Home Blog

ಮುಖ್ಯಮಂತ್ರಿ ಬದಲಾವಣೆ ಬಳಿಕ ರಾಜ್ಯ ರಾಜಕೀಯದ ಕುರಿತು ಮೋದಿ ವಾಗ್ದಾಳಿ!

ಗಾಂಧೀನಗರ: ಕರ್ನಾಟಕದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬದಲಾವಣೆ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಸಾರ್ವಜನಿಕ ಅಸಮಾಧಾನ ಹೆಚ್ಚಾಗಿದೆ ಎಂದು ಪ್ರಧಾನಿ ಪ್ರಧಾನಿ ಮೋದಿ ಹೇಳಿದ್ದಾರೆ.

ಗುಜರಾತ್ ಭೇಟಿಯ ವೇಳೆ ‘ಸ್ವಾವಲಂಬಿ ಭಾರತ’ ಅಭಿಯಾನದಡಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ದೇಶವು ಅವ್ಯವಸ್ಥೆ ಮತ್ತು ಅನಿಶ್ಚಿತತೆಯನ್ನು ಒಪ್ಪುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಅಥವಾ ರಾಹುಲ್ ಗಾಂಧಿಯ ಹೆಸರನ್ನು ನೇರವಾಗಿ ಉಲ್ಲೇಖಿಸದೇ ಮಾತನಾಡಿದ ಪ್ರಧಾನಿ ಮೋದಿ, ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಅವ್ಯವಸ್ಥೆ ಮತ್ತು ಅನಿಶ್ಚಿತತೆಯನ್ನು ಹರಡುತ್ತಿದೆ ಎಂದು ಆರೋಪಿಸಿದರು. ಆದರೆ ದೇಶದ ಜನರು ಇದಕ್ಕೆ ಪದೇಪದೇ ಸೂಕ್ತ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ. ಇದರಿಂದ ಕಾಂಗ್ರೆಸ್ ವಿರುದ್ಧವೂ ಸಾರ್ವಜನಿಕರ ತೀವ್ರ ಆಕ್ರೋಶವಿದೆ. ಹಿಮಾಚಲದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಉಲ್ಲೇಖಿಸಿ ಅಲ್ಲಿನ ಜನರು ಕಾಂಗ್ರೆಸ್‌ನ ದುರಾಡಳಿತವನ್ನು ತಿರಸ್ಕರಿಸಿದರು. ಕಳೆದ ವರ್ಷ, ಹರಿಯಾಣ ಮತ್ತು ಪಂಜಾಬ್‌ನ ಜನರು ಸಹ ಕಾಂಗ್ರೆಸ್‌ಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದಾರೆ. ಗೊಂದಲದಲ್ಲಿ ಅವಕಾಶವನ್ನು ಕಂಡುಕೊಳ್ಳುವ ಕಾಂಗ್ರೆಸ್‌ನ ರಾಜಕೀಯವು ಕೆಲಸ ಮಾಡುವುದಿಲ್ಲ ಎಂದು ಸಾರ್ವಜನಿಕರು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ಪರಶುರಾಮ ಗುಡದಾರಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಲಕ್ಷ್ಮೇಶ್ವರ ಪುರಸಭೆ ವತಿಯಿಂದ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಮಾನವನು ಪರಿಸರ ಅವಲಂಬಿ ಜೀವಿಯಾಗಿದ್ದು, ಪರಿಸರದಿಂದಲೇ ಎಲ್ಲವನ್ನು ಪಡೆಯುತ್ತಿದ್ದೇವೆ. ಹೀಗಾಗಿ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಪಟ್ಟಣದ ಇಟ್ಟಿಗೆರೆ ದಂಡೆ, ಉಮಾ ವಿದ್ಯಾಲಯ ಹೈಸ್ಕೂಲ್, ಕಾಲೇಜು ಆವರಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನೂರಾರು ಸಸಿಗಳನ್ನು ನೆಡುವ ಕಾರ್ಯ ನೆರವೇರಿಸಲಾಯಿತು. ಪ್ರತಿಯೊಬ್ಬರೂ ತಮ್ಮ ಮನೆ ಸುತ್ತಮುತ್ತಲಿನ ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಾಗದೇ ನಿರಂತರ ಜಾಗೃತಿ ಅಭಿಯಾನವಾಗಬೇಕು. ನೆಟ್ಟ ಸಸಿಗಳನ್ನು ಕಾಳಜಿಯಿಂದ ಬೆಳೆಸಿದಾಗ ಮಾತ್ರ ಪರಿಸರ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಹನುಮಂತ ನಂದೆಣ್ಣವರ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಪರಿಸರ ಕಾಪಾಡಿದರೆ ಭವಿಷ್ಯ ಸುರಕ್ಷಿತ: ಜೆ.ಡಿ. ಲಮಾಣಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗಿದವು.

ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗ ಸಂಸ್ಥೆಯ ಶ್ರೀಮತಿ ಪಿಎಸ್‌ಬಿಡಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಜೆ.ಡಿ. ಲಮಾಣಿ, ಪರಿಸರ ಉತ್ತಮವಾಗಿದ್ದಾಗ ಮಾತ್ರ ಜಗತ್ತಿನ ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕಲು ಸಾಧ್ಯ. ಆದರೆ ಪರಿಸರವನ್ನು ಕಾಪಾಡುವ ಬದಲು ಹಾಳು ಮಾಡುವ ಸಂಸ್ಕೃತಿ ಹೆಚ್ಚುತ್ತಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು.

ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮತ್ತು ಹೊಣೆಗಾರಿಕೆ ಬೆಳೆಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಪ್ರತಿಜ್ಞೆ ಸ್ವೀಕರಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇನ್ನೊಂದೆಡೆ ಉಮಾ ವಿದ್ಯಾಲಯ ಹೈಸ್ಕೂಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಎಸ್.ಬಿ. ಸಂಗನಪೇಟ ಸಸಿ ನೆಡುವ ಮೂಲಕ ಪರಿಸರ ಕಾಳಜಿ ವಹಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಅಶೋಕ ಕಳ್ಳಿಮನಿ, ಅಶೋಕ ಲಿಂಗಶೆಟ್ಟಿ, ಶಿಕ್ಷಕ ವೃಂದ, ಪುರಸಭೆ ಸಿಬ್ಬಂದಿ ಹಾಗೂ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅದೇ ರೀತಿ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಯೋಧ ಎಚ್.ಡಿ. ಸಂಜೀವಣ್ಣ, “ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಧ್ಯೇಯ ಪ್ರತಿಯೊಬ್ಬರದ್ದಾಗಬೇಕು” ಎಂದು ಹೇಳಿದರು.

ವಿಶ್ರಾಂತ ಶಿಕ್ಷಕ ಐ.ಎಸ್. ಮಡಿವಾಳರ ಮಾತನಾಡಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವುದು ಹಾಗೂ ಪ್ರಕೃತಿಯನ್ನು ರಕ್ಷಿಸಲು ಜನರನ್ನು ಪ್ರೇರೇಪಿಸುವುದೇ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಮುಖ್ಯಶಿಕ್ಷಕ ಬಸವರಾಜ ಕುಂಬಾರ ಮಾತನಾಡಿದರು. ಶಿಕ್ಷಕರಾದ ಎಚ್.ಡಿ. ನಿಂಗರೆಡ್ಡಿ, ಆರ್.ಎಂ. ಶಿರಹಟ್ಟಿ, ಎಲ್.ಎ. ಬಣಕಾರ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

“ಪರಿಸರದ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಅದರ ಬಗ್ಗೆ ಪ್ರತಿಯೊಬ್ಬರಲ್ಲೂ ಪ್ರಬುದ್ಧತೆ ಬೆಳೆದು ಬರಬೇಕು.”

— ಜೆ.ಡಿ. ಲಮಾಣಿ

“ಪರಿಸರದಿಂದಲೇ ನಮ್ಮ ಆರೋಗ್ಯ ಮತ್ತು ಬದುಕು. ಅದನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ.”

ಎಚ್.ಡಿ. ಸಂಜೀವಣ್ಣ

ಜೂನ್ 7ರಂದು ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವಕ್ಕೆ ಚಾಲನೆ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವ ಅಂಗವಾಗಿ ವರ್ಷಪೂರ್ತಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಿಗೆ ಜೂನ್ ೭ರಂದು ಅಧಿಕೃತ ಚಾಲನೆ ದೊರೆಯಲಿದೆ.

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಈ ಮಹೋತ್ಸವ ಕಾರ್ಯಕ್ರಮವನ್ನು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಜೆ ೫:೩೦ಕ್ಕೆ ನಗರದ ಕಳಸಾಪುರ ರಸ್ತೆಯಲ್ಲಿರುವ ಶ್ರೀ ಬಯಲು ಆಂಜನೇಯ ದೇವಸ್ಥಾನ ಆವರಣದಲ್ಲಿ ಅಮೃತಹಸ್ತದಿಂದ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಸಿ ನೆಡುವ ಕಾರ್ಯಕ್ರಮ ಜರುಗಲಿವೆ ಎಂದು ರಜತ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಬಹಿಷ್ಕಾರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಈ ಬಾರಿ ಪದವಿ ಪರೀಕ್ಷಾ ಕಾರ್ಯ ಹಾಗೂ ಮೌಲ್ಯಮಾಪನ ಕಾರ್ಯವನ್ನು ರಾಜ್ಯಾದ್ಯಂತ ಬಹಿಷ್ಕರಿಸುವ ಮೂಲಕ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ ಕೊಪ್ಪಳ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷಾ ನಿರ್ವಹಣೆಗೆ ಅಡಚಣೆ ಉಂಟಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅನಿವಾರ್ಯತೆ ಎದುರಾಗಿದೆ.

2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸುಮಾರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಐದು ಹಂತದ ಕೌನ್ಸೆಲಿಂಗ್ ಮೂಲಕ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿತ್ತು. ಶೈಕ್ಷಣಿಕ ಅರ್ಹತೆಗೆ ಆದ್ಯತೆ ನೀಡಿ ನೇಮಕ ಪ್ರಕ್ರಿಯೆ ನಡೆಸಲಾಗಿದ್ದು, ಕೆಲ ಕೋರ್ಸ್‌ಗಳಿಗೆ ಅನುಭವ ಆಧಾರದ ಮೇಲೆ ನಾನ್-ಯುಜಿಸಿ ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಈ ಬಾರಿ ನಕಲಿ ದಾಖಲೆಗಳ ಹಾವಳಿ ತಪ್ಪಿಸಲು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಇದರ ಪರಿಣಾಮ ಕೆಲವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದು, ಪ್ರಕ್ರಿಯೆ ಇನ್ನೂ ಮುಂದುವರಿದಿದೆ.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ವರ್ಷದ ಅಂತ್ಯದ ಅವಧಿ ಏಕರೂಪದಲ್ಲಿಲ್ಲ. ಕೆಲವು ವಿವಿಗಳಲ್ಲಿ ಎಪ್ರಿಲ್, ಇನ್ನೂ ಕೆಲವು ಕಡೆ ಮೇ ಹಾಗೂ ಜೂನ್ ತಿಂಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಈಗಾಗಲೇ ಸೇವೆಯಿಂದ ಬಿಡುಗಡೆಗೊಂಡಿರುವ ಉಪನ್ಯಾಸಕರು ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಪ್ರಶ್ನೆಪತ್ರಿಕೆ ಸಿದ್ಧತೆ, ಬಿಒಇ, ಸ್ಕ್ವಾಡ್ ಮೊದಲಾದ ಪರೀಕ್ಷಾ ಕಾರ್ಯಗಳಲ್ಲಿ ಬಳಸದೇ ಇರುವ ಧೋರಣೆ ವಿರುದ್ಧವೂ ಅಸಮಾಧಾನ ವ್ಯಕ್ತವಾಗಿದೆ. “ಪಾಠ ಮಾಡುವಾಗ ಸಮಸ್ಯೆಯಾಗದವರು ಪ್ರಶ್ನೆಪತ್ರಿಕೆ ಸಿದ್ಧಪಡಿಸುವಾಗ ಸಮಸ್ಯೆಯಾಗುತ್ತಾರೆಯೇ?” ಎನ್ನುವುದು ಅವರ ಪ್ರಶ್ನೆ.

ಅತಿಥಿ ಉಪನ್ಯಾಸಕರನ್ನು ಕೆಲವೆಡೆ ಕಾಯಂ ಬೋಧಕರು ‘ಜೀತದಾಳು’ಗಳಂತೆ ಕಾಣುತ್ತಿರುವುದು ಬೇಸರ ತಂದಿದೆ. ಹತ್ತು ತಿಂಗಳು ಸೇವೆಯಲ್ಲಿ ಮುಂದುವರಿಸಿ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.

ಇದೀಗ ಕೆಲವು ಕಾಲೇಜುಗಳಲ್ಲಿ ಪರೀಕ್ಷೆಗಳು ಆರಂಭಗೊಂಡಿದ್ದು, ಪರೀಕ್ಷಾ ಕಾರ್ಯ ನಿರ್ವಹಣೆಗೆ ಪ್ರಾಚಾರ್ಯರು ಪರದಾಡುವಂತಾಗಿದೆ. ಪರ್ಯಾಯವಾಗಿ ಖಾಸಗಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಪರೀಕ್ಷಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಆದರೆ ಮೌಲ್ಯಮಾಪನ ಕಾರ್ಯವನ್ನು ಹೇಗೆ ನಿರ್ವಹಿಸುವುದು ಎಂಬುದು ವಿಶ್ವವಿದ್ಯಾಲಯಗಳಿಗೆ ದೊಡ್ಡ ಸವಾಲಾಗಿದೆ.

“ರಾಜ್ಯ ಸಂಘಟನೆಯ ಕರೆಯ ಮೇರೆಗೆ ಪರೀಕ್ಷಾ ಹಾಗೂ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಿದ್ದೇವೆ. ಕೆಲವರು ಬೆದರಿಕೆಗೆ ಹೆದರಿ ಕೆಲಸಕ್ಕೆ ಹಾಜರಾಗಿರುವುದು ಗೊತ್ತಾಗಿದೆ. ಯಾವುದಕ್ಕೂ ಅಂಜಬೇಡಿ. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯುತ್ತದೆ.”

ಡಾ. ವೀರಣ್ಣ ಸಜ್ಜನರ

“ಜೂನ್‌ವರೆಗೂ ಸೇವೆಯಲ್ಲಿ ಮುಂದುವರಿಸಿದರೆ ಪರೀಕ್ಷಾ ಕಾರ್ಯದಲ್ಲಿ ಕೈಜೋಡಿಸುತ್ತೇವೆ. ಮನೆಯಿಂದ ಹೊರಗೆ ನೂಕಿ ಮನೆ ಕೆಲಸ ಮಾಡು ಎಂದರೆ ಹೇಗೆ ಸಾಧ್ಯ? ಗೌರವದಿಂದ ನಡೆಸಿಕೊಳ್ಳುವ ಪ್ರಾಚಾರ್ಯರೂ ಇದ್ದಾರೆ. ಕೆಲವರು ಸೇವಾ ಪ್ರಮಾಣ ಪತ್ರ ನೀಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ.”

ಡಾ. ಹನುಮಂತಗೌಡ ಕಲ್ಮನಿ

“ಜೂನ್ 4 ಮತ್ತು 5ರಂದು ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗುವ ಪರೀಕ್ಷೆಗಳಿದ್ದವು. ಸ್ವಲ್ಪ ಮಟ್ಟಿಗೆ ತೊಂದರೆ ಉಂಟಾಯಿತು. ಪರ್ಯಾಯವಾಗಿ ಖಾಸಗಿ ಪಿಯು ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಂಡಿದ್ದೇವೆ. ಸದ್ಯ ಪರೀಕ್ಷೆಗಳು ಸುಗಮವಾಗಿ ನಡೆದಿವೆ.”

ಪ್ರೊ. ವೈ.ಬಿ. ಅಂಗಡಿ

“ಕೊಪ್ಪಳ ವಿವಿ ವ್ಯಾಪ್ತಿಯ ಗಂಗಾವತಿ ಹಾಗೂ ಕೊಪ್ಪಳ ಕಾಲೇಜುಗಳಲ್ಲಿ ಹೆಚ್ಚಿನ ಪರೀಕ್ಷಾ ಕೊಠಡಿಗಳಿವೆ. ಅಲ್ಲಿ ಸ್ವಲ್ಪ ತೊಂದರೆ ಆಗಬಹುದು. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರದ ಉನ್ನತಾಧಿಕಾರಿಗಳಿಗೆ ತಿಳಿಸಿದ್ದೇವೆ.”

ಡಾ. ಎಸ್.ವಿ. ಡಾಣಿ

ಸರ್ಕಾರದೊಳಗಿನ ಭಿನ್ನಮತ ಇನ್ನೂ ಉಲ್ಬಣ: ಗೋವಿಂದಗೌಡ್ರ

ಗದಗ: ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಬದಲಾವಣೆಯ ಮೂಲಕ ಹೊಸ ರಾಜಕೀಯ ನಾಟಕಕ್ಕೆ ನಾಂದಿ ಹಾಡಿದ್ದು, ಹೊಸ ಸಚಿವ ಸಂಪುಟ ರಚನೆಯಾದ ಕೆಲವೇ ದಿನಗಳಲ್ಲಿ ಭಿನ್ನಮತ ಸ್ಫೋಟಗೊಂಡಿರುವುದು ಸರ್ಕಾರದ ಅಸ್ಥಿರತೆಯ ಸೂಚಕವಾಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಟೀಕಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಮಾಣವಚನ ಸ್ವೀಕರಿಸಿದ 14 ಸಚಿವರಲ್ಲೇ ಈಗಾಗಲೇ ಕೆಲವರು ಅಸಮಾಧಾನ ಹೊರಹಾಕಿರುವುದು ಸರ್ಕಾರದ ಒಳಜಗಳವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿದರು. ಉಳಿದ ಶಾಸಕರಲ್ಲೂ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು, ಹೊಸ ಕಾಂಗ್ರೆಸ್ಸಿಗರು, ವಿವಿಧ ಗುಂಪುಗಳ ರಾಜಕಾರಣ ಜೋರಾಗಿದ್ದು, ಇದು ಪಕ್ಷದ ಪತನಕ್ಕೆ ಕಾರಣವಾಗಲಿದೆ ಎಂದು ಗೋವಿಂದಗೌಡ್ರ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಮುಂಗಾರು ಆರಂಭವಾಗಿರುವ ಈ ಸಂದರ್ಭದಲ್ಲಿ ರೈತರಿಗೆ ಸಮರ್ಪಕ ಬೀಜ ಮತ್ತು ಗೊಬ್ಬರ ಪೂರೈಕೆಯತ್ತ ಸರ್ಕಾರ ಗಮನ ಹರಿಸಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರು ಆಂತರಿಕ ಕಚ್ಚಾಟ ಮತ್ತು ಅಧಿಕಾರದ ರಾಜಕಾರಣದಲ್ಲಿ ತೊಡಗಿರುವುದು ರೈತರ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದರು.

ಮುಂಗಾರು ಹಿನ್ನೆಲೆಯಲ್ಲಿ ಜನ, ಜಾನುವಾರು ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಅಗತ್ಯವಿದೆ. ಆದರೆ ಆಡಳಿತ ಪಕ್ಷದ ಶಾಸಕರು ಅಧಿಕಾರದ ಲೆಕ್ಕಾಚಾರಕ್ಕಾಗಿ ಕ್ಷೇತ್ರಗಳನ್ನು ಬಿಟ್ಟು ಬೆಂಗಳೂರು ಹಾಗೂ ದೆಹಲಿಗೆ ಸುತ್ತಾಟ ನಡೆಸುತ್ತಿರುವುದು ದುಃಖಕರ ಬೆಳವಣಿಗೆ ಎಂದು ಟೀಕಿಸಿದರು.

ಮಳೆಯಿಂದ ಯಾವುದೇ ಅನಾಹುತ ಸಂಭವಿಸಿದರೆ ಅದರ ನೈತಿಕ ಹೊಣೆಗಾರಿಕೆಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಎಚ್ಚರಿಸಿದರು.

ಪ್ರಕೃತಿಯ ಉಳಿವಿಗೆ ಯುವಕರೇ ಶಕ್ತಿ: ಡಾ. ವಿ.ಟಿ. ನಾಯ್ಕರ್

ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವ ಪರಿಸರ ದಿನವು ಕೇವಲ ಆಚರಣೆಯ ದಿನವಲ್ಲ. ಮುಂದಿನ ಪೀಳಿಗೆಗಾಗಿ ಹಸಿರು ಮತ್ತು ಆರೋಗ್ಯಕರ ಭೂಮಿಯನ್ನು ಉಳಿಸುವ ಸಂಕಲ್ಪದ ದಿನವಾಗಿದೆ” ಎಂದು ನಗರದ ಶ್ರೀ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಪ್ರಾಚಾರ್ಯರು ಡಾ. ವಿ.ಟಿ. ನಾಯ್ಕರ್ ಅಭಿಪ್ರಾಯಪಟ್ಟರು.

ನಗರದ ಆದರ್ಶ ಶಿಕ್ಷಣ ಸಮಿತಿ ಅಧೀನದ ಶ್ರೀ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಐಕ್ಯೂಎಸಿ, ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿದ ಡಾ. ನಾಯ್ಕರ್, ಪರಿಸರವು ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು, ಗಾಳಿ, ನೀರು, ಮಣ್ಣು, ಮರಗಳು ಹಾಗೂ ಜೀವಜಾಲಗಳು ಸೇರಿ ಪರಿಸರವನ್ನು ನಿರ್ಮಿಸುತ್ತವೆ ಎಂದು ಹೇಳಿದರು.

“ಪರಿಸರ ಮಾಲಿನ್ಯ, ಅರಣ್ಯ ನಾಶ, ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇಂದಿನ ಜಗತ್ತಿನ ಗಂಭೀರ ಸಮಸ್ಯೆಗಳಾಗಿವೆ. ಇಂತಹ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು,” ಎಂದು ಅವರು ಕರೆ ನೀಡಿದರು.

ಮೇರಾ ಯುವ ಭಾರತ್ ಜಿಲ್ಲಾ ಯುವ ಅಧಿಕಾರಿ ಶ್ರೀ ರಾಕೇಶ್ ರೆಡ್ಡಿ ಮಾತನಾಡಿ, “ಪರಿಸರ ಎಂದಾಗ ನಮಗೆ ಮೊದಲಾಗಿ ನೆನಪಾಗುವುದು ಸಾಲುಮರದ ತಿಮ್ಮಕ್ಕ. ಯಾವುದೇ ಸರ್ಕಾರಿ ನೆರವಿಲ್ಲದೆ ಸಾವಿರಾರು ಮರಗಳನ್ನು ಮಕ್ಕಳಂತೆ ಸಾಕಿ ಬೆಳೆಸಿದ ಅವರ ಜೀವನ ಯುವಕರಿಗೆ ಮಾದರಿಯಾಗಿದೆ,” ಎಂದು ಹೇಳಿದರು.

ಸಾಲುಮರದ ತಿಮ್ಮಕ್ಕ ಅವರ ಸೇವೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಒಬ್ಬ ವ್ಯಕ್ತಿಯ ಸಂಕಲ್ಪ ಸಮಾಜದ ಮೇಲೆ ಎಷ್ಟು ದೊಡ್ಡ ಪ್ರಭಾವ ಬೀರುತ್ತದೆ ಎಂಬುದಕ್ಕೆ ಅವರು ಜೀವಂತ ಉದಾಹರಣೆಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಬಿ.ಪಿ. ಜೈನರ, ಮೇರಾ ಯುವ ಭಾರತ್ ಕಾರ್ಯಕ್ರಮ ಸಂಯೋಜಕ ಶ್ರೀ ರವಿ ಹೊಂಬಾಳಿ, ಡಾ. ಸವಿತಾ ಬಂಡಾರ್ಕರ್, ಡಾ. ಸುನಿತಾ ನಾಯಕ್, ಪ್ರೊ. ಎಸ್.ಬಿ. ಜಾದವ್, ಪ್ರೊ. ಫಿರೋಜ್ ಖಾನ್, ಶ್ರೀ ಪ್ರಶಾಂತ್ ಹೊಂಬಾಳಿ, ಪ್ರೊ. ಸುನಿತಾ ತಿರ್ಲಾಪುರ, ಪ್ರೊ. ಮೋಹನ್ ಡಿ., ಶ್ರೀ ವಿ.ಎಲ್. ಕಲಬುರ್ಗಿ, ಶ್ರೀ ರವೀಶ್, ಶ್ರೀ ಬಡಿಗೇರ್, ಶ್ರೀಮತಿ ಸವಿತಾ ಇಬ್ಬನಿ, ಶ್ರೀಮತಿ ಪುರೋಹಿತ್, ಶ್ರೀಮತಿ ಭಾಗ್ಯಲಕ್ಷ್ಮಿ ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿ ಪ್ರತಿನಿಧಿ ಕು. ಭರತ್ ಸ್ವಾಮಿ ಸೇರಿದಂತೆ ಸ್ವಯಂಸೇವಕರು ಉಪಸ್ಥಿತರಿದ್ದರು.

“ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಹೆಚ್ಚು ಗಿಡ ನೆಡಿ, ನೀರನ್ನು ಸಂರಕ್ಷಿಸಿ; ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.”

ಡಾ. ವಿ.ಟಿ. ನಾಯ್ಕರ್

ಕೆರೆಯಲ್ಲೇ ಕನಸು ಬಿತ್ತಿದ ಮಹಿಳೆಯರು

ವಿಜಯಸಾಕ್ಷಿ ಸುದ್ದಿ, ಗದಗ: DAY-NRLM ಸಂಜೀವಿನಿ ಯೋಜನೆಯಡಿ ಜಾರಿಗೊಂಡಿರುವ “ಮತ್ಸ್ಯ ಸಂಜೀವಿನಿ” ಯೋಜನೆ ಗದಗ ಜಿಲ್ಲೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಮಾದರಿಯಾಗಿದೆ. ಮೀನುಗಾರಿಕೆಯನ್ನು ಆಧಾರವಾಗಿಸಿಕೊಂಡು ಗ್ರಾಮೀಣ ಮಹಿಳೆಯರು ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದ್ದು, ಈಗ ಈ ಯೋಜನೆ ಜಿಲ್ಲೆಯಾದ್ಯಂತ ಗಮನ ಸೆಳೆಯುತ್ತಿದೆ.

ತಾಲೂಕಿನ ಹಾತಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಬಾಪುರ ಗ್ರಾಮದ ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮೀನು ಸಾಕಾಣಿಕೆ ಮೂಲಕ ಉತ್ತಮ ಆದಾಯ ಗಳಿಸಿ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಹಿಂದೆ ಕೂಲಿ ಕೆಲಸ ಹಾಗೂ ಅಲ್ಪ ಪ್ರಮಾಣದ ಕೃಷಿಯನ್ನೇ ನಂಬಿಕೊಂಡಿದ್ದ ಮಹಿಳೆಯರು ಇಂದು ತಮ್ಮದೇ ಆದ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿರುವುದು ವಿಶೇಷ.

ಜಿಲ್ಲೆಯಾದ್ಯಂತ 16 ಗ್ರಾಮ ಪಂಚಾಯತ್ ಮಟ್ಟದ ಕೆರೆಗಳನ್ನು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮೂಲಕ ಗುತ್ತಿಗೆ ಪಡೆದು ಸ್ವಸಹಾಯ ಸಂಘಗಳ ಸದಸ್ಯರಿಗೆ ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದೇ ಯೋಜನೆಯಡಿ ಹಾತಲಗೇರಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಾಗೂ ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘ ಕೈಜೋಡಿಸಿ ಯಶಸ್ವಿ ಮೀನುಗಾರಿಕೆ ಮಾದರಿಯನ್ನು ನಿರ್ಮಿಸಿದೆ.

2025ರಲ್ಲಿ ಜಿಲ್ಲಾ ಪಂಚಾಯತ್ ಗದಗ ಜಿಲ್ಲಾ ಸಂಪನ್ಮೂಲ ಕೇಂದ್ರ, ಹುಲಕೋಟೆಯಲ್ಲಿ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಮೂರು ದಿನಗಳ ವಸತಿ ಸಹಿತ ವಿಶೇಷ ತರಬೇತಿ ಆಯೋಜಿಸಲಾಗಿತ್ತು. ಮೀನು ಸಾಕಾಣಿಕೆಯ ವೈಜ್ಞಾನಿಕ ವಿಧಾನಗಳು, ಕೆರೆ ನಿರ್ವಹಣೆ, ಮೀನುಗಳ ಪೋಷಣೆ, ಆಹಾರ ವ್ಯವಸ್ಥೆ ಹಾಗೂ ಮಾರುಕಟ್ಟೆ ಸಂಪರ್ಕ ಕುರಿತು ಮಹಿಳೆಯರಿಗೆ ಸಮಗ್ರ ಮಾಹಿತಿ ನೀಡಲಾಯಿತು.

ತರಬೇತಿ ಬಳಿಕ ಅಮೃತ ಸರೋವರ ಯೋಜನೆಯಡಿ ನಿರ್ಮಿಸಲಾದ ಕೆರೆಯನ್ನು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗೆ ಪಡೆದುಕೊಂಡಿತು. ಬಳಿಕ ಸಂಘದ ಸದಸ್ಯರು ಮೀನುಗಾರಿಕೆ ಚಟುವಟಿಕೆಗೆ ಚಾಲನೆ ನೀಡಿದರು.

ಮೀನುಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ಸುಮಾರು 12 ಸಾವಿರ ಕಟ್ಲಾ ಹಾಗೂ ರೋಹು ಮೀನು ಮರಿಗಳನ್ನು ಕೆರೆಗೆ ಬಿಡಲಾಯಿತು. ತಾಲೂಕು ಸಂಜೀವಿನಿ ಯೋಜನೆ ಅಧಿಕಾರಿಗಳು, ಕೃಷಿ ಸಖಿಯರು ಹಾಗೂ ಪಶು ಸಖಿಯರು ನಿರಂತರ ತಾಂತ್ರಿಕ ಸಲಹೆ ನೀಡಿದರು.

ಪ್ರತಿದಿನ ಕೆರೆಯ ನಿರ್ವಹಣೆ, ಮೀನುಗಳಿಗೆ ಆಹಾರ ಒದಗಿಸುವುದು ಹಾಗೂ ಬೆಳವಣಿಗೆಯ ಮೇಲ್ವಿಚಾರಣೆಯನ್ನು ಮಹಿಳೆಯರು ಸ್ವತಃ ನಿರ್ವಹಿಸಿದರು. ಸುಮಾರು ಎಂಟರಿಂದ ಒಂಬತ್ತು ತಿಂಗಳ ಪರಿಶ್ರಮದ ಬಳಿಕ ಮೊದಲ ಹಂತದ ಕೊಯ್ಲಿನಲ್ಲಿ ಸುಮಾರು 60 ಕೆ.ಜಿ. ಮೀನುಗಳನ್ನು ಸಂಗ್ರಹಿಸಲಾಯಿತು.

ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹65 ದರದಲ್ಲಿ ಮಾರಾಟವಾಗಿದ್ದು, ಮೀನುಗಳ ತೂಕ 700 ಗ್ರಾಂದಿಂದ 1 ಕೆ.ಜಿ.ವರೆಗೆ ಇತ್ತು. ಮೀನು ಮಾರಾಟದಿಂದ ಬಂದ ಆದಾಯ ಮಹಿಳೆಯರ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಲು ನೆರವಾಗಿದೆ.

“ಮತ್ಸ್ಯ ಸಂಜೀವಿನಿ” ಯೋಜನೆ ಕೇವಲ ಆದಾಯದ ಮೂಲವಾಗಿಲ್ಲ, ಮಹಿಳೆಯರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಸ್ವಾವಲಂಬನೆ ಹಾಗೂ ಉದ್ಯಮಶೀಲತೆಯ ಮನೋಭಾವ ಬೆಳೆಸಿದೆ. ಸಾರ್ವಜನಿಕ ಸಂಪನ್ಮೂಲವಾಗಿದ್ದ ಕೆರೆಯನ್ನು ಸಮುದಾಯದ ಆರ್ಥಿಕ ಅಭಿವೃದ್ಧಿಗೆ ಬಳಸಿಕೊಂಡಿರುವುದು ಗ್ರಾಮೀಣ ಅಭಿವೃದ್ಧಿಯ ಮಾದರಿಯಾಗಿದೆ.

ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ನಾಗರಾಜ್ ಚಳ್ಳಜ್ಜಿಮನೆ, ಜಿಲ್ಲಾ ಪಂಚಾಯತ್ ವ್ಯವಸ್ಥಾಪಕರು (ಕೃಷಿ) ಮಡ್ಡೆಪ್ಪ ಮಲ್ಲಿಮಾರ್ ಹಾಗೂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸಿದ್ದು ಬಿ. ಸತ್ಯಣ್ಣವರ ಅವರು ಯೋಜನೆಯ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ್ದು, ಯೋಜನೆಯ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

“ಹಿಂದೆ ನಮ್ಮ ಕುಟುಂಬದ ಆದಾಯ ತುಂಬಾ ಕಡಿಮೆಯಾಗಿತ್ತು. ಸಂಜೀವಿನಿ ಯೋಜನೆಯಡಿ ದೊರೆತ ತರಬೇತಿ ಮತ್ತು ಅವಕಾಶದಿಂದ ಮೀನುಗಾರಿಕೆಯನ್ನು ಕಲಿತು ಇಂದು ಸ್ವಂತ ಆದಾಯ ಗಳಿಸುತ್ತಿದ್ದೇವೆ. ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಅಗತ್ಯಗಳನ್ನು ಆತ್ಮವಿಶ್ವಾಸದಿಂದ ಪೂರೈಸುತ್ತಿದ್ದೇವೆ. ಮತ್ಸ್ಯ ಸಂಜೀವಿನಿ ಯೋಜನೆ ನಮ್ಮ ಬದುಕಿಗೆ ಹೊಸ ಬೆಳಕು ತಂದಿದೆ.”

ಶಿವಲೀಲಾ ಹರಿಜನ, ಸದಸ್ಯೆ, ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘ, ಸಂಬಾಪುರ

ಮಹಿಳಾ ಸಬಲೀಕರಣಕ್ಕೆ ‘ಮತ್ಸ್ಯ ಸಂಜೀವಿನಿ’ ಮಾದರಿ

ಗ್ರಾಮೀಣ ಮಹಿಳೆಯರಿಗೆ ಪರ್ಯಾಯ ಜೀವನೋಪಾಯ ಕಲ್ಪಿಸುವ ಉದ್ದೇಶದಿಂದ ಆರಂಭವಾದ “ಮತ್ಸ್ಯ ಸಂಜೀವಿನಿ” ಯೋಜನೆ ಇಂದು ಗದಗ ಜಿಲ್ಲೆಯಲ್ಲಿ ಯಶಸ್ವಿ ಮಾದರಿಯಾಗಿ ಹೊರಹೊಮ್ಮಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವ ಜೊತೆಗೆ ಸಾಮಾಜಿಕ ಗೌರವ ಮತ್ತು ಆತ್ಮಸ್ಥೈರ್ಯ ಬೆಳೆಸುವಲ್ಲಿ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ.

ರಾಜ್ಯ ಯೋಗಾಸನ ಸ್ಪರ್ಧೆಗೆ ಗದಗ ಜಿಲ್ಲಾ ತಂಡ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್‌ಶಿಪ್-2026 ಸ್ಪರ್ಧೆಗಳಲ್ಲಿ ಭಾಗವಹಿಸುವ ಗದಗ ಜಿಲ್ಲಾ ತಂಡವನ್ನು ಆಯ್ಕೆ ಮಾಡಲಾಗಿದೆ. ಗದಗ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ (ರಿ) ವತಿಯಿಂದ ಆಯೋಜಿಸಿದ್ದ 29ನೇ ಗದಗ ಜಿಲ್ಲಾ ಮಟ್ಟದ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್-2026ರಲ್ಲಿ ವಿಜೇತರಾದ ಸ್ಪರ್ಧಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಜೂನ್ 6 ಮತ್ತು 7ರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಗದಗ ಜಿಲ್ಲೆಯ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ.

ಬಾಲಕರ ವಿಭಾಗದಲ್ಲಿ ಹರ್ಷವರ್ಧನ ಕೊಲ್ಲರಿ, ನವೀನ ಪಲ್ಲೇದ, ವೆಂಕಟೇಶ ಹಾಲನ್ನವರ, ಆದಿತ್ಯ ಶೇಠ, ಮಲ್ಲಿಕಾರ್ಜುನ ಅಳಗವಾಡಿ, ಚೇತನ ಕೋಟೇಗೌಡ್ರ, ಫಕೀರಯ್ಯ ಕಲ್ಯಾಣಮಠ ಹಾಗೂ ಪ್ರಜ್ವಲ್ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ

ಅಪಾತ ಬೆಟಗೇರಿ, ಗೌರಿ ನೀಲಗುಂದ, ಲಕ್ಷ್ಮೀ ಬಸರಿ, ಶ್ರೀನವನಿಧಿ ಲದ್ದಿಯವರ, ಮನಿರಾಧಾ ಅಳಗವಾಡಿ, ಸಂಜನಾ ಮಡಿವಾಳರ, ನಮ್ರತಾ ವೆರ್ಣೇಕರ, ಪೂರ್ವಿ ಬಾಳನಗೌಡ್ರ ಹಾಗೂ ಸುಷ್ಮಾ ಮುಂದಿನಮನಿ ಆಯ್ಕೆಯಾಗಿದ್ದಾರೆ.

ಮಹಿಳೆಯರ ವಿಭಾಗದಲ್ಲಿ

ಸುಶ್ಮಿತಾ ಮಾರನಬಸರಿ, ಚೈತ್ರಾ ಸೋಮನಗೌಡ್ರ ಹಾಗೂ ನಿರ್ಮಲಾ ಕೊಟ್ರಣ್ಣನ್ನವರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸ್ಪರ್ಧೆಯ ನಿರ್ಣಾಯಕರಾಗಿ ಚೇತನ ಚುಂಚಾ, ಸುಮಂಗಲಾ ಹದ್ಲಿ ಹಾಗೂ ಅನುರಾಧಾ ಶಿರಿಯಣ್ಣವರ ಕಾರ್ಯನಿರ್ವಹಿಸಲಿದ್ದಾರೆ.

ಗದಗ ಜಿಲ್ಲಾ ತಂಡಕ್ಕೆ ಆಯ್ಕೆಯಾದ ಸ್ಪರ್ಧಿಗಳು, ನಿರ್ಣಾಯಕರು ಹಾಗೂ ಪ್ರೋತ್ಸಾಹ ನೀಡಿದ ಪಾಲಕರಿಗೆ ಗದಗ ಜಿಲ್ಲಾ ಯೋಗ ಒಕ್ಕೂಟ, ಗದಗ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಮತ್ತು ಯೋಗಾಸನ ಕ್ರೀಡಾಭಿಮಾನಿಗಳ ಪರವಾಗಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಎಸ್. ಪಲ್ಲೇದ ಹಾಗೂ ಬಸವ ಯೋಗ ಚಿಂತನ ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ ಶುಭಾಶಯ ಕೋರಿದ್ದಾರೆ.

ಸಸಿ ನೆಡಿ… ಭವಿಷ್ಯ ಉಳಿಸಿ: ಎಸ್. ಅನ್ವರ್ ಭಾಷಾ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನು ನೆಟ್ಟು ಅದರ ಪೋಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಹಗರಿಬೊಮ್ಮನಹಳ್ಳಿ ಗೃಹರಕ್ಷಕ ದಳ ಘಟಕದ ಅಧಿಕಾರಿ ಎಸ್. ಅನ್ವರ್ ಭಾಷಾ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಗರಿಬೊಮ್ಮನಹಳ್ಳಿ ಗೃಹರಕ್ಷಕ ದಳದ ವತಿಯಿಂದ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ, ಹಸಿರು ವಾತಾವರಣ ನಿರ್ಮಾಣ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸುವ ಉದ್ದೇಶದಿಂದ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಸಸಿ ನೆಡುವ ಮೂಲಕ ಪರಿಸರದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಮುಖ್ಯಸ್ಥರು ಶರಣಪ್ಪ, ಹನುಮಂತಪ್ಪ, ಕೆ. ಮಂಜಪ್ಪ, ಜಂಬಣ್ಣ, ಕೊಟ್ರಯ್ಯ, ಗೌಡಪ್ಪ, ಮಂಜುನಾಥ, ವೆಂಕಟೇಶ್ ಪತ್ತಾರ್, ಜಯರಾಜ್ ನಾಯ್ಕ, ಕೊಟ್ರೇಶ್, ಹನುಮಂತಪ್ಪ ಚಿಂತರಪಳ್ಳಿ ಸೇರಿದಂತೆ ಸಿಬ್ಬಂದಿ ಭಾಗವಹಿಸಿ ಸಸಿ ನೆಡುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಪರಿಸರ ಸಂರಕ್ಷಣೆಯ ಸಂದೇಶ ಸಾರಿದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

error: Content is protected !!