Home Blog

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಭಾರೀ ಮಳೆ ಸಾಧ್ಯತೆ..! ಹಲವು ಜಿಲ್ಲೆಗಳಿಗೆ ಅಲರ್ಟ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಶೇಷವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಮೈಸೂರು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ನಗರದಲ್ಲಿ ಗರಿಷ್ಠ ತಾಪಮಾನ 34.8 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 23.8 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗುವ ಸಾಧ್ಯತೆ ಇದೆ.

ಕರಾವಳಿ ಭಾಗಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳೂರು ಹಾಗೂ ಉಡುಪಿ ಭಾಗಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಶುಷ್ಕ ವಾತಾವರಣ ಮುಂದುವರಿಯಲಿದೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಮುಂದುವರಿದರೂ, ಕೆಲವು ಕಡೆಗಳಲ್ಲಿ ಗುಡುಗು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇನ್ನು ಮೇ 15 ಮತ್ತು 16ರಂದು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ 64.5 ಮಿ.ಮೀದಿಂದ 115.5 ಮಿ.ಮೀ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಮಧ್ಯ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಟಿಮ್ ಡೇವಿಡ್: ಬ್ಯಾನ್ ಭೀತಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.

ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ಪಂದ್ಯದ ಬಳಿಕ ಅಸಭ್ಯ ವರ್ತನೆ ತೋರಿದ ಆರೋಪದಡಿ ದಂಡಕ್ಕೆ ಗುರಿಯಾಗಿದ್ದಾರೆ. ಮೇ 10ರಂದು ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಕೊನೆಯ ಎಸೆತದವರೆಗೂ ನಡೆದ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ಪಂದ್ಯದ ನಂತರ ಟಿಮ್ ಡೇವಿಡ್ ಮಾಡಿದ ಸನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಐಪಿಎಲ್ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.

ಗೆಲುವಿನ ಸಂಭ್ರಮದ ವೇಳೆ ಟಿಮ್ ಡೇವಿಡ್ ಕ್ಯಾಮೆರಾದಲ್ಲಿ ಮಧ್ಯ ಬೆರಳು ತೋರಿಸುತ್ತಿರುವ ದೃಶ್ಯಗಳು ಸೆರೆಯಾಗಿದ್ದವು. ಈ ನಡೆ ಐಪಿಎಲ್ ನೀತಿ ಸಂಹಿತೆಯ ನಿಯಮ 2.6ರ ಅಡಿಯಲ್ಲಿ ‘ಅಸಭ್ಯ, ಆಕ್ಷೇಪಾರ್ಹ ಅಥವಾ ಅವಮಾನಕರ’ ವರ್ತನೆ ಎಂದು ಪರಿಗಣಿಸಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫರಿ ಅಮಿತ್ ಶರ್ಮಾ, ಟಿಮ್ ಡೇವಿಡ್ ಅವರಿಗೆ ಪಂದ್ಯದ ಸಂಭಾವನೆಯ ಶೇ.30ರಷ್ಟು ದಂಡ ವಿಧಿಸಿದ್ದಾರೆ. ಜೊತೆಗೆ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ಕೂಡ ನೀಡಲಾಗಿದೆ. ಟಿಮ್ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಿಧಿಸಲಾದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ 2 ಡಿಮೆರಿಟ್ ಪಾಯಿಂಟ್ ಪಡೆದಿರುವ ಟಿಮ್ ಡೇವಿಡ್, ಮುಂದಿನ ಪಂದ್ಯಗಳಲ್ಲಿ ಇನ್ನೂ 2 ಪಾಯಿಂಟ್‌ಗಳನ್ನು ಪಡೆದರೆ ಒಂದು ಪಂದ್ಯ ನಿಷೇಧ ಎದುರಿಸುವ ಸಾಧ್ಯತೆ ಇದೆ.

ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಭುವನೇಶ್ವರ್ ಕುಮಾರ್ ದಾಳಿಗೆ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಬೇಗನೆ ವಿಕೆಟ್ ಒಪ್ಪಿಸಿದರು. ಬಳಿಕ ತಿಲಕ್ ವರ್ಮಾ ಮತ್ತು ನಮನ್ ಧೀರ್ ಹೋರಾಟದ ನೆರವಿನಿಂದ ಮುಂಬೈ 166 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದು ಆರಂಭಿಕ ಸಂಕಷ್ಟ ತಂದಿತ್ತು. ಆದರೆ ಕೃನಾಲ್ ಪಾಂಡ್ಯ 46 ಎಸೆತಗಳಲ್ಲಿ 73 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಕೊನೆಯ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಸಿಕ್ಸರ್ ಹಾಗೂ ರಸಿಖ್ ಸಲಾಮ್ ಸಮಯೋಚಿತ ಆಟದ ನೆರವಿನಿಂದ ಆರ್‌ಸಿಬಿ ರೋಚಕ ಜಯ ದಾಖಲಿಸಿತು.

ಕಾರ್ಕಳ: ಬಾವಿಯಲ್ಲಿ ಸಿಲುಕಿದ ಮೂವರು ಕಾರ್ಮಿಕರು, ಅಗ್ನಿಶಾಮಕ ದಳದಿಂದ ರಕ್ಷಣೆ!

ಉಡುಪಿ: ಮಣ್ಣು ತೆಗೆಯಲು ಬಾವಿಗೆ ಇಳಿದಿದ್ದ ಮೂವರು ಕಾರ್ಮಿಕರು ಬಾವಿಯಲ್ಲಿ ಸಿಲುಕಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.

ಕಾರ್ಕಳ ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಮೂವರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ.

ರಾಜೇಶ್ (42), ಪವನ್ (29) ಹಾಗೂ ಗೋಪಾಲ್ ನಾಯ್ಕ (52) ಎಂಬುವರು ಬಾವಿಯ ಮಣ್ಣು ತೆಗೆಯುವ ಕೆಲಸಕ್ಕಾಗಿ ಒಳಗಿಳಿದಿದ್ದರು. ಈ ವೇಳೆ ರಾಜೇಶ್ ಮೇಲಕ್ಕೆ ಬರುವ ಪ್ರಯತ್ನದಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಅವರನ್ನು ರಕ್ಷಿಸಲು ಮುಂದಾದ ಪವನ್ ಹಾಗೂ ಗೋಪಾಲ್ ನಾಯ್ಕ ಕೂಡ ಬಾವಿಯೊಳಗೆ ಸಿಲುಕಿಕೊಂಡಿದ್ದರು.

ಘಟನೆಯ ಬಗ್ಗೆ ತಕ್ಷಣವೇ ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಹಳ ಪ್ರಯತ್ನದ ಬಳಿಕ ಮೂವರನ್ನೂ ಬಾವಿಯಿಂದ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.

ಗಾಯಗೊಂಡಿದ್ದ ರಾಜೇಶ್ ಅವರನ್ನು ತಕ್ಷಣವೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಇತರಿಬ್ಬರು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ವೇಳೆ ಸ್ಥಳೀಯರು ಆತಂಕಕ್ಕೊಳಗಾಗಿದ್ದರೂ, ಅಗ್ನಿಶಾಮಕ ದಳದ ತ್ವರಿತ ಕಾರ್ಯದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಮನೆಕಳ್ಳತನ ಪ್ರಕರಣ ಭೇದಿಸಿದ ಹಗರಿಬೊಮ್ಮನಹಳ್ಳಿ ಪೊಲೀಸರು: ಇಬ್ಬರು ಖದೀಮರು ಅರೆಸ್ಟ್!

ಹಗರಿಬೊಮ್ಮನಹಳ್ಳಿ: ಪಟ್ಟಣದ ಮಿಲ್ಟ್ರಿ ಬಯಲು ಪ್ರದೇಶದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಹಗರಿಬೊಮ್ಮನಹಳ್ಳಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು ₹14.06 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕುಮಾರನಹಳ್ಳಿ ನಿವಾಸಿ ಆನಂದ್ (24) ಹಾಗೂ ಅರಳಿಹಳ್ಳಿ ನಿವಾಸಿ ಜಹಂಗೀರ್ ಬಾಷಾ (36) ಎಂದು ಗುರುತಿಸಲಾಗಿದೆ. ಆರೋಪಿಗಳು ಟಿ.ಎಂ. ಚನ್ನಬಸಯ್ಯ ಅವರ ಮನೆಯ ಬಾಗಿಲು ಮುರಿದು ಕಳ್ಳತನ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್ ಹಾಗೂ ಕೂಡ್ಲಿಗಿ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು.

ಪೊಲೀಸ್ ವೃತ್ತ ನಿರೀಕ್ಷಕ ವಿಕಾಸ್ ಪಿ. ಲಮಾಣಿ, ಪಿಎಸ್‌ಐ ಉಮಾಪತಿ, ತಾರಾಬಾಯಿ, ನಾಗರಾಜ್ ಕೊಟಗಿ ಹಾಗೂ ಸಿಬ್ಬಂದಿಗಳ ತಂಡ ಸಿಸಿಟಿವಿ ದೃಶ್ಯಗಳು, ತಾಂತ್ರಿಕ ಮಾಹಿತಿ ಮತ್ತು ಗುಪ್ತಚರ ಮಾಹಿತಿ ಆಧರಿಸಿ ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಯಿತು.

ಬಂಧಿತರಿಂದ ಕದ್ದಿದ್ದ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಭೇದಿಸಿದ ಹಗರಿಬೊಮ್ಮನಹಳ್ಳಿ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ಪ್ರಶಂಸಿಸಿದ್ದಾರೆ.

ಮೋದಿ ಹೇಳಿಕೆಗಳಿಂದ ಜನರಲ್ಲಿ ಭೀತಿ! ಚಿನ್ನ ಖರೀದಿಸಬೇಡಿ ಎಂದಿರುವ ಹಿಂದಿನ ಕಾರಣ ಬಹಿರಂಗಪಡಿಸಿ: ಸಚಿವ ಎಚ್. ಕೆ ಪಾಟೀಲ್ ಸವಾಲ್

ಗದಗ: ಚಿನ್ನ ಖರೀದಿಸಬೇಡಿ ಹಾಗೂ ಸಮೂಹ ಸಾರಿಗೆ ಬಳಸಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಹೇಳಿಕೆಗಳು ಜನರಲ್ಲಿ ಅನಗತ್ಯ ಭೀತಿ ಮತ್ತು ಆತಂಕವನ್ನು ಉಂಟುಮಾಡುತ್ತಿವೆ ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಆರೋಪಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ತೈಲ ಅಭಾವ ಉಂಟಾಗುವ ರೀತಿಯ ಸಂದೇಶಗಳು ಪ್ರಧಾನಿ ಹೇಳಿಕೆಗಳಿಂದ ಹೊರಬರುತ್ತಿವೆ ಎಂದು ಟೀಕಿಸಿದರು. ಇಂತಹ ಗಂಭೀರ ವಿಷಯಗಳನ್ನು ಸಾರ್ವಜನಿಕವಾಗಿ ಹೇಳುವ ಮೊದಲು ಸಂಸತ್ತಿನಲ್ಲಿ ಚರ್ಚಿಸಬೇಕಿತ್ತು ಎಂದು ಅವರು ಹೇಳಿದರು.

ಪ್ರಧಾನಿಯವರು ಕೇವಲ ಎಚ್ಚರಿಕೆ ನೀಡುವುದಷ್ಟೇ ಅಲ್ಲದೆ, ಅದನ್ನು ಎದುರಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಬೇಕು. ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ದೊಡ್ಡ ಅಪಾಯದ ಸನ್ನಿವೇಶಗಳು ಗೋಚರಿಸುತ್ತಿಲ್ಲವಾದರೂ ಇಂತಹ ಹೇಳಿಕೆಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ಹೇಳಿದರು.

ಹಿಂದೆ ನೋಟು ಅಮಾನ್ಯೀಕರಣದ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡಲಾಗಿತ್ತು ಎಂದು ಉಲ್ಲೇಖಿಸಿದ ಅವರು, ಈಗ ಚಿನ್ನ ಖರೀದಿಸಬೇಡಿ ಎಂಬ ಹೇಳಿಕೆಗಳ ಹಿಂದಿನ ಉದ್ದೇಶವನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಬೆಂಗಳೂರಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಹೇಳಿಕೆ ನೀಡಿರುವುದನ್ನೂ ಅವರು ಟೀಕಿಸಿದರು. ಧಾರ್ಮಿಕ ವೇದಿಕೆಯಲ್ಲಿ ರಾಜಕೀಯ ಮಾತನಾಡುವುದು ಪ್ರಧಾನಿ ಹುದ್ದೆಗೆ ಶೋಭೆಯಲ್ಲ ಎಂದು ಹೇಳಿದರು.

ಬೇರೆ ಪಕ್ಷಗಳ ಆಂತರಿಕ ವಿಚಾರಗಳಲ್ಲಿ ಪ್ರಧಾನಿ ಆಸಕ್ತಿ ತೋರಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಪ್ರಧಾನಿ ಮೋದಿಯವರಿಗೆ ಏಕೆ ಭಯ ಎಂದು ಪ್ರಶ್ನಿಸಿದರು. “ಚಿನ್ನ ಖರೀದಿಸಬೇಡಿ, ಸಮೂಹ ಸಾರಿಗೆ ಬಳಸಿ ಎಂಬ ಪ್ರಧಾನಿ ಮೋದಿ ಹೇಳಿಕೆಗಳು ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಸುತ್ತಿವೆ. ಇದರ ಹಿಂದಿನ ನಿಜವಾದ ಕಾರಣವನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ಕಾನ್ಸ್‌ಟೇಬಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಬರ್ತಡೇ ದಿನವೇ ನೇಣಿಗೆ ಶರಣು!

ಬೆಳಗಾವಿ: ಕೆಲ ದಿನಗಳ ಹಿಂದಷ್ಟೇ ಕಾನ್ಸ್‌ಟೇಬಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೊಬ್ಬಳು ತನ್ನ ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಅಜಂ ನಗರದಲ್ಲಿರುವ ಹಾಸ್ಟೆಲ್‌ನಲ್ಲಿ ನಡೆದಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಾಸವಾಗಿದ್ದ ಈ ಯುವತಿ ಅಲ್ಲಿಯೇ ವ್ಯಾಸಾಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಇತ್ತೀಚೆಗೆ ಕುಟುಂಬಸ್ಥರು ಪೊಲೀಸ್ ಪೇದೆಯೊಬ್ಬರ ಜೊತೆ ಆಕೆಯ ಮದುವೆ ನಿಶ್ಚಯ ಮಾಡಿದ್ದರು.

ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾಹಿತಿ ದೊರಕುತ್ತಿದ್ದಂತೆ ಸಿಪಿಐ ಉಸ್ಮಾನ್ ಆವಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ದುರಂತದಿಂದ ವಸತಿ ನಿಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಕೊತ್ತನೂರು ಬಳಿ ಭೀಕರ ಅಗ್ನಿ ದುರಂತ: ಶೆಡ್‌ಗೆ ಬೆಂಕಿ, ಇಬ್ಬರು ಮಕ್ಕಳು ದುರ್ಮರಣ!

ಬೆಂಗಳೂರು: ಕೊತ್ತನೂರು ಸಮೀಪದ ನಾರಾಯಣಪುರದಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ ಇಬ್ಬರು ಪುಟ್ಟ ಮಕ್ಕಳು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.

ಮಧ್ಯಾಹ್ನ ಸುಮಾರು 1:30ರ ವೇಳೆಗೆ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಒಳಗಿದ್ದ ಅರ್ಜುನ್ (5) ಮತ್ತು ಆಶಾ (3) ಎಂಬ ಇಬ್ಬರು ಮಕ್ಕಳು ಸಿಲುಕಿಕೊಂಡಿದ್ದಾರೆ. ಅಗ್ನಿ ಅವಘಡದಲ್ಲಿ ಒಂದು ಮಗು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಂದು ಮಗು ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಪ್ರಾಣ ಕಳೆದುಕೊಂಡಿದೆ.

ಮೃತ ಮಕ್ಕಳು ಮೂಲತಃ ರಾಯಚೂರು ಜಿಲ್ಲೆಯವರು ಎಂದು ತಿಳಿದುಬಂದಿದೆ. ಕೂಲಿ ಕೆಲಸಕ್ಕಾಗಿ ತಂದೆ–ತಾಯಿ ಬೆಂಗಳೂರಿಗೆ ಬಂದಿದ್ದು, ಘಟನೆ ಸಮಯದಲ್ಲಿ ಅಜ್ಜಿ ಶೆಡ್‌ನಿಂದ ಹೊರಗಡೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

ಘಟನೆ ನಡೆದ ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ಕಾಣಿಸಿಕೊಂಡ ನಿಖರ ಕಾರಣವನ್ನು ತಿಳಿಯಲು ತನಿಖೆ ಮುಂದುವರಿಸಿದ್ದಾರೆ.

ಈ ದುರ್ಘಟನೆಯಿಂದ ಸ್ಥಳೀಯರಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ.

ಇಂಧನ ಉಳಿಸುವುದು ದೇಶದ ಹಿತಕ್ಕೆ ಅಗತ್ಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂಧನ ಸೇರಿದಂತೆ ವಿವಿಧ ಸಂಪನ್ಮೂಲಗಳನ್ನು ಮಿತವಾಗಿ ಬಳಸುವಂತೆ ನೀಡಿರುವ ಮನವಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಪ್ರಧಾನಿ ಮೋದಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಜಾಗೃತಿಯ ಸಂದೇಶಗಳನ್ನು ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು. ಕೋವಿಡ್ ಸಮಯದಲ್ಲಿ ಯೋಗಾಭ್ಯಾಸಕ್ಕೆ ಒತ್ತಾಯಿಸಿದ ಉದಾಹರಣೆಯನ್ನೂ ಅವರು ಉಲ್ಲೇಖಿಸಿದರು.

ಭಾರತವು ತೈಲ ಹಾಗೂ ಖಾದ್ಯ ತೈಲದಲ್ಲಿ ಸಂಪೂರ್ಣ ಆತ್ಮನಿರ್ಭರವಾಗಿಲ್ಲ ಎಂಬುದನ್ನು ವಿವರಿಸಿದ ಶೋಭಾ ಕರಂದ್ಲಾಜೆ, ದೇಶದಲ್ಲಿ ಸುಮಾರು 70% ಖಾದ್ಯ ತೈಲವನ್ನು ಇಂಡೋನೇಷ್ಯಾ ಮತ್ತು ಮಲೇಷ್ಯಾ ಮುಂತಾದ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಪಾಮ್ ಆಯಿಲ್ ಸೇರಿದಂತೆ ತೈಲ ಉತ್ಪನ್ನಗಳ ಬಳಕೆಯಿಂದ ವಿದೇಶಿ ವಿನಿಮಯದ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಅವರು ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನಗಳು ವಾಹನ ಹಾಗೂ ರಸಗೊಬ್ಬರ ಕ್ಷೇತ್ರಗಳಿಗೆ ಪ್ರಮುಖವಾಗಿದ್ದು, ಅವುಗಳ ಬಳಕೆಯನ್ನು ಜವಾಬ್ದಾರಿಯಿಂದ ಕಡಿಮೆ ಮಾಡಿದರೆ ವಿದೇಶಿ ವಿನಿಮಯ ಉಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಚಿನ್ನದ ಬೆಲೆ ಏರಿಕೆ, ಜಾಗತಿಕ ಯುದ್ಧ ಪರಿಸ್ಥಿತಿ ಹಾಗೂ ಅಂತರರಾಷ್ಟ್ರೀಯ ಆರ್ಥಿಕ ಅಸ್ಥಿರತೆಗಳನ್ನೂ ಉಲ್ಲೇಖಿಸಿದ ಅವರು, ಇಂತಹ ಸಂದರ್ಭದಲ್ಲಿ ದೇಶದ ಆದ್ಯತೆಗಳಿಗೆ ತಕ್ಕಂತೆ ಸಂಪನ್ಮೂಲಗಳನ್ನು ಬಳಕೆ ಮಾಡುವುದು ಅಗತ್ಯ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ದೇಶದ ಹಿತದೃಷ್ಟಿಯಿಂದ ಹಿತವಾಗಿ ಮತ್ತು ಮಿತವಾಗಿ ಬಳಕೆಗೆ ನೀಡಿರುವ ಕರೆ ಸರಿಯಾಗಿದೆ ಎಂದು ಶೋಭಾ ಕರಂದ್ಲಾಜೆ ಸಮರ್ಥನೆ ಮಾಡಿದ್ದಾರೆ.

ಡಯಾಬಿಟೀಸ್, ರಕ್ತದೊತ್ತಡ ನಿಯಂತ್ರಣ ತಪ್ಪಿದರೆ ಕಿಡ್ನಿ ವೈಫಲ್ಯ ಸಾಧ್ಯತೆ!

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ ಮತ್ತು ಮಧುಮೇಹ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಈ ಎರಡೂ ಕಾಯಿಲೆಗಳು ದೀರ್ಘಕಾಲ ನಿಯಂತ್ರಣದಲ್ಲಿರದಿದ್ದರೆ ಕಿಡ್ನಿ ಸೇರಿದಂತೆ ದೇಹದ ಪ್ರಮುಖ ಅಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಪ್ರಕಾರ, ಕಿಡ್ನಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವ ಹಾಗೂ ದ್ರವ ಸಮತೋಲನ ಕಾಪಾಡುವ ಪ್ರಮುಖ ಅಂಗವಾಗಿದೆ. ಆದರೆ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿ ನಿಯಂತ್ರಣ ತಪ್ಪಿದರೆ ಕಿಡ್ನಿಯ ಸೂಕ್ಷ್ಮ ರಕ್ತನಾಳಗಳು ಹಾನಿಗೊಳಗಾಗುತ್ತವೆ. ಇದರಿಂದ ಕಿಡ್ನಿಯ ಶೋಧನಾ ಕಾರ್ಯಕ್ಷಮತೆ ನಿಧಾನವಾಗಿ ಕುಸಿಯುವ ಸಾಧ್ಯತೆ ಇರುತ್ತದೆ.

ತಜ್ಞರು ಹೇಳುವಂತೆ, ಮಧುಮೇಹವು ಕ್ರಾನಿಕ್ ಕಿಡ್ನಿ ರೋಗಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಹೈ ಬಿಪಿ ಹೆಚ್ಚಾದರೆ ಕಿಡ್ನಿಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಈ ಸಮಸ್ಯೆ ಗಂಭೀರ ಹಂತಕ್ಕೆ ತಲುಪಿ ಡಯಾಲಿಸಿಸ್ ಅಗತ್ಯವಾಗುವ ಸಾಧ್ಯತೆಯೂ ಇದೆ.

ಕಿಡ್ನಿ ಹಾನಿಯಾದಾಗ ಕಾಲು ಮತ್ತು ಮುಖದಲ್ಲಿ ಊತ, ದೌರ್ಬಲ್ಯ, ಬೇಗ ದಣಿವು, ಹಸಿವು ಕಡಿಮೆಯಾಗುವುದು, ಮೂತ್ರದ ಪ್ರಮಾಣ ಅಥವಾ ಬಣ್ಣದಲ್ಲಿ ಬದಲಾವಣೆ, ರಾತ್ರಿ ಪದೇಪದೇ ಮೂತ್ರ ವಿಸರ್ಜನೆ ಹಾಗೂ ಉಸಿರಾಟದ ತೊಂದರೆಗಳಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹೈ ಬಿಪಿ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವುದು ಅತ್ಯಂತ ಮುಖ್ಯವಾಗಿದ್ದು, ಕಡಿಮೆ ಉಪ್ಪು–ಸಕ್ಕರೆ ಇರುವ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನೀರಿನ ಸೇವನೆ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಅಗತ್ಯವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

2.50 ಕೋಟಿ ಚಿನ್ನವಲ್ಲ, ಗೋಲ್ಡ್ ಪ್ಲೇಟೆಡ್: ಅಂಜನಾದ್ರಿ ದೇಣಿಗೆ ವಿವಾದಕ್ಕೆ ಹೊಸ ತಿರುವು

0

ಕೊಪ್ಪಳ: ಅಂಜನಾದ್ರಿ ಆಂಜನೇಯ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಲಾಗಿದ್ದ 2.50 ಕೋಟಿ ರೂ. ಮೌಲ್ಯದ ಆಭರಣಗಳ ಬಗ್ಗೆ ನಡೆದ ವಿವಾದದ ನಡುವೆ ಉದ್ಯಮಿ ಮಹೇಶ ರೆಡ್ಡಿ ಖರೀದಿ ಬಿಲ್ ಸಲ್ಲಿಸಿದ್ದಾರೆ.

ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಮ್ಮುಖದಲ್ಲಿ ಪ್ರಭಾವಳಿ, ಚಕ್ರ ಮತ್ತು ಗದೆಯನ್ನು ದೇವಸ್ಥಾನಕ್ಕೆ ದಾನವಾಗಿ ನೀಡಿದ್ದರು. ಆರಂಭದಲ್ಲಿ ಇವು ಬಂಗಾರದ ಆಭರಣಗಳು ಎಂದು ಹೇಳಲಾಗಿತ್ತು.

ಆದರೆ ಜಿಲ್ಲಾಡಳಿತ ಪರಿಶೀಲನೆ ನಡೆಸಿದಾಗ ಆಭರಣಗಳು ಸಂಪೂರ್ಣ ಚಿನ್ನದದ್ದಲ್ಲ, ಬದಲಿಗೆ ಚಿನ್ನ ಲೇಪಿತ ತಾಮ್ರದಿಂದ ತಯಾರಾಗಿವೆ ಎಂಬುದು ಬಹಿರಂಗವಾಯಿತು. ಬಳಿಕ ದಾಖಲೆ ಸಲ್ಲಿಸುವಂತೆ ಉದ್ಯಮಿಗೆ ನೋಟಿಸ್ ನೀಡಲಾಗಿತ್ತು.

ಇದೀಗ ಬಿಡುಗಡೆ ಮಾಡಿರುವ ಬಿಲ್‌ನಲ್ಲಿ ಏಪ್ರಿಲ್ 28ರಂದು ಚಿನ್ನ ಖರೀದಿ ಮಾಡಿ ಮೇ 8ರಂದು ದೇವಸ್ಥಾನಕ್ಕೆ ದೇಣಿಗೆ ನೀಡಿರುವುದಾಗಿ ಮಹೇಶ ರೆಡ್ಡಿ ತಿಳಿಸಿದ್ದಾರೆ.

ಮುಜರಾಯಿ ಇಲಾಖೆ ನಿಯಮದಂತೆ ದೇವಾಲಯಕ್ಕೆ ದೇಣಿಗೆಯಾಗಿ ಬರುವ ಅಮೂಲ್ಯ ವಸ್ತುಗಳ ಮೌಲ್ಯಮಾಪನ ಮತ್ತು ದಾಖಲೆ ಕಡ್ಡಾಯವಾಗಿದ್ದು, ಸದ್ಯ ಅಧಿಕಾರಿಗಳು ಆಭರಣಗಳ ನಿಖರ ಮೌಲ್ಯ ಮತ್ತು ತೂಕ ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!