Home Blog

ಕೋರಮಂಗಲ ಪಾಸ್ ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ!

ಬೆಂಗಳೂರು: ನಗರದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳ ಸರಣಿ ಮುಂದುವರಿದಿರುವ ನಡುವೆಯೇ, ಕೋರಮಂಗಲದಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಘಟನೆ ಆತಂಕಕ್ಕೆ ಕಾರಣವಾಯಿತು.

ಇಂದು ಬೆಳಗ್ಗೆ ಕಚೇರಿಯ ಅಧಿಕೃತ ಇ-ಮೇಲ್ ವಿಳಾಸಕ್ಕೆ ತಮಿಳು ಭಾಷೆಯಲ್ಲಿ ಸಂದೇಶ ರವಾನಿಸಲಾಗಿದ್ದು, “ಅಜ್ಮಲ್ ಕಸಬ್‌ಗೆ ಮರಣದಂಡನೆ ವಿಧಿಸಿರುವ ನಿಮ್ಮನ್ನು ಬಿಡುವುದಿಲ್ಲ. ಕೆಲವೇ ಹೊತ್ತಿನಲ್ಲಿ ಕಚೇರಿಯಲ್ಲಿ ಇರಿಸಿರುವ ಸ್ಫೋಟಕಗಳು ಸ್ಫೋಟಗೊಳ್ಳಲಿವೆ” ಎಂದು ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಲ್ಲಿ ಉಲ್ಲೇಖಿಸಿರುವ ಅಜ್ಮಲ್ ಕಸಬ್ 26/11 ಮುಂಬೈ ದಾಳಿಯ ದೋಷಿಯಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಕರ್ನಾಟಕ ಪೊಲೀಸ್ ಸಿಬ್ಬಂದಿ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿತು. ಕಚೇರಿಯಲ್ಲಿದ್ದ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ತಕ್ಷಣವೇ ಹೊರಗೆ ಕಳುಹಿಸಿ ಕಟ್ಟಡದ ಸಂಪೂರ್ಣ ತಪಾಸಣೆ ನಡೆಸಲಾಯಿತು.

ಭದ್ರತಾ ಕಾರಣದಿಂದ ದೈನಂದಿನ ಪಾಸ್‌ಪೋರ್ಟ್ ವಿತರಣಾ ಪ್ರಕ್ರಿಯೆಯನ್ನು ಕೆಲಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಸುದೀರ್ಘ ಪರಿಶೀಲನೆಯ ಬಳಿಕ ಕಟ್ಟಡದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಸಂದೇಶ ಎಂಬುದು ಖಚಿತವಾದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಭದ್ರತೆ ಖಚಿತಪಡಿಸಿಕೊಂಡು ಒಬ್ಬೊಬ್ಬರನ್ನೇ ಕಚೇರಿಯೊಳಗೆ ಬಿಡಲಾಗುತ್ತಿದ್ದು, ಸ್ಥಗಿತಗೊಂಡಿದ್ದ ಪಾಸ್‌ಪೋರ್ಟ್ ಸೇವೆಗಳು ಪುನಃ ಆರಂಭಗೊಂಡಿವೆ. ಇ-ಮೇಲ್ ಎಲ್ಲಿಂದ ಬಂದಿದೆ ಹಾಗೂ ಇದರ ಹಿಂದಿನ ಉದ್ದೇಶವೇನು ಎಂಬುದರ ಕುರಿತು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೇಣಿಗೆ ವಿವಾದದಿಂದ ಗಲಾಟೆ: ಶಿಕಾರಿಪುರದಲ್ಲಿ ಉದ್ವಿಗ್ನ ಪರಿಸ್ಥಿತಿ, ಪೊಲೀಸ್ ಬಿಗಿ ಬಂದೋಬಸ್ತ್

0

ಶಿವಮೊಗ್ಗ: ರಂಜಾನ್ ಹಬ್ಬದ ದೇಣಿಗೆ ಸಂಗ್ರಹ ವಿಚಾರವಾಗಿ ನಡೆದ ವಿವಾದವು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಗಲಾಟೆ ನಡೆದಿದೆ.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ದೇಣಿಗೆ ಸಂಗ್ರಹ ನಿರ್ಧಾರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ ನಂತರ ಗಲಾಟೆ ಆರಂಭವಾಗಿದೆ. ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಂಡು, ಸಾರ್ವಜನಿಕ ರಸ್ತೆಯಲ್ಲೇ ಕಲ್ಲು ತೂರಾಟ ನಡೆದಿದೆ.

ಈ ವೇಳೆ ವಾಹನ ಸವಾರರು ಆತಂಕಗೊಂಡಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಕೆಲಕಾಲ ಸ್ಥಗಿತಗೊಂಡಿತ್ತು. ಮಾಹಿತಿ ಪಡೆದ ತಕ್ಷಣ ಶಿಕಾರಿಪುರ ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 10 ಜನರನ್ನು ಬಂಧಿಸಲಾಗಿದ್ದು, ಪರಸ್ಪರ ದೂರು ಹಾಗೂ ಪ್ರತಿದೂರು ದಾಖಲಾಗಿವೆ. ಪಟ್ಟಣದಲ್ಲಿ ಶಾಂತಿ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಹಾವೇರಿ: ‘ಹೋರಿ’ ಟ್ರೋಲ್ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ – ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಥಳಿತ, ವಿಡಿಯೋ ವೈರಲ್

0

ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ ‘ಕೊಬ್ಬರಿ ಹೋರಿ’ ಕುರಿತು ಟ್ರೋಲ್ ಮಾಡಿದ ಆರೋಪದ ಹಿನ್ನೆಲೆ ಯುವಕನೊಬ್ಬನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿರುವ ಘಟನೆ ಹಾವೇರಿ ತಾಲೂಕಿನ ನಾಗಿನಮಟ್ಟಿ ಗ್ರಾಮದಲ್ಲಿ ನಡೆದಿದೆ.

ತುಡ್ನೂರು ಮೂಲದ ಮಧು ಎಂಬ ಯುವಕನ ಮೇಲೆ ಈ ಹಲ್ಲೆ ನಡೆದಿದ್ದು, NTC ಸರ್ಕಾರ್ ಹೋರಿ ಕುರಿತು ಕೆಟ್ಟದಾಗಿ ಟ್ರೋಲ್ ಮಾಡಿದ್ದಾನೆ ಎಂದು ಆರೋಪಿಸಿ ಕೆಲವರು ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆಗೈದಿದ್ದಾರೆ ಎನ್ನಲಾಗಿದೆ.

ನಾಗಿನಮಟ್ಟಿಯಲ್ಲಿ ನಡೆಯುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆಗೆ ಭಾಗವಹಿಸಲು ಬಂದಿದ್ದ ಮಧುವನ್ನು, ಹಬ್ಬ ಮುಗಿದ ಬಳಿಕ ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹಲ್ಲೆ ನಡೆಸಿದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.

“ಕೆಟ್ಟದಾಗಿ ಟ್ರೋಲ್ ಮಾಡ್ತಿದ್ದವನಿಗೆ ಪೂಜೆ ಆಗಿದೆ” ಎಂಬ ಶೀರ್ಷಿಕೆಯಿಂದ ವಿಡಿಯೋ ಹರಿದಾಡುತ್ತಿದ್ದು, ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆ ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 

ಇದು ನಾನು ಕಾಯುತ್ತಿದ್ದ ದಿನ! ದೇಶಕ್ಕಾಗಿ ಕನಸಿನ ಇನಿಂಗ್ಸ್ ಆಡಿದ ಸಂಜು ಸ್ಯಾಮ್ಸನ್ ಭಾವುಕ

0

ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್ ಅವರ ಅದ್ಭುತ ಬ್ಯಾಟಿಂಗ್ ಆಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ 20 ಓವರ್‌ಗಳಲ್ಲಿ 195 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಭಾರತ ಪರ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 12 ಫೋರ್‌ಗಳೊಂದಿಗೆ ಅಜೇಯ 97 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ ಆಡಿದರು.

ಸ್ಯಾಮ್ಸನ್ ಅವರ ಅಜೇಯ ಇನಿಂಗ್ಸ್ ನೆರವಿನಿಂದ ಭಾರತ 19.2 ಓವರ್‌ಗಳಲ್ಲಿ 199 ರನ್‌ಗಳಿಸಿ 5 ವಿಕೆಟ್‌ಗಳ ಗೆಲುವು ಸಾಧಿಸಿತು. ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಮಿಂಚಿದ ಸ್ಯಾಮ್ಸನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಲಭಿಸಿತು.

ಪಂದ್ಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, “ನಾನು ಕ್ರಿಕೆಟ್ ಆಡಲು ಆರಂಭಿಸಿದ ದಿನದಿಂದ ದೇಶಕ್ಕಾಗಿ ಆಡಬೇಕು ಎಂಬ ಕನಸು ಕಂಡಿದ್ದೆ. ಇಂತಹ ಒಂದು ಇನಿಂಗ್ಸ್ ಆಡುವುದು ನನ್ನ ಕನಸಾಗಿತ್ತು. ಇಂದು ಅದು ನನಸಾಗಿದೆ,” ಎಂದು ಸಂತಸ ವ್ಯಕ್ತಪಡಿಸಿದರು.

“ನನ್ನ ಕ್ರಿಕೆಟ್ ಪ್ರಯಾಣದಲ್ಲಿ ಹಲವಾರು ಏರಿಳಿತಗಳು ಇದ್ದವು. ಕೆಲವೊಮ್ಮೆ ನನ್ನನ್ನೇ ನಾನು ಪ್ರಶ್ನಿಸಿದ್ದೆ – ನಾನು ಇಂತಹ ಇನಿಂಗ್ಸ್ ಆಡಬಹುದೇ ಎಂದು. ಆದರೆ ನಾನು ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದೆ. ಇಂದು ಆ ನಂಬಿಕೆ ಫಲ ನೀಡಿದೆ. ಇಂತಹ ಅವಕಾಶ ನೀಡಿದ ದೇವರಿಗೆ ಧನ್ಯವಾದಗಳು,” ಎಂದು ಅವರು ಹೇಳಿದರು.

ಸಂಜು ಸ್ಯಾಮ್ಸನ್ ಅವರ ಈ ಅದ್ಭುತ ಪ್ರದರ್ಶನದೊಂದಿಗೆ ಭಾರತ ತಂಡ ಟೂರ್ನಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಒಂದನೇ ತರಗತಿ ಪ್ರವೇಶ ವಯಸ್ಸು ಸಡಿಲಿಸಲು ಮತ್ತೆ ಪೋಷಕರ ಆಗ್ರಹ

ಬೆಂಗಳೂರು: ಒಂದನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಿರುವ 6 ವರ್ಷದ ವಯಸ್ಸಿನ ಮಿತಿಯನ್ನು ಈ ವರ್ಷವೂ ಸಡಿಲಿಸಬೇಕು ಎಂದು ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಪೋಷಕರು ಮತ್ತು ವಿದ್ಯಾರ್ಥಿಗಳು ಬೆಂಗಳೂರಿನ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ, ಶಾಲಾ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು. ಮಕ್ಕಳು ಪ್ಲಕಾರ್ಡ್‌ಗಳನ್ನು ಹಿಡಿದು ವಯಸ್ಸಿನ ಮಿತಿ ಸಡಿಲಿಸುವಂತೆ ಮನವಿ ಮಾಡಿದರು.

ಪೋಷಕರು ಮಾತನಾಡಿ, ಈ ವರ್ಷದ ದಾಖಲಾತಿಗೆ ಕನಿಷ್ಠ 90 ದಿನಗಳ ವಯಸ್ಸಿನ ಸಡಿಲಿಕೆ ನೀಡಬೇಕು ಎಂದು ಒತ್ತಾಯಿಸಿದರು. ವಯಸ್ಸಿನ ಮಿತಿ ಸಮಸ್ಯೆಯಿಂದ ರಾಜ್ಯದ ಸುಮಾರು 2.30 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ರಾಜ್ಯ ಶಿಕ್ಷಣ ನೀತಿ (SEP) ಪ್ರಕಾರ 90 ದಿನಗಳ ಸಡಿಲಿಕೆ ನೀಡಲು ಅವಕಾಶವಿರುವುದರಿಂದ, ಈ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ನಿಯಮ ಸಡಿಲಿಸಬೇಕು ಎಂದು ಪೋಷಕರು ಸರ್ಕಾರವನ್ನು ಕೋರಿದ್ದಾರೆ.

ಶಿಕ್ಷಣ ಇಲಾಖೆ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಪೋಷಕರು, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇರಾನ್–ಇಸ್ರೇಲ್ ಯುದ್ಧ ಪರಿಣಾಮ: ಬೆಂಗಳೂರಿನಲ್ಲಿ 22 ವಿಮಾನಗಳ ಹಾರಾಟ ರದ್ದು

0

ಬೆಂಗಳೂರು: ಇರಾನ್–ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಇಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಟ್ಟು 22 ವಿಮಾನಗಳ ಹಾರಾಟ ರದ್ದುಗೊಂಡಿದೆ.

ವಾಯುಪ್ರದೇಶ ಮುಚ್ಚಿರುವ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳಬೇಕಿದ್ದ 10 ವಿಮಾನಗಳು ಹಾಗೂ ವಿದೇಶಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ 12 ವಿಮಾನಗಳು ಸೇರಿ ಒಟ್ಟು 22 ವಿಮಾನಗಳು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಅಬುಧಾಬಿ, ಜಿದ್ದಾ, ದೋಹಾ, ದುಬೈ ಮತ್ತು ಬಹ್ರೇನ್‌ಗೆ ಸಂಚರಿಸುವ ವಿಮಾನಗಳು ರದ್ದಾಗಿವೆ. ಏರ್ ಇಂಡಿಯಾ, ಎಮಿರೇಟ್ಸ್, ಇಂಡಿಗೋ, ಖತಾರ್ ಏರ್‌ವೇಸ್ ಸೇರಿದಂತೆ ಹಲವು ಏರ್‌ಲೈನ್ಸ್‌ಗಳು ತಮ್ಮ ಹಾರಾಟಗಳನ್ನು ರದ್ದುಗೊಳಿಸಿರುವುದಾಗಿ ತಿಳಿಸಿವೆ.

ರದ್ದಾದ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಟಿಕೆಟ್‌ಗಳನ್ನು ಮರುನಿಗದಿ (ರಿ-ಸ್ಕೆಡ್ಯೂಲ್) ಮಾಡುವ ಅಥವಾ ಹಣವನ್ನು ಮರುಪಾವತಿ ಮಾಡುವ ಅವಕಾಶವನ್ನು ಏರ್‌ಲೈನ್ಸ್‌ಗಳು ನೀಡಿವೆ. ಯುದ್ಧ ಆರಂಭವಾದ ಕ್ಷಣದಿಂದಲೇ ಸಂಬಂಧಿತ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ಲೈಟ್ ದೃಢೀಕರಣವಿಲ್ಲದೆ ವಿಮಾನ ನಿಲ್ದಾಣಕ್ಕೆ ಬಾರದಂತೆ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಆಡಳಿತ ಮಂಡಳಿ ಮನವಿ ಮಾಡಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ವಿಮಾನ ನಿಲ್ದಾಣದ ಸಹಾಯ ಕೌಂಟರ್‌ಗಳಲ್ಲಿ ಅಗತ್ಯ ಮಾಹಿತಿ ನೀಡಲಾಗುತ್ತಿದೆ.

ಹೊಲದಲ್ಲಿ ಮಲಗಿದ್ದ ಯುವಕ ಅನುಮಾನಾಸ್ಪದ ಸಾವು! ಕೊಲೆ ಶಂಕೆ

0

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ದೋಟಿಕೊಳ್ ಗ್ರಾಮದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಕೊಲೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೋಟಿಕೊಳ್ ಗ್ರಾಮದ ಜಮೀನಿನಲ್ಲಿ ಬೆಳೆ ಕಾಯಲು ಮಲಗಿದ್ದ ಶರಣು ಭಾಸಗಿ (25) ಮೃತ ಯುವಕನಾಗಿದ್ದಾನೆ. ಹೊಲದಲ್ಲಿ ಮಲಗಿದ್ದ ಶರಣು ಬಳಿಕ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ದೋಟಿಕೊಳ್ ಕೆರೆಯ ಬಳಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಕುಟುಂಬಸ್ಥರು ಇದೊಂದು ಸಹಜ ಸಾವು ಅಲ್ಲ, ಕೊಲೆ ಆಗಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳದ ಸಹಾಯದಿಂದ ತನಿಖೆ ಮುಂದುವರಿಸಲಾಗಿದೆ. ಘಟನೆ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಯುದ್ಧ ಪರಿಸ್ಥಿತಿ ತೀವ್ರ: ವಿದೇಶಗಳಲ್ಲಿ ಸಿಲುಕಿದವರಿಗಾಗಿ ಗದಗ ಜಿಲ್ಲೆಯಲ್ಲಿ ತುರ್ತು ಸಹಾಯವಾಣಿ

0

ಗದಗ: ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯಿಂದ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆ ದೇಶಗಳಲ್ಲಿ ಕರ್ನಾಟಕದ ಅನೇಕರು ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ಅವರ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ.

ಗದಗ ಜಿಲ್ಲೆಯವರಲ್ಲಿ ಯಾರಾದರೂ ಯುದ್ಧ ಪೀಡಿತ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದರೆ, ಅವರ ಸಂಬಂಧಿಕರು ತಕ್ಷಣ ಸಂಬಂಧಿತ ದೇಶಗಳ ಕಂಟ್ರೋಲ್ ರೂಂ ಸಂಖ್ಯೆಗೆ ಸಂಪರ್ಕಿಸಬೇಕು. ಜೊತೆಗೆ ಗದಗ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೂ ಮಾಹಿತಿ ನೀಡುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದೆ.

ಯುದ್ಧ ಪೀಡಿತ ದೇಶಗಳ ಕಂಟ್ರೋಲ್ ರೂಂ ಸಂಖ್ಯೆಗಳು:

ಕತಾರ್ – 00974-55647502

ಬಹ್ರೇನ್ – 00973-39418071

ಜೋರ್ಡನ್ – 00962-770422276

ಓಮನ್ – ಟೋಲ್ ಫ್ರೀ: 80071234, ವಾಟ್ಸ್‌ಅಪ್: 96898282270

ಇರಾಕ್ – +964 771 651 1185 (ಇಂಗ್ಲೀಷ್/ಹಿಂದಿ), +964 770 444 4899 (ಅರೇಬಿಕ್)

ಕುವೈತ್ – 9656501946

ಪಾಲಸ್ತೈನ್ – 970 592916418

ಗದಗ ಜಿಲ್ಲೆಯ ವಿಪತ್ತು ನಿರ್ವಹಣಾ ಸಹಾಯವಾಣಿ:

ಗದಗ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ – 08372-239177

ತಾಲೂಕು ಮಟ್ಟದ ಸಂಪರ್ಕ ಸಂಖ್ಯೆ:

ಗದಗ – 08372-250009

ಗಜೇಂದ್ರಗಡ – 08381-298982

ಲಕ್ಷ್ಮೇಶ್ವರ – 08487-273273

ಮುಂಡರಗಿ – 08371-262237

ನರಗುಂದ – 08377-245243

ರೋಣ – 08381-267237

ಶಿರಹಟ್ಟಿ – 08487-242100

ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವವರ ಮಾಹಿತಿ ದೊರೆತ ತಕ್ಷಣ ಮೇಲ್ಕಂಡ ಸಂಖ್ಯೆಗಳ ಮೂಲಕ ಅಧಿಕಾರಿಗಳಿಗೆ ತಿಳಿಸುವಂತೆ ಪ್ರಕಟಣೆ ತಿಳಿಸಿದೆ.

ನಾಳೆ ರಕ್ತ ಚಂದ್ರಗ್ರಹಣ! ಬೆಂಗಳೂರಿನ ಮಂದಿರಗಳಲ್ಲಿ ವಿಶೇಷ ಪೂಜೆ, ಸಮಯದಲ್ಲಿ ಬದಲಾವಣೆ

ಬೆಂಗಳೂರು: ವರ್ಷದ ಮೊದಲ ಚಂದ್ರಗ್ರಹಣವು ಹೋಳಿ ಹುಣ್ಣಿಮೆಯ ದಿನ ಸಂಭವಿಸುತ್ತಿದ್ದು, ಇದನ್ನು ‘ಬ್ಲಡ್ ಮೂನ್’ ಎಂದೂ ಕರೆಯಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ಈ ರಕ್ತಚಂದ್ರ ಗ್ರಹಣದಿಂದ ಜಲಕಂಟಕ, ಅಗ್ನಿಕಂಟಕಗಳ ಪರಿಣಾಮ ಕಾಣಿಸಬಹುದು ಎಂದು ಹೇಳಲಾಗುತ್ತಿದೆ. ಕೆಲ ರಾಶಿಗಳ ಮೇಲೆ, ವಿಶೇಷವಾಗಿ ಸಿಂಹ ರಾಶಿಯವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಈ ಹಿನ್ನೆಲೆಯಲ್ಲಿ ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಗ್ರಹಣದ ದಿನದ ಕಾರ್ಯಕ್ರಮಗಳ ವಿವರ ಪ್ರಕಟಿಸಿದ್ದಾರೆ.

ಮಾರ್ಚ್ 3ರಂದು ರಕ್ತಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಎಂದಿನಂತೆ ಪೂಜೆ–ಪುನಸ್ಕಾರಗಳು ನಡೆಯಲಿವೆ. ಬೆಳಗ್ಗೆ 6 ಗಂಟೆಯಿಂದ ಜಲಾಭಿಷೇಕ ಮತ್ತು ವಿಶೇಷ ಪೂಜೆಗಳು ನೆರವೇರಲಿವೆ.

ಬೆಳಗ್ಗೆ 9 ಗಂಟೆಗೆ ದರ್ಭೆಯಿಂದ ಗರ್ಭಗುಡಿ ಬಂಧನ ಮಾಡಿ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ನಂತರ ಸಂಜೆ 7:30 ಗಂಟೆಗೆ ದೇವಸ್ಥಾನವನ್ನು ಮರುತೆರೆಯಲಾಗುತ್ತದೆ. ಸ್ವಾಮಿಗೆ ಜಲಾಭಿಷೇಕ ನೆರವೇರಿಸಲಾಗುತ್ತದೆ ಎಂದು ಅರ್ಚಕರು ತಿಳಿಸಿದ್ದಾರೆ.

ಗ್ರಹಣದ ಬಳಿಕ ಮರುದಿನ ಬೆಳಗ್ಗೆ ದೇವಸ್ಥಾನದಲ್ಲಿ ಶುಚಿಗೊಳಿಸುವ ಕಾರ್ಯ ನಡೆಯಲಿದೆ. ಭಕ್ತರು ಸೂಚಿಸಲಾದ ಸಮಯಕ್ಕೆ ಅನುಗುಣವಾಗಿ ದೇವಾಲಯಕ್ಕೆ ಭೇಟಿ ನೀಡುವಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.

ಅಮೆರಿಕದ ವಿರುದ್ಧ ಇರಾನ್‌ ಪ್ರತೀಕಾರದ ದಾಳಿ: 560 ಸೈನಿಕರ ಸಾವು?

0

ಟೆಹ್ರಾನ್: ಅಮೆರಿಕದ ವಿರುದ್ಧ ಭಾರೀ ಪ್ರತೀದಾಳಿ ನಡೆಸಿರುವುದಾಗಿ ಇರಾನ್ ಘೋಷಿಸಿದೆ. ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದು, ಈ ದಾಳಿಯಲ್ಲಿ 560 ಅಮೆರಿಕ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇರಾನ್ ತಿಳಿಸಿದೆ.

ಕುವೈತ್‌ನಲ್ಲಿರುವ ಅಮೆರಿಕದ ನೆಲೆ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ಇರಾನ್ ಹೇಳಿಕೊಂಡಿದೆ. ಜೊತೆಗೆ ಬಹ್ರೇನ್‌ನಲ್ಲಿನ ಅಮೆರಿಕದ ಮಿಲಿಟರಿ ಸೌಲಭ್ಯಗಳ ಮೇಲೆ ಡ್ರೋನ್ ದಾಳಿ ನಡೆಸಿ ಭಾರೀ ಹಾನಿ ಉಂಟುಮಾಡಲಾಗಿದೆ ಎಂಬುದಾಗಿ ದಾವೆ ಮಾಡಿದೆ.

ಅಮೆರಿಕದ ವಿಮಾನವಾಹಕ ನೌಕೆ USS Abraham Lincoln ಮೇಲೆ ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿದೆ. ಎಲ್ಲಾ ದಾಳಿಗಳ ಒಟ್ಟಾರೆ ಪರಿಣಾಮವಾಗಿ 560 ಮಂದಿ ಅಮೆರಿಕ ಸೈನಿಕರು ಸಾವನ್ನಪ್ಪಿದ್ದಾರೆ ಎಂಬುದು ಅದರ ಹೇಳಿಕೆ.

ಆದರೆ ಈ ಮಾಹಿತಿಯನ್ನು ಅಮೆರಿಕದ United States Central Command ತಳ್ಳಿಹಾಕಿದೆ. ಸೆಂಟ್ರಲ್ ಕಮಾಂಡ್ ಪ್ರಕಟಣೆಯ ಪ್ರಕಾರ, ಈವರೆಗೆ ಕೇವಲ ಮೂವರು ಅಮೆರಿಕ ಸೈನಿಕರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇರಾನ್ ಕ್ಷಿಪಣಿಗಳು ವಿಮಾನವಾಹಕ ನೌಕೆಗೆ ಹತ್ತಿರವೂ ಬಂದಿಲ್ಲ ಎಂದು ಅಮೆರಿಕ ಸೇನೆ ಪ್ರತಿವಾದಿಸಿದೆ.

ಇರಾನ್ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ಸೌಲಭ್ಯಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ ಎಂದು ಹೇಳಿದರೂ, ವಿಮಾನ ನಿಲ್ದಾಣಗಳು, ಹೋಟೆಲ್‌ಗಳು ಹಾಗೂ ವಸತಿ ಪ್ರದೇಶಗಳಂತಹ ನಾಗರಿಕ ಪ್ರದೇಶಗಳಿಗೂ ಹಾನಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕದ ಕೇಂದ್ರೀಯ ಕಮಾಂಡ್, “ಇರಾನ್ ಆಡಳಿತವು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ. 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆದಿದೆ” ಎಂದು ಆರೋಪಿಸಿದೆ.

ಇದರೊಂದಿಗೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಎರಡೂ ದೇಶಗಳ ಹೇಳಿಕೆಗಳಲ್ಲಿ ಸ್ಪಷ್ಟ ವ್ಯತ್ಯಾಸ ಕಂಡುಬಂದಿದ್ದು, ಹಾನಿಯ ನಿಖರ ವಿವರಗಳ ಬಗ್ಗೆ ಸ್ವತಂತ್ರ ದೃಢೀಕರಣ ಇನ್ನಷ್ಟೇ ನಿರೀಕ್ಷೆಯಲ್ಲಿದೆ.

error: Content is protected !!