಲ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟು ₹9.35 ಕೋಟಿ ಹಣವನ್ನು ವಿವಿಧ ಕಾರಣಗಳ ಮೂಲಕ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಣವನ್ನು ಐಷಾರಾಮಿ ಜೀವನಶೈಲಿಗೆ ಬಳಸಿಕೊಂಡಿದ್ದು, ಕಾರುಗಳು, ಚಿನ್ನ ಹಾಗೂ ಲಾಂಕೋ ಹಿಲ್ಸ್‌ನಲ್ಲಿನ ಆಸ್ತಿ ಖರೀದಿಗೆ ಉಪಯೋಗಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ ಕುಟುಂಬ ಸದಸ್ಯರ ಮೇಲೂ ಹಣ ವಂಚನೆ ಆರೋಪ ಹೊರಿಸಲಾಗಿದೆ.

ಈ ನಡುವೆ ಸಂಧಾನದ ವೇಳೆ ನೀಡಿದ್ದ ಚೆಕ್‌ಗಳನ್ನು ನಾಶಪಡಿಸಿದ ಆರೋಪವೂ ಗಂಭೀರವಾಗಿದೆ. ಇದರಿಂದ ಪ್ರಕರಣ ಇನ್ನಷ್ಟು ಗಾಢವಾಗಿದೆ.

ಆದರೆ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಆಶು ರೆಡ್ಡಿ, ಕಾನೂನುಬದ್ಧವಾಗಿ ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣವನ್ನು ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ. ತನಿಖೆ ಮುಂದುವರಿದಿದ್ದು, ಸತ್ಯಾಂಶ ಹೊರಬೀಳುವತ್ತ ಎಲ್ಲರ ಕಣ್ಣು ನೆಟ್ಟಿದೆ.

ಹೈಪ್ರೊಫೈಲ್ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ: ಮಧ್ಯರಾತ್ರಿ ಬೆಚ್ಚಿಬೀಳಿಸಿದ ಶೂಟೌಟ್

0

ಬೆಳಗಾವಿ: ನಗರದ ಮಂಡೋಳಿ ರಸ್ತೆಯಲ್ಲಿ ವಾಸವಿರುವ ವಕೀಲೆ ಪೂಜಾ ಕಾಕತಕರ್ ಅವರ ಮನೆ ಮೇಲೆ ಮಧ್ಯರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 25ರ ರಾತ್ರಿ 1ರಿಂದ 2 ಗಂಟೆಯ ನಡುವೆ ನಡೆದ ಈ ದಾಳಿಯಲ್ಲಿ ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿ ಫೈರಿಂಗ್ ಮಾಡಲಾಗಿದೆ.

ದಾಳಿ ನಡೆಯುವ ವೇಳೆಯಲ್ಲಿ ಮೊದಲ ಮಹಡಿಯಲ್ಲಿ ವಕೀಲೆಯ ಪುತ್ರಿ ಓದುತ್ತಿದ್ದಳು ಎನ್ನುವುದು ಘಟನೆಗೆ ಗಂಭೀರ ತಿರುವು ನೀಡಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಗುಂಡಿನ ದಾಳಿಯಿಂದ ಮನೆಯ ಗಾಜುಗಳಿಗೆ ಹಾನಿಯಾಗಿದ್ದು, ಸ್ಪಷ್ಟ ಫೈರಿಂಗ್ ಗುರುತುಗಳು ಪತ್ತೆಯಾಗಿವೆ.

ಘಟನಾ ಸ್ಥಳಕ್ಕೆ ತಕ್ಷಣವೇ ಪೊಲೀಸರು ಹಾಗೂ ತಾಂತ್ರಿಕ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾಕ್ಷ್ಯ ಸಂಗ್ರಹ ಕಾರ್ಯ ಮುಂದುವರಿದಿದೆ. 18 ವರ್ಷಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿರುವ ಪೂಜಾ ಕಾಕತಕರ್ ಅವರು ಹಲವಾರು ಹೈಪ್ರೊಫೈಲ್ ಪ್ರಕರಣಗಳಲ್ಲಿ ವಾದ ಮಂಡಿಸುತ್ತಿರುವ ಹಿನ್ನೆಲೆ, ಈ ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಫೊರೆನ್ಸಿಕ್ ವರದಿ (FSL)ಗಾಗಿ ಪೊಲೀಸರು ಕಾಯುತ್ತಿದ್ದು, ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ.

ಕನಕಪುರದಲ್ಲಿ ಕಾಡಾನೆ ದಾಳಿಗೆ ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿ ಸಾವು

0

ರಾಮನಗರ/ಚಾಮರಾಜನಗರ, ಏಪ್ರಿಲ್ 26: ರಾಜ್ಯದಲ್ಲಿ ಕಾಡಾನೆಗಳ ಹಾವಳಿ ಮತ್ತೆ ತೀವ್ರಗೊಂಡಿದ್ದು, ಮಾನವ ಜೀವಹಾನಿ ಹಾಗೂ ಕೃಷಿ ನಷ್ಟಕ್ಕೆ ಕಾರಣವಾಗುತ್ತಿದೆ. ಕನಕಪುರ ತಾಲೂಕಿನ ಸಂಗಮ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ್ದ ಕಾಡಾನೆ ಪ್ರಕರಣದ ಬೆನ್ನಲ್ಲೇ, ಚೀಲಂದವಾಡಿ ಗ್ರಾಮದಲ್ಲಿ ಒಂಟಿ ಸಲಗ ದಾಳಿಗೆ ಕರಿಗುಂಡ (55) ಎಂಬವರು ಬಲಿಯಾಗಿದ್ದಾರೆ.

ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಕನಕಪುರ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ನಾಗಪಟ್ಟಣ ಸಮೀಪದ ಬರಗಿ ಕಾಲೋನಿಯಲ್ಲಿ ಕೂಡ ಕಾಡಾನೆ ಹಾವಳಿ ಮುಂದುವರಿದಿದೆ. ಬಂಡೀಪುರ ಅರಣ್ಯಕ್ಕೆ ಅಂಟಿಕೊಂಡಿರುವ ಈ ಪ್ರದೇಶದಲ್ಲಿ ಒಂಟಿ ಸಲಗ ಮೆಕ್ಕೆಜೋಳ ಬೆಳೆ ಮೇಲೆ ದಾಳಿ ನಡೆಸಿ ಸಂಪೂರ್ಣ ಹಾನಿ ಉಂಟುಮಾಡಿದೆ. ರೈತ ಮಹೇಶ್ ಅವರಿಗೆ ಭಾರೀ ನಷ್ಟ ಉಂಟಾಗಿದೆ.

ಇನ್ನೊಂದೆಡೆ ಹನೂರು ತಾಲೂಕಿನ ಪಿಜಿ ಪಾಳ್ಯದಲ್ಲಿ ಮರಿಗಳೊಂದಿಗೆ ಕಾಡಾನೆಗಳ ಹಿಂಡು ಕೆರೆಯಲ್ಲಿ ಕಾಣಿಸಿಕೊಂಡಿದ್ದು, ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ನೀರಿನತ್ತ ಕಾಡುಪ್ರಾಣಿಗಳು ಸೇರುತ್ತಿರುವುದು ಕಂಡುಬಂದಿದೆ. ಈ ಎಲ್ಲಾ ಘಟನೆಗಳು ಗ್ರಾಮಸ್ಥರಲ್ಲಿ ಭೀತಿ ವಾತಾವರಣ ಸೃಷ್ಟಿಸಿದ್ದು, ಅರಣ್ಯ ಇಲಾಖೆಯ ತ್ವರಿತ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

ರಾಜ್ ಸಮಾಧಿ ಹೇಳಿಕೆ ಗದ್ದಲ: ಕ್ಷಮೆ ಕೇಳಿದರೂ ಹಿಂದೆ ಸರಿಯದ ಚೇತನ್ ಅಹಿಂಸಾ

ಡಾ. ರಾಜ್‌ಕುಮಾರ್ ಸಮಾಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ನಟ ಚೇತನ್ ಅಹಿಂಸಾ ಇದೀಗ ಮತ್ತೊಮ್ಮೆ ಗರಂ ಆಗಿದ್ದು, ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವ ಯಾವುದೇ ಸೂಚನೆ ನೀಡಿಲ್ಲ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇತನ್ ಅಹಿಂಸಾ, “ನನ್ನ ಹೇಳಿಕೆ ಯಾರ ಭಾವನೆಗೂ ಧಕ್ಕೆ ತಂದಿದ್ದರೆ ವಿಷಾದ. ಆದರೆ ಅದು ಸುಳ್ಳು ಎಂಬುದಕ್ಕೆ ನಾನು ಒಪ್ಪುವುದಿಲ್ಲ” ಎಂದು ಹೇಳಿ ಸ್ಪಷ್ಟ ಸಂದೇಶ ನೀಡಿದ್ದಾರೆ. ಅಣ್ಣಾವ್ರ ಸಮಾಧಿಗೆ ಸರ್ಕಾರ ನೀಡಿದ ಭೂಮಿ ಕುರಿತ ಪ್ರಶ್ನೆಯನ್ನು ಅವರು ನ್ಯಾಯಸಮ್ಮತವಾದ ಚರ್ಚೆಯಾಗಿ ಬಿಂಬಿಸಿದ್ದಾರೆ.

“ನನ್ನ ಮೇಲೆ ದಬ್ಬಾಳಿಕೆ ಮಾಡಿ ಕ್ಷಮೆ ಕೇಳಿಸುವುದು ಪ್ರಜಾಪ್ರಭುತ್ವದ ಮಾರ್ಗವಲ್ಲ. ಕಾನೂನು ಕ್ರಮ ತೆಗೆದುಕೊಳ್ಳಲಿ, ನಾನು ಎದುರಿಸಲು ಸಿದ್ಧನಿದ್ದೇನೆ” ಎಂದು ಅವರು ಕಠಿಣವಾಗಿ ಪ್ರತಿಕ್ರಿಯಿಸಿದರು. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, “ನಾನು ಹೇಳಿದ್ದರಲ್ಲಿ ತತ್ವ ಇದೆ. ಇದು ಪ್ರಚಾರಕ್ಕಾಗಿ ಅಲ್ಲ, ವಿಚಾರಕ್ಕಾಗಿ” ಎಂದು ಹೇಳಿದರು.

ಇನ್ನಷ್ಟು ಮುಂದೆ ಹೋಗಿ ಅವರು ಸ್ಟಾರ್ ಸಂಸ್ಕೃತಿಯನ್ನು ಪ್ರಶ್ನಿಸಿ, “ಒಬ್ಬರಿಗೆ ವಿಶೇಷ ಸೌಲಭ್ಯ ನೀಡಿದರೆ ಇತರರಿಗೆ ಅನ್ಯಾಯವಾಗುತ್ತದೆ. ಸರ್ಕಾರ ಸಮಾನತೆ ಕಾಪಾಡಬೇಕು” ಎಂದು ಅಭಿಪ್ರಾಯಪಟ್ಟರು. ರಾಜ್ ಕುಟುಂಬ ಅಥವಾ ಅಭಿಮಾನಿಗಳ ವಿರುದ್ಧ ವೈಯಕ್ತಿಕ ದ್ವೇಷ ಇಲ್ಲವೆಂದು ಸ್ಪಷ್ಟಪಡಿಸಿದ ಅವರು, ಈ ವಿಚಾರವನ್ನು ನೀತಿಮೂಲಕ ಚರ್ಚೆಯಾಗಿ ನೋಡಬೇಕು ಎಂದರು.

ಪೊಲೀಸರು ಗೂಂಡಾಗಿರಿ ಮತ್ತು ಬೆದರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಚೇತನ್, “ನಾನು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತೇನೆ” ಎಂದು ಹೇಳಿದರು.

ಈ ಮೂಲಕ, ಕ್ಷಮೆಯ ಸೂಚನೆ ನೀಡಿದರೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡದ ಚೇತನ್ ಅಹಿಂಸಾ, ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.

ಶೃಂಗೇರಿ ಫಲಿತಾಂಶಕ್ಕೆ ಮರುಜೀವ, ಮೇ 2ರಂದು ಅಂಚೆ ಮತ ಮರುಎಣಿಕೆ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ವಿವಾದಕ್ಕೆ ಮಹತ್ವದ ತಿರುವು ಸಿಕ್ಕಿದೆ. ಹೈಕೋರ್ಟ್ ಆದೇಶದ ಮೇರೆಗೆ ಮೇ 2ರಂದು ಅಂಚೆ ಮತಗಳ ಮರುಎಣಿಕೆ ನಡೆಯಲಿದೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ವಿಜೇತರಾಗಿದ್ದರೆ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಕೇವಲ 201 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. 2,811 ಅಂಚೆ ಮತಗಳಲ್ಲಿ 279 ಮತಗಳನ್ನು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಜೀವರಾಜ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಮರುಪರಿಶೀಲನೆಗೆ ಆದೇಶ ನೀಡಿದ್ದು, ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದೆ. ಮರುಎಣಿಕೆ ಕಾರ್ಯಾಚರಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕಟ್ಟುನಿಟ್ಟಿನ ಭದ್ರತೆ ಮತ್ತು ಸಿಸಿಟಿವಿ ನಿಗಾವ್ಯವಸ್ಥೆ ಜಾರಿಗೆ ತರಲಾಗಿದೆ.

ಮರುಎಣಿಕೆ ಫಲಿತಾಂಶ ರಾಜಕೀಯವಾಗಿ ಮಹತ್ವದ್ದಾಗಿದ್ದು, ಕ್ಷೇತ್ರದ ಗೆಲುವು-ಸೋಲಿನ ಚಿತ್ರಣವೇ ಬದಲಾಗುವ ಸಾಧ್ಯತೆಗಳಿವೆ.

error: Content is protected !!