ಬಾಗಲಕೋಟೆ: ಹನುಮಂತ ದೇವರ ಓಕುಳಿ ಜಾತ್ರೆಗೆ ಪಟ್ಟಿ ಹಣ ನೀಡದ ಕಾರಣಕ್ಕೆ ಏಳು ಕುಟುಂಬಗಳನ್ನು ಊರಿನಿಂದ ಬಹಿಷ್ಕಾರ ಹಾಕಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹಿರಿಯರು ಜಾತ್ರೆ ವೆಚ್ಚಕ್ಕಾಗಿ ಪ್ರತೀ ಕುಟುಂಬಕ್ಕೆ 600 ರೂ. ಪಟ್ಟಿ ನಿಗದಿ ಮಾಡಿದ್ದರು. ಆದರೆ, ಏಳು ಕುಟುಂಬಗಳು ಹಣ ನೀಡದ ಹಿನ್ನೆಲೆ, ಅವರನ್ನು ದೇವರ ಕಾರ್ಯಕ್ರಮಗಳಿಂದ ದೂರ ಇಟ್ಟಿರುವುದಾಗಿ ಡಂಗುರ ಸಾರಲಾಗಿದೆ.
ಬಹಿಷ್ಕಾರಕ್ಕೊಳಗಾದ ಕುಟುಂಬಗಳಲ್ಲಿ ಯಲ್ಲಪ್ಪ ಛಗಣ್ಣವರ, ಅಣ್ಣಪ್ಪ ಕಡಪಟ್ಟಿ, ಸಿದ್ದಪ್ಪ ಎಣ್ಣಿ, ಕರೆಪ್ಪ ಎಣ್ಣಿ, ಯಲ್ಲಪ್ಪ ಕುಲ್ಲೊಳ್ಳಿ, ಮಲ್ಲಪ್ಪ ಬಟಕುರ್ಕಿ ಮತ್ತು ರಾಮಪ್ಪ ಬಟಕುರ್ಕಿ ಸೇರಿದ್ದಾರೆ. ಇವರ ಮನೆಗಳಿಗೆ ಪೂಜಾರಿಗಳು, ಸ್ವಾಮಿಗಳು ಹೋಗಬಾರದು, ಅವರ ಮನೆ ಕಾರ್ಯಗಳಲ್ಲಿ ಯಾರೂ ಭಾಗವಹಿಸಬಾರದು ಎಂದು ಗ್ರಾಮದಲ್ಲಿ ಸೂಚನೆ ನೀಡಲಾಗಿದೆ. ಅಲ್ಲದೆ, ಕಿರಾಣಿ ಅಂಗಡಿಗಳಿಂದ ಸಹ ಅವರಿಗೆ ವಸ್ತುಗಳನ್ನು ನೀಡಬಾರದು ಎಂದು ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ.
ಏಪ್ರಿಲ್ 7ರಂದು ಜಾತ್ರೆ ನಡೆಯಲಿದ್ದು, ಅದಕ್ಕೆ ಎರಡು ದಿನಗಳ ಮುನ್ನವೇ ಡಂಗುರ ಸಾರಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿದ ಯಲ್ಲಪ್ಪ ಛಗಣ್ಣವರ, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಜಮಖಂಡಿ ತಹಸೀಲ್ದಾರ್, ಎಸಿ ಮತ್ತು ಡಿಸಿ ಅವರಿಗೆ ಪತ್ರ ಬರೆದು, ತಮ್ಮ ಮೇಲೆ ನಡೆದ ಬಹಿಷ್ಕಾರದಿಂದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ, ಜವಾಬ್ದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಘಟನೆಯ ಬಳಿಕ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿ, ಎರಡೂ ಪಕ್ಷಗಳನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಪ್ರಕರಣ ಸಂಬಂಧ ಮುಂದಿನ ಕ್ರಮಗಳ ಬಗ್ಗೆ ನಿರೀಕ್ಷೆ ವ್ಯಕ್ತವಾಗಿದೆ.

