Home Blog

ಮೋದಿ ವಿಡಿಯೋ ನಿರ್ಬಂಧ ವಿವಾದ: ಮೆಟಾಗೆ ಕೇಂದ್ರದ ಸಮನ್ಸ್, ತಾಂತ್ರಿಕ ದೋಷ ಎಂದ ಸಂಸ್ಥೆ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿದ್ದ ವಿಡಿಯೋವನ್ನು ಭಾರತದಲ್ಲಿ ವೀಕ್ಷಣೆಯಿಂದ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾ ಸಂಸ್ಥೆಗೆ ಸಮನ್ಸ್ ಜಾರಿ ಮಾಡಿದ್ದು, ವಿಡಿಯೋ ನಿರ್ಬಂಧಕ್ಕೆ ಕಾರಣವೇನು ಎಂಬುದರ ಕುರಿತು ಸ್ಪಷ್ಟನೆ ಕೇಳಿದೆ.

ಪ್ರಧಾನಿ ಮೋದಿ ಅವರ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಭಾರತೀಯ ಬಳಕೆದಾರರಿಗೆ ಮಾತ್ರ ಲಭ್ಯವಾಗದಂತೆ ಮಾಡಿದ್ದ ಹಿನ್ನೆಲೆಯಲ್ಲಿ ಮೆಟಾ ಸಂಸ್ಥೆಯ ಜಾಗತಿಕ ಸಾರ್ವಜನಿಕ ನೀತಿ ವಿಭಾಗದ ಪ್ರತಿನಿಧಿಗಳು ವಿಚಾರಣೆಗೆ ಹಾಜರಾಗಿ ವಿವರಣೆ ನೀಡುವಂತೆ ಸಚಿವಾಲಯ ಸೂಚಿಸಿದೆ.

ಈ ನಡುವೆ ಮೆಟಾ ಸಂಸ್ಥೆ ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಕ್ಷಮೆಯಾಚಿಸಿದೆ. ವಿಡಿಯೋ ತೆಗೆದುಹಾಕಿರುವುದು ಉದ್ದೇಶಪೂರ್ವಕ ಕ್ರಮವಲ್ಲ, ಬದಲಾಗಿ ತಾಂತ್ರಿಕ ದೋಷದಿಂದ ಸಂಭವಿಸಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ತಪ್ಪಾಗಿ ವಿಡಿಯೋ ನಿರ್ಬಂಧವಾಗಿದ್ದು, ಬಳಿಕ ಅದನ್ನು ಮರುಸ್ಥಾಪಿಸಲಾಗಿದೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.

ಜುಲೈ 28ರಂದು ಮುಂಜಾನೆ ಪ್ರಧಾನಿ ಮೋದಿ ಅವರ ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಭಾರತದಲ್ಲಿ ಮಾತ್ರ ಲಭ್ಯವಾಗಿರಲಿಲ್ಲ. ಬಳಕೆದಾರರ ಗಮನಕ್ಕೆ ಬಂದ ಬಳಿಕ ಈ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಕೆಲವೇ ಗಂಟೆಗಳ ಬಳಿಕ ವಿಡಿಯೋವನ್ನು ಮತ್ತೆ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿತ್ತು.

ಮೆಟಾ ಸಂಸ್ಥೆಯ ಪ್ರಕಾರ, ವಿಡಿಯೋ ನಿರ್ಬಂಧಕ್ಕೆ ಯಾವುದೇ ಸರ್ಕಾರದ ನಿರ್ದೇಶನ ಅಥವಾ ವಿಷಯ ನೀತಿ ಉಲ್ಲಂಘನೆ ಕಾರಣವಾಗಿರಲಿಲ್ಲ. ತಾಂತ್ರಿಕ ಸಮಸ್ಯೆಯಿಂದಾಗಿ ಈ ಘಟನೆ ನಡೆದಿದೆ ಎಂದು ಸ್ಪಷ್ಟನೆ ನೀಡಿದೆ.

ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಮಾತನಾಡಿದ್ದರು. ಪರೀಕ್ಷಾ ಅಕ್ರಮ ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಕಠಿಣ ಕಾನೂನು ಜಾರಿಗೆ ಸಂಬಂಧಿಸಿದ ವಿಷಯಗಳನ್ನು ಅವರು ಪ್ರಸ್ತಾಪಿಸಿದ್ದರು.

ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಯುವ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ನೀಡಿದ್ದ ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಭಾರಿ ಗಮನ ಸೆಳೆದಿದ್ದು, ವಿಡಿಯೋ ಈಗಾಗಲೇ 300 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸಲು ಆದೇಶ: CWRC ನಿರ್ಧಾರಕ್ಕೆ ಕರ್ನಾಟಕದ ತೀವ್ರ ಆಕ್ಷೇಪ

0

ಮಂಡ್ಯ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಹತ್ವದ ಆದೇಶ ಹೊರಡಿಸಿದ್ದು, ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ. ದೆಹಲಿಯಲ್ಲಿ ನಡೆದ ವರ್ಚ್ಯುವಲ್ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ಪ್ರತಿನಿಧಿಗಳ ಅಭಿಪ್ರಾಯ ಆಲಿಸಿದ ಬಳಿಕ ಸಮಿತಿ ಈ ಆದೇಶ ನೀಡಿದೆ.

CWRC ಆದೇಶದ ಪ್ರಕಾರ, 15 ದಿನಗಳ ಅವಧಿಯಲ್ಲಿ ಒಟ್ಟು 4 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕಾಗಿದೆ. ಪ್ರತಿದಿನ 3,500 ಕ್ಯೂಸೆಕ್‌ನಂತೆ ನೀರು ಹರಿಸುವಂತೆ ಸೂಚಿಸಲಾಗಿದ್ದು, ಈ ನಿರ್ಧಾರಕ್ಕೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ರಾಜ್ಯದಲ್ಲೇ ನೀರಿನ ಕೊರತೆ ಎದುರಾಗಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಕಷ್ಟಕರ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, “ನಮಗೇ ನೀರಿನ ಸಮಸ್ಯೆ ಇದೆ. ರಾಜ್ಯದ ಜನರಿಗೆ ವರ್ಷಪೂರ್ತಿ ಕುಡಿಯುವ ನೀರು ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

CWRC ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮೊರೆ ಹೋಗುವ ಬಗ್ಗೆಯೂ ಸರ್ಕಾರ ಚರ್ಚೆ ನಡೆಸಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಜಲಾಶಯಗಳ ನೀರಿನ ಸಂಗ್ರಹದ ಬಗ್ಗೆ ಆತಂಕ ಮುಂದುವರಿದಿದೆ. ಈ ನಡುವೆ ತಮಿಳುನಾಡಿಗೆ ನೀರು ಹರಿಸುವಂತೆ ಬಂದಿರುವ ಆದೇಶ ಮತ್ತೊಮ್ಮೆ ಕಾವೇರಿ ವಿವಾದವನ್ನು ತೀವ್ರಗೊಳಿಸುವ ಸಾಧ್ಯತೆ ಇದೆ.

ಕರ್ನಾಟಕಕ್ಕೆ ಮತ್ತೊಂದು ಶಾಕ್:‌ ತಮಿಳುನಾಡಿಗೆ ಮತ್ತೆ 3,500 ಕ್ಯೂಸೆಕ್ ಕಾವೇರಿ ನೀರು ಬಿಡಲು CWRC ಆದೇಶ!

ನವದೆಹಲಿ / ಬೆಂಗಳೂರು: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಎದುರಾಗಿರುವ ಹಿನ್ನೆಲೆ ಕೆಆರ್‌ಎಸ್ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಕುರಿತು ಆತಂಕ ಹೆಚ್ಚಿರುವ ನಡುವೆಯೇ,

ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರು ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿದೆ.

ಮಂಗಳವಾರ ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ನೀರಿನ ಲಭ್ಯತೆ, ಮಳೆಯ ಪ್ರಮಾಣ ಹಾಗೂ ಎರಡೂ ರಾಜ್ಯಗಳ ಕುಡಿಯುವ ನೀರಿನ ಅಗತ್ಯತೆ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.

ಸಭೆಯ ಬಳಿಕ ತಮಿಳುನಾಡಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸಮಿತಿ ನಿರ್ದೇಶನ ನೀಡಿದೆ.

ಸಭೆಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ತಂಡ ರಾಜ್ಯದಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆ, ಜಲಾಶಯಗಳಲ್ಲಿನ ನೀರಿನ ಅಭಾವ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಸಮಿತಿಯ ಗಮನ ಸೆಳೆದರು.

ಹಾರಂಗಿ ಜಲಾಶಯವನ್ನು ಹೊರತುಪಡಿಸಿ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರಿನ ಅಗತ್ಯತೆ ಹಾಗೂ ರೈತರ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡದಂತೆ ಕರ್ನಾಟಕದ ಅಧಿಕಾರಿಗಳು ಬಲವಾದ ವಾದ ಮಂಡಿಸಿದ್ದರು.

ಆದಾಗ್ಯೂ, ಸಮಿತಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿರುವುದು ಕರ್ನಾಟಕದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಆದೇಶದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಅಭಾವ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿಯ ಈ ಶಿಫಾರಸಿನ ವಿರುದ್ಧ ಕರ್ನಾಟಕ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿಚ್ಛೇದಿತ ಮಹಿಳೆಯನ್ನೇ ಟಾರ್ಗೆಟ್ ಮಾಡಿದ ಸೈಬರ್ ಖದೀಮರು: ಫೇಸ್ ಬುಕ್ ಸ್ನೇಹದ ಹೆಸರಿನಲ್ಲಿ ₹1.7 ಕೋಟಿ ವಂಚನೆ!

ಬೆಂಗಳೂರು: ಸೈಬರ್ ವಂಚಕರು ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿರುವ ನಡುವೆ, ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯ ಮಾತು ನಂಬಿದ ಯಶವಂತಪುರದ ಮಹಿಳೆಯೊಬ್ಬರು ₹1.7 ಕೋಟಿ ಕಳೆದುಕೊಂಡಿದ್ದು, ಮೋಸವಾಗಿರುವುದು ಗೊತ್ತಾದ ಬಳಿಕ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಗಂಡನಿಂದ ದೂರವಾಗಿದ್ದ ಮಹಿಳೆಗೆ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದು, ಆತ ತಾನು ಯುನೈಟೆಡ್ ಕಿಂಗ್‌ಡಮ್‌ (ಯುಕೆ)ನಲ್ಲಿ ಉದ್ಯೋಗಿಯಾಗಿರುವುದಾಗಿ ಪರಿಚಯಿಸಿಕೊಂಡಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಮೊಬೈಲ್ ಸಂಖ್ಯೆಗಳ ವಿನಿಮಯವಾಗಿದ್ದು, ಸಂಭಾಷಣೆ ವಾಟ್ಸ್‌ಆ್ಯಪ್‌ ಮೂಲಕ ಮುಂದುವರಿದಿತ್ತು.

ಮಹಿಳೆಯ ವಿಶ್ವಾಸ ಗಳಿಸಿದ ಆರೋಪಿ, ಯುಕೆಯಿಂದ ಚಿನ್ನಾಭರಣ, ಡೈಮಂಡ್ ಸೀರೆ ಹಾಗೂ ದುಬಾರಿ ಉಡುಗೊರೆಗಳನ್ನು ಕಳುಹಿಸುವುದಾಗಿ ಹೇಳಿದ್ದ. ತನ್ನ ಮಾತನ್ನು ನಂಬಿಸುವ ಸಲುವಾಗಿ ಉಡುಗೊರೆಗಳ ಫೋಟೋಗಳ ಜೊತೆಗೆ ನಕಲಿ ಕೊರಿಯರ್ ರಸೀದಿಗಳನ್ನೂ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಬಳಿಕ, ಉಡುಗೊರೆಗಳು ದೆಹಲಿಯ ಕಸ್ಟಮ್ಸ್ ಇಲಾಖೆಯಲ್ಲಿ ತಡೆಹಿಡಿಯಲ್ಪಟ್ಟಿದ್ದು, ಅವುಗಳನ್ನು ಬಿಡುಗಡೆಗೊಳಿಸಲು ಹಣ ಪಾವತಿಸಬೇಕಾಗಿದೆ. ತನ್ನ ಬಳಿ ಭಾರತೀಯ ಕರೆನ್ಸಿ ಇಲ್ಲದ ಕಾರಣ ಮೊದಲು ಮಹಿಳೆಯೇ ಹಣ ಪಾವತಿಸಬೇಕು. ಭಾರತಕ್ಕೆ ಬಂದ ಬಳಿಕ ಸಂಪೂರ್ಣ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಆರೋಪಿ ನಂಬಿಸಿದ್ದಾನೆ.

ಇದಾದ ಬಳಿಕ ಕಸ್ಟಮ್ಸ್ ಅಧಿಕಾರಿಯ ಹೆಸರಿನಲ್ಲಿ ಮಹಿಳೆಗೆ ದೂರವಾಣಿ ಕರೆ ಬಂದಿದ್ದು, ಆರಂಭದಲ್ಲಿ ₹40 ಲಕ್ಷವನ್ನು ಆರ್‌ಟಿಜಿಎಸ್‌ (RTGS) ಮೂಲಕ ಪಾವತಿಸಲಾಗಿದೆ. ನಂತರ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಮತ್ತಷ್ಟು ಹಣವನ್ನು ವರ್ಗಾಯಿಸುವಂತೆ ಮಾಡಲಾಗಿದೆ. ಬ್ಯಾಂಕ್ ವರ್ಗಾವಣೆಯ ಜೊತೆಗೆ, ಕೆಲ ಸಂದರ್ಭಗಳಲ್ಲಿ ವಂಚಕರು ಖುದ್ದಾಗಿ ಬಂದು ನಗದು ಹಣವನ್ನೂ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪದೇ ಪದೇ ಹಣ ಕೇಳುತ್ತಿದ್ದರಿಂದ ಅನುಮಾನಗೊಂಡ ಮಹಿಳೆ ಯುಕೆ ನಿವಾಸಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಆತನ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಆಗ ತಾವು ಸೈಬರ್ ವಂಚಕರ ಜಾಲಕ್ಕೆ ಬಿದ್ದಿರುವುದು ಅರಿವಾಗಿ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ತನಿಖೆ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಹಣಕಾಸು ವ್ಯವಹಾರ ನಡೆಸುವಾಗ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

ವಾಹನ ಖರೀದಿ ದುಬಾರಿ, ಪ್ರಯಾಣವೂ ದುಬಾರಿ: ಆಗಸ್ಟ್ 1ರಿಂದ ಹೊಸ ವಾಹನಗಳ ಬೆಲೆ ಏರಿಕೆ! ಟ್ರಾವೆಲ್ಸ್ ಬಾಡಿಗೆ ಹೆಚ್ಚಳಕ್ಕೆ ಸಿದ್ಧತೆ

0

ನವದೆಹಲಿ: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿರುವ ನಡುವೆಯೇ, ಆಗಸ್ಟ್‌ 1ರಿಂದ ಹೊಸ ವಾಹನಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಟ್ರಾವೆಲ್ಸ್ ಮಾಲೀಕರ ಸಂಘಗಳೂ ಪ್ರಯಾಣ ದರ ಹೆಚ್ಚಳಕ್ಕೆ ಮುಂದಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಜಾಗತಿಕ ಮಟ್ಟದಲ್ಲಿ ಯುದ್ಧ ಪರಿಸ್ಥಿತಿ, ಹಣದುಬ್ಬರ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ವಾಹನ ತಯಾರಿಕಾ ವೆಚ್ಚ ಹೆಚ್ಚಾಗಿದೆ. ಉಕ್ಕು, ಅಲ್ಯೂಮಿನಿಯಂ, ರಬ್ಬರ್, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಚಿಪ್‌ಗಳು, ಬ್ಯಾಟರಿಗಳು ಹಾಗೂ ವಿವಿಧ ಬಿಡಿಭಾಗಗಳ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹಲವು ವಾಹನ ತಯಾರಕ ಕಂಪನಿಗಳು ವಾಹನಗಳ ಬೆಲೆ ಹೆಚ್ಚಿಸಲು ನಿರ್ಧರಿಸಿವೆ.

ಈ ದರ ಏರಿಕೆಯ ನೇರ ಹೊರೆ ಗ್ರಾಹಕರ ಮೇಲೆ ಬೀಳಲಿದ್ದು, ಹೊಸ ಕಾರು ಸೇರಿದಂತೆ ವಿವಿಧ ವಾಹನಗಳನ್ನು ಖರೀದಿಸುವುದು ಮತ್ತಷ್ಟು ದುಬಾರಿಯಾಗಲಿದೆ.

ವಾಹನಗಳ ಬೆಲೆ ಹೆಚ್ಚಳದಿಂದ ಟ್ರಾವೆಲ್ಸ್ ಉದ್ಯಮಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ. ಕಾರು, ಟಿಟಿ ಹಾಗೂ ಇತರೆ ವಾಣಿಜ್ಯ ವಾಹನಗಳನ್ನು ಖರೀದಿಸುವ ವೆಚ್ಚ ಹೆಚ್ಚಾಗಲಿದ್ದು, ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಟೋಲ್ ದರ ಏರಿಕೆಯಿಂದ ಸಂಕಷ್ಟದಲ್ಲಿರುವ ಟ್ರಾವೆಲ್ಸ್ ಸಂಸ್ಥೆಗಳು ಪ್ರಯಾಣ ದರ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿವೆ.

ಈ ಕುರಿತು ಕರ್ನಾಟಕ ಟ್ರಾವೆಲ್ಸ್ ಅಸೋಸಿಯೇಷನ್, ಪ್ರತಿ ಪ್ರಯಾಣದ ಮೇಲೂ ಬಾಡಿಗೆ ದರ ಹೆಚ್ಚಳ ಮಾಡುವ ಸಾಧ್ಯತೆ ಇರುವುದಾಗಿ ಮುನ್ಸೂಚನೆ ನೀಡಿದೆ.

ಈಗಾಗಲೇ ಕೆಲವು ಪ್ರಮುಖ ವಾಹನ ತಯಾರಕ ಕಂಪನಿಗಳು ಆಗಸ್ಟ್‌ 1ರಿಂದ ಜಾರಿಗೆ ಬರುವ ಹೊಸ ಬೆಲೆ ಪರಿಷ್ಕರಣೆಯ ಕುರಿತು ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಪ್ರಕಟಿಸಿವೆ. ವಾಹನ ದರ ಏರಿಕೆ ಮತ್ತು ಟ್ರಾವೆಲ್ಸ್ ಬಾಡಿಗೆ ಹೆಚ್ಚಳದಿಂದ ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಕಾಮನ್ವೆಲ್ತ್ ಗೇಮ್ಸ್ʼನಲ್ಲಿ ಭಾರತದ ಮೊದಲ ಪ್ಯಾರಾ ಚಿನ್ನ ಗೆದ್ದು ಮಿಂಚಿದ ಶರ್ಮಿಳಾ ಧಂಕರ್!

0

ಗ್ಲಾಸ್ಗೋ: 2026ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಪ್ಯಾರಾ ಅಥ್ಲೀಟ್ ಶರ್ಮಿಳಾ ಧಂಕರ್ ದೇಶಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ ಶಾಟ್‌ಪುಟ್ F57 ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪರ ಚಿನ್ನ ಗೆದ್ದ ಮೊದಲ ಪ್ಯಾರಾ ಅಥ್ಲೀಟ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

40 ವರ್ಷದ ಶರ್ಮಿಳಾ ಧಂಕರ್ ಫೈನಲ್‌ನಲ್ಲಿ 9.81 ಮೀಟರ್ ದೂರ ಗುಂಡು ಎಸೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಘಾನಾದ ಜಿನಾಬು ಇಸ್ಸಾ 8.65 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಪದಕ ಪಡೆದರೆ, ಭಾರತದ ಶಿಲ್ಪಾ ಹಾಗೂ ನೈಜೀರಿಯಾದ ಯುಚಾರಿಯಾ ಇಯಾಜಿ ತಲಾ 8.19 ಮೀಟರ್ ಎಸೆದು ಜಂಟಿಯಾಗಿ ಕಂಚಿನ ಪದಕ ಗೆದ್ದರು.

ಶರ್ಮಿಳಾ ಅವರ ಚಿನ್ನದ ಪದಕದೊಂದಿಗೆ ಭಾರತ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಒಟ್ಟು 10 ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಇದರಲ್ಲಿ 2 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕಗಳಿವೆ.

ಆದರೆ ಈ ಚಿನ್ನದ ಹಿಂದೆ ನೋವು, ಅವಮಾನ ಮತ್ತು ಹೋರಾಟದ ಬದುಕಿನ ದೊಡ್ಡ ಕಥೆಯಿದೆ. ಹರಿಯಾಣದ ಚಿತ್ರೌಲಿ ಗ್ರಾಮದಲ್ಲಿ ಜನಿಸಿದ ಶರ್ಮಿಳಾ, ಕೇವಲ ಎರಡು ವರ್ಷದವರಾಗಿದ್ದಾಗಲೇ ಪೋಲಿಯೊಗೆ ತುತ್ತಾದರು. ದೈಹಿಕ ಅಂಗವೈಕಲ್ಯವಿದ್ದರೂ ಜೀವನದ ಹೋರಾಟವನ್ನು ಅವರು ಎಂದಿಗೂ ಕೈಬಿಡಲಿಲ್ಲ.

18ನೇ ವಯಸ್ಸಿನಲ್ಲಿ ವಿವಾಹವಾದ ಬಳಿಕ ಅವರು ಹಲವು ವರ್ಷಗಳ ಕಾಲ ವರದಕ್ಷಿಣೆ ಕಿರುಕುಳ, ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದರು. ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಕೊನೆಗೆ 26ನೇ ವಯಸ್ಸಿನಲ್ಲಿ ಮಕ್ಕಳೊಂದಿಗೆ ಗಂಡನ ಮನೆಯಿಂದ ಹೊರಬಂದು ತವರಿಗೆ ಮರಳಿದರು. ಜೀವನದ ಮೇಲಿನ ಭರವಸೆಯನ್ನೇ ಕಳೆದುಕೊಂಡು ಆತ್ಮಹತ್ಯೆಯ ಯೋಚನೆಯವರೆಗೂ ಅವರು ತಲುಪಿದ್ದರು.

ಅವರ ಬದುಕಿಗೆ ಹೊಸ ತಿರುವು ನೀಡಿದ್ದು ಎರಡನೇ ಪತಿ ಅಜಿತ್ ಸಿಂಗ್. 28ನೇ ವಯಸ್ಸಿನಲ್ಲಿ ಮದುವೆಯಾದ ಬಳಿಕ ಅವರು ಶರ್ಮಿಳಾ ಅವರನ್ನು ಪ್ಯಾರಾ ಅಥ್ಲೆಟಿಕ್ಸ್‌ಗೆ ಪರಿಚಯಿಸಿದರು. ಅವರ ಪ್ರತಿಭೆಯ ಮೇಲೆ ನಂಬಿಕೆ ಇಟ್ಟು ನಿರಂತರ ಪ್ರೋತ್ಸಾಹ ನೀಡಿದರು. 2023ರಲ್ಲಿ ಶರ್ಮಿಳಾ ಅವರ ತರಬೇತಿ ಮತ್ತು ಸ್ಪರ್ಧೆಗಳ ವೆಚ್ಚ ಭರಿಸಲು ಅಜಿತ್ ಸಿಂಗ್ ತಮ್ಮ ಮನೆಯನ್ನೇ ಮಾರಾಟ ಮಾಡಿದ್ದು, ಅವರ ತ್ಯಾಗ ಇಂದು ಚಿನ್ನದ ಪದಕದ ರೂಪದಲ್ಲಿ ಫಲಿಸಿದೆ.

ಸಂಕಷ್ಟಗಳನ್ನು ಮೆಟ್ಟಿನಿಂತು ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ಶರ್ಮಿಳಾ ಧಂಕರ್ ಅವರ ಸಾಧನೆ ಇಂದು ಲಕ್ಷಾಂತರ ಮಂದಿಗೆ ಸ್ಫೂರ್ತಿಯ ಕಥೆಯಾಗಿದೆ.

ಅವಲಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಬಂಧನ

0

ಬೆಂಗಳೂರು: ಮನೆ ಕಳ್ಳತನ ನಡೆಸಿ ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಅವಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆ ವೇಳೆ ಸರಣಿ ಕಳ್ಳತನ ಪ್ರಕರಣಗಳ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಅವರಿಂದ 50 ಲಕ್ಷಕ್ಕೂ ಅಧಿಕ ಮೌಲ್ಯದ 475 ಗ್ರಾಂ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಶ್ರೀನಿವಾಸ್ ಅಲಿಯಾಸ್ ಕರಾಟೆ ಶ್ರೀನಿವಾಸ್, ಶ್ರೀನಿವಾಸ್ ಜಿ ಹಾಗೂ ಪ್ರದೀಪ್ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಕರಾಟೆ ಶ್ರೀನಿವಾಸ್ ವಿರುದ್ಧ ಈಗಾಗಲೇ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸುವುದು ಈತನ ಕೃತ್ಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನದ ಬಳಿಕ ಚಿನ್ನಾಭರಣಗಳನ್ನು ಪ್ರದೀಪ್ ಹಾಗೂ ಆತನ ಸಹಚರರು ಖರೀದಿಸಿ ಮಾರಾಟ ಮಾಡುತ್ತಿದ್ದರು. ಚಿನ್ನ ಕಳ್ಳತನದ್ದೇ ಎಂಬ ಮಾಹಿತಿ ಇದ್ದರೂ ಆರೋಪಿಗಳು ಅದನ್ನು ಖರೀದಿಸುತ್ತಿದ್ದರೆಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತರೆಲ್ಲರೂ ನಗರದ ಯಶವಂತಪುರ ಭಾಗದ ನಿವಾಸಿಗಳಾಗಿದ್ದು, ಹೊಸಕೋಟೆ, ಸದಾಶಿವನಗರ ಹಾಗೂ ಅವಲಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹಲವು ಮನೆ ಕಳ್ಳತನ ಪ್ರಕರಣಗಳಲ್ಲಿ ಇವರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಆರೋಪಿಗಳನ್ನು ಬಂಧಿಸಿರುವ ಅವಲಹಳ್ಳಿ ಪೊಲೀಸರು, ಕಳ್ಳತನ ಪ್ರಕರಣಗಳ ಸಂಪರ್ಕ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರಿನಲ್ಲಿ ಕ್ಯಾಬ್‌ʼಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್!

0

ಬೆಂಗಳೂರು: ರಸ್ತೆ ಬದಿಯಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ಅಸಭ್ಯವಾಗಿ ಮಾತನಾಡಿ, ‘ನಿನ್ನ ರೇಟ್ ಎಷ್ಟು?’ ಎಂದು ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ವಿಜಯ್ ರಾಘವ್ (42) ಎಂದು ಗುರುತಿಸಲಾಗಿದ್ದು, ಆತ ಹಣ್ಣಿನ ವ್ಯಾಪಾರಿಯಾಗಿದ್ದು, ನಗರದ ಎನ್‌ಆರ್‌ಐ ಲೇಔಟ್ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಬ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದ ಯುವತಿಯ ಬಳಿ ಸ್ಕೂಟರ್‌ನಲ್ಲಿ ಬಂದ ವಿಜಯ್ ರಾಘವ್ ಅಸಭ್ಯವಾಗಿ ಮಾತನಾಡಿ, ಲೈಂಗಿಕವಾಗಿ ನಿಂದಿಸುತ್ತಾ ‘ನಿನ್ನ ರೇಟ್ ಎಷ್ಟು?’ ಎಂದು ಪ್ರಶ್ನಿಸಿ ಕಿರುಕುಳ ನೀಡಿದ್ದಾನೆ.

ಘಟನೆಯ ವೇಳೆ ಧೈರ್ಯ ಕಳೆದುಕೊಳ್ಳದ ಯುವತಿ, ತನ್ನ ಮೊಬೈಲ್‌ನಲ್ಲಿ ಆರೋಪಿಯ ಕೃತ್ಯವನ್ನು ವಿಡಿಯೊ ರೂಪದಲ್ಲಿ ಸೆರೆಹಿಡಿದಿದ್ದಾಳೆ. ತನ್ನ ಮುಖ ಹಾಗೂ ವಾಹನದ ನೋಂದಣಿ ಸಂಖ್ಯೆ ಸಂಪೂರ್ಣವಾಗಿ ದಾಖಲಾಗುತ್ತಿರುವುದು ಗೊತ್ತಾಗುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಬಳಿಕ ಯುವತಿ ಆ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ನಗರದಲ್ಲಿ ಮಹಿಳೆಯರು ಒಂಟಿಯಾಗಿ ನಿಲ್ಲುವುದಕ್ಕೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂದು ಆತಂಕ ವ್ಯಕ್ತಪಡಿಸಿದ್ದ ಅವರು, ವಿಡಿಯೊ ಸಮೇತ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಆರೋಪಿಯ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

12 ವರ್ಷಗಳ ದೇಶೀಯ ಕ್ರಿಕೆಟ್ ಹೋರಾಟದ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಪಡೆದ ಆಲ್ ರೌಂಡರ್!

0

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, 15 ಸದಸ್ಯರ ಈ ತಂಡದಲ್ಲಿ ಏಕೈಕ ಹೊಸ ಮುಖವಾಗಿ ಮಧ್ಯಪ್ರದೇಶದ ಅನುಭವಿ ಆಫ್‌ಸ್ಪಿನ್ ಆಲ್‌ರೌಂಡರ್ ಸರಂಶ್ ಜೈನ್ ಸ್ಥಾನ ಪಡೆದಿದ್ದಾರೆ.

ಗಾಯದ ಸಮಸ್ಯೆಯಿಂದ ಮೊದಲ ಟೆಸ್ಟ್‌ಗೆ ಅಲಭ್ಯರಾಗಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ಸರಂಶ್ ಅವರಿಗೆ ಅವಕಾಶ ನೀಡಲಾಗಿದೆ. ಈ ಆಯ್ಕೆಯೊಂದಿಗೆ ‘ಯಾರು ಈ ಸರಂಶ್ ಜೈನ್?’ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.

33 ವರ್ಷದ ಸರಂಶ್ ಜೈನ್ 2014ರಲ್ಲಿ ಮಧ್ಯಪ್ರದೇಶ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಸುಮಾರು 12 ವರ್ಷಗಳ ಸತತ ಪರಿಶ್ರಮ, ಸ್ಥಿರ ಪ್ರದರ್ಶನ ಮತ್ತು ದೇಶೀಯ ಕ್ರಿಕೆಟ್‌ನಲ್ಲಿನ ಯಶಸ್ಸಿನ ಫಲವಾಗಿ ಇದೀಗ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಇದುವರೆಗೆ ಸರಂಶ್ ಜೈನ್ 54 ಪ್ರಥಮ ದರ್ಜೆ ಪಂದ್ಯಗಳಲ್ಲಿ 2,223 ರನ್ ಗಳಿಸಿದ್ದು, 31.76 ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ. ಅವರ ಖಾತೆಯಲ್ಲಿ 2 ಶತಕ ಹಾಗೂ 14 ಅರ್ಧಶತಕಗಳಿವೆ. ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿರುವ ಅವರು 188 ವಿಕೆಟ್‌ಗಳನ್ನು ಕಬಳಿಸಿದ್ದು, 27.31ರ ಬೌಲಿಂಗ್ ಸರಾಸರಿಯನ್ನು ಹೊಂದಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ 75 ರನ್ ನೀಡಿ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಸಾಧನೆಯಾಗಿದೆ.

ಕಳೆದ ಒಂದು ವರ್ಷದಲ್ಲಿ ದೇಶೀಯ ರೆಡ್‌ಬಾಲ್ ಕ್ರಿಕೆಟ್‌ನಲ್ಲಿ ಸರಂಶ್ ಜೈನ್ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಈ ಅವಧಿಯಲ್ಲಿ 311 ರನ್ ಗಳಿಸುವುದರ ಜೊತೆಗೆ 44 ಪ್ರಥಮ ದರ್ಜೆ ವಿಕೆಟ್‌ಗಳನ್ನು ಪಡೆದು ಭಾರತದ ಅತ್ಯಂತ ಯಶಸ್ವಿ ಆಫ್‌ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಂಡಕ್ಕೆ ಕೊಡುಗೆ ನೀಡುವ ಸಾಮರ್ಥ್ಯವೇ ಅವರನ್ನು ಆಯ್ಕೆಗಾರರ ಗಮನ ಸೆಳೆಯುವಂತೆ ಮಾಡಿದೆ.

ದುಲೀಪ್ ಟ್ರೋಫಿಯಲ್ಲಿ ಸೆಂಟ್ರಲ್ ಝೋನ್ ತಂಡ ಚಾಂಪಿಯನ್ ಪಟ್ಟಕ್ಕೇರಲು ಸರಂಶ್ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಇರಾನಿ ಟ್ರೋಫಿಯಲ್ಲಿ ರೆಸ್ಟ್ ಆಫ್ ಇಂಡಿಯಾ ಪರ ಮುಂಬೈ ವಿರುದ್ಧ 121 ರನ್ ನೀಡಿ 6 ವಿಕೆಟ್ ಪಡೆದು ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.

ಇತ್ತೀಚೆಗೆ ನಡೆದ ಇಂಡಿಯಾ ‘ಎ’ ತಂಡದ ಶ್ರೀಲಂಕಾ ಪ್ರವಾಸವೂ ಅವರ ರಾಷ್ಟ್ರೀಯ ತಂಡದ ಆಯ್ಕೆಗೆ ಪ್ರಮುಖ ಕಾರಣವಾಯಿತು. ಗಾಲೆಯಲ್ಲಿ ನಡೆದ ಶ್ರೀಲಂಕಾ ‘ಎ’ ವಿರುದ್ಧದ ಎರಡನೇ ನಾಲ್ಕು ದಿನಗಳ ಪಂದ್ಯದಲ್ಲಿ ಅಜೇಯ 70 ರನ್ ಗಳಿಸಿದ್ದ ಅವರು, ಪಂದ್ಯದಲ್ಲಿ ಒಟ್ಟು 6 ವಿಕೆಟ್ ಕಬಳಿಸಿ ಆಲ್‌ರೌಂಡ್ ಪ್ರದರ್ಶನದ ಮೂಲಕ ಮ್ಯಾಚ್ ವಿನ್ನರ್ ಆಗಿ ಮಿಂಚಿದ್ದರು. ಈ ಪ್ರದರ್ಶನವೇ ಅವರಿಗೆ ಭಾರತ ಟೆಸ್ಟ್ ತಂಡದ ಬಾಗಿಲು ತೆರೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ಸರಂಶ್ ಜೈನ್ ಅವರಿಗೆ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶ ದೊರೆತಿದೆ. ಶ್ರೀಲಂಕಾ ಪ್ರವಾಸದಲ್ಲಿ ದೇಶೀಯ ಕ್ರಿಕೆಟ್‌ನ ಯಶಸ್ಸನ್ನು ಮುಂದುವರಿಸಿ ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಆಗಿ ಹೊರಹೊಮ್ಮುವ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ಟಾಲಿವುಡ್ ಜನಪ್ರಿಯ ಪೋಷಕ ನಟಿ ಪಾವಲ ಶಾಮಲ ಅನಾರೋಗ್ಯದಿಂದ ನಿಧನ

ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಮ್ಮ ಹಾಸ್ಯ ಅಭಿನಯದ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ ಹಿರಿಯ ನಟಿ ಪಾವಲ ಶಾಮಲ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹೈದರಾಬಾದ್‌ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಪಾವಲ ಶಾಮಲ ಎಂದರೆ ತೆಲುಗು ಪ್ರೇಕ್ಷಕರಿಗೆ ನೆನಪಾಗುವುದು ಅವರ ಸಹಜ ಅಭಿನಯ, ಚುರುಕು ಸಂಭಾಷಣೆ ಮತ್ತು ವಿಭಿನ್ನ ಹಾಸ್ಯ ಶೈಲಿ. ರಂಗಭೂಮಿಯಲ್ಲಿ ಗುರುತಿಸಿಕೊಂಡ ಬಳಿಕ ಸಿನಿಮಾಗೆ ಬಂದ ಅವರು, 1984ರಲ್ಲಿ ‘ಚಾಲೆಂಜ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.

ನೂರಾರು ಸಿನಿಮಾಗಳಲ್ಲಿ ನಟಿಸಿರುವ ಶಾಮಲ, ತೆಲುಗು ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳ ಭಾಗವಾಗಿದ್ದರು. ಸಣ್ಣ ಪಾತ್ರಗಳಲ್ಲಿಯೂ ತಮ್ಮದೇ ಆದ ಅಭಿನಯದ ಛಾಪು ಮೂಡಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

ಅವರ ಹಾಸ್ಯ ದೃಶ್ಯಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಮೀಮ್ ಸಂಸ್ಕೃತಿಯಲ್ಲೂ ಅವರ ಅಭಿನಯದ ಹಲವು ದೃಶ್ಯಗಳು ಸ್ಥಾನ ಪಡೆದಿವೆ.

ಆದರೆ ಪರದೆಯ ಮೇಲೆ ಜನರನ್ನು ನಗಿಸಿದ ಈ ಕಲಾವಿದೆಯ ನಿಜ ಜೀವನ ಮಾತ್ರ ನೋವುಗಳಿಂದ ಕೂಡಿತ್ತು. ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡಿದ್ದ ಅವರು, ಮದುವೆಯ ನಂತರ ಪತಿಯನ್ನೂ ಕಳೆದುಕೊಂಡರು. ನಂತರ ಸಿನಿಮಾ ಮತ್ತು ನಾಟಕಗಳ ಮೂಲಕ ಜೀವನ ನಡೆಸುತ್ತಿದ್ದ ಅವರಿಗೆ ಅನಾರೋಗ್ಯ ದೊಡ್ಡ ಸವಾಲಾಯಿತು.

ಪಾರ್ಕಿನ್ಸನ್ ಕಾಯಿಲೆ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಶಾಮಲ ಅವರಿಗೆ ಚಿಕಿತ್ಸೆ ಪಡೆಯುವುದೂ ಕಷ್ಟವಾಗಿತ್ತು. ಪುತ್ರಿಯ ಅನಾರೋಗ್ಯದ ಕಾರಣ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು.

ಈ ಪರಿಸ್ಥಿತಿಯಲ್ಲಿ ಚಿತ್ರರಂಗದ ಗಣ್ಯರು ಅವರ ನೆರವಿಗೆ ಬಂದಿದ್ದರು. ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಸೇರಿದಂತೆ ಹಲವು ನಟರು ಆರ್ಥಿಕ ಸಹಾಯ ಮಾಡಿದ್ದರು. ತೆಲಂಗಾಣ ಸರ್ಕಾರವೂ ಮಾಸಾಶನ ಹಾಗೂ ಮನೆ ನೀಡುವ ಘೋಷಣೆ ಮಾಡಿತ್ತು.

ಮೂರು ದಶಕಗಳಿಗೂ ಹೆಚ್ಚು ಕಾಲ ತೆಲುಗು ಚಿತ್ರರಂಗವನ್ನು ರಂಜಿಸಿದ ಪಾವಲ ಶಾಮಲ ಅವರ ನಿಧನದಿಂದ ಕಲಾ ಲೋಕ ಒಬ್ಬ ಪ್ರತಿಭಾವಂತ ಹಾಸ್ಯ ಕಲಾವಿದೆಯನ್ನು ಕಳೆದುಕೊಂಡಿದೆ. ಅವರ ನಿಧನಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.