Home Blog

ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಚಿತ್ರೀಕರಣ: ಪಕ್ಕದ ಮನೆಯ ಯುವಕ ಅರೆಸ್ಟ್!

ಬೆಂಗಳೂರು: ಟೆಕ್ಕಿ ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಬಾತ್‌ರೂಂ ಕಿಟಕಿ ಬಳಿ ನಿಂತು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಲು ಯತ್ನಿಸಿದ ಆರೋಪಿಯನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಕಳೆದ ಏಪ್ರಿಲ್ 30ರಂದು ಗರುಡಾಚಾರ್ ಪಾಳ್ಯದ ಆಶ್ರಯ ಲೇಔಟ್‌ನಲ್ಲಿ ನಡೆದಿದ್ದು, ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕೆಲಸ ಮುಗಿಸಿ ಮನೆಗೆ ಬಂದ ಯುವತಿ ರಾತ್ರಿ ಸುಮಾರು 9.30ರ ವೇಳೆಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಮನೆಯ ಬಾತ್‌ರೂಂ ಕಿಟಕಿ ಬಳಿ ಮೊಬೈಲ್ ಫೋನ್ ಮೂಲಕ ವಿಡಿಯೋ ಚಿತ್ರೀಕರಿಸಲಾಗುತ್ತಿರುವುದನ್ನು ಅವರು ಗಮನಿಸಿದ್ದಾರೆ.

ತಕ್ಷಣವೇ ಯುವತಿ ಕಿರುಚಿಕೊಂಡಿದ್ದು, ಇದರಿಂದ ಗಾಬರಿಗೊಂಡ ಆರೋಪಿ ಸ್ಥಳದಿಂದ ಮೊಬೈಲ್ ಸಮೇತ ಪರಾರಿಯಾಗಿದ್ದಾನೆ.

ಘಟನೆಯ ಬಳಿಕ ಯುವತಿ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕಾರ್ತಿಕ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಕಾರ್ತಿಕ್ ಮೂಲತಃ ಕೇರಳದವನಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ಕಾರ್ತಿಕ್, ದೂರುದಾರ ಯುವತಿಯ ಮನೆಯ ಪಕ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು ಎನ್ನಲಾಗಿದೆ. ಪ್ರಕರಣ ಸಂಬಂಧ ಮಹದೇವಪುರ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದು, ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಕೇಸ್: ನಿವೃತ್ತಿ ಸಮೀಪವಾಗಿದ್ದರಿಂದ ಅಮಾನತು ವಾಪಸ್ – ಪರಮೇಶ್ವರ್

ಬೆಂಗಳೂರು: ಡಿಜಿಪಿ ರಾಮಚಂದ್ರರಾವ್ ಅವರ ಅಮಾನತು ಆದೇಶ ಹಿಂಪಡೆಯಲು ಅವರ ಈ ತಿಂಗಳಲ್ಲಿನ ನಿವೃತ್ತಿಯೇ ಪ್ರಮುಖ ಕಾರಣ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರ ಅನುಮತಿ ಪಡೆದು ಡಿಪಿಎಆರ್ ವತಿಯಿಂದ ಅಮಾನತು ಆದೇಶ ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ಈ ತಿಂಗಳ ಅಂತ್ಯಕ್ಕೆ ರಾಮಚಂದ್ರರಾವ್ ನಿವೃತ್ತಿಯಾಗಲಿದ್ದಾರೆ. ಅದಕ್ಕಾಗಿ ಅಮಾನತು ವಾಪಸ್ ಪಡೆಯಲಾಗಿದೆ. ನಿವೃತ್ತಿಗೆ ಮುನ್ನ ಪಿಂಚಣಿ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳಿಗೆ ರಾಮಚಂದ್ರರಾವ್ ವಿವರಣೆ ಸಲ್ಲಿಸಿದ್ದು, ತನಿಖೆ ಮುಂದುವರಿಯಲಿ, ಆದರೆ ನಿವೃತ್ತಿಗೆ ಸಂಬಂಧಿಸಿದ ಪಿಂಚಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು ಎಂದು ಪರಮೇಶ್ವರ್ ತಿಳಿಸಿದರು.

ಈ ವಿಚಾರ ನನಗೂ ತಿಳಿದಿತ್ತು. ಆದರೆ ಅಮಾನತು ಹಿಂಪಡೆಯುವುದು ಸರಿಯೋ ತಪ್ಪೋ ಎಂದು ನಾನು ಹೇಳಲು ಸಾಧ್ಯವಿಲ್ಲ. ಇದು ಡಿಪಿಎಆರ್ ಮತ್ತು ಮುಖ್ಯಮಂತ್ರಿಗಳ ವ್ಯಾಪ್ತಿಗೆ ಒಳಪಡುವ ವಿಷಯ. ಅಂತಿಮ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ ಎಂದು ಹೇಳಿದರು. ಇದೇ ವೇಳೆ ರಾಮಚಂದ್ರರಾವ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ತನಿಖೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ವಿಜಯ್‌ಗೆ ಸಿಎಂ ಕುರ್ಚಿ ಕೊಡಲೇಬೇಕು..! ರಾಜ್ಯಪಾಲರ ನಡೆ ವಿರುದ್ಧ ಕಮಲ್ ಹಾಸನ್ ಕಿಡಿ

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಅತಂತ್ರ ಸ್ಥಿತಿ ಮುಂದುವರಿದಿರುವ ಬೆನ್ನಲ್ಲೇ ನಟ ಕಮಲ್ ಹಾಸನ್ ಸಿಡಿದೆದ್ದಿದ್ದಾರೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿರುವ ಅವರು, ರಾಜ್ಯಪಾಲರ ವಿಳಂಬ ಧೋರಣೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಟಿವಿಕೆ 108 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಕಾಂಗ್ರೆಸ್ ಬೆಂಬಲದೊಂದಿಗೆ ಸಂಖ್ಯೆ 112ಕ್ಕೆ ಏರಿದೆ. ಆದರೂ ಬಹುಮತಕ್ಕೆ ಬೇಕಾದ 118 ಸಂಖ್ಯೆಯಿಂದ ಇನ್ನೂ 6 ಸ್ಥಾನ ದೂರದಲ್ಲಿದೆ. ಇದೇ ಕಾರಣಕ್ಕೆ ಸರ್ಕಾರ ರಚನೆ ಪ್ರಕ್ರಿಯೆ ಗೊಂದಲಕ್ಕೆ ಸಿಲುಕಿದೆ.

ಈ ಕುರಿತು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, “ಜನರು ಯಾರನ್ನೂ ಸಂಪೂರ್ಣ ಬಹುಮತದೊಂದಿಗೆ ಆಯ್ಕೆ ಮಾಡಿಲ್ಲ. ಆದರೆ ಅತಿದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಕರೆಯದಿರುವುದು ಜನರ ಆದೇಶಕ್ಕೆ ಅವಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬಹುಮತ ಪರೀಕ್ಷೆ ರಾಜಭವನದಲ್ಲಿ ಅಲ್ಲ, ವಿಧಾನಸಭೆಯಲ್ಲಿ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಕರ್ತವ್ಯವನ್ನು ಮರೆಯಬಾರದು” ಎಂದು ಅವರು ರಾಜ್ಯಪಾಲರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಎಂ.ಕೆ. ಸ್ಟಾಲಿನ್ ಅವರನ್ನು ಉಲ್ಲೇಖಿಸಿದ ಕಮಲ್ ಹಾಸನ್, “ಜನರ ತೀರ್ಪನ್ನು ಗೌರವಿಸುತ್ತೇವೆ ಎಂದು ಹೇಳಿರುವ ಸ್ಟಾಲಿನ್ ಅವರ ನಿಲುವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿದೆ” ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಹೊಸ ರಾಜಕೀಯ ಅಲೆ ಎಬ್ಬಿಸಿರುವ ವಿಜಯ್, ಕೇವಲ ಎರಡು ವರ್ಷದಲ್ಲಿ ಪಕ್ಷವನ್ನು ಅಧಿಕಾರದ ಬಾಗಿಲಿಗೆ ತಂದು ನಿಲ್ಲಿಸಿದ್ದಾರೆ. ಈಗ ರಾಜ್ಯಪಾಲರ ನಿರ್ಧಾರವೇ ವಿಜಯ್ ರಾಜಕೀಯ ಭವಿಷ್ಯ ಮಾತ್ರವಲ್ಲ, ತಮಿಳುನಾಡಿನ ಮುಂದಿನ ಸರ್ಕಾರದ ದಿಕ್ಕನ್ನೂ ನಿರ್ಧರಿಸಲಿದೆ.

ಬೇಸಿಗೆಯ ಬಿಸಿಗೆ ಬತ್ತಿದ ಕೃಷ್ಣಾ ನದಿ; ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಭಕ್ತರು, ರೈತರು

ಯಾದಗಿರಿ: ಮಳೆಗಾಲದಲ್ಲಿ ಪ್ರವಾಹದ ಅಬ್ಬರದಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಕೃಷ್ಣಾ ನದಿ, ಇದೀಗ ಬೇಸಿಗೆಯ ತೀವ್ರ ಬಿಸಿಲಿನಿಂದ ಸಂಪೂರ್ಣ ಬರಿದಾಗಿರುವ ದೃಶ್ಯ ಯಾದಗಿರಿ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೃಷ್ಣಾ ನದಿ ನೀರಿನ ಕೊರತೆಯಿಂದ ಒಣಗಿದ್ದು, ರೈತರು ಹಾಗೂ ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿರುವ ಮೌನೇಶ್ವರ ದೇಗುಲ ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧಿ ಪಡೆದಿದೆ. ಕೃಷ್ಣಾ ನದಿ ತೀರದಲ್ಲಿರುವ ಈ ದೇವಸ್ಥಾನಕ್ಕೆ ಪ್ರತಿನಿತ್ಯ ಅನೇಕ ಭಕ್ತರು ಆಗಮಿಸಿ, ನದಿಯಲ್ಲಿ ಪುಣ್ಯಸ್ನಾನ ಮಾಡಿ ಬಳಿಕ ದೇವರ ದರ್ಶನ ಪಡೆಯುವುದು ಸಂಪ್ರದಾಯವಾಗಿದೆ.

ಆದರೆ ಇದೀಗ ನದಿ ಬತ್ತಿಹೋಗಿರುವುದರಿಂದ ಭಕ್ತರು ಪುಣ್ಯಸ್ನಾನ ಮಾಡಲು ಸಾಧ್ಯವಾಗದೇ ಪರದಾಡುವಂತಾಗಿದೆ.

ನದಿಯಲ್ಲಿ ನೀರಿನ ಮಟ್ಟ ಕುಸಿದ ಪರಿಣಾಮ ಮೀನುಗಳ ಸಂಖ್ಯೆಯೂ ಕಡಿಮೆಯಾಗಿದ್ದು, ಇದರಿಂದ ಪಕ್ಷಿಗಳಿಗೆ ಆಹಾರದ ಕೊರತೆ ಎದುರಾಗಿದೆ. ಜೊತೆಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ತೀವ್ರಗೊಂಡಿದೆ.

ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ತಕ್ಷಣ ನೀರು ಹರಿಸುವಂತೆ ಸ್ಥಳೀಯರು ಹಾಗೂ ಭಕ್ತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪ್ರವಾಹದ ಅಬ್ಬರದಿಂದ ಹೆಸರುವಾಸಿಯಾಗಿದ್ದ ಕೃಷ್ಣಾ ನದಿ ಇಂದು ಬರಿದಾದ ಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಪರಿಸರ ಪ್ರೇಮಿಗಳಲ್ಲೂ ಆತಂಕ ಮೂಡಿಸಿದೆ.

ಬಂಡವಾಳದಿಂದ ಐಪಿಎಲ್ ತನಕ ಎಲ್ಲವೂ ಗುಜರಾತ್ʼಗೆ: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ದೇಶದ ಬಂಡವಾಳ ಹೂಡಿಕೆಗಳಿಂದ ಹಿಡಿದು ಐಪಿಎಲ್ ಪಂದ್ಯಗಳವರೆಗೆ ಎಲ್ಲವೂ ಗುಜರಾತ್‌ಗೆ ಕೇಂದ್ರೀಕೃತವಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರಗೊಂಡ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಐಪಿಎಲ್ ಪಂದ್ಯಗಳನ್ನೂ ಗುಜರಾತ್‌ಗೆ ಕೊಂಡೊಯ್ಯಲಾಗುತ್ತಿದೆ. ದೇಶದ ಬಂಡವಾಳವೂ ಅಲ್ಲಿಗೆ ಹರಿದು ಹೋಗುತ್ತಿದೆ. ಬಿಸಿಸಿಐ ಮತ್ತು ಐಸಿಸಿಯಲ್ಲಿ ಜಯ್ ಶಾ ಇದ್ದಾರೆ. ಅವರಿಗೆ ಇಷ್ಟ ಬಂದಂತೆ ನಿರ್ಧಾರ ಮಾಡುತ್ತಾರೆ. ಬೆಂಗಳೂರಿನಿಂದ ಪಂದ್ಯವನ್ನು ಎತ್ತಿ ಹೈದರಾಬಾದ್‌ಗೆ ಅಥವಾ ಗುಜರಾತ್‌ಗೆ ಸ್ಥಳಾಂತರಿಸುತ್ತಾರೆ. ಇಲ್ಲಿ ಭದ್ರತೆ ಇಲ್ಲವೇ? ಹಾಗಿದ್ದರೆ ಪಂದ್ಯ ಯಾಕೆ ಶಿಫ್ಟ್ ಮಾಡಲಾಗಿದೆ? ಎಂದು ಪ್ರಶ್ನಿಸಿದರು.

ಹೂಡಿಕೆ ಯೋಜನೆಗಳ ವಿಷಯದಲ್ಲೂ ಗುಜರಾತ್‌ಗೆ ಅನಗತ್ಯ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಗುಜರಾತ್‌ಗೆ ಆರು ಸೆಮಿಕಂಡಕ್ಟರ್ ಯೋಜನೆಗಳು ಹೋಗಿವೆ. ಕಂಪನಿಗಳು ಸಬ್ಸಿಡಿಗಾಗಿ ಅರ್ಜಿ ಸಲ್ಲಿಸುವಾಗ ಮೊದಲ ಆದ್ಯತೆಯ ರಾಜ್ಯವಾಗಿ ಕರ್ನಾಟಕ ಅಥವಾ ತಮಿಳುನಾಡನ್ನು ನಮೂದಿಸಿದ್ದರೂ, ಅಂತಿಮವಾಗಿ ಯೋಜನೆಗಳು ಗುಜರಾತ್ ಅಥವಾ ಅಸ್ಸಾಂಗೆ ಹೋಗುತ್ತಿವೆ. ಇದು ಹೇಗೆ ಸಾಧ್ಯ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ವಿಚಾರದಲ್ಲಿ ಹೈಕಮಾಂಡ್ ಸ್ಪಷ್ಟತೆ ನೀಡಲಿ; ಕಾಂಗ್ರೆಸ್ ಗೊಂದಲಕ್ಕೆ ರಾಜಣ್ಣ ಬೇಸರ

ಮೈಸೂರು: ಮುಖ್ಯಮಂತ್ರಿ ಸ್ಥಾನ ಕುರಿತ ಗೊಂದಲಕ್ಕೆ ತೆರೆ ಎಳೆಯಲು ಕಾಂಗ್ರೆಸ್ ಹೈಕಮಾಂಡ್ ಶೀಘ್ರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತಾವು ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದರೂ, ಹೈಕಮಾಂಡ್‌ನಿಂದ ಸ್ಪಷ್ಟ ಸಂದೇಶ ಹೊರಬರಬೇಕೆಂದು ತಿಳಿಸಿದ್ದಾರೆ.

ನಾನು ಸಿಎಂ ಬದಲಾಗುತ್ತಾರೆ ಎಂದೂ ಹೇಳಲ್ಲ, ಮುಂದುವರಿಯುತ್ತಾರೆ ಎಂದೂ ಹೇಳಲ್ಲ. ಆದರೆ ಹೈಕಮಾಂಡ್ ಸಿಎಂಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಅಧಿಕಾರ ಮುಂದುವರಿಸಿ ಎಂದು ಗ್ರೀನ್ ಸಿಗ್ನಲ್ ನೀಡಲಿ. ಇಲ್ಲವೇ ಬದಲಾವಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಲಿ ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ ಅನಿಶ್ಚಿತತೆ ಮುಂದುವರಿದರೆ ಅದು ಸರ್ಕಾರ ಮತ್ತು ಪಕ್ಷ ಎರಡಕ್ಕೂ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಜಣ್ಣ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಜಾಗರೂಕತೆಯಿಂದ ನಿರ್ಧಾರ ಕೈಗೊಳ್ಳಬೇಕು. ತೀರ್ಮಾನ ತಡವಾದಷ್ಟು ಅದು ಸರ್ಕಾರದ ಕಾರ್ಯಕ್ಷಮತೆ ಮತ್ತು ಪಕ್ಷದ ಸಂಘಟನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಜಯ್ ಸರ್ಕಾರಕ್ಕೆ 6 ತಿಂಗಳು ಅಡ್ಡಿ ಇಲ್ಲ: ಡಿಎಂಕೆ-ಎಐಎಡಿಎಂಕೆ ಮೈತ್ರಿ ವದಂತಿಗೆ ಸ್ಟಾಲಿನ್ ಸ್ಪಷ್ಟನೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ರಾಜ್ಯದಲ್ಲಿ ಸರ್ಕಾರ ರಚನೆಗೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. 108 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಸರ್ಕಾರ ರಚಿಸಲು ಚಟುವಟಿಕೆ ಆರಂಭಿಸಿದೆ.

ಟಿವಿಕೆಗೆ ಕಾಂಗ್ರೆಸ್ ಬೆಂಬಲ ಘೋಷಿಸಿರುವ ನಡುವೆಯೇ, ಸಾಂಪ್ರದಾಯಿಕ ಎದುರಾಳಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಈ ಎಲ್ಲ ವರದಿಗಳನ್ನು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸಜ್ಜಾಗಿರುವ ನಟ-ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಕನಿಷ್ಠ ಆರು ತಿಂಗಳ ಕಾಲ ಯಾವುದೇ ರೀತಿಯ ರಾಜಕೀಯ ಅಡೆತಡೆ ಸೃಷ್ಟಿಸುವುದಿಲ್ಲ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ಪ್ರಸ್ತುತ ಡಿಎಂಕೆ ಯಾವುದೇ ರಾಜಕೀಯ ಗೊಂದಲ ಉಂಟುಮಾಡುವುದಿಲ್ಲ. ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಅಥವಾ ಮತ್ತೊಮ್ಮೆ ಚುನಾವಣೆ ನಡೆಯುವ ಪರಿಸ್ಥಿತಿಯನ್ನು ನಾವು ಬಯಸುವುದಿಲ್ಲ,” ಎಂದು ಅವರು ಹೇಳಿದ್ದಾರೆ.

ಇನ್ನೂ ವಿಜಯ್ ನೇತೃತ್ವದ ಆಡಳಿತದ ಕಾರ್ಯವೈಖರಿಯನ್ನು ಆರು ತಿಂಗಳ ಕಾಲ ಸೂಕ್ಷ್ಮವಾಗಿ ಗಮನಿಸುವುದಾಗಿ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಡಿಎಂಕೆ-ಎಐಎಡಿಎಂಕೆ ಮೈತ್ರಿ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳಿಗೆ ಸ್ಟಾಲಿನ್ ತೆರೆ ಎಳೆದಿದ್ದಾರೆ.

ಆಪರೇಷನ್ ಸಿಂಧೂರ್ ವರ್ಷಾಚರಣೆ: ಎಕ್ಸ್ ಡಿಪಿ ಬದಲಿಸಿ ಸೇನೆಗೆ ಗೌರವ ಸಲ್ಲಿಸಿದ ಮೋದಿ

ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ್ದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಶೌರ್ಯಕ್ಕೆ ಗೌರವ ಸಲ್ಲಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯ ಡಿಪಿಯನ್ನು ‘ಆಪರೇಷನ್ ಸಿಂಧೂರ್’ ಚಿತ್ರದಿಂದ ಬದಲಿಸಿಕೊಂಡಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಬಳಿಕ, ಭಾರತೀಯ ಸೇನೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು.

ಈ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳಿಗೆ ಸೇರಿದ ತಾಣಗಳ ಮೇಲೆ ನಿಖರ ದಾಳಿ ನಡೆಸಲಾಗಿತ್ತು. ಭಾರತೀಯ ಸೇನೆಯ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರು ಎಂದು ತಿಳಿದುಬಂದಿತ್ತು.

ಭಾರತದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಡ್ರೋನ್ ಹಾಗೂ ಶೆಲ್ ದಾಳಿಗಳನ್ನು ನಡೆಸಿದ್ದು, ಎರಡು ರಾಷ್ಟ್ರಗಳ ನಡುವೆ ನಾಲ್ಕು ದಿನಗಳ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಭಾರತೀಯ ಸೇನೆ ದೃಢ ಪ್ರತಿರೋಧ ತೋರಿಸಿ ಶತ್ರುಗಳ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಯಿತು.

ನಂತರ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಹಾಗೂ ಭಾರತೀಯ ಸೇನೆಯ ಮಹಾನಿರ್ದೇಶಕರ ನಡುವೆ ಮಾತುಕತೆ ನಡೆದಿದ್ದು, ಮೇ 10ರಂದು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಅಂತ್ಯಗೊಂಡಿತ್ತು.

ಕಾರ್ಯಾಚರಣೆಯ ವಾರ್ಷಿಕೋತ್ಸವದ ಅಂಗವಾಗಿ ಮಾತನಾಡಿದ ಪ್ರಧಾನಿ ಮೋದಿ, “ಆಪರೇಷನ್ ಸಿಂಧೂರ್ ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವು ಹಾಗೂ ರಾಷ್ಟ್ರೀಯ ಭದ್ರತೆಯತ್ತ ನಮ್ಮ ಅಚಲ ಬದ್ಧತೆಯ ಪ್ರತೀಕವಾಗಿದೆ” ಎಂದು ಹೇಳಿದ್ದಾರೆ.

“ಈ ಕಾರ್ಯಾಚರಣೆ ಭಾರತೀಯ ಸಶಸ್ತ್ರ ಪಡೆಗಳ ವೃತ್ತಿಪರತೆ, ಸನ್ನದ್ಧತೆ ಮತ್ತು ಸಂಘಟಿತ ಶಕ್ತಿಯನ್ನು ಜಗತ್ತಿಗೆ ತೋರಿಸಿತು. ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ದೇಶದ ಭದ್ರತೆಯನ್ನು ಮತ್ತಷ್ಟು ಬಲಪಡಿಸಿದೆ,” ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ದಂಪತಿ ಕಲಹಕ್ಕೆ ಮಗು ಬಲಿಯಾಗಬಾರದು: ತಂದೆಯ ಒಪ್ಪಿಗೆ ಇಲ್ಲದೇ ಪಾಸ್ ಪೋರ್ಟ್ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು: ದಂಪತಿಗಳ ನಡುವಿನ ವೈಮನಸ್ಸು ಅಥವಾ ವೈವಾಹಿಕ ಕಲಹಕ್ಕೆ ಅಪ್ರಾಪ್ತ ಮಗು ಬಲಿಯಾಗಬಾರದು ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ತಂದೆಯ ಒಪ್ಪಿಗೆ ಇಲ್ಲದಿದ್ದರೂ ಐದು ವರ್ಷದ ಬಾಲಕಿಗೆ ಅಲ್ಪಾವಧಿಯ ಪಾಸ್‌ಪೋರ್ಟ್ ನೀಡುವಂತೆ ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

ಈ ಕುರಿತು ಆದೇಶ ಹೊರಡಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದೂಮ್ ಅವರಿದ್ದ ಏಕಸದಸ್ಯ ಪೀಠ, ಬಾಲಕಿ ವಿದೇಶದಲ್ಲಿರುವ ಅಜ್ಜಿ-ಅಜ್ಜರನ್ನು ಭೇಟಿ ಮಾಡಿ ಪಾಸ್‌ಪೋರ್ಟ್ ಅವಧಿ ಮುಗಿಯುವ ಮೊದಲು ಭಾರತಕ್ಕೆ ಮರಳಬೇಕು ಎಂಬ ಷರತ್ತು ವಿಧಿಸಿದೆ. ಈ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿರುವ ನ್ಯಾಯಪೀಠ, ಒಂದು ವಾರದೊಳಗೆ ಪಾಸ್‌ಪೋರ್ಟ್ ನೀಡುವಂತೆ ಆದೇಶಿಸಿದೆ.

ತಂದೆಯ ಅನುಮತಿ ಇಲ್ಲದ ಕಾರಣ ಪಾಸ್‌ಪೋರ್ಟ್ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ಮಗುವಿನ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಮಗುವಿನ ಹಿತಾಸಕ್ತಿಯೇ ಮುಖ್ಯ ಎಂದು ಸ್ಪಷ್ಟಪಡಿಸಿದೆ.

ತಂದೆ ಒಂದೇ ವಿಳಾಸದಲ್ಲಿ ವಾಸವಿದ್ದರೂ ನ್ಯಾಯಾಲಯದ ನೋಟಿಸ್ ಸ್ವೀಕರಿಸದೇ ಉದ್ದೇಶಪೂರ್ವಕವಾಗಿ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ ಎಂದು ನ್ಯಾಯಪೀಠ ಗಮನಿಸಿದೆ.

“ಒಬ್ಬ ಪೋಷಕರು ಅನಗತ್ಯವಾಗಿ ಅಡ್ಡಿಪಡಿಸಿದಾಗ, ಮಗುವಿನ ಹಿತದೃಷ್ಟಿಯಿಂದ ನಿಯಮಗಳನ್ನು ಸಡಿಲಿಸಬಹುದು. ಕುಟುಂಬ ಸದಸ್ಯರನ್ನು ಭೇಟಿ ಮಾಡುವುದು ಮಗುವಿನ ನ್ಯಾಯಸಮ್ಮತ ಹಕ್ಕು. ದಂಪತಿಗಳ ನಡುವಿನ ಹಳಸಿದ ಸಂಬಂಧವು ಮಗುವಿನ ಹಕ್ಕುಗಳನ್ನು ಕಸಿದುಕೊಳ್ಳಬಾರದು” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ತಂದೆಯ ಅನುಮತಿಯಿಲ್ಲದಿದ್ದರೂ ಬಾಲಕಿಗೆ ಎಂಟು ವಾರಗಳ ಅವಧಿಗೆ ವಿದೇಶ ಪ್ರವಾಸ ಕೈಗೊಳ್ಳಲು ಅವಕಾಶ ಕಲ್ಪಿಸುವಂತೆ ಪಾಸ್‌ಪೋರ್ಟ್ ನೀಡಲು ಸೂಚಿಸಿದೆ.

ಅಪ್ರಾಪ್ತ ಮಕ್ಕಳಿಗೆ ಪಾಸ್‌ಪೋರ್ಟ್ ನೀಡುವ ವೇಳೆ ಸಾಮಾನ್ಯವಾಗಿ ಇಬ್ಬರು ಪೋಷಕರ ಒಪ್ಪಿಗೆ ಕಡ್ಡಾಯವಾದರೂ, ಒಬ್ಬರು ಅನಗತ್ಯವಾಗಿ ನಿರಾಕರಿಸಿದರೆ ಮಗುವಿನ ಕಾನೂನುಬದ್ಧ ಹಕ್ಕುಗಳಿಗೆ ಧಕ್ಕೆ ತರುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ

ಬಾಲಕಿ ತನ್ನ ತಾಯಿ ಹಾಗೂ ಅಜ್ಜಿ-ಅಜ್ಜರೊಂದಿಗೆ ಬೇಸಿಗೆ ರಜೆ ಕಳೆಯಲು ಆಸ್ಟ್ರೇಲಿಯಾಗೆ ತೆರಳಲು ಉದ್ದೇಶಿಸಿದ್ದಳು. ಆದರೆ ತಂದೆ ಒಪ್ಪಿಗೆ ನೀಡದ ಕಾರಣ ಪಾಸ್‌ಪೋರ್ಟ್ ಪ್ರಾಧಿಕಾರ ಅರ್ಜಿಯನ್ನು ಬಾಕಿ ಇಟ್ಟಿತ್ತು.

ಈ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಿದ್ದ ತಾಯಿ ಪರ ವಕೀಲರು, ದಂಪತಿಗಳ ವಿಚ್ಛೇದನ ಪ್ರಕರಣ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೆ ಬಾಲಕಿ ಆಸ್ಟ್ರೇಲಿಯಾದಲ್ಲಿರುವ ಅಜ್ಜಿ-ಅಜ್ಜರನ್ನು ಭೇಟಿ ಮಾಡಲು ಬಯಸುತ್ತಿದ್ದು, ಪಾಸ್‌ಪೋರ್ಟ್ ವಿಳಂಬವಾದರೆ ಮಗುವಿನ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ವಿಜಯನಗರ| ಮಾರಕಾಸ್ತ್ರ ಹಿಡಿದು ರಾತ್ರೋ ರಾತ್ರಿ ಮುಸುಕುಧಾರಿ ಕಳ್ಳರ ಗ್ಯಾಂಗ್ ಓಡಾಟ! ಗ್ರಾಮಸ್ಥರಲ್ಲಿ ಆತಂಕ

ವಿಜಯನಗರ:- ಹರಪನಹಳ್ಳಿ ಪಟ್ಟಣದಲ್ಲಿ ಕಳೆದ ಕೆಲ ದಿನಗಳಿಂದ ಮುಸುಕುಧಾರಿ ಕಳ್ಳರ ಗ್ಯಾಂಗ್ ಓಡಾಟ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ರಾತ್ರಿ ವೇಳೆ ಮುಖ ಮುಚ್ಚಿಕೊಂಡು, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮೂವರು ಶಂಕಿತ ವ್ಯಕ್ತಿಗಳು ನಿರ್ಭಯವಾಗಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮತ್ತೊಬ್ಬ ಮುಸುಕುಧಾರಿ ಬೊಗಳುತ್ತಿರುವ ನಾಯಿಗಳನ್ನು ಕಲ್ಲಿನಿಂದ ಹೊಡೆದು ಓಡಿಸಲು ಯತ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆ ಬಳಿಕ ರಾತ್ರಿ ವೇಳೆ ನಾಯಿಗಳ ಬೊಗಳುವ ಶಬ್ದ ಕೇಳಿ ಎಚ್ಚರಗೊಂಡ ನಿವಾಸಿಗಳು ತಮ್ಮ ಮನೆಗಳ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳರ ಓಡಾಟ ಬೆಳಕಿಗೆ ಬಂದಿದೆ. ಈ ಘಟನೆ ಬೆನ್ನಲ್ಲೇ ಪಟ್ಟಣದಲ್ಲಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ರಾತ್ರಿ ವೇಳೆ ಗಸ್ತು ಹೆಚ್ಚಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಘಟನೆ ಬಗ್ಗೆ ಬೇಸರ ಹೊರ ಹಾಕಿರುವ ಸ್ಥಳೀಯರು, ನಮ್ಮ ರಕ್ಷಣೆ ನಾವೇ ಮಾಡ್ಕೋಬೇಕು. ಮುಸುಕುಧಾರಿ ಕಳ್ಳರು ಬಂದಾಗ ಕಾರದಪುಡಿ ಎರಚಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಪಟ್ಟಣದಲ್ಲಿ ಸಾರ್ವಜನಿಕರ ಸಭೆ ನಡೆಸಿ ಜಾಗೃತಿ ಮಾಡಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸುವ ಭರವಸೆಯನ್ನು ಸಾರ್ವಜನಿಕರಿಗೆ ಪೊಲೀಸರು ನೀಡಿದ್ದಾರೆ.

error: Content is protected !!