Home Blog

ಲಕ್ನೋ ತಂಡದ ನಾಯಕ ಸ್ಥಾನದಿಂದ ಇಳಿದ ರಿಷಭ್ ಪಂತ್! ದಿಢೀರ್ ನಿರ್ಧಾರಕ್ಕೆ ಕಳಪೆ ಪ್ರದರ್ಶನ ಕಾರಣವಾ?

ಐಪಿಎಲ್ 2026ರ ಆವೃತ್ತಿ ಮುಕ್ತಾಯದ ಹಂತಕ್ಕೆ ತಲುಪುತ್ತಿರುವ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ತಂಡದ ನಾಯಕ ರಿಷಭ್ ಪಂತ್ ಅವರು ನಾಯಕತ್ವ ಸ್ಥಾನದಿಂದ ಕೆಳಗಿಳಿಯಲು ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ.

ಈ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿರೀಕ್ಷಿತ ಪ್ರದರ್ಶನ ನೀಡದೆ 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ನಾಯಕತ್ವದ ಒತ್ತಡದ ನಡುವೆಯೂ ಪಂತ್ ಅವರ ವೈಯಕ್ತಿಕ ಬ್ಯಾಟಿಂಗ್ ಪ್ರದರ್ಶನವೂ ಕುಂಠಿತವಾಗಿತ್ತು.

ಪಂತ್ ಅವರು ತಾವಾಗಿಯೇ ಫ್ರಾಂಚೈಸಿಗೆ ನಾಯಕತ್ವದಿಂದ ಮುಕ್ತಿ ನೀಡುವಂತೆ ಮನವಿ ಮಾಡಿದ್ದು, ಅದನ್ನು ಲಕ್ನೋ ತಂಡ ಗೌರವಪೂರ್ವಕವಾಗಿ ಅಂಗೀಕರಿಸಿದೆ ಎಂದು ಕ್ರಿಕೆಟ್ ನಿರ್ದೇಶಕ ಟಾಮ್ ಮೂಡಿ ತಿಳಿಸಿದ್ದಾರೆ. “ತಂಡದ ಪುನರ್ರಚನೆ ಮತ್ತು ಮುಂದಿನ ಸೀಸನ್‌ಗೆ ಬಲಿಷ್ಠವಾಗಿ ಸಿದ್ಧಗೊಳ್ಳಲು ಇದು ಸಹಾಯಕವಾಗಲಿದೆ” ಎಂದು ಅವರು ಹೇಳಿದ್ದಾರೆ.

2025ರ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಪಂತ್ ಅವರನ್ನು ಖರೀದಿಸಿ ನಾಯಕನನ್ನಾಗಿ ಮಾಡಲಾಗಿತ್ತು. ಆದರೆ ನಿರೀಕ್ಷಿತ ಫಲಿತಾಂಶಗಳು ಲಭಿಸದೇ ಹೋದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ.

ಇತ್ತೀಚೆಗೆ ಭಾರತ ಟೆಸ್ಟ್ ತಂಡದ ಉಪನಾಯಕತ್ವದಿಂದಲೂ ಅವರನ್ನು ಕೈಬಿಡಲಾಗಿದ್ದು, ಇದೀಗ ನಾಯಕತ್ವದಿಂದ ದೂರ ಸರಿದಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದಿನ ಸೀಸನ್‌ಗೆ ಲಕ್ನೋ ತಂಡ ಹೊಸ ನಾಯಕನನ್ನು ಘೋಷಿಸುವ ಸಾಧ್ಯತೆ ಇದೆ.

ಹೊಳೆಆಲೂರು ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸಿ

ವಿಜಯಸಾಕ್ಷಿ ಸುದ್ದಿ, ಹೊಳೆಆಲೂರು: ಹೊಳೆಆಲೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಭವನದಲ್ಲಿ ವೈದ್ಯಾಧಿಕಾರಿಗಳ ಕೊರತೆ, ಸಮರ್ಪಕ ಔಷಧಿ ಹಾಗೂ ಮೂಲಸೌಕರ್ಯಗಳ ಅಭಾವ ಇರುವುದನ್ನು ಯುವ ಕರ್ನಾಟಕ ವೇದಿಕೆ ಖಂಡಿಸಿದೆ. 
ಯುವ ಕರ್ನಾಟಕ ವೇದಿಕೆಯ ಗದಗ ಜಿಲ್ಲಾ ಅಧ್ಯಕ್ಷ ಎಂ.ಎಚ್. ನದಾಫ್ ಮಾತನಾಡಿ, ಹೊಳೆಆಲೂರು ಸರ್ಕಾರಿ ಆಸ್ಪತ್ರೆ ಸುತ್ತಮುತ್ತಲಿನ 21 ಗ್ರಾಮಗಳ ಜನರಿಗೆ ಪ್ರಮುಖ ಆಸ್ಪತ್ರೆಯಾಗಿದ್ದು, ಪ್ರತಿನಿತ್ಯ 100ರಿಂದ 150 ರವರೆಗೆ ಓಪಿಡಿ ನಡೆಯುತ್ತದೆ. ಆದರೆ ಇಲ್ಲಿ ಒಬ್ಬರೇ ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವುದು ದುರ್ದೈವದ ಸಂಗತಿ ಎಂದು ಹೇಳಿದರು.
ಹೆರಿಗೆ ಸೇರಿದಂತೆ ವಿವಿಧ ಚಿಕಿತ್ಸೆಗಳಿಗಾಗಿ ಗ್ರಾಮೀಣ ಭಾಗದ ಜನರು ಆಸ್ಪತ್ರೆಗೆ ಬರುತ್ತಿದ್ದರೂ ಸಮರ್ಪಕ ವೈದ್ಯರು, ಸ್ಟಾಫ್ ನರ್ಸ್‌ಗಳು, ಔಷಧಿಗಳು ಹಾಗೂ ಲಸಿಕೆಗಳ ಕೊರತೆಯಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸುಮಾರು ಆರು ತಿಂಗಳ ಹಿಂದೆ ಸಮುದಾಯ ಆರೋಗ್ಯ ಭವನ ಉದ್ಘಾಟನೆಗೊಂಡಿದ್ದರೂ ಸಮರ್ಪಕ ಚಿಕಿತ್ಸೆ ವ್ಯವಸ್ಥೆ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಕ್ಷಣ ಗಮನಹರಿಸಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಆಸ್ಪತ್ರೆ ಎದುರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯುವ ಕರ್ನಾಟಕ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಹಾದಿಮನಿ, ನಿಂಗಪ್ಪ ಹಾದಿಮನಿ, ಮಾರುತಿ, ಶರೀಫ್ ನದಾಫ್, ರಾಜು ಹೊಂಬಾಳ, ಬಾಬು ಕಾತರಕಿ, ನಯಿಮ್ ನದಾಫ್, ನಿಯಾಜ್ ಮುಲ್ಲಾ, ಹನುಮಂತ ಗಾಡಗೋಳಿ, ಅಶೋಕ್ ಮುಂದಿನಮನಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಏಷ್ಯನ್ ಪ್ಯಾರಾ ಥ್ರೋಬಾಲ್‌ಗೆ ಗದಗ ಕ್ರೀಡಾಪಟುಗಳ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಗದಗ: ಜೂನ್ 2ರಿಂದ 5ರವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ 2ನೇ ಏಷ್ಯನ್ ಪ್ಯಾರಾ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಗದಗ ಜಿಲ್ಲೆಯ ಪ್ಯಾರಾ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಗದಗಿನ ಮಾಲತಿ ಇನಾಮತಿ ಅವರು ಈ ಬಾರಿಯೂ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕಳೆದ ಬಾರಿ ನಡೆದ ದಕ್ಷಿಣ ಏಷ್ಯನ್ ಪ್ಯಾರಾ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಅವರ ನಾಯಕತ್ವದಲ್ಲಿ ಭಾರತ ತಂಡ ಚಿನ್ನದ ಪದಕ ಗೆದ್ದು ಸಾಧನೆ ಮಾಡಿತ್ತು.
ಇದೇ ವೇಳೆ ಬಿಂಕದಕಟ್ಟಿ ಗ್ರಾಮದ ಪ್ಯಾರಾ ಥ್ರೋಬಾಲ್ ಕ್ರೀಡಾಪಟುವಾದ ದೇವಮ್ಮಾ ಗರೇಬಾಳ ಅವರು ಕೂಡ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಗದಗಿನ ರಿಯಾಜ್ ಬಾನಿ ಅವರು ಭಾರತೀಯ ತಂಡದ ಸಹಾಯಕ ಕೋಚ್ ಆಗಿ ಮಲೇಷ್ಯಾಕ್ಕೆ ತೆರಳಲಿದ್ದಾರೆ. ಜಿಲ್ಲೆಯ ಕ್ರೀಡಾಪಟುಗಳ ಈ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಡಿಕೆಶಿಗೆ ಸಿಎಂ ಯೋಗ ಲಿಂ. ವೀರಗಂಗಾಧರರ ಆಶೀರ್ವಾದದ ಫಲ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಕ್ತಿಮಂದಿರ ಮಹರ್ಷಿ ಲಿಂ. ಜಗದ್ಗುರು ವೀರಗಂಗಾಧರ ಭಗವತ್ಪಾದರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದ್ದು, ಅಧಿಕಾರದ ಗದ್ದುಗೆ ಏರುವ ಸಂದರ್ಭದಲ್ಲಿ ಲಿಂ. ವೀರಗಂಗಾಧರ ಮಹರ್ಷಿಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಕಳೆದ ಎಪ್ರಿಲ್ 19ರಂದು ಡಿಕೆಶಿ ಮುಕ್ತಿಮಂದಿರ ಕ್ಷೇತ್ರಕ್ಕೆ ಆಗಮಿಸಿ ಸುಮಾರು ಎರಡು ಗಂಟೆಗಳ ಕಾಲ ಲಿಂ. ಶ್ರೀಗಳ ಗದ್ದುಗೆಗೆ ಪೂಜೆ, ಮಂಗಳಾರತಿ ಹಾಗೂ ಧ್ಯಾನ ನೆರವೇರಿಸಿ ಮನಃಪೂರ್ವಕವಾಗಿ ಬೇಡಿಕೆ ಸಲ್ಲಿಸಿದ್ದರು ಎಂದು ಅವರು ಹೇಳಿದ್ದಾರೆ.
ಲಿಂ. ಶ್ರೀಗಳ ಪವಾಡದ ಅರಿವು ಡಿಕೆಶಿ ಅವರಿಗೆ ಇದ್ದು, ತಮ್ಮ ಸಂಕಲ್ಪ ಸಿದ್ಧಿಯಾಗಲೆಂದು ವಿಶೇಷ ಪೂಜೆ ಸಲ್ಲಿಸಿದ್ದರು. ಅಂದು “ಲಿಂ. ಶ್ರೀಗಳ ಆಶೀರ್ವಾದದಿಂದ ಅವರು ಅಂದುಕೊಂಡ ಹುದ್ದೆ ಶೀಘ್ರದಲ್ಲೇ ದೊರೆಯಲಿದೆ” ಎಂದು ಆಶೀರ್ವಾದ ಮಾಡಿ ಕಳುಹಿಸಿದ್ದಾಗಿ ಶ್ರೀಗಳು ತಿಳಿಸಿದ್ದಾರೆ.
ಡಿ.ಕೆ. ಶಿವಕುಮಾರ ಅವರು ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಅಧಿಕಾರ ಬಿಟ್ಟು ಕೊಡುವಲ್ಲಿ ಪ್ರಬುದ್ಧತೆ ಮೆರೆದಿದ್ದಾರೆ. ಎಲ್ಲ ವರ್ಗಗಳನ್ನು ಸಮನ್ವಯದಿಂದ ಕೊಂಡೊಯ್ಯುವ ಶಕ್ತಿಯನ್ನು ಲಿಂ. ಜಗದ್ಗುರು ವೀರಗಂಗಾಧರರು ಡಿಕೆಶಿಗೆ ಕರುಣಿಸಲಿ ಎಂದು ಶ್ರೀಗಳು ಆಶಿಸಿದ್ದಾರೆ.

ಸೋಮೇಶ್ವರ ದೇವಸ್ಥಾನದ ಸುತ್ತ ಮಾಂಸ ಮಾರಾಟ ನಿಲ್ಲಿಸಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಲವಾರು ವರ್ಷಗಳಿಂದ ಲಕ್ಷ್ಮೇಶ್ವರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಡೆಯುತ್ತಿರುವ ಚಿಕನ್, ಮೀನು, ಕುರಿ ಹಾಗೂ ಮಾಂಸ ಮಾರಾಟ ಅಂಗಡಿಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಪುರಸಭೆ ಜಾಗದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶುಕ್ರವಾರ ಶ್ರೀರಾಮ್ ಸೇನೆ ಹಾಗೂ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗಡದಾರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶ್ರೀರಾಮ್ ಸೇನೆ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ ಹಾಗೂ ಹಿಂದೂ ಯುವ ಮುಖಂಡರಾದ ಗಂಗಾಧರ ಮೆಣಸಿನಕಾಯಿ, ಸೋಮೇಶ ಉಪನಾಳ, ಮಂಜುನಾಥ ಹೊಗೆಸೊಪ್ಪಿನ ಅವರು, ದೇವಸ್ಥಾನದ ಹಿಂಭಾಗದಲ್ಲಿ ದಶಕಗಳಿಂದ ಮಾಂಸ ಮಾರಾಟ ಅಂಗಡಿಗಳು ಹಾಗೂ ಅಕ್ರಮ ಕಸಾಯಿಖಾನೆಗಳು ನಡೆಯುತ್ತಿರುವುದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.
ದೇವಸ್ಥಾನಕ್ಕೆ ಸಮೀಪದಲ್ಲೇ ಮಾಂಸ ಸಾಗಣೆ ನಡೆಯುತ್ತಿದ್ದು, ಈ ಕುರಿತು ಹಲವು ವರ್ಷಗಳಿಂದ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪುರಸಭೆಯವರು ಮಾಂಸ ಮಾರಾಟಗಾರರಿಗೆ ಭಯಪಡುತ್ತಿದ್ದಾರೆ. ಅಧಿಕಾರಿಗಳು ಮಾಂಸ ವ್ಯಾಪಾರಿಗಳೊಂದಿಗೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ” ಎಂದು ಅವರು ಆರೋಪಿಸಿದರು.
ಕಳೆದ ನಾಲ್ಕು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರೂ, ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದ ಅವರು, ಇನ್ನೂ ಒಂದು ತಿಂಗಳೊಳಗೆ ಅಂಗಡಿಗಳನ್ನು ಸ್ಥಳಾಂತರಿಸದಿದ್ದರೆ ಪುರಸಭೆ ಎದುರು ಸಮಸ್ತ ಹಿಂದೂ ಸಂಘಟನೆಗಳಿಂದ ತೆರವುಗೊಳಿಸುವವರೆಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಜಾರ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ, ವರ್ತಕರಾದ ಚಂಬಣ್ಣ ಬಾಳಿಕಾಯಿ ಹಾಗೂ ವಿಜಯ ಹತ್ತಿಕಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಸೋಮೇಶ್ವರ ದೇವಸ್ಥಾನ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ್ ಕುಲಕರ್ಣಿ, ದುಂಡೇಶ ಕೊಟಗಿ, ಥಾವರಪ್ಪ ಲಮಾಣಿ, ರಾಜು ಅಂದಲಗಿ, ಬಸವರಾಜ ಚಕ್ರಸಾಲಿ, ಶಿವಣ್ಣ ಲಮಾಣಿ, ಪುಂಡಲೀಕ ಲಮಾಣಿ, ಪ್ರವೀಣ ಬೋಮಲೆ, ವಿಜಯ ಕುಂಬಾರ, ಗಿರೀಶ ಚೌರಡ್ಡಿ, ಮಲ್ಲಿಕಾರ್ಜುನ ನೀರಾಲೋಟ, ಶಕ್ತಿ ಕತ್ತಿ, ವಿಶಾಲ ಬಟಗುರ್ಕಿ, ಅಮಿತ ಗುಡಗೇರಿ, ಮಹಾಂತೇಶ ರಗಟಿ, ಮಹಾದೇವಪ್ಪ ಅಣ್ಣಿಗೇರಿ, ಹನುಮಂತ ರಾಮಗೇರಿ, ಸಂತೋಷ ಬೋಮಲೆ, ಸುಮಂಗಲಾ ಕುಂಬಾರ, ಗೀತಾ ಬಡಿಗೇರ, ಶೋಭಾ ಇಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
 “ಒಂದು ತಿಂಗಳೊಳಗೆ ಮಾಂಸ ಅಂಗಡಿಗಳನ್ನು ಸ್ಥಳಾಂತರಿಸದಿದ್ದರೆ ಪುರಸಭೆ ಎದುರು ಸಮಸ್ತ ಹಿಂದೂ ಸಂಘಟನೆಗಳಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.”
ಈರಣ್ಣ ಪೂಜಾರ, ಶ್ರೀರಾಮ್ ಸೇನೆ ತಾಲೂಕು ಅಧ್ಯಕ್ಷ
  • ಒಂದು ತಿಂಗಳ ಗಡುವು!
  • ಸೋಮೇಶ್ವರ ದೇವಸ್ಥಾನ ಹಿಂಭಾಗದಲ್ಲೇ ಮಾಂಸ ಅಂಗಡಿಗಳ ಕಾರ್ಯಾಚರಣೆ
  • ಅಕ್ರಮ ಕಸಾಯಿಖಾನೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
  • ನಾಲ್ಕು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳಿಂದ ತೆರವು ಆದೇಶ
  • ಇನ್ನೂ ತೆರವು ಕಾರ್ಯವಾಗಿಲ್ಲವೆಂದು ಆರೋಪ
  • “ಅಧಿಕಾರಿಗಳು ಮಾಂಸ ವ್ಯಾಪಾರಿಗಳ ಜೊತೆ ಶಾಮೀಲು” ಎಂದು ಟೀಕೆ
  • ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಿ: ವಿಶ್ವನಾಥ ಖಾನಾಪೂರ ಮನವಿ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ನೂತನ ಸರ್ಕಾರದಲ್ಲಿ ಗದಗ ಜಿಲ್ಲೆಯ ರೋಣ ಕ್ಷೇತ್ರದ ಹಿರಿಯ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಗದಗ ಜಿಲ್ಲಾ ವಿಕಾಸ ವೇದಿಕೆಯ ವಿಶ್ವನಾಥ ಖಾನಾಪೂರ ಅವರು ಆಗ್ರಹಿಸಿದ್ದಾರೆ.
ಈ ಕುರಿತು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.
ಉತ್ತರ ಕರ್ನಾಟಕದ ಪ್ರಭಾವಿ ಸಚಿವರಾದ ಹೆಚ್. ಕೆ. ಪಾಟೀಲ ಅವರ ಜೊತೆಗೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜಿ.ಎಸ್. ಪಾಟೀಲರು ಹಿರಿಯ ಹಾಗೂ ಅನುಭವಿ ಶಾಸಕರಾಗಿದ್ದು, ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿ.ಎಸ್. ಪಾಟೀಲರ ಕುಟುಂಬ ರಾಜಕೀಯ ಹಾಗೂ ಆಡಳಿತ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದೆ. ಜೆ.ಎಚ್. ಪಟೇಲರ ಮುಖ್ಯ ಕಾರ್ಯದರ್ಶಿಯಾಗಿ ಬಿ.ಎಸ್. ಪಾಟೀಲರು ಸೇವೆ ಸಲ್ಲಿಸಿದ್ದು, ಗದಗ ಜಿಲ್ಲಾ ರಚನೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ಇದೇ ಕುಟುಂಬದ ಆರ್.ಎಸ್. ಪಾಟೀಲರು ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ, ಬಾಗಲಕೋಟ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಐ.ಎಸ್. ಪಾಟೀಲರು ರೋಣ ಎಪಿಎಂಸಿ ಅಧ್ಯಕ್ಷರಾಗಿದ್ದು, ಕೆಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಅಖಂಡ ಧಾರವಾಡ ಜಿಲ್ಲೆಯ ಗದಗ, ಹಾವೇರಿ ಹಾಗೂ ಧಾರವಾಡ ಭಾಗದಲ್ಲಿ ಈ ಕುಟುಂಬ ತನ್ನದೇ ಆದ ಪ್ರಭಾವ ಹೊಂದಿದ್ದು, ರಾಜಕೀಯ ಅನುಭವದ ಮೂಲಕ ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬಲ್ಲ ಸಾಮರ್ಥ್ಯ ಜಿ.ಎಸ್ ಪಾಟೀಲ ಅವರಿಗಿದೆ ಎಂದು ವಿಶ್ವನಾಥ ಖಾನಾಪೂರ ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿ ಸಚಿವ ಸಂಪುಟದಲ್ಲಿ ಜಿ.ಎಸ್. ಪಾಟೀಲರಿಗೆ ಸ್ಥಾನ ನೀಡುವುದು ಗದಗ ಜಿಲ್ಲೆಯ ಜನರ ಆಶಯವಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
 “ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್. ಪಾಟೀಲರಿಗೆ ಈ ಬಾರಿ ಸಚಿವ ಸ್ಥಾನ ನೀಡುವುದು ಗದಗ ಜಿಲ್ಲೆಯ ಜನರ ಒತ್ತಾಸೆಯಾಗಿದೆ.”
ವಿಶ್ವನಾಥ ಖಾನಾಪೂರ, ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕೆ ಒತ್ತಾಯ

ವಿಜಯಸಾಕ್ಷಿ ಸುದ್ದಿ, ಡಂಬಳ: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಲಿದ್ದು, ರೋಣ ಮತಕ್ಷೇತ್ರದ ಜನಪ್ರಿಯ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಂಡರಗಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಗೂ ಮುಂಡರಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿ.ಎಸ್. ಪಾಟೀಲರು ರೋಣ ಮತಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಜಿಲ್ಲೆಯ ಕಾಂಗ್ರೆಸ್ ಶಾಸಕರ ಪೈಕಿ ಹಿರಿಯ ಹಾಗೂ ಅನುಭವಿ ನಾಯಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದು, ಕ್ಷೇತ್ರವನ್ನು ಕಾಂಗ್ರೆಸ್‌ನ ಭದ್ರಕೋಟೆಯಾಗಿ ರೂಪಿಸಿದ್ದಾರೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಸುಮಾರು 25 ಸಾವಿರ ಮತಗಳ ಭಾರೀ ಅಂತರದಲ್ಲಿ ಜಯಗಳಿಸಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ರೈತರು, ಕಾರ್ಮಿಕರು, ಬಡವರು ಹಾಗೂ ಹಿಂದುಳಿದ ವರ್ಗಗಳ ಪರ ಸದಾ ಸ್ಪಂದಿಸುವ ಜನನಾಯಕರಾಗಿ ಜಿ.ಎಸ್. ಪಾಟೀಲರು ಗುರುತಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೇ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆದಿತ್ತು. ಆಗ ಹೈಕಮಾಂಡ್ ಮುಂದಿನ ಸಂಪುಟ ಪುನರ್‌ರಚನೆಯಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿತ್ತು ಎಂದು ತಿಳಿಸಿದ್ದಾರೆ.
ಈಗ ಸೂಕ್ತ ಸಮಯ ಬಂದಿರುವುದರಿಂದ, ಕಾಂಗ್ರೆಸ್ ಹೈಕಮಾಂಡ್ ತನ್ನ ಭರವಸೆಯನ್ನು ಈಡೇರಿಸಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜ್ಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲು ಅವಕಾಶ ಕಲ್ಪಿಸಬೇಕು ಎಂದು ಡಿ.ಡಿ. ಮೋರನಾಳ ಮನವಿ ಮಾಡಿದ್ದಾರೆ.

ಬಿತ್ತನೆ ಕಾರ್ಯದಲ್ಲಿ ಬ್ಯುಸಿ ಆದ ಅನ್ನದಾತರು!

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಮುಂಗಾರು ಮಳೆ ನಿರೀಕ್ಷೆಯ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಹೊಲಗದ್ದೆಗಳಲ್ಲಿ ಮತ್ತೆ ರೈತರ ಸಂಭ್ರಮ ಮನೆಮಾಡಿದೆ.
ಬೆಳಗಿನ ಜಾವದಿಂದಲೇ ರೈತರು ಎತ್ತುಗಳ ಜೋಡಿ ಹಾಗೂ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಕೃಷಿ ಪರಿಕರಗಳೊಂದಿಗೆ ಹೊಲಗಳಿಗೆ ಇಳಿದು ಉಳಿಮೆ ಮತ್ತು ಬಿತ್ತನೆ ಕಾರ್ಯದಲ್ಲಿ ತೊಡಗಿರುವ ದೃಶ್ಯಗಳು ಗ್ರಾಮೀಣ ಬದುಕಿನ ಸೊಬಗನ್ನು ಮತ್ತಷ್ಟು ಹೆಚ್ಚಿಸಿವೆ.
ಮಳೆಯೇ ರೈತರ ಬದುಕಿನ ಜೀವನಾಡಿಯಾಗಿದ್ದು, ಉತ್ತಮ ಬೆಳೆ ನಿರೀಕ್ಷೆಯೊಂದಿಗೆ ರೈತರು ಭೂಮಿ ಸಿದ್ಧಪಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿದ್ದಾರೆ. ಕೆಂಪು ಮಣ್ಣಿನ ಹೊಲಗಳಲ್ಲಿ ಎತ್ತುಗಳ ಮೂಲಕ ಉಳಿಮೆ ನಡೆಸುತ್ತಿರುವ ರೈತರ ಶ್ರಮ ಗ್ರಾಮೀಣ ಕೃಷಿ ಸಂಸ್ಕೃತಿಯ ಜೀವಂತ ಚಿತ್ರಣವಾಗಿ ಕಂಡುಬರುತ್ತಿದೆ.
ಆಧುನಿಕ ಕೃಷಿ ಯಂತ್ರೋಪಕರಣಗಳ ಬಳಕೆ ಹೆಚ್ಚಾದರೂ, ಹಲವೆಡೆ ರೈತರು ಇಂದಿಗೂ ಎತ್ತುಗಳ ಮೂಲಕ ಉಳಿಮೆ ನಡೆಸುತ್ತಿರುವುದು ವಿಶೇಷವಾಗಿದೆ. ರೈತ ಕುಟುಂಬದ ಮಹಿಳೆಯರೂ ಹೊಲಗದ್ದೆಗಳಲ್ಲಿ ಪಾಲ್ಗೊಂಡು ಬಿತ್ತನೆ ಸಿದ್ಧತೆಯಲ್ಲಿ ಕೈಜೋಡಿಸುತ್ತಿದ್ದು, ಗ್ರಾಮೀಣ ಬದುಕಿನ ಒಗ್ಗಟ್ಟು ಮತ್ತೊಮ್ಮೆ ಅನಾವರಣಗೊಂಡಿದೆ.
ಈ ಬಾರಿ ಸಮಯಕ್ಕೆ ಸರಿಯಾಗಿ ಉತ್ತಮ ಮಳೆಯಾದರೆ ಉತ್ತಮ ಬೆಳೆ ದೊರೆಯುವ ನಿರೀಕ್ಷೆಯಲ್ಲಿ ರೈತರು ಬೀಜ, ರಸಗೊಬ್ಬರ ಹಾಗೂ ಕೃಷಿ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. “ಒಳ್ಳೆಯ ಮಳೆಯಾದರೆ ರೈತನ ಬದುಕು ಹಸನಾಗುತ್ತದೆ” ಎಂಬ ಆಶಾಭಾವನೆ ಗ್ರಾಮೀಣ ಭಾಗಗಳಲ್ಲಿ ವ್ಯಕ್ತವಾಗುತ್ತಿದೆ.
ಹೊಲಗದ್ದೆಗಳಲ್ಲಿ ಮತ್ತೆ ಕೇಳಿಬರುತ್ತಿರುವ ಎತ್ತುಗಳ ಗಂಟೆಗಳ ಶಬ್ದ, ಮಣ್ಣಿನ ಪರಿಮಳ ಹಾಗೂ ರೈತರ ಶ್ರಮ ಗ್ರಾಮೀಣ ಕೃಷಿ ಬದುಕಿಗೆ ಹೊಸ ಚೈತನ್ಯ ತುಂಬಿದೆ.
“ಮಳೆ ನಮ್ಮ ಬದುಕಿನ ಆಶಾಕಿರಣ. ಉತ್ತಮ ಮಳೆಯಾದರೆ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆಯಲ್ಲಿ ಬಿತ್ತನೆ ಕಾರ್ಯ ಆರಂಭಿಸಿದ್ದೇವೆ. ಸರ್ಕಾರವೂ ರೈತರ ನೆರವಿಗೆ ನಿಲ್ಲಬೇಕು.”
— ಬಾರಿಕರ ಪರಶುರಾಮ ಬ್ಯಾಲಾಳು, ರೈತ

ಮುಖ್ಯಮಂತ್ರಿ ಯಾರೇ ಆದರೂ ಕಾಂಗ್ರೆಸ್ ಆಡಳಿತ ಶಾಶ್ವತ: ಕುರಿ ಶಿವಮೂರ್ತಿ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯದ ಮುಖ್ಯಮಂತ್ರಿ ಯಾರೇ ಆದರೂ ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷದ ಆಡಳಿತಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತನ್ನದೇ ಆದ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ ಎಂದು ವಿಜಯನಗರ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ ಹೇಳಿದರು.
ಕೊಟ್ಟೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆದರೂ ಸಂತೋಷವೇ, ಹಾಗೆಯೇ ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೇ ಮುಖ್ಯಮಂತ್ರಿ ಆದರೂ ಪಕ್ಷದ ಆಡಳಿತ ಮತ್ತಷ್ಟು ಬಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎಂಟನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ರಾಜ್ಯದ ಜನತೆಗೆ ತಮ್ಮದೇ ಆದ ಪರಿಕಲ್ಪನೆಯ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದಾರೆ. ಅವರು ಕೈಗೊಂಡಿರುವ ಯೋಜನೆಗಳು ಜನಮಾನಸದಲ್ಲಿ ಅಜರಾಮರವಾಗಿರಲಿವೆ ಎಂದು ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಪಕ್ಷದ ನಾಯಕತ್ವದಲ್ಲಿ ಸಮನ್ವಯವಿದ್ದು, ಸರ್ಕಾರ ಸ್ಥಿರವಾಗಿ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಸೌಲಭ್ಯಗಳು ಹಾಗೂ ಖಾತರಿ ಯೋಜನೆಗಳು ರಾಜ್ಯದ ಎಲ್ಲಾ ವರ್ಗದ ಜನರಿಗೆ ಪ್ರಾಮಾಣಿಕವಾಗಿ ತಲುಪುತ್ತಿವೆ ಎಂದು ಸರ್ಕಾರದ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡರು.
“ಮುಖ್ಯಮಂತ್ರಿ ಯಾರೇ ಆದರೂ ಕಾಂಗ್ರೆಸ್ ಆಡಳಿತ ಮಾತ್ರ ಐದು ವರ್ಷ 
ಪೂರ್ಣಗೊಳಿಸಿ ಶಾಶ್ವತ ಅಸ್ತಿತ್ವ ಪಡೆಯಲಿದೆ.”
ಕುರಿ ಶಿವಮೂರ್ತಿ
ವಿಜಯನಗರ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ

ಮಳೆಯಲ್ಲೂ ಮಾನವೀಯತೆ ಮೆರೆದ ಖಾಕಿ: ಹೆಗಲ ಮೇಲೆ ವಿಕಲಚೇತನನ್ನು ಹೊತ್ತು ರಸ್ತೆ ದಾಟಿಸಿದ ಪೊಲೀಸ್!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುರಿದ ಧಾರಾಕಾರ ಮಳೆ ಒಂದೆಡೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದರೆ, ಮತ್ತೊಂದೆಡೆ ಅದೇ ಮಳೆಯ ನಡುವೆ ಬೆಂಗಳೂರು ಪೊಲೀಸರ ಮಾನವೀಯ ಮುಖ ಬೆಳಕಿಗೆ ಬಂದಿದೆ.

ಮಳೆಯಿಂದಾಗಿ ಜಲಾವೃತಗೊಂಡ ರಸ್ತೆಯಲ್ಲಿ ರಸ್ತೆ ದಾಟಲು ಅಸಹಾಯಕನಾಗಿದ್ದ ವಿಕಲಚೇತನ ಯುವಕನನ್ನು ಬ್ಯಾಟರಾಯನಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅನಿಲ್ ಅವರು ತಮ್ಮ ಹೆಗಲ ಮೇಲೆ ಹೊತ್ತು ಸುರಕ್ಷಿತವಾಗಿ ರಸ್ತೆ ದಾಟಿಸುವ ಮೂಲಕ ಮಾನವೀಯತೆಯ ನಿದರ್ಶನ ನೀಡಿದ್ದಾರೆ.

ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದು, ಸಾರ್ವಜನಿಕ ಸಂಚಾರಕ್ಕೂ ತೊಂದರೆ ಉಂಟಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮಾನವೀಯ ನಡೆ ಸ್ಥಳೀಯರ ಗಮನ ಸೆಳೆದಿದ್ದು, ಅನಿಲ್ ಅವರ ಸೇವಾ ಮನೋಭಾವಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!