Home Blog

ಹಜ್ ಯಾತ್ರೆಯ ಆಸೆ ವ್ಯಕ್ತಪಡಿಸಿದ ಸಚಿವ ರಾಯರೆಡ್ಡಿ: ಭಿಕ್ಷಾಟನೆಗಿಳಿದ ಹಿಂದೂ ಕಾರ್ಯಕರ್ತರು!

0

ಗದಗ: ಹಜ್ ಯಾತ್ರೆಗೆ ತೆರಳುವ ಆಸೆ ವ್ಯಕ್ತಪಡಿಸಿದ್ದ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಖಂಡಿಸಿ ಹಿಂದೂ ಕಾರ್ಯಕರ್ತರು ಗದಗದಲ್ಲಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದ್ದಾರೆ.

ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಶಿವರಾಮಕೃಷ್ಣ ಸೇವಾ ಸಮಿತಿ ವತಿಯಿಂದ ಭಿಕ್ಷಾಟನೆ ನಡೆಸಿ, ರಾಯರೆಡ್ಡಿ ಅವರ ಹಜ್ ಯಾತ್ರೆಗೆ ಹಣ ಸಂಗ್ರಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಮಾರುಕಟ್ಟೆ ಪ್ರದೇಶದ ವಿವಿಧ ಅಂಗಡಿಗಳಿಗೆ ತೆರಳಿ ಹಣ ಸಂಗ್ರಹಿಸಿದರು. ಸಚಿವ ಬಸವರಾಜ ರಾಯರೆಡ್ಡಿ ಅವರು ಹಜ್ ಯಾತ್ರೆಗೆ ಹೋಗುವ ಆಸೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಅವರ ಯಾತ್ರೆಗೆ ಹಣ ಹೊಂದಿಸುವ ಉದ್ದೇಶದಿಂದ ಈ ರೀತಿಯ ಬಿಕ್ಷಾಟನೆ ನಡೆಸುತ್ತಿದ್ದೇವೆ ಎಂದು ಕಾರ್ಯಕರ್ತರು ವ್ಯಂಗ್ಯವಾಗಿ ಪ್ರತಿಭಟನೆ ನಡೆಸಿದರು.

ಕೊಪ್ಪಳ ಜಿಲ್ಲೆಯಲ್ಲಿ ನಡೆದ ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಅವರು ಹಜ್ ಯಾತ್ರೆಗೆ ತೆರಳುವ ಕುರಿತು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಸಚಿವರ ಈ ಹೇಳಿಕೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಗದಗದಲ್ಲೂ ಅದರ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಮುಸ್ಲಿಂ ಓಲೈಕೆಯ ಭರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಚಿವ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಚಿವ ಬಸವರಾಜ ರಾಯರೆಡ್ಡಿ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ರಾಯರೆಡ್ಡಿ ಅವರು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು, ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ವೇಳೆ ಶಿವರಾಮಕೃಷ್ಣ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದು, ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಾಲಾಕೋಟ್ ದಾಳಿ ಹೀರೋ ಅಭಿನಂದನ್ ವರ್ಧಮಾನ್ʼಗೆ ಹೊಸ ಜವಾಬ್ದಾರಿ; ಈಗ FLY91 ಏರ್ʼಲೈನ್ಸ್ ಪೈಲಟ್!

0

ನವದೆಹಲಿ: ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆ ವೇಳೆ ಮಿಗ್-21 ಸಮೇತ ಶತ್ರು ರಾಷ್ಟ್ರದ ಗಡಿಯೊಳಗೆ ನುಗ್ಗಿ ಪಾಕಿಸ್ತಾನ ವಾಯುಪಡೆಯ ವಿಮಾನ ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್ ಹಾಗೂ ವೀರಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್ ಇದೀಗ ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ ಫ್ಲೈ91ಗೆ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ.

ಸದ್ಯ ಅವರು ಗೋವಾ ಮತ್ತು ಹೈದರಾಬಾದ್ ಮಾರ್ಗದಲ್ಲಿ ಎಟಿಆರ್ ವಿಮಾನ ಸಂಚರಿಸುವ ಕುರಿತು ತರಬೇತಿಯಲ್ಲಿ ನಿರತರಾಗಿದ್ದು, ತರಬೇತಿ ಪೂರ್ಣಗೊಂಡ ಬಳಿಕ ವಿಮಾನ ಸಂಚಾರ ನಡೆಸಲಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಅಭಿನಂದನ್ ಅವರು 2026ರ ಆಗಸ್ಟ್‌ನಲ್ಲಿ ಫ್ಲೈ91 ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ.

ಅಭಿನಂದನ್ ವರ್ಧಮಾನ್ ಅವರು 2019ರ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ವೈಮಾನಿಕ ಸಂಘರ್ಷದ ಬಳಿಕ ದೇಶಾದ್ಯಂತ ಅತ್ಯಂತ ಪರಿಚಿತ ಮುಖವಾಗಿ ಗುರುತಿಸಿಕೊಂಡಿದ್ದರು. ಅಭಿನಂದನ್ ಭಾಗವಹಿಸಿದ್ದ ಈ ವೈಮಾನಿಕ ಕಾಳಗ, ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಯೋತ್ಪಾದಕ ಗುರಿಗಳ ಮೇಲೆ ವಾಯುದಾಳಿ ನಡೆಸಿದ ಒಂದು ದಿನದ ಬಳಿಕ ನಡೆದಿತ್ತು. 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಬಾಲಾಕೋಟ್‌ನಲ್ಲಿ ವಾಯುದಾಳಿ ನಡೆಸಿತ್ತು.

2019ರ ಫೆಬ್ರವರಿ 27ರಂದು ಪಾಕಿಸ್ತಾನದ ವಿಮಾನಗಳೊಂದಿಗೆ ನಡೆದ ವೈಮಾನಿಕ ಕಾಳಗದಲ್ಲಿ ಮಿಗ್-21 ಬೈಸನ್ ಯುದ್ಧವಿಮಾನ ಹಾರಿಸುತ್ತಿದ್ದ ಅಭಿನಂದನ್, ಪಾಕಿಸ್ತಾನದ ಒಂದು ಯುದ್ಧವಿಮಾನ ಹೊಡೆದುರುಳಿಸಿದ್ದರು. ಈ ವೇಳೆ ಅವರ ವಿಮಾನಕ್ಕೂ ಕ್ಷಿಪಣಿ ಅಪ್ಪಳಿಸಿ ಹಾನಿಗೊಳಗಾಗಿದ್ದರಿಂದ ಅಭಿನಂದನ್ ಪ್ಯಾರಾಶೂಟ್ ಮೂಲಕ ಹೊರಗೆ ಜಿಗಿಯಬೇಕಾಯಿತು. ಬಳಿಕ ಪಾಕಿಸ್ತಾನದ ಭೂಪ್ರದೇಶದಲ್ಲಿ ಇಳಿದ ಅವರು ಅಲ್ಲಿನ ಸೇನೆಯ ವಶಕ್ಕೆ ಸಿಲುಕಿದ್ದರು. ಸುಮಾರು 60 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ಅವರನ್ನು 2019ರ ಮಾರ್ಚ್ 1ರಂದು ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಯಿತು.

2019ರ ವೈಮಾನಿಕ ಕಾರ್ಯಾಚರಣೆಯಲ್ಲಿ ತೋರಿದ ಶೌರ್ಯ ಮತ್ತು ಕರ್ತವ್ಯಪ್ರಜ್ಞೆಗಾಗಿ ಅಭಿನಂದನ್ ವರ್ಧಮಾನ್ ಅವರಿಗೆ 2021ರಲ್ಲಿ ವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗೋವಾ ಮೂಲದ ಫ್ಲೈ91 ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾಗಿದ್ದು, 2024ರ ಮಾರ್ಚ್‌ನಲ್ಲಿ ವಾಣಿಜ್ಯ ವಿಮಾನಯಾನ ಸೇವೆ ಆರಂಭಿಸಿತು. ಸಂಸ್ಥೆ ಪ್ರಸ್ತುತ ಆರು ಎಟಿಆರ್ 72-600 ವಿಮಾನಗಳನ್ನು ಹೊಂದಿದ್ದು, ಗೋವಾ ಮತ್ತು ಹೈದರಾಬಾದ್‌ನಲ್ಲಿ ಕಾರ್ಯಾಚರಣಾ ನೆಲೆಗಳನ್ನು ಹೊಂದಿದೆ. ಸಣ್ಣ ನಗರಗಳನ್ನು ಪ್ರಮುಖ ವಿಮಾನಯಾನ ಕೇಂದ್ರಗಳೊಂದಿಗೆ ಸಂಪರ್ಕಿಸುವ ಮೂಲಕ ಪ್ರಾದೇಶಿಕ ವಾಯುಸಂಪರ್ಕ ಹೆಚ್ಚಿಸುವುದೇ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.

KPSC ಹಗರಣಕ್ಕೆ ಬಿಗ್ ಟ್ವಿಸ್ಟ್; ಕನ್ನಾಳೆ ಮನೆಯಲ್ಲಿ 15 ಗ್ರೂಪ್-ಬಿ ಹಾಲ್ ಟಿಕೆಟ್ ಪತ್ತೆ, KAS ಪರೀಕ್ಷೆಗಳಲ್ಲೂ ಅಕ್ರಮದ ಶಂಕೆ

0

ಬೆಂಗಳೂರು: ಕೆಪಿಎಸ್‌ಸಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ದಾಳಿ ನಡೆಸಿದ ವೇಳೆ 15 ಗ್ರೂಪ್ ಬಿ ಹಾಲ್ ಟಿಕೆಟ್‌ಗಳು ಪತ್ತೆಯಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದ ಸಿಐಡಿ ಅಧಿಕಾರಿಗಳು, ಬಸವರಾಜ್ ಕನ್ನಾಳೆ ಮನೆಯಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಕಂಡು ದಂಗಾಗಿದ್ದಾರೆ. ಶೋಧದ ವೇಳೆ ಬಸವರಾಜ್ ಮನೆಯಲ್ಲಿ ಬರೋಬ್ಬರಿ 15 ಪರೀಕ್ಷೆಗಳ ಹಾಲ್ ಟಿಕೆಟ್‌ಗಳು ಪತ್ತೆಯಾಗಿದ್ದು, ಕೇವಲ ಪಶು ವೈದ್ಯಾಧಿಕಾರಿ ಹುದ್ದೆ ಮಾತ್ರವಲ್ಲದೆ ಬಿ-ಗ್ರೂಪ್ ಹುದ್ದೆಗಳು ಹಾಗೂ ಕೆಎಎಸ್ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳೂ ಡೀಲ್ ಆಗಿರುವ ಅನುಮಾನ ಸಿಐಡಿಗೆ ಕಾಡುತ್ತಿದೆ.

ಕೆಎಎಸ್ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಹೀಗೆ ಮೂರೂ ಹಂತಗಳಿಗೆ ಒಂದೇ ಪ್ಯಾಕೇಜ್ ದರ ನಿಗದಿಪಡಿಸಿ ಅಕ್ರಮ ಎಸಗಿರುವ ಸಾಧ್ಯತೆಯಿದೆ ಎಂದು ಸಿಐಡಿ ಶಂಕಿಸಿದೆ. ಸದ್ಯ ಪಶು ವೈದ್ಯಾಧಿಕಾರಿ ಹುದ್ದೆಯ ಅಕ್ರಮ ತನಿಖೆ ಮುಗಿಯುತ್ತಿದ್ದಂತೆ, ಉಳಿದ ಪರೀಕ್ಷೆಗಳ ಹಗರಣದ ಜಾಡು ಹಿಡಿಯಲು ಸಿಐಡಿ ಮುಂದಾಗಿದೆ. ರಾಜ್ಯ ಸರ್ಕಾರದಿಂದ ಅನುಮತಿ ದೊರೆತರೆ ಕೆಎಎಸ್ ಹುದ್ದೆಗಳ ನೇಮಕಾತಿ ಅಕ್ರಮದ ಕುರಿತು ಪೂರ್ಣ ಪ್ರಮಾಣದ ತನಿಖೆ ನಡೆಸಲು ಸಿಐಡಿ ಯೋಜಿಸಿದೆ.

ಗ್ರಾಚ್ಯುಟಿ ಹಣದಿಂದ ಬಾಕಿ ಕಡಿತ ಸಲ್ಲದು: ಕೆಎಸ್‌ಆರ್‌ಟಿಸಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

0

ಬೆಂಗಳೂರು: ನೌಕರರಿಗೆ ಪಾವತಿಸಬೇಕಾದ ಗ್ರಾಚ್ಯುಟಿ ಮೊತ್ತದಿಂದ ಸಂಸ್ಥೆಗೆ ಬರಬೇಕಾದ ಬಾಕಿ, ಬಡ್ಡಿ ಸೇರಿದಂತೆ ಯಾವುದೇ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಸ್ಥೆಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಕಾರ್ಮಿಕ ಇಲಾಖೆಯ ಮೇಲ್ಮನವಿ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮಂಡ್ಯ ವಿಭಾಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ ಹಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

1972ರ ಗ್ರಾಚ್ಯುಟಿ ಪಾವತಿ ಕಾಯ್ದೆಯ ಸೆಕ್ಷನ್ 4(6)ರ ಪ್ರಕಾರ, ಸಂಸ್ಥೆಗೆ ನೌಕರನಿಂದ ತೀವ್ರ ಆರ್ಥಿಕ ನಷ್ಟವಾಗಿದ್ದರೆ ಅಥವಾ ನೌಕರ ಸಮಾಜಘಾತುಕ ನಡವಳಿಕೆಯಿಂದ ವಜಾಗೊಂಡಿದ್ದರೆ ಮಾತ್ರ ಗ್ರಾಚ್ಯುಟಿ ತಡೆಯಲು ಅವಕಾಶವಿದೆ ಎಂದು ಪೀಠ ಸ್ಪಷ್ಟಪಡಿಸಿದೆ. ಸಂಸ್ಥೆ ಹೊರಡಿಸುವ ಆಂತರಿಕ ಸುತ್ತೋಲೆಗಳು ಮೂಲ ಕಾಯ್ದೆಯ ಶಾಸನಬದ್ಧ ನಿಯಮಗಳನ್ನು ಉಲ್ಲಂಘಿಸಲು ಅವಕಾಶವಿಲ್ಲ ಎಂದು ಹೇಳಿರುವ ಪೀಠ, ಮರುಸೇರ್ಪಡೆಯಾದ ನೌಕರನಿಂದ ಬಡ್ಡಿ ವಸೂಲಿ ಮಾಡುವ ಸಂಸ್ಥೆಯ 2007ರ ಸುತ್ತೋಲೆ ಕಾನೂನುಬದ್ಧವಾಗಿದ್ದರೂ, ಆ ಬಡ್ಡಿ ಬಾಕಿಯನ್ನು ಶಾಸನಬದ್ಧವಾಗಿ ರಕ್ಷಿಸಲ್ಪಟ್ಟಿರುವ ಗ್ರಾಚ್ಯುಟಿ ಹಣದಿಂದ ಕಡಿತಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಂಸ್ಥೆಗೆ ನೌಕರನಿಂದ ಯಾವುದೇ ಬಡ್ಡಿ ಅಥವಾ ಬಾಕಿ ಬರಬೇಕಿದ್ದರೆ, ಅದನ್ನು ಗ್ರಾಚ್ಯುಟಿ ಹೊರತುಪಡಿಸಿ ನೌಕರನಿಗೆ ಸಿಗಬೇಕಾದ ಇತರ ಸೌಲಭ್ಯಗಳಿಂದ ಅಥವಾ ಕಾನೂನುಬದ್ಧ ಇತರ ಮಾರ್ಗಗಳ ಮೂಲಕ ವಸೂಲಿ ಮಾಡಬಹುದೇ ಹೊರತು ಗ್ರಾಚ್ಯುಟಿ ಹಣ ಕಡಿತಗೊಳಿಸುವಂತಿಲ್ಲ ಎಂದು ತಿಳಿಸಿರುವ ಪೀಠ, ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಕಾರ್ಮಿಕ ಇಲಾಖೆಯ ನಿಯಂತ್ರಣ ಪ್ರಾಧಿಕಾರ ನೀಡಿದ್ದ 1,00,248 ರೂಪಾಯಿ ಗ್ರಾಚ್ಯುಟಿ ಬಾಕಿ ಮತ್ತು ಬಡ್ಡಿ ಪಾವತಿ ಆದೇಶವನ್ನು ಪೀಠ ಎತ್ತಿಹಿಡಿದಿದೆ.

ಪ್ರಕರಣದ ಹಿನ್ನೆಲೆ: ಮಂಡ್ಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರಾಚಾರಿ ಅವರನ್ನು 1997ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಸಂಸ್ಥೆ 46,910 ರೂಪಾಯಿ ಗ್ರಾಚ್ಯುಟಿ ಪಾವತಿಸಿತ್ತು.

ಬಳಿಕ ವಜಾ ಆದೇಶವನ್ನು ಚಂದ್ರಶೇಖರಾಚಾರಿ ಕಾರ್ಮಿಕ ಇಲಾಖೆಯ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ಪ್ರಾಧಿಕಾರ ಮತ್ತೆ ಸೇವೆಗೆ ನಿಯೋಜಿಸಿಕೊಳ್ಳುವಂತೆ ಸೂಚಿಸಿತ್ತು. ಪರಿಣಾಮ 2000ನೇ ಇಸವಿಯಲ್ಲಿ ಅವರು ಮರಳಿ ಸೇವೆಗೆ ಸೇರಿಕೊಂಡಿದ್ದರು. ಸಂಸ್ಥೆಯ ನಿಯಮಾವಳಿ ಹಾಗೂ 2007ರ ಸುತ್ತೋಲೆಯಂತೆ, ಮರುಸೇರ್ಪಡೆಯಾದಾಗ ಮೊದಲು ಪಡೆದ ಗ್ರಾಚ್ಯುಟಿ ಮೊತ್ತವನ್ನು ಶೇ. 11ರಷ್ಟು ಬಡ್ಡಿಯೊಂದಿಗೆ ಸಂಸ್ಥೆಗೆ ಮರುಪಾವತಿಸಬೇಕಿತ್ತು. ಆದರೆ ನೌಕರ ಈ ಮೊತ್ತವನ್ನು ಪಾವತಿಸದೆ 2008ರಲ್ಲಿ ವಯೋನಿವೃತ್ತಿ ಹೊಂದಿದ್ದರು. ಸಂಸ್ಥೆ ನಿವೃತ್ತಿ ಬಳಿಕ ಪಾವತಿಸಬೇಕಿದ್ದ ಒಟ್ಟು ಗ್ರಾಚ್ಯುಟಿ ಮೊತ್ತದಿಂದ ನೌಕರ ಪಾವತಿಸಬೇಕಿದ್ದ 43,048 ರೂಪಾಯಿ ಬಡ್ಡಿ ಹಣವನ್ನು ಕಡಿತಗೊಳಿಸಿತ್ತು.

ಇದನ್ನು ಪ್ರಶ್ನಿಸಿ ನೌಕರ ಗ್ರಾಚ್ಯುಟಿ ಪಾವತಿ ಕಾಯ್ದೆಯ ನಿಯಂತ್ರಣ ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರವನ್ನು ಸಂಪರ್ಕಿಸಿದ್ದರು. ಎರಡೂ ಪ್ರಾಧಿಕಾರಗಳು ಕಡಿತಗೊಳಿಸಿದ ಹಣವನ್ನು ಶೇ. 10ರಷ್ಟು ಬಡ್ಡಿಯೊಂದಿಗೆ ನೌಕರನಿಗೆ ಪಾವತಿಸುವಂತೆ ಕೆಎಸ್‌ಆರ್‌ಟಿಸಿಗೆ ಆದೇಶಿಸಿದ್ದವು. ಈ ಆದೇಶವನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ತ್ಯಾಜ್ಯ ಶುಲ್ಕ ವಿರೋಧಿಸಿ ಬೆಂಗಳೂರಿನಲ್ಲಿ 2 ದಿನ ಚಿಕನ್ ಅಂಗಡಿ ಬಂದ್; ಫ್ರೀಡಂ ಪಾರ್ಕ್ʼನಲ್ಲಿ ಬೃಹತ್ ಪ್ರತಿಭಟನೆ

0

ಬೆಂಗಳೂರು: ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ಚಿಕನ್ ಅಂಗಡಿಗಳ ಬಂದ್‌ಗೆ ಕರೆ ನೀಡಲಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್‌ಡಬ್ಲ್ಯುಎಂಎಲ್) ಚಿಕನ್ ಅಂಗಡಿಗಳ ತ್ಯಾಜ್ಯ ವಿಲೇವಾರಿಗೆ ಪ್ರತಿ ಕೆ.ಜಿ.ಗೆ 5 ರೂಪಾಯಿ ಶುಲ್ಕ ನಿಗದಿಪಡಿಸಿರುವುದನ್ನು ವಿರೋಧಿಸಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಪ್ರತಿಭಟನೆ ನಡೆಸುತ್ತಿದೆ.

ಇಂದು (ಸೆಪ್ಟೆಂಬರ್ 3) ಬೆಳಗ್ಗೆ 11 ಗಂಟೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಕನ್ ಅಂಗಡಿಗಳು ಇಂದು ಬಂದ್ ಆಚರಿಸುತ್ತಿವೆ. ಸೆಪ್ಟೆಂಬರ್ 4ರಂದು ನಗರದಾದ್ಯಂತ ಚಿಕನ್ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಸಂಘಟನೆ ನಿರ್ಧರಿಸಿದೆ.

ಬಿಎಸ್‌ಡಬ್ಲ್ಯುಎಂಎಲ್ ನಿಗದಿಪಡಿಸಿರುವ ತ್ಯಾಜ್ಯ ವಿಲೇವಾರಿ ಶುಲ್ಕದಿಂದ ಬೆಂಗಳೂರಿನ ಸುಮಾರು 6ರಿಂದ 7 ಸಾವಿರ ಚಿಕನ್ ಅಂಗಡಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ತಿಳಿಸಿದೆ. ಈ ಶುಲ್ಕವನ್ನು ಹಿಂಪಡೆಯಬೇಕು ಎಂಬುದೇ ಅಂಗಡಿ ಮಾಲೀಕರ ಪ್ರಮುಖ ಬೇಡಿಕೆಯಾಗಿದೆ.

ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 7 ಲಕ್ಷ ಕೆ.ಜಿ. ಚಿಕನ್ ಮಾರಾಟವಾಗುತ್ತಿದ್ದು, ಇದರಿಂದ ಪ್ರತಿದಿನ ಸುಮಾರು 2ರಿಂದ 3 ಲಕ್ಷ ಕೆ.ಜಿ. ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಸಂಘಟನೆ ತಿಳಿಸಿದೆ. ಒಂದು ಚಿಕನ್ ಅಂಗಡಿಯಿಂದ ದಿನಕ್ಕೆ ಸರಾಸರಿ 30 ಕೆ.ಜಿ. ತ್ಯಾಜ್ಯ ಹೊರಬರುತ್ತಿದ್ದು, ಬಿಎಸ್‌ಡಬ್ಲ್ಯುಎಂಎಲ್ ನಿಗದಿಪಡಿಸಿರುವ ಪ್ರತಿ ಕೆ.ಜಿ.ಗೆ 5 ರೂಪಾಯಿ ಶುಲ್ಕದಂತೆ, ಒಂದು ಅಂಗಡಿ ದಿನಕ್ಕೆ ಸುಮಾರು 150 ರೂಪಾಯಿ ಹಾಗೂ ತಿಂಗಳಿಗೆ ಸುಮಾರು 4,500 ರೂಪಾಯಿ ಪಾವತಿಸಬೇಕಾಗುತ್ತದೆ.

ಈ ಶುಲ್ಕದ ಹೊರೆ ಸಣ್ಣ ವ್ಯಾಪಾರಿಗಳ ಮೇಲೆ ಬೀಳಲಿದೆ ಎಂದು ಆಕ್ಷೇಪಿಸಿರುವ ಸಂಘಟನೆ, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಎಸ್‌ಡಬ್ಲ್ಯುಎಂಎಲ್‌ಗೆ ಒತ್ತಾಯಿಸಿದೆ. ಇಂದು ಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳ ಬಂದ್ ಜೊತೆಗೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದ್ದು, ನಾಳೆಯೂ ನಗರದಾದ್ಯಂತ ಬಂದ್ ಮುಂದುವರಿಯಲಿದೆ. ಇದರಿಂದ ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಚಿಕನ್ ಮಾರಾಟ ಹಾಗೂ ಗ್ರಾಹಕರಿಗೆ ಲಭ್ಯತೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಕುಬೇರನಿಗೆ ಪ್ರಿಯವಾದ ಗಿಡವಂತೆ! ಮನೆಯಲ್ಲಿ ಜೇಡ್ ಪ್ಲಾಂಟ್‌ ಇಡುವ ಮುನ್ನ ಈ ವಿಷಯ ತಿಳಿಯಿರಿ

0

ಮನೆಗೆ ಸಂಪತ್ತು ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಾಗಲಿ ಎಂಬ ಉದ್ದೇಶದಿಂದ ಹಲವರು ಮನಿ ಪ್ಲಾಂಟ್‌ ಬೆಳೆಸುತ್ತಾರೆ.

ಆದರೆ ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ಮನಿ ಪ್ಲಾಂಟ್‌ ಜೊತೆಗೆ ಜೇಡ್ ಪ್ಲಾಂಟ್‌ ಕೂಡ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಜೇಡ್ ಪ್ಲಾಂಟ್‌ ಸಂಪತ್ತಿನ ದೇವತೆಯಾದ ಲಕ್ಷ್ಮಿ ಹಾಗೂ ಧನಾಧಿಪತಿ ಕುಬೇರನಿಗೆ ಪ್ರಿಯವಾದ ಸಸ್ಯ ಎನ್ನಲಾಗುತ್ತದೆ. ಆರ್ಥಿಕ ಸಮಸ್ಯೆಗಳು ಹಾಗೂ ಸಾಲದ ಬಾಧೆಯಿಂದ ಬಳಲುತ್ತಿರುವವರು ಮನೆಯಲ್ಲಿ ಈ ಗಿಡವನ್ನು ಬೆಳೆಸುವುದರಿಂದ ಧನಾತ್ಮಕ ಬದಲಾವಣೆ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಜೇಡ್ ಪ್ಲಾಂಟ್‌ ಮನೆಯತ್ತ ಹಣದ ಹರಿವನ್ನು ಆಕರ್ಷಿಸುತ್ತದೆ ಎಂದೂ ವಾಸ್ತು ನಂಬಿಕೆ ಹೇಳುತ್ತದೆ.

ಆರ್ಥಿಕ ಪ್ರಗತಿಗೆ ಸಹಕಾರಿ ಎಂಬ ನಂಬಿಕೆ:

ಜೇಡ್ ಪ್ಲಾಂಟ್‌ ಮನೆಯಲ್ಲಿ ಬೆಳೆಸುವುದರಿಂದ ಆರ್ಥಿಕ ಪ್ರಗತಿಯ ಜೊತೆಗೆ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎನ್ನಲಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ, ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭ ಸೇರಿದಂತೆ ಹಲವು ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಅಲ್ಲದೆ, ಮನೆಯಲ್ಲಿನ ನಕಾರಾತ್ಮಕ ವಾತಾವರಣ ಕಡಿಮೆಯಾಗಿ ಕುಟುಂಬ ಸದಸ್ಯರ ನಡುವಿನ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಜೇಡ್ ಪ್ಲಾಂಟ್‌ ಯಾವ ದಿಕ್ಕಿನಲ್ಲಿ ಇಡಬೇಕು?

ವಾಸ್ತು ಪ್ರಕಾರ ಜೇಡ್ ಪ್ಲಾಂಟ್‌ ಅನ್ನು ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಶುಭಕರ ಎಂದು ಪರಿಗಣಿಸಲಾಗಿದೆ. ಮನೆಯ ಮುಖ್ಯ ಪ್ರವೇಶ ದ್ವಾರದ ಸಮೀಪ ಇಡುವುದರಿಂದ ಧನಾತ್ಮಕ ಶಕ್ತಿ ಹಾಗೂ ಸಮೃದ್ಧಿ ಮನೆ ಪ್ರವೇಶಿಸುತ್ತದೆ ಎಂಬ ನಂಬಿಕೆಯೂ ಇದೆ.

ಈ ತಪ್ಪುಗಳನ್ನು ಮಾಡಬೇಡಿ:

ಜೇಡ್ ಪ್ಲಾಂಟ್‌ ಅನ್ನು ಮಲಗುವ ಕೋಣೆ ಅಥವಾ ಸ್ನಾನಗೃಹದಲ್ಲಿ ಇಡಬಾರದು ಎಂದು ವಾಸ್ತು ನಂಬಿಕೆ ಹೇಳುತ್ತದೆ. ಗಿಡದ ಸುತ್ತಮುತ್ತಲಿನ ಸ್ಥಳ ಹಾಗೂ ಎಲೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಒಣಗಿದ ಅಥವಾ ಹಾಳಾದ ಎಲೆಗಳನ್ನು ತಕ್ಷಣ ತೆಗೆದುಹಾಕಬೇಕು ಎನ್ನಲಾಗುತ್ತದೆ.

ಸೂಚನೆ: ಜೇಡ್ ಪ್ಲಾಂಟ್‌ಗೆ ಸಂಬಂಧಿಸಿದ ಸಂಪತ್ತು, ಅದೃಷ್ಟ ಮತ್ತು ಧನಾತ್ಮಕ ಶಕ್ತಿಯ ಕುರಿತ ಹೇಳಿಕೆಗಳು ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದ ನಂಬಿಕೆಗಳನ್ನು ಆಧರಿಸಿವೆ. ಇವುಗಳಿಗೆ ವೈಜ್ಞಾನಿಕ ದೃಢೀಕರಣವಿದೆ ಎಂದು ಪರಿಗಣಿಸಬಾರದು.

ಚಿಕ್ಕ ವಯಸ್ಸಿನಲ್ಲೇ ದಾಖಲೆಗಳ ದರ್ಬಾರ್: ವೈಭವ್ ಸೂರ್ಯವಂಶಿ ಹೆಸರಿನಲ್ಲಿರುವ 6 ಅಪರೂಪದ ವಿಶ್ವ ದಾಖಲೆಗಳಿವು!

0

ಚೆನ್ನೈ: ಭಾರತೀಯ ಕ್ರಿಕೆಟ್‌ನ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಅವರು ಕಣಕ್ಕಿಳಿಯುವ ಪ್ರತಿಯೊಂದು ಪಂದ್ಯ ಹಾಗೂ ಸರಣಿಯಲ್ಲೂ ಒಂದಲ್ಲೊಂದು ಮೈಲಿಗಲ್ಲು ಸೃಷ್ಟಿಸುತ್ತಿರುವುದು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಕೇವಲ 13ನೇ ವಯಸ್ಸಿನಲ್ಲೇ ವಿಶ್ವದ ಪ್ರತಿಷ್ಠಿತ ಟಿ20 ಲೀಗ್‌ಗಳಲ್ಲಿ ಒಂದಾದ ಐಪಿಎಲ್‌ಗೆ ಆಯ್ಕೆಯಾಗಿದ್ದ ವೈಭವ್, ಆರಂಭದಿಂದಲೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅನುಭವಿ ಬೌಲರ್‌ಗಳ ವಿರುದ್ಧ ನಿರ್ಭೀತಿಯಾಗಿ ಬ್ಯಾಟ್ ಬೀಸುತ್ತಿರುವ ಅವರು, ಐಪಿಎಲ್‌ನಲ್ಲೂ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ವೈಭವ್ ಅವರ ಸಾಧನೆ ಐಪಿಎಲ್‌ಗೆ ಮಾತ್ರ ಸೀಮಿತವಾಗಿಲ್ಲ. ಭಾರತ ‘ಎ’ ತಂಡ, ಅಂಡರ್-19 ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲೂ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲೂ ಇತಿಹಾಸ ನಿರ್ಮಿಸಿದ ವೈಭವ್, ಟೂರ್ನಮೆಂಟ್‌ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.

ಕೇವಲ 15 ವರ್ಷ 157 ದಿನಗಳ ವಯಸ್ಸಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಸಿಡಿಸಿದ ವೈಭವ್, 57 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದರು. ಅವರು ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಮತ್ತೊಮ್ಮೆ ಪ್ರದರ್ಶಿಸಿದರು.

ವೈಭವ್ ಸೂರ್ಯವಂಶಿ ಹೆಸರಿನಲ್ಲಿರುವ ಪ್ರಮುಖ ದಾಖಲೆಗಳು:

1. ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್
14 ವರ್ಷ 32 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ.

2. ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್
14 ವರ್ಷ 272 ದಿನಗಳ ವಯಸ್ಸಿನಲ್ಲಿ ಶತಕ ಸಿಡಿಸಿದ್ದಾರೆ.

3. ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ
ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ದಾಖಲೆ ಹೊಂದಿದ್ದಾರೆ.

4. ಭಾರತ ಪರ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ ಆಟಗಾರ
15 ವರ್ಷ 99 ದಿನಗಳ ವಯಸ್ಸಿನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

5. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ
ಕಿರಿಯ ವಯಸ್ಸಿನಲ್ಲೇ ಈ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.

6. ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್
15 ವರ್ಷ 157 ದಿನಗಳ ವಯಸ್ಸಿನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ.

ವೈಭವ್ ಸೂರ್ಯವಂಶಿ ಅವರ ವಿಶೇಷತೆ ಎಂದರೆ, ಈ ದಾಖಲೆಗಳನ್ನು ನಿರ್ಮಿಸಲು ಅವರು ವರ್ಷಗಳ ಕಾಲ ಕಾಯಬೇಕಾಗಿಲ್ಲ. ಕಿರಿಯ ವಯಸ್ಸಿನಲ್ಲೇ ಐಪಿಎಲ್, ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ನ ವಿವಿಧ ಹಂತಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಇನ್ನೂ ಅವರ ಕ್ರಿಕೆಟ್ ವೃತ್ತಿಜೀವನ ಆರಂಭದ ಹಂತದಲ್ಲೇ ಇದೆ. ಹೀಗಾಗಿ ಮುಂದಿನ ವರ್ಷಗಳಲ್ಲಿ ವೈಭವ್ ಸೂರ್ಯವಂಶಿ ಇನ್ನೆಷ್ಟು ದಾಖಲೆಗಳನ್ನು ನಿರ್ಮಿಸಲಿದ್ದಾರೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಈಗಾಗಲೇ ದಾಖಲೆಗಳ ಸರಮಾಲೆ ಸೃಷ್ಟಿಸಿರುವ ಈ ಯುವ ಬ್ಯಾಟರ್, ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನ ಪ್ರಮುಖ ತಾರೆಯಾಗಿ ಹೊರಹೊಮ್ಮುವ ನಿರೀಕ್ಷೆ ಮೂಡಿಸಿದ್ದಾರೆ.

ಮೈಸೂರಿನಲ್ಲಿ ಮತ್ತೊಂದು ಗೋಲ್ಡ್ ಸ್ಕ್ಯಾಮ್: 80ಕ್ಕೂ ಹೆಚ್ಚು ಗ್ರಾಹಕರಿಗೆ ಕೋಟ್ಯಂತರ ರೂ. ವಂಚನೆ?

0

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಹುಕೋಟಿ ‘ಚಿನ್ನತಂಬಿ’ ಚಿನ್ನದ ಹಗರಣದ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಗೋಲ್ಡ್ ಸ್ಕ್ಯಾಮ್ ಬೆಳಕಿಗೆ ಬಂದಿದೆ.

ಚಿನ್ನ ನೀಡುವುದಾಗಿ ನಂಬಿಸಿ ಮಾಸಿಕ ಕಂತುಗಳ ಮೂಲಕ ಹಣ ಕಟ್ಟಿಸಿಕೊಂಡು 80ಕ್ಕೂ ಹೆಚ್ಚು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.

ಮೈಸೂರು ನಗರದ ವಿವೇಕಾನಂದ ವೃತ್ತದಲ್ಲಿರುವ ‘ಮೋಹನ್ ಜ್ಯುವೆಲರಿ’ ಅಂಗಡಿಯ ಮಾಲೀಕ ಮೋಹನ್ ಲಾಲ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಗ್ರಾಹಕರಿಂದ ಮಾಸಿಕ ಕಂತು ಕಟ್ಟಿಸಿಕೊಂಡು, ಸರಿಯಾದ ಸಮಯಕ್ಕೆ ಚಿನ್ನ ನೀಡುವ ಮೂಲಕ ಮೋಹನ್ ಲಾಲ್ ಜನರ ನಂಬಿಕೆ ಗಳಿಸಿದ್ದ ಎನ್ನಲಾಗಿದೆ.

ಆತನ ಮಾತು ಹಾಗೂ ಯೋಜನೆಯನ್ನು ನಂಬಿದ 80ಕ್ಕೂ ಹೆಚ್ಚು ಗ್ರಾಹಕರು ಈ ಬಾರಿಯೂ ಚಿನ್ನದ ಆಸೆಯಿಂದ ಹೆಚ್ಚಿನ ಮೊತ್ತದ ಹಣವನ್ನು ಮಾಸಿಕ ಕಂತುಗಳ ರೂಪದಲ್ಲಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

ಆದರೆ ಕಳೆದ ಒಂದು ವಾರದಿಂದ ಮೋಹನ್ ಜ್ಯುವೆಲರಿ ಅಂಗಡಿ ಬಾಗಿಲು ಮುಚ್ಚಿದ್ದು, ಮಾಲೀಕ ಮೋಹನ್ ಲಾಲ್ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಆತನ ಮನೆಯೂ ಖಾಲಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಹಕರು ಅಂಗಡಿಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣ ಕಳೆದುಕೊಂಡ ಸಂತ್ರಸ್ತ ಗ್ರಾಹಕರು ತಕ್ಷಣ ಕುವೆಂಪುನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ವೇಳೆ, “ನಾವು ಕಷ್ಟಪಟ್ಟು ದುಡಿದು ಕಟ್ಟಿದ ಹಣವನ್ನು ನಮಗೆ ವಾಪಸ್ ಕೊಡಿಸಿ” ಎಂದು ಪೊಲೀಸರ ಬಳಿ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ.

ದೂರು ಸ್ವೀಕರಿಸಿದ ಕುವೆಂಪುನಗರ ಠಾಣೆ ಪೊಲೀಸರು ಜ್ಯುವೆಲರಿ ಮಾಲೀಕ ಮೋಹನ್ ಲಾಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಒಟ್ಟು ಎಷ್ಟು ಮೊತ್ತದ ಹಣ ವಂಚನೆಯಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದು, ವಿಚಾರಣೆ ಬಳಿಕ ವಂಚನೆಯ ಸಂಪೂರ್ಣ ಮೊತ್ತ ಹಾಗೂ ಪ್ರಕರಣದ ಹೆಚ್ಚಿನ ವಿವರಗಳು ಹೊರಬರಲಿವೆ.

ಕದ್ದುಮುಚ್ಚಿ ಮಹಿಳೆಯರ ವಿಡಿಯೋ ಮಾಡುತ್ತಿದ್ದ ಯುವಕ ರೆಡ್‌ಹ್ಯಾಂಡಾಗಿ ಲಾಕ್! ಸ್ಥಳೀಯರಿಂದ ತರಾಟೆ

0

ಬೆಂಗಳೂರು: ಬೆಳ್ಳಂಬೆಳಗ್ಗೆ ಜಾಗಿಂಗ್ ಮಾಡುತ್ತಿದ್ದ ಮಹಿಳೆಯರ ವಿಡಿಯೋ ಮಾಡುತ್ತಿದ್ದ ಯುವಕನೊಬ್ಬ ಸ್ಥಳೀಯರಿಗೆ ಸಿಕ್ಕಿಬಿದ್ದಿರುವ ಘಟನೆ ನಗರದ ಹೆಚ್‌ಎಸ್‌ಆರ್ ಬಡಾವಣೆಯ ಅರಗ ಕೆರೆ ಬಳಿ ನಡೆದಿದೆ.

ಸರ್ಜಾಪುರದಲ್ಲಿ ವಾಸವಿರುವ ಗೋಲ್ಡನ್ ಕುಮಾರ್ ಎಂಬಾತ ಮಹಿಳೆಯರ ವಿಡಿಯೋಗಳನ್ನು ಕದ್ದುಮುಚ್ಚಿ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಜಾಗಿಂಗ್‌ಗೆ ಬಂದಿದ್ದ ಮಹಿಳೆಯೊಬ್ಬರ ವಿಡಿಯೋ ಮಾಡುತ್ತಿದ್ದ ವೇಳೆ ಯುವಕ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ತನ್ನ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆ ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸ್ಥಳದಲ್ಲಿದ್ದ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳೀಯರು ಯುವಕನ ಮೊಬೈಲ್ ಪರಿಶೀಲಿಸಿದಾಗ ಹಲವು ಮಹಿಳೆಯರ ವಿಡಿಯೋಗಳು ಇರುವುದು ಪತ್ತೆಯಾಗಿದೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಯುವಕ ಮಹಿಳೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಭಾರೀ ನೀರು ಬಿಡುಗಡೆ; 108.76 ಅಡಿಗೆ ಕುಸಿದ ಜಲಮಟ್ಟ!

0

ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಜಲಾಶಯದ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ.

ಎರಡು ದಿನಗಳ ಹಿಂದೆ ಕೆಆರ್‌ಎಸ್ ಡ್ಯಾಂನಿಂದ 7,697 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿತ್ತು. ನಿನ್ನೆ ಈ ಪ್ರಮಾಣ 8,544 ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಇದೀಗ ಹೊರಹರಿವು ಮತ್ತಷ್ಟು ಹೆಚ್ಚಾಗಿ 9,253 ಕ್ಯೂಸೆಕ್‌ಗೆ ತಲುಪಿದೆ.

ಇತ್ತ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಡ್ಯಾಂಗೆ ಒಳಹರಿವು ಗಣನೀಯವಾಗಿ ಕುಸಿದಿದೆ. ಸದ್ಯ ಕೇವಲ 3,028 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಒಳಹರಿವಿಗಿಂತ ಸುಮಾರು ಮೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿರುವ ಪರಿಣಾಮ, ಇತ್ತೀಚೆಗೆ 111 ಅಡಿಗೆ ತಲುಪಿದ್ದ ಕೆಆರ್‌ಎಸ್ ಜಲಮಟ್ಟ ಇದೀಗ 108.76 ಅಡಿಗೆ ಕುಸಿದಿದೆ.

ಸದ್ಯ ಜಲಾಶಯದಲ್ಲಿ 30.493 ಟಿಎಂಸಿ ನೀರು ಸಂಗ್ರಹವಿದೆ. ಒಳಹರಿವು ಕಡಿಮೆಯಾಗುತ್ತಿರುವ ನಡುವೆಯೂ ಹೊರಹರಿವಿನ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.