ಬೆಳಗಾವಿ: ಪಶ್ಚಿಮ ಘಟ್ಟದಲ್ಲಿ ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಭಾವ ಗಂಭೀರ ಸ್ವರೂಪ ಪಡೆದುಕೊಂಡಿದೆ. ಜೂನ್ ತಿಂಗಳು ಕಳೆದುಹೋದರೂ ಮಳೆಯ ಲಕ್ಷಣ ಕಾಣಿಸದ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೊಳಗಾಗಿದ್ದು, ಸಂಪ್ರದಾಯದ ಆಚರಣೆಯ ಮೂಲಕ ಮಳೆಗಾಗಿ ವರುಣ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಗ್ರಾಮಸ್ಥರು ಕತ್ತೆಗಳ ಮದುವೆ ನಡೆಸುವ ಮೂಲಕ ಮಳೆಗಾಗಿ ವಿಶಿಷ್ಟ ಪೂಜೆ ನೆರವೇರಿಸಿದರು. ಮದುಮಗ ಮತ್ತು ಮದುಮಗಳಂತೆ ಕತ್ತೆಗಳನ್ನು ಅಲಂಕರಿಸಿ, ಡೊಳ್ಳು-ತಮಟೆಗಳ ಸದ್ದಿನ ನಡುವೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಿಸಿ, ಸಮೃದ್ಧ ಮಳೆಯಾಗಲಿ ಎಂದು ಗ್ರಾಮಸ್ಥರು ಕೈಮುಗಿದು ಪ್ರಾರ್ಥಿಸಿದರು.
ಈ ವರ್ಷ ಕರ್ನಾಟಕ ಹಾಗೂ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಮಳೆಯ ಕೊರತೆಯಿಂದ ಕೃಷ್ಣಾ ನದಿಯ ಒಳಹರಿವು ಗಣನೀಯವಾಗಿ ಇಳಿಕೆಯಾಗಿದೆ. ಮುಂಗಾರು ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಸಾಲ ಮಾಡಿ ಬಿತ್ತನೆ ನಡೆಸಿದ್ದರೂ, ಮಳೆ ಕೈಕೊಟ್ಟ ಪರಿಣಾಮ ಮೊಳಕೆ ಬಂದ ಬೆಳೆಗಳು ಒಣಗುತ್ತಿವೆ. ನೀರಿನ ಮೂಲಗಳು ಬರಿದಾಗುತ್ತಿದ್ದು, ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
“ಮಳೆ ನಮ್ಮ ಬದುಕಿನ ಆಧಾರ. ಮಳೆ ಇಲ್ಲದಿದ್ದರೆ ಕೃಷಿ ಉಳಿಯುವುದಿಲ್ಲ. ಸಂಪ್ರದಾಯದಂತೆ ಕತ್ತೆಗಳ ವಿವಾಹ ಮಾಡಿ ವರುಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ” ಎಂದು ರೈತರು ತಿಳಿಸಿದ್ದಾರೆ. ಗ್ರಾಮದಲ್ಲಿ ನಡೆದ ಈ ವಿಶಿಷ್ಟ ಆಚರಣೆ ಸಾರ್ವಜನಿಕರ ಗಮನ ಸೆಳೆದಿದೆ.

