Home Blog

ಗಣೇಶ ಮೂರ್ತಿ ಸಾಗಿಸುವಾಗ ವಿದ್ಯುತ್ ಅವಘಡ: ಕಾಲುವೆಗೆ ಉರುಳಿದ ಟ್ರ್ಯಾಕ್ಟರ್, ಇಬ್ಬರಿಗೆ ಗಾಯ!

0

ವಿಜಯನಗರ: ಗೌರಿ-ಗಣೇಶ ಹಬ್ಬದ ಸಂಭ್ರಮದ ನಡುವೆ ಗಣೇಶ ಮೂರ್ತಿ ಸಾಗಿಸುತ್ತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಟ್ರ್ಯಾಕ್ಟರ್‌ ಕಾಲುವೆಗೆ ಉರುಳಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಅನಂತಶಯನಗುಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಮೂರ್ತಿಯಲ್ಲಿದ್ದ ಬಿದಿರುಗಳು ಮಾರ್ಗಮಧ್ಯೆ ವಿದ್ಯುತ್ ಕಂಬದ ತಂತಿಗೆ ತಗುಲಿವೆ. ಇದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ವಿದ್ಯುತ್ ಶಾಕ್‌ನಿಂದ ಟ್ರ್ಯಾಕ್ಟರ್‌ ಚಾಲಕನ ನಿಯಂತ್ರಣ ತಪ್ಪಿ ಗಣೇಶ ಮೂರ್ತಿ ಸಮೇತ ಕಾಲುವೆಗೆ ಉರುಳಿದೆ ಎನ್ನಲಾಗಿದೆ.

ಘಟನೆಯಲ್ಲಿ ಕಮಲಾಪುರ ಮೂಲದ ಹುಲುಗಪ್ಪ ಹಾಗೂ ದೀಪಕ್ ಎಂಬುವವರಿಗೆ ವಿದ್ಯುತ್ ಶಾಕ್ ಹೊಡೆದು ಗಾಯಗಳಾಗಿವೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳನ್ನು ಕೂಡಲೇ ಹೊಸಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಹೊಸಪೇಟೆ ಡಿವೈಎಸ್‌ಪಿ ಮುರಳೀಧರ್ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಹುಲುಗಪ್ಪ ಮತ್ತು ಗುರುರಾಜ್ ಕಟ್ಟಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

700 ಕೆಜಿ ತೂಕ, 14 ಲಕ್ಷ ಬೆಲೆ; ಬೆಂಗಳೂರಿನ ಈ ಗಣೇಶ ಮೂರ್ತಿ ಸಖತ್ ಸ್ಪೆಷಲ್!

0

ಬೆಂಗಳೂರು: ನಾಡಿನೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ.

ಈ ಬಾರಿ ಬೆಂಗಳೂರಿನಲ್ಲಿ ದುಬಾರಿ ಗಣೇಶ ಮೂರ್ತಿಯೊಂದು ಗಮನ ಸೆಳೆಯುತ್ತಿದ್ದು, ಮಿಲ್ಕ್ ಕಾಲೋನಿಯಲ್ಲಿ ಬರೋಬ್ಬರಿ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಅಮೆರಿಕನ್ ಡೈಮಂಡ್, ಮುತ್ತು, ರತ್ನ ಹಾಗೂ ಹವಳಗಳಿಂದ ಅಲಂಕರಿಸಿದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ಬೆಂಗಳೂರಿನ ಮಿಲ್ಕ್ ಕಾಲೋನಿಯ ಸ್ವಸ್ತಿಕ ಯುವಕರ ಸಂಘ ಕಳೆದ 41 ವರ್ಷಗಳಿಂದ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದೆ. ಈ ವರ್ಷ ವಿಶೇಷವಾಗಿ ವಿನ್ಯಾಸಗೊಳಿಸಿರುವ ಗಣೇಶ ಮೂರ್ತಿ ಸುಮಾರು 5 ಅಡಿ ಎತ್ತರವಿದ್ದು, ಬರೋಬ್ಬರಿ 700 ಕೆಜಿ ತೂಕ ಹೊಂದಿದೆ.

ಸೊಲ್ಲಾಪುರದ ಕುಶಲಕರ್ಮಿಗಳು ಸುಮಾರು ಮೂರು ತಿಂಗಳ ಕಾಲ ಶ್ರಮಿಸಿ ಈ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. ಅಮೆರಿಕನ್ ಡೈಮಂಡ್ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಬಳಸಿ ಮೂರ್ತಿಯನ್ನು ಸಿದ್ಧಪಡಿಸಲಾಗಿದೆ.

ಇನ್ನು ಗಣೇಶ ಮೂರ್ತಿಯಷ್ಟೇ ಮಂಟಪವೂ ವಿಶೇಷವಾಗಿದ್ದು, ಸುಮಾರು 16 ಲಕ್ಷ ರೂಪಾಯಿ ವೆಚ್ಚದಲ್ಲಿ ಆಂಧ್ರಪ್ರದೇಶದ ಲೇಪಾಕ್ಷಿ ಶೈಲಿಯಲ್ಲಿ ಭವ್ಯ ಮಂಟಪ ನಿರ್ಮಿಸಲಾಗುತ್ತಿದೆ. ವಿಶೇಷ ಗಣೇಶ ಮೂರ್ತಿ ಹಾಗೂ ಮಂಟಪವನ್ನು ನೋಡಲು ಸಾರ್ವಜನಿಕರು ಕಾತರರಾಗಿದ್ದಾರೆ.

ಪ್ರತಿ ವರ್ಷ ಗಣೇಶೋತ್ಸವದ ಮೂಲಕ ಭಕ್ತಿ, ಸಂಭ್ರಮ ಹಾಗೂ ಒಗ್ಗಟ್ಟಿನ ಸಂದೇಶ ಸಾರುತ್ತಿರುವ ಸ್ವಸ್ತಿಕ ಯುವಕರ ಸಂಘ, ಈ ಬಾರಿ ವಿಭಿನ್ನ ಗಣೇಶ ಮೂರ್ತಿಯ ಮೂಲಕ ಗಮನ ಸೆಳೆಯುತ್ತಿದೆ.

ಜಮೀನು ವಿವಾದಕ್ಕೆ ಹೊತ್ತಿಕೊಂಡ ಗಲಾಟೆ ಕಿಡಿ: ಚಿಕ್ಕಪ್ಪನಿಗೆ ಚಾಕು ಇರಿದ ಅಣ್ಣನ ಮಗ!

0

ಶಿವಮೊಗ್ಗ: ಜಮೀನು ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ ತನ್ನ ಚಿಕ್ಕಪ್ಪನಿಗೆ ಚಾಕು ಇರಿದ ಘಟನೆ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ನಡೆದಿದೆ.

ಪುರದಾಳು ಗ್ರಾಮದ ನಿವಾಸಿ ಶ್ರೀನಿವಾಸ್ (52) ಚಾಕು ಇರಿತಕ್ಕೊಳಗಾದ ವ್ಯಕ್ತಿ. ರಾಜಪ್ಪ ಅವರ ಪುತ್ರ ಮಂಜುನಾಥ್ ಚಾಕು ಇರಿದ ಆರೋಪ ಎದುರಿಸುತ್ತಿದ್ದಾರೆ.

ರಾಜಪ್ಪ ಹಾಗೂ ಶ್ರೀನಿವಾಸ್ ಸಹೋದರರಾಗಿದ್ದು, ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಇಬ್ಬರ ಕುಟುಂಬಗಳ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಶ್ರೀನಿವಾಸ್ ಹಾಗೂ ಅವರ ಪತ್ನಿ ಶಶಿಕಲಾ ಅಡಿಕೆ ತೋಟಕ್ಕೆ ನೀರು ಹಾಯಿಸುತ್ತಿದ್ದ ವೇಳೆ ರಾಜಪ್ಪ ಹಾಗೂ ಅವರ ಪತ್ನಿ ನೀರು ಹಾಯಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದು, ಹಲ್ಲೆ ನಡೆದಿದೆ ಎನ್ನಲಾಗಿದೆ.

ಗಲಾಟೆ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಬಂದ ರಾಜಪ್ಪನ ಪುತ್ರ ಮಂಜುನಾಥ್ ಕಾರಿನಿಂದ ಇಳಿದು ಚಾಕು ತೆಗೆದುಕೊಂಡು ಶ್ರೀನಿವಾಸ್ ಅವರಿಗೆ ಹಲವು ಬಾರಿ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.

ಚಾಕು ಇರಿತದಿಂದ ಶ್ರೀನಿವಾಸ್ ಅವರ ಎದೆ, ಪಕ್ಕೆಲುಬು ಹಾಗೂ ತೊಡೆಯ ಭಾಗದಲ್ಲಿ ಗಾಯಗಳಾಗಿವೆ. ಗಲಾಟೆ ಬಿಡಿಸಲು ಮುಂದಾದ ಅವರ ಪತ್ನಿ ಶಶಿಕಲಾ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ.

ಘಟನೆ ಕುರಿತು ಪೊಲೀಸರು ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಿದ ಅಭಿಷೇಕ್ ಶರ್ಮಾ: ಒಂದೇ ಪಂದ್ಯದಲ್ಲಿ ಹಲವು ದಾಖಲೆ!

0

ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸುಲಭ ಗೆಲುವು ದಾಖಲಿಸಿದೆ.

ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅಭಿಷೇಕ್ ಶರ್ಮಾ ಭರ್ಜರಿ ಇನ್ನಿಂಗ್ಸ್ ಆಡುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

157 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಪರ ಅಭಿಷೇಕ್ ಶರ್ಮಾ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ 32 ಎಸೆತಗಳಲ್ಲಿ 82 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಈ ಪಂದ್ಯದಲ್ಲಿ 250ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಅರ್ಧಶತಕ ಸಿಡಿಸಿದ ಅಭಿಷೇಕ್ ಶರ್ಮಾ, ತಮ್ಮ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಭಾರತ ಪರ 250ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಅತಿ ಹೆಚ್ಚು 50ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್ ಆಡಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಅಭಿಷೇಕ್ ಹಿಂದಿಕ್ಕಿದ್ದಾರೆ.

ಇದೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 6000 ರನ್‌ಗಳ ಮೈಲಿಗಲ್ಲನ್ನೂ ತಲುಪಿದ್ದಾರೆ. ಕೇವಲ 3420 ಎಸೆತಗಳಲ್ಲಿ 6000 ಟಿ20 ರನ್ ಪೂರೈಸಿದ ಅವರು, ಅತಿ ಕಡಿಮೆ ಎಸೆತಗಳಲ್ಲಿ ಈ ಸಾಧನೆ ಮಾಡಿದ ಮೊದಲ ಏಷ್ಯನ್ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಸಿಕ್ಸರ್ ಬಾರಿಸುವ ತಮ್ಮ ಟ್ರೇಡ್‌ಮಾರ್ಕ್ ಶೈಲಿಯನ್ನೂ ಅಭಿಷೇಕ್ ಮುಂದುವರಿಸಿದ್ದಾರೆ. ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಇದೀಗ ಅಭಿಷೇಕ್ ಶರ್ಮಾ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ.

ಅಭಿಷೇಕ್ 12ನೇ ಬಾರಿಗೆ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ್ದಾರೆ. ರೋಹಿತ್ ಶರ್ಮಾ ಕೂಡ 12 ಬಾರಿ ಈ ಸಾಧನೆ ಮಾಡಿದ್ದಾರೆ. ಆದರೆ ರೋಹಿತ್ ತಮ್ಮ 12 ಸಿಕ್ಸರ್‌ಗಳಿಗಾಗಿ 401 ಎಸೆತಗಳನ್ನು ಎದುರಿಸಿದ್ದರೆ, ಅಭಿಷೇಕ್ ಕೇವಲ 152 ಎಸೆತಗಳಲ್ಲೇ ಈ ಸಾಧನೆ ಮಾಡಿರುವುದು ವಿಶೇಷ.

ಒಟ್ಟಾರೆ, ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯ ಅಭಿಷೇಕ್ ಶರ್ಮಾ ಪಾಲಿಗೆ ಬ್ಯಾಟಿಂಗ್ ಅಬ್ಬರದ ಜೊತೆಗೆ ಹಲವು ದಾಖಲೆಗಳ ಪಂದ್ಯವಾಗಿಯೂ ಗುರುತಿಸಿಕೊಂಡಿದೆ.

ಜೀರೋ ಬಿಲ್ ಬರ್ತಿದ್ದ ಮನೆಗಳಿಗೆ ದಿಢೀರ್ ₹5,000 ಕರೆಂಟ್ ಬಿಲ್! ಬೆಸ್ಕಾಂ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಬೆಂಗಳೂರು: ಪ್ರತಿ ತಿಂಗಳು ‘ಜೀರೋ ಬಿಲ್’ ನೋಡಿ ನಿರಾಳವಾಗುತ್ತಿದ್ದ ರಾಜಧಾನಿಯ ಜನರಿಗೆ ಈ ಬಾರಿ ಬಂದಿರುವ ಕರೆಂಟ್ ಬಿಲ್ ನೋಡಿ ತೀವ್ರ ಆಘಾತವಾಗಿದೆ. ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿದ್ದ ಬೆಂಗಳೂರಿನ ನೂರಾರು ಕುಟುಂಬಗಳಿಗೆ ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರನೇ 4,000 ದಿಂದ 5,000 ರೂಪಾಯಿ ಬಿಲ್ ಕೈಸೇರಿದ್ದು, ರಾಜಧಾನಿಯಲ್ಲಿ ಬೆಸ್ಕಾಂ (BESCOM) ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.

ಸಣ್ಣ ಮನೆಗಳಿಗೂ ಭಾರಿ ಮೊತ್ತದ ಬಿಲ್: ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಈವರೆಗೆ ನಿಯಮಿತವಾಗಿ ಜೀರೋ ಬಿಲ್ ಪಡೆಯುತ್ತಿದ್ದ ಬೆಂಗಳೂರಿನ ಶಿವಾಜಿನಗರದ ಮಖಾನ್ ಕಾಂಪೌಂಡ್ ಸೇರಿದಂತೆ ಹಲವು ಭಾಗಗಳ ನಿವಾಸಿಗಳಿಗೆ, ಈ ಬಾರಿ ಇದ್ದಕ್ಕಿದ್ದಂತೆ ಬೆಸ್ಕಾಂನಿಂದ ಭಾರಿ ಮೊತ್ತದ ವಿದ್ಯುತ್ ಬಿಲ್ ನೀಡಲಾಗಿದೆ. ಸಣ್ಣ ಮನೆಗಳಿಗೂ ಇಷ್ಟೊಂದು ದೊಡ್ಡ ಮೊತ್ತದ ಬಿಲ್ ಬಂದಿರುವುದನ್ನು ವಿರೋಧಿಸಿ ಸ್ಥಳೀಯರು ಬೆಸ್ಕಾಂ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಉಚಿತ ಸೌಲಭ್ಯ ಸಿಗುತ್ತದೆ ಎಂದು ನಿರಾಳವಾಗಿದ್ದ ಕುಟುಂಬಗಳಿಗೆ ಏಕಾಏಕಿ ಬಂದ ಈ ಬಿಲ್ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಸಾಫ್ಟ್‌ವೇರ್ ತಾಂತ್ರಿಕ ದೋಷ ಎಂದ ಬೆಸ್ಕಾಂ: ಈ ಗೊಂದಲದ ಕುರಿತು ಸ್ಪಷ್ಟನೆ ನೀಡಿರುವ ಬೆಸ್ಕಾಂ ಅಧಿಕಾರಿಗಳು, ಕಳೆದ ಎರಡು ತಿಂಗಳುಗಳಿಂದ ಬಿಲ್ಲಿಂಗ್ ಸಾಫ್ಟ್‌ವೇರ್ ಅಥವಾ ಸರ್ವರ್‌ಗಳಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆಯಿಂದಾಗಿ ಉಚಿತ ಯೂನಿಟ್‌ಗಳು ಸರಿಯಾಗಿ ಲೆಕ್ಕಾಚಾರವಾಗದೆ ಪೂರ್ಣ ಬಿಲ್ ಜನರೇಟ್ ಆಗಿದೆ ಎಂದು ತಿಳಿಸಿದ್ದಾರೆ.

ಗ್ರಾಹಕರಲ್ಲಿ ತೀವ್ರ ಆತಂಕ ಹಾಗೂ ಗೊಂದಲ: ಈ ಹಿಂದಿನ ತಿಂಗಳುಗಳಲ್ಲಿ ಜೀರೋ ಬಿಲ್ ಪಡೆಯುತ್ತಿದ್ದ ಗ್ರಾಹಕರು, ಇದು ಕೇವಲ ತಾಂತ್ರಿಕ ದೋಷದಿಂದ ಬಂದಿರುವ ಬಿಲ್ ಆಗಿದೆಯೇ ಅಥವಾ ತಾವು ನಿಜವಾಗಿಯೂ ಈ ಭಾರಿ ಮೊತ್ತವನ್ನು ಪಾವತಿಸಬೇಕೇ ಎಂಬ ಗೊಂದಲ ಹಾಗೂ ಆತಂಕದಲ್ಲಿದ್ದಾರೆ.

ಎಲ್ಲಾ ಸೇವೆಗಿಂತ ಶಿಕ್ಷಕರ ಸೇವೆ ಮಿಗಿಲು: ಪ್ರೊ. ಎಸ್.ವಿ.ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಸಮಾಜದ ಆಸ್ತಿ. ಅವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳಾಗಿದ್ದು, ಶಿಕ್ಷಣ ನೀಡಿ ಸಮಾಜ ನಿರ್ಮಾಣ ಮಾಡುವ ಶಿಕ್ಷಕರ ಸೇವೆ ಎಲ್ಲ ಸೇವೆಗಿಂತಲೂ ಮಿಗಿಲಾದದ್ದು ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ.ಸಂಕನೂರ ಹೇಳಿದರು.

ಹೊಳೆಆಲೂರಿನ ಎಸ್.ಎಸ್.ಆಡಿನ ಜನಸೇವಾ ಸಂಸ್ಥೆ ವತಿಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೮ನೇ ಜನ್ಮದಿನದ ಅಂಗವಾಗಿ ಜೆ.ಟಿ. ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ, ‘ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ’ ಪ್ರದಾನ, ನಿವೃತ್ತ ಹಾಗೂ ಸಾಧಕ ಶಿಕ್ಷಕರ ಸನ್ಮಾನ, ‘ವಸುಂಧರೆ’ ಕವನ ಸಂಕಲನ ಬಿಡುಗಡೆ ಮತ್ತು ಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ನೀಡಿದ್ದು, ಮುಂದೆಯೂ ಶಿಕ್ಷಕರ ಸೇವೆಗೆ ಬದ್ಧನಾಗಿರುವುದಾಗಿ ತಿಳಿಸಿದರು. ಶಿಕ್ಷಕರನ್ನು ಗೌರವಿಸುವುದರೊಂದಿಗೆ ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಆಡಿನ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ಶಿಕ್ಷಣದಿಂದ ಸಮಾಜ ಪರಿವರ್ತನೆಯತ್ತ ಸಾಗುತ್ತಿದೆ. ಅಂತಹ ಶಿಕ್ಷಣ ನೀಡಿದ ಶಿಕ್ಷಕರನ್ನು ಸ್ಮರಿಸುವುದು ಕೃತಜ್ಞತೆಯ ಸಂಕೇತ. ಡಾ.ರಾಧಾಕೃಷ್ಣನ್ ಅವರಂತೆ ಸಾವಿತ್ರಿಬಾಯಿ ಫುಲೆ ಅವರನ್ನೂ ಸ್ಮರಿಸುವ ಕಾರ್ಯವಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

‘ವಸುಂಧರೆ’ ಕವನ ಸಂಕಲನ ಬಿಡುಗಡೆಗೊಳಿಸಿದ ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಎಸ್.ಎನ್.ಬಳ್ಳಾರಿ, ಶಿಕ್ಷಣದ ಜತೆಗೆ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಸಾಮಾಜಿಕ ಸೇವೆಗೆ ವೇದಿಕೆ ಕಲ್ಪಿಸುತ್ತಿರುವ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ಜೆ.ಟಿ. ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಎಸ್.ಪಟ್ಟಣಶೆಟ್ಟಿ ಮಾತನಾಡಿ, ಶಿಕ್ಷಕರನ್ನು ಗೌರವಿಸುವುದು ಜ್ಞಾನವನ್ನು ಗೌರವಿಸಿದಂತೆ ಎಂದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ.ನಂದಾ ಹಣಬರಟ್ಟಿ ತಮ್ಮ ಬಾಲ್ಯದ ಗುರುಗಳನ್ನು ಸ್ಮರಿಸಿದರು.

ಸಂಸ್ಥೆಯ ಅಧ್ಯಕ್ಷೆ ಶೋಭಾ ಎಸ್.ಆಡಿನ ಅಧ್ಯಕ್ಷತೆ ವಹಿಸಿ, ಶಿಕ್ಷಕರು ಮಕ್ಕಳ ಬದುಕು ರೂಪಿಸುವ ಶಿಲ್ಪಿಗಳು. ನಿವೃತ್ತ ಶಿಕ್ಷಕರು ಬಿತ್ತಿದ ಜ್ಞಾನದ ಬೀಜಗಳು ತಲೆಮಾರುಗಳವರೆಗೆ ಫಲ ನೀಡುತ್ತವೆ ಎಂದರು.

ಸಮಾರಂಭದಲ್ಲಿ ‘ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ–೨೦೨೬’ ಪ್ರದಾನ ಮಾಡಿ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಶಸ್ತಿ ಪುರಸ್ಕೃತರು ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಚನಗೀತೆ, ಸಂಗೀತ, ಚಿತ್ರಕಲೆ ಹಾಗೂ ಗಾಂಧಾರಿ ವಿದ್ಯಾ ಪ್ರದರ್ಶನಗಳು ಗಮನ ಸೆಳೆದವು.

ಬಸವರಾಜ ಎಂ.ಕಡೆಮನಿ, ವಿವೇಕಾನಂದಗೌಡ ಪಾಟೀಲ, ಡಿ.ಎಸ್.ತಳವಾರ, ಎಸ್.ಕೆ.ಆಡಿನ, ಪಾಂಡುರಂಗ ಪತ್ತಾರ ಸೇರಿದಂತೆ ಗಣ್ಯರು, ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಆದರ್ಶ ಮೌಲ್ಯಗಳಿಗೆ ರೈತರೇ ಪ್ರತಿರೂಪ: ಅನಿಲ ಮೆಣಸಿನಕಾಯಿ

0

ವಿಜಯಸಾಕ್ಷಿ ಸುದ್ದಿ, ಗದಗ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಭಾಗವಹಿಸುವುದರಿಂದ ರಾಜಕೀಯದಲ್ಲೂ ನ್ಯಾಯ, ನೀತಿ ಹಾಗೂ ಧರ್ಮದ ಮೌಲ್ಯಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂದು ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಹೇಳಿದರು.

ತಾಲೂಕಿನ ಹಿರೇಹಂದಿಗೋಳ ಗ್ರಾಮದಲ್ಲಿ ನಡೆದ ಶರಣ ಬಸವೇಶ್ವರ 41ನೇ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರಗಾಲದ ನಡುವೆಯೂ ಪುರಾಣ ಪ್ರವಚನ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಗಮನಾರ್ಹ ಎಂದರು.

ಎಷ್ಟೇ ಬರಗಾಲವಿದ್ದರೂ ಧಾರ್ಮಿಕ ಕಾರ್ಯಕ್ರಮಗಳಿಗೆ ರೈತರು ದಾನ-ಧರ್ಮದಲ್ಲಿ ಎಂದಿಗೂ ಹಿಂದೆ ಬೀಳುವುದಿಲ್ಲ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಜೋಳಿಗೆ ಕಾರ್ಯಕ್ರಮ ಹಮ್ಮಿಕೊಂಡಾಗ ಹಿರೇಹಂದಿಗೋಳ ಗ್ರಾಮಸ್ಥರು ದವಸ-ಧಾನ್ಯಗಳನ್ನು ನೀಡಿ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡಿದ್ದರು. ಈ ಮೂಲಕ ಆದರ್ಶ ಮೌಲ್ಯಗಳು ಇಂದಿಗೂ ಸಮಾಜದಲ್ಲಿ ಜೀವಂತವಾಗಿವೆ ಎಂಬುದನ್ನು ರೈತರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಅಭಿನವ ಭೂದೀಶ್ವರ ಶ್ರೀಗಳು ಮಾತನಾಡಿ, ಬದುಕಿಗೆ ಎಲ್ಲವೂ ಬೇಕು. ಎಲ್ಲವೂ ಬೇಕು ಎಂದಾಗ ಅನ್ಯಾಯದ ಮಾರ್ಗದಲ್ಲಿ ಗಳಿಸದೆ ನ್ಯಾಯದ ಮಾರ್ಗದಲ್ಲಿ ಸಂಪಾದಿಸಬೇಕು. ಆಗ ಮಾತ್ರ ಆನಂದದಿಂದ ಬದುಕಲು ಸಾಧ್ಯ ಎಂದರು.

ಸುಖವಿದ್ದಾಗ ನಮ್ಮನ್ನೇ ನಾವು ಮರೆತು, ದುಃಖ ಬಂದಾಗ ಮಾತ್ರ ದೇವರನ್ನು ನೆನೆಯುತ್ತೇವೆ. ಕಷ್ಟ-ಸುಖ ಎಲ್ಲವನ್ನೂ ದೇವರು ನೀಡಿದ್ದಾನೆ. ಆದ್ದರಿಂದ ಎಲ್ಲ ಕಾಲದಲ್ಲೂ ದೇವರ ಕೃಪೆಗೆ ಪಾತ್ರರಾಗಬೇಕು. ದೇವರನ್ನು ಕೇವಲ ಅನುಕೂಲಕ್ಕಾಗಿ ಪ್ರೀತಿಸಬಾರದು. ಮನುಷ್ಯ ದೇವನಾಗಲು ಸಾಧ್ಯವಿಲ್ಲ; ಆದರೆ ದೇವರ ಪ್ರೀತಿಗೆ ಪಾತ್ರನಾಗಬಹುದು. ಮನುಷ್ಯ ಭೂತನಾಗುವತ್ತ ಸಾಗುತ್ತಿರುವುದು ಇಂದಿನ ಕಲಿಗಾಲದ ಉದಾಹರಣೆಯಾಗಿದೆ ಎಂದು ಶ್ರೀಗಳು ಹೇಳಿದರು.

ಯುವ ಮುಖಂಡರಾದ ವಸಂತ ಪಡಗದ, ಸಿದ್ದು ಪಲ್ಲೇದ ಸೇರಿದಂತೆ ಹಿರೇಹಂದಿಗೋಳ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸೌರ ವಿದ್ಯುತ್ ಘಟಕ ಲೋಕಾರ್ಪಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಭಾನುವಾರ ಗದಗದ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಅಳವಡಿಸಲಾಗಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಲೋಕಾರ್ಪಣೆ ಮಾಡಿದರು.

ಆಸ್ಪತ್ರೆಯ ವೈದ್ಯಕೀಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ವಿವಿಧ ವಿಭಾಗಗಳಿಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದ್ದು, ವಿದ್ಯುತ್ ಅಗತ್ಯತೆಯನ್ನು ಪೂರೈಸಲು ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್., ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ, ಡಾ.ಕರಿಗೌಡ್ರ, ಡಾ.ರಾಘವೇಂದ್ರ ಸೇರಿದಂತೆ ಅಧಿಕಾರಿಗಳು ಹಾಗೂ ವೈದ್ಯರು ಉಪಸ್ಥಿತರಿದ್ದರು.

ಸಂಯೋಜಿತ ಆರೋಗ್ಯ ಪ್ರಯೋಗಾಲಯ ಕಟ್ಟಡ ಉದ್ಘಾಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಸಚಿವ ಯು.ಟಿ.ಖಾದರ್ ಅವರು ಭಾನುವಾರ ಗದಗದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ನಿರ್ಮಿಸಲಾಗಿರುವ ಸಂಯೋಜಿತ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ಪ್ರಯೋಗಾಲಯ ಕಟ್ಟಡವನ್ನು ಸಚಿವರು ಉದ್ಘಾಟಿಸಿ, ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಇಂತಹ ಸೌಲಭ್ಯಗಳ ಮಹತ್ವವನ್ನು ಒತ್ತಿಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಡಾ.ಎಚ್.ಕೆ.ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್., ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ, ಡಾ.ಕರಿಗೌಡ್ರ ಸೇರಿದಂತೆ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಧರ್ಮಭೇದ ಮರೆತು ಮಕ್ಕಳ ಕೈಹಿಡಿಯುವ ಸಮಾಜ ನಿರ್ಮಾಣವಾಗಲಿ: ಯು.ಟಿ. ಖಾದರ್

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ವಿವಿಧ ಧರ್ಮಗಳ ಮಕ್ಕಳು ಯಾವುದೇ ಭೇದಭಾವವಿಲ್ಲದೆ ಕೈಕೈ ಹಿಡಿದು ಓಡಾಡುವಂತಹ ಸಾಮರಸ್ಯದ ಸಮಾಜ ನಿರ್ಮಾಣವಾಗಬೇಕು. ಕ್ಷೇತ್ರದಲ್ಲಿ ಇಂತಹ ವಾತಾವರಣ ನಿರ್ಮಿಸಲು ಆದ್ಯತೆ ನೀಡುವ ಜನಪ್ರತಿನಿಧಿಯೇ ನಿಜವಾದ ಅರ್ಥದಲ್ಲಿ ಯಶಸ್ವಿ ನಾಯಕನಾಗಬಲ್ಲರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.

ಪಟ್ಟಣದ ಭಾವೈಕ್ಯತೆಯ ಕೇಂದ್ರ ಹಜರತ್ ಸಯ್ಯದ್ ಸುಲೇಮಾನ್ ಬಾದಷಾ ಖಾದ್ರಿ (ದೂದನಾನಾ) ದರ್ಗಾಕ್ಕೆ ಭಾನುವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಶಾದಿಮಹಲ್‌ನಲ್ಲಿ ದರ್ಗಾ ಕಮಿಟಿ, ಅಂಜುಮನ್ ಕಮಿಟಿ ಹಾಗೂ ವಿವಿಧ ಸಮಾಜಗಳ ವತಿಯಿಂದ ನಡೆದ ನಾಗರಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಭಾವೈಕ್ಯತೆಗೆ ಮತ್ತೊಂದು ಹೆಸರು ಲಕ್ಷ್ಮೇಶ್ವರ. ಈ ನೆಲದಲ್ಲಿ ನಡೆದಾಡಿದ ದೇವಮಾನವರು ‘ಮಾನವ ಧರ್ಮಕ್ಕೆ ಜಯವಾಗಲಿ, ದ್ವೇಷ ಬಿಡು, ಪ್ರೀತಿ ಮಾಡು’ ಎಂಬ ಸಾರ್ವಕಾಲಿಕ ಸಂದೇಶ ನೀಡಿದ್ದಾರೆ. ಇಲ್ಲಿನ ಜನರು ಪ್ರೀತಿ ಮತ್ತು ವಿಶ್ವಾಸದಿಂದ ಬದುಕುತ್ತಿರುವುದು ಹೆಮ್ಮೆಯ ಸಂಗತಿ. ಭಾರತದ ಸಂಸ್ಕೃತಿಯೇ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದಾಗಿದೆ. ಸಂತರು, ಶರಣರು ಹಾಗೂ ಸೂಫಿ ಸಂತರು ಪರಸ್ಪರ ಪ್ರೀತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಮಾರ್ಗ ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಜವಾಬ್ದಾರಿ ಎಂದರು.

ಧರ್ಮ, ಜಾತಿ ಸೇರಿದಂತೆ ಯಾವುದೇ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದರೂ ಸಮಾಜದ ಶಾಂತಿಗೆ ಧಕ್ಕೆ ಬಾರದಂತೆ ಪರಸ್ಪರ ಕುಳಿತು ಪ್ರೀತಿ, ವಿಶ್ವಾಸದಿಂದ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ‘ನಾವೆಲ್ಲರೂ ಭಾರತೀಯರು’ ಎಂಬ ಭಾವನೆಯೊಂದಿಗೆ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು. ಯುವಕರು ಹಿರಿಯರ ಜೀವನಾನುಭವದಿಂದ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು ಎಂದರು.

ಪಾಲಕರು ಮಕ್ಕಳಿಗೆ ಊಟ, ಬಟ್ಟೆ ಸೇರಿದಂತೆ ಸೌಲಭ್ಯಗಳನ್ನು ಒದಗಿಸುವುದಕ್ಕಿಂತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮ ಶಿಕ್ಷಣ ದೊರೆತರೆ ಮಕ್ಕಳು ಜೀವನದಲ್ಲಿ ಯಾವುದೇ ಉನ್ನತ ಸ್ಥಾನ ಅಲಂಕರಿಸುವ ಸಾಮರ್ಥ್ಯ ಪಡೆಯುತ್ತಾರೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವುದು ಕುಟುಂಬ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದರು.

ಪಟ್ಟಣದ ಸೋಮೇಶ್ವರ ದೇವಸ್ಥಾನ ಹಾಗೂ ದೂದನಾನಾ ದರ್ಗಾಕ್ಕೆ ಭೇಟಿ ನೀಡಿ ಜನರ ಆಶೀರ್ವಾದ ಪಡೆದಿರುವುದು ಸಂತಸ ತಂದಿದೆ. ಮಂದಿರ, ಮಸೀದಿ, ಬಸದಿಗಳ ಜೀರ್ಣೋದ್ಧಾರ ಹಾಗೂ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಬಂದ ಮನವಿಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸುವುದಾಗಿ ಖಾದರ್ ತಿಳಿಸಿದರು.

ಶಿಗ್ಗಾಂವ ಕ್ಷೇತ್ರದ ಶಾಸಕ ಯಾಸೀರಅಹ್ಮದ್ ಖಾನ್ ಪಠಾಣ ಮಾತನಾಡಿ, ಜನಪ್ರತಿನಿಧಿಯ ಯಶಸ್ಸನ್ನು ಕೇವಲ ರಸ್ತೆ, ಚರಂಡಿ ಹಾಗೂ ಕಟ್ಟಡಗಳಂತಹ ಅಭಿವೃದ್ಧಿ ಕಾಮಗಾರಿಗಳಿಂದ ಅಳೆಯಲಾಗದು. ಕ್ಷೇತ್ರದ ಜನರಲ್ಲಿ ಪರಸ್ಪರ ವಿಶ್ವಾಸ ಬೆಳೆಸಿ, ಎಲ್ಲ ಸಮುದಾಯಗಳ ಜನರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸುವುದೂ ಜನಪ್ರತಿನಿಧಿಯ ಪ್ರಮುಖ ಕರ್ತವ್ಯ. ಮಕ್ಕಳಲ್ಲಿ ಬಾಲ್ಯದಿಂದಲೇ ಸಮಾನತೆ, ಸಹೋದರತೆ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.

ದರ್ಗಾ ಕಮೀಟಿ ಅಧ್ಯಕ್ಷ ಸುಲೇಮಾನ ಕಣಕೆ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ಟಿ.ಈಶ್ವರ, ಮಾಜಿ ಶಾಸಕ ರಾಮಣ್ಣ ಲಮಾಣಿ, ಹಾವೇರಿ ಲೋಕಸಭಾ ಕ್ಷೇತ್ರದ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹುಮಾಯೂನ್ ಮಾಗಡಿ, ಗುರುನಾಥ ದಾನಪ್ಪನವರ, ಜಿ.ಆರ್.ಕೊಪ್ಪದ, ಅಂಜುಮನ್ ಸಂಸ್ಥೆ ಅಧ್ಯಕ್ಷ ಜಮೀಲ ಸೂರಣಗಿ, ಎಸ್.ಕೆ.ಹವಾಲ್ದಾರ, ಫಿರ್ಧೋಶ ಆಡೂರ, ಸಿಕಂದರ ಕಣಿಕೆ, ಜಮೀಲಮ್ಮದ ಸೂರಣಗಿ, ಎಂ.ಎಂ.ಗದಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜನಪ್ರತಿನಿಧಿಯ ಯಶಸ್ಸನ್ನು ಕೇವಲ ರಸ್ತೆ, ಚರಂಡಿ ಹಾಗೂ ಕಟ್ಟಡಗಳ ಅಭಿವೃದ್ಧಿಯಿಂದ ಅಳೆಯಲಾಗದು. ಎಲ್ಲ ಸಮುದಾಯಗಳ ಜನರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸುವುದೂ ಪ್ರಮುಖ ಕರ್ತವ್ಯ.

— ಯಾಸೀರಅಹ್ಮದ್ ಖಾನ್ ಪಠಾಣ, ಶಾಸಕ