ಬೆಂಗಳೂರು: ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಇಂದು (ಮೇ 19) ಭಾವನಾತ್ಮಕ ಕ್ಷಣ ಸಿಕ್ಕಿದೆ. ತಮ್ಮ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಪುತ್ರ ವಿನೀಶ್ ಅವರನ್ನು ಸುಮಾರು ಹತ್ತು ತಿಂಗಳ ಬಳಿಕ ಮುಖಾಮುಖಿಯಾಗಿ ಭೇಟಿ ಮಾಡುವ ಅವಕಾಶ ದೊರೆತಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ನಂತರ ದರ್ಶನ್ ಜೈಲಿನಲ್ಲೇ ಇದ್ದು, ಕುಟುಂಬದ ಸದಸ್ಯರನ್ನು ಕೇವಲ ಭದ್ರತಾ ಸಿಬ್ಬಂದಿಯ ಸಮ್ಮುಖದಲ್ಲಿ ದೂರದಿಂದ ಮಾತ್ರ ಭೇಟಿಯಾಗುತ್ತಿದ್ದರು.
ಈ ನಡುವೆ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಡಿಜಿಪಿ ಅಲೋಕ್ ಕುಮಾರ್ ಅವರನ್ನು ಭೇಟಿಯಾಗಿ ವಿಶೇಷ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ದರ್ಶನ್ ಕೂಡ ಜೈಲು ಅಧಿಕಾರಿಗಳ ಬಳಿ ಇದೇ ಬೇಡಿಕೆ ಇಟ್ಟಿದ್ದರು.
ಅಂತಿಮವಾಗಿ ಜೈಲಧಿಕಾರಿಗಳು ಅರ್ಧ ಗಂಟೆಯ ಮುಖಾಮುಖಿ ಭೇಟಿಗೆ ಅನುಮತಿ ನೀಡಿದ್ದು, ದರ್ಶನ್ ಇರುವ ಕೊಠಡಿಯಲ್ಲೇ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಭೇಟಿ ಮಾಡಿ ಸಮಯ ಕಳೆದಿದ್ದಾರೆ.
ಹತ್ತು ತಿಂಗಳ ಬಳಿಕ ಕುಟುಂಬದ ಜೊತೆ ಹತ್ತಿರದಿಂದ ಮಾತನಾಡಿದ ದರ್ಶನ್ ಭಾವುಕರಾಗಿದ್ದರೆಂದು ಮೂಲಗಳು ತಿಳಿಸಿವೆ.

