Home Blog

ನೆಲಮಂಗಲದಲ್ಲಿ ಸರಣಿ ಅಪಘಾತ: ಬೈಕ್ ತಪ್ಪಿಸಲು ಹೋಗಿ 4 ಕಾರುಗಳ ನಡುವೆ ಡಿಕ್ಕಿ!

ಬೆಂಗಳೂರು: ನಾಲ್ಕು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ನೆಲಮಂಗಲ ನಗರದ ಅರಿಶಿನಕುಂಟೆ ಫ್ಲೈ ಓವರ್ ಮೇಲೆ ಜರುಗಿದೆ.

ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ನಾಲ್ಕು ಕಾರುಗಳ ನಡುವೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆಯಿಂದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ವೀಕೆಂಡ್ ಹಿನ್ನೆಲೆಯಲ್ಲಿ ಬೇರೆಡೆಗೆ ತೆರಳಿದ್ದವರು ಬೆಂಗಳೂರು ಕಡೆ ಬರುವಾಗ ಈ ಅಪಘಾತ ಸಂಭವಿಸಿದೆ. ಘಟನೆ ಬೆನ್ನಲ್ಲೇ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಜಿನ ಬಳೆಗಳ ಮಹತ್ವ ಏನು? ಸಂಪ್ರದಾಯದಿಂದ ಆರೋಗ್ಯದವರೆಗೆ ಹಲವು ಪ್ರಯೋಜನಗಳು

ಹೆಂಗಳೆಯರಿಗೆ ಬಳೆಗಳು ಕೇವಲ ಅಲಂಕಾರವಲ್ಲ, ನಮ್ಮ ಸಂಪ್ರದಾಯದಲ್ಲಿ ಅವುಗಳಿಗೆ ವಿಶೇಷ ಸ್ಥಾನವಿದೆ. ವಿವಾಹಿತ ಮಹಿಳೆಯರು ಬಳೆಗಳನ್ನು ಧರಿಸುವುದು ವೈವಾಹಿಕ ಜೀವನದ ಸಂಕೇತವಾಗಿದ್ದು, ಸಿಂಧೂರ ಮತ್ತು ಮಂಗಳಸೂತ್ರದಂತೆಯೇ ಇದನ್ನೂ ಪವಿತ್ರತೆಯ ಗುರುತಾಗಿ ಪರಿಗಣಿಸಲಾಗುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ ಗಾಜಿನ ಬಳೆಗಳ ಝಣಝಣ ಶಬ್ದವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಎಂದು ನಂಬಿಕೆ ಇದೆ. ಜೊತೆಗೆ ಇದು ಸೌಭಾಗ್ಯದ ಸಂಕೇತವಾಗಿಯೂ ಪರಿಗಣಿಸಲಾಗಿದೆ.

ಗಾಜಿನ ಬಳೆಗಳ ಆರೋಗ್ಯ ಪ್ರಯೋಜನಗಳು:

ರಕ್ತ ಸಂಚಲನ ಸುಧಾರಣೆ:
ಬಳೆಗಳನ್ನು ಧರಿಸುವಾಗ ಕೈಮಣಿಕಟ್ಟಿನ ಚರ್ಮದೊಂದಿಗೆ ಉಂಟಾಗುವ ಸಣ್ಣ ಘರ್ಷಣೆ ರಕ್ತ ಸಂಚಲನವನ್ನು ಉತ್ತಮಗೊಳಿಸುತ್ತದೆ ಎಂದು ಹೇಳಲಾಗುತ್ತದೆ.

ಸಕಾರಾತ್ಮಕ ಶಕ್ತಿ:
ಚಿನ್ನ, ಬೆಳ್ಳಿ ಮತ್ತು ಗಾಜಿನ ಬಳೆಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಗಾಜಿನ ಬಳೆಗಳ ಶಬ್ದವು ಮನೆಯ ವಾತಾವರಣದಲ್ಲಿ ಹಿತಕರ ಶಕ್ತಿ ಹರಡುವಂತೆ ಮಾಡುತ್ತದೆ ಎಂದು ಪರಿಗಣಿಸಲಾಗುತ್ತದೆ.

ಮಾನಸಿಕ ಸಮತೋಲನ:
ಬಳೆಗಳ ಶಬ್ದವು ಮನಸ್ಸಿಗೆ ಶಾಂತಿ ನೀಡುತ್ತದೆ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡುತ್ತದೆ ಎಂಬ ಅಭಿಪ್ರಾಯವಿದೆ.

ಹಾರ್ಮೋನು ಸಮತೋಲನ:
ಕೆಲವು ನಂಬಿಕೆಗಳ ಪ್ರಕಾರ, ಬಳೆಗಳನ್ನು ಧರಿಸುವುದು ಮಹಿಳೆಯ ಹಾರ್ಮೋನು ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಭಾವನಾತ್ಮಕ ಸ್ಥಿರತೆ:
ಬಳೆಗಳ ಝಣಝಣ ಶಬ್ದವು ಏಕಾಗ್ರತೆಯನ್ನು ಹೆಚ್ಚಿಸಿ ಭಾವನಾತ್ಮಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂಬ ಮಾತುಗಳು ಸಹ ಇವೆ.

ಆಯಾಸ ಕಡಿತ:
ಬಳೆಗಳಿಂದ ಉಂಟಾಗುವ ಸಣ್ಣ ಚಲನೆ ಮತ್ತು ಘರ್ಷಣೆ ದೇಹದಲ್ಲಿ ಶಕ್ತಿಯ ಹರಿವು ಹೆಚ್ಚಿಸಿ ಆಯಾಸವನ್ನು ಕಡಿಮೆ ಮಾಡುತ್ತದೆ ಎಂದು ನಂಬಿಕೆ ಇದೆ.

ಒಟ್ಟಿನಲ್ಲಿ, ಗಾಜಿನ ಬಳೆಗಳು ಸಂಪ್ರದಾಯ, ನಂಬಿಕೆ ಹಾಗೂ ಸಾಂಸ್ಕೃತಿಕ ಮಹತ್ವದ ಜೊತೆಗೆ ಮಹಿಳೆಯ ಅಲಂಕಾರದಲ್ಲಿ ವಿಶೇಷ ಸ್ಥಾನ ಪಡೆದಿವೆ.

ಸತೀಶ್ ಜಾರಕಿಹೊಳಿ ವಿರುದ್ಧ ಸುಳ್ಳು ಪೋಸ್ಟ್; ದಾಖಲಾಯ್ತು ಕೇಸ್!

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಡಿದ ಆರೋಪದಡಿ ಬೆಳಗಾವಿ ಜಿಲ್ಲಾ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕರುನಾಡ ಕುರುಬ ಗೌಡ್ರು’ ಹೆಸರಿನ ಮುಖಪುಟ ಖಾತೆಯಲ್ಲಿ ಪ್ರಕಟವಾದ ಪೋಸ್ಟ್‌ನಲ್ಲಿ, ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದ್ರೋಹ ಮಾಡಿದ್ದಾರೆ ಹಾಗೂ ಅವರ ವಿರುದ್ಧ 37 ಶಾಸಕರ ಸಹಿ ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಮಾಹಿತಿ ಸಂಪೂರ್ಣ ಸುಳ್ಳಾಗಿದ್ದು, ಸಚಿವರ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಇಂತಹ ಆರೋಪಗಳನ್ನು ಸೃಷ್ಟಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಈ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಮತ್ತು ಅಶಾಂತಿ ಉಂಟುಮಾಡುವ ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

ಯುವಕರಲ್ಲೇ ಹೆಚ್ಚುತ್ತಿದೆ ಪಿತ್ತಕೋಶದ ಕಲ್ಲಿನ ಸಮಸ್ಯೆ; ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೇ ಪಿತ್ತಕೋಶದ ಕಲ್ಲಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ.

ಅಸಮತೋಲನ ಆಹಾರ ಪದ್ಧತಿ, ಕಡಿಮೆ ನೀರು ಕುಡಿಯುವುದು, ಎಣ್ಣೆಯುಕ್ತ ಆಹಾರಗಳ ಅತಿಯಾದ ಸೇವನೆ ಹಾಗೂ ಜೀವನಶೈಲಿಯ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಪಿತ್ತಕೋಶದಲ್ಲಿರುವ ಪಿತ್ತರಸದೊಳಗೆ ಕೊಬ್ಬಿನ ಅಂಶ ಅಥವಾ ಇತರೆ ರಾಸಾಯನಿಕ ಪದಾರ್ಥಗಳು ಅತಿಯಾಗಿ ಜಮೆಯಾದಾಗ ಕಲ್ಲುಗಳು ರೂಪುಗೊಳ್ಳುತ್ತವೆ. ಇವು ಸಣ್ಣ ಕಣಗಳ ರೂಪದಲ್ಲಿರಬಹುದು ಅಥವಾ ದೊಡ್ಡ ಗಾತ್ರದಲ್ಲೂ ಬೆಳೆಯಬಹುದು. ಕೆಲವರಲ್ಲಿ ಯಾವುದೇ ಲಕ್ಷಣಗಳಿಲ್ಲದೆ ಈ ಸಮಸ್ಯೆ ಕಂಡುಬಂದರೆ, ಇನ್ನೂ ಕೆಲವರಲ್ಲಿ ತೀವ್ರ ಆರೋಗ್ಯ ತೊಂದರೆಗಳನ್ನು ಉಂಟುಮಾಡಬಹುದು.

ವೈದ್ಯರ ಪ್ರಕಾರ ಪಿತ್ತಕೋಶದ ಕಲ್ಲುಗಳು ಮುಖ್ಯವಾಗಿ ಎರಡು ವಿಧಗಳಾಗಿವೆ. ಒಂದು ಕೊಬ್ಬಿನ ಅಂಶ ಹೆಚ್ಚಾಗುವುದರಿಂದ ಉಂಟಾಗುವ ಕಲ್ಲುಗಳು, ಮತ್ತೊಂದು ರಕ್ತಕಣಗಳ ಅಸಹಜ ಒಡೆತನದಿಂದ ಉಂಟಾಗುವ ಕಲ್ಲುಗಳು. ಕೆಲವರಲ್ಲಿ ವಂಶಪಾರಂಪರ್ಯ ಕಾರಣಗಳೂ ಈ ಸಮಸ್ಯೆಗೆ ಕಾರಣವಾಗಬಹುದು.

ಗಮನಿಸಬೇಕಾದ ಪ್ರಮುಖ ಲಕ್ಷಣಗಳು

  • ಹೊಟ್ಟೆಯ ಬಲಭಾಗದಲ್ಲಿ ತೀವ್ರ ನೋವು
  • ವಾಂತಿ ಅಥವಾ ಅಜೀರ್ಣ ಸಮಸ್ಯೆ
  • ಊಟದ ಬಳಿಕ ಹೊಟ್ಟೆ ಉಬ್ಬರ
  • ಜ್ವರ ಅಥವಾ ಅಸ್ವಸ್ಥತೆ
  • ಬೆನ್ನು ಅಥವಾ ಬಲ ಭುಜದ ಕಡೆಗೆ ಹರಡುವ ನೋವು

ಸಮಸ್ಯೆ ತಡೆಯಲು ಏನು ಮಾಡಬೇಕು?

ತಜ್ಞರ ಪ್ರಕಾರ ದಿನಕ್ಕೆ ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಎಣ್ಣೆಯಲ್ಲಿ ಕರಿದ ಆಹಾರ, ಪಿಜ್ಜಾ, ಬರ್ಗರ್, ಸಮೋಸಾ ಸೇರಿದಂತೆ ತ್ವರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು. ಹಣ್ಣುಗಳು, ಹಸಿ ತರಕಾರಿಗಳು, ಓಟ್ಸ್ ಹಾಗೂ ಸಂಪೂರ್ಣ ಧಾನ್ಯಗಳಂತಹ ನಾರಿನಾಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. ಜೊತೆಗೆ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಮತ್ತು ಉಪಹಾರವನ್ನು ತಪ್ಪಿಸದೇ ಸೇವಿಸುವುದು ಪಿತ್ತಕೋಶದ ಕಲ್ಲಿನ ಅಪಾಯವನ್ನು ಕಡಿಮೆ ಮಾಡಬಹುದು.

ಅಂಕೋಲಾ ಮೂಲದ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮುಳುಗಡೆ: 7 ಜನರ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಾರೇಬಾಗಿಲು ಸಮೀಪದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾದ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಬೋಟ್‌ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿ ಸುರಕ್ಷಿತವಾಗಿ ಕರೆಯತ್ತ ಕರೆತಂದಿದ್ದಾರೆ.

ಅಂಕೋಲಾ ತಾಲೂಕಿನ ಬೆಳಂಬಾರ ಕಡಲತೀರದಿಂದ ಮೀನುಗಾರಿಕೆಗೆ ತೆರಳಿದ್ದ ಮಂಜುನಾಥ್ ಖಾರ್ವಿ ಅವರಿಗೆ ಸೇರಿದ ‘ಶ್ರೀ ನವರತ್ನ’ ಹೆಸರಿನ ಮೀನುಗಾರಿಕಾ ಬೋಟ್ ಹೊನ್ನಾವರ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅವಘಡಕ್ಕೀಡಾಗಿದೆ. ಬೋಟ್‌ನ ಹೊರಭಾಗಕ್ಕೆ ಹಾನಿಯಾಗಿದ್ದರಿಂದ ಸಮುದ್ರದ ನೀರು ಒಳಗೆ ನುಗ್ಗಿ, ಕೆಲವೇ ಕ್ಷಣಗಳಲ್ಲಿ ಬೋಟ್ ಮುಳುಗಲು ಆರಂಭಿಸಿದೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮೀನುಗಾರರು ಸಹಾಯಕ್ಕಾಗಿ ಕೂಗಿಕೊಂಡಿದ್ದು, ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಇಕ್ಬಾಲ್ ಅಬ್ದುಲ್ ಗಫೂರ್ ಅವರು ತಮ್ಮ ಬೋಟ್‌ನೊಂದಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬೋಟ್‌ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ಕರೆಯತ್ತ ಕರೆತಂದಿದ್ದಾರೆ.

ರಕ್ಷಿಸಲ್ಪಟ್ಟ ಮೀನುಗಾರರನ್ನು ವೆಂಕಟೇಶ್ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾಣಾವಳಿಕರ್ ಹಾಗೂ ಲತೇಶ್ ಖಾರ್ವಿ ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಆದರೆ ಬೋಟ್ ಸಂಪೂರ್ಣವಾಗಿ ಮುಳುಗಡೆಯಾಗಿರುವ ಪರಿಣಾಮ ಮಾಲೀಕರಿಗೆ ಅಂದಾಜು 50 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಹೊನ್ನಾವರ ಕರಾವಳಿ ಭದ್ರತಾ ಪೊಲೀಸ್ ಠಾಣೆ (ಸಿಎಸ್ಪಿ) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

IPL 2026 winner prize money: ಐಪಿಎಲ್ IPL ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು ಗೊತ್ತಾ.?

ಬೆಂಗಳೂರು: ಐಪಿಎಲ್ 2026ರ ಮಹಾಸಮರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಸಂಜೆ 7:30ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ.

ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ವಿಜೇತ ಹಾಗೂ ರನ್ನರ್‌ಅಪ್ ತಂಡಗಳಿಗೆ ದೊರೆಯುವ ಬಹುಮಾನ ಮೊತ್ತದ ಕುರಿತು ಕುತೂಹಲ ಹೆಚ್ಚಿದೆ. ಈವರೆಗೆ ಉಭಯ ತಂಡಗಳು ತಲಾ ಒಂದೊಂದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದು, ಈ ಬಾರಿಯ ಫೈನಲ್‌ನಲ್ಲಿ ಜಯ ಸಾಧಿಸುವ ತಂಡ ತನ್ನ ಎರಡನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ.

ಚಾಂಪಿಯನ್ ತಂಡಕ್ಕೆ ₹20 ಕೋಟಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2026ರ ಬಹುಮಾನ ಮೊತ್ತಕ್ಕಾಗಿ ₹46.5 ಕೋಟಿಗೂ ಅಧಿಕ ಹಣವನ್ನು ಮೀಸಲಿಟ್ಟಿದೆ. ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡಕ್ಕೆ ₹20 ಕೋಟಿ ಬಹುಮಾನ ನೀಡಲಾಗುತ್ತದೆ.

ರನ್ನರ್‌ಅಪ್ ತಂಡಕ್ಕೆ ₹13 ಕೋಟಿ

ಫೈನಲ್‌ನಲ್ಲಿ ಸೋಲು ಅನುಭವಿಸುವ ತಂಡಕ್ಕೂ ಭರ್ಜರಿ ಮೊತ್ತದ ಬಹುಮಾನ ದೊರೆಯಲಿದೆ. ರನ್ನರ್‌ಅಪ್ ತಂಡಕ್ಕೆ ₹13 ಕೋಟಿ ನೀಡಲಾಗುತ್ತದೆ.

ಇನ್ನು ಮೂರನೇ ಸ್ಥಾನ ಪಡೆಯುವ ತಂಡಕ್ಕೆ ₹7 ಕೋಟಿ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ತಂಡಕ್ಕೆ ₹6.5 ಕೋಟಿ ಬಹುಮಾನ ನೀಡಲಾಗುತ್ತದೆ.

ಟಾಪ್-4 ತಂಡಗಳ ಬಹುಮಾನ ಮೊತ್ತ

  • ಚಾಂಪಿಯನ್ ತಂಡ – ₹20 ಕೋಟಿ
  • ರನ್ನರ್‌ಅಪ್ ತಂಡ – ₹13 ಕೋಟಿ
  • ಮೂರನೇ ಸ್ಥಾನ – ₹7 ಕೋಟಿ
  • ನಾಲ್ಕನೇ ಸ್ಥಾನ – ₹6.5 ಕೋಟಿ

ಬಹುಮಾನ ಮೊತ್ತದ ಇತಿಹಾಸ

ಐಪಿಎಲ್ ಆರಂಭಿಕ ಆವೃತ್ತಿಗಳಾದ 2008 ಮತ್ತು 2009ರಲ್ಲಿ ಚಾಂಪಿಯನ್ ತಂಡಕ್ಕೆ ₹4.8 ಕೋಟಿ ಬಹುಮಾನ ನೀಡಲಾಗುತ್ತಿತ್ತು. ನಂತರ ವರ್ಷದಿಂದ ವರ್ಷಕ್ಕೆ ಬಹುಮಾನ ಮೊತ್ತ ಹೆಚ್ಚಾಗುತ್ತಾ ಬಂದಿದ್ದು, ಈಗ ₹20 ಕೋಟಿಗೆ ಏರಿಕೆಯಾಗಿದೆ. ಕೊರೊನಾ ಸಾಂಕ್ರಾಮಿಕದ ಪರಿಣಾಮ 2020ರಲ್ಲಿ ಮಾತ್ರ ಬಹುಮಾನ ಮೊತ್ತವನ್ನು ₹10 ಕೋಟಿಗೆ ಇಳಿಸಲಾಗಿತ್ತು.

ಟಾಪ್-4 ಹೊರಗಿನ ತಂಡಗಳಿಗೆ ಬಹುಮಾನವಿಲ್ಲ

ಐದನೇ ಸ್ಥಾನದಿಂದ ಹತ್ತನೇ ಸ್ಥಾನದವರೆಗೆ ಮುಗಿಸುವ ತಂಡಗಳಿಗೆ ಯಾವುದೇ ಅಧಿಕೃತ ಬಹುಮಾನ ಮೊತ್ತ ನೀಡುವುದಿಲ್ಲ. ಆದಾಗ್ಯೂ ಪ್ರಾಯೋಜಕತ್ವ, ಪ್ರಸಾರ ಹಕ್ಕುಗಳು ಹಾಗೂ ಟಿಕೆಟ್ ಮಾರಾಟದ ಮೂಲಕ ಫ್ರಾಂಚೈಸಿಗಳು ಆದಾಯ ಗಳಿಸುತ್ತವೆ.

ಆಟಗಾರರಿಗೆ ಹೇಗೆ ಹಂಚಿಕೆ?

ಐಪಿಎಲ್ ನಿಯಮಗಳ ಪ್ರಕಾರ, ತಂಡಕ್ಕೆ ದೊರೆಯುವ ಬಹುಮಾನ ಮೊತ್ತದ ಶೇ.50ರಷ್ಟು ಹಣವನ್ನು ಆಟಗಾರರ ನಡುವೆ ಹಂಚಲಾಗುತ್ತದೆ. ಉಳಿದ ಶೇ.50ರಷ್ಟು ಮೊತ್ತ ಫ್ರಾಂಚೈಸಿ ಮಾಲೀಕರ ಪಾಲಾಗುತ್ತದೆ.

ವೈಯಕ್ತಿಕ ಪ್ರಶಸ್ತಿಗಳಿಗೂ ಭರ್ಜರಿ ಮೊತ್ತ

ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್, ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ ಸೇರಿದಂತೆ ವಿವಿಧ ವೈಯಕ್ತಿಕ ಪ್ರಶಸ್ತಿಗಳನ್ನು ಗೆಲ್ಲುವ ಆಟಗಾರರು ಹೆಚ್ಚುವರಿ ನಗದು ಬಹುಮಾನ ಪಡೆಯಲಿದ್ದಾರೆ. ಈ ಪ್ರಶಸ್ತಿಗಳ ಮೂಲಕ ಒಬ್ಬ ಆಟಗಾರ ಸುಮಾರು ₹1 ಕೋಟಿವರೆಗೆ ಹೆಚ್ಚುವರಿ ಮೊತ್ತ ಗಳಿಸುವ ಅವಕಾಶವೂ ಇದೆ.

ಇದೀಗ ಎಲ್ಲರ ಕಣ್ಣು ಫೈನಲ್ ಪಂದ್ಯತ್ತ ನೆಟ್ಟಿದ್ದು, ಟ್ರೋಫಿಯ ಜೊತೆಗೆ ಕೋಟ್ಯಂತರ ರೂಪಾಯಿಗಳ ಬಹುಮಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಡಿಸಿಎಂ ಪ್ರಸ್ತಾವ ಇನ್ನೂ ಬಂದಿಲ್ಲ; ಜೂನ್ 3ರ ಸಭೆಯಲ್ಲಿ ಅಂತಿಮ ನಿರ್ಧಾರ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ರಾಜ್ಯದ ನೂತನ ಸರ್ಕಾರದ ರಚನೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹುದ್ದೆಗಳು ಹಾಗೂ ಸಚಿವ ಸಂಪುಟದ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆಗಳ ಬಗ್ಗೆ ಇನ್ನೂ ಯಾವುದೇ ಪ್ರಸ್ತಾಪ ಬಂದಿಲ್ಲ. ಪ್ರಸ್ತಾಪ ಬಂದ ಬಳಿಕ ಎಷ್ಟು ಉಪ ಮುಖ್ಯಮಂತ್ರಿಗಳು ಇರಬೇಕು ಹಾಗೂ ಎಷ್ಟು ಮಂದಿಯನ್ನು ಸಚಿವರನ್ನಾಗಿ ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸಚಿವ ಸಂಪುಟ ರಚನೆ ಹಂತ ಹಂತವಾಗಿ ನಡೆಯಲಿದೆ ಎಂದು ತಿಳಿಸಿದ ಖರ್ಗೆ, ಮೊದಲ ಹಂತದಲ್ಲಿ ಕೆಲವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತದೆ. ಬಳಿಕ ಸುಮಾರು 15 ದಿನಗಳ ನಂತರ ಎರಡನೇ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದರು.

ಮೊದಲ ಹಂತದಲ್ಲಿ 8ರಿಂದ 10 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಅವರಿಂದ ಸಚಿವರ ಪಟ್ಟಿಯು ಬಂದ ನಂತರ ಎಷ್ಟು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜೂನ್ 3ರಂದು ನಡೆಯಲಿರುವ ಸಭೆಯಲ್ಲಿ ಸಚಿವ ಸಂಪುಟ ರಚನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಖರ್ಗೆ ಹೇಳಿದರು.

ನಾನು ಸಚಿವ ಸ್ಥಾನದ ಪ್ರಭಲ ಆಕಾಂಕ್ಷಿ: ಹೈಕಮಾಂಡ್ ನನ್ನನ್ನು ಪರಿಗಣಿಸಲೇಬೇಕು – ಶಾಸಕ ಜಿ.ಎಸ್. ಪಾಟೀಲ್ ಒತ್ತಾಯ

ಗದಗ: ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಚರ್ಚೆಗಳು ಜೋರಾಗಿರುವ ನಡುವೆಯೇ ಗದಗ ಜಿಲ್ಲೆಯ ರೋಣ ಶಾಸಕ ಜಿ.ಎಸ್. ಪಾಟೀಲ್ ಅವರು ಸಚಿವ ಸ್ಥಾನಕ್ಕಾಗಿ ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಸಚಿವ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಬೇಕೆಂದು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

ನಾನು 1989ರಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನಾಲ್ಕು ಬಾರಿ ಜನರಿಂದ ಅಧಿಕ ಮತಗಳ ಅಂತರದಲ್ಲಿ ಆಯ್ಕೆಯಾಗಿದ್ದೇನೆ. ಪಕ್ಷದ ಸಂಘಟನೆಗಾಗಿ ನಿರಂತರವಾಗಿ ದುಡಿದಿದ್ದೇನೆ. ಹೀಗಾಗಿ ಈ ಬಾರಿ ಸಚಿವ ಸಂಪುಟದಲ್ಲಿ ನನಗೆ ಅವಕಾಶ ನೀಡಬೇಕು,” ಎಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಶಿಸ್ತು ಮತ್ತು ತ್ಯಾಗ ಮನೋಭಾವವನ್ನು ಉದಾಹರಿಸಿದ ಜಿ.ಎಸ್. ಪಾಟೀಲ್, “ಸಿದ್ದರಾಮಯ್ಯ ಅವರು ಎಂಟು ವರ್ಷಗಳ ಕಾಲ ಕಳಂಕ ರಹಿತವಾಗಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಅವರು ರಾಜೀನಾಮೆ ನೀಡಿ ಮಾದರಿಯಾಗಿದ್ದರು. ಅದೇ ರೀತಿಯಲ್ಲಿ ಈಗಿರುವ ಹಿರಿಯ ಸಚಿವರೂ ಕೂಡ ಬದಲಾವಣೆಗೆ ಅವಕಾಶ ಮಾಡಿಕೊಡಬೇಕು,” ಎಂದು ಅವರು ಹೇಳಿದ್ದಾರೆ.

ಹಿರಿಯರನ್ನು ಬದಲಾಯಿಸಿ ಹೊಸ ಮುಖಗಳಿಗೆ ಅವಕಾಶ ನೀಡುವ ಕಾಲ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುರಿತು ಮಾತನಾಡಿದ ಅವರು,

“ಡಿ.ಕೆ. ಶಿವಕುಮಾರ್ ಹುಟ್ಟು ಹೋರಾಟಗಾರ. ಅವರ ಹೋರಾಟ ಮತ್ತು ಸಂಘಟನೆ ಸಾಮರ್ಥ್ಯವನ್ನು ಗುರುತಿಸಿ ಹೈಕಮಾಂಡ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದುಕೊಂಡಿದೆ,” ಎಂದು ಶ್ಲಾಘಿಸಿದರು.

ಈಗಾಗಲೇ ಸುಮಾರು 35ಕ್ಕೂ ಹೆಚ್ಚು ಹಿರಿಯ ಹಾಗೂ ಕಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಬೆಂಗಳೂರು ಮತ್ತು ದೆಹಲಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದೇವೆ ಎಂದು ತಿಳಿಸಿರುವ ಜಿ.ಎಸ್. ಪಾಟೀಲ್, “ಈ ಬಾರಿ ನನ್ನನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವ ವಿಶ್ವಾಸ ಇದೆ,” ಎಂದು ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ದುರಂತ: ಐವರು ಸ್ಥಳದಲ್ಲೇ ಸಾವು, ಹಲವರಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ: ಜಿಲ್ಲೆಯ ಭಾಗ್ಯನಗರ ಪಟ್ಟಣದಲ್ಲಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ದುರ್ಮರಣ ಹೊಂದಿದ ಹೃದಯವಿದ್ರಾವಕ ಘಟನೆ ನಡೆದಿದೆ. ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಆಟೋಗೆ ವೇಗವಾಗಿ ಬಂದ ಥಾರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು. ಅಪಘಾತದ ತೀವ್ರತೆಗೆ ಆಟೋದಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಆತಂಕಕಾರಿ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೆ ಕಾರಣವಾದ ಥಾರ್ ವಾಹನದ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಯೇ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಆರೋಗ್ಯ ಸ್ಥಿತಿ ಚಿಂತಾಜನಕ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಗಂಭೀರ ಆರೋಪ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತೆ ಬಿಜೆಪಿ ನಾಯಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಒತ್ತಡ ಹೇರಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಈ ಬೆಳವಣಿಗೆ ಅಭಿಷೇಕ್ ಅವರ ವಿರುದ್ಧ ಸಂಚು ರೂಪಿಸಿರುವ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಟಿಎಂಸಿ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ನಡೆದಿತ್ತು.

ಹಲ್ಲೆಯ ಬಳಿಕ ಅವರ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅಭಿಷೇಕ್ ಅವರ ದೇಹದಲ್ಲಿ ರಕ್ತ ಹೆಪ್ಪುಗಟ್ಟಿರುವ ಲಕ್ಷಣಗಳು ಕಂಡುಬಂದಿದ್ದು, 3ಡಿ ಸ್ಕ್ಯಾನ್, ಅಲ್ಟ್ರಾಸೊನೋಗ್ರಫಿ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ವೈದ್ಯರು ನಿರಂತರವಾಗಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ ಎಂದು ಹೇಳಿದರು.

ಅಪೋಲೋ ಆಸ್ಪತ್ರೆಯ ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದರು. ಅದರಂತೆ ಅವರನ್ನು ಮನೆಗೆ ಕರೆತರಲಾಗಿತ್ತು. ಆದರೆ ಆರೋಗ್ಯದಲ್ಲಿ ನಿರೀಕ್ಷಿತ ಸುಧಾರಣೆ ಕಾಣದ ಕಾರಣ ಬಳಿಕ ಬೆಲ್ಲವ್ಯೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಮತಾ ವಿವರಿಸಿದರು.

ಈ ವೇಳೆ ಬಿಜೆಪಿ ನಾಯಕರು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ವೈದ್ಯರಿಗೆ ಕರೆ ಮಾಡಿ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ ಅವರು, ಅಭಿಷೇಕ್ ಅವರಿಗೆ ಏನಾದರೂ ಅನಾಹುತ ಸಂಭವಿಸಿದರೆ ಅದರ ಹೊಣೆಯನ್ನು ಸಂಬಂಧಪಟ್ಟವರು ಹೊತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.

ಅಭಿಷೇಕ್ ಬ್ಯಾನರ್ಜಿ ಅವರ ಚಿಕಿತ್ಸೆ ವೈದ್ಯರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಮುಂದುವರಿದಿದೆ. ಮನೆಯಲ್ಲಿಯೂ ಆಮ್ಲಜನಕ ಸಿಲಿಂಡರ್ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಮಮತಾ ತಿಳಿಸಿದರು.

ಹಲ್ಲೆ ನಡೆದ ಸಂದರ್ಭದಲ್ಲಿ ಅಭಿಷೇಕ್ ಹೆಲ್ಮೆಟ್ ಧರಿಸಿರದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದಿತ್ತು ಎಂದು ಹೇಳಿದ ಅವರು, ಇದು ಭದ್ರತಾ ವ್ಯವಸ್ಥೆಯ ದೊಡ್ಡ ವೈಫಲ್ಯ ಎಂದು ಕಿಡಿಕಾರಿದರು.

error: Content is protected !!