Home Blog

ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ!

0

ಬೆಂಗಳೂರು: 17 ವರ್ಷದ ಹದಿಹರೆಯದ ಬಾಲಕಿಯನ್ನು ಅಪಹರಿಸಿ, ಲಾಡ್ಜ್‌ವೊಂದರಲ್ಲಿ 10 ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿರಿಸಿ ಪದೇ ಪದೇ ಅತ್ಯಾಚಾರ ನಡೆಸಿದ 2017ರ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ವರಿತಗತಿ ವಿಶೇಷ ನ್ಯಾಯಾಲಯ-3ರ ನ್ಯಾಯಾಧೀಶರಾದ ರಾಮ ನಾಯಕ್ ಅವರು, ಮೊದಲನೇ ಆರೋಪಿ ರಾಘವೇಂದ್ರ ಹಾಗೂ ಮೂರನೇ ಆರೋಪಿ ಸಾಗರ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ, ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹20 ಸಾವಿರ ದಂಡ ವಿಧಿಸಿದ್ದಾರೆ. ಅಲ್ಲದೆ, ಸಂತ್ರಸ್ತೆಗೆ ₹7 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ 2 ಮತ್ತು 4ನೇ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಜೆ.ಆರ್. ರಮೇಶ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಸರ್ಕಾರಿ ಅಭಿಯೋಜನೆಯ ಪ್ರಕಾರ, 2017ರ ಅಕ್ಟೋಬರ್ 26ರಂದು ರಾತ್ರಿ ಸುಮಾರು 8 ಗಂಟೆಗೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವೈಟ್‌ಫೀಲ್ಡ್ ರೈಲು ನಿಲ್ದಾಣದ ಬಳಿ ಘಟನೆ ನಡೆದಿತ್ತು. ಒಡಿಶಾ ಮೂಲದ ಸಂತ್ರಸ್ತೆ ಕೆ.ಆರ್. ಪುರದಲ್ಲಿರುವ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ತನ್ನ ಸ್ನೇಹಿತೆಗಾಗಿ ರೈಲು ನಿಲ್ದಾಣದ ಬಳಿ ಕಾಯುತ್ತಿದ್ದಳು.

ಈ ವೇಳೆ ಅಲ್ಲಿಗೆ ಬಂದ ರಾಘವೇಂದ್ರ ಮತ್ತು ಸಾಗರ್, ಸಂತ್ರಸ್ತೆಯ ಸ್ನೇಹಿತೆ ಲಾಡ್ಜ್‌ನಲ್ಲಿ ಇದ್ದಾಳೆ ಹಾಗೂ ಆಕೆಯನ್ನು ಅಲ್ಲಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾಳೆ ಎಂದು ನಂಬಿಸಿ, ಸಂತ್ರಸ್ತೆಯನ್ನು ದಾರಿ ತಪ್ಪಿಸಿದ್ದರು ಎನ್ನಲಾಗಿದೆ. ಬಳಿಕ ಆಕೆಯನ್ನು ಲಾಡ್ಜ್‌ನ ಕೊಠಡಿ ಸಂಖ್ಯೆ 6ಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.

ನಂತರ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಮಂಜುನಾಥ್ ಕೂಡ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಸಂತ್ರಸ್ತೆ ಕಿರುಚಿಕೊಂಡಾಗ ಲಾಡ್ಜ್ ಮ್ಯಾನೇಜರ್ ಅಲ್ಲಿಗೆ ಬಂದಿದ್ದು, ಘಟನೆ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಆರೋಪಿಗಳು ಮ್ಯಾನೇಜರ್‌ಗೂ ಸಂತ್ರಸ್ತೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಹಾಗೂ ಪೊಲೀಸರಿಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಗಳು ಸಂತ್ರಸ್ತೆಯನ್ನು 10 ದಿನಗಳ ಕಾಲ ಕೊಠಡಿಯಲ್ಲೇ ಅಕ್ರಮವಾಗಿ ಬಂಧನದಲ್ಲಿರಿಸಿ, ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು. ಈ ಅವಧಿಯಲ್ಲಿ ಆಕೆಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು ಎಂದು ನ್ಯಾಯಾಲಯದ ವಿಚಾರಣೆಯಲ್ಲಿ ತಿಳಿಸಲಾಗಿದೆ.

ನಂತರ ಸಂತ್ರಸ್ತೆಯ ತಂದೆ ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದರು. ಇನ್ಸ್‌ಪೆಕ್ಟರ್‌ಗಳಾದ ಎಚ್. ಜಯರಾಜ್ ಮತ್ತು ಚನ್ನೇಶ್ ಅವರು ತನಿಖೆ ನಡೆಸಿ, POCSO ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ರಾಘವೇಂದ್ರ ಮತ್ತು ಸಾಗರ್ ಅವರನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದೆ.

ಕುವೆಂಪುನಗರದಲ್ಲಿ ಸಿದ್ದರಾಮಯ್ಯ ಕುಟುಂಬದ ಹೊಸ ನಿವಾಸ: ಗಣೇಶ ಚತುರ್ಥಿಯಂದು ಗೃಹಪ್ರವೇಶ

0

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಮೈಸೂರಿನಲ್ಲಿ ನೂತನ ನಿವಾಸಕ್ಕೆ ಗೃಹಪ್ರವೇಶ ಮಾಡಿದೆ. ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ನೂತನ ಬಂಗಲೆಯಲ್ಲಿ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗೃಹಪ್ರವೇಶ ನೆರವೇರಿತು.

80X120 ಅಡಿ ಅಳತೆಯ ನಿವೇಶನದಲ್ಲಿ ಎರಡು ಅಂತಸ್ತಿನ ಬಂಗಲೆಯನ್ನು ನಿರ್ಮಿಸಲಾಗಿದ್ದು, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಬಹುಕಾಲದ ಬಯಕೆಯಂತೆ ಮೈಸೂರಿನಲ್ಲಿ ಸ್ವಂತ ಮನೆ ನಿರ್ಮಾಣವಾಗಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಗೃಹಪ್ರವೇಶ ಕಾರ್ಯಕ್ರಮ ನಡೆಸಲಾಯಿತು.

ಅಧಿಕೃತ ಪ್ರವಾಸ ಪಟ್ಟಿ ಇಲ್ಲದೆ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಹಾಗೂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಕುಟುಂಬದ ಸದಸ್ಯರೊಂದಿಗೆ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಹಿಂದಿನ ರಾತ್ರಿ ನೂತನ ಮನೆಯಲ್ಲಿ ವಿವಿಧ ಧಾರ್ಮಿಕ ಪೂಜೆಗಳನ್ನು ನೆರವೇರಿಸಲಾಗಿದ್ದು, ಬೆಳಗ್ಗೆಯೂ ಪೂಜಾ ವಿಧಿ-ವಿಧಾನಗಳನ್ನು ಮುಂದುವರಿಸಿ ಗೃಹಪ್ರವೇಶ ಪೂರ್ಣಗೊಳಿಸಲಾಯಿತು.

ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿದ್ದರೂ ಮೈಸೂರಿನಲ್ಲಿ ಇದುವರೆಗೆ ಸ್ವಂತ ಮನೆ ಹೊಂದಿರಲಿಲ್ಲ. ಮೈಸೂರಿಗೆ ಬಂದಾಗಲೆಲ್ಲಾ ತಮ್ಮ ಆಪ್ತ ಸ್ನೇಹಿತ ಮರಿಸ್ವಾಮಿ ಅವರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದರು.

ಇದೀಗ ಮೈಸೂರಿನಲ್ಲಿ ಸ್ವಂತ ನಿವಾಸ ನಿರ್ಮಾಣವಾಗಿದ್ದು, ಪತ್ನಿ ಪಾರ್ವತಿ ಅವರ ಬಹುದಿನಗಳ ಆಸೆಯೂ ಈಡೇರಿದೆ. ನೂತನ ಮನೆಯ ಗೃಹಪ್ರವೇಶವನ್ನು ಕುಟುಂಬಸ್ಥರು ಸರಳವಾಗಿ ನೆರವೇರಿಸಿದ್ದಾರೆ.

ಕನಕಪುರ ಹಾಸ್ಟೆಲ್​ಗೆ ಸಿಎಂ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ

0

ರಾಮನಗರ: ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ರಾತ್ರಿ ಅನಿರೀಕ್ಷಿತವಾಗಿ ಭೇಟಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದ ಅವರು, ಹಾಸ್ಟೆಲ್‌ನಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಂದಲೇ ಸಮಸ್ಯೆಗಳ ಮಾಹಿತಿ ಪಡೆದುಕೊಂಡರು.

ಹಾಸ್ಟೆಲ್‌ನ ಕೊಠಡಿ, ಶೌಚಾಲಯ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಪರಿಶೀಲಿಸಿದ ಸಿಎಂ, ಬೆಡ್‌ಶೀಟ್ ಇಲ್ಲದಿರುವುದನ್ನು ಗಮನಿಸಿರುವುದಾಗಿ ಹೇಳಿದರು. ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಅವರಿಂದಲೇ ಬರೆಸಿಕೊಂಡಿದ್ದು, ಅವುಗಳನ್ನು ಉಪ ಆಯುಕ್ತರು ಹಾಗೂ ಸಿಇಒ ಅವರಿಗೆ ಕಳುಹಿಸಿ ಮರು ಪರಿಶೀಲನೆ ನಡೆಸಿ ಪರಿಹರಿಸಲಾಗುವುದು ಎಂದು ತಿಳಿಸಿದರು.

ಕಲಬುರಗಿ, ರಾಯಚೂರು, ಬೀದರ್, ಹಾವೇರಿ, ಬೆಂಗಳೂರು ಹಾಗೂ ಬಳ್ಳಾರಿ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವಿದ್ದರೂ, ಕನಕಪುರದಲ್ಲಿ ಕೆಂಪು ಬಸ್‌ಗಳು ನಿಲ್ಲುತ್ತಿಲ್ಲ ಎಂಬ ಸಮಸ್ಯೆಯನ್ನು ವಿದ್ಯಾರ್ಥಿಗಳು ಸಿಎಂ ಗಮನಕ್ಕೆ ತಂದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಅವರು ಹೇಳಿದರು.

ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕನಕಪುರಕ್ಕೆ ಆಗಮಿಸಿದ್ದರೂ, ಹಾಸ್ಟೆಲ್‌ಗಳ ಸ್ಥಿತಿಗತಿ ತಿಳಿದುಕೊಳ್ಳುವ ಉದ್ದೇಶದಿಂದ ಒಂದು ದಿನ ಮುಂಚಿತವಾಗಿಯೇ ಬಂದಿದ್ದಾಗಿ ಸಿಎಂ ಹೇಳಿದರು. ಹಬ್ಬದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಊರುಗಳಿಗೆ ತೆರಳಿದ್ದರಿಂದ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯ ಖಾಲಿಯಾಗಿತ್ತು. ಹೀಗಾಗಿ ಅಲ್ಲಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂದರು.

ಹಾಸ್ಟೆಲ್‌ನಲ್ಲಿ ಶೇ.75ರಷ್ಟು ವ್ಯವಸ್ಥೆ ಉತ್ತಮವಾಗಿದೆ. ಉಳಿದ ವ್ಯವಸ್ಥೆಗಳನ್ನು ಕೂಡ ಸರಿಪಡಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಅವರು, ನಿಮ್ಮ ಊರಿನಂತೆ ಬಿಸಿಲು ಇದೆಯೇ ಎಂದು ಪ್ರಶ್ನಿಸಿದರು. ಮಧ್ಯಾಹ್ನ ಬಿಸಿಲು ಹೆಚ್ಚಾಗುತ್ತದೆ ಎಂದು ವಿದ್ಯಾರ್ಥಿಯೊಬ್ಬರು ಹೇಳಿದಾಗ ಎಸಿ ಹಾಕಿಸೋಣ ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು.

ಮಳೆ ಇಲ್ಲ ಎಂದು ವಿದ್ಯಾರ್ಥಿಯೊಬ್ಬರು ಹೇಳಿದಾಗ, ನೀವು ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ ಎಂದು ಸಿಎಂ ಹೇಳಿದರು. ಬಳಿಕ ವಿದ್ಯಾರ್ಥಿಗಳಿಗೆ ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯ ಕೋರಿದರು.

ಎಲ್ಲೆಂದರಲ್ಲಿ ಕಸ ಎಸೆದ್ರೆ ಇನ್ಮುಂದೆ ದುಬಾರಿ ದಂಡ; ‘ಸೇಫ್ ಸಿಟಿ’ ಯೋಜನೆಯಡಿ ಸಿಸಿಟಿವಿ ಕಣ್ಗಾವಲು!

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರ ಮೇಲೆ ಇನ್ಮುಂದೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಬೀಳಲಿದೆ. ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಜಿಬಿಎ (GBA) ಮುಂದಾಗಿದ್ದು, ಸೇಫ್ ಸಿಟಿ ಯೋಜನೆಯಡಿ ಮತ್ತಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜನೆ ರೂಪಿಸಿದೆ.

ನಗರದ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಿಗೆ ಕಸ ಹಾಕುವವರನ್ನು ಗುರುತಿಸಿ, ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಸೇಫ್ ಸಿಟಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಬಿಎ ಸಿದ್ಧತೆ ನಡೆಸಿದೆ.

ಈಗಾಗಲೇ ಜಿಬಿಎ ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ 7 ಸಾವಿರಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅಗತ್ಯವಿರುವ ಸ್ಥಳಗಳಲ್ಲಿ ಹೆಚ್ಚುವರಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜಿಸಲಾಗಿದೆ.

ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸಿಸಿಟಿವಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಗರದ ಸ್ವಚ್ಛತೆ ಮತ್ತು ಸುರಕ್ಷತೆ ಎರಡಕ್ಕೂ ಒತ್ತು ನೀಡಲು ಜಿಬಿಎ ಮುಂದಾಗಿದೆ. ಸಿಸಿಟಿವಿ ಕ್ಯಾಮೆರಾಗಳು ಪೊಲೀಸರ ನಿಗಾದಲ್ಲಿದ್ದು, ಅಗತ್ಯವಿರುವ ಕಡೆಗಳಲ್ಲಿ ಇನ್ನಷ್ಟು ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಜಿಬಿಎ ಆಯುಕ್ತರು ತಿಳಿಸಿದ್ದಾರೆ.

ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ಮೇಲೆ ನಿಗಾ ಇಡುವುದರ ಜತೆಗೆ ಮಹಿಳೆಯರ ಸುರಕ್ಷತೆಗೂ ಸಿಸಿಟಿವಿ ಕಣ್ಗಾವಲು ಮತ್ತಷ್ಟು ಬಲ ಸಿಗಲಿದೆ. ಒಟ್ಟಿನಲ್ಲಿ ಬೆಂಗಳೂರಿನ ಸ್ವಚ್ಛತೆ ಹಾಗೂ ಸುರಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಜಿಬಿಎ ಹೊಸ ಹೆಜ್ಜೆ ಇಡಲು ಮುಂದಾಗಿದೆ.

ಜಿಲ್ಲಾ ಕ್ರೀಡಾಂಗಣ ಕಾಮಗಾರಿಗೆ ತಕ್ಷಣ ತಡೆ ನೀಡಿ: ಅನಿಲ ಮೆಣಸಿನಕಾಯಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕ್ರೀಡಾಂಗಣದಲ್ಲಿ ಸಮಗ್ರ ತಾಂತ್ರಿಕ ಅಭಿಪ್ರಾಯ, ಸಾರ್ವಜನಿಕ ಸಮಾಲೋಚನೆ ಹಾಗೂ ವಿವಿಧ ಕ್ರೀಡಾ ಸಂಘಟನೆಗಳ ಒಪ್ಪಿಗೆ ಪಡೆಯದೆ ಫುಟ್‌ಬಾಲ್‌ಗೆ ಸಂಬಂಧಿಸಿದ ಟ್ರ್ಯಾಕ್ ವಿಶೇಷ ಕಾಮಗಾರಿ ಕೈಗೊಳ್ಳಲು ಮುಂದಾಗಿರುವುದು ಖಂಡನೀಯ. ಅವೈಜ್ಞಾನಿಕ ಕಾಮಗಾರಿಯಿಂದ ಕ್ರೀಡಾಂಗಣದ ಮೂಲಸ್ವರೂಪವೇ ಹಾಳಾಗುವ ಅಪಾಯವಿದೆ ಎಂದು ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಕ್ರೀಡಾಂಗಣ ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ. ಅದು ಜಿಲ್ಲೆಯ ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರ ಆಸ್ತಿಯಾಗಿದೆ. ಕ್ರಿಕೆಟ್, ಅಥ್ಲೆಟಿಕ್ಸ್, ಫುಟ್‌ಬಾಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳು, ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಮಾರಂಭಗಳು ಇಲ್ಲಿ ನಡೆಯುತ್ತವೆ. ಪ್ರತಿದಿನ ನೂರಾರು ನಾಗರಿಕರು ಬೆಳಗಿನ ನಡಿಗೆ ಮತ್ತು ವ್ಯಾಯಾಮಕ್ಕಾಗಿ ಕ್ರೀಡಾಂಗಣ ಬಳಸುತ್ತಿದ್ದಾರೆ ಎಂದಿದ್ದಾರೆ.

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ, ಜನವರಿ 26ರ ಗಣರಾಜ್ಯೋತ್ಸವ, ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವ, ಶಾಲಾ-ಕಾಲೇಜುಗಳ ಕ್ರೀಡಾಕೂಟಗಳು, ಪೊಲೀಸ್ ಹಾಗೂ ಸರ್ಕಾರಿ ಇಲಾಖೆಗಳ ಪಥಸಂಚಲನ, ಕ್ರಿಕೆಟ್, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಉದ್ದೇಶಿತ ಕಾಮಗಾರಿಯಿಂದ ತೊಂದರೆಯಾಗುವ ಸಾಧ್ಯತೆಯಿದೆ. ಒಂದು ನಿರ್ದಿಷ್ಟ ಫುಟ್‌ಬಾಲ್ ಕಾರ್ಯಕ್ರಮಕ್ಕಾಗಿ ಇಡೀ ಜಿಲ್ಲಾ ಕ್ರೀಡಾಂಗಣದ ಬಹುಉಪಯೋಗಿ ಸ್ವರೂಪವನ್ನು ನಾಶಪಡಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಇದೇ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಕ್ರಿಕೆಟ್ ಕಾರ್ಯಕ್ರಮ ಆಯೋಜಿಸಿದ್ದೆವು. ಅದಕ್ಕೆ ಪ್ರತಿಯಾಗಿ ರಾಜಕೀಯ ಪ್ರತಿಷ್ಠೆ ಹಾಗೂ ಪೈಪೋಟಿಯ ಕಾರಣದಿಂದ ಶಾಸಕರು ಮತ್ತು ಅವರ ಪುತ್ರರ ಪ್ರಭಾವದಲ್ಲಿ ಫುಟ್‌ಬಾಲ್ ಕಾರ್ಯಕ್ರಮಕ್ಕಾಗಿ ಕಾಮಗಾರಿ ರೂಪಿಸಲಾಗಿದೆ ಎಂಬ ಗಂಭೀರ ಅನುಮಾನ ಸಾರ್ವಜನಿಕ ವಲಯದಲ್ಲಿದೆ. ಇದರ ಸತ್ಯಾಸತ್ಯತೆಯನ್ನು ಸ್ವತಂತ್ರ ತನಿಖೆಯಿಂದ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಫುಟ್‌ಬಾಲ್ ಆಟಗಾರರ ವಿರುದ್ಧ ಯಾವುದೇ ವಿರೋಧವಿಲ್ಲ. ಅವರಿಗೆ ಪ್ರತ್ಯೇಕ, ವೈಜ್ಞಾನಿಕ ಹಾಗೂ ಸುಸಜ್ಜಿತ ಫುಟ್‌ಬಾಲ್ ಕ್ರೀಡಾಂಗಣ ಕಲ್ಪಿಸಬೇಕು. ಆದರೆ ಒಂದು ಕ್ರೀಡೆಗಾಗಿ ಜಿಲ್ಲಾ ಕ್ರೀಡಾಂಗಣದ ಇತರ ಚಟುವಟಿಕೆಗಳನ್ನು ಬಲಿಕೊಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಕಾಮಗಾರಿ ಆರಂಭಿಸುವ ಮುನ್ನ ಮಣ್ಣು, ನೀರು ಹರಿವು ಹಾಗೂ ಕ್ರೀಡಾಂಗಣದ ಸಾಮರ್ಥ್ಯದ ವೈಜ್ಞಾನಿಕ ಪರೀಕ್ಷೆ ನಡೆಸಲಾಗಿದೆಯೇ? ಅರ್ಹ ಕ್ರೀಡಾಂಗಣ ತಜ್ಞರು ಹಾಗೂ ಸಿವಿಲ್ ಎಂಜಿನಿಯರ್‌ಗಳಿಂದ ತಾಂತ್ರಿಕ ವರದಿ ಪಡೆಯಲಾಗಿದೆಯೇ? ಕ್ರಿಕೆಟ್, ಅಥ್ಲೆಟಿಕ್ಸ್ ಸೇರಿದಂತೆ ಎಲ್ಲ ಕ್ರೀಡಾ ಸಂಘಟನೆಗಳ ಅಭಿಪ್ರಾಯ ಪಡೆಯಲಾಗಿದೆಯೇ? ಬೆಳಗಿನ ನಡಿಗೆ ಮಾಡುವ ನಾಗರಿಕರು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ? ಕಾಮಗಾರಿಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ನೀಡಿದವರು ಯಾರು? ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿದೆಯೇ? ಅಂದಾಜು ಮೊತ್ತ, ಗುತ್ತಿಗೆದಾರರ ಹೆಸರು ಹಾಗೂ ಹಣದ ಮೂಲವನ್ನು ಸಾರ್ವಜನಿಕಗೊಳಿಸಲಾಗಿದೆಯೇ? ರಾಷ್ಟ್ರೀಯ ದಿನಾಚರಣೆಗಳ ಸರ್ಕಾರಿ ಕಾರ್ಯಕ್ರಮಗಳಿಗೆ ತೊಂದರೆಯಾಗುವುದಿಲ್ಲ ಎಂಬ ಲಿಖಿತ ಪ್ರಮಾಣಪತ್ರವಿದೆಯೇ ಎಂಬ ಪ್ರಶ್ನೆಗಳಿಗೆ ಜಿಲ್ಲಾಡಳಿತ ತಕ್ಷಣ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಮರ್ಪಕ ತಾಂತ್ರಿಕ ಅಭಿಪ್ರಾಯವಿಲ್ಲದೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಆತುರದಲ್ಲಿ ಕಾಮಗಾರಿ ನಡೆಸುತ್ತಿರುವುದನ್ನು ಗಮನಿಸಿದರೆ ಭಾರೀ ಹಣಕಾಸು ಅವ್ಯವಹಾರ ಮತ್ತು ಭ್ರಷ್ಟಾಚಾರದ ಸಾಧ್ಯತೆ ಕುರಿತು ಅನುಮಾನ ಮೂಡುತ್ತದೆ. ಆದ್ದರಿಂದ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ಪರಿಗಣಿಸಿ ಯೋಜನೆಯ ಅನುಮೋದನೆ, ಅಂದಾಜು ವೆಚ್ಚ, ಟೆಂಡರ್, ಗುತ್ತಿಗೆ, ಹಣ ಬಿಡುಗಡೆ ಹಾಗೂ ರಾಜಕೀಯ ಪ್ರಭಾವದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತವು ಆಕ್ಷೇಪಗಳನ್ನು ನಿರ್ಲಕ್ಷಿಸಿ ಕಾಮಗಾರಿ ಮುಂದುವರಿಸಿದರೆ ಸಾರ್ವಜನಿಕ ಆಸ್ತಿಯ ರಕ್ಷಣೆಗೆ ಕಾನೂನು ಹೋರಾಟ, ಶಾಂತಿಯುತ ಪ್ರತಿಭಟನೆ, ಜನಜಾಗೃತಿ ಅಭಿಯಾನ ಹಾಗೂ ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸುವುದು ಸೇರಿದಂತೆ ಪ್ರಜಾಪ್ರಭುತ್ವದ ಎಲ್ಲ ಮಾರ್ಗಗಳಲ್ಲಿ ಹೋರಾಟ ನಡೆಸಲು ಸಿದ್ಧರಾಗಿರುವುದಾಗಿ ಅವರು ತಿಳಿಸಿದ್ದಾರೆ.

ಫುಟ್‌ಬಾಲ್ ಆಟಗಾರರ ವಿರುದ್ಧ ನಮ್ಮ ವಿರೋಧವಿಲ್ಲ. ಆದರೆ ಒಂದು ಕ್ರೀಡೆಗಾಗಿ ಜಿಲ್ಲೆಯ ಎಲ್ಲ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಬಳಸುವ ಬಹುಉಪಯೋಗಿ ಕ್ರೀಡಾಂಗಣದ ಸ್ವರೂಪ ಹಾಳುಮಾಡುವುದನ್ನು ಒಪ್ಪುವುದಿಲ್ಲ. ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು.

ಅನಿಲ ಮೆಣಸಿನಕಾಯಿ

  • ಪ್ರಮುಖ ಬೇಡಿಕೆಗಳು
  • ಉದ್ದೇಶಿತ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು.
  • ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಕಾಮಗಾರಿಗೆ ಅವಕಾಶ ನೀಡಬಾರದು.
  • ಯೋಜನಾ ವರದಿ, ನಕ್ಷೆ, ಅಂದಾಜು ವೆಚ್ಚ ಹಾಗೂ ಟೆಂಡರ್ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು.
  • ಕ್ರೀಡಾ ತಜ್ಞರು, ಎಂಜಿನಿಯರ್‌ಗಳು ಹಾಗೂ ಎಲ್ಲ ಕ್ರೀಡಾ ಸಂಘಟನೆಗಳೊಂದಿಗೆ ಬಹಿರಂಗ ಸಭೆ ನಡೆಸಬೇಕು.
  • ಕ್ರೀಡಾಂಗಣಕ್ಕೆ ಹಾನಿಯಾಗುವುದಿಲ್ಲ ಎಂಬುದನ್ನು ಸ್ವತಂತ್ರ ತಜ್ಞರ ಸಮಿತಿ ದೃಢಪಡಿಸಬೇಕು.
  • ಫುಟ್‌ಬಾಲ್ ಆಟಗಾರರಿಗೆ ಪರ್ಯಾಯ ಸ್ಥಳದಲ್ಲಿ ಪ್ರತ್ಯೇಕ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಬೇಕು.
  • ರಾಜಕೀಯ ಅಥವಾ ವೈಯಕ್ತಿಕ ಪ್ರತಿಷ್ಠೆಗಾಗಿ ಸಾರ್ವಜನಿಕ ಆಸ್ತಿಯ ದುರುಪಯೋಗ ನಿಲ್ಲಿಸಬೇಕು.

ಗಣೇಶ ಮೆರವಣಿಗೆ ವಿವಾದ: ಬಿಜೆಪಿ ಪ್ರತಿಭಟನೆ ಬಳಿಕ ಮಸೀದಿ ರಸ್ತೆಗೆ ಗ್ರೀನ್ ಸಿಗ್ನಲ್, ಇನ್ಸ್‌ಪೆಕ್ಟರ್ ವಿರುದ್ಧ ಕ್ರಮಕ್ಕೆ ಬ್ರೇಕ್

0

ಮೈಸೂರು: ಟಿ. ನರಸೀಪುರದ ಗಣೇಶ ಮೆರವಣಿಗೆ ವಿವಾದಕ್ಕೆ ಸದ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಮಸೀದಿ ರಸ್ತೆಯಲ್ಲಿ ಗಣೇಶ ಮೆರವಣಿಗೆ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಮೆರವಣಿಗೆಗೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಿದ್ದ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.

ಇನ್ಸ್‌ಪೆಕ್ಟರ್ ಧನಂಜಯ್ ಅವರು ಮಸೀದಿ ಮಾರ್ಗದಲ್ಲಿ ಗಣೇಶ ಮೆರವಣಿಗೆ ವಿಚಾರವಾಗಿ ಗಣೇಶೋತ್ಸವ ಸಮಿತಿಯ ಯುವಕರಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿತ್ತು. ಈ ಬೆಳವಣಿಗೆಯನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ವಿರೋಧಿಸಿ, ಇನ್ಸ್‌ಪೆಕ್ಟರ್ ಅಮಾನತು ಅಥವಾ ವರ್ಗಾವಣೆಗೆ ಆಗ್ರಹಿಸಿದ್ದವು.

ಸೆಪ್ಟೆಂಬರ್ 13ರಂದು ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಶಾಂತಿ ಸಭೆ ವಿಫಲವಾದ ಬಳಿಕ ಅಹೋರಾತ್ರಿ ಧರಣಿಗೆ ಬಿಜೆಪಿ ಕರೆ ನೀಡಿತ್ತು. ಗಣೇಶ ಮೂರ್ತಿಯನ್ನು ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದರು.

ಇದರಿಂದ ಟಿ. ನರಸೀಪುರದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಗೃಹ ಇಲಾಖೆ ಮಸೀದಿ ರಸ್ತೆಯಲ್ಲಿ ಗಣೇಶ ಮೆರವಣಿಗೆಗೆ ಅವಕಾಶ ನೀಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರನ್ನು ಮನವೊಲಿಸುವ ಪ್ರಯತ್ನ ನಡೆಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಕ್ರಮಕ್ಕೆ ಬಿಜೆಪಿ ನಾಯಕರು ಮಾಡಿದ್ದ ಆಗ್ರಹ ಈಡೇರಿಲ್ಲ.

ಈ ಹಿಂದೆ ಟಿ. ನರಸೀಪುರದಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಗಲಭೆ ಅಥವಾ ಗಲಾಟೆಗಳು ನಡೆದಿರುವ ಉದಾಹರಣೆಗಳಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಇನ್ಸ್‌ಪೆಕ್ಟರ್ ಅವರ ಎಚ್ಚರಿಕೆ ಹಾಗೂ ಅವರ ಮಾತುಗಳಿಂದಲೇ ಪಟ್ಟಣದಲ್ಲಿ ಅನಗತ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರತಾಪ್ ಸಿಂಹ ವಿರುದ್ಧವೂ ಪ್ರತಿಭಟನೆ ನಡೆದಿದೆ. ಪೊಲೀಸ್ ಠಾಣೆಗೆ ನುಗ್ಗುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಅವರನ್ನು ಬಂಧಿಸುವಂತೆ ಆಗ್ರಹಿಸಿದವು. ಪ್ರತಿಯಾಗಿ ಪ್ರತಾಪ್ ಸಿಂಹ ಬೆಂಬಲಿಗರು ಠಾಣೆ ಎದುರು ಜಮಾಯಿಸಿ ಅವರ ಪರ ಘೋಷಣೆ ಕೂಗಿದರು. ಎರಡೂ ಗುಂಪುಗಳ ಪ್ರತಿಭಟನೆಯಿಂದ ಟಿ. ನರಸೀಪುರ ಪೊಲೀಸ್ ಠಾಣೆ ಮುಂಭಾಗದಲ್ಲಿ ಭಾರೀ ಹೈಡ್ರಾಮಾ ನಡೆದಿತ್ತು.

ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ: ಸೆ.14ರಂದು 22 ಕ್ಯಾರಟ್ ಚಿನ್ನದ ದರ ಎಷ್ಟಿದೆ?

0

ನವದೆಹಲಿ: ಗಣೇಶ ಚತುರ್ಥಿಯಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಸೆಪ್ಟೆಂಬರ್ 14ರಂದು ಚಿನ್ನದ ದರ ಪ್ರತಿ ಗ್ರಾಂಗೆ ₹45ರಷ್ಟು ಕಡಿಮೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳಲ್ಲೂ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ.

ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,41,250 ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,54,090 ಇದೆ. 100 ಗ್ರಾಂ ಬೆಳ್ಳಿಯ ದರ ₹24,500ರಷ್ಟಿದೆ. ಬೆಂಗಳೂರಿನಲ್ಲೂ 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ ₹1,41,250 ಹಾಗೂ 100 ಗ್ರಾಂ ಬೆಳ್ಳಿಗೆ ₹24,500 ದರ ಇದೆ.

ಸೆಪ್ಟೆಂಬರ್ 14ರ ದರದಂತೆ 1 ಗ್ರಾಂ 24 ಕ್ಯಾರಟ್ ಚಿನ್ನ ₹15,409, 22 ಕ್ಯಾರಟ್ ಚಿನ್ನ ₹14,125 ಹಾಗೂ 18 ಕ್ಯಾರಟ್ ಚಿನ್ನ ₹11,557 ಇದೆ. 1 ಗ್ರಾಂ ಬೆಳ್ಳಿಯ ದರ ₹245ರಷ್ಟಿದೆ.

ವಿವಿಧ ನಗರಗಳ 22 ಕ್ಯಾರಟ್ ಚಿನ್ನದ ದರ ಗಮನಿಸಿದರೆ, ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ ಮತ್ತು ಭುವನೇಶ್ವರದಲ್ಲಿ ಪ್ರತಿ ಗ್ರಾಂಗೆ ₹14,125 ಇದೆ. ದೆಹಲಿ, ಜೈಪುರ ಹಾಗೂ ಲಖನೌನಲ್ಲಿ ₹14,140, ಅಹಮದಾಬಾದ್‌ನಲ್ಲಿ ₹14,130 ದರ ದಾಖಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಪ್ರತಿ ಗ್ರಾಂಗೆ 139.13 ಡಾಲರ್, ಅಂದರೆ ಸುಮಾರು ₹13,316ರಷ್ಟಿದೆ. ಸ್ಪಾಟ್ ಸಿಲ್ವರ್ ಪ್ರತಿ ಗ್ರಾಂಗೆ 2.057 ಡಾಲರ್, ಅಂದರೆ ಸುಮಾರು ₹196ರಷ್ಟಿದೆ.

ವಿದೇಶಗಳ 24 ಕ್ಯಾರಟ್ ಚಿನ್ನದ ದರದಲ್ಲೂ ವ್ಯತ್ಯಾಸವಿದೆ. ಮಲೇಷ್ಯಾದಲ್ಲಿ ಪ್ರತಿ ಗ್ರಾಂಗೆ ಸುಮಾರು ₹13,694, ದುಬೈನಲ್ಲಿ ₹13,653, ಅಮೆರಿಕದಲ್ಲಿ ₹13,733, ಸಿಂಗಾಪುರದಲ್ಲಿ ₹14,208, ಕತಾರ್‌ನಲ್ಲಿ ₹13,757, ಸೌದಿ ಅರೇಬಿಯಾದಲ್ಲಿ ₹13,736, ಓಮನ್‌ನಲ್ಲಿ ₹13,833 ಹಾಗೂ ಕುವೇತ್‌ನಲ್ಲಿ ₹13,512ರಷ್ಟಿದೆ.

ಬೆಳ್ಳಿ ದರದಲ್ಲಿ ನಗರವಾರು ವ್ಯತ್ಯಾಸವಿದ್ದು, ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ ₹245, ಚೆನ್ನೈನಲ್ಲಿ ₹250, ಮುಂಬೈ ಮತ್ತು ದೆಹಲಿಯಲ್ಲಿ ₹245, ಕೋಲ್ಕತಾದಲ್ಲಿ ₹245, ಕೇರಳದಲ್ಲಿ ₹250, ಅಹಮದಾಬಾದ್‌ನಲ್ಲಿ ₹245, ಜೈಪುರದಲ್ಲಿ ₹245, ಲಖನೌನಲ್ಲಿ ₹245, ಭುವನೇಶ್ವರದಲ್ಲಿ ₹250 ಹಾಗೂ ಪುಣೆಯಲ್ಲಿ ₹245 ಇದೆ.

ಏಷ್ಯಾಕಪ್ ಟ್ರೋಫಿ ವಿವಾದ ಮತ್ತೆ ಸದ್ದು: ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದೆ ಡ್ರೆಸ್ಸಿಂಗ್ ರೂಮ್ʼನಲ್ಲೇ ಉಳಿದ ಭಾರತ ತಂಡ

0

ದುಬೈ: ಏಷ್ಯಾಕಪ್ ಟ್ರೋಫಿ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಳೆದ ವರ್ಷ ಪುರುಷರ ಏಷ್ಯಾಕಪ್ ಫೈನಲ್ ಬಳಿಕ ನಡೆದಿದ್ದ ಹೈಡ್ರಾಮಾ ಇದೀಗ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲೂ ಮರುಕಳಿಸಿದೆ.

ಭಾನುವಾರ ನಡೆದ ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 72 ರನ್‌ಗಳಿಂದ ಮಣಿಸಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ದಾಖಲೆಯ ಎಂಟನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಆಗಿದೆ. ಆದರೆ ಪಂದ್ಯ ಮುಕ್ತಾಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರ ಉಪಸ್ಥಿತಿಯಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಭಾರತೀಯ ಕಾಲಮಾನ ರಾತ್ರಿ 11:20ರ ಸುಮಾರಿಗೆ ಪಂದ್ಯ ಮುಕ್ತಾಯಗೊಂಡರೂ, ಪ್ರಶಸ್ತಿ ಪ್ರದಾನ ಸಮಾರಂಭ ಮಧ್ಯರಾತ್ರಿ 12:05ರ ವೇಳೆಗೆ ಆರಂಭವಾಯಿತು. ನಿರೂಪಕ ಹಾಗೂ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಫರ್ವೀಜ್ ಮಹರೂಫ್ ಮೊದಲು ರನ್ನರ್-ಅಪ್ ಶ್ರೀಲಂಕಾ ತಂಡವನ್ನು ವೇದಿಕೆಗೆ ಆಹ್ವಾನಿಸಿದರು.

ಈ ವೇಳೆ ಮೊಹ್ಸಿನ್ ನಖ್ವಿ ಶ್ರೀಲಂಕಾ ತಂಡಕ್ಕೆ ಚೆಕ್ ಹಸ್ತಾಂತರಿಸಿದರು. ಶ್ರೀಲಂಕಾ ಕ್ರಿಕೆಟ್‌ನ ಮಧ್ಯಂತರ ಮುಖ್ಯಸ್ಥ ಎರಾನ್ ವಿಕ್ರಮರತ್ನೆ ಆಟಗಾರರಿಗೆ ಪದಕಗಳನ್ನು ವಿತರಿಸಿದರು. ಇದಾದ ಬಳಿಕ ಭಾರತ ತಂಡ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬರಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.

ಆದರೆ ಭಾರತ ತಂಡ ವೇದಿಕೆಗೆ ಬರುವ ಮುನ್ನವೇ ನಿರೂಪಕರು ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯಗೊಂಡಿದೆ ಎಂದು ಏಕಾಏಕಿ ಘೋಷಿಸಿದರು. ಇದರಿಂದಾಗಿ ಇಡೀ ಬೆಳವಣಿಗೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು.

ಈ ವೇಳೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಗೂ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಅವರು ನಂದಿನಿ ಶರ್ಮಾಗೆ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ ನೀಡಿ ತಂಡವನ್ನು ಅಭಿನಂದಿಸಿದರು. ಬಳಿಕ ಭಾರತ ತಂಡದ ಆಟಗಾರ್ತಿಯರು ಡ್ರೆಸ್ಸಿಂಗ್ ರೂಮ್‌ಗೆ ಮರಳಿದರು.

ಮಾಹಿತಿಯ ಪ್ರಕಾರ, ಎಸಿಸಿ ಉಪಾಧ್ಯಕ್ಷ ಖಾಲಿದ್ ಝರೂನಿ ಅವರಿಂದ ಭಾರತ ತಂಡಕ್ಕೆ ಟ್ರೋಫಿ ಕೊಡಿಸುವಂತೆ ಬಿಸಿಸಿಐ ಮನವಿ ಮಾಡಿತ್ತು. ಆದರೆ ಮೊಹ್ಸಿನ್ ನಖ್ವಿ ತಾವೇ ಟ್ರೋಫಿ ಹಸ್ತಾಂತರಿಸುವುದಾಗಿ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ವೇದಿಕೆಗೆ ತೆರಳದೆ ಡ್ರೆಸ್ಸಿಂಗ್ ರೂಮ್‌ನಲ್ಲೇ ಉಳಿದುಕೊಂಡಿತು.

ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯಗೊಂಡು ಬಹುತೇಕ ಎಲ್ಲರೂ ಕ್ರೀಡಾಂಗಣದಿಂದ ನಿರ್ಗಮಿಸಿದ ಬಳಿಕ, ಭಾರತ ತಂಡದ ಆಟಗಾರ್ತಿಯರು ಹಾಗೂ ಕೋಚಿಂಗ್ ಸ್ಟಾಫ್ ಖಾಲಿ ಸ್ಟೇಡಿಯಂನಲ್ಲಿ ಒಟ್ಟಾಗಿ ನಿಂತು ಗ್ರೂಪ್ ಫೋಟೋ ತೆಗೆಸಿಕೊಂಡರು. ಈ ಫೋಟೋಗಳನ್ನು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಯಿತು.

ಸಾಮಾನ್ಯವಾಗಿ ಪ್ರಶಸ್ತಿ ಪ್ರದಾನ ಸಮಾರಂಭದ ಕೊನೆಯಲ್ಲಿ ವಿಜೇತ ತಂಡದ ನಾಯಕಿಯ ಸಂದರ್ಶನ ನಡೆಯುತ್ತದೆ. ಆದರೆ ಈ ಬಾರಿ ಪಂದ್ಯ ಮುಗಿದ ತಕ್ಷಣವೇ ಬ್ರಾಡ್‌ಕಾಸ್ಟರ್‌ಗಳು ಹರ್ಮನ್‌ಪ್ರೀತ್ ಕೌರ್ ಅವರ ಸಂದರ್ಶನ ನಡೆಸಿದ್ದರು. ಇನ್ನು ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಿರುವುದು ಬಿಸಿಸಿಐ ತೆಗೆದುಕೊಂಡ ಅಧಿಕೃತ ನಿಲುವು ಎಂದು ಭಾರತ ತಂಡದ ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ 2025ರ ಸೆಪ್ಟೆಂಬರ್ 28ರಂದು ಇದೇ ದುಬೈ ಮೈದಾನದಲ್ಲಿ ನಡೆದ ಪುರುಷರ ಏಷ್ಯಾಕಪ್ ಫೈನಲ್ ಬಳಿಕವೂ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ ಇಂತಹದ್ದೇ ವಿವಾದ ಉಂಟಾಗಿತ್ತು. ಆ ಸಂದರ್ಭದಲ್ಲಿ ಮೊಹ್ಸಿನ್ ನಖ್ವಿ ಅವರ ಉಪಸ್ಥಿತಿಯಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಕ್ಕಟ್ಟು ನಿರ್ಮಾಣವಾಗಿತ್ತು.

ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಟ್ರೋಫಿ ಸ್ವೀಕರಿಸದೆ ವೇದಿಕೆಯಲ್ಲಿ ಸಂಭ್ರಮಿಸಿತ್ತು. ಬಳಿಕ ಏಷ್ಯಾಕಪ್ ಟ್ರೋಫಿಯನ್ನು ಕ್ರೀಡಾಂಗಣದಿಂದ ಎಸಿಸಿ ಕಚೇರಿಗೆ ಕೊಂಡೊಯ್ಯಲಾಗಿತ್ತು ಎಂಬ ವರದಿಗಳಿದ್ದವು. ಇದೀಗ ಮಹಿಳಾ ತಂಡದ ಏಷ್ಯಾಕಪ್ ಗೆಲುವಿನ ಬಳಿಕವೂ ಇದೇ ರೀತಿಯ ಬೆಳವಣಿಗೆ ನಡೆದಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

 

ಗಣೇಶ ಚತುರ್ಥಿ 2026: ಬಸವನಗುಡಿ ದೊಡ್ಡ ಗಣಪತಿ ದೇಗುಲದಲ್ಲಿ ಭಕ್ತರ ದಂಡು; 1,000 ಲೀಟರ್ ಹಾಲಿನ ಅಭಿಷೇಕ

0

ಬೆಂಗಳೂರು: ಐತಿಹಾಸಿಕ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸಂಭ್ರಮ ಜೋರಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ದೊಡ್ಡ ಗಣಪತಿಯ ದರ್ಶನ ಪಡೆದರು.

ಗಣೇಶ ಚತುರ್ಥಿ ಪ್ರಯುಕ್ತ ಬೆಳಗ್ಗೆ 2.30ರಿಂದ ದೇವರಿಗೆ ವಿಶೇಷ ಅಭಿಷೇಕ ಕಾರ್ಯಕ್ರಮಗಳು ಆರಂಭವಾದವು. ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ಪ್ರಕಾರ, ಗಣಪತಿಗೆ 1,000 ಲೀಟರ್ ಹಾಲಿನ ಅಭಿಷೇಕ ನೆರವೇರಿಸಲಾಯಿತು.

ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ನೆರವೇರಿತು. ಬಳಿಕ ರಾತ್ರಿ 12 ಗಂಟೆಯವರೆಗೆ ಭಕ್ತರಿಗೆ ನಿರಂತರವಾಗಿ ಪ್ರಸಾದ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದ ಭಕ್ತರು, ಗಣೇಶ ಚತುರ್ಥಿಯಂದು ದೊಡ್ಡ ಗಣಪತಿಯ ದರ್ಶನ ಪಡೆದಿರುವುದು ಸಂತಸ ತಂದಿದೆ ಎಂದು ಹೇಳಿದರು.

ಇನ್ನು ಸೆ.15ರಂದು ಸಂಜೆ 6 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಗಣೇಶ ಚತುರ್ಥಿ ವ್ರತದ ಮಹತ್ವವೇನು?; ಈ ದಿನ ವ್ರತ ಕಥೆ ಓದುವುದು ಏಕೆ ಮುಖ್ಯ?

0

ಗಣೇಶ ಚತುರ್ಥಿಯನ್ನು ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ.

ಈ ದಿನ ಭಕ್ತರು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ, ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ವ್ರತವನ್ನೂ ಆಚರಿಸುತ್ತಾರೆ.

ಧಾರ್ಮಿಕ ನಂಬಿಕೆಯ ಪ್ರಕಾರ, ಗಣೇಶನನ್ನು ಭಕ್ತಿಯಿಂದ ಪೂಜಿಸಿ ವ್ರತ ಆಚರಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ದೂರವಾಗಿ ಸುಖ, ಸಮೃದ್ಧಿ ಮತ್ತು ಸೌಭಾಗ್ಯ ದೊರೆಯುತ್ತದೆ. ಶಾಸ್ತ್ರಗಳಲ್ಲೂ ಗಣೇಶ ಚತುರ್ಥಿ ವ್ರತಕ್ಕೆ ವಿಶೇಷ ಮಹತ್ವ ನೀಡಲಾಗಿದೆ.

ವ್ರತದ ಸಂದರ್ಭದಲ್ಲಿ ಗಣೇಶ ಚತುರ್ಥಿ ವ್ರತ ಕಥೆಯನ್ನು ಓದುವುದು ಅಥವಾ ಕೇಳುವುದು ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಗಣೇಶ ಪುರಾಣದಲ್ಲಿ ಈ ವ್ರತದ ಮಹಿಮೆ ಮತ್ತು ಕಥೆಯ ಕುರಿತು ಉಲ್ಲೇಖವಿದೆ. ವ್ರತ ಕಥೆಯನ್ನು ಭಕ್ತಿಯಿಂದ ಪಠಿಸುವುದರಿಂದ ವ್ರತದ ಪೂರ್ಣ ಫಲ ದೊರೆಯುತ್ತದೆ ಎಂಬ ನಂಬಿಕೆಯಿದೆ.

ಗಣೇಶನನ್ನು ‘ವಿಘ್ನಹರ್ತ’ ಎಂದು ಕರೆಯಲಾಗುತ್ತದೆ. ಅಂದರೆ ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸುವ ದೇವರು ಎಂಬ ನಂಬಿಕೆ. ಹೀಗಾಗಿ ಯಾವುದೇ ಶುಭ ಕಾರ್ಯ ಆರಂಭಿಸುವ ಮುನ್ನ ಗಣೇಶನನ್ನು ಪೂಜಿಸುವ ಸಂಪ್ರದಾಯ ಹಲವು ಕಡೆಗಳಲ್ಲಿ ಇದೆ.

ಗಣೇಶ ಚತುರ್ಥಿಯಂದು ಭಕ್ತರು ತಮ್ಮ ಸಾಮರ್ಥ್ಯ ಹಾಗೂ ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಉಪವಾಸ ಆಚರಿಸುತ್ತಾರೆ. ಬಳಿಕ ಗಣೇಶನಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದ ನಂತರ ವ್ರತ ಮುಕ್ತಾಯಗೊಳಿಸುವ ಪದ್ಧತಿಯೂ ಇದೆ. ವ್ರತದ ಆಚರಣೆಯ ವಿಧಾನ ಪ್ರದೇಶ ಹಾಗೂ ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಗಬಹುದು.

ಗಣೇಶ ಚತುರ್ಥಿ ವ್ರತದ ಉದ್ದೇಶ ಕೇವಲ ಉಪವಾಸ ಮಾಡುವುದಲ್ಲ. ಭಕ್ತಿ, ಶ್ರದ್ಧೆ ಹಾಗೂ ಗಣೇಶನ ಸ್ಮರಣೆಯೊಂದಿಗೆ ದಿನವನ್ನು ಕಳೆಯುವುದು ಈ ಆಚರಣೆಯ ಪ್ರಮುಖ ಭಾಗವಾಗಿದೆ. ವ್ರತ ಕಥೆಯನ್ನು ಓದುವುದು ಅಥವಾ ಕೇಳುವುದರಿಂದ ಗಣೇಶನ ಮಹಿಮೆ ಹಾಗೂ ವ್ರತದ ಧಾರ್ಮಿಕ ಮಹತ್ವವನ್ನು ತಿಳಿದುಕೊಳ್ಳಬಹುದು ಎಂಬ ನಂಬಿಕೆಯಿದೆ.