Home Blog

ಗ್ರಾಮೀಣ ಭಾಗಕ್ಕೆ ಬಸ್ ಸೇವೆ ವಿಸ್ತರಿಸಲು ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಿಂದ ಬೂದಿಹಾಳ–ಕೊಕ್ಕರಗೊಂದಿ ಮಾರ್ಗವಾಗಿ ಗುತ್ತಲವರೆಗೆ ಹೊಸ ಬಸ್ ಸೇವೆ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ, ತಾಲ್ಲೂಕು ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಸಾರಿಗೆ ಘಟಕದ ವ್ಯವಸ್ಥಾಪಕಿ ಸವಿತಾ ಆದಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಲಕ್ಷ್ಮೇಶ್ವರದಿಂದ ಬೂದಿಹಾಳ–ಕೊಕ್ಕರಗೊಂದಿ ಮಾರ್ಗವಾಗಿ ಗುತ್ತಲವರೆಗೆ ಹೊಸ ಬಸ್ ಸೇವೆ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ, ತಾಲ್ಲೂಕು ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಸಾರಿಗೆ ಘಟಕದ ವ್ಯವಸ್ಥಾಪಕಿ ಸವಿತಾ ಆದಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಮಾತನಾಡಿ, ಗುತ್ತಲ, ಬೆಳ್ಳಟ್ಟಿ, ಹಾವನೂರು ಸೇರಿದಂತೆ ಹಲವು ಗ್ರಾಮಗಳ ಜನರು ಪ್ರತಿದಿನ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದು, ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಶೀಘ್ರ ಬಸ್ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಹಿರಿಯ ಸದಸ್ಯ ಚಂಬಣ್ಣ ಬಾಳಿಕಾಯಿ ಮಾತನಾಡಿ, ಲಕ್ಷ್ಮೇಶ್ವರ–ಹಾವನೂರು–ಗುತ್ತಲ ಹಾಗೂ ಬೂದಿಹಾಳ–ಕೊಕ್ಕರಗೊಂದಿ, ನಾಗರಮಡುವು–ಬಿಜ್ಜೂರು–ಕೊಂಚಿಗೇರಿ ಮಾರ್ಗಗಳಲ್ಲೂ ಬಸ್‌ಗಳನ್ನು ಓಡಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಐ.ಎಸ್. ಮಡಿವಾಳರ, ಸೂಗೀರಪ್ಪ ವಾಲಿ ಹಾಗೂ ಈರಣ್ಣ ಉಮಚಗಿ ಉಪಸ್ಥಿತರಿದ್ದರು.

ಅಂಗನವಾಡಿಯಲ್ಲೂ ‘ವೆಲ್‌ಕಂ ಡೇ’ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಮಾಡಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ–36ರಲ್ಲಿ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ, ‘ವೆಲ್‌ಕಂ ಡೇ’ ಹಾಗೂ ಎಲ್‌ಕೆಜಿ–ಯುಕೆಜಿ ಪ್ರವೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ತಾಲೂಕಿನ ಮಾಡಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ–36ರಲ್ಲಿ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ, ‘ವೆಲ್‌ಕಂ ಡೇ’ ಹಾಗೂ ಎಲ್‌ಕೆಜಿ–ಯುಕೆಜಿ ಪ್ರವೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಹೊಸ ಬಟ್ಟೆ ತೊಟ್ಟು ಪೋಷಕರೊಂದಿಗೆ ಆಗಮಿಸಿದ ಮಕ್ಕಳನ್ನು ಆರತಿ ಬೆಳಗಿ, ಕಾಣಿಕೆ ನೀಡಿ ಸ್ವಾಗತಿಸಲಾಯಿತು. ಬಳಿಕ ಗಣೇಶ ಹಾಗೂ ಶಾರದಾ ಮಾತೆಯ ಪೂಜೆ ನೆರವೇರಿಸಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಎಲ್‌ಕೆಜಿ ಹಾಗೂ ಯುಕೆಜಿಗೆ ದಾಖಲಾದ ಮಕ್ಕಳಿಗೆ ಇದೇ ವೇಳೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಮೃತ್ಯುಂಜಯ ಜಿ., ಅಂಗನವಾಡಿಗಳಲ್ಲಿ ಎಲ್‌ಕೆಜಿ–ಯುಕೆಜಿ ಆರಂಭಿಸಿರುವುದರಿಂದ ಖಾಸಗಿ ಶಾಲೆಗಳ ಮಾದರಿಯಲ್ಲೇ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಪೋಷಕರು ಮಕ್ಕಳನ್ನು ಅಂಗನವಾಡಿಗೆ ದಾಖಲಿಸಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಶಿಲ್ಪಾ ಹೊಸಮಠ, ರಮಜಾನ್‌ಸಾಬ ನದಾಫ್, ದಾವಲಸಾಬ ನದಾಫ್, ನಿವೃತ್ತ ಶಿಕ್ಷಕ ಹನುಮಂತಪ್ಪ ಸರವಿ, ಅಂಗನವಾಡಿ ಕಾರ್ಯಕರ್ತೆ ಈರಮ್ಮ ಅಂಗಡಿ, ಸಹಾಯಕಿ ಸವಿತಾ ಸರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಳಿಕ ಮಕ್ಕಳಿಂದ ವಿವಿಧ ಆಟೋಟಗಳು ನಡೆಯಿತು.

“ಅಂಗನವಾಡಿಗಳಲ್ಲೂ ಖಾಸಗಿ ಶಾಲೆಗಳ ಮಾದರಿಯ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.”

– ಮೃತ್ಯುಂಜಯ ಜಿ.

ಯುವಜನತೆಗೆ ಸೃಷ್ಟಿ ಮೇಟಿ ಮಾದರಿ: ಮಾಜಿ ಸಚಿವ ಬಿ.ಆರ್. ಯಾವಗಲ್ಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಯುವ ಪರ್ವತಾರೋಹಕಿ ಸೃಷ್ಟಿ ಮೇಟಿ ಅವರು ಸುಮಾರು 15,500 ಮೀಟರ್ ಎತ್ತರದ ಹರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಸನ್ಮಾನಿಸಿ ಮಾಜಿ ಸಚಿವ ಬಿ.ಆರ್. ಯಾವಗಲ್ಲ ಅವರು ಮಾತನಾಡಿದರು.

“ಸಾಧನೆಗೆ ಪುರುಷ–ಮಹಿಳೆ ಎಂಬ ಭೇದವಿಲ್ಲ. ಗುರಿ ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮ ಇದ್ದರೆ ಯಾವುದೇ ಶಿಖರವನ್ನೂ ಏರಬಹುದು” ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದ ಯುವ ಪರ್ವತಾರೋಹಕಿ ಸೃಷ್ಟಿ ಮೇಟಿ ಅವರು ಸುಮಾರು 15,500 ಮೀಟರ್ ಎತ್ತರದ ಹರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ಸೃಷ್ಟಿ ಅವರ ಸಾಧನೆ ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದು, ಗುರಿ ಸಾಧಿಸಲು ಸಮಾಜದ ಬೆಂಬಲವೂ ಅಗತ್ಯವಾಗಿದೆ. ಪರ್ವತಾರೋಹಣದ ಅನುಭವಗಳನ್ನು ದಾಖಲಿಸಿಕೊಳ್ಳುವಂತೆ ಸಲಹೆ ನೀಡಿದರು.

ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ, ಮಾಜಿ ತಾಪಂ ಸದಸ್ಯ ಮಲ್ಲಣ್ಣ ಮೇಟಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ ಸೃಷ್ಟಿ ಅವರ ಸಾಧನೆಯನ್ನು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿದ ಸೃಷ್ಟಿ ಮೇಟಿ ಅವರು ಹರ್ರಾ ಟಾಪ್ ಶಿಖರ ಏರಿದ ಅನುಭವ, ತರಬೇತಿ ಹಾಗೂ ಎದುರಾದ ಸವಾಲುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಉಮೇಶ ಮೇಟಿ, ಹೇಮಾ ಮೇಟಿ, ಮೇಟಿ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಆರ್ಥಿಕ ಸಬಲೀಕರಣದಲ್ಲಿ ಗಾಯತ್ರಿ ಸಂಘ ಮುಂಚೂಣಿ: ಡಿ.ಆರ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿಯ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘ ನಿಯಮಿತದ ಬೆಟಗೇರಿ–ಗದಗ ಶಾಖೆಯ ನೂತನ ಕಟ್ಟಡವನ್ನು ಮಾಜಿ ಶಾಸಕ ಹಾಗೂ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಉದ್ಘಾಟಿಸಿದರು.

ಬೆಟಗೇರಿಯ ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘ ನಿಯಮಿತದ ಬೆಟಗೇರಿ–ಗದಗ ಶಾಖೆಯ ನೂತನ ಕಟ್ಟಡವನ್ನು ಮಾಜಿ ಶಾಸಕ ಹಾಗೂ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೇಕಾರರ ಶ್ರೇಯೋಭಿವೃದ್ಧಿಗಾಗಿ ಆರಂಭವಾದ ಸಂಘ ಇಂದು ರೈತರು, ಬಡವರು ಹಾಗೂ ವ್ಯಾಪಾರಿಗಳ ಆರ್ಥಿಕ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಠೇವುದಾರರ ವಿಶ್ವಾಸ, ಸಾಲಗಾರರ ಪ್ರಾಮಾಣಿಕತೆ ಹಾಗೂ ಸಿಬ್ಬಂದಿಯ ಕರ್ತವ್ಯನಿಷ್ಠೆಯೇ ಸಂಘದ ಯಶಸ್ಸಿಗೆ ಕಾರಣ ಎಂದರು.

ಲಾಕರ್ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸಂಘದ ಬೆಳವಣಿಗೆ ಶ್ಲಾಘನೀಯವಾಗಿದ್ದು, ಸುಮಾರು 40 ಶಾಖೆಗಳ ಮೂಲಕ ₹300 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿರುವುದು ಜನರ ವಿಶ್ವಾಸದ ಪ್ರತೀಕ ಎಂದರು.

ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಪಿ. ಕಲಬುರ್ಗಿ ಅವರ ಸಮಾಜಮುಖಿ ಸೇವೆಯನ್ನು ಪ್ರಶಂಸಿಸಿದರು.

ಅಧ್ಯಕ್ಷತೆ ವಹಿಸಿದ್ದ ರವೀಂದ್ರ ಕಲಬುರ್ಗಿ ಮಾತನಾಡಿ, ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗೆ ಸಂಘ ಇನ್ನಷ್ಟು ಸೇವೆ ಸಲ್ಲಿಸಲಿದೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.

“ರೈತರು, ಬಡವರು ಹಾಗೂ ವ್ಯಾಪಾರಿಗಳಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ಶ್ರೀಗಾಯತ್ರಿ ಪತ್ತಿನ ಸಂಘದ ಸೇವೆ ಸಾರ್ಥಕವಾಗಿದೆ.”

– ಡಿ.ಆರ್. ಪಾಟೀಲ, ಮಾಜಿ ಶಾಸಕ

ಕೆಸರಿನ ಸಂಪ್ರದಾಯದಲ್ಲಿ ಮೆರೆದ ಮೊಹರಂ ಭಾವೈಕ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದತೆಯ ಸಂಕೇತವಾದ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದತೆಯ ಸಂಕೇತವಾದ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಹಜರತ್ ಇಮಾಮ್ ಹುಸೇನ್ ಅವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಅಂಗವಾಗಿ ಗ್ರಾಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮೊಹರಂ ಅಂಗವಾಗಿ ಪೀರರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಲೈ ದೇವರಿಗೆ ಪೂಜೆ ಸಲ್ಲಿಸಲಾಯಿತು.

ತಿಮ್ಮಾಪೂರದ ವಿಶೇಷ ಸಂಪ್ರದಾಯದಂತೆ ಯುವಕರು ಅಗ್ನಿಕುಂಡದ ಸಮೀಪ ನೀರು ಸುರಿದು ಕೆಸರು ಮಾಡಿ ಅದರಲ್ಲಿ ಆಡುವ ಮೂಲಕ ದಶಕಗಳಿಂದ ನಡೆದುಕೊಂಡು ಬಂದಿರುವ ಆಚರಣೆಯನ್ನು ಮುಂದುವರಿಸಿದರು. ಈ ವಿಶಿಷ್ಟ ಸಂಪ್ರದಾಯವನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಮೊಹರಂ ಆಚರಣೆಯಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಯಾವುದೇ ಭೇದಭಾವವಿಲ್ಲದೆ ಒಂದಾಗಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು.

ತ್ಯಾಗವೇ ಮೊಹರಂನ ಮಹಾ ಸಂದೇಶ: ತಾಜುದ್ದೀನ್ ಎಂ. ಕಿಂಡ್ರಿ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮೊಹರಂ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ. ಅದು ಸತ್ಯ, ನ್ಯಾಯ, ತ್ಯಾಗ ಮತ್ತು ಮಾನವೀಯತೆಯ ಶಾಶ್ವತ ಸಂದೇಶ ಸಾರುವ ಪವಿತ್ರ ದಿನವಾಗಿದೆ ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ತಾಜುದ್ದೀನ್ ಎಂ. ಕಿಂಡ್ರಿ ಹೇಳಿದರು.

ಮೊಹರಂ ಪ್ರಯುಕ್ತ ಶುಭಾಶಯಗಳನ್ನು ತಿಳಿಸಿ ಮಾತನಾಡಿದ ಅವರು, ಇಮಾಮ್ ಹುಸೇನ್ (ರ.ಅ) ಅವರ ತ್ಯಾಗ, ಧೈರ್ಯ ಮತ್ತು ನ್ಯಾಯಕ್ಕಾಗಿ ನಡೆಸಿದ ಹೋರಾಟವು ಇಡೀ ಮಾನವಕುಲಕ್ಕೆ ಆದರ್ಶವಾಗಿದೆ. ಅನ್ಯಾಯದ ಮುಂದೆ ತಲೆಬಾಗದೆ, ಸತ್ಯದ ಮಾರ್ಗದಲ್ಲಿ ಕೊನೆಯವರೆಗೂ ಅಚಲವಾಗಿ ನಿಲ್ಲುವ ಸಂದೇಶವನ್ನು ಮೊಹರಂ ಸಾರುತ್ತದೆ ಎಂದು ಹೇಳಿದರು.

ಇಂದಿನ ಸಮಾಜದಲ್ಲಿ ಅನ್ಯಾಯ, ಅಸಮಾನತೆ ಮತ್ತು ಹಿಂಸಾಚಾರ ಹೆಚ್ಚುತ್ತಿರುವ ಸಂದರ್ಭದಲ್ಲಿ ಮೊಹರಂನ ಸಂದೇಶ ಇನ್ನಷ್ಟು ಪ್ರಸ್ತುತವಾಗಿದೆ. ಪ್ರತಿಯೊಬ್ಬರೂ ಸತ್ಯ, ನ್ಯಾಯ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಾಂತಿ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಲಾಲಶಾಪೀರ್, ಮಕಾಂದರ್, ಜಾಫರ್ ಮೌಲಾನ, ಹಿರಿಯರಾದ ಇಮಾಮಸಾಬ್, ನದ್ದಿಮುಲ್ಲಾ, ಹಮೀದ್ ಮುಜಾವರ್, ಹೈದರಾಲಿ ಖವಾಸ್, ಮುನ್ನಾ ಢಾಲಾಯತ್, ದಾವುದ್ ಜಮಾಲ್, ದಾವಲಸಾಬ್ ಲಕ್ಷ್ಮೇಶ್ವರ, ಇಮ್ಮಣ್ಣ ಕಿಂಡ್ರಿ, ರಾಜೇಸಾಬ್ ಸೈಯದ್‌ಬಡೆ, ಇಮಾಮ್ ಜಾಫರ್, ಲಾಡಸಾಬ್, ಮಾಬೂಸಾಬ್ ಅಬ್ಬುನವರ, ಮಹಬೂಬ್ ಅಲಿ ಶೇಖ್, ಹೈದರ್ ಶೇಖ್, ಮಹಮ್ಮದ್ ರಫಿ ಮುಲ್ಲಾ, ಖ್ವಾಜಾ ಕಿಚಡಿ ಹಾಗೂ ಸಲೀಂ ಫ್ಲೋರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯೋಗ ನಿಬಂಧ ಹಾಗೂ ಯೋಗಾಸನ ಸಮೂಹ ನೃತ್ಯ ಸ್ಪರ್ಧೆಗಳ ಫಲಿತಾಂಶ ಪ್ರಕಟಿಸಲಾಗಿದೆ.

ಯೋಗ ನಿಬಂಧ ಸ್ಪರ್ಧೆಯಲ್ಲಿ ಸುನಂದಾ ಜ್ಞಾನೋಪಂತ ಹಾಗೂ ಸುಲೋಚನಾ ಐಹೊಳೆ ಪ್ರಥಮ, ಗೀತಾ ಹೂಗಾರ ದ್ವಿತೀಯ, ಮಲ್ಲಯ್ಯ ಕಲಹಾಳ ತೃತೀಯ ಸ್ಥಾನ ಪಡೆದರೆ, ರೋಜಾ ಮುಗಳಿ ಸಮಾಧಾನಕರ ಬಹುಮಾನ ಪಡೆದರು.

ಯೋಗಾಸನ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ (ಸಿದ್ಧಲಿಂಗನಗರ, ಗದಗ) ಪ್ರಥಮ, ನಿತ್ಯಂ ಯೋಗ ಕೇಂದ್ರ ದ್ವಿತೀಯ ಹಾಗೂ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಗಳಿಸಿತು.

ಸ್ಪರ್ಧೆಯಲ್ಲಿ ಯೋಗ ನಿಬಂಧ ವಿಭಾಗದಲ್ಲಿ 24 ಹಾಗೂ ಯೋಗಾಸನ ಸಮೂಹ ನೃತ್ಯ ವಿಭಾಗದಲ್ಲಿ 49 ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಎಸ್.ವೈ.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ, ಲಿಂಗಾಯತ ಪ್ರಗತಿಶೀಲ ಸಂಘ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಲಾಗಿತ್ತು ಎಂದು ಸ್ಪರ್ಧೆಗಳ ಸಂಯೋಜಕ ಕೆ.ಎಸ್. ಪಲ್ಲೇದ ತಿಳಿಸಿದ್ದಾರೆ.

ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಸ್ಪರ್ಧೆಗಳು ಅಗತ್ಯ: ಶೈಲಜಾ ತುಪ್ಪದ

0

ವಿಜಯಸಾಕ್ಷಿ ಸುದ್ದಿ, ಗದಗ: “ಮಕ್ಕಳು, ಯುವಕರು ಹಾಗೂ ಹಿರಿಯರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸ್ಪರ್ಧೆಗಳು ಉತ್ತಮ ವೇದಿಕೆಯಾಗಿವೆ. ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಬೆಳೆಯುವುದರ ಜೊತೆಗೆ ಪ್ರತಿಭೆಗೆ ಸೂಕ್ತ ಗೌರವ ದೊರೆಯುತ್ತದೆ” ಎಂದು ಕ್ಯಾಲಿಫೋರ್ನಿಯಾದ ಸಮಾಜ ಸೇವಾ ಇಲಾಖೆಯ ಇಂಜಿನಿಯರ್ ಶ್ರೀಮತಿ ಶೈಲಜಾ ತುಪ್ಪದ ಹೇಳಿದರು.

12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯೋಗಾಸನ ಸಮೂಹ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ತಾವು ವಿದ್ಯಾರ್ಥಿಯಾಗಿದ್ದಾಗ ಯೋಗಾಭ್ಯಾಸ ಮಾಡಿ ರಾಜ್ಯಮಟ್ಟದ ಯೋಗಾಸನ ಕ್ರೀಡಾಪಟುವಾಗಿದ್ದೆ. ಈಗ ವಿದೇಶದಲ್ಲಿಯೂ ಯೋಗ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಯೋಗಕ್ಕೆ ವಿಶ್ವದಾದ್ಯಂತ ಗೌರವವಿದೆ. ಎಲ್ಲರೂ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಿ.ಪಿ. ಕಟ್ಟಿಮನಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಂದ ಗುರುಗಳಿಗೆ ಸಮಾಜದಲ್ಲಿ ಇನ್ನಷ್ಟು ಗೌರವ ದೊರೆಯುತ್ತದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ, ಬಾಬಣ್ಣ ಗೋಟಡಕಿ, ಎಸ್.ಸಿ. ಹಿರೇಮಠ, ವಿದ್ಯಾ ಗಂಜಿಹಾಳ, ಸುಮಂಗಲಾ ಹದ್ಲಿ ಹಾಗೂ ಶಾಂತಾ ತುಪ್ಪದ ಉಪಸ್ಥಿತರಿದ್ದರು.

ಸುನಂದಾ ಜ್ಞಾನೋಪಂತ ಯೋಗ ಪ್ರಾರ್ಥನೆ ನೆರವೇರಿಸಿದರು. ಎಂ.ವಿ. ಕಲಹಾಳ ಸ್ವಾಗತಿಸಿದರು. ಎಸ್.ಎಂ. ಬುರಡಿ ವಂದಿಸಿದರು. ಕೆ.ಎಸ್. ಪಲ್ಲೇದ ಕಾರ್ಯಕ್ರಮ ನಿರೂಪಿಸಿದರು.

ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸ್ಪರ್ಧೆಗಳು ಅತ್ಯುತ್ತಮ ವೇದಿಕೆಯಾಗಿವೆ.”

ಶ್ರೀಮತಿ ಶೈಲಜಾ ತುಪ್ಪದ

ಬೆಳ್ಳಿತೆರೆಗೆ ‘ಏನಾಯಿತು’ ಪಯಣ ಆರಂಭ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ವಿಸ್ಮಯ ವೆಂಚರ್ಸ್ ನಿರ್ಮಾಣದ ‘ಏನಾಯಿತು’ ಕನ್ನಡ ಚಲನಚಿತ್ರದ ಮುಹೂರ್ತ ಹಾಗೂ ಚಿತ್ರೀಕರಣಕ್ಕೆ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕ್ಯಾಮೆರಾ ಚಾಲನೆ ನೀಡಿ ಮಾತನಾಡಿದ ಸ್ವರ್ಣ ಗ್ರೂಪ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಎಚ್.ವಿ.ಎಸ್.ವಿ. ಪ್ರಸಾದ್, “ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಿನಿಮಾಗಳು ನಿರ್ಮಾಣವಾಗಬೇಕು. ಇಲ್ಲಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು. ಉತ್ತಮ ಸದಭಿರುಚಿಯ ಚಿತ್ರಗಳು ಸಮಾಜಕ್ಕೆ ಅಗತ್ಯ” ಎಂದು ಹೇಳಿದರು.

ಸಿದ್ಧಾರೂಢ ಮಠ ಟ್ರಸ್ಟ್ ಅಧ್ಯಕ್ಷ ಬಾಳು ಮಗಜಿಕೊಂಡಿ ಕ್ಲಾಪ್ ಮಾಡಿ ಮಾತನಾಡಿ, “ಇಡೀ ಕುಟುಂಬ ಕುಳಿತು ನೋಡುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಲನಚಿತ್ರಗಳು ನಿರ್ಮಾಣವಾಗಲಿ” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಎವಿಕೆ ಫೌಂಡೇಶನ್‌ನ ವೆಂಕಟೇಶ್ ಕಾಟವೆ, ಹಿರಿಯ ಕವಿ ಮಹಾಂತಪ್ಪ ನಂದೂರ್, ಡಾ. ರಾಮು ಮುಲಗಿ, ನಾಯಕ ನಟ ಈಶಾನ್ ರಘುರಾಜನ್, ನಟಿ ಚೈತ್ರ ತೋಟದ್, ನಿರ್ದೇಶಕ ತಮನ್ನಾ, ಚಲನಚಿತ್ರ ಪತ್ರಕರ್ತ ಹಾಗೂ ಪಿಆರ್‌ಒ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ವಿನಾಯಕ ಶೆಟ್ಟಿ, ನವೀನ ಪಾಟೀಲ ಜೈನ್, ರಾಘು ಬುಧಪನವರ್, ಕೃಷ್ಣ ಉಲ್ಲಿಕಾಶಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

ಚಿತ್ರಕ್ಕೆ ಗೌರಿ ವೆಂಕಟೇಶ ಛಾಯಾಗ್ರಹಣ, ಡಾ. ಶೈಲಜಾ ಶರ್ಮ ಕಥೆ, ಈಶಾನ್ ರಘುರಾಜನ್ ಸಾಹಿತ್ಯ, ಸಂಭಾಷಣೆ ಹಾಗೂ ಚಿತ್ರಕಥೆ, ವಿ. ಮನೋಹರ ಸಂಗೀತ ನೀಡಿದ್ದು, ತಮನ್ನಾ ನಿರ್ದೇಶನ ಮಾಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಉತ್ತರ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.

“ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಿನಿಮಾಗಳು ನಿರ್ಮಾಣವಾಗಿ, ಇಲ್ಲಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು.”

– ಡಾ. ಸಿ.ಎಚ್.ವಿ.ಎಸ್.ವಿ. ಪ್ರಸಾದ್

ಸಿ.ಎ. ಸಾಧನೆಯೊಂದಿಗೆ ಮಿಂಚಿದ ಸ್ವಾತಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆ.ಎಸ್.ಆರ್.ಟಿ.ಸಿ. ನಿವೃತ್ತ ನಿರ್ವಾಹಕರಾದ ಬಸವರಾಜ ಅಡಿವೆಪ್ಪ ಕರಮುಡಿ ಹಾಗೂ ವಿಜಯಲಕ್ಷ್ಮಿ ಕರಮುಡಿ ದಂಪತಿಯ ಎರಡನೇ ಪುತ್ರಿ ಸ್ವಾತಿ ಬಸವರಾಜ ಕರಮುಡಿ ಅವರು 2026ರ ಜೂನ್‌ನಲ್ಲಿ ನಡೆದ ಸಿ.ಎ. (ಚಾರ್ಟರ್ಡ್ ಅಕೌಂಟೆಂಟ್) ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸ್ವಾತಿ ಅವರು ಪ್ರಾಥಮಿಕ ಶಿಕ್ಷಣವನ್ನು ವಾಸವಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ವಿ.ಡಿ.ಎಸ್.ಟಿ.ಸಿ. ಹೆಣ್ಣು ಮಕ್ಕಳ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಬಳಿಕ ಜೆ.ಟಿ. ಮಹಾವಿದ್ಯಾಲಯದಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.99 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದರು.

ನಂತರ ಯಾವುದೇ ಕೋಚಿಂಗ್ ಪಡೆಯದೆ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನೊಂದಿಗೆ ಉತ್ತೀರ್ಣರಾಗಿ, ಬೆಂಗಳೂರಿನ ಎಂ.ಸಿ.ಎಸ್. ರಾಘವನ್ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ತರಬೇತಿ ಪೂರ್ಣಗೊಳಿಸಿ, ಸಹಾಯಕರಾಗಿ ಕಾರ್ಯನಿರ್ವಹಿಸುತ್ತಲೇ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.

ಸ್ವಾತಿ ಕರಮುಡಿ ಅವರ ಸಾಧನೆಗೆ ತಂದೆ-ತಾಯಿ, ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಜಾಗೃತ ನಾಗರಿಕರ ವೇದಿಕೆ ಅಧ್ಯಕ್ಷ ಎಂ.ಎಫ್. ಡೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.