Home Blog

ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ ₹9 ಕೋಟಿ ಹಣ ವಶಕ್ಕೆ ಪಡೆದ ಪೊಲೀಸರು!

0

ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ₹9 ಕೋಟಿ ಹಣ ಹಾಗೂ ವಾಹನವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣ ಸಾಗಾಟದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಪೊಲೀಸರಿಗೆ ಖಚಿತ ಮಾಹಿತಿ ನೀಡಿದ್ದರು. ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಸಿಗ್ನಲ್ ಬಳಿ ವಾಹನವನ್ನು ಪೊಲೀಸರು ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿದೆ.

ತಮಿಳುನಾಡಿನ ತೂತುಕುಡಿಯ ಸಿಂಧೂ ಜ್ಯೂವೆಲರ್ಸ್ ಮಾಲೀಕ ಸಚಿನ್ ಎಂಬಾತನಿಗೆ ಸೇರಿದ ಹಣ ಎನ್ನಲಾಗಿದೆ. ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಹಣ ಮತ್ತು ಸಚಿನ್ ಎಂಬಾತನನ್ನು ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಐಟಿ ಅಧಿಕಾರಿಗಳು ಸಚಿನ್ ಮನೆಯನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ₹1.3 ಕೋಟಿ ನಗದು ಪತ್ತೆಯಾಗಿದೆ. ಈ ಹಣ ಯಾರಿಗೆ ಸೇರಿದ್ದು ಎನ್ನುವ ಬಗ್ಗೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಹೋಂವರ್ಕ್ ಮಾಡದ್ದಕ್ಕೆ ಶಿಕ್ಷಕಿ ಹಲ್ಲೆ: ಕುಸಿದು ಬಿದ್ದು ವಿದ್ಯಾರ್ಥಿ ಸಾವು

0

ಅಮರಾವತಿ: ಹೋಂ ವರ್ಕ್ ಮಾಡದಿದ್ದಕ್ಕೆ ಶಿಕ್ಷಕಿ ಹಲ್ಲೆ ನಡೆಸಿದ ಪರಿಣಾಮ ಕುಸಿದು ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣಂನ ಖಾಸಗಿ ಶಾಲೆಯಲ್ಲಿ ನಡೆದಿದೆ.

ಶಿಕ್ಷಕಿ ಕೋಲಿನಿಂದ ಹೊಡೆದ ನಂತರ ವಿದ್ಯಾರ್ಥಿ ತೇಜ ಕುಸಿದು ಬಿದ್ದಿದ್ದ. ಆತನನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಸಾವಿನ ಕುರಿತು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಾವಿನ ಸುದ್ದಿ ತಿಳಿದ ನಂತರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆಸ್ಪತ್ರೆಯಲ್ಲಿ ಜಮಾಯಿಸಿ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸೂಕ್ಷ್ಮವಾಗಿ, ಜವಾಬ್ದಾರಿಯುತವಾಗಿ ಮತ್ತು ಮಾನವೀಯತೆಯಿಂದ ವರ್ತಿಸುವಂತೆ ಅಗತ್ಯ ಸಂವೇದನಾಶೀಲ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೂವರು ಸದಸ್ಯರ ಸಮಿತಿಯ ವರದಿಯ ಆಧಾರದ ಮೇಲೆ ಮತ್ತಷ್ಟು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ನಕಲಿ ಔಷಧಿ ಜಾಲ: ಹಿಮಾಚಲ, ತೆಲಂಗಾಣ, ದೆಹಲಿ ಸೇರಿ 5 ರಾಜ್ಯಗಳಿಗೆ ಲಿಂಕ್! ತನಿಖೆಗೆ ಪ್ರತ್ಯೇಕ ತಂಡ ರಚನೆ

0

ಬೆಂಗಳೂರು: ನಕಲಿ ಔಷಧಿ ಜಾಲ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಜಾಲ ಐದು ರಾಜ್ಯಗಳಿಗೆ ಲಿಂಕ್ ಇರುವುದು ತನಿಖೆಯಿಂದ ಬಯಲಾಗಿದೆ. ಹಿಮಾಚಲ ಪ್ರದೇಶ, ತೆಲಂಗಾಣ, ದೆಹಲಿ, ಚೆನ್ನೈ, ಆಂಧ್ರಪ್ರದೇಶ ರಾಜ್ಯಗಳಿಗೆ ನಕಲಿ ಔಷಧಿ ಜಾಲ ಲಿಂಕ್ ಇರುವ ಬಗ್ಗೆ ತಿಳಿದುಬಂದಿದೆ.

5 ರಾಜ್ಯಗಳಲ್ಲಿ ಜಾಲ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಡ್ರಗ್ ಕಂಟ್ರೋಲರ್‌ಗಳ ಐದು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಈ ತನಿಖಾ ತಂಡಗಳು ಐದು ರಾಜ್ಯಗಳಿಗೆ ಭೇಟಿ ನೀಡಲಿವೆ.

ಐದು ರಾಜ್ಯಗಳ ಕಂಪನಿಯ ಲೇಬಲ್ ಇರುವುದು ಬಯಲಾಗಿದ್ದು, ಪ್ರಕರಣ ಸಂಬಂಧ ಅಧಿಕಾರಿಗಳು ಐದು ರಾಜ್ಯಗಳಿಂದ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಐದು ರಾಜ್ಯದ ಕಂಪನಿಗಳಿಗೂ ಲೆಟರ್ ಹೆಡ್ ರೆಡಿ ಮಾಡಿ ಮಾಹಿತಿ ಕೋರಲಿದ್ದಾರೆ. ಔಷಧಿ ಮೇಲೆ ಆಯಾ ಕಂಪನಿಯ ಲೇಬಲ್ ಇದ್ದು, ಅನಧಿಕೃತವಾಗಿ ಪ್ಯಾಕಿಂಗ್ ಆಗುತ್ತಿದೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ.

ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಉತ್ತರಾಖಂಡದಲ್ಲಿ ಮತ್ತೋರ್ವ ಆರೋಪಿ ಬಂಧನ

0

ಉಡುಪಿ: ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಸೂರಜ್ (31) ಬಂಧಿತ ಆರೋಪಿಯಾಗಿದ್ದಾನೆ.

ಉತ್ತರಾಖಂಡ್‌ನ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಬಳಿ ವಿಶೇಷ ಕಾರ್ಯಾಚರಣೆ ನಡೆಸಿ, ತಲೆಮರೆಸಿಕೊಂಡಿದ್ದ ಸೂರಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಶೂಟೌಟ್ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಸೂರಜ್ ವಿರುದ್ಧ ಈ ಪ್ರಕರಣದಲ್ಲಿ ಒಳಸಂಚು ರೂಪಿಸಿ, ಹಣಕಾಸು ಪೂರೈಕೆ ಮಾಡಿದ್ದ ಆರೋಪ ಇದೆ. ಈಗಾಗಲೇ ಬಂಧಿತರಾಗಿರುವ ಇರ್ಷಾದ್, ಚಿರಾಗ್, ಸದಾನಂದ ಹಾಗೂ ಕಿಶೋರ್ ಜೊತೆ ಸೂರಜ್ ಕೈಜೋಡಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ವರಮಹಾಲಕ್ಷ್ಮಿ ಹಬ್ಬ: ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ!

0

ಮಂಡ್ಯ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶ್ರೀರಂಗಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ಈ ವರ್ಷವೂ ಭಕ್ತಾದಿಗಳಿಗೆ ವಿಶೇಷ ಧನಲಕ್ಷ್ಮಿ ಅಲಂಕಾರದ ದರ್ಶನವನ್ನು ಏರ್ಪಡಿಸಲಾಗಿದೆ. ದೇವಿಗೆ ವಿವಿಧ ಮುಖಬೆಲೆಯ ನೋಟುಗಳನ್ನು ಬಳಸಿ ಅಲಂಕಾರ ಮಾಡಲಾಗಿದ್ದು, ಇದು ಭಕ್ತರ ಗಮನ ಸೆಳೆದಿದೆ.

ದೇವಾಲಯಕ್ಕೆ ಭಕ್ತಾದಿಗಳಿಂದ ಹರಿದು ಬಂದ ₹10, ₹20, ₹50, ₹100, ₹200 ಮತ್ತು ₹500 ನೋಟುಗಳನ್ನು ಸಂಗ್ರಹಿಸಿ, ಸುಮಾರು ₹3 ಲಕ್ಷ ಮೌಲ್ಯದ ಧನಲಕ್ಷ್ಮಿ ಅಲಂಕಾರವನ್ನು ಕೈಗೊಳ್ಳಲಾಗಿದೆ.

ದೇವಾಲಯದ ಪ್ರಧಾನ ಅರ್ಚಕರಾದ ಲಕ್ಷ್ಮೀಶ್ ಶರ್ಮ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ವರಮಹಾಲಕ್ಷ್ಮಿ ಹಬ್ಬದ ದಿನದಂದು ದೇವಿಗೆ ಈ ಅಲಂಕಾರ ಮಾಡಲಾಗಿದೆ ಎಂದು ತಿಳಿಸಿದರು. ಈ ಅಲಂಕಾರದ ಮೂಲಕ ಎಲ್ಲರಿಗೂ ಶುಭವಾಗಲಿ, ಕಾಲಕಾಲಕ್ಕೆ ಮಳೆಯಾಗಿ ದೇಶ ಸಮೃದ್ಧಿ ಹೊಂದಲಿ ಹಾಗೂ ತಾಯಿಯನ್ನು ಪೂಜಿಸುವ ಪ್ರತಿಯೊಬ್ಬ ಭಕ್ತನಿಗೂ ಭಗವಂತ ಒಳಿತನ್ನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದರು.

ಬುಮ್ರಾ ನೇತೃತ್ವದ ಬೌಲಿಂಗ್ ಪಡೆ, ರಾಹುಲ್-ಸಂಜುಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ: 2027ರ ವಿಶ್ವಕಪ್ʼಗೆ ಉತ್ತಪ್ಪನ 15 ಆಟಗಾರರ ತಂಡ ಹೀಗಿದೆ

0

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ ಹೇಗಿರಬೇಕು ಎಂಬುದರ ಕುರಿತು ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ತಮ್ಮ ತಂಡವನ್ನು ಆಯ್ಕೆ ಮಾಡಿದ್ದಾರೆ. ಅನುಭವಿ ಆಟಗಾರರ ಜೊತೆಗೆ ಯುವ ಪ್ರತಿಭೆಗಳಿಗೂ ಅವಕಾಶ ನೀಡಿರುವುದು ಉತ್ತಪ್ಪ ಆಯ್ಕೆ ಮಾಡಿರುವ ತಂಡದ ವಿಶೇಷತೆಯಾಗಿದೆ.

ರೋಹಿತ್-ಕೊಹ್ಲಿ ಜೋಡಿಯೇ ತಂಡದ ಜೀವಾಳ

ವಯಸ್ಸಿನ ಲೆಕ್ಕಾಚಾರವನ್ನು ಬದಿಗಿಟ್ಟು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ಅನುಭವಿ ದಿಗ್ಗಜರು 2027ರ ವಿಶ್ವಕಪ್‌ನಲ್ಲೂ ಭಾರತ ತಂಡದ ಪ್ರಮುಖ ಶಕ್ತಿಯಾಗಲಿದ್ದಾರೆ ಎಂದು ರಾಬಿನ್ ಉತ್ತಪ್ಪ ನಂಬಿದ್ದಾರೆ.

ಇವರೊಂದಿಗೆ ಶುಭ್‌ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಇಬ್ಬರೂ ಪ್ರಮುಖ ಜವಾಬ್ದಾರಿ ವಹಿಸಲಿದ್ದಾರೆ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್-ಸಂಜುಗೆ ವಿಕೆಟ್‌ಕೀಪಿಂಗ್ ಜವಾಬ್ದಾರಿ

ವಿಕೆಟ್‌ಕೀಪರ್ ಸ್ಥಾನಕ್ಕಾಗಿ ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ಕೇರಳದ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್ ಇಬ್ಬರಿಗೂ ಉತ್ತಪ್ಪ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ. ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಸ್ಥಿರತೆ ನೀಡಬಲ್ಲ ಆಟಗಾರರಾಗಿದ್ದರೆ, ಸಂಜು ಸ್ಯಾಮ್ಸನ್ ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿದು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಎಕ್ಸ್-ಫ್ಯಾಕ್ಟರ್ ಆಟಗಾರ ಎಂದು ಉತ್ತಪ್ಪ ಪರಿಗಣಿಸಿದ್ದಾರೆ.

ಜಡೇಜಾ-ಅಕ್ಷರ್ ಜೊತೆಗೆ ಹಾರ್ದಿಕ್

ಉತ್ತಪ್ಪ ಆಯ್ಕೆ ಮಾಡಿರುವ ತಂಡದಲ್ಲಿ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರಂತಹ ಇಬ್ಬರು ಎಡಗೈ ಆಲ್‌ರೌಂಡರ್‌ಗಳಿಗೂ ಸ್ಥಾನ ನೀಡಲಾಗಿದೆ. ಇವರಿಬ್ಬರೂ ಎಡಗೈ ಸ್ಪಿನ್ ಜೊತೆಗೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಳ ನೀಡಲಿದ್ದಾರೆ. ಇವರೊಂದಿಗೆ ಹಾರ್ದಿಕ್ ಪಾಂಡ್ಯ ಪ್ರಮುಖ ವೇಗದ ಆಲ್‌ರೌಂಡರ್ ಆಗಿ ತಂಡದ ಸಮತೋಲನ ಕಾಯ್ದುಕೊಳ್ಳಲಿದ್ದಾರೆ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ವೈಭವ್ ಸೂರ್ಯವಂಶಿ ಅಚ್ಚರಿಯ ಆಯ್ಕೆ

ಉತ್ತಪ್ಪ ಆಯ್ಕೆ ಮಾಡಿರುವ ತಂಡದ ಅತ್ಯಂತ ಗಮನಾರ್ಹ ಅಂಶವೆಂದರೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರಿಗೆ ಸ್ಥಾನ ನೀಡಿರುವುದು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೇಶಿ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಗಮನ ಸೆಳೆದಿರುವ ವೈಭವ್ ಅವರನ್ನು ಭವಿಷ್ಯದ ತಾರೆಯಾಗಿ ಪರಿಗಣಿಸಿರುವ ಉತ್ತಪ್ಪ, 2027ರ ವಿಶ್ವಕಪ್ ತಂಡದಲ್ಲೂ ಅವರಿಗೆ ಅವಕಾಶ ನೀಡಿದ್ದಾರೆ.

ಬುಮ್ರಾ ನೇತೃತ್ವದಲ್ಲಿ ಬಲಿಷ್ಠ ಬೌಲಿಂಗ್ ಪಡೆ

ಭಾರತದ ವೇಗದ ಬೌಲಿಂಗ್ ವಿಭಾಗವನ್ನು ಜಸ್‌ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ. ಅವರಿಗೆ ಮೊಹಮ್ಮದ್ ಸಿರಾಜ್ ಮತ್ತು ಎಡಗೈ ವೇಗಿ ಅರ್ಷದೀಪ್ ಸಿಂಗ್ ಸಾಥ್ ನೀಡಲಿದ್ದಾರೆ.

ಇದರ ಜೊತೆಗೆ ಅನುಭವಿ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಅವರಿಗೂ ಉತ್ತಪ್ಪ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಸ್ಪಿನ್ ವಿಭಾಗದಲ್ಲಿ ಪ್ರಮುಖ ಅಸ್ತ್ರವಾಗಿ ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ.

ರಾಬಿನ್ ಉತ್ತಪ್ಪ ಆಯ್ಕೆ ಮಾಡಿದ 15 ಆಟಗಾರರ ಭಾರತ ತಂಡ

ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿ, ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.

ಒಟ್ಟಿನಲ್ಲಿ, ಅನುಭವ ಮತ್ತು ಯುವ ಪ್ರತಿಭೆಗಳ ಸಮತೋಲನದೊಂದಿಗೆ ರಾಬಿನ್ ಉತ್ತಪ್ಪ ಆಯ್ಕೆ ಮಾಡಿರುವ ಈ ತಂಡ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಅದರಲ್ಲೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ಜೊತೆಗೆ ವೈಭವ್ ಸೂರ್ಯವಂಶಿ ಅವರಿಗೆ ಸ್ಥಾನ ನೀಡಿರುವುದು ವಿಶೇಷ ಚರ್ಚೆಗೆ ಕಾರಣವಾಗಿದೆ.

ಗದಗದಲ್ಲಿ ಸಮಾಜವಿರೋಧಿ ಚಟುವಟಿಕೆಗಳಿಗೆ ಬ್ರೇಕ್; ಜಿಲ್ಲೆಯಿಂದ ಮೂವರು ಗಡಿಪಾರು!

0

ಗದಗ: ಕೊಲೆ ಯತ್ನ, ಜೀವ ಬೆದರಿಕೆ, ಸಾರ್ವಜನಿಕ ಶಾಂತಿಭಂಗ ಹಾಗೂ ಜೂಜಾಟ–ಮಟ್ಕಾ ದಂಧೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ಮೂವರನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಜಿಲ್ಲೆಯಲ್ಲಿ ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೂವರು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಹಿಂದೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದರೂ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗಿದೆ.

ಸಾಹಿಲ್ ರಾಯಚೂರು ಜಿಲ್ಲೆಗೆ:

ಗದಗ ನಗರದ ದಾಸರ ಓಣಿಯ ಹುಸೇನಸಾಬ್ ಹಣಗಿ ಅವರ ಪುತ್ರ ಸಾಹಿಲ್ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ ಹಾಗೂ ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣವಾಗುವಂತಹ ಕೃತ್ಯಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದವು. ಆತನ ನಿರಂತರ ಅಪರಾಧ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಹಿಲ್‌ನ ದುರ್ವರ್ತನೆ ನಿಯಂತ್ರಿಸುವ ಉದ್ದೇಶದಿಂದ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಬಳಿಕ ಆತನನ್ನು ಗದಗ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ.

ಸಾಹಿಲ್ ವಿರುದ್ಧ ಗದಗ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳಿವೆ. ಗುನ್ನೆ ನಂ.172/2025ರಲ್ಲಿ ಬಿಎನ್‌ಎಸ್‌-2023ರ ಕಲಂ 109(1), 351(2) ಜೊತೆಗೆ 3(5) ಅಡಿ ಪ್ರಕರಣ ದಾಖಲಾಗಿದ್ದು, ಪಿಆರ್ ನಂ.07/2026ರಲ್ಲಿ ಬಿಎನ್‌ಎಸ್‌ಎಸ್‌-2023ರ ಕಲಂ 126 ಅಡಿ ಪ್ರಕರಣ ದಾಖಲಾಗಿದೆ.

ಓಸಿ–ಮಟ್ಕಾ ದಂಧೆ: ಶರೀಫ್ ಧಾರವಾಡಕ್ಕೆ:

ಬೆಳವಣಿಕೆ ಗ್ರಾಮದ ಪಕೀರಸಾಬ್ ಕೋಲಕಾರ ಅವರ ಪುತ್ರ ಶರೀಫ್ ಓಸಿ–ಮಟ್ಕಾ ಜೂಜಾಟವನ್ನು ವೃತ್ತಿಯನ್ನಾಗಿಸಿಕೊಂಡು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದ್ದ ಆರೋಪ ಎದುರಿಸುತ್ತಿದ್ದ. ಈತನ ಚಟುವಟಿಕೆಗಳಿಂದ ಬಡವರು ಹಾಗೂ ದುಡಿಯುವ ವರ್ಗದ ಜನರ ಆರ್ಥಿಕ ಪರಿಸ್ಥಿತಿಗೆ ಧಕ್ಕೆಯಾಗುವುದರ ಜತೆಗೆ ಯುವಜನತೆಯ ಮೇಲೂ ದುಷ್ಪರಿಣಾಮ ಬೀರುತ್ತಿತ್ತು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಶರೀಫ್ ವಿರುದ್ಧ ಈ ಹಿಂದೆ ಪ್ರಕರಣಗಳನ್ನು ದಾಖಲಿಸಿ ಶಿಕ್ಷೆಗೆ ಒಳಪಡಿಸಿದ್ದರೂ ತನ್ನ ಚಟುವಟಿಕೆಗಳನ್ನು ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ಬಳಿಕ ಆತನನ್ನು ಗದಗ ಜಿಲ್ಲೆಯಿಂದ ಧಾರವಾಡ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಶರೀಫ್ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳಿವೆ. ಗುನ್ನೆ ನಂ.23/2023, ಗುನ್ನೆ ನಂ.178/2024 ಹಾಗೂ ಗುನ್ನೆ ನಂ.33/2025 ಪ್ರಕರಣಗಳು ದಾಖಲಾಗಿದ್ದು, ಮೂರೂ ಪ್ರಕರಣಗಳಲ್ಲಿ ಕೆ.ಪಿ. ಕಾಯ್ದೆಯ ಕಲಂ 78(3) ಅಡಿ ಪ್ರಕರಣ ದಾಖಲಿಸಲಾಗಿದೆ.

ಮೂರು ಜೂಜಾಟ ಪ್ರಕರಣ: ಚೆನ್ನಯ್ಯ ಕೊಪ್ಪಳಕ್ಕೆ:

ರೋಣ ತಾಲೂಕಿನ ಸವಡಿ ಗ್ರಾಮದ ಚೆನ್ನಯ್ಯ ಅಲಿಯಾಸ್ ಚೆನ್ನಬಸಯ್ಯ ವಿರೂಪಾಕ್ಷಯ್ಯ ಚರಂತಿಮಠ ಕೂಡ ಜೂಜಾಟ ಹಾಗೂ ಮಟ್ಕಾ ದಂಧೆಯಲ್ಲಿ ತೊಡಗಿಕೊಂಡಿದ್ದ ಆರೋಪದ ಮೇಲೆ ಗಡಿಪಾರಿಗೆ ಒಳಗಾಗಿದ್ದಾನೆ. ಜೂಜಾಟವನ್ನು ವೃತ್ತಿಯಾಗಿಸಿಕೊಂಡಿದ್ದ ಆತನ ಚಟುವಟಿಕೆಗಳಿಂದ ಬಡವರು, ದುಡಿಯುವ ವರ್ಗ ಹಾಗೂ ಯುವಜನತೆಯ ಮೇಲೆ ದುಷ್ಪರಿಣಾಮ ಬೀರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನಯ್ಯ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ. ಗುನ್ನೆ ನಂ.152/2024, ಗುನ್ನೆ ನಂ.26/2025 ಹಾಗೂ ಪಿಆರ್ ನಂ.125/2025 ಪ್ರಕರಣಗಳಲ್ಲಿ ಕೆ.ಪಿ. ಆ್ಯಕ್ಟ್‌ನ ಕಲಂ 78(3) ಅಡಿ ಪ್ರಕರಣ ದಾಖಲಿಸಲಾಗಿದೆ.

ಹಿಂದಿನ ಪ್ರಕರಣಗಳಿದ್ದರೂ ತನ್ನ ಚಟುವಟಿಕೆಗಳನ್ನು ಮುಂದುವರಿಸಿದ್ದರಿಂದ ಆತನ ದುರ್ವರ್ತನೆ ನಿಯಂತ್ರಿಸುವ ಉದ್ದೇಶದಿಂದ ರೋಣ ಪೊಲೀಸ್ ಠಾಣೆಯಿಂದ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ಬಳಿಕ ಚೆನ್ನಯ್ಯನನ್ನು ಗದಗ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆ, ಜೂಜಾಟ, ಮಟ್ಕಾ ಸೇರಿದಂತೆ ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಈ ಗಡಿಪಾರು ಕ್ರಮ ಎಚ್ಚರಿಕೆಯಾಗಿದೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಮುಂದೆಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ರೋಹನ್ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

Yash Toxic: ವರಮಹಾಲಕ್ಷ್ಮಿ ಹಬ್ಬದಂದೇ ಟಿಕೆಟ್ ಬುಕ್ಕಿಂಗ್ ಆರಂಭ; ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್!

0

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.

ಆಗಸ್ಟ್ 26ರಂದು ಚಿತ್ರ ಅದ್ದೂರಿಯಾಗಿ ತೆರೆಕಾಣಲಿದ್ದು, ಅದಕ್ಕೂ ಮುನ್ನ ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬದ ದಿನವೇ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ.

ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಮಾತ್ರವಲ್ಲದೆ ದೇಶದಾದ್ಯಂತ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ. ಈಗಾಗಲೇ ಹಲವು ಚಿತ್ರಮಂದಿರಗಳ ಎದುರು ಯಶ್ ಅವರ ‘ಟಾಕ್ಸಿಕ್’ ಚಿತ್ರದ ಕಟೌಟ್‌ಗಳು ರಾರಾಜಿಸಲು ಸಿದ್ಧವಾಗುತ್ತಿವೆ. ಕರ್ನಾಟಕದ ಹೊರತಾಗಿಯೂ ಹಲವು ರಾಜ್ಯಗಳಲ್ಲಿ ಸಿನಿಮಾಗೆ ಉತ್ತಮ ಕ್ರೇಜ್ ಸೃಷ್ಟಿಯಾಗಿದೆ.

ವಿದೇಶದಲ್ಲೂ ‘ಟಾಕ್ಸಿಕ್’ ಹವಾ:

‘ಟಾಕ್ಸಿಕ್’ ಸಿನಿಮಾ ವಿದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯುವ ನಿರೀಕ್ಷೆ ಇದೆ.

ಚಿತ್ರದ ಪ್ರಚಾರ ಹಾಗೂ ಬಿಡುಗಡೆಗೆ ಸಂಬಂಧಿಸಿದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನೂರಾರು ಚಿತ್ರಮಂದಿರಗಳ ಎದುರು ಯಶ್ ಅವರ ಕಟೌಟ್‌ಗಳು ಅಭಿಮಾನಿಗಳ ಗಮನ ಸೆಳೆಯಲಿವೆ.

ಆಗಸ್ಟ್ 21ರಿಂದ ಅಡ್ವಾನ್ಸ್ ಬುಕ್ಕಿಂಗ್:

ವರಮಹಾಲಕ್ಷ್ಮಿ ಹಬ್ಬದ ದಿನವಾದ ಆಗಸ್ಟ್ 21ರಿಂದ ‘ಟಾಕ್ಸಿಕ್’ ಚಿತ್ರದ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ. ಹೀಗಾಗಿ ಯಶ್ ಅಭಿಮಾನಿಗಳು ಮೊದಲ ದಿನವೇ ಸಿನಿಮಾ ವೀಕ್ಷಿಸಲು ಟಿಕೆಟ್ ಕಾಯ್ದಿರಿಸಲು ಸಜ್ಜಾಗಿದ್ದಾರೆ.

ಆಗಸ್ಟ್ 26ರಂದು ಸಿನಿಮಾ ತೆರೆಕಾಣಲಿದ್ದು, ಭಾರೀ ಸಂಖ್ಯೆಯ ಪರದೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುವ ನಿರೀಕ್ಷೆ ಇದೆ.

‘ಕೆಜಿಎಫ್’ ಸರಣಿಯ ಬಳಿಕ ಯಶ್ ಅವರ ಮತ್ತೊಂದು ಸಿನಿಮಾ ಆಗಿರುವುದರಿಂದ ‘ಟಾಕ್ಸಿಕ್’ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ವರಮಹಾಲಕ್ಷ್ಮಿ ಹಬ್ಬದ ಖರೀದಿ ಭರಾಟೆ; ಬೆಲೆ ಏರಿಕೆಯ ಬಿಸಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿ ವ್ರತದ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಗುರುವಾರ ಖರೀದಿ ಭರಾಟೆ ಜೋರಾಗಿತ್ತು. ಹೂವು, ಹಣ್ಣು, ಪೂಜಾ ಸಾಮಗ್ರಿ, ಲಕ್ಷ್ಮಿ ಮೂರ್ತಿ ಹಾಗೂ ಅಲಂಕಾರಿಕ ವಸ್ತುಗಳ ಖರೀದಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಮಾರುಕಟ್ಟೆ ಜನದಟ್ಟಣೆಯಿಂದ ಕೂಡಿತ್ತು.

ಹಬ್ಬದ ಸಂಭ್ರಮದ ನಡುವೆಯೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಸೇವಂತಿ ಹೂವಿನ ದರ ಕೆಜಿಗೆ ₹800ಕ್ಕೆ ತಲುಪಿದ್ದು, ದುಬಾರಿ ದರದಿಂದಾಗಿ ಗ್ರಾಹಕರು ಕೆಜಿ ಅಥವಾ ಅರ್ಧ ಕೆಜಿ ಬದಲಾಗಿ 50ರಿಂದ 100 ಗ್ರಾಂನಷ್ಟು ಮಾತ್ರ ಖರೀದಿಸುತ್ತಿರುವುದು ಕಂಡುಬಂತು.

ಹಣ್ಣು, ಪೂಜಾ ಸಾಮಗ್ರಿಗೂ ದರ ಏರಿಕೆ

ಬಾಳೆ, ಸೇಬು, ಕಿತ್ತಳೆ, ಚಿಕ್ಕೂ ಹಾಗೂ ಮೋಸಂಬಿ ಒಳಗೊಂಡ ಹಣ್ಣುಗಳ ಸೆಟ್ ₹150ರಿಂದ ₹200ರವರೆಗೆ ಮಾರಾಟವಾಯಿತು. ಬಾಳೆಕಂಬಕ್ಕೆ ₹50 ದರವಿತ್ತು. ವೀಳ್ಯದೆಲೆ, ಹೂವು, ಬಾಳೆ, ಕಬ್ಬು, ದಿನಸಿ ಹಾಗೂ ಅಲಂಕಾರಿಕ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿದೆ.

ವರಮಹಾಲಕ್ಷ್ಮಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವಿವಿಧ ಗಾತ್ರದ ಮೂರ್ತಿಗಳನ್ನು ಮಹಿಳೆಯರು ಖರೀದಿಸಿದರು. ಅರಿಶಿಣ, ಕುಂಕುಮ, ಅಕ್ಷತೆ, ಕರ್ಪೂರ ಸೇರಿದಂತೆ ಪೂಜಾ ಸಾಮಗ್ರಿಗಳ ಸಿದ್ಧ ಕಿಟ್‌ಗಳಿಗೂ ಬೇಡಿಕೆ ಕಂಡುಬಂತು. ಹೊಸ ಸೀರೆ, ಬಳೆ ಹಾಗೂ ಅಲಂಕಾರಿಕ ವಸ್ತುಗಳ ಖರೀದಿಯಲ್ಲೂ ಮಹಿಳೆಯರು ಆಸಕ್ತಿ ತೋರಿದರು.

ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಮಧ್ಯಮ ವರ್ಗದ ಕುಟುಂಬಗಳು ಅಗತ್ಯ ವಸ್ತುಗಳಿಗೆ ಮಾತ್ರ ಆದ್ಯತೆ ನೀಡಿ ಖರೀದಿ ಪ್ರಮಾಣ ಕಡಿಮೆ ಮಾಡುತ್ತಿರುವುದು ಕಂಡುಬಂತು. ಆದರೂ ಹಬ್ಬದ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಸರಳವಾಗಿ ಪೂಜೆ ನೆರವೇರಿಸಲು ಕುಟುಂಬಗಳು ಸಜ್ಜಾಗಿವೆ.

ಮಾರುಕಟ್ಟೆಯ ಮುಂದುವರಿದ ಭಾಗದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿರುವುದರ ಜತೆಗೆ ಹಬ್ಬದ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಮಾರುಕಟ್ಟೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸರು ಸಂಚಾರ ನಿಯಂತ್ರಿಸಲು ಹರಸಾಹಸಪಟ್ಟರು. ಗ್ರಾಮೀಣ ಭಾಗಗಳಿಂದಲೂ ಜನರು ಪಟ್ಟಣಕ್ಕೆ ಆಗಮಿಸಿದ್ದರಿಂದ ಹೂವು, ಹಣ್ಣು, ಬಟ್ಟೆ, ಬಳೆ ಹಾಗೂ ಪೂಜಾ ಸಾಮಗ್ರಿಗಳ ಮಾರಾಟ ಚುರುಕುಗೊಂಡಿತ್ತು.

ದ್ಯಾಮಮ್ಮ–ದುರ್ಗಮ್ಮ ಹರಿಜಾತ್ರೆ: ಇಂದು ಜೋಗುತಿ, ದೀಪ ನೃತ್ಯ ಪ್ರದರ್ಶನ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗ್ರಾಮದೇವತೆಗಳಾದ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೆ ಮಹೋತ್ಸವದ ಅಂಗವಾಗಿ ಆ.21ರಂದು ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ನರೇಗಲ್‌ನ ಪೂಜ್ಯಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸುವರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸುವರು. ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಉಪಸ್ಥಿತರಿರುವರು.

ಲೆಕ್ಕಪರಿಶೋಧಕ ಶಂಕ್ರಪ್ಪ ಕನೋಜ, ಜೆ.ಜೆ. ಕಾಲೇಜಿನ ಐ.ಎಸ್. ಪೂಜಾರ, ಉಸಿರು ಫೌಂಡೇಶನ್ ಸಂಸ್ಥಾಪಕ ಶರಣು ಪಾಟೀಲ, ವ್ಯಾಪಾರಸ್ಥರಾದ ಸದಾಶಿವಯ್ಯ ಮದರಿಮಠ, ವಿಶ್ವನಾಥಯ್ಯ ಶಿವಪ್ಪಯ್ಯನಮಠ, ಯುವ ಧುರೀಣ ವಸಂತ ಪಡಗದ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ನಗರಸಭಾ ಸದಸ್ಯರಾದ ಕೃಷ್ಣ ಪರಾಪೂರ, ಆಸ್ಮಾ ರೇಷ್ಮಿ, ಜೈನುಲಾಲುದ್ದೀನ್ ನಮಾಜಿ, ಮಹಾಂತೇಶ ನಲವಡಿ, ಪರವೀನಬಾನು ಮುಲ್ಲಾ, ವ್ಯಾಪಾರಸ್ಥ ಎಚ್.ಕೆ. ಮುಲ್ಲಾ, ಗುತ್ತಿಗೆದಾರ ಎಫ್.ವಿ. ಮರಿಗೌಡರ ಸೇರಿದಂತೆ ಹಲವರು ಭಾಗವಹಿಸುವರು.

ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 8.30ಕ್ಕೆ ಶಂಕ್ರಣ್ಣ ಸಂಕಣ್ಣವರ ನೇತೃತ್ವದ ಕೊತಬಾಳದ ಅರುಣೋದಯ ಕಲಾತಂಡದಿಂದ ಜೋಗುತಿ ನೃತ್ಯ ಹಾಗೂ ದೀಪ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಜಾತ್ರೋತ್ಸವ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.