Home Blog Page 2

ಫೆ. 1ರಂದು ಸಂಗಮೇಶ್ವರ ಆಸ್ಪತ್ರೆ ಉದ್ಘಾಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹೊಸ ಬಸ್ ನಿಲ್ದಾಣ ಸಮೀಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗದಗ ಜಿಲ್ಲೆಯ ಪರಿಸರದಲ್ಲಿಯೇ ಬಹುದೊಡ್ಡ ಹಾಗೂ 100 ಹಾಸಿಗೆಯ ‘ಶ್ರೀ ಸಂಗಮೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯ ನೂತನ ಕಟ್ಟಡದ ಉದ್ಘಾಟನೆ ಫೆ. 1ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ ಎಂದು ಡಾ. ಪ್ರಶಾಂತ ಧನ್ನೂರ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ಗುಂಟೆ ಜಾಗೆಯಲ್ಲಿ 45 ಸಾವಿರ ಚ.ಅಡಿಯಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದು, ಒಪಿಡಿ ಜತೆಗೆ ಹೈಟೆಕ್ ಹೆರಿಗೆ ಕೊಠಡಿ, ಹೈಟೆಕ್ ಮಾಡ್ಯೂಲರ್ ಆಪರೇಷನ್ ಥೇಟರ್, ಐಸಿಯು, ಎನ್‌ಐಸಿಯು, 247 ತುರ್ತು ಚಿಕಿತ್ಸೆ ಕೊಠಡಿ, ಐಯುಐ ಪ್ರಯೋಗಾಲಯ, ಅಲ್ಟ್ರಾ ಸನೋಗ್ರಫಿ, 247 ಅಂಬ್ಯುಲೆನ್ಸ್ ಸೇವೆ, ಕಿಡ್ನಿ ಸ್ಟೋನ್, ಪೈಲ್ಸ್, ಪಿಸ್ಟೂಲಾ ಹಾಗೂ ವೆರಿಕೋಸ್ ವೇದನೆಗೆ ಲೇಸರ್ ಚಿಕಿತ್ಸೆ, ಲ್ಯಾಪ್ರೋಸ್ಕೋಪಿ, ಹಿಸ್ಟ್ರೋಸ್ಕೋಪಿ, ಎಂಡೋಸ್ಕೋಪಿ, ಡಯಾಲಿಸಿಸ್, ಫೋಟೊಥೆರಪಿ, 2ಡಿ ಇಕೋ, ಯುರೋಪ್ಲೊಮೇಟ್ರಿಯಂತಹ ಸೌಲಭ್ಯಗಳು ಇಲ್ಲಿ ಸಿಗಲಿವೆ ಎಂದು ವಿವರಿಸಿದರು.

ವಿವಿಧ 19ಕ್ಕೂ ಅಧಿಕ ಪರಿಣಿತ ಹಾಗೂ ವಿಶೇಷಜ್ಞರಾಗಿರುವ ವೈದ್ಯರ ಸೇವೆ ಇಲ್ಲಿ ಕಾಲಕಾಲಕ್ಕೆ ಸಿಗಲಿದೆ. ಅಲ್ಲದೇ, ಜಿಲ್ಲೆಯ ಜನತೆ ಅಗತ್ಯವಿದ್ದಾಗ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಹೋಗುವ ಅನಿವಾರ್ಯತೆಯಿತ್ತು. ಆದರೆ, ಪ್ರಸ್ತುತ ಈ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸೆ ಸೌಲಭ್ಯದ ಮೂಲಕ ಆ ಕೊರತೆಯನ್ನು ನೀಗಿಸಿ, ಇಲ್ಲಿಯೇ ಚಿಕಿತ್ಸೆ, ವೈದ್ಯಕೀಯ ಸೇವೆ ಸಿಗಲಿದೆ ಎಂದು ಹೇಳಿದರು.

ಡಂಬಳ-ಗದಗ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಜ. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಕೂಲಡಸಂಗಮ ಪಂಚಮಸಾಲಿ ಪೀಠದ ಜ. ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹಾಲಕೆರೆ-ಹೊಸಪೇಡೆ-ಬಳ್ಳಾರಿ ಅನ್ನದಾನೇಶ್ವರ ಸಂಸ್ಥಾನಮಠದ ಜ. ಮುಪ್ಪಿನಬಸವಲಿಂಗ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಜ. ವಚನಾನಂದ ಸ್ವಾಮೀಜಿ, ನರೇಗಲ್ಲ ಹಿರೇಮಠ-ಸವದತ್ತಿ ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೊಪ್ಪಳ ಗವಿಮಠ ಸಂಸ್ಥಾನದ ಜ. ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಡೋಣಿ-ಗದಗ ಕಪ್ಪತ್ತಗುಡ್ಡ ನಂದಿವೇರಿ ಸಂಸ್ಥಾನಮಠದ ಶ್ರೀ ಶಿವಕುಮಾರ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಅಬ್ಬಿಗೇರಿ ಹಿರೇಮಠ-ತುಮಕೂರು ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯರು, ಗದಗನ ಸದ್ಗುರು ಮುಕ್ಕಣ್ಣೇಶ್ವರ ಮಠದ ಶ್ರೀ ಶಂಕರಾನಂದ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸುವರು.

ಬಾಗಲಕೋಟ ಕ್ಷೇತ್ರದ ಮಾಜಿ ಸಂಸದರಾದ ಆರ್.ಎಸ್. ಪಾಟೀಲರ ಅಧ್ಯಕ್ಷತೆಯಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ನೂತನ ಆಸ್ಪತ್ರೆಯ ಕಟ್ಟಡವನ್ನು ಉದ್ಘಾಟಿಸುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಕೆ.ಬಿ. ಧನ್ನೂರ, ಡಾ. ಅನ್ನಪೂರ್ಣ ಪಿ. ಧನ್ನೂರ, ಪತ್ರಕರ್ತ ಅರುಣ ಕುಲಕರ್ಣಿ ಉಪಸ್ಥಿತರಿದ್ದರು.

ಬಾಕ್ಸ್
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ರೋಣ ಶಾಸಕ ಜಿ.ಎಸ್. ಪಾಟೀಲ, ಎಸ್.ಜಿ. ನಂಜಯ್ಯನಮಠ, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ, ನರಗುಂದ ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಇತರರು ಆಗಮಿಸಲಿದ್ದಾರೆ ಎಂದು ಡಾ. ಪ್ರಶಾಂತ ಧನ್ನೂರ ವಿವರಿಸಿದರು.

ಬಳ್ಳಾರಿ ನಗರದಲ್ಲಿ ಕಾನೂನು ಶಾಂತಿ ಹದಗೆಟ್ಟಿದೆ; ಕ್ರಮಕ್ಕೆ ಜನಾರ್ದನ ರೆಡ್ಡಿ ಆಗ್ರಹ

0

ಬಳ್ಳಾರಿ/ಬೆಂಗಳೂರು: ಬಳ್ಳಾರಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಶಾಸಕ ಜನಾರ್ದನ ರೆಡ್ಡಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಅವರು ಬಳ್ಳಾರಿ ಫೈರಿಂಗ್ ಪ್ರಕರಣವನ್ನು ತಮ್ಮ ಮುಂದಿನ ಹೋರಾಟದಲ್ಲಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಗರದ ಹಲವು ವಾರ್ಡ್‌ಗಳಲ್ಲಿ ಯುವಕರು ಗ್ಯಾಂಗ್‌ಸ್ಟರ್ ತಂತ್ರದಲ್ಲಿ ನಡೆಯುತ್ತಿದ್ದಾರೆ. ಅಕ್ರಮ ಹಣ ಲಾಭಕ್ಕಾಗಿ ಹೋರಾಟ ನಡೆಸುತ್ತಿರುವುದು ಆತಂಕಕಾರಿ. ಪ್ರಮುಖವಾಗಿ, ಬಿಜೆಪಿ ಕಾರ್ಯಕರ್ತನ ಮೇಲೆ ಗುಂಡು ಹಾರಿಸಲಾಗಿದ್ದು, ಖಾಸಗಿ ಗನ್‌ಮ್ಯಾನ್‌ಗಳ ಕಾರ್ಯ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಶಾಸಕರು ಸಿಬಿಐ ತನಿಖೆ ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ. “ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟವನ್ನು ಮುಂದುವರಿಸುವುದು ಖಚಿತ.
ಬಳ್ಳಾರಿಯಲ್ಲಿ ಶಾಂತಿ, ಕಾನೂನು ಪಾಲನೆ ಮತ್ತು ತ್ವರಿತ ಅಭಿವೃದ್ಧಿಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಯುವ ಗ್ಯಾಂಗ್‌ಸ್ಟರ್‌ಗಳ ಚಟುವಟಿಕೆಗಳನ್ನು ತಡೆಯಬೇಕು ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ರಸ್ತೆಯಲ್ಲಿ ಅಪಾಯಕಾರಿ ಬೈಕ್ ರೈಡ್; ವಿದೇಶಿಗನ ವಿಡಿಯೋ ವೈರಲ್

0

ಬೆಂಗಳೂರು: ನಗರ ರಸ್ತೆಯಲ್ಲಿ ವಿದೇಶಿಗನೊಬ್ಬ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಬೈಕ್ ಸವಾರಿ ನಡೆಸಿರುವ ದೃಶ್ಯಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ತಲೆಗೆ ಹೆಡ್‌ಫೋನ್ ಧರಿಸಿ, ಕೈಯಲ್ಲಿ ಸಿಗರೇಟ್ ಹಿಡಿದು ಯಾವುದೇ ಭಯವಿಲ್ಲದೆ ಬೈಕ್ ಚಲಾಯಿಸುತ್ತಿದ್ದ ಈ ವ್ಯಕ್ತಿ KA 42 EE 1361 ನೋಂದಣಿ ಸಂಖ್ಯೆಯ ಬೈಕ್ ಅನ್ನು ಓಡಿಸುತ್ತಿದ್ದಾನೆ. ಈ ಘಟನೆ ಸಿಲ್ಕ್ ಬೋರ್ಡ್ ಡಬಲ್ ಡೆಕ್ಕರ್ ಫ್ಲೈಓವರ್ ಬಳಿ ನಡೆದಿದೆ.

ಹಿಂಬದಿಯಿಂದ ಬರುತ್ತಿದ್ದ ಕಾರಿನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಈ ಅಪಾಯಕಾರಿ ಸವಾರಿ ವಿಡಿಯೋ ಮಾಡಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕರು ಟಾಫಿಕ್ ನಿಯಮ ಉಲ್ಲಂಘನೆಗೆ ಆಕ್ರೋಶ ವ್ಯಕ್ತಪಡಿಸಿ, ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಬೆಂಗಳೂರಿನ ರಸ್ತೆ ಸುರಕ್ಷತೆ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಬೀದಿಗಳನ್ನ ಮಾಫಿಯಾ ರೂಲ್ ಮಾಡ್ತಿದ್ಯಾ? ಹೌದು ಅಂತಿದೆ ಈ ಕಾರಿನ ಬರಹ!

0

ಬೆಂಗಳೂರು: ಬೆಂಗಳೂರಿನಲ್ಲಿ ಕಾರಿನ ಹಿಂಭಾಗದಲ್ಲಿ ಬೆದರಿಕೆಯ ಬರಹ ಬರೆದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

KA03 AN 6207 ನೋಂದಣಿ ಸಂಖ್ಯೆಯ ಕಾರಿನ ಹಿಂಭಾಗದಲ್ಲಿ “This vehicle belongs to mafia. If you touch this, we touch you” ಎಂಬ ಇಂಗ್ಲಿಷ್ ಭಾಷೆಯ ಬೆದರಿಕೆ ಸಾಲುಗಳನ್ನು ಬರೆಯಲಾಗಿದೆ. ಅಂದರೆ, “ಈ ಕಾರು ಮಾಫಿಯಾಗೆ ಸೇರಿದ್ದು, ಇದನ್ನು ಸ್ಪರ್ಶಿಸಿದರೆ ನಾವು ನಿಮ್ಮನ್ನು ಸ್ಪರ್ಶಿಸುತ್ತೇವೆ” ಎಂಬ ಅರ್ಥದ ಸಂದೇಶ ಇದಾಗಿದೆ.

ಈ ಕಾರಿನ ಫೋಟೋವನ್ನು ‘X Responsibility’ ಎಂಬ ಸಾಮಾಜಿಕ ಜಾಲತಾಣದ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, “ಬೆಂಗಳೂರಿನ ಬೀದಿಗಳನ್ನು ಮಾಫಿಯಾ ಆಳುತ್ತಿದೆಯೇ?” ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಈ ವಿಷಯ ವೈರಲ್ ಆಗುತ್ತಿದ್ದಂತೆ ನಗರ ಪೊಲೀಸರು ತಕ್ಷಣ ಸ್ಪಂದಿಸಿದ್ದು, ಕಾರು ಕಂಡುಬಂದ ಸ್ಥಳದ ಕುರಿತು ಸಾರ್ವಜನಿಕರಿಂದ ಮಾಹಿತಿ ಕೋರಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ, ಕಾರಿನ ಮಾಲೀಕ ಹಾಗೂ ಬರಹ ಬರೆದ ವ್ಯಕ್ತಿಯ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪದೇಪದೇ ಆರೋಪ ಮಾಡುವುದು ಸರಿಯಲ್ಲ – ಗುತ್ತಿಗೆದಾರರ ಸಂಘದ ವಿರುದ್ಧ ಸಚಿವ ಬೈರತಿ ಸುರೇಶ್ ಆಕ್ರೋಶ!

0

ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಮಾಡಿರುವ ಆರೋಪಗಳಿಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಬೈರತಿ ಸುರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಸಾಕ್ಷ್ಯಾಧಾರವಿಲ್ಲದೆ ಗಾಳಿಯಲ್ಲಿ ಗುಂಡು ಹಾರಿಸುವಂತೆ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಖಂಡಿಸಿದರು. ಈ ಕುರಿತು ನಗರದಲ್ಲಿ ಮಾತನಾಡಿದ ಸಚಿವರು, ಯಾವುದೇ ಕಾಮಗಾರಿಯ ಗುತ್ತಿಗೆ ನೀಡುವ ವಿಚಾರದಲ್ಲಿ ಸಚಿವರ ಹಸ್ತಕ್ಷೇಪ ಇರುವುದಿಲ್ಲ. ಪಾರದರ್ಶಕ ಕಾಯ್ದೆಯಡಿ ಸಂಪೂರ್ಣವಾಗಿ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ಟೆಂಡರ್ ನೀಡುವ ಪ್ರಕ್ರಿಯೆಯಲ್ಲಿ ಮಂತ್ರಿಗಳು ಭಾಗಿಯಾಗುವುದಿಲ್ಲ. ಅರ್ಹ ಗುತ್ತಿಗೆದಾರರನ್ನು ಅಧಿಕಾರಿಗಳ ತಂಡವೇ ಅಂತಿಮಗೊಳಿಸುತ್ತದೆ ಎಂದು ಹೇಳಿದರು. ಟೆಂಡರ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರಿಗೆ ಚೆನ್ನಾಗಿ ತಿಳಿದಿದೆ. ಆದರೂ ಪದೇಪದೇ ಮಂತ್ರಿಗಳ ವಿರುದ್ಧ ವಿನಾಕಾರಣ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ ಎಂದು ಬೈರತಿ ಸುರೇಶ್ ಕಿಡಿಕಾರಿದರು.

ದಿನಂಪ್ರತಿ ಈ ರೀತಿಯ ಆರೋಪಗಳನ್ನು ಮಾಡುತ್ತಾ ಬಂದರೆ ಇಲಾಖೆಗಳ ಕಾರ್ಯನಿರ್ವಹಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿದ್ದರೆ ಸಾರ್ವಜನಿಕವಾಗಿ ಒದಗಿಸಲಿ ಎಂದು ಸವಾಲು ಹಾಕಿದ ಸಚಿವರು, ವಿನಾಕಾರಣ ಆರೋಪಗಳ ಮೂಲಕ ಸಾರ್ವಜನಿಕ ಜೀವನದಲ್ಲಿರುವವರ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಇನ್ನೂ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಹಣ ಬಿಡುಗಡೆ ಮಾಡುವ ಕುರಿತು ಮಂಜುನಾಥ್ ಅವರು ನನ್ನ ಬಳಿ ಮನವಿ ಮಾಡಿದ್ದರು ಎಂದು ಸಚಿವರು ನೆನಪಿಸಿದರು. ಹಣಕಾಸು ಇಲಾಖೆಯ ಅನುಮೋದನೆ ಪಡೆದು ಹಂತಹಂತವಾಗಿ ಬಾಕಿ ಇರುವ ಸುಮಾರು 200 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವ ಭರವಸೆ ನೀಡಲಾಗಿತ್ತು ಎಂದು ಅವರು ತಿಳಿಸಿದರು.

ಆಯಾಸ, ಒತ್ತಡವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ಈ ಅಭ್ಯಾಸಗಳನ್ನು ಪಾಲಿಸಿ!

0

ಇಂದಿನ ವೇಗದ ಜೀವನಶೈಲಿಯಲ್ಲಿ ದೇಹಕ್ಕೆ ತಕ್ಕಷ್ಟು ವಿಶ್ರಾಂತಿ ದೊರಕುವುದು ಕಷ್ಟವಾಗುತ್ತದೆ, ಮತ್ತು ನಿದ್ರೆಯ ಕೊರತೆಯಿಂದ ಆಯಾಸ ಮತ್ತು ಒತ್ತಡ ಹೆಚ್ಚಾಗುತ್ತವೆ.

ಆದರೆ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಉತ್ತಮ ನಿದ್ರೆ ಪಡೆಯಬಹುದು. ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವುದರಿಂದ ದೇಹ ತಾಜಾವಾಗುತ್ತದೆ ಮತ್ತು ಚರ್ಮದ ರಂಧ್ರಗಳು ಸ್ವಚ್ಛಗೊಳ್ಳುತ್ತವೆ, ಆಯಾಸ ಕಡಿಮೆಯಾಗುತ್ತದೆ. ನಿದ್ರೆಗೆ ಮುಂಚೆ ಸಾಕಷ್ಟು ನೀರು ಕುಡಿಯುವುದು ದೇಹದ ನೀರಿನ ಸಮತೋಲನವನ್ನು ಕಾಪಾಡುತ್ತದೆ ಮತ್ತು ಆಯಾಸ ತಪ್ಪಿಸುತ್ತದೆ.

ಚಹಾ, ಕಾಫಿ ಮುಂತಾದ ಕ್ಯಾಫೈನ್ ಸೇವನೆಯಿಂದ ದೂರವಿರುವುದು ನಿದ್ರೆಗೆ ಸಹಾಯ ಮಾಡುತ್ತದೆ. ರಾತ್ರಿಯ ಊಟದ ನಂತರ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವುದು ದೇಹದ ಶಕ್ತಿಯನ್ನು ಸಮತೋಲಕ್ಕೆ ತರುತ್ತದೆ. ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಬಳಕೆಯಿಂದ ದೂರವಿರುವುದರಿಂದ ನೀಲಿ ಬೆಳಕು ನಿದ್ರೆಯನ್ನು ವ್ಯತ್ಯಯಗೊಳಿಸುವುದನ್ನು ತಡೆಯಬಹುದು. ಬದಲಾಗಿ ಪುಸ್ತಕ ಓದುವುದು ಅಥವಾ ಶಾಂತ ಸಂಗೀತ ಕೇಳುವುದು ಶಿಫಾರಸು ಮಾಡಲ್ಪಡುತ್ತದೆ. ಮಲಗುವ ಮುನ್ನ ಧ್ಯಾನ ಅಥವಾ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸು ಶಾಂತವಾಗುತ್ತವೆ.

ಪಾದಗಳಿಗೆ ಮಸಾಜ್ ಮಾಡುವುದರಿಂದ ನರಗಳು ಸಡಿಲವಾಗುತ್ತವೆ. ಈ ಎಲ್ಲಾ ಅಭ್ಯಾಸಗಳನ್ನು ಪಾಲಿಸುವುದರಿಂದ ಆಯಾಸ ನಿವಾರಣೆ ಮತ್ತು ಆಳವಾದ, ಗುಣಮಟ್ಟದ ನಿದ್ರೆ ಪಡೆಯಬಹುದು.

ಸೂರ್ಯ ನಮಸ್ಕಾರ ಸಾಧನೆಯಿಂದ ಆರೋಗ್ಯ ಭಾಗ್ಯ: ಡಾ. ಎಂ.ವಿ. ಐಹೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಆಸ್ತಿ-ಪಾಸ್ತಿ, ಧನ-ಕನಕಾದಿಗಳ ಸಂಪತ್ತನ್ನು ನಾವು ವ್ಯವಹಾರಿಕವಾಗಿ ಗಳಿಸಬಹುದು. ಆದರೆ ಆರೋಗ್ಯ ಸಂಪತ್ತನ್ನು ಗಳಿಸಲು ನಾವು ಸ್ವತಃ ಸಾಧನೆ ಮಾಡಬೇಕಾಗುತ್ತದೆ. ಸಾಧನೆ ಸಾಕಷ್ಟಿದ್ದರೂ ಸೂರ್ಯನಮಸ್ಕಾರ ಸಾಧನೆ ಸರ್ವಶ್ರೇಷ್ಠವಾಗಿದೆ ಎಂದು ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ವಿ. ಐಹೊಳ್ಳಿ ಅಭಿಪ್ರಾಯಪಟ್ಟರು.

ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಮತ್ತು ಯೋಗ ಚಿಂತನ ಕೂಟ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ರಥಸಪ್ತಮಿ ಆಚರಣೆ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ಸೂರ್ಯನಮಸ್ಕಾರ ಯಜ್ಞ ಮತ್ತು ಸೂರ್ಯಾಷ್ಟೋತ್ತರ ಶತನಾಮಾವಳಿ ಪಠಣ ಕಾರ್ಯಕ್ರಮಗಳ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸೂರ್ಯ ನಮಸ್ಕಾರವು ಯೋಗದ ಪ್ರಕ್ರಿಯೆಗಳಾದ ಆಸನ, ಪ್ರಾಣಾಯಾಮ, ಧ್ಯಾನ, ಮಂತ್ರ ಪಠಣಗಳ ಸಂಯೋಜನೆಯುಕ್ತ 12 ಹಂತಗಳ ವ್ಯಾಯಾಮ ಪದ್ಧತಿಯಾಗಿದೆ. ಆಧ್ಯಾತ್ಮಿಕವಾಗಿ ಸೂರ್ಯದೇವನಿಗೆ ವಂದನೆ ಸಲ್ಲಿಸುವುದು ಧಾರ್ಮಿಕ ಆಚರಣೆಯಾಗಿದೆ. ಈ ಸೂರ್ಯನಮಸ್ಕಾರ ಸಾಧನೆಯಿಂದ ನಾವು ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ, ನೈತಿಕ ಮತ್ತು ಸಾಮಾಜಿಕವಾಗಿ ಆರೋಗ್ಯವಂತರಾಗಿರಬಹುದು. ಹೀಗಾಗಿ ಸೂರ್ಯ ನಮಸ್ಕಾರ ಸಾಧನೆ ಆರೋಗ್ಯ ಭಾಗ್ಯದ ಅಡಿಪಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗಿಯಾದ ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಸೂರ್ಯಾಷ್ಟೋತ್ತರ ಶತನಾಮಾವಳಿಯನ್ನು ಪಠಣ ಮಾಡಿಸಿ ಯೋಗ ಗಾರುಡಿಗರಾದ ಮಾಳಾಡಿಹಳ್ಳಿ ದಿ. ಶ್ರೀ ರಾಘವೇಂದ್ರ ಸ್ವಾಮಿಗಳು ಮಾಡಿದ ಸೂರ್ಯನಮಸ್ಕಾರ ಸಾಧನೆಯನ್ನು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಇ. ಪ್ರಶಾಂತ, ಜಯಶ್ರೀ ಡಾವಣಗೇರಿ, ವೀಣಾ ಗೌಡರ, ರೇಷ್ಮಾ ಹಡಪದ, ಗಿರಿಜಾ ಅಂಗಡಿ ಸೇರಿದಂತೆ ಯೋಗಪಾಠಶಾಲೆಯ ಸದಸ್ಯರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಪ್ರಾರ್ಥನೆ, ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ ನಡೆದವು. ಷಡಕ್ಷರಿ ಮೆಣಸಿನಕಾಯಿ ಸರ್ವರನ್ನು ಸ್ವಾಗತಿಸಿದರು. ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಾಳೆದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರವಿ ಹುಡೇದ ಕಾರ್ಯಕ್ರಮ ನಿರೂಪಿಸಿದರು. ಸುಲೋಚನಾ ಐಹೊಳ್ಳಿ ವಂದಿಸಿದರು.

ಎಲ್.ಟಿ.ಎಂ.ಎಸ್ ಹೆಸ್ಕಾಂನ ಅಸಿಸ್ಟಂಟ್ ಇಂಜಿನಿಯರ್ ಸುನಿತಾ ಓಲಿ ರಥಸಪ್ತಮಿ ದಿನ ಪ್ರಾರಂಭಿಸಿದ ಕಾರ್ಯಗಳ ಫಲ ಏಳು ಪಟ್ಟು ಹೆಚ್ಚುವದೆಂದು ತಿಳಿಸಿದರು. ರಥಸಪ್ತಮಿ ಮತ್ತು ಸೂರ್ಯನಮಸ್ಕಾರ ಕುರಿತು ಅಶೋಕ ಬಾರಕೇರ, ವಿಜಯಲಕ್ಷ್ಮೀ ಆನೆಹೊಸೂರ, ಮಂಜುಳಾ ಬುಳ್ಳಾ, ವಿಜಯಾ ಚನ್ನಶೆಟ್ಟಿ, ಗೌರಿ ಜಿರಂಕಳಿ ಮಾತನಾಡಿದರು. ವೀಣಾಶ್ರೀ ಮಾಲಿಪಾಟೀಲ ಸೂರ್ಯ ದೇವರ ಮಹತ್ವ ತಿಳಿಸುವ ಗೀತೆ ಹಾಡಿದರು.

ಜಿಲ್ಲಾ ಬ್ಯಾಂಕ್ ನೌಕರ ಸಂಘದಿಂದ ಧರಣಿ

0

ವಿಜಯಸಾಕ್ಷಿ ಸುದ್ದಿ, ಗದಗ: ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ರಾಷ್ಟ್ರವ್ಯಾಪಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಘಟಕವು ನಗರದ ಗಾಂಧಿ ಸರ್ಕಲ್ ಬಳಿ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮುಷ್ಕರ ನಡೆಸಿದರು.

ಗದಗ ಜಿಲ್ಲಾ ಬ್ಯಾಂಕ್ ನೌಕರರ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಹನುಮೇಶ್ ಎಮ್. ಗಂಗರಾಹುತರ ಹಾಗೂ ಗದಗ ಜಿಲ್ಲಾ ಯುಎಫ್‌ಬಿಯು ಘಟಕದ ಕನ್ವೀನರ್ ಕಾಮ್ರೆಡ್ ಅಮರೇಶ್ವರ ಕೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಮತ್ತು ಹಣಕಾಸು ಸಚಿವಾಲಯವನ್ನು ಒತ್ತಾಯಿಸಿ ಈಗಾಗಲೇ ಐಬಿಎ ಹಾಗೂ ಬ್ಯಾಂಕ್ ಕಾರ್ಮಿಕ ಸಂಘಗಳ ನಡುವೆ ಒಪ್ಪಿಗೆಯಾಗಿ ಅದರ ಅನುಮೋದನೆಗಾಗಿ ಕೇಂದ್ರ ಹಣಕಾಸು ಸೇವೆಗಳ ಇಲಾಖೆಗೆ ಕಳುಹಿಸಲಾಗಿದೆ. ಆದರೆ ಒಪ್ಪಂದವಾಗಿ ಎರಡು ವರ್ಷಗಳು ಕಳೆದರೂ ಅಲ್ಲಿ ಅನಗತ್ಯವಾಗಿ ವಿಳಂಬ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಬ್ಯಾಂಕ್ ಉದ್ಯೋಗಿಗಳ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಮುಷ್ಕರದಲ್ಲಿ ಕಾಮ್ರೆಡ್ ಬಾಲಾಜಿ ಕುಲಕರ್ಣಿ, ಕಾಮ್ರೆಡ್ ಮಂಜುನಾಥ ಭಜಂತ್ರಿ, ಕಾಮ್ರೆಡ್ ಮಂಜುನಾಥ ದೊಡ್ಡಮನಿ, ಕಾಮ್ರೆಡ್ ಶಿವಾನಂದ್, ಕಾಮ್ರೆಡ್ ಯಚ್ಚರಸ್ವಾಮಿ ನಾಯಕ, ಕಾಮ್ರೆಡ್ ಅಶೋಕ ಗೌಡ್ರ, ಕಾಮ್ರೆಡ್ ಪ್ರೇಮ್, ಕಾಮ್ರೆಡ್ ಸೂರ್ಯ ಕುಮಾರ್, ಕಾಮ್ರೆಡ್ ಹರೀಶ್ ಲೋಕಾಪುರ್, ಕಾಮ್ರೆಡ್ ರಾಜು ಸಿಂಗಾಡಿ, ಕಾಮ್ರೆಡ್ ದೀಪಕ್ ಕೊಲ್ಲಾಪುರಿ, ಕಾಮ್ರೆಡ್ ದೀಪು ಮಾಲಾ, ನೇಹಾ, ಸುಧಾರಾಣಿ, ಪ್ರೀತಿ, ಲೋಕೇಶ್, ಕಾಮ್ರೆಡ್ ವಿಜಯ್, ಕಾಮ್ರೆಡ್ ವಿನೋದ್ ಹೊಸೂರ, ಮೌಲಾಸಾಬ್, ಗಾಯತ್ರಿ, ಶಿಲ್ಪಾ, ಪ್ರಿಯ ಸಜ್ಜನ್, ಚೈತ್ರ, ಪ್ರದೀಪ್, ಮಂಜುನಾಥ ಭಜಂತ್ರಿ ಮುಂತಾದವರು ಪಾಲ್ಗೊಂಡಿದ್ದರು.

ಶರಣರ ಪರಂಪರೆಯಲ್ಲಿ ಮುನ್ನಡೆಯೋಣ: ರಾಮಣ್ಣ ಇರಕಲ್ಲ 

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸುಣಗಾರ ಓಣಿಯಲ್ಲಿ ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ವತಿಯಿಂದ 12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಯುವ ಮುಖಂಡ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, 12ನೇ ಶತಮಾನದ ಶರಣರು ಜಾತಿ ರಹಿತ, ಸಮ ಸಮಾಜ ಕಟ್ಟುವ ಕನಸು ಕಂಡಿದ್ದರು. ಸಮಾಜದಲ್ಲಿರುವ ಮೂಢನಂಬಿಕೆಯನ್ನು ಬೇರು ಸಮೇತ ಕಿತ್ತಹಾಕಲು ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ಮಾತನಾಡಿ, ಶರಣರ ಪರಂಪರೆಯಲ್ಲಿ ಮುನ್ನಡೆಯೋಣ. ಪಾಶ್ಚಾತ್ಯ ಸಂಸ್ಕೃತಿಗಳನ್ನು ಬಿಟ್ಟು ಶರಣ ಸಂಸ್ಕೃತಿಗೆ ಅಂಟಿಕೊಳ್ಳಲಿ ಎಂದರು.

ಗದಗ ಜಿಲ್ಲಾ ಕೆಪಿಸಿಸಿ ಮೀನುಗಾರರ ವಿಭಾಗದ ಜಿಲ್ಲಾಧ್ಯಕ್ಷ ಗುರಪ್ಪ ತಿರ್ಲಾಪೂರ ಮಾತನಾಡಿ, ಸಮುದಾಯದ ಜನ ಸಂಘಟನೆ, ಹೋರಾಟ, ಶಿಕ್ಷಣ ಮಾನವೀಯ ಮೌಲ್ಯವನ್ನು ಮಕ್ಕಳಿಗೆ ಕಲಿಸೋಣ. ಅಂದಾಗ ಶರಣರ ಪರಂಪರೆಗೆ ಮೆರುಗು ಬರುತ್ತದೆ ಎಂದರು.

ಸಮಾಜದ ಮಹಿಳಾ ಅಧ್ಯಕ್ಷರಾದ ಸುಜಾತ ಗುಡಿಸಾಗರ ನೇತೃತ್ವದಲ್ಲಿ ಮಹಿಳೆಯರು ಕುಂಭ ಮೆರವಣಿಗೆಗೆ ಶೋಭೆ ತಂದರು. ಈ ಸಂದರ್ಭದಲ್ಲಿ ಅಂಬಿಗರ ಸಮಾಜ ಟ್ರಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ, ಉಪಾಧ್ಯಕ್ಷ ಪ್ರವೀಣ ನೀಲಣ್ಣವರ, ಯುವ ಘಟಕದ ಅಧ್ಯಕ್ಷ ಮಂಜುನಾಥ ಗುಡಿಸಾಗರ, ಖಜಾಂಚಿ ಹನಮಂತ ಅಂಬಿಗೇರ, ರಾಜು ಪೂಜಾರ, ರಮೇಶ ಬೆನಕಲ್ಲ, ಬಸವರಾಜ ಗುಡಿಸಾಗರ, ಮಲ್ಲಿಕಾರ್ಜುನ ಬಾರಕೇರ, ನಾಗರಾಜ ಬಾರಕೇರ, ನಾರಾಯಣ ನರಗುಂದ, ಪ್ರಕಾಶ ಬಿನ್ನಾಳ, ರಾಜು ಗುಡಿಸಾಗರ, ಅಶೋಕ ಜಕನೂರ, ಅಮಿತ ಪೂಜಾರ, ಮಧು ಪೂಜಾರ, ಹರೀಶ ಬಾರಕೇರ, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಕಾಂಗ್ರೆಸ್ಸಿನವರಿಗೆ ಮಹಾತ್ಮ ಗಾಂಧಿಯವರ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆ ಇಲ್ಲ: ವಿಜಯೇಂದ್ರ

0

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಜಾಹೀರಾತಿನಲ್ಲಿ ಎಲ್ಲ ಸುಳ್ಳು ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡಿದೆ. ಇದೇ ಜಾಹೀರಾತನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ನೀಡಿದರೆ ನಮ್ಮ ವಿರೋಧ ಇರಲಿಲ್ಲ.

ರಾಜ್ಯದ ತೆರಿಗೆದಾರರ ಹಣವನ್ನು ದುರುಪಯೋಗ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಈ ಕಾಂಗ್ರೆಸ್ ಸರಕಾರಕ್ಕೆ ಮಾನ ಮರ್ಯಾದೆ ಇಲ್ಲ. ಕೇಂದ್ರ ಸರಕಾರದ ವಿಬಿ ಜಿ ರಾಮ್ ಜಿ ಕಾಯ್ದೆಯ ವಿರುದ್ಧ ಪತ್ರಿಕೆಗಳ ಮುಖಪುಟದಲ್ಲಿ ರಾಜ್ಯ ಸರಕಾರ ಜಾಹೀರಾತು ನೀಡಿದ್ದನ್ನು ನಾವು ವಿರೋಧಿಸುತ್ತೇವೆ ಎಂದು ತಿಳಿಸಿದರು.

ಈ ಕಾಂಗ್ರೆಸ್ಸಿನವರಿಗೆ ಮಹಾತ್ಮ ಗಾಂಧಿಯವರ ಬಗ್ಗೆ ಗೌರವ ಇಲ್ಲ. ಇವತ್ತು ಕೊಟ್ಟಿರುವ ಜಾಹೀರಾತಿನ ಮೂಲಕ ಅಕ್ಷರಶಃ ಸಂಪೂರ್ಣ ತಪ್ಪು ಮಾಹಿತಿಯನ್ನು ರಾಜ್ಯದ ಜನತೆಗೆ ಕೊಡುವ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಕೈಹಾಕಿದೆ. ಈ ಜಾಹೀರಾತಿನ ಮುಖೇನ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಖಂಡಿಸಿದರು.

error: Content is protected !!