Home Blog

ಚಾಕೊಲೇಟ್‌ ಕದ್ದಳೆಂದು 12 ವರ್ಷದ ಮಗಳನ್ನು ಕೋಲಿನಿಂದ ಹೊಡೆದು ಕೊಂದ ತಂದೆ

ಬುಲಂದ್ಶಹರ್: ಅಪ್ರಾಪ್ತ ಮಕ್ಕಳ ಮೇಲಿನ ಹಿಂಸಾಚಾರ ಮತ್ತೊಮ್ಮೆ ದೇಶವನ್ನೇ ಬೆಚ್ಚಿಬೀಳಿಸಿದೆ. ಉತ್ತರ ಪ್ರದೇಶದ ಬುಲಂದ್ಶಹರ್‌ನಲ್ಲಿ ಚಾಕೊಲೇಟ್ ಕಳ್ಳತನದ ಅನುಮಾನದಲ್ಲಿ ತಂದೆಯೊಬ್ಬ ತನ್ನ ಮಗಳನ್ನು ಹೊಡೆದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.

ನರೋರಾದ ರತನ್‌ಪುರ ಗ್ರಾಮದಲ್ಲಿ ನಡೆದ ಈ ಪ್ರಕರಣದಲ್ಲಿ, ಪುಷ್ಪೇಂದ್ರ ತನ್ನ ಮಗಳು ಪೂಜಾಳ ಮೇಲೆ ಮದ್ಯದ ಪ್ರಭಾವದಲ್ಲೇ ಮರದ ಕೋಲಿನಿಂದ ನಿರ್ದಯವಾಗಿ ಹಲ್ಲೆ ನಡೆಸಿದ್ದಾನೆ. ಅಂಗಡಿಯವನ ಆರೋಪದಿಂದ ಉಂಟಾದ ಕೋಪವೇ ಈ ದುರಂತಕ್ಕೆ ಕಾರಣವಾಗಿದ್ದು, ತಾಯಿ ಮಧ್ಯಪ್ರವೇಶಿಸಿದರೂ ಹಲ್ಲೆ ನಿಲ್ಲಿಸಲಿಲ್ಲ ಎಂದು ಪೊಲೀಸ್ ವರದಿಗಳು ತಿಳಿಸಿವೆ.

ಹಲ್ಲೆಯಿಂದ ತಲೆಗೆ ಗಂಭೀರ ಗಾಯಗೊಂಡ ಬಾಲಕಿ ಪ್ರಜ್ಞಾಹೀನಳಾಗಿದ್ದಳು. ಆದರೆ, ಸಹಾಯ ಮಾಡುವ ಬದಲು ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದು, ಪತ್ನಿಯನ್ನು ಮನೆಯೊಳಗೆ ಕೂಡಿ ಹಾಕಿದ ಆರೋಪವೂ ಕೇಳಿಬಂದಿದೆ. ನೆರೆಹೊರೆಯವರು ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಆಕೆಯನ್ನು ಮೃತಳಾಗಿ ಘೋಷಿಸಿದರು. ಮರಣೋತ್ತರ ವರದಿಯಲ್ಲಿ 10–12 ಗಾಯಗಳ ಗುರುತುಗಳು ಪತ್ತೆಯಾಗಿವೆ.

ಇದೇ ರೀತಿಯ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಇತ್ತೀಚೆಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿತ್ತು. ದಾದು ಹೈಬತ್ ಯಮ್ಗರ್ ಎಂಬಾತ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಕಳ್ಳತನದ ಅನುಮಾನದಲ್ಲಿ ಕಟ್ಟಿಹಾಕಿ ತಲೆಕೆಳಗಾಗಿ ನೇತುಹಾಕಿ ಹಿಂಸಿಸಿದ್ದ. ಈ ಘಟನೆಯಲ್ಲಿ 10 ವರ್ಷದ ಸಾನಿಕಾ ಸಾವನ್ನಪ್ಪಿದ್ದಳು, ಮತ್ತೊಬ್ಬಳು ಗಂಭೀರ ಸ್ಥಿತಿಗೆ ತಲುಪಿದ್ದಳು.

ಈ ಎರಡು ಘಟನೆಗಳು ಸಮಾಜದಲ್ಲಿ ಹೆಚ್ಚುತ್ತಿರುವ ಪೋಷಕರ ಕ್ರೂರತೆ ಮತ್ತು ಮಕ್ಕಳ ಮೇಲಿನ ಹಿಂಸಾಚಾರದ ಭಯಾನಕ ಚಿತ್ರಣವನ್ನು ಬಯಲಿಗೆಳೆಯುತ್ತಿವೆ. ಮಕ್ಕಳ ರಕ್ಷಣೆಗೆ ಕಠಿಣ ಕಾನೂನುಗಳ ಜಾರಿಗೆ ಒತ್ತಾಯಗಳು ಕೇಳಿಬರುತ್ತಿವೆ.

ಭಾರತ ನಮ್ಮ ಮೊದಲ ಶತ್ರು ಎಂದಿದ್ದ ಪಾಕ್‌ ಮಾಜಿ ಸೇನಾ ಮುಖ್ಯಸ್ಥ ಬಾಜ್ವಾ ಸಾವು!

0

ಇಸ್ಲಾಮಾಬಾದ್: ಕಳೆದ ಫೆಬ್ರವರಿಯಲ್ಲಿ ಸ್ನಾನಗೃಹದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ ಇದೀಗ ನಿಧನರಾಗಿದ್ದಾರೆ.

ಗಾಯಗೊಂಡಿದ್ದ ಅವರು ರಾವಲ್ಪಿಂಡಿ ಮಿಲಿಟರಿ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಶಕ್ತಿಶಾಲಿ ಸೇನಾ ನಾಯಕರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದ ಬಾಜ್ವಾ, 2016 ನವೆಂಬರ್ ರಿಂದ 2022 ನವೆಂಬರ್ ರವರೆಗೆ ಸೇನಾ ಮುಖ್ಯಸ್ಥರಾಗಿದ್ದರು. ಈ ಅವಧಿಯಲ್ಲೇ ಭಾರತ ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ನಡೆಯಿತು. ಆಗ ಬಜ್ವಾ ತಮ್ಮ ಸಾರ್ವಜನಿಕ ಭಾಷಣದಲ್ಲಿ ಭಾರತ ನಮ್ಮ ಪ್ರಮುಖ ಶತ್ರು ಎಂದು ಹೇಳಿದ್ದರು.

ನಿವೃತ್ತಿ ನಂತರ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಸಂಪನ್ಮೂಲ ಮತ್ತು ಇಂಧನ ಕೊರತೆಯಿಂದ ಪಾಕಿಸ್ತಾನ ಭಾರತ ವಿರುದ್ಧ ಯುದ್ಧ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು.

ಹೋಟೆಲ್ ಗಳಲ್ಲಿ ಸಿಲಿಂಡರ್ ಅಭಾವ: ಭಾನುವಾರದ ಬಾಡೂಟಕ್ಕೆ ಹೊಸ ಕಿಚನ್ ಸೆಟ್ ಆಪ್!

ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ ಸಿಲಿಂಡರ್ ಕೊರತೆ ಹೆಚ್ಚಾಗಿದ್ದು, ಬೆಂಗಳೂರಿನ ಹೋಟೆಲ್‌ಗಳಲ್ಲಿ ಗ್ಯಾಸ್ ಸಮಸ್ಯೆ ತೀವ್ರವಾಗಿದೆ.

ಸಂಡೇ-ಸಂಡೇ ಬಾಡೂಟಕ್ಕಾಗಿ ಅಡುಗೆ ತಯಾರಿಸುವ ಹೋಟೆಲ್‌ ಸಿಬ್ಬಂದಿ ಹೊಸ ಕಿಚನ್ ಸೆಟ್ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಬಳಸಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ.

ಯಶವಂತಪುರದ ಹೋಟೆಲ್ ಆಸರೆಯಲ್ಲಿ ಹೊಸ ಕಿಚನ್ ಸೆಟ್‌ ಆಪ್ ಮಾಡಿ ತಯಾರಿ ಮಾಡಲಾಗಿದೆ, ಮಹಾಲಕ್ಷ್ಮಿ ಲೇಔಟ್ ಆದಿತ್ಯ ಹೋಟೆಲ್‌ಗೂ ಸಿಲಿಂಡರ್ ಸಮಸ್ಯೆ ಎದುರಾಗಿದೆ. ಹೋಟೆಲ್ ಮಾಲೀಕರು ಸೌದೆ ಒಲೆ, ಎಲೆಕ್ಟ್ರಿಕ್ ಸ್ಟೌ ಬಳಸಿ ಖಾದ್ಯಗಳ ತಯಾರಿಯನ್ನು ಮುಂದುವರಿಸುತ್ತಿದ್ದಾರೆ. ರಾಜಾಜಿನಗರದ ರಾಜಣ್ಣ ಮಿಲಿಟರಿ ಹೋಟೆಲ್‌ನಲ್ಲಿಯೂ ಗ್ಯಾಸ್ ಸಿಲಿಂಡರ್ ಗೋಳು ಇನ್ನೂ ಮುಂದುವರಿದಿದೆ..

ಅಡುಗೆ ಅನಿಲದ ಕೊರತೆಯಿಂದ ಕೆಲ ಹೋಟೆಲ್‌ಗಳು ತಾತ್ಕಾಲಿಕ ಬಂದ್: KH ಮುನಿಯಪ್ಪ

ಬೆಂಗಳೂರು: ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ 1 ಸಿಲಿಂಡರ್ ಕೊಡಲಾಗುತ್ತಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ KH ಮುನಿಯಪ್ಪ ಹೇಳಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೋಟೆಲ್‌ಗಳಿಗೆ ಹೆಚ್ಚುವರಿ ಅಡುಗೆ ಅನಿಲ ನೀಡುವ ವಿಚಾರ ಮಂಗಳವಾರ ನಡೆಯುವ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಡುಗೆ ಅನಿಲದ ಕೊರತೆಯಿಂದ ಕೆಲ ಹೋಟೆಲ್‌ಗಳು ತಾತ್ಕಾಲಿಕವಾಗಿ ಬಂದ್ ಆಗಿದೆ. ಹೋಟೆಲ್‌ಗಳಿಗೆ ಈಗಾಗಲೇ 20% ಪ್ರಮಾಣದಲ್ಲಿ ಅನಿಲ ಹಂಚಿಕೆ ಆಗುತ್ತಿದೆ, ಹಾಸ್ಪಿಟಲ್‌ಗಳಿಗೆ 100% ಲಭ್ಯವಾಗಿದೆ ಎಂದು ಸ್ಪಷ್ಟಪಡಿಸಿದರು. ಮಂಗಳವಾರ ನಿರ್ಧಾರಾತ್ಮಕ ಸಭೆ ನಡೆಯಲಿದ್ದು, ಅದರಲ್ಲಿ ಹೋಟೆಲ್‌ಗಳಿಗೆ ಹೆಚ್ಚುವರಿ ಸಿಲಿಂಡರ್‌ ನೀಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಡೊಮೆಸ್ಟಿಕ್ ಗ್ರಾಹಕರಿಗೆ ನಗರದಲ್ಲಿ 25 ದಿನಕ್ಕೆ 1 ಸಿಲಿಂಡರ್, ಹಳ್ಳಿಗಳಲ್ಲಿ 45 ದಿನಕ್ಕೆ 1 ಸಿಲಿಂಡರ್ ನೀಡಲಾಗುತ್ತಿದೆ. ವಾಣಿಜ್ಯ ಸಿಲಿಂಡರ್‌ ಸಮಸ್ಯೆ ಪರಿಹರಿಸುವಂತೆ ನಿರ್ದೇಶನ ನೀಡಲಾಗಿದೆ. ಈ ಸಂದರ್ಭದಲ್ಲಿ, ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದ ವಿಚಾರವೂ ಚರ್ಚೆಗೆ ಒಳಪಡಿಸಲಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಡಾ. ವಿಷ್ಣುವರ್ಧನ್ ರಸ್ತೆಯಲ್ಲಿ ಕಸದ ರಾಶಿ: ವಿಡಿಯೋ ಮಾಡಿ ಅಧಿಕಾರಿಗಳ ಗಮನ ಸೆಳೆದ ಅನಿರುದ್ಧ್ ಜತ್ಕರ್!

ಬೆಂಗಳೂರು: ನಟ ಅನಿರುದ್ಧ್ ಜತ್ಕರ್ ಕಳೆದ ಐದು ವರ್ಷಗಳಿಂದ “ಸ್ವಚ್ಛತೆಗಾಗಿ ನಾನೂ ಸಹಭಾಗಿ” ಅಭಿಯಾನ ನಡೆಸುತ್ತಿದ್ದಾರೆ.

ನಗರದಲ್ಲಿ ಎಲ್ಲೆಡೆ ಬಿದ್ದ ಕಸದ ರಾಶಿಗಳನ್ನು ಗಮನಿಸಿ, ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡುತ್ತಾರೆ.

ಸಿನಿಮಾ ಮತ್ತು ಸೀರಿಯಲ್ ಕೆಲಸಗಳ ನಡುವೆ ತಮ್ಮ ಅಭಿಯಾನವನ್ನು ನಿರಂತರವಾಗಿ ಮುಂದುವರಿಸುತ್ತಿರುವ ಅವರು, ಬೆಂಗಳೂರಿನ ‘ಡಾ. ವಿಷ್ಣುವರ್ಧನ್ ರಸ್ತೆ’ಯಲ್ಲಿ ಬಿದ್ದ ಕಸದ ರಾಶಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕಸ ಹಾಕಬಾರದು ಎಂಬ ಎಚ್ಚರಿಕೆ ಇರುವ ಸ್ಥಳದಲ್ಲಿಯೇ ಜನರು ಕಸ ಸುರಿಸುತ್ತಿರುವುದನ್ನು ಅನಿರುದ್ಧ್ ಟೀಕಿಸಿದ್ದಾರೆ.

ಈ ವಿಡಿಯೋ ವೈರಲ್ ಆದ ನಂತರ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ಕು ಮಕ್ಕಳು ಜಲಸಮಾಧಿ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಈಜಲು ಹೋಗಿದ್ದ ನಾಲ್ವರು ಮಕ್ಕಳು ದಾರುಣ ಅಂತ್ಯ ಕಂಡಿರುವ ಘಟನೆ ಜರುಗಿದೆ.

6 ವರ್ಷದ ಕಿರಣ್​​​, 11 ವರ್ಷದ ಬಸಮ್ಮ, 6 ವರ್ಷದ ಶರತ್, 7 ವರ್ಷದ ಹನುಮೇಶ್ ಮೃತರು. ಶಾಲೆಗೆ ರಜೆ ಇದ್ದಿದ್ದರಿಂದ ನಾಲ್ವರು ಮಕ್ಕಳು ಒಟ್ಟಾಗಿ ಈಜಲು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ದುರಂತ ಸಂಭವಿಸಿದೆ.

ಮೃತ ಮಕ್ಕಳೆಲ್ಲರೂ ತೀರಾ ಚಿಕ್ಕ ವಯಸ್ಸಿನವರಾಗಿದ್ದು, ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಕೊಪ್ಪಳದಲ್ಲಿ ಪೆಟ್ರೋಲ್-ಡೀಸೆಲ್ ಅಭಾವ ವದಂತಿ: ಡ್ರಮ್, ಕ್ಯಾನ್‌ ಹಿಡಿದು ಬಂಕ್‌ಗಳಿಗೆ ಮುಗಿಬಿದ್ದ ಜನ!

ಕೊಪ್ಪಳ:- ಮಧ್ಯಪ್ರಾಚ್ಯ ಸಂಘರ್ಷದಿಂದ ಪೆಟ್ರೋಲ್-ಡೀಸೆಲ್ ಸಿಗಲ್ಲ ಎಂಬ ವದಂತಿ ಹರಿದಾಡ್ತಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಂಕ್ ಗಳ ಮುಂದೆ ರಾತ್ರಿಯಿಡಿ ಕ್ಯೂ ನಿಂತು ಜನತೆ ಪೆಟ್ರೋಲ್ ಸ್ಟಾಕ್ ಮಾಡಿಕೊಳ್ತಿದ್ದಾರೆ. ಇದೀಗ ಕೊಪ್ಪಳದಲ್ಲಿಯೂ ಡ್ರಮ್, ಕ್ಯಾನ್ ಗಳಿಗೆ ಡೀಸೆಲ್, ಪೆಟ್ರೋಲ್ ಹಾಕಿಸಿಕೊಂಡು ಸ್ಟಾಕ್ ಮಾಡಲು ಮುಂದಾಗಿದ್ದಾರೆ.

ಗಂಗಾವತಿ ತಾಲ್ಲೂಕಿನ ಪೆಟ್ರೋಲ್ ಬಂಕ್‌ಗಳಿಗೆ ಜನರು ಡ್ರಮ್, ಕ್ಯಾನ್ ತಂದು, ಹೆಚ್ಚಿನ ಪ್ರಮಾಣದಲ್ಲಿ ಡಿಸೇಲ್ ತುಂಬಿಸಿಕೊಂಡಿದ್ದಾರೆ. ಪೆಟ್ರೋಲ್ ಸಿಬ್ಬಂದಿ ಯಾವುದೇ ಸಮಸ್ಯೆ ಇಲ್ಲ ಅಂತ ಹೇಳುತ್ತಿದ್ದರೂ ಜನ ಮಾತ್ರ ಅದಕ್ಕೆ ಕಿವಿಗೊಡದೆ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳುತ್ತಿದ್ದಾರೆ.

ಸ್ಥಳೀಯ ಅಧಿಕಾರಿಗಳು ಮತ್ತು ಪೆಟ್ರೋಲ್ ಬಂಕ್ ವ್ಯವಸ್ಥಾಪಕರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ, ಜನರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸಂಗ್ರಹಿಸಿಕೊಳ್ಳಬೇಡಿ ಎಂದು ಎಚ್ಚರಿಸುತ್ತಿದ್ದಾರೆ.

ರೋಣ ಹೊರವಲಯದಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ: ಸಿಲಿಂಡರ್‌ಗಳು ಚೆಲ್ಲಾಪಿಲ್ಲಿ

0

ಗದಗ: ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ಇಂದು ಬೆಳಗಿನ ಜಾವ ಗೃಹೋಪಯೋಗಿ ಅನಿಲ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ನಡೆದಿದೆ. ಘಟನೆ ನಂತರ ಕೆಲಕಾಲ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಭಾರತ್ ಗ್ಯಾಸ್ ಕಂಪನಿಗೆ ಸೇರಿದ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ, ರೋಣ–ಗಜೇಂದ್ರಗಡ ರಸ್ತೆಯಲ್ಲಿ ಪಟ್ಟಣದ ಶೇಖರಯ್ಯ ಅಜ್ಜನ ಮಠದ ಸಮೀಪ ಪಲ್ಟಿಯಾಗಿದೆ. ಗಜೇಂದ್ರಗಡ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ರಸ್ತೆ ಪಕ್ಕದ ಗುಂಡಿಗೆ ಜಾರಿದ್ದು, ಪಕ್ಕದ ಜಮೀನಿನಲ್ಲಿ ಪಲ್ಟಿಯಾಗಿದೆ. ಈ ವೇಳೆ ಲಾರಿಯಲ್ಲಿ ತುಂಬಿದ್ದ ಅನಿಲ ಸಿಲಿಂಡರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲಿಂಡರ್‌ಗಳಿಂದ ಸೋರಿಕೆ ಆಗದಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ. ರೋಣ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಎಣ್ಣೆಪ್ರಿಯರೇ ಹುಷಾರ್| ಅವಧಿ ಮೀರಿದ ಮದ್ಯ ಮಾರಾಟ, ಅಧಿಕಾರಿಗಳೇ ಶಾಮೀಲು| ಸೂಪರ್ ವೈಸರ್ ಅರೆಸ್ಟ್

ರಾಮನಗರ: ಅಕ್ರಮಗಳನ್ನು ತಡೆಯಬೇಕಿದ್ದ ಅಧಿಕಾರಿಗಳೇ ಮದ್ಯ ಮಾರಾಟ ವಿಚಾರವಾಗಿ ಕಳ್ಳಾಟ ಆಡುತ್ತಿರುವ ಪ್ರಸಂಗವೊಂದು ರಾಮನಗರದಲ್ಲಿ ಬೆಳಕಿಗೆ ಬಂದಿದೆ.

ಐಜೂರು ಠಾಣೆ ಪೊಲೀಸರ ಕಾರ್ಯಾಚರಣೆ ವೇಳೆ ಹಣದಾಸೆಗೆ ಅಧಿಕಾರಿಗಳಿಂದಲೇ ಅವಧಿ ಮೀರಿದ ಮದ್ಯ ಮಾರಾಟ ನಡೆಯುತ್ತಿರೋದು ಆಘಾತ ಮೂಡಿಸಿದೆ. ನಿಗಮದ ಸೂಪರ್ ವೈಸರ್ ಸುರೇಶ್ ಮನೆಯಲ್ಲಿಯೇ ಇವು ಪತ್ತೆಯಾಗಿದ್ದು, ವಿವಿಧ ಕಂಪನಿಗಳ 20 ಬಾಕ್ಸ್​ ಮದ್ಯ ಕಂಡುಬಂದಿದೆ. ಹಲವೆಡೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಅವಧಿಮೀರಿದ ಮದ್ಯವನ್ನು ನಾಶಪಡಿಸುವ ಬದಲು ಕರ್ನಾಟಕ ಪಾನೀಯ ನಿಗಮದ ಗೋದಾಮಿನಿಂದ ಅವನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಲಾಗಿತ್ತು. ಇವನ್ನು ಗ್ರಾಮೀಣ ಭಾಗದಲ್ಲಿ ಮಾರಲು ಪ್ಲ್ಯಾನ್ ನಡೆದಿತ್ತು ಎನ್ನಲಾಗಿದೆ.

ಅವಧಿಮೀರಿದ ಯುಬಿ ಎಕ್ಸ್ಪರ್ಟ್ ಪ್ರಿಮಿಯಂ ಸ್ಟ್ರಾಂಗ್ ಬಿಯರ್, ಕಿಂಗ್ ಫಿಶರ್, ಆಲ್ಟ್ರಾ ಪ್ರಿಮಿಯಂ ಸ್ಟ್ರಾಂಗ್ ಬಿಯರ್ ಹಾಗೂ ಮ್ಯಾಜಿಕ್ ಮೂಮೆಂಟ್ ವೋಡ್ಕಾ ಕಾಕೈಟ್​ನ ಸಿಬ್ಬಂದಿ ಸೀಜ್ ಮಾಡಿದ್ದರು. ಈಗಾಗಲೇ ಮದ್ಯದ ಅವಧಿಮೀರಿ ಮೂರ್ನಾಲ್ಕು ತಿಂಗಳು ಕಳೆದಿದ್ದು, ಸೀಜ್ ಮಾಡಿದ್ದ ಅವನ್ನು ನಾಶಪಡಿಸಲು ಅಬಕಾರಿ ಡಿಸಿ ಸೂಚಿಸಿದ್ದರು. ಹೀಗಿದ್ದರೂ ಗೋದಾಮಿನ ಸಿಸಿಟಿವಿ ಆಫ್ ಮಾಡಿಸಿ 640 ಬಾಕ್ಸ್​ಗಳಲ್ಲಿ 20 ಬಾಕ್ಸ್​ಗಳನ್ನು ನಾಶಪಡಿಸದೇ ತಂದು ಸಂಗ್ರಹ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.

ರಾಮನಗರದ ಅರ್ಚಕರಹಳ್ಳಿ ಬಳಿಯಿರುವ ಪಾನೀಯ ನಿಗಮದ ಗೋದಾಮಿನಿಂದ ಮದ್ಯ ಸಾಗಾಟದ ವೇಳೆ ಸೂಪರ್​ ವೈಸರ್​ ಸುರೇಶ್​ಗೆ ಗೋದಾಮು ಅಧಿಕಾರಿಗಳು, ಸಿಬ್ಬಂದಿ ಸಾಥ್ ನೀಡಿದ್ದರು. ಹಣದಾಸೆಗೆ ಕಳೆದ ಹಲವು ವರ್ಷಗಳಿಂದ ಅಕ್ರಮ ದಂಧೆ ನಡೆಯುತ್ತಿದ್ದು, ಐಜೂರು ಪೊಲೀಸರಿಂದ ಸೂಪರ್ ವೈಸರ್​ ಸುರೇಶ್(52) ಬಂಧಿಸಲಾಗಿದೆ. ಬಳಿಕ ಸ್ಟೇಷನ್ ಬೇಲ್ ನೀಡಿ ಆರೋಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಪ್ರಕರಣದ ಬಗ್ಗೆ ಐಜೂರು ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.

IPL 2026: ತವರಿನಲ್ಲಿ ಹೈದರಾಬಾದ್ ಮಣಿಸಿ RCB ಶುಭಾರಂಭ: ಕೊಹ್ಲಿ ಸಿಡಿಲಬ್ಬರಕ್ಕೆ ಪಾಕ್ ದಾಂಡಿಗನ ವಿಶ್ವ ದಾಖಲೆ ಧೂಳೀಪಟ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ 19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡವನ್ನು ಸುಲಭವಾಗಿ ಮಣಿಸಿದ RCB ಗೆಲುವಿನ ಶುಭಾರಂಭ ಮಾಡಿದೆ.

ತವರಿನಲ್ಲಿ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಹೊಂದಿದ್ದ ಎಸ್​ಆರ್​ಹೆಚ್ ತಂಡವನ್ನು ಮಕಾಡೆ ಮಲಗಿಸಿದ ಆರ್​ಸಿಬಿ ಕೇವಲ 15.4 ಓವರ್​ಗಳಲ್ಲಿ 202 ರನ್ ಬೆನ್ನಟ್ಟಿ ಜಯದ ನಗೆ ಬೀರಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ 201 ರನ್ ಕಲೆಹಾಕಿತು. ಗೆಲುವಿಗೆ 202 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ, ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಸುಲಭ ಜಯ ದಾಖಲಿಸಿತು. ಈ ಮೂಲಕ ಆರ್​ಸಿಬಿ ಮೊದಲ ಪಂದ್ಯದಲ್ಲೇ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 200 ಕ್ಕೂ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ ಬರೆಯಿತು.

ಪಂದ್ಯದಲ್ಲಿ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 69 ರನ್ ಬಾರಿಸಿ ಮಿಂಚಿದ್ದರು. ಈ 69 ರನ್​ಗಳೊಂದಿಗೆ ಕಿಂಗ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.

ಇದಕ್ಕೂ ಮುನ್ನ ಆರನೇ ಸ್ಥಾನದಲ್ಲಿ ಪಾಕಿಸ್ತಾನದ ಬ್ಯಾಟರ್ ಶೊಯೆಬ್ ಮಲಿಕ್ ಕಾಣಿಸಿಕೊಂಡಿದ್ದರು. ಇದೀಗ ಮಲಿಕ್ ಅವರನ್ನು ಹಿಂದಿಕ್ಕುವಲ್ಲಿ ಕೊಹ್ಲಿ ಯಶಸ್ವಿಯಾಗಿದ್ದಾರೆ. ಶೊಯೆಬ್ ಮಲಿಕ್ ಟಿ20 ಕ್ರಿಕೆಟ್​ನಲ್ಲಿ ಈವರೆಗೆ 515 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 10665 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 13571 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್​ಗಳಿಸಿ ಪಾಕ್ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದೀಗ ಕೇವಲ 398 ಟಿ20 ಇನಿಂಗ್ಸ್​ಗಳಲ್ಲಿ ವಿರಾಟ್ ಕೊಹ್ಲಿ 13,612 ರನ್​ಗಳಿಸಿದ್ದಾರೆ. ಈ ಮೂಲಕ ಶೊಯೆಬ್ ಮಲಿಕ್ ಅವರನ್ನು ಹಿಂದಿಕ್ಕಿ ಕಿಂಗ್ ಕೊಹ್ಲಿ ಟಿ20 ರನ್ ಸರದಾರರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.

ಅಷ್ಟೇ ಅಲ್ಲದೆ ಟಿ20 ಇತಿಹಾಸದಲ್ಲೇ ಅತೀ ಹೆಚ್ಚು ರನ್​ಗಳಿಸಿದ ವಿಶ್ವ ದಾಖಲೆ ಬರೆಯಲು ಮುನ್ನುಗ್ಗುತ್ತಿದ್ದಾರೆ.

error: Content is protected !!