Home Blog

ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ? ಸಿಎಂ ಆಪ್ತರೊಂದಿಗೆ ಗುಪ್ತ ಸಭೆ, ಸಿದ್ದರಾಮಯ್ಯಗೆ ಒತ್ತಡ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಹೊಸ ಬೆಳವಣಿಗೆಗಳು ಕಾಣಿಸುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೇ ಟಾರ್ಗೆಟ್ ಆಗುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ಸಿಎಂ ಹಾಗೂ ಅವರ ಆಪ್ತ ಸಚಿವರು ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯ ಖಾಸಗಿ ಕಟ್ಟಡದಲ್ಲಿ ನಡೆಸಿದ ಗುಪ್ತ ಸಭೆ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರಾದ ಭೈರತಿ ಸುರೇಶ್, ಡಾ.ಜಿ.ಪರಮೇಶ್ವರ್, ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಮತ್ತು ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು. ಸಿಎಂ ಆಪ್ತರ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳ ನಡುವೆಯೂ ಸಿದ್ದರಾಮಯ್ಯ ಮೌನವಾಗಿರುವ ವಿಚಾರದ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿರುವುದು ತಿಳಿದುಬಂದಿದೆ.

ಈ ಪರಿಸ್ಥಿತಿ ಮುಂದುವರಿದರೆ ಪಕ್ಷದ ಹಿರಿಯ ನಾಯಕರ ಅಸ್ತಿತ್ವಕ್ಕೂ ಧಕ್ಕೆಯಾಗಬಹುದು ಎಂಬ ಆತಂಕ ಸಭೆಯಲ್ಲಿ ವ್ಯಕ್ತವಾಗಿದೆ. ಪಕ್ಷದೊಳಗೆ ಕೆಲವರು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಇಂತಹ ಕ್ರಮಗಳು ಮುಂದಿನ 2028ರ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಿ, ಕೆಲವು ಸಮುದಾಯಗಳು ದೂರ ಸರಿಯುವ ಸಾಧ್ಯತೆಯೂ ಇದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಹಿರಿಯ ನಾಯಕರ ಅನುಭವವನ್ನು ಕಡೆಗಣಿಸುವ ರೀತಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷಕ್ಕೆ ಹಾನಿ ಉಂಟುಮಾಡುತ್ತಿವೆ ಎಂದು ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಮೌನದಿಂದ ಕಾಂಗ್ರೆಸ್‌ಗೆ ನಷ್ಟವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಅವರು ತಕ್ಷಣ ಮಧ್ಯಪ್ರವೇಶ ಮಾಡಬೇಕೆಂದು ಸಭೆಯಲ್ಲಿ ಒತ್ತಡ ಹೇರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮತ್ತೊಂದು ಘೋರ ದುರಂತ: ಜೋಕಾಲಿ ಆಡುವಾಗ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾವು!

0

ಶಿವಮೊಗ್ಗ: ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿ 9 ವರ್ಷದ ಬಾಲಕಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃತ ಬಾಲಕಿಯನ್ನು ಶಿವಮೊಗ್ಗ ನಗರದ ವಿದ್ಯಾನಗರ ನಿವಾಸಿ ಪ್ರಣಮ್ಯ ಎಂದು ಗುರುತಿಸಲಾಗಿದೆ. ಈ ಘಟನೆ ಕುಟುಂಬದಲ್ಲಿ ಆಘಾತ ಮೂಡಿಸಿದ್ದು, ಪೋಷಕರ ಆಕ್ರಂದನ ಮನಕಲಕುವಂತಿದೆ.

ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಣಮ್ಯ ಒಂದು ವಾರದ ಹಿಂದೆ ಚಿಕ್ಕಮ್ಮನ ಮನೆ ಲಕ್ಕಿನಕೊಪ್ಪಕ್ಕೆ ಬಂದಿದ್ದಳು. ಏಪ್ರಿಲ್ 20ರಂದು ಚಿಕ್ಕಮ್ಮನ ಮಕ್ಕಳು ಕಿರಿಕಿರಿ ಮಾಡುತ್ತಿದ್ದ ಹಿನ್ನೆಲೆ, ಪ್ರಣಮ್ಯ ಒಬ್ಬಳೇ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡು ಪಂಚೆ ಬಳಸಿ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದಳು.

ಈ ವೇಳೆ ಪಂಚೆಯ ಕುಣಿಕೆ ಕುತ್ತಿಗೆಗೆ ಬಿಗಿದ ಪರಿಣಾಮ ಉಸಿರಾಟಕ್ಕೆ ತೊಂದರೆ ಉಂಟಾಗಿ ಬಾಲಕಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಕುಟುಂಬಸ್ಥರು ಬಾಗಿಲು ತೆರೆಯುವಷ್ಟರಲ್ಲಿ ಪ್ರಣಮ್ಯ ಪ್ರಾಣ ಕಳೆದುಕೊಂಡಿದ್ದಳು.

ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಮಕ್ಕಳ ಸುರಕ್ಷತೆ ಕುರಿತು ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಗದ್ದಲದ ನಡುವೆ ಹೂಗ್ಲಿ ನದಿಯಲ್ಲಿ ಪ್ರಧಾನಿ ಮೋದಿ ದೋಣಿ ವಿಹಾರ

0

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ನಡೆಸಿ ಗಮನ ಸೆಳೆದಿದ್ದಾರೆ.

ಏಪ್ರಿಲ್ 29ರಂದು ನಡೆಯಲಿರುವ ಎರಡನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆ, ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ದೋಣಿ ವಿಹಾರದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಕೋಲ್ಕತ್ತಾದ ಗಂಗಾ ನದಿಯ ಉಪನದಿಯಾದ ಹೂಗ್ಲಿ ನದಿಯಲ್ಲಿ ಕೈಯಲ್ಲಿ ಕ್ಯಾಮೆರಾ ಹಿಡಿದು ದೋಣಿ ಸವಾರಿ ಆನಂದಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮೋದಿ, ಪ್ರತಿಯೊಬ್ಬ ಬಂಗಾಳಿಗನಿಗೂ ಗಂಗಾ ನದಿ ವಿಶೇಷ ಮತ್ತು ಪವಿತ್ರ ಸ್ಥಾನ ಹೊಂದಿದೆ ಎಂದು ಹೇಳಿದ್ದಾರೆ. ಗಂಗಾ ಕೇವಲ ನದಿ ಮಾತ್ರವಲ್ಲ, ಅದು ಇಲ್ಲಿನ ಸಂಸ್ಕೃತಿ, ಇತಿಹಾಸ ಮತ್ತು ಜೀವನಶೈಲಿಯ ಪ್ರತಿಬಿಂಬವಾಗಿದ್ದು, ಬಂಗಾಳದ ಆತ್ಮದಂತೆ ಹರಿಯುತ್ತದೆ ಎಂದು ಅವರು ವಿವರಿಸಿದ್ದಾರೆ.

ಹೂಗ್ಲಿ ನದಿಯ ದಡದಲ್ಲಿ ಕೆಲ ಸಮಯ ಕಳೆದಿದ್ದು, ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸಿದ್ದಾಗಿ ಮೋದಿ ತಿಳಿಸಿದ್ದಾರೆ. ಇದೇ ವೇಳೆ ವಿದ್ಯಾಸಾಗರ್ ಸೇತು ಹಾಗೂ ಹೌರಾ ಸೇತುವೆಯನ್ನು ಕಣ್ತುಂಬಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಅಭಿವೃದ್ಧಿ ಮತ್ತು ಬಂಗಾಳಿಗರ ಸಮೃದ್ಧಿಗಾಗಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿರುವುದಾಗಿ ಮೋದಿ ಹೇಳಿದ್ದಾರೆ.

ಇಸ್ರೇಲ್-ಲೆಬನಾನ್ ಕದನ ವಿರಾಮ ವಿಸ್ತರಣೆ: 21 ದಿನಗಳಿಗೆ ಒಪ್ಪಂದ, ಟ್ರಂಪ್ ಘೋಷಣೆ

0

ವಾಷಿಂಗ್ಟನ್: ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮವನ್ನು ಇನ್ನೂ ಮೂರು ವಾರಗಳವರೆಗೆ (21 ದಿನಗಳು) ವಿಸ್ತರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಶ್ವೇತಭವನದಲ್ಲಿ ಏಪ್ರಿಲ್ 23ರಂದು ನಡೆದ ಎರಡನೇ ಹಂತದ ಉನ್ನತ ಮಟ್ಟದ ಮಾತುಕತೆಗಳ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಏಪ್ರಿಲ್ 16ರಂದು ಮೊದಲ ಬಾರಿಗೆ 10 ದಿನಗಳ ಕದನ ವಿರಾಮ ಘೋಷಿಸಲಾಗಿತ್ತು.

ಎರಡೂ ದೇಶಗಳ ಪ್ರತಿನಿಧಿಗಳೊಂದಿಗೆ ನಡೆದ ಮಾತುಕತೆಗಳು ಯಶಸ್ವಿಯಾಗಿವೆ ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ತಿಳಿಸಿದ್ದಾರೆ. ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ವಿರುದ್ಧ ಲೆಬನಾನ್ ತನ್ನನ್ನು ರಕ್ಷಿಸಿಕೊಳ್ಳಲು ಅಮೆರಿಕ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ.

ಈ ಒಪ್ಪಂದವನ್ನು ಟ್ರಂಪ್ ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ್ದು, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದ್ದಾರೆ.

ಚಿನ್ನಸ್ವಾಮಿಯಲ್ಲಿ ಇಂದು ಬಿಗ್ ಫೈಟ್: ಆರ್‌ಸಿಬಿ-ಗುಜರಾತ್ ಟೈಟಾನ್ಸ್ ಮುಖಾಮುಖಿ, ಪೊಲೀಸ್ ಬಂದೋಬಸ್ತ್

ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳಿಗೆ ಇಂದು ಹಬ್ಬದ ಸಂಭ್ರಮ ಮನೆ ಮಾಡಿದೆ.

ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಸೀಸನ್‌ನಲ್ಲಿ ಆರ್‌ಸಿಬಿ ತವರು ನೆಲದಲ್ಲಿ ಆಡಲಿರುವ ಕೊನೆಯ ಲೀಗ್ ಪಂದ್ಯ ಇದಾಗಿರುವುದರಿಂದ ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ಕಂಡುಬರುತ್ತಿದೆ.

ಪಂದ್ಯದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದ್ದು, ಸುಮಾರು 2,300 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಡಿಸಿಪಿ, ಎಸಿಪಿ ಹಾಗೂ ಇನ್ಸ್‌ಪೆಕ್ಟರ್ ಹುದ್ದೆಯ ಅಧಿಕಾರಿಗಳ ನೇತೃತ್ವದಲ್ಲಿ ಜನಜಂಗುಳಿ ನಿಯಂತ್ರಣಕ್ಕೆ ವಿಶೇಷ ಭದ್ರತಾ ಯೋಜನೆ ರೂಪಿಸಲಾಗಿದೆ.

ಇದೇ ವೇಳೆ ಸ್ಟೇಡಿಯಂ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಹಲವೆಡೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಿರುವ ಪೊಲೀಸರು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಳೆದ ಪಂದ್ಯಗಳ ವೇಳೆ ಟಿಕೆಟ್‌ಗಳ ಕಾಳಸಂತೆ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆ, ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ಈ ಬಾರಿ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆ. ಟಿಕೆಟ್ ಅಕ್ರಮ ಮಾರಾಟಗಾರರ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ.

ಪಂದ್ಯ ವೀಕ್ಷಣೆಗೆ ಸಾವಿರಾರು ಅಭಿಮಾನಿಗಳು ಆಗಮಿಸುವುದರಿಂದ ಜನದಟ್ಟಣೆಯಲ್ಲಿ ಮೊಬೈಲ್ ಕಳ್ಳತನದಂತಹ ಘಟನೆಗಳು ಸಂಭವಿಸದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಸಾರ್ವಜನಿಕರು ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ.

ಬೆಂಗ್ಳೂರಲ್ಲಿ ಮೇ 5ರವರೆಗೆ, ರಾಜ್ಯದಲ್ಲಿ ಏ.29ರವರೆಗೆ ಮಳೆ ಮುನ್ಸೂಚನೆ!

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 29ರವರೆಗೆ ಹಾಗೂ ಬೆಂಗಳೂರಿನಲ್ಲಿ ಮೇ 5ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಸಿಲಿನ ತೀವ್ರತೆಗೆ ಬೇಸತ್ತಿರುವ ಜನರಿಗೆ ಇದರಿಂದ ಸ್ವಲ್ಪ ಮಟ್ಟಿನ ತಂಪು ಸಿಗುವ ನಿರೀಕ್ಷೆ ಮೂಡಿದೆ.

ಕರಾವಳಿ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಏಪ್ರಿಲ್ 29ರವರೆಗೆ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಈ ನಡುವೆ ಬೆಂಗಳೂರಿನಲ್ಲೂ ಬಿಸಿಲಿನ ಬೇಗೆಯಿಂದ ಸ್ವಲ್ಪ ರಿಲೀಫ್ ಸಿಗುವ ಸಾಧ್ಯತೆ ಇದೆ.

ಏಪ್ರಿಲ್ 28ರಿಂದ ಮೇ 5ರವರೆಗೆ ರಾಜಧಾನಿಯಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಹೆಚ್ಚಿದ ಉಷ್ಣಾಂಶದಿಂದ ಬಸವಳಿದಿರುವ ಜನರು, ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಮಳೆಯ ಸಿಂಚನದಿಂದ ತಾಪಮಾನ ಇಳಿಕೆಯಾಗುವ ಮೂಲಕ ವಾತಾವರಣ ತಂಪಾಗುವ ಸಾಧ್ಯತೆ ಇರುವುದರಿಂದ ಜನರಿಗೆ ಸ್ವಲ್ಪ ನೆಮ್ಮದಿ ಸಿಗುವ ಸಾಧ್ಯತೆ ಇದೆ.

ಬೇಸಿಗೆಯಲ್ಲೂ ಕಡಿಮೆಯಾಗದ ಭಕ್ತಿ: ಮಂತ್ರಾಲಯ ರಾಯರ ಮಠಕ್ಕೆ ₹3.25 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು: ಕಲಿಯುಗ ಕಾಮಧೇನು ಎಂದೇ ಪ್ರಸಿದ್ಧಿಯಲ್ಲಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಏಪ್ರಿಲ್ ತಿಂಗಳ ಮೊದಲ 22 ದಿನಗಳ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಒಟ್ಟು 3.25 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

ಬಿರು ಬೇಸಿಗೆಯ ನಡುವೆಯೂ ಶಾಲೆ-ಕಾಲೇಜು ರಜೆ ಹಿನ್ನೆಲೆ ಭಕ್ತರು ದಂಡು ದಂಡಾಗಿ ಮಠಕ್ಕೆ ಹರಿದು ಬಂದಿದ್ದು, ಕಾಣಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಸಂಗ್ರಹವಾದ ಕಾಣಿಕೆಯಲ್ಲಿ 3,15,62,354 ರೂಪಾಯಿ ಕರೆನ್ಸಿ ನೋಟುಗಳು ಹಾಗೂ 10,34,500 ರೂಪಾಯಿ ನಾಣ್ಯಗಳು ಸೇರಿವೆ.

ಇದೇ ವೇಳೆ ಭಕ್ತರು 47 ಗ್ರಾಂ ಚಿನ್ನ ಮತ್ತು 592 ಗ್ರಾಂ ಬೆಳ್ಳಿಯನ್ನು ಕೂಡ ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಮಂತ್ರಾಲಯದ ರಾಯರ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು ಮತ್ತು ಕರ ಸೇವಕರು ಪಾಲ್ಗೊಂಡಿದ್ದರು.

ಒಟ್ಟಾರೆ, ಭಕ್ತರ ಅಪಾರ ಭಕ್ತಿ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುವಂತೆ ಕೋಟ್ಯಾಂತರ ರೂಪಾಯಿ ಕಾಣಿಕೆ ಸಂಗ್ರಹವಾಗಿರುವುದು ವಿಶೇಷವಾಗಿದೆ.

ಬೀದರ್‌ನ ಇಬ್ಬರು ಯುವ ರೈತರು ಸಿಡಿಲು ಬಡಿದು ಸಾವು!

ಬೀದರ್: ಸಿಡಿಲು ಬಡಿದು ಇಬ್ಬರು ಯುವ ರೈತರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ನಾವದಗಿ ಗ್ರಾಮದ ರೇವಣಸಿದ್ದ (28) ಹಾಗೂ ಜೇವರ್ಗಿಯ ಯಲ್ಲಾಲಿಂಗ (28) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಮಳೆ ಆರಂಭವಾದ ಹಿನ್ನೆಲೆ, ಇಬ್ಬರು ಮಾವಿನ ಮರದ ಕೆಳಗೆ ನಿಂತಿದ್ದರು.

ಈ ವೇಳೆ ಆ ಮರಕ್ಕೆ ಸಿಡಿಲು ಅಪ್ಪಳಿಸಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿದು ಖಟಕ್ ಚಿಂಚೋಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಖಟಕ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬೆಂಗಳೂರಿನ ಗಾಳಿ ಸ್ವಲ್ಪ ಸುಧಾರಣೆ: ಇನ್ನೂ ಅಪಾಯದ ಮಟ್ಟದಲ್ಲೇ ಏರ್ ಕ್ವಾಲಿಟಿ!

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದು, ಬೆಂಗಳೂರಿನ ಗಾಳಿಯ ಮಟ್ಟವೂ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ.

ದೇಶದ ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾಗಿದ್ದರೂ, ಇನ್ನೂ ಆರೋಗ್ಯಕ್ಕೆ ಹಾನಿಕರ ಮಟ್ಟದಲ್ಲೇ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕಿಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಈಗ 146ಕ್ಕೆ ಏರಿಕೆಯಾಗಿದೆ. ಇದು ಹಿಂದಿನ ಮಟ್ಟಗಳಿಗೆ ಹೋಲಿಸಿದರೆ ಸುಧಾರಣೆಯಾಗಿದ್ದರೂ, WHO ಮಾನದಂಡದ ಪ್ರಕಾರ ಇನ್ನೂ ಅಪಾಯದ ಮಟ್ಟದಲ್ಲಿಯೇ ಉಳಿದಿದೆ.

ರಾಜ್ಯದ ಇತರ ನಗರಗಳಲ್ಲಿಯೂ ಗಾಳಿಯ ಗುಣಮಟ್ಟದಲ್ಲಿ ಏರುಪೇರು ಕಂಡುಬಂದಿದೆ. ಮಂಗಳೂರು ನಗರದಲ್ಲಿ AQI 115, ಮೈಸೂರಿನಲ್ಲಿ 126, ಬಳ್ಳಾರಿಯಲ್ಲಿ 141 ಮತ್ತು ಶಿವಮೊಗ್ಗದಲ್ಲಿ 125 ದಾಖಲಾಗಿದೆ. ಬೆಳಗಾವಿಯಲ್ಲಿ 53 ಮತ್ತು ಹುಬ್ಬಳ್ಳಿಯಲ್ಲಿ 67 AQI ದಾಖಲಾಗಿದ್ದು, ಈ ನಗರಗಳಲ್ಲಿ ಗಾಳಿ ಗುಣಮಟ್ಟ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ. ಕಲಬುರ್ಗಿ (109), ವಿಜಯಪುರ (109) ಮತ್ತು ಉಡುಪಿ (124) ನಗರಗಳಲ್ಲಿಯೂ ಮಧ್ಯಮದಿಂದ ಕಳಪೆ ಮಟ್ಟದ ಗಾಳಿ ಗುಣಮಟ್ಟ ದಾಖಲಾಗಿದೆ.

ತಜ್ಞರ ಪ್ರಕಾರ, AQI 0ರಿಂದ 50ರವರೆಗೆ ಉತ್ತಮ, 50ರಿಂದ 100 ಮಧ್ಯಮ, 100ರಿಂದ 150 ಕಳಪೆ, 150ರಿಂದ 200 ಅನಾರೋಗ್ಯಕರ, 200ರಿಂದ 300 ಗಂಭೀರ ಮತ್ತು 300ಕ್ಕೂ ಮೇಲ್ಪಟ್ಟರೆ ಅಪಾಯಕಾರಿ ಮಟ್ಟವೆಂದು ಪರಿಗಣಿಸಲಾಗುತ್ತದೆ.

ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದರೂ, ಸಂವೇದನಾಶೀಲ ವ್ಯಕ್ತಿಗಳು, ವೃದ್ಧರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ತಮಿಳುನಾಡು ಚುನಾವಣೆ 2026: ಇತಿಹಾಸದಲ್ಲೇ ದಾಖಲೆ ಮತದಾನ!

0

ಚೆನ್ನೈ: ತಮಿಳುನಾಡಿನಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.84.69ರಷ್ಟು ಮತದಾನ ದಾಖಲಾಗಿದ್ದು, ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.

1967ರಿಂದ ದ್ರಾವಿಡ ರಾಜಕೀಯ ಪ್ರಭಾವ ಹೆಚ್ಚಾದ ಬಳಿಕವೂ ರಾಜ್ಯದಲ್ಲಿ ಮತದಾನದ ಪ್ರಮಾಣ ಶೇಕಡಾ 80 ದಾಟಿರಲಿಲ್ಲ. ಆದರೆ ಈ ಬಾರಿ ಎಲ್ಲಾ ಹಿಂದಿನ ದಾಖಲೆಗಳನ್ನು ಮೀರಿಸಿ ಮತದಾನದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಜಿಲ್ಲಾ ಹಾಗೂ ಲಿಂಗವಾರು ಅಂಕಿಅಂಶಗಳ ಪ್ರಕಾರ, ಪುರುಷರು ಶೇ.83.57, ಮಹಿಳೆಯರು ಶೇ.85.76 ಮತ್ತು ತೃತೀಯ ಲಿಂಗಿಗಳು ಶೇ.60.49ರಷ್ಟು ಮತದಾನ ಮಾಡಿದ್ದಾರೆ.

ಈ ಬಾರಿ ಮಹಿಳಾ ಮತದಾರರ ಹೆಚ್ಚಿನ ಭಾಗವಹಿಸುವಿಕೆ, ಎಸ್‌ಐಆರ್ ಪ್ರಕ್ರಿಯೆಯ ಪರಿಣಾಮ, ಹಾಗೂ ಹೊಸ ರಾಜಕೀಯ ಚಲನಶೀಲತೆ ಮತದಾನ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಎಸ್‌ಐಆರ್ ಬಳಿಕ ಮತದಾರರ ಸಂಖ್ಯೆ 6.41 ಕೋಟಿಯಿಂದ 5.73 ಕೋಟಿಗೆ ಇಳಿಕೆಯಾಗಿದ್ದು, ಸುಮಾರು 58 ಲಕ್ಷ ಮತದಾರರು ಡಿಲೀಟ್ ಆಗಿದ್ದಾರೆ ಎಂಬ ಮಾಹಿತಿ ಇದೆ.

ಇದರೊಂದಿಗೆ ಮಹಿಳಾ ಮತದಾರರು ಪುರುಷರಿಗಿಂತ 10 ಲಕ್ಷ ಹೆಚ್ಚಾಗಿ ನೋಂದಾಯಿತರಾಗಿದ್ದಾರೆ. ಜೊತೆಗೆ ಯುವ ಮತದಾರರ ಭಾಗವಹಿಸುವಿಕೆ, ಹೊಸ ರಾಜಕೀಯ ಪಕ್ಷಗಳ ಉದಯ ಹಾಗೂ ಆಡಳಿತ ವಿರೋಧಿ ಅಲೆಯೂ ಮತದಾನ ಏರಿಕೆಗೆ ಕಾರಣವಾಗಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.

error: Content is protected !!