Home Blog

ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ: ಸಾವಿನ ಸುತ್ತ ಹಲವು ಅನುಮಾನ!

0

ಹಾಸನ: ಚನ್ನರಾಯಪಟ್ಟಣದ ಅಂಬಿಕ ನಗರದಲ್ಲಿ 19 ವರ್ಷದ ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಯುವತಿಯ ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದ್ದು, ಪೋಷಕರು ತನಿಖೆಗೆ ಒತ್ತಾಯಿಸಿದ್ದಾರೆ.

ಮೃತ ಯುವತಿಯನ್ನು ಸಾಕಮ್ಮ–ಮಂಜಶೆಟ್ಟಿ ದಂಪತಿಯ ಪುತ್ರಿ ರಚಿತಾ (19) ಎಂದು ಗುರುತಿಸಲಾಗಿದೆ. ರಚಿತಾ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದಳು. ಆಗಸ್ಟ್ 21ರ ರಾತ್ರಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.

ರಚಿತಾ ಸುಮಾರು ಒಂದೂವರೆ ವರ್ಷದಿಂದ ನವೀನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ನವೀನ್ ಚನ್ನರಾಯಪಟ್ಟಣ ಪಟ್ಟಣದ ರೇಣುಕಾಂಬ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇದೇ ಬೇಕರಿಯಲ್ಲಿ ರಚಿತಾ ತಾಯಿ ಸಾಕಮ್ಮ ಕೂಡ ಕೆಲಸ ಮಾಡುತ್ತಿದ್ದರು.

ರಚಿತಾ ಹಾಗೂ ನವೀನ್ ಪರಸ್ಪರ ಪ್ರೀತಿಸುತ್ತಿರುವ ವಿಚಾರವನ್ನು ಇಬ್ಬರೂ ಸಾಕಮ್ಮ ಅವರ ಬಳಿ ತಿಳಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಗಳ ವಿವಾಹವನ್ನು ನವೀನ್ ಜೊತೆ ಮಾಡಿಸುವುದಾಗಿ ಸಾಕಮ್ಮ ಭರವಸೆ ನೀಡಿದ್ದರು ಎಂದು ತಿಳಿದುಬಂದಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ನವೀನ್ ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ರಚಿತಾ ತಾಯಿ ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ಮಗಳ ಸಾವಿನ ಬಗ್ಗೆ ಅನುಮಾನವಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಘಟನೆ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಯುವತಿಯ ಸಾವಿಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

ಸಿನಿಮಾ ಹೆಸರಲ್ಲಿ 3.85 ಕೋಟಿ ಹಣ ಪಡೆದು ವಂಚಿಸಿದ್ರಾ ಖ್ಯಾತ ನಿರ್ದೇಶಕ!? ಓಂಪ್ರಕಾಶ್ ರಾವ್ ವಿರುಧ್ದ ದಾಖಲಾಯ್ತು ಕೇಸ್

0

ಬೆಂಗಳೂರು: ಖ್ಯಾತ ಕನ್ನಡ ಚಿತ್ರ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ ವಿರುದ್ಧ ₹3.85 ಕೋಟಿ ಹಣ ಪಡೆದು ವಾಪಸ್ ನೀಡದೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಓಂಪ್ರಕಾಶ್ ರಾವ್ ಹಾಗೂ ಅವರ ಪತ್ನಿ ಡೆನ್ನಿಸಾ ಪ್ರಕಾಶ್ ವಿರುದ್ಧ ಆರೋಪ ಮಾಡಲಾಗಿದೆ.

ವಾಸುದೇವರೆಡ್ಡಿ, ಭಾಸ್ಕರ್ ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವರು ದೂರು ನೀಡಿದ್ದು, ‘ಫೀನಿಕ್ಸ್’ ಸಿನಿಮಾ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಹಣ ಪಡೆದು ಬಳಿಕ ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಣ ವಾಪಸ್ ಕೇಳಿದಾಗ ಕಿರುಕುಳ ನೀಡುವುದರ ಜೊತೆಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಕೇಳಿಬಂದಿದೆ.

ದೂರುದಾರರ ಪ್ರಕಾರ, ‘ಫೀನಿಕ್ಸ್’ ಸಿನಿಮಾಕ್ಕಾಗಿ ಓಂಪ್ರಕಾಶ್ ರಾವ್ ಅವರು ವಿವಿಧ ವ್ಯಕ್ತಿಗಳಿಂದ ಹಣ ಪಡೆದಿದ್ದಾರೆ. ಸಿನಿಮಾ ನಿರ್ಮಾಣ ಹಾಗೂ ಇತರ ಕಾರಣಗಳಿಗಾಗಿ ನೀಡಿದ ಹಣವನ್ನು ನಿಗದಿತ ಅವಧಿಯಲ್ಲಿ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರೂ, ಹಲವು ವರ್ಷ ಕಳೆದರೂ ಹಣ ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ.

10 ಲಕ್ಷ ನೀಡಿದ್ದ ಭಾಸ್ಕರ್ ಶೆಟ್ಟಿ:

ದೂರುದಾರ ಭಾಸ್ಕರ್ ಶೆಟ್ಟಿ ಮಾತನಾಡಿ, 2023ರಲ್ಲಿ ಓಂಪ್ರಕಾಶ್ ರಾವ್ ಅವರ ಪರಿಚಯವಾಗಿತ್ತು. ತಾವು ಹೀರೋ ಆಗಬೇಕು ಎಂಬ ಆಸೆ ಹೊಂದಿದ್ದ ಸಂದರ್ಭದಲ್ಲಿ ಓಂಪ್ರಕಾಶ್ ರಾವ್ ಅವರಿಗೆ ₹10 ಲಕ್ಷ ಹಣ ನೀಡಿದ್ದೆ ಎಂದು ಹೇಳಿದ್ದಾರೆ.

2023ರಲ್ಲಿ ನೀಡಿದ ₹10 ಲಕ್ಷ ಹಣಕ್ಕೆ ಬಡ್ಡಿ ಸೇರಿ ಇದೀಗ ಸುಮಾರು ₹20 ಲಕ್ಷ ಆಗಿದೆ. ಆದರೆ ಈವರೆಗೆ ಒಂದು ರೂಪಾಯಿ ಕೂಡ ವಾಪಸ್ ಬಂದಿಲ್ಲ. ತಾವು ಬೇರೆಯವರ ಬಳಿ ಸಾಲ ಮಾಡಿಕೊಂಡು ಹಣ ನೀಡಿದ್ದಾಗಿ ಅವರು ಹೇಳಿದ್ದಾರೆ.

3.30 ಕೋಟಿ ಹಣ ಪಡೆದಿದ್ದಾರೆ ಎಂಬ ಆರೋಪ:

ಇನ್ನು ಫೈನಾನ್ಸ್ ವ್ಯವಹಾರ ನಡೆಸುವ ವಾಸುದೇವರೆಡ್ಡಿ ಅವರಿಂದಲೂ ಸುಮಾರು ₹3.30 ಕೋಟಿ ಹಣ ಪಡೆದಿದ್ದಾರೆ ಎಂದು ಭಾಸ್ಕರ್ ಶೆಟ್ಟಿ ಆರೋಪಿಸಿದ್ದಾರೆ. ಒಟ್ಟಾರೆ ಸುಮಾರು ₹3.85 ಕೋಟಿ ಹಣವನ್ನು ವಿವಿಧ ವ್ಯಕ್ತಿಗಳಿಂದ ಪಡೆದಿದ್ದು, ಹಣ ವಾಪಸ್ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ನಿರಂತರವಾಗಿ ಕಾಲಾವಕಾಶ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಆರು ತಿಂಗಳಲ್ಲಿ ಹಣ ನೀಡುವುದಾಗಿ ಹಲವು ಬಾರಿ ಹೇಳಿದ್ದರೂ ಹಣ ನೀಡದೆ ಸತಾಯಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದೆ ಎಂದು ಅವರು ಆರೋಪಿಸಿದ್ದಾರೆ.

ಮಹಿಳೆಯರಿಂದಲೂ ಹಣ ಪಡೆದ ಆರೋಪ:

ಕೆಲ ಮಹಿಳೆಯರಿಂದಲೂ ಸುಮಾರು ₹25 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಮಹಿಳೆಯರು ತಮ್ಮ ಆಸ್ತಿಯನ್ನು ಮಾರಿ ಹಣ ನೀಡಿದ್ದಾರೆ ಎಂದು ಭಾಸ್ಕರ್ ಶೆಟ್ಟಿ ಹೇಳಿದ್ದಾರೆ. ಸಿನಿಮಾ ನಿರ್ಮಾಣ ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಫಿಲ್ಮ್ ಚೇಂಬರ್‌ಗೂ ದೂರು:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್‌ನಲ್ಲೂ ದೂರು ನೀಡಲಾಗಿದೆ. ಸಿನಿಮಾ ಕ್ಷೇತ್ರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ದೂರುದಾರರು ಹೇಳಿದ್ದಾರೆ.

ಓಂಪ್ರಕಾಶ್ ರಾವ್ ಅವರು ಹಣ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಅಗ್ರಿಮೆಂಟ್ ಹಾಗೂ ಚೆಕ್ ನೀಡಿದ್ದಾರೆ. ಹೀಗಾಗಿ ಹಣ ವಾಪಸ್ ನೀಡದಿದ್ದರೆ ವಂಚನೆ ಪ್ರಕರಣ ಅಥವಾ ಚೆಕ್ ಬೌನ್ಸ್ ಪ್ರಕರಣ ದಾಖಲಿಸುವುದಾಗಿ ಭಾಸ್ಕರ್ ಶೆಟ್ಟಿ ತಿಳಿಸಿದ್ದಾರೆ.

ಹಣ ಕೇಳಲು ಹೋದಾಗ ಬೆದರಿಕೆ ಆರೋಪ:

ಹಣ ವಾಪಸ್ ಕೇಳಲು ಓಂಪ್ರಕಾಶ್ ರಾವ್ ಅವರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ದೂರುದಾರರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಓಂಪ್ರಕಾಶ್ ರಾವ್ ಹಾಗೂ ಅವರ ಪತ್ನಿ ಡೆನ್ನಿಸಾ ಪ್ರಕಾಶ್ ವಿರುದ್ಧವೂ ದೂರು ನೀಡಲಾಗಿದೆ.

‘ನಮ್ಮ ನಡುವೆ ಉತ್ತಮ ಒಡನಾಟವಿದ್ದ ಕಾರಣ ಇಷ್ಟು ದಿನ ಸುಮ್ಮನಿದ್ದೆವು. ಹಲವು ಬಾರಿ ಮಾತುಕತೆ ನಡೆಸಿ ಹಣ ನೀಡುವಂತೆ ಕೇಳಿದ್ದೇವೆ. ಹಣ ನೀಡುವುದಾಗಿ ಹೇಳುತ್ತಲೇ ಬಂದಿದ್ದಾರೆ. ಇದೀಗ ಕಾನೂನು ಮೊರೆ ಹೋಗುವ ಪರಿಸ್ಥಿತಿ ಬಂದಿದೆ’ ಎಂದು ಭಾಸ್ಕರ್ ಶೆಟ್ಟಿ ತಿಳಿಸಿದ್ದಾರೆ.

ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಬೇಕಿದೆ. ಆರೋಪಗಳ ಕುರಿತು ಓಂಪ್ರಕಾಶ್ ರಾವ್ ಹಾಗೂ ಅವರ ಪತ್ನಿ ಡೆನ್ನಿಸಾ ಪ್ರಕಾಶ್ ಅವರ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.

ತಿರುಮಲದಲ್ಲಿ AI ರೋಬೋಟ್ ನಾಯಿ ಕಾವಲು: ಭಕ್ತರ ಸುರಕ್ಷತೆಗೆ TTD ಹೊಸ ಪ್ಲ್ಯಾನ್!

0

ಅಮರಾವತಿ: ತಿರುಮಲದ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಚಲನವಲನದ ಮೇಲೆ ನಿಗಾ ಇಡುವುದರ ಜೊತೆಗೆ ಭಕ್ತರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (AI) ಆಧಾರಿತ ರೋಬೋಟಿಕ್ ನಾಯಿಗಳನ್ನು ಬಳಸಲು ತಿರುಮಲ ತಿರುಪತಿ ದೇವಸ್ಥಾನಂ (TTD) ಚಿಂತನೆ ನಡೆಸಿದೆ.

ದಟ್ಟ ಅರಣ್ಯ ಪ್ರದೇಶದಲ್ಲಿ ರೋಬೋಟಿಕ್ ನಾಯಿಗಳನ್ನು ನಿಯೋಜಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವ ನಿಟ್ಟಿನಲ್ಲಿ TTD ಹಿರಿಯ ಅಧಿಕಾರಿ ಚ. ವೆಂಕಯ್ಯ ಚೌಧರಿ ಸೇರಿದಂತೆ ಅಧಿಕಾರಿಗಳು ಇತ್ತೀಚೆಗೆ ಶ್ರೀ ಪದ್ಮಾವತಿ ಅತಿಥಿ ಗೃಹದಲ್ಲಿ ಚತುರ್ಭುಜ ರೋಬೋಟ್ ಅನ್ನು ಪರಿಶೀಲಿಸಿದರು.

ನಾಲ್ಕು ಕಾಲುಗಳನ್ನು ಹೊಂದಿರುವ ಈ ರೋಬೋಟಿಕ್ ನಾಯಿ ಅಪಾಯಕಾರಿ ಹಾಗೂ ಜನರಿಗೆ ತೊಂದರೆಯಾಗಬಹುದಾದ ಭೂಪ್ರದೇಶಗಳಲ್ಲೂ ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸುಧಾರಿತ ಕಣ್ಗಾವಲು ಮತ್ತು ಮೇಲ್ವಿಚಾರಣಾ ತಂತ್ರಜ್ಞಾನವನ್ನು ಹೊಂದಿರುವ ರೋಬೋಟ್, 360 ಡಿಗ್ರಿ LiDAR, ಆಪ್ಟಿಕಲ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಒಳಗೊಂಡಿದೆ.

ಸಂಪೂರ್ಣ ಕತ್ತಲೆ, ಮಂಜು ಸೇರಿದಂತೆ ವಿವಿಧ ಹವಾಮಾನ ಪರಿಸ್ಥಿತಿಗಳಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ರೋಬೋಟ್ ಹೊಂದಿದೆ. ಇದರ AI ವ್ಯವಸ್ಥೆಯು ನೈಜ ಸಮಯದಲ್ಲಿ ವಸ್ತುಗಳನ್ನು ಗುರುತಿಸಿ, ಮಾನವರು, ಕಾಡುಪ್ರಾಣಿಗಳು, ಸಾಕುಪ್ರಾಣಿಗಳು ಹಾಗೂ ವಾಹನಗಳ ನಡುವಿನ ವ್ಯತ್ಯಾಸವನ್ನು ಪತ್ತೆಹಚ್ಚಬಲ್ಲದು.

ಅಲ್ಲದೆ, ರೋಬೋಟಿಕ್ ನಾಯಿ ತನ್ನ ಕ್ಯಾಮೆರಾಗಳ ಮೂಲಕ ದೃಶ್ಯಗಳನ್ನು ನೇರ ಪ್ರಸಾರ ಮಾಡಲಿದ್ದು, ಕೇಂದ್ರ ನಿಯಂತ್ರಣ ಕೊಠಡಿ ಹಾಗೂ ತುರ್ತು ಪ್ರತಿಕ್ರಿಯಾ ತಂಡಗಳಿಗೆ ಜಿಯೋ-ಟ್ಯಾಗ್ ಮಾಡಲಾದ ಎಚ್ಚರಿಕೆಗಳನ್ನು ಕಳುಹಿಸುವ ಸಾಮರ್ಥ್ಯ ಹೊಂದಿದೆ.

ವಿಶೇಷವಾಗಿ ಅಲಿಪಿರಿ–ತಿರುಮಲ ಚಾರಣ ಮಾರ್ಗ ಸೇರಿದಂತೆ ಭಕ್ತರು ಹೆಚ್ಚಾಗಿ ಸಂಚರಿಸುವ ಮಾರ್ಗಗಳ ಬಳಿ ಚಿರತೆಗಳು ಸೇರಿದಂತೆ ಕಾಡುಪ್ರಾಣಿಗಳ ಚಲನವಲನವನ್ನು ಪತ್ತೆಹಚ್ಚಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಸಂಭಾವ್ಯ ಅಪಾಯ ಪತ್ತೆಯಾದ ತಕ್ಷಣ ರೋಬೋಟಿಕ್ ನಾಯಿ ಲೈವ್ ಥರ್ಮಲ್ ವೀಡಿಯೊವನ್ನು ರವಾನಿಸುವುದರ ಜೊತೆಗೆ ಸ್ಥಳದ ಜಿಯೋ-ಟ್ಯಾಗ್ ಮಾಹಿತಿಯನ್ನು ಅಧಿಕಾರಿಗಳಿಗೆ ಕಳುಹಿಸಲಿದೆ. ಇದರಿಂದ ಪರಿಸ್ಥಿತಿಯನ್ನು ತ್ವರಿತವಾಗಿ ಮೇಲ್ವಿಚಾರಣೆ ಮಾಡಿ, ಅಗತ್ಯವಿದ್ದಲ್ಲಿ ತುರ್ತು ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.

ಪಶ್ಚಿಮ ಬಂಗಾಳದ ಆಧಾರ್‌… ಬಾಂಗ್ಲಾದೇಶದ ಅಸಲಿ ಮುಖ!

0

ವಿಜಯಸಾಕ್ಷಿ ಸುದ್ದಿ, ಗದಗ: ಪಶ್ಚಿಮ ಬಂಗಾಳದ ವಿಳಾಸ ಹೊಂದಿರುವ ಆಧಾರ್‌ ಕಾರ್ಡ್‌ ಇಟ್ಟುಕೊಂಡು ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಂಗ್ಲಾದೇಶದ ನಿವಾಸಿಗಳು ಪತ್ತೆಯಾಗಿರುವ ಪ್ರಕರಣ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ದಾಖಲೆಗಳ ಪರಿಶೀಲನೆ ವೇಳೆ ಇಬ್ಬರೂ ಬಾಂಗ್ಲಾದೇಶದವರು ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಭಾರತಕ್ಕೆ ಇವರ ಪ್ರವೇಶ ಹೇಗಾಯಿತು? ಪಶ್ಚಿಮ ಬಂಗಾಳದ ವಿಳಾಸದ ಆಧಾರ್‌ ಕಾರ್ಡ್‌ ಇವರ ಕೈಗೆ ಹೇಗೆ ಬಂತು? ಗದಗಕ್ಕೆ ಇವರನ್ನು ಕರೆತಂದವರು ಯಾರು? ಎಂಬ ಪ್ರಶ್ನೆಗಳು ಇದೀಗ ಪೊಲೀಸರನ್ನು ಕಾಡುತ್ತಿವೆ.

ತಾಲೂಕಿನ ಹರ್ತಿ ಗ್ರಾಮದ ಹೊರವಲಯದಲ್ಲಿ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನೂರಾರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾಮಗಾರಿ ಸ್ಥಳದಲ್ಲಿ ಕಳೆದ ಎರಡು ತಿಂಗಳಿಂದ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ೨೬ ವರ್ಷದ ಸಕೀಬ್‌ ಸಹೀನ್‌ ಹಾಗೂ ೨೨ ವರ್ಷದ ದಿಲಾವರ್‌ ಹುಸೇನ್‌ ಎಂಬ ಇಬ್ಬರನ್ನು ಗದಗ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೂಲಿ ಕಾರ್ಮಿಕರಾಗಿ ಬಂದು ಸಿಕ್ಕಿಬಿದ್ದವರು

ಪಶ್ಚಿಮ ಬಂಗಾಳದಿಂದ ಬಂದಿದ್ದ ಕೂಲಿ ಕಾರ್ಮಿಕರ ತಂಡದೊಂದಿಗೆ ಈ ಇಬ್ಬರು ಗದಗಕ್ಕೆ ಬಂದಿದ್ದರು ಎನ್ನಲಾಗಿದೆ. ಕಳೆದ ಎರಡು ತಿಂಗಳಿಂದ ಹರ್ತಿಯ ಕಾಮಗಾರಿ ಸ್ಥಳದಲ್ಲೇ ಕೆಲಸ ಮಾಡುತ್ತಿದ್ದರು. ಈ ವೇಳೆ ಇವರ ಬಳಿ ಪಶ್ಚಿಮ ಬಂಗಾಳದ ವಿಳಾಸ ಹೊಂದಿರುವ ಆಧಾರ್‌ ಕಾರ್ಡ್‌ಗಳು ಪತ್ತೆಯಾಗಿವೆ.

ಆದರೆ, ಪೊಲೀಸರಿಗೆ ಲಭ್ಯವಾದ ಮಾಹಿತಿಯ ಆಧಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಇಬ್ಬರೂ ಬಾಂಗ್ಲಾದೇಶದ ನಿವಾಸಿಗಳು ಎಂಬುದು ಬೆಳಕಿಗೆ ಬಂದಿದೆ. ಇವರ ಜನ್ಮಸ್ಥಳ ಬಾಂಗ್ಲಾದೇಶ ಎಂದು ದಾಖಲೆಗಳಲ್ಲಿ ನಮೂದಾಗಿರುವುದು ಪೊಲೀಸರ ಅನುಮಾನಕ್ಕೆ ಮತ್ತಷ್ಟು ಬಲ ನೀಡಿದೆ. ಹೀಗಾಗಿ ಇವರ ಬಳಿ ದೊರೆತ ದಾಖಲೆಗಳ ಸತ್ಯಾಸತ್ಯತೆ ಹಾಗೂ ಅವರು ಭಾರತದಲ್ಲಿ ನೆಲೆಸಿರುವ ಹಿನ್ನೆಲೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಧಾರ್‌ ಸಿಕ್ಕಿದ್ದೇಗೆ?

ಬಾಂಗ್ಲಾದೇಶದ ನಿವಾಸಿಗಳಾಗಿದ್ದರೆ ಪಶ್ಚಿಮ ಬಂಗಾಳದ ವಿಳಾಸ ಹೊಂದಿರುವ ಆಧಾರ್‌ ಕಾರ್ಡ್‌ ಇವರ ಕೈಗೆ ಹೇಗೆ ಬಂತು ಎಂಬುದು ತನಿಖೆಯ ಪ್ರಮುಖ ಪ್ರಶ್ನೆಯಾಗಿದೆ. ದಾಖಲೆಗಳು ನಕಲಿಯೇ? ಅಕ್ರಮವಾಗಿ ದಾಖಲೆಗಳಲ್ಲಿ ಬದಲಾವಣೆ ಮಾಡಲಾಗಿದೆಯೇ? ಅಥವಾ ಯಾರಾದರೂ ಇವರಿಗೆ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆಯೇ ಎಂಬ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.

ಇಬ್ಬರೂ ಈ ಹಿಂದೆ ಬೆಂಗಳೂರು, ಮಂಗಳೂರು, ಗಂಗಾವತಿ ಸೇರಿದಂತೆ ರಾಜ್ಯದ ವಿವಿಧೆಡೆ ಕೂಲಿ ಕೆಲಸ ಮಾಡಿದ್ದರೆನ್ನಲಾಗಿದೆ. ಹೀಗಾಗಿ ಅವರು ಈ ಸ್ಥಳಗಳಲ್ಲಿ ಯಾವ ದಾಖಲೆಗಳ ಆಧಾರದಲ್ಲಿ ಕೆಲಸ ಮಾಡಿದರು, ಅವರನ್ನು ಒಂದೊಂದು ಊರಿಗೆ ಕರೆದುಕೊಂಡು ಹೋಗುತ್ತಿದ್ದವರು ಯಾರು, ಅವರೊಂದಿಗೆ ಇನ್ನೂ ಯಾರಾದರೂ ಸಂಪರ್ಕದಲ್ಲಿದ್ದಾರೆಯೇ ಎಂಬುದನ್ನು ಪೊಲೀಸರು ಜಾಲಾಡುತ್ತಿದ್ದಾರೆ.

ಗುತ್ತಿಗೆದಾರರಿಗೂ ಗೊತ್ತಿತ್ತಾ?

ಕಾಮಗಾರಿ ಸ್ಥಳದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಲಾಗಿತ್ತೇ? ಗುತ್ತಿಗೆದಾರರಿಗೆ ಇವರ ಹಿನ್ನೆಲೆ ತಿಳಿದಿತ್ತೇ? ಪಶ್ಚಿಮ ಬಂಗಾಳದ ವಿಳಾಸದ ಆಧಾರ್‌ ಕಾರ್ಡ್‌ ಆಧರಿಸಿಯೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತೇ ಎಂಬ ಪ್ರಶ್ನೆಗಳಿಗೂ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.

ಇದು ಕೇವಲ ಇಬ್ಬರು ಅಕ್ರಮ ವಲಸಿಗರ ಪತ್ತೆ ಪ್ರಕರಣವೇ ಅಥವಾ ಇದರ ಹಿಂದೆ ದೊಡ್ಡ ಜಾಲವಿದೆಯೇ ಎಂಬ ಅನುಮಾನವೂ ಮೂಡಿದೆ. ಇಬ್ಬರು ರಾಜ್ಯದ ವಿವಿಧೆಡೆ ಕೆಲಸ ಮಾಡಿರುವ ಮಾಹಿತಿ ಹಿನ್ನೆಲೆಯಲ್ಲಿ, ಇವರ ಸಂಪರ್ಕದಲ್ಲಿದ್ದವರು ಹಾಗೂ ದಾಖಲೆಗಳ ಸೃಷ್ಟಿಗೆ ನೆರವಾದವರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಇವರ ಹಿಂದೆ ಇನ್ನಾರಾದರೂ ಇದ್ದಾರೆಯೇ? ಅಕ್ರಮ ವಲಸಿಗರಿಗೆ ದಾಖಲೆಗಳನ್ನು ಸಿದ್ಧಪಡಿಸುವ ಜಾಲವಿದೆಯೇ? ಇನ್ನೂ ಹೆಚ್ಚಿನ ಮಂದಿ ಇದೇ ರೀತಿಯಲ್ಲಿ ರಾಜ್ಯದಲ್ಲಿ ನೆಲೆಸಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ತನಿಖೆ ಮುಂದುವರಿದಂತೆ ಉತ್ತರ ಸಿಗಬೇಕಿದೆ.

ಭಾರತ ಪ್ರವೇಶದಿಂದ ದಾಖಲೆಗಳವರೆಗೆ ಜಾಡು

ಹರ್ತಿಯಲ್ಲಿ ಪತ್ತೆಯಾದ ಇಬ್ಬರು ಬಾಂಗ್ಲಾದೇಶದ ನಿವಾಸಿಗಳ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಭಾರತಕ್ಕೆ ಅವರು ಯಾವ ಮಾರ್ಗದಿಂದ ಪ್ರವೇಶಿಸಿದರು, ಗದಗಕ್ಕೆ ಕರೆತಂದವರು ಯಾರು, ಪಶ್ಚಿಮ ಬಂಗಾಳದ ವಿಳಾಸದ ಆಧಾರ್‌ ಕಾರ್ಡ್‌ ಹೇಗೆ ದೊರೆಯಿತು ಹಾಗೂ ರಾಜ್ಯದ ವಿವಿಧೆಡೆ ಅವರು ಹೇಗೆ ಕೆಲಸ ಮಾಡಿದರು ಎಂಬುದರ ಸುತ್ತ ತನಿಖೆಯ ಜಾಡು ಸಾಗುತ್ತಿದೆ.

“ಇಬ್ಬರ ಹಿನ್ನೆಲೆ, ಭಾರತಕ್ಕೆ ಪ್ರವೇಶಿಸಿದ ರೀತಿ, ಅವರ ಬಳಿ ದೊರೆತ ದಾಖಲೆಗಳು ಹಾಗೂ ಅವರು ಈ ಹಿಂದೆ ಕೆಲಸ ಮಾಡಿರುವ ಸ್ಥಳಗಳ ಕುರಿತು ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.”

ರೋಹನ್‌ ಜಗದೀಶ್‌, ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಶ್ರಾವಣದ ಸೊಬಗಿನಲ್ಲಿ ಕಂಗೊಳಿಸಿದ ವರಮಹಾಲಕ್ಷ್ಮೀ ಆರಾಧನೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರಾವಣ ಮಾಸದ ಎರಡನೇ ಶುಕ್ರವಾರದ ಅಂಗವಾಗಿ ನರೇಗಲ್ಲ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವರಮಹಾಲಕ್ಷ್ಮೀ ಪೂಜೆ ಭಕ್ತಿಭಾವ ಹಾಗೂ ಸಂಭ್ರಮದಿಂದ ನೆರವೇರಿತು. ಮನೆಮನೆಗಳಲ್ಲಿ ಲಕ್ಷ್ಮೀ ದೇವಿಯ ಆರಾಧನೆ, ಹೂವಿನ ಅಲಂಕಾರ, ದೀಪಗಳ ಬೆಳಕು, ಮಂಗಳಗೀತೆ ಹಾಗೂ ಸಿಹಿ-ಸವಿಯೂಟದ ವಾತಾವರಣ ಕಳೆಗಟ್ಟಿತ್ತು.

ಕುಟುಂಬದ ಸುಖ-ಶಾಂತಿ, ಆರೋಗ್ಯ, ಆಯುಷ್ಯ, ಐಶ್ವರ್ಯ ಹಾಗೂ ಸಮೃದ್ಧಿಗಾಗಿ ಮಹಿಳೆಯರು ವರಮಹಾಲಕ್ಷ್ಮೀ ವ್ರತ ಆಚರಿಸಿದರು. ಪೂಜೆಗೆ ಮುನ್ನವೇ ಹೂವು, ಹಣ್ಣು, ತೆಂಗಿನಕಾಯಿ, ಬಾಳೆದಿಂಡು, ಮಾವಿನ ತೋರಣ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡಿದ್ದರು.

ಶುಕ್ರವಾರ ಬೆಳಗ್ಗೆಯೇ ಮನೆಗಳನ್ನು ಸ್ವಚ್ಛಗೊಳಿಸಿ, ಬಾಗಿಲಿಗೆ ಮಾವಿನ ತೋರಣ ಹಾಗೂ ಬಾಳೆಕಂಬಗಳನ್ನು ಕಟ್ಟಿ, ರಂಗೋಲಿ ಬಿಡಿಸಿ ಹಬ್ಬದ ವಾತಾವರಣ ನಿರ್ಮಿಸಿದರು. ಕಳಶ ಪ್ರತಿಷ್ಠಾಪಿಸಿ ಅರಿಶಿಣ, ಕುಂಕುಮ ಹಾಗೂ ಹೂವುಗಳಿಂದ ಅಲಂಕರಿಸಿ, ಲಕ್ಷ್ಮೀ ದೇವಿಯ ಮೂರ್ತಿಗೆ ವಿವಿಧ ಆಭರಣ ಮತ್ತು ಹೂವಿನ ಅಲಂಕಾರ ಮಾಡಿದರು.

ಬಾಳೆಕಂಬ, ಹೂವಿನ ಹಾರ, ಬಣ್ಣಬಣ್ಣದ ತೋರಣ ಹಾಗೂ ದೀಪಗಳಿಂದ ಸಿಂಗರಿಸಿದ ಪೂಜಾ ಮಂಟಪಗಳು ಕಣ್ಮನ ಸೆಳೆದವು. ಹಣ್ಣು, ತೆಂಗಿನಕಾಯಿ ಹಾಗೂ ವಿವಿಧ ನೈವೇದ್ಯಗಳನ್ನು ಅರ್ಪಿಸಿ ಧೂಪ-ದೀಪ ಬೆಳಗಿಸಿ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.

ಗೃಹಿಣಿಯರು ಹೊಸ ಸೀರೆ ಧರಿಸಿ ಸಾಂಪ್ರದಾಯಿಕ ಅಲಂಕಾರದಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿದರು. ಗೋಧಿಹುಗ್ಗಿ, ಕರ್ಜಿಕಾಯಿ, ಕಡುಬು, ಅನ್ನ-ಸಾರು ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಅರ್ಪಿಸಿ ಪ್ರಸಾದ ವಿತರಿಸಿದರು.

ಸಂಜೆಯಾಗುತ್ತಿದ್ದಂತೆ ಮಹಿಳೆಯರು ಅಕ್ಕಪಕ್ಕದ ಮನೆಗಳಿಗೆ ತೆರಳಿ ಪರಸ್ಪರ ಅರಿಶಿಣ-ಕುಂಕುಮ, ಹೂವು, ತಾಂಬೂಲ ಹಾಗೂ ಸೌಭಾಗ್ಯದ ಸಾಮಗ್ರಿಗಳನ್ನು ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಇದರಿಂದ ಮನೆಮನೆಗಳಲ್ಲಿ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಯಿತು.

ವರಮಹಾಲಕ್ಷ್ಮೀ ಹಬ್ಬವು ಧಾರ್ಮಿಕ ಆಚರಣೆಯ ಜತೆಗೆ ಕುಟುಂಬ ಸದಸ್ಯರನ್ನು ಒಗ್ಗೂಡಿಸುವ ಹಾಗೂ ಮಹಿಳೆಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಾಂಸ್ಕೃತಿಕ ಹಬ್ಬವಾಗಿದೆ. ಶ್ರಾವಣದ ಹಸಿರು ಸೊಬಗಿನ ನಡುವೆ ದೀಪದ ಬೆಳಕು, ಹೂವಿನ ಪರಿಮಳ ಹಾಗೂ ಭಕ್ತಿಯ ವಾತಾವರಣ ಎಲ್ಲೆಡೆ ಮನೆಮಾಡಿತ್ತು.

ಕುಟುಂಬದ ಎಲ್ಲ ಸದಸ್ಯರಿಗೆ ಆರೋಗ್ಯ, ಆಯುಷ್ಯ, ಐಶ್ವರ್ಯ ಹಾಗೂ ನೆಮ್ಮದಿ ದೊರೆಯಲಿ, ಎಲ್ಲರ ಇಷ್ಟಾರ್ಥಗಳು ಈಡೇರಲಿ ಎಂದು ಮಹಿಳೆಯರು ಲಕ್ಷ್ಮೀ ದೇವಿಯಲ್ಲಿ ಪ್ರಾರ್ಥಿಸಿದರು.

ಸಂಭ್ರಮದಲ್ಲಿ ಸ್ನೇಹಾ ರಾಠೋಡ್, ಜ್ಯೋತಿ ವಂಕಲಕುಂಟಿ, ವಿಜಯಲಕ್ಷ್ಮಿ ಹಿರೇಮಠ, ಈರಮ್ಮ ಹುಲ್ಲೂರ, ಸವಿತಾ ಬೇವಿನಕಟ್ಟಿ, ಶೋಭಾ, ಐಶ್ವರ್ಯ, ವಿದ್ಯಾ, ಚನ್ನಮ್ಮ, ಲಕ್ಷ್ಮೀ ಕಲ್ಲೂರ, ಗಂಗಮ್ಮ ಕಲ್ಲೂರ, ರಶ್ಮಿ ಕರಮುಡಿ, ಸಾವಿತ್ರಿ ಕಡೆತೋಟದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನರಗುಂದ ವಿಧಾನಸಭಾ ಕ್ಷೇತ್ರದ ವತಿಯಿಂದ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಧರಣಿ ಹಾಗೂ ಪ್ರತಿಭಟನೆ ನಡೆಯಿತು.

ನರಗುಂದ, ಹೊಳೆಆಲೂರು ಹಾಗೂ ಲಕ್ಕುಂಡಿ ಮಂಡಲಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು, ಪ್ರಕರಣಕ್ಕೆ ಸಂಬಂಧಿಸಿದ ಸಚಿವ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಕ್ಷೇತ್ರದ ಯುವ ಮುಖಂಡ ಉಮೇಶಗೌಡ ಪಾಟೀಲ, ಮಂಡಲ ಅಧ್ಯಕ್ಷರಾದ ನಾಗನಗೌಡ ತಿಮ್ಮನಗೌಡ್ರ, ಸೋಮಶೇಖರಪ್ಪ ಚರೇದ, ಪ್ರಕಾಶ ಅರಹುಣಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ಕೊರಿಗಣ್ಣವರ, ಸುರೇಶ ಗಾಣಿಗೇರ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಎಂ.ಎಸ್. ಕರೀಗೌಡ್ರ, ವಸಂತ ಮೇಟಿ, ಈಶಪ್ಪ ನಾಯ್ಕರ, ಪ್ರದೀಪ ನವಲಗುಂದ, ರವಿಕಾಂತ ಅಂಗಡಿ, ಮುತ್ತಣ್ಣ ಜಂಗಣ್ಣವರ, ಚಂದ್ರು ದಂಡಿನ, ಅಶೋಕ ಹೆಬ್ಬಳ್ಳಿ, ಮಹೇಶ ಮುಸ್ಕಿನಭಾವಿ, ಅನೀಲ ದರಿಯಣ್ಣವರ, ಪ್ರವೀಣ ಯಲಿಗಾರ, ಸೋಮನಗೌಡ ಹುಡೇದಮನಿ, ಶರಣು ಬರಶೆಟ್ಟ, ಶಿವಕುಮಾರ ನೀಲಗುಂದ, ಶಶಿಧರಗೌಡ ಪಾಟೀಲ, ಬಸವರಾಜ ಚಲವಾದಿ, ಸುರೇಶ ಚಲವಾದಿ, ಅನೀಲ ಅಬ್ಬಿಗೇರಿ, ಸಂತೋಷ ಅಕ್ಕಿ, ಪ್ರಶಾಂತ ನಾಯ್ಕರ, ವಾಯ್.ಪಿ. ಅಡ್ನೂರ, ಡಿ.ವಾಯ್. ಹುನುಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನರಗುಂದ ವಿಧಾನಸಭಾ ಕ್ಷೇತ್ರದ ವತಿಯಿಂದ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಧರಣಿ ಹಾಗೂ ಪ್ರತಿಭಟನೆ ನಡೆಯಿತು.

ನರಗುಂದ, ಹೊಳೆಆಲೂರು ಹಾಗೂ ಲಕ್ಕುಂಡಿ ಮಂಡಲಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು, ಪ್ರಕರಣಕ್ಕೆ ಸಂಬಂಧಿಸಿದ ಸಚಿವ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಕ್ಷೇತ್ರದ ಯುವ ಮುಖಂಡ ಉಮೇಶಗೌಡ ಪಾಟೀಲ, ಮಂಡಲ ಅಧ್ಯಕ್ಷರಾದ ನಾಗನಗೌಡ ತಿಮ್ಮನಗೌಡ್ರ, ಸೋಮಶೇಖರಪ್ಪ ಚರೇದ, ಪ್ರಕಾಶ ಅರಹುಣಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ಕೊರಿಗಣ್ಣವರ, ಸುರೇಶ ಗಾಣಿಗೇರ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಎಂ.ಎಸ್. ಕರೀಗೌಡ್ರ, ವಸಂತ ಮೇಟಿ, ಈಶಪ್ಪ ನಾಯ್ಕರ, ಪ್ರದೀಪ ನವಲಗುಂದ, ರವಿಕಾಂತ ಅಂಗಡಿ, ಮುತ್ತಣ್ಣ ಜಂಗಣ್ಣವರ, ಚಂದ್ರು ದಂಡಿನ, ಅಶೋಕ ಹೆಬ್ಬಳ್ಳಿ, ಮಹೇಶ ಮುಸ್ಕಿನಭಾವಿ, ಅನೀಲ ದರಿಯಣ್ಣವರ, ಪ್ರವೀಣ ಯಲಿಗಾರ, ಸೋಮನಗೌಡ ಹುಡೇದಮನಿ, ಶರಣು ಬರಶೆಟ್ಟ, ಶಿವಕುಮಾರ ನೀಲಗುಂದ, ಶಶಿಧರಗೌಡ ಪಾಟೀಲ, ಬಸವರಾಜ ಚಲವಾದಿ, ಸುರೇಶ ಚಲವಾದಿ, ಅನೀಲ ಅಬ್ಬಿಗೇರಿ, ಸಂತೋಷ ಅಕ್ಕಿ, ಪ್ರಶಾಂತ ನಾಯ್ಕರ, ವಾಯ್.ಪಿ. ಅಡ್ನೂರ, ಡಿ.ವಾಯ್. ಹುನುಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

೫೦ ಕೆ.ಜಿ. ಗೊಬ್ಬರ ಚೀಲ ಹೊತ್ತು ೧೫ ಕಿ.ಮೀ. ನಡೆದ ರಾಮಗಿರಿಯ ಗಿರೀಶ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಾಗರ ಪಂಚಮಿ ಹಬ್ಬದ ಅಂಗವಾಗಿ ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಯುವಕರಿಗಾಗಿ ಆಯೋಜಿಸಿದ್ದ ೫೦ ಕೆ.ಜಿ. ತೂಕದ ರಸಗೊಬ್ಬರ ಚೀಲ ಹೊತ್ತು ನಡೆಯುವ ವಿಶಿಷ್ಟ ಸ್ಪರ್ಧೆಯಲ್ಲಿ ಗಿರೀಶ ಶೆಟ್ಟೆಪ್ಪನವರ ಗಮನ ಸೆಳೆದಿದ್ದಾರೆ.

ಹೆಚ್ಚು ದೂರ ನಡೆಯುವವರಿಗೆ ಬಹುಮಾನ ಘೋಷಿಸಲಾಗಿದ್ದ ಸ್ಪರ್ಧೆಯಲ್ಲಿ ಗಿರೀಶ ಅವರು ೫೦ ಕೆ.ಜಿ. ತೂಕದ ರಸಗೊಬ್ಬರ ಚೀಲವನ್ನು ಹೆಗಲ ಮೇಲೆ ಹೊತ್ತು, ಹುಬ್ಬಳ್ಳಿ–ಲಕ್ಷ್ಮೇಶ್ವರ ರಸ್ತೆಯಲ್ಲಿ ಎಲ್ಲಿಯೂ ಚೀಲವನ್ನು ಕೆಳಗಿಡದೆ ಬರೋಬ್ಬರಿ ೧೫ ಕಿ.ಮೀ. ನಡೆದು ಪ್ರಥಮ ಸ್ಥಾನ ಪಡೆದರು. ಮಹಾಂತೇಶ ಮೈಲಾರೆಪ್ಪ ಬಳ್ಕೊಳ್ಳಿ ಅವರು ೧೦ ಕಿ.ಮೀ. ನಡೆದು ದ್ವಿತೀಯ ಸ್ಥಾನ ಗಳಿಸಿದರು.

ಬುಧವಾರ ವಿಜೇತರನ್ನು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಕರು ಮೊಬೈಲ್‌ ಗೀಳು ಹಾಗೂ ದುಶ್ಚಟಗಳಿಂದ ದೂರವಿರಬೇಕು. ಹಬ್ಬಗಳ ಸಂದರ್ಭದಲ್ಲಿ ಹಿರಿಯರ ಕಾಲದಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳು ಹಾಗೂ ಹವ್ಯಾಸಗಳನ್ನು ಮುಂದುವರಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ರಾಮಣ್ಣ ಜಿಡ್ಡಿಮನಿ, ಪರಸಪ್ಪ ಹುಣಸಿಮರದ, ಮಾತಾಂಡಪ್ಪ ಗಂಜಿಗಟ್ಟಿ, ರಾಜೇಸಾಬ್ ಅಣ್ಣಿಗೇರಿ, ಮಲ್ಲೇಶ ಬೇವಿನಮರದ, ಶಿವನಪ್ಪ ಜುಲ್ಸಿ, ನೀಲಪ್ಪ ಬೇವಿನಮರದ, ಕೋಟೆಪ್ಪ ಗಂಜಿಗಟ್ಟಿ, ಶಿವಣ್ಣ ಬಾಲಣ್ಣವರ, ಖಾಸೀಂಸಾಬ್ ತೆಗ್ಗಿನಮನಿ, ಕಲ್ಲಪ್ಪ ಮಲ್ಲಾಡದ, ಬಸಪ್ಪ ಸಿಂಗಣ್ಣನವರ ಹಾಗೂ ವಿನಾಯಕ ಮಡಿವಾಳರ ಇದ್ದರು.

ಹಬ್ಬಗಳು ಸೌಹಾರ್ದತೆಯ ಸಂಕೇತವಾಗಲಿ: ಡಿವೈಎಸ್ಪಿ ಪ್ರಭುಗೌಡ

0

ವಿಜಯಸಾಕ್ಷಿ ಸುದ್ದಿ, ಡಂಬಳ: ದೇಶದ ಸರ್ವಜನಾಂಗವು ಸುಂದರ ನಂದನವನದ ತೋಟವಿದ್ದಂತೆ. ಪ್ರತಿಯೊಂದು ಹಬ್ಬವನ್ನು ಅರ್ಥಪೂರ್ಣವಾಗಿ, ಸಂತೋಷ ಹಾಗೂ ಸೌಹಾರ್ದತೆಯಿಂದ ಆಚರಿಸಿದಾಗ ಹಬ್ಬಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ನರಗುಂದ ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ ಹೇಳಿದರು.

ಡಂಬಳ ಗ್ರಾಮದ ಹೊರಠಾಣೆಯಲ್ಲಿ ಗದಗ ಜಿಲ್ಲಾ ಪೊಲೀಸ್ ಹಾಗೂ ನರಗುಂದ ಉಪವಿಭಾಗದ ಮುಂಡರಗಿ ಪೊಲೀಸ್ ಠಾಣೆಗಳ ಸಂಯುಕ್ತ ಆಶ್ರಯದಲ್ಲಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಬ್ಬಗಳನ್ನು ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಸಹಕಾರದಿಂದ ಆಚರಿಸಬೇಕು. ಯಾವುದೇ ಕಾರಣಕ್ಕೂ ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡುವಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದರು.

ಸಿಪಿಐ ಅಯ್ಯನಗೌಡ ಪಾಟೀಲ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸಬೇಕು. ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮರಿಯಪ್ಪ ಸಿದ್ಧಣ್ಣವರ ಮಾತನಾಡಿ, ಲಿಂ. ಡಾ. ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳು ಜಾತಿ, ಮತ, ಪಂಥದ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಬದುಕುವ ಸಂದೇಶ ನೀಡಿದ್ದಾರೆ. ಅದರಂತೆ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸುತ್ತೇವೆ ಎಂದರು.

ಅಂಜುಮನ್ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ ಮಾತನಾಡಿ, ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ರೈತರು ಹಾಗೂ ಕಾರ್ಮಿಕ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಬೀಳಬಾರದು ಎಂಬ ಉದ್ದೇಶದಿಂದ ಈದ್ ಮಿಲಾದ್ ಹಬ್ಬವನ್ನು ಆಡಂಬರವಿಲ್ಲದೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಡಂಬಳ ಹೋಬಳಿಯ ೨೪ ಗ್ರಾಮಗಳಲ್ಲಿ ಹಬ್ಬದ ಸಂದರ್ಭದಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಬೋರ್‌ವೆಲ್‌ಗಳ ಕೇಬಲ್ ಹಾಗೂ ರೈತರ ಪರಿಕರಗಳ ಕಳ್ಳತನ ತಡೆಯಲು ಮತ್ತು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದರು.

ಸಭೆಯಲ್ಲಿ ಮಹೇಶ ಗಡಗಿ, ಕೆ.ಕೆ. ಬಂಡಿ, ಯುವ ಮುಖಂಡ ಬಸವರಡ್ಡಿ ಬಂಡಿಹಾಳ, ಮಲ್ಲೇಶ ಮಠದ, ಕುಬೇರಪ್ಪ ಕೊಳ್ಳಾರ, ಜಾಕೀರ ಮೂಲಿಮನಿ, ಪ್ರಜ್ವಲ್ ಮಾನೆ, ಶಿವಾನಂದ ಬಂಡಿ, ಲೆಂಕಪ್ಪ ಕದಡಿ, ಮುತ್ತು ಭೋವಿ, ಮಹೇಶ ಬಿಸನಳ್ಳಿ, ಮಲ್ಲೇಶ ಸಂಜಿವಣ್ಣನವರ, ಗೋವಿಂದಪ್ಪ ಆನಿ ಸೇರಿದಂತೆ ಪೊಲೀಸ್ ಸಿಬ್ಬಂದಿ, ಗ್ರಾಮದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.

ಬೆಳೆ ಹಾನಿಗೆ ರೈತರ ಕೈಹಿಡಿಯಲು ಜಿಲ್ಲಾಡಳಿತ ಸಜ್ಜು

0

ವಿಜಯಸಾಕ್ಷಿ ಸುದ್ದಿ, ಗದಗ: ಮುಂಗಾರು ಹಂಗಾಮಿನಲ್ಲಿ ಮಳೆಯ ವ್ಯತ್ಯಯ ಹಾಗೂ ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ‘ಮಧ್ಯ ಋತು ಸಂಕಷ್ಟ’ ನಿಯಮ ಜಾರಿಗೊಳಿಸುವ ಕುರಿತು ಪರಿಶೀಲನೆ ನಡೆಸಲಾಗಿದ್ದು, ಬೆಳೆ ನಷ್ಟದ ನಿಖರ ಅಂದಾಜಿಗಾಗಿ ಉಪಗ್ರಹ ದತ್ತಾಂಶ ಹಾಗೂ ಜಂಟಿ ಕ್ಷೇತ್ರ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮುಂಗಾರು ಹಂಗಾಮಿನ ಬೆಳೆಗಳಿಗೆ ‘ಮಧ್ಯ ಋತು ಸಂಕಷ್ಟ’ ಜಾರಿ ಕುರಿತು ಜಿಲ್ಲಾ ಮಟ್ಟದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿದರು.

ಪ್ರಸಕ್ತ ಮುಂಗಾರು ಋತುವಿನಲ್ಲಿ ಪ್ರಕೃತಿ ವಿಕೋಪ ಹಾಗೂ ಬರಗಾಲದಂತಹ ಹವಾಮಾನ ಪರಿಸ್ಥಿತಿಯಿಂದ ರೈತರ ಬೆಳೆಗಳಿಗೆ ತೀವ್ರ ಹಾನಿಯಾಗಿರುವ ಹಿನ್ನೆಲೆಯಲ್ಲಿ, ರೈತರಿಗೆ ಶೀಘ್ರ ಆರ್ಥಿಕ ನೆರವು ಕಲ್ಪಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ‘ಮಧ್ಯ ಋತು ಸಂಕಷ್ಟ’ ನಿಯಮದಡಿ ಪರಿಹಾರ ಕಲ್ಪಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದರು.

ಬೆಳೆಗಳ ಬೆಳವಣಿಗೆ ಹಾಗೂ ತೇವಾಂಶದ ಕೊರತೆಯನ್ನು ನಿಖರವಾಗಿ ವಿಶ್ಲೇಷಿಸಲು ಎನ್‌ಡಿವಿಐ, ಎನ್‌ಡಿಡಬ್ಲ್ಯುಐ ಹಾಗೂ ಕೆಎಸ್‌ಎನ್‌ಎಂಡಿಸಿ ಮಳೆ ಆಧಾರಿತ ಉಪಗ್ರಹ ದತ್ತಾಂಶ ಬಳಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿಮಾ ಕಂಪನಿ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ಬಾಧಿತ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರತ್ಯಕ್ಷ ಪರಿಶೀಲನೆ ನಡೆಸಿ ಶೀಘ್ರ ವರದಿ ಸಲ್ಲಿಸಲಿದೆ. ಬೆಳೆ ಕೊಯ್ಲು ಮುಕ್ತಾಯಗೊಳ್ಳುವ ಮುನ್ನವೇ ‘ಮಧ್ಯ ಋತು ಸಂಕಷ್ಟ’ ಪ್ರಕ್ರಿಯೆ ಪೂರ್ಣಗೊಳಿಸಿ ರೈತರಿಗೆ ನ್ಯಾಯಯುತ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಪ್ರಸ್ತುತ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ. ಎನ್‌ಡಿವಿಐ ಹಾಗೂ ತೇವಾಂಶ ಸೂಚ್ಯಂಕ ಆಧಾರಿತ ಮಾಹಿತಿಯನ್ನು ಪರಿಶೀಲಿಸಿ, ‘ಮಧ್ಯ ಋತು ಸಂಕಷ್ಟ’ ಮಾರ್ಗಸೂಚಿಯಂತೆ ಸಕ್ರಿಯಗೊಳಿಸಬಹುದಾದ ಬೆಳೆ ವಿಮಾ ಘಟಕಗಳನ್ನು ಗುರುತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಕಂದಾಯ ಹಾಗೂ ವಿಮಾ ಕಂಪನಿಗಳೊಂದಿಗೆ ಸೇರಿ ಬೆಳೆ ಹಾನಿಯ ಪ್ರಮಾಣವನ್ನು ಸಮರ್ಪಕವಾಗಿ ಸಮೀಕ್ಷೆ ನಡೆಸಲಿದೆ. ಅರ್ಹ ರೈತರಿಗೆ ಯೋಜನೆಯ ಸೌಲಭ್ಯ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮುಂಗಾರು ಬೆಳೆಗಳ ಪ್ರಸ್ತುತ ಸ್ಥಿತಿಗತಿ, ಬೆಳೆ ಹಾನಿಯ ಪ್ರಮಾಣ ಹಾಗೂ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ತಕ್ಷಣದ ಮಧ್ಯಂತರ ಪರಿಹಾರ ಒದಗಿಸುವ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಟ್ಟದ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಕೆಎಸ್‌ಎನ್‌ಎಂಡಿಸಿ ಪ್ರತಿನಿಧಿಗಳು ಹಾಗೂ ವಿಮಾ ಕಂಪನಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

“ಮಳೆ ಅಭಾವ ಅಥವಾ ದೀರ್ಘಕಾಲದ ಒಣಹವೆಯಿಂದ ಶೇ. ೫೦ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ ಸಾಧ್ಯತೆ ಇರುವ ಪ್ರದೇಶಗಳನ್ನು ನಿಖರವಾಗಿ ಗುರುತಿಸಬೇಕು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಮಾರ್ಗಸೂಚಿಯಂತೆ ಅರ್ಹ ರೈತರಿಗೆ ಶೇ. ೨೫ರಷ್ಟು ಮುಂಗಡ ಮಧ್ಯಂತರ ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಹಾಗೂ ವಿಮಾ ಸಂಸ್ಥೆಗಳು ತಕ್ಷಣ ಜಂಟಿ ಕ್ಷೇತ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು.”

ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

“ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಯ ಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಯಾವುದೇ ಅರ್ಹ ರೈತರು ಯೋಜನೆಯ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು. ನೋಂದಾಯಿತ ಅರ್ಹ ರೈತರಿಗೆ ನಿಯಮಾನುಸಾರ ವಿಮಾ ಸೌಲಭ್ಯ ದೊರಕಿಸಲು ಇಲಾಖೆ ಬದ್ಧವಾಗಿದೆ.”

ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕಿ