Home Blog

ಗ್ರಾಹಕರಿಗೆ ಬಿಗ್ ಶಾಕ್! ಊಟ-ತಿಂಡಿ, ಕಾಫಿ-ಟೀ ದರ ಹೆಚ್ಚಳ!? ಬೆಲೆ ಏರಿಕೆಗೆ ಮಾಲೀಕರು ಸಜ್ಜು!

ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯ ಅಸ್ಥಿರತೆಯ ಪರಿಣಾಮವಾಗಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದೀಗ ನೇರ ಪರಿಣಾಮ ಹೋಟೆಲ್ ಉದ್ಯಮದ ಮೇಲೆ ಕಾಣಿಸಿಕೊಳ್ಳುತ್ತಿದೆ.

ಬೆಂಗಳೂರು ನಗರದ ಬಹುತೇಕ ಹೋಟೆಲ್‌ಗಳ ಮಾಲೀಕರು ಊಟ, ತಿಂಡಿ, ಟೀ ಹಾಗೂ ಕಾಫಿ ದರಗಳನ್ನು ಹೆಚ್ಚಿಸಲು ಮುಂದಾಗಿದ್ದಾರೆ. ಈಗಾಗಲೇ ಕೆಲವು ಹೋಟೆಲ್‌ಗಳು ಹೊಸ ದರಪಟ್ಟಿಯನ್ನು ಜಾರಿಗೆ ತಂದಿದ್ದು, ಉಳಿದ ಹೋಟೆಲ್‌ಗಳು ಮುಂದಿನ ಕೆಲ ದಿನಗಳಲ್ಲಿ ದರ ಏರಿಕೆ ಮಾಡಲು ಸಿದ್ಧತೆ ನಡೆಸಿವೆ.

ಮಾಹಿತಿಯಂತೆ, ಕಳೆದ ಮೂರು ತಿಂಗಳಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಸುಮಾರು ₹1,240ರಷ್ಟು ಏರಿಕೆ ದಾಖಲಾಗಿದೆ. ಇತ್ತೀಚಿನ ತಿಂಗಳಲ್ಲಿ ಮಾತ್ರ ₹991 ಹಾಗೂ ನಂತರ ₹46ರಷ್ಟು ಹೆಚ್ಚಳ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯ ಸಾಧ್ಯತೆ ಇರುವುದರಿಂದ ಸಿಲಿಂಡರ್ ಬೆಲೆ ₹4,000 ಗಡಿ ತಲುಪುವ ಭೀತಿ ಹೋಟೆಲ್ ಉದ್ಯಮವನ್ನು ಕಾಡುತ್ತಿದೆ.

ದರ ಏರಿಕೆಯಿಂದಾಗಿ ಇಡ್ಲಿ–ವಡೆ, ದೋಸೆ ಸೇರಿದಂತೆ ವಿವಿಧ ತಿಂಡಿ ಪದಾರ್ಥಗಳ ಮೇಲೆ ₹5 ರಿಂದ ₹10ರವರೆಗೆ ಹಾಗೂ ಊಟದ ಮೇಲೆ ₹10 ರಿಂದ ₹20ರವರೆಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಕಚೇರಿ ನೌಕರರು, ಮಧ್ಯಮ ವರ್ಗ ಹಾಗೂ ಬ್ಯಾಚುಲರ್ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಿದೆ.

ಹೋಟೆಲ್ ಮಾಲೀಕರ ಪ್ರಕಾರ, ಇಂಧನ ಮತ್ತು ಕಾರ್ಯಾಚರಣೆ ವೆಚ್ಚಗಳ ಹೆಚ್ಚಳದಿಂದ ಅನಿವಾರ್ಯವಾಗಿ ದರ ಪರಿಷ್ಕರಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಡಿಕೆ ಶಿವಕುಮಾರ್ ಸಿಎಂ ಪಟ್ಟಾಭಿಷೇಕಕ್ಕೆ ಕ್ಷಣಗಣನೆ! ಇಂದು ಬೆಂಗಳೂರಿನ ಪ್ರಮುಖ ಮಾರ್ಗಗಳಲ್ಲಿ ರಸ್ತೆ ಸಂಚಾರ ಬಂದ್!

ಬೆಂಗಳೂರು: ನೂತನ ಮುಖ್ಯಮಂತ್ರಿ ಆಗಿ ಡಿಕೆ ಶಿವಕುಮಾರ್ ಇಂದು ಸಂಜೆ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಭದ್ರತೆ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

ಪೊಲೀಸ್ ಅಧಿಕಾರಿಗಳ ಮಾಹಿತಿಯಂತೆ, ಇಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಗರ ಕೇಂದ್ರ ಭಾಗದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ರೇಸ್ ಕೋರ್ಸ್ ರಸ್ತೆ ಸೇರಿದಂತೆ ಹಲವು ಪ್ರಮುಖ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರಲಿದೆ.

ಸಂಚಾರ ದಟ್ಟಣೆ ತಪ್ಪಿಸಲು ಶಿವಾಜಿನಗರ, ಕನ್ನಿಂಗ್ಹ್ಯಾಮ್ ರಸ್ತೆ, ನೃಪತುಂಗ ರಸ್ತೆ, ಶಿವಾನಂದ ವೃತ್ತ, ಹೆಬ್ಬಾಳ ಹಾಗೂ ಔಟರ್ ರಿಂಗ್ ರಸ್ತೆ ಮಾರ್ಗಗಳನ್ನು ಬಳಸುವಂತೆ ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

ಭಾರಿ ವಾಹನಗಳ ಸಂಚಾರವನ್ನು ಇಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೂ ನಿರ್ಬಂಧ ವಿಧಿಸಲಾಗಿದೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ವಿವಿಐಪಿ, ಗಣ್ಯರು ಹಾಗೂ ಸಾರ್ವಜನಿಕರಿಗಾಗಿ ಪ್ರತ್ಯೇಕ ಬಂದೋಬಸ್ತ್ ರೂಪಿಸಲಾಗಿದೆ. ಲೋಕಭವನದ ಬಳಿ ನಿಯಂತ್ರಿತ ಪ್ರವೇಶ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಪಾಸ್ ಇರುವವರಿಗೆ ಮಾತ್ರ ಒಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

25ನೇ ಮುಖ್ಯಮಂತ್ರಿಯಾಗಿ ಇಂದು ಡಿಕೆ ಶಿವಕುಮಾರ್ ಪದಗ್ರಹಣ: ಐತಿಹಾಸಿಕ ಕ್ಷಣಕ್ಕೆ ಕೆಲವೇ ಗಂಟೆಗಳು ಬಾಕಿ, ಸಿದ್ಧಗೊಂಡ ಬೆಂಗಳೂರು!

ಬೆಂಗಳೂರು:- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಲಾಗಿದೆ. ವೇದಿಕೆಯಲ್ಲಿ ಸೀಮಿತ ಗಣ್ಯರಿಗೆ 20 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸರ್ವಧರ್ಮ ಸಮನ್ವಯತೆಯ ಪ್ರತೀಕವಾಗಿ ಸ್ವಾಮೀಜಿಗಳು, ಫಾದರ್‌ಗಳು ಹಾಗೂ ಮೌಲ್ವಿಗಳು ಸೇರಿದಂತೆ ಸುಮಾರು 55 ಧಾರ್ಮಿಕ ಮುಖಂಡರಿಗೆ ಆಹ್ವಾನ ನೀಡಲಾಗಿದೆ.

ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್ ಜೊತೆಗೆ ಸುಮಾರು 10ಕ್ಕೂ ಹೆಚ್ಚು ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಸಚಿವ ಸಂಪುಟ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ದೆಹಲಿ ಮತ್ತು ಬೆಂಗಳೂರು ಮಟ್ಟದಲ್ಲಿ ನಡೆದ ಸರಣಿ ಸಭೆಗಳ ಬಳಿಕ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.

ಕಾಂಗ್ರೆಸ್ ಹೈಕಮಾಂಡ್ ನಾಯಕರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದಾರೆ.

ರಾಜಕೀಯ ಅನುಭವ, ದೀರ್ಘ ಹೋರಾಟದ ಹಿನ್ನೆಲೆ ಹಾಗೂ ಪಕ್ಷ ಸಂಘಟನೆಯಲ್ಲಿ ನೀಡಿದ ಕೊಡುಗೆಯ ಹಿನ್ನೆಲೆಯಲ್ಲಿ ಡಿಕೆಶಿಯವರ ಪದಗ್ರಹಣವನ್ನು ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯವೆಂದು ಪರಿಗಣಿಸಲಾಗುತ್ತಿದೆ. ಸಚಿವ ಸಂಪುಟ ಹಂಚಿಕೆ ಕುರಿತು ಅಂತಿಮ ಘಟ್ಟದ ಚರ್ಚೆಗಳು ಮುಂದುವರಿದಿದ್ದು, ಇಂದು ಮಧ್ಯಾಹ್ನದೊಳಗೆ ಅಧಿಕೃತ ಘೋಷಣೆ ಸಾಧ್ಯತೆ ಇದೆ.

ಡಿಕೆ ಸಂಪುಟ ಸೇರುವ ಸಂಭಾವ್ಯ ಸಚಿವರು ಯಾರು?
ಕೆಜೆ ಜಾರ್ಜ್​
ಡಾ. ಜಿ ಪರಮೇಶ್ವರ್​
ರಾಮಲಿಂಗಾರೆಡ್ಡಿ
ಕೃಷ್ಣಬೈರೇಗೌಡ
ಯುಟಿ ಖಾದರ್
ಎಂಬಿ ಪಾಟೀಲ್
ಪ್ರಿಯಾಂಕ ಖರ್ಗೆ
ಈಶ್ವರ್ ಖಂಡ್ರೆ
ಸಿದ್ದರಾಮಯ್ಯ ಪುತ್ರ, ಮುನಿಯಪ್ಪ ಪುತ್ರಿಗೆ ಸ್ಥಾನ
ಇನ್ನು ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯಗೆ ಡಿಕೆಶಿ ಸಂಪುಟದಲ್ಲಿ ಸ್ಥಾನ ಸಿಗಲಿದೆ. ಅತ್ತ ಸಿದ್ದರಾಮಯ್ಯ ಆಪ್ತ ಕೆಹೆಚ್‌ ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಅವರಿಗೂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವೆ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.

ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಮಳೆಯಲ್ಲೇ ಮಹಾ ಹರಕೆ..!

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಶಾಸಕ ಜಿ. ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಇದೀಗ ಭಾವನಾತ್ಮಕ ರಾಜಕೀಯ ಒತ್ತಡದ ರೂಪ ಪಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಳೆಯಲ್ಲೇ ದೀರ್ಘದಂಡ ನಮಸ್ಕಾರ ಹಾಕಿ ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನ ನಡೆಸಿದರು.

ಗದಗ ಜಿಲ್ಲೆಯ ರೋಣ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ದರ್ಗಾವರೆಗೆ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಕಾರ್ಯಕರ್ತರು ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಹಾಗೂ ರಾಜಕೀಯ ನಿಷ್ಠೆಯನ್ನು ಪ್ರದರ್ಶಿಸಿದರು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ದೀರ್ಘದಂಡ ನಮಸ್ಕಾರ ಹಾಕಿದ ಕಾರ್ಯಕರ್ತರು “ಈ ಬಾರಿ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಲೇಬೇಕು” ಎಂದು ಘೋಷಣೆ ಕೂಗಿದರು.

“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ರೋಣ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ನಾಲ್ಕು ಬಾರಿ ಶಾಸಕರಾಗಿ ಗೆದ್ದು ಪಕ್ಷಕ್ಕಾಗಿ ದುಡಿದ ಜಿ. ಎಸ್. ಪಾಟೀಲರಿಗೆ ಇದುವರೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ಶತಾಯಗತಾಯ ಸಚಿವ ಸ್ಥಾನ ನೀಡಬೇಕು” ಎಂದು ಕಾರ್ಯಕರ್ತರು ಆಗ್ರಹಿಸಿದರು.

ದೀರ್ಘದಂಡ ನಮಸ್ಕಾರದ ವೇಳೆ ದಾರಿಯುದ್ದಕ್ಕೂ ಜಿ. ಎಸ್. ಪಾಟೀಲ ಪರ ಘೋಷಣೆಗಳು ಮೊಳಗಿದವು. ಬಳಿಕ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಾಸಕ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರಕಲೆಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಂಜಯ ದೊಡ್ಡಮನಿ, “ಜಿ. ಎಸ್. ಪಾಟೀಲರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿದ್ದಾರೆ. ಆದರೆ ಪ್ರತೀ ಬಾರಿ ಸಚಿವ ಸಂಪುಟ ರಚನೆ ವೇಳೆ ರೋಣ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಈ ಬಾರಿ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದರೆ ರೋಣ ಕ್ಷೇತ್ರದ ಜನತೆ ತೀವ್ರ ಹೋರಾಟಕ್ಕೆ ಇಳಿಯಲಿದ್ದಾರೆ. ಹೈಕಮಾಂಡ್ ಉತ್ತರ ಕರ್ನಾಟಕದ ಭಾವನೆಗಳಿಗೆ ಗೌರವ ನೀಡಬೇಕು” ಎಂದು ಎಚ್ಚರಿಕೆ ನೀಡಿದರು.

ಮಳೆಯ ನಡುವೆಯೂ ನಡೆದ ಈ ದೀರ್ಘದಂಡ ನಮಸ್ಕಾರ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ರೋಣ ಕ್ಷೇತ್ರದ ಕಾರ್ಯಕರ್ತರು ಸ್ಪಷ್ಟ ಸಂದೇಶ ರವಾನಿಸಿದಂತಾಗಿದೆ.

ಈ ಸಂದರ್ಭದಲ್ಲಿ ಮಹೇಶ ಕಳಸಣ್ಣವರ, ಅಸ್ಲಮ್ ಕೊಪ್ಪಳ, ಯಲ್ಲಪ್ಪ ಕಿರೇಸೂರ, ಅಸ್ಫಾಕ್ ಮುಲ್ಲಾ, ಶಹಬಾಜ್ ಗದಗಕರ್, ತೋಹಿದ್ ಜಲಾವರ್, ಬಸೀರ್ ಕಟ್ಟಿಮನಿ, ವೀರಣ್ಣ ಸಾಕಾ, ಮುತ್ತು ನವಲಗುಂದ, ನಿಂಬಣ್ಣ ಗಾಣಿಗೇರ, ರಿಯಾಜ್ ಮುಲ್ಲಾ, ದಾವಲಸಾಬ್ ಬಾಡಿನ, ದುರಗಪ್ಪ ಹಿರೇಮನಿ, ಮಾದೇವ ತೆಗ್ಗಿನಮನಿ, ರಾಜು ಪಿಂಜಾರ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

“ರೋಣ ಕ್ಷೇತ್ರಕ್ಕೆ ಈ ಬಾರಿ ನ್ಯಾಯ ಸಿಗಲೇಬೇಕು. ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವುದು ಉತ್ತರ ಕರ್ನಾಟಕದ ಜನರ ಭಾವನೆಗೆ ಗೌರವ ನೀಡಿದಂತಾಗುತ್ತದೆ.”

ಸಂಜಯ ದೊಡ್ಡಮನಿ, ಕಾಂಗ್ರೆಸ್ ಮುಖಂಡ

  • ಮಳೆಯಲ್ಲೂ ನಿಲ್ಲದ ಕಾರ್ಯಕರ್ತರ ಜೋಶ್
  • ವೀರಭದ್ರೇಶ್ವರ ದೇವಸ್ಥಾನದಿಂದ ದರ್ಗಾವರೆಗೆ ದೀರ್ಘದಂಡ ನಮಸ್ಕಾರ
  • ಸುಮಾರು 1 ಕಿಮೀ ದೂರ ಮಳೆಯಲ್ಲೇ ಉರುಳಿ ಸಾಗಿದ ಅಭಿಮಾನಿಗಳು
  • “ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ಕೊಡಿ” ಎಂಬ ಘೋಷಣೆಗಳು
  • ವಿಶೇಷ ಪೂಜೆ ಸಲ್ಲಿಸಿ ಸಚಿವ ಸ್ಥಾನಕ್ಕಾಗಿ ಪ್ರಾರ್ಥನೆ
  • ಸಚಿವ ಸ್ಥಾನ ಸಿಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಸಾವಿನಲ್ಲೂ ಬೆಳಕಾದ ಉಳವೇಶ ಅಂಗಡಿ..!

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆಯ ನಿವೃತ್ತ ವ್ಯವಸ್ಥಾಪಕ ಹಾಗೂ ಹಿರಿಯ ಕ್ರೀಡಾಪಟು ಉಳವೇಶ ದಾನಪ್ಪ ಅಂಗಡಿ (94) ಅವರು ಜೂನ್ 1ರ ಸೋಮವಾರ ರಾತ್ರಿ ನಿಧನರಾದರು. ಅವರ ಕುಟುಂಬಸ್ಥರು ನೇತ್ರದಾನಕ್ಕೆ ಒಪ್ಪಿಗೆ ಸೂಚಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮೂಲತಃ ಗದಗ ತಾಲೂಕಿನ ಹೊಸಳ್ಳಿ ಗ್ರಾಮದವರಾದ ಉಳವೇಶ ಅಂಗಡಿ ಅವರು ಹಾಲಿ ಗದಗ ನಗರದಲ್ಲಿ ವಾಸವಾಗಿದ್ದರು. ಜೂನ್ 2ರಂದು ಅವರ ಅಂತ್ಯಕ್ರಿಯೆ ನೆರವೇರಿತು. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ನಿಧನದ ಸುದ್ದಿ ತಿಳಿದ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಮೃತರ ನೇತ್ರಗಳನ್ನು ದಾನ ಮಾಡುವಂತೆ ಮನವಿ ಮಾಡಿದಾಗ ಕುಟುಂಬಸ್ಥರು ಉದಾರ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದರು.

ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆಗಮಿಸಿ ನೇತ್ರದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.

94 ವರ್ಷಗಳ ತುಂಬು ಜೀವನ ನಡೆಸಿದ್ದ ಉಳವೇಶ ಅಂಗಡಿ ಅವರು ನಗರಸಭೆಯ ವ್ಯವಸ್ಥಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು. ಸಾವಿನ ನಂತರವೂ ಅಂಧರ ಬಾಳಿಗೆ ಬೆಳಕಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಬಸವರಾಜ ಉಳವೇಶ ಅಂಗಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ರಮೇಶ ಶಿಗ್ಲಿ, ಶೇಖಣ್ಣ ಕವಳಿಕಾಯಿ, ಅಶೋಕ ಬರಗುಂಡಿ, ಮುತ್ತು ಮುಲ್ಕಿಪಾಟೀಲ, ಗಿರೀಶ್ ಪಾಟೀಲ, ಜಗದೀಶ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಉಳವೇಶ ಅಂಗಡಿ ಅವರ ನೇತ್ರದಾನ ಮತ್ತೊಬ್ಬರ ಬದುಕಿಗೆ ಬೆಳಕಾಗಿದ್ದು, ಇದು ಸಮಾಜಕ್ಕೆ ಮಾದರಿಯಾದ ಮಾನವೀಯ ಕಾರ್ಯ.”

ರಾಜಣ್ಣ ಮಲ್ಲಾಡದ, ಕಾರ್ಯದರ್ಶಿ, ಗದಗ-ಬೆಟಗೇರಿ ಲಯನ್ಸ್ ಕ್ಲಬ್

ನೆಲಮಂಗಲದಲ್ಲಿ ಹಾಡಹಗಲೇ ಜ್ಯುವೆಲ್ಲರಿ ಶಾಪ್ ದರೋಡೆ! 30 ಸೆಕೆಂಡ್‌ನಲ್ಲಿ 35 ಗ್ರಾಂ ಚಿನ್ನ ಕಳವು

ನೆಲಮಂಗಲ: ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ಹಾಡಹಗಲೇ ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ನಡೆದ ಘಟನೆ ನಡೆದಿದೆ.

ಬೈಕಿನಲ್ಲಿ ಬಂದಿದ್ದ ಮೂವರು ದರೋಡೆಕೋರರು ಕೈಯಲ್ಲಿ ಚಾಕು ಹಿಡಿದು ಅಂಗಡಿಗೆ ನುಗ್ಗಿ ಕೆಲವೇ ಸೆಕೆಂಡ್‌ಗಳಲ್ಲಿ ಚಿನ್ನಾಭರಣ ಕಳವು ಮಾಡಿದ್ದಾರೆ.

ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಡೆದ ಈ ಘಟನೆಯಲ್ಲಿ ಸುಮಾರು 4.5 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ಕಳುವಾಗಿರುವುದಾಗಿ ತಿಳಿದುಬಂದಿದೆ. ಕೇವಲ 30 ಸೆಕೆಂಡ್‌ಗಳಲ್ಲೇ ದರೋಡೆ ನಡೆದಿದ್ದು, ದರೋಡೆಕೋರರು ಶೋ-ಗ್ಲಾಸ್‌ನಲ್ಲಿ ಇಟ್ಟಿದ್ದ ರಿಂಗ್ ಟ್ರೇನನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.

ಅಂಗಡಿಯಲ್ಲಿ ಸುಮಾರು 20 ಉಂಗುರಗಳಿದ್ದ ಟ್ರೇ ಇಡಲಾಗಿದ್ದು, ದರೋಡೆ ವೇಳೆ ಕೆಲವು ಉಂಗುರಗಳು ರಸ್ತೆಯಲ್ಲಿ ಬಿದ್ದಿರುವುದಾಗಿ ವರದಿಯಾಗಿದೆ. ನಂತರದ ಪರಿಶೀಲನೆಯಲ್ಲಿ ಸುಮಾರು 5 ಉಂಗುರಗಳು ಕಳುವಾಗಿರುವುದು ದೃಢಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ನಂತರ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಯೆಲ್ಲೋ ಲೈನ್ ಮೆಟ್ರೋಗೆ ಗುಡ್‌ನ್ಯೂಸ್: ಹೆಚ್ಚುವರಿ 2 ರೈಲು ಸೇರ್ಪಡೆ

ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಂತಸದ ಸುದ್ದಿ ನೀಡಿದೆ.

ಬುಧವಾರದಿಂದ ಈ ಮಾರ್ಗದಲ್ಲಿ ಹೆಚ್ಚುವರಿ 2 ರೈಲುಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಸೇವಾ ಆವರ್ತನೆ ಹೆಚ್ಚಿಸಲಾಗುತ್ತಿದೆ.

ಹೊಸ ಬದಲಾವಣೆಯ ಪ್ರಕಾರ ಪೀಕ್ ಅವರ್‌ನಲ್ಲಿ ಇನ್ಮುಂದೆ 7 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಈವರೆಗೆ ಪೀಕ್ ಅವರ್‌ನಲ್ಲಿ 9 ನಿಮಿಷಕ್ಕೊಂದು ರೈಲು ಸಂಚಾರವಿತ್ತು. ಸಾಮಾನ್ಯ ಸಮಯದಲ್ಲಿ ರೈಲುಗಳ ನಡುವಿನ ಅವಧಿಯನ್ನು 14 ನಿಮಿಷದಿಂದ 10 ನಿಮಿಷಕ್ಕೆ ಇಳಿಸಲಾಗಿದೆ.

ವಾರಾಂತ್ಯದಲ್ಲಿ ದಿನವಿಡೀ 10 ನಿಮಿಷಕ್ಕೊಂದು ರೈಲು ಸಂಚರಿಸಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಎರಡು ಹೆಚ್ಚುವರಿ ರೈಲುಗಳ ಸೇರ್ಪಡೆಯೊಂದಿಗೆ ಯೆಲ್ಲೋ ಲೈನ್‌ನಲ್ಲಿ ಪ್ರತಿದಿನ ಒಟ್ಟು 10 ರೈಲುಗಳು ಕಾರ್ಯನಿರ್ವಹಿಸಲಿದ್ದು, ಇದರಿಂದ ನಿರೀಕ್ಷಾ ಸಮಯ ಕಡಿಮೆಯಾಗುವ ಜೊತೆಗೆ ಸೇವಾ ದಕ್ಷತೆ ಹೆಚ್ಚಲಿದೆ ಎಂದು ಸಂಸ್ಥೆ ಹೇಳಿದೆ.

ಡಿ.ಕೆ. ಶಿವಕುಮಾರ್ ಸಿಎಂ ಪಟ್ಟಾಭಿಷೇಕಕ್ಕೆ ಭರ್ಜರಿ ಸಿದ್ಧತೆ: ಕಾರ್ಯಕ್ರಮಕ್ಕೆ ಬರುವ ವಿಶೇಷ ಆಹ್ವಾನಿತರು ಇವರೇ ನೋಡಿ!

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಐತಿಹಾಸಿಕ ಸಮಾರಂಭಕ್ಕೆ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದೆ.

ಈ ಕಾರ್ಯಕ್ರಮ ದೇಶದ ಗಮನ ಸೆಳೆಯುವ ರೀತಿಯಲ್ಲಿ ಭವ್ಯವಾಗಿ ಆಯೋಜನೆಗೊಳ್ಳುತ್ತಿದ್ದು, ವಿವಿಐಪಿ ಗಣ್ಯರು ಹಾಗೂ ಜನಸಾಮಾನ್ಯರನ್ನು ಒಳಗೊಂಡ ವಿಶಿಷ್ಟ ಆಹ್ವಾನಿತರ ಪಟ್ಟಿ ಸಿದ್ಧವಾಗಿದೆ.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಜೊತೆಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗೂ ಪ್ರಮುಖ ಸಂಸದರು ಸಹ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ಸಮಾರಂಭಕ್ಕೆ ಸರ್ವಧರ್ಮ ಗುರುಗಳನ್ನು ಆಹ್ವಾನಿಸಲಾಗಿದ್ದು, ಕಾರ್ಯಕ್ರಮಕ್ಕೆ ಧಾರ್ಮಿಕ ಸೌಹಾರ್ದತೆಯ ವಿಶೇಷ ಸಂದೇಶ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರ ತವರೂರಾದ ಕನಕಪುರದ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ ಮುಖಂಡರು, ದಲಿತ ಹಾಗೂ ಹಿಂದುಳಿದ ವರ್ಗಗಳ ನಾಯಕರು, ಸ್ತ್ರೀಶಕ್ತಿ ಸಂಘಗಳ ಪ್ರತಿನಿಧಿಗಳು ಮತ್ತು ಮಹಿಳಾ ಮುಖಂಡರಿಗೆ ಸಹ ವಿಶೇಷ ಆಹ್ವಾನ ನೀಡಲಾಗಿದೆ.

ಮಾಧ್ಯಮ, ಚಿತ್ರರಂಗ, ನ್ಯಾಯಾಂಗ, ಕ್ರೀಡೆ ಹಾಗೂ ನಾಟಕ ರಂಗದ ಗಣ್ಯರು, ಸಾಹಿತಿಗಳು ಮತ್ತು ಕಲಾವಿದರು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಯುವ ಮುಖಂಡರು ಸಹ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.

ಒಟ್ಟಾರೆ, ರಾಜಕೀಯ ಗಣ್ಯರು ಮತ್ತು ಜನಸಾಮಾನ್ಯರ ಅಪೂರ್ವ ಸಂಗಮಕ್ಕೆ ಈ ಪ್ರಮಾಣ ವಚನ ಸಮಾರಂಭ ಸಾಕ್ಷಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಗುರುಗಳ ಆಶೀರ್ವಾದವೇ ಬದುಕಿನ ಬೆಳಕು..!

ವಿಜಯಸಾಕ್ಷಿ ಸುದ್ದಿ, ನರಗುಂದ: 23 ವರ್ಷಗಳ ಹಿಂದೆ ಒಂದೇ ತರಗತಿಯಲ್ಲಿ ಕುಳಿತು ಓದಿದ ವಿದ್ಯಾರ್ಥಿಗಳು ಮತ್ತೆ ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಗುರುಗಳಿಗೆ ಗೌರವ ನಮನ ಸಲ್ಲಿಸಿದ ಅಪರೂಪದ ಕ್ಷಣಕ್ಕೆ ಚಿಕ್ಕನರಗುಂದ ಸಾಕ್ಷಿಯಾಯಿತು. ನೆನಪುಗಳು, ನಗು, ಭಾವುಕ ಕ್ಷಣಗಳು, ಗುರುಭಕ್ತಿ ಹಾಗೂ ಸ್ನೇಹದ ಬಾಂಧವ್ಯಗಳಿಂದ ಕೂಡಿದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಎಲ್ಲರ ಮನಸ್ಸನ್ನು ತಟ್ಟಿತು.
ಚಿಕ್ಕನರಗುಂದದ ಡಿ.ಎಸ್. ಕೆಂಚನಗೌಡ್ರ ಪ್ರೌಢಶಾಲೆಯ 2002-2003ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ “ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ” ಕಾರ್ಯಕ್ರಮಕ್ಕೆ ನರಗುಂದ ಪುಣ್ಯಾರಣ್ಯ ಪತ್ರಿವನಮಠದ ಷ.ಬ್ರ. ಡಾ. ಶ್ರೀ ಗುರುಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗುರು ಎಂದರೆ ಬೆಳಕು, ಜ್ಞಾನ ಹಾಗೂ ತೇಜಸ್ಸು. ಅದಕ್ಕಾಗಿಯೇ ಗುರುಗಳನ್ನು ಜ್ಞಾನಸೂರ್ಯ ಎಂದು ಕರೆಯುತ್ತಾರೆ. ಸೂರ್ಯೋದಯವಾದಾಗ ಕತ್ತಲೆ ಕರಗುವಂತೆ, ಗುರುವಿನ ಜ್ಞಾನದ ಅನುಗ್ರಹ ದೊರೆತಾಗ ಅಜ್ಞಾನ ದೂರವಾಗಿ ಸುಜ್ಞಾನ ಅರಳುತ್ತದೆ. ಗುರುಗಳು ಜ್ಞಾನದ ಸಂಜೀವಿನಿ ನೀಡುವ ಶಕ್ತಿಯಾಗಿದ್ದಾರೆ ಎಂದು ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನರಗುಂದ ಕಾಲೇಜಿನ ಉಪನ್ಯಾಸಕ ಎಸ್. ವ್ಹಿ. ದಂಡನಾಯ್ಕರ್, “ಎಲ್ಲರನ್ನು ಸಮದೃಷ್ಟಿಯಿಂದ ನೋಡಿ ಜ್ಞಾನದ ಧಾರೆಯನ್ನು ಹರಿಸುವ ಗುರುಗಳನ್ನು ಗೌರವಿಸುವುದು ನಮ್ಮ ಭವ್ಯ ಪರಂಪರೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಈ ಅಪೂರ್ವ ಸಂಗಮ ನಿಜಕ್ಕೂ ಅರ್ಥಪೂರ್ಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಂದನಾರ್ಹ ಗುರು ಬಳಗಕ್ಕೆ ವಿದ್ಯಾರ್ಥಿಗಳು ಪುಷ್ಪಾರ್ಚನೆ ಸಲ್ಲಿಸಿ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ವರ್ಷಗಳ ಬಳಿಕ ತಮ್ಮ ವಿದ್ಯಾರ್ಥಿಗಳನ್ನು ಕಂಡ ಗುರುಗಳ ಕಣ್ಣುಗಳಲ್ಲಿ ಸಂತಸದ ಕಣ್ಣೀರು ಮಿಂಚಿತು.
ಗುರುಗಳಾದ ಎಚ್. ಏ. ಮುದಿಯಪ್ಪನವರ ಮಾತನಾಡಿ, “2002-2003ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಯೋಜಿಸಿರುವ ಈ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಿಂದ ತುಂಬಾ ಸಂತೋಷವಾಗಿದೆ. ಇದು ನಮ್ಮ ಪಾಲಿಗೆ ಐದನೇ ಗುರುವಂದನಾ ಕಾರ್ಯಕ್ರಮ. ಒಬ್ಬ ಶಿಕ್ಷಕನಿಗೆ ಇದಕ್ಕಿಂತ ದೊಡ್ಡ ಸಂತೋಷ ಇನ್ನೇನು ಬೇಕು? 23 ವರ್ಷಗಳ ಬಳಿಕ ಎಲ್ಲರನ್ನು ಮತ್ತೆ ನೋಡುವ ಅವಕಾಶ ಸಿಕ್ಕಿದೆ” ಎಂದು ಭಾವುಕರಾದರು.
“ಕವಿ ಹೇಳುವಂತೆ ‘ಸ್ವರ್ಗದೊಳಗೆ ಈ ಸ್ನೇಹ ದೊರೆಯುವುದೇನು? ಇಲ್ಲವಾಗಿರೆ ನಮಗೆ ಇಲ್ಲೇ ನೂರು ವರ್ಷಗಳಿರಲಿ’ ಎಂಬ ಮಾತು ಇಂದು ಸಾರ್ಥಕವಾಗಿದೆ. ಮನೆಯೇ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು. ಮಕ್ಕಳನ್ನು ಮೊಬೈಲ್ ಹಾಗೂ ಟಿವಿಯಿಂದ ದೂರವಿಟ್ಟು ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ನೀಡಿ. ತಂದೆ-ತಾಯಿಗಳನ್ನು ಗೌರವಿಸಿ, ಬಂಧು ಬಳಗದೊಂದಿಗೆ ಉತ್ತಮ ಜೀವನ ನಡೆಸಿ” ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ಎಸ್. ಕಂದಗಲ್ಲ ಮಾತನಾಡಿ, “ಗುರುವಿನ ಗುಲಾಮನಾಗುವ ತನಕ ದೊರೆಯುವುದನ್ನು ಮುಕ್ತಿ ಎಂಬ ನುಡಿಗಟ್ಟು ಇದೆ. ಜೀವನವನ್ನು ರೂಪಿಸುವ ಶಕ್ತಿ ಗುರುಗಳಲ್ಲಿದೆ. ವಿದ್ಯಾರ್ಥಿಗಳ ಈ ಸಮಾರಂಭ ಶಿಕ್ಷಕರು ಬಿತ್ತಿದ ನೈತಿಕ ಮೌಲ್ಯಗಳ ಪ್ರತಿಬಿಂಬ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೇಣುಕಾ ಹೂಲಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಹಳೆಯ ವಿದ್ಯಾರ್ಥಿಗಳಾದ ಮಹಾಂತೇಶ ಹಲಗೌಡ್ರ, ನಿರ್ಮಲಾ ಹನಸಿ, ಗೀತಾ ಕಂಬಳಿ, ರವಿ ತಳವಾರ, ಹನಮಂತ ಮೇಟಿ ಶಾಲಾ ದಿನಗಳ ಅನುಭವಗಳನ್ನು ಹಂಚಿಕೊಂಡು ಭಾವನಾತ್ಮಕ ಕ್ಷಣಗಳನ್ನು ನೆನಪಿಸಿಕೊಂಡರು.
ಮುತ್ತು ರಾಯರಡ್ಡಿ ಸ್ವಾಗತಿಸಿದರು. ಪ್ರಕಾಶ ಗುಡಸಲಮನಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ ಚಲವಾದಿ ವಂದಿಸಿದರು.
ಸಭೆಯಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
 “23 ವರ್ಷಗಳ ಬಳಿಕ ಮತ್ತೆ ಒಂದೇ ವೇದಿಕೆಯಲ್ಲಿ ಸೇರಿರುವ ನಮ್ಮ ಸ್ನೇಹಿತರು ಮತ್ತು ಗುರುಗಳನ್ನು ನೋಡುವುದು ಬದುಕಿನ ಅತ್ಯಂತ ಅಮೂಲ್ಯ ಕ್ಷಣ. ಗುರುಗಳ ಆಶೀರ್ವಾದವೇ ನಮ್ಮ ಜೀವನದ ನಿಜವಾದ ಸಂಪತ್ತು.”
ಮುತ್ತು ರಾಯರಡ್ಡಿ
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ
 “ಗುರುಗಳು ಕಲಿಸಿದ ಪಾಠವೇ ಇಂದು ನಮ್ಮ ಬದುಕಿನ ದಾರಿದೀಪವಾಗಿದೆ. ವರ್ಷಗಳು ಕಳೆದರೂ ಶಾಲೆಯ ನೆನಪು ಮತ್ತು ಗುರುಗಳ ಋಣವನ್ನು ಮರೆಯಲು ಸಾಧ್ಯವಿಲ್ಲ.”
ಎಚ್. ಏ. ಮುದಿಯಪ್ಪನವರ
ಶಿಕ್ಷಕರು

ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡಿ..!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಹಾಲಮತ ಸಮಾಜದ ವತಿಯಿಂದ ಸೋಮವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಾಲಮತ ಸಮಾಜದ ಮುಖಂಡ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಸೋಮಣ್ಣ ಬೆಟಗೇರಿ, “ಉತ್ತರ ಕರ್ನಾಟಕ ಭಾಗದ ರೈತರು, ಬಡವರು ಹಾಗೂ ಅಹಿಂದ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸುವ ಸಚಿವರ ಅಗತ್ಯವಿದೆ. ಆ ನಿಟ್ಟಿನಲ್ಲಿ ಬಸವರಾಜ ಶಿವಣ್ಣನವರ ಅವರು ಸೂಕ್ತ ಅಭ್ಯರ್ಥಿಯಾಗಿದ್ದಾರೆ” ಎಂದು ಹೇಳಿದರು.
ನಾಲ್ಕು ಬಾರಿ ಶಾಸಕರಾಗಿ ಅಪಾರ ಜನಪ್ರಿಯತೆ ಗಳಿಸಿರುವ ಅವರು ಪಕ್ಷ ಹಾಗೂ ಸರ್ಕಾರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಜನಸಾಮಾನ್ಯರೊಂದಿಗೆ ಆತ್ಮೀಯವಾಗಿ ಬೆರೆಯುವ ನಾಯಕರಾಗಿರುವ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡಿದರೆ ಉತ್ತರ ಕರ್ನಾಟಕ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುವುದರ ಜೊತೆಗೆ ಅಹಿಂದ ವರ್ಗ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಶಿವಣ್ಣನವರ ಅವರ ಪಾತ್ರ ಮಹತ್ವದ್ದಾಗಿದೆ. ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಪಕ್ಷಕ್ಕೂ ಲಾಭವಾಗಲಿದ್ದು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಲಿದೆ ಎಂದು ಹೇಳಿದರು.
ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಾವಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕದ ಜನರ ಆಶಯ ಈಡೇರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಹುಲ್ ಹೊಳಲಾಪುರ, ಮುದಕಣ್ಣ ಗದ್ದಿ, ಛಾಯಪ್ಪ ಬಸಾಪುರ, ಮುತ್ತಣ್ಣ ಟೋಕಾಳಿ, ಮಂಜುನಾಥ ಶೇರಸೂರಿ, ಸುರೇಶ ಹೊಳಲಾಪುರ, ಮಲ್ಲೇಶಪ್ಪ ಬಸಾಪುರ ಹಾಗೂ ಪುಟ್ಟಪ್ಪ ಬಳಗಾನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
error: Content is protected !!