ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಬಿಜೆಪಿ ಸರ್ಕಾರವು SIR (Special Intensive Revision) ಪ್ರಕ್ರಿಯೆಯನ್ನು ಚುನಾವಣೆ ಗೆಲುವಿನ ‘ಟೂಲ್ ಕಿಟ್’ ಆಗಿ ಬಳಸಿಕೊಂಡು ವಿರೋಧ ಪಕ್ಷಗಳ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, “2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ NDA ಮೈತ್ರಿಕೂಟ ಕೇವಲ 7 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದರೆ EVM ಹ್ಯಾಕ್, ವೋಟ್ ಚೋರಿ ಹಾಗೂ SIR ಮೂಲಕ ಇಂದು 22 ರಾಜ್ಯಗಳಲ್ಲಿ NDA ಅಧಿಕಾರದಲ್ಲಿದೆ” ಎಂದು ಆರೋಪಿಸಿದ್ದಾರೆ.
SIR ಪ್ರಕ್ರಿಯೆ ಮೂಲಕ ವಿರೋಧ ಪಕ್ಷಗಳಿಗೆ ಸೇರಿದ ಮತದಾರರ ಹೆಸರನ್ನು ತೆಗೆದು ಹಾಕಿ ಕಡಿಮೆ ಮತಗಳ ಅಂತರದಲ್ಲಿ ಬಿಜೆಪಿ ಜಯ ಸಾಧಿಸುತ್ತಿದೆ ಎಂದು ದೂರಿದ ಅವರು, 2026ರ ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ಪಾಂಡಿಚೇರಿ ಹಾಗೂ ತಮಿಳುನಾಡು ಚುನಾವಣೆಯಲ್ಲಿ 2 ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದ ಭವಾನಿಪುರ ಕ್ಷೇತ್ರದಲ್ಲಿ 51 ಸಾವಿರ ಮತದಾರರ ಹೆಸರು ಕಡಿತಗೊಂಡಿದ್ದು, ಅವರು ಕೇವಲ 15 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಸ್ಟಾಲಿನ್ ಸ್ಪರ್ಧಿಸಿದ್ದ ಕೊಳತ್ತೂರು ಕ್ಷೇತ್ರದಲ್ಲಿ 1 ಲಕ್ಷ ಮತದಾರರ ಹೆಸರು ತೆಗೆದು ಹಾಕಲಾಗಿದ್ದು, ಅವರು ಕೇವಲ 8 ಸಾವಿರ ಮತಗಳಿಂದ ಸೋತಿದ್ದಾರೆ ಎಂದು ಆರೋಪಿಸಿದರು.
ದೆಹಲಿ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಸ್ಪರ್ಧಿಸಿದ್ದ ನ್ಯೂ ದೆಹಲಿ ಕ್ಷೇತ್ರದಲ್ಲಿ 38 ಸಾವಿರ ಮತಗಳನ್ನು ತೆಗೆದು ಹಾಕಿದ್ದು, ಅವರು 4 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ ಎಂದು ದೂರಿದರು.
SIR ಮೂಲಕ 12 ರಾಜ್ಯಗಳಲ್ಲಿ ಒಟ್ಟು 7.2 ಕೋಟಿ ಮತದಾರರ ಹೆಸರು ತೆಗೆದು ಹಾಕಲಾಗಿದೆ ಎಂದು ಆರೋಪಿಸಿದ ಅಶೋಕ ಮಂದಾಲಿ, 2024ರಿಂದ ನಡೆದ 15 ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ 9 ರಾಜ್ಯಗಳಲ್ಲಿ ಗೆಲುವು ಸಾಧಿಸಿರುವುದರ ಹಿಂದೆ ಇದೇ ತಂತ್ರ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.
“ಚುನಾವಣಾ ಆಯೋಗ ಜಾಣ ಕುರುಡು”
“ಚುನಾವಣಾ ಆಯೋಗವು ಬಿಜೆಪಿಯ ಚುನಾವಣಾ ಏಜೆಂಟ್ನಂತೆ ವರ್ತಿಸುತ್ತಿದೆ” ಎಂದು ಆರೋಪಿಸಿದ ಅವರು, ಹರಿಯಾಣ ಚುನಾವಣೆಯಲ್ಲಿ ‘ಬ್ರೆಜಿಲಿಯನ್ ಮಾಡೆಲ್’ ಭಾವಚಿತ್ರ ಬಳಸಿ 22 ಬಾರಿ ಮತದಾನ ನಡೆದಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.
ಬಿಹಾರದಲ್ಲಿ ಮೊದಲ ಹಂತದ SIR ವೇಳೆ 7.89 ಕೋಟಿ ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರು ತೆಗೆದು ಹಾಕಲಾಗಿತ್ತು. ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಮಾತ್ರ ಮಾಹಿತಿ ಬಹಿರಂಗವಾಯಿತು ಎಂದು ಹೇಳಿದರು.
“ಕರ್ನಾಟಕದಲ್ಲೂ ಮತದಾರರ ಸೇರ್ಪಡೆ ಪ್ರಶ್ನೆ”
ಕರ್ನಾಟಕದಲ್ಲಿ 2023ರ ನವೆಂಬರ್ನಿಂದ ಜನವರಿವರೆಗೆ 9 ಲಕ್ಷ ಹಾಗೂ ಜನವರಿಯಿಂದ ಏಪ್ರಿಲ್ವರೆಗೆ 16 ಲಕ್ಷ ಮತದಾರರನ್ನು ಹೇಗೆ ಸೇರ್ಪಡೆ ಮಾಡಲಾಯಿತು ಎಂಬ ಪ್ರಶ್ನೆಯನ್ನು ಅಶೋಕ ಮಂದಾಲಿ ಎತ್ತಿದರು.
ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರು ತೆಗೆದು ಹಾಕಲು ಪ್ರತಿ ಹೆಸರಿಗೆ 80 ರೂ. ನೀಡಲಾಗಿತ್ತು ಎಂಬ ಆರೋಪದ ಬಗ್ಗೆ ತನಿಖೆ ಯಾಕೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.
“ಮತಗಳ್ಳತನದ ಉದಾಹರಣೆಗಳು”
2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ 11,956 ನಕಲಿ ಮತದಾರರು, 40,009 ನಕಲಿ ವಿಳಾಸಗಳು ಹಾಗೂ 10,452 ನಕಲಿ ನೋಂದಣಿಗಳ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಕ್ರಮ ನಡೆದಿದೆ ಎಂದು ಆರೋಪಿಸಿದರು.
2024ರ ಹರಿಯಾಣ ಚುನಾವಣೆಯಲ್ಲಿ ಸುಮಾರು 25 ಲಕ್ಷ ಮತಗಳ್ಳತನ ನಡೆದಿದ್ದು, “ಬ್ರೆಜಿಲಿಯನ್ ಮಾಡೆಲ್” ಭಾವಚಿತ್ರ ಬಳಸಿ ಮತದಾನ ನಡೆಸಲಾಗಿದೆ ಎಂದು ರಾಹುಲ್ ಗಾಂಧಿ ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯವಾರು ಆರೋಪಗಳ ಪಟ್ಟಿ
ಪಶ್ಚಿಮ ಬಂಗಾಳ : 90.66 ಲಕ್ಷ ಮತದಾರರ ಕಡಿತ
ಅಸ್ಸಾಂ : 2.43 ಲಕ್ಷ ಮತದಾರರ ಕಡಿತ
ಪಾಂಡಿಚೇರಿ : 77 ಸಾವಿರ ಮತದಾರರ ಕಡಿತ
ಬಿಹಾರ : 65 ಲಕ್ಷ ಮತದಾರರ ಕಡಿತ
ದೆಹಲಿ : 5.20 ಲಕ್ಷ ಮತದಾರರ ಕಡಿತ
ಮಹಾರಾಷ್ಟ್ರ : 11.20 ಲಕ್ಷ ಮತದಾರರ ಕಡಿತ
ಒಡಿಶಾ : 8.50 ಲಕ್ಷ ಮತದಾರರ ಕಡಿತ
ಆಂಧ್ರ ಪ್ರದೇಶ : 6.20 ಲಕ್ಷ ಮತದಾರರ ಕಡಿತ
ಹರಿಯಾಣ : 3.40 ಲಕ್ಷ ಮತದಾರರ ಕಡಿತ ನಡೆದಿದೆ ಎಂದು ಆರೋಪಿಸಿದರು.
“SIR ಮೂಲಕ ಮತದಾರರ ಹಕ್ಕು ಕಸಿದುಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ.”
ಅಶೋಕ ಮಂದಾಲಿ
ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ