ವಿಜಯಸಾಕ್ಷಿ ಸುದ್ದಿ, ಡಂಬಳ: ಅಂಗವೈಕಲ್ಯವನ್ನು ಸೋಲಿಸಿ, ಕಾಯಕವನ್ನೇ ಕೈಲಾಸವೆಂದು ನಂಬಿ ಮೂರು ದಶಕಗಳ ಕಾಲ ಶಿಕ್ಷಣ ಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಮಲ್ಲಪ್ಪ ಕೆಂಚಮ್ಮ ಹರಿಜನ ಅವರಿಗೆ ಡಂಬಳದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದಲ್ಲಿ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು.
ತೋಂಟದಾರ್ಯ ವಿದ್ಯಾಪೀಠದ ಬಾಲಕಿಯರ ಹಾಗೂ ಬಾಲಕರ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮಲ್ಲಪ್ಪ ಹರಿಜನ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ, ಅಂಗವೈಕಲ್ಯವು ವ್ಯಕ್ತಿಯ ದೇಹಕ್ಕೆ ಮಾತ್ರ ಸೀಮಿತವಾಗಿರಬಹುದು. ಆದರೆ ಆತ್ಮವಿಶ್ವಾಸ, ಧೈರ್ಯ, ಪರಿಶ್ರಮ ಮತ್ತು ಕರ್ತವ್ಯನಿಷ್ಠೆಗೆ ಅದು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಮಲ್ಲಪ್ಪ ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
ಬಾಲ್ಯದಿಂದಲೇ ಹಲವು ಸವಾಲುಗಳನ್ನು ಎದುರಿಸಿದ ಮಲ್ಲಪ್ಪ ಹರಿಜನ, ತಾಯಿಯ ಹಾಗೂ ಸಹೋದರನ ಪ್ರೋತ್ಸಾಹದಿಂದ ಉನ್ನತ ಶಿಕ್ಷಣ ಪಡೆದು, ಲಿಂ. ತೋಂಟದ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಮತ್ತು ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಅವರ ಪ್ರೇರಣೆಯಿಂದ ವಿದ್ಯಾಪೀಠದಲ್ಲಿ ಸೇವೆ ಆರಂಭಿಸಿದರು. ಮೂರು ದಶಕಗಳ ಕಾಲ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿರುವ ಅವರು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎ.ಬಿ. ಬೇವಿನಕಟ್ಟಿ ಹಾಗೂ ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ವಿ. ಹಿರೇಮಠ ಮಾತನಾಡಿ, ಇಚ್ಛಾಶಕ್ತಿ ಇದ್ದರೆ ಯಾವುದೇ ಅಡೆತಡೆಯೂ ಸಾಧನೆಯ ಹಾದಿಯನ್ನು ತಡೆಯಲಾರದು ಎಂಬುದನ್ನು ಮಲ್ಲಪ್ಪ ಹರಿಜನ ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ. ನಿವೃತ್ತಿ ಎಂದರೆ ಸೇವೆಯ ಅಂತ್ಯವಲ್ಲ, ಬದುಕಿನ ಹೊಸ ಅಧ್ಯಾಯ. ಮುಂದಿನ ದಿನಗಳಲ್ಲಿ ಅವರು ಆರೋಗ್ಯ, ನೆಮ್ಮದಿ ಮತ್ತು ಸಂತೋಷದಿಂದ ಜೀವನ ಸಾಗಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಮಲ್ಲಪ್ಪ ಹರಿಜನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತೋಂಟದಾರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಬಿ. ಮಡಿವಾಳರ, ಬಸವೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಗೌಡರ, ಮುಖಂಡ ಮರಿಯಪ್ಪ ಸಿದ್ದಣ್ಣವರ, ಶಾಲೆಯ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
“ಕರ್ತವ್ಯದ ಮೇಲಿನ ಪ್ರೀತಿ ಮತ್ತು ಆತ್ಮವಿಶ್ವಾಸ ಇದ್ದರೆ ದೈಹಿಕ ನ್ಯೂನತೆಗಳು ಸಾಧನೆಯ ಮುಂದೆ ತಲೆಬಾಗುತ್ತವೆ.”
ಜಿ.ವಿ. ಹಿರೇಮಠ, ವ್ಯವಸ್ಥಾಪಕ, ತೋಂಟದಾರ್ಯ ಮಠ

