Home Blog

ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ: ಶೀಘ್ರದಲ್ಲೇ ನೋಟ್ ಬುಕ್ ಕೊಡುಗೆ ಎಂದ ಮಧು ಬಂಗಾರಪ್ಪ

0

ಬೆಂಗಳೂರು/ಶಿವಮೊಗ್ಗ: ಬಜೆಟ್‌ನಲ್ಲಿ ಪ್ರಕಟಿಸಿದಂತೆಯೇ ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ನೋಟ್‌ಬುಕ್‌ಗಳನ್ನೂ ಉಚಿತವಾಗಿ ವಿತರಿಸುವ ಉದ್ದೇಶವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ‘ಕಲಾಂ ಸೆಂಟರ್’ಗೆ ಭೇಟಿ ನೀಡಿದ ಸಚಿವರು, ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಈ ಘೋಷಣೆ ಮಾಡಿದರು.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯ ಒದಗಿಸುವುದು ತಮ್ಮ ಕರ್ತವ್ಯ ಎಂದ ಸಚಿವರು, ಎಲ್ಲವನ್ನೂ ಒಮ್ಮೆಲೆ ಮಾಡಲು ಸಾಧ್ಯವಿಲ್ಲದಿದ್ದರೂ ಹಂತ ಹಂತವಾಗಿ ರಾಜ್ಯದ ಎಲ್ಲಾ ಶಾಲೆ-ಪಿಯು ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದಾಗಿ ಹೇಳಿದರು. ಇದಕ್ಕೆ ಅಗತ್ಯ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳೊಂದಿಗೆ ಬೆರೆತು ಅವರ ಮಾತುಗಳನ್ನು ಆಲಿಸಿದ ಸಚಿವರು, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ ಹಾಗೂ ಕಾಲೇಜಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಹಂಚಿಕೊಂಡಾಗ, ಅವುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳೊಂದಿಗೆ ಸಂವಾದ ನಡೆಸುವುದು ತಮಗೆ ಯಾವಾಗಲೂ ಖುಷಿ ಕೊಡುವ ವಿಚಾರ ಎಂದ ಸಚಿವರು, ನಿರೀಕ್ಷಿಸದ ಪ್ರಶ್ನೆ ಹಾಗೂ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಮುಂದಿಡುತ್ತಾರೆ, ಲವಲವಿಕೆಯ ವಾತಾವರಣ ಸೃಷ್ಟಿಸುತ್ತಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಚಿವರ ಜೊತೆಗಿದ್ದರು.

ಪೂಜೆಯ ಹೂವು ಎಸೆಯಬೇಡಿ! ಮನೆಯಲ್ಲೇ ಕೆಮಿಕಲ್‌ ಫ್ರೀ ಧೂಪ ತಯಾರಿಸುವ ಸುಲಭ ವಿಧಾನ

0

ಮನೆಯಲ್ಲಿ ದೈನಂದಿನ ಪೂಜೆ, ವರಮಹಾಲಕ್ಷ್ಮಿ ಹಬ್ಬ, ಗೌರಿ-ಗಣೇಶ ಹಬ್ಬ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಲ್ಲಿ ದೇವರಿಗೆ ಅರ್ಪಿಸಿದ ಹೂವುಗಳನ್ನು ಮರುದಿನ ಎಸೆಯುವುದು ಸಾಮಾನ್ಯ.

ಆದರೆ ಈ ಪೂಜಾ ಹೂವುಗಳನ್ನು ತ್ಯಾಜ್ಯವಾಗಿ ಎಸೆಯುವ ಬದಲು ಮರುಬಳಕೆ ಮಾಡಿ ಮನೆಯಲ್ಲೇ ಕೆಮಿಕಲ್‌ ಫ್ರೀ ಧೂಪ ತಯಾರಿಸಬಹುದು. ಇದರಿಂದ ಪರಿಸರ ಸ್ನೇಹಿ ಪರ್ಯಾಯ ಸಿಗುವುದರ ಜೊತೆಗೆ ನೈಸರ್ಗಿಕ ಸುವಾಸನೆಯ ಧೂಪವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು.

ದೇವರಿಗೆ ಅರ್ಪಿಸಿದ ದಾಸವಾಳ, ಸೇವಂತಿಗೆ, ಚೆಂಡುಹೂವು, ಮಲ್ಲಿಗೆ, ಗುಲಾಬಿ ಸೇರಿದಂತೆ ವಿವಿಧ ಹೂವುಗಳ ದಳಗಳನ್ನು ಬಳಸಿಕೊಂಡು ಯಾವುದೇ ರಾಸಾಯನಿಕವಿಲ್ಲದ ಧೂಪವನ್ನು ತಯಾರಿಸಬಹುದು. ಈ ವಿಧಾನ ಸರಳವಾಗಿದ್ದು, ಮನೆಯಲ್ಲಿರುವ ಕೆಲವೇ ಸಾಮಗ್ರಿಗಳಿಂದ ಇದನ್ನು ಸಿದ್ಧಪಡಿಸಬಹುದು.

ಮೊದಲು ಹೂವುಗಳನ್ನು ಚೆನ್ನಾಗಿ ಒಣಗಿಸಬೇಕು:

ಪೂಜೆಯಲ್ಲಿ ಬಳಸಿದ ಹೂವುಗಳ ದಳಗಳನ್ನು ಪ್ರತ್ಯೇಕವಾಗಿ ತೆಗೆದು ಸ್ವಚ್ಛವಾದ ಬಟ್ಟೆ ಅಥವಾ ತಟ್ಟೆಯ ಮೇಲೆ ಹರಡಬೇಕು. ನಂತರ ಉತ್ತಮ ಗಾಳಿ ಮತ್ತು ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ 2ರಿಂದ 3 ದಿನಗಳವರೆಗೆ ಸಂಪೂರ್ಣ ಒಣಗಿಸಬೇಕು. ಹೂವುಗಳಲ್ಲಿ ಯಾವುದೇ ತೇವಾಂಶ ಉಳಿಯದಂತೆ ನೋಡಿಕೊಳ್ಳುವುದು ಮುಖ್ಯ. ಸಮಯದ ಅಭಾವ ಇದ್ದರೆ ಹೂವಿನ ದಳಗಳನ್ನು ಸ್ವಲ್ಪ ಹೊತ್ತು ಡ್ರೈ ರೋಸ್ಟ್‌ ಮಾಡಿ ಒಣಗಿಸಬಹುದು.

ಹೂವಿನ ದಳಗಳನ್ನು ಪುಡಿ ಮಾಡಿ:

ಹೂವುಗಳು ಸಂಪೂರ್ಣ ಒಣಗಿದ ಬಳಿಕ ಅವುಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಬೇಕು. ನಂತರ ಈ ಪುಡಿಗೆ ತೆಂಗಿನ ನಾರು, ಹವನ ಸಾಮಗ್ರಿ, ಗಗ್ಗುಳ, ಶ್ರೀಗಂಧ, ಸಾಂಬ್ರಾಣಿ ಅಥವಾ ಕರ್ಪೂರದಂತಹ ನೈಸರ್ಗಿಕ ಸುಗಂಧ ದ್ರವ್ಯಗಳನ್ನು ಸೇರಿಸಿ ಮತ್ತೆ ಚೆನ್ನಾಗಿ ಪುಡಿ ಮಾಡಬೇಕು. ಬಳಿಕ ಜರಡಿಯ ಮೂಲಕ ಶೋಧಿಸಿ ಮೃದುವಾದ ಪುಡಿಯನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬಹುದು.

ಇಚ್ಛೆಯಿದ್ದರೆ ಈ ಮಿಶ್ರಣಕ್ಕೆ ಪಲಾವ್‌ ಎಲೆ, ದಾಲ್ಚಿನ್ನಿ ಹಾಗೂ ಹಸುವಿನ ಒಣ ಸಗಣಿಯನ್ನು ಸೇರಿಸಬಹುದು. ಇವುಗಳಿಂದ ಧೂಪದ ಪರಿಮಳ ಹೆಚ್ಚುವುದರ ಜೊತೆಗೆ ಸೊಳ್ಳೆ ಹಾಗೂ ಇತರ ಕೀಟಗಳು ಮನೆಯೊಳಗೆ ಪ್ರವೇಶಿಸುವುದನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು.

ಕೋನ್‌ ಆಕಾರದ ಧೂಪ ತಯಾರಿಸುವ ವಿಧಾನ:

ತಯಾರಿಸಿದ ಹೂವಿನ ಪುಡಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಮೃದುವಾದ ಮಿಶ್ರಣ ತಯಾರಿಸಬೇಕು. ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಕೈಯಿಂದ ಕೋನ್‌ ಆಕಾರದಲ್ಲಿ ಧೂಪವನ್ನು ರೂಪಿಸಬೇಕು.

ನೆರಳಿನಲ್ಲಿ ಒಣಗಿಸಿದರೆ ಬಳಕೆಗೆ ಸಿದ್ಧ:

ತಯಾರಾದ ಧೂಪಗಳನ್ನು ಸ್ವಚ್ಛವಾದ ತಟ್ಟೆ ಅಥವಾ ಬಟ್ಟೆಯ ಮೇಲೆ ಇಟ್ಟು ನೆರಳಿರುವ ಹಾಗೂ ಗಾಳಿ ಚೆನ್ನಾಗಿ ಬೀಸುವ ಸ್ಥಳದಲ್ಲಿ 1ರಿಂದ 2 ದಿನಗಳವರೆಗೆ ಒಣಗಿಸಬೇಕು. ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸುವುದನ್ನು ತಪ್ಪಿಸಬೇಕು, ಏಕೆಂದರೆ ಇದರಿಂದ ಧೂಪದ ನೈಸರ್ಗಿಕ ಸುವಾಸನೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ಧೂಪಗಳು ಸಂಪೂರ್ಣವಾಗಿ ಒಣಗಿದ ಬಳಿಕ ಅವುಗಳನ್ನು ಪೂಜೆಯ ಸಮಯದಲ್ಲಿ ಬಳಸಬಹುದು. ಈ ವಿಧಾನದಿಂದ ಪೂಜಾ ಹೂವುಗಳ ಮರುಬಳಕೆ ಸಾಧ್ಯವಾಗುವುದರ ಜೊತೆಗೆ ಮನೆಯಲ್ಲಿಯೇ ನೈಸರ್ಗಿಕ, ಕೆಮಿಕಲ್‌ ಫ್ರೀ ಹಾಗೂ ಪರಿಸರ ಸ್ನೇಹಿ ಧೂಪವನ್ನು ತಯಾರಿಸಿಕೊಳ್ಳಬಹುದು.

ಕೂಡಲೇ ಬರ ಘೋಷಿಸಿ 10 ಸಾವಿರ ಕೋಟಿ ಪ್ಯಾಕೇಜ್ ನೀಡಿ; ಸರ್ಕಾರಕ್ಕೆ ರವಿಕುಮಾರ್ ಆಗ್ರಹ

0

ಬೆಂಗಳೂರು: ರಾಜ್ಯ ಸರ್ಕಾರ ಕೂಡಲೇ ಬರ ಘೋಷಣೆ ಮಾಡಬೇಕು ಹಾಗೂ 10 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಬೇಕು ಎಂದು ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಮುಂಗಾರು ಮಳೆ ಕಳೆದುಕೊಂಡಿದ್ದು, ದನಕರುಗಳಿಗೆ ಕುಡಿಯುವ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತರು ಕಂಗಾಲಾಗಿ ಗುಳೆ ಹೋಗುತ್ತಿದ್ದರೂ ಸರ್ಕಾರ ರೈತರ ಪರವಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ಬರ ಇರುವ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರೂ ಸರ್ಕಾರ ಯಾಕೆ ಅಧಿಕೃತವಾಗಿ ಬರ ಘೋಷಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಹಾಗೂ ಸಚಿವರೇ ಬರ ಪರಿಸ್ಥಿತಿ ಇರುವುದನ್ನು ಒಪ್ಪಿಕೊಳ್ಳುತ್ತಿದ್ದರೂ ಅಧಿಕೃತ ಘೋಷಣೆ ಮಾಡದಿರುವುದನ್ನು ಪ್ರಶ್ನಿಸಿದ ರವಿಕುಮಾರ್, ಕೂಡಲೇ ರಾಜ್ಯವನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು. ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಅವರು, ರೈತರು ಮೂರು ಬಾರಿ ಬಿತ್ತನೆ ಮಾಡಿದ್ದು, ಗೊಬ್ಬರ, ಕೂಲಿ ಹಾಗೂ ಬಿತ್ತನೆ ವೆಚ್ಚದಿಂದ ನಷ್ಟ ಅನುಭವಿಸಿದ್ದಾರೆ ಎಂದು ವಿವರಿಸಿದರು.

ಎರಡೂವರೆ ತಿಂಗಳಿನಿಂದ ರೈತರು ಸಂಕಷ್ಟದಲ್ಲಿದ್ದು, ಅವರಿಗೆ ಎಕರೆಗೆ 50 ಸಾವಿರ ರೂ. ನೀಡಬೇಕು ಹಾಗೂ ರಾಜ್ಯದಾದ್ಯಂತ ಇರುವ ರೈತರಿಗಾಗಿ 10 ಸಾವಿರ ಕೋಟಿ ರೂ. ಪ್ಯಾಕೇಜ್ ನೀಡಬೇಕು ಎಂದು ರವಿಕುಮಾರ್ ಒತ್ತಾಯಿಸಿದರು.

ದಲಿತರ ರಕ್ಷಣೆಗೆ ವಿಫಲ ಸರ್ಕಾರ: ಸಚಿವ ಕಾಶಪ್ಪನವರ್ ಬಂಧನಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

0

ಬೆಂಗಳೂರು: ಈ ಸರ್ಕಾರದ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಇದು ದಲಿತರನ್ನು ರಕ್ಷಿಸದ ಸರ್ಕಾರ ಎಂದು ವಿಧಾನಪರಿಷತ್ತಿನ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ದಲಿತರ ಮೇಲೆ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರಕರಣಗಳು ಹೆಚ್ಚಾಗಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ದೇವದುರ್ಗದಲ್ಲಿ ದಲಿತ ವ್ಯಕ್ತಿಯೊಬ್ಬರನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಘಟನೆಯನ್ನು ಉಲ್ಲೇಖಿಸಿದ ಅವರು, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ನಡೆಯುತ್ತಿದ್ದರೂ ಗೃಹ ಇಲಾಖೆ ಮೌನವಾಗಿದೆ ಎಂದು ಆರೋಪಿಸಿದರು. ಗೃಹ ಸಚಿವರು ವಾಸ್ತವದಲ್ಲಿ ಆರ್‌ಎಸ್‌ಎಸ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸಚಿವ ಕಾಶಪ್ಪನವರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ನಾರಾಯಣಸ್ವಾಮಿ, ಪ್ರಧಾನಿ ಮೋದಿ ಅವರ ಬಗ್ಗೆ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಸಚಿವರ ಬಂಧನ ಅಥವಾ ಎಫ್‌ಐಆರ್ ಆಗಿಲ್ಲ ಎಂದು ದೂರಿದ ಅವರು, ಈ ವಿಚಾರವನ್ನು ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸಿರುವುದನ್ನು ಖಂಡಿಸಿದ ನಾರಾಯಣಸ್ವಾಮಿ, ಇಂತಹ ಕ್ರಮವನ್ನು ಬಿಜೆಪಿ ಎಂದಿಗೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಕೂಡಲೇ ಸಚಿವ ಕಾಶಪ್ಪನವರ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಮಂಡ್ಯ ಬೆಲ್ಲಕ್ಕೆ ಬಂಗಾರದ ಬೆಲೆ: ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಬೆಲ್ಲದ ದರ!

0

ಮಂಡ್ಯ: ಮಂಡ್ಯದ ಕಂಪು ಖ್ಯಾತಿಯ ಅಚ್ಚ ಬೆಲ್ಲ ಈಗ ಅಕ್ಷರಶಃ ಬಂಗಾರವಾಗಿದೆ. ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರಗಾಲದ ಛಾಯೆ ಕಾವೇರಿ ನಾಡಿನ ರೈತರನ್ನು ಹೈರಾಣಾಗಿಸಿದ್ದು, ಇದರ ನೇರ ಬಿಸಿ ಈಗ ಮಾರುಕಟ್ಟೆಯಲ್ಲಿ ಬೆಲ್ಲದ ಬೆಲೆಯ ಮೇಲೆ ತಟ್ಟಿದೆ.

ಇತಿಹಾಸದಲ್ಲೇ ಎಂದೂ ಕಂಡಿರದ ರೀತಿಯಲ್ಲಿ ಮಂಡ್ಯದ ಬೆಲ್ಲದ ದರ ದಾಖಲೆಯ ಏರಿಕೆ ಕಂಡಿದೆ. ಈ ಹಿಂದೆ ಕ್ವಿಂಟಾಲ್‌ಗೆ 4,500 ರೂ. ಇದ್ದ ಬೆಲ್ಲದ ದರ, ಕಳೆದ ಎರಡು-ಮೂರು ದಿನಗಳಲ್ಲಿ ಬರೋಬ್ಬರಿ 2,000 ರೂ. ಏರಿಕೆಯಾಗಿ ಈಗ 6,500 ರೂ.ನಿಂದ 7,000 ರೂ.ವರೆಗೆ ಹರಾಜಾಗುತ್ತಿದೆ.

ಕಳೆದ ಆರು ತಿಂಗಳಿಂದ ಮಳೆಯಿಲ್ಲದೆ ಹಾಗೂ ಕಬ್ಬಿಗೆ ನೀರಿನ ಪೂರೈಕೆಯಾಗದೆ ಗದ್ದೆಗಳು ಒಣಗಿ ನಿಂತಿವೆ. ಪರಿಣಾಮ ಕಬ್ಬಿನ ಇಳುವರಿ ಅರ್ಧದಷ್ಟು ಕುಸಿದಿದ್ದು, ಗಾಣಗಳಿಗೆ ಕಬ್ಬು ಸಿಗದೆ ಉತ್ಪಾದನೆ ಸಂಪೂರ್ಣ ಕುಂಠಿತಗೊಂಡಿದೆ. ಹಿಂದೆ ಪ್ರತಿದಿನ 10ರಿಂದ 12 ಲಾರಿಗಳಷ್ಟು ಮಾರುಕಟ್ಟೆಗೆ ಹೋಗುತ್ತಿದ್ದ ಬೆಲ್ಲದ ಪೂರೈಕೆ ಈಗ ಅರ್ಧದಷ್ಟು ಇಳಿಕೆಯಾಗಿದೆ.

ಬೆಲ್ಲದ ಮಾರುಕಟ್ಟೆ ಪ್ರಾರಂಭವಾದ ದಿನದಿಂದಲೂ ಈ ಮಟ್ಟಿಗೆ ದರ ಏರಿಕೆಯಾಗಿರಲಿಲ್ಲ. ಈ ಸೀಸನ್‌ನಲ್ಲಿ ಬೆಲೆ ತಗ್ಗಬೇಕಿತ್ತಾದರೂ, ಇಷ್ಟು ಭಾರೀ ಏರಿಕೆ ಕಂಡಿರುವುದು ಇದೇ ಮೊದಲು ಎಂದು ವ್ಯಾಪಾರಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮಳೆಯಾಶ್ರಿತ ಹಾಗೂ ನೀರಾವರಿಯಿಲ್ಲದೆ ಒಣಗಿದ ಕಬ್ಬಿನ ಬೆಳೆ ರೈತರಿಗೆ ನಷ್ಟವನ್ನುಂಟು ಮಾಡಿದ್ದರೆ, ಕಚ್ಚಾ ವಸ್ತು ಸಿಗದೆ ಬೆಲ್ಲದ ದರ ಗಗನಕ್ಕೇರಿರುವುದು ಸಾಮಾನ್ಯ ಜನರಿಗೂ ಬಿಸಿ ತಟ್ಟುವಂತೆ ಮಾಡಿದೆ.

ಔಷಧ ಕಂಪನಿಯಲ್ಲಿ ಭಾರೀ ಸ್ಫೋಟ; ಇಬ್ಬರು ಸಾವು, 9 ಮಂದಿಗೆ ಗಂಭೀರ ಗಾಯ

0

ಹೈದರಾಬಾದ್: ತೆಲಂಗಾಣದ ಯಾದಾದ್ರಿ-ಭುವನಗಿರಿ ಜಿಲ್ಲೆಯ ಔಷಧ ಘಟಕವೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಶುಕ್ರವಾರ ರಾತ್ರಿ ಸುಮಾರು 10:30ರ ವೇಳೆಗೆ ಪೊಚಂಪಲ್ಲಿ ಮಂಡಲದ ದೋತಿಗುಡೆಂ ಗ್ರಾಮದ ಹೊರವಲಯದಲ್ಲಿರುವ ಹ್ಯಾಜೆಲೋ ಲ್ಯಾಬ್ ಪ್ರೈ.ಲಿ ಕಂಪನಿಯಲ್ಲಿ ಈ ಘಟನೆ ನಡೆದಿದೆ. 9 ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಫೋಟದ ಭಾರೀ ಶಬ್ದ ಕೇಳಿ ಸ್ಥಳೀಯ ನಿವಾಸಿಗಳು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭ್ಯವಾದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಸ್ಫೋಟದ ಬಳಿಕ ಕಂಪನಿಯ ಆವರಣದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ನೀರಿನ ಪೈಪ್‌ಗಳ ಮೂಲಕ ಬೆಂಕಿ ನಿಯಂತ್ರಿಸಲು ಹರಸಾಹಸಪಟ್ಟಿದ್ದು, ರಕ್ಷಣಾ ಸಿಬ್ಬಂದಿ ಹಾಗೂ ಕಾರ್ಮಿಕರು ಕೂಡ ಕಾರ್ಯಾಚರಣೆಗೆ ಸಹಕರಿಸಿದರು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಫಾರ್ಮಾ ಕಂಪನಿಯಲ್ಲಿದ್ದ ರಿಯಾಕ್ಟರ್ ಸ್ಫೋಟಗೊಂಡಿರುವ ಸಾಧ್ಯತೆಯನ್ನು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆದರೆ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ. ಸ್ಫೋಟ ಸಂಭವಿಸಿದ ಸ್ಥಳ, ರಿಯಾಕ್ಟರ್‌ನ ಸ್ಥಿತಿ ಹಾಗೂ ಕಂಪನಿಯಲ್ಲಿ ಕೈಗೊಳ್ಳಲಾಗಿದ್ದ ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಬೆಟ್ಟದ ಮಾವಿನಕೆರೆ ದೇವಾಲಯದಲ್ಲಿ ಪುತ್ರ ಪ್ರಜ್ವಲ್ ನೆನೆದು ಭವಾನಿ ರೇವಣ್ಣ ಕಣ್ಣೀರು!

0

ಹಾಸನ: ಹೊಳೆನರಸೀಪುರದ ಬೆಟ್ಟದ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಭವಾನಿ ರೇವಣ್ಣ ಅವರು ಪೂಜೆ ವೇಳೆ ಕಣ್ಣೀರಿಟ್ಟ ಘಟನೆ ನಡೆದಿದೆ.

ಎರಡನೇ ಶ್ರಾವಣ ಶನಿವಾರದ ಪ್ರಯುಕ್ತ ಭವಾನಿ ರೇವಣ್ಣ ಅವರು ಕುಟುಂಬಸ್ಥರೊಂದಿಗೆ ರಂಗನಾಥಸ್ವಾಮಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕುಟುಂಬ ಸದಸ್ಯರೊಂದಿಗೆ ರಂಗನಾಥಸ್ವಾಮಿಗೆ ಅಭಿಷೇಕ ನೆರವೇರಿಸಿ, ಸುಮಾರು ಒಂದು ಗಂಟೆ ಕಾಲ ಗರ್ಭಗುಡಿಯಲ್ಲಿ ಕುಳಿತು ಪೂಜೆ ಸಲ್ಲಿಸಿದರು. ಈ ವೇಳೆ ಅವರು ಭಾವುಕರಾಗಿ ಕಣ್ಣೀರಿಟ್ಟರು.

ಜೈಲಿನಲ್ಲಿರುವ ಪುತ್ರ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನೆನೆದು ಭವಾನಿ ರೇವಣ್ಣ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ಕಂಬನಿ ಒರೆಸಿಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪೂಜಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಸೂರಜ್ ರೇವಣ್ಣ ಭಾಗಿಯಾಗಿದ್ದರು.

ಹಂಪಿಯಲ್ಲಿ ದುರಂತ: ತುಂಗಭದ್ರಾ ನದಿಗೆ ಜಾರಿ ಬಿದ್ದು ತಾಯಿ–ಮಗಳು ನಾಪತ್ತೆ

0

ಹೊಸಪೇಟೆ/ವಿಜಯನಗರ: ಪ್ರವಾಸಕ್ಕೆಂದು ಹಂಪಿಗೆ ಆಗಮಿಸಿದ್ದ ತಾಯಿ–ಮಗಳು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ನಡೆದಿದೆ.

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಸೂಳೆಕೆರೆ ಗ್ರಾಮದ ಶಾಹೀನ್ (38) ಹಾಗೂ ಅವರ ಪುತ್ರಿ ಯಾಸ್ಮೀನ್ (13) ನಾಪತ್ತೆಯಾಗಿರುವವರು.

ಸಂಬಂಧಿಕರೊಂದಿಗೆ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಕುಟುಂಬ, ನದಿಯ ಸ್ನಾನಘಟ್ಟದ ಬಳಿ ಅಡುಗೆ ಮಾಡಿಕೊಂಡಿತ್ತು. ಬಳಿಕ ತಾಯಿ–ಮಗಳು ಸ್ನಾನಕ್ಕೆ ತೆರಳಿದ್ದ ವೇಳೆ ಇಬ್ಬರೂ ಕಾಲು ಜಾರಿ ತುಂಗಭದ್ರಾ ನದಿಗೆ ಬಿದ್ದು ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಹಂಪಿ ಪ್ರವಾಸಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ಹಾಗೂ ಆಳ ಹೆಚ್ಚಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಕ್ಕೆ ತೊಂದರೆಯಾಗುತ್ತಿದೆ.

ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾಗಿರುವ ತಾಯಿ–ಮಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆ ಹಂಪಿ ಪ್ರವಾಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಿಸಿಯೂಟ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ

0

ಗದಗ: ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ ನೂರಾರು ವಿದ್ಯಾರ್ಥಿಗಳು ವಾಂತಿ, ಬೇಧಿ ಹಾಗೂ ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದಲ್ಲಿ ನಡೆದಿದೆ.

ಬೀಡನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂದಿನಂತೆ ಶನಿವಾರ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗಿತ್ತು. ಊಟ ಸೇವಿಸಿದ ಕೆಲವೇ ಹೊತ್ತಿನಲ್ಲಿ ಹಲವು ವಿದ್ಯಾರ್ಥಿಗಳಿಗೆ ವಾಂತಿ, ಬೇಧಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೆಲವೇ ಸಮಯದಲ್ಲಿ ಹೆಚ್ಚಿನ ಮಕ್ಕಳು ಅಸ್ವಸ್ಥರಾಗಿದ್ದು, ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದ ತಕ್ಷಣ ಶಿಕ್ಷಕರು ಹಾಗೂ ಗ್ರಾಮಸ್ಥರು ಅಲರ್ಟ್ ಆಗಿ ಮಕ್ಕಳನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಅಸ್ವಸ್ಥ ವಿದ್ಯಾರ್ಥಿಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಮಕ್ಕಳು ಅಸ್ವಸ್ಥಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ಪಾಲಕರು ಆತಂಕಗೊಂಡು ಕಣ್ಣೀರಿಟ್ಟರು. ಮಕ್ಕಳ ಸ್ಥಿತಿ ಕಂಡು ಪಾಲಕರಲ್ಲಿ ಆತಂಕ ಮನೆಮಾಡಿದ್ದು, ಶಾಲೆಯ ಬಿಸಿಯೂಟದ ಗುಣಮಟ್ಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಸಿಯೂಟದಲ್ಲಿ ಹಲ್ಲಿ ಬಿದ್ದಿತ್ತು ಎಂಬ ಆರೋಪವೂ ಕೇಳಿಬಂದಿದ್ದು, ಇದರಿಂದಲೇ ಮಕ್ಕಳು ಅಸ್ವಸ್ಥರಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಿಸಿಯೂಟ ಸಿಬ್ಬಂದಿ ಹಾಗೂ ಶಾಲಾ ಶಿಕ್ಷಕರ ವಿರುದ್ಧವೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ನಿಖರ ಕಾರಣ ವೈದ್ಯಕೀಯ ಪರಿಶೀಲನೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ತನಿಖೆಯಿಂದ ತಿಳಿದುಬರಬೇಕಿದೆ.

ಕಳ್ಳಭಟ್ಟಿ ಮದ್ಯಕ್ಕೆ 9 ಮಂದಿ ಬಲಿ: ಭಾವ್‌ನಗರದಲ್ಲಿ ಮೆಥನಾಲ್ ವಿಷ ಸೇವಿಸಿ 3 ಮಂದಿ ಗಂಭೀರ

0

ಭಾವ್‌ನಗರ (ಗುಜರಾತ್): ಕಳ್ಳಭಟ್ಟಿ ಮದ್ಯ ಸೇವನೆಯಿಂದ ಭಾವ್‌ನಗರ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಶುಕ್ರವಾರ ಮಧ್ಯರಾತ್ರಿ ಹಾರ್ದಿಕ್ ಕಿಲ್ಜಿ ಎಂಬವರು ಮೃತಪಟ್ಟಿದ್ದು, ಇನ್ನೂ ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ, 17 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಆರು ಮಂದಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 17 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸಂತ್ರಸ್ತರು ಮೆಥನಾಲ್ ವಿಷಪೂರಿತ ಪ್ರಮಾಣ ಹೊಂದಿದ್ದ ಕಳ್ಳಭಟ್ಟಿ ಮದ್ಯ ಸೇವಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಭಾರತದಲ್ಲಿ ತಯಾರಾಗುವ ಜನಪ್ರಿಯ ವಿದೇಶಿ ಮದ್ಯದ ಬ್ರ್ಯಾಂಡ್‌ಗಳ ಬಾಟಲಿಗಳಲ್ಲಿ ಕಳ್ಳಭಟ್ಟಿ ಮದ್ಯವನ್ನು ತುಂಬಿ ಮಾರಾಟ ಮಾಡಲಾಗಿತ್ತು. ಇದೇ ಮದ್ಯವನ್ನು ಸಂತ್ರಸ್ತರು ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ ಮದ್ಯದ ಮಾದರಿಯಲ್ಲಿ ಶೇ.38.59ರಷ್ಟು ಮೆಥನಾಲ್ ಹಾಗೂ ಶೇ.0.94ರಷ್ಟು ಎಥನಾಲ್ ಇರುವುದು ದೃಢಪಟ್ಟಿದೆ. ಮೆಥನಾಲ್‌ನ ವಿಷಕಾರಿ ಪ್ರಮಾಣವೇ ಸಾವು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣದಲ್ಲಿ ಒಟ್ಟು 21 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಈ ಪೈಕಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ಗುಜರಾತ್ ಪೊಲೀಸ್ ಇಲಾಖೆಯ ರಾಜ್ಯ ಮೇಲ್ವಿಚಾರಣಾ ಘಟಕಕ್ಕೆ ವಹಿಸಲಾಗಿದೆ.

ಗುಜರಾತ್‌ನಲ್ಲಿ ಮದ್ಯ ನಿಷೇಧ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮದ್ಯದ ತಯಾರಿಕೆ, ಮಾರಾಟ ಹಾಗೂ ಸೇವನೆ ಕಾನೂನುಬಾಹಿರವಾಗಿದೆ. ಈ ನಡುವೆ ಕಳ್ಳಭಟ್ಟಿ ಮದ್ಯದಿಂದ ಸಂಭವಿಸಿರುವ ಸರಣಿ ಸಾವುಗಳು ರಾಜ್ಯದಲ್ಲಿ ಆತಂಕಕ್ಕೆ ಕಾರಣವಾಗಿವೆ.