Home Blog

ಶಿರಸಿಯಲ್ಲಿ ವೈದ್ಯನ ಹತ್ಯೆ ಪ್ರಕರಣ ಬಯಲು: ವಿಶ್ವಾಸಕ್ಕೆ ದ್ರೋಹ ಮಾಡಿ ಸ್ನೇಹಿತನಿಂದಲೇ ಕೊಲೆ

ಉತ್ತರ ಕನ್ನಡ: ಜಿಲ್ಲೆಯ ಕಾರವಾರದ ಶಿರಸಿ ನಗರದಲ್ಲಿ ನಡೆದಿದ್ದ ವೈದ್ಯನ ಹತ್ಯೆ ಪ್ರಕರಣಕ್ಕೆ ಶಾಕಿಂಗ್‌  ಟ್ವಿಸ್ಟ್ ಸಿಕ್ಕಿದೆ. ಮದುವೆಗೆ ಸಿದ್ಧವಾಗಿದ್ದ ಡಾ. ರಮೇಶ್ ಕಲಗುಟಕರ (51) ಅವರನ್ನು ಅವರದೇ ಸ್ನೇಹಿತ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಪ್ರಕರಣದಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ಪಾಂಡುರಂಗ ನಾಯ್ಕ (68) ಎಂಬ ಆರೋಪಿಯನ್ನು ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಚಿನ್ನದ ಆಸೆಯೇ ಈ ಭೀಕರ ಹತ್ಯೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಆರೋಪಿ ಮಂಜುನಾಥ್ ಹಲವು ಬಾರಿ ಚಿಕಿತ್ಸೆಗಾಗಿ ವೈದ್ಯರ ಬಳಿ ಬಂದಿದ್ದರಿಂದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಈ ವಿಶ್ವಾಸದನ್ನೇ ದುರುಪಯೋಗಪಡಿಸಿಕೊಂಡ ಆರೋಪಿ, ಮದುವೆ ಹಿನ್ನೆಲೆ ಬ್ಯಾಂಕ್‌ನಿಂದ ತಂದಿದ್ದ ಬಂಗಾರದ ಒಡವೆಗಳನ್ನು ಗಮನಿಸಿ ದುರಾಲೋಚನೆ ನಡೆಸಿದ್ದಾನೆ.

ಘಟನೆ ನಡೆದ ರಾತ್ರಿ ವೈದ್ಯರು ಮಲಗಿದ್ದಾಗ ಆಯುಧದಿಂದ ಹೊಡೆದು ಹತ್ಯೆ ಮಾಡಿ, ಮನೆಯ ಬೀಗ ಹಾಕಿ ಚಿನ್ನದೊಂದಿಗೆ ಪರಾರಿಯಾಗಿದ್ದಾನೆ. ಆದರೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಕೇವಲ 24 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿ, ಕದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಜಪಾನ್​ ನಲ್ಲಿ 7.4 ತೀವ್ರತೆಯ ಭೂಕಂಪ: ಅಧಿಕಾರಿಗಳಿಂದ ಸುನಾಮಿಯ ಎಚ್ಚರಿಕೆ

0

ಟೋಕಿಯೊ: ಉತ್ತರ ಜಪಾನ್‌ನಲ್ಲಿ ಸೋಮವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಹಿನ್ನೆಲೆ 3 ಮೀಟರ್ ಎತ್ತರದ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಭೂಕಂಪವು ಇವಾಟೆ ಪ್ರಾಂತ್ಯ ಕರಾವಳಿಯ ಪೆಸಿಫಿಕ್ ಸಮುದ್ರ ಭಾಗದಲ್ಲಿ ಸಂಜೆ 4:53ರ ಸುಮಾರಿಗೆ ಸಂಭವಿಸಿದೆ. ಇದರ ಪ್ರಭಾವ ನೂರಾರು ಕಿಲೋಮೀಟರ್ ದೂರದಲ್ಲಿರುವ ಟೋಕಿಯೊ ವರೆಗೂ ಕಂಡುಬಂದಿದ್ದು, ಎತ್ತರದ ಕಟ್ಟಡಗಳು ಕಂಪಿಸಿದವು.

ಆರಂಭಿಕ ಸುನಾಮಿ ಅಲೆಗಳು ಉತ್ತರ ಕರಾವಳಿಯನ್ನು ತಕ್ಷಣವೇ ಅಪ್ಪಳಿಸುವ ಸಾಧ್ಯತೆ ಇರುವುದರಿಂದ, ಜನರು ತಕ್ಷಣ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲೆಗಳಿಂದ ಹಾನಿ ಸಂಭವಿಸುವ ಭೀತಿ ವ್ಯಕ್ತವಾಗಿದೆ.

ಜಪಾನ್ ವಿಶ್ವದ ಭೂಕಂಪ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದ್ದು, ರಿಂಗ್ ಆಫ್ ಫೈರ್ ಪ್ರದೇಶದ ಪಶ್ಚಿಮ ಅಂಚಿನಲ್ಲಿ ನೆಲೆಗೊಂಡಿದೆ. ನಾಲ್ಕು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಸಂಗಮ ಭಾಗದಲ್ಲಿರುವುದರಿಂದ ಇಲ್ಲಿ ಭೂಕಂಪಗಳು ಸಾಮಾನ್ಯವಾಗಿದೆ.

ಸುಮಾರು 12.5 ಕೋಟಿ ಜನಸಂಖ್ಯೆ ಹೊಂದಿರುವ ಜಪಾನ್‌ನಲ್ಲಿ ವರ್ಷಕ್ಕೆ ಸರಾಸರಿ 1,500 ಭೂಕಂಪಗಳು ದಾಖಲಾಗುತ್ತವೆ. ಜಗತ್ತಿನ ಒಟ್ಟು ಭೂಕಂಪಗಳಲ್ಲಿ ಸುಮಾರು 18% ಇಲ್ಲಿ ಸಂಭವಿಸುತ್ತವೆ.

2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ್ದ 9.0 ತೀವ್ರತೆಯ ಭೂಕಂಪ ಮತ್ತು ಅದರ ಪರಿಣಾಮದ ಸುನಾಮಿ ಸುಮಾರು 18,500 ಜನರ ಜೀವ ಹಾನಿಗೆ ಕಾರಣವಾಗಿತ್ತು.

ಬಿಟ್‌ಕಾಯಿನ್ ಹಗರಣ ಕೇಸ್: ಶಾಸಕ ನಲಪಾಡ್ ಮನೆ ಸೇರಿ 17 ಕಡೆ ಇಡಿ ದಾಳಿ

ಬೆಂಗಳೂರುದಲ್ಲಿ ಭಾರಿ ಸದ್ದು ಮಾಡುತ್ತಿರುವ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮೊಹಮದ್‌ ಹ್ಯಾರೀಸ್‌ ನಲಪಾಡ್‌ ಮನೆ ಸೇರಿದಂತೆ 17 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ಹಿನ್ನಲೆಯಲ್ಲಿ 10 ಲಕ್ಷ ರೂಪಾಯಿ ಅನುಮಾನಾಸ್ಪದ ಹಣ ವರ್ಗಾವಣೆಯ ಸುಳಿವು ಪ್ರಮುಖ ಕಾರಣವೆಂದು ತಿಳಿದುಬಂದಿದೆ.

ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನೊಂದಿಗೆ ಆರ್ಥಿಕ ಸಂಪರ್ಕ ಹೊಂದಿದ್ದ ಶಂಕೆಯ ಮೇರೆಗೆ ಈ ದಾಳಿ ನಡೆದಿದೆ. 2020ರಲ್ಲಿ ಶ್ರೀಕಿ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ, ನಲಪಾಡ್ ಅವರ ಹೆಸರೂ ಹೊರಬಂದಿತ್ತು. ನಂತರ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಿತ್ತು.

ತನಿಖೆಯ ವೇಳೆ ಬಿಟ್‌ಕಾಯಿನ್ ಹೂಡಿಕೆ ಹೆಸರಿನಲ್ಲಿ ವಂಚನೆ ನಡೆದಿರುವುದು ಬಹಿರಂಗವಾಗಿದ್ದು, 28 ಲಕ್ಷ ಹೂಡಿಕೆಗೆ 45 ಲಕ್ಷ ಲಾಭ ನೀಡುವುದಾಗಿ ಹೇಳಿ ಮಹಿಳೆಯಿಂದ ಹಣ ಪಡೆದು ಮೋಸ ಮಾಡಿರುವ ಆರೋಪವೂ ಎದುರಾಗಿದೆ. ಇದೇ ಪ್ರಕರಣದಲ್ಲಿ ಶ್ರೀಕಿ ಹಾಗೂ ಇತರರ ವಿರುದ್ಧ ದೂರು ದಾಖಲಾಗಿತ್ತು.

ಹೆಚ್ಚಿನ ತನಿಖೆಯಲ್ಲಿ ಬಿಟ್‌ಕಾಯಿನ್ ಹ್ಯಾಕಿಂಗ್ ಜಾಲವೂ ಪತ್ತೆಯಾಗಿದ್ದು, ಶ್ರೀಕಿ ಮೂಲಕ ಮುಂಬೈ ಮೂಲದ ವ್ಯಕ್ತಿಯಿಂದ 10 ಲಕ್ಷ ರೂಪಾಯಿ ನಲಪಾಡ್ ಖಾತೆಗೆ ವರ್ಗಾವಣೆಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಹಣವನ್ನು ವಾಪಸ್ ನೀಡುವುದಾಗಿ ಹೇಳಿದ್ದರೂ ಇನ್ನೂ ಹಿಂತಿರುಗಿಸದಿರುವುದು ತನಿಖೆಗೆ ಹೊಸ ತಿರುವು ನೀಡಿದೆ.

ಮಹಿಳಾ ಮೀಸಲು ಮಸೂದೆ ಸೋಲು: ವಿಪಕ್ಷಗಳ ವಿರುದ್ಧ ರಾಘವೇಂದ್ರ ಕಿಡಿ

ಶಿವಮೊಗ್ಗ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ತಡೆದು ಸೋಲಿಸಿದವು ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಸಿದ್ಧಾಂತಗಳು ಹಾಗೂ ಸ್ತ್ರೀ ಸ್ವಾತಂತ್ರ್ಯದ ಮೌಲ್ಯಗಳಿಗೆ ಧಕ್ಕೆ ತರುವ ಕೆಲಸ ಕಾಂಗ್ರೆಸ್ ನೇತೃತ್ವದಲ್ಲಿ ನಡೆದಿದೆ. ಇದಕ್ಕೆ ಟಿಎಂಸಿ ಹಾಗೂ ಡಿಎಂಕೆ ಪಕ್ಷಗಳು ಸಹ ಕೈಜೋಡಿಸಿದ್ದವೆಂದು ಟೀಕಿಸಿದರು.

ಯಾವುದೇ ವಿಧೇಯಕವನ್ನು ಜಾರಿಗೊಳಿಸಲು ಸಂವಿಧಾನದ ಪ್ರಕಾರ ಎರಡು-ಮೂರರಷ್ಟು ಬಹುಮತ ಅಗತ್ಯವಿದೆ. ಆದರೆ, ಈ ಮಸೂದೆ ಸೇರಿ ಮೂರು ವಿಧೇಯಕಗಳ ಜಾರಿಗೆ ವಿರೋಧ ಪಕ್ಷಗಳು ಅಡ್ಡಿಪಡಿಸಿವೆ ಎಂದು ಹೇಳಿದರು.

“ಮಹಿಳಾ ಶಕ್ತಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸಮರ್ಪಕ ಪ್ರತಿನಿಧಿತ್ವ ಸಿಗಬೇಕಿತ್ತು. ಆದರೆ, ವಿಪಕ್ಷಗಳು ತಪ್ಪು ಮಾಹಿತಿಯನ್ನು ಹಬ್ಬಿಸಿ ಮಸೂದೆ ಜಾರಿಯಾಗದಂತೆ ತಡೆಯುವ ಕೆಲಸ ಮಾಡಿವೆ” ಎಂದು ಅವರು ಆರೋಪಿಸಿದರು.

ಇದು ದುರುದ್ದೇಶದಿಂದ ಐತಿಹಾಸಿಕ ಮಸೂದೆಗೆ ತಡೆ ನೀಡಿದಂತಾಗಿದೆ. ದೇಶದ ತಾಯಂದಿರು ಮತ್ತು ಸಹೋದರಿಯರ ಮುಂದೆ ಪ್ರಧಾನಮಂತ್ರಿ ಕ್ಷಮೆಯಾಚಿಸಿದ್ದಾರೆ. ಮಹಿಳೆಯರು ಎಲ್ಲವನ್ನೂ ಮರೆತರೂ, ಅವಮಾನವನ್ನು ಮರೆಯುವುದಿಲ್ಲ ಎಂದು ಹೇಳಿದರು.

ಇದಲ್ಲದೆ, ಮಲೆನಾಡಿನ ಭೌಗೋಳಿಕ ವಿಸ್ತಾರ ಹೆಚ್ಚಿರುವುದಾದರೂ ಜನಸಂಖ್ಯೆ ಆಧಾರದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಪಶ್ಚಿಮ ಘಟ್ಟ ಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಿ, ಜನಸಂಖ್ಯೆಯಷ್ಟೇ ಅಲ್ಲದೆ ಭೌಗೋಳಿಕ ಅಂಶವನ್ನೂ ಪರಿಗಣಿಸಿ ಹೊಸ ಕ್ಷೇತ್ರಗಳ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಬಾಲಿವುಡ್‌ನಲ್ಲಿ ಸಂಭ್ರಮದ ಸುದ್ದಿ: ದೀಪಿಕಾ-ರಣವೀರ್ ದಂಪತಿಯಿಂದ ಎರಡನೇ ಮಗುವಿನ ಘೋಷಣೆ

ಬಾಲಿವುಡ್‌ನ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಕುಟುಂಬದಲ್ಲಿ ಮತ್ತೊಂದು ಸದಸ್ಯರ ಆಗಮನದ ಸುಳಿವು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ಪೋಸ್ಟ್ ಮೂಲಕ ಈ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಹಂಚಿಕೊಂಡಿರುವ ಫೋಟೋದಲ್ಲಿ ಮಗಳು ದುವ ಕಾಣಿಸಿಕೊಂಡಿದ್ದು, ಈ ಕ್ರಿಯೇಟಿವ್ ಅನೌನ್ಸ್‌ಮೆಂಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಸುದ್ದಿ ಹೊರಬಂದ ತಕ್ಷಣವೇ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

2018ರಲ್ಲಿ ವಿವಾಹವಾದ ಈ ಜೋಡಿ, 2024ರಲ್ಲಿ ಮೊದಲ ಮಗುವಿಗೆ ಸ್ವಾಗತ ಕೋರಿತ್ತು. ಈಗ ಮತ್ತೆ ಪೋಷಕರಾಗುತ್ತಿರುವ ಸಂತೋಷದಲ್ಲಿ ತೇಲುತ್ತಿರುವ ದಂಪತಿ, ತಮ್ಮ ವೈಯಕ್ತಿಕ ಜೀವನದ ಈ ಹೊಸ ಅಧ್ಯಾಯವನ್ನು ಬಹಿರಂಗಪಡಿಸಿದ್ದಾರೆ.

ಇದಕ್ಕೂ ನಡುವೆ, ರಣವೀರ್ ಸಿಂಗ್ ತಮ್ಮ ಇತ್ತೀಚಿನ ಸಿನಿಮಾದ ಯಶಸ್ಸನ್ನು ಸವಿಯುತ್ತಿದ್ದು, ದೀಪಿಕಾ ಪಡುಕೋಣೆ ಮುಂದಿನ ದೊಡ್ಡ ಪ್ರಾಜೆಕ್ಟ್‌ಗಳತ್ತ ಗಮನ ಹರಿಸಿದ್ದಾರೆ. ವೈಯಕ್ತಿಕ ಮತ್ತು ವೃತ್ತಿ ಜೀವನದ ಸಮತೋಲನವನ್ನು ಕಾಯ್ದುಕೊಂಡು ಸಾಗುತ್ತಿರುವ ಈ ಜೋಡಿ, ಇದೀಗ ಮತ್ತೊಂದು ಸಂತಸದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.

2: 5 ಕೋಟಿ ಸ್ಮಾರ್ಟ್ ಕ್ಲಾಸ್ ಯೋಜನೆಯಲ್ಲಿ ಭಾರೀ ಅವ್ಯವಹಾರ? ಕುವೆಂಪು ವಿವಿ ಪ್ರಕರಣಕ್ಕೆ ಹೈಲೇವಲ್ ತನಿಖೆ

0

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಯೋಜನೆಯಲ್ಲಿ ಬಹುಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಗಂಭೀರ ತಿರುವು ಸಿಕ್ಕಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಹೈಲೇವಲ್ ತನಿಖೆಗೆ ಆದೇಶಿಸಿದ್ದಾರೆ.

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ 5 ಕೋಟಿ ರೂ. ಅನುದಾನ ನೀಡಲಾಗಿದ್ದು, ಅದರಲ್ಲಿ 4.25 ಕೋಟಿ ರೂ. ಕಾಮಗಾರಿಗೆ ಖರ್ಚು ಮಾಡಲಾಗಿದೆ. ಆದರೆ ನಿಯಮ ಉಲ್ಲಂಘನೆ, ಕಳಪೆ ಕಾಮಗಾರಿ ಹಾಗೂ ದುಬಾರಿ ಬೆಲೆಗೆ ಪರಿಕರ ಖರೀದಿ ಆರೋಪಗಳು ಪ್ರಕರಣವನ್ನು ಗಂಭೀರಗೊಳಿಸಿವೆ.

ಈ ಹಿಂದೆ ನಿವೃತ್ತ ನ್ಯಾಯಾಧೀಶ ಎಚ್.ಬಿ. ರವೀಂದ್ರನಾಥ್ ನಡೆಸಿದ ತನಿಖೆಯಲ್ಲಿ ಆರೋಪಗಳು ಸತ್ಯ ಎಂದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಾಜನ್ ನೇತೃತ್ವದಲ್ಲಿ ಏಕಸದಸ್ಯ ಸಮಿತಿ ರಚನೆಗೊಂಡಿದ್ದು, ಒಂದು ತಿಂಗಳೊಳಗೆ ಸಂಪೂರ್ಣ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಪ್ರಕರಣ ರಾಜ್ಯದ ಶಿಕ್ಷಣ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದ್ದು, ತನಿಖಾ ವರದಿ ಮೇಲೆ ಮುಂದಿನ ಕಾನೂನು ಕ್ರಮ ನಿರ್ಧಾರವಾಗಲಿದೆ.

ಹಸೆಮಣೆ ಏರಬೇಕಿದ್ದ ಹಿಂದಿನ ದಿನವೇ ಸಾವು: ಪತ್ನಿ ಸಹೋದರಿಯ ಜೊತೆ ಮದುವೆಗೆ ಸಿದ್ಧವಾಗಿದ್ದ ಡಾ. ರಮೇಶ್ ಕೊಲೆ

ಕಾರವಾರ: ಮದುವೆ ಸಂಭ್ರಮದ ನಡುವೆ ದಾರುಣ ಅಂತ್ಯ ಕಂಡ ವೈದ್ಯನ ಹತ್ಯೆ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬೆಳಕಿಗೆ ಬಂದಿದೆ. ಡಾ. ರಮೇಶ್ ಕಲಗುಟಕರ್ (51) ತಮ್ಮ ಮನೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಪತ್ನಿ ನಿಧನವಾದ ಬಳಿಕ, ಅವರ ಸಹೋದರಿಯೊಂದಿಗೆ ಮದುವೆಯಾಗಲು ರಮೇಶ್ ನಿರ್ಧರಿಸಿದ್ದರು. ಇಂದು ಮದುವೆ ನಡೆಯಬೇಕಿದ್ದ ಹಿನ್ನೆಲೆ ಮನೆದಲ್ಲಿ ಸಿದ್ಧತೆಗಳು ಜೋರಾಗಿದ್ದವು. ಇದೇ ವೇಳೆ ಮದುವೆಗಾಗಿ ತರಲಾಗಿದ್ದ ಬಂಗಾರದ ಒಡವೆಗಳ ನಡುವೆ ರಮೇಶ್ ಹತ್ಯೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಅನುಮಾನ ಮೂಡಿಸಿದೆ.

ಮೃತ ರಮೇಶ್ ಪತ್ನಿ ಕಳೆದ ಎಂಟು ತಿಂಗಳ ಹಿಂದೆ ಮೃತಪಟ್ಟಿದ್ದರು. ದಂಪತಿಯ ಇಬ್ಬರು ಗಂಡು ಮಕ್ಕಳ ಪೈಕಿ ಓರ್ವ ವೈದ್ಯನಾಗಿದ್ದರೆ ಮತ್ತೊಬ್ಬ ಎಂಜಿನಿಯರಿಂಗ್‌ ಓದುತ್ತಿದ್ದಾನೆಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಶಶಿಕಾಂತ ವರ್ಮಾ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಮದುವೆ ದಿನವೇ ವೈದ್ಯನ ಜೀವ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಕನ್ನಡಿಗ ಅಧಿಕಾರಿಗಳಿಗೆ ಟಾರ್ಚರ್? ಮಂಗಳೂರು ಕಮಿಷನರ್ ವಿರುದ್ಧ ಎಸ್‌ಪಿ ಕಾಶಿ ಗಂಭೀರ ಆರೋಪ

ಮಂಗಳೂರು/ಬೆಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ಮಾನಸಿಕ ಕಿರುಕುಳ ಮತ್ತು ತಾರತಮ್ಯ ಆರೋಪಗಳು ಕೇಳಿಬಂದಿದ್ದು, ಎಸ್‌ಪಿ ಎಸ್ ಎಸ್ ಕಾಶಿ ಡಿಜಿಪಿ ಸಲೀಂ ಅವರಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ದೂರಿನಲ್ಲಿ ಕಾಶಿ, ಅಧಿಕಾರ ದುರುಪಯೋಗ, ದರ್ಪ ಮತ್ತು ಸ್ವಜನಪಕ್ಷಪಾತದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಮೇಲೆ ಅನಾವಶ್ಯಕ ಒತ್ತಡ ಹಾಕಿ, ತಾವು ಹೇಳಿದಂತೆ ಕೆಲಸ ಮಾಡದಿದ್ದರೆ ಮೆಮೊಗಳ ಮೂಲಕ ಹಿಂಸೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ವಿಶೇಷವಾಗಿ ಕನ್ನಡಿಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ ಎಂಬ ಅಂಶ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಐಪಿಎಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೆಳಹಂತದ ಸಿಬ್ಬಂದಿ ಮೇಲೆ ದೌರ್ಜನ್ಯ ತೋರಿಸುತ್ತಿದ್ದಾರೆ. ಹೊರರಾಜ್ಯಗಳಿಂದ ಬಂದ ಅಧಿಕಾರಿಗಳು ಕನ್ನಡಿಗರ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನೂ ಕಾಶಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಂಗಳೂರು ಕಮಿಷನರ್‌ನ ಕಿರುಕುಳ ಹಾಗೂ ಇತರೆ ಅಕ್ರಮಗಳ ಸಂಪೂರ್ಣ ವಿವರವನ್ನು ನೀಡಲು ಅವಕಾಶ ನೀಡುವಂತೆ ಕೋರಿರುವ ಕಾಶಿ, ಒಂದು ವಾರದೊಳಗೆ ಡಿಜಿಪಿ ಭೇಟಿಗೆ ಸಮಯ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಪ್ರಕರಣ ಪೊಲೀಸ್ ಇಲಾಖೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕ್ರಮಗಳತ್ತ ಎಲ್ಲರ ಗಮನ ಕೇಂದ್ರೀಕರಿಸಿದೆ.

RR ವಿರುದ್ಧ ಜಯ ಸಾಧಿಸಿದ KKR: ಗಳಗಳನೆ ಕಣ್ಣೀರಿಟ್ಟ ಸೂರ್ಯವಂಶಿ! ವಿಡಿಯೋ ವೈರಲ್

0

ಇಂಡಿಯನ್ ಪ್ರೀಮಿಯರ್ ಲೀಗ್‌ನ 29ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಕಂಡಿದೆ. ಈ ಸೋಲಿನ ಬಳಿಕ ಎಲ್ಲರ ಗಮನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರತ್ತ ಹರಿದಿದೆ.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 155 ರನ್ ಗಳಿಸಿತು. ಗುರಿ ಬೆನ್ನತ್ತಿದ ಕೆಕೆಆರ್ 19.4 ಓವರ್‌ಗಳಲ್ಲಿ 161 ರನ್ ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿತು.

ಕೆಕೆಆರ್ ಆಟಗಾರರು ಗೆಲುವಿನ ಸಂಭ್ರಮದಲ್ಲಿದ್ದರೆ, ಆರ್‌ಆರ್ ಪರ ಆಡಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಸೋಲಿನ ನೋವಿನಲ್ಲಿ ಭಾವುಕರಾಗಿ ಕಣ್ಣೀರಿಟ್ಟರು.ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಪಂದ್ಯದಲ್ಲಿ ವೈಭವ್ ಕೇವಲ 28 ಎಸೆತಗಳಲ್ಲಿ 46 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿದ್ದವು. ಆದರೆ ವರುಣ್ ಚಕ್ರವರ್ತಿ ಎಸೆದ 9ನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಔಟ್ ಆದದ್ದು ಪಂದ್ಯದ ತಿರುವಾಗಿತು.

ವೈಭವ್ ಔಟಾದ ಬಳಿಕ ರಾಜಸ್ಥಾನ್ ತಂಡದ ರನ್‌ಗತಿ ಕುಸಿತ ಕಂಡು, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಪರಿಣಾಮ ತಂಡ 155 ರನ್‌ಗಳಿಗೆ ಸೀಮಿತವಾಯಿತು.

ಅಲ್ಪ ಮೊತ್ತವಿದ್ದರೂ ಆರ್‌ಆರ್ ಬೌಲರ್‌ಗಳು ಹೋರಾಟ ನಡೆಸಿದರು. ಕೊನೆಯ ಮೂರು ಓವರ್‌ಗಳಿಗೆ ಕೆಕೆಆರ್‌ಗೆ 28 ರನ್ ಬೇಕಿದ್ದ ಸಂದರ್ಭದಲ್ಲಿ ಪಂದ್ಯ ರೋಚಕ ಘಟ್ಟ ತಲುಪಿತ್ತು. ಆದರೆ ಅಂತಿಮ ಓವರ್‌ನಲ್ಲಿ ಅಗತ್ಯ ರನ್‌ಗಳನ್ನು ಸುಲಭವಾಗಿ ಗಳಿಸಿದ ಕೆಕೆಆರ್ ಗೆಲುವು ಸಾಧಿಸಿತು.

ಪಂದ್ಯ ಅಂತ್ಯಗೊಂಡ ಬಳಿಕ ಭಾವುಕರಾದ ವೈಭವ್ ಮೈದಾನದ ಹೊರಗೆ ಕುಳಿತು ಕಣ್ಣೀರಿಟ್ಟರು. ಈ ವೇಳೆ ಎರಡೂ ತಂಡದ ಆಟಗಾರರು ಅವರನ್ನು ಸಮಾಧಾನಪಡಿಸಿದರು. ಯುವ ಆಟಗಾರನ ಈ ಭಾವುಕ ಕ್ಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಮೋದಿ ಕಿವಿಯಲ್ಲಿ ಕೇಳಿದ ಪ್ರಶ್ನೆ ಬಹಿರಂಗಪಡಿಸಿದ ಸಿಎಂ ಸಿದ್ದರಾಮಯ್ಯ

0

ಮೈಸೂರು: ರಾಜ್ಯ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಿವಿಯಲ್ಲಿ ಕೇಳಿದ ಪ್ರಶ್ನೆಯ ಗುಟ್ಟನ್ನು ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ, ಮಹಿಳಾ ಮೀಸಲಾತಿ ಕುರಿತಾಗಿ ನಿಮ್ಮ ನಿಲುವು ಏನು ಎಂದು ಪ್ರಧಾನಿ ಮೋದಿ ಕಿವಿಯಲ್ಲಿ ಕೇಳಿದ್ದರು ಎಂದು ತಿಳಿಸಿದ್ದಾರೆ. ಅದಕ್ಕೆ ತಾವು ಮಹಿಳಾ ಮೀಸಲಾತಿಗೆ ಬೆಂಬಲವಾಗಿದ್ದೇನೆ ಎಂದು ಉತ್ತರ ನೀಡಿದ್ದಾಗಿ ಹೇಳಿದ್ದಾರೆ.

ಇದೇ ವೇಳೆ ಇಡಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಪಂಚರಾಜ್ಯ ಚುನಾವಣೆ ಕುರಿತು ಮಾತನಾಡಿದ ಅವರು, ತಮಿಳುನಾಡಿನಲ್ಲಿ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ತಿಳಿಸಿ, ಅಲ್ಲಿ ಡಿಎಂಕೆ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಮೊದಲು ವಿರೋಧಿಸಿ ಈಗ ಅದನ್ನೇ ಅನುಸರಿಸುತ್ತಿದೆ ಎಂದು ಟೀಕಿಸಿದರು. ಮಹಿಳಾ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ವಿರೋಧದಲ್ಲಿಲ್ಲ, ಆದರೆ ಕ್ಷೇತ್ರ ಪುನರ್‌ವಿಂಗಡಣೆ ವಿಚಾರದಲ್ಲಿ ಮಾತ್ರ ತಕರಾರು ಇದೆ ಎಂದು ಸ್ಪಷ್ಟಪಡಿಸಿದರು.

ಮಹಿಳಾ ಮೀಸಲಾತಿ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸುತ್ತಿದೆ, ಆದರೆ ಅದನ್ನು ಜಾರಿಗೆ ತರುವ ಬದ್ಧತೆ ಕಾಣುತ್ತಿಲ್ಲ ಎಂದು ಆರೋಪಿಸಿದ ಸಿಎಂ, 2023ರಲ್ಲೇ ವಿಧೇಯಕ ಜಾರಿಗೆ ತರಬಹುದಾಗಿದ್ದರೂ ಯಾಕೆ ವಿಳಂಬ ಮಾಡಿದರು ಎಂದು ಪ್ರಶ್ನಿಸಿದರು.

ಹೊಸ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು, ಹಳೆಯ ಜನಗಣತಿ ಆಧಾರವಾಗಿದ್ದರೆ ಕರ್ನಾಟಕಕ್ಕೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮಾಡದೇ ಇದ್ದರೆ, ದಕ್ಷಿಣ ರಾಜ್ಯಗಳಿಗೆ ನಷ್ಟವಾಗಬಾರದು ಎಂಬುದು ನಮ್ಮ ನಿಲುವು ಎಂದು ಹೇಳಿದ್ದಾರೆ.

error: Content is protected !!