Home Blog Page 3

Gold Rate Today: ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್: ಬಂಗಾರದ ಬೆಲೆ ದಿಢೀರ್‌ ಕುಸಿತ! ಇಂದಿನ ಬೆಲೆ ಎಷ್ಟು?

ಬೆಂಗಳೂರು: ಮಾರ್ಚ್ ಎರಡನೇ ವಾರದ ಆರಂಭದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಸೋಮವಾರ ಚಿನ್ನದ ದರದಲ್ಲಿ ದೊಡ್ಡ ಮಟ್ಟದ ಕುಸಿತ ದಾಖಲಾಗಿದೆ.

ಇಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹1,960 ಇಳಿಕೆ ಕಂಡು ₹1,61,680ಕ್ಕೆ ತಲುಪಿದೆ. ಒಂದು ಗ್ರಾಂ ಚಿನ್ನದ ಬೆಲೆ ₹196 ಇಳಿಕೆ ಆಗಿ ₹16,168ಕ್ಕೆ ದಾಖಲಾಗಿದೆ.

ಇನ್ನೂ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹180 ಇಳಿಕೆ ಆಗಿ ₹14,820 ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ₹1,48,200ಕ್ಕೆ ತಲುಪಿದೆ.

ಇದೇ ವೇಳೆ ಬೆಳ್ಳಿ ಬೆಲೆಯಲ್ಲೂ ಕುಸಿತ ಕಂಡುಬಂದಿದ್ದು, ಕೆಜಿಗೆ ಸುಮಾರು ₹5,000 ಇಳಿಕೆ ಆಗಿದೆ. 10 ಗ್ರಾಂ ಬೆಳ್ಳಿ ದರ ₹2,80,000ಕ್ಕೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಇರಾನ್–ಅಮೆರಿಕ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದಲ್ಲಿ ಏರಿಳಿತ ಕಂಡುಬರುತ್ತಿದ್ದು, ಇದರ ಪರಿಣಾಮವಾಗಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣುತ್ತಿದೆ.

ಸದ್ಯ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ಜಾಗತಿಕ ಅನಿಶ್ಚಿತತೆ ಹಾಗೂ ಷೇರು ಮಾರುಕಟ್ಟೆಯ ಪ್ರಭಾವದಿಂದ ಮುಂದಿನ ದಿನಗಳಲ್ಲಿ ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪ್ರಿಯಕರನ ಬಿಡುಗಡೆಗೆ ಒತ್ತಾಯಿಸಿ ಮೊಬೈಲ್ ಟವರ್ ಏರಿದ ಮಹಿಳೆ!

0

ಪಾಟ್ನಾ: ತನ್ನ ಪ್ರಿಯಕರನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಹಿಳೆಯೊಬ್ಬರು ಮೊಬೈಲ್ ಟವರ್ ಏರಿದ ಘಟನೆ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಗೋಪಾಲ್‌ಗಂಜ್ ಜಿಲ್ಲೆಯ ಬಂಕಟ ಜಾಗಿರ್ದಾರಿ ಗ್ರಾಮದಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆ ಮತ್ತು ಆಕೆಯ ಪ್ರಿಯಕರ ಪವನ್ ಚೌಹಾಣ್ ಇಬ್ಬರೂ ಗೋಪಾಲ್‌ಗಂಜ್ ಜಿಲ್ಲೆಯ ಬಂಕತಾ ಮಾಲ್ ಗ್ರಾಮದ ನಿವಾಸಿಗಳಾಗಿದ್ದಾರೆ. ಗುರುವಾರ ಮಹಿಳೆ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಮಹಿಳೆಯನ್ನು ಅಪಹರಿಸಿದ್ದಾನೆ ಎಂಬ ಶಂಕೆಯ ಮೇರೆಗೆ ಪೊಲೀಸರು ಪವನ್ ಚೌಹಾಣ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.

ಪ್ರಿಯಕರ ಬಂಧನದ ವಿಷಯ ತಿಳಿದ ಬಳಿಕ ಮಹಿಳೆ ಶುಕ್ರವಾರ ಗ್ರಾಮದಲ್ಲಿರುವ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ್ದಾಳೆ. ಬಳಿಕ ಸ್ಥಳೀಯ ಪೊಲೀಸ್ ಅಧಿಕಾರಿಗಳು ಪವನ್ ಚೌಹಾಣ್ ಅವರನ್ನು ಸ್ಥಳಕ್ಕೆ ಕರೆತಂದ ನಂತರ ಮಹಿಳೆ ಟವರ್‌ನಿಂದ ಕೆಳಗಿಳಿದಿದ್ದಾಳೆ ಎಂದು ತಿಳಿದುಬಂದಿದೆ.

‘ಟ್ರಂಪ್ ಡಿಕ್ಟೇಟರ್, ಮೋದಿ ಅವರ ಮಾತೇ ಕೇಳುತ್ತಿದ್ದಾರೆ’: ಖರ್ಗೆ ಕಿಡಿ

0

ಕಲಬುರಗಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಡಿಕ್ಟೇಟರ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮಾತೇ ಕೇಳುತ್ತಾ ದೇಶವನ್ನು ಮತ್ತೆ ಗುಲಾಮಗಿರಿಗೆ ತಳ್ಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಟ್ರಂಪ್ ನನ್ನ ಸ್ನೇಹಿತ ಎಂದು ಮೋದಿ ಹೇಳುತ್ತಾರೆ. ಆದರೆ ಟ್ರಂಪ್ ಭಾರತ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಷ್ಯಾದಿಂದ ತೈಲ ಖರೀದಿಗೆ ಕೂಡ ಅಮೆರಿಕಾ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಅನುಮತಿ ನೀಡಿದೆ. ಅಮೆರಿಕದವರು ಹೇಳಿದಂತೆ ಮೋದಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದರು.

“ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಗಿರವಿ ಇಟ್ಟಿದ್ದಾರೆ. ನೀವು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಬ್ರಿಟಿಷರನ್ನು ದೇಶದಿಂದ ಓಡಿಸಿದ್ದೇವೆ. ಆದರೆ ಈಗ ಅಮೆರಿಕಾಗೆ ಗುಲಾಮರನ್ನ ಮಾಡುತ್ತಿದ್ದೀರಿ” ಎಂದು ಖರ್ಗೆ ಕಿಡಿಕಾರಿದರು.

ಈ ವೇಳೆ ಜಾಗತಿಕ ರಾಜಕೀಯದ ಕುರಿತು ಮಾತನಾಡಿದ ಖರ್ಗೆ, “ಅಮೆರಿಕದವರು ಇರಾನ್ ದೇಶದ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದರೆ ವಿಶ್ವ ಶಾಂತಿ ಹೇಗೆ ಸಾಧ್ಯ? ಒಂದು ದೇಶದ ಮುಖ್ಯಸ್ಥನನ್ನು ಕೊಂದರೆ ಆ ದೇಶದಲ್ಲಿ ಶಾಂತಿ ಉಳಿಯುತ್ತದೆಯೇ?” ಎಂದು ಪ್ರಶ್ನಿಸಿದರು.

ಅದೇ ವೇಳೆ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಕಾಲದಲ್ಲಿ ಅನುಸರಿಸಲಾದ ‘ನಾನ್ ಅಲೈನ್‌ಮೆಂಟ್’ ನೀತಿಯನ್ನು ಉಲ್ಲೇಖಿಸಿದ ಅವರು, ಆ ನೀತಿಯೇ ವಿಶ್ವ ಶಾಂತಿಗೆ ಕಾರಣವಾಗಿತ್ತು ಎಂದು ಹೇಳಿದರು.

ಇನ್ನೂ ಕೃಷಿ ವಿಚಾರ ಪ್ರಸ್ತಾಪಿಸಿದ ಖರ್ಗೆ, “ಭಾರತದಲ್ಲಿ ಸುಮಾರು 65% ಜನರು ಕೃಷಿ ಅವಲಂಬಿತರಾಗಿದ್ದಾರೆ. ಆದರೆ ಅಮೆರಿಕಾದಲ್ಲಿ ಕೇವಲ 3% ಜನ ಮಾತ್ರ ಕೃಷಿ ಅವಲಂಬಿತರಾಗಿದ್ದಾರೆ. ಆದರೂ ಭಾರತ ಉತ್ಪನ್ನಗಳಿಗೆ ಅಮೆರಿಕಾದಲ್ಲಿ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ” ಎಂದು ಆರೋಪಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಸಂಬಂಧದ ಕುರಿತು ಗಂಭೀರ ಆರೋಪ ಮಾಡಿರುವ ಖರ್ಗೆ, “ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ಮೋದಿ ಹೆಸರು ಇದೆ ಎನ್ನಲಾಗುತ್ತಿದೆ. ಅದನ್ನೇ ಬಳಸಿಕೊಂಡು ಟ್ರಂಪ್ ಮೋದಿಯನ್ನು ಹೆದರಿಸುತ್ತಿದ್ದಾರೆ” ಎಂದು ಹೇಳಿದರು.

ಬಾಗೇಪಲ್ಲಿ ಬಳಿ ಕಾರು ಬೆಂಕಿಗಾಹುತಿ: ಚಾಲಕ ಸಜೀವ ದಹನ!

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಆಚೇಪಳ್ಳಿ ಕ್ರಾಸ್ ಬಳಿ ಆಲ್ಟೋ ಕಾರು ಹೊತ್ತಿ ಉರಿದ ಪರಿಣಾಮ 70 ವರ್ಷದ ಚಾಲಕ ಸಜೀವ ದಹನಗೊಂಡಿರುವ ದುರ್ಘಟನೆ ಸಂಭವಿಸಿದೆ.

ಪೆನುಮಲೆ ಗ್ರಾಮದ ನಿವಾಸಿ ಉದಯ್ ಕುಮಾರ್ (70) ಮೃತ ಚಾಲಕ.

ಕಳೆದ ರಾತ್ರಿ ಬಾಗೇಪಲ್ಲಿಯಿಂದ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರು ಏಕಾಏಕಿ ಬೆಂಕಿಗಾಹುತಿಯಾಗಿದ್ದು, ಅದರೊಳಗಿದ್ದ ಉದಯ್ ಕುಮಾರ್ ಹೊರಬರಲು ಸಾಧ್ಯವಾಗದೆ ದುರಂತವಾಗಿ ಸಾವನ್ನಪ್ಪಿದ್ದಾರೆ.

ಘಟನೆ ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 21 ವಿಮಾನ ಹಾರಾಟ ರದ್ದು!

ಬೆಂಗಳೂರು: ಇರಾನ್–ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿರುವ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನ ಸಂಚಾರದ ಮೇಲೆ ಪರಿಣಾಮ ಬಿದ್ದಿದೆ. ಇದರ ಪರಿಣಾಮವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಹಲವು ವಿಮಾನಗಳ ಹಾರಾಟ ರದ್ದುಗೊಂಡಿದೆ.

ಅರಬ್ ರಾಷ್ಟ್ರಗಳಿಗೆ ತೆರಳಬೇಕಿದ್ದ ಹಾಗೂ ಅಲ್ಲಿಂದ ಆಗಮಿಸಬೇಕಿದ್ದ ಒಟ್ಟು 21 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ವಾಯು ಪ್ರದೇಶದ ಅನಿಶ್ಚಿತತೆ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಈ ನಿರ್ಧಾರ ಕೈಗೊಂಡಿವೆ.

ಅಧಿಕೃತ ಮಾಹಿತಿಯ ಪ್ರಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ಅರಬ್ ರಾಷ್ಟ್ರಗಳಿಗೆ ತೆರಳಬೇಕಿದ್ದ 11 ವಿಮಾನಗಳ ಹಾರಾಟ ರದ್ದಾಗಿದೆ. ಅದೇ ರೀತಿ ವಿದೇಶಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ 10 ವಿಮಾನಗಳೂ ರದ್ದುಗೊಂಡಿವೆ. ಒಟ್ಟು 21 ವಿಮಾನಗಳ ಹಾರಾಟ ರದ್ದಾದ ಕಾರಣ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ವಿಮಾನ ರದ್ದಾದ ಬಗ್ಗೆ ಸಂಬಂಧಿತ ಸಂಸ್ಥೆಗಳು ಪ್ರಯಾಣಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

ಇರಾನ್–ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿಯೂ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮಧ್ಯಪ್ರಾಚ್ಯ ದೇಶಗಳಿಗೆ ಪ್ರಯಾಣಿಸುವವರು ತಮ್ಮ ವಿಮಾನಗಳ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಹೆಚ್ಚುತ್ತಿರುವ ಇರಾನ್–ಇಸ್ರೇಲ್ ಸಂಘರ್ಷ ಮತ್ತು ಪಶ್ಚಿಮ ಏಷ್ಯಾದ ವಾಯುಮಾರ್ಗಗಳ ಮುಚ್ಚುವಿಕೆಯ ಪರಿಣಾಮವಾಗಿ ಕಳೆದ ವಾರದಿಂದಲೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಅಸ್ತವ್ಯಸ್ತಗೊಂಡಿವೆ. ಮಾರ್ಚ್ 1ರಿಂದ ಮಾರ್ಚ್ 9ರವರೆಗೆ 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ಹಾರಾಟಗಳು ರದ್ದುಗೊಂಡಿವೆ. ಮಾರ್ಚ್ 2ರಂದು 72 ವಿಮಾನಗಳು ಮತ್ತು ಮಾರ್ಚ್ 4ರಂದು 34 ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಇದೀಗ ಮತ್ತೆ 21 ವಿಮಾನಗಳನ್ನು ರದ್ದುಪಡಿಸಿರುವುದು ಸಾವಿರಾರು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಬೆಂಗಳೂರು ವೇದಿಕೆಯಲ್ಲಿ ‘ಸಿಎಂ’ ಘೋಷಣೆ: ಅಭಿಮಾನಿಗಳ ಕೂಗಿಗೆ ಜೂನಿಯರ್ NTR ಮೌನ ಉತ್ತರ

ತೆಲುಗು ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್ಟಿಆರ್ ಅವರು ಭಾನುವಾರ (ಮಾರ್ಚ್ 8) ಬೆಂಗಳೂರಿನಲ್ಲಿ ನಡೆದ ಕಿಮ್ಸ್ ಆಸ್ಪತ್ರೆ ಹೊಸ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ವೇಳೆ ಅಭಿಮಾನಿಗಳು ‘ಸಿಎಂ, ಸಿಎಂ’ ಎಂದು ಘೋಷಣೆ ಕೂಗಿದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಆರ್ಆರ್ಆರ್’ ಸಿನಿಮಾದ ಬಳಿಕ ಜೂನಿಯರ್ ಎನ್ಟಿಆರ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ನಂದಮೂರಿ ಕುಟುಂಬದ ವಾರಸುದಾರರಾಗಿರುವ ಅವರು, ಹಲವು ವರ್ಷಗಳಿಂದ ತೆಲುಗು ಚಿತ್ರರಂಗ ಹಾಗೂ ರಾಜಕೀಯದಲ್ಲಿ ಪ್ರಭಾವ ಹೊಂದಿರುವ ಕುಟುಂಬದ ಸದಸ್ಯರಾಗಿದ್ದಾರೆ.

ಒಂದು ಕಾಲದಲ್ಲಿ ಜೂನಿಯರ್ ಎನ್ಟಿಆರ್ ರಾಜಕೀಯದಲ್ಲೂ ಸಕ್ರಿಯರಾಗಿದ್ದು, ಕುಟುಂಬದ ಪಕ್ಷವಾದ ತೆಲುಗು ದೇಶಂ ಪಾರ್ಟಿ ಪರವಾಗಿ ತಾರಾ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ.

ಕಾರ್ಯಕ್ರಮದಲ್ಲಿ ಜೂನಿಯರ್ ಎನ್ಟಿಆರ್ ಅವರನ್ನು “25 ವರ್ಷಗಳ ಬಳಿಕ ನಿಮ್ಮನ್ನು ನೀವು ಎಲ್ಲಿ ನೋಡಲು ಬಯಸುತ್ತೀರಿ?” ಎಂದು ಪ್ರಶ್ನಿಸಲಾಯಿತು. ಇದಕ್ಕೆ ಅವರು ತಮ್ಮ ಹಾಸ್ಯಮಯ ಶೈಲಿಯಲ್ಲಿ “ಆಗ ನನಗೆ 67 ವರ್ಷ ವಯಸ್ಸಾಗಿರುತ್ತದೆ” ಎಂದು ಉತ್ತರಿಸಿದರು.

ಈ ಉತ್ತರದ ನಂತರ ಅಭಿಮಾನಿಗಳು ‘ಸಿಎಂ, ಸಿಎಂ’ ಎಂದು ಜೋರಾಗಿ ಕೂಗತೊಡಗಿದರು. ಅಭಿಮಾನಿಗಳ ಕೂಗಾಟವನ್ನು ಗಮನಿಸಿದ ಜೂನಿಯರ್ ಎನ್ಟಿಆರ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿಯೇ ಮುಂದುವರಿದಿದ್ದಾರೆ.

ಇತ್ತೀಚೆಗೆ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಹಾಗೂ ಜೂನಿಯರ್ ಎನ್ಟಿಆರ್ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಅವರು ಜೂನಿಯರ್ ಎನ್ಟಿಆರ್ ಅವರನ್ನು ಪಕ್ಷದ ರಾಜಕೀಯದಿಂದ ದೂರ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಚಂದ್ರಬಾಬು ನಾಯ್ಡು ಅವರ ಪುತ್ರ ಮತ್ತು ಬಾಲಕೃಷ್ಣ ಅವರ ಅಳಿಯ ನಾರಾ ಲೋಕೇಶ್ ಅವರನ್ನು ರಾಜಕೀಯದಲ್ಲಿ ಬೆಳೆಸುವ ಉದ್ದೇಶದಿಂದ ಜೂನಿಯರ್ ಎನ್ಟಿಆರ್ ಅವರನ್ನು ಪಕ್ಕಕ್ಕೆ ಸರಿಸಲಾಗಿದೆ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದೇ ಕಾರಣದಿಂದ ಜೂನಿಯರ್ ಎನ್ಟಿಆರ್ ಮಾತ್ರವಲ್ಲ, ಅವರ ಸಹೋದರ ಕಲ್ಯಾಣ್ ರಾಮ್ ಅವರನ್ನೂ ಪಕ್ಷದಿಂದ ದೂರ ಇಡಲಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ: ಭಾರತಕ್ಕೆ ಮೂರನೇ ಟಿ20 ವಿಶ್ವಕಪ್! ಪ್ರಧಾನಿ ಮೋದಿ ಅಭಿನಂದನೆ

0

ಅಂತಿಮ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಭಾರತದ ಬ್ಯಾಟರ್‌ಗಳು ಹಾಗೂ ನಂತರ ಬೌಲರ್‌ಗಳ ಕಠಿಣ ಬೌಲಿಂಗ್‌ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ 96 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಮೂರನೇ ಬಾರಿ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ.

ಈ ಗೆಲುವಿನೊಂದಿಗೆ ಭಾರತ ಸತತ ಎರಡನೇ ಬಾರಿ ವಿಶ್ವಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 5 ವಿಕೆಟ್‌ ನಷ್ಟಕ್ಕೆ 255 ರನ್‌ಗಳ ಭರ್ಜರಿ ಮೊತ್ತ ದಾಖಲಿಸಿತು. ಈ ಭಾರೀ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ ತಂಡ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲ್‌ಔಟ್‌ ಆಗಿ ಸೋಲು ಒಪ್ಪಿಕೊಂಡಿತು. ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಸತತ ಎರಡು ಬಾರಿ ಅಂತಿಮ ಪಂದ್ಯ ಗೆದ್ದ ಮೊದಲ ತಂಡವಾಗಿ ಭಾರತ ಹೊರಹೊಮ್ಮಿದೆ. 2008, 2024 ಮತ್ತು 2026ರಲ್ಲಿ ಜಯಗಳಿಸುವ ಮೂಲಕ ಭಾರತ ಮೂರು ಬಾರಿ ಪ್ರಶಸ್ತಿ ಗೆದ್ದು ಹೊಸ ದಾಖಲೆ ನಿರ್ಮಿಸಿದೆ.

ಪಂದ್ಯದಲ್ಲಿ ಭಾರತ ತಂಡ ದಾಖಲಿಸಿದ 255 ರನ್‌ಗಳು ಟಿ20 ವಿಶ್ವಕಪ್‌ ಅಂತಿಮ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದೆ. ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ ತಂಡ ಆರಂಭದಲ್ಲಿ ಆಕ್ರಮಣಕಾರಿ ಆಟ ತೋರಿದರೂ ನಂತರ ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿತು. ಆರಂಭಿಕ ಆಟಗಾರ ಟಿಮ್ ಸೀಫರ್ಟ್ ವೇಗವಾಗಿ ರನ್‌ ಗಳಿಸಿದರೂ ಅಕ್ಷರ್‌ ಪಟೇಲ್‌, ಜಸ್ಪ್ರೀತ್‌ ಬುಮ್ರಾ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ಎದುರಿಸಲು ಸಾಧ್ಯವಾಗಲಿಲ್ಲ.

ಮಧ್ಯಮ ಕ್ರಮದ ಆಟಗಾರರಾದ ಮಾರ್ಕ್‌ ಚಾಪ್‌ಮನ್‌, ಡ್ಯಾರಿಲ್‌ ಮಿಚೆಲ್‌ ಮತ್ತು ಮಿಚೆಲ್‌ ಸ್ಯಾಂಟ್ನರ್ ಸ್ವಲ್ಪ ಪ್ರತಿರೋಧ ತೋರಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತದ ಬೌಲರ್‌ಗಳ ಶಕ್ತಿಶಾಲಿ ಪ್ರದರ್ಶನದ ಎದುರು ನ್ಯೂಜಿಲೆಂಡ್‌ ತಂಡ 159 ರನ್‌ಗಳಿಗೆ ಕುಸಿದು ಭಾರತ ಭರ್ಜರಿ ಜಯ ಸಾಧಿಸಿತು.

ಭಾರತ ತಂಡದ ಈ ಅಮೋಘ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಟೀಮ್ ಇಂಡಿಯಾದ ಪ್ರದರ್ಶನವನ್ನು ಹಾಡಿ ಹೊಗಳಿದಿದ್ದಾರೆ.

ಚಾಂಪಿಯನ್ಸ್! ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು! ಈ ಗಮನಾರ್ಹ ಗೆಲುವು ಅಸಾಧಾರಣ ಕೌಶಲ್ಯ, ದೃಢನಿಶ್ಚಯ ಮತ್ತು ತಂಡದ ಕೆಲಸವನ್ನು ಪ್ರತಿಬಿಂಬಿಸುತ್ತದೆ. ಟೀಮ್ ಇಂಡಿಯಾ ಟೂರ್ನಿಯುದ್ದಕ್ಕೂ ಅತ್ಯುತ್ತಮ ಧೈರ್ಯವನ್ನು ತೋರಿಸಿದ್ದಾರೆ. ಈ ಗೆಲುವು ಪ್ರತಿಯೊಬ್ಬ ಭಾರತೀಯನು ಸಂತಸ ಮತ್ತು ಹೆಮ್ಮೆ ಪಡುವಂತೆ ಮಾಡಿದೆ. ಅಭಿನಂದನೆಗಳು, ಟೀಮ್ ಇಂಡಿಯಾ! ಎಂದು ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ತ್ರಿಷಾ ಮನೆಯಲ್ಲೇ ಇರಬೇಕು’: ಚರ್ಚೆ ಹುಟ್ಟುಹಾಕಿದ ಪಾರ್ಥಿಬನ್ ಹೇಳಿಕೆ

ನಟ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಅವರ ಬಗ್ಗೆ ಹರಿದಾಡುತ್ತಿರುವ ಸಂಬಂಧದ ಗಾಸಿಪ್ ತಮಿಳು ಚಿತ್ರರಂಗದಲ್ಲಿ ಚರ್ಚೆಯ ಕೇಂದ್ರವಾಗಿದ್ದು, ಇದೀಗ ಈ ವಿಚಾರಕ್ಕೆ ಹೊಸ ತಿರುವು ದೊರಕಿದೆ.

ವಿಜಯ್ ಮತ್ತು ತ್ರಿಷಾ ಇತ್ತೀಚೆಗೆ ವಿವಾಹ ಆರತಕ್ಷತೆಯೊಂದರಲ್ಲಿ ಒಟ್ಟಿಗೆ ಭಾಗವಹಿಸಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿಗಳು ಕೂಡ ಹೆಚ್ಚಾಗಿವೆ.

ಈ ವಿವಾದದ ನಡುವೆ ತಮಿಳು ನಟ ಹಾಗೂ ನಿರ್ದೇಶಕ ಪಾರ್ಥಿಬನ್ ಕಾರ್ಯಕ್ರಮವೊಂದರಲ್ಲಿ ಮಾಡಿದ ಹೇಳಿಕೆ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಪಾರ್ಥಿಬನ್ ಅವರಿಗೆ ಅವರು ಜೊತೆ ನಟಿಸಿದ ನಟಿಯರ ಕುರಿತು ಪ್ರಶ್ನೆ ಕೇಳಲಾಯಿತು. ಈ ವೇಳೆ ಪೊನ್ನಿಯನ್ ಸೆಲ್ವನ್ ಚಿತ್ರದ ಪಾತ್ರಗಳ ಚಿತ್ರಗಳನ್ನು ತೋರಿಸಲಾಯಿತು. ತ್ರಿಷಾ ಅಭಿನಯಿಸಿದ್ದ ‘ಕುಂದವೈ’ ಪಾತ್ರದ ಫೋಟೋ ಕಂಡಾಗ ಪಾರ್ಥಿಬನ್ ಪ್ರತಿಕ್ರಿಯೆ ನೀಡಿದರು.

“ಕುಂದವೈ ಕೆಲ ದಿನ ಮನೆ ಒಳಗೆ ಇರೋದು ಉತ್ತಮ. ಎಲ್ಲವನ್ನೂ ಮುಕ್ತವಾಗಿ ಹೇಳಲು ಸಾಧ್ಯವಿಲ್ಲ. ಎಲ್ಲಾ ಕವಿತೆಗಳನ್ನು ಆನಂದಿಸಲು ಸಾಧ್ಯವಿಲ್ಲ, ಕೆಲವು ಕವಿತೆಗಳನ್ನು ಮುಕ್ತವಾಗಿ ಓದಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

“ಕುಂದವೈ ಹೊರಗೆ ಬಂದರೆ ಸಮಸ್ಯೆ” ಎಂದು ಪಾರ್ಥಿಬನ್ ಹೇಳಿರುವ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪಾರ್ಥಿಬನ್ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಅವರ ಮಾತನ್ನು ಬೆಂಬಲಿಸುತ್ತಿದ್ದಾರೆ. ಇನ್ನೂ ಕೆಲವರು ಈ ರೀತಿಯ ಕಾಮೆಂಟ್ ಅನಗತ್ಯ ಎಂದು ಟೀಕಿಸಿದ್ದಾರೆ.

ಇನ್ನೊಂದೆಡೆ ಕೆಲವರು ಪಾರ್ಥಿಬನ್ ಅವರನ್ನು ಮೆಚ್ಚಿ, “ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿದ್ದರೂ, ತಮ್ಮ ಮಾಜಿ ಪತ್ನಿಯ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿಯಾಗಿ ಮಾತನಾಡಿಲ್ಲ” ಎಂದು ಹೇಳಿದ್ದಾರೆ.

ಇದರ ಜೊತೆಗೆ ಕೆಲವರು ನಟ ವಿಜಯ್ ವಿರುದ್ಧವೂ ಟೀಕೆ ವ್ಯಕ್ತಪಡಿಸಿ, “ಪತ್ನಿಯ ಭಾವನೆಗಳಿಗೂ ಮಹತ್ವ ಕೊಡಬೇಕು” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 22ನೇ ಕಂತಿನ ಹಣ ಯಾವಾಗ ಬರುತ್ತೆ? ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ಕೋಟ್ಯಂತರ ರೈತರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಹಣ ಜಮೆಯಾಗಲಿದೆ ಎಂಬ ನಿರೀಕ್ಷೆ ಇದ್ದರೂ, ಇದೀಗ ಹಣ ಜಮೆಯಾಗುವ ನಿಖರ ದಿನಾಂಕದ ಕುರಿತು ಹೊಸ ಮಾಹಿತಿ ಹೊರಬಿದ್ದಿದೆ.

ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರವು ರೈತರಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000ರಂತೆ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ.

ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 13ರಂದು ರೈತರ ಬ್ಯಾಂಕ್ ಖಾತೆಗಳಿಗೆ 22ನೇ ಕಂತಿನ ₹2,000 ಜಮೆಯಾಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರದಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಈ ರೈತರಿಗೆ ಸಿಗಲ್ಲ ಕಂತಿನ ಲಾಭ

ಕೆಲವು ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ರೈತರು ಈ ಬಾರಿ ಪಿಎಂ ಕಿಸಾನ್ ಹಣದಿಂದ ವಂಚಿತರಾಗುವ ಸಾಧ್ಯತೆ ಇದೆ.

  • eKYC ಪೂರ್ಣಗೊಳಿಸದವರು
  • ಭೂ ದಾಖಲೆಗಳ ಪರಿಶೀಲನೆ ಪೂರ್ಣವಾಗದವರು
  • ಬ್ಯಾಂಕ್ ಖಾತೆ ಸಂಖ್ಯೆ ಅಥವಾ IFSC ಕೋಡ್ ತಪ್ಪಾಗಿ ನೀಡಿದವರು
  • ಅರ್ಜಿಯಲ್ಲಿ ಹೆಸರು ಅಥವಾ ಆಧಾರ್ ಸಂಖ್ಯೆ ತಪ್ಪಾಗಿ ನಮೂದಿಸಿದವರು

ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಿಎಂ ಕಿಸಾನ್ ಸೌಲಭ್ಯ ಪಡೆಯಲು ‘ಫಾರ್ಮರ್ ಐಡಿ’ ಕಡ್ಡಾಯಗೊಳಿಸಲಾಗಿದೆ. ಅಗ್ರಿಸ್ಟಾಕ್ ಯೋಜನೆಯಡಿ ಈ ಐಡಿಗಳನ್ನು ಸಿದ್ಧಪಡಿಸಲು ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಫಾರ್ಮರ್ ಐಡಿ ಇಲ್ಲದ ರೈತರು ಹಣ ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗಬಹುದು ಎಂದು ತಿಳಿಸಲಾಗಿದೆ.

ಶರಣಬಸವೇಶ್ವರ ಜಾತ್ರೆ ವೇಳೆ ದುರಂತ: ನಿಯಂತ್ರಣ ತಪ್ಪಿ ಮಹಿಳೆ ಮೈ ಮೇಲೆ ಹರಿದ ರಥ!

ಕಲಬುರಗಿ: ಜಿಲ್ಲಾ ಯಡ್ರಾಮಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆಯ ರಥೋತ್ಸವದ ವೇಳೆ ಸಂಭವಿಸಿದ ದುರ್ಘಟನೆಗೆ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗ್ರಾಮಸ್ಥರಾದ ನಾಗಮ್ಮ ಅವರು ರಥದ ಚಕ್ರಕ್ಕೆ ಸಿಲುಕಿಕೊಂಡ ಪರಿಣಾಮ ಅವರ ಎರಡೂ ಕಾಲುಗಳು ಕಡಿದು ಹೋಗಿವೆ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ 6 ಗಂಟೆಗೆ ಜಾತ್ರೆಯ ಅಂಗವಾಗಿ ಶರಣಬಸವೇಶ್ವರರ ರಥೋತ್ಸವ ಆರಂಭವಾಗಿತ್ತು. ಭಕ್ತರ ಉತ್ಸಾಹ ಹೆಚ್ಚಿರುವುದರಿಂದ ನಿಯಂತ್ರಣ ತಪ್ಪಿ ರಥ ಜನರಿದ್ದ ದಿಕ್ಕಿಗೆ ಚಲಿಸಿದಾಗ, ನಾಗಮ್ಮ ಅವರ ಮೇಲೆ ರಥದ ಚಕ್ರವು ಹರಿದು ಹೋಗಿದ್ದು, ತಕ್ಷಣವೇ ಸ್ಥಳದಲ್ಲಿದ್ದವರು ಅವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಸೇರಿಸಿದರು.

ಸ್ಥಳೀಯ ಆಸ್ಪತ್ರೆಯಲ್ಲಿ ನಾಗಮ್ಮಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ವೈದ್ಯರು ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. ಜಿಲ್ಲೆಯ ಶರಣಬಸವೇಶ್ವರರ ಜನ್ಮಸ್ಥಳವಾದ ಅರಳಗುಂಡಗಿ ಗ್ರಾಮದಲ್ಲಿ ಈ ರೀತಿಯ ದುರ್ಘಟನೆ ಜಾತ್ರೆಯ ಸಂದರ್ಭದಲ್ಲಿ ಅಪಾಯದ ಎಚ್ಚರಿಕೆ ನೀಡುತ್ತಿದೆ.

 

error: Content is protected !!