Home Blog

ಒಣಗಿದ ದಾಸವಾಳ ಹೂ ನುಂಗಿದ ಪರಿಣಾಮ ಉಸಿರುಗಟ್ಟಿ 6 ತಿಂಗಳ ಮಗು ಸಾವು!

ಮೈಸೂರು: ಒಣಗಿದ ದಾಸವಾಳ ಹೂವನ್ನು ನುಂಗಿದ ಪರಿಣಾಮ ಉಸಿರುಗಟ್ಟಿ ಆರು ತಿಂಗಳ ಮಗು ಸಾವನ್ನಪ್ಪಿದ ದಾರುಣ ಘಟನೆ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.

ಮೃತ ಮಗುವನ್ನು ಚಿನ್ಮಯಿಗೌಡ (6 ತಿಂಗಳು) ಎಂದು ಗುರುತಿಸಲಾಗಿದೆ. ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರನಾಗಿದ್ದ ಮಗು ಮನೆಯಲ್ಲೇ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮನೆಯ ಹೊಸಲಿನಲ್ಲಿ ಪೂಜೆಗೆ ಇಡಲಾಗಿದ್ದ ದಾಸವಾಳ ಹೂವಿನ ತುಂಡನ್ನು ಮಗು ಬಾಯಿಗೆ ಹಾಕಿಕೊಂಡಿದೆ. ಈ ವೇಳೆ ಅಣ್ಣ ಕಿತ್ತುಕೊಳ್ಳಬಹುದು ಎಂಬ ಭಯದಿಂದ ಮಗು ಅದನ್ನು ನುಂಗಿದ್ದು, ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿದೆ.

ತಕ್ಷಣವೇ ಮಗುವನ್ನು ಹನಗೋಡು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ಜನರಿಗೆ ಶಾಕ್ ಮೇಲೆ ಶಾಕ್: ಪೆಟ್ರೋಲ್ ₹6, ಡೀಸೆಲ್ ₹7 ಏರಿಕೆ!

ಬೆಂಗಳೂರು: ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಬಗ್ಗೆ ವದಂತಿಗಳು ಹರಿದಾಡುತ್ತಿರುವ ನಡುವೆಯೇ, ಶೆಲ್ ಪೆಟ್ರೋಲ್ ಬಂಕ್ಗಳು ಇಂಧನ ದರ ಹೆಚ್ಚಿಸಿ ಜನತೆಗೆ ಶಾಕ್ ನೀಡಿವೆ.

ಈಗಾಗಲೇ ನಯಾರ ಬಂಕ್ಗಳಲ್ಲಿ ದರ ಏರಿಕೆಯಾದ ಬಳಿಕ, ಶೆಲ್ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಸಿದೆ. ಕಳೆದ 15 ದಿನಗಳಲ್ಲಿ ಇದು ಮೂರನೇ ಬಾರಿ ದರ ಹೆಚ್ಚಳವಾಗಿದೆ.

ಇತ್ತೀಚಿನ ಏರಿಕೆಯಲ್ಲಿ, ಪ್ರತಿ ಲೀಟರ್ ಪೆಟ್ರೋಲ್ಗೆ 6 ರೂಪಾಯಿ ಮತ್ತು ಡೀಸೆಲ್ಗೆ 7 ರೂಪಾಯಿ ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಸಾಮಾನ್ಯ ಪೆಟ್ರೋಲ್ ದರವು 112 ರೂಪಾಯಿಗೆ ಏರಿಕೆಯಾಗಿದೆ. ಪ್ರೀಮಿಯಂ ಪೆಟ್ರೋಲ್ ದರವು ಲೀಟರ್ಗೆ 122.42 ರೂಪಾಯಿಗೆ ತಲುಪಿದೆ.

ಅದೇ ರೀತಿ, ಸಾಮಾನ್ಯ ಡೀಸೆಲ್ ದರವು 98 ರೂಪಾಯಿಗೆ ಏರಿಕೆಯಾದರೆ, ಪ್ರೀಮಿಯಂ ಡೀಸೆಲ್ ದರ ಲೀಟರ್ಗೆ 108.50 ರೂಪಾಯಿಗೆ ಹೆಚ್ಚಾಗಿದೆ.

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಈಗಾಗಲೇ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಇಂಧನ ದರ ಏರಿಕೆಯೂ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ವರದಕ್ಷಿಣೆ ಕಿರುಕುಳ ಆರೋಪ: ರಾಯಚೂರಿನಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು!

0

ರಾಯಚೂರು: ನಗರದ ಐಬಿ ರಸ್ತೆಯ ಮನೆಯಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಸಂಬಂಧ ಪತಿಯ ಮನೆಯವರೇ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಮೃತಳನ್ನು ವಿದ್ಯಾ (30) ಎಂದು ಗುರುತಿಸಲಾಗಿದೆ. ಪತಿ ಮಂಜುನಾಥ ಹಾಗೂ ಆತನ ಕುಟುಂಬದವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ, ಪೋಷಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿದ್ಯಾಳನ್ನು 2023 ಡಿಸೆಂಬರ್ನಲ್ಲಿ ಮಂಜುನಾಥನೊಂದಿಗೆ ವಿವಾಹ ಮಾಡಲಾಗಿತ್ತು. ಮದುವೆ ವೇಳೆ ವರದಕ್ಷಿಣೆಯಾಗಿ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ನೀಡಲಾಗಿತ್ತು. ಮದುವೆಯ ಬಳಿಕ ವಿದ್ಯಾ ರಾಯಚೂರಿನ ಪ್ರಾದೇಶಿಕ ವಿಜ್ಞಾನ ಸಂಸ್ಥೆಯಲ್ಲಿ ಪ್ರೋಗ್ರಾಂ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು.

ವಿವಾಹದ ಕೆಲವೇ ತಿಂಗಳ ನಂತರ ಪತಿ ಮದ್ಯಪಾನ ಮಾಡಿ ಹಲ್ಲೆ ಮಾಡುತ್ತಿದ್ದಾನೆ ಎಂದು ವಿದ್ಯಾ ತನ್ನ ಪೋಷಕರಿಗೆ ತಿಳಿಸಿದ್ದಳು. ಜೊತೆಗೆ, ತಾನು ಸಂಪಾದಿಸುವ ಹಣವನ್ನು ತವರು ಮನೆಗೆ ನೀಡಬಾರದು ಎಂದು ಒತ್ತಡ ಹಾಕುತ್ತಿದ್ದನು ಹಾಗೂ ಇನ್ನಷ್ಟು ಬಂಗಾರ ತರಲು ಒತ್ತಾಯಿಸುತ್ತಿದ್ದನು ಎಂಬ ಆರೋಪವೂ ಕೇಳಿಬಂದಿದೆ.

ಮಾರ್ಚ್ 29ರಂದು ಮಧ್ಯಾಹ್ನ ತಂದೆ ಮಗಳ ಕಚೇರಿಗೆ ಭೇಟಿ ನೀಡಿ ಮಾತನಾಡಿಸಿಕೊಂಡು ಬಂದಿದ್ದರು. ಆದರೆ ಅದೇ ದಿನ ಸಂಜೆ ಮಗಳ ಆತ್ಮಹತ್ಯೆ ಬಗ್ಗೆ ಪತಿ ಮಾಹಿತಿ ನೀಡಿದ್ದಾನೆ.

ಪೋಷಕರು ಮನೆಗೆ ತೆರಳಿ ನೋಡಿದಾಗ, ವಿದ್ಯಾಳ ಮೃತದೇಹ ಹಾಲ್ನಲ್ಲಿ ಇಡಲಾಗಿತ್ತು. ಇದರಿಂದ ಸಂಶಯ ವ್ಯಕ್ತಪಡಿಸಿದ ಅವರು, ಪತಿ ಮತ್ತು ಕುಟುಂಬದವರ ವಿರುದ್ಧ ಕೊಲೆ ಆರೋಪ ಮಾಡಿ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣವನ್ನು ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಮಹಿಳೆಯರ ಒಳಉಡುಪು ಕಳ್ಳತನ: ಕೊಪ್ಪಳದಲ್ಲೊಬ್ಬ ವಿಕೃತ ಕಾಮಿ!

ಕೊಪ್ಪಳ: ಕೊಪ್ಪಳದ ಗಂಗಾವತಿಯಲ್ಲಿ ಮನೆಯ ಗೋಡೆ ಹಾರಿ ವಿಕೃತ ಕಾಮಿಯೊಬ್ಬ ಮಹಿಳೆಯರ ಒಳಉಡುಪನ್ನು ಕಳ್ಳತನ ಮಾಡಿರುವ ಘಟನೆ ಜರುಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಮನೆಯ ಗೋಡೆ ಹಾರಿ ವಿಕೃತ ಕಾಮಿ ಮಹಿಳೆಯರ ಒಳ ಉಡುಪು ಕಳ್ಳತನ ಮಾಡಿದ್ದಾನೆ. ಮಹಿಳೆಯರ ಒಳಉಡುಪು ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಂಗವಾತಿಯ ಸಿಬಿಎಸ್ ಬಡಾವಣೆಯ ಸುತ್ತಮುತ್ತ ಮಹಿಳೆಯರ ಒಳ ಉಡುಪು ಕಳ್ಳತನವಾಗಿದೆ. ಇದರಿಂದಾಗಿ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ.

ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ವಿಕೃತ ಕಾಮಿಗಾಗಿ ಶೋಧ ಕೈಗೊಂಡಿದ್ದಾರೆ.

ನಿಯಂತ್ರಣ ತಪ್ಪಿ ಕನ್ಸ್ಟ್ರಕ್ಷನ್ ಲಾರಿಗೆ ಬೈಕ್ ಡಿಕ್ಕಿ: ಸವಾರ Spot Death!

ಬೆಂಗಳೂರು: ಮುಂದೆ ಹೋಗುತ್ತಿದ್ದ ಕನ್ಸ್ಟ್ರಕ್ಷನ್ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಫ್ಲೈ ಓವರ್ ಮೇಲೆ ಜರುಗಿದೆ.

ದೇವನಹಳ್ಳಿ ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಬೈಕ್ ಸವಾರ ವೇಗವಾಗಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ಕನ್ಸ್ಟ್ರಕ್ಷನ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.

ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ಜರುಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಮೀನು ವ್ಯಾಜ್ಯ: ರಾಡ್, ದೊಣ್ಣೆಯಿಂದ ವಕೀಲನ ಮೇಲೆ ಹಲ್ಲೆ! 19 ಜನರ ವಿರುದ್ದ ಕೇಸ್ ದಾಖಲು

0

ದೊಡ್ಡಬಳ್ಳಾಪುರ:- ಜಮೀನು ವ್ಯಾಜ್ಯ ಹಿನ್ನೆಲೆ ವಕೀಲನ ಮೇಲೆ ಗುಂಪಿನಿಂದ ಹಲ್ಲೆ ನಡೆದಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಜರುಗಿದೆ.

ಜಮೀನಿಗೆ ಕಾಂಪೌಂಡ್ ಹಾಕಲು ಹೋಗಿದ್ದ ವೇಳೆ‌‌ ವಕೀಲ ಪ್ರತಾಪ್ ಮೇಲೆ ಅದೇ ಗ್ರಾಮದ ವಕೀಲನ ಕುಟುಂಬಸ್ಥರಿಂದ ಈ ಹಲ್ಲೆ ನಡೆದಿದೆ. ಮುಖಕ್ಕೆ ಖಾರದ ಪುಡಿ ಎರಚಿ ದೊಣ್ಣೆ ಮತ್ತು ರಾಡ್ ನಿಂದ ರಕ್ತ ಬರುವಂತೆ ಹಲ್ಲೆ ನಡೆದಿದೆ.

ಸ್ಥಳದಲ್ಲಿ ಪೊಲೀಸರು ಇದ್ದರೂ ಕ್ಯಾರೆ ಎನ್ನದೆ ಗುಂಪು ಹಲ್ಲೆ ನಡೆಸಿದೆ. ಜಗಳ ಬಿಡಿಸಲು ಬಂದ ವ್ಯಕ್ತಿಗಳ ಮೇಲೂ ಗುಂಪು ಹಲ್ಲೆ ನಡೆಸಿ ದರ್ಪ ತೋರಿದೆ. ಹಲ್ಲೆ ಸಂಬಂಧ ಒಟ್ಟು 19 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Gold Rate: ಇಳಿಕೆ ಕಂಡ ಚಿನ್ನದ ದರ, ಗ್ರಾಂ ಎಷ್ಟು ಗೊತ್ತಾ!? ಇಲ್ಲಿದೆ ದರಪಟ್ಟಿ!

0

ಕಳೆದ ವಾರ ನಾಲ್ಕು ದಿನ ಏರಿದ ಚಿನ್ನದ ಬೆಲೆ ಇಂದು ಕಡಿಮೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಗೆ ₹750 ರಷ್ಟು ಇಳಿಕೆಯಾಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆ ಸ್ಥಿರವಾಗಿದ್ದು, ಬೆಳ್ಳಿ ಬೆಲೆಯೂ ಯಥಾಸ್ಥಿತಿಯಲ್ಲಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,35,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,47,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,35,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 30ಕ್ಕೆ):

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,728 ರೂ.
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,500 ರೂ.
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,046 ರೂ.
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,728 ರೂ.
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,500 ರೂ.
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ.

ಗದಗ ಬಾರ್ ನಲ್ಲಿ ಕಿರಿಕ್: ಶಾಂತವಾಗಿರಿ ಎಂದಿದ್ದಕ್ಕೆ ಇಬ್ಬರ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ, ಕೊಲೆ ಯತ್ನ ಕೇಸ್ ದಾಖಲು

0

ಗದಗ: ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರ ಮೇಲೆ ಗುಂಪೊಂದು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ಗದಗದ ಡ್ರಿಂಕ್ ಫ್ಯಾಕ್ಟರಿ ಬಾರ್ ನಲ್ಲಿ ಜರುಗಿದೆ.

ಮಲ್ಲಸಮುದ್ರ ಗ್ರಾಮದ ನಿಂಗಪ್ಪ ಹಾಗೂ ಕೊಟ್ರೇಶ್ ಹಲ್ಲೆಗೊಳಗಾದವರು. ಘಟನೆ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಇದೇ ಮಾರ್ಚ್ ತಿಂಗಳ ಕಳೆದ 26 ರಂದು ರಾತ್ರಿ ಸುಮಾರು 8.45ರಿಂದ 9.30ರ ನಡುವೆ ನಿಂಗಪ್ಪ (35) ತನ್ನ ಸ್ನೇಹಿತರೊಂದಿಗೆ ಬಾರ್‌ನಲ್ಲಿ ಕುಳಿತಿದ್ದಾಗ ಪಕ್ಕದ ಟೇಬಲ್‌ನಲ್ಲಿ ಕೆಲವರು ಗದ್ದಲ ಮಾಡಿದ್ದಾರೆ. ಈ ವೇಳೆ ನಿಂಗಪ್ಪ “ಶಾಂತವಾಗಿರಿ” ಎಂದು ಹೇಳಿದ್ದಾರೆ. ಇಷ್ಟಕ್ಕೆ ಆರೋಪಿತರು ಆಕ್ರೋಶಗೊಂಡು ಅವಾಚ್ಯ ಶಬ್ದಗಳಿಂದ ಗಲಾಟೆ ಶುರು ಮಾಡಿದ್ದಾರೆ. ನಂತರ ನಿಂಗಪ್ಪ ಹಾಗೂ ಅವನ ಸ್ನೇಹಿತ ಕೊಟ್ರೇಶ್‌ ಬಾರ್‌ನಿಂದ ಹೊರಬಂದಾಗ ಆರೋಪಿತರು ಹಿಂಬಾಲಿಸಿ ಹೊರಗಡೆ ಗುಂಪಾಗಿ ಸೇರಿ ಹಲ್ಲೆ ನಡೆಸಿದ್ದಾರೆ. ವಿಶೇಷವಾಗಿ ನಿಂಗಪ್ಪನ ಮೇಲೆ ಬಿಯರ್ ಬಾಟಲಿಗಳಿಂದ ತಲೆ, ಮುಖ ಹಾಗೂ ದೇಹದ ಭಾಗಗಳಿಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ.

ಘಟನೆ ಸಂಬಂಧ ಗಾಯಾಳುಗಳು ದೂರು ನೀಡಿದ್ದು, ಕೊಲೆ ಮಾಡಲು ಯತ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಇದೇ ವೇಳೆ ಜೀವ ಬೆದರಿಕೆ ಹಾಕಿರುವುದೂ ತಿಳಿದು ಬಂದಿದೆ.

ಪ್ರಕರಣದಲ್ಲಿ ಪ್ರಜ್ವಲ್ ಅಯ್ಯನಗೌಡ್ರ, ಆಸೀಪ್ ಬಾಗೋಡಿ, ತೋಹಿದ್ ಪಾಮಡಿ, ಶಾಹಿದ್ ಸುರಪುರ ಸೇರಿದಂತೆ ಹಲವರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆ ಸೇರಿದಂತೆ ಕ್ರೈಂ ನಂ. 72/2026 ಹಾಗೂ ವಿವಿಧ ಕಲಂಗಳಡಿ ಕೇಸ್ ದಾಖಲಾಗಿದೆ.

ಘಟನೆ ಸಂಬಂಧ ಪಿ.ಎಸ್‌.ಐ. ವಿ.ಜಿ. ಪವಾರ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಸಣ್ಣ ಮಾತಿನ ಗಲಾಟೆ ದೊಡ್ಡ ದುರಂತಕ್ಕೆ ತಿರುಗಿದ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.

ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನ: ತನಿಖೆ ವೇಳೆ ದೆವ್ವದ ಕಥೆ ಕಟ್ಟಿದ ಪ್ರಯಾಣಿಕ!

0

ಲಕ್ನೋ: ಪ್ರಯಾಣಿಕನೋರ್ವ ಬೆಂಗಳೂರಿನಿಂದ ವಾರಣಾಸಿಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ ಡೋರ್‌ ತೆಗೆಯಲು ಪ್ರಯಾಣಿಕನೊಬ್ಬ ಯತ್ನಿಸಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮೌ ಜಿಲ್ಲೆಯ ನಿವಾಸಿ ಮೊಹಮ್ಮದ್ ಅದ್ನಾನ್ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನಿಸಿದ ಪ್ರಯಾಣಿಕ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ʻನನಗೆ ದೆವ್ವ ಹಿಡಿದಿದೆʼ ಎಂದು ಹೇಳಿಕೊಂಡಿದ್ದಾನೆ. ಮಾ.28ರ ಶನಿವಾರ ಇಂಡಿಗೋ ವಿಮಾನ 6E-185 ರಾತ್ರಿ 8:15ರ ಸುಮಾರಿಗೆ ಬೆಂಗಳೂರಿನಿಂದ ಹೊರಟಿತ್ತು. ಪ್ರಯಾಣ ಆರಂಭಗೊಂಡ ಕೇವಲ 15 ನಿಮಿಷಗಳಲ್ಲಿ ಅದ್ನಾನ್ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನಿಸಿದ್ದ. ಈ ವೇಳೆ, ಅಧಿಕಾರಿಗಳು ಆತನಿಗೆ ಎಚ್ಚರಿಕೆ ನೀಡಿದ್ದರು.

ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 10:20ರ ಸುಮಾರಿಗೆ ವಿಮಾನ ಲ್ಯಾಂಡಿಂಗ್‌ಗೆ ಸಿದ್ಧವಾಗಿದ್ದಾಗಲೂ ಅದ್ನಾನ್ ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನಿಸಿದ್ದಾನೆ. ಈ ವೇಳೆ ವಿಮಾನ 500 ಅಡಿಗಳ ಎತ್ತರದಲ್ಲಿತ್ತು. ತಕ್ಷಣ ಪೈಲಟ್ ಲ್ಯಾಂಡಿಂಗ್ ಪ್ರಯತ್ನವನ್ನು ರದ್ದುಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ಬಳಿಕ ವಿಮಾನವು ರಾತ್ರಿ 10:35 ಕ್ಕೆ ಲ್ಯಾಂಡ್‌ ಮಾಡಲಾಯಿತು. ಲ್ಯಾಂಡಿಂಗ್‌ ಬಳಿಕ ಅದ್ನಾನ್‌ನನ್ನು ತಕ್ಷಣವೇ ವಿಮಾನಯಾನ ಸಂಸ್ಥೆಯ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್ಎಫ್‌ಗೆ ಹಸ್ತಾಂತರಿಸಲಾಯಿತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಅದ್ನಾನ್ ಆರಂಭದಲ್ಲಿ ತಾನು ಈ ರೀತಿ ಏಕೆ ವರ್ತಿಸಿದೆ ಎಂದು ತಿಳಿದಿಲ್ಲ. ತನಗೆ ʻದೆವ್ವ ಹಿಡಿದಿದೆʼ ಎಂದು ಹೇಳಿಕೊಂಡಿದ್ದಾನೆ. ಪೋಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಇರಾನ್ ಯುದ್ಧದ ಎಫೆಕ್ಟ್: ಪಾತಾಳಕ್ಕೆ ಕುಸಿದ ಕಲ್ಲಂಗಡಿ, ಪರಿಹಾರಕ್ಕೆ ರೈತರ ಆಗ್ರಹ

ಬೀದರ್: ಮಧ್ಯಪ್ರಾಚ್ಯ ಯುದ್ಧದ ಸಂಘರ್ಷದಿಂದ ಬೀದರ್‌ ಜಿಲ್ಲೆಯ ಕಲ್ಲಂಗಡಿ ಬೆಳೆಗಾರರ ಸ್ಥಿತಿ ಹೇಳತ್ತೀರದ್ದಾಗಿದೆ.

ರಫ್ತು ಸಾಧ್ಯವಾಗದ ಕಾರಣ, ಈ ಬಾರಿ 1 ಕೆಜಿ ಕಲ್ಲಂಗಡಿಯ ಬೆಲೆ ಕೇವಲ ರೂ. 2ಕ್ಕೆ ಕುಸಿತವಾಗಿದೆ. ಹಿಂದಿನ ವರ್ಷ ಈ ಸಮಯದಲ್ಲಿ ಕಲ್ಲಂಗಡಿ 12–15 ರೂ.ಗೆ ಮಾರಾಟವಾಗುತ್ತಿತ್ತು. ಆದ್ರೆ ಈಗ ಕೆವಲ 2 ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕಡಿಮೆಗೆ ಕೊಟ್ರು ಖರೀದಿಗೆ ವರ್ತಕರು ಬರುತ್ತಿಲ್ಲ ಎಂದು ರೈತರು ವಿಷಾದ ವ್ಯಕ್ತಪಡಿಸಿದ್ದಾರೆ.

ಬೀದರ್ ತಾಲ್ಲೂಕಿನ ರೈತ ವೈಜನಾಥ್ ಸಿದ್ದಾ 1 ಲಕ್ಷ ರೂ. ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಆದರೆ ರಫ್ತು ಇಲ್ಲದ ಕಾರಣ, ಬೆಳೆ ಜಮೀನಿನಲ್ಲಿ ಕೊಳೆತು ಹೋಗುತ್ತಿದೆ. “ಸಾಕಷ್ಟು ಹಣ ಖರ್ಚು ಮಾಡಿದ್ದು, ಕಟಾವು ಮಾಡಿ ಮಾರಾಟ ಮಾಡಲು ಸಿದ್ಧವಾಗಿದ್ದಾಗ ಯುದ್ಧ ಆರಂಭಗೊಂಡು ಮುಂದುವರಿಯುತ್ತಿದೆ. ಈ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು, ಎಂದು ರೈತರು ಮನವಿ ಮಾಡಿದ್ದಾರೆ.

error: Content is protected !!