Home Blog

ಪಾಕಿಗೆ ಮುಖಭಂಗ: ಲೆಬನಾನ್ ಮೇಲೆ ದಾಳಿ ಮುಂದುವರಿಯಲಿದೆ – ಇಸ್ರೇಲ್

0

ಇಸ್ರೇಲ್: ಅಮೆರಿಕ–ಇರಾನ್ ನಡುವೆ ಘೋಷಿಸಲಾದ ಕದನ ವಿರಾಮ ವಿಚಾರದಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿದ್ದು, ಲೆಬನಾನ್ ಮೇಲೆ ದಾಳಿ ಮುಂದುವರಿಸುವುದಾಗಿ ಇಸ್ರೇಲ್ ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ಪ್ರಧಾನಿ ಷರೀಫ್‌ ಅವರು, ಕದನ ವಿರಾಮವು ಕೇವಲ ಅಮೆರಿಕ ಮತ್ತು ಇರಾನ್ ನಡುವಷ್ಟೇ ಅಲ್ಲದೆ ಲೆಬನಾನ್ ಸೇರಿದಂತೆ ಇತರ ಸಂಘರ್ಷ ಪ್ರದೇಶಗಳಿಗೂ ಅನ್ವಯಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದರು.

ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈ ಹೇಳಿಕೆಯನ್ನು ತಿರಸ್ಕರಿಸಿ, ಕದನ ವಿರಾಮವು ಕೇವಲ ಅಮೆರಿಕ–ಇರಾನ್ ಸಂಘರ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದರು. ಲೆಬನಾನ್ನಲ್ಲಿ ಹಿಜ್ಬುಲ್ಲಾ ವಿರುದ್ಧ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ವಿರುದ್ಧದ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ ವ್ಯಕ್ತಪಡಿಸಿದೆ. ಇರಾನ್ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನಾ ಬೆದರಿಕೆಯನ್ನು ತಡೆಯುವ ಅಮೆರಿಕದ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಇಸ್ರೇಲ್ ಹೇಳಿದೆ.

ಮುಂದಿನ ಮಾತುಕತೆಗಳಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಅದರ ಮಿತ್ರ ರಾಷ್ಟ್ರಗಳ ಭದ್ರತಾ ಗುರಿಗಳನ್ನು ಸಾಧಿಸಲು ಬದ್ಧರಾಗಿರುವುದಾಗಿ ತಿಳಿಸಲಾಗಿದ್ದು, ಈ ಎರಡು ವಾರಗಳ ಕದನ ವಿರಾಮ ಲೆಬನಾನ್ ಪ್ರದೇಶವನ್ನು ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಶಿವಮೊಗ್ಗ: ತುಂಗಾ ನದಿಯಲ್ಲಿ ಮುಳುಗಿ ಕಣ್ಮರೆಯಾಗಿದ್ದ ಯುವಕನ ಶವ ಪತ್ತೆ!

0

ಶಿವಮೊಗ್ಗ: ತುಂಗಾ ನದಿಯಲ್ಲಿ ಈಜಲು ಹೋಗಿ ಕಣ್ಮರೆಯಾಗಿದ್ದ ಯುವಕನ ಶವ ಪತ್ತೆಯಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿಯಾಗಿದೆ.

ಮೃತ ಯುವಕನನ್ನು ಸೀಬಿನಕೆರೆ ಗ್ರಾಮದ ಅಕ್ಷಯ್ (26) ಎಂದು ಗುರುತಿಸಲಾಗಿದೆ. ಏಪ್ರಿಲ್ 7ರ ಸಂಜೆ ಕಲ್ಲುಬಂಡೆಯ ಮೇಲೆ ಮೊಬೈಲ್, ಚಪ್ಪಲಿ ಹಾಗೂ ಬಟ್ಟೆಗಳನ್ನು ಇಟ್ಟು ನದಿಗೆ ಇಳಿದಿದ್ದ ಅಕ್ಷಯ್, ಬಳಿಕ ಕಾಣೆಯಾಗಿದ್ದರು.

ಘಟನೆಯ ಮಾಹಿತಿ ತಿಳಿದ ಕೂಡಲೇ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ನದಿಗೆ ಇಳಿದಿದ್ದ ಸ್ಥಳದ ಸಮೀಪದಲ್ಲೇ ಕೆಲವೇ ಅಡಿ ದೂರದಲ್ಲಿ ಶವ ಪತ್ತೆಯಾಗಿದೆ.

ಮೃತದೇಹವನ್ನು ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ನಿಮಗೆ ಗೊತ್ತೇ..? ದೇಹದಲ್ಲಿ ಪ್ಲೇಟ್‌ಲೆಟ್‌ʼಗಳು ಕಡಿಮೆಯಾಗುವುದಕ್ಕೆ ಈ ರೋಗಗಳೇ ಕಾರಣ!

0

ಮಾನವ ದೇಹದಲ್ಲಿ ರಕ್ತಸ್ರಾವವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುವ ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ 1.5 ಲಕ್ಷದಿಂದ 4.5 ಲಕ್ಷ ಪ್ಲೇಟ್‌ಲೆಟ್‌ಗಳು ಇರಬೇಕು. ಈ ಪ್ರಮಾಣ ಕಡಿಮೆಯಾದರೆ ಅದನ್ನು ನಿರ್ಲಕ್ಷಿಸುವಂತಿಲ್ಲ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಪ್ಲೇಟ್‌ಲೆಟ್‌ಗಳ ಪ್ರಮಾಣ 1.5 ಲಕ್ಷಕ್ಕಿಂತ ಕಡಿಮೆಯಾದರೆ ಅಪಾಯದ ಸೂಚನೆಯಾಗಿದ್ದು, 50 ಸಾವಿರಕ್ಕಿಂತ ಕಡಿಮೆಯಾದರೆ ಗಂಭೀರ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. 20 ಸಾವಿರಕ್ಕಿಂತ ಕಡಿಮೆಯಾದರೆ ಒಳಾಂಗಿಕ ರಕ್ತಸ್ರಾವದ ಅಪಾಯ ಹೆಚ್ಚಾಗುತ್ತದೆ, ಇದು ಜೀವಕ್ಕೆ ಅಪಾಯಕಾರಿಯೂ ಆಗಬಹುದು.

ಪ್ಲೇಟ್‌ಲೆಟ್‌ ಕಡಿಮೆಯಾಗಲು ಕಾರಣಗಳು:
ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾಗಲು ಹಲವಾರು ಕಾರಣಗಳಿವೆ. ಮುಖ್ಯವಾಗಿ ವೈರಲ್ ಸೋಂಕುಗಳಾದ ಡೆಂಗ್ಯೂ, ಚಿಕನ್‌ಗುನ್‌ಯಾ ಮತ್ತು ಮಲೇರಿಯಾ, ಟೈಫಾಯ್ಡ್, ಲಿವರ್ ಸಮಸ್ಯೆಗಳು (ಸಿರೋಸಿಸ್), ಬೋನ್ ಮ್ಯಾರೋ ಸಮಸ್ಯೆಗಳು, ಕ್ಯಾನ್ಸರ್ ಹಾಗೂ ಕೀಮೋಥೆರಪಿ, ಆಟೋಇಮ್ಯೂನ್ ರೋಗಗಳು ಪ್ರಮುಖ ಕಾರಣಗಳಾಗಿವೆ.

ಲಕ್ಷಣಗಳು ಹೇಗಿರುತ್ತವೆ?:
ಪ್ಲೇಟ್‌ಲೆಟ್‌ಗಳ ಕೊರತೆಯಾದಾಗ ದೇಹದಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಣ್ಣ ಗಾಯವಾದರೂ ರಕ್ತಸ್ರಾವ ಬೇಗ ನಿಲ್ಲದಿರುವುದು, ಚರ್ಮದ ಮೇಲೆ ಕೆಂಪು ಅಥವಾ ನೇರಳೆ ಚುಕ್ಕೆಗಳು ಕಾಣಿಸಿಕೊಳ್ಳುವುದು, ಮೂಗು ಅಥವಾ ಹಲ್ಲಿನ ಮಸೂರಿನಿಂದ ರಕ್ತಸ್ರಾವವಾಗುವುದು ಪ್ರಮುಖ ಲಕ್ಷಣಗಳಾಗಿವೆ. ಮಹಿಳೆಯರಲ್ಲಿ ಪೀರಿಯಡ್ಸ್ ವೇಳೆ ಹೆಚ್ಚು ರಕ್ತಸ್ರಾವವಾಗುವುದು, ದಣಿವು, ದುರ್ಬಲತೆ ಮತ್ತು ತಲೆಸುತ್ತು ಕೂಡ ಕಾಣಿಸಬಹುದು.

ಮುನ್ನೆಚ್ಚರಿಕೆ ಕ್ರಮಗಳು:
ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾಗದಂತೆ ತಡೆಯಲು ಕೆಲ ಸರಳ ಕ್ರಮಗಳನ್ನು ಅನುಸರಿಸಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಸೊಳ್ಳೆಗಳಿಂದ ದೂರವಿರುವುದು,

ಪೌಷ್ಟಿಕ ಆಹಾರ ಸೇವಿಸುವುದು ಮತ್ತು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಯಾವುದೇ ಜ್ವರ ಅಥವಾ ದುರ್ಬಲತೆಯನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ.

ಹೂ ಮಾರಾಟಕ್ಕೆ ಮಹಿಳೆಯರ ಜಗಳ: ರಸ್ತೆಗೆ ಮಲ್ಲಿಗೆ ಹೂ ಬಿಸಾಕಿ ರಂಪಾಟ! VIDEO ನೋಡಿ!

ಬೆಂಗಳೂರು: ಹನುಮಂತನಗರದಲ್ಲಿ ಹೂ ಮಾರಾಟದ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ  ಜಗಳ ನಡೆದ ಘಟನೆ ಬೆಳಕಿಗೆ ಬಂದಿದೆ.

ಅಂಗಡಿ ಮುಂದೆ ಮಲ್ಲಿಗೆ ಹೂ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪ್ರಶ್ನಿಸಿದ ಮತ್ತೊಬ್ಬ ಮಹಿಳೆ ಕಿರಿಕ್ ಆರಂಭಿಸಿದ್ದಾಳೆ.

ವಿವಾದ ತೀವ್ರಗೊಂಡ ವೇಳೆ, ಇನ್ನೋರ್ವ ಮಹಿಳೆ ಮಲ್ಲಿಗೆ ಹೂವನ್ನು ರಸ್ತೆಗೆ ಬಿಸಾಕಿ ಉದ್ಧಟತನ ತೋರಿದ್ದಾಳೆ. “ಪೊಲೀಸರಿಗಾದರೂ ಹೇಳು, ಯಾರಿಗಾದರೂ ಹೇಳು” ಎಂದು ರಂಪಾಟ ನಡೆಸಿದ ದೃಶ್ಯಗಳು ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿವೆ.

ಈ ಜಡೆ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ವಿಡಿಯೋದಲ್ಲಿ ನಗು… ವಾಸ್ತವದಲ್ಲಿ ದುಃಖ? ನಟಿ ಸುಭಾಷಿಣಿ ಸಾವು ಮಿಸ್ಟರಿ – ಪತಿ ಜೊತೆ ಕಾಲ್ ಬಳಿಕ ಶಾಕಿಂಗ್‌ ನಿರ್ಧಾರ!

ತಮಿಳು ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಮಣಿಯಂ ಅವರ ಅಕಾಲಿಕ ನಿಧನ ಈಗ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಏಪ್ರಿಲ್ 6ರಂದು ಚೆನ್ನೈನಲ್ಲಿ ನಡೆದ ಈ ಘಟನೆ ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದರೂ, ಇದರ ಹಿಂದೆ ಇರುವ ನಿಜವಾದ ಕಾರಣ ಇನ್ನೂ ಮಿಸ್ಟರಿಯಾಗಿಯೇ ಉಳಿದಿದೆ.

ಶ್ರೀಲಂಕಾದಿಂದ ಚೆನ್ನೈಗೆ ಬಂದು ಅವಕಾಶಗಳಿಗಾಗಿ ಹೋರಾಡಿದ ಸುಭಾಷಿಣಿ, ‘ಕಯಲ್’ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದರು. ಆದರೆ, ಯಶಸ್ಸಿನ ನಡುವೆಯೇ ಅವರ ವೈಯಕ್ತಿಕ ಜೀವನದಲ್ಲಿ ಏನೋ ಗಂಭೀರ ಸಮಸ್ಯೆಗಳು ನಡೆದಿದ್ದವೆಯೇ ಎಂಬ ಅನುಮಾನಗಳು ಹೆಚ್ಚುತ್ತಿವೆ.

ಸಾವಿಗೆ ಮುನ್ನ ಅವರು ತಮ್ಮ ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದ್ದು, ಆ ವೇಳೆ ಏನಾದರೂ ಜಗಳ ನಡೆದಿತ್ತೇ ಎಂಬ ಪ್ರಶ್ನೆ ತಲೆದೋರಿದೆ. ಈ ಘಟನೆ ಅವರ ಮನಸ್ಥಿತಿಗೆ ಪರಿಣಾಮ ಬೀರಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಆದರೆ, ಈ ಪ್ರಕರಣದಲ್ಲಿ ಹೆಚ್ಚು ಚರ್ಚೆಗೆ ಕಾರಣವಾದುದು ಅವರ ಕೊನೆಯ ವಿಡಿಯೋ. ಕೇವಲ ಎರಡು ದಿನಗಳ ಹಿಂದಷ್ಟೇ ಹಂಚಿಕೊಂಡ ಆ ವಿಡಿಯೋದಲ್ಲಿ ಸುಭಾಷಿಣಿ ತುಂಬಾ ಖುಷಿಯಾಗಿ ಕಾಣಿಸಿಕೊಂಡಿದ್ದರು. ಈ ವಿರುದ್ಧ ಚಿತ್ರಣವೇ ಇದೀಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

“ನಗು ಮುಖದ ಹಿಂದೆ ನೋವು ಮರೆಮಾಡಲಾಗಿತ್ತೇ?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಸೆಲೆಬ್ರಿಟಿಗಳ ಜೀವನದ ಮತ್ತೊಂದು ಕತ್ತಲೆ ಮುಖ ಈ ಘಟನೆಯಿಂದ ಹೊರಬಂದಂತಾಗಿದೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಸುಭಾಷಿಣಿ ಅವರ ಸಾವಿನ ಅಸಲಿ ಕಾರಣ ಮುಂದಿನ ದಿನಗಳಲ್ಲಿ ಬಹಿರಂಗವಾಗುವ ನಿರೀಕ್ಷೆ ಇದೆ.

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ‘ವಿಲನ್’ ಆಗಲು ಕಾರಣವೇನು? 4000 ಕೋಟಿ ‘ರಾಮಾಯಣ’ದಲ್ಲಿ ರಾವಣನ ಹೊಸ ಮುಖ!

ಭಾರತದ ಅತಿದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ ಈಗಾಗಲೇ ಸಿನಿ ಲೋಕವನ್ನು ಕಾದು ಕುಳಿತಿದೆ. 4000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ದ್ವಿಭಾಗೀಯ ಚಿತ್ರ, ತಾಂತ್ರಿಕವಾಗಿ ಹಾಗೂ ಕಲಾತ್ಮಕವಾಗಿ ಹೊಸ ಮಾನದಂಡಗಳನ್ನು ಸ್ಥಾಪಿಸಲು ಸಜ್ಜಾಗಿದೆ.

ಈ ಭವ್ಯ ಯೋಜನೆಯಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ನಟಿಸುತ್ತಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ, ‘ಕೆಜಿಎಫ್’ ಮೂಲಕ ಹೀರೋ ಇಮೇಜ್ ಗಟ್ಟಿಗೊಳಿಸಿರುವ ಯಶ್, ವಿಲನ್ ಪಾತ್ರಕ್ಕೆ ಒಪ್ಪಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಈ ಪ್ರಶ್ನೆಗೆ ಉತ್ತರ ನೀಡಿರುವ ನಿರ್ದೇಶಕ ನಿತೇಶ್ ತಿವಾರಿ, ‘ನಾವು ರಾವಣನನ್ನು ಕೇವಲ ದುಷ್ಟನಾಗಿ ತೋರಿಸುವುದಿಲ್ಲ. ಆತ ಒಂದು ಬಹುಮುಖ ವ್ಯಕ್ತಿತ್ವ – ಜ್ಞಾನ, ಭಕ್ತಿ, ಅಹಂಕಾರ ಮತ್ತು ಶಕ್ತಿ ಎಲ್ಲವೂ ಸೇರಿ ಇಂತಹ ಪಾತ್ರವನ್ನು ನಿಭಾಯಿಸಲು ಯಶ್ ಅವರಂತಹ ನಟನೇ ಬೇಕು’ ಎಂದು ಹೇಳಿದ್ದಾರೆ.

ಚಿತ್ರದ ಕಥೆಯಲ್ಲಿನ ಈ ವಿಭಿನ್ನ ನಿರೂಪಣೆ ಯಶ್ ಅವರನ್ನು ಸೆಳೆದಿದ್ದು, ಅದೇ ಕಾರಣಕ್ಕೆ ಅವರು ಈ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ. ರಣ್ಬೀರ್ ಕಪೂರ್ ಕೂಡ ಈ ಹೊಸ ದೃಷ್ಟಿಕೋನವನ್ನು ಮೆಚ್ಚಿಕೊಂಡಿದ್ದಾರೆ ಎಂಬುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಇನ್ನೊಂದೆಡೆ, ಯಶ್ ಈ ಚಿತ್ರದ ಸಹ ನಿರ್ಮಾಪಕರಾಗಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ. ತಾರಾಗಣದಲ್ಲಿ ಸನ್ನಿ ಡಿಯೋಲ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಲಾರಾ ದತ್ತ ಸೇರಿದಂತೆ ಹಲವು ಪ್ರಮುಖ ಕಲಾವಿದರು ಇದ್ದಾರೆ.

ಎ.ಆರ್. ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡುತ್ತಿರುವುದು ಚಿತ್ರದ ಮಟ್ಟವನ್ನು ಹಾಲಿವುಡ್ ಮಟ್ಟಕ್ಕೆ ಏರಿಸುತ್ತಿದೆ. ಐಮ್ಯಾಕ್ಸ್‌ನಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ಈ ದೀಪಾವಳಿಗೆ ಬಿಡುಗಡೆಯಾಗಲಿದ್ದು, ಮುಂದಿನ ವರ್ಷ ಎರಡನೇ ಭಾಗ ಬಿಡುಗಡೆಯಾಗಲಿದೆ.

ಒಟ್ಟಿನಲ್ಲಿ, ‘ರಾಮಾಯಣ’ ಕೇವಲ ಸಿನಿಮಾ ಅಲ್ಲ — ಇದು ಭಾರತೀಯ ಸಿನಿರಂಗದ ಹೊಸ ಯುಗದ ಆರಂಭ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮಧುರೈ ರಾಜಕೀಯದಲ್ಲಿ ಫೇಕ್ ನ್ಯೂಸ್ ಸ್ಫೋಟ: ‘ಮಾಂಸದಂಗಡಿ ನಿಷೇಧ’ ಸುಳ್ಳು ಹೇಳಿಕೆ – ಸುಂದರ್ ಸಿ., ಖುಷ್ಬೂ ಕಿಡಿ!

ತಮಿಳುನಾಡು ಚುನಾವಣೆ ಬಿಸಿ ಏರಿದಂತೆ ರಾಜಕೀಯದಲ್ಲಿ ಫೇಕ್ ನ್ಯೂಸ್ ಯುದ್ಧವೂ ತಾರಕಕ್ಕೇರಿದೆ. ಇದೀಗ ಅದರ ಟಾರ್ಗೆಟ್ ಆಗಿರುವವರು ನಟ-ನಿರ್ದೇಶಕ ಸುಂದರ್ ಸಿ., ಮಧುರೈ ಸೆಂಟ್ರಲ್ ಕ್ಷೇತ್ರದ ಪ್ರಮುಖ ಅಭ್ಯರ್ಥಿ.

‘ಗೆದ್ದರೆ ಕ್ಷೇತ್ರದಲ್ಲಿನ ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚಿಸುತ್ತೇನೆ’ ಎಂಬ ಸುಳ್ಳು ಹೇಳಿಕೆಯನ್ನು ಸುಂದರ್ ಸಿ. ಹೆಸರಿನಲ್ಲಿ ಹರಡಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಎಂದು ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ, ರಾಜಕೀಯ ವಾತಾವರಣ ಉತ್ಕಂಠೆಗೆ ತಳ್ಳಲ್ಪಟ್ಟಿದೆ.

ಆದರೆ, ಈ ಎಲ್ಲ ಆರೋಪಗಳಿಗೆ ಸುಂದರ್ ಸಿ. ತೀವ್ರವಾಗಿ ತಿರುಗೇಟು ನೀಡಿದ್ದು, ‘ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರ. ನನ್ನನ್ನು ಎದುರಿಸಲು ಸಾಧ್ಯವಾಗದವರು ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಚಾರದಲ್ಲಿ ಅವರ ಪತ್ನಿ ಖುಷ್ಬೂ ಕೂಡ ಮೌನ ಮುರಿದು ನೇರವಾಗಿ ಆಡಳಿತಾರೂಢ ಡಿಎಂಕೆ ವಿರುದ್ಧ ಆರೋಪ ಮಾಡಿದ್ದಾರೆ. ‘ಸತ್ಯವನ್ನು ಎದುರಿಸಲು ಆಗದಾಗ ಸುಳ್ಳು ಕಥೆಗಳನ್ನು ಹುಟ್ಟುಹಾಕುತ್ತಾರೆ. ಇದು ಅವರ ಸೋಲಿನ ಭೀತಿಯ ಸಂಕೇತ’ ಎಂದು ಅವರು ಕಿಡಿಕಾರಿದ್ದಾರೆ.

ಈ ಬೆಳವಣಿಗೆಗಳ ನಡುವೆ, ಎಐಎಡಿಎಂಕೆ ಮೈತ್ರಿಯೊಂದಿಗೆ ಪಿಎನ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಂದರ್ ಸಿ. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮುಂದುವರೆಸಿದ್ದಾರೆ. ಮತ್ತೊಂದೆಡೆ, ನಟ ದಳಪತಿ ವಿಜಯ್ ತಮ್ಮದೇ ಪಕ್ಷದೊಂದಿಗೆ ಚುನಾವಣೆಗೆ ಇಳಿದಿರುವುದು ರಾಜಕೀಯ ಲೆಕ್ಕಾಚಾರವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ಒಟ್ಟಿನಲ್ಲಿ, ಮಧುರೈ ರಾಜಕೀಯ ಈಗ ಫೇಕ್ ನ್ಯೂಸ್, ಆರೋಪ ಮತ್ತು ಪ್ರತಿಯುತ್ತರಗಳ ಅಖಾಡವಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಹಾಡಿನಲ್ಲಿ ಅಶ್ಲೀಲ ಪದಪ್ರಯೋಗ ಆರೋಪ: ಬಾದ್‌ಶಾಗೆ ಸಮನ್ಸ್, ಕ್ಷಮೆಯಾಚಿಸಿ 50 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ

‘ಟಟೀರಿ’ ಹಾಡಿನ ಅಶ್ಲೀಲ ಸಾಹಿತ್ಯದಿಂದ ಎದ್ದ ವಿವಾದ ಇದೀಗ ಬಾದ್‌ಶಾ ಅವರಿಗೆ ದೊಡ್ಡ ಪಾಠವಾಗಿದ್ದು, ಅಂತಿಮವಾಗಿ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ತಲೆಬಾಗುವಂತಾಗಿದೆ.

ಹರಿಯಾಣ್ವಿ ಹಾಡಾದ ‘ಟಟೀರಿ’ ಮಹಿಳೆಯರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದೆ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ವಿಷಯ ಗಂಭೀರವಾಗುತ್ತಿದ್ದಂತೆ NCW ಸ್ವಯಂ ಪ್ರಕರಣ ದಾಖಲಿಸಿಕೊಂಡು, ಬಾದ್‌ಶಾ ಸೇರಿದಂತೆ ನಿರ್ಮಾಪಕರಿಗೆ ನೋಟಿಸ್ ನೀಡಿತು.

ವಿಜಯಾ ರಾಹತ್ಕರ್ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ, ಹಾಡಿನ ಅಶ್ಲೀಲತೆ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆಯೋಗ ಸ್ಪಷ್ಟವಾಗಿ ತಿರಸ್ಕರಿಸಿತು. ಈ ಒತ್ತಡದ ನಡುವೆ ಬಾದ್‌ಶಾ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದರು.

ಆದರೆ ಇದು ಕೇವಲ ಕ್ಷಮೆಗೆ ಸೀಮಿತವಾಗಿಲ್ಲ. ತಮ್ಮ ಇಮೇಜ್‌ ಅನ್ನು ಮರುಸ್ಥಾಪಿಸಲು ಬಾದ್‌ಶಾ ಹಲವು ಘೋಷಣೆಗಳನ್ನು ಮಾಡಿದ್ದಾರೆ. 50 ಹಿಂದುಳಿದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗುವ ಜವಾಬ್ದಾರಿಯನ್ನು ತೆಗೆದುಕೊಂಡಿರುವ ಅವರು, ಮಹಿಳಾ ಸಬಲೀಕರಣದ ಕುರಿತು ಸಕಾರಾತ್ಮಕ ಸಂದೇಶ ನೀಡುವ ಹೊಸ ಹಾಡನ್ನು 4 ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಇದಲ್ಲದೆ, ವಿವಾದಿತ ಹಾಡನ್ನು ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ. ಮುಂದಿನ ದಿನಗಳಲ್ಲಿ ಕಲಾತ್ಮಕ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದಾಗಿ ಅವರು ಲಿಖಿತ ಭರವಸೆ ನೀಡಿದ್ದಾರೆ.

ರೈಲಿನಲ್ಲೇ ಹೆರಿಗೆ; ಹೆಣ್ಣು ಮಗುವಿಗೆ ಜನ್ಮ, ತಾಯಿ-ಮಗು ಸುರಕ್ಷಿತ!

ವಿಜಯವಾಡ: ಆಂಧ್ರಪ್ರದೇಶದಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲೇ ಗರ್ಭಿಣಿಯೊಬ್ಬರು ಹೆರಿಗೆಗೊಂಡು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ರೈಲ್ವೆ ಸಿಬ್ಬಂದಿಯ ತ್ವರಿತ ನೆರವಿನಿಂದ ಹೆರಿಗೆ ಸುಸೂತ್ರವಾಗಿ ನಡೆದಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಜಾರ್ಖಂಡ್ ಮೂಲದ ಗರ್ಭಿಣಿ ಮಹಿಳೆ ಏಪ್ರಿಲ್ 5ರಂದು ಆಲಪ್ಪುಳ-ಧನಬಾದ್ ಎಕ್ಸ್‌ಪ್ರೆಸ್ ರೈಲಿನಲ್ಲಿ ತಮ್ಮ ಕುಟುಂಬದವರೊಂದಿಗೆ ಪ್ರಯಾಣಿಸುತ್ತಿದ್ದರು. ಅನ್ನಾವರಂ ನಿಲ್ದಾಣವನ್ನು ದಾಟಿದ ಬಳಿಕ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬದವರು ಟಿಕೆಟ್ ಪರಿಶೀಲಕರನ್ನು ಸಂಪರ್ಕಿಸಿದ್ದು, ಸಿಬ್ಬಂದಿ ತಕ್ಷಣ ಸ್ಪಂದಿಸಿದ್ದಾರೆ.

ಪರಿಸ್ಥಿತಿಯ ತುರ್ತುಸ್ಥಿತಿಯನ್ನು ಗಮನಿಸಿ ರೈಲಿಗೆ ಎಲಮಂಚಿಲಿ ನಿಲ್ದಾಣದಲ್ಲಿ ವಿಶೇಷ ನಿಲುಗಡೆ ನೀಡಲಾಗಿದ್ದು, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ, ಕೋಚ್‌ನಲ್ಲಿದ್ದ ಪುರುಷ ಪ್ರಯಾಣಿಕರನ್ನು ಹೊರಗೆ ಕಳುಹಿಸಿ, ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ನಡೆಸಲು ಸಹಕರಿಸಲಾಗಿದೆ.

ಹೆರಿಗೆಯ ಬಳಿಕ ತಾಯಿ ಮತ್ತು ನವಜಾತ ಶಿಶುವನ್ನು 108 ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ರೈಲು ಪ್ರಯಾಣದ ವೇಳೆ ಮಾನವೀಯತೆ ಮತ್ತು ತುರ್ತುಸಹಾಯದ ಮಹತ್ವವನ್ನು ಮತ್ತೊಮ್ಮೆ ತೋರಿಸಿದೆ.

 

ಚಾಮರಾಜನಗರದಲ್ಲಿ ಸೈಕೋಪಾತ್ ಕಾಟ; ಮಹಿಳೆಯರ ಒಳ ಉಡುಪು ಕಳವು, ಸಿಸಿಟಿವಿಯಲ್ಲಿ ಸೆರೆಯಾದ ವಿಕೃತಿ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ವಿಚಿತ್ರ ಸೈಕೋಪಾತ್ ಒಬ್ಬನ ಕೃತ್ಯ ಮಹಿಳೆಯರಲ್ಲಿ ಭೀತಿ ಹುಟ್ಟಿಸಿದೆ.

ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರ ಒಳ ಉಡುಪುಗಳನ್ನು ಟಾರ್ಗೆಟ್ ಮಾಡಿ ಕಳವು ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಮನೆಗಳ ಮುಂದೆ ಒಣಗಲು ಹಾಕಿದ್ದ ಒಳ ಉಡುಪುಗಳು ಪದೇ ಪದೇ ನಾಪತ್ತೆಯಾಗುತ್ತಿದ್ದ ಹಿನ್ನೆಲೆಯಲ್ಲಿ ನಿವಾಸಿಗಳು ಅನುಮಾನಗೊಂಡು ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ತಡರಾತ್ರಿ ಮಹಿಳೆಯ ವೇಷದಲ್ಲಿ ಬರುವ ವ್ಯಕ್ತಿ, ಒಳ ಉಡುಪುಗಳನ್ನು ಕದ್ದು ಸ್ಥಳದಲ್ಲೇ ಧರಿಸಿಕೊಂಡು ವಿಕೃತಿ ತೋರಿಸುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಈ ಘಟನೆ ಕಾಲೋನಿಯ ಮಹಿಳೆಯರಲ್ಲಿ ಆತಂಕ ಸೃಷ್ಟಿಸಿದ್ದು, ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಚಾಮರಾಜನಗರ ಪಟ್ಟಣ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

error: Content is protected !!