ಉತ್ತರ ಕನ್ನಡ: ಜಿಲ್ಲೆಯ ಕಾರವಾರದ ಶಿರಸಿ ನಗರದಲ್ಲಿ ನಡೆದಿದ್ದ ವೈದ್ಯನ ಹತ್ಯೆ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್ ಸಿಕ್ಕಿದೆ. ಮದುವೆಗೆ ಸಿದ್ಧವಾಗಿದ್ದ ಡಾ. ರಮೇಶ್ ಕಲಗುಟಕರ (51) ಅವರನ್ನು ಅವರದೇ ಸ್ನೇಹಿತ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಪ್ರಕರಣದಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ಪಾಂಡುರಂಗ ನಾಯ್ಕ (68) ಎಂಬ ಆರೋಪಿಯನ್ನು ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಚಿನ್ನದ ಆಸೆಯೇ ಈ ಭೀಕರ ಹತ್ಯೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ಮಂಜುನಾಥ್ ಹಲವು ಬಾರಿ ಚಿಕಿತ್ಸೆಗಾಗಿ ವೈದ್ಯರ ಬಳಿ ಬಂದಿದ್ದರಿಂದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಈ ವಿಶ್ವಾಸದನ್ನೇ ದುರುಪಯೋಗಪಡಿಸಿಕೊಂಡ ಆರೋಪಿ, ಮದುವೆ ಹಿನ್ನೆಲೆ ಬ್ಯಾಂಕ್ನಿಂದ ತಂದಿದ್ದ ಬಂಗಾರದ ಒಡವೆಗಳನ್ನು ಗಮನಿಸಿ ದುರಾಲೋಚನೆ ನಡೆಸಿದ್ದಾನೆ.
ಘಟನೆ ನಡೆದ ರಾತ್ರಿ ವೈದ್ಯರು ಮಲಗಿದ್ದಾಗ ಆಯುಧದಿಂದ ಹೊಡೆದು ಹತ್ಯೆ ಮಾಡಿ, ಮನೆಯ ಬೀಗ ಹಾಕಿ ಚಿನ್ನದೊಂದಿಗೆ ಪರಾರಿಯಾಗಿದ್ದಾನೆ. ಆದರೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಕೇವಲ 24 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿ, ಕದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

