Home Blog

ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಅಕ್ರಮ ಆರೋಪ: ಸದನ ಸಮಿತಿ ರಚನೆಗೆ ಆರ್. ಅಶೋಕ್ ಆಗ್ರಹ

ಬೆಂಗಳೂರು: ನಗರದಲ್ಲಿ ಗುಂಡಿ ಮುಚ್ಚುವ ಕಾಮಗಾರಿಗಳ ಹೆಸರಿನಲ್ಲಿ ಸರ್ಕಾರ ಹಣ ವ್ಯರ್ಥ ಮಾಡಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಂಡಿ ಮುಚ್ಚಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂಬುದು ಅಸಂಬದ್ಧವಾಗಿದೆ. ಒಂದು ಗುಂಡಿ ಮುಚ್ಚಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆಯೇ ಎಂದು ಪ್ರಶ್ನಿಸಿದರು. ಈ ಕಾಮಗಾರಿಗಳ ಬಗ್ಗೆ ಬೆಂಗಳೂರು ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ಹೇಳಿದರು.

ಸರ್ಕಾರ ಎಲ್ಲಾ ವಸ್ತುಗಳ ಬೆಲೆ ಹೆಚ್ಚಿಸಿದ್ದು, ಗುಂಡಿ ಮುಚ್ಚುವ ಕಾಮಗಾರಿಗಳಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು, “ಈ ಕೆಲಸಗಳಲ್ಲಿ ಹೇಗೆ ಹಣ ಮಾಡಬೇಕು ಎಂದು ಕಾಂಗ್ರೆಸ್‌ವರನ್ನೇ ಕೇಳಬೇಕು” ಎಂದು ಟೀಕಿಸಿದರು.

ಇಷ್ಟು ದೊಡ್ಡ ಮೊತ್ತದ ವೆಚ್ಚ ಬೋಗಸ್ ಆಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕು. ಮುಚ್ಚಿದ ಗುಂಡಿಗಳು ಮತ್ತೆ ತೆರೆಯುತ್ತಿರುವುದರಿಂದ ಈ ಕಾಮಗಾರಿಗಳ ಗುಣಮಟ್ಟದ ಮೇಲೂ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಈ ಸಂಬಂಧ ನಾವು ಸಂಪೂರ್ಣ ಲೆಕ್ಕ ನೀಡಲು ಸಿದ್ಧವಿದ್ದೇವೆ. ಸರ್ಕಾರದ ವಿರುದ್ಧ ಇರುವ ಅಕ್ರಮಗಳನ್ನು ಬಹಿರಂಗಪಡಿಸಲು ಸದನ ಸಮಿತಿ ರಚನೆ ಅಗತ್ಯ ಎಂದು ಆರ್. ಅಶೋಕ್ ಆಗ್ರಹಿಸಿದರು.

SSLC ಫೇಲ್ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ: ಪರೀಕ್ಷೆ-2ಗೆ ಶುಲ್ಕ ಸರ್ಕಾರವೇ ಭರಿಸಲಿದೆ – ಮಧು ಬಂಗಾರಪ್ಪ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆ-2ಗೆ ಹಾಜರಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರೆ ನೀಡಿದ್ದಾರೆ. ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದಾರೆ.

ಪರೀಕ್ಷೆ-1ರಲ್ಲಿ ಒಟ್ಟು 45,415 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ವಿಷಯವಾರು ಅಂಕಿಅಂಶಗಳನ್ನು ಸಚಿವರು ಪ್ರಕಟಿಸಿದ್ದಾರೆ. ಒಂದು ವಿಷಯದಲ್ಲಿ 20,691 ವಿದ್ಯಾರ್ಥಿಗಳು, ಎರಡು ವಿಷಯಗಳಲ್ಲಿ 10,509 ವಿದ್ಯಾರ್ಥಿಗಳು, ಮೂರು ವಿಷಯಗಳಲ್ಲಿ 6,103 ವಿದ್ಯಾರ್ಥಿಗಳು, ನಾಲ್ಕು ವಿಷಯಗಳಲ್ಲಿ 3,799 ವಿದ್ಯಾರ್ಥಿಗಳು, ಐದು ವಿಷಯಗಳಲ್ಲಿ 2,552 ವಿದ್ಯಾರ್ಥಿಗಳು ಹಾಗೂ ಎಲ್ಲಾ ವಿಷಯಗಳಲ್ಲಿ 1,716 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಪರೀಕ್ಷೆಯ ಫಲಿತಾಂಶದಿಂದಾಗಿ ಯಾರೂ ನಿರಾಶೆಗೊಂಡು ಶಿಕ್ಷಣವನ್ನು ಮಧ್ಯದಲ್ಲಿ ಬಿಡಬಾರದು ಎಂದು ಸಚಿವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಮುಂಬರುವ ‘ಪರೀಕ್ಷೆ-2’ಗೆ ಕಡ್ಡಾಯವಾಗಿ ನೋಂದಾಯಿಸಿ, ಅವರಿಗೆ ಅಗತ್ಯ ಮಾರ್ಗದರ್ಶನ ಮತ್ತು ಶೈಕ್ಷಣಿಕ ಸಿದ್ಧತೆ ಒದಗಿಸಲು ಇಲಾಖೆಯ ಉಪ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಶಾರಿಕ್ ಬಿಡುಗಡೆ ಭೀತಿ: ಶಿಕ್ಷೆ ಪ್ರಮಾಣ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು NIA ಸಿದ್ಧತೆ

ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಅಪರಾಧಿ ಉಗ್ರ ಶಾರಿಖ್‌ಗೆ ವಿಧಿಸಲಾದ 10 ವರ್ಷಗಳ ಕಠಿಣ ಶಿಕ್ಷೆ ಕಡಿಮೆ ಎಂದು ಅಭಿಪ್ರಾಯಪಟ್ಟಿರುವ ಎನ್ಐಎ ಅಧಿಕಾರಿಗಳು, ಶಿಕ್ಷೆಯ ಪ್ರಮಾಣ ಹೆಚ್ಚಿಸುವಂತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಪ್ರಸ್ತುತ 27 ವರ್ಷದ ಶಾರಿಖ್ ಈಗಾಗಲೇ 3 ವರ್ಷ ಜೈಲಿನಲ್ಲಿ ಕಳೆದಿದ್ದು, ಇನ್ನೂ 7 ವರ್ಷ ಶಿಕ್ಷೆ ಮಾತ್ರ ಉಳಿದಿದೆ. ಈ ಹಿನ್ನೆಲೆ, ಕಡಿಮೆ ಅವಧಿಯಲ್ಲಿ ಬಿಡುಗಡೆಗೊಂಡರೆ ಆತ ಮತ್ತೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಇದೆ ಎಂದು ಎನ್ಐಎ ಆತಂಕ ವ್ಯಕ್ತಪಡಿಸಿದೆ.

ಮನೋಭಾವದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಮಧ್ಯಮ ವಯಸ್ಸಿನಲ್ಲಿ ಹೊರಬಂದರೆ ಮತ್ತೆ ಅಪಾಯ ಉಂಟಾಗಬಹುದು, ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಕನಿಷ್ಠ 20 ರಿಂದ 30 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವಂತೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ಏಪ್ರಿಲ್ 27ರಂದು ಎನ್ಐಎ ವಿಶೇಷ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121ಎ, 122, 326 ಹಾಗೂ ಯುಎಪಿಎ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಶಾರಿಖ್‌ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿತ್ತು.

ಪಂಚಮಸಾಲಿ ಪೀಠ ಭೇಟಿ ವಿಚಾರ ಭಕ್ತರಿಗೆ ಬಿಟ್ಟದ್ದು: ಮನಗುಳಿ ಸಂಗನಬಸವ ಶ್ರೀ ಸ್ಪಷ್ಟನೆ

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ವಚನಾನಂದ ಶ್ರೀಗಳ ಬದಲು ಪೀಠಾಧಿಪತಿಯಾಗಿ ನಾನು ಬರಬೇಕೇ ಎಂಬುದು ಭಕ್ತರು ಮತ್ತು ಟ್ರಸ್ಟಿಗಳ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಮನಗುಳಿ ಸಂಗನಬಸವ ಸ್ವಾಮೀಜಿ ತಿಳಿಸಿದ್ದಾರೆ.

ಪೀಠದ ವಿವಾದದ ಹಿನ್ನೆಲೆಯಲ್ಲಿ ಹರಿಹರಕ್ಕೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿಂದೆ ಸಹ ವಚನಾನಂದ ಸ್ವಾಮೀಜಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಹರಜಾತ್ರೆ ಸಂದರ್ಭದಲ್ಲಿ ಗಣ್ಯರಿಗೆ ಅವಮಾನ ಮಾಡಿದ್ದಾರೆ ಹಾಗೂ ಭಕ್ತರ ನಡುವೆ ಭಿನ್ನಾಭಿಪ್ರಾಯ ಉಂಟುಮಾಡಿದ್ದಾರೆ ಎಂದು ಆರೋಪಿಸಿದರು.

ಸಮಾಜ ದೊಡ್ಡದಾಗಿದೆ, ಈ ಭಾಗದಲ್ಲಿ ನನಗೂ ಅಪಾರ ಭಕ್ತ ಸಮೂಹವಿದ್ದು, ಪೀಠಾಧಿಪತಿಯಾಗಿ ನೇಮಕವಾಗುವ ಪ್ರಶ್ನೆಯನ್ನು ಭಕ್ತರು ಹಾಗೂ ಟ್ರಸ್ಟಿಗಳು ತೀರ್ಮಾನಿಸಬೇಕು ಎಂದು ಹೇಳಿದರು.

ಇದರ ನಡುವೆ, ಈ ವಾರದೊಳಗೆ ವಚನಾನಂದ ಸ್ವಾಮೀಜಿಯನ್ನು ಪೀಠದಿಂದ ತೆರವುಗೊಳಿಸುವ ಕುರಿತು ಟ್ರಸ್ಟಿಗಳು ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಇತ್ತೀಚೆಗೆ ಮಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಲೆಕ್ಕಪತ್ರ ಮಂಡನೆ ಮಾಡಿದ ಬಳಿಕ ಈ ವಿಚಾರ ಮತ್ತಷ್ಟು ಚರ್ಚೆಗೆ ಬಂದಿದೆ.

ಪೀಠದ ಆಡಳಿತದಲ್ಲಿ ಬದಲಾವಣೆ ತರಲು ಕಾನೂನು ಹೋರಾಟಕ್ಕೂ ಟ್ರಸ್ಟಿಗಳು ಮುಂದಾಗಿರುವ ಸೂಚನೆಗಳು ದೊರಕಿವೆ. ವಚನಾನಂದ ಸ್ವಾಮೀಜಿ ನಂತರ ಮನಗುಳಿ ಸಂಗನಬಸವ ಸ್ವಾಮೀಜಿಯನ್ನು ಪೀಠಾಧಿಪತಿಯಾಗಿ ನೇಮಿಸುವ ಬಗ್ಗೆ ಅಂತಿಮ ನಿರ್ಧಾರ ಏನಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಪದತ್ಯಾಗಕ್ಕೂ ಸಿದ್ಧ?: ಮುಂದೆ ದಲಿತರು ಸಿಎಂ ಆಗಬೇಕು – ರಾಜಣ್ಣ ಸ್ಫೋಟಕ ಹೇಳಿಕೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಪುಟ ಪುನರ್‌ರಚನೆ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ ಕಾಂಗ್ರೆಸ್ ಒಳಗೆ ಭಿನ್ನ ಅಭಿಪ್ರಾಯಗಳು ಹೊರಹೊಮ್ಮುತ್ತಿವೆ. ಒಂದು ಕಡೆ ಡಿ.ಕೆ. ಶಿವಕುಮಾರ್ ಅವರಿಗೆ ಮೇ 15ರೊಳಗೆ ಹೈಕಮಾಂಡ್ ‘ಗಿಫ್ಟ್’ ನೀಡಲಿದೆ ಎಂಬ ನಿರೀಕ್ಷೆಯನ್ನು ಅವರ ಬೆಂಬಲಿಗ ಶಾಸಕರು ವ್ಯಕ್ತಪಡಿಸುತ್ತಿದ್ದರೆ,

ಇನ್ನೊಂದು ಕಡೆ ಸಿದ್ದರಾಮಯ್ಯ ಬೆಂಬಲಿಗರು ದಲಿತ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಬೇಕು ಎಂಬ ಬೇಡಿಕೆಯನ್ನು ಮುಂದಿರಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎನ್. ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ನಿರ್ಧಾರಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ. ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ನೀಡುವ ಸೂಚನೆಗಳನ್ನು ಪಾಲಿಸಲು ಅವರು ಸಿದ್ಧರಾಗಿದ್ದು, ಅಧಿಕಾರ ಮುಂದುವರಿಸಬೇಕಾದರೂ ಅಥವಾ ಪದತ್ಯಾಗ ಮಾಡಬೇಕಾದರೂ ಪಕ್ಷದ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಮುಂದಿನ ಅವಧಿಯಲ್ಲಿ ರಾಜ್ಯದಲ್ಲಿ ದಲಿತ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯವಾಗಿದೆ. ಈ ವಿಚಾರವನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ರಾಜಣ್ಣ ತಿಳಿಸಿದರು. ಇದರ ಜೊತೆಗೆ ಸಚಿವ ಸಂಪುಟ ಪುನರ್‌ರಚನೆಯೂ ಅಗತ್ಯವಿದ್ದು, ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಆಡಳಿತದಲ್ಲಿ ಬದಲಾವಣೆ ತರಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಎಂಜಿನಿಯರ್ ಮೇಲೆ ಕೆಸರು ಎರಚಿದ ಪ್ರಕರಣ: ಸಚಿವ ನಿತೇಶ್ ರಾಣೆಗೆ 1 ತಿಂಗಳ ಜೈಲು ಶಿಕ್ಷೆ

ಮುಂಬೈ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಮೇಲೆ ಕೆಸರು ಎರಚಿದ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ನಾರಾಯಣ ರಾಣೆ ಅವರಿಗೆ ಸ್ಥಳೀಯ ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಸಿಂಧುದುರ್ಗದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಈ ಪ್ರಕರಣದಲ್ಲಿ ರಾಣೆ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 ಅಡಿಯಲ್ಲಿ ದೋಷಿ ಎಂದು ಘೋಷಿಸಿದೆ. ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶಪೂರ್ವಕ ಅವಮಾನ ಮಾಡಿದರೆಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.

ನ್ಯಾಯಾಲಯವು ಒಂದು ತಿಂಗಳ ಜೈಲು ಶಿಕ್ಷೆಯ ಜೊತೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅದರಲ್ಲಿ 50 ಸಾವಿರ ರೂಪಾಯಿಗಳನ್ನು ಪೀಡಿತ ಎಂಜಿನಿಯರ್‌ಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ. ಸಾರ್ವಜನಿಕ ಪ್ರತಿನಿಧಿಗಳು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಹಾಗೂ ಸರ್ಕಾರಿ ಅಧಿಕಾರಿಗಳ ಗೌರವಕ್ಕೆ ಧಕ್ಕೆ ತರುವಂತೆ ವರ್ತಿಸಬಾರದು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸೂಚಿಸಿದೆ.

ಆದರೆ, ಶಿಕ್ಷೆ ಘೋಷಿಸಿದ ತಕ್ಷಣ ಅದನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದು, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಣೆ ಅವರಿಗೆ ಅವಕಾಶ ನೀಡಲಾಗಿದೆ. ಇದರಿಂದ ಅವರು ಸದ್ಯ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ 29 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಕರಣದ ಹಿನ್ನೆಲೆ:
2019ರಲ್ಲಿ ಮುಂಬೈ-ಗೋವಾ ಹೆದ್ದಾರಿಯ ಕಂಕಾವ್ಲಿ ಭಾಗದಲ್ಲಿ ರಸ್ತೆಯ ಗುಂಡಿಗಳು ಮತ್ತು ಮಳೆಯಿಂದ ಉಂಟಾದ ಜಲಾವೃತ ಸಮಸ್ಯೆಯಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ರಸ್ತೆ ಕಾಮಗಾರಿ ಕಳಪೆಯಾಗಿದೆ ಮತ್ತು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ ಎಂಬ ಆರೋಪ ಕೇಳಿಬಂದಿತ್ತು.

ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನಿತೇಶ್ ರಾಣೆ, ತಮ್ಮ ಬೆಂಬಲಿಗರೊಂದಿಗೆ ಸೇರಿ ಎನ್‌ಎಚ್‌ಎಐ ಎಂಜಿನಿಯರ್ ಮೇಲೆ ಕೆಸರು ಎರಚಿ ಪ್ರತಿಭಟನೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

ಭೀಕರ ಅಗ್ನಿ ಅವಘಡ: ಪ್ಲಾಸ್ಟಿಕ್ ಗೋಡೌನ್ ಭಸ್ಮ, ಪಿಜಿಯಲ್ಲಿದ್ದ ಯುವತಿಯರು ಕೂದಲೆಳೆ ಅಂತರದಲ್ಲಿ ಪಾರು!

0

ಬೆಂಗಳೂರು: ರಾಜಧಾನಿಯ ನಂದಿನಿ ಲೇಔಟ್ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಪ್ಲಾಸ್ಟಿಕ್ ಗೋಡೌನ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಲೇಡಿಸ್ ಪಿಜಿಗೂ ವ್ಯಾಪಿಸಿದ ಪರಿಣಾಮ ಹಲವಾರು ಯುವತಿಯರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಂದಿನಿ ಲೇಔಟ್ ವ್ಯಾಪ್ತಿಯಲ್ಲಿರುವ ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಪ್ಲಾಸ್ಟಿಕ್ ವಸ್ತುಗಳಿರುವುದರಿಂದ ಅದು ಕ್ಷಣಾರ್ಧದಲ್ಲಿ ಭಾರೀ ಪ್ರಮಾಣದಲ್ಲಿ ಹಬ್ಬಿತು. ಬೆಂಕಿಯ ತೀವ್ರತೆಗೆ ಅಕ್ಕಪಕ್ಕದ ಮನೆಗಳಿಗೂ ಜ್ವಾಲೆಗಳು ತಲುಪಿದ್ದು, ಮನೆಯ ಮುಂಭಾಗದ ಮರಗಳು ಹಾಗೂ ಕಬ್ಬಿಣದ ಗೇಟ್‌ಗಳೂ ಹೊತ್ತಿ ಉರಿದವು.

ಗೋಡೌನ್ ಪಕ್ಕದಲ್ಲೇ ಸುಮಾರು 50ಕ್ಕೂ ಹೆಚ್ಚು ಯುವತಿಯರು ವಾಸಿಸುತ್ತಿದ್ದ ಲೇಡಿಸ್ ಪಿಜಿ ಇದ್ದು, ದಟ್ಟ ಹೊಗೆ ಹಾಗೂ ಬೆಂಕಿಯ ಉರಿ ಪಿಜಿಯೊಳಗೂ ಪ್ರವೇಶಿಸುತ್ತಿದ್ದಂತೆ ಯುವತಿಯರು ಭಯಭೀತರಾದರು. ಹೊರಬರುವ ದಾರಿಯಿಲ್ಲದೆ ಆತಂಕಗೊಂಡ ಕೆಲವರು ಮೊದಲ ಮಹಡಿಯಿಂದ ಕೆಳಗೆ ಜಿಗಿದು ಪಾರಾಗಿದ್ದು, ಇನ್ನೂ ಕೆಲವರು ಪಿಜಿಯ ಕಾಂಪೌಂಡ್ ಗೋಡೆ ಹಾರಿ ಹೊರಬಂದಿದ್ದಾರೆ.

ಈ ವೇಳೆ ಜಿಗಿಯುವ ಹಾಗೂ ಗೋಡೆ ಹಾರುವ ಸಂದರ್ಭ ಕೆಲವು ಯುವತಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಬೆಂಕಿಯ ತೀವ್ರತೆಗೆ ಗೋಡೌನ್ ಸಂಪೂರ್ಣವಾಗಿ ಭಸ್ಮವಾಗಿದೆ. ಈ ಘಟನೆ ತಡರಾತ್ರಿ ಸ್ಥಳೀಯರಲ್ಲಿ ಆತಂಕ ಮೂಡಿಸಿತು.

ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಂದಿನಿ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ಬಿಸಿಗೆ ತತ್ತರ: ಎಸಿ-ಕೂಲರ್ʼಗಳಿಗೆ ಭಾರೀ ಬೇಡಿಕೆ, ಮಣ್ಣಿನ ಮಡಿಕೆಗಳಿಗೂ ಹೆಚ್ಚಿದ ಕ್ರೇಜ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಸುಡುವ ಸೆಕೆಯಿಂದ ಬೇಸತ್ತ ನಗರದ ಜನರು ಇದೀಗ ತಂಪಾಗಿರಲು ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಮಣ್ಣಿನ ಉತ್ಪನ್ನಗಳತ್ತ ಮುಖ ಮಾಡುತ್ತಿದ್ದಾರೆ.

ಏಪ್ರಿಲ್ ಆರಂಭದಲ್ಲೇ ಬಿಸಿಲಿನ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ, ಜನರು ಎಸಿ, ಏರ್ ಕೂಲರ್ ಹಾಗೂ ಮಣ್ಣಿನ ಮಡಿಕೆಗಳನ್ನು ಖರೀದಿಸಲು ಮಾರುಕಟ್ಟೆಗಳಿಗೆ ಧಾವಿಸುತ್ತಿದ್ದಾರೆ. ನಗರದ ಎಲೆಕ್ಟ್ರಾನಿಕ್ ಶೋರೂಮ್‌ಗಳಲ್ಲಿ ಎಸಿ ಮತ್ತು ಕೂಲರ್‌ಗಳಿಗೆ ಭಾರೀ ಬೇಡಿಕೆ ಕಂಡುಬರುತ್ತಿದೆ. ಫ್ಯಾನ್ ಇದ್ದರೂ ಬಿಸಿಲಿನ ತಾಪದಿಂದ ಬಿಡುವು ಸಿಗದ ಕಾರಣ, ಗ್ರಾಹಕರು ತಮ್ಮ ಬಜೆಟ್‌ಗೆ ತಕ್ಕಂತೆ ಉಪಕರಣಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಆದರೆ, ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಲವು ಶೋರೂಮ್‌ಗಳಲ್ಲಿ ಸ್ಟಾಕ್ ಖಾಲಿಯಾಗಿದ್ದು, ಹೊಸ ಉಪಕರಣಗಳಿಗಾಗಿ ಕನಿಷ್ಠ ಒಂದು ವಾರ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದೆಡೆ, ಪರಿಸರ ಸ್ನೇಹಿ ಮಣ್ಣಿನ ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಉಂಟಾಗಿದೆ. ‘ಬಡವರ ಫ್ರಿಡ್ಜ್’ ಎಂದೇ ಪ್ರಸಿದ್ಧವಾದ ಮಣ್ಣಿನ ಮಡಿಕೆಗಳು, ಜಗ್ಗುಗಳು ಹಾಗೂ ಬಾಟಲಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಆರೋಗ್ಯದ ದೃಷ್ಟಿಯಿಂದ ಮಡಿಕೆ ನೀರು ಉತ್ತಮವೆಂಬ ಕಾರಣದಿಂದ ಜನರು ಅದನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ.

ಬೇಡಿಕೆಗೆ ಅನುಗುಣವಾಗಿ ಪೂರೈಕೆ ಸಾಧ್ಯವಾಗದಿದ್ದರೂ, ಮಡಿಕೆ ತಯಾರಕರು ಹಾಗೂ ವ್ಯಾಪಾರಿಗಳು ಉತ್ತಮ ವ್ಯಾಪಾರದಿಂದ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಬಿಸಿಲಿನ ತೀವ್ರತೆಯ ನಡುವೆ ತಂಪಾಗಿರಲು ಜನರು ವಿಭಿನ್ನ ಆಯ್ಕೆಗಳನ್ನು ಹುಡುಕುತ್ತಿರುವುದು ಸ್ಪಷ್ಟವಾಗಿದೆ.

ಕೆಂಗೇರಿ ಚಲ್ಲಘಟ್ಟದಲ್ಲಿ ಮನೆ ತೆರವುಗೆ ಹೈಕೋರ್ಟ್ ಬ್ರೇಕ್: ವಿಕಲಚೇತನರ ಪರ ಮಧ್ಯಂತರ ರಕ್ಷಣೆ

ಬೆಂಗಳೂರು: ನಗರದ ಕೆಂಗೇರಿ ಹೋಬಳಿಯ ಚಲ್ಲಘಟ್ಟ ಗ್ರಾಮದ ಸರ್ವೇ ನಂಬರ್ 13ರಲ್ಲಿ ವಿಕಲಚೇತನರು ನಿರ್ಮಿಸಿರುವ ಮನೆ ಹಾಗೂ ಶೆಡ್‌ಗಳನ್ನು ತೆರವುಗೊಳಿಸುವ ಕ್ರಮಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಬಿಡಿಎ ಸಹಾಯಕ ಕಾರ್ಯಕಾರಿ ಎಂಜಿನಿಯರ್ ನೀಡಿದ್ದ ತೆರವು ನೋಟಿಸ್ ರದ್ದುಪಡಿಸುವಂತೆ ಮಾರುತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅದರ ಅಧ್ಯಕ್ಷ ಎಂ.ಜೆ. ರಂಗಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಅವರ ಪೀಠ ಈ ಮಧ್ಯಂತರ ಆದೇಶ ನೀಡಿದೆ. ಜೊತೆಗೆ ರಾಜ್ಯ ಸರ್ಕಾರ ಹಾಗೂ ಬಿಡಿಎ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಲಾಗಿದೆ.

ನ್ಯಾಯಪೀಠವು, ಸಂಬಂಧಿತ ಮನವಿ ಕುರಿತು ಸೂಕ್ತ ಆದೇಶ ಹೊರಬರುವವರೆಗೆ ಅರ್ಜಿದಾರರನ್ನು ಜಾಗದಿಂದ ತೆರವುಗೊಳಿಸಬಾರದು ಎಂದು ಸ್ಪಷ್ಟಪಡಿಸಿದೆ. ಬಿಡಿಎ ನೀಡಿದ ನೋಟಿಸ್ ಹಿಂಪಡೆಯುವಂತೆ ಅರ್ಜಿದಾರರು ಈಗಾಗಲೇ 2026ರ ಏಪ್ರಿಲ್ 15ರಂದು ಮನವಿ ಸಲ್ಲಿಸಿರುವುದನ್ನೂ ನ್ಯಾಯಪೀಠ ಗಮನಕ್ಕೆ ತೆಗೆದುಕೊಂಡಿದೆ.

ಪ್ರಕರಣದ ಹಿನ್ನೆಲೆ:
ವಿಕಲಚೇತನರಿಗೆ ನಿವೇಶನ ಒದಗಿಸುವ ಉದ್ದೇಶದಿಂದ 2007ರಲ್ಲಿ ಅರ್ಜಿದಾರ ಸಂಘವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಬಳಿಕ ಆಶ್ರಯ ಯೋಜನೆಯಡಿ 2020ರ ಜನವರಿ 6ರಂದು ಐದು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆ ಜಾಗವನ್ನು ಸಂಘದ ಸುಪರ್ದಿಗೆ ನೀಡಲಾಗಿದ್ದು, ಕಂದಾಯ ದಾಖಲೆಗಳನ್ನೂ ಸಂಘದ ಹೆಸರಿಗೆ ಮಾಡಲಾಗಿದೆ.

ನಂತರ ಆ ಜಾಗದಲ್ಲಿ 20×30 ಅಡಿ ವಿಸ್ತೀರ್ಣದ 230 ವಸತಿ ನಿವೇಶನಗಳನ್ನು ನಿರ್ಮಿಸಲಾಗಿದ್ದು, ತಹಶೀಲ್ದಾರ್ ಅನುಮೋದನೆ ಸಹ ಪಡೆದಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ 230 ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರಗಳನ್ನು ವಿತರಿಸಿದೆ. ಫಲಾನುಭವಿಗಳು ಆಸ್ತಿಗಳ ಮೇಲೆ ತೆರಿಗೆ ಪಾವತಿಸುತ್ತಾ ವಾಸಿಸುತ್ತಿದ್ದಾರೆ.

ಇದೀಗ ಈ ಜಾಗ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸೇರಿದೆ ಎಂದು ಹೇಳಿ ಬಿಡಿಎ ಅಧಿಕಾರಿಗಳು ಮನೆ-ಶೆಡ್ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ರಾಜ್ಯ ಸರ್ಕಾರದಿಂದ ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ಕರೆಂಟ್ ಬಿಲ್ ಹೆಸರು ಬದಲಾವಣೆ ಇನ್ನೂ ಸುಲಭ!

ಬೆಂಗಳೂರು: ವಿದ್ಯುತ್ ಗ್ರಾಹಕರಿಗೆ ರಾಜ್ಯ ಇಂಧನ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಈಗ ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಸುಲಭಗೊಳಿಸಲಾಗಿದೆ.

ಇಂಧನ ಇಲಾಖೆ ಹೊಸ ಲಿಂಕ್ ಬಿಡುಗಡೆ ಮಾಡಿದ್ದು, ಮನೆಯಲ್ಲೇ ಕುಳಿತು ಹೆಸರು ಬದಲಾವಣೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ. ಇಲ್ಲಿಯವರೆಗೆ ಮನೆ ಅಥವಾ ಕಟ್ಟಡ ಖರೀದಿ ಮಾಡಿದ ನಂತರ ವಿದ್ಯುತ್ ಬಿಲ್‌ನ ಹೆಸರು ಬದಲಾಯಿಸಲು ಬೆಸ್ಕಾಂ ಕಚೇರಿಗೆ ಹಲವಾರು ಬಾರಿ ತೆರಳಬೇಕಾಗುತ್ತಿತ್ತು. ಇದೀಗ ಈ ಹೊಸ ಆನ್‌ಲೈನ್ ವ್ಯವಸ್ಥೆಯಿಂದ ಆ ತೊಂದರೆ ನಿವಾರಣೆಯಾಗಿದ್ದು, ಈಗಾಗಲೇ 5,000ಕ್ಕೂ ಹೆಚ್ಚು ಗ್ರಾಹಕರು ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಹೆಸರು ಬದಲಾವಣೆ ಮಾಡುವ ವಿಧಾನ:

ಬೆಸ್ಕಾಂ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.

“ಜನಸ್ನೇಹಿ ವಿದ್ಯುತ್ ಸೇವೆಗಳು” ವಿಭಾಗದಲ್ಲಿ “ಒನರ್‌ಶಿಪ್ ನೇಮ್ ಚೆಂಜ್” ಆಯ್ಕೆ ಮಾಡಬೇಕು.

ಅಗತ್ಯ ವಿವರಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.

ಅಗತ್ಯ ದಾಖಲೆಗಳು:

ಆಧಾರ್ ಕಾರ್ಡ್

ಮಾರಾಟ ಪತ್ರ (Sale Deed)

ತೆರಿಗೆ ಪಾವತಿ ರಸೀದಿ

ಹಿಂದಿನ ಮಾಲೀಕರಿಂದ ಎನ್‌ಒಸಿ

ಇತ್ತೀಚಿನ ವಿದ್ಯುತ್ ಬಿಲ್

ವಿದ್ಯುತ್ ಪೂರೈಕೆ ಒಪ್ಪಂದ

ನಷ್ಟ ಪರಿಹಾರ ಬಾಂಡ್

ಅರ್ಜಿ ಪತ್ರ

 ಫೋಟೋ.

ಈ ಹೊಸ ವ್ಯವಸ್ಥೆಯಿಂದ ಸಮಯ ಹಾಗೂ ಶ್ರಮ ಉಳಿತಾಯವಾಗಲಿದ್ದು, ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!