Home Blog

ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ 4 ದಿನ ಬಂದ್: ಪರ್ಯಾಯ ಮಾರ್ಗ ಘೋಷಣೆ!

ಬೆಂಗಳೂರು: ನಗರದಲ್ಲಿ ಪ್ರಮುಖ ಸಂಚಾರ ಮಾರ್ಗವಾಗಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಅನ್ನು ನಾಲ್ಕು ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಫ್ಲೈಓವರ್ ಕೇಬಲ್ ಅಳವಡಿಕೆ ದುರಸ್ತಿ ಮತ್ತು ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆ, ಮೇ 5ರ ಬೆಳಗ್ಗೆ 5 ಗಂಟೆಯಿಂದ ಮೇ 8ರ ಬೆಳಗ್ಗೆ 11 ಗಂಟೆಯವರೆಗೆ ಸಂಚಾರ ನಿರ್ಬಂಧ ಜಾರಿಯಾಗಲಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದ್ದು, ಫ್ಲೈಓವರ್‌ನ ಎರಡೂ ಬದಿಗಳಲ್ಲೂ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ವಾಹನ ಸವಾರರು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ಮನವಿ ಮಾಡಿದೆ.

ಪರ್ಯಾಯ ಮಾರ್ಗಗಳು:

ನೆಲಮಂಗಲದಿಂದ ಬೆಂಗಳೂರಿಗೆ:
ಕೆನ್ನಮೆಟಲ್ ಫ್ಯಾಕ್ಟರಿ ಬಳಿ ಫ್ಲೈಓವರ್ ಕೆಳಭಾಗದ ಎನ್‌ಎಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ → 8ನೇ ಮೈಲಿ → ದಾಸರಹಳ್ಳಿ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಎಸ್.ಆರ್.ಎಸ್ ಜಂಕ್ಷನ್ → ಗೊರಗುಂಟೆಪಾಳ್ಯ → ಜಾಲಹಳ್ಳಿ ಕ್ರಾಸ್

ಸಿ.ಎಂ.ಟಿ.ಐದಿಂದ ನೆಲಮಂಗಲಕ್ಕೆ:
ಫ್ಲೈಓವರ್ ಕೆಳಭಾಗದ ಎನ್‌ಎಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ → ಎಸ್.ಆರ್.ಎಸ್ ಜಂಕ್ಷನ್ → ಪೊಲೀಸ್ ಠಾಣೆ ಜಂಕ್ಷನ್ → ಜಾಲಹಳ್ಳಿ ಕ್ರಾಸ್ → ದಾಸರಹಳ್ಳಿ → 8ನೇ ಮೈಲಿ → ರ್ಲೆಜಿ ಟೋಲ್

ಗಮನಾರ್ಹವಾಗಿ, ಇದೇ ಕಾಮಗಾರಿಗಾಗಿ ಫ್ಲೈಓವರ್ ಅನ್ನು ಏಪ್ರಿಲ್ 13ರಿಂದ 5 ದಿನ ಬಂದ್ ಮಾಡುವ ಯೋಜನೆ ಮೊದಲು ಘೋಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ಮುಂದೂಡಲ್ಪಟ್ಟಿದ್ದು, ಸಂಚಾರವನ್ನು ತಾತ್ಕಾಲಿಕವಾಗಿ ಮುಂದುವರಿಸಲಾಗಿತ್ತು. ಈಗ ಅಂತಿಮ ಹಂತದ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆ, ನಗರದಲ್ಲಿ ಟ್ರಾಫಿಕ್ ಒತ್ತಡ ಹೆಚ್ಚಾಗುವ ಸಾಧ್ಯತೆ ಇದ್ದು, ವಾಹನ ಸವಾರರು ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳುವುದು ಅಗತ್ಯ.

ನವಿಲುಗಳ ಬಳಿಕ ಕೋಳಿಗಳ ಸಾವು: ತುಮಕೂರಿನಲ್ಲಿ H5N1 ಅಲರ್ಟ್, 5 ಗ್ರಾಮಗಳು ಸೀಲ್!

0

ತುಮಕೂರು: ಜಿಲ್ಲೆಯಲ್ಲಿ H5N1 ಹಕ್ಕಿಜ್ವರ ಆತಂಕ ತೀವ್ರಗೊಂಡಿದೆ. 44 ನವಿಲುಗಳ ಸಾವಿನ ನಂತರ ಈಗ ಕೋಳಿಗಳ ಸಾವು ವರದಿಯಾಗಿದ್ದು ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ಬೊಮ್ಮನಹಳ್ಳಿ ಗ್ರಾಮದ ಕೋಳಿ ಫಾರಂನಲ್ಲಿ ಒಂದೇ ವೇಳೆ ಸುಮಾರು 30 ಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿಜ್ವರ ಕೋಳಿಗಳಿಗೂ ತಗುಲಿದೆಯೇ ಎಂಬ ಅನುಮಾನ ಮೂಡಿದೆ. ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಏಪ್ರಿಲ್ 16ರಿಂದ ಆರಂಭವಾದ ನವಿಲುಗಳ ಸಾವು, ಆರಂಭದಲ್ಲಿ ಬಿಸಿಲಿನ ಪರಿಣಾಮ ಎಂದು ಭಾವಿಸಲಾಗಿತ್ತು. ಆದರೆ ಎಫ್‌ಎಸ್‌ಎಲ್ ವರದಿ ಹಕ್ಕಿಜ್ವರವನ್ನೇ ದೃಢಪಡಿಸಿತು.

ಇದೀಗ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದ್ದು, ಕಲ್ಲಳ್ಳಿ, ಕೋಡಿಹಳ್ಳಿ, ಹುಣ್ಣೆನಹಳ್ಳಿ, ಬೊಮ್ಮನಹಳ್ಳಿ, ಬೈರಸಂದ್ರ ಗ್ರಾಮಗಳನ್ನು ಕಂಟೋನ್ಮೆಂಟ್ ಜೋನ್ ಆಗಿ ಘೋಷಿಸಲಾಗಿದೆ. ಚಿಕನ್ ಅಂಗಡಿಗಳಿಗೆ ತಾತ್ಕಾಲಿಕ ಬೀಗ ಹಾಕಲಾಗಿದ್ದು, ಜನರಿಗೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಸಾವು ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಒಟ್ಟಿನಲ್ಲಿ, ತುಮಕೂರಿನಲ್ಲಿ ಹಕ್ಕಿಜ್ವರ ಪರಿಸ್ಥಿತಿ ನಿಯಂತ್ರಣದಲ್ಲಿರಿಸಲು ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದು, ಜನರು ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕ.

ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ! ಕ್ಯಾನ್ಸರ್ ಬಗ್ಗೆ ಇರಲಿ ಎಚ್ಚರ

ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.

ವೈದ್ಯರ ಪ್ರಕಾರ, ಜನರ ದೈನಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಲ್ಲಿನ ಬದಲಾವಣೆಗಳು ಈ ಅಪಾಯವನ್ನು ಹೆಚ್ಚಿಸುತ್ತಿವೆ.

ತಂಬಾಕು ಬಳಕೆ ಮತ್ತು ಧೂಮಪಾನವು ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದ್ದು, ಇದರಿಂದ ಬಾಯಿ, ಶ್ವಾಸಕೋಶ ಹಾಗೂ ಗಂಟಲಿನ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ. ಪ್ಯಾಸಿವ್ ಸ್ಮೋಕಿಂಗ್‌ನಲ್ಲೂ ಈ ಅಪಾಯ ತಪ್ಪುವುದಿಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.

ಇದಲ್ಲದೆ, ಪ್ರಾಸೆಸ್ಡ್ ಮತ್ತು ಪ್ಯಾಕೇಜ್ಡ್ ಆಹಾರಗಳ ಹೆಚ್ಚಿದ ಬಳಕೆ, ಅವುಗಳಲ್ಲಿ ಇರುವ ಕೆಮಿಕಲ್ಸ್ ಮತ್ತು ಪ್ರಿಸರ್ವೇಟಿವ್ಸ್ ದೇಹದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೆಚ್ಚು ಎಣ್ಣೆಯಲ್ಲಿ ತಯಾರಿಸಿದ ಅಥವಾ ಸುಟ್ಟ ಆಹಾರ ಪದಾರ್ಥಗಳ ಸೇವನೆಯೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಬಿಸಿ ಆಹಾರವನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸುವುದು ಹಾನಿಕಾರಕ ರಾಸಾಯನಿಕಗಳನ್ನು ದೇಹಕ್ಕೆ ಸೇರಿಸಬಹುದು.

ನಿದ್ರೆ ಕೊರತೆ ಹಾಗೂ ಮಾನಸಿಕ ಒತ್ತಡವೂ ಪ್ರಮುಖ ಕಾರಣಗಳಾಗಿವೆ. ರಾತ್ರಿ ತಡವಾಗಿ ಮಲಗುವುದು, ಹೆಚ್ಚು ಸ್ಕ್ರೀನ್ ಬಳಕೆ ಹಾಗೂ ಅನಿಯಮಿತ ದಿನಚರಿ ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ವ್ಯಾಯಾಮದ ಕೊರತೆಯೂ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ತಜ್ಞರ ಪ್ರಕಾರ, ದೀರ್ಘಕಾಲದ ದೌರ್ಬಲ್ಯ, ಅನಿರೀಕ್ಷಿತ ತೂಕ ಇಳಿಕೆ, ದೇಹದ ಯಾವುದೇ ಭಾಗದಲ್ಲಿ ಗುಡ್ಡೆ ಕಾಣಿಸಿಕೊಳ್ಳುವುದು ಅಥವಾ ನಿರಂತರ ನೋವು ಇರುವುದು ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಮೂಲಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಸಮಯಕ್ಕೆ ತಕ್ಕಂತೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಆರೋಗ್ಯ ಕಾಪಾಡಲು ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಗ್ಯಾಸ್ ಬೆಲೆ ಏರಿಕೆ ಮಾಡಿ ಸೌದೆ ಭಾಗ್ಯ ಕೊಟ್ಟ ಬಿಜೆಪಿ: ಡಿಕೆ ಶಿವಕುಮಾರ್ ವಾಗ್ದಾಳಿ!

ಬೆಂಗಳೂರು: ಗ್ಯಾಸ್ ಬೆಲೆ ಏರಿಕೆ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಗಿಯುವುದನ್ನು ಕಾಯುತ್ತಿದ್ದ ಬಿಜೆಪಿಗರು, ತಕ್ಷಣವೇ ಗ್ಯಾಸ್ ಬೆಲೆ ಹೆಚ್ಚಳ ಮಾಡಿದ್ದಾರೆ ಎಂದು ಆರೋಪಿಸಿದರು. ಸಾಮಾನ್ಯ ಜನರು ಹಾಗೂ ಕಾರ್ಮಿಕರ ಸಂಕಷ್ಟದ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಟೀಕಿಸಿದರು.

“ಗ್ಯಾಸ್ ಬೆಲೆ ಏರಿಸಿ ಇದೀಗ ‘ಸೌದೆ ಭಾಗ್ಯ’ ಕೊಡುತ್ತಿದ್ದಾರೆ. ಜನರ ಬದುಕು ಹೇಗೆ ಸಾಗಬೇಕು ಎಂಬುದನ್ನು ಕೇಂದ್ರ ಸರ್ಕಾರ ಯೋಚಿಸಬೇಕು,” ಎಂದು ಕಿಡಿಕಾರಿದರು. ಈ ವಿಚಾರದಲ್ಲಿ ಮಾಧ್ಯಮಗಳೂ ಧ್ವನಿ ಎತ್ತಬೇಕು ಎಂದು ಅವರು ಮನವಿ ಮಾಡಿದರು.

ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಕೂಡ ಪ್ರಶ್ನಿಸಿದ ಡಿಕೆ ಶಿವಕುಮಾರ್, ಅಕ್ಕಪಕ್ಕದ ರಾಷ್ಟ್ರಗಳೊಂದಿಗೆ ಸಂಬಂಧ ಸರಿಯಾಗಿಲ್ಲ ಎಂದು ಹೇಳಿದರು. ಬಡವರಿಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಸುಮಾರು ಒಂದೂವರೆ ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

“ಸಾವಿರ ರೂಪಾಯಿ ಹೆಚ್ಚಾದರೆ ಸಾಮಾನ್ಯ ಜನರು ಹೇಗೆ ಬದುಕಬೇಕು ಎಂಬುದನ್ನು ಮನಗಂಡು ನಾವು ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ. ಜನರಿಗೆ ನೆರವಾಗುವ ಹೋರಾಟವನ್ನು ಮುಂದುವರಿಸುತ್ತೇವೆ,” ಎಂದರು.

ಇದೇ ವೇಳೆ ಬಿಜೆಪಿ ನಾಯಕರಾದ ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, “ಅವರು ಕೇವಲ ಟೀಕೆ ಮಾಡುವುದಕ್ಕಷ್ಟೇ ಸೀಮಿತ. ಜನರ ಸಮಸ್ಯೆಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮಾತನಾಡುತ್ತಿದ್ದರು,” ಎಂದು ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ನಾಳೆ ಮರು ಮತದಾನ: ಚುನಾವಣಾ ಆಯೋಗ ಆದೇಶ

ಕೋಲ್ಕತ್ತಾ: ಅಕ್ರಮಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ನಾಳೆ ಮರು ಮತದಾನ ನಡೆಸಲು ಆದೇಶಿಸಿದೆ.

ಡೈಮಂಡ್ ಹಾರ್ಬರ್ ಹಾಗೂ ಮಗ್ರಹತ್ ಪಶ್ಚಿಮ ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲಿ ಅಕ್ರಮಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಗ್ರಹತ್ ಪಶ್ಚಿಮ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಮತ್ತು ಡೈಮಂಡ್ ಹಾರ್ಬರ್ ಕ್ಷೇತ್ರದ 4 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಎಲ್ಲಾ 15 ಮತಗಟ್ಟೆಗಳಲ್ಲಿ ಮತದಾನ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಒಟ್ಟಾರೆ ಶೇ. 92.47ರಷ್ಟು ಮತದಾನ ದಾಖಲಾಗಿದೆ.

ಮೇ 4ರಂದು ಮತ ಎಣಿಕೆ ನಡೆಯಲಿದ್ದು, ಮತದಾನದ ನಂತರ ಹಿಂಸಾಚಾರ ತಡೆಗಟ್ಟಲು ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ, ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಮತಪೆಟ್ಟಿಗೆಗಳನ್ನು ಪಕ್ಷದ ಪ್ರತಿನಿಧಿಗಳಿಲ್ಲದೆ ತೆರೆಯಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು.

ಈ ಆರೋಪಗಳನ್ನು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ತಳ್ಳಿಹಾಕಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಶಾಂತಿಯುತವಾಗಿ ಮರು ಮತದಾನ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಬಾಗಲಕೋಟೆಯಲ್ಲಿ ವಿಚಿತ್ರ ಘಟನೆ: ಜಾತ್ರೆ ಪಟ್ಟಿ ಹಣ ಕೊಡದ ಕುಟುಂಬಗಳಿಗೆ ಬಹಿಷ್ಕಾರ!

ಬಾಗಲಕೋಟೆ: ಹನುಮಂತ ದೇವರ ಓಕುಳಿ ಜಾತ್ರೆಗೆ ಪಟ್ಟಿ ಹಣ ನೀಡದ ಕಾರಣಕ್ಕೆ ಏಳು ಕುಟುಂಬಗಳನ್ನು ಊರಿನಿಂದ ಬಹಿಷ್ಕಾರ ಹಾಕಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹಿರಿಯರು ಜಾತ್ರೆ ವೆಚ್ಚಕ್ಕಾಗಿ ಪ್ರತೀ ಕುಟುಂಬಕ್ಕೆ 600 ರೂ. ಪಟ್ಟಿ ನಿಗದಿ ಮಾಡಿದ್ದರು. ಆದರೆ, ಏಳು ಕುಟುಂಬಗಳು ಹಣ ನೀಡದ ಹಿನ್ನೆಲೆ, ಅವರನ್ನು ದೇವರ ಕಾರ್ಯಕ್ರಮಗಳಿಂದ ದೂರ ಇಟ್ಟಿರುವುದಾಗಿ ಡಂಗುರ ಸಾರಲಾಗಿದೆ.

ಬಹಿಷ್ಕಾರಕ್ಕೊಳಗಾದ ಕುಟುಂಬಗಳಲ್ಲಿ ಯಲ್ಲಪ್ಪ ಛಗಣ್ಣವರ, ಅಣ್ಣಪ್ಪ ಕಡಪಟ್ಟಿ, ಸಿದ್ದಪ್ಪ ಎಣ್ಣಿ, ಕರೆಪ್ಪ ಎಣ್ಣಿ, ಯಲ್ಲಪ್ಪ ಕುಲ್ಲೊಳ್ಳಿ, ಮಲ್ಲಪ್ಪ ಬಟಕುರ್ಕಿ ಮತ್ತು ರಾಮಪ್ಪ ಬಟಕುರ್ಕಿ ಸೇರಿದ್ದಾರೆ. ಇವರ ಮನೆಗಳಿಗೆ ಪೂಜಾರಿಗಳು, ಸ್ವಾಮಿಗಳು ಹೋಗಬಾರದು, ಅವರ ಮನೆ ಕಾರ್ಯಗಳಲ್ಲಿ ಯಾರೂ ಭಾಗವಹಿಸಬಾರದು ಎಂದು ಗ್ರಾಮದಲ್ಲಿ ಸೂಚನೆ ನೀಡಲಾಗಿದೆ. ಅಲ್ಲದೆ, ಕಿರಾಣಿ ಅಂಗಡಿಗಳಿಂದ ಸಹ ಅವರಿಗೆ ವಸ್ತುಗಳನ್ನು ನೀಡಬಾರದು ಎಂದು ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ.

ಏಪ್ರಿಲ್ 7ರಂದು ಜಾತ್ರೆ ನಡೆಯಲಿದ್ದು, ಅದಕ್ಕೆ ಎರಡು ದಿನಗಳ ಮುನ್ನವೇ ಡಂಗುರ ಸಾರಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿದ ಯಲ್ಲಪ್ಪ ಛಗಣ್ಣವರ, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಜಮಖಂಡಿ ತಹಸೀಲ್ದಾರ್, ಎಸಿ ಮತ್ತು ಡಿಸಿ ಅವರಿಗೆ ಪತ್ರ ಬರೆದು, ತಮ್ಮ ಮೇಲೆ ನಡೆದ ಬಹಿಷ್ಕಾರದಿಂದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ, ಜವಾಬ್ದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಘಟನೆಯ ಬಳಿಕ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿ, ಎರಡೂ ಪಕ್ಷಗಳನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಪ್ರಕರಣ ಸಂಬಂಧ ಮುಂದಿನ ಕ್ರಮಗಳ ಬಗ್ಗೆ ನಿರೀಕ್ಷೆ ವ್ಯಕ್ತವಾಗಿದೆ.

ಶಿವಮೊಗ್ಗ–ಬೆಂಗಳೂರು ಇಂಡಿಗೋ ಹಾರಾಟ ಸ್ಥಗಿತ: 33 ತಿಂಗಳಲ್ಲಿಯೇ ಸೇವೆ ಬಂದ್!

ಶಿವಮೊಗ್ಗ: ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ, ಇಂಡಿಗೋ ಸಂಸ್ಥೆ ಶಿವಮೊಗ್ಗ–ಬೆಂಗಳೂರು ನಡುವಿನ ತನ್ನ ಹಾರಾಟ ಸೇವೆಯನ್ನು ಸ್ಥಗಿತಗೊಳಿಸಿದೆ.

ಏಪ್ರಿಲ್ 30ರಂದು ಮಧ್ಯಾಹ್ನ 2:30ಕ್ಕೆ ಕೊನೆಯ ಹಾರಾಟ ನಡೆದಿದ್ದು, ಕೇವಲ 33 ತಿಂಗಳಲ್ಲೇ ಈ ಸೇವೆ ಅಂತ್ಯಗೊಂಡಿದೆ. 2023ರ ಆಗಸ್ಟ್ 11ರಂದು ಆರಂಭಗೊಂಡ ಈ ಸೇವೆ ಮಲೆನಾಡು ಮತ್ತು ಮಧ್ಯ ಕರ್ನಾಟಕ ಭಾಗದ ಜನರಿಗೆ ದೊಡ್ಡ ಅನುಕೂಲವಾಗಿತ್ತು. ಈ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ಸೇವೆಯನ್ನು ಬಳಸಿಕೊಂಡಿದ್ದರು. ಇದೀಗ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಶಿವಮೊಗ್ಗ–ಬೆಂಗಳೂರು ಮಾರ್ಗದ ಟಿಕೆಟ್ ಬುಕ್ಕಿಂಗ್ ಕೂಡ ಸ್ಥಗಿತಗೊಳಿಸಲಾಗಿದೆ.

ಹಾರಾಟ ಸ್ಥಗಿತಕ್ಕೆ ಹಲವು ಕಾರಣಗಳನ್ನು ಉಲ್ಲೇಖಿಸಲಾಗಿದೆ. ಉಡಾನ್ ಯೋಜನೆಯಡಿ ನಿರೀಕ್ಷಿತ ಸೌಲಭ್ಯಗಳ ಕೊರತೆ, ಡಿಜಿಸಿಎ ಹೊಸ ನಿಯಮಗಳಿಂದ ಪೈಲಟ್ ಹಾಗೂ ಸಿಬ್ಬಂದಿ ಅಭಾವ ಉಂಟಾಗಿರುವುದು ಪ್ರಮುಖ ಕಾರಣಗಳಾಗಿವೆ.

ಇದಲ್ಲದೆ, ರಾಜ್ಯ ಸರ್ಕಾರದೊಂದಿಗೆ ಮಾಡಿದ್ದ ಒಪ್ಪಂದದ ಪ್ರಕಾರ ಪ್ರತಿ ಟಿಕೆಟ್‌ಗೆ 500 ರೂ. ಸಹಾಯಧನ ನೀಡಲಾಗುತ್ತಿತ್ತು. 2025ರ ಆಗಸ್ಟ್‌ನಲ್ಲಿ ಒಪ್ಪಂದ ಮುಕ್ತಾಯಗೊಂಡಿದ್ದು, ಅದರ ನವೀಕರಣ ವಿಳಂಬವಾಗಿರುವುದೂ ಹಾರಾಟ ನಿಲ್ಲಿಸಲು ಕಾರಣವಾಗಿದೆ.

ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಸಂಪೂರ್ಣವಾಗಿಲ್ಲ. ಮಳೆಗಾಲದಲ್ಲಿ ಲ್ಯಾಂಡಿಂಗ್ ಸಮಸ್ಯೆಗಳು ಮತ್ತು ಹಾರಾಟ ರದ್ದಾಗುವ ಸಾಧ್ಯತೆಗಳನ್ನೂ ಸಂಸ್ಥೆ ಉಲ್ಲೇಖಿಸಿದೆ.

ಒಟ್ಟಾರೆ, ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಯಾಣಿಕರಲ್ಲಿ ನಿರಾಸೆ ಮೂಡಿಸಿದೆ.

ಡಿಕೆಶಿ ಕುಟುಂಬಕ್ಕೆ ಸಂತಸದ ಸುದ್ದಿ: ಪುತ್ರಿ ಐಶ್ವರ್ಯಗೆ ಹೆಣ್ಣು ಮಗು ಜನನ!

ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುಟುಂಬದಲ್ಲಿ ಸಂತಸದ ಕ್ಷಣಗಳು ಮನೆಮಾಡಿವೆ. ಅವರ ಪುತ್ರಿ ಐಶ್ವರ್ಯ ಹೆಗ್ಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು,, ಮೊಮ್ಮಗಳನ್ನು ನೋಡಲು ಡಿಕೆ ಶಿವಕುಮಾರ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಐಶ್ವರ್ಯ ಹೆಗ್ಡೆ ಅವರು ಅಮರ್ತ್ಯ ಹೆಗ್ಡೆ ಅವರನ್ನು 2021ರ ಫೆಬ್ರವರಿ 14ರಂದು ವಿವಾಹವಾಗಿದ್ದರು. ಅಮರ್ತ್ಯ ಹೆಗ್ಡೆ ಅವರು ವಿ.ಜಿ. ಸಿದ್ಧಾರ್ಥ ಅವರ ಪುತ್ರರಾಗಿದ್ದಾರೆ.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭಹಾರೈಸಿದ್ದರು.

ಇದೀಗ ಕುಟುಂಬದಲ್ಲಿ ಹೊಸ ಸದಸ್ಯೆಯ ಆಗಮನದಿಂದ ಸಂತಸದ ವಾತಾವರಣ ನಿರ್ಮಾಣವಾಗಿದ್ದು, ಬಂಧುಗಳು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.

2 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಮೊಬೈಲ್ ಬೇಡ! ಮಕ್ಕಳಿಗೆ ಮಾತು ತಡವಾಗಲು ಇದು ಕಾರಣ

ಇಂದಿನ ಡಿಜಿಟಲ್ ಯುಗದಲ್ಲಿ ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್ ಸಾಮಾನ್ಯವಾಗಿರುವ ನಡುವೆಯೇ, ಸ್ಕ್ರೀನ್ ಟೈಮ್ ಹೆಚ್ಚಾದರೆ ಮಕ್ಕಳ ಮಾತಿನ ಬೆಳವಣಿಗೆಗೆ ಹಾನಿ ಉಂಟಾಗಬಹುದು ಎಂದು ಹೊಸ ಅಧ್ಯಯನವು ಎಚ್ಚರಿಸಿದೆ.

ಚಂಡೀಗಢದ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (PGIMER) ನಡೆಸಿದ ಅಧ್ಯಯನದಲ್ಲಿ, ದಿನಕ್ಕೆ ಒಂದು ಗಂಟೆಗೂ ಹೆಚ್ಚು ಸ್ಕ್ರೀನ್ ಬಳಸುವ ಮಕ್ಕಳಲ್ಲಿ “ಸ್ಪೀಚ್ ಡಿಲೇ” ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬುದು ಬಹಿರಂಗವಾಗಿದೆ. 18 ರಿಂದ 24 ತಿಂಗಳೊಳಗಿನ 140 ಆರೋಗ್ಯಕರ ಮಕ್ಕಳ ಮೇಲೆ ಈ ಸಂಶೋಧನೆ ನಡೆಸಲಾಗಿದೆ.

ತಜ್ಞರ ಪ್ರಕಾರ, ಮಕ್ಕಳ ಮೊದಲ ಎರಡು ವರ್ಷಗಳು ಮೆದುಳಿನ ಬೆಳವಣಿಗೆಗೆ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ನೇರ ಸಂವಹನದ ಮೂಲಕವೇ ಭಾಷಾ ಕೌಶಲ್ಯಗಳು ಅಭಿವೃದ್ಧಿಯಾಗುತ್ತವೆ. ಆದರೆ ಸ್ಕ್ರೀನ್ ಬಳಕೆ ಹೆಚ್ಚಾದರೆ ಪೋಷಕರೊಂದಿಗೆ ಸಂಭಾಷಣೆ ಕಡಿಮೆಯಾಗುವುದರಿಂದ ಮಾತನಾಡುವ ಸಾಮರ್ಥ್ಯ ನಿಧಾನಗೊಳ್ಳಬಹುದು.

ಅಧ್ಯಯನವು ಮತ್ತೊಂದು ಮಹತ್ವದ ಅಂಶವನ್ನು ಬಹಿರಂಗಪಡಿಸಿದ್ದು, 18 ತಿಂಗಳಿಗಿಂತ ಮುಂಚೆ ಸ್ಕ್ರೀನ್ ಬಳಸುವ ಮಕ್ಕಳಲ್ಲಿ ಮಾತಿನ ವಿಳಂಬ ಹೆಚ್ಚು ಕಂಡುಬಂದಿದೆ. ಈ ಹಿನ್ನೆಲೆ, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸ್ಕ್ರೀನ್ ಟೈಮ್ ಸಂಪೂರ್ಣವಾಗಿ ತಪ್ಪಿಸುವುದು ಅಗತ್ಯವೆಂದು ತಜ್ಞರು ಸಲಹೆ ನೀಡಿದ್ದಾರೆ.

ಮಕ್ಕಳ ಭಾಷಾ ಬೆಳವಣಿಗೆಗೆ ಪೋಷಕರು ಹೆಚ್ಚಿನ ಸಮಯವನ್ನು ಮೀಸಲಿಟ್ಟು, ಅವರೊಂದಿಗೆ ಮಾತನಾಡುವುದು, ಕಥೆ ಹೇಳುವುದು ಮತ್ತು ಆಟಗಳಲ್ಲಿ ತೊಡಗಿಸುವುದು ಅತ್ಯಂತ ಪರಿಣಾಮಕಾರಿ ವಿಧಾನಗಳಾಗಿವೆ. ಅಗತ್ಯವಿದ್ದಲ್ಲಿ ಮಾತ್ರ, ಉದಾಹರಣೆಗೆ ವಿಡಿಯೋ ಕಾಲ್‌ಗಳಿಗೆ ಸ್ಕ್ರೀನ್ ಬಳಕೆಯನ್ನು ಮಿತಿಗೊಳಿಸುವುದು ಒಳಿತು ಎಂದು ತಜ್ಞರು ಸೂಚಿಸಿದ್ದಾರೆ.

ನಿಧಿ ಆಸೆಗೆ ಹೆತ್ತ ತಾಯಿಯನ್ನೇ ಬಲಿ ಕೊಡಲು ಯತ್ನ; ಚಾಮರಾಜನಗರದಲ್ಲಿ ಪುತ್ರನ ಭೀಕರ ಕೃತ್ಯ ಬಯಲು

ಚಾಮರಾಜನಗರ: ಧಿ ಆಸೆಗೆ ಹೆತ್ತ ತಾಯಿಯನ್ನೇ ಬಲಿ ಕೊಡಲು ಪುತ್ರನೊಬ್ಬ ಸಿದ್ಧತೆ ನಡೆಸಿದ್ದ ಆಘಾತಕಾರಿ ಘಟನೆ ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದು, ಪೊಲೀಸರ ತಕ್ಷಣದ ಕ್ರಮದಿಂದ ದುರಂತ ತಪ್ಪಿದೆ.

ಕೊಂಡಯ್ಯನ ಮಾದಶೆಟ್ಟಿ ಎಂಬಾತ, ಹುಣ್ಣಿಮೆ ದಿನ ಬಲಿ ಕೊಟ್ಟರೆ ನಿಧಿ ಸಿಗುತ್ತದೆ ಎಂಬ ನಂಬಿಕೆಯಲ್ಲಿ, ತನ್ನ 80 ವರ್ಷದ ಕಣ್ಣು ಕಾಣದ ಹಾಗೂ ಕಿವಿ ಕೇಳದ ತಾಯಿ ಮಾದಮ್ಮಶೆಟ್ಟಿಯನ್ನು ಬಲಿಕೊಡಲು ಸಿದ್ಧತೆ ನಡೆಸಿದ್ದಾನೆ. ಬೆಳಗ್ಗಿನ ಜಾವ ತನ್ನ ಮನೆಯಲ್ಲೇ ಸುಮಾರು 4 ಅಡಿ ಆಳದ ಗುಂಡಿ ತೆಗೆದು, ಅದರೊಳಗೆ ಮಡಕೆ ಇಟ್ಟು ಲಿಂಬೆಹಣ್ಣು, ಅರಿಶಿನ, ಕುಂಕುಮ ಹಾಗೂ ಕಳಸವಿಟ್ಟು ಪೂಜೆ ನೆರವೇರಿಸಿದ್ದಾನೆ.

ಈ ಸಂಶಯಾಸ್ಪದ ಚಟುವಟಿಕೆ ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮಾಟಗಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಿಧಿಗಾಗಿ ಇಂತಹ ಮಾಟ ಮಾಡಿರುವ ವಿಚಾರ ತಿಳಿದು ಸಾಗಡೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

error: Content is protected !!