Home Blog

ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ ಏಕಕಾಲದಲ್ಲಿ ಎರಡು ಸರಣಿಗಳನ್ನು ಆಡಲಿದೆ!

0

ಟಿ20 ವಿಶ್ವಕಪ್ ಗೆದ್ದು ಸಂತಸದಲ್ಲಿರುವ ಟೀಂ ಇಂಡಿಯಾ ಈಗ ವಿಶ್ರಾಂತಿ ಮೋಡ್‌ನಲ್ಲಿ ಇದೆ.

ವಿಶ್ವಕಪ್ ಮುಗಿದ ನಂತರ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳಿಗೆ ತೆರಳಿ, ಕೆಲವು ದಿನಗಳಲ್ಲಿ ಆರಂಭವಾಗಲಿರುವ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಮಾರು ಎರಡು ತಿಂಗಳ ಕಾಲ ನಡೆಯಲಿರುವ ಐಪಿಎಲ್ ಮುಗಿದ ನಂತರ, ಆಟಗಾರರು ರಾಷ್ಟ್ರೀಯ ಕರ್ತವ್ಯಕ್ಕೆ ವಾಪಸ್ಸಾಗುವರು.

ಟಿ20 ವಿಶ್ವಕಪ್ ಮುಗಿದ ನಂತರ ಭಾರತ ತಂಡ ಮತ್ತೆ ಜೂನ್ ತಿಂಗಳಲ್ಲಿ ಅಫ್ಘಾನಿಸ್ತಾನದ ವಿರುದ್ಧ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಈ ಏಕದಿನ ಸರಣಿಯೊಂದಿಗೆ ಭಾರತ ತಂಡದ ಬ್ಯುಸಿಯಾಗಿರುವ ದಿನಚರಿ ಆರಂಭವಾಗಲಿದೆ. ವರದಿಗಳ ಪ್ರಕಾರ, ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಜೊತೆಗೆ ಭಾರತ ತಂಡ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ. ಏಷ್ಯನ್ ಕ್ರೀಡಾಕೂಟ ಜಪಾನ್‌ನಲ್ಲಿ ನಡೆಯಲಿದೆ,

ಕ್ರಿಕ್‌ಬಜ್ ವರದಿಯ ಪ್ರಕಾರ, ಈ ಎರಡೂ ಸರಣಿಗಳಿಗಾಗಿ ಬಿಸಿಸಿಐ 30 ಭಾರತೀಯ ಆಟಗಾರರನ್ನು ಆಯ್ಕೆ ಮಾಡಲಿದೆ. ಈ ಪೈಕಿ 15 ಆಟಗಾರರು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವರು, ಉಳಿದ 15 ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಟೀಂ ಇಂಡಿಯಾ ಹಿಂದೆಯೂ ಎರಡು ಸರಣಿಗಳನ್ನು ಏಕಕಾಲದಲ್ಲಿ ಆಡಿದ್ದು, 2021 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ ಡಬ್ಲ್ಯೂಟಿಸಿ ಫೈನಲ್ ಮತ್ತು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್‌ನಲ್ಲಿ ಆಡಿದರೆ, ಶಿಖರ್ ಧವನ್ ನೇತೃತ್ವದ ಇನ್ನೊಂದು ತಂಡ ಶ್ರೀಲಂಕಾದಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ನಡೆಸಿತ್ತು.

ಬಿಸಿಸಿಐಗೆ ಪ್ರತಿಭಾನ್ವಿತ ಆಟಗಾರರಿಗೆ ಕೊರತೆಯಿಲ್ಲದ ಕಾರಣ, ಆಟಗಾರರನ್ನು ಆಯ್ಕೆ ಮಾಡಲು ಯಾವುದೇ ಸಮಸ್ಯೆ ಇರುವುದಿಲ್ಲ. 2026 ರ ಏಷ್ಯನ್ ಕ್ರೀಡಾಕೂಟ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಜಪಾನ್‌ನಲ್ಲಿ ನಡೆಯಲಿದೆ. ಟಿ20 ಸ್ವರೂಪದಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಭಾಗವಹಿಸಲಿದ್ದು, ಚೀನಾದಲ್ಲಿ ನಡೆದ 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಭಾರತ ತಂಡ ಚಿನ್ನದ ಪದಕ ಗೆದ್ದದ್ದು ಇಲ್ಲಿ ಉಲ್ಲೇಖಾರ್ಹವಾಗಿದೆ.

 

PM ಕಿಸಾನ್ ಸ್ಕೀಮ್: 22ನೇ ಕಂತಿನ ಹಣ ಬಿಡುಗಡೆ, ಫಲಾನುಭವಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ!

0

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನ ಗುವಾಹಟಿ‌ನಲ್ಲಿ ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ.

ಈ ವೇಳೆ 9.32 ಕೋಟಿ ರೈತರಿಗೆ ತಲಾ 2,000 ರೂ. ನೀಡಲಾಗಿದ್ದು, ಒಟ್ಟಿನಲ್ಲಿ 18,640 ಕೋಟಿ ರೂ. ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಕಳೆದ ಕಂತಿನ ಹೋಲಿಕೆಗೆ ಈ ಬಾರಿ ಫಲಾನುಭವಿಗಳ ಸಂಖ್ಯೆ ಸುಮಾರು 3.8 ಲಕ್ಷದಷ್ಟು ಕಡಿಮೆ  ಆಗಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಇಕೆವೈಸಿ ದೃಢೀಕರಣವಾಗದಿರುವುದು ಮತ್ತು ಇತರ ವ್ಯವಸ್ಥಾಪನಾತ್ಮಕ ಅಡಚಣೆಗಳು, ಇದರಿಂದ ಲಕ್ಷಾಂತರ ರೈತರಿಗೆ ಯೋಜನೆಯ ಲಾಭ ತಲುಪದೇ ಉಳಿದಿದೆ.

ಹಿಂದಿನ 21ನೇ ಕಂತಿನ ಹಣವನ್ನು 9,35,79,869 ರೈತರು ಪಡೆದಿದ್ದರು. ಪಿಎಂ ಕಿಸಾನ್ ಯೋಜನೆಯು ರೈತರಿಗೆ ಸರ್ಕಾರದಿಂದ ನೀಡುವ ಸಹಾಯಧನ ಸ್ಕೀಮ್ ಆಗಿದ್ದು, ವರ್ಷಕ್ಕೆ 6,000 ರೂ. ತಲಾ ಮೂರು ಕಂತುಗಳಲ್ಲಿ ವಿತರಿಸಲಾಗುತ್ತದೆ. ಈ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುವುದು, ಮಧ್ಯವರ್ತಿಗಳ ಭಾಗವಹಿಸುವಿಕೆಯನ್ನು ತಡೆಯುತ್ತದೆ. ಸರ್ಕಾರದ ಈ ಕ್ರಮವು ಹಣ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ರೈತರ ಕೃಷಿ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತದೆ.

ಕಾರವಾರ ಬಂದರಿಗೆ ಯುಎಇ ಹಡಗು: 3,100 ಟನ್ ಕಚ್ಚಾ ಡಾಂಬರ್ ಹೊತ್ತು ಬಂದ ‘ಚೆಂಗ್ ಎಕ್ಸ್’!

ಕಾರವಾರ: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮದಿಂದ ಸಮುದ್ರ ಮಾರ್ಗದ ವಾಣಿಜ್ಯ ಚಟುವಟಿಕೆಗಳು ಸಂಕಷ್ಟಕ್ಕೆ ಒಳಗಾಗಿರುವ ಸಂದರ್ಭದಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಕಚ್ಚಾ ಡಾಂಬರ್ ಹೊತ್ತ ಹಡಗು ಕಾರವಾರದ ವಾಣಿಜ್ಯ ಬಂದರಿಗೆ ಆಗಮಿಸಿದೆ.

‘ಚೆಂಗ್ ಎಕ್ಸ್’ ಎನ್ನುವ ಸರಕು ಸಾಗಣೆ ಹಡಗು ಸುಮಾರು 3,100 ಟನ್ ಬಿಟುಮಿನ್ ಸಾಗಿಸಿ ಬಂದಿದ್ದು, ಸಾಮಾನ್ಯವಾಗಿ ಇದಕ್ಕೆ 5,500 ಟನ್ ಸಾಮರ್ಥ್ಯವಿದೆ. ಹಡಗು ಮಾರ್ಚ್ 3 ರಂದು ಯುಎಇಯಿಂದ ಹೊರಟಿದ್ದು, ಹಾರ್ಮುಜ್ ಜಲಸಂಧಿ ಪಕ್ಕದ ಮಾರ್ಗವನ್ನು ಹಾದು ಕಾರವಾರ ಬಂದರಿಗೆ ತಲುಪಿದೆ.

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗಗಳಲ್ಲಿ ಭದ್ರತಾ ಕ್ರಮಗಳು ಹೆಚ್ಚಾಗಿದ್ದು, ಹಡಗು ಸಂಚಾರಕ್ಕೆ ಅನೇಕ ಅಡಚಣೆಗಳು ಎದುರಾಗಿವೆ. ಹಾರ್ಮುಜ್ ಜಲಸಂಧಿ ಭಾಗದಲ್ಲಿ ಇರಾನ್ ನಿರ್ಬಂಧಗಳು ಮತ್ತು ಉದ್ವಿಗ್ನ ಪರಿಸ್ಥಿತಿ ಕಾರಣವಾಗಿ ಹಡಗುಗಳ ಪ್ರಯಾಣದಲ್ಲಿ ಅನಿಶ್ಚಿತತೆ ಉಂಟಾಗಿದೆ. ಹಡಗು ಬಿಟುಮಿನ್ ಡಂಪ್ ಮಾಡಿದ ಬಳಿಕ ಮರಳಿ ಯುಎಇಗೆ ಹಿಂತಿರುಗುವ ವಿಚಾರದಲ್ಲಿ ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲವೆಂದು ಹಡಗಿನ ಸಿಬ್ಬಂದಿ ಹೇಳಿದ್ದಾರೆ.

ಇದು ಮಧ್ಯಪ್ರಾಚ್ಯ ಯುದ್ಧದ ನಂತರ ಯುಎಇಯಿಂದ ಕಾರವಾರ ಬಂದರಿಗೆ ಆಗಮಿಸಿದ ಮೊದಲ ಹಡಗು ಆಗಿದ್ದು, ಬಂದರು ವಾಣಿಜ್ಯ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿಗೆ ಚೈತನ್ಯ ನೀಡಿರುವಂತಾಗಿದೆ. ಕಳೆದ 12 ದಿನಗಳಿಂದ ಕಾರವಾರ ಬಂದರಿನಲ್ಲಿ ವಹಿವಾಟು ಸ್ಥಗಿತವಾಗಿದ್ದು, 80 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿತ್ತು. ಇತ್ತೀಚೆಗೆ ಯುಎಇ ಹಡಗು ಮತ್ತು ಗುಜರಾತ್‌ನಿಂದ ಬಂದ ಹಡಗಿನಿಂದ ವಾಣಿಜ್ಯ ಚಟುವಟಿಕೆಗಳಲ್ಲಿ ಚೇತರಿಕೆ ಕಂಡು ಬಂದಿದೆ, ಆದರೆ ಮುಂದಿನ ದಿನಗಳಲ್ಲಿ ಸಮುದ್ರ ಮಾರ್ಗದ ಪರಿಸ್ಥಿತಿ ಹೇಗಿರಲಿದೆ ಎಂಬುದು ಇನ್ನೂ ಅನಿಶ್ಚಿತವಾಗಿದೆ.

 

ಪತಿಯ ಕಣ್ಣೆದುರಲ್ಲೇ ಪತ್ನಿ ನೇಣಿಗೆ ಶರಣು: ತಮಾಷೆ ಎಂದು ವಿಡಿಯೋ ಮಾಡಿದ ಗಂಡ!

ಅಮರಾವತಿ:- ಆಂಧ್ರಪ್ರದೇಶ ಕಡಪ ಜಿಲ್ಲೆಯ ಬೋಯಿನಪಲ್ಲಿ ಗ್ರಾಮದಲ್ಲಿ ಪತಿಯ ಕಣ್ಣೆದುರಲ್ಲೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

ಕೃಷ್ಣವೇಣಿ ನೇಣಿಗೆ ಶರಣಾದ ಮಹಿಳೆ. ಹೆಂಡ್ತಿ ನೇಣು ಬಿಗಿದುಕೊಳ್ಳುವಾಗ ಪತಿ ಕಾಪಾಡದೇ ತನ್ನ ಮೊಬೈಲ್‍ನಲ್ಲಿ ವಿಡಿಯೋ ಸೆರೆಹಿಡಿದಿದ್ದಾನೆ. ಕೌಟುಂಬಿಕ ಕಲಹದಿಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಪತಿ ಶ್ರೀರಾಮ್ ಶ್ರೀನಿವಾಸ್ ತಡೆಯಲು ಪ್ರಯತ್ನಿಸುವ ಬದಲು, ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿ, ನೀನು ಹಾಗೆ ಕುಣಿಕೆ ಕಟ್ಟಬಾರದು. ಅದನ್ನು ಹೀಗೆ ಮಾಡಬೇಕು ಎಂದು ಅವಳಿಗೆ ಸೂಚನೆ ನೀಡಿದ್ದ ಎಂದು ತಿಳಿದು ಬಂದಿದೆ.

ಆರಂಭದಲ್ಲಿ ತಮಾಷೆ ಮಾಡುತ್ತಿದ್ದಾಳೆ ಎಂದು ಗ್ರಹಿಸಿದ್ದರಿಂದ ಶ್ರೀನಿವಾಸ್ ತನ್ನ ಹೆಂಡತಿಯ ಪ್ರಾಣ ಉಳಿಸಲು ವಿಫಲನಾಗಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಪತ್ನಿ ಕೃಷ್ಣವೇಣಿ ಮೃತಪಟ್ಟಿದ್ದು, ಪತಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

KSRTC ರಾಜಹಂಸ- ಕಾರು ಮುಖಾಮುಖಿ ಡಿಕ್ಕಿ: ಮೂವರು ಸಾವು, ಓರ್ವನ ಸ್ಥಿತಿ ಗಂಭೀರ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶಿರಾಡಿಘಾಟ್ನ ಗುಂಡ್ಯ ಸಮೀಪ KSRTC ರಾಜಹಂಸ ಬಸ್ ಹಾಗೂ ಕಾರಿನ ನಡುವೆ ಭೀಕರ ಮುಖಾಮುಖಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರು ಉಜಿರೆ ನಿವಾಸಿಗಳಾದ ಶ್ರೀಧರ ಮರಕಡ, ಜನಾರ್ದನ ಕೆರಿಮಾರ್ ಮತ್ತು ಕೊಕ್ಕಡ ನಿವಾಸಿ ಚಂದ್ರಶೇಖರ ಗೌಡರಾಗಿದ್ದಾರೆ. ಕಾರಿನಲ್ಲಿ ಮತ್ತೊಬ್ಬ ಸುರೇಶ್ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ನಾಲ್ವರು ಕಾರಿನಲ್ಲಿ ಸಕಲೇಶಪುರದಲ್ಲಿ ಮದುವೆ ಮುಗಿಸಿಕೊಂಡು ಉಜಿರೆ ಕಡೆಗೆ ವಾಪಸ್ ಪ್ರಯಾಣಿಸುತ್ತಿದ್ದರು. ಬಸ್ ಮಂಗಳೂರು ಕಡೆಯಿಂದ ಧರ್ಮಸ್ಥಳ-ತಿರುಪತಿ ಮಾರ್ಗದಲ್ಲಿ ಬಂದಿದ್ದು, ಶಿರಾಡಿಘಾಟ್ನ ಗುಂಡ್ಯ ಸಮೀಪ ಕಾರಿನೊಂದಿಗೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದೆ. ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತಕ್ಷಣ ಸ್ಥಳಕ್ಕೆ ಉಪ್ಪಿನಂಗಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಬೆನ್ನಲ್ಲೇ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು, ನಂತರ ಪೊಲೀಸರು ವಾಹನ ಸಂಚಾರಕ್ಕೆ ಪುನಃ ಅನುಮತಿ ನೀಡಿದ್ದಾರೆ.

ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಇಳಿಕೆ: ಸಚಿವ ಡಾ.ಜಿ. ಪರಮೇಶ್ವರ್

ಬೆಂಗಳೂರು: ಇತ್ತೀಚೆಗೆ ಕರ್ನಾಟಕದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, 2023ರಲ್ಲಿ ದಾಖಲಾಗಿದ್ದ 22,225 ಪ್ರಕರಣಗಳು 2025 ರ ವೇಳೆಗೆ 14,899ಕ್ಕೆ ಇಳಿಕೆಯಾಗಿವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಪ್ರಕರಣಗಳ ತ್ವರಿತ ಪತ್ತೆ ಮತ್ತು ಸಾರ್ವಜನಿಕರಲ್ಲಿ ಮೂಡಿಸಿದ ಜಾಗೃತಿ ಇದರ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೂ, ಸೈಬರ್ ಖದೀಮರು ತಮ್ಮ ವಂಚನೆ ಕಾರ್ಯವನ್ನು ಇನ್ನೂ ತಂತ್ರಜ್ಞಾನದ ಹೊಸ ಮಾರ್ಗಗಳಲ್ಲಿ ಮುಂದುವರೆಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆ ಇದರ ತಾಜಾ ಉದಾಹರಣೆಯಾಗಿದೆ. ಮಹಿಳೆಯೊಬ್ಬರಿಗೆ ನಯನಾ ಪ್ರಕಾಶ್ ಎಂಬ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕರೆಮಾಡಿದ ಖದೀಮರು, ಮೊದಲು ಆಡಿಯೋ ಕಾಲ್ ಮೂಲಕ “ನಿಮ್ಮ ತಾಯಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ” ಎಂದು ಭಯಪಟ್ಟು ಹೇಳಿದರು. ನಂತರ ಕರೆಯನ್ನು ವಿಡಿಯೋ ಕಾಲ್‌ಗೆ ಪರಿವರ್ತಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಅವರ ಧೈರ್ಯ ಎಷ್ಟೆಂದರೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ನಕಲಿ ಸೀಲ್ ಮತ್ತು ಸಹಿ, ಕರ್ನಾಟಕ ಸಿಐಡಿ ಹೆಸರಲ್ಲಿ ಅರೆಸ್ಟ್ ವಾರಂಟ್, ಹಾಗೂ ಸುಪ್ರೀಂ ಕೋರ್ಟ್ ಆದೇಶ ಎನ್ನುವ ನಕಲಿ ದಾಖಲೆಗಳನ್ನು ಸಹ ಬಳಸಿದರು. ಮಹಿಳೆಯು ದಾಖಲೆಗಳನ್ನು ಪರಿಶೀಲಿಸಿ ಅನುಮಾನಗೊಂಡು ಎಚ್ಚೆತ್ತುಕೊಂಡರು ಮತ್ತು ತಕ್ಷಣ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಅಧಿಕೃತ ಮೇಲ್ ಐಡಿಗೆ ಹಾಗೂ ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರು.

“ಪೋಲಿಸ್ ಎಂದಿಗೂ ವಿಡಿಯೋ ಕಾಲ್ ಮೂಲಕ ಹಣ ಕೇಳುವುದಿಲ್ಲ ಅಥವಾ ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ಯಾವುದೇ ನಕಲಿ ಆದೇಶ ಪತ್ರಗಳಿಗೆ ಸಾರ್ವಜನಿಕರು ಮರುಳಾಗಬಾರದು. ಅನುಮಾನ ಬಂದರೆ ಕೂಡಲೇ 1930 ಗೆ ಕರೆ ಮಾಡಿ ದೂರು ಸಲ್ಲಿಸಬೇಕು.” ಇಂತಹ ಸೈಬರ್ ವಂಚನೆ ಜಾಲಕ್ಕೆ ಅನೇಕರು ಈಗಾಗಲೇ ಹಣ ಕಳೆದುಕೊಂಡಿದ್ದಾರೆ. ಪೊಲೀಸ್ ಹೆಸರಲ್ಲೇ ವಂಚನೆ ನಡೆಸುತ್ತಿರುವ ಸೈಬರ್ ಖದೀಮರ ವಿರುದ್ಧ ಸಾರ್ವಜನಿಕರು ಹೆಚ್ಚು ಜಾಗ್ರತೆ ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಡಿಸಿಪಿ ರಾಜಾ ಇಮಾಮ್ ಖಾಸಿಂ ಹೇಳಿದ್ದಾರೆ.

 

ನೀವು ಕೂಡ ಹೆಚ್ಚು ಯೋಚಿಸ್ತಿದ್ದೀರಾ? ಹೀಗೆ ಮಾಡೋದ್ರಿಂದ ಆರೋಗ್ಯ ಹಾಳಾಗುತ್ತೆ!

0

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೆಚ್ಚು ಯೋಚಿಸುವ ಅಭ್ಯಾಸ ಹೆಚ್ಚುತ್ತಿದೆ. ದೈನಂದಿನ ಕೆಲಸದ ಒತ್ತಡ, ಭವಿಷ್ಯದ ಬಗ್ಗೆ ಚಿಂತೆ, ಕುಟುಂಬದ ಜವಾಬ್ದಾರಿಗಳು ಮತ್ತು ನಿತ್ಯದ ಸಮಸ್ಯೆಗಳು ವ್ಯಕ್ತಿಗಳನ್ನು ಅನವಶ್ಯವಾಗಿ ಹೆಚ್ಚು ಯೋಚಿಸಲು ಪ್ರೇರೇಪಿಸುತ್ತಿವೆ.

ಅತಿಯಾದ ಯೋಚನೆಯಿಂದ ಮನಸ್ಸಿಗೆ ಶಾಂತಿ ಸಿಗದೆ, ದೇಹದ ಮೇಲೆ ನಾನಾ ರೀತಿಯ ದುಷ್ಪರಿಣಾಮ ಉಂಟಾಗುತ್ತವೆ. ತಲೆನೋವು, ದಣಿವು, ನಿದ್ರೆ ಸಮಸ್ಯೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಬಹುದು. ಕೆಲವು ವ್ಯಕ್ತಿಗಳಲ್ಲಿ ಕೇಂದ್ರೀಕರಣ ಶಕ್ತಿಯ ಕುಸಿತ, ನಿರಂತರ ಆತಂಕ ಮತ್ತು ಚಿಡಿಚಿಡಿ ಸಹ ಉಂಟಾಗಬಹುದು. ದೆಹಲಿ ನ್ಯೂರಾಲಜಿಸ್ಟ್ ಡಾ. ರಾಜೇಶ್ ಕುಮಾರ್ ಅವರ ಪ್ರಕಾರ, “ಅತಿಯಾದ ಯೋಚನೆಯು ಮಾನಸಿಕ ಒತ್ತಡವನ್ನು ಹೆಚ್ಚಿಸಿ ದೇಹದ ಹಾರ್ಮೋನ್ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ.”

ತಜ್ಞರು ಹೇಳುವುದೇನೆಂದರೆ, ನಿಯಮಿತ ವ್ಯಾಯಾಮ, ಯೋಗ, ಧ್ಯಾನ, ಸಮತೋಲನಯುತ ದಿನಚರಿ ಮತ್ತು ಸಾಕಷ್ಟು ನಿದ್ರೆ ಪಡೆದು ಈ ಅಭ್ಯಾಸವನ್ನು ನಿಯಂತ್ರಿಸಬಹುದು. ದೀರ್ಘಕಾಲದ ಒತ್ತಡದ ಸಂದರ್ಭಗಳಲ್ಲಿ ವೈದ್ಯರ ಸಲಹೆ ಪಡೆಯುವುದು ಅತ್ಯವಶ್ಯಕ.

 

ಸೋಮವಾರದಿಂದ ತಂಬಾಕು ಖರೀದಿ ಆರಂಭ: ಕೇಂದ್ರ ಸಚಿವ ಪಿಯೂಷ್ ಗೋಯಲ್ ರಿಂದ ಕುಮಾರಸ್ವಾಮಿಗೆ ಭರವಸೆ

0

ನವದೆಹಲಿ: ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ. ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರ ಜತೆ ಮಾತುಕತೆ ನಡೆಸಿದರು.

ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡಲಾಯಿತು. ಎಲ್ಲ ಮನವಿಗಳನ್ನು ಸಚಿವರು ಆಲಿಸಿದರಲ್ಲದೆ, ಅವುಗಳನ್ನು ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಸೋಮವಾರದಿಂದಲೇ ತಂಬಾಕು ಖರೀದಿ, ವಿದೇಶ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆ ಸೇರಿದಂತೆ ಬೆಳೆಗಾರ ಬೇಡಿಕೆಗಳಿಗೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು. ಅಲ್ಲದೆ, ಈ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಚಿವ ಗೋಯಲ್ ಅವರು ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ತಂಬಾಕು ಖರೀದಿಸುವ ಉದ್ಯಮದ ಪ್ರಮುಖರ ಜತೆ ಮಾತನಾಡಿ ಬೆಳೆಗಾರರ ನೆರವಿಗೆ ಬರುವಂತೆ ಸೂಚಿಸಿದರು ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ಮೈಸೂರು -ಕೊಡಗು ಸಂಸದರಾದ ಯದುವೀರ್ ಚಾಮರಾಜೇಂದ್ರ ಕೃಷ್ಣದತ್ತ ಒಡೆಯರ್, ಶಾಸಕರಾದ ಎ. ಮಂಜು, ಜಿ.ಡಿ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್ , ಜೆಡಿಎಸ್ ಹಿರಿಯ ಮುಖಂಡ ಕೃಷ್ಣನಾಯಕ ಹಾಗೂ ಕೋಲಾರ ಸಂಸದ ಮಲ್ಲೇಶ್ ಬಾಬು ಅವರು ಹಾಗೂ ವಾಣಿಜ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.

ಮುಟ್ಟಿನ ರಜೆ ಕಡ್ಡಾಯ ಮಾಡಿದರೆ ಮಹಿಳೆಯರ ಉದ್ಯೋಗಕ್ಕೆ ಪರಿಣಾಮ: ಸುಪ್ರೀಂ ಕೋರ್ಟ್ ಅಭಿಪ್ರಾಯ

0

ನವದೆಹಲಿ: ಮಹಿಳೆಯರಿಗೆ ಕಡ್ಡಾಯವಾಗಿ ಮುಟ್ಟಿನ ರಜೆ ನೀಡುವ ಕಾನೂನು ಜಾರಿಗೆ ತಂದರೆ ಅದು ಮಹಿಳೆಯರ ಉದ್ಯೋಗಾವಕಾಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ವಕೀಲ ಶೈಲೇಂದ್ರ ಮಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಿಜೆಐ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠದಲ್ಲಿ ನಡೆಯಿತು. ಅರ್ಜಿಯಲ್ಲಿ ಮಹಿಳೆಯರಿಗೆ ಸಂಬಳದೊಂದಿಗೆ ಮುಟ್ಟಿನ ರಜೆ ನೀಡುವಂತೆ ರಾಜ್ಯಗಳಿಗೆ ನಿಯಮ ರೂಪಿಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿತ್ತು.

ವಿಚಾರಣೆ ವೇಳೆ ಪೀಠವು, ಇಂತಹ ಕಾನೂನು ಜಾರಿಗೆ ತಂದರೆ ಮಹಿಳೆಯರು ಪುರುಷರಿಗಿಂತ ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ ಎಂಬ ಭಾವನೆ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟಿತು. ಉದ್ಯೋಗದಾತರ ಮನೋಭಾವವನ್ನು ಗಮನಿಸಿದರೆ, ಕಡ್ಡಾಯ ರಜೆ ನಿಯಮ ತಂದರೆ ಅವರು ಮಹಿಳೆಯರನ್ನು ನೇಮಿಸಿಕೊಳ್ಳುವುದೇ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಕೋರ್ಟ್ ತಿಳಿಸಿತು.

ಪ್ರತಿ ತಿಂಗಳು ಮುಟ್ಟಿನ ರಜೆಯನ್ನು ಕಾನೂನುಬದ್ಧ ಹಕ್ಕಾಗಿ ಮಾಡುವುದು ಮಹಿಳೆಯರ ವೃತ್ತಿಜೀವನದ ಬೆಳವಣಿಗೆಗೆ ಅಡ್ಡಿಯಾಗಬಹುದು. ಖಾಸಗಿ ವಲಯದಲ್ಲಿ ತಿಂಗಳಿಗೆ ಹೆಚ್ಚುವರಿ ರಜೆ ಕಡ್ಡಾಯವಾದರೆ ಉದ್ಯೋಗದಾತರು ಮಹಿಳೆಯರನ್ನು ತಾತ್ಸಾರದಿಂದ ನೋಡುವ ಸಾಧ್ಯತೆಯಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ಅಭಿಪ್ರಾಯಪಟ್ಟರು.

ಈ ಕಾರಣದಿಂದ ಪೀಠವು ಅರ್ಜಿಯನ್ನು ವಜಾಗೊಳಿಸಿತು. ಆದರೆ ಮಹಿಳೆಯರ ಮುಟ್ಟಿನ ಆರೋಗ್ಯದ ಬಗ್ಗೆ ಸೂಕ್ತ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.

ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಸ್ವಯಂಪ್ರೇರಿತವಾಗಿ ಮುಟ್ಟಿನ ರಜೆ ನೀಡುತ್ತಿರುವುದನ್ನು ವಕೀಲರು ಗಮನಕ್ಕೆ ತಂದಾಗ, ಸ್ವಯಂಪ್ರೇರಿತವಾಗಿ ನೀಡುವ ಕ್ರಮ ಉತ್ತಮ ಎಂದು ಕೋರ್ಟ್ ಹೇಳಿತು. ಆದರೆ ಕಾನೂನಿನಲ್ಲಿ ಕಡ್ಡಾಯ ಮಾಡಿದರೆ ಅದು ಮಹಿಳೆಯರ ವೃತ್ತಿಜೀವನಕ್ಕೆ ಹಾನಿ ಉಂಟುಮಾಡಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಅರ್ಜಿದಾರರು ಇದೇ ವಿಷಯದ ಕುರಿತು ಮೂರನೇ ಬಾರಿ ಅರ್ಜಿ ಸಲ್ಲಿಸಿದ್ದು, 2023 ಮತ್ತು 2024ರಲ್ಲಿ ನಡೆದ ಹಿಂದಿನ ವಿಚಾರಣೆಗಳಲ್ಲಿಯೂ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಈ ವಿಷಯವನ್ನು ಪರಿಗಣಿಸಲು ಸೂಚಿಸಿತ್ತು.

ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಕಳೆದ ನಾಲ್ಕೈದು ದಶಕಗಳ ನನ್ನ ರಾಜಕೀಯ ಬದುಕಿನಲ್ಲಿ ಅನೇಕ ಸೋಲುಗೆಲುವುಗಳನ್ನು ಕಂಡಿದ್ದರೂ, ಜನಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವರಕೋಡು ಗಡಿ ಗುರುಮಠ ವರುಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದ ಸಂಪ್ರೊಕ್ಷಣ ಪುನರ್ ಪ್ರತಿಷ್ಠಾಪನೆ ಕುಂಭಾಭಿಷೇಕ ಹಾಗೂ ಮಹಾದ್ವಾರ ಪೂಜಾ ಮಹೋತ್ಸವ ಭಾಗವಹಿಸಿ ಮಾತನಾಡಿದರು.

ಭಕ್ತಿ ಪರಿಶುದ್ಧವಾಗಿರಬೇಕಲ್ಲದೇ, ಮಾನವೀಯತೆ ಹಾಗೂ ಪರರ ಹಿತಚಿಂತನೆಯಿಂದ ಮಾತ್ರ ದೇವರು ಒಲಿಯುತ್ತಾನೆ. ದೇವರು ಸರ್ವಾಂತರ್ಯಾಮಿಯಾಗಿದ್ದಾನೆ. ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ. ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದ ಪೂಜಾ ಮಹೋತ್ಸವಗಳು, ಜಾತ್ರೆಗಳಲ್ಲಿ ಜನರು ಸಂತೋಷದಿಂದ ಭಾಗವಹಿಸಿದ್ದಾರೆ. ಶ್ರೀ ಬೀರೇಶ್ವರಸ್ವಾಮಿ , ನಾಡಿನ ಸಮಸ್ತ ಜನತೆಗೆ ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

1978 ರಲ್ಲಿ ಈ ಪ್ರದೇಶದಿಂದಲೇ ನನ್ನ ರಾಜಕೀಯ ಜೀವನ ಪ್ರಾರಂಭವಾಗಿದ್ದು, ಅಪಾರ ಜನಬೆಂಬಲ ನನಗೆ ದೊರೆತಿದೆ. ಅಲ್ಲಿಂದ ಇಲ್ಲಿಯವರೆಗೆ ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದ ಜನರು ನನ್ನನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಇಲ್ಲಿನ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ, ಆರ್ಥಿಕ ಸಚಿವನಾಗಿ 17 ಬಾರಿ ಆಯವ್ಯಯಗಳನ್ನು ಮಂಡಿಸುವ ಅವಕಾಶ ದೊರೆತಿದೆ. 13 ಬಾರಿ ಚುನಾವಣೆಗಳನ್ನು ಎದುರಿಸಿದ್ದು, ನಾಲ್ಕು ಬಾರಿ ಸೋತ ಸಂದರ್ಭದಲ್ಲಿಯೂ , ಈ ಭಾಗದ ಜನರು ನನ್ನನ್ನೇ ಬೆಂಬಲಿಸಿದ್ದೇನೆ. ನನ್ನ ರಾಜಕೀಯ ಬದುಕಿಗೆ ಇಲ್ಲಿನ ಜನರ ಕೊಡುಗೆ ಅನನ್ಯವಾಗಿದೆ ಎಂದರು.

ನನ್ನ ಗುರುಗಳ ಮಾರ್ಗದರ್ಶನದಿಂದ ಶಿಕ್ಷಣ ಪಡೆದು, ವಕೀಲನಾಗಿ, ರಾಜಕಾರಣಿಯಾಗಿ ಜನರ ಸೇವೆ ಮಾಡುವ ಅವಕಾಶ ದೊರೆತಿದೆ. ನನ್ನ ರಾಜಕೀಯ ಜೀವನ ಸೋಲುಗೆಲುವುಗಳನ್ನು ಕಂಡಿದ್ದರೂ, ಜನಸೇವೆಯನ್ನು ಎಂದಿಗೂ ಮರೆಯುವುದಿಲ್ಲ. ನನ್ನ ಕೊನೆ ಉಸಿರುವವರೆಗೆ ಜನ ಸೇವೆಯಲ್ಲಿ ಸದಾ ತೊಡಗಿರುತ್ತೇನೆ. ಯತೀಂದ್ರ ಸಿದ್ದರಾಮಯ್ಯ ಈ ಕ್ಷೇತ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದ್ದು, ಜನರು ಅವರನ್ನು ಬೆಂಬಲಿಸಬೇಕು ಎಂದರು.ರಾಜ್ಯದ ವಿವಿಧ ಜಾತಿ, ಧರ್ಮ, ವರ್ಗಗಳ ಬಡಜನರಿಗೆ ಅನೇಕ ಭಾಗ್ಯಗಳು ಹಾಗೂ ಗ್ಯಾರಂಟಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದೇನೆ ಎಂದರು.

error: Content is protected !!