Home Blog

ಶಿಕ್ಷಣ, ಸಮಾನತೆಗಳು ಸಮಾಜೋನ್ನತಿಗೆ ಸಹಕಾರಿ

0

ವಿಜಯಸಾಕ್ಷಿ ಸುದ್ದಿ, ಗದಗ : ಡಾ. ಬಿ.ಆರ್. ಅಂಬೇಡ್ಕರರು ರಚಿಸಿದ ಭಾರತದ ಸಂವಿಧಾನದ ಫಲದಿಂದ ಇಂದು ನಾವು ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಸುಖಮಯ ಜೀವನ ನಡೆಸುತಿದ್ದೇವೆ.

ಅಂಬೇಡ್ಕರರು ತಮ್ಮ ಜೀವನದಲ್ಲಿ ಶಿಕ್ಷಣ ಪಡೆಯಲು ಅನುಭವಿಸಿದ ಕಷ್ಟ ಮತ್ತು ಸಮಾಜ ತಮಗೆ ತೋರಿದ ತಾರತಮ್ಯ, ದೌರ್ಜನ್ಯಗಳು ಮುಂದಿನ ಜನಾಂಗದವರು ಅನುಭವಿಸಬಾರದೆಂಬ ಹೋರಾಟಗಳಿಂದ ಜಯಗಳಿಸಿ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಸಂವಿಧಾನ ರಚಿಸಿದರು ಎಂದು ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಿವಾನಂದ ಗಿಡ್ಡಕೆಂಚಣ್ಣವರ ತಿಳಿಸಿದರು.

ಇಲ್ಲಿನ ಎಸ್‌ವಾಯ್‌ಬಿಎಂಎಸ್ ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ-2024 ಗದಗ ಇವರುಗಳ ಸಹಯೋಗದಲ್ಲಿ ಬೇಸಿಗೆ ರಜೆ ಪ್ರಯುಕ್ತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ನಡೆದಿರುವ ಸಂಸ್ಕೃತಿ-ಸಂಸ್ಕಾರ ಶಿಬಿರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ನಿವೃತ್ತ ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲತ್ವಾಡಮಠ ಮಾತನಾಡಿ, ಹಿರಿಯರಾದ ನಾವೆಲ್ಲರೂ ಅಂಬೇಡ್ಕರರ ತತ್ವಾದರ್ಶಗಳನ್ನು ಪರಿಪಾಲಿಸಿದರೆ ಕಿರಿಯರೂ ನಮ್ಮನ್ನು ಅನುಸರಿಸುವರು ಎಂದು ಹೇಳಿದರು.

ಶಿಬಿರಾರ್ಥಿಗಳಾದ ಸಿಮ್ರಾನ್ ನದಾಫ್, ಚಿನ್ಮಯಿ ಗೌಡರ, ನಿಧಿ ಕಟ್ಟಿಮನಿ, ಅನುಷ್ಕಾ ಹಿರೇಮಠ ಅಂಬೇಡ್ಕರರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ನವೀನ ಪಲ್ಲೇದ, ಶಿಬಿರದ ಶಿಕ್ಷಕರಾದ ಎಸ್.ಎಂ. ಬುರಡಿ, ಸುನಂದಾ ಜ್ಯಾನೋಪಂತರ, ವೀಣಾ ಹಿರೇಮಠ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಅದಿತಿ ಹಿರೇಮಠ, ಸಾಹಿತ್ಯ ಜಾಧವ, ತ್ರಿಶಾ ಸಿ. ಪ್ರಾರ್ಥನೆ ಹೇಳಿದರು. ಶ್ರಾವಣಿ ಗುಡದೂರ ಸಂವಿಧಾನ ಪೀಠಿಕೆ ಪಠಣ ಮಾಡಿಸಿದರು. ಶಿಬಿರ ಸಂಯೋಜಕ ಕೆ.ಎಸ್. ಪಲ್ಲೇದ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಂ. ಬುರಡಿ ವಂದಿಸಿದರು.

ಬೆಳದಡಿ ತಾಂಡಾದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ

0

ವಿಜಯಸಾಕ್ಷಿ ಸುದ್ದಿ, ಗದಗ : ಬೆಳದಡಿ ತಾಂಡಾದ ಶ್ರೀ ಸೇವಾಲಾಲ್ ಯುವಕ ಸಂಘ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರ ಜಯಂತಿಯ ಪ್ರಯುಕ್ತ ಬೆಳದಡಿ ತಾಂಡಾದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಯಲಿಶಿರುಂಜ ಜ್ಞಾನಯೋಗಾಶ್ರಮದ ಪೀಠಾಧಿಪತಿಗಳಾದ ಪೂಜ್ಯಶ್ರೀ ಬಸವ ಸಮರ್ಥ ಮಹಾಸ್ವಾಮಿಗಳು ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ತಾಂಡಾದ ಮುಖಂಡ ಚಂದು ನಾಯಕ್, ಮುಖ್ಯ ಅತಿಥಿಗಳಾಗಿ ಕೆ.ಸಿ. ನಭಾಪುರ, ರವಿಕಾಂತ ಅಂಗಡಿ, ಸೋಮು ನಾಯಕ್, ಮನೋಹರ್ ಕಾರಭಾರಿ, ವೆಂಕಣ್ಣ ಪೂಜಾರ, ವಿಜಯ್ ಮಾಳಗಿಮನಿ, ಭೀಮಪ್ಪ ರಾಠೋಡ, ನಾರಾಯಣ್ ಪವಾರ, ಈಶ್ವರ್ ಹೊಸಮನಿ, ಲಾಲಪ್ಪಾ ಪೂಜಾರ್, ಲಕ್ಷö್ಮಣ ಚವ್ಹಾಣ, ಮೋತಿಲಾಲ್ ಪೂಜಾರ, ಮಾಂತೇಶ್ ಚವ್ಹಾಣ, ನಾರಾಯಣ್ ನಾಯಕ್, ಗೋವಿಂದ ಡೋಣಿ, ಮಂಜುನಾಥ ಪೂಜಾರ, ಸಂತೋಷ ನಾಯಕ, ಠಾಕಪ್ಪ ಚವ್ಹಾಣ, ಅರ್ಜುನ ನಾಯಕ, ಜಗದೀಶ್ ಹಡಗಲಿ, ಲೋಕಪ್ಪ ತುಳಸಿಮಣಿ, ಗೇಮಪ್ಪ ಪೂಜಾರ, ಚಂದಪ್ಪ ನಾಯಕ, ಠಾಕ್ರಪ್ಪ, ಕಪಿಲ್ ಪೂಜಾರ, ವೆಂಕಟೇಶ ಪೂಜಾರ, ರಾಮು ಚವ್ಹಾಣ, ಸಂಜೀವ ನಾಯಕ, ಪಾಂಡು ರಾಠೋಡ, ಪ್ರವೀಣ ಪವಾರ ಮುಂತಾದವರು ಉಪಸ್ಥಿತರಿದ್ದರು. ಪಾಂಡು ಚವ್ಹಾಣ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಗುಂಡಪ್ಪ ನಾಯಕ ಸ್ವಾಗತಿಸಿದರು. ಹೇಮಂತ್ ಬೇವಿನಕಟ್ಟಿ ನಿರೂಪಿಸಿದರು. ರಮೇಶ ಚವ್ಹಾಣ ವಂದಿಸಿದರು.

ಮಾರನಬಸರಿಯಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ರೋಣ : ಸೌಹಾರ್ದತೆಯ ತವರು ಎಂದು ಖ್ಯಾತಿ ಪಡೆದಿರುವ ಮಾರನಬಸರಿ ಗ್ರಾಮದಲ್ಲಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಂಗಮದಲ್ಲಿ ಅದ್ದೂರಿಯಾಗಿ ಜರುಗಿತು.

ಸೋಮವಾರ ಬೆಳಗಿನ ಜಾವ ದೇವಸ್ಥಾನದಲ್ಲಿ ದೇವತೆಗೆ ವಿಷೇಷ ಪೂಜಾ ಕಾರ್ಯಗಳನ್ನು ನೆರವೇರಿಸುವ ಮೂಲಕ ಭಕ್ತರ ದರ್ಶನಕ್ಕೆ ಅಣಿಗೊಳಿಸಲಾಯಿತು. ನಂತರ ಗ್ರಾಮ ದೇವತೆಯು ಮಾರುತೇಶ್ವರನ ಸನ್ನಿಧಾನಕ್ಕೆ ತೆರಳಿ ಮರಳಿ ಬರುವ ಸಂಧರ್ಭದಲ್ಲಿ ಉಗ್ರ ರೂಪವನ್ನು ತಾಳುವ ಮೂಲಕ ಭಕ್ತರ ಮನೆಗೆ ತೆರಳಿ ದಂಡಿ ಹಾಗೂ ಸೀರೆಯನ್ನು ಮುಡಿಯುವದರೊಂದಿಗೆ ದಲಿತ ಕಾಲೋನಿಯಲ್ಲಿರುವ ದುರ್ಗಾದೇವಿಯ ದೇವಸ್ಥಾನಕ್ಕೆ ಆಗಮಿಸಿ ಭಕ್ತರಿಗೆ ದರ್ಶನಗೈದಳು.

ಕೆಲ ಗಂಟೆಗಳವರೆಗೆ ಗ್ರಾಮದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಗ್ರಾಮದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದು ಜಾತ್ರಾ ಮಹೋತ್ಸವದ ವಿಶೇಷತೆಯಾಗಿತ್ತು.

ಗ್ರಾಮ ದೇವತೆಯ ಉಗ್ರ ರೂಪವನ್ನು ಕಂಡ ಸಾವಿರಾರು ಭಕ್ತರು ದೇವಿಯ ನಾಮ ಸ್ಮರಣೆಯನ್ನು ಮಾಡುತ್ತಾ ಜಯಘೋಷಗಳನ್ನು ಕೂಗಿ ದೇವಿ ಬರುವ ದಾರಿಯಲ್ಲಿ ನೀರು ಹಾಕುವ ಮೂಲಕ ಭಕ್ತಿ ಮೆರದರು. ದೇವಿಯು ಸಣ್ಣ ಮಸೂತಿ, ದೊಡ್ಡ ಮಸೂತಿಗಳಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಹಿಂದೂ-ಮುಸ್ಲಿಂ ಭಕ್ತರ ಭಕ್ತಿ ಇಮ್ಮಡಿಗೊಂಡಿತ್ತು.

ಗ್ರಾಮ ದೇವತೆಯು ದ್ವಾರ ಬಾಗಿಲ ಬಳಿ ಬರುತ್ತಿದ್ದಂತೆ ದೇವಿ ಉರಿನೊಳಗೆ ಹೊಗಲು ನಿರಾಕರಿಸಿ ದ್ವಾರ ಬಾಗಿಲದ ಬಳಿ ಗಂಟೆಗೂ ಹೆಚ್ಚು ಕಾಲ ನಿಂತಿದ್ದು ಭಕ್ತರ ಭಯಕ್ಕೆ ಕಾರಣವಾಗಿತ್ತು. ಬಳಿಕ ಭಕ್ತರು ದೇವಿಯ ಭಾವಚಿತ್ರಕ್ಕೆ ಹೂಮಾಲೆಯನ್ನು ಸಮರ್ಪಿಸಿ ಧನ್ಯತೆಯನ್ನು ಮೆರೆದಾಗ ದೇವಿ ಉರಿನೊಳಕ್ಕೆ ಪ್ರವೇಶಿಸಿದಳು.

ಅನಿಲ್‌ರ ದೂರದೃಷ್ಟಿ ಸಮಾಜಕ್ಕೆ ಮಾದರಿ : ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಗದಗ : ಅನಿಲ ಮೆಣಸಿನಕಾಯಿ ಗದಗ ಕ್ಷೇತ್ರದಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡಿದ್ದಾರೆ. ಸಮಾನತೆಗಾಗಿ ಅವರ ಹೊಂದಿರುವ ದೂರದೃಷ್ಟಿ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ.

ಅನಿಲ್ ಮೆಣಸಿನಕಾಯಿ ಕೆಲಸಕ್ಕೆ ನಾನು ಸದಾ ಬೆಂಬಲವಾಗಿ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ರಾತ್ರಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರ ನಿವಾಸದಲ್ಲಿ ಸಮಾನತೆಯ ಮಂದಿರ ಪ್ರತಿಷ್ಠಾಪನೆ ಅಂಗವಾಗಿ ನಡೆದ ಸಮಾನತೆಯ ಜಾಥಾ ಸಮಾರೋಪ ಹಾಗೂ ಶ್ರೀರಾಮ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸಂತ ಶಿಶುನಾಳ ಶರೀಫರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಕುರ್ತಕೋಟಿ ಗ್ರಾಮದಲ್ಲಿ ಸಮಾನತೆಯ ಮಂದಿರ ನಿರ್ಮಾಣದ ಸಂಕಲ್ಪ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಮನುಕುಲಕ್ಕಾಗಿ, ಮನುಕುಲದ ಸಮಾನತೆಗಾಗಿ ಈ ಬೃಹತ್ ಜಾಥಾ ಮತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗದಗ ಭಾವೈಕ್ಯತೆ ಹೊಂದಿರುವ ಜಿಲ್ಲೆ. ಇಲ್ಲಿನ ಜನರು ಜಾತಿ, ಮತ, ಪಂಥ ಮರೆತು ಮನುಷ್ಯರಾಗಿ ಬದುಕಬೇಕು ಎಂಬ ಭಾವನೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಸಮಾನತೆಯ ಸಂದೇಶ ಸಾರಿದ ಶ್ರೀರಾಮ, ಅಂಬೇಡ್ಕರ್, ಬುದ್ಧ, ಬಸವ ಮತ್ತು ಶರೀಫರ ಮಂದಿರಗಳನ್ನು ಜಿಲ್ಲೆಯ ಕುರ್ತಕೋಟಿ ಗ್ರಾಮದಲ್ಲಿ ನಿರ್ಮಿಸಲಾಗುವುದು ಎಂದರು.

ಸಮಾರಂಭದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಬಿಜೆಪಿ ಮುಖಂಡರಾದ ಕಾಂತಿಲಾಲ್ ಬನ್ಸಾಲಿ ಮುಂತಾದವರು ಉಪಸ್ಥಿತರಿದ್ದರು.

ಬಿಜೆಪಿ ಸಮಾನತೆಗಾಗಿಯೇ ಜನ್ಮತಾಳಿದ ಪಕ್ಷ. ಆದರೆ, ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಪೊಳ್ಳು ಭರವಸೆಗಳಿಗೆ ಮತದಾರರು ಮರುಳಾಗಬೇಡಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕ್ಷೇತ್ರದಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸುವೆ : ಗುರುನಾಥ ದಾನಪ್ಪನವರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದಲಿತ ಸಮಾಜದ ಪ್ರಬಲ ಮುಖಂಡ, ಬಿಜೆಪಿಯ ಹಿರಿಯ ಮುಖಂಡ ಗುರುನಾಥ ದಾನಪ್ಪನವರ ಸೋಮವಾರ ಗದಗನಲ್ಲಿ ಸಚಿವ ಎಚ್.ಕೆ. ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ರವಿವಾರ ಲಕ್ಷ್ಮೇಶ್ವರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಮುಖಂಡರ ನಡೆಯಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದು, ಶೀಘ್ರದಲ್ಲಿಯೇ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುವದಾಗಿ ಹೇಳಿದ್ದರು. ಸೋಮವಾರ ದಿಢೀರನೆ ಗದಗ ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷರಾಗಿ, ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಸಚಿವ ಎಚ್.ಕೆ. ಪಾಟೀಲರು ದಾನಪ್ಪನವರ ಅವರನ್ನು ಪಕ್ಷದ ಶಾಲು, ಮಾಲೆ ಹಾಕಿ ಪಕ್ಷಕ್ಕೆ ಸ್ವಾಗತಿಸಿದರು.

ಈ ಸಮಯದಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಗುರುನಾಥ ದಾನಪ್ಪನವರ ಬಿಜೆಪಿಯ ತತ್ವ-ಸಿದ್ದಾಂತ, ಧೋರಣೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವದು ಶಿರಹಟ್ಟಿ ಸೇರಿದಂತೆ ಈ ಭಾಗಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತದೆ.

ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡು ಉತ್ತಮವಾಗಿ ಕೆಲಸ ನಿರ್ವಹಿಸುವಲ್ಲಿ ಯಾವುದೇ ಸಂಶಯವಿಲ್ಲ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲುವಿಗೆ ಇಂದಿನಿಂದಲೇ ಅವರು ಕಾರ್ಯನಿರ್ವಹಿಸಲಿ. ಇಂತಹ ಅನೇಕ ಪ್ರಮುಖ ಮುಖಂಡರು ಈ ಭಾಗದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ನುಡಿದರು.

ಪಕ್ಷ ಸೇರ್ಪಡೆಗೊಂಡ ಹಿರಿಯ ಮುಖಂಡ ಗುರುನಾಥ ದಾನಪ್ಪನವರ ಮಾತನಾಡಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದೊಂದು ವರ್ಷದಿಂದ ಅನೇಕ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ಜಿಲ್ಲಾ ಹಾಗೂ ಮಂಡಳ ಘಟಕದವರು ಮಾಡುತ್ತಿದ್ದಾರೆ. ಇವರ ನಡೆಯಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ಮಂಡಳ, ನಗರ, ಜಿಲ್ಲಾ ಘಟಕಗಳು ಸೇರಿದಂತೆ ಪಕ್ಷದ ಯಾವುದೇ ಪದಾಧಿಕಾರಿಗಳ ಆಯ್ಕೆಯಲ್ಲಿ ನಮ್ಮ ಕಾರ್ಯಕರ್ತರು ಎನ್ನುವ ಉದ್ದೇಶದಿಂದ ಅವಕಾಶ ನೀಡದಿರುವದು ಹಾಗೂ ಒಂದು ವರ್ಷದಿಂದ ಪಕ್ಷದ ಯಾವುದೇ ಬೈಠಕ್‌ಗಳಿಗೆ, ಸಭೆಗಳಿಗೆ ನನ್ನನ್ನು ಆಹ್ವಾನಿಸದೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸಿದ್ದಲಿಂಗೇಶ ಪಾಟೀಲ, ರಾಜಣ್ಣ ಕುಂಬಿ, ತಿಪ್ಪಣ್ಣ ಸಂಶಿ, ಫಕ್ಕೀರೇಶ ಮ್ಯಾಟಣ್ಣವರ, ರಾಮು ಅಡಗಿಮನಿ ಮುಂತಾದವರಿದ್ದರು.

ಬಿಜೆಪಿಯ ಧೋರಣೆಯಿಂದ ಬೇಸತ್ತು ಪಕ್ಷವನ್ನು ತ್ಯಜಿಸಿದ್ದೇನೆ. ಅಲ್ಲದೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಪಕ್ಷದ ಅನೇಕ ಸಿದ್ಧಾಂತಗಳನ್ನು ಒಪ್ಪಿ ಯಾವುದೇ ಶರತ್ತು ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವದಾಗಿ ಗುರುನಾಥ ದಾನಪ್ಪನವರ ಹೇಳಿದರು.

ನಮ್ಮ ಸಾಧನೆಯನ್ನೂ ತಿಳಿಸುತ್ತೇವೆ : ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಹಾವೇರಿ : ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನೊಂದಿಗೆ ಕೇಂದ್ರ ಸರ್ಕಾರ ಹಾಗೂ ನಮ್ಮ ಅವಧಿಯ ಸಾಧನೆಗಳನ್ನು ಜನರಿಗೆ ತಿಳಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯಲ್ಲಿ ಚುನಾವಣಾ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಇವತ್ತು ಒಳ್ಳೆಯ ಮುಹೂರ್ತ ಇದೆ. ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದೇನೆ. ಏಪ್ರಿಲ್ 19ರಂದು ಬೃಹತ್ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸುವೆ. ಅಂದು ನಮ್ಮ ನಾಯಕರಾದ ಯಡಿಯೂರಪ್ಪ, ಬೈರತಿ ಬಸವರಾಜ ಸೇರಿ ಹಲವು ನಾಯಕರು ಆಗಮಿಸಲಿದ್ದಾರೆ ಎಂದರಲ್ಲದೆ, ಅತಿ ಹೆಚ್ಚು ಮತಗಳ ಅಂತರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರು ಕೇಂದ್ರದಲ್ಲಿ ಬಹುಮತ ಬರುತ್ತೇವೆ ಎಂದು ನೀಡುವ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ.

ಬಹುಮತಕ್ಕೆ 272 ಸ್ಥಾನ ಬೇಕು. ಅಷ್ಟು ಸ್ಥಾನಗಳಿಗೆ ನಿಲ್ಲುವ ಶಕ್ತಿ ಇಲ್ಲದವರು ಸಲ್ಲದ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ಷೇತ್ರದಲ್ಲಿ ನೀರಾವರಿ ಸಾಧನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಒಂದು ಲಕ್ಷ ಎಕರೆ ನೀರಾವರಿ ಮಾಡಿರುವುದು ಸಾಮಾನ್ಯದ ಮಾತಲ್ಲ. ಇದರಿಂದ ಹಾನಗಲ್, ಹಿರೆಕೆರೂರು, ರಾಣೆಬೆನ್ನೂರು ತಾಲೂಕುಗಳಲ್ಲಿ ನೀರಾವರಿಯಾಗಿದೆ. ಈ ಕೆಲಸ ಸಾಧ್ಯವಿಲ್ಲ ಎಂದು ಹೇಳಿದ್ದರು. ಅದನ್ನು ಮಾಡಿ ತೋರಿಸಿದ್ದೇನೆ. ಶಿಗ್ಗಾಂವಿ ಕ್ಷೇತ್ರ ಬಿಟ್ಟು ಎಂಟು ಏತ ನೀರಾವರಿ ಯೋಜನೆ ಮಾಡಿದ್ದೇನೆ ಎಂದರು.

ಪ್ರಧಾನಿ ಮೋದಿ ಪ್ರಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಏಪ್ರಿಲ್ 25 ಅಥವಾ 26ರ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಸ ಮಾಡಲಿದ್ದು, ಎರಡು ಅಥವಾ ಮೂರು ಲೋಕಸಭೆಗೆ ಒಂದು ಕ್ಲಸ್ಟರ್ ಮಾಡಿದ್ದಾರೆ ಎಂದರು.

ನಟ ಪ್ರಕಾಶ್ ರೈ ಪ್ರಧಾನಿ ಮೋದಿ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಕಾಶ ರೈ ಯಾವಾಗ ಫೇಸ್ ರೀಡರ್ ಆದರು? ಮೋದಿಯವರು ವಿಶ್ವದ ನಾಯಕ. ಅವರು ನೋಡುವ ದೃಷ್ಟಿಕೋನ ಹಾಗಿದೆ ಎಂದು ಹೇಳಿದರು.

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್ ಕುಮಾರ್ ಪೂಜಾರಿ, ಶಿವರಾಜ ಸಜ್ಜನ್ ಹಾಗೂ ಬಿಜೆಪಿ ಮುಖಂಡ ಶಂಕರಣ್ಣ ಮಾಂತನವರ ಹಾಜರಿದ್ದರು.

ಈ ಚುನಾವಣೆಯಲ್ಲಿ ಬಿಜೆಪಿಯವರು ಕೇವಲ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ಇದು ಲೋಕಸಭಾ ಚುನಾವಣೆ, ರಾಷ್ಟçದ ಚುನಾವಣೆ. ಮೋದಿಯವರ ಹೆಸರು ಹೇಳಲೇಬೇಕು, ಹೇಳುತ್ತೇವೆ. ಅದರೊಂದಿಗೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನೂ ತಿಳಿಸಿ ಮತ ಕೇಳುತ್ತೇವೆ ಎಂದರು.

 

ಸಿಎಂ ಸಿದ್ದರಾಮಯ್ಯರಿಗೆ ಸೋಲಿನ ಭೀತಿ:ವೆಂಕನಗೌಡ ಗೋವಿಂದಗೌಡ್ರ

ವಿಜಯಸಾಕ್ಷಿ ಸುದ್ದಿ, ಗದಗ : ಜೆಡಿಎಸ್–ಬಿಜೆಪಿ ಮೈತ್ರಿಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ `ನಾಯಿ ಹಸಿದಿತ್ತು, ಅನ್ನ ಹಳಸಿತ್ತು’ ಎನ್ನುವ ಮಾತಿಗೆ ಹೋಲಿಕೆ ಮಾಡಿದ್ದಾರೆ. ಆದರೆ ನಾಯಿಗೆ ನಿಷ್ಠೆ ಜಾಸ್ತಿ. ಆ ಕಾರಣಕ್ಕಾಗಿಯೇ ರೈತರ ಸಾಲ ಮನ್ನಾ ಮಾಡುವಂಥ ದೊಡ್ಡ ನಿರ್ಧಾರ ತೆಗೆದುಕೊಂಡಿತು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ವ್ಯಂಗ್ಯವಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಸೋಲುವ ಭೀತಿಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತವಾಗಿದೆ. ಆ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಮೈತ್ರಿ ಕುರಿತು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಯನ್ನು ತಿರುಚುವ ಪ್ರಯತ್ನಗಳು ಕಾಂಗ್ರೆಸ್ಸಿಗರಿಂದ ನಡೆದಿದೆ. ಕಾಂಗ್ರೆಸ್ ಹಿರಿಯ ನಾಯಕರೊಬ್ಬರುನ ಚಿತ್ರನಟಿ ಕಂಗನಾ ರಾಣಾವತ್ ಬಗ್ಗೆ ಕೀಳು ಮಟ್ಟದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸ್ವತಃ ಸಿದ್ದರಾಮಯ್ಯ ಅವರೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಕರೆದಿದ್ದು ಮಹಿಳೆಯರಿಗೆ ಮಾಡಿದ ಅವಮಾನ ಅಲ್ಲವೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರಿಗೆ ತಮ್ಮ ಪಕ್ಷದ ಹಿತಾಸಕ್ತಿಗಿಂತ ಜೆಡಿಎಸ್ ಹಿತಾಸಕ್ತಿಯೇ ಮುಖ್ಯವಾಗಿದೆ. ಆ ಕಾರಣಕ್ಕಾಗಿ ಪದೇ ಪದೇ ಜೆಡಿಎಸ್ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಜೆಡಿಎಸ್‌ಗೆ ದೇವೇಗೌಡರಂಥ ಹಿರಿಯ ನಾಯಕರ ಮಾರ್ಗದರ್ಶನವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಫುಲ್ ಪುಣೇಕರ್ ಉಪಸ್ಥಿತರಿದ್ದರು.

ಶ್ರೀರಾಮನ ಆದರ್ಶ ಗುಣಗಳನ್ನು ಪಾಲಿಸೋಣ

ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಪ್ರಮುಖವಾದುದು. ಈ ಬೃಹದ್ಕಾವ್ಯವು ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಅಯನ=ರಾಮಾಯಣ) `ರಾಮನ ಕಥೆ’ ಎಂಬ ಅರ್ಥ ಬರುತ್ತದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ರಾಮ ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ 7ನೇ ಅವತಾರ. ರಾಮನ ಅವತಾರದ ಉದ್ದೇಶ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸುವುದು.

ಜನರು ನಂಬಿರುವ ಹೃದಯ ಸಾಮ್ರಾಟ, ಮರ್ಯಾದಾ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತಿದ್ದು, ಈ ಹೊಸ ಸಂವತ್ಸರದಲ್ಲಿ ಬರುವ ಮೊದಲ ಹಬ್ಬವೇ ಶ್ರೀರಾಮ ನವಮಿ. ರಾಮ ಹುಟ್ಟಿದ ದಿನವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಆಚರಿಸಲಾಗುತ್ತದೆ.

ತ್ರೇತಾಯುಗದಲ್ಲಿ ಅಯೋಧ್ಯೆಯಲ್ಲಿ ರಾಣಿ ಕೌಸಲ್ಯೆ ಮತ್ತು ರಾಜ ದಶರಥನಿಗೆ ಈ ದಿನದಂದು ವಿಷ್ಣುವಿನ ಅವತಾರವಾದ ಭಗವಂತ ಶ್ರೀ ರಾಮನು ಭೂಮಿಗೆ ಕಾಲಿಟ್ಟ ಎಂಬುದು ಭಕ್ತರ ನಂಬಿಕೆಯಾಗಿದೆ.

ಧರ್ಮವನ್ನು ರಕ್ಷಿಸಲು ಮತ್ತು ಉತ್ತಮ ನಡತೆಯ ಮಾದರಿಯನ್ನು ಹೊಂದಿಸಲು ರಾಮ ತಮ್ಮ ಇಡೀ ಜೀವನವನ್ನು ಪಣಕ್ಕಿಟ್ಟ. ಈ ಕಾರಣದಿಂದ ಅವನನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಂದು ಕರೆಯುತ್ತಾರೆ. ಕಷ್ಟಕಾಲದಲ್ಲಿಯೂ ಶ್ರೀರಾಮನು ಧರ್ಮ ಮಾರ್ಗವನ್ನು ಅರ್ಧಕ್ಕೆ ಬಿಡದೆ ಸಮಾಜದ ಮುಂದೆ ತಾನೊಬ್ಬ ಪರಿಪೂರ್ಣ ವ್ಯಕ್ತಿ ಎಂದು ಸಾಬೀತುಪಡಿಸಿದ.

ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣವನ್ನು ಭಕ್ತಿ, ಶ್ರದ್ಧೆಗಳಿಂದ ಪಾರಾಯಣ ಮಾಡಿ, ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಶ್ರೀರಾಮ ಜನಿಸಿದ ಸ್ಥಳ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಹಬ್ಬದ ದಿನದಂದು ರಾಮನ ಭಜನೆ, ಕೀರ್ತನೆ ಹಾಗೂ ಮೆರವಣಿಗಳನ್ನು ನಡೆಸಲಾಗುತ್ತದೆ. ರಾಮನವಮಿಯಂದು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಹಬ್ಬ ಆರಂಭವಾಗುತ್ತದೆ. ಏಕೆಂದರೆ, ಶ್ರೀರಾಮನು ಸೂರ್ಯವಂಶಸ್ಥನಾಗಿದ್ದು, ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ಮೂಲಕ ರಾಮನವಮಿ ಆರಂಭವಾಗುತ್ತದೆ.

ಶ್ರೀ ರಾಮನನ್ನು ಪೂಜಿಸುವಾಗ ಶ್ರೀ ರಾಮನಾಮ ಜಪ, ಸಂಕೀರ್ತನೆ ಕಡ್ಡಾಯ. ರಾಮನಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಇತ್ಯಾದಿಗಳನ್ನು ನೈವೇದ್ಯವಾಗಿ ಅರ್ಪಿಸಬೇಕು. ನೈವೇದ್ಯವಾದ ಮೇಲೆ ಮನೆಯವರಿಗೆ ಮಾತ್ರವಲ್ಲದೆ, ಮನೆಗೆ ಆಗಮಿಸುವ ಅತಿಥಿಗಳಿಗೆ, ಹೊರಗಿನವರಿಗೆ ಕೂಡ ಪಾನಕ-ಕೋಸಂಬರಿಯನ್ನು ನೀಡಿ ಸತ್ಕರಿಸಬೇಕು.

ಉತ್ಸವದ ಮಹತ್ವವು ದುಷ್ಟರ ಮೇಲೆ ಒಳ್ಳೆಯತನದ ವಿಜಯ. ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವನ್ನು ಸೂಚಿಸುತ್ತದೆ. ಶ್ರಿರಾಮನನ್ನು ಸೂರ್ಯದೇವನ ಪೂರ್ವಜನೆಂದೂ ಜನ ನಂಬುತ್ತಾರೆ. ಉತ್ತರ ಭಾರತದಲ್ಲಿ ರಾಮ ನವಮಿಯನ್ನು ರಾಮದೇವರ ಹುಟ್ಟುಹಬ್ಬವೆಂದು ಆಚರಣೆ ಮಾಡುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ರಾಮ-ಸೀತೆಯರ ವಿವಾಹದ ದಿನವಾಗಿ ರಾಮ ನವಮಿಯನ್ನು ಆಚರಣೆ ಮಾಡುತ್ತಾರೆ. ಮಹಿಮಾನ್ವಿತ ದೇವತೆಗಳ ದೈವಿಕ ಬಂಧವಾಗಿ ರಾಮನವಮಿಯನ್ನು ಅವರು ಆಚರಿಸುತ್ತಾರೆ. ಭಗವಂತ ರಾಮನ ಹೆಸರನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಮಾತ್ರವಲ್ಲ, ಜೈನ ಮತ್ತು ಬೌದ್ಧ ಧಾರ್ಮಿಕ ಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ರಾಮನ ಧೈರ್ಯ, ಕರ್ತವ್ಯನಿಷ್ಠೆ, ಪಿತೃವಾಕ್ಯ ಪರಿಪಾಲನೆ, ರಾಜ್ಯಾಡಳಿತ, ಪ್ರಜಾಪರಿಪಾಲನೆ, ಕರ್ತವ್ಯ, ಗೌರವ, ಏಕಪತ್ನೀವ್ರತ, ಸೋದರಪ್ರೇಮ ಹೀಗೇ ಅನೇಕ ವಿಚಾರದ ಶ್ರೀ ರಾಮ ನಮ್ಮೆಲ್ಲರಿಗೂ ಆದರ್ಶ. ಹೀಗಾಗಿಯೇ ಆತನ ಹುಟ್ಟುಹಬ್ಬವನ್ನು ಹೆಚ್ಚು ಸಂಭ್ರಮದಿಂದ ದೇಶದೆಲ್ಲೆಡೆ ಆಚರಿಸುವ ಮೂಲಕ `ವಸುದೈವ ಕುಟುಂಬಕಂ’ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬುದನ್ನು ಜಗತ್ತಿಗೆ ಸಾರಿ ಹೇಳಲು ಇಂತಹ ಹಬ್ಬಗಳು ಮಹತ್ವಪೂರ್ಣವಾಗಿವೆ.

ರಾಮ ನವಮಿ ದಿನದಂದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿದ ನಂತರ ಶುಭ್ರವಾದ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಉಪವಾಸದ ಪ್ರತಿಜ್ಞೆ ಮಾಡಿ, ಗಂಗಾಜಲವನ್ನು ಸಿಂಪಡಿಸಿ ಪೂಜಾ ಸ್ಥಳವನ್ನು ರಾಮನ ಪೂಜೆಯಲ್ಲಿ ತುಳಸಿ ಎಲೆಗಳು ಮತ್ತು ಕಮಲದ ಹೂವು ಕಡ್ಡಾಯವಾಗಿರಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ರಾಮನ ವಿಗ್ರಹವನ್ನು ಹೂಮಾಲೆ ಮತ್ತು ಹೂವುಗಳಿಂದ ಅಲಂಕರಿಸಿ ತೊಟ್ಟಿಲಲ್ಲಿ ತೂಗಾಡಿ. ಇದರ ನಂತರ ರಾಮ ನವಮಿಯ ಷೋಡಶೋಪಚಾರವನ್ನು ಪೂಜಿಸಿ. ಇದರೊಂದಿಗೆ ರಾಮಾಯಣವನ್ನು ಪಠಿಸಿ ಮತ್ತು ರಾಮ ರಕ್ಷಾಸ್ತೋತ್ರವನ್ನೂ ಪಠಿಸಿ. ಶ್ರೀರಾಮನಿಗೆ ಶಾವಿಗೆ ಪಾಯಸ, ಹಣ್ಣುಗಳು ಮತ್ತು ಇತರ ನೈವೇದ್ಯಗಳನ್ನು ಅರ್ಪಿಸಿ. ಪೂಜೆಯ ನಂತರ, ಮನೆಯ ಚಿಕ್ಕ ಹುಡುಗಿಯ ಹಣೆಯ ಮೇಲೆ ತಿಲಕವನ್ನು ಹಚ್ಚಿ ಶ್ರೀರಾಮನ ಆರತಿಯನ್ನು ಮಾಡಿ. ಹೀಗೆ ರಾಮ ನವಮಿಯಂದು ರಾಮನನ್ನು ಪೂಜಿಸುವುದರಿಂದ ಅಥವಾ ರಾಮ ನಮವಿ ವ್ರತವನ್ನು ಆಚರಿಸುವುದರಿಂದ ಭಗವಾನ್ ರಾಮನ ಆಶೀರ್ವಾದವನ್ನು ಪಡೆದುಕೊಳ್ಳಬಹುದು.
– ಬಸವರಾಜ ಎಮ್.ಯರಗುಪ್ಪಿ,
ಬಿಆರ್‌ಪಿ-ಶಿರಹಟ್ಟಿ, ಲಕ್ಷ್ಮೇಶ್ವರ. 

yaraguppi

ಮತದಾನ ಹಬ್ಬದಲ್ಲಿ ಭಾಗಿಯಾಗಿ : ಎಸ್.ಕೆ. ಇನಾಮದಾರ

0

ವಿಜಯಸಾಕ್ಷಿ ಸುದ್ದಿ, ರೋಣ : ಎಲ್ಲಾ ಮತದಾರರು ತಮ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೇ 7ರಂದು ನಡೆಯುವ ಮತದಾನದ ದಿನ ತಪ್ಪದೇ ನಿಮ್ಮ ಹಕ್ಕು ಚಲಾಯಿಸಿ. ಅಲ್ಲದೇ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಬೇಕು, ಸುಲಲಿತ ಹಾಗೂ ನ್ಯಾಯಬದ್ಧ ಚುನಾವಣೆಗಾಗಿ ಚುನಾವಣಾ ಆಯೋಗ ನೀಡಿರುವ ವೋಟರ್ ಹೆಲ್ಪ್ ಲೈನ್, ಸಕ್ಷಾಮ್ ಆ್ಯಪ್, ಸಿವಿಜಿಲ್ ಆ್ಯಪ್‌ಗಳನ್ನು ಬಳಸಿ ನೈತಿಕ ಮತದಾನಕ್ಕೆ ಸಹಕರಿಸಬೇಕು ಎಂದು ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಕರೆ ನೀಡಿದರು.

ಲೋಕಸಭಾ ಚುನಾವಣೆ 2024ರ ಅಂಗವಾಗಿ ಸೋಮವಾರ ರೋಣ ಪಟ್ಟಣದ ಸಿದ್ಧಾರೂಢ ಮಠದಿಂದ ತಾಲೂಕಾ ಆಸ್ಪತ್ರೆಯವರೆಗೆ ಹಮ್ಮಿಕೊಂಡಿದ್ದ ಬೃಹತ್ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೇ 7ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆ-ದಾಕ್ಷಿಣ್ಯಗಳಿಗೆ ಪ್ರಭಾವಿತರಾಗದೆ ವಿವೇಚನೆಯಿಂದ ಮತ ಚಲಾಯಿಸಿ. ಆ ಮುಖಾಂತರ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಕಡ್ಡಾಯವಾಗಿ ಮತದಾನ ಮಾಡಿ ಎಂದರು.

ಸೂಡಿ ಕ್ರಾಸ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನದ ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಪೋತರಾಜನ ಕಟ್ಟೆ ಮೂಲಕ ತಾಲೂಕಾ ಆಸ್ಪತ್ರೆಯವರೆಗೂ ಜಾಗೃತಿ ಜಾಥಾ ತಲುಪಿತು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು, ರೋಣ ತಾಲೂಕಿನ 11 ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿಗಳು, ತಾಲೂಕಾ ಪಂಚಾಯತ ಸಿಬ್ಬಂದಿಗಳು ಭಾಗವಹಿಸಿದ್ದರು.

80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತದಾನ ಜಾಗೃತಿ ಜಾಥಾದಂತಹ ಅನೇಕ ಕಾರ್ಯಕ್ರಮಗಳನ್ನು ಸ್ವೀಪ್ ಸಮಿತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲರೂ ಕಡ್ಡಾಯವಾಗಿ ನಿರ್ಭೀತಿಯಿಂದ ಮತ ಚಲಾಯಿಸಿ ಎಂದು ಎಸ್.ಕೆ. ಇನಾಮದಾರ ತಿಳಿಸಿದರು.

 

ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿ : ಪ್ರೇಮಾ ಪಾಟೀಲ್

0

ವಿಜಯಸಾಕ್ಷಿ ಸುದ್ದಿ, ನರಗುಂದ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ರಾಷ್ಟç ಮಟ್ಟದ ಮಹಿಳಾ ಕಬ್ಬಡಿ ಕ್ರೀಡಾಪಟುಗಳು ಭಾಗವಹಿಸಿ ನರೇಗಾ ಕೂಲಿಕಾರರಿಗೆ ಮತದಾನ ಜಾಗೃತಿ ಮೂಡಿಸಿದರು.

ಚುನಾವಣೆ ರಾಯಭಾರಿಗಳಂತೆ ಮತದಾನ ಜಾಗೃತಿ ಕಾರ್ಯದಲ್ಲಿ ಕಲಕೇರಿ ಗ್ರಾಮದ ರಾಷ್ಟçಮಟ್ಟದ ಕಬ್ಬಡಿ ಮಹಿಳಾ ಕ್ರೀಡಾಪಟುಗಳಾದ ಪ್ರೇಮಾ ಪಾಟೀಲ್, ನಿರ್ಮಲಾ ಪರಮೇಶ್ವರ್ ಮತ್ತು ಮೇಘಾ ಮಳ್ಳಸಿದ್ಧನವರ ಅವರು ಭಾಗವಹಿಸಿ ಕೂಲಿಕಾರರಿಗೆ ಮತದಾನದ ಬಗ್ಗೆ ತಿಳಿಹೇಳಿದರು.

ಈ ವೇಳೆ ರಾಷ್ಟçಮಟ್ಟದ ಅಂಡರ್ 20 ಜೂನಿಯರ್ ಕಬ್ಬಡಿ ಕ್ರೀಡಾಪಟು ಪ್ರೇಮಾ ಪಾಟೀಲ್ ಮಾತನಾಡಿ, ಮೊದಲ ಬಾರಿಗೆ ನಾನು ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮತದಾನ ಮಾಡುತ್ತಿದ್ದೇನೆ. ಮತದಾನ ಮಾಡುತ್ತಿರುವುದು ಖುಷಿಯ ಸಂಗತಿ ಎನಿಸಿದೆ. ಯಾವುದೇ ಮತದಾರರು ಜಾತಿ, ಆಮಿಷಕ್ಕೆ ಒಳಗಾಗದೇ ಸ್ವಂತ ಬುದ್ಧಿಯಿಂದ ಆಲೋಚಿಸಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಕೂಲಿಕಾರರು ಮೇ 7ರಂದು ಯಾವುದೇ ಕೆಲಸಕ್ಕೆ ತೆರಳದೇ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಹೇಳಿದರು.

ರಾಷ್ಟçಮಟ್ಟದ ಅಂಡರ್ 19 ಸ್ಕೂಲ್ ಗೇಮ್ ಕಬ್ಬಡಿ ಕ್ರೀಡಾಪಟು ನಿರ್ಮಲಾ ಪರಮೇಶ್ವರ ಮಾತನಾಡಿ, ನಮ್ಮೂರಲ್ಲೇ ಎಲ್ಲ ಕೂಲಿಕಾರರಿಗೆ ಪಂಚಾಯತ ವತಿಯಿಂದ ಕೆಲಸ ನೀಡುತ್ತಿದ್ದಾರೆ. ಬೇಸಿಗೆ ಇದೆ, ಹೊಲದಲ್ಲಿ ಕೆಲಸ ಇಲ್ಲ ಎಂಬ ಚಿಂತೆ ದೂರವಾಗಿದೆ. ಹೀಗಾಗಿ ಬೇಸಿಗೆ ಮುಗಿಯುವರೆಗೂ ನರೇಗಾ ಕಾಮಗಾರಿ ಕೆಲಸ ಮಾಡಿ ಮೇ 7ರಂದು ಕಡ್ಡಾಯವಾಗಿ ಮತದಾನ ಮಾಡೋಣ ಎಂದರು.

ಸ್ವತಃ ಕ್ರೀಡಾಪಟು ಮೇಘಾ ಮಳ್ಳಸಿದ್ಧನವರ ಅವರು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲ ಕೂಲಿಕಾರರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದರ್, ಹುಣಶೀಕಟ್ಟಿ ಗ್ರಾ.ಪಂ ಅಧಿಕಾರಿ ವಿ.ಆರ್. ರಾಯನಗೌಡರ, ಐಇಸಿ ಸಂಯೋಜಕ ಸುರೇಶ್ ಬಾಳಿಕಾಯಿ, ಬಿಎಫ್‌ಟಿ ಬಸವರಾಜ ಚಿಮ್ಮನಕಟ್ಟಿ, ನರೇಗಾ ಸಿಬ್ಬಂದಿ ಮತ್ತು ಹುಣಶಿಕಟ್ಟಿ ಗ್ರಾ.ಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!