Home Blog Page 2

ಒಂದೇ ಮಹಿಳೆಯ ಜತೆಗೆ ಇಬ್ಬರ ಅನೈತಿಕ ಸಂಬಂಧ: ಚಾಕುವಿನಿಂದ ಇರಿದು ಬರ್ಬರ ಹತ್ಯೆ

0

ಹಾಸನ, ಜ.29: ಹಾಸನದಲ್ಲಿ ಅನೈತಿಕ ಸಂಬಂಧ ವಿಚಾರವಾಗಿ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ಅಡುಗೆ ಗುತ್ತಿಗೆದಾರ ಆನಂದ್ (48) ಅವರನ್ನು ಧರ್ಮೇಂದ್ರ ಎಂಬ ವ್ಯಕ್ತಿ ಐದಾರು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಜ.28ರ ತಡರಾತ್ರಿ ನಡೆದ ಈ ಘಟನೆ ಹಾಸನ ನಗರವನ್ನು ಬೆಚ್ಚಿಬೀಳಿಸಿದೆ. ಆನಂದ್ ಮತ್ತು ಧರ್ಮೇಂದ್ರ ಇಬ್ಬರೂ ಒಂದೇ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಘಟನೆ ನಡೆದ ದಿನ ಇಬ್ಬರೂ ಬಾರ್‌ನಲ್ಲಿ ಭೇಟಿಯಾಗಿ ಮಹಿಳೆಯ ವಿಷಯವಾಗಿ ಮಾತಿನ ಚಕಮಕಿ ನಡೆದಿದೆ. ನಂತರ ಆನಂದ್ ಮನೆಗೆ ತೆರಳಿದ್ದರೂ, ಧರ್ಮೇಂದ್ರ ಮತ್ತೆ ಫೋನ್ ಮಾಡಿ ಕರೆಸಿಕೊಂಡಿದ್ದಾನೆ. ಆನಂದ್ ಬಂದ ಕೂಡಲೇ ಇಬ್ಬರ ನಡುವೆ ಮತ್ತೆ ಗಲಾಟೆ ಉಂಟಾಗಿದ್ದು, ಕುಡಿದ ಅಮಲಿನಲ್ಲಿ ಧರ್ಮೇಂದ್ರ ಚಾಕುವಿನಿಂದ ದಾಳಿ ನಡೆಸಿದ್ದಾನೆ.

ಧರ್ಮೇಂದ್ರ ಆ ಮಹಿಳೆಯೊಂದಿಗೆ ಕಳೆದ ಎಂಟು ವರ್ಷಗಳಿಂದ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಆನಂದ್ ಜೊತೆಗಿನ ಸಂಬಂಧ ಬೆಳಕಿಗೆ ಬಂದ ಬಳಿಕ ಅವರ ನಡುವೆ ವೈಷಮ್ಯ ತೀವ್ರಗೊಂಡಿತ್ತು. ಕೊನೆಗೆ ಆ ವೈಷಮ್ಯ ಕೊಲೆಯಲ್ಲಿ ಅಂತ್ಯಗೊಂಡಿದೆ.

ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆ ಮಾಡಿದ ನಂತರ ಧರ್ಮೇಂದ್ರ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಈ ಕುರಿತು ಹಾಸನ ನಗರ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಗರೇಟ್ ಸೇದಲು ಬೆಂಕಿಪೊಟ್ಟಣ ಕೊಟ್ಟಿಲ್ಲವೆಂದು ಕೊಲೆ: ಆರೋಪಿಗಳು ಅರೆಸ್ಟ್‌..!

0

ಬೆಂಗಳೂರು ಗ್ರಾಮಾಂತರ: ಸಿಗರೇಟ್ ಸೇದಲು ಬೆಂಕಿಪಟ್ಟಣ ನೀಡಲು ನಿರಾಕರಿಸಿದ್ದಕ್ಕೆ ಯುವಕನೊಬ್ಬನನ್ನು ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿಯ ವಿನಾಯಕ ನಗರದಲ್ಲಿ ನಡೆದಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ನಡೆದುಕೊಂಡು ಹೋಗುತ್ತಿದ್ದ ಸುಶಾಂತ್ ಎಂಬ ಯುವಕನ ಬಳಿ ಆರೋಪಿಗಳು ಬೆಂಕಿಪಟ್ಟಣ ಕೇಳಿದ್ದಾರೆ. ಸುಶಾಂತ್ “ಇಲ್ಲ” ಎಂದು ಹೇಳಿ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಗ, ತಂದುಕೊಡು ಎಂದು ಕೂಗುತ್ತಾ ಅವನ ಮೇಲೆ ಹಲ್ಲೆ ನಡೆಸಿದ್ದಾರೆ.

ಆರೋಪಿಗಳು ಸುಶಾಂತ್‌ನನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿ, ಎರಡನೇ ಮಹಡಿಯ ಮೇಲಿಂದ ಕೆಳಕ್ಕೆ ತಳ್ಳಿದ್ದು, ಪರಿಣಾಮವಾಗಿ ಸುಶಾಂತ್ ಮೃತಪಟ್ಟಿದ್ದಾನೆ. ಕೊಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಒಬ್ಬ ಅಪ್ರಾಪ್ತ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಲ್ಲಿ ಉಜ್ಬಲ್ ಪ್ರಸಾದ್, ಪ್ರಿನ್ಸ್ ಹಾಗೂ ಸೂರಜ್ ರಾಮ್ ಸೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

ಬೆಟಗೇರಿ ರೈಲ್ವೆ ಬ್ರಿಡ್ಜ್ ಅಡಿಯಲ್ಲಿ ಸಿಲುಕಿದ ಓವರ್‌ಲೋಡ್ ಲಾರಿ: ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್‌

0

ಗದಗ: ಸಮೀಪದ ಬೆಟಗೇರಿ ರೈಲ್ವೆ ಬ್ರಿಡ್ಜ್ ಬಳಿ ಓವರ್‌ಲೋಡ್ ಲಾರಿ ಸಿಲುಕಿಕೊಂಡ ಪರಿಣಾಮ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ಪಿವಿಸಿ ಪೈಪ್‌ಗಳನ್ನು ಹೊತ್ತು ಗದಗನತ್ತ ಸಾಗುತ್ತಿದ್ದ ಲಾರಿ, ಕಡಿಮೆ ಎತ್ತರದ ರೈಲ್ವೆ ಬ್ರಿಡ್ಜ್ ಅಡಿಯಲ್ಲಿ ಅಡಕವಾಗಿದೆ. ಬ್ರಿಡ್ಜ್ ಎತ್ತರ ಕಡಿಮೆ ಇರುವುದರಿಂದ ಲಾರಿ ಮುಂದೆ ಸಾಗಲು ಸಾಧ್ಯವಾಗದೆ ಮಧ್ಯ ರಸ್ತೆಯಲ್ಲೇ ನಿಂತುಕೊಂಡಿದೆ.

ಈ ಪರಿಣಾಮವಾಗಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಎರಡು ದಿಕ್ಕುಗಳಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಎರಡೂ ಬದಿಗಳಲ್ಲೂ ವಾಹನಗಳ ದೀರ್ಘ ಸಾಲುಗಳು ನಿರ್ಮಾಣವಾಗಿದ್ದು, ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ಕಿರಿಕಿರಿ ಅನುಭವಿಸಿದರು.

ಘಟನೆಯ ಮಾಹಿತಿ ಪಡೆದ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಲಾರಿಯನ್ನು ತೆರವುಗೊಳಿಸುವವರೆಗೆ ಕೆಲಕಾಲ ಟ್ರಾಫಿಕ್ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.

ಈ ರೀತಿ ಘಟನೆ ತಿಂಗಳಲ್ಲಿ ಒಂದಾದರೂ ನಡೆಯುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ: ವಿಶೇಷ ಅತಿಥಿಗಳಾಗಿ ಪ್ರಕಾಶ್‌ ರಾಜ್‌, ರುಕ್ಮಿಣಿ ವಸಂತ್‌

ಬೆಂಗಳೂರು ಮತ್ತೆ ಸಿನಿಮಾ ಸಂಸ್ಕೃತಿಯ ಜಾಗತಿಕ ವೇದಿಕೆಯಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಗೆ ಇಂದು ವಿಧಾನಸೌಧದ ಭವ್ಯ ವೇದಿಕೆಯಲ್ಲಿ ಚಾಲನೆ ಸಿಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ 5 ಗಂಟೆಗೆ ಉದ್ಘಾಟನೆ ಮಾಡಲಿದ್ದು, ಚಿತ್ರರಸಿಕರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುವ ಈ ಕಾರ್ಯಕ್ರಮಕ್ಕೆ, ಚಿತ್ರೋತ್ಸವದ ರಾಯಭಾರಿ ನಟ ಪ್ರಕಾಶ್ ರಾಜ್ ಹಾಗೂ ನಟಿ ರುಕ್ಮಿಣಿ ವಸಂತ್ ವಿಶೇಷ ಮೆರುಗು ನೀಡಲಿದ್ದಾರೆ.

ಸಂಜೆ 5.30ಕ್ಕೆ ನಡೆಯುವ ‘ವಿಶ್ವ ಸಂಗೀತ ಸಂಭ್ರಮ’ ಕಾರ್ಯಕ್ರಮವು ವಿಭಿನ್ನ ಸಂಸ್ಕೃತಿಗಳ ಸಂಗೀತ ಸಂವಾದವನ್ನು ಉಂಟುಮಾಡಲಿದೆ. ರಾತ್ರಿ ಉದ್ಘಾಟನಾ ಚಿತ್ರವಾಗಿ ನೆದರ್‌ಲ್ಯಾಂಡ್‌ನ ‘ಪೋರ್ಟ್ ಬ್ಯಾಗೇಜ್’ ಪ್ರದರ್ಶನಗೊಳ್ಳಲಿದೆ.

ಈ ಬಾರಿ BIFFES ನ ವೈಶಿಷ್ಟ್ಯವೆಂದರೆ, 65 ದೇಶಗಳ 225 ಚಿತ್ರಗಳ ಪ್ರದರ್ಶನ. ಪ್ರೇಕ್ಷಕರು ಒಂದೇ ನಗರದಲ್ಲಿ ಕುಳಿತು ವಿಶ್ವದ ಸಂಸ್ಕೃತಿ, ಜೀವನ ಶೈಲಿ ಮತ್ತು ಸಾಮಾಜಿಕ ವಾಸ್ತವತೆಯನ್ನು ಅನುಭವಿಸಬಹುದು. ಅದಕ್ಕಾಗಿಯೇ ಥೀಮ್ ಆಗಿ ‘ಬೆಂಗಳೂರಿನಲ್ಲಿ ಜಗತ್ತು’ ಆಯ್ಕೆ ಮಾಡಲಾಗಿದೆ.

ಇನ್ನೂ, ಈ ವರ್ಷದ ಧ್ಯೇಯವಾಕ್ಯ ವ‘ಸ್ತ್ರೀ ಸಂವೇದನೆ, ಸಮಾನತೆಯ ದನಿ’
ಚಿತ್ರೋತ್ಸವಕ್ಕೆ ಸಾಮಾಜಿಕ ಆಳವನ್ನು ನೀಡಿದೆ. ಮಹಿಳಾ ದೃಷ್ಟಿಕೋನ, ಸಮಾನತೆ, ಮಾನವೀಯತೆ ಕುರಿತ ಚಿತ್ರಗಳಿಗೆ ಈ ಬಾರಿ ವಿಶೇಷ ಒತ್ತು ನೀಡಲಾಗಿದೆ.

ಡಾ. ರಾಜಕುಮಾರ್ ಅವರ ಚಲನಚಿತ್ರಗಳು, ಸ್ಮಿತಾ ಪಾಟೀಲ್ ಅವರ ಆಯ್ದ ಚಿತ್ರಗಳು, ಪೋಲೆಂಡ್ ಮತ್ತು ಥಾಯ್ಲೆಂಡ್ ದೇಶದ ಖ್ಯಾತ ನಿರ್ದೇಶಕರ ಚಿತ್ರಗಳು, ಸಮಕಾಲೀನ ಭಾರತೀಯ ಸಿನಿಮಾಗಳು – ಎಲ್ಲವೂ ಈ ಚಿತ್ರೋತ್ಸವವನ್ನು ನಿಜಾರ್ಥದಲ್ಲಿ ಒಂದು ಸಿನಿಮಾ ಮಹೋತ್ಸವವಾಗಿಸಿದೆ.

ಜನವರಿ 29ರಿಂದ ಫೆಬ್ರವರಿ 6ರವರೆಗೆ, ಲುಲು ಮಾಲ್ ಸಿನಿಪೊಲಿಸ್, ಸುಚಿತ್ರಾ ಫಿಲಂ ಸೊಸೈಟಿ ಹಾಗೂ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ – ಈ ಮೂರು ಕೇಂದ್ರಗಳಲ್ಲಿ ಪ್ರೇಕ್ಷಕರು ಜಾಗತಿಕ ಸಿನಿಮಾ ಸಂಭ್ರಮವನ್ನು ಅನುಭವಿಸಬಹುದು.

ಮಹಾರಾಷ್ಟ್ರದ ‘ದಾದಾ’ಗೆ ಅಂತಿಮ ವಿದಾಯ: ಇಂದು ಸರ್ಕಾರಿ ಗೌರವಗಳೊಂದಿಗೆ ಡಿಸಿಎಂ ಅಜಿತ್ ಪವಾರ್ ಅಂತ್ಯಕ್ರಿಯೆ

0

ಮುಂಬೈ: ಪುಣೆಯ ಬಾರಾಮತಿಯಲ್ಲಿ ಸಂಭವಿಸಿದ ದುರಂತ ವಿಮಾನ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದ ‘ದಾದಾ’ಗೆ ಬೆಳಗ್ಗೆ 11 ಗಂಟೆಗೆ ಅಂತಿಮ ವಿದಾಯ ಹೇಳಲಾಗುತ್ತದೆ.

ಅಂತ್ಯಕ್ರಿಯೆ ಅಜಿತ್ ಪವಾರ್ ಅವರ ರಾಜಕೀಯ ಭದ್ರಕೋಟೆಯಾದ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ನೆರವೇರಿಸಲಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ವಿದ್ಯಾ ಪ್ರತಿಷ್ಠಾನ ಕ್ಯಾಂಪಸ್ (ಗಡಿಮಾ) ನಿಂದ ಅಂತಿಮ ಯಾತ್ರೆ ಆರಂಭಗೊಂಡಿದ್ದು, ನಗರವಿಡೀ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ಅವಕಾಶ ನೀಡುತ್ತಾ ಸಾಗುತ್ತಿದೆ.

ಅಂತ್ಯಕ್ರಿಯೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಲಕ್ಷಾಂತರ ಬೆಂಬಲಿಗರು ಸೇರಿರುವ ದೃಶ್ಯ ಭಾವನಾತ್ಮಕ ವಾತಾವರಣ ನಿರ್ಮಿಸಿದೆ.

ಉಪಮುಖ್ಯಮಂತ್ರಿ ಅಹಲ್ಯಾಬಾಯಿ ಹೋಳ್ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೊರಗಡೆ ಅಜಿತ್ ಪವಾರ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಜನಸಾಗರವೇ ಹರಿದುಬರುತ್ತಿದೆ.

ಈ ದುರಂತದಲ್ಲಿ ಮೃತಪಟ್ಟ ಅಜಿತ್ ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ದಿಲೀಪ್ ಜಾಧವ್ ಅವರ ಅಂತ್ಯಕ್ರಿಯೆ ನಿನ್ನೆ ಸತಾರಾದಲ್ಲಿ ನೆರವೇರಿಸಲಾಯಿತು. ಅವರ ಪುಟ್ಟ ಮಗನೇ ತಂದೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದು, ಈ ದೃಶ್ಯ ಹಲವರ ಕಣ್ಣೀರನ್ನು ತರಿಸಿದೆ.

ಪತನಗೊಂಡ ಚಾರ್ಟರ್ ವಿಮಾನದಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಡಿಸಿಎಂ ಅಜಿತ್ ಪವಾರ್, ಪಿಎಸ್‌ಒ ವಿದೀಪ್ ಜಾಧವ್, ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ, ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್, ಸೆಕೆಂಡ್-ಇನ್-ಕಮಾಂಡ್ ಶಾಂಭವಿ ಪಾಠಕ್ ದುರಂತದಲ್ಲಿ ಮೃತಪಟ್ಟಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆ ತಕ್ಷಣ ಘೋಷಿಸಿ; ರಾಜ್ಯ ಸರ್ಕಾರಕ್ಕೆ ಆರ್.ಬಿ. ಪಾಟೀಲ ಆಗ್ರಹ

0

ಹಾವೇರಿ:- ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ಅವಧಿ ಮುಗಿಯುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಘೋಷಿಸಬೇಕು. ಇಲ್ಲವೇ ಚುನಾವಣೆ ನಡೆಯುವವರೆಗೆ ಈಗಿರುವ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಅವಧಿಯನ್ನು ಮುಂದುವರೆಸಿ ಆದೇಶ ಹೊರಡಿಸಬೇಕು ಎಂದು ಹಾನಗಲ್ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಬಿ. ಪಾಟೀಲ ಆಗ್ರಹಿಸಿದರು.

ಬುಧವಾರ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಗಳು ಇಲ್ಲದೆ ರಾಜ್ಯದಲ್ಲಿ ಪ್ರಜಾಪ್ರತಿನಿಧಿ ವ್ಯವಸ್ಥೆ ಸಂಪೂರ್ಣ ಕುಸಿತದ ಹಾದಿಯಲ್ಲಿದೆ. ವರ್ಷಗಳ ಕಾಲ ತಾಪಂ–ಜಿಪಂ ಚುನಾವಣೆ ನಡೆಸದೆ ನಿರ್ಲಕ್ಷ್ಯ ತೋರಿರುವ ರಾಜ್ಯ ಸರ್ಕಾರ, ಇದೀಗ ಗ್ರಾಮ ಪಂಚಾಯತಿಗಳನ್ನೂ ಅದೇ ಸ್ಥಿತಿಗೆ ತಳ್ಳಲು ಹೊರಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಟೀಕಿಸಿದರು.

ತಾಪಂ ಹಾಗೂ ಜಿಪಂ ಆಡಳಿತ ಇಲ್ಲದ ಪರಿಣಾಮವಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆಯೇ ದುರ್ಬಲವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಾಯವಾಗಿದೆ. ಕೇವಲ ಅಧಿಕಾರಿಗಳ ಮೂಲಕ ಜನಪರ ಆಡಳಿತ ಸಾಧ್ಯವಿಲ್ಲ. ಜನಪ್ರತಿನಿಧಿಗಳ ಮಾರ್ಗದರ್ಶನವಿಲ್ಲದೆ ನಡೆಯುವ ಆಡಳಿತವನ್ನು ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಲಾರದು ಎಂದು ಹೇಳಿದರು.

ಗ್ರಾಮ ಪಂಚಾಯತಿಗಳ ಚುನಾವಣೆ ಘೋಷಿಸದೇ, ಅಥವಾ ಈಗಿರುವ ಸದಸ್ಯರು ಹಾಗೂ ಅಧ್ಯಕ್ಷರ ಅವಧಿಯನ್ನು ಮುಂದುವರೆಸದಿದ್ದರೆ, ಜೆಡಿಎಸ್ ಪಕ್ಷ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಆರ್.ಬಿ. ಪಾಟೀಲ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

 

ಸಿಗ್ನಲ್ ತಪ್ಪಿಸಲು ಹೋಗಿ ದುರಂತ; ಶಾಲಾ ಬಸ್‌ಗೆ ಕಾರು ಡಿಕ್ಕಿ, ತಪ್ಪಿದ ದುರಂತ!

0

ಬೆಂಗಳೂರು:- ಬನ್ನೇರುಘಟ್ಟ ರಸ್ತೆಯ ಅರಕೆರೆ ಬಳಿ ಸಿಗ್ನಲ್ ತಪ್ಪಿಸಲು ಹೋಗಿ ಶಾಲಾ ಬಸ್‌ಗೆ ಕಾರೊಂದು ಡಿಕ್ಕಿಯಾದ ಘಟನೆ ಜರುಗಿದೆ.

ಕಾರಿನ ಚಾಲಕ ಸಿಗ್ನಲ್ ತಪ್ಪಿಸಲು ವೇಗವಾಗಿ ನುಗ್ಗಿದ್ದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಬಸ್‍ನ ಮಧ್ಯೆ ಭಾಗಕ್ಕೆ ಕಾರು ಡಿಕ್ಕಿಯಾಗಿದ್ದು, ಕಾರಿನ ಮುಂಭಾಗ ಜಖಂ ಆಗಿದೆ. ಅಲ್ಲದೇ ಬಸ್‍ಗೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಹುಳಿಮಾವು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲಂಬಿಯಾ–ವೆನೆಜುವೆಲಾ ಗಡಿ ಬಳಿ ಭೀಕರ ವಿಮಾನ ಪತನ: ಸಂಸದ ಸೇರಿ 15 ಮಂದಿ ದುರ್ಮರಣ

0

ಬೊಗೋಟಾ: ಬುಧವಾರ ಕೊಲಂಬಿಯಾ–ವೆನೆಜುವೆಲಾ ಗಡಿ ಸಮೀಪ ಭೀಕರ ವಿಮಾನ ದುರಂತ ಸಂಭವಿಸಿದ್ದು, ವಿಮಾನದಲ್ಲಿದ್ದ 13 ಪ್ರಯಾಣಿಕರು ಹಾಗೂ 2 ಸಿಬ್ಬಂದಿ ಸೇರಿ ಒಟ್ಟು 15 ಮಂದಿ ಮೃತಪಟ್ಟಿದ್ದಾರೆ ಎಂದು ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಅಧಿಕೃತವಾಗಿ ದೃಢಪಡಿಸಿದೆ.

ಸರ್ಕಾರಿ ವಿಮಾನಯಾನ ಸಂಸ್ಥೆ SATENA ನಿರ್ವಹಿಸುತ್ತಿದ್ದ Beechcraft 1900 ಟ್ವಿನ್ ಪ್ರೊಪೆಲ್ಲರ್ ವಿಮಾನವು ಗಡಿ ನಗರ ಕುಕುಟಾದಿಂದ ಹೊರಟು, ಸಮೀಪದ ಓಕಾನಾ ನಗರದಲ್ಲಿ ಲ್ಯಾಂಡ್ ಆಗುವಾಗ ನಿಯಂತ್ರಣ ತಪ್ಪಿ ಪತನಗೊಂಡಿದೆ.

ಅಪಘಾತದ ಬಳಿಕ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತದಲ್ಲಿ ಕೊಲಂಬಿಯಾ ಚೇಂಬರ್ ಆಫ್ ಡೆಪ್ಯೂಟೀಸ್‌ನ ಸದಸ್ಯರಾದ ಸಂಸದ ಡಿಯೊಜಿನೆಸ್ ಕ್ವಿಂಟೆರೊ, ಜೊತೆಗೆ ಮುಂಬರುವ ಚುನಾವಣೆಗೆ ಅಭ್ಯರ್ಥಿಯಾಗಿದ್ದ ಕಾರ್ಲೋಸ್ ಸಾಲ್ಸೆಡೋ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆ ಸಂಭವಿಸಿದ ಪ್ರದೇಶವು ಪರ್ವತಮಯವಾಗಿದ್ದು, ಹವಾಮಾನವೂ ಅತಿಯಾಗಿ ಬದಲಾಗುವ ಸ್ವಭಾವ ಹೊಂದಿದೆ. ಅಲ್ಲದೆ, ಈ ಭಾಗವು ELN ಗೆರಿಲ್ಲಾ ಸಂಘಟನೆ ನಿಯಂತ್ರಣದಲ್ಲಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಪಡಿಗಳು ಎದುರಾದವು.

ವಿಮಾನ ಅವಶೇಷ ಪತ್ತೆ ಹಾಗೂ ಮೃತದೇಹಗಳ ವಾಪಸ್ಸಿಗಾಗಿ ಕೊಲಂಬಿಯಾ ಸರ್ಕಾರ ವಾಯುಪಡೆಯನ್ನು ನಿಯೋಜಿಸಿದ್ದು, ದುರಂತದ ನಿಖರ ಕಾರಣ ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆ ಆರಂಭಿಸಲಾಗಿದೆ.

ಥೈಲ್ಯಾಂಡ್‌ನಿಂದ ಡ್ರಗ್ಸ್, ಡಾರ್ಕ್‌ವೆಬ್ ಮೂಲಕ ಮಾರಾಟ: 10 ಮಂದಿ ಆರೋಪಿಗಳು ಅರೆಸ್ಟ್!

0

ಬೆಂಗಳೂರು: ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬೃಹತ್ ಡ್ರಗ್ ಜಾಲವೊಂದನ್ನು ಭೇದಿಸಿ ಕೇರಳ ಮೂಲದ ಏಳು ಮಂದಿ ಸೇರಿ ಒಟ್ಟು ಹತ್ತು ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಮತ್ತು ಅಭಿನವ್ ಬಂಧಿತರು ಎನ್ನಲಾಗಿದೆ. ಇವರಲ್ಲಿ ಇಬ್ಬರು ಕರ್ನಾಟಕ, ಒಬ್ಬ ಆಂಧ್ರಪ್ರದೇಶ ಹಾಗೂ ಉಳಿದ ಏಳು ಮಂದಿ ಕೇರಳ ಮೂಲದವರಾಗಿದ್ದಾರೆ.

ಆರೋಪಿಗಳು ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ಸ್ ತರಿಸಿಕೊಂಡು ‘ಟೀಂ ಕಲ್ಕಿ’ ಎಂಬ ಡಾರ್ಕ್‌ವೆಬ್ ವೆಬ್‌ಸೈಟ್ ಮೂಲಕ ಆರ್ಡರ್ ನೀಡಿ ಬೆಂಗಳೂರಿನಾದ್ಯಂತ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಥೈಲ್ಯಾಂಡ್‌ನಲ್ಲಿರುವ ಕೇರಳ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿಗೆ ಡ್ರಗ್ಸ್ ಕಳುಹಿಸುತ್ತಿದ್ದರೆ, ಇಲ್ಲಿಗೆ ತಲುಪಿದ ಬಳಿಕ ಯಲಹಂಕ, ಹೆಬ್ಬಾಳ, ಕೋರಮಂಗಲ, ಬೆಳ್ಳಂದೂರು ಸೇರಿದಂತೆ ವಿವಿಧ ಪ್ರದೇಶಗಳನ್ನು ಹಂಚಿಕೊಂಡು ಆರೋಪಿಗಳು ಡ್ರಗ್ಸ್ ವಿತರಿಸುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು, ಐಟಿ–ಬಿಟಿ ಉದ್ಯೋಗಿಗಳು ಹಾಗೂ ಪಾರ್ಟಿಗಳಿಗೆ ಬರುವವರೇ ಇವರ ಪ್ರಮುಖ ಗುರಿಯಾಗಿದ್ದು, ಪ್ರದೇಶ ಹಂಚಿಕೆಯ ವಿಚಾರವಾಗಿ ಪೆಡ್ಲರ್‌ಗಳ ನಡುವೆ ಆಗಾಗ ಜಗಳಗಳು ನಡೆದಿದ್ದು, ಕೆಲವೊಮ್ಮೆ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಹಂತದವರೆಗೂ ಸಂಘರ್ಷ ತಲುಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 3 ಕೆಜಿ ಹೈಡ್ರೋ ಗಾಂಜಾ, 10 ಕೆಜಿ ಗಾಂಜಾ, 500 ಎಲ್‌ಎಸ್‌ಡಿ ಸ್ಟ್ರಿಪ್ಸ್, ಎರಡು ಕಾರುಗಳು ಹಾಗೂ 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಮುಖ್ಯ ಆರೋಪಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆತನಿಗಾಗಿ ತೀವ್ರ ಶೋಧ ಮುಂದುವರಿದಿದೆ.

ಬಿಗ್ ಬಾಸ್ ಸ್ಪರ್ಧಿಗೆ ಸಿನಿಮಾದಲ್ಲಿ ಅವಕಾಶ: ‘ತಾಯಿ ಪಾತ್ರಕ್ಕೆ ಒಪ್ಪಿಕೊಂಡಿದ್ದೇನೆ’ ಎಂದ ಮಲ್ಲಮ್ಮ

ಬಿಗ್ ಬಾಸ್ ಕನ್ನಡ ಸೀಸನ್ 12 (BBK 12) ಸ್ಪರ್ಧಿಯಾಗಿದ್ದ ಮಲ್ಲಮ್ಮಗೆ ಇದೀಗ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಮಲ್ಲಮ್ಮ, ‘ವಿನಾಶಕಾಲೆ’ ಎಂಬ ಸಿನಿಮಾದಲ್ಲಿ ತಾಯಿ ಪಾತ್ರಕ್ಕೆ ಒಪ್ಪಿಕೊಂಡಿದ್ದೇನೆ. ನಟನೆಯನ್ನು ಕಲಿತುಕೊಂಡು ಉತ್ತಮವಾಗಿ ಅಭಿನಯಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸಿನಿಮಾ ಜೊತೆಗೆ ಧಾರಾವಾಹಿಗಳಲ್ಲೂ ನಟಿಸುವ ಅವಕಾಶ ದೊರೆತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ನಂತರ ತಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಆಗಿದೆ ಎಂದು ಮಲ್ಲಮ್ಮ ಹೇಳಿದ್ದಾರೆ. “ಚಿಕ್ಕ ಮಕ್ಕಳು ಹಿಡಿದು ದೊಡ್ಡವರವರೆಗೆ ಎಲ್ಲರೂ ಗುರುತಿಸುತ್ತಿದ್ದಾರೆ. ಜನ ಪ್ರೀತಿಯಿಂದ ಮಾತನಾಡಿಸುತ್ತಾರೆ. ಇದು ನನಗೆ ಬಹಳ ಸಂತೋಷ ಕೊಡುತ್ತದೆ” ಎಂದು ಹೇಳಿದರು.

ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ಮಲ್ಲಮ್ಮರನ್ನು ‘ತಾಯಿ’ ಎಂದು ಕರೆಯುತ್ತಿದ್ದ ಸ್ಪರ್ಧಿ ಧ್ರುವಂತ್ ಕುರಿತು ಕೂಡ ಅವರು ಪ್ರತಿಕ್ರಿಯಿಸಿದ್ದಾರೆ. “ಬಿಗ್ ಬಾಸ್ ಮುಗಿದು ಇಷ್ಟು ದಿನವಾದರೂ ಧ್ರುವಂತ್ ನನ್ನನ್ನು ಸಂಪರ್ಕಿಸಿಲ್ಲ. ನಂಬರ್ ಕೂಡ ಕೊಟ್ಟಿಲ್ಲ. ಇದರಿಂದ ಸ್ವಲ್ಪ ಬೇಸರವಾಗಿದೆ” ಎಂದು ಮಲ್ಲಮ್ಮ ಹೇಳಿದ್ದಾರೆ.

ಚಿತ್ರವನ್ನು ನಿರ್ದೇಶಕ ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಕರಿಬಸಪ್ಪ, ಡಾಗ್ ಸತೀಶ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಭಾಗಿಯಾಗಿದ್ದಾರೆ. ನೈಜ ಘಟನೆಯಾಧಾರಿತ ಕಥೆಯನ್ನು ‘ವಿನಾಶ ಕಾಲೆ’ ಸಿನಿಮಾ ತೆರೆ ಮೇಲೆ ತರುತ್ತಿದೆ ಎಂಬುದು ವಿಶೇಷ.

error: Content is protected !!