Home Blog

ರಥೋತ್ಸವ ಮಧ್ಯೆ ಕಾರು ಕಿರಿಕ್: ಜಾತ್ರೆಯಲ್ಲಿ ಗಲಾಟೆ, ಮೂವರು ಯುವಕರು ವಶಕ್ಕೆ!

ಗದಗ: ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದ ಬಸವೇಶ್ವರ ಜಾತ್ರೆಯ ರಥೋತ್ಸವ ವೇಳೆ ಕಾರಿನ ವಿಚಾರವಾಗಿ ಗಲಾಟೆ ಉಂಟಾಗಿ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ನಿನ್ನೆ ನಡೆದ ಜಾತ್ರೆಯ ರಥೋತ್ಸವದಲ್ಲಿ ಗ್ರಾಮಸ್ಥರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಈ ವೇಳೆ ರಥೋತ್ಸವ ಸಾಗುತ್ತಿರುವ ಮಧ್ಯೆ ಸಲೀಂ ಬಡೇಖಾನ್ ಮತ್ತು ಅವರ ತಂಡ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು. ರಥ ಸಾಗುವ ದಾರಿಯಲ್ಲಿ ಕಾರು ನಿಂತಿದ್ದರಿಂದ ಜಾತ್ರಾ ಸಮಿತಿ ಸದಸ್ಯರು ಕಾರನ್ನು ಸೈಡಿಗೆ ತೆಗೆದುಕೊಳ್ಳುವಂತೆ ವಿನಂತಿಸಿದರು.

ಆದರೆ ಈ ಮಾತಿನ ಮೇಲೆ ವಾಗ್ವಾದ ಶುರುವಾಗಿ, ಪರಿಸ್ಥಿತಿ ತೀವ್ರಗೊಂಡು ಹಲ್ಲೆಗೆ ತಿರುಗಿದೆಯೆಂಬ ಆರೋಪ ಕೇಳಿ ಬಂದಿದೆ. ಜಾತ್ರಾ ಸಮಿತಿಯ ಕೆಲ ಯುವಕರ ಮೇಲೆ ಸಲೀಂ ತಂಡ ದಾಳಿ ನಡೆಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಜಾತ್ರಾ ಸಮಿತಿ ಸದಸ್ಯರು ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಲೀಂ ಬಡೇಖಾನ್, ಲೋಕೇಶ್ ರಾಮಜಿ ಮತ್ತು ಮಂಜುನಾಥ್ ಹಾದಿಮನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಗದಗ ಗ್ರಾಮಾಂತರ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಆ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪ್ರಸ್ತುತ ಪ್ರಕರಣದ ತನಿಖೆ ಮುಂದುವರಿದಿದ್ದು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಜೈ ಬಾಂಗ್ಲಾ ಘೋಷಣೆ ಪ್ರಕರಣ: ಮಹಿಳೆಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು: ನಗರದ ಹೆಬ್ಬಗೋಡಿ ಪ್ರದೇಶದಲ್ಲಿ ಸರ್ಕಾರಿ ಜಮೀನಿನ ಅಕ್ರಮ ಶೆಡ್ ತೆರವು ವೇಳೆ ಘೋಷಣೆ ಕೂಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಮೂಲತಃ ಪಶ್ಚಿಮ ಬಂಗಾಳದವರಾದ ಹಾಗೂ ಸದ್ಯ ಆನೇಕಲ್ ತಾಲೂಕಿನ ಹುಲಿಮಂಗಲದಲ್ಲಿ ವಾಸಿಸುತ್ತಿರುವ ಸರ್ಬಾನು ಖಾತೂನ್ (25) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅಕ್ರಮವಾಗಿ ನಿರ್ಮಿಸಲಾದ ಶೆಡ್‌ಗಳನ್ನು ತೆರವುಗೊಳಿಸುವ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮಹಿಳೆಯನ್ನು ‘ಜೈ ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವಂತೆ ಪ್ರಚೋದಿಸಿದ್ದರೆಂದು ತಿಳಿದುಬಂದಿದೆ. ಈ ವೇಳೆ ಮಹಿಳೆ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದು, ಬಳಿಕ ಮೂರು ಬಾರಿ ‘ಜೈ ಭಾರತ್ ಮಾತಾ ಕಿ ಜೈ’ ಎಂದು ಕೂಗಿರುವುದಾಗಿ ನ್ಯಾಯಾಲಯದ ಮುಂದೆ ವಿವರಿಸಲಾಗಿದೆ.

ಪ್ರಕರಣದ ಸನ್ನಿವೇಶ ಮತ್ತು ಸತ್ಯಾಸತ್ಯತೆಗಳನ್ನು ಪರಿಗಣಿಸಿದ ನ್ಯಾಯಾಲಯ, ಅರ್ಜಿದಾರೆಗೆ ಇಬ್ಬರು ಅಪ್ರಾಪ್ತ ಮಕ್ಕಳು ಇದ್ದು ಅವರ ಪಾಲನೆ ಜವಾಬ್ದಾರಿ ಇರುವುದನ್ನೂ ಗಮನಿಸಿ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯ ವಿಧಿಸಿದ ಷರತ್ತುಗಳ ಪ್ರಕಾರ, ಮಹಿಳೆ ₹1 ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಸ್ಥಳೀಯ ಶ್ಯೂರಿಟಿ ಒದಗಿಸಬೇಕು. ಜೊತೆಗೆ, ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಬಾರದು ಹಾಗೂ ವಿಚಾರಣಾ ನ್ಯಾಯಾಲಯದ ಎಲ್ಲಾ ದಿನಾಂಕಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಯಾವುದೇ ರೀತಿಯ ಪ್ರಭಾವ ಬೀರುವಂತಿಲ್ಲ ಎಂದು ಸೂಚಿಸಲಾಗಿದೆ.

ಈ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಜಾಮೀನು ರದ್ದುಪಡಿಸಲು ಪ್ರಾಸಿಕ್ಯೂಷನ್‌ಗೆ ಅವಕಾಶವಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

‘ಸರ್ಸೆ ಸೆರಗ’ ಹಾಡಿನ ವಿವಾದ : ಸಂಜಯ್ ದತ್, ನೋರಾ ಫತೇಹಿ ಸೇರಿ ತಂಡಕ್ಕೆ NCW ನೋಟಿಸ್

‘ಕೆಡಿ’ ಚಿತ್ರದ ‘ಸರ್ಸೆ ಸೆರಗ’ ಹಾಡು ವಿವಾದ ಈಗ ರಾಷ್ಟ್ರ ಮಟ್ಟಕ್ಕೆ ತಲುಪಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಸಿನಿಮಾ ತಂಡದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಹಾಡಿನ ಸಾಹಿತ್ಯ ಹಾಗೂ ದೃಶ್ಯಗಳು ಅಸಭ್ಯ ಮತ್ತು ಸಮಾಜಕ್ಕೆ ಹಾನಿಕಾರಕ ಎಂದು ಆರೋಪಿಸಿ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ.

ಹಿಂದಿ ಆವೃತ್ತಿಯ ಹಾಡು ‘ಸರ್ಕೆ ಚುನರಿಯಾ ತೇರಿ ಸರ್ಕೆ’ ಹೆಚ್ಚು ವಿವಾದಕ್ಕೀಡಾಗಿದ್ದು, ಸಿಬಿಎಫ್ಸಿ ಮತ್ತು ಸೈಬರ್ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ. ಈ ನಡುವೆ ಲೋಕಸಭೆಯಲ್ಲೂ ಚರ್ಚೆ ನಡೆದಿರುವುದು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತದೆ.

ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಸಾರ್ವಜನಿಕ ನೈತಿಕತೆಗೆ ಧಕ್ಕೆ ಹಾಗೂ ಆನ್‌ಲೈನ್‌ನಲ್ಲಿ ಆಕ್ಷೇಪಾರ್ಹ ವಿಷಯ ಪ್ರಸಾರ ಆರೋಪಗಳ ಮೇಲೆ ವಿಚಾರಣೆ ನಡೆಸಲು ನಿರ್ದೇಶಕ ಪ್ರೇಮ್, ನಟಿ ನೋರಾ ಫತೇಹಿ, ನಟ ಸಂಜಯ್ ದತ್, ಗೀತರಚನೆಕಾರ ರಕೀಬ್ ಆಲಂ ಹಾಗೂ ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಮಾರ್ಚ್ 24 ರಂದು ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದ್ದು, ಗೈರಾದರೆ ಕಠಿಣ ಕ್ರಮ ಎದುರಾಗಲಿದೆ. ಇದೇ ವೇಳೆ ಪ್ರೇಮ್ ತಮ್ಮ ಹೇಳಿಕೆಯಲ್ಲಿ, ಹಾಡು ಕುರಿತು ಉಂಟಾದ ವಿವಾದಕ್ಕೆ ಕ್ಷಮೆ ಕೇಳಿ, ಸಾಹಿತ್ಯವನ್ನು ಮರುಸಂಸ್ಕರಿಸಿ ಮತ್ತೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ನಾಳೆ ಬೆಂಗಳೂರಿನಲ್ಲಿ ಉಸ್ತುವಾರಿ ಸಮಿತಿ ಸಭೆ: ಟಿಕೆಟ್ ಘೋಷಣೆ ನಿರೀಕ್ಷೆ – ಸಚಿವ ಮಲ್ಲಿಕಾರ್ಜುನ

ದಾವಣಗೆರೆ: ನಾಳೆ ಬೆಂಗಳೂರಿನಲ್ಲಿ ಉಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಶನಿವಾರ ಅಭ್ಯರ್ಥಿ ಟಿಕೆಟ್ ಘೋಷಣೆ ಆಗುವ ನಿರೀಕ್ಷೆಯಿದೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ದಾವಣಗೆರೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದ್ದು, ಶ್ರೀನಿವಾಸ್ ತಮ್ಮ ಉತ್ತಮ ಸ್ನೇಹಿತರು. ಚುನಾವಣೆ ಸ್ನೇಹಪೂರ್ವಕವಾಗಿ ನಡೆಯಲಿ ಎಂದು ಹೇಳಿದರು.

ದಾವಣಗೆರೆ ಜನತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುವುದು ಮುಖ್ಯ ಉದ್ದೇಶವಾಗಿದ್ದು, ಪಕ್ಷ ಯಾರನ್ನೇ ಅಭ್ಯರ್ಥಿಯಾಗಿ ಘೋಷಿಸಿದರೂ ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಸಭೆಗೆ ತಮ್ಮನ್ನು ಆಹ್ವಾನಿಸದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಅಭ್ಯರ್ಥಿ ಪರವಾಗಿ ಮಾತನಾಡಿದಂತೆ ಆಗುತ್ತದೆ ಎಂದು ತಿಳಿಸಿ, ಭಾಗವಹಿಸಬೇಡಿ ಎಂದು ಹೇಳಿದರು. ಆದ್ದರಿಂದ ನಾನು ಭಾಗವಹಿಸಲಿಲ್ಲ. ಪಕ್ಷದ ಯಾವುದೇ ನಿರ್ಣಯಕ್ಕೂ ಬದ್ದನಾಗಿದ್ದೇನೆ ಎಂದು ಉಸ್ತುವಾರಿ ಸಮಿತಿಗೆ ತಿಳಿಸಿದ್ದೇನೆ” ಎಂದು ಹೇಳಿದರು.

ಉಸ್ತುವಾರಿ ಸಮಿತಿ ಸಭೆಯಲ್ಲಿ ನಡೆದ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಅವರು, “ಅಲ್ಲಿಗೆ ಬಂದು ಗೊಂದಲ ಸೃಷ್ಟಿಸಿದವರು ನಮ್ಮ ಪಕ್ಷದ ಕಾರ್ಯಕರ್ತರು ಅಲ್ಲ. ಅವರನ್ನು ನಾವು ಈ ಹಿಂದೆ ಪಕ್ಷದಲ್ಲಿ ನೋಡಿಲ್ಲ. ಇತ್ತೀಚೆಗೆ ಸೇರಿರುವ ಕೆಲವರು ಈ ರೀತಿಯ ಘಟನೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ” ಎಂದು ಹೇಳಿದರು.

ಯುದ್ಧದಲ್ಲಿ ನಾವು ಗೆಲ್ಲುತ್ತಿದ್ದೇವೆ, ಇರಾನ್ʼಗೆ ಭಾರೀ ಹೊಡೆತ – ಇಸ್ರೇಲ್ ಪ್ರಧಾನಿ

0

ಜೆರುಸಲೇಂ: ಯುದ್ಧದಲ್ಲಿ ಇಸ್ರೇಲ್ ಮೇಲುಗೈ ಸಾಧಿಸುತ್ತಿದ್ದು, ಇರಾನ್ ತೀವ್ರ ಹಾನಿಗೊಳಗಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಇತ್ತೀಚೆಗೆ ತಮ್ಮ ಸಾವಿನ ಬಗ್ಗೆ ಹರಿದಾಡಿದ ವದಂತಿಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನೆತನ್ಯಾಹು, ಸುದ್ದಿಗೋಷ್ಠಿ ನಡೆಸಿ ಆ ವದಂತಿಗಳಿಗೆ ತೆರೆ ಎಳೆದರು.

ಈ ವೇಳೆ ಮಾತನಾಡಿದ ಅವರು, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸುಮಾರು 20 ದಿನಗಳ ವೈಮಾನಿಕ ದಾಳಿಗಳ ಪರಿಣಾಮ ಇರಾನ್‌ನ ಸೈನಿಕ ಸಾಮರ್ಥ್ಯಕ್ಕೆ ಗಂಭೀರ ಹೊಡೆತ ಬಿದ್ದಿದೆ ಎಂದು ತಿಳಿಸಿದ್ದಾರೆ.

ಇರಾನ್ ಇನ್ನು ಮುಂದೆ ಯುರೇನಿಯಂ ಸಮೃದ್ಧೀಕರಣ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳ ನಿರ್ಮಾಣದಲ್ಲಿ ಸಾಮರ್ಥ್ಯ ಕಳೆದುಕೊಂಡಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

“ನಾನು ಯುದ್ಧದಲ್ಲಿ ಮೃತಪಟ್ಟಿಲ್ಲ, ನೀವು ನೋಡುತ್ತಿರುವಂತೆ ನಾನು ಬದುಕಿದ್ದೇನೆ,” ಎಂದು ಹೇಳಿದ ಅವರು, ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಗಳಿಗೂ ಭಾರೀ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಇದರಿಂದ ಇರಾನ್‌ಗೆ ಪರಮಾಣು ಶಸ್ತ್ರಾಸ್ತ್ರ ನಿರ್ಮಾಣ ಸಾಧ್ಯತೆ ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಣಕಾಸು ವಿಚಾರಕ್ಕೆ ಯುವಕನ ಹತ್ಯೆ: ದೇಹವನ್ನೇ ಸುಟ್ಟು ಹಾಕಿದ ದುಷ್ಕರ್ಮಿಗಳು!

0

ಹಾಸನ: ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಯುವಕನನ್ನು ಕರೆದುಕೊಂಡು ಹೋಗಿ ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕು ವ್ಯಾಪ್ತಿಯ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹತ್ಯೆಯಾದ ಯುವಕನನ್ನು ವರುಣ್ ಕೆ.ಎಂ (22) ಎಂದು ಗುರುತಿಸಲಾಗಿದೆ. ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟ ಹಿಂಭಾಗದಲ್ಲಿ ದುಷ್ಕರ್ಮಿಗಳು ಹತ್ಯೆ ನಡೆಸಿರುವುದು ತಿಳಿದುಬಂದಿದೆ.

ಹತ್ಯೆ ಬಳಿಕ ಸಾಕ್ಷ್ಯ ನಾಶಗೊಳಿಸಲು ಶವವನ್ನು ಸುಟ್ಟುಹಾಕಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮಾರ್ಚ್ 15ರಂದು ಗಂಡಸಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು. ವರುಣ್ ಸ್ನೇಹಿತ ನೀಡಿದ ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿಸಿದಾಗ ಹತ್ಯೆಯ ಸುಳಿವು ಸಿಕ್ಕಿದೆ. ಪ್ರಸ್ತುತ ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಹೊಸತೊಡಕು ಸಂಭ್ರಮ: ಮಟನ್ ಬೆಲೆ 1500 ರೂ. ತಲುಪಿದ್ರೂ ಕಮ್ಮಿ ಆಗಿಲ್ಲ ಜನಸಾಗರ

ಬೆಂಗಳೂರು: ಹಿಂದೂಗಳ ಹೊಸ ವರ್ಷ ಯುಗಾದಿ. ಹಬ್ಬವನ್ನು ರಾಜ್ಯದ ಜನತೆಗೆ ಸಂಭ್ರಮ-ಸಡಗರ, ಪೂಜೆ-ಪುನಸ್ಕಾರಗಳೊಂದಿಗೆ ಬರಮಾಡಿಕೊಂಡಿದ್ದಾರೆ. ಹಬ್ಬದ ದಿನ ಬೇವು-ಬೆಲ್ಲದ ಸಿಹಿ ಮತ್ತು ಕಹಿ ಸವಿದ ಜನ, ಮಾರನೇ ದಿನ ಖಾರದ ಊಟ ಮಾಡುತ್ತಾರೆ. ‘ಹೊಸತೊಡಕು’ ಮಾಂಸಾಹಾರ ಪ್ರಿಯರಿಗೆ ಸುಗ್ಗಿಯಿದ್ದಂತೆ.

ಹೌದು ಇಂದು, ಹೊಸತೊಡಕು ಆಚರಣೆಗೆ ಜನರು ಭರ್ಜರಿ ಮಾಂಸ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು, ದೇವನಹಳ್ಳಿ, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವು ನಗರಗಳಲ್ಲಿ ಮಾಂಸದಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಹೊಸತೊಡಕಿನ ಹಿನ್ನೆಲೆಯಲ್ಲಿ, ಮಟನ್ ಬೆಲೆ ಒಂದು ಕೆಜಿಗೆ 1000 ರೂ.ನಿಂದ 1500 ರೂ. ವರೆಗೆ ಏರಿಕೆ ಕಂಡಿದೆ.

ಬೆಲೆ ಎಷ್ಟೇ ಹೆಚ್ಚಿದ್ದರೂ, ಜನರು ತಮ್ಮ ಸಾಂಪ್ರದಾಯಿಕ ಆಚರಣೆಯನ್ನು ಪೂರೈಸಲು ಉತ್ಸಾಹದಿಂದ ಮಾಂಸ ಖರೀದಿಸುತ್ತಿದ್ದಾರೆ. ಬೆಂಗಳೂರಿನ ಪಾಪಣ್ಣ ಮಟನ್ ಸ್ಟಾಲ್, ದೇವನಹಳ್ಳಿಯ ಎಲಿಯೂರು ಮತ್ತು ಮೈಸೂರಿನ ಕನ್ನೇಗೌಡನ ಕೊಪ್ಪಲ್ ಸೇರಿದಂತೆ ಪ್ರಮುಖ ಮಾಂಸದ ಮಳಿಗೆಗಳಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಮಟನ್ ಖರೀದಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಪ್ರತಿ ವರ್ಷದಂತೆ, ಈ ವರ್ಷವೂ ಕೂಡ ಹೊಸತೊಡಕಿಗೆ ಮಾಂಸದ ಬೇಡಿಕೆ ಹೆಚ್ಚಿದ್ದು, ಜನರು ಸಂಭ್ರಮದಿಂದ ಖರೀದಿಯಲ್ಲಿ ನಿರತರಾಗಿದ್ದಾರೆ.

 

ವಿಚಾರಣೆಗೆ ಕರೆತಂದ ವ್ಯಕ್ತಿ ಸಾವು: ಪೊಲೀಸರ ವಿರುದ್ಧ ಗ್ರಾಮಸ್ಥರ ಆಕ್ರೋಶ, ಠಾಣೆಯಲ್ಲಿ ಪ್ರತಿಭಟನೆ

0

ತುಮಕೂರು: ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆತರಲಾಗಿದ್ದ ವ್ಯಕ್ತಿಯೊಬ್ಬರ ಸಾವಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಠಾಣೆಯೊಳಗೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯ ಯಳನಾಡು ಗ್ರಾಮದಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ಹುಳಿಯಾರು ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆ ಸಿದ್ಧರಾಮೇಶ್ವರ ದೇವಸ್ಥಾನದ ಗುಡಿಗೌಡರಾದ ಕಾಂತರಾಜು ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತರಲಾಗಿತ್ತು. ವಿಚಾರಣೆ ವೇಳೆ ಕಾಂತರಾಜು ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದು ಮೃತನ ಸ್ನೇಹಿತರು ಮತ್ತು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿ, ಶವವನ್ನು ಠಾಣೆಯೊಳಗೇ ಇಟ್ಟು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು.

ಘಟನಾ ಸ್ಥಳಕ್ಕೆ ಮಾಜಿ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊಲೀಸರ ಪ್ರಕಾರ, ಸಂಜೆ 5 ಗಂಟೆಗೆ ಆರು ಮಂದಿಯನ್ನು ಠಾಣೆಗೆ ಕರೆತರಲಾಗಿದ್ದು, ರಾತ್ರಿ 8:30ಕ್ಕೆ ವಿಚಾರಣೆ ಮುಗಿಸಿ ಕಳುಹಿಸಲಾಗಿದೆ. ಠಾಣೆಯಿಂದ ಹೊರಬಂದ ಬಳಿಕ ಕಾಂತರಾಜು ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದ್ದು, ಮೃತರ ಕುಟುಂಬಸ್ಥರಿಂದ ದೂರು ಪಡೆಯುವ ಪ್ರಕ್ರಿಯೆ ಮುಂದುವರಿದಿದೆ.

ಬಿಸಿಲಿನ ಕಾಟ ಹೆಚ್ಚಳ: ಬೆಂಗಳೂರಿನಲ್ಲಿ ಹೆಚ್ಚಿದ ಸೆಕೆ, ಉತ್ತರದಲ್ಲಿ ಸೂರ್ಯನ ಕಾಟ!

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬೇಸಿಗೆಯ ತಾಪಮಾನ ಜನರನ್ನು ಕಂಗಾಲಾಗಿಸಿದೆ.

ರಾಜಧಾನಿ ಬೆಂಗಳೂರುನಲ್ಲಿ ಇಂದು ಗರಿಷ್ಠ ತಾಪಮಾನ 34°C ರಿಂದ 35°C ತಲುಪುವ ಸಾಧ್ಯತೆಯಿದೆ. ಸಂಜೆ ವೇಳೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದರೂ ಉಷ್ಣಾಂಶದಲ್ಲಿ ಹೆಚ್ಚು ಇಳಿಕೆ ಕಾಣುವ ಲಕ್ಷಣಗಳಿಲ್ಲ.

ಉತ್ತರ ಕರ್ನಾಟಕದ ಕಲ್ಬುರ್ಗಿ, ರಾಯಚೂರು ಹಾಗೂ ಬಳ್ಳಾರಿ ಪ್ರದೇಶಗಳಲ್ಲಿ ತಾಪಮಾನ 40°C ಗಡಿ ದಾಟುತ್ತಿದೆ. ಈ ಭಾಗಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಹೊರಗಡೆ ಹೋಗದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿ ಭಾಗಗಳಾದ ಮಂಗಳೂರು ಮತ್ತು ಉಡುಪಿಗಳಲ್ಲಿ ತಾಪಮಾನ ಜೊತೆಗೆ ಆರ್ದ್ರತೆ ಹೆಚ್ಚಾಗಿ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಗರಿಷ್ಠ ತಾಪಮಾನ ಸುಮಾರು 36°C ದಾಖಲಾಗುವ ಸಾಧ್ಯತೆ ಇದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮಲೆನಾಡು ಪ್ರದೇಶಗಳಾದ ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ಸಂಜೆ ವೇಳೆಗೆ ತುಂತುರು ಮಳೆಯ ಸಾಧ್ಯತೆ ಇದ್ದರೂ ಅದು ಅತಿ ವಿರಳವಾಗಿದೆ.

ಇನ್ನು ಗದಗನಲ್ಲಿ ಶುಷ್ಕ ಹವಾಮಾನ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 39°C ಹಾಗೂ ಕನಿಷ್ಠ 24°C ಇರಲಿದೆ. ಮೋಡಗಳ ಸುಳಿವಿಲ್ಲದೆ ತೀವ್ರ ಬಿಸಿಲು ಕಾಡಲಿದೆ.

ಹಾವೇರಿಯಲ್ಲಿ ಗರಿಷ್ಠ 38°C ಹಾಗೂ ಕನಿಷ್ಠ 23°C ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಗಾಳಿಯ ವೇಗ ಕಡಿಮೆ ಇರುವುದರಿಂದ ಸೆಕೆ ಹೆಚ್ಚಾಗಿ ಅನುಭವವಾಗಲಿದೆ.

ಚಿಕ್ಕಮಗಳೂರುನಲ್ಲಿ ಗರಿಷ್ಠ 33°C ಹಾಗೂ ಕನಿಷ್ಠ 19°C ತಾಪಮಾನ ಇರಲಿದ್ದು, ಮಧ್ಯಾಹ್ನ ಬಿಸಿಲು ಹೆಚ್ಚಿರುತ್ತದೆ. ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಬಹುದು. ಹಾಸನದಲ್ಲಿ ಸಾಮಾನ್ಯ ಬಿಸಿಲು ಮತ್ತು ಶುಷ್ಕ ಹವಾಮಾನ ಮುಂದುವರಿಯಲಿದ್ದು, ಗರಿಷ್ಠ 34°C ಹಾಗೂ ಕನಿಷ್ಠ 21°C ತಾಪಮಾನ ಇರಲಿದೆ. ಮಳೆಯ ಯಾವುದೇ ಸೂಚನೆ ಇಲ್ಲ.

“ಸರ್ಸೆ ಸೆರಗ ಸರ್ಸೆ” ಹಾಡು ವಿವಾದ: ಇದು ಉದ್ದೇಶಪೂರ್ವಕವಲ್ಲ.. ಕ್ಷಮಿಸಿ ಎಂದ ಗಾಯಕಿ ಮಂಗ್ಲಿ

ಕೆಡಿ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ವಿವಾದಕ್ಕೆ ಗಾಯಕಿ ಮಂಗ್ಲಿ ಕ್ಷಮೆಯಾಚಿಸಿದ್ದಾರೆ. ಈ ಹಾಡನ್ನು ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಹಾಡಿದ್ದ ಮಂಗ್ಲಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, “ಸಾರ್ವಜನಿಕರ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮ್ಮದಲ್ಲ. ಇದು ಉದ್ದೇಶಪೂರ್ವಕವಲ್ಲ. ಕ್ಷಮಿಸಿ. ನಿಮ್ಮ ಭಾವನೆಗಳನ್ನು ನಾವು ಗೌರವಿಸುತ್ತೇವೆ” ಎಂದು ತಿಳಿಸಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ಹಾಡನ್ನು ಈಗಾಗಲೇ ಎಲ್ಲಾ ವೇದಿಕೆಗಳಿಂದ ತೆಗೆದುಹಾಕಲಾಗಿದೆ. ಚಿತ್ರತಂಡದ ಪರವಾಗಿ ಕೂಡ ಕ್ಷಮೆಯಾಚಿಸಿರುವ ಅವರು, ಹೊಸದಾಗಿ ಹಾಡನ್ನು ರೆಕಾರ್ಡ್ ಮಾಡಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಈ ನಡುವೆ, ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದೆ. ಈ ಸಂಬಂಧ ನಿರ್ದೇಶಕ ಪ್ರೇಮ್, ಕೆವಿಎನ್ ಗ್ರೂಪ್, ನಟಿ ನೋರಾ ಫತೇಹಿ, ರಕೀಬ್ ಆಲಂ ಹಾಗೂ ನಟ ಸಂಜಯ್ ದತ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಮಾರ್ಚ್ 24ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

error: Content is protected !!