Home Blog

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಜನತೆ

ಬೆಂಗಳೂರು: ನಗರದ ಹೊರವಲಯದ ಬ್ಯಾಡರಹಳ್ಳಿ ಹಾಗೂ ಭಾರತನಗರ ಪ್ರದೇಶಗಳಲ್ಲಿ ಚಿರತೆ ಆತಂಕ ಇನ್ನೂ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಒಂದೇ ಪ್ರದೇಶದಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.

ನಿನ್ನೆ ಇಡೀ ದಿನ ಅರಣ್ಯ ಇಲಾಖೆ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿರಲಿಲ್ಲ. ಆದರೆ, ಮಂಗಳವಾರ ರಾತ್ರಿ ಸುಮಾರು 9.30ರ ವೇಳೆಗೆ ಹಾಗೂ ಬುಧವಾರ ಮುಂಜಾನೆ 4.30ರ ಸುಮಾರಿಗೆ ಮತ್ತೆ ಅದೇ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ.

ಚಿರತೆ ರಸ್ತೆಯಲ್ಲಿ ವೇಗವಾಗಿ ಓಡಿ ಬೇಲಿಯನ್ನು ಹಾರಿ ತೆರಳುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಿರಂತರ ಕಾರ್ಯಾಚರಣೆಯ ನಡುವೆಯೂ ಚಿರತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸುವುದರ ಜೊತೆಗೆ ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನಕ್ಕೂ ಕಾರಣವಾಗಿದೆ.

ಚಿರತೆಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಇಂದಿನ ಕಾರ್ಯಾಚರಣೆಯಲ್ಲಿ ಡ್ರೋನ್‌ಗಳನ್ನೂ ಬಳಸಲು ಸಿದ್ಧತೆ ನಡೆಸಿದೆ. ಚಿರತೆ ಚಲನವಲನವನ್ನು ನಿಖರವಾಗಿ ಪತ್ತೆಹಚ್ಚುವ ಉದ್ದೇಶದಿಂದ ತಾಂತ್ರಿಕ ನೆರವು ಪಡೆದು ಶೋಧ ಕಾರ್ಯ ತೀವ್ರಗೊಳಿಸಲಾಗುತ್ತಿದೆ.

ನಗರ ವಿಸ್ತರಣೆ ಮತ್ತು ಕಾಡು ಪ್ರದೇಶಗಳ ಕುಗ್ಗುವಿಕೆಯಿಂದ ಕಾಡುಪ್ರಾಣಿಗಳ ಸಹಜ ಆವಾಸಸ್ಥಾನಗಳು ನಾಶವಾಗುತ್ತಿದ್ದು, ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಅವು ನಗರ ಪ್ರದೇಶಗಳಿಗೆ ಪ್ರವೇಶಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೊರ ಓಡಾಡದಂತೆ ಹಾಗೂ ಚಿರತೆ ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪೂಜೆ ನೆಪದಲ್ಲಿ ಬಾಬಾ ಅಪಹರಣ; ಹಲ್ಲೆ ನಡೆಸಿ ₹4.25 ಲಕ್ಷ ದೋಚಿದ ನಾಲ್ವರು ಅರೆಸ್ಟ್

0

ಬೆಂಗಳೂರು: ಮನೆಯಲ್ಲಿ ಶಾಂತಿ ಪೂಜೆ ಮಾಡಿಸುವ ನೆಪದಲ್ಲಿ ಬಾಬಾರನ್ನು ಅಪಹರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ₹4.25 ಲಕ್ಷ ದೋಚಿದ ಪ್ರಕರಣವನ್ನು ಸಂಪಿಗೆಹಳ್ಳಿ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ತುಮಕೂರು ಮೂಲದ ಆರಿಫ್ ಮತ್ತು ಆದಿಲ್, ಚಿಕ್ಕಬಾಣಾವರದ ಇಮ್ರಾನ್ ಹಾಗೂ ಆರ್‌.ಟಿ. ನಗರದ ಕಾದೀರ್ ಎಂದು ಗುರುತಿಸಲಾಗಿದೆ. ಯಲಹಂಕ ನಿವಾಸಿ ಬಾಬಾ ಮೊಹಮ್ಮದ್ ತಾರಿಕ್ ಹುಸೇನ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಕೆಲ ದಿನಗಳ ಹಿಂದೆ ಆರೋಪಿ ಆರಿಫ್, ಶಾಂತಿ ಪೂಜೆ ಮಾಡಿಸಬೇಕೆಂದು ಹೇಳಿ ಬಾಬಾ ತಾರಿಕ್ ಅವರನ್ನು ಸಂಪರ್ಕಿಸಿದ್ದ. ಮುಂಗಡವಾಗಿ ₹10 ಸಾವಿರವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದ. ಆದರೆ ಕಾರಣಾಂತರಗಳಿಂದ ಮೂರು ದಿನಗಳ ಕಾಲ ತಾರಿಕ್ ಪೂಜೆಗೆ ತೆರಳಿರಲಿಲ್ಲ.

ಜೂನ್ 29ರಂದು ಆರಿಫ್, ಬಾಬಾರನ್ನು ಕರೆತರಲು ಕಾರು ಕಳುಹಿಸುವುದಾಗಿ ತಿಳಿಸಿದ್ದ. ಕಾರು ಬಂದ ಬಳಿಕ ತಾರಿಕ್ ತೆರಳಲು ನಿರಾಕರಿಸಿದರೂ ಆರೋಪಿಗಳು ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಳಿಕ ಅವರನ್ನು ತುಮಕೂರು ಹೊರವಲಯಕ್ಕೆ ಕರೆದೊಯ್ದಾಗ ಇನ್ನೂ ಮೂವರು ಆರೋಪಿಗಳು ಅಲ್ಲೇ ಕಾಯುತ್ತಿದ್ದರು. ಈ ವೇಳೆ ಆರೋಪಿ ಆದಿಲ್, ಹಿಂದೆ ಶಾಂತಿ ಪೂಜೆಗಾಗಿ ನೀಡಿದ್ದ ಹಣದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಗಳವಾಡಿ ಹಣವನ್ನು ಮರಳಿಸುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ತಾರಿಕ್ ನಿರಾಕರಿಸಿದಾಗ ನಾಲ್ವರೂ ಸೇರಿ ಲಾಂಗ್ ಹಾಗೂ ಮಚ್ಚುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಲ್ಲೆಯ ಬಳಿಕ ಆರೋಪಿಗಳು ಬಾಬಾರ ಮೊಬೈಲ್ ಪಾಸ್‌ವರ್ಡ್ ಹಾಗೂ ಯುಪಿಐ ಪಿನ್ ಪಡೆದುಕೊಂಡು ಬ್ಯಾಂಕ್ ಖಾತೆಯಲ್ಲಿದ್ದ ಹಣದ ವಿವರ ಪರಿಶೀಲಿಸಿದ್ದಾರೆ. ಮೊದಲ ಹಂತದಲ್ಲಿ ₹13 ಸಾವಿರವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ.

ಆ ರಾತ್ರಿ ಬಾಬಾರನ್ನು ಅಜ್ಞಾತ ಸ್ಥಳದಲ್ಲಿ ಬಂಧನದಲ್ಲಿರಿಸಿದ್ದ ಆರೋಪಿಗಳು, ಮರುದಿನ ಬ್ಯಾಂಕ್ ದಾಖಲೆಗಳನ್ನು ವಾಟ್ಸಾಪ್ ಮೂಲಕ ಪಡೆದು ಖಾಸಗಿ ಬ್ಯಾಂಕ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಬಾಬಾರಿಂದಲೇ ಹಣ ಹಿಂಪಡೆಯುವ ಅರ್ಜಿಗೆ ಸಹಿ ಹಾಕಿಸಿ, ಬ್ಯಾಂಕ್‌ನಿಂದ ₹4.25 ಲಕ್ಷ ನಗದು ಡ್ರಾ ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಪಡೆದ ಬಳಿಕ ಆರೋಪಿಗಳು ತಾರಿಕ್ ಅವರನ್ನು ಕಾರಿನಲ್ಲಿ ದಾಬಸ್‌ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಹೊರವಲಯಕ್ಕೆ ಕರೆದುಕೊಂಡು ಹೋಗಿ, ಘಟನೆ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮೊಬೈಲ್ ಹಿಂತಿರುಗಿಸಿ ಪರಾರಿಯಾಗಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಸಂಪಿಗೆಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಲು ನಯನತಾರಾ ಪಡೆದ ಸಂಭಾವನೆ ಇಷ್ಟೊಂದಾ?

ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ಮೂಡಿಸಿರುವ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಇದೀಗ ನಯನತಾರಾ ಅವರ ಸಂಭಾವನೆ ವಿಚಾರದಿಂದ ಮತ್ತೆ ಸುದ್ದಿಯಲ್ಲಿದೆ. ವರದಿಗಳ ಪ್ರಕಾರ, ಚಿತ್ರದಲ್ಲಿನ ಪ್ರಮುಖ ಪಾತ್ರಕ್ಕಾಗಿ ನಯನತಾರಾ ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ಇಂಡಿಯಾ ಸಿನಿಮಾಗೆ ಮೊದಲಿಗೆ 15 ಕೋಟಿ ರೂಪಾಯಿ ಸಂಭಾವನೆ ನೀಡುವಂತೆ ನಯನತಾರಾ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಹಲವು ಸುತ್ತಿನ ಮಾತುಕತೆಗಳ ಬಳಿಕ 12 ಕೋಟಿ ರೂಪಾಯಿಗೆ ಒಪ್ಪಂದ ಅಂತಿಮಗೊಂಡಿದೆ ಎಂದು ಸಿನಿ ವಲಯದಲ್ಲಿ ಮಾಹಿತಿ ಹರಿದಾಡುತ್ತಿದೆ.

ಚಿತ್ರದಲ್ಲಿ ನಯನತಾರಾ ಅವರ ಪಾತ್ರ ಪ್ರಮುಖವಾಗಿದ್ದರೂ, ಅವರಿಗೆ ಹೆಚ್ಚಿನ ಸ್ಕ್ರೀನ್ ಟೈಮ್ ಇರುವುದಿಲ್ಲ ಎನ್ನಲಾಗುತ್ತಿದೆ. ಆದರೂ ಅವರ ಜನಪ್ರಿಯತೆ, ಮಾರುಕಟ್ಟೆ ಮೌಲ್ಯ ಮತ್ತು ಪಾತ್ರದ ತೂಕವನ್ನು ಪರಿಗಣಿಸಿ ನಿರ್ಮಾಪಕರು ಭಾರೀ ಸಂಭಾವನೆ ನೀಡಲು ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ‘ಟಾಕ್ಸಿಕ್’ ಚಿತ್ರ ಈಗಾಗಲೇ ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ‘ತಬಾಹಿ’ ವಿಡಿಯೋ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ಚಿತ್ರದಲ್ಲಿ ನಟಿಸಿರುವ ಕಿಯಾರಾ ಅಡ್ವಾಣಿಗೂ 15 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂಬ ವರದಿಗಳು ಗಮನ ಸೆಳೆಯುತ್ತಿವೆ.

ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ: ‘ಮೈಸಾ’ಗಾಗಿ ಅಂಡರ್‌ವಾಟರ್ ಫೈಟ್ ಮುಗಿಸಿದ ರಶ್ಮಿಕಾ

20 ಗಂಟೆಗಳ ಕಾಲ ನೀರಿನಡಿಯೇ ಸಾಹಸ ದೃಶ್ಯಗಳಲ್ಲಿ ನಟಿಸಿ, ಯಾವುದೇ ಡೂಪ್ ಬಳಸದೇ ರಶ್ಮಿಕಾ ಮಂದಣ್ಣ ‘ಮೈಸಾ’ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ಪ್ರಧಾನ ಸಿನಿಮಾದ ಅಂಡರ್‌ವಾಟರ್ ಫೈಟ್ ಸೀಕ್ವೆನ್ಸ್‌ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ ಆಗಿ ಮೂಡಿಬರುತ್ತಿರುವ ‘ಮೈಸಾ’ ಚಿತ್ರದಲ್ಲಿ ರಶ್ಮಿಕಾ ಇದುವರೆಗೆ ಕಾಣಿಸದ ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್‌ಗಳು ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸಿವೆ.

ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ಸಾಮಾನ್ಯವಾಗಿ ಬಾಡಿ ಡಬಲ್ ಬಳಸುವ ಸಂಪ್ರದಾಯವಿದ್ದರೂ, ಈ ಚಿತ್ರದಲ್ಲಿ ರಶ್ಮಿಕಾ ಸ್ವತಃ ಎಲ್ಲಾ ಫೈಟ್ ಸೀನ್‌ಗಳನ್ನು ನಿರ್ವಹಿಸಿದ್ದಾರೆ. ಎರಡು ದಿನಗಳ ಕಾಲ ನಿರಂತರವಾಗಿ ನೀರಿನಲ್ಲಿ ಉಳಿದು ಸುಮಾರು 20 ಗಂಟೆಗಳ ಅಂಡರ್‌ವಾಟರ್ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಚಿತ್ರೀಕರಣದ ಅಪರೂಪದ ಚಿತ್ರಗಳನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದು ಭಾರತೀಯ ಸಿನಿ ಇತಿಹಾಸದಲ್ಲಿ ಮಹಿಳಾ ಪ್ರಧಾನ ಸಿನಿಮಾಗೆ ಹೊಸ ಮಾನದಂಡವಾಗಲಿದೆ ಎಂದು ಹೇಳಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆಯಾಗಲಿದ್ದು, ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ.

‘ತಪ್ಪಿದ್ದರೆ ಅದು ನನ್ನದು’: ಮಾಜಿ ಪತ್ನಿ ಎದುರಲ್ಲೇ ವಿಚ್ಛೇದನದ ಹೊಣೆ ಹೊತ್ತ ಸೊಹೈಲ್ ಖಾನ್

ಮುಂಬೈ: ನಾಲ್ಕು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ಬಾಲಿವುಡ್ ನಟ ಸೊಹೈಲ್ ಖಾನ್ ಈಗ ಮೊದಲ ಬಾರಿಗೆ ತಮ್ಮ ವೈವಾಹಿಕ ಬದುಕಿನ ಬಗ್ಗೆ ಮೌನ ಮುರಿದಿದ್ದಾರೆ. ಮಾಜಿ ಪತ್ನಿ ಸೀಮಾ ಸಜ್ದೇಹ್ ಎದುರಲ್ಲೇ “ನಮ್ಮ ಸಂಬಂಧ ಮುರಿದಿದ್ದರೆ ಅದರ ಹೊಣೆ ನನ್ನದು” ಎಂದು ಒಪ್ಪಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

‘ಅಲೈಯನ್ಸ್’ ರಿಯಾಲಿಟಿ ಶೋ ಪ್ರೋಮೋದಲ್ಲಿ ಮಾತನಾಡಿದ ಸೊಹೈಲ್, “25 ವರ್ಷಗಳ ಸುಂದರ ಜೀವನವನ್ನು ನಾವು ಒಟ್ಟಿಗೆ ಕಳೆದಿದ್ದೇವೆ. ತಪ್ಪು ನಡೆದಿದ್ದರೆ ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಈ ಹೇಳಿಕೆ ಕೇಳಿ ಸೀಮಾ ಸಂತಸ ವ್ಯಕ್ತಪಡಿಸಿದ್ದು, ವೇದಿಕೆಯಲ್ಲಿದ್ದವರು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸೊಹೈಲ್ ಅವರ ಪ್ರೌಢ ನಿಲುವಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, “ನಿಜವಾದ ಜವಾಬ್ದಾರಿ ಎಂದರೆ ಇದೇ”, “ಸಂಬಂಧ ಮುರಿದರೂ ಗೌರವ ಉಳಿಸಿಕೊಂಡಿದ್ದಾರೆ” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

1998ರಲ್ಲಿ ವಿವಾಹವಾಗಿದ್ದ ಸೊಹೈಲ್ ಮತ್ತು ಸೀಮಾ 2020ರಲ್ಲಿ ವಿಚ್ಛೇದನ ಪಡೆದಿದ್ದರು. ಇಬ್ಬರು ಮಕ್ಕಳ ಪಾಲನೆ-ಪೋಷಣೆಯನ್ನು ಇಂದಿಗೂ ಜಂಟಿಯಾಗಿ ನೋಡಿಕೊಳ್ಳುತ್ತಿದ್ದು, ವಿಚ್ಛೇದನದ ಬಳಿಕವೂ ಪರಸ್ಪರ ಗೌರವದ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.

ಮಣಿಪಾಲ್‌ ಬಳಿ ಕಂದಕಕ್ಕೆ ಉರುಳಿದ ಶಾಲಾ ಬಸ್: 8 ವಿದ್ಯಾರ್ಥಿಗಳಿಗೆ ಗಾಯ, ಓರ್ವನ ಸ್ಥಿತಿ ಗಂಭೀರ!

ಉಡುಪಿ: ಮಣಿಪಾಲದ ಕೊಡಂಗೆಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ.

ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಏಳು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮಣಿಪಾಲದ ಖಾಸಗಿ ಶಾಲೆಗೆ ಸೇರಿದ ಬಸ್ ಮಕ್ಕಳನ್ನು ಕರೆದುಕೊಂಡು ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಬಿದ್ದಿದೆ ಎನ್ನಲಾಗಿದೆ.

ಬಸ್‌ನಲ್ಲಿದ್ದ ವಿದ್ಯಾರ್ಥಿಗಳ ಪೈಕಿ ಓರ್ವನ ತಲೆಗೆ ತೀವ್ರ ಪೆಟ್ಟಾಗಿದ್ದು, ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗಿದೆ.

ಅಪಘಾತದ ವೇಳೆ ರಸ್ತೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಇತರ ಮಕ್ಕಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ.

ಘಟನೆ ಕುರಿತು ಮಣಿಪಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

China Fire Accident: ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ, 28 ಮಂದಿ ಸಜೀವ ದಹನ!

0

ಬೀಜಿಂಗ್: ಚೀನಾದ ಫುಜಿಯಾನ್ ಪ್ರಾಂತ್ಯದ ಜಿಂಜಿಯಾಂಗ್‌ನಲ್ಲಿರುವ ಶೂ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 28 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಶೂ ಉತ್ಪಾದನೆಗೆ ಪ್ರಸಿದ್ಧವಾಗಿರುವ ಜಿಂಜಿಯಾಂಗ್‌ನ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ವೇಳೆ ಸುಮಾರು 240 ಮಂದಿ ಇದ್ದರು ಎನ್ನಲಾಗಿದೆ. ಬೆಂಕಿಯ ತೀವ್ರತೆಗೆ ಹಲವರು ನಾಪತ್ತೆಯಾಗಿದ್ದು, 200ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಅಗ್ನಿ ಅವಘಡದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರ್ಖಾನೆಯಿಂದ ದಟ್ಟ ಹೊಗೆ ಹೊರಬರುತ್ತಿರುವುದು ಹಾಗೂ ಛಾವಣಿಯ ಮೇಲೆ ಕೆಲವರು ಸಿಲುಕಿರುವ ದೃಶ್ಯಗಳು ಕಂಡುಬಂದಿವೆ. ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಘಟನಾ ಸ್ಥಳದಲ್ಲಿ ನೂರಾರು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಸಿಲುಕಿದ್ದವರ ರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ. ಕಾರ್ಖಾನೆಯೊಂದಿಗೆ ಸಂಬಂಧ ಹೊಂದಿರುವ ಕೆಲ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಂಪನಿಯ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ನಿರ್ಲಕ್ಷ್ಯದಿಂದ ಸಾವು-ನೋವುಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕೈಗಾರಿಕಾ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಸೂಚಿಸಿದ್ದಾರೆ.

‘ಶೂ ರಾಜಧಾನಿ’ ಜಿಂಜಿಯಾಂಗ್:

ಫುಜಿಯಾನ್ ಪ್ರಾಂತ್ಯದ ಜಿಂಜಿಯಾಂಗ್ ನಗರವನ್ನು ಚೀನಾದ ‘ಶೂ ರಾಜಧಾನಿ’ ಎಂದು ಕರೆಯಲಾಗುತ್ತದೆ. ವಿಶ್ವದ ಕ್ರೀಡಾ ಶೂಗಳ ಸುಮಾರು 20 ಶೇಕಡಾ ಉತ್ಪಾದನೆ ಇಲ್ಲಿ ನಡೆಯುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಚೀನಾದ ವಿವಿಧ ಕೈಗಾರಿಕೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ, ಸುರಕ್ಷತಾ ನಿಯಮಗಳನ್ನು ಕಠಿಣಗೊಳಿಸುವ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

ರಾಜ್ಯದ ಜಲಾಶಯಗಳಿಗೆ ಜೀವಜಲ: ಪ್ರಮುಖ ಡ್ಯಾಂಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ!

ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿರುವ ಪರಿಣಾಮ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಇದರ ಬೆನ್ನಲ್ಲೇ ರಾಜ್ಯದ ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಡ್ಯಾಂಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು, ಕೃಷಿ ಹಾಗೂ ಕುಡಿಯುವ ನೀರಿನ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ.

ಆಲಮಟ್ಟಿ ಜಲಾಶಯದಲ್ಲಿ ಭಾರಿ ಒಳಹರಿವು:

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಸದ್ಯ ನೀರಿನ ಮಟ್ಟ 514.30 ಮೀಟರ್ ಇದೆ. ಒಳಹರಿವು 1,43,653 ಕ್ಯೂಸೆಕ್ ಇದ್ದರೆ, ಹೊರಹರಿವು 483 ಕ್ಯೂಸೆಕ್ ಇದೆ.

ಕೆಆರ್‌ಎಸ್‌ಗೆ 24 ಗಂಟೆಯಲ್ಲಿ 1 ಟಿಎಂಸಿ ನೀರು:

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯಕ್ಕೂ ಉತ್ತಮ ಒಳಹರಿವು ದಾಖಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುಮಾರು 1 ಟಿಎಂಸಿ ನೀರು ಹರಿದು ಬಂದಿದೆ.

ಕೆಆರ್‌ಎಸ್‌ನ ಗರಿಷ್ಠ ಮಟ್ಟ 124.80 ಅಡಿ ಇದ್ದು, ಸದ್ಯ ನೀರಿನ ಮಟ್ಟ 87.50 ಅಡಿ ಇದೆ. ಒಳಹರಿವು 12,312 ಕ್ಯೂಸೆಕ್ ಹಾಗೂ ಹೊರಹರಿವು 762 ಕ್ಯೂಸೆಕ್ ಇದೆ. ಜಲಾಶಯದ ಒಟ್ಟು ಸಾಮರ್ಥ್ಯ 49.452 ಟಿಎಂಸಿ ಇದ್ದು, ಪ್ರಸ್ತುತ 14.503 ಟಿಎಂಸಿ ನೀರು ಸಂಗ್ರಹವಾಗಿದೆ.

ಲಿಂಗನಮಕ್ಕಿ, ಭದ್ರಾ ಜಲಾಶಯಗಳಲ್ಲೂ ಏರಿಕೆ:

ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯಕ್ಕೆ ಉತ್ತಮ ಒಳಹರಿವು ಮುಂದುವರಿದಿದೆ. ಜಲಾಶಯದ ನೀರಿನ ಮಟ್ಟ 1762.05 ಅಡಿಗೆ ತಲುಪಿದ್ದು, ಒಳಹರಿವು 19,496 ಕ್ಯೂಸೆಕ್ ಇದೆ.

ಭದ್ರಾ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 146.1 ಅಡಿ ಇದ್ದು, ಒಳಹರಿವು 13,123 ಕ್ಯೂಸೆಕ್ ದಾಖಲಾಗಿದೆ.

ಹೇಮಾವತಿ, ಹಾರಂಗಿಗೂ ಹರಿದು ಬರುತ್ತಿದೆ ನೀರು:

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ 11,470 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 2902.07 ಅಡಿ ಇದ್ದು, ಪ್ರಸ್ತುತ 21.062 ಟಿಎಂಸಿ ನೀರು ಸಂಗ್ರಹವಾಗಿದೆ.

ಕೊಡಗಿನ ಹಾರಂಗಿ ಜಲಾಶಯಕ್ಕೂ ಕಾವೇರಿ ನೀರಿನ ಹರಿವು ಉತ್ತಮವಾಗಿದ್ದು, ಒಳಹರಿವು 2,751 ಕ್ಯೂಸೆಕ್ ದಾಖಲಾಗಿದೆ.

ಬಸವಸಾಗರದಲ್ಲಿ ಒಳಹರಿವು ಸ್ಥಗಿತ

ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯಕ್ಕೆ ಸದ್ಯ ಒಳಹರಿವು ಸ್ಥಗಿತಗೊಂಡಿದೆ. ಜಲಾಶಯದ ನೀರಿನ ಮಟ್ಟ 488.77 ಮೀಟರ್ ಇದ್ದು, ಹೊರಹರಿವು 322 ಕ್ಯೂಸೆಕ್ ಇದೆ.

ಮುಂಗಾರು ಮಳೆ ಮುಂದುವರಿದರೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಟೈಲ್ಸ್‌ ಫಳಫಳನೆ ಹೊಳೆಯಬೇಕಾ? ನೆಲ ಒರೆಸುವ ನೀರಿಗೆ ಚಿಟಿಕೆ ಉಪ್ಪು ಸೇರಿಸಿದರೆ ಸಿಗಲಿದೆ ಮಿನುಗುವ ಸ್ವಚ್ಛತೆ

0

ಮನೆಯ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಪ್ರತಿದಿನ ನೆಲವನ್ನು ಒರೆಸುವುದು ಅಗತ್ಯ. ಆದರೆ ಪ್ರತಿನಿತ್ಯ ನೆಲವನ್ನು ಸ್ವಚ್ಛಗೊಳಿಸಿದರೂ ಅಥವಾ ದುಬಾರಿ ಫ್ಲೋರ್ ಕ್ಲೀನರ್‌ಗಳನ್ನು ಬಳಸಿದರೂ ಕೆಲವೊಮ್ಮೆ ಬ್ಯಾಕ್ಟೀರಿಯಾ, ಹಳದಿ ಕಲೆಗಳು ಮತ್ತು ಕೊಳಕು ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ವಿಶೇಷವಾಗಿ ಮಳೆಗಾಲ ಹಾಗೂ ಬೇಸಿಗೆ ಸಂದರ್ಭದಲ್ಲಿ ನೊಣಗಳು ಮತ್ತು ಇತರ ಕೀಟಗಳ ಕಾಟವೂ ಹೆಚ್ಚಾಗುತ್ತದೆ.

ಇಂತಹ ಸಂದರ್ಭದಲ್ಲಿ ದುಬಾರಿ ಹಾಗೂ ರಾಸಾಯನಿಕಯುಕ್ತ ಕ್ಲೀನರ್‌ಗಳ ಬದಲು ಮನೆಯ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಉಪ್ಪನ್ನು ಬಳಸುವ ಮೂಲಕ ನೆಲವನ್ನು ಸ್ವಚ್ಛವಾಗಿಡಬಹುದು ಎಂದು ತಜ್ಞರು ಹೇಳುತ್ತಾರೆ. ಉಪ್ಪು ಬೆರೆಸಿದ ನೀರಿನಿಂದ ನೆಲವನ್ನು ಒರೆಸುವುದರಿಂದ ಸ್ವಚ್ಛತೆಯ ಜೊತೆಗೆ ಹಲವು ಪ್ರಯೋಜನಗಳನ್ನು ಪಡೆಯಬಹುದು.

ಉಪ್ಪು ಬೆರೆಸಿದ ನೀರಿನಿಂದ ನೆಲ ಒರೆಸುವುದು ಹೇಗೆ?

ಒಂದು ಬಕೆಟ್ ನೀರಿಗೆ ಎರಡು ಟೀ ಚಮಚ ಉಪ್ಪು ಸೇರಿಸಿ ಚೆನ್ನಾಗಿ ಕರಗಿಸಬೇಕು. ಬಳಿಕ ಆ ನೀರಿನಿಂದ ನೆಲವನ್ನು ಒರೆಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಉಪ್ಪಿನಲ್ಲಿ ನೈಸರ್ಗಿಕ ನಂಜುನಿರೋಧಕ ಗುಣಗಳಿದ್ದು, ಇದು ನೆಲವನ್ನು ಸ್ವಚ್ಛವಾಗಿಡಲು ಸಹಕಾರಿಯಾಗಿದೆ.

ಉಪ್ಪು ನೀರಿನಿಂದ ನೆಲ ಒರೆಸಿದರೆ ಸಿಗುವ ಪ್ರಯೋಜನಗಳು

ಬ್ಯಾಕ್ಟೀರಿಯಾ ನಿವಾರಣೆಗೆ ಸಹಕಾರಿ:
ಉಪ್ಪಿನಲ್ಲಿ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಹಾಗೂ ನಂಜುನಿರೋಧಕ ಗುಣಗಳಿವೆ. ಉಪ್ಪು ಬೆರೆಸಿದ ನೀರಿನಿಂದ ನೆಲವನ್ನು ಒರೆಸುವುದರಿಂದ ನೆಲದಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯವಾಗಬಹುದು. ಇದರಿಂದ ಮನೆಯ ಸ್ವಚ್ಛತೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಹಳದಿ ಕಲೆಗಳನ್ನು ಕಡಿಮೆ ಮಾಡಲು ನೆರವು:
ಬಿಳಿ ಟೈಲ್ಸ್ ಅಥವಾ ಮಾರ್ಬಲ್ ನೆಲ ಕಾಲಕ್ರಮೇಣ ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಉಪ್ಪು ಬೆರೆಸಿದ ನೀರಿನಿಂದ ನಿಯಮಿತವಾಗಿ ನೆಲವನ್ನು ಒರೆಸುವುದರಿಂದ ಈ ಕಲೆಗಳು ಕ್ರಮೇಣ ಕಡಿಮೆಯಾಗಲು ನೆರವಾಗಬಹುದು. ಇದರಿಂದ ನೆಲದ ಹೊಳಪು ಕೂಡ ಉಳಿಯುತ್ತದೆ.

ನೊಣಗಳು ಮತ್ತು ಕೀಟಗಳ ಕಾಟ ಕಡಿಮೆಯಾಗಬಹುದು:
ಮಳೆಗಾಲದಲ್ಲಿ ನೊಣಗಳು ಮತ್ತು ಸಣ್ಣ ಕೀಟಗಳ ಕಾಟ ಹೆಚ್ಚಾಗುತ್ತದೆ. ಉಪ್ಪು ಬೆರೆಸಿದ ನೀರಿನಿಂದ ನೆಲವನ್ನು ಒರೆಸುವುದರಿಂದ ಅವುಗಳ ಕಾಟವನ್ನು ಕೆಲವು ಮಟ್ಟಿಗೆ ಕಡಿಮೆ ಮಾಡಲು ಸಹಕಾರಿಯಾಗಬಹುದು.

ಜಿಗುಟು ಮತ್ತು ದುರ್ವಾಸನೆ ನಿವಾರಣೆ:
ತೇವಾಂಶ ಹೆಚ್ಚಿರುವ ಸಂದರ್ಭದಲ್ಲಿ ನೆಲ ಜಿಗುಟಾಗುವುದು ಸಾಮಾನ್ಯ. ಉಪ್ಪು ನೀರಿನಿಂದ ನೆಲ ಒರೆಸುವುದರಿಂದ ಜಿಗುಟು ಕಡಿಮೆಯಾಗಲು, ತೇವಾಂಶದಿಂದ ಉಂಟಾಗುವ ದುರ್ವಾಸನೆ ನಿವಾರಣೆಯಾಗಲು ಹಾಗೂ ಮನೆಗೆ ತಾಜಾತನ ದೊರೆಯಲು ನೆರವಾಗುತ್ತದೆ.

ಸ್ವಚ್ಛತೆಯ ಅನುಭವ ಹೆಚ್ಚಾಗುತ್ತದೆ:
ಉಪ್ಪು ಬೆರೆಸಿದ ನೀರಿನಿಂದ ನೆಲವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಮನೆ ಹೆಚ್ಚು ಶುಚಿಯಾಗಿ ಕಾಣುತ್ತದೆ. ಕೆಲವರು ಇದು ಮನೆಯಲ್ಲಿ ಸಕಾರಾತ್ಮಕ ವಾತಾವರಣ ಮೂಡಿಸುತ್ತದೆ ಎಂಬ ನಂಬಿಕೆಯನ್ನೂ ಹೊಂದಿದ್ದಾರೆ. ಆದರೆ ಈ ನಂಬಿಕೆಗೆ ವೈಜ್ಞಾನಿಕ ಪುರಾವೆಗಳು ಸೀಮಿತವಾಗಿವೆ.

ಒಟ್ಟಾರೆ, ಉಪ್ಪು ಬೆರೆಸಿದ ನೀರು ಮನೆಯ ನೆಲದ ದೈನಂದಿನ ಸ್ವಚ್ಛತೆಗೆ ಕಡಿಮೆ ವೆಚ್ಚದ ಪರ್ಯಾಯವಾಗಬಹುದು. ಆದರೆ ಹಠಾತ್ ಕಲೆಗಳು, ಸೋಂಕು ಅಥವಾ ವಿಶೇಷ ಸ್ವಚ್ಛತಾ ಅಗತ್ಯವಿದ್ದರೆ ಸೂಕ್ತ ಗುಣಮಟ್ಟದ ಕ್ಲೀನಿಂಗ್ ಉತ್ಪನ್ನಗಳನ್ನು ಬಳಸುವುದು ಹಾಗೂ ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯುವುದು ಉತ್ತಮ.

ಬೆಂಗಳೂರಿನಲ್ಲಿ ಇ-ಆಟೋಗಳಿಗೆ ಪರ್ಮಿಟ್ ಕಡ್ಡಾಯ: ಸಾರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿ!

ಬೆಂಗಳೂರು: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಮಹತ್ವದ ನಿಯಮ ಜಾರಿಗೆ ತಂದಿದೆ.

ಇನ್ನು ಮುಂದೆ ಎಲೆಕ್ಟ್ರಿಕ್ ಆಟೋಗಳಿಗೂ ಆಟೋ ಪರ್ಮಿಟ್ ಕಡ್ಡಾಯವಾಗಲಿದೆ ಎಂದು ಇಲಾಖೆ ಆದೇಶ ಹೊರಡಿಸಿದೆ.

ಈವರೆಗೆ ಸಿಎನ್‌ಜಿ, ಎಲ್‌ಪಿಜಿ ಹಾಗೂ ಪೆಟ್ರೋಲ್ ಆಟೋಗಳಿಗೆ ಮಾತ್ರ ಪರ್ಮಿಟ್ ಕಡ್ಡಾಯವಾಗಿತ್ತು. ಆದರೆ ನಗರದಲ್ಲಿ ಎಲೆಕ್ಟ್ರಿಕ್ ಆಟೋಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ಕಾನೂನು ಸಂಬಂಧಿತ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

ಹೊಸ ನಿಯಮದ ಪ್ರಕಾರ, ಎಲೆಕ್ಟ್ರಿಕ್ ಆಟೋ ಖರೀದಿಸಲು ಚಾಲನಾ ಪರವಾನಗಿ (DL) ಮತ್ತು ಆಟೋ ಪರ್ಮಿಟ್ ಹೊಂದಿರುವುದು ಕಡ್ಡಾಯವಾಗಿದೆ. ಇವೆರಡೂ ಇಲ್ಲದಿದ್ದರೆ ಹೊಸದಾಗಿ ಇ-ಆಟೋ ಖರೀದಿಸಲು ಅವಕಾಶ ಇರುವುದಿಲ್ಲ.

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕ್ರಮ

ಪರ್ಮಿಟ್ ಇಲ್ಲದ ವಾಹನಗಳಲ್ಲಿ ಪ್ರಯಾಣಿಸುವ ವೇಳೆ ಅಪಘಾತ ಸಂಭವಿಸಿದರೆ ವಿಮಾ ಪರಿಹಾರ ಪಡೆಯುವಲ್ಲಿ ಸಮಸ್ಯೆ ಎದುರಾಗಬಹುದು. ನಿಯಮಗಳ ಪ್ರಕಾರ ಪರ್ಮಿಟ್ ಇಲ್ಲದ ವಾಹನಗಳಿಗೆ ವಿಮಾ ಸೌಲಭ್ಯ ಅನ್ವಯವಾಗದಿರುವ ಕಾರಣ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಾರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.

ಸಾಮಾನ್ಯ ಆಟೋಗಳಿಗೆ ಪರ್ಮಿಟ್ ಪಡೆಯಲು 500 ರೂಪಾಯಿ ಶುಲ್ಕ ಪಾವತಿಸಬೇಕು. ಆದರೆ ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಅನ್ನು ಉಚಿತವಾಗಿ ನೀಡಲು ಇಲಾಖೆ ನಿರ್ಧರಿಸಿದೆ.

ಪರ್ಮಿಟ್ ಇಲ್ಲದೆ ಇ-ಆಟೋ ಮಾರಾಟಕ್ಕೆ ಕಡಿವಾಣ

ಇತ್ತೀಚಿನ ವರ್ಷಗಳಲ್ಲಿ ಕೆಲವು ಎಲೆಕ್ಟ್ರಿಕ್ ಆಟೋ ಶೋರೂಮ್‌ಗಳು ಚಾಲಕರಿಗೆ ಪರ್ಮಿಟ್ ಅಗತ್ಯವಿಲ್ಲ ಎಂದು ತಪ್ಪು ಮಾಹಿತಿ ನೀಡಿ ವಾಹನ ಮಾರಾಟ ಮಾಡುತ್ತಿದ್ದ ಆರೋಪಗಳಿದ್ದವು. ಸಿಎನ್‌ಜಿ ಮತ್ತು ಎಲ್‌ಪಿಜಿ ಆಟೋಗಳಿಗೆ ಮಾತ್ರ ಪರ್ಮಿಟ್ ಬೇಕು, ಇವಿ ಆಟೋಗಳಿಗೆ ಬೇಡ ಎಂಬ ತಪ್ಪು ಕಲ್ಪನೆಯಿಂದ ಹಲವು ಮಂದಿ ಪರ್ಮಿಟ್ ಇಲ್ಲದೆ ಆಟೋಗಳನ್ನು ಖರೀದಿಸಿದ್ದರು.

ಬೆಂಗಳೂರಿನಲ್ಲಿ ಈಗಾಗಲೇ ಸುಮಾರು 3 ಲಕ್ಷಕ್ಕೂ ಅಧಿಕ ಸಿಎನ್‌ಜಿ ಮತ್ತು ಎಲ್‌ಪಿಜಿ ಆಟೋಗಳು ಪರ್ಮಿಟ್ ಹೊಂದಿವೆ. ಆದರೆ ಎಲೆಕ್ಟ್ರಿಕ್ ಆಟೋಗಳಿಗೆ ಈ ನಿಯಮ ಅನ್ವಯವಾಗಿರಲಿಲ್ಲ.

ಅಕ್ರಮ ಕಾರ್ಯಾಚರಣೆಗೆ ಕಡಿವಾಣ ಸಾಧ್ಯತೆ

ಕೆಲವು ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳು ಪರ್ಮಿಟ್ ನಿಯಮಗಳ ಕೊರತೆಯನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಆಟೋಗಳನ್ನು ಬಳಸಿಕೊಂಡಿದ್ದವು ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಹೊರರಾಜ್ಯದ ಚಾಲಕರನ್ನು ಕರೆತಂದು ಆಟೋ ಓಡಿಸಲಾಗುತ್ತಿದೆ ಎಂಬ ವಿಚಾರ ಸ್ಥಳೀಯ ಆಟೋ ಚಾಲಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದೀಗ ಎಲೆಕ್ಟ್ರಿಕ್ ಆಟೋಗಳಿಗೂ ಪರ್ಮಿಟ್ ಕಡ್ಡಾಯವಾಗಿರುವುದರಿಂದ ಅನಧಿಕೃತವಾಗಿ ಆಟೋ ಸೇವೆ ನಡೆಸುವವರಿಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.