Home Blog

ಏಪ್ರಿಲ್ 1ರಿಂದ ವಿದ್ಯುತ್ ದರ ಏರಿಕೆ ಶಾಕ್: ಎಸ್ಕಾಂಗಳ ಬಾಕಿ ವಸೂಲಿ ಶುರು!

ಬೆಂಗಳೂರು: ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ರಾಜ್ಯದ ವಾಣಿಜ್ಯ ಹಾಗೂ ಕೈಗಾರಿಕಾ ವಿದ್ಯುತ್ ಬಳಕೆದಾರರಿಗೆ ದರ ಏರಿಕೆಯ ಹೊರೆ ಬೀಳಲಿದೆ. ವಿದ್ಯುತ್ ಸರಬರಾಜು ಕಂಪನಿಗಳ ನಷ್ಟವನ್ನು ಪೂರೈಸುವ ಉದ್ದೇಶದಿಂದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ದರ ಪರಿಷ್ಕರಣೆಗೆ ಅನುಮತಿ ನೀಡಿದ್ದು, ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರಲಿದೆ.

ಈ ದರ ಏರಿಕೆಯು 2025-26ನೇ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಜಾರಿಗೊಳಿಸಲಾಗಿದ್ದು, ಏಪ್ರಿಲ್ 2025ರಿಂದ ಮಾರ್ಚ್ 2026ರವರೆಗೆ ಬಳಸಿದ ವಿದ್ಯುತ್‌ಗೆ ಹೆಚ್ಚುವರಿ ಶುಲ್ಕವನ್ನು ಈಗ ವಸೂಲಿ ಮಾಡಲಾಗುತ್ತದೆ. ಈ ಬಾಕಿ ಮೊತ್ತವನ್ನು ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳು 2026-27ರ ಬಿಲ್ಲುಗಳಲ್ಲಿ ಸೇರಿಸಲಿವೆ.

ಕೈಗಾರಿಕೆಗಳು, ಹೋಟೆಲ್‌ಗಳು ಹಾಗೂ ಸಿನೆಮಾ ಮಂದಿರಗಳಂತಹ ವಾಣಿಜ್ಯ ಘಟಕಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ದರ ಏರಿಕೆ ಮಾಡಲಾಗಿದೆ. ಇದರಿಂದ ಉತ್ಪಾದನಾ ವೆಚ್ಚ ಮತ್ತು ಸೇವಾ ಶುಲ್ಕಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಇತ್ತೀಚಿನ ವರದಿಗಳ ಪ್ರಕಾರ ರಾಜ್ಯದಲ್ಲಿ ವಿದ್ಯುತ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಬಳಕೆ ಹೆಚ್ಚು ದಾಖಲಾಗಿದ್ದು, ಈ ತಿಂಗಳು ರಾಜ್ಯದ ಒಟ್ಟು ಬಳಕೆ 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ. ಬೆಂಗಳೂರು ನಗರವೊಂದೇ ಒಂದು ಸಣ್ಣ ರಾಜ್ಯದಷ್ಟು ವಿದ್ಯುತ್ ಬಳಸುತ್ತಿದೆ ಎನ್ನಲಾಗಿದೆ. ನಗರದ ಪೀಕ್ ಬೇಡಿಕೆ 2,000ರಿಂದ 2,500 ಮೆಗಾವ್ಯಾಟ್ ಮಟ್ಟ ತಲುಪಿದೆ.

ಮಾರ್ಚ್ ತಿಂಗಳಲ್ಲಿ ಬೇಸಿಗೆಯ ತಾಪಮಾನ ಏರಿಕೆಯಿಂದ ಎಸಿ ಬಳಕೆ ಹೆಚ್ಚಾದುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರಾವರಿ ಪಂಪ್‌ಸೆಟ್‌ಗಳ ನಿರಂತರ ಬಳಕೆ ವಿದ್ಯುತ್ ಬೇಡಿಕೆ ಹೆಚ್ಚಲು ಪ್ರಮುಖ ಕಾರಣಗಳಾಗಿವೆ. ಜೊತೆಗೆ ಅಡುಗೆ ಅನಿಲದ ಕೊರತೆಯಿಂದ ಮನೆಗಳು ಹಾಗೂ ಹೋಟೆಲ್‌ಗಳು ಇಂಡಕ್ಷನ್ ಸ್ಟೌವ್, ಹೀಟರ್‌ಗಳಿಗೆ ಮೊರೆ ಹೋಗುವ ಸಾಧ್ಯತೆ ಇದ್ದು, ಇದರಿಂದ ಗ್ರಿಡ್ ಮೇಲೆ ಇನ್ನೂ 400ರಿಂದ 500 ಮೆಗಾವ್ಯಾಟ್ ಹೆಚ್ಚುವರಿ ಒತ್ತಡ ಬೀಳುವ ಆತಂಕ ವ್ಯಕ್ತವಾಗಿದೆ.

1.5 ಕೋಟಿ ರೂ.ತೆರಿಗೆ ಬಾಕಿ : ತ.ನಾಡು ಮಾಜಿ ಸಿಎಂ ಜಯಲಲಿತಾ ಬಂಗಲೆ ಜಪ್ತಿ!

0

ಹೈದರಾಬಾದ್: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸೇರಿದ ಹೈದರಾಬಾದ್‌ನ ನಿವಾಸವನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಹಲವು ವರ್ಷಗಳಿಂದ ಸುಮಾರು 1.5 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

2016ರಲ್ಲಿ ನಿಧನರಾದ ಜಯಲಲಿತಾ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ತೆರಿಗೆ ಪಾವತಿಸಲು ಅನೇಕ ಬಾರಿ ನೋಟಿಸ್ ನೀಡಿದ್ದರೂ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರ ಕಾಲೊನಿಯ ಈ ಆಸ್ತಿ 2017ರಿಂದಲೇ ಬಾಕಿದಾರರ ಪಟ್ಟಿಯಲ್ಲಿ ಇದ್ದು, ಫೆಬ್ರವರಿಯಲ್ಲಿ ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಮನೆಯನ್ನು ಹಿಂದೆ ಉದ್ಯಮಿ ವಿಜಯ್ ಮಲ್ಯ ಅವರಿಗೆ ಬಾಡಿಗೆಗೆ ನೀಡಲಾಗಿತ್ತು. ಆ ಅವಧಿಯಿಂದಲೇ ತೆರಿಗೆ ಬಾಕಿ ಹೆಚ್ಚಾಗತೊಡಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮಾರ್ಚ್ 31ರೊಳಗೆ ಪ್ರಮುಖ ಆಸ್ತಿ ತೆರಿಗೆ ಬಾಕಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು GHMC ಆಯುಕ್ತರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೆಲಸದಿಂದ ತೆಗೆದಿದ್ದಕ್ಕೆ ಚಾಕುವಿನಿಂದ ಇರಿದು ಮ್ಯಾನೇಜರ್ ಹತ್ಯೆ!

0

ಬೆಂಗಳೂರು: ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ ಕಂಪನಿಯ ಮ್ಯಾನೇಜರ್‌ನ್ನು ಚಾಕುವಿನಿಂದ ಹತ್ಯೆ ಮಾಡಿದ ಭೀಕರ ಘಟನೆ ತಿಗಳರಪಾಳ್ಯದಲ್ಲಿ ನಡೆದಿದೆ.

ತಿಗಳರಪಾಳ್ಯದ ಪವರ್ ಪ್ಲಾಸ್ಟಿಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮ್ಯಾನೇಜರ್ ರಾಹುಲ್ (38) ಹತ್ಯೆಯಾದ ವ್ಯಕ್ತಿ. ಯಾದಗಿರಿ ಮೂಲದ ಹನುಮಂತಪ್ಪ ಎಂಬಾತ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಉದ್ಯೋಗದಿಂದ ವಜಾಗೊಂಡಿದ್ದಕ್ಕೆ ಕೋಪಗೊಂಡ ಹನುಮಂತಪ್ಪ, ಮಾರ್ಚ್ 30ರಂದು ಕಂಪನಿಯಲ್ಲೇ ಮ್ಯಾನೇಜರ್ ರಾಹುಲ್ ಮೇಲೆ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಹುಲ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತೀವ್ರ ರಕ್ತಸ್ರಾವದಿಂದ ರಾಹುಲ್ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ಪ್ರಯತ್ನಗಳ ನಡುವೆಯೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಮೃತರು ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.

ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ಸಂಬಂಧ ರಾಜಗೋಪಾಲನಗರ ಪೊಲೀಸರು ಆರೋಪಿ ಹನುಮಂತಪ್ಪನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ದೊಡ್ಡ ಅಂತರದ ಗೆಲುವು: ಡಿ.ಕೆ. ಶಿವಕುಮಾರ್ ವಿಶ್ವಾಸ

ದಾವಣಗೆರೆ: ದಿವಂಗತ ಶಾಮನೂರು ಶಿವಶಂಕರಪ್ಪನವರು ಮಾಡಿರುವ ಸೇವೆ, ಕೊಟ್ಟಿರುವ ಕೊಡುಗೆಗಳನ್ನು ಈ ಭಾಗದ ಜನ ಸ್ಮರಿಸುತ್ತಿದ್ದಾರೆ. ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ ಅವರು ದೊಡ್ಡ ಅಂತರದ ಗೆಲುವು ಸಾಧಿಸಲಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ದಾವಣೆಗೆರೆಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಎರಡು ಕ್ಷೇತ್ರಗಳಲ್ಲಿನ ಉಪಚುನಾವಣೆ ಪ್ರಚಾರದ ಬಗ್ಗೆ ಕೇಳಿದಾಗ, “ನಮ್ಮ ಮುಖ್ಯಮಂತ್ರಿಗಳು ಈಗಾಗಲೇ ಉಪಚುನಾವಣೆ ಕ್ಷೇತ್ರಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ. ನಮ್ಮ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಪಕ್ಷ ಯಾರಿಗೆ ಎಲ್ಲಿ ಪ್ರಚಾರ ಮಾಡಲು ಜವಾಬ್ದಾರಿ ನಿಡಿದೆಯೋ ಆಯಾ ನಾಯಕರು ಅಲ್ಲಿ ಪ್ರಚಾರನಿರತರಾಗಿದ್ದಾರೆ.

ನಾನು ಅಸ್ಸಾಂನಲ್ಲಿ ಎರಡು ದಿನ ಪ್ರಚಾರ ಮುಗಿಸಿ ಇಲ್ಲಿಗೆ ಬಂದಿದ್ದೇನೆ. ಇಂದು ದಾವಣಗೆರೆ, ನಾಳೆ ಬಾಗಲಕೋಟೆಯಲ್ಲಿ ಪ್ರಚಾರ ಮಾಡುತ್ತೇವೆ. ನಂತರ ಮತ್ತೆ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಪ್ರಚಾರ ಮಾಡುತ್ತೇವೆ. ಈ ಮಧ್ಯೆ ಎರಡು ದಿನ ಕೇರಳಕ್ಕೆ ಹಾಗೂ ಒಂದು ದಿನ ಅಸ್ಸಾಂಗೆ ಹೋಗಿ ಪ್ರಚಾರ ಮಾಡುತ್ತೇನೆ” ಎಂದು ಹೇಳಿದರು.

ಪಕ್ಷ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದೆ

“ನಾವು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಎಲ್ಲಾ ಸಮಾಜ, ಎಲ್ಲಾ ವರ್ಗಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. ಶಾಮನೂರು ಶಿವಶಂಕರಪ್ಪ ಅವರು ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿದ್ದವರು. ಅವರ ಕೊಡುಗೆ ಅಪಾರವಾಗಿದೆ. ನಾನು ಇಲ್ಲಿ ಪ್ರತ್ಯೇಕ ಸಮೀಕ್ಷೆ ಮಾಡಿಸಿದ್ದು, ಕೋವಿಡ್ ಸಮಯದಲ್ಲಿ ಶಾಮನೂರು ಶಿವಶಂಕರಪ್ಪನವರು ಮಾಡಿದ ಸಹಾಯ, ಸಹಕಾರವನ್ನು ಜನ ಸ್ಮರಿಸುತ್ತಿದ್ದಾರೆ. ವಿದ್ಯಾ ಕ್ಷೇತ್ರದಲ್ಲಿ ಅವರು ನೀಡಿರುವ ಸೇವೆಯನ್ನು ನೆನೆಯುತ್ತಿದ್ದಾರೆ” ಎಂದರು.

“ಸಾವಿರಾರು ಜನ ಹೊರಗಡೆಯಿಂದ ಬಂದು ಇಲ್ಲಿ ಶಿಕ್ಷಣ ಪಡೆಯುವಂತೆ ಮಾಡಿರುವವರು ಶಿವಶಂಕರಪ್ಪನವರು. ಅವರಿಂದ ಈ ಜಿಲ್ಲೆ ಪ್ರಸಿದ್ಧವಾಗಿದೆ. ಅವರ ಕುಟುಂಬಕ್ಕೆ ಶಕ್ತಿ ತುಂಬಲು ಜನ ತೀರ್ಮಾನಿಸಿದ್ದಾರೆ. 79% ಜನ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಹೇಳಿದ್ದು,

ಇದು ಬಹಳ ಸಂತೋಷದ ವಿಚಾರ. ನಮ್ಮ ಗ್ಯಾರಂಟಿಗಳು ಕ್ಷೇತ್ರದ ಮನೆ ಮನೆಗೂ ತಲುಪಿವೆ. 59 ಸಾವಿರ ಬಡ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. 1.40 ಲಕ್ಷ ಜನರಿಗೆ ಅನ್ನ ಭಾಗ್ಯ ಯೋಜನೆ, 59 ಸಾವಿರ ಮನೆಗಳಿಗೆ ಉಚಿತ ವಿದ್ಯುತ್ ಸಿಗುತ್ತಿದೆ. ಮಹಿಳೆಯರು ಬಸ್ ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ” ಎಂದು ವಿವರಿಸಿದರು.

“ಗ್ಯಾಸ್, ಪೆಟ್ರೋಲ್, ಡೀಸೆಲ್, ಕಬ್ಬಿಣ, ಸೀಮೆಂಟ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇನ್ನು ಮುಂದೆಯೂ ಏರಿಕೆಯಾಗಲಿದೆ. ಈ ಬೆಲೆ ಏರಿಕೆಯಿಂದ ಜನರನ್ನು ರಕ್ಷಣೆ ಮಾಡಲು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಈ ಯೋಜನೆ ಮಹತ್ವ ಈಗ ಅರಿವಾಗುತ್ತಿದೆ” ಎಂದರು.

ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡಿಕೊಂಡು, ಅಧಿಕಾರ ನೀಡುತ್ತಾ ಬಂದಿದ್ದೇವೆ

ಪ್ರಚಾರಕ್ಕೆ ಸಚಿವ ಜಮೀರ್ ಅಹ್ಮದ್ ಅವರು ಬರುತ್ತಾರಾ ಎಂದು ಕೇಳಿದಾಗ, “ಪಕ್ಷ ಜಮೀರ್ ಅವರಿಗೆ ಕೇರಳ ಚುನಾವಣೆ ಪ್ರಚಾರದ ಜವಾಬ್ದಾರಿ ನೀಡಿದ್ದು, ಅದನ್ನು ಮುಗಿಸಿಕೊಳ್ಳುತ್ತಾರೆ. ಇನ್ನುಳಿದ ಅಲ್ಪಸಂಖ್ಯಾತ ನಾಯಕರಿಗೂ ನಾವು ಚುನಾವಣಾ ಪ್ರಚಾರದ ಜವಾಬ್ದಾರಿ ವಹಿಸಿದ್ದೇವೆ” ಎಂದರು.

ಜಮೀರ್ ಅವರಿಗೆ ಅಸಮಾಧಾನವಿದೆ ಎಂದು ಕೇಳಿದಾಗ, “ಒಬ್ಬ ವ್ಯಕ್ತಿ ಮೇಲೆ ಪಕ್ಷ ನಡೆಯುವುದಿಲ್ಲ. ಡಿ.ಕೆ. ಶಿವಕುಮಾರ್ ಮೇಲೂ ನಡೆಯುವುದಿಲ್ಲ, ಸಿದ್ದರಾಮಯ್ಯ ಅವರ ಮೇಲೂ ನಡೆಯುವುದಿಲ್ಲ, ಜಮೀರ್ ಅವರ ಮೇಲೂ ನಡೆಯುವುದಿಲ್ಲ. ಪಕ್ಷವು ಸಿದ್ಧಾಂತ ಹಾಗೂ ಕಾರ್ಯಕರ್ತರ ಮೇಲೆ ನಡೆಯುತ್ತದೆ. ಚುನಾವಣೆಯಲ್ಲಿ ನಾವು ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದಿದ್ದೇವೆ.

ಅಲ್ಪಸಂಖ್ಯಾತರಿಗೆ ನಾವು ಕೊಟ್ಟಿರುವ ಕೊಡುಗೆಯನ್ನು ಬಿಜೆಪಿಯವರು ಮುಸ್ಲಿಂ ಓಲೈಕೆ ಎಂದು ಟೀಕೆ ಮಾಡುತ್ತಿದೆ. ಇದು ಮುಸಲ್ಮಾನರ ಪಕ್ಷ ಎಂದು ಅವರು ಟೀಕೆ ಮಾಡುತ್ತಾರೆ. ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ದೃಷ್ಟಿಯಿಂದಲೇ ನಾವು ಈ ಭಾಗದ ಜಬ್ಬಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡಿದ್ದೇವೆ. ಶಿಗ್ಗಾಂವ್ ಕ್ಷೇತ್ರದವರಿಗೂ ಸ್ಥಾನ ನೀಡಿದ್ದು, 16 ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ” ಎಂದು ವಿವರಿಸಿದರು.

ಆರೋಗ್ಯದಲ್ಲಿ ಸುಧಾರಣೆ: ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್

0

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಹಾಗೂ ಹಿರಿಯ ನಾಯಕಿ ಸೋನಿಯಾ ಗಾಂಧಿ ಚಿಕಿತ್ಸೆ ಪಡೆಯುತ್ತಿದ್ದ ಸರ್ ಗಂಗಾ ರಾಮ್ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಮಾರ್ಚ್ 24ರಂದು ಜ್ವರ ಹಾಗೂ ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕಳೆದ ಏಳು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರುವುದರಿಂದ ವೈದ್ಯರು ಅವರನ್ನು ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಆಸ್ಪತ್ರೆಯ ಮುಖ್ಯಸ್ಥ ಡಾ. ಅಜಯ್ ಸ್ವರೂಪ್ ಮಾಹಿತಿ ನೀಡಿದ್ದು, ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಎದೆ ಬಿಗಿತ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರು ಹಲವು ವರ್ಷಗಳಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ವರ್ಷದ ಜನವರಿಯಲ್ಲಿ ದೆಹಲಿಯ ವಾಯುಮಾಲಿನ್ಯದಿಂದ ಅಸ್ತಮಾ ಲಕ್ಷಣಗಳು ಹೆಚ್ಚಾಗಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

79 ವರ್ಷದ ಸೋನಿಯಾ ಗಾಂಧಿ ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದು, 2025ರ ಜೂನ್‌ನಲ್ಲಿ ಹೊಟ್ಟೆ ಸೋಂಕಿನ ಕಾರಣಕ್ಕೂ ಆಸ್ಪತ್ರೆಗೆ ದಾಖಲಾಗಿದ್ದರು. 2022ರ ಸೆಪ್ಟೆಂಬರ್‌ನಲ್ಲಿ ಚಿಕಿತ್ಸೆಗಾಗಿ ವಿದೇಶಕ್ಕೂ ತೆರಳಿದ್ದರು. ಇದೀಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು ಮನೆಗೆ ಮರಳಿದ್ದಾರೆ.

ಚಲಿಸುತ್ತಿದ್ದ ಬಸ್‌ನಿಂದ ಏಕಾಏಕಿ ಡೋರ್ ಓಪನ್: ಕೆಳಗೆ ಬಿದ್ದು ವಿದ್ಯಾರ್ಥಿನಿಯರಿಗೆ ಗಾಯ

ಮಂಗಳೂರು:- ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪದ ರೇಷ್ಮೆ ರೋಡ್‌ನಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಏಕಾಏಕಿ ಡೋರ್ ಓಪನ್ ಆಗಿ ವಿದ್ಯಾರ್ಥಿನಿಯರು ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ಜರುಗಿದೆ.

ಹತ್ತನೇ ತರಗತಿ ವಿದ್ಯಾರ್ಥಿನಿ ಚರಿಷ್ಮಾ, ಪಿಯುಸಿ ವಿದ್ಯಾರ್ಥಿನಿ ಚಸ್ಮಿಕಾ ಗಾಯಗೊಂಡವರು. ಗೇರುಕಟ್ಟೆಯಿಂದ ಬೆಳ್ತಂಗಡಿ ಕಡೆ ಸರ್ಕಾರಿ ಬಸ್ ಸಂಚರಿಸುತ್ತಿತ್ತು. ಸಂಚಾರದ ವೇಳೆ ಇದ್ದಕ್ಕಿದ್ದಂತೆ ಬಸ್‌ನ ಬಾಗಿಲು ತೆರೆದಿದೆ. ಈ ವೇಳೆ ದುರಂತ ಸಂಭವಿಸಿದೆ.

ಗಾಯಾಳು ವಿದ್ಯಾರ್ಥಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗುಜರಾತ್ʼನಲ್ಲಿ ಮಹಾವೀರ್ ಜಯಂತಿ: ಸಾಮ್ರಾಟ್ ಸಂಪ್ರತಿ ವಸ್ತು ಸಂಗ್ರಹಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

0

ಗುಜರಾತ್: ಮಹಾವೀರ್ ಜಯಂತಿ ಅಂಗವಾಗಿ ಗಾಂಧಿನಗರದಲ್ಲಿರುವ ಮಹಾವೀರ ಜೈನ ಆರಾಧನಾ ಕೇಂದ್ರದ ಆವರಣದ ಕೋಬಾ ತೀರ್ಥದಲ್ಲಿ ನಿರ್ಮಾಣಗೊಂಡ ಸಾಮ್ರಾಟ್ ಸಂಪ್ರತಿ ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

ಅಶೋಕನ ಮೊಮ್ಮಗ ಸಾಮ್ರಾಟ್ ಸಂಪ್ರತಿ ಅವರ ಹೆಸರಿನಲ್ಲಿ ಈ ವಸ್ತುಸಂಗ್ರಹಾಲಯಕ್ಕೆ ನಾಮಕರಣ ಮಾಡಲಾಗಿದ್ದು, ಜೈನ ಧರ್ಮದ ಸಮೃದ್ಧ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಇಲ್ಲಿ ಪರಿಚಯಿಸಲಾಗಿದೆ. ಸಂಗ್ರಹಾಲಯದಲ್ಲಿ ಪ್ರಾಚೀನ ಹಸ್ತಪ್ರತಿಗಳು, ವಿಗ್ರಹಗಳು, ಚಿತ್ರಗಳು ಹಾಗೂ ಸಾಂಪ್ರದಾಯಿಕ ಅವಶೇಷಗಳು ಸೇರಿದಂತೆ 2,000ಕ್ಕೂ ಹೆಚ್ಚು ಅಪರೂಪದ ಕಲಾಕೃತಿಗಳು ಪ್ರದರ್ಶನಕ್ಕಿವೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಸಂಗ್ರಹಾಲಯವು ಭಾರತಕ್ಕೆ ಮಾತ್ರವಲ್ಲದೆ ಮಾನವಕುಲಕ್ಕೂ ಮಹತ್ವಪೂರ್ಣವಾಗಿದೆ ಎಂದು ಹೇಳಿದರು. ಇದು ಕೋಟ್ಯಂತರ ಭಾರತೀಯರ ಪರಂಪರೆಯ ಪ್ರತೀಕವಾಗಿದ್ದು, ಅಹಿಂಸೆ ಮತ್ತು ಸತ್ಯದ ಸಂದೇಶವನ್ನು ಸಾರಿದ ಸಾಮ್ರಾಟ್ ಸಂಪ್ರತಿ ಅವರ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ ಎಂದರು.

ಇದೇ ವೇಳೆ, ಈ ವಸ್ತುಸಂಗ್ರಹಾಲಯವನ್ನು ಭವ್ಯ ಭಾರತದ ಗುರುತನ್ನು ಪ್ರತಿಬಿಂಬಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇಲ್ಲಿ ಭೇಟಿ ನೀಡುವವರು ಜೈನ ಧರ್ಮದ ಮೌಲ್ಯಗಳನ್ನು ಜಗತ್ತಿನಾದ್ಯಂತ ಹರಡಲಿ ಎಂದು ಆಶಿಸಿದರು.

ಚಾಮರಾಜನಗರ| ಭೀಮನಬೀಡು ಗ್ರಾಮದಲ್ಲಿ ಹುಲಿ ದಾಳಿ, ಹಸು ಬಲಿ!

ಚಾಮರಾಜನಗರ:- ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ.

ರೈತ ಗೋಪಾಲಶೆಟ್ಟಿಯ ಹಸುವಿನ ಮೇಲೆ ಹುಲಿ ದಾಳಿ ಮಾಡಿದ್ದು, ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಗಾಡಿದ ಹಿನ್ನೆಲೆ ಹುಲಿ ಓಡಿ ಹೋಗಿದೆ. ದುರಾದೃಷ್ಟವಶಾತ್ ಹಸು ಸಾವನ್ನಪ್ಪಿದೆ.

ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಬಫರ್ ವಲಯದ ಅರಣ್ಯಾಧಿಕಾರಿ ಶಿವಕುಮಾರ್ ಮತ್ತು ಸಿಬ್ಬಂದಿ ಧಾವಿಸಿ ಹುಲಿಯ ಹೆಜ್ಜೆ ಗುರುತು ಪರಿಶೀಲನೆಗೆ ಮುಂದಾಗಿದ್ದಾರೆ.

ಇತ್ತೀಚೆಗೆ ಬೇರಂಬಾಡಿ ಭಾಗದಲ್ಲಿ ಒಂದು ವಾರದಲ್ಲಿ ಎರಡು ಹುಲಿಗಳನ್ನು ಸೆರೆಹಿಡಿದಿದ್ದರಿಂದ ಭೀಮನಬೀಡು ಗ್ರಾಮದಲ್ಲಿಯೂ ಹುಲಿ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಸ್ಥಳದಲ್ಲಿ ಕ್ಯಾಮೆರಾ ಮತ್ತು ಬೋನು ಅಳವಡಿಸುವುದಾಗಿ ಹಾಗೂ ಜಾನುವಾರು ನಷ್ಟಕ್ಕೆ ಪರಿಹಾರ ನೀಡಲಾಗುವುದು ಎಂದು ಅರಣ್ಯ ಇಲಾಖೆ ಭರವಸೆ ನೀಡಿದೆ.

ಇನ್ನೂ ಹುಲಿಯನ್ನು ಶೀಘ್ರದಲ್ಲಿಯೇ ಸೆರೆಹಿಡಿಯಬೇಕೆಂದು ರೈತರು ಕೂಡ ಆಗ್ರಹಿಸಿದ್ದಾರೆ.

ದೇವನಹಳ್ಳಿ: ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು; ತಪ್ಪಿದ ಅನಾಹುತ, ಎಲ್ಲರೂ ಸೇಫ್!

ದೇವನಹಳ್ಳಿ:- ಚಲಿಸುತ್ತಿದ್ದ ಕಾರೊಂದು ಹೆದ್ದಾರಿ ಮಧ್ಯೆಯೆ ಹೊತ್ತಿ ಉರಿದಿರುವ ಘಟನೆ ದೇವನಹಳ್ಳಿ ಹೊರ ವಲಯದ ಹೊಸಕೋಟೆ ದಾಬಸ್ ಪೇಟೆ ಹೆದ್ದಾರಿಯಲ್ಲಿ ಜರುಗಿದೆ.

ನೋಡ್ ನೋಡ್ತಿದ್ದಂತೆ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಕಾರು ವೇಗವಾಗಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ತಿದ್ದಂತೆ ಕಾರಿನಿಂದ ಮಾಲಿಕ ಇಳಿದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಬಂಗಾಳ ಚುನಾವಣಾ ಅಖಾಡಕ್ಕೆ ಟೆನಿಸ್ ತಾರೆ ಲಿಯಾಂಡರ್ ಪೇಸ್ ಎಂಟ್ರಿ!

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯ ಹೊತ್ತಲ್ಲೇ ಭಾರತೀಯ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್  ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕೇಂದ್ರ ಸಚಿವರಾದ ಕಿರಣ್ ರಿಜಿಜು ಹಾಗೂ ಸುಕಾಂತ ಮಜುಂದಾರ್ ಸಮ್ಮುಖದಲ್ಲಿ ಪೇಸ್ ಬಿಜೆಪಿ ಸೇರಿದರು. ಪಕ್ಷದ ಹಿರಿಯ ನಾಯಕರ ಸಾನ್ನಿಧ್ಯದಲ್ಲಿ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ.

ಇತ್ತೀಚೆಗೆ ಕೋಲ್ಕತ್ತಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ನಬಿನ್ ಅವರನ್ನು ಪೇಸ್ ಭೇಟಿ ಮಾಡಿದ್ದರು. ರಾಜಕೀಯ ಪೇಸ್ ಅವರಿಗೆ ಹೊಸದಲ್ಲ. 2021ರಲ್ಲಿ ತೃಣಮೂಲ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಅವರು, 2022ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಪರವಾಗಿ ಸಕ್ರಿಯವಾಗಿ ಪ್ರಚಾರ ನಡೆಸಿದ್ದರು. ಆದರೆ, ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿರಲಿಲ್ಲ.

ಮುಂದಿನ ಚುನಾವಣೆಯಲ್ಲಿ ಪೇಸ್ ಸ್ಪರ್ಧಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ಲಿಯಾಂಡರ್ ಪೇಸ್ ಅವರ ಬಿಜೆಪಿ ಪ್ರವೇಶ ಐತಿಹಾಸಿಕ ಬೆಳವಣಿಗೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹಲವು ವರ್ಷಗಳಿಂದ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

error: Content is protected !!