ರಾಯಚೂರು: ನಗರದ ಐಬಿ ರಸ್ತೆಯ ಮನೆಯಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಈ ಸಂಬಂಧ ಪತಿಯ ಮನೆಯವರೇ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಮೃತಳನ್ನು ವಿದ್ಯಾ (30) ಎಂದು ಗುರುತಿಸಲಾಗಿದೆ. ಪತಿ ಮಂಜುನಾಥ ಹಾಗೂ ಆತನ ಕುಟುಂಬದವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ, ಪೋಷಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದ್ಯಾಳನ್ನು 2023ರ ಡಿಸೆಂಬರ್ನಲ್ಲಿ ಮಂಜುನಾಥನೊಂದಿಗೆ ವಿವಾಹ ಮಾಡಲಾಗಿತ್ತು. ಮದುವೆ ವೇಳೆ ವರದಕ್ಷಿಣೆಯಾಗಿ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ನೀಡಲಾಗಿತ್ತು. ಮದುವೆಯ ಬಳಿಕ ವಿದ್ಯಾ ರಾಯಚೂರಿನ ಪ್ರಾದೇಶಿಕ ವಿಜ್ಞಾನ ಸಂಸ್ಥೆಯಲ್ಲಿ ಪ್ರೋಗ್ರಾಂ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು.
ವಿವಾಹದ ಕೆಲವೇ ತಿಂಗಳ ನಂತರ ಪತಿ ಮದ್ಯಪಾನ ಮಾಡಿ ಹಲ್ಲೆ ಮಾಡುತ್ತಿದ್ದಾನೆ ಎಂದು ವಿದ್ಯಾ ತನ್ನ ಪೋಷಕರಿಗೆ ತಿಳಿಸಿದ್ದಳು. ಜೊತೆಗೆ, ತಾನು ಸಂಪಾದಿಸುವ ಹಣವನ್ನು ತವರು ಮನೆಗೆ ನೀಡಬಾರದು ಎಂದು ಒತ್ತಡ ಹಾಕುತ್ತಿದ್ದನು ಹಾಗೂ ಇನ್ನಷ್ಟು ಬಂಗಾರ ತರಲು ಒತ್ತಾಯಿಸುತ್ತಿದ್ದನು ಎಂಬ ಆರೋಪವೂ ಕೇಳಿಬಂದಿದೆ.
ಮಾರ್ಚ್ 29ರಂದು ಮಧ್ಯಾಹ್ನ ತಂದೆ ಮಗಳ ಕಚೇರಿಗೆ ಭೇಟಿ ನೀಡಿ ಮಾತನಾಡಿಸಿಕೊಂಡು ಬಂದಿದ್ದರು. ಆದರೆ ಅದೇ ದಿನ ಸಂಜೆ ಮಗಳ ಆತ್ಮಹತ್ಯೆ ಬಗ್ಗೆ ಪತಿ ಮಾಹಿತಿ ನೀಡಿದ್ದಾನೆ.
ಪೋಷಕರು ಮನೆಗೆ ತೆರಳಿ ನೋಡಿದಾಗ, ವಿದ್ಯಾಳ ಮೃತದೇಹ ಹಾಲ್ನಲ್ಲಿ ಇಡಲಾಗಿತ್ತು. ಇದರಿಂದ ಸಂಶಯ ವ್ಯಕ್ತಪಡಿಸಿದ ಅವರು, ಪತಿ ಮತ್ತು ಕುಟುಂಬದವರ ವಿರುದ್ಧ ಕೊಲೆ ಆರೋಪ ಮಾಡಿ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣವನ್ನು ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.