Home Blog

ಅನೈತಿಕ ಸಂಬಂಧದ ಶಂಕೆ! ಯುವಕನ ಮನೆಗೆ ನುಗ್ಗಿ ಬಡಿಗೆ-ಕಟ್ಟಿಗೆಯಿಂದ ಥಳಿಸಿ ಭೀಕರ ಕೊಲೆ, ಮಹಿಳೆ ಸೇರಿ ನಾಲ್ವರು ಅರೆಸ್ಟ್!

0

 ಲಕ್ಷ್ಮೇಶ್ವರ:- ಅನೈತಿಕ ಸಂಬಂಧದ ಶಂಕೆಯಿಂದ ಹುಟ್ಟಿಕೊಂಡ ದ್ವೇಷ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಜರುಗಿದೆ.

ಎಸ್, ತಾಲೂಕಿನ ಪುಟಂಗಾವ್ ಬಡ್ನಿ ಗ್ರಾಮದಲ್ಲಿ ಯುವಕನ ಮನೆಯ ಅಂಗಳದಲ್ಲೇ ಬಡಿಗೆ ಹಾಗೂ ಕಟ್ಟಿಗೆ ಮಣೆಯಿಂದ ಭೀಕರವಾಗಿ ಥಳಿಸಿ ಆರೋಪಿಗಳು ಕೊಲೆಗೈದಿದ್ದಾರೆ. ಈರಣ್ಣ ಷಣ್ಮುಖಪ್ಪ ಅಗಸಿಬಾಗಿಲು(34) ಕೊಲೆಯಾದ ಯುವಕ. ಈತ ವೃತ್ತಿಯಲ್ಲಿ ಕುರಿಕಾಯುತ್ತಿದ್ದ ಎನ್ನಲಾಗಿದೆ.

ಮೃತ ಈರಣ್ಣ ಹಾಗೂ ಗ್ರಾಮದ ರೇಣುಕಾ ನಡುವೆ ಅನೈತಿಕ ಸಂಬಂಧವಿದೆ ಎಂಬ ಶಂಕೆಯೇ ಈ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವಿಷಯವಾಗಿ ಈ ಹಿಂದೆ ಹಲವು ಬಾರಿ ಜಗಳ ನಡೆದಿದ್ದು, ಸುಮಾರು ಎರಡು ವರ್ಷಗಳ ಹಿಂದೆ ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ರಾಜೀ ಮಾಡಿಸಿದ್ದರು ಎನ್ನಲಾಗಿದೆ. ಆದರೆ, ಸಂಶಯ ಮತ್ತು ದ್ವೇಷ ಮಾತ್ರ ಕೊನೆಗೊಂಡಿರಲಿಲ್ಲ ಎಂಬುದು ಈ ಕೊಲೆ ಪ್ರಕರಣದಿಂದ ಬೆಳಕಿಗೆ ಬಂದಿದೆ.

ಮನೆಯೊಳಗೆ ನುಗ್ಗಿ ಮಾರಣಾಂತಿಕ ಹಲ್ಲೆ:

ಬುಧವಾರ ರಾತ್ರಿ ಸುಮಾರು 8.30ರ ವೇಳೆಗೆ ಆರೋಪಿಗಳು ಈರಣ್ಣನ ಮನೆಗೆ ತೆರಳಿ ಜಗಳ ಆರಂಭಿಸಿದ್ದಾರೆ ಎನ್ನಲಾಗಿದೆ. ಮನೆಯ ಅಂಗಳದ ಹೊಸ್ತಿಲಲ್ಲಿ ಕುಳಿತಿದ್ದ ಈರಣ್ಣನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳು, ಬಡಿಗೆ ಹಾಗೂ ಮನೆಯಲ್ಲಿದ್ದ ಕಟ್ಟಿಗೆ ಮಣೆಯಿಂದ ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ಬಳಿಕ ಕಾಲಿನಿಂದ ಒದ್ದು ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತೀವ್ರ ರಕ್ತಗಾಯಗೊಂಡ ಈರಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ರೇಣುಕಾ, ಪತಿ, ತಾಯಿ ಮತ್ತು ಸಹೋದರನ ಬಂಧನ:

ಪ್ರಕರಣಕ್ಕೆ ಸಂಬಂಧಿಸಿದಂತೆ ಹನಮವ್ವ ಕೋಂ ಮುದಿಯಪ್ಪ ಭೋವಿ (40), ಧರ್ಮರಾಜ ತಂದೆ ಮುದಿಯಪ್ಪ ಭೋವಿ (24), ರೇಣುಕಾ ಕೋಂ ಆಂಜನೇಯ ಕಳಸಾಪುರ (22) ಹಾಗೂ ಆಂಜನೇಯ ತಂದೆ ಸೋಮಣ್ಣ ಕಳಸಾಪುರ (32) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರೇಣುಕಾ, ಆಕೆಯ ಪತಿ ಆಂಜನೇಯ, ತಾಯಿ ಹನಮವ್ವ ಹಾಗೂ ಸಹೋದರ ಧರ್ಮರಾಜ ಸೇರಿ ಈರಣ್ಣನನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೃತ ಈರಣ್ಣನ ಸಹೋದರ ಸಂತೋಷ್ ಷಣ್ಮುಖಪ್ಪ ಅಗಸಿಬಾಗಿಲು ನೀಡಿದ ದೂರಿನ ಮೇರೆಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 159/2026 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಈ ಪ್ರಕರಣದಲ್ಲಿ ಆರಂಭದಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಂಡ್ಯ ರೈತರಿಗೆ ಗುಡ್‌ನ್ಯೂಸ್..! ಕೆಆರ್‌ಎಸ್‌ಗೆ ಭರ್ಜರಿ ನೀರು; ಕಾವೇರಿ ಹೋರಾಟಕ್ಕೆ ಬೀಳುತ್ತಾ ಬ್ರೇಕ್?

0

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಬುಧವಾರ ಬೆಳಗ್ಗೆ 9,438 ಕ್ಯೂಸೆಕ್ ಇದ್ದ ಒಳಹರಿವು ಇದೀಗ 17,427 ಕ್ಯೂಸೆಕ್‌ಗೆ ಏರಿಕೆಯಾಗಿದೆ.

ಕೇವಲ ಎರಡು ದಿನಗಳ ಹಿಂದೆ 1,682 ಕ್ಯೂಸೆಕ್‌ನಷ್ಟಿದ್ದ ಒಳಹರಿವು ಹಲವು ಪಟ್ಟು ಹೆಚ್ಚಾಗಿರುವುದು ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತಸ ಮೂಡಿಸಿದೆ. ಜತೆಗೆ, ಕಾವೇರಿ ನೀರು ಹಂಚಿಕೆ ವಿಚಾರದಲ್ಲೂ ಕರ್ನಾಟಕಕ್ಕೆ ತಾತ್ಕಾಲಿಕ ನಿರಾಳತೆ ಸಿಕ್ಕಂತಾಗಿದೆ.

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 109.75 ಅಡಿ ನೀರಿನ ಮಟ್ಟ ದಾಖಲಾಗಿದೆ. 49.452 ಟಿಎಂಸಿ ಒಟ್ಟು ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 31.471 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದಿಂದ ಸದ್ಯ 4,514 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಇದೇ ರೀತಿ ಮಳೆ ಮುಂದುವರಿದು ಒಳಹರಿವು ಹೆಚ್ಚಾದರೆ, ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ ಬೀಳುವ ಸಾಧ್ಯತೆಯಿದೆ. ಹೆಚ್ಚಿನ ನೀರು ಸಂಗ್ರಹವಾದರೆ ಮಂಡ್ಯ ಜಿಲ್ಲೆಯ ರೈತರ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗುವ ನಿರೀಕ್ಷೆಯಿದೆ.

ಇನ್ನೊಂದೆಡೆ, ರಾಜ್ಯ ಸರ್ಕಾರ ಸದ್ಯ ನಾಲ್ಕು ಕಟ್ಟು ಪದ್ಧತಿಯಲ್ಲಿ ಮಾತ್ರ ನೀರು ಪೂರೈಸುವುದಾಗಿ ತಿಳಿಸಿದ್ದು, ಭತ್ತ ಮತ್ತು ಕಬ್ಬು ಬೆಳೆಯದಂತೆ ರೈತರಿಗೆ ಮನವಿ ಮಾಡಿದೆ. ಆದರೆ ಕೆಆರ್‌ಎಸ್‌ಗೆ ಒಳಹರಿವು ಇದೇ ಪ್ರಮಾಣದಲ್ಲಿ ಮುಂದುವರಿದರೆ ಕೃಷಿಗೆ ಹೆಚ್ಚಿನ ನೀರು ಲಭ್ಯವಾಗುವ ನಿರೀಕ್ಷೆ ರೈತರಲ್ಲಿದೆ.

ಕಬಿನಿ ಜಲಾಶಯಕ್ಕೂ ಉತ್ತಮ ಒಳಹರಿವು:

ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ಉತ್ತಮ ಒಳಹರಿವು ಮುಂದುವರಿದಿದೆ. 84 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಸದ್ಯ 72.76 ಅಡಿ ನೀರಿನ ಮಟ್ಟವಿದೆ.

ಕಬಿನಿಯಲ್ಲಿ 13.07 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಳಹರಿವು 7,676 ಕ್ಯೂಸೆಕ್ನಷ್ಟಿದೆ. ನದಿ ಹಾಗೂ ವಿವಿಧ ಕಾಲುವೆಗಳಿಗೆ ಒಟ್ಟು 7,760 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ನದಿಗೆ 6,100 ಕ್ಯೂಸೆಕ್ ಹಾಗೂ ಕಾಲುವೆಗಳಿಗೆ 1,660 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ಇತರೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ:

ಕೆಆರ್‌ಎಸ್ ಜಲಾಶಯ

  • ಗರಿಷ್ಠ ಮಟ್ಟ: 124.80 ಅಡಿ
  • ಪ್ರಸ್ತುತ ಮಟ್ಟ: 109.75 ಅಡಿ
  • ಒಳಹರಿವು: 17,427 ಕ್ಯೂಸೆಕ್
  • ಹೊರಹರಿವು: 4,514 ಕ್ಯೂಸೆಕ್
  • ಒಟ್ಟು ಸಾಮರ್ಥ್ಯ: 49.452 ಟಿಎಂಸಿ
  • ಪ್ರಸ್ತುತ ಸಂಗ್ರಹ: 31.471 ಟಿಎಂಸಿ

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 84 ಅಡಿ
  • ಪ್ರಸ್ತುತ ಮಟ್ಟ: 72.76 ಅಡಿ
  • ಸಂಗ್ರಹ: 13.07 ಟಿಎಂಸಿ
  • ಒಳಹರಿವು: 7,676 ಕ್ಯೂಸೆಕ್
  • ನದಿಗೆ ಹೊರಹರಿವು: 6,100 ಕ್ಯೂಸೆಕ್
  • ಕಾಲುವೆಗಳಿಗೆ ಹೊರಹರಿವು: 1,660 ಕ್ಯೂಸೆಕ್
  • ಒಟ್ಟು ಹೊರಹರಿವು: 7,760 ಕ್ಯೂಸೆಕ್

ತುಂಗಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 1,633 ಅಡಿ
  • ಪ್ರಸ್ತುತ ಮಟ್ಟ: 1,630.41 ಅಡಿ
  • ಒಟ್ಟು ಸಾಮರ್ಥ್ಯ: 105.788 ಟಿಎಂಸಿ
  • ಪ್ರಸ್ತುತ ಸಂಗ್ರಹ: 95.619 ಟಿಎಂಸಿ
  • ತಕ್ಷಣದ ಒಳಹರಿವು: 14,525 ಕ್ಯೂಸೆಕ್
  • ಕಳೆದ 24 ಗಂಟೆಗಳ ಸರಾಸರಿ ಒಳಹರಿವು: 15,952 ಕ್ಯೂಸೆಕ್
  • ಹೊರಹರಿವು: 8,551 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ

  • ಪ್ರಸ್ತುತ ಮಟ್ಟ: 1,797.20 ಅಡಿ
  • ಒಳಹರಿವು: 9,245 ಕ್ಯೂಸೆಕ್
  • ಲೈವ್ ಸ್ಟೋರೇಜ್: 58.83%
  • ಇಂದಿನ ಏರಿಕೆ: 0.20 ಅಡಿ

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ: 2,922 ಅಡಿ
  • ಪ್ರಸ್ತುತ ಮಟ್ಟ: 2,914.30 ಅಡಿ
  • ಪ್ರಸ್ತುತ ಸಂಗ್ರಹ: 30.092 ಟಿಎಂಸಿ
  • ಒಳಹರಿವು: 2,210 ಕ್ಯೂಸೆಕ್
  • ನದಿಗೆ ಹೊರಹರಿವು: 1,800 ಕ್ಯೂಸೆಕ್
  • ಕಾಲುವೆಗೆ ಹೊರಹರಿವು: 3,700 ಕ್ಯೂಸೆಕ್

ಒಟ್ಟಾರೆ ರಾಜ್ಯದ ಪ್ರಮುಖ ಜಲಾಶಯಗಳಿಗೆ ಉತ್ತಮ ಒಳಹರಿವು ಮುಂದುವರಿದಿದ್ದು, ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದರಿಂದ ರೈತರಲ್ಲಿ ಆಶಾಭಾವನೆ ಮೂಡಿದೆ.

ಕೊಹ್ಲಿ–ಕುಂಬ್ಳೆ ನಡುವಿನ ಅಸಮಾಧಾನದ ಅಸಲಿ ಕಾರಣವೇನು? ಅಂದಿನ ಟೀಂ ಇಂಡಿಯಾ ವಿವಾದದ ಬಗ್ಗೆ ವಿವಿಎಸ್ ಲಕ್ಷ್ಮಣ್ ಹೇಳಿದ್ದೇನು..?

0

ಮುಂಬೈ: ಭಾರತೀಯ ಕ್ರಿಕೆಟ್‌ನ ಅತ್ಯಂತ ಚರ್ಚಿತ ಅಧ್ಯಾಯಗಳಲ್ಲಿ ಒಂದಾಗಿರುವ ಅನಿಲ್ ಕುಂಬ್ಳೆ ಅವರ ಮುಖ್ಯ ಕೋಚ್ ಹುದ್ದೆಯ ನಿರ್ಗಮನ ಹಾಗೂ ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯದ ಕುರಿತು ಟೀಂ ಇಂಡಿಯಾದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಹಲವು ಮಹತ್ವದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಅಂದು ಕ್ರಿಕೆಟ್ ಸಲಹಾ ಸಮಿತಿಯ (CAC) ಸದಸ್ಯರಾಗಿದ್ದ ಲಕ್ಷ್ಮಣ್, ಖಾಸಗಿ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ.

ಅನಿಲ್ ಕುಂಬ್ಳೆ ಅವರನ್ನು ಬಿಸಿಸಿಐ ಅಥವಾ ಕ್ರಿಕೆಟ್ ಸಲಹಾ ಸಮಿತಿ ವಜಾಗೊಳಿಸಿರಲಿಲ್ಲ. ಬದಲಿಗೆ, ತಂಡದಲ್ಲಿನ ಪರಿಸ್ಥಿತಿಗಳು ಅವರನ್ನು ರಾಜೀನಾಮೆ ನೀಡುವಂತೆ ಮಾಡಿದ್ದವು ಎಂದು ವಿವಿಎಸ್ ಲಕ್ಷ್ಮಣ್ ಸ್ಪಷ್ಟಪಡಿಸಿದ್ದಾರೆ.

2019ರ ಏಕದಿನ ವಿಶ್ವಕಪ್‌ಗೂ ಮುನ್ನ ಅನಿಲ್ ಕುಂಬ್ಳೆ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ರವಿಶಾಸ್ತ್ರಿ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಈ ಬೆಳವಣಿಗೆ ಅಂದು ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕುಂಬ್ಳೆ ಅವರ ಕೋಚಿಂಗ್ ಶೈಲಿಯ ಬಗ್ಗೆ ವಿರಾಟ್ ಕೊಹ್ಲಿಗೆ ಅಸಮಾಧಾನವಿತ್ತು ಹಾಗೂ ಅವರೊಂದಿಗೆ ಕೆಲಸ ಮಾಡಲು ಕೊಹ್ಲಿ ಆರಾಮದಾಯಕವಾಗಿರಲಿಲ್ಲ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಆದರೆ ಅನಿಲ್ ಕುಂಬ್ಳೆ ಅವರಿಗೆ ವಿರಾಟ್ ಕೊಹ್ಲಿ ವಿರುದ್ಧ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿರಲಿಲ್ಲ ಎಂದು ಲಕ್ಷ್ಮಣ್ ಸ್ಪಷ್ಟಪಡಿಸಿದ್ದಾರೆ. ಕುಂಬ್ಳೆ ಅವರ ಕೋಚಿಂಗ್ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ಉತ್ತಮವಾಗಿ ಬೆಳವಣಿಗೆ ಕಂಡಿತ್ತು. ತಂಡದ ಪಂದ್ಯದ ಫಲಿತಾಂಶಗಳೇ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದ್ದವು ಎಂದು ಅವರು ಹೇಳಿದ್ದಾರೆ.

ಅನಿಲ್ ಕುಂಬ್ಳೆ ಅವರಿಗೆ ಆರಂಭದಲ್ಲಿ ಕೇವಲ ಒಂದು ವರ್ಷದ ಒಪ್ಪಂದ ನೀಡಲಾಗಿತ್ತು ಎಂಬ ವಿಚಾರದ ಬಗ್ಗೆಯೂ ವಿವಿಎಸ್ ಲಕ್ಷ್ಮಣ್ ಸ್ಪಷ್ಟನೆ ನೀಡಿದ್ದಾರೆ. ಕೋಚ್‌ಗೆ ಒಂದು ವರ್ಷದ ಒಪ್ಪಂದ ನೀಡಬೇಕೇ ಅಥವಾ ಮೂರು ವರ್ಷಗಳ ಒಪ್ಪಂದ ನೀಡಬೇಕೇ ಎಂಬುದು ಬಿಸಿಸಿಐ ಮತ್ತು ಕುಂಬ್ಳೆ ನಡುವಿನ ವಿಚಾರವಾಗಿತ್ತು. ಇದರಲ್ಲಿ ಕ್ರಿಕೆಟ್ ಸಲಹಾ ಸಮಿತಿಗೆ ಯಾವುದೇ ಪಾತ್ರವಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಸಿಎಸಿಯ ಪ್ರಮುಖ ಜವಾಬ್ದಾರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯುತ್ತಮ ಕೋಚ್‌ರನ್ನು ಆಯ್ಕೆ ಮಾಡುವುದು. ಆ ಸಂದರ್ಭದಲ್ಲಿ ಭಾರತ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅನಿಲ್ ಕುಂಬ್ಳೆ ಅವರೇ ಸೂಕ್ತ ಅಭ್ಯರ್ಥಿ ಎಂದು ಸಿಎಸಿ ನಿರ್ಧರಿಸಿತ್ತು ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

ಕುಂಬ್ಳೆ ಅವರ ಒಂದು ವರ್ಷದ ಒಪ್ಪಂದ ಮುಕ್ತಾಯಗೊಂಡ ಬಳಿಕ ಬಿಸಿಸಿಐ ಮತ್ತೊಮ್ಮೆ ಕೋಚ್ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಸಿಎಸಿಗೆ ಸೂಚಿಸಿತ್ತು. ಅರ್ಜಿ ಸಲ್ಲಿಸಿದ್ದ ಇತರ ಅಭ್ಯರ್ಥಿಗಳ ಕಾರ್ಯಕ್ಷಮತೆಯೊಂದಿಗೆ ಕುಂಬ್ಳೆ ಅವರ ಕೆಲಸವನ್ನು ಹೋಲಿಕೆ ಮಾಡಿದ ಸಿಎಸಿ, ಕುಂಬ್ಳೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿತ್ತು.

ಹೀಗಾಗಿ 2019ರ ಏಕದಿನ ವಿಶ್ವಕಪ್‌ವರೆಗೂ ಅನಿಲ್ ಕುಂಬ್ಳೆ ಅವರನ್ನೇ ಭಾರತ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಸಬೇಕು ಎಂದು ಸಿಎಸಿ ಬಿಸಿಸಿಐಗೆ ಶಿಫಾರಸು ಮಾಡಿತ್ತು ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಸಿಎಸಿಯ ಸಂಪೂರ್ಣ ಬೆಂಬಲ ಕುಂಬ್ಳೆ ಅವರಿಗೆ ಇದ್ದರೂ, ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯ ಹಾಗೂ ತಂಡದೊಳಗಿನ ವಾತಾವರಣ ಸಂಕೀರ್ಣಗೊಂಡ ಪರಿಣಾಮ ಪರಿಸ್ಥಿತಿ ಬದಲಾಗಿತ್ತು. ಅಂತಿಮವಾಗಿ ಅನಿಲ್ ಕುಂಬ್ಳೆ ಸ್ವತಃ ರಾಜೀನಾಮೆ ನೀಡಿದರು ಎಂದು ಲಕ್ಷ್ಮಣ್ ವಿವರಿಸಿದ್ದಾರೆ.

ಅಂದು ತಾವು ಕುಂಬ್ಳೆ ಅವರ ಸ್ಥಾನದಲ್ಲಿದ್ದಿದ್ದರೆ, ಆ ಪರಿಸ್ಥಿತಿಗಳನ್ನು ಗಮನಿಸಿ ಬಹುಶಃ ತಾವೂ ಇದೇ ರೀತಿಯ ರಾಜೀನಾಮೆ ನಿರ್ಧಾರ ಕೈಗೊಳ್ಳುತ್ತಿದ್ದೆ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಹೀಗಾಗಿ ಅನಿಲ್ ಕುಂಬ್ಳೆ ಅವರ ನಿರ್ಗಮನವು ಬಿಸಿಸಿಐ ಅಥವಾ ಸಿಎಸಿಯ ನೇರ ವಜಾ ನಿರ್ಧಾರವಾಗಿರಲಿಲ್ಲ. ಬದಲಿಗೆ, ತಂಡದೊಳಗಿನ ಭಿನ್ನಾಭಿಪ್ರಾಯಗಳು ಹಾಗೂ ಸಂಕೀರ್ಣಗೊಂಡ ಪರಿಸ್ಥಿತಿಗಳೇ ಕುಂಬ್ಳೆ ರಾಜೀನಾಮೆಗೆ ಪ್ರಮುಖ ಕಾರಣವಾಗಿದ್ದವು ಎಂಬುದು ಲಕ್ಷ್ಮಣ್ ಅವರ ಹೇಳಿಕೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.

RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಸರ್ಕಾರಿ ಶಿಕ್ಷಕರು ಅಮಾನತು!

0

ಯಾದಗಿರಿ: ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು ಘಟನೆ ನಡೆದ ಸುಮಾರು 9 ತಿಂಗಳ ಬಳಿಕ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.

ಯಾದಗಿರಿ ಡಿಡಿಪಿಐ ಚನ್ನಬಸಪ್ಪ ಮುದೋಳ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡ ಶಿಕ್ಷಕರನ್ನು ಹುಣಸಗಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಗುರುರಾಜ್ ಜೋಶಿ ಹಾಗೂ ಹುಣಸಗಿ ತಾಲೂಕಿನ ಕುಪ್ಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಣ್ಣಾಸಾಹೇಬ್ ದೇಶಮುಖ ಎಂದು ತಿಳಿದುಬಂದಿದೆ.

ಆರ್‌ಎಸ್‌ಎಸ್‌ ತನ್ನ ಶತಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ಪಥಸಂಚಲನ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಹುಣಸಗಿ ತಾಲೂಕಿನ ಇಬ್ಬರು ಶಿಕ್ಷಕರು ಭಾಗವಹಿಸಿದ್ದರು ಎನ್ನಲಾಗಿದೆ.

ಸರ್ಕಾರಿ ಸೇವೆಯಲ್ಲಿದ್ದುಕೊಂಡು ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಮುಖಂಡರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದರು. ಈ ಕುರಿತು ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ದೂರು ನೀಡಲಾಗಿತ್ತು.

ದೂರಿನ ಆಧಾರದ ಮೇಲೆ ಪ್ರಿಯಾಂಕ್ ಖರ್ಗೆ ಅವರು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದರು. ಬಳಿಕ ಶಿಕ್ಷಣ ಇಲಾಖೆ ತನಿಖೆ ನಡೆಸಿದ್ದು, ಇದೀಗ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.

ಸ್ನೇಹ ಬೆಳೆಸಲು ನಿರಾಕರಿಸಿದ್ದಕ್ಕೆ ಮಾಡೆಲ್ ಕೊಲೆ? ಜಿಮ್ ಟ್ರೇನರ್ ಮೇಲೆ ಕೊಲೆ ಆರೋಪ!

0

ನವದೆಹಲಿ: ಸ್ನೇಹ ಬೆಳೆಸಲು ನಿರಾಕರಿಸಿದ್ದಕ್ಕೆ ಮಾಡೆಲ್‌ ಒಬ್ಬರನ್ನು ಆಕೆಯ ಮನೆಗೆ ನುಗ್ಗಿ ಕೊಲೆ ಮಾಡಿರುವ ಆರೋಪ ದೆಹಲಿಯ ತಿಲಕ್ ನಗರದಲ್ಲಿ ಕೇಳಿಬಂದಿದೆ.

ಮೃತ ಯುವತಿಯನ್ನು 21 ವರ್ಷದ ಮುಸ್ಕಾನ್ ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿದ ಆರೋಪ ಜಿಮ್ ಟ್ರೇನರ್ ಇಮ್ರಾನ್ ಮೇಲಿದೆ.

ಘಟನೆ ನಡೆದ ಸಂದರ್ಭದಲ್ಲಿ ಮುಸ್ಕಾನ್ ಮನೆಯಲ್ಲಿ ಒಬ್ಬರೇ ಇದ್ದರು. ಮುಸ್ಕಾನ್ ಜಿಮ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇಮ್ರಾನ್ ಪರಿಚಯವಾಗಿದ್ದ ಎನ್ನಲಾಗಿದೆ. ಪರಿಚಯವಾದ ಬಳಿಕ ಇಮ್ರಾನ್ ನಿರಂತರವಾಗಿ ಆಕೆಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಮುಸ್ಕಾನ್ ಸ್ನೇಹ ಬೆಳೆಸಲು ನಿರಾಕರಿಸಿದ್ದಳು ಎನ್ನಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಆಕೆಯ ಮನೆಗೆ ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆ ಕುರಿತು ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಹತ್ಯೆಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ. ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ 4-5 ಕೋಟಿ ಹಣ ದುರುಪಯೋಗ ಆರೋಪ: ತನಿಖೆಗೆ ಆದೇಶ!

0

ಮೈಸೂರು: ನಂಜನಗೂಡು ಪಟ್ಟಣದ ಪ್ರಸಿದ್ಧ ಶ್ರೀ ನಂಜುಂಡೇಶ್ವರ ದೇವಾಲಯದ 2024-25ನೇ ಸಾಲಿನ ಆದಾಯ-ವೆಚ್ಚದ ಲೆಕ್ಕಪತ್ರದಲ್ಲಿ ಹಣಕಾಸಿನ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಲೆಕ್ಕದಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ದೇವಾಲಯದ ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಆದೇಶಿಸಲಾಗಿದೆ.

2024-25ನೇ ಸಾಲಿನಲ್ಲಿ ದೇವಾಲಯಕ್ಕೆ ₹25.86 ಕೋಟಿ ಆದಾಯ ಬಂದಿದ್ದು, ₹25.68 ಕೋಟಿ ವೆಚ್ಚವಾಗಿದೆ ಎಂದು ಲೆಕ್ಕದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಕೇವಲ ₹17.84 ಲಕ್ಷ ಉಳಿತಾಯ ಉಳಿದಿದೆ. ಹಿಂದಿನ ವರ್ಷಗಳಲ್ಲಿ ಸುಮಾರು ₹4 ಕೋಟಿಗೂ ಹೆಚ್ಚು ಉಳಿತಾಯವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಬಾರಿ ಉಳಿತಾಯ ಪ್ರಮಾಣ ಇಷ್ಟು ಕಡಿಮೆಯಾಗಿರುವುದಕ್ಕೆ ಸ್ಥಳೀಯರು ಹಾಗೂ ರೈತ ಮುಖಂಡರು ಪ್ರಶ್ನೆ ಎತ್ತಿದ್ದಾರೆ.

ಪ್ರಸಾದ, ಲಾಡು ತಯಾರಿಕೆ ವೆಚ್ಚದ ಬಗ್ಗೆ ಅನುಮಾನ:

ದೇವಾಲಯದ ವಿವಿಧ ವೆಚ್ಚಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಒಂದೇ ಹೊತ್ತು ಪ್ರಸಾದ ವಿತರಿಸಿದ ವರ್ಷದಲ್ಲಿ ಸುಮಾರು ₹73 ಲಕ್ಷ ವೆಚ್ಚವಾಗಿದ್ದರೆ, ಮೂರು ಹೊತ್ತು ಪ್ರಸಾದ ವಿತರಿಸಿದ ವರ್ಷದಲ್ಲಿ ಕೇವಲ ₹46 ಲಕ್ಷ ವೆಚ್ಚವಾಗಿದೆ ಎಂದು ಲೆಕ್ಕದಲ್ಲಿ ಉಲ್ಲೇಖಿಸಲಾಗಿದೆ.

ಅದೇ ರೀತಿ, ಭಕ್ತರಿಂದ ಹಾಲು ಮತ್ತು ಮೊಸರು ಕೊಡುಗೆಯಾಗಿ ಬರುತ್ತಿದ್ದರೂ ₹3.18 ಲಕ್ಷ ಮೌಲ್ಯದ ಹಾಲು-ಮೊಸರು ಖರೀದಿ ಮಾಡಿರುವ ಲೆಕ್ಕದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಲಾಡು ತಯಾರಿಕೆಗೆ ₹3.50 ಕೋಟಿ, ಬಾಳೆಹಣ್ಣಿಗೆ ₹6.55 ಲಕ್ಷ, ಶಾಮಿಯಾನಕ್ಕೆ ₹17.84 ಲಕ್ಷ, ಪಾರ್ಕಿಂಗ್‌ಗೆ ₹37.88 ಲಕ್ಷ ಹಾಗೂ ಸಿಸಿ ಕ್ಯಾಮೆರಾ ದುರಸ್ತಿಗೆ ₹29.89 ಲಕ್ಷ ವೆಚ್ಚ ತೋರಿಸಲಾಗಿದೆ. ಈ ಎಲ್ಲ ವೆಚ್ಚಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳಲೆ ದೇವಸ್ಥಾನದ ಲೆಕ್ಕದಲ್ಲೂ ಪ್ರಶ್ನೆ:

ನಂಜನಗೂಡು ತಾಲೂಕಿನ ಕಳಲೆ ದೇವಸ್ಥಾನದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎನ್ನಲಾಗುತ್ತಿದ್ದರೂ ₹18 ಲಕ್ಷ ವೆಚ್ಚ ತೋರಿಸಿರುವ ಬಗ್ಗೆ ಪ್ರಶ್ನೆಗಳು ಕೇಳಿಬಂದಿವೆ. ಇದರಲ್ಲಿ ₹14 ಲಕ್ಷ ಕಾಮಗಾರಿಗೆ ಹಾಗೂ ₹4 ಲಕ್ಷ ಜಾತ್ರೆ ಖರ್ಚಿಗೆ ಸಂಬಂಧಿಸಿದೆ ಎಂದು ಮಾಹಿತಿ ನೀಡಲಾಗಿದೆ.

ಒಟ್ಟಾರೆ 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ₹4ರಿಂದ ₹5 ಕೋಟಿ ದುರುಪಯೋಗವಾಗಿರುವ ಶಂಕೆ ಇದೆ ಎಂದು ರೈತ ಮುಖಂಡರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ. ದೇವಾಲಯದ ಆದಾಯ-ವೆಚ್ಚದ ಪ್ರತಿಯೊಂದು ಅಂಶವನ್ನೂ ಪರಿಶೀಲಿಸಿ, ಲೋಪ ಅಥವಾ ಅಕ್ರಮ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಸಮಗ್ರ ತನಿಖೆಗೆ ಆದೇಶಿಸಿರುವುದು ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ.

ಮಂತ್ರಾಲಯದಲ್ಲಿ ಇಂದಿನಿಂದ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ!

0

ರಾಯಚೂರು: ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವಕ್ಕೆ ಇಂದಿನಿಂದ ಚಾಲನೆ ದೊರೆಯಲಿದೆ.

ಸಂಜೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಸಪ್ತರಾತ್ರೋತ್ಸವವು ಆ.27ರಿಂದ ಸೆ.2ರವರೆಗೆ ಏಳು ದಿನಗಳ ಕಾಲ ನಡೆಯಲಿದೆ. ಉತ್ಸವದ ಅಂಗವಾಗಿ ಗೋ, ಗಜ, ಅಶ್ವ, ಧಾನ್ಯ ಹಾಗೂ ಲಕ್ಷ್ಮಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಆ.29ರಂದು ಪೂರ್ವಾರಾಧನೆ, ಆ.30ರಂದು ಮಧ್ಯಾರಾಧನೆ ಹಾಗೂ ಆ.31ರಂದು ಉತ್ತರಾರಾಧನೆ ನಡೆಯಲಿದೆ. ಆರಾಧನಾ ಮಹೋತ್ಸವದ ಅಂಗವಾಗಿ ಮಠದ ಆವರಣದಲ್ಲಿರುವ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ಮೂರು ದಿನಗಳ ಕಾಲ ತೆಪ್ಪೋತ್ಸವವೂ ಜರುಗಲಿದೆ.

ಆ.29ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ‘ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ’ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಆ.31ರಂದು ಅದ್ಧೂರಿಯಾಗಿ ಮಹಾರಥೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಲಾಗುವುದು.

ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಮಠದ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಚನ್ನಪಟ್ಟಣದ ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು ಪತ್ತೆ; ಗ್ರಾಮಸ್ಥರಲ್ಲಿ ಆತಂಕ!

0

ಚನ್ನಪಟ್ಟಣ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದ ಕಬ್ಬಿನ ತೋಟದಲ್ಲಿ ನಾಲ್ಕು ಜೀವಂತ ಚಿರತೆ ಮರಿಗಳು ಪತ್ತೆಯಾಗಿವೆ.

ಗ್ರಾಮದ ನಾಗೇಶ್ ಎಂಬುವವರಿಗೆ ಸೇರಿದ ಕಬ್ಬಿನ ತೋಟದಲ್ಲಿ ಕೂಲಿ ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಚಿರತೆ ಮರಿಗಳು ಕಾಣಿಸಿಕೊಂಡಿವೆ. ಪತ್ತೆಯಾದ ನಾಲ್ಕೂ ಮರಿಗಳು ಕೇವಲ 4ರಿಂದ 5 ದಿನಗಳ ಹಿಂದೆ ಜನಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಕಬ್ಬಿನ ದಟ್ಟವಾದ ಬೆಳೆಯನ್ನು ಸುರಕ್ಷಿತ ತಾಣವೆಂದು ಭಾವಿಸಿ ತಾಯಿ ಚಿರತೆ ಇಲ್ಲಿ ಮರಿಗಳಿಗೆ ಜನ್ಮ ನೀಡಿರಬಹುದು ಎಂದು ಶಂಕಿಸಲಾಗಿದೆ. ಮರಿಗಳು ಪತ್ತೆಯಾಗುತ್ತಿದ್ದಂತೆಯೇ ರೈತರು ಹಾಗೂ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಲ್ಕೂ ಚಿರತೆ ಮರಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ನಡುವೆ, ಮರಿಗಳನ್ನು ಹುಡುಕಿಕೊಂಡು ತಾಯಿ ಚಿರತೆ ಮತ್ತೆ ತೋಟ ಅಥವಾ ಗ್ರಾಮದತ್ತ ಬರುವ ಸಾಧ್ಯತೆ ಇರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ತಾಯಿ ಚಿರತೆಯನ್ನು ಬೋನು ಇರಿಸಿ ಸೆರೆಹಿಡಿದು, ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ನೇಪಾಳ-ಟಿಬೆಟ್ ದುರಂತ..! ಕನ್ನಡಿಗರ ಮಾಹಿತಿ ಕಲೆಹಾಕುತ್ತಿದೆ ಕರ್ನಾಟಕ ಸರ್ಕಾರ!

0

ಬೆಂಗಳೂರು: ನೇಪಾಳ–ಟಿಬೆಟ್ ಗಡಿ ಭಾಗದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ, ಅಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಹಾಗೂ ಅವರ ಮಾಹಿತಿ ಸಂಗ್ರಹಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ.

ಪ್ರವಾಹದಿಂದ ರಸ್ತೆ ಸಂಪರ್ಕ ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಹಲವು ಭಾರತೀಯರು ನಾಪತ್ತೆಯಾಗಿರುವ ವರದಿಗಳು ಬಂದಿವೆ.

ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಕ್ಷಣಾ ಕಾರ್ಯಕ್ಕೆ ಸಜ್ಜಾಗಿದೆ.

ನೇಪಾಳ ಅಥವಾ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ (TAR) ಸಿಲುಕಿರುವ ಕನ್ನಡಿಗರು ಹಾಗೂ ಅವರ ಕುಟುಂಬಸ್ಥರ ವಿವರಗಳನ್ನು ಸರ್ಕಾರ ಕಲೆಹಾಕುತ್ತಿದೆ. ತಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಿತರು ನೇಪಾಳ ಅಥವಾ ಟಿಬೆಟ್ ಭಾಗದಲ್ಲಿ ಸಿಲುಕಿಕೊಂಡಿದ್ದರೆ, ಅವರ ವಿವರಗಳನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಪ್ರಾಧಿಕಾರಕ್ಕೆ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

ಈ ಸಂಬಂಧ ಗೂಗಲ್ ಡಾಕ್ಸ್ ಮೂಲಕ ವಿವರಗಳನ್ನು ಸಲ್ಲಿಸುವಂತೆ ಮಾಹಿತಿ ಕೋರಲಾಗಿದೆ.

ಸದ್ಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿದ್ದು, ಸಿಲುಕಿರುವವರನ್ನು ಸುರಕ್ಷಿತವಾಗಿ ಕರೆತರಲು ಅಗತ್ಯ ನೆರವು ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ತರಕಾರಿ ಬೆಲೆ ಸೆಂಚುರಿ ಹೊಡೆಯುತ್ತಾ..? ಬೆಂಗಳೂರಲ್ಲಿ ಗ್ರಾಹಕರ ಜೇಬಿಗೆ ಬಿತ್ತು ಬೆಲೆ ಏರಿಕೆಯ ಬಿಸಿ!

ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದಲ್ಲಿ ತರಕಾರಿ ಬೆಲೆಗಳು ನಿಧಾನವಾಗಿ ಏರಿಕೆಯಾಗುತ್ತಿವೆ.

30-40 ರೂ.ಗೆ ಸಿಗುತ್ತಿದ್ದ ಹಲವು ತರಕಾರಿಗಳ ದರ ಇದೀಗ 60-80 ರೂ.ಗೆ ತಲುಪಿದ್ದು, ಗ್ರಾಹಕರ ಜೇಬಿಗೆ ಹೊರೆ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ತರಕಾರಿ ಖರೀದಿ ಪ್ರಮಾಣವೂ ಕಡಿಮೆಯಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಹೋಲ್‌ಸೇಲ್ ಹಾಗೂ ರಿಟೇಲ್ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಹೀಗಿದೆ:

  • ಶುಂಠಿ: ₹120–130
  • ಬೆಳ್ಳುಳ್ಳಿ: ₹230–250
  • ಬೀನ್ಸ್: ₹100–110
  • ಹಸಿಬಟಾಣಿ: ₹80–90
  • ಹಸಿಮೆಣಸಿನಕಾಯಿ: ₹80–90
  • ಈರುಳ್ಳಿ: ₹50–70
  • ನುಗ್ಗೆಕಾಯಿ: ₹90–100
  • ಟೊಮೇಟೊ: ₹25–30
  • ಕ್ಯಾರೆಟ್: ₹60–70
  • ಬೀಟ್‌ರೂಟ್: ₹60–70
  • ಕ್ಯಾಪ್ಸಿಕಂ: ₹70–80
  • ಹೀರೆಕಾಯಿ: ₹60–80
  • ಬೆಂಡೆಕಾಯಿ: ₹50–60
  • ಬದನೆಕಾಯಿ: ₹50–60
  • ಹಾಗಲಕಾಯಿ: ₹40–50
  • ಹೂಕೋಸು: ₹40–50
  • ಎಲೆಕೋಸು: ₹50–60
  • ಮೂಲಂಗಿ: ₹40–50

ಒಂದು ಕೆಜಿ ಬದಲು ಅರ್ಧ ಕೆಜಿ ಖರೀದಿ:

ತರಕಾರಿ ಬೆಲೆ ಹೆಚ್ಚಳದಿಂದ ಗ್ರಾಹಕರು ಒಂದು ಕೆಜಿ ಖರೀದಿಸುವ ಬದಲು ಅರ್ಧ ಕೆಜಿ ಅಥವಾ ಕಾಲು ಕೆಜಿಗೆ ಸೀಮಿತವಾಗುತ್ತಿದ್ದಾರೆ. ದಿನನಿತ್ಯದ ಅಡುಗೆಗೆ ತರಕಾರಿ ಅಗತ್ಯವಿದ್ದರೂ, ಬೆಲೆ ಹೆಚ್ಚಿರುವುದರಿಂದ ಖರೀದಿಸಲು ಕಷ್ಟವಾಗುತ್ತಿದೆ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.

ಮನೆ ಸಮೀಪದ ತರಕಾರಿ ಅಂಗಡಿಗಳಿಗಿಂತ ಕೆ.ಆರ್. ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತಿವೆ. ಹೀಗಾಗಿ ತಾಜಾ ತರಕಾರಿ ಕಡಿಮೆ ದರದಲ್ಲಿ ಸಿಗುತ್ತದೆ ಎಂಬ ಕಾರಣಕ್ಕೆ ದೂರದಿಂದಲೂ ಗ್ರಾಹಕರು ಕೆ.ಆರ್. ಮಾರುಕಟ್ಟೆಗೆ ಬರುತ್ತಿದ್ದಾರೆ.

ರೈತರು ಮತ್ತು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ:

ಮುಂಗಾರು ಮಳೆಯಲ್ಲಿನ ವ್ಯತ್ಯಾಸದಿಂದ ತರಕಾರಿ ಬೆಳೆ ಮೇಲೆ ಪರಿಣಾಮ ಬೀರಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆಯಾದರೆ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಕೆಲವು ತರಕಾರಿಗಳ ಬೆಲೆ ₹100ರ ಗಡಿ ತಲುಪಿದ್ದು, ಬೆಲೆ ಏರಿಕೆ ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

ಒಟ್ಟಿನಲ್ಲಿ ತರಕಾರಿ ಬೆಲೆ ಏರಿಕೆಯಿಂದ ಒಂದೆಡೆ ರೈತರು ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ಗ್ರಾಹಕರು ಹೆಚ್ಚಿದ ದರಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.