ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯ ಸಹಜ ಜೀವಿ. ತನ್ನ ಬದುಕಿನ ಹಲವಾರು ಜಂಜಾಟಗಳಿಂದ ತಲ್ಲಣಗೊಂಡ ಅವನಿಗೆ ಜೀವನದ ಸರಿಯಾದ ಮಾರ್ಗ ಹಾಗೂ ಗುರಿ ಬೇಕು. ಇದಕ್ಕಾಗಿ ಗುರುವನ್ನು ಆತ ನಂಬುತ್ತಾನೆ. ಭಕ್ತರ ಮನದ ಗೊಂದಲಗಳಿಗೆ ಉತ್ತಮ ಸನ್ಮಾರ್ಗ ತೋರುವವನೇ ಗುರು ಎಂದು ಗದುಗಿನ ಅಡವೀಂದ್ರ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಹೇಳಿದರು.
ಅವರು ಶ್ರೀ ಮಠದಲ್ಲಿ ಜರುಗಿದ 336ನೇ ಮಾಸಿಕ ಶಿವಾನುಭವ ಗೋಷ್ಠಿಯ ಸಮ್ಮುಖ ವಹಿಸಿ ಮಾತನಾಡುತ್ತಿದ್ದರು.
ಮನುಷ್ಯ ತನ್ನ ಜೀವನದಲ್ಲಿ ದಾನ-ಧರ್ಮದಂತಹ ಪರೋಪಕಾರಿ ಗುಣಗಳೊಂದಿಗೆ ಮಾನವೀಯತೆ, ಸಹಕಾರಗಳನ್ನು ಬೆಳೆಸಿಕೊಳ್ಳಬೇಕು. ಗುರು ಹಿರಿಯರ, ಪೂಜ್ಯರ ನುಡಿಗಳು ಬದುಕನ್ನು ಬದಲಿಸಬಲ್ಲವು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ಸಂಸ್ಕಾರ ಭಾರತಿ ಅಧ್ಯಕ್ಷ ಪಿ.ಎ. ಕುಲಕರ್ಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂಸ್ಕಾರಗಳು ಹಾಗೂ ಸಂಸ್ಕೃತಿಗಳು ಮರೆಯಾಗುತ್ತಿವೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರವನ್ನು ಹೇಳಿಕೊಡಬೇಕು. ಗುರುವಿನ ಮಹತ್ವದ ಕುರಿತು ಯುವ ಪೀಳಿಗೆ ತಿಳಿಯಬೇಕು. ಅಂದಾಗ ಸುಂದರ ಸಮಾಜ ನಿರ್ಮಾಣವಾಗಬಲ್ಲದು ಎಂದರು.
ಇನ್ನೋರ್ವ ಅತಿಥಿಗ ವಿದ್ವಾನ ಸಂಜಯ ಶಾನಭೋಗರ ಮಾತನಾಡಿ, ಕಲೆ ಮನುಷ್ಯನಿಗೆ ಸಂತೋಷ ಉಂಟುಮಾಡಬಲ್ಲದು. ಕಲೆಯಿಂದಾಗಿ ಅನೇಕ ಕುಟುಂಬಗಳು ಅರ್ಥಿಕ ಸದೃಢತೆ ಕಂಡಿವೆ. ಅದಕ್ಕಾಗಿ ಕಲೆ ಹಾಗೂ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಬಸವರಾಜ ಗಿಡ್ನಂದಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಕ್ಷರಿ ಅಣ್ಣಿಗೇರಿ, ನಿವೃತ್ತ ಪ್ರಾಚಾರ್ಯ ಸಿ.ಅಂಗಾರಡ್ಡಿ, ಶಾಂತಾ ಗೌಡರ, ವಿದ್ಯಾ ಆನಂದ ಪಾಟೀಲ, ಜಯಶ್ರೀ ಮಾಳಗಿ, ಬಿ.ಎಮ್. ಬಿಳೇಯಲಿ, ಎಲ್.ಎಸ್. ನೀಲಗುಂದ, ನಿಂಗಪ್ಪ ಬಳಿಗಾರ, ಬಿ.ಎಂ. ಯಾಮನಶೆಟ್ಟಿ, ಪ್ರಾಚಾರ್ಯ ಬಿ.ಬಿ. ಪಾಟೀಲ ಉಪಸ್ಥಿತರಿದ್ದರು. ಸಿದ್ಧಣ್ಣ ಜವಳಿ ಪ್ರಾರ್ಥಿಸಿದರು, ಪಿ.ಸಿ. ಪಾಟೀಲ ಸ್ವಾಗತಿಸಿದರು. ಪ್ರಕಾಶ ಬಂಡಿ ನಿರೂಪಿಸಿ ವಂದಿಸಿದರು.
ಗುರುಪೂರ್ಣಿಮೆ ಕುರಿತು ಉಪನ್ಯಾಸ ನೀಡಿದ ಗದಗ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ದತ್ತಾತ್ರೇಯ ಜೋಶಿ, ಗುರುವಿನ ಶಕ್ತಿ ಅತ್ಯದ್ಭುತವಾದುದು. ಬದುಕಿನ ಪರಿಪೂರ್ಣತೆಗೆ ಬೆಳಕಿನ ರೂಪದಲ್ಲಿ ಸುಜ್ಞಾನವನ್ನು ಕೊಡುತ್ತಾನೆ. ಹರ ಮುನಿದರೂ ಗುರು ಕಾಯುವನು ಎಂಬ ಮಾತು ಇದೆ. ಅದಕ್ಕಾಗಿ ನಾವು ಗುರುವಿನ ಅಣತಿಯನ್ನು ಪಾಲಿಸಬೇಕು ಎಂದರು.