ಬಳ್ಳಾರಿ: ನಗರದಲ್ಲಿ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳಿಗೆ ಕಾರಣವಾಗಿದ್ದು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನರು ರಾತ್ರಿಯಿಡೀ ಪರದಾಡುವಂತಾಯಿತು.
ಮಳೆಯ ಪರಿಣಾಮ ಪ್ರಮುಖ ವಿದ್ಯುತ್ ಕೇಂದ್ರ ಜಲಾವೃತಗೊಂಡು ನಗರದ ಬಹುತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾದ ಘಟನೆ ನಡೆದಿದೆ.
ಬಳ್ಳಾರಿ ನಗರದ ವಿವಿಧ ಬಡಾವಣೆಗಳಲ್ಲಿ ಸುರಿದ ಭಾರೀ ಮಳೆಯಿಂದ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡವು. ರೇಣುಕಾನಗರ, ರಾಣಿಪೇಟೆ, ಮಿಲ್ಲರ್ಪೇಟೆ ಸೇರಿದಂತೆ ಹಲವು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದರು. ಮನೆಯೊಳಗೆ ನೀರು ನುಗ್ಗಿದ್ದರಿಂದ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದ್ದು, ಕುಟುಂಬಸ್ಥರು ನೀರು ಹೊರಹಾಕಲು ರಾತ್ರಿಯಿಡೀ ಹರಸಾಹಸ ಪಟ್ಟರು.
ಮಳೆಯ ಮತ್ತೊಂದು ದೊಡ್ಡ ಪರಿಣಾಮ ನಗರದ ವಿದ್ಯುತ್ ವ್ಯವಸ್ಥೆಯ ಮೇಲೆ ಬಿದ್ದಿದೆ. ನಗರದ ಬಹುತೇಕ ಭಾಗಗಳಿಗೆ ವಿದ್ಯುತ್ ಪೂರೈಕೆ ಮಾಡುವ ಪ್ರಮುಖ ಕೆಇಬಿ ಕೇಂದ್ರವೇ ಜಲಾವೃತಗೊಂಡಿದೆ. ಕೇಂದ್ರದೊಳಗಿನ ಟ್ರಾನ್ಸ್ಫಾರ್ಮರ್ಗಳು, ವಿದ್ಯುತ್ ನಿಯಂತ್ರಣ ಸಾಧನಗಳು ಹಾಗೂ ಇತರ ಉಪಕರಣಗಳ ಸುತ್ತ ಮಳೆ ನೀರು ನಿಂತಿದ್ದರಿಂದ ಅಧಿಕಾರಿಗಳು ಆತಂಕಗೊಂಡರು.
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕೆಇಬಿ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಹೊರಹಾಕುವ ಕಾರ್ಯಾಚರಣೆ ಆರಂಭಿಸಿದರು. ಶನಿವಾರ ರಾತ್ರಿ 10 ಗಂಟೆಯಿಂದಲೇ ಕಾರ್ಯಾಚರಣೆ ನಡೆಸಲಾಗಿದ್ದು, ರಾತ್ರಿಯಿಡೀ ನೀರು ತೆರವುಗೊಳಿಸಲು ಸಿಬ್ಬಂದಿ ಶ್ರಮಿಸಿದರು. ಆದರೂ ಜಲಾವೃತ ಸಮಸ್ಯೆಯಿಂದ ವಿದ್ಯುತ್ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡು ನಗರದ ಹಲವೆಡೆ ವಿದ್ಯುತ್ ಕಡಿತ ಉಂಟಾಯಿತು.
ಪ್ರತಿವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಾಗುತ್ತಿದ್ದರೂ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದೇ ಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ಬೇಸತ್ತ ಜನರು ಕೆಇಬಿ ಕಚೇರಿ ಬಳಿ ತೆರಳಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಶೀಘ್ರ ವಿದ್ಯುತ್ ಪೂರೈಕೆ ಪುನರಾರಂಭಿಸುವಂತೆ ಒತ್ತಾಯಿಸಿದರು.
ಮಳೆಯ ಹೊಡೆತಕ್ಕೆ ಸರ್ಕಾರಿ ಕಚೇರಿಗಳೂ ತತ್ತರಿಸಿವೆ. ನಗರದ ಹಳೆ ತಾಲೂಕು ಕಚೇರಿ ಆವರಣ ಸಂಪೂರ್ಣ ಜಲಾವೃತಗೊಂಡು ಕೆರೆಯಂತಾಗಿತ್ತು. ಇದೇ ಆವರಣದಲ್ಲಿ ಅಂಚೆ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ನೀರಿನಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದರ ಜೊತೆಗೆ ಬ್ರೂಸ್ಪೇಟೆ ಪೊಲೀಸ್ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳುವ ಸಿಬ್ಬಂದಿ ಮತ್ತು ಸಾರ್ವಜನಿಕರೂ ತೊಂದರೆ ಅನುಭವಿಸಿದರು. ಪ್ರತಿ ಬಾರಿ ಮಳೆ ಬಂದಾಗ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.





