ಹಗರಿಬೊಮ್ಮನಹಳ್ಳಿ: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಸಿಲಿಂಡರ್ ಪೂರೈಕೆ ವ್ಯತ್ಯಯಗೊಂಡಿದ್ದು, ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಹೋಟೆಲ್ ಉದ್ಯಮಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ವಾಲ್ಮೀಕಿ ಸರ್ಕಲ್ ಸಮೀಪದ ಪ್ರಸಿದ್ಧ ದರ್ಶನ್ ಹೋಟೆಲ್ ಮಾಲಿಕರಾದ ಎಸ್.ಎಂ. ಗಂಗಾಧರಯ್ಯ ಅವರು ಮಾತನಾಡಿ, “ಸಿಲಿಂಡರ್ ಸರಿಯಾದ ಪ್ರಮಾಣದಲ್ಲಿ ಲಭ್ಯವಾಗದೇ ಇರುವುದರಿಂದ ನಾವು ಸೌದೆ ಬಳಸಿ ಅಡುಗೆ ಮಾಡಬೇಕಾದ ಪರಿಸ್ಥಿತಿ ಬಂದಿದೆ” ಎಂದು ತಿಳಿಸಿದರು.
ದರ್ಶನ್ ಹೋಟೆಲ್ನಲ್ಲಿ ಇಡ್ಲಿ, ಸಾಂಬಾರ್, ಪೂರಿ, ದೋಸೆ, ಉದ್ದಿನ ವಡೆ, ಮಿರ್ಚಿ, ಉಪ್ಪಿಟ್ಟು, ಅವಲಕ್ಕಿ, ಕೇಸರಿಬಾತ್, ಪಲಾವ್, ಚಿತ್ರಾನ್ನ ಸೇರಿದಂತೆ ಮಧ್ಯಾಹ್ನದ ಊಟವನ್ನೂ ಸೌದೆ ಬಳಸಿ ತಯಾರಿಸಲಾಗುತ್ತಿದೆ.
ಆದರೆ ಸೌದೆ ಒದಗಿಸುವುದು ಹಾಗೂ ಅದನ್ನು ಬಳಸಿ ಅಡುಗೆ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಅವರು ಹೇಳಿದರು. ಕಮರ್ಷಿಯಲ್ ಸಿಲಿಂಡರ್ ಬಳಕೆ ಲಭ್ಯವಿಲ್ಲದ ಕಾರಣ ಸೌದೆ ಅವಲಂಬಿಸಬೇಕಾಗಿದೆ.
ಇದೇ ವೇಳೆ, ಕೆಲವು ಹೋಟೆಲ್ ಮಾಲಿಕರು ದುಬಾರಿ ದರದಲ್ಲಿ ಕಮರ್ಷಿಯಲ್ ಸಿಲಿಂಡರ್ ಖರೀದಿಸಿ, ಪ್ರತಿಯೊಂದು ತಿಂಡಿ ಪದಾರ್ಥದ ಮೇಲೂ ₹10ರವರೆಗೆ ದರ ಹೆಚ್ಚಿಸಿರುವುದು ಗ್ರಾಹಕರಿಗೆ ನೇರ ಹೊರೆ ಆಗುತ್ತಿದೆ. ಸಿಲಿಂಡರ್ ಪೂರೈಕೆ ಸ್ಥಿರವಾಗುವವರೆಗೆ ಈ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

