Home Blog Page 4

ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ತೀವ್ರ ಆಕ್ಷೇಪ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರವು ನಗರಾಭಿವೃದ್ಧಿ ಇಲಾಖೆಯ ಮೂಲಕ ಜಾರಿಗೆ ತಂದಿರುವ ಯುಐಒಎಸ್ (ಯುನಿಫೈಡ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್) ತಂತ್ರಾಂಶವು ಗದಗ-ಬೆಟಗೇರಿ ನಗರಸಭಾ ವ್ಯಾಪ್ತಿಯಲ್ಲಿ ಗಂಭೀರ ತಾಂತ್ರಿಕ ದೋಷಗಳಿಂದ ಕೂಡಿದ್ದು, ಇದರ ಪರಿಣಾಮವಾಗಿ ಕಟ್ಟಡ ಅನುಮತಿ (ಬಿಲ್ಡಿಂಗ್ ಪರ್ಮಿಷನ್) ಪ್ರಕ್ರಿಯೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಎಂದು ಗದಗ ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಯುಐಒಎಸ್ ತಂತ್ರಾಂಶದಲ್ಲಿ ನಿರಂತರವಾಗಿ ಲಾಗಿನ್ ಸಮಸ್ಯೆ, ದಾಖಲೆಗಳ ಅಪ್‌ಲೋಡ್ ವಿಫಲತೆ, ಸಿಸ್ಟಮ್ ಎರರ್‌ಗಳು ಹಾಗೂ ತಾಂತ್ರಿಕ ವೈಫಲ್ಯಗಳು ಎದುರಾಗುತ್ತಿದ್ದು, ಸಾರ್ವಜನಿಕರು ಮತ್ತು ವೃತ್ತಿಪರ ಇಂಜಿನಿಯರ್‌ಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಕಟ್ಟಡ ಅನುಮತಿ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ಉಂಟಾಗಿ ನಾಗರಿಕರ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿದೆ.

ಯುಐಒಎಸ್ ತಂತ್ರಾಂಶದಲ್ಲಿ ಡಿಪ್ಲೋಮಾ ಸಿವಿಲ್ ಇಂಜಿನಿಯರ್‌ಗಳನ್ನು “ಸೂಪರ್ವೈಸರ್” ಎಂದು ಉಲ್ಲೇಖಿಸಿರುವುದು. ಇದು ಅವರ ಶೈಕ್ಷಣಿಕ ಅರ್ಹತೆ, ವೃತ್ತಿಪರ ಹೊಣೆಗಾರಿಕೆ ಹಾಗೂ ತಾಂತ್ರಿಕ ಸ್ಥಾನಮಾನಕ್ಕೆ ಮಾಡಿದ ಸ್ಪಷ್ಟ ಅವಮಾನವಾಗಿದ್ದು, ಇದನ್ನು ಅಸೋಸಿಯೇಷನ್ ತೀವ್ರವಾಗಿ ಖಂಡಿಸುತ್ತದೆ. ಆದ್ದರಿಂದ “ಸೂಪರ್ವೈಸರ್” ಎಂಬ ಪದವನ್ನು ತಕ್ಷಣವೇ ತೆಗೆದುಹಾಕಿ, ಅದರ ಬದಲಿಗೆ “ಆಥರೈಸ್‌ಡ್ ಸಿವಿಲ್ ಇಂಜಿನಿಯರ್” ಎಂಬ ಸರಿಯಾದ ಹಾಗೂ ಗೌರವಯುತ ಪದನಾಮವನ್ನು ಬಳಸಬೇಕು ಎಂದು ಆಗ್ರಹಿಸಲಾಗಿದೆ.

ಯುಐಒಎಸ್ ತಂತ್ರಾಂಶದಲ್ಲಿ ಡಿಪ್ಲೋಮಾ ಸಿವಿಲ್ ಇಂಜಿನಿಯರ್‌ಗಳ ಕಾರ್ಯ ವ್ಯಾಪ್ತಿಯನ್ನು ಕೇವಲ 100 ಚದರ ಮೀಟರ್‌ಗಳಿಗೆ (100 Sq.m) ಸೀಮಿತಗೊಳಿಸಿರುವುದು ಸಂಪೂರ್ಣ ಅಸಮಂಜಸವಾಗಿದೆ. ಈ ಹಿಂದೆ ನಿರ್ಮಾಣ-2 (ಬಿಲ್ಡಿಂಗ್-2) ತಂತ್ರಾಂಶದಲ್ಲಿ ಡಿಪ್ಲೋಮಾ ಸಿವಿಲ್ ಇಂಜಿನಿಯರ್‌ಗಳಿಗೆ ನೀಡಲಾಗಿದ್ದ ಕಾರ್ಯ ವ್ಯಾಪ್ತಿಯೇ ಪ್ರಾಯೋಗಿಕ, ತಾಂತ್ರಿಕ ಹಾಗೂ ಕಾನೂನುಬದ್ಧವಾಗಿದ್ದು, ಅದೇ ಕಾರ್ಯ ವ್ಯಾಪ್ತಿಯನ್ನು ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಸಬೇಕು ಎಂದು ಅಸೋಸಿಯೇಷನ್ ಸ್ಪಷ್ಟವಾಗಿ ಒತ್ತಾಯಿಸಿದೆ.

ಈ ಎಲ್ಲಾ ವಿಚಾರಗಳಲ್ಲಿ ಸರ್ಕಾರ ಹಾಗೂ ನಗರಸಭಾ ಆಡಳಿತವು ತಕ್ಷಣ ಸ್ಪಷ್ಟ ಮತ್ತು ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ಡಾ. ಸತೀಶ ಹೊಂಬಾಳಿಯವರಿಗೆ `ವೈದ್ಯ ನಿರಂಜನ’ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಹೂವಿನ ಶಿಗ್ಲಿ ಗ್ರಾಮದ ವಿರಕ್ತಮಠವು ಈ ಭಾಗದಲ್ಲಿಯೇ ಸಮನ್ವಯತೆಯನ್ನು ಸಾರುವ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತಿದ್ದು, ಇಂತಹ ಪವಿತ್ರ ಕ್ಷೇತ್ರವನ್ನಾಗಿ 만든 ಲಿಂ.ನಿರಂಜನ ಮಹಾಸ್ವಾಮಿಗಳು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಷ್ಟೇ ಅಲ್ಲ, ಆಯುರ್ವೇದ ಔಷಧಿ ನೀಡುವಲ್ಲಿ ಸಿದ್ಧಹಸ್ತರಾಗಿದ್ದರು. ಅವರು ಕಾಲವಾಗಿ 16 ವರ್ಷಗಳು ಗತಿಸಿದ್ದು, ಅವರ ಸ್ಮರಣಾರ್ಥವಾಗಿ ಶ್ರೀಮಠದಿಂದ ವೈದ್ಯ ನಿರಂಜನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಈ ಭಾಗದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರಾಗಿ ವಿಶೇಷ ಸಾಧನೆ ಮಾಡಿ ಸಾವಿರಾರು ರೋಗಿಗಳ ಪಾಲಿನ ಧನ್ವಂತರಿಯಾಗಿ, ನಿಷ್ಠೆ, ಪ್ರಾಮಾಣಿಕತೆಯಿಂದ ಚಿಕಿತ್ಸೆ ನೀಡುತ್ತಿರುವ ಮತ್ತು ಅನೇಕ ಊರುಗಳಲ್ಲಿ ಉಚಿತವಾಗಿ ಪ್ರಾಕೃತಿಕ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿರುವ ಹುಲಕೋಟಿಯ ಕೆ.ಎಚ್. ಪಾಟೀಲ ಪ್ರಕೃತಿ ಚಿಕಿತ್ಸಾ ಕೇಂದ್ರದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ತಜ್ಞ ಡಾ. ಸತೀಶ ಹೊಂಬಾಳಿ ಅವರಿಗೆ ಶ್ರೀಮಠದ ಪ್ರತಿಷ್ಠಿತ `ವೈದ್ಯ ನಿರಂಜನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಸತೀಶ ಹೊಂಬಾಳಿಯವರು, ಮಠಗಳು ಸಾಂಸ್ಕೃತಿಕ ಶ್ರದ್ಧಾ ಕೇಂದ್ರಗಳು. ಹೂವಿನಶಿಗ್ಲಿ ವಿರಕ್ತಮಠ ಲಿಂ.ನಿರಂಜನಾನಂದ ಮಹಾಸ್ವಾಮಿಗಳು ಈ ಭಾಗದ ಪ್ರಸಿದ್ಧ ಆಯುರ್ವೇದ ವೈದ್ಯರಾಗಿ ಸಾವಿರಾರು ಜನರಿಗೆ ದೊಡ್ಡ ದೊಡ್ಡ ರೋಗಗಳಿಗೆ ಔಷಧಿ ನೀಡಿ ಗುಣಮುಖರಾಗಿರುವದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಲ್ಲದೆ ರಾಜ್ಯದಲ್ಲಿ ಪ್ರಥಮವಾಗಿ ಪ್ರಕೃತಿ ಚಿಕಿತ್ಸಾ ಕೇಂದ್ರ ಪ್ರಾರಂಭವಾಗಿರುವದು ಶಿಗ್ಲಿ ಗ್ರಾಮದಲ್ಲಿಯೇ ಆಗಿದ್ದು, ಆ ಗ್ರಾಮದ ಬಸವಕುಮಾರ ಸ್ವಾಮಿಜೀಯವರು ಈ ಕೇಂದ್ರವನ್ನು ಸ್ಥಾಪಿಸಿರುವದರಿಂದ ಇದು ಹೆಚ್ಚು ಮಹತ್ವದ್ದಾಗಿದೆ.

ಶ್ರೀಮಠದ ಕರ್ತೃತ್ವ ಶಕ್ತಿಯಿಂದ ಇಲ್ಲಿನ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿರುವದನ್ನು ನೋಡಿ ಅಚ್ಚರಿಯಾಯಿತು. ಸಮಾಜದಲ್ಲಿನ ಜನರಿಗೆ ಉತ್ತಮ ಮಾರ್ಗದರ್ಶನದ ಜೊತೆಗೆ ಶಿಕ್ಷಣ, ಸಾಮಾಜಿಕ ಚಿಂತನೆಯಲ್ಲಿ ಮಠ-ಮಾನ್ಯಗಳ ಪಾತ್ರ ಹಿರಿದಾಗಿದ್ದು, ಇಂತಹ ಪವಿತ್ರ ಸ್ಥಾನದಲ್ಲಿ ಹಿರಿಯ ಶ್ರೀಗಳ ಹೆಸರಿನಲ್ಲಿ ವೈದ್ಯ ನಿರಂಜನ ಪ್ರಶಸ್ತಿ ನೀಡಿರುವದು ನನ್ನ ಜವಾಬ್ದಾರಿ ಹೆಚ್ಚುವಂತಾಗಿದೆ ಎಂದು ಹೇಳಿದರು.

ಮುಂಡರಗಿ ಜಗದ್ಗುರುಗಳು, ಹೂವಿನಶಿಗ್ಲಿ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು, ಮುಖಂಡರು ಉಪಸ್ಥಿತರಿದ್ದರು.

ಲಕ್ಷ್ಮೇಶ್ವರದಲ್ಲಿ ಜ. 18ರಂದು ಹಿಂದೂ ಸಮ್ಮೇಳನ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಹಿಂದೂ ಸಮ್ಮೇಳನ ಸಮಿತಿಯಿಂದ ಜ. 18ರಂದು ಭಾನುವಾರ ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಮತ್ತು ಬೃಹತ್ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಹಿಂದೂ ಬಾಂಧವರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕೆಂದು ಹಿಂದೂ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಬಸವರಾಜ ಬೆಂಡಿಗೇರಿ ಮನವಿ ಮಾಡಿದರು.

ಅವರು ಶುಕ್ರವಾರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಧರ್ಮೋ ರಕ್ಷತಿ ರಕ್ಷಿತಃ ಎನ್ನುವಂತೆ ಹಿಂದೂ ಧರ್ಮದ ಜಾಗೃತಿ, ರಕ್ಷಣೆ ಮತ್ತು ಧರ್ಮದ ತತ್ವ ಸಿದ್ಧಾಂತ, ಸಂಸ್ಕೃತಿ, ಪರಂಪರೆ, ಮೌಲ್ಯಗಳು ಯುವಕರಲ್ಲಿ ಬಿತ್ತುವ, ಆ ಮೂಲಕ ನಾವೆಲ್ಲ ಒಂದು-ಹಿಂದೂ ಎಂಬ ಸಾಮರಸ್ಯದ ಭಾವನೆ ಮೂಡಿಸುವುದು ಸಮ್ಮೇಳನದ ಉದ್ದೇಶವಾಗಿದೆ.

ಸಮ್ಮೇಳನದ ನಿಮಿತ್ತ ಅಂದು ಮಧ್ಯಾಹ್ನ 3.30ಕ್ಕೆ ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದಿಂದ ಸಕಲ ವಾದ್ಯಮೇಳ, ಪೂರ್ಣಕುಂಭ, ಭಾರತ ಮಾತೆ ಸೇರಿ ವಿವಿಧ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾತ್ಮರ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಮಾರ್ಗದಲ್ಲಿ ಭವ್ಯ ಶೋಭಾ ಯಾತ್ರೆ ನಡೆಯಲಿದೆ. ಬಳಿಕ ಸಂಜೆ 5ಕ್ಕೆ ಶ್ರೀ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಹಿಂದೂ ಸಮ್ಮೇಳನ-ಧರ್ಮ ಜಾಗೃತಿ ಸಭೆ ನಡೆಯಲಿದೆ. ಗದಗನ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸಾನ್ನಿಧ್ಯ ವಹಿಸುವರು. ಹಿಂದೂ ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಚಂದ್ರಣ್ಣ ಮಹಾಜನಶೆಟ್ಟರ ಅಧ್ಯಕ್ಷತೆ ವಹಿಸುವರು. ಹಿಂದೂ ಸಂಘಟನೆಯ ಪ್ರಮುಖ ಗೋವಿಂದಪ್ಪ ಗೌಡಪ್ಪಗೋಳ ದಿಕ್ಸೂಚಿ ಭಾಷಣ ಮಾಡುವರು. ಬೆಳಿಗ್ಗೆ ಪಟ್ಟಣದ ಬಸ್ತಿಬಣದಿಂದ ಹಿಂದೂಪರ ಸಂಘಟನೆಗಳ ಯುವಕರಿಂದ ಬೈಕ್ ರ‍್ಯಾಲಿ ನಡೆಯಲಿದೆ ಎಂದರು.

ಸಭೆಯಲ್ಲಿ ಸಮಿತಿಯ ಪ್ರಮುಖರಾದ ಬಸವೇಶ ಮಹಾಂತಶೆಟ್ಟರ, ಗುರುರಾಜ ಪಾಟೀಲ ಕುಲಕರ್ಣಿ, ಸುನೀಲ ಮಹಾಂತಶೆಟ್ಟರ, ಚಂದ್ರು ಹಂಪಣ್ಣವರ, ಸೋಮೇಶ ಉಪನಾಳ, ವೈ.ಕೆ. ಲಿಂಗಶೆಟ್ಟಿ, ಚಿಕ್ಕರಸ ಪೂಜಾರ, ಗಜಾನನ ಹೆಗಡೆ, ಅನಿಲ ಮುಳಗುಂದ, ಸಂತೋಷ ಜಾವೂರ, ಬಸವಣ್ಣೆಪ್ಪ ನಂದೆಣ್ಣವರ, ಬಾಳಪ್ಪ ಗೋಸಾವಿ, ಬಂಗಾರೆಪ್ಪ ಮುಳಗುಂದ, ಗಂಗಾಧರ ಮೆಣಸಿನಕಾಯಿ, ಮಂಜು ಹೊಗೆಸೊಪ್ಪಿನ, ಪ್ರವೀಣ ಬೋಮಲೆ, ವಿಜಯ ಕುಂಬಾರ, ವಿರೇಶ ಸಾಲಸವಾಡ, ಶಂಕರ ಬ್ಯಾಡಗಿ, ಪ್ರಶಾಂತ ಮೆಡ್ಲೇರಿ, ನವೀನ ಹಿರೇಮಠ, ಈರಣ್ಣ ಮುಳಗುಂದ, ರವಿ ಕಲ್ಲೂರ, ಸುರೇಶ ಕುರ್ಡೇಕರ ಮುಂತಾದವರಿದ್ದರು.

ಸಂಘಟನಾ ಪ್ರಮುಖರಾದ ರಾಮರಾವ್ ವೆರ್ಣೇಕರ ಮಾತನಾಡಿ, ಹಿಂದೂ ಸಮ್ಮೇಳನದ ಯಶಸ್ವಿಗಾಗಿ ಈಗಾಗಲೇ ಹತ್ತಾರು ಗ್ರಾಮಗಳು, ವಿವಿಧ ಧರ್ಮ ಸಮಾಜಗಳ ಪ್ರಮುಖರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿದೆ. ಎಲ್ಲರೂ ಅತ್ಯಂತ ಆಸಕ್ತಿ ಮತ್ತು ಸ್ವಯಂ ಪ್ರೇರಣೆಯಿಂದ ಭಾಗವಹಿಸಲಿದ್ದಾರೆ. ಶೋಭಾಯಾತ್ರೆ ಸಂಚರಿಸುವ ಮಾರ್ಗ ಅಲಂಕರಿಸಲಾಗುವುದು. ಸಮ್ಮೇಳನದ ಯಶಸ್ಸಿಗಾಗಿ ಪೂರಕ ಸಿದ್ಧತೆ ಮಾಡಿಕೊಳ್ಳಲಾಗಿದೆ. 8ರಿಂದ 10 ಸಾವಿರ ಹಿಂದೂ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಬೆಂಗಳೂರಿಗರ ಗಮನಕ್ಕೆ| ಈ ಏರಿಯಾಗಳಲ್ಲಿ ಶನಿವಾರ, ಭಾನುವಾರ ಪವರ್ ಕಟ್; ಎಲ್ಲೆಲ್ಲಿ?

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಶನಿವಾರ ಹಾಗೂ ಭಾನುವಾರ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವಿದ್ಯುತ್​​​ ಕಂಬಗಳ ಬದಲಾವಣೆ, ಇತರ ಕೆಲಸ ಕಾರಣದಿಂದ ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ. ದಕ್ಷಿಣ ಬೆಂಗಳೂರು ಪ್ರದೇಶಗಳಾದ ಬೊಮ್ಮನಹಳ್ಳಿ, ಹೆಚ್‌ಎಸ್‌ಆರ್ ಲೇಔಟ್, ಕೂಡ್ಲು, ಜಕ್ಕಸಂದ್ರ, ಬೆಳ್ಳಂದೂರು ಮತ್ತು ಸರ್ಜಾಪುರ ರಸ್ತೆಯಲ್ಲಿ ವಿದ್ಯುತ್​​ ಕಡಿತವಾಗಲಿದೆ. ಪೂರ್ವ ಬೆಂಗಳೂರಿನ ಮಾರತಹಳ್ಳಿ, ವೈಟ್‌ಫೀಲ್ಡ್, ಕೆಆರ್ ಪುರಂ, ಮಹದೇವಪುರ, ಬಾಣಸವಾಡಿ, ಮತ್ತು ಹೊರಮಾವು ವಿದ್ಯುತ್​​ ಕಡಿತವಾಗಲಿದೆ. ಬೆಂಗಳೂರಿನ ವಿದ್ಯುತ್ ಕಡಿತದ ಪರಿಣಾಮವನ್ನು ಕಡಿಮೆ ಮಾಡಲು, ನಿವಾಸಿಗಳು ಮತ್ತು ವ್ಯಾಪಾರಿಗಳು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ವಿದ್ಯುತ್ ಕಡಿತಗೊಳ್ಳುವ ಮೊದಲು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪವರ್ ಬ್ಯಾಂಕ್‌ಗಳು ಸಂಪೂರ್ಣವಾಗಿ ಚಾರ್ಜ್ ಆಗಿವೆಯೇ ಎಂದು ನೋಡಿಕೊಳ್ಳಬೇಕು. ಮನೆಯಿಂದ ಕೆಲಸ ಮಾಡುವವರು, ಕೆಲಸದ ಸ್ಥಳದಲ್ಲಿ ವೈ-ಫೈ ಹೊಂದಿರುವ ಬಗ್ಗೆ ಮೊದಲೆ ಪರಿಶೀಲನೆ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಹೇಳಲಾಗಿದೆ.

ನಿಯಮ ಉಲ್ಲಂಘಿಸಿದ ಪಿಜಿಗಳ ಮೇಲೆ GBA ಕಠಿಣ ಕ್ರಮ: 6 ಪಿಜಿಗಳಿಗೆ ಬೀಗ, ₹1.96 ಲಕ್ಷ ದಂಡ

0

ಬೆಂಗಳೂರು: ಶುಚಿತ್ವದ ಕೊರತೆ, ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ, ಅಗತ್ಯ ಸುರಕ್ಷತಾ ವ್ಯವಸ್ಥೆಗಳು ಸೇರಿದಂತೆ ಮಾರ್ಗಸೂಚಿಗಳನ್ನು ಪಾಲಿಸದ ಪೇಯಿಂಗ್ ಗೆಸ್ಟ್‌ (PG) ವಸತಿಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಆರೋಗ್ಯಾಧಿಕಾರಿಗಳು ದಾಳಿ ನಡೆಸಿ ನಿಯಮ ಉಲ್ಲಂಘನೆ ಮಾಡಿದ ಪಿಜಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರ ನಿರ್ದೇಶನದ ಮೇರೆಗೆ ಒಟ್ಟು 204 ಪೇಯಿಂಗ್ ಗೆಸ್ಟ್ ವಸತಿ ಗೃಹಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಗಂಭೀರ ಲೋಪಗಳು ಪತ್ತೆಯಾದ ಹಿನ್ನೆಲೆ 6 ಪಿಜಿಗಳಿಗೆ ಬೀಗ ಜಡಿಸಲಾಗಿದ್ದು, ಒಟ್ಟು ₹1.96 ಲಕ್ಷ ದಂಡ ವಿಧಿಸಲಾಗಿದೆ. ಪರಿಶೀಲನೆ ವೇಳೆ ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆಯ ನೈರ್ಮಲ್ಯ, ಸುರಕ್ಷತಾ ವ್ಯವಸ್ಥೆಗಳು, ಸಮರ್ಪಕ ಶೌಚಾಲಯ, ಅಗ್ನಿಶಾಮಕ ಸಾಧನಗಳು, ಸಿಸಿಟಿವಿ ಕ್ಯಾಮರಾ ಅಳವಡಿಕೆ ಹಾಗೂ FSSAI ಆಹಾರ ಸುರಕ್ಷತಾ ಪ್ರಮಾಣ ಪತ್ರ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ತಪಾಸಣೆ ನಡೆಸಲಾಯಿತು.

ನಿಯಮಗಳಲ್ಲಿ ನ್ಯೂನತೆ ಕಂಡುಬಂದ ಪಿಜಿ ಮಾಲೀಕರಿಗೆ 7 ದಿನಗಳೊಳಗೆ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಕಾರ್ಯನಿರ್ವಹಿಸುವಂತೆ ತಿಳುವಳಿಕೆ ಪತ್ರ ನೀಡಲಾಗಿದೆ. ಈ ಸಂದರ್ಭ ಚಿಕ್ಕಪೇಟೆ ಮತ್ತು ಶಿವಾಜಿನಗರದ ಆರೋಗ್ಯ ವೈದ್ಯಾಧಿಕಾರಿಗಳು ಹಾಜರಿದ್ದರು. ಬೆಂಗಳೂರು ನಗರದಲ್ಲಿ ಜೆಂಟ್ಸ್ ಹಾಗೂ ಗರ್ಲ್ಸ್ ಪಿಜಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಬರುವ ಸಾವಿರಾರು ಜನರು ಪಿಜಿಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಜನಸಂಖ್ಯೆ ಹೆಚ್ಚಿದಂತೆ ಕಟ್ಟಡ ನಿಯಮಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಪಿಜಿಗಳನ್ನು ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಅಧಿಕೃತ ಪಿಜಿಗಳಿಗಿಂತ ಅನಧಿಕೃತ ಪಿಜಿಗಳೇ ಹೆಚ್ಚಿರುವುದು ಅಧಿಕಾರಿಗಳ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

ಕುಡುವಕ್ಕಲಿಗರ ಭವನ ರಾಜ್ಯದಲ್ಲಿಯೇ ಮಾದರಿಯಾಗಲಿ: ಸಚಿವ ಎಚ್.ಕೆ. ಪಾಟೀಲ್‌

0

ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘವು ಗದಗಿನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ಬಳಿ ನಿರ್ಮಿಸುತ್ತಿರುವ ಕುಡುವಕ್ಕಲಿಗರ ಭವನವು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ರಾಜ್ಯದಲ್ಲಿಯೇ ಮಾದರಿ ಆಗುವಂತೆ ನಿರ್ಮಾಣಗೊಳ್ಳಲಿ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆಶಿಸಿದರು.

ಅವರು ಗುರುವಾರ ಗದಗ ಜಿಲ್ಲಾ ಕಾಂಗ್ರೆಸ್ ಕಚೇರಿಯ ಪ್ರಾಂಗಣದಲ್ಲಿ ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ ಪದಾಧಿಕಾರಿಗಳು, ಸಮಾಜಬಾಂಧವರು ಔಪಚಾರಿಕವಾಗಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕುಡುವಕ್ಕಲಿಗರ ಭವನಕ್ಕೆ ಈಗಾಗಲೇ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿದ್ದು, ಈ ಮೊದಲು ಮಾತು ನೀಡಿದಂತೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 28 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಣ ಸದ್ಬಳಕೆ ಆಗಬೇಕಲ್ಲದೆ ಕಟ್ಟಡದ ಗುಣಮಟ್ಟ, ಸೌಲಭ್ಯಗಳು ಒಳ್ಳೆಯ ರೀತಿಯಿಂದ ಇರಬೇಕು. 2026ರ ಅಂತ್ಯದೊಳಗೆ ಉದ್ಘಾಟನೆಯಾಗುವಂತೆ ಕ್ರಮ ಜರುಗಿಸಿ. ಶೀಘ್ರದಲ್ಲಿಯೇ ಸ್ಥಳಕ್ಕೆ ಆಗಮಿಸಿ ಕಾರ್ಯ ಪ್ರಗತಿಯನ್ನು ನೋಡುವೆ ಎಂದರು.

ಗದಗಿನ ಸಮಾಜ ಬಾಂಧವರಾದ ಪರಮೇಶ್ವರಪ್ಪ ಜಂತ್ಲಿ, ಸಿದ್ದರಾಮಪ್ಪ ಗೋಜನೂರ, ವಸಂತಪ್ಪ ಕನಾಜ ಹೊಂಬಳದ ಬಿ.ಎ. ತಿಮ್ಮಗೊಣ್ಣವರ, ಚಂದ್ರಶೇಖರ ರಾಜೂರ, ಗೋಳಪ್ಪ ಮಂಟೂರ, ಶಶಿಧರ ಕನಾಜ, ಶಿವಕುಮಾರ ರೋಣದ, ಪಿ.ಕೆ. ಹೊನ್ನಗಣ್ಣವರ, ಬೂದೇಶ ಮೈಲಾರ, ವಿ.ಕೆ. ಬಳಗೇರ, ಎಸ್.ಎನ್. ದಿಡ್ಡಿಮನಿ, ಸೊರಟೂರಿನ ಶಂಕರಣ್ಣ ಅಡ್ರಕಟ್ಟಿ, ಮಹಾದೇವಪ್ಪ, ಕರಿಯಪ್ಪ ಜಂಗವಾಡ, ಅರವೀಂದ್ರ ಗುಡಿ, ಶಿವಪ್ಪ ಹೊಳಗಿ, ಬಸವರಾಜ ಕೋಣನವರ, ರಮೇಶ ಓಂಕಾರಿ, ಶಿವಪ್ಪ ಮೇಗೂರ, ಮಹಾದೇವಪ್ಪ ಹೊಸಮನಿ ಮುಂತಾದವರು ಸಚಿವರನ್ನು ಸನ್ಮಾನಿಸಿ ಗೌರವಿಸಿದರು.

ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಕುಡುವಕ್ಕಲಿಗರ ಭವನವನ್ನು ರಾಜ್ಯದಲ್ಲಿಯೇ ಮಾದರಿ ಆಗುವ ರೀತಿಯಲ್ಲಿ ನಿರ್ಮಿಸಲು ಮೂರುವರೆ ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿತ್ತು. ಭೂಮಿ ಪೂಜೆಗೆ ಆಗಮಿಸಿದ್ದ ಸಚಿವರು ಸ್ಥಳೀಯ ಶಾಸಕರ ಅನುದಾನದಿಂದ 20 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಸಂಘಟನೆ ಮತ್ತು ಸಮಾಜವು ಬೇರೆ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣಕ್ಕೆ ಪ್ರಯತ್ನಿಸಿತ್ತು. ಕಟ್ಟಡ ನಿರ್ಮಾಣ ಮಂದಗತಿಯಲ್ಲಿ ಸಾಗುತ್ತಿರುವುದನ್ನು ವೀಕ್ಷಿಸಿ ಸಚಿವ ಎಚ್.ಕೆ. ಪಾಟೀಲರು ಮುಖ್ಯಮಂತ್ರಿಗಳ ಮನವೊಲಿಸಿ ಅನುದಾನವನ್ನು ಬಿಡುಗಡೆ ಮಾಡಿರುವದು ಸಮಾಜಬಾಂಧವರಿಗೆ ಆನೆಬಲ ಬಂದಂತಾಗಿದೆ ಎಂದರು.

25 ಲಕ್ಷ ರೂ. ವೆಚ್ಚದ ಸಿ.ಸಿ ರಸ್ತೆ ಲೋಕಾರ್ಪಣೆಗೊಳಿಸಿದ ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಹುಲಕೋಟಿ, ಬಿಂಕದಕಟ್ಟಿ, ಅಸುಂಡಿ, ಕುರ್ತಕೋಟಿ ಭಾಗದಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ಅಧಿಕ ಅಭಿವೃದ್ಧಿ ಆಗಿದೆ. ಇದಕ್ಕೆಲ್ಲ ಜನಸಾಮಾನ್ಯರ ಒಗ್ಗಟ್ಟೇ ಕಾರಣವಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದಲ್ಲಿ 25 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾದ ಸಿ.ಸಿ ರಸ್ತೆ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿನ ಜನರ ಬದುಕಿನ ಜೀವನದ ಗುಣಮಟ್ಟ ಎತ್ತರಕ್ಕೇರಬೇಕು. ಬದುಕು ಹೆಚ್ಚು ಶಕ್ತಿಯುತವಾಗಬೇಕು. ಅವರ ಆರೋಗ್ಯ, ಬದುಕು ಸುಂದರವಾಗಿರಬೇಕೆಂದು ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದರಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 60 ಸಾವಿರ ರೂ.ಗಳು ತಲುಪಲಿದ್ದು, ಆರ್ಥಿಕವಾಗಿ ಚೇತರಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ ಎಂದರು.

ಬಡತನವನ್ನು ಬೇರು ಸಮೇತ ಕಿತ್ತೊಗೆಯುವ ಸಂಕಲ್ಪದೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಯಿತು. ಇದರಿಂದ ಬಡತನ ದೂರವಾಗಿ ನೆಮ್ಮದಿಯ ಬದುಕು ಕಾಣುವಂತಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ಹಿರೇಹಂದಿಗೋಳ ಗ್ರಾಮಸ್ಥರು ಸಾರ್ವಜನಿಕ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ. ಪಾಟೀಲ ಅವರು, ಗ್ರಾಮದ ಇನ್ನುಳಿದ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 40 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗುವುದು. ಏಪ್ರಿಲ್‌ನಲ್ಲಿ ಕೆಲಸ ಆರಂಭಿಸಿ ಜೂನ್ ತಿಂಗಳಿಗೆ ಪೂರ್ಣಗೊಳಿಸಲಾಗುವುದು ಎಂದು ಸ್ಥಳದಲ್ಲೇ ಭರವಸೆ ನೀಡಿದರು. ಅಲ್ಲದೇ ಸ್ಮಶಾನ ಅಭಿವೃದ್ಧಿಗಾಗಿ ಅಗತ್ಯವಿರುವ ಅಷ್ಟೂ ಅನುದಾನವನ್ನು ನೀಡಲಾಗುವುದು. ಇದರೊಂದಿಗೆ ಸಮುದಾಯ ಭವನಕ್ಕೆ 10 ಲಕ್ಷ ರೂ.ಗಳನ್ನು ನೀಡುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬಿಂಕದಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಪರಪ್ಪನವರ, ಉಪಾಧ್ಯಕ್ಷೆ ದ್ಯಾಮವ್ವ ಯರಟ್ಟಿ, ರವಿ ಮೂಲಿಮನಿ, ಎಂ.ಐ. ಪಾಟೀಲ, ವಿ.ಬಿ. ಜಕ್ಕನಗೌಡ್ರ, ಎಂ.ಬಿ. ಚುರ್ಚಿಹಾಳ, ಡಿ.ಬಿ. ಕುಲಕರ್ಣಿ, ಎಂ.ಎಸ್. ಪಾಟೀಲ, ಬಸಯ್ಯ ಯಲಬುರ್ಗಿಮಠ, ಎಸ್.ಎನ್. ಪಾಟೀಲ, ಬಿ.ಟಿ. ಖಾನಾಪುರ, ಆರ್.ಎಚ್. ಪಾಟೀಲ, ಎಂ.ಎಚ್. ಮಡಿಕೇರಿ ಸೇರಿದಂತೆ ಗ್ರಾಮದ ಹಿರಿಯರು, ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರ ಮನರೇಗಾ ಉದ್ಯೋಗ ಖಾತ್ರಿ ಯೋಜನೆಯ ಕಾನೂನನ್ನು ರದ್ದುಪಡಿಸಿದೆ. ಇದು ಜನಸಾಮಾನ್ಯರ ವಿಕೇಂದ್ರೀಕರಣ ವ್ಯವಸ್ಥೆಗೆ ವಿರುದ್ಧವಾಗಿದೆ. ಈ ಮೊದಲಿದ್ದ ಕಾನೂನು ಹಾಗೂ ಯೋಜನೆ ಮರುಸ್ಥಾಪನೆಯಾಗಲಿ ಎಂದು ಇದೇ ಸಂದರ್ಭದಲ್ಲಿ ಸಚಿವ ಎಚ್.ಕೆ. ಪಾಟೀಲ ಒತ್ತಾಯಿಸಿದರು.

ನಾಜೂಕಿನಿಂದ ಉತ್ಖನನ ಪ್ರಕ್ರಿಯೆ ನಡೆಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಶುಕ್ರವಾರ ಉತ್ಖನನಕ್ಕೆ ಚಾಲನೆ ನೀಡಿದರು.

ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಹಾಗೂ ಉತ್ಖನನದ ನಿರ್ದೇಶಕ ಟಿ.ಎಂ. ಕೇಶವ ಅವರ ನೇತೃತ್ವದಲ್ಲಿ ಉತ್ಖನನ ಆರಂಭವಾಗಿದ್ದು, ಉತ್ಖನನ ಕುರಿತು ಪುರಾತತ್ವ ಅಧಿಕಾರಿಗಳು ಕಾರ್ಮಿಕರಿಗೆ ಮಾಹಿತಿ ನೀಡಿದರು. 20 ಜನ ಮಹಿಳೆಯರು, 10 ಜನ ಪುರುಷರು ಸೇರಿ ಒಟ್ಟು 30 ಕಾರ್ಮಿಕರಿಂದ ಉತ್ಖನನ ಕಾರ್ಯ ಮುಂದುವರಿದಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ಪ್ರಾಚೀನ ವಸ್ತುಗಳ ಬಗೆಗೆ ಉತ್ಖನನ ಮಾಡುವ ಬಗ್ಗೆ ಕಾರ್ಮಿಕರಿಗೆ ಮಾಹಿತಿ ನೀಡಿ, ನಾಜೂಕಿನಿಂದ ಉತ್ಖನನ ಪ್ರಕ್ರಿಯೆ ನಡೆಸಬೇಕು. ಅಲ್ಲದೇ, ಯಾವುದೇ ವಸ್ತು ಸಿಕ್ಕರೂ ಅದನ್ನು ಅಧಿಕಾರಿಗಳಿಗೆ ತಿಳಿಸಬೇಕು. ಭೂಮಿ ಅಗೆಯುವಾಗ ಸೂಕ್ಷ್ಮತೆ ಇರಲಿ ಎಂದು ಸೂಚನೆ ನೀಡಿದರು.

ಶುಕ್ರವಾರ ಬೆಳಿಗ್ಗೆ 11ರಿಂದ ಆರಂಭವಾದ ಉತ್ಖನನವು ಸಂಜೆ 5.30ರವರೆಗೆ ನಡೆದಿದ್ದು, ದಿನದ ಅಂತ್ಯಕ್ಕೆ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ 10/10 ಅಡಿಯ ಸುತ್ತಳತೆಯಲ್ಲಿ ನಡೆದ ಉತ್ಖನನದಲ್ಲಿ ಶುಕ್ರವಾರ ಕೇವಲ 1 ಅಡಿ ಆಳದಷ್ಟು ಮಾತ್ರ ಮಣ್ಣು ಅಗೆಯಲಾಗಿದ್ದು, ಇನ್ನೂ ಸುಮಾರು 7ರಿಂದ 8 ಅಡಿ ಆಳ ಅಗೆದರೆ ಏನಾದರೂ ಅವಶೇಷಗಳು, ಆಭರಣ, ವಸ್ತುಗಳು ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಪುರಾತತ್ವ ಇಲಾಖೆ, ಜಿಲ್ಲಾಡಳಿತ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಖನನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಹಾಗೂ ಉತ್ಖನನದ ನಿರ್ದೇಶಕ ಟಿ.ಎಂ. ಕೇಶವ ಅವರ ನೇತೃತ್ವದಲ್ಲಿ ಉತ್ಖನನ ಆರಂಭವಾಗಿದೆ. ನಿಧಿ ಸಿಕ್ಕಿರುವ ಬೆನ್ನಲ್ಲೇ ಉತ್ಖನನ ನಡೆಯುತ್ತಿರುವುದು ಕಾಕತಾಳೀಯ. ಸರ್ಕಾರ ಪೂರ್ವ ನಿಗದಿಯಂತೆ ಉತ್ಖನನ ಕಾರ್ಯ ಮಾಡುತ್ತಿದ್ದು, ಭೂಮಿಯ ಒಡಲಿನಲ್ಲಿ ಏನಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ದೇವಸ್ಥಾನದ ಕುರುಹು ಇರುವ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದರಂತೆ ಉತ್ಖನನಕ್ಕೆ ಚಾಲನೆ ಸಿಕ್ಕಿದೆ. ಉತ್ಖನನದ ಸಂದರ್ಭದಲ್ಲಿ ಏನು ಸಿಗುತ್ತದೆ ಎಂದು ಕಾಯ್ದು ನೋಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಲಕ್ಕುಂಡಿ ಪಾರಂಪರಿಕ ಪ್ರದೇಶ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ ಸಿದ್ದು ಪಾಟೀಲ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಗ್ರಾ.ಪಂ ಅಧ್ಯಕ್ಷ ಕೆಂಚಪ್ಪ ಪೂಜಾರ, ಪಿಡಿಒ ಅಮೀರ ನಾಯ್ಕ ಸೇರಿ ಹಲವರಿದ್ದರು.

ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನಕ್ಕೂ ಮುನ್ನ ಉತ್ಖನನದ ಜಾಗೆ ಹಾಗೂ ಉತ್ಖನನಕ್ಕೆ ಬೇಕಾಗುವ ಸಲಕರಣೆಗಳಿಗೆ ಪೂಜೆ ಸಲ್ಲಿಸಲಾಯಿತು.

“ಗ್ರಾಮದ ಸ್ಥಳಾಂತರ ಉತ್ಖನನದಲ್ಲಿ ಸಿಗುವ ಕುರುಹುಗಳ ಮೇಲೆ ನಿರ್ಧಾರವಾಗುತ್ತದೆ. ಉತ್ಖನನದಲ್ಲಿ ಅಂಥದ್ದೇನಾದರೂ ಕಂಡುಬಂದಲ್ಲಿ ಸ್ಥಳಾಂತರ ಮಾಡುತ್ತೇವೆ. ಗ್ರಾಮದ ಜನರ ಸಂಪೂರ್ಣ ಸಹಕಾರದಿಂದ ಉತ್ಖನನ ನಡೆಯುತ್ತಿದೆ. ಭೂತಾಯಿ ಒಡಲೊಳಗೆ ಏನು ಹುದುಗಿದೆಯೋ ಕಾದು ನೋಡಬೇಕಿದೆ”

  • ಸಿ.ಎನ್. ಶ್ರೀಧರ್.
    ಜಿಲ್ಲಾಧಿಕಾರಿಗಳು, ಗದಗ.

ರವಿ ದಂಡಿನರಿಗೆ ಪದವೀಧರ ಕ್ಷೇತ್ರದ ಟಿಕೆಟ್ ನೀಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಪಕ್ಷದಿಂದ ಕನಕದಾಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರವಿ ದಂಡಿನ ಅವರಿಗೆ ಟಿಕೆಟ್ ನೀಡಬೇಕು ಎಂದು ನಿವೃತ್ತಿ ಪ್ರಾಚಾರ್ಯ ಉಮೇಶ ಹಿರೇಮಠ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ ಈ ನಾಲ್ಕು ಜಿಲ್ಲೆಯನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕನಕದಾಸ ಶಿಕ್ಷಣ ಸಮಿತಿ ಸಂಸ್ಥೆ ದಶಕಗಳಿಂದ ಶಿಕ್ಷಣದಲ್ಲಿ ಸೇವೆ ಸಲ್ಲಿಸುತ್ತಿದೆ. ಕೆಎಸ್‌ಎಸ್ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಕಾಲೇಜುಗಳಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿಯನ್ನು ಪಡೆದು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ರವಿ ದಂಡಿನ ಅವರಿಗೆ ಟಿಕೆಟ್ ನೀಡಿದರೆ ಗೆಲವು ಸುಲಭವಾಗಲಿದೆ ಎಂದರು.

ರವಿ ದಂಡಿನ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ, ಸಂಘಟಕರಾಗಿ, ಹೋರಾಟಗಾರರಾಗಿ, ಯುವಕರ ಕಣ್ಮಣಿಯಾಗಿ, ನಿರಂತರವಾಗಿ, ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪದವೀಧರರ ಹಾಗೂ ಶಿಕ್ಷಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಹಗಲಿರುಳು ಶ್ರಮಿಸಿ ಯಶಸ್ವಿಯಾಗಿದ್ದಾರೆ. ಭಾರತೀಯ ಜನತಾ ಪಕ್ಷದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯವರೆಗೂ ಹಳೆ ಧಾರವಾಡ ಜಿಲ್ಲೆಯ ಭಾಗದಲ್ಲಿ ಹಿಂದುಳಿದ ವರ್ಗದವರಿಗೆ ಪ್ರಾತಿನಿಧ್ಯ ನೀಡಿಲ್ಲ. ಹಣ ಬಲ, ರಾಜಕೀಯ ಬಲ ಇದ್ದವರಿಗೆ ಮಾತ್ರ ಈವರೆಗೆ ಟಿಕೆಟ್ ನೀಡಲಾಗಿದೆ. ಭಾರತೀಯ ಜನತಾ ಪಕ್ಷಕ್ಕೆ ಎಲ್ಲಾ ವರ್ಗದ ಜನರ ಅವಶ್ಯಕತೆ ಇರುವುದರಿಂದ ಹಿಂದುಳಿದ ವರ್ಗಕ್ಕೆ ಸೇರಿದ ರವಿ ದಂಡಿನ ಅವರಿಗೆ ಬಿಜೆಪಿ ಪಕ್ಷದಿಂದ ಈ ಬಾರಿ ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್ ನೀಡಲು ಈ ಮೂಲಕ ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ ಎಂದರು.

ನಿವೃತ್ತ ಪ್ರಾಚಾರ್ಯ ವಿ.ಎಸ್. ದಲಾಲಿ, ಬಿ.ಎಸ್. ಕಂಠಿ, ನಿವೃತ್ತ ಉಪ ಪ್ರಾಚಾರ್ಯ ಡಾ. ಜೆ.ಸಿ. ಜಂಪಣ್ಣನವರ, ಮಲ್ಲಿಕಾರ್ಜುನ ಕಿರೇಸೂರ ಮುಂತಾದವರು ಇದ್ದರು.

ಮಹಾತ್ಮರ ಬದುಕು ನಮಗೆಲ್ಲ ದಾರಿದೀಪ: ಸಂಸದ ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮಾಜದ ಬೆಳಕೇ ಆಗಿದ್ದ ಮಹಾತ್ಮರ ಆದರ್ಶ, ಮೌಲ್ಯ, ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಅವರು ಸಮೀಪದ ಹೂವಿನಶಿಗ್ಲಿ ಗ್ರಾಮದ ವಿರಕ್ತಮಠದ ಲಿಂ.ನಿರಂಜನ ಮಹಾಸ್ವಾಮಿಗಳ 16ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆಸಿದ `ಮಹಾತ್ಮರ ಬದುಕು-ಬೆಳಕು’ ಚಿಂತನಗೋಷ್ಠಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮರ ದಿವ್ಯ ಜ್ಞಾನ, ಅನುಭವ ಮತ್ತು ಸತ್ಸಂಗದಿಂದ ಸುಂದರ ಬದುಕು ಸಾಧ್ಯವಾಗುತ್ತದೆ. ಲಿಂ.ನಿರಂಜನ ಮಹಾಸ್ವಾಮಿಗಳಂತಹ ಮಹಾತ್ಮರ ಬದುಕು ನಮಗೆಲ್ಲ ದಾರಿದೀಪವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಈಗಿನ ಶ್ರೀಗಳು ಗುರುಕುಲದ ನೂರಾರು ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಶ್ರೀಮಠದ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಕುಂದಗೋಳ ಶ್ರೀ ಅಭಿನವ ಬಸವಣ್ಣಜ್ಜನವರು, ನವಲಗುಂದದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಗುಡ್ಡದ ಆನ್ವೇರಿ ಶ್ರೀ ಶಿವಯೋಗಿಶ್ವರ ಮಹಾಸ್ವಾಮಿಗಳು, ಹಿರೇಮಲ್ಲನಕೇರಿಯ ಚನ್ನಬಸವ ಮಹಾಸ್ವಾಮಿಗಳು, ಕಮಡೊಳ್ಳಿಯ ಶ್ರೀ ರಾಚೋಟೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಮುಖಂಡರುಗಳಾದ ಗವಿಸಿದ್ದಪ್ಪ ದ್ಯಾಮಣ್ಣವರ, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಶಿವಪುತ್ರಪ್ಪ ಕಲಕೋಟಿ, ಬಸವರಾಜ ಕೋಳಿವಾಡ, ಬಸವರಾಜ ಗಾಂಜಿ, ಪುಲಕೇಶಿ ಉಪನಾಳ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಬಸವೇಶ ಮಹಾಂತಶೆಟ್ಟರ, ನಾಯಿಕೆರೂರು ಗ್ರಾಮದ ಸದ್ಭಕ್ತರು ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಈಶ್ವರ ಮೆಡ್ಲೇರಿ ನಿರೂಪಿಸಿದರು. ಕೆ.ಎಸ್. ಇಟಗಿಮಠ, ರೇಣುಕಗೌಡ ಪಾಟೀಲ, ಶಿವಾನಂದ ಕಟ್ಟಿಮನಿ, ಶರಸೂರಿ, ಮಹಾದೇವ ಬಿಷ್ಟಣ್ಣವರ ನಿರ್ವಹಿಸಿದರು.

ನೇತೃತ್ವ ವಹಿಸಿದ್ದ ಹೂವಿನಶಿಗ್ಲಿಯ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯನ ಜನ್ಮ ದೇವರು ಕೊಟ್ಟ ಭಾಗ್ಯ ಮತ್ತು ಸತ್ಕಾರ್ಯ ಮಾಡಲೊಂದು ಅವಕಾಶ. ನಿತ್ಯ ಜೀವನದ ಹೋರಾಟ, ಜಂಜಾಟಗಳ ನಡುವೆಯೂ ಕೈಲಾದ ಮಟ್ಟಿಗೆ ಧರ್ಮ, ಶಿಕ್ಷಣ, ಸಾಮಾಜಿಕ ಸೇವೆ ಮಾಡಬೇಕು ಎಂಬುದು ಲಿಂ. ಶ್ರೀಗಳ ಇಚ್ಛೆಯಾಗಿತ್ತು. ಶ್ರೀಮಠದಲ್ಲಿ ನಿತ್ಯ ನೂರಾರು ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಸೇವೆ ನಡೆಸುವುದಕ್ಕೆ ಭಕ್ತರು ನೀಡುತ್ತಿರುವ ಸಹಕಾರ ಅಪಾರವಾಗಿದೆ. ಲಕ್ಷ್ಮೇಶ್ವರದಲ್ಲಿ ಶ್ರೀಮಠದ ಧಾರ್ಮಿಕ ಪಾಠಶಾಲೆ ನಿರ್ಮಿಸಲಾಗುತ್ತಿದ್ದು, ಭಕ್ತರು ಕೈಜೋಡಿಸುವಂತೆ ತಿಳಿಸಿದರು.

error: Content is protected !!