Home Blog

ಅಕ್ರಮ ಗ್ಯಾಸ್ ಸಿಲಿಂಡರ್ ಗೋದಾಮಿನಲ್ಲಿ ಭಾರೀ ಸ್ಫೋಟ: ಮಾಲೀಕನಿಗೆ ಗಂಭೀರ ಗಾಯ

ದಾವಣಗೆರೆ: ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಭಾರೀ ಅಗ್ನಿ ಅವಘಡ ಸಂಭವಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಕೆ. ಕಲ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ-48 ಸಮೀಪದ ಅಡಿಕೆ ತೋಟದಲ್ಲಿರುವ ಗೋದಾಮಿನಲ್ಲಿ ಈ ಸ್ಫೋಟ ಸಂಭವಿಸಿದ್ದು, ಅನಿಲ್ (40) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿಯ ಪ್ರಕಾರ, ಶಿವಕುಮಾರ್ ಅವರಿಗೆ ಸೇರಿದ ಗೋದಾಮನ್ನು ಅನಿಲ್ ಗುತ್ತಿಗೆಗೆ ಪಡೆದಿದ್ದರು. ಗೋದಾಮಿನಲ್ಲಿ ದೊಡ್ಡ ಪ್ರಮಾಣದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಲಾಗಿದ್ದು, ಅನಿಲ ಸೋರಿಕೆಯಿಂದ ಏಕಾಏಕಿ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಸ್ಫೋಟದ ತೀವ್ರತೆಗೆ ಹಲವು ಸಿಲಿಂಡರ್‌ಗಳು ಗಾಳಿಗೆ ಹಾರಿ ಚದುರಿಹೋಗಿದ್ದು, ಕೆಲವು ಪಕ್ಕದ ಜಮೀನುಗಳಿಗೂ ಬಿದ್ದಿವೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗೋದಾಮಿನಲ್ಲಿ ಇನ್ನೂ ಕೆಲವು ಸಿಲಿಂಡರ್‌ಗಳು ಇರುವ ಶಂಕೆಯಿಂದ ಮತ್ತಷ್ಟು ಸ್ಫೋಟ ಸಂಭವಿಸುವ ಭೀತಿ ಕೆಲಕಾಲ ಕಾಡಿತ್ತು.

ಸದ್ಯ ಸ್ಥಳವನ್ನು ಭದ್ರತಾ ವಲಯವನ್ನಾಗಿ ಘೋಷಿಸಿ ಪರಿಶೀಲನೆ ನಡೆಸಲಾಗುತ್ತಿದ್ದು, ಸಿಲಿಂಡರ್‌ಗಳನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿತ್ತು ಹಾಗೂ ಸ್ಫೋಟಕ್ಕೆ ನಿಖರ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ವಾರದಲ್ಲಿ ನಾಲ್ಕು ದಿನ ವಿಚಾರಣೆಗೆ ಕೋರ್ಟ್ ಆದೇಶ

ಬೆಂಗಳೂರು: ನಟ ದರ್ಶನ್ ಸೇರಿದಂತೆ ಹಲವರು ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮಹತ್ವದ ಹಂತ ತಲುಪಿದ್ದು, ಪ್ರಕರಣದ ತ್ವರಿತಗತಿ ವಿಚಾರಣೆಗೆ ಸೆಷನ್ಸ್ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.

ಸಿಸಿಎಚ್-59 ನ್ಯಾಯಾಲಯವು ವಾರದಲ್ಲಿ ಕನಿಷ್ಠ ನಾಲ್ಕು ದಿನಗಳ ಕಾಲ ನಿರಂತರ ವಿಚಾರಣೆ ನಡೆಸಲು ಸೂಚಿಸಿದ್ದು, ಅಗತ್ಯವಿದ್ದರೆ ಐದನೇ ದಿನವೂ ವಿಚಾರಣೆ ನಡೆಸಲು ಸಿದ್ಧರಿರಬೇಕು ಎಂದು ಉಭಯ ಪಕ್ಷಗಳ ವಕೀಲರಿಗೆ ತಿಳಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಂದು ವರ್ಷದೊಳಗೆ ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ, ಯಾವುದೇ ಕಾರಣಕ್ಕೂ ವಿಚಾರಣೆಯನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ನ್ಯಾಯಾಲಯ ಖಡಕ್ ಸೂಚನೆ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ಅವರು, ಪ್ರಕರಣದ ವೇಗವಾದ ವಿಚಾರಣೆಗಾಗಿ ಪ್ರತಿದಿನವೂ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ, ವಾರಕ್ಕೆ ಕನಿಷ್ಠ ಇಬ್ಬರು ಸಾಕ್ಷಿಗಳ ಪಾಟೀಸವಾಲು ಪೂರ್ಣಗೊಳಿಸಬೇಕು ಹಾಗೂ ತಿಂಗಳಿಗೆ ಕನಿಷ್ಠ ಎಂಟು ಸಾಕ್ಷಿಗಳ ವಿಚಾರಣೆ ಮುಗಿಯಬೇಕು ಎಂದು ನಿರ್ದೇಶನ ನೀಡಿತು.

ಇದೇ ವೇಳೆ ಸಾಕ್ಷಿಯೊಬ್ಬರ ಕ್ರಾಸ್ ಎಕ್ಸಾಮಿನೇಷನ್‌ಗೆ ಹೆಚ್ಚಿನ ಸಮಯ ನೀಡುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದಾಗ, ಕಾಲಹರಣಕ್ಕೆ ಅವಕಾಶ ನೀಡಬಾರದು ಎಂದು ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ನ್ಯಾಯಾಲಯದ ಸೂಚನೆಗೆ ದರ್ಶನ್ ಪರ ವಕೀಲರು ಸಹ ಒಪ್ಪಿಗೆ ಸೂಚಿಸಿದರು.

ಇನ್ನೊಂದೆಡೆ, ವಿಡಿಯೋ ಕಾನ್ಫರೆನ್ಸ್ ಮೂಲಕವಲ್ಲದೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅವಕಾಶ ನೀಡುವಂತೆ ನಟ ದರ್ಶನ್ ಪರ ವಕೀಲರು ವಿಶೇಷ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದಕ್ಕೆ ಸರ್ಕಾರದ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕವೇ ಹಾಜರಾಗುವುದು ಸಾಕು ಎಂದು ವಾದಿಸಿದ್ದಾರೆ.

ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರ ಅಧಿಕೃತ ಆಕ್ಷೇಪಣೆಯನ್ನು ಮಂಗಳವಾರ ಸಲ್ಲಿಸಲಾಗಲಿದ್ದು, ಬಳಿಕ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ.

RSS ಬಗ್ಗೆ ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆ: ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು..?

ನವದೆಹಲಿ: ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ ನೋಂದಣಿ, ಆದಾಯ ಹಾಗೂ ಆಸ್ತಿಪಾಸ್ತಿ ವಿವರಗಳನ್ನು ಕೇಳಿ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ವಿಚಾರಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗಳಿಗೆ ಆರ್‌ಎಸ್‌ಎಸ್ ಕಾನೂನುಬದ್ಧವಾಗಿ ಉತ್ತರ ನೀಡಲಿದೆ ಎಂದು ಹೇಳಿದರು. ಸಂಘ-ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ದೇಶದ ಸಂವಿಧಾನವೇ ನೀಡಿದ್ದು, ಅದು ಕೇವಲ ಆರ್‌ಎಸ್‌ಎಸ್‌ಗೆ ಮಾತ್ರ ಸೀಮಿತವಾಗಿಲ್ಲ. ಗ್ರಾಮೀಣ ಭಾಗದ ಕೆಲ ಯುವಕರೂ ಸೇರಿ ಸಂಘಟನೆಯನ್ನು ಕಟ್ಟಬಹುದು ಎಂದು ತಿಳಿಸಿದರು.

ಆರ್‌ಎಸ್‌ಎಸ್ ಸಂವಿಧಾನ ಜಾರಿಗೆ ಬರುವುದಕ್ಕೂ ಮುನ್ನ ಹಾಗೂ ಬ್ರಿಟಿಷರ ಆಡಳಿತದ ಕಾಲದಿಂದಲೂ ಕಾರ್ಯನಿರ್ವಹಿಸುತ್ತಿದೆ. ಸಂಘದ ಆಸ್ತಿ, ಹಣಕಾಸು ವ್ಯವಹಾರಗಳು ಎಲ್ಲವೂ ನಿಯಮಾನುಸಾರ ನಡೆಯುತ್ತಿವೆ ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆ ಇದೇ ಮೊದಲ ಬಾರಿಗೆ ಆರ್‌ಎಸ್‌ಎಸ್ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ. ಐಟಿ-ಬಿಟಿ ಇಲಾಖೆಯಲ್ಲಿ ಸಂಶೋಧನೆ ಮತ್ತು ನವೋದ್ಯಮಗಳಿಗೆ ಉತ್ತೇಜನ ನೀಡಬೇಕಿದ್ದ ಅವರು, ಈಗ ಆರ್‌ಎಸ್‌ಎಸ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಹಿಂದೆಯೂ ಆರ್‌ಎಸ್‌ಎಸ್ ಪಥಸಂಚಲನಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೆ ನ್ಯಾಯಾಲಯ ಅನುಮತಿ ನೀಡಿದ ಬಳಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು. ವಿರೋಧ ಹೆಚ್ಚಾದಷ್ಟು ಸಂಘದ ವಿಚಾರಧಾರೆ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.

ದೇಶದ ಸಂವಿಧಾನದ ಚೌಕಟ್ಟಿನಲ್ಲಿಯೇ ಆರ್‌ಎಸ್‌ಎಸ್ ಕಾರ್ಯನಿರ್ವಹಿಸುತ್ತಿದೆ. ನೋಂದಣಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಈ ವಿಷಯದಲ್ಲಿ ಪ್ರಿಯಾಂಕ್ ಖರ್ಗೆ ಅವರು ಮೊದಲು ಕಾನೂನು ಸಲಹೆ ಪಡೆಯಬೇಕಿತ್ತು. ಸೂಕ್ತ ಸಮಯದಲ್ಲಿ ಆರ್‌ಎಸ್‌ಎಸ್ ಹಾಗೂ ಜನರೇ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಗ್ಯಾರಂಟಿ ಯೋಜನೆಗಳಲ್ಲಿ ಭ್ರಷ್ಟಾಚಾರ ಆರೋಪ: ತನಿಖೆಗೆ ಆಗ್ರಹಿಸಿದ ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನೀಡಿರುವ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿ ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದರು.

ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಹಲವು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಈ ಕುರಿತು ಸರ್ಕಾರ ಸ್ಪಷ್ಟ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಮೃತಪಟ್ಟವರ ಹೆಸರಿನಲ್ಲಿಯೂ ಯೋಜನೆಗಳ ಸೌಲಭ್ಯ ದುರುಪಯೋಗವಾಗಿರುವ ಬಗ್ಗೆ ಆರೋಪಗಳಿದ್ದು, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಹೇಳಿದರು.

ಚುನಾವಣಾ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಿಸುವ ಭರವಸೆ ನೀಡಲಾಗಿತ್ತು. ಆದರೆ ಪ್ರಸ್ತುತ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಯೋಜನೆಗಳ ಲಾಭ ದೊರೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ರಾಘವೇಂದ್ರ ಹೇಳಿದರು.

ಈ ಹಿನ್ನೆಲೆಯಲ್ಲಿ ಯೋಜನೆಗಳ ಅನುಷ್ಠಾನದ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಅರ್ಹರೆಲ್ಲರಿಗೂ ಸೌಲಭ್ಯ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಭ್ರಷ್ಟಾಚಾರ ಅಥವಾ ಅಕ್ರಮಗಳು ನಡೆದಿರುವುದು ದೃಢಪಟ್ಟರೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಯೋಜನೆಗಳನ್ನು ಜಾರಿಗೆ ತರುವ ಮೊದಲು ಸರ್ಕಾರ ಸಮರ್ಪಕ ಯೋಜನೆ ರೂಪಿಸಬೇಕಿತ್ತು. ಇದೀಗ ಯೋಜನೆಗಳಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿರುವುದು ತಡವಾಗಿ ಬಂದ ಅರಿವಿನಂತಿದೆ ಎಂದು ಟೀಕಿಸಿದ ಅವರು, ರಾಜ್ಯ ಸರ್ಕಾರ ಚರ್ಚೆಗಳಿಗಿಂತ ಪರಿಣಾಮಕಾರಿ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಸದ ಹಗರಣದ ವಿರುದ್ಧ ಬೆಂಗಳೂರಿನ ನಾಗರಿಕರು ಪತ್ರ ಚಳವಳಿ ಮಾಡಿ: ಆರ್.ಅಶೋಕ್ ಮನವಿ

ಬೆಂಗಳೂರು: ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಎಲ್ಲ ಸಂಘಟನೆಗಳು, ನಾಗರಿಕರು ಕಸದ ಟೆಂಡರ್‌ ಹಗರಣದ ವಿರುದ್ಧ ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿಯವರಿಗೆ ಪತ್ರ ಬರೆಯಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಘನತ್ಯಾಜ್ಯ ಸಂಸ್ಕರಣೆಗೆ 39,437 ಕೋಟಿ ರೂ. ಟೆಂಡರ್‌ ನೀಡಿರುವುದು ದೊಡ್ಡ ಹಗರಣ ಎಂದು ಈಗಾಗಲೇ ಹೇಳಿದ್ದೇನೆ. ನಗರದ ಗಾರ್ಬೇಜ್‌ನಿಂದ ಕಾಂಗ್ರೆಸ್‌ ಹೈಕಮಾಂಡ್‌ಗೆ ಲಗೇಜು ಸಿಗುತ್ತಿದ್ದು, ಇದರಿಂದ ಜನರಿಗೆ ಡ್ಯಾಮೇಜ್‌ ಆಗಿದೆ.

ಇದಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ನಾನು ಪತ್ರ ಬರೆದು, ಪ್ರಾಮಾಣಿಕತೆಯಿಂದ ವರದಿ ತಯಾರಿಸಿ ಎಂದು ಮನವಿ ಮಾಡಿದ್ದೇನೆ. ಲೋಕಾಯುಕ್ತಕ್ಕೆ ದೂರು ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇನೆ. ಇದು ನಗರದ 30 ವರ್ಷಗಳ ಭವಿಷ್ಯವಾಗಿದೆ. ಮುಂದಿನ ಮೂರು ಪೀಳಿಗೆಗಳು ಅಂದ್ರೆ ಜೆನ್‌ ಜೀ, ಆಲ್ಫಾ ಹಾಗೂ ಮುಂದಿನ ಪೀಳಿಗೆ ಕೂಡ ಇದನ್ನು ನೋಡಬೇಕಿದೆ. ಸಿಎಂ ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಹೆಸರು ಹೇಳಿಕೊಂಡು ನಗರದಲ್ಲಿ ಕಸ ರಾಶಿ ಹಾಕಲು ಕಾರಣರಾಗಿದ್ದಾರೆ ಎಂದರು.

ಇದು ಬೆಂಗಳೂರಿನ ಜನರ ಮೇಲೆ ಹೊರೆಯಾಗಲಿದೆ. ಆದ್ದರಿಂದ ಜನರು ಈ ಕುರಿತು ಪತ್ರ ಚಳವಳಿ ಮಾಡಬೇಕು. ಎಲ್ಲ ಸಂಘ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ ಸಂಘಟನೆಗಳು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿಗೆ ಪತ್ರ ಬರೆಯಬೇಕು. ಈ ಮೂಲಕ ನಗರದ ಭವಿಷ್ಯವನ್ನು ಕಾಪಾಡಬೇಕು ಎಂದು ಕೋರಿದರು.

ನಾನು ಕಸದ ಟೆಂಡರ್‌ ಯಾವತ್ತೂ ಕರೆದಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಈ ಎಲ್ಲವನ್ನೂ ಮಾಡಿ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ನಾನು ಜನರ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದೇನೆ. ನಾನು ಬೇಕಿದ್ದರೆ ನಾಳೆಯೇ ಸಿಬಿಐಗೆ ತನಿಖೆಗೆ ವಹಿಸಲು ಆಗ್ರಹಿಸುತ್ತೇನೆ.

ಆದರೆ ಸರ್ಕಾರದ ಕಡೆಯಿಂದ ಅದನ್ನು ಅನುಮೋದಿಸಬೇಕಾಗುತ್ತದೆ. ಡಿ.ಕೆ.ಶಿವಕುಮಾರ್‌ 60 ವರ್ಷಕ್ಕೆ ಕಸದ ಟೆಂಡರ್‌ ವಹಿಸಿದ್ದಾರೆ. ಇದು ಜಾತಿಯ ಪ್ರಶ್ನೆ ಅಲ್ಲ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರೆ ಅಥವಾ ಮುಂದುವರಿದರೆ ನನಗೆ ಯಾವುದೇ ನಷ್ಟ, ಲಾಭ ಇಲ್ಲ. ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಬೆಂಗಳೂರಿಗೆ ಬಂದು ಕಸ ಗುಡಿಸಿದ್ದಾರೆ ಎಂದರೆ ಅದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಡದಿ ಯೋಜನೆ ಕೈ ಬಿಡಿ

ಬಿಡದಿ ಟೌನ್‌ಶಿಪ್‌ ಯೋಜನೆ ಪರಿಚಯವಾದಾಗಲೇ ನಾನು ರೈತರ ಜೊತೆ ಹೋರಾಟದಲ್ಲಿ ಭಾಗವಹಿಸಿದ್ದೆ. ನಂತರ ಬಂದ ಬಿ.ಎಸ್‌.ಯಡಿಯೂರಪ್ಪನವರ ಸರ್ಕಾರಿಂದ ಈ ಯೋಜನೆ ಜಾರಿಯಾಗಲಿಲ್ಲ. ನಂತರ ಬಂದ ಯಾವುದೇ ಮುಖ್ಯಮಂತ್ರಿಗಳು ಯೋಜನೆ ಜಾರಿಗೊಳಿಸಲಿಲ್ಲ. ಎಲ್ಲ ಮುಖ್ಯಮಂತ್ರಿಗಳು ಇದನ್ನು ಕೈ ಬಿಟ್ಟಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿಯವರ ಯೋಜನೆಯನ್ನು ನಾವು ಮುಂದುವರಿಸುತ್ತಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಹೇಳುತ್ತಾರೆ. ಅಂತಹ ಅಗತ್ಯವೇನೂ ಈಗ ಇಲ್ಲ. ಈ ಯೋಜನೆ ಕೈ ಬಿಟ್ಟುಬಿಟ್ಟರೆ ಸಾಕು ಎಂದರು.

ನಮ್ಮ ತೆರಿಗೆ ನಮ್ಮ ಹಕ್ಕು ಎಂದಂತೆ ಈಗ ರೈತರು ನಮ್ಮ ಭೂಮಿ ನಮ್ಮ ಹಕ್ಕು ಎನ್ನುತ್ತಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗ್ರೇಟ್‌ ನಿಕೋಬಾರ್‌ಗೆ ಹೋಗಿ ಸಸ್ಯಕಾಶಿಯನ್ನು ಹಾಳು ಮಾಡಿ ಯೋಜನೆ ಮಾಡುತ್ತಿದ್ದೀರಿ ಎಂದು ಟೀಕೆ ಮಾಡಿದ್ದಾರೆ. ಬಿಡದಿಯಲ್ಲಿ ರೈತರು ಕೃಷಿ ಮಾಡುತ್ತಿದ್ದು, ಇಲ್ಲಿ ವನ್ಯ ಸಂಪತ್ತು ಹಾಳಾದರೆ ರಾಹುಲ್‌ ಗಾಂಧಿ ಮಾತಾಡುವುದಿಲ್ಲ.

ಏಕೆಂದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವುದು ಮಾತ್ರ ಇವರ ಉದ್ದೇಶ. ಅದನ್ನು ಪರಿಸರ ನಾಶ ಎನ್ನುವ ಇವರು, ಇಲ್ಲಿನ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ. ದೇಶದ ಭದ್ರತೆಯ ದೃಷ್ಟಿಯಿಂದ ಗ್ರೇಟ್‌ ನಿಕೋಬಾರ್‌ ಯೋಜನೆ ಜಾರಿಯಾಗಿದೆ. ಆದರೆ ಬಿಡದಿಯಲ್ಲಿ ಮಾಡುವ ಯೋಜನೆಗೆ ಯಾವುದೇ ಉದ್ದೇಶವೇ ಇಲ್ಲ ಎಂದರು.

ಬಿಡದಿಯಲ್ಲಿ ಸಾವಿರಾರು ರೈತರು ಬೀದಿಗೆ ಬಂದು ಹೋರಾಡುತ್ತಿದ್ದಾರೆ. ಕೆಂಪೇಗೌಡ ಬಡಾವಣೆ ನಿರ್ಮಾಣವಾಗಿ ಹದಿನೈದು ವರ್ಷವಾದರೂ ಕುಡಿಯುವ ನೀರು, ವಿದ್ಯುತ್‌ ನೀಡಿಲ್ಲ. ಶಿವರಾಮ ಕಾರಂತ ಬಡಾವಣೆಯಲ್ಲೂ ಇದೇ ಪರಿಸ್ಥಿತಿ ಇದೆ. ಸರ್ಕಾರಿ ಯೋಜನೆಗಳಡಿ ನಗರದೊಳಗೆ 7-8 ಸಾವಿರ ನಿವೇಶನಗಳು ಖಾಲಿ ಇವೆ. ಸೂರ್ಯನಗರ ಹಾಗೂ ಸುತ್ತಮುತ್ತ 8 ಲಕ್ಷ ಫ್ಲ್ಯಾಟ್‌ಗಳು ಖಾಲಿ ಇವೆ. ಎಲ್ಲ ಸೇರಿ ಸುಮಾರು 20 ಲಕ್ಷ ನಿವೇಶನ – ಫ್ಲ್ಯಾಟ್‌ಗಳು ಖಾಲಿ ಇವೆ. ಇಂತಹ ಸಮಯದಲ್ಲಿ ಬಿಡದಿ ಟೌನ್‌ಶಿಪ್‌ ಅಗತ್ಯವಿಲ್ಲ ಎಂದರು.

ಹಿಂದೆ ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡಿ ಅಧಿಕಾರ ಸಿಕ್ಕರೂ ಏನೂ ಮಾಡಿಲ್ಲ. ಕೇವಲ ಹೆಸರಿಗಾಗಿ ಹೋರಾಟ ಮಾಡಿ ನಂತರ ಅದನ್ನು ಮರೆಯುತ್ತಾರೆ. ಈ ಯೋಜನೆ ಕೂಡ ಹಾಗೆಯೇ ಆಗುತ್ತದೆ. ಮುಂದೆ ಬರುವ ಮುಖ್ಯಮಂತ್ರಿಗಳು ಅಭಿವೃದ್ಧಿ ಮಾಡುತ್ತಾರೆ.

ಎಲ್ಲವನ್ನೂ ಇವರೇ ಮಾಡಬೇಕಿಲ್ಲ. ಬಿಜೆಪಿ ಸರ್ಕಾರದಿಂದ ಭೂ ಸ್ವಾಧೀನ ಕಾನೂನಿನಲ್ಲಿ ತಿದ್ದುಪಡಿ ತಂದಿದ್ದರೂ ಲೇಔಟ್‌ ನಿರ್ಮಿಸಲು ಅವಕಾಶ ನೀಡಿಲ್ಲ. ಯುವ ಜನರು ಕೃಷಿ ಕೆಲಸ ಮಾಡಲು ಅದರಲ್ಲಿ ಅವಕಾಶ ಮಾಡಿಕೊಡಲಾಗಿದೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕರು ಕೃಷಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕಾನೂನು ತಿದ್ದುಪಡಿಯಿಂದ ಅಂಥವರಿಗೆ ಅನುಕೂಲವಾಗಿದೆ ಎಂದರು.

ಅಭಿವೃದ್ಧಿ ಎಂದರೆ ಲೇಔಟ್‌ ನಿರ್ಮಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ಎಂದೂ ಹೇಳಿಲ್ಲ. ಕಾಂಗ್ರೆಸ್‌ ನಾಯಕರು ಇದನ್ನು ಸಾಬೀತಪಡಿಸಲಿ. ಶಾಲೆ, ಆಸ್ಪತ್ರೆ ನಿರ್ಮಿಸುವುದು ಅಭಿವೃದ್ಧಿ ಎಂಬರ್ಥದಲ್ಲಿ ಪ್ರಧಾನಿ ಹೇಳಿರುತ್ತಾರೆ. ಗುಜರಾತ್‌ನಲ್ಲಿ ಭೂಕಂಪ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಲಾಗಿದೆ. ಅದನ್ನು ಲೇಔಟ್‌ಗೆ ಹೋಲಿಸಬಾರದು ಎಂದರು.

ಗೃಹಲಕ್ಷ್ಮಿಗೆ ಕತ್ತರಿ

ಸತ್ತವರನ್ನು ಪತ್ತೆ ಮಾಡಲು ಗ್ಯಾರಂಟಿ ಸಮಿತಿಯನ್ನು ಬಳಸಿಕೊಳ್ಳಬೇಕಿತ್ತು. ಆದರೆ ಈ ಸಮಿತಿ ವ್ಯರ್ಥವಾಗಿದೆ. ಆದ್ದರಿಂದ ಈ ಸಮಿತಿಯನ್ನು ರದ್ದು ಮಾಡಿ ಖರ್ಚು ಮಾಡಿದ ಹಣವನ್ನು ಮರಳಿ ಪಡೆಯಬೇಕು. ಸತ್ತವರ ಹೆಸರು ಸ್ವಯಂಚಾಲಿತವಾಗಿ ರದ್ದಾಗಬೇಕು.

ಅದನ್ನು ಬಿಟ್ಟು ಪ್ರತ್ಯೇಕವಾಗಿ ಗೃಹಲಕ್ಷ್ಮಿ ಯೋಜನೆಯನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿದೆ. ಆದರೆ ವಾಸ್ತವದಲ್ಲಿ ಈ ನೆಪದಲ್ಲಿ ಫಲಾನುಭವಿಗಳ ಸಂಖ್ಯೆ ಕಡಿತ ಮಾಡಲಾಗುತ್ತಿದೆ. ಯೋಜನೆಯನ್ನು ಘೋಷಣೆ ಮಾಡುವಾಗಲೇ, ಷರತ್ತುಗಳ ಬಗ್ಗೆ ತಿಳಿಸಬೇಕಿತ್ತು. ಸರ್ಕಾರ ದಿವಾಳಿಯಾಗಿರುವುದರಿಂದ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ ಎಂದರು.

ಇಂಧನ ನಿರಾಕರಣೆಗೆ ರೊಚ್ಚಿಗೆದ್ದ ರೈತರ: ಟ್ರ್ಯಾಕ್ಟರ್ ನಿಲ್ಲಿಸಿ ಹೆದ್ದಾರಿ ಬಂದ್, ಪೊಲೀಸರ ಜತೆ ವಾಗ್ವಾದ

ಚಿಕ್ಕಬಳ್ಳಾಪುರ: ಪ್ಲಾಸ್ಟಿಕ್ ಕ್ಯಾನ್‌ಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ನಿರಾಕರಿಸಿದ ವಿಚಾರ ಚಿಕ್ಕಬಳ್ಳಾಪುರದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಭಾರತ್ ಪೆಟ್ರೋಲಿಯಂ ಬಂಕ್ ಎದುರು ರೈತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರೆ, ಬಳಿಕ ರಾಷ್ಟ್ರೀಯ ಹೆದ್ದಾರಿಯನ್ನೇ ತಡೆದು ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಸಮೀಪದ ಪೆಟ್ರೋಲ್ ಬಂಕ್‌ಗೆ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್‌ಗಳೊಂದಿಗೆ ಆಗಮಿಸಿದ ರೈತರು, ಬಂಕ್ ಮಾಲೀಕ ಸಂದೀಪ್ ಅವರನ್ನು ಪ್ರಶ್ನಿಸಿ ತೀವ್ರ ವಾಗ್ವಾದ ನಡೆಸಿದರು. ರೈತರಿಗೆ ಇಂಧನ ನೀಡದಿದ್ದರೆ ಇತರ ಗ್ರಾಹಕರಿಗೂ ಇಂಧನ ವಿತರಿಸಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ರೈತರು ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಹೆದ್ದಾರಿಯನ್ನು ತಡೆದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ರಸ್ತೆಯ ಮಧ್ಯಭಾಗದಲ್ಲಿ ಕೃಷಿ ಯಂತ್ರೋಪಕರಣಗಳನ್ನು ನಿಲ್ಲಿಸಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳ ಸಾಲು ನಿರ್ಮಾಣಗೊಂಡಿತು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಹೆದ್ದಾರಿ ಬಂದ್‌ನಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ರೈತರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ. ವಾಹನಗಳನ್ನು ತೆರವುಗೊಳಿಸುವಂತೆ ಸೂಚಿಸಿದ ವೇಳೆ ರೈತರು ಮತ್ತು ಪಿಎಸ್‌ಐ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದು ಸಂಚಾರವನ್ನು ಪುನಃ ಆರಂಭಿಸಿದರು.

 

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ನಿವೃತ್ತ ಉಪನ್ಯಾಸಕ ಸ್ಥಳದಲ್ಲೇ ಸಾವು

0

ರಾಯಚೂರು: ರಸ್ತೆಬದಿ ನಿಂತಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಉಪನ್ಯಾಸಕರೊಬ್ಬರು ಮೃತಪಟ್ಟಿದ್ದು, ಒಂದೇ ಕುಟುಂಬದ ಐವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ರಾಯಚೂರು ಗಡಿ ಸಮೀಪದ ತೆಲಂಗಾಣದ ಗುಡೆಬಲ್ಲೂರು ಗ್ರಾಮದ ಬಳಿ ನಡೆದಿದೆ.

ರಾಯಚೂರಿನ ನಿವೃತ್ತ ಉಪನ್ಯಾಸಕ ಶೇಖರಪ್ಪ ಗೌಡ (70) ಮೃತರು. ಕುಟುಂಬ ಸದಸ್ಯರೊಂದಿಗೆ ಯಾದಗಿರಿಯ ಮನೆದೇವರಾದ ಕಾಳಬೆಳಗುಂದಿ ಬನದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಾಪಸ್ ರಾಯಚೂರಿಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಟೈಯರ್ ರೋಡ್‌ನಲ್ಲಿ ರಸ್ತೆಬದಿ ನಿಂತಿದ್ದ ಲಾರಿಗೆ ಕಾರು ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಶೇಖರಪ್ಪ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರೆ ಐವರು ಗಂಭೀರ ಗಾಯಗೊಂಡಿದ್ದು, ಅವರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃಷ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.

ಧರ್ಮಸ್ಥಳ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಹೈಕೋರ್ಟ್ ಅರ್ಜಿ ಬಳಿಕ ಬೆದರಿಕೆ ಆರೋಪ; SITಗೆ ಮಾಸ್ಕ್ ಮ್ಯಾನ್ ಚಿನ್ನಯ್ಯ ದೂರು

0

ಬೆಂಗಳೂರು: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ ಬಳಿಕ ತನಗೆ ಮತ್ತು ತನ್ನ ಕುಟುಂಬಕ್ಕೆ ಬೆದರಿಕೆ ಹಾಗೂ ಮಾನಸಿಕ ಒತ್ತಡ ಹಾಕಲಾಗುತ್ತಿದೆ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ವಿಶೇಷ ತನಿಖಾ ತಂಡಕ್ಕೆ (SIT) ಅಧಿಕೃತ ದೂರು ಸಲ್ಲಿಸಲಾಗಿದೆ.

ಪ್ರಕರಣದ ಕುರಿತು ಹೈಕೋರ್ಟ್‌ನಲ್ಲಿ W.P. No.17331/2026 ರಿಟ್ ಅರ್ಜಿ ಸಲ್ಲಿಸಿರುವ ಚಿನ್ನಯ್ಯ, ಅರ್ಜಿ ಸಲ್ಲಿಸಿದ ನಂತರ ಕೆಲ ವ್ಯಕ್ತಿಗಳು ನಿರಂತರವಾಗಿ ಸಂಪರ್ಕಿಸಿ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ಈ ಅರ್ಜಿಯ ಹಿಂದೆ ಯಾರು ಇದ್ದಾರೆ? ನಿಮಗೆ ಯಾರು ಸಹಾಯ ಮಾಡುತ್ತಿದ್ದಾರೆ? ಯಾರ ಪ್ರೇರಣೆಯಿಂದ ಈ ಕೆಲಸ ಮಾಡುತ್ತಿದ್ದೀರಿ?” ಎಂಬ ಪ್ರಶ್ನೆಗಳನ್ನು ಪದೇ ಪದೇ ಕೇಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದಲ್ಲದೆ, ತನ್ನ ಮೊಬೈಲ್ ಸಂಖ್ಯೆ ಕೇಳಿ ನೇರವಾಗಿ ಮಾತನಾಡಲು ಒತ್ತಾಯಿಸಲಾಗಿದೆ. ಕುಟುಂಬ ಸದಸ್ಯರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನ ನಡೆಸಲಾಗಿದೆ. ಪರೋಕ್ಷ ಬೆದರಿಕೆ ಹಾಗೂ ಮಾನಸಿಕ ಕಿರುಕುಳದ ಮೂಲಕ ಪ್ರಕರಣದಿಂದ ಹಿಂದೆ ಸರಿಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಚಿನ್ನಯ್ಯ ಆರೋಪಿಸಿದ್ದಾರೆ.

ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನೆಲ್‌ಗೆ ಸಂಬಂಧಿಸಿದ ಅಭಿಷೇಕ್ ಹಾಗೂ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚಿನ್ನಯ್ಯ ಮನವಿ ಮಾಡಿದ್ದಾರೆ. ಈ ಸಂಬಂಧ ಬೆಳ್ತಂಗಡಿಯ SIT ಕಚೇರಿಗೆ ಪತ್ನಿಯೊಂದಿಗೆ ಆಗಮಿಸಿ ತನಿಖಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಇದೇ ವೇಳೆ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ರಿಟ್ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ SITಗೆ ನೋಟಿಸ್ ಜಾರಿಗೊಳಿಸಿದೆ. ತನಿಖೆಯ ಪ್ರಗತಿ ಮತ್ತು ಸ್ಥಿತಿಗತಿಯ ಕುರಿತು ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ನಿರ್ದೇಶನ ನೀಡಲಾಗಿದೆ.

ರೀಲ್ಸ್ ಹುಚ್ಚಿಗೆ ಮತ್ತೊಂದು ಬಲಿ? ಸಮುದ್ರದಲ್ಲಿ ಕೊಚ್ಚಿಹೋದ ಐಟಿ ಉದ್ಯೋಗಿ!

ಕಾರವಾರ: ಸಾಮಾಜಿಕ ಜಾಲತಾಣಕ್ಕಾಗಿ ರೀಲ್ಸ್ ಮಾಡಲು ಹೋಗಿದ್ದ ಐಟಿ ಉದ್ಯೋಗಿಯೊಬ್ಬ ಸಮುದ್ರದ ಅಲೆಗಳಿಗೆ ಕೊಚ್ಚಿಹೋಗಿ ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಸಮುದ್ರತೀರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪುಣೆ ಮೂಲದ 26 ವರ್ಷದ ಜೀವನ್ ಭಟ್ಟರಾಯಿ ನಾಪತ್ತೆಯಾದ ಯುವಕ. ಐವರು ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸಕ್ಕೆ ಬಂದಿದ್ದ ಅವರು ಖಾಸಗಿ ರೆಸಾರ್ಟ್‌ನಲ್ಲಿ ಕಳೆದ ಮೂರು ದಿನಗಳಿಂದ ತಂಗಿದ್ದರು.

ಭಾನುವಾರ ರೆಸಾರ್ಟ್‌ನಿಂದ ಚೆಕ್‌ಔಟ್ ಆಗುವ ಮುನ್ನ ಸ್ನೇಹಿತರೊಂದಿಗೆ ಕಡ್ಲೆ ಸಮುದ್ರತೀರಕ್ಕೆ ತೆರಳಿ ರೀಲ್ಸ್ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ಸಮುದ್ರಕ್ಕೆ ಇಳಿದ ಜೀವನ್ ಭಟ್ಟರಾಯಿ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕರಾವಳಿ ಕಾವಲುಪಡೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ಈವರೆಗೂ ಯುವಕನ ಸುಳಿವು ಪತ್ತೆಯಾಗಿಲ್ಲ.

ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಊಟದ ಬಳಿಕ ಸೋಂಪು ತಿನ್ನುತ್ತೀರಾ? ಇವು ಗೊತ್ತಾದರೆ ಪ್ರತಿದಿನ ಸೇವಿಸುತ್ತೀರಿ!

0

ಭಾರತೀಯ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಸೋಂಪು ಕೇವಲ ಆಹಾರದ ರುಚಿ ಹೆಚ್ಚಿಸುವ ಮಸಾಲೆ ಪದಾರ್ಥವಲ್ಲ, ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ನೀಡುವ ನೈಸರ್ಗಿಕ ಆಹಾರವಾಗಿದೆ.

ವಿಟಮಿನ್‌, ಫೈಬರ್‌, ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್‌, ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆಂಟಿ-ಫಂಗಲ್ ಗುಣಗಳನ್ನು ಹೊಂದಿರುವ ಸೋಂಪನ್ನು ಊಟದ ಬಳಿಕ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳನ್ನು ಪಡೆಯಬಹುದು.

ಸೋಂಪು ತಿನ್ನುವುದರಿಂದ ದೊರೆಯುವ ಪ್ರಮುಖ ಪ್ರಯೋಜನಗಳು:

1. ಜೀರ್ಣಕ್ರಿಯೆ ಸುಧಾರಿಸುತ್ತದೆ
ಸೋಂಪು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸಿ ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್ ಹಾಗೂ ಮಲಬದ್ಧತೆ ಸಮಸ್ಯೆಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.

2. ಬಾಯಿಯ ದುರ್ವಾಸನೆ ನಿವಾರಣೆ
ಸೋಂಪಿನಲ್ಲಿರುವ ಸುಗಂಧಭರಿತ ಸಂಯುಕ್ತಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬಾಯಿಯ ದುರ್ವಾಸನೆ ದೂರ ಮಾಡಿ ಉಸಿರಾಟವನ್ನು ತಾಜಾಗೊಳಿಸುತ್ತವೆ.

3. ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ವಿಟಮಿನ್ ಎ ಸಮೃದ್ಧವಾಗಿರುವ ಸೋಂಪು ದೃಷ್ಟಿ ಸುಧಾರಿಸಲು ಸಹಕಾರಿ. ಕಣ್ಣಿನ ಆರೋಗ್ಯ ಕಾಪಾಡಲು ನೆರವಾಗುತ್ತದೆ.

4. ಚರ್ಮದ ಕಾಂತಿ ಹೆಚ್ಚಿಸುತ್ತದೆ
ಆಂಟಿಆಕ್ಸಿಡೆಂಟ್‌ಗಳಿರುವ ಸೋಂಪು ದೇಹದಲ್ಲಿನ ಹಾನಿಕಾರಕ ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಡಿ ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

5. ತೂಕ ನಿಯಂತ್ರಣಕ್ಕೆ ನೆರವು
ಸೋಂಪು ಜಗಿಯುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗಿ ಅತಿಯಾದ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

6. ರಕ್ತದೊತ್ತಡ ನಿಯಂತ್ರಣ
ಪೊಟ್ಯಾಸಿಯಮ್ ಸಮೃದ್ಧವಾಗಿರುವ ಸೋಂಪು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.

7. ಮಾನಸಿಕ ಆರೋಗ್ಯಕ್ಕೆ ಸಹಕಾರಿ
ಸೋಂಪಿನಲ್ಲಿರುವ ಪೋಷಕಾಂಶಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ.

8. ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ
ಅನೆಥೋಲ್, ಫೆನ್ಸೋನ್ ಮತ್ತು ಎಸ್ಟ್ರಾಗೋಲ್‌ನಂತಹ ಅಂಶಗಳು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ ದೇಹದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

 

error: Content is protected !!