Home Blog

‘ಹಪ್ತಾ’ಗಾಗಿ ಬೆದರಿಸಿದ್ದ ರೌಡಿ: ಮಗಳ ಮದುವೆ ಮಧ್ಯೆಯೇ ಚರ್ಚ್‌ಗೆ ನುಗ್ಗಿ ಅರೆಸ್ಟ್ ಮಾಡಿದ ಪೊಲೀಸರು

0

ಕೋಲಾರ: ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ ಹಪ್ತಾ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಗಡಿಪಾರು ಶಿಕ್ಷೆಗೆ ಒಳಗಾಗಿದ್ದ ರೌಡಿಶೀಟರ್ ಸ್ಟಾನ್ಲಿಯನ್ನು ಪೊಲೀಸರು ಮಗಳ ಮದುವೆ ಮಂಟಪದಿಂದಲೇ ಬಂಧಿಸಿರುವ ಘಟನೆ ಕೆಜಿಎಫ್ ನಗರದಲ್ಲಿ ನಡೆದಿದೆ.

ಸುಸೈಪಾಳ್ಯಂ ಪ್ರದೇಶದ ಚರ್ಚ್‌ನಲ್ಲಿ ಮಗಳ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆಂಡರ್ಸನ್‌ಪೇಟೆ ಠಾಣೆ ಪೊಲೀಸರು ದಿಢೀರ್ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಿನಿಮೀಯ ಕಾರ್ಯಾಚರಣೆಯ ವಿಡಿಯೋ ಈಗ ವೈರಲ್ ಆಗಿದೆ.

ಪೊಲೀಸ್ ಮಾಹಿತಿ ಪ್ರಕಾರ, ಮದುವೆ ಪೆಂಡಾಲ್ ಹಾಗೂ ಡೆಕೋರೇಷನ್ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಸಕ್ಲೇನ್ ಎಂಬ ಉದ್ಯಮಿಗೆ ಸ್ಟಾನ್ಲಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ. ‘ಮಗಳ ಮದುವೆಗೆ ಹಣ ಕೊಡಲೇಬೇಕು’ ಎಂದು ಒತ್ತಡ ಹೇರುತ್ತಿದ್ದಾನೆ ಎಂದು ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದರು.

ಈಗಾಗಲೇ ಗಡಿಪಾರು ಆಗಿದ್ದ ಸ್ಟಾನ್ಲಿ ಕಾನೂನು ಉಲ್ಲಂಘಿಸಿ ಮತ್ತೆ ನಗರದೊಳಗೆ ಪ್ರವೇಶಿಸಿದ್ದಲ್ಲದೆ, ಸಾರ್ವಜನಿಕರಿಗೆ ಕಿರುಕುಳ ನೀಡಿ ಹಪ್ತಾ ವಸೂಲಿಗೆ ಇಳಿದಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.

ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ಸೂಚನೆ ಮೇರೆಗೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಚರ್ಚ್‌ಗೆ ನುಗ್ಗಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

“ಇದೇ ಕೊನೆಯ ಅವಕಾಶ”: GBA ಚುನಾವಣೆಗೆ 3 ತಿಂಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ಕಾಲಾವಕಾಶ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಜಿಬಿಎ ಚುನಾವಣೆಯನ್ನು ನಡೆಸಲು ಆಗಸ್ಟ್ 31ರವರೆಗೆ ಮೂರು ತಿಂಗಳ ಹೆಚ್ಚುವರಿ ಸಮಯ ನೀಡಿದೆ.

ಈ ಹಿಂದೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಆದರೆ ಚುನಾವಣಾ ಸಿದ್ಧತೆಗಳಿಗೆ ಹೆಚ್ಚಿನ ಸಮಯ ಅಗತ್ಯವಿದೆ ಎಂದು ಹೇಳಿ ರಾಜ್ಯ ಸರ್ಕಾರ ಹಾಗೂ ಜಿಬಿಎ ಮುಖ್ಯ ಆಯುಕ್ತರು ಹೆಚ್ಚುವರಿ ಗಡುವು ಕೋರಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. “ಚುನಾವಣೆ ನಡೆಸಲು ಅಗತ್ಯ ಬಜೆಟ್ ಮೀಸಲಿಡಲಾಗಿದೆ. ಆದರೆ ಸಿಬ್ಬಂದಿ ಕೊರತೆ ಸೇರಿದಂತೆ ಕೆಲವು ಆಡಳಿತಾತ್ಮಕ ಸಮಸ್ಯೆಗಳಿವೆ. ಹೀಗಾಗಿ 60 ದಿನಗಳ ಹೆಚ್ಚುವರಿ ಕಾಲಾವಕಾಶ ಅಗತ್ಯವಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದೇ ವೇಳೆ ಅರ್ಜಿದಾರರ ಪರ ವಕೀಲರು ಸರ್ಕಾರದ ಮನವಿಗೆ ವಿರೋಧ ವ್ಯಕ್ತಪಡಿಸಿದರು. “ಈ ಹಿಂದೆ ಹಲವಾರು ಬಾರಿ ಕಾಲಾವಕಾಶ ನೀಡಲಾಗಿದೆ. ಆದರೂ ಸರ್ಕಾರ ಚುನಾವಣೆ ನಡೆಸಲು ವಿಳಂಬ ಮಾಡುತ್ತಿದೆ. ಹೆಚ್ಚಿನ ಸಮಯ ನೀಡಬಾರದು” ಎಂದು ವಾದ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ಪೀಠ, “ಸರ್ಕಾರ ಚುನಾವಣೆಯನ್ನು ಮುಂದೂಡಲು ಯತ್ನಿಸುತ್ತಿರುವಂತೆ ಕಾಣುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿತು. ಆದರೆ ಅಂತಿಮವಾಗಿ ಆಗಸ್ಟ್ 31ರವರೆಗೆ ಗಡುವು ವಿಸ್ತರಿಸಿ, “ಇದೇ ಕೊನೆಯ ಕಾಲಾವಕಾಶ” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತು.

ರಾಜ್ಯದಲ್ಲಿ ಎಸ್‌ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿರುವುದು ಹಾಗೂ ಸಿಬ್ಬಂದಿ ಕೊರತೆ ಇರುವುದನ್ನು ರಾಜ್ಯ ಚುನಾವಣಾ ಆಯೋಗ ತನ್ನ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದೆ. ಈ ತೀರ್ಪಿನೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತೊಮ್ಮೆ ಮುಂದೂಡಲ್ಪಟ್ಟಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಹಲ್ಲೆ ಆರೋಪ: ಎಚ್. ವಿಶ್ವನಾಥ್ ವಿರುದ್ಧ FIR ದಾಖಲು

ಮೈಸೂರು:  ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ನೀಡಿದ ದೂರಿನ ಆಧಾರದ ಮೇಲೆ ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಲಾಗಿದೆ.  2013ರಲ್ಲಿ ಹೆಚ್. ವಿಶ್ವನಾಥ್ ಅವರು ಸಂಸದರಾಗಿದ್ದ ಸಂದರ್ಭದಲ್ಲಿ, ಎಂಟಿಬಿ ನಾಗರಾಜ್ ಅವರ ಮೂಲಕ ವಿಶ್ವನಾಥ್ ಹಾಗೂ ಅವರ ಪುತ್ರ ಅಮಿತ್ ದೇವರಹಟ್ಟಿ ಅವರಿಗೆ 55 ಲಕ್ಷ ರೂಪಾಯಿ ಸಾಲವಾಗಿ ನೀಡಲಾಗಿತ್ತು.

ಸಾಲ ಪಡೆದ ಹಣವನ್ನು ಹಿಂತಿರುಗಿಸುವುದಾಗಿ ಹೇಳಿದ್ದರೂ, ಹಲವು ವರ್ಷಗಳಿಂದ ಹಣ ವಾಪಸ್ ನೀಡದೇ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2026ರ ಫೆಬ್ರವರಿಯಲ್ಲಿ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ವಿಶ್ವನಾಥ್ ಇದ್ದ ವೇಳೆ, ಸಾಲದ ಹಣ ಕುರಿತು ಮಾತನಾಡಲು ಕೋಟೆಹುಂಡಿ ಮಹದೇವು ತೆರಳಿದ್ದರು. ಈ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಕೋಟೆಹುಂಡಿ ಮಹದೇವು ಮೊದಲು ದೇವರಾಜ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಿದ್ದರು. ಬಳಿಕ ನ್ಯಾಯಾಲಯದ ಮೊರೆ ಹೋಗಿ ಪ್ರಕರಣ ದಾಖಲಿಸಲು ಆದೇಶ ಪಡೆದಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಇದೀಗ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕೈ ಕೊಟ್ಟ ಪ್ರೇಯಸಿ: ಹೈಟೆನ್ಷನ್ ಕಂಬ ಏರಿ ಪ್ರೇಮಿಯ ಹುಚ್ಚಾಟ

ಆನೇಕಲ್: ಲವ್ ಬ್ರೇಕಪ್ ಹಿನ್ನೆಲೆ ಮನನೊಂದ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಭಾರೀ ಆತಂಕ ಸೃಷ್ಟಿಸಿದೆ.

ಸೋಮಶೇಖರ್ ಎಂಬ ಯುವಕ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಮದುವೆಗೆ ನಿರಾಕರಿಸಿ ದೂರವಾಗಲು ಮುಂದಾದ ಹಿನ್ನೆಲೆ ಆತ ಆಕ್ರೋಶಗೊಂಡಿದ್ದಾನೆ ಎನ್ನಲಾಗಿದೆ.

ಘಟನೆಯ ದಿನ ಮೊದಲು ಮನೆಯ ಮೇಲ್ಛಾವಣಿಯ ಶೀಟ್‌ಗಳನ್ನು ಒಡೆದು ರೌಡಿಸಂ ನಡೆಸಿದ ಆತ, ಬಳಿಕ ಸಮೀಪದ ಹೈಟೆನ್ಷನ್ ವಿದ್ಯುತ್ ಕಂಬ ಏರಿದ್ದಾನೆ. ‘ನಾನು ಪ್ರೀತಿಸಿದ ಹುಡುಗಿ ಸ್ಥಳಕ್ಕೆ ಬರಬೇಕು, ಇಲ್ಲದಿದ್ದರೆ ಕೆಳಗೆ ಇಳಿಯಲ್ಲ’ ಎಂದು ಕಂಬದ ಮೇಲಿಂದಲೇ ಕೂಗಾಡಿದ್ದಾನೆ.

ಯುವಕನ ಈ ಕೃತ್ಯದಿಂದ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ವಿದ್ಯುತ್ ಅವಘಡ ಸಂಭವಿಸುವ ಭೀತಿ ಹಿನ್ನೆಲೆ ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಯಿತು. ಬಳಿಕ ಅಧಿಕಾರಿಗಳು ಮತ್ತು ಸ್ಥಳೀಯರು ಸಾಕಷ್ಟು ಮನವೊಲಿಕೆ ನಡೆಸಿ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.

ಪ್ರೇಮ ವೈಫಲ್ಯದಿಂದ ಭಾವೋದ್ವೇಗಕ್ಕೆ ಒಳಗಾದ ಯುವಕನ ಈ ಹುಚ್ಚಾಟ ಕೆಲಕಾಲ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಿಸಿತ್ತು.

ಇರಾನ್ ಯುದ್ಧದಲ್ಲಿ ಅಮೆರಿಕಕ್ಕೆ ಭಾರೀ ಹೊಡೆತ? ‘ಆಪರೇಷನ್ ಎಪಿಕ್ ಫ್ಯೂರಿ’ಯಲ್ಲಿ 42 ಯುದ್ಧ ವಿಮಾನಗಳಿಗೆ ಹಾನಿ

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ನಡೆಸಿದ್ದ ‘ಆಪರೇಷನ್ ಎಪಿಕ್ ಫ್ಯೂರಿ’ ವೇಳೆ ಅಮೆರಿಕದ ಅತ್ಯಾಧುನಿಕ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳಿಗೆ ಭಾರೀ ಹಾನಿಯಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಅಮೆರಿಕ ಕಾಂಗ್ರೆಸ್‌ಗೆ ಸಂಬಂಧಿಸಿದ ಸಿಆರ್‌ಎಸ್ ವರದಿ ಪ್ರಕಾರ, ಕಾರ್ಯಾಚರಣೆಯ ಅವಧಿಯಲ್ಲಿ ಕನಿಷ್ಠ 42 ಯುದ್ಧ ವಿಮಾನಗಳು ನಾಶವಾಗಿವೆ ಅಥವಾ ಗಂಭೀರ ಹಾನಿಗೊಳಗಾಗಿವೆ ಎನ್ನಲಾಗಿದೆ.

ವರದಿಯ ಪ್ರಕಾರ, ಅಮೆರಿಕ 4 F-15E ಸ್ಟ್ರೈಕ್ ಈಗಲ್ ಫೈಟರ್ ಜೆಟ್‌, 1 F-35A ಲೈಟ್ನಿಂಗ್ II, 7 KC-135 ಸ್ಟ್ರಾಟೋಟ್ಯಾಂಕರ್‌, 2 MC-130J ಕಮಾಂಡೋ ವಿಮಾನ, 1 E-3 ಸೆಂಟ್ರಿ AWACS, 1 HH-60W ಹೆಲಿಕಾಪ್ಟರ್ ಸೇರಿದಂತೆ ಹಲವು ಪ್ರಮುಖ ಯುದ್ಧೋಪಕರಣಗಳನ್ನು ಕಳೆದುಕೊಂಡಿದೆ. ಜೊತೆಗೆ 24 MQ-9 ರೀಪರ್ ಡ್ರೋನ್ ಹಾಗೂ 1 MQ-4C ಟ್ರೈಟಾನ್ ಕಣ್ಗಾವಲು ಡ್ರೋನ್ ಕೂಡ ನಾಶವಾಗಿವೆ ಎಂದು ಹೇಳಲಾಗಿದೆ.

ಈ ಹಾನಿಗೆ ಇರಾನ್ ಪ್ರತಿದಾಳಿ, ತಾಂತ್ರಿಕ ವೈಫಲ್ಯ ಹಾಗೂ ಯುದ್ಧ ಪರಿಸ್ಥಿತಿಯಲ್ಲಿನ ಗೊಂದಲ ಪ್ರಮುಖ ಕಾರಣಗಳಾಗಿರಬಹುದು ಎಂದು ವರದಿ ಉಲ್ಲೇಖಿಸಿದೆ. ಅಮೆರಿಕ ರಕ್ಷಣಾ ಇಲಾಖೆ ಇನ್ನೂ ಸಂಪೂರ್ಣ ಅಧಿಕೃತ ಲೆಕ್ಕ ನೀಡಿಲ್ಲ ಎಂಬ ಸಂಗತಿಯೂ ವರದಿಯಲ್ಲಿ ಉಲ್ಲೇಖವಾಗಿದೆ.

ಪೆಂಟಗನ್ ಕಾರ್ಯಕಾರಿ ನಿಯಂತ್ರಕ ಜೂಲ್ಸ್ ಡಬ್ಲ್ಯೂ ಹರ್ಸ್ಟ್ III, ಇರಾನ್ ವಿರುದ್ಧದ ಯುದ್ಧ ಕಾರ್ಯಾಚರಣೆಯ ವೆಚ್ಚ ಈಗಾಗಲೇ 29 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಅಮೆರಿಕ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ. ವಿಮಾನಗಳ ದುರಸ್ತಿ ಮತ್ತು ಬದಲಿ ವ್ಯವಸ್ಥೆ ವೆಚ್ಚವೇ ದೊಡ್ಡ ಹೊರೆ ಆಗಿದೆ ಎಂದು ಅವರು ಹೇಳಿದ್ದಾರೆ.

‘ಆಪರೇಷನ್ ಎಪಿಕ್ ಫ್ಯೂರಿ’ ಅಮೆರಿಕದ ಸೈನಿಕ ಸಾಮರ್ಥ್ಯಕ್ಕೂ ಆರ್ಥಿಕತೆಯ ಮೇಲೂ ಭಾರೀ ಪರಿಣಾಮ ಬೀರಿದೆ ಎಂಬ ಚರ್ಚೆ ಇದೀಗ ಜಾಗತಿಕ ಮಟ್ಟದಲ್ಲಿ ಜೋರಾಗಿದೆ.

ನನ್ನ ನಷ್ಟದಿಂದ ಹಣ ಸಂಪಾದನೆ ಮಾಡಬೇಡಿ: ಪಾಪರಾಜಿಗಳ ಮೇಲೆ ಸಲ್ಮಾನ್ ಖಾನ್ ಗರಂ

ಆಸ್ಪತ್ರೆ ಆವರಣದಲ್ಲಿ ಪಾಪರಾಜಿಗಳ ವರ್ತನೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಪ್ತರೊಬ್ಬರನ್ನು ಭೇಟಿ ಮಾಡಿ ಹೊರಬರುತ್ತಿದ್ದ ವೇಳೆ ಫೋಟೋಗ್ರಾಫರ್‌ಗಳು ‘ಮಾತೃಭೂಮಿ’ ಸಿನಿಮಾ ಹೆಸರನ್ನು ಕೂಗಿ ಅವರ ಖಾಸಗಿತನಕ್ಕೆ ಅಡ್ಡಿಪಡಿಸಿದ್ದು, ಈ ವೇಳೆ ಸಲ್ಮಾನ್ ಕೋಪಗೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಸಲ್ಮಾನ್ ಖಾನ್ ಪಾಪರಾಜಿಗಳ ಬಳಿ ತೆರಳಿ, ‘ನಿಮಗೆ ತಲೆ ಕೆಟ್ಟಿದೆಯೇ?’ ಎಂದು ಪ್ರಶ್ನಿಸುತ್ತಿರುವುದು ಕಾಣಿಸಿಕೊಂಡಿದೆ. ಘಟನೆ ಬಳಿಕ ಅವರು ಸೋಶಿಯಲ್ ಮೀಡಿಯಾದಲ್ಲೂ ಸಿಡಿದೆದ್ದಿದ್ದಾರೆ.

‘ಆಸ್ಪತ್ರೆಯ ಮುಂದೆ ನಿಂತು ನನ್ನ ನೋವನ್ನು ಕಂಟೆಂಟ್ ಮಾಡಿಕೊಳ್ಳಬೇಡಿ. ನನ್ನ ನಷ್ಟದಿಂದ ಹಣ ಸಂಪಾದನೆ ಮಾಡಬೇಡಿ. ನಿಮಗೆ ಸಿನಿಮಾ ಮುಖ್ಯವೇ ಅಥವಾ ಮನುಷ್ಯನ ಜೀವ ಮುಖ್ಯವೇ?’ ಎಂದು ಸಲ್ಮಾನ್ ಖಾನ್ ಪ್ರಶ್ನಿಸಿದ್ದಾರೆ.

ಅಲ್ಲದೆ, ‘ಮುಂದಿನ ಬಾರಿ ನನ್ನ ಕಷ್ಟದ ಸಮಯದಲ್ಲಿ ಇದೇ ರೀತಿ ವರ್ತಿಸಿ ನೋಡಿ. ನಾನು ಸುಮ್ಮನಿರುವ ವ್ಯಕ್ತಿ ಅಲ್ಲ’ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಿನ್ನೆಲೆ ಸಲ್ಮಾನ್ ಖಾನ್ ಕಠಿಣ ಭದ್ರತೆಯಲ್ಲಿ ಸಂಚರಿಸುತ್ತಿದ್ದಾರೆ. ಈ ನಡುವೆಯೇ ಆಸ್ಪತ್ರೆ ಮುಂದೆ ನಡೆದ ಘಟನೆ ಬಾಲಿವುಡ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸದ್ಯ ಸಲ್ಮಾನ್ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಹಾಗೂ ನಯನತಾರಾ ಜೊತೆ ನಟಿಸುತ್ತಿರುವ ‘SVC63’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ನೇತ್ರಾವತಿ ನದಿಯಲ್ಲಿ ಈಜಲು ಹೋಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು!

ಮಂಗಳೂರು: ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಬೆಳ್ತಂಗಡಿ ತಾಲೂಕಿನ ಪಜಿರಡ್ಕ ಸಮೀಪ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶ್ರೀಪೂರ್ಣ (21) ಎಂದು ಗುರುತಿಸಲಾಗಿದೆ. ಅವರು ಉಜಿರೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದರು.

ಮಂಗಳವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಶ್ರೀಪೂರ್ಣ ಸೇರಿದಂತೆ ಏಳು ಮಂದಿ ಸ್ನೇಹಿತರ ತಂಡ ನೇತ್ರಾವತಿ ನದಿಗೆ ಈಜಲು ತೆರಳಿತ್ತು. ವೇಳೆ ಶ್ರೀಪೂರ್ಣ ನೀರಿನಲ್ಲಿ ಮುಳುಗಿದರೆಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಪಡೆ ಶೋಧ ಕಾರ್ಯ ಆರಂಭಿಸಿದೆ. ವಿದ್ಯಾರ್ಥಿಯ ಮೃತದೇಹ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಿನಿಮೀಯ ಸ್ಟೈಲ್ ವಂಚನೆ: ಡಿಸೈನ್ ಸೆಲೆಕ್ಟ್ ನೆಪದಲ್ಲಿ ₹3 ಕೋಟಿ ಚಿನ್ನಾಭರಣ ದೋಚಿದ ಖದೀಮರು

ಬೆಂಗಳೂರು: ಹೋಲ್‌ಸೇಲ್ ದರದಲ್ಲಿ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ನಡೆದ ಈ ಹೈಟೆಕ್ ವಂಚನೆಯಲ್ಲಿ ಆರೋಪಿಗಳು ಸುಮಾರು ₹3 ಕೋಟಿ ಮೌಲ್ಯದ 1 ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ.

ನಗರತ್‌ಪೇಟೆಯಲ್ಲಿರುವ ಪ್ರಸಿದ್ಧ ‘ಮೆಹ್ತಾ ಜ್ಯುವೆಲ್ಲರಿ’ ಸಂಸ್ಥೆಯ ಮಾಲೀಕರು ಈ ವಂಚನೆ ಜಾಲದ ಬಲೆಗೆ ಬಿದ್ದಿದ್ದಾರೆ. ಪರೇಶ್ ಸೋನಿ ಎಂಬಾತ ಮೆಹ್ತಾ ಜ್ಯುವೆಲ್ಲರಿ ಮಾಲೀಕರನ್ನು ಸಂಪರ್ಕಿಸಿ, ‘ಮಾಹಿ ಎಂಟರ್‌ಪ್ರೈಸಸ್’ ಹೆಸರಿನ ಸಂಸ್ಥೆ ನಡೆಸುತ್ತಿರುವುದಾಗಿ ಹೇಳಿ, ಹೋಲ್‌ಸೇಲ್ ದರದಲ್ಲಿ ದೊಡ್ಡ ಪ್ರಮಾಣದ ಚಿನ್ನಾಭರಣಗಳ ಅಗತ್ಯವಿದೆ ಎಂದು ನಂಬಿಸಿದ್ದಾನೆ.

ಇದಕ್ಕಾಗಿ ಮಲ್ಲೇಶ್ವರಂನ ಕಚೇರಿಯೊಂದರ ಮೇಲೆ ‘ಲೋಟಸ್ ಜ್ಯುವೆಲ್ಲರಿ’ ಹಾಗೂ ‘ಮಾಹಿ ಎಂಟರ್‌ಪ್ರೈಸಸ್’ ಎಂಬ ನಕಲಿ ಬೋರ್ಡ್ ಅಳವಡಿಸಿ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.

ದೊಡ್ಡ ವ್ಯವಹಾರದ ಆರ್ಡರ್ ಇದೆ ಎಂದು ನಂಬಿದ ಜ್ಯುವೆಲ್ಲರಿ ಮಾಲೀಕರು, ತಮ್ಮ ಮ್ಯಾನೇಜರ್ ಮೂಲಕ ಸುಮಾರು 3 ಕೆಜಿ ಚಿನ್ನಾಭರಣಗಳನ್ನು ಆರೋಪಿಗಳ ಕಚೇರಿಗೆ ಕಳುಹಿಸಿದ್ದರು.

ಮ್ಯಾನೇಜರ್ ಕಚೇರಿಗೆ ತಲುಪಿದ ಬಳಿಕ ಆರೋಪಿಗಳು ಆಭರಣಗಳ ವಿನ್ಯಾಸ ಪರಿಶೀಲಿಸುವಂತೆ ನಟಿಸಿ, ಪಕ್ಕದ ಕ್ಯಾಬಿನ್‌ನಲ್ಲಿ ಕುಳಿತಿದ್ದ ಚಂದ್ರಶೇಖರ್ ಎಂಬಾತನಿಗೆ ಪಟ್ಟಿ ಸಿದ್ಧಪಡಿಸುವಂತೆ ನೀಡಿದ್ದಾರೆ.

ನಂತರ ಆಭರಣಗಳ ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಆರೋಪಿಗಳು ಪಕ್ಕದ ಕೋಣೆಗೆ ತೆರಳಿದ್ದು, ಅಲ್ಲಿಂದಲೇ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಒಳಗೆ ಹೋದವರು ಬಹಳ ಹೊತ್ತಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮ್ಯಾನೇಜರ್ ಪರಿಶೀಲನೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಶ್ಯಾಮ್, ರಾಮಚಂದ್ರ ಹಾಗೂ ಪರೇಶ್ ಸೋನಿ ವಿರುದ್ಧ ಸಂತ್ರಸ್ತ ಉದ್ಯಮಿ ದೂರು ನೀಡಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮಹಿಳೆಯರ ಸ್ವಾವಲಂಬನೆಯೇ ದೇಶದ ಅಭಿವೃದ್ಧಿಗೆ ಶಕ್ತಿ: ದೀಪಿಕಾ

ಹಗರಿಬೊಮ್ಮನಹಳ್ಳಿ: “ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಾಗ ಮಾತ್ರ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ ದೇಶದ ಅಭಿವೃದ್ಧಿಗೂ ಬಲ ಸಿಗುತ್ತದೆ” ಎಂದು ಎಸ್‌ಎಲ್‌ಆರ್ ಮೆಟಾಲಿಕ್ಸ್ ಸಂಸ್ಥೆಯ ಅಧಿಕಾರಿ ದೀಪಿಕಾ ಹೇಳಿದರು.

ಹಗರಿಬೊಮ್ಮನಹಳ್ಳಿ ತಾಲೂಕಿನ ವರದಾಪುರ ಗ್ರಾಮದಲ್ಲಿ ಎಸ್‌ಎಲ್‌ಆರ್ ಮೆಟಾಲಿಕ್ಸ್ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಆರು ತಿಂಗಳ ಉಚಿತ ಹೊಲಿಗೆ ತರಬೇತಿ ಸಮಾರೋಪ ಹಾಗೂ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸಬಲೀಕರಣ ಹೊಂದಿದಾಗ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗುತ್ತದೆ. ಆತ್ಮವಿಶ್ವಾಸದಿಂದ ಸ್ವಂತ ಉದ್ಯೋಗ ಆರಂಭಿಸಿ ಸಮಾಜದಲ್ಲಿ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಎಸ್‌ಎಲ್‌ಆರ್ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಕೆ. ಮಲ್ಲಿಕಾರ್ಜುನ ಮಾತನಾಡಿ, ಸಂಸ್ಥೆಯಿಂದ ನೀಡಲಾಗಿರುವ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸ್ವಂತ ಟೈಲರಿಂಗ್ ಅಂಗಡಿ ಆರಂಭಿಸುವುದರ ಜೊತೆಗೆ ಇತರರಿಗೂ ತರಬೇತಿ ನೀಡುವ ಮೂಲಕ ಮತ್ತಷ್ಟು ಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ಮಿತ್ರ, ರೈತ ಮಿತ್ರ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಗ್ರಾಮೀಣ ಭಾಗದ ಜನರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಲ್‌ಆರ್ ಕಂಪನಿಯ ಸಿಬ್ಬಂದಿಗಳಾದ ಮಾರುತಿ ಗೋಶಿ, ವೆಂಕಟೇಶ್, ಪಂಪಾಪತಿ, ಎಸ್‌ಡಿಎಂಸಿ ಅಧ್ಯಕ್ಷ ದುರುಗಪ್ಪ, ತರಬೇತಿ ಶಿಕ್ಷಕಿ ಸುವರ್ಣಮ್ಮ ಹಾಗೂ ತರಬೇತಿ ಪಡೆದ ಮಹಿಳೆಯರಾದ ಸೊನ್ನದ ವಸಂತ, ದುರುಗಮ್ಮ, ಉಷಾ ಸೇರಿದಂತೆ ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

“ಆರು ತಿಂಗಳ ಉಚಿತ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. ತರಬೇತಿ ಪಡೆದವರು ಸ್ವಯಂ ಉದ್ಯೋಗ ಆರಂಭಿಸಿ ತಮ್ಮ ಕುಟುಂಬದ ಆರ್ಥಿಕ ಸಂಕಷ್ಟ ನಿವಾರಿಸಿಕೊಳ್ಳಬೇಕು ಎಂದು ಎಸ್‌ಎಲ್‌ಆರ್ ಮೆಟಾಲಿಕ್ಸ್,ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಕೆ. ಮಲ್ಲಿಕಾರ್ಜುನ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆ: ತಿಂಗಳಾದರೂ ಸಿಗದ ಸುಳಿವು, ಆತಂಕದಲ್ಲಿ ಸಂಬಂಧಿಕರು

ಶಿವಮೊಗ್ಗ: ನಗರದ ಬುದ್ಧನಗರದಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಕಳೆದ ಒಂದು ತಿಂಗಳಿನಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 15ರಿಂದ ಕಾಣೆಯಾಗಿರುವ ಕುಟುಂಬಸ್ಥರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ನಾಪತ್ತೆಯಾದವರನ್ನು ಮೊಹಮ್ಮದ್ ಇಕ್ಬಾಲ್ (62), ನಸ್ರತ್ ಬಾನು (54), ಮೊಹಮ್ಮದ್ ಫಾಜಿಲ್ (35) ಹಾಗೂ ಮೊಹಮ್ಮದ್ ಆದಿಲ್ (32) ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಸಂಬಂಧಿಕರು ಅವರು ಎಲ್ಲೋ ಹೋಗಿರಬಹುದು ಎಂದುಕೊಂಡು ಕಾದು ಕುಳಿತ್ತಿದ್ದರು. ಆದರೆ ತಿಂಗಳು ಕಳೆದರೂ ಯಾವುದೇ ಮಾಹಿತಿ ಸಿಗದ ಹಿನ್ನೆಲೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಕಾರ, ಮೊಹಮ್ಮದ್ ಇಕ್ಬಾಲ್ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಹಾಗೂ ಬಿಳಿ ಮೈಬಣ್ಣ ಹೊಂದಿದ್ದಾರೆ. ನಸ್ರತ್ ಬಾನು 5.2 ಅಡಿ ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ಸೀಳು ತುಟಿಯ ಗುರುತು ಹೊಂದಿದ್ದಾರೆ.

ಇದೇ ಕುಟುಂಬದ ಮೊಹಮ್ಮದ್ ಫಾಜಿಲ್ 5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು ಹಾಗೂ ಎದೆಯ ಭಾಗದಲ್ಲಿ ಚರ್ಮಗಂಟು ಹೊಂದಿದ್ದು, ಮೊಹಮ್ಮದ್ ಆದಿಲ್ 5.4 ಅಡಿ ಎತ್ತರ, ದಪ್ಪ ಮೈಕಟ್ಟು ಮತ್ತು ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸಂಬಂಧಿಕರು ಹಾಗೂ ಪೊಲೀಸರು ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಕುಟುಂಬದ ಯಾವುದೇ ಸದಸ್ಯರ ಸುಳಿವು ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ನಾಪತ್ತೆಯಾದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ 08182-261414, 9972426144, 9480803345 ಅಥವಾ 6264571710 ಸಂಖ್ಯೆಗೆ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

error: Content is protected !!