ಉಡುಪಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಒಂದು ತಿಂಗಳ ಹೆಣ್ಣು ಮಗುವನ್ನು ಕಾನೂನುಬಾಹಿರವಾಗಿ ದತ್ತು ನೀಡಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಉಡುಪಿಯಲ್ಲಿ ವೈದ್ಯ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಮತ್ ನರ್ಸಿಂಗ್ ಹೋಮ್ನ ಡಾ. ಕೆ. ಸುರೇಂದ್ರ ಕಾಮತ್ ಈ ದಂಧೆಯ ಪ್ರಮುಖ ಪಾತ್ರಧಾರಿ ಎಂದು ಆರೋಪಿಸಲಾಗಿದೆ.
ಬ್ರಹ್ಮಾವರ ಸಿಡಿಪಿಒ ಕಚೇರಿಗೆ ಬಂದ ಗುಪ್ತ ಮಾಹಿತಿಯ ಆಧಾರದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಿಡಿಪಿಒ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ. ನೇಜಾರು ಸಂತೆಕಟ್ಟೆಯ ದಂಪತಿ ಕಾನೂನುಬಾಹಿರವಾಗಿ ಮಗುವನ್ನು ಸಾಕುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮನೆ ಪರಿಶೀಲನೆ ನಡೆಸಲಾಗಿದೆ.
ದಾಳಿ ವೇಳೆ ಮಗುವಿನ ಬಗ್ಗೆ ಸರಿಯಾದ ದಾಖಲೆಗಳನ್ನು ನೀಡಲು ದಂಪತಿ ವಿಫಲರಾಗಿದ್ದು, ನಂತರದ ವಿಚಾರಣೆಯಲ್ಲಿ ಗಂಭೀರ ಅಕ್ರಮ ಬೆಳಕಿಗೆ ಬಂದಿದೆ. ವೈದ್ಯರ ಸಹಕಾರದೊಂದಿಗೆ ನಕಲಿ ಜನನ ಪ್ರಮಾಣ ಪತ್ರ ಸೃಷ್ಟಿಸಿ ಮಗುವನ್ನು ದಂಪತಿಗೆ ನೀಡಲಾಗಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಮಕ್ಕಳಿಲ್ಲದ ದಂಪತಿಗೆ ವೈದ್ಯರು ಮಧ್ಯವರ್ತಿಯಾಗಿ ಮಗುವನ್ನು ನೀಡಿರುವುದು ಹಾಗೂ ದಾಖಲೆಗಳನ್ನು ತಿದ್ದಿ ಅಧಿಕೃತ ಪೋಷಕರಾಗಿ ತೋರಿಸಿರುವುದು ಪ್ರಕರಣವನ್ನು ಗಂಭೀರಗೊಳಿಸಿದೆ. ಜೊತೆಗೆ ಮಗುವಿನ ನಿಜವಾದ ಪೋಷಕರಾದ ಕಾರ್ಕಳದ ಸಂಪತ್ ಮತ್ತು ಸುಪ್ರೀತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಮತ್ತು ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

