Home Blog Page 3

ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ: 19 ವಿಶೇಷ ರೈಲುಗಳು ಖಾಯಂ ಸೇವೆಗೆ!

ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯಾಗಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಮಂಡಳಿ ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗಳಾಗಿ ಪರಿವರ್ತಿಸಿದೆ.

ಈ ಪಟ್ಟಿಯಲ್ಲಿ 6 ಎಕ್ಸ್‌ಪ್ರೆಸ್, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಸೇರಿವೆ. ಈ ಕ್ರಮದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ಜನರಿಗೆ ಪ್ರಯಾಣ ಸೌಲಭ್ಯ ಹೆಚ್ಚಾಗಲಿದೆ.

ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದಾಗ ಹೆಚ್ಚಿನ ದರ ಹಾಗೂ ಅನಿಶ್ಚಿತ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈಗ ಖಾಯಂ ಸೇವೆಗೆ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಟಿಕೆಟ್ ದರದಲ್ಲಿ ಇಳಿಕೆ ಸಾಧ್ಯತೆ ಇದೆ. ಸ್ಲೀಪರ್ ಕೋಚ್‌ಗಳಲ್ಲಿ ಸುಮಾರು 30% ಹಾಗೂ ಸಾಮಾನ್ಯ ಟಿಕೆಟ್‌ಗಳಲ್ಲಿ 10–15%ರವರೆಗೆ ದರ ಕಡಿಮೆಯಾಗುವ ನಿರೀಕ್ಷೆಯಿದೆ.

ಖಾಯಂಗೊಂಡ ಎಕ್ಸ್‌ಪ್ರೆಸ್ ರೈಲುಗಳು:

  • ಮೈಸೂರು – ಅಜ್ಮೀರ್ ಎಕ್ಸ್‌ಪ್ರೆಸ್ (16281/16282) – ವಾರಕ್ಕೊಮ್ಮೆ
  • ಬೆಂಗಳೂರು ದಂಡು – ಕಲಬುರಗಿ ಎಕ್ಸ್‌ಪ್ರೆಸ್ (16563/16564) – ವಾರಕ್ಕೊಮ್ಮೆ
  • SMVT ಬೆಂಗಳೂರು – ಬೀದರ್ ಎಕ್ಸ್‌ಪ್ರೆಸ್ (16559/16560) – ವಾರಕ್ಕೊಮ್ಮೆ
  • ಯಶವಂತಪುರ – ತಾಳಗುಪ್ಪ ಎಕ್ಸ್‌ಪ್ರೆಸ್ (16555/16556) – ವಾರಕ್ಕೊಮ್ಮೆ
  • ಹುಬ್ಬಳ್ಳಿ – ಯೋಗನಗರಿ ರಿಷಿಕೇಶ ಎಕ್ಸ್‌ಪ್ರೆಸ್ (17363/17364) – ವಾರಕ್ಕೊಮ್ಮೆ
  • ಮಡಗಾಂವ್ – ಕಾರವಾರ ಎಕ್ಸ್‌ಪ್ರೆಸ್ (10109/10110)

ಮೆಮು / ಡೆಮು ರೈಲುಗಳು:

  • ಬೆಂಗಳೂರು – ಹೊಸೂರು ಮೆಮು (66595/96) – ಪ್ರತಿದಿನ
  • ಹುಬ್ಬಳ್ಳಿ – ವಿಜಯಪುರ ಮೆಮು (66501/02) – ಪ್ರತಿದಿನ
  • ಬೆಂಗಳೂರು – ಅಶೋಕಪುರಂ ಮೆಮು (66597/98) – ಪ್ರತಿದಿನ
  • ಬೆಂಗಳೂರು – ಅಶೋಕಪುರಂ ಮೆಮು (06213/14) – ವಾರಕ್ಕೆ 3 ಬಾರಿ
  • ಬಂಗಾರಪೇಟೆ – SMVT ಬೆಂಗಳೂರು ಮೆಮು (66537/38) – ಪ್ರತಿದಿನ
  • ಹೊಸಪೇಟೆ – ಹುಬ್ಬಳ್ಳಿ ಡೆಮು (76507/08) – ವಾರಕ್ಕೊಮ್ಮೆ
  • ಬಳ್ಳಾರಿ – ದಾವಣಗೆರೆ ಡೆಮು (76509/10) – ವಾರಕ್ಕೆ 6 ದಿನ
  • ಬೆಂಗಳೂರು – ಹಾಸನ ಡೆಮು (66525/26) – ವಾರಕ್ಕೆ 6 ದಿನ
  • ಬಳ್ಳಾರಿ – ಹೊಸಪೇಟೆ ಡೆಮು (07397/98) – ವಾರಕ್ಕೆ 6 ದಿನ

ಇತರೆ ಪ್ಯಾಸೆಂಜರ್ ರೈಲುಗಳು:

ಬೆಂಗಳೂರು–ಚನ್ನಪಟ್ಟಣ, ಮೈಸೂರು–SMVT ಬೆಂಗಳೂರು, ಯಶವಂತಪುರ–ಹಿಂದೂಪುರ ಹಾಗೂ ಹುಬ್ಬಳ್ಳಿ–ವಿಜಯಪುರ ಪ್ಯಾಸೆಂಜರ್ ರೈಲುಗಳನ್ನೂ ಖಾಯಂ ಮಾಡಲಾಗಿದೆ. ಈ ನಿರ್ಧಾರದಿಂದ ಪ್ರಯಾಣ ಯೋಜನೆ ಸುಲಭವಾಗಿದ್ದು, ಮುಂಗಡ ಕಾಯ್ದಿರಿಸುವಿಕೆ ಮಾಡಲು ಅನುಕೂಲವಾಗಲಿದೆ. ಒಟ್ಟಾರೆ, ರೈಲ್ವೇ ಮಂಡಳಿಯ ಈ ಕ್ರಮ ರಾಜ್ಯದ ಸಾವಿರಾರು ಪ್ರಯಾಣಿಕರಿಗೆ ದೊಡ್ಡ ಮಟ್ಟದ ನೆರವಾಗಲಿದೆ.

ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ: ನೋಂದಣಾಧಿಕಾರಿ ವಿರುದ್ಧ ಹೈಕೋರ್ಟ್ ಗರಂ

ಬೆಂಗಳೂರು: ಜೀವಂತವಿರುವ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣಪತ್ರ ನೀಡಿರುವುದನ್ನು ರದ್ದುಪಡಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮುಂದಿನ ವಿಚಾರಣೆಯ ವೇಳೆಗೆ ಮರಣ ಪ್ರಮಾಣಪತ್ರವನ್ನು ರದ್ದುಪಡಿಸಿರುವ ಬಗ್ಗೆ ಹಿಂಬರಹ ಸಲ್ಲಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ)ಯ ಜನನ ಮತ್ತು ಮರಣ ನೋಂದಣಾಧಿಕಾರಿಗೆ ಹೈಕೋರ್ಟ್  ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬೆಂಗಳೂರಿನ ಚಿಕ್ಕಪೇಟೆ ವಲಯ ಕಚೇರಿಯಿಂದ ನೀಡಲಾದ ತಾತ್ಕಾಲಿಕ ಮರಣ ಪ್ರಮಾಣಪತ್ರವನ್ನು ರದ್ದುಪಡಿಸಲು ನಿರ್ದೇಶಿಸಬೇಕೆಂದು ಡಿ. ಮೆಹಬೂಬ್ ಬಾಷಾ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಬದುಕಿರುವ ವ್ಯಕ್ತಿಯ ಹೆಸರಿನಲ್ಲಿ ನೀಡಿರುವ ಮರಣ ಪ್ರಮಾಣಪತ್ರವನ್ನು ಹಿಂಪಡೆಯದಿರುವುದರಿಂದ ಅರ್ಜಿದಾರರು ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗುವಂತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಜನನ ಮತ್ತು ಮರಣಗಳ ನೋಂದಣಾಧಿಕಾರಿ ಬುಧವಾರದೊಳಗೆ ಮರಣ ಪ್ರಮಾಣಪತ್ರ ರದ್ದುಪಡಿಸಿರುವ ವರದಿ ಸಲ್ಲಿಸಬೇಕು. ವಿಫಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.

ಇದಕ್ಕೂ ಮೊದಲು ಮರಣ ಪ್ರಮಾಣಪತ್ರವನ್ನು ರದ್ದುಪಡಿಸಲು ಆದೇಶ ನೀಡಿದ್ದರೂ ಅದನ್ನು ಪಾಲಿಸದಿರುವ ಬಗ್ಗೆ ಕೋರ್ಟ್ ಸರ್ಕಾರವನ್ನು ಪ್ರಶ್ನಿಸಿ, ಏಕೆ ದಂಡ ವಿಧಿಸಬಾರದು ಎಂದು ವಿಚಾರಿಸಿದೆ.

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಜಿಬಿಎ ಜನನ-ಮರಣ ನೋಂದಣಾಧಿಕಾರಿ, ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ, ಚಿಕ್ಕಪೇಟೆ ವೈದ್ಯಾಧಿಕಾರಿ ಹಾಗೂ ಜಿಬಿಎ ಸಾಂಖ್ಯಿಕ ವಿಭಾಗದ ಜಂಟಿ ನಿರ್ದೇಶಕರಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಜೀವಂತವಾಗಿದ್ದರೂ ಮರಣ ಪ್ರಮಾಣಪತ್ರ ನೀಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅವರ ಪ್ಯಾನ್ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳಿದ್ದರೂ, ಆಧಾರ್ ಕಾರ್ಡ್ ಪಡಿತರ ಚೀಟಿಗೆ ಸಂಪರ್ಕಗೊಂಡಿರುವ ಕಾರಣದಿಂದ ಪಡಿತರ ಪಡೆಯಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು.

ಗದಗ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ನಿವೃತ್ತ ಅಂಗನವಾಡಿ ಶಿಕ್ಷಕಿ ಸಾವು

ಗದಗ: ಗದಗ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದ ಸಮೀಪ ಭಾನುವಾರ ನಡೆದಿದೆ.

ಮೃತರನ್ನು ಚುರ್ಚಿಹಾಳ ಗ್ರಾಮದ ಗಂಗವ್ವ ಕೋಂ ಕುಮಾರಸ್ವಾಮಿ ಹೊಂಬಾಳಿಮಠ (62) ಎಂದು ಗುರುತಿಸಲಾಗಿದೆ. ಅವರು ಅಂಗನವಾಡಿ ನಿವೃತ್ತ ಶಿಕ್ಷಕಿಯಾಗಿದ್ದು, ಗದಗದಲ್ಲಿರುವ ಎಲ್‌.ಐ‌.ಸಿ ಕಚೇರಿಗೆ ತೆರಳುವ ಉದ್ದೇಶದಿಂದ ಹೊರಟಿದ್ದರು.

ಹುಲಕೋಟಿ ಇಂಜಿನಿಯರಿಂಗ್ ಕಾಲೇಜ್ ಬಳಿ ರಸ್ತೆ ದಾಟುತ್ತಿದ್ದ ವೇಳೆ, ಗದಗದಿಂದ ಹುಬ್ಬಳ್ಳಿ ಕಡೆಗೆ ಅತಿವೇಗವಾಗಿ ಸಾಗುತ್ತಿದ್ದ ಕಾರು (ಕೆ.ಎ.26/ಎನ್.9326) ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ತಲೆಗೆ ಗಂಭೀರ ಗಾಯಗೊಂಡ ಗಂಗವ್ವ ಅವರನ್ನು ತಕ್ಷಣ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್‌.ಡಿ‌.ಎಂ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಆಸ್ಪತ್ರೆ ಪ್ರವೇಶ ದ್ವಾರದ ಬಳಿಯೇ ಕೊನೆಯುಸಿರೆಳೆದಿದ್ದಾರೆ.

ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆ ಆರೋಪದ ಮೇಲೆ ಕಾರು ಚಾಲಕ ಅಬ್ದುಲ್ ಗಫೂರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸ್ಥಳೀಯರು ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ವೇಗ ನಿಯಂತ್ರಣ ಕ್ರಮಗಳನ್ನು ಕಠಿಣಗೊಳಿಸುವಂತೆ ಆಗ್ರಹಿಸಿದ್ದಾರೆ.

ಮುಂಡರಗಿ ಪೊಲೀಸರ ಕಾರ್ಯಾಚರಣೆ: ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ – 7 ಬೈಕ್ ಜಪ್ತಿ

ಗದಗ: ಮುಂಡರಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೋಟಾರ್ ಸೈಕಲ್ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿ, ಅಂತರ ಜಿಲ್ಲಾ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 18/03/2026 ರಂದು ದಾಖಲಾಗಿದ್ದ ಗುನ್ನಾ ಸಂಖ್ಯೆ 50/2026, ಕಲಂ 303(2) ಬಿ.ಎನ್.ಎಸ್-2023 ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ನಿರ್ದೇಶನದಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು. ನರಗುಂದ ಉಪವಿಭಾಗದ ಡಿ.ಎಸ್.ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಠಾಣೆಯ ಸಬ್ ಇನ್ಸಪೆಕ್ಟರ್‌ಗಳಾದ ಚನ್ನಯ್ಯ ದೇವೂರ, ಬಿ.ಎನ್. ಯಳವತ್ತಿ ಕಾರ್ಯಾಚರಣೆ ನಡೆಸಿದರು.

ದಿನಾಂಕ 20/03/2026 ರಂದು ಮುಂಡರಗಿ ಪಟ್ಟಣದ ಗೋಂದಳಿ ಓಣಿಯ ಕಾರ್ ಡ್ರೈವರ್ ರವಿ ತಂದೆ ಪರಶುರಾಮ ಕುಕನೂರು (34) ಎಂಬಾತನನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಆತ ಮುಂಡರಗಿ, ಕೊಪ್ಪಳ ಹಾಗೂ ಗದಗ ನಗರ ಪ್ರದೇಶಗಳಲ್ಲಿ ಒಟ್ಟು 7 ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಂಧಿತನಿಂದ ಸುಮಾರು ₹2.05 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 7 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗಳಾದ ಜೆ.ಐ ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಮಹೇಶ ಗೊಳಗೊಳಕಿ, ವಿನಾಯಕ ಬಾಲರಡ್ಡಿ, ನಾಗರಾಜ ಹರಪನಹಳ್ಳಿ, ಶರಣಪ್ಪ ಓಜನಹಳ್ಳಿ, ನಿಂಗಪ್ಪ ಪೂಜಾರ ಹಾಗೂ ಪರಶುರಾಮ ಧಾರವಾಡ ಅವರ ಶ್ರಮವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಪ್ರಶಂಸಿ, ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಬೆಂಗಳೂರು: ತ್ಯಾಜ್ಯ ಸಂಗ್ರಹಣೆ ಸ್ಥಗಿತ – 50 ವಾರ್ಡ್‌ಗಳಲ್ಲಿ ಕಸದ ಅಡಚಣೆ!

ಬೆಂಗಳೂರು: ನಗರದ ಕೆಲವು ಭಾಗಗಳಲ್ಲಿ ತ್ಯಾಜ್ಯ ಸಂಗ್ರಹಣೆಯಲ್ಲಿ ಗಂಭೀರ ಅಡಚಣೆ ಉಂಟಾಗಿದೆ.

ಕನಿಷ್ಠ 50 ವಾರ್ಡ್‌ಗಳಲ್ಲಿ ಸೋಮವಾರ ಕಸದ ಸಂಗ್ರಹಣೆ ಸ್ಥಗಿತಗೊಂಡಿತ್ತು. ಮೂಲಗಳ ಪ್ರಕಾರ, ವೇತನ ಬಾಕಿ ಮತ್ತು ಕಸ ವಿಂಗಡಣೆ ಕುರಿತ ಹೊಸ ನಿಯಮದ ವಿರುದ್ಧ ಆಟೋ ಟಿಪ್ಪರ್ ಚಾಲಕರು ಮತ್ತು ಲೋಡರ್‌ಗಳು ಸಾಮೂಹಿಕ ರಜೆ ತೆಗೆದುಕೊಂಡಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ.

ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ ಮೂಲದಲ್ಲೇ ಕಸದ ವಿಂಗಡಣೆ ಕಡ್ಡಾಯವಾಗಬೇಕು ಎಂದು ಒತ್ತಾಯಿಸುತ್ತಿದ್ದು, ಕಸ ವಿಂಗಡಿಸುವ ಜವಾಬ್ದಾರಿ ಕಸ ಉತ್ಪಾದಕರದ್ದು, ಸಂಗ್ರಹಿಸುವವರದ್ದಲ್ಲ ಎಂದು ವಾದಿಸಿದ್ದಾರೆ.

BSWML ಸಿಇಒ ಕರೀಗೌಡ ಮಾಹಿತಿ ನೀಡಿದ್ದು, “ಸುಮಾರು 40–50 ವಾರ್ಡ್‌ಗಳಲ್ಲಿ ಮಾತ್ರ ಸಮಸ್ಯೆ ಉಂಟಾಗಿದೆ, ನಗರದ ಉಳಿದ ಭಾಗಗಳಲ್ಲಿ ಸಂಗ್ರಹಣೆ ಸಾಮಾನ್ಯವಾಗಿದೆ. ಕಳೆದ ನಾಲ್ಕು ತಿಂಗಳ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಕಸ ಸಂಗ್ರಹಿಸದ ಗುತ್ತಿಗೆದಾರರ ವಿರುದ್ಧ ಅಗತ್ಯ ಸೇವೆಗಳ ಕಾಯ್ದೆ ಅಡಿಯಲ್ಲಿ 35 ಎಫ್‌ಐಆರ್‌ಗಳು ದಾಖಲಾಗಿವೆ. ಗುತ್ತಿಗೆದಾರರ ಸಂಘವು ಹೊಸ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್‌ಎನ್ ಬಾಲಸುಬ್ರಮಣಿಯನ್, ತ್ಯಾಜ್ಯವನ್ನು ಬೇರ್ಪಡಿಸುವ ಜವಾಬ್ದಾರಿ ತ್ಯಾಜ್ಯ ಉತ್ಪಾದಕರ ಮೇಲಿದೆ ಎಂದು ಹೇಳಿದ್ದಾರೆ.

ಮಸೀದಿ‌ ವಿಚಾರಕ್ಕೆ ಕಿರಿಕ್: ಕತ್ತಿ, ದೊಣ್ಣೆಯಿಂದ 2 ತಂಡಗಳ ಮಾರಾಮಾರಿ, ದೂರು-ಪ್ರತಿದೂರು ದಾಖಲು!

ಮಂಗಳೂರು: ಮಂಗಳೂರಿನ ಉಳ್ಳಾಲ ಸಜೀಪ‌ನಡು ಎಂಬಲ್ಲಿ ಮಸೀದಿ‌ ವಿಚಾರಕ್ಕೆ ಗಲಾಟೆ ನಡೆದು ಎರಡು ತಂಡಗಳ‌ ಸದಸ್ಯರು ಬಡಿದಾಡಿಕೊಂಡ ಘಟನೆ ಜರುಗಿದೆ.

ಸಜಿಪ ಪಡು ತಲೆಮೊಗರು ಬದ್ರಿಯಾ ಜುಮ್ಮಾ ಮಸೀದಿ ಬಳಿ ಈ ಮಾರಾಮಾರಿ ನಡೆದಿದೆ. ಕತ್ತಿ, ದೊಣ್ಣೆ, ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಲಾಗಿದೆ. ಮಸೀದಿ ಬಳಿ ಹಲ್ಲೆ ನಡೆದ ಬಳಿಕ ಓರ್ವನ ಮನೆಗೆ ಬಂದು ಅಲ್ಲಿದ್ದ ಮಹಿಳೆಯರು ಮಕ್ಕಳ‌ ಮುಂದೆ ಹಲ್ಲೆ‌ ನಡೆಸಲಾಗಿದೆ. ಮಸೀದಿ‌ ಅಧ್ಯಕ್ಷನೂ ಈ‌ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಹೊರ ಬಿದ್ದಿದೆ.

ಹಲ್ಲೆಯಿಂದ ಗಾಯಗೊಂಡವರಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದೂರು-ಪ್ರತಿದೂರು ಸೇರಿ 3 ಪ್ರಕರಣಗಳು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಮತ್ತು ಆರ್ಮ್ಸ್‌ ಆಕ್ಟ್‌ ಅಡಿ ದಾಖಲಾಗಿದೆ.

ಪೋಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ.

ಬೆಳಗಾವಿ| ಪೆಟ್ರೋಲ್ ಸಿಗಲ್ಲ ಎಂಬ ಫೇಕ್ ಮೆಸೇಜ್: ಬಂಕ್‌ಗೆ ಮುಗಿಬಿದ್ದ ಜನ!

ಬೆಳಗಾವಿ: ಮಧ್ಯಪ್ರಾಚ್ಯ ದೇಶಗಳ ಯುದ್ಧದ ಸಂಘರ್ಷದಿಂದ ದೇಶದಲ್ಲಿ ತೈಲದ ಬಿಕ್ಕಟ್ಟು ಹೆಚ್ಚಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ಅಡುಗೆ ಅನಿಲ ಬಿಕ್ಕಟ್ಟು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಭೀತಿ ಶುರುವಾಗಿದೆ. ಹೀಗಾಗಿ ಬಂಕ್ ಮುಂದೆ ಸಾರ್ವಜನಿಕರು ಮುಗಿಬಿದ್ದ ಘಟನೆ ಬೆಳಗಾವಿಯಲ್ಲಿ ಜರುಗಿದೆ.

ಸೋಮವಾರ ರಾತ್ರಿ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಜನರು ಸರತಿ ಸಾಲಿನಲ್ಲಿ ವಾಹನ ನಿಲ್ಲಿಸಿದ್ದರು. ಅಜಮ್ ನಗರ, ವೈಭವ್ ನಗರ, ಕೊಲ್ಲಾಪುರ ಸರ್ಕಲ್, ನೆಹರು ನಗರ, ಸೇಠ್ ಪೆಟ್ರೋಲ್ ಬಂಕ್, ವೈಭವ ನಗರ ಗಾಂಧಿ ನಗರ, ಚೆನ್ನಮ್ಮ ಸರ್ಕಲ್ ಹೀಗೆ ನಗರದಲ್ಲಿ ಬೈಕ್‌, ಕಾರುಗಳಿಗೆ ಪೆಟ್ರೋಲ್‌ ಹಾಕಿಸಿದ್ದಾರೆ. ಕೆಲವರು ನೀರಿನ ಬಾಟಲಿಗಳಲ್ಲಿ ಪೆಟ್ರೋಲ್‌ ತುಂಬಿಸಿದ್ದಾರೆ. ದಿಢೀರ್‌ ದಟ್ಟಣೆಯಿಂದ ಪರಿಸ್ಥಿತಿ ನಿಯಂತ್ರಣ ಮಾಡಲು ಬಂಕ್‌ ಸಿಬ್ಬಂದಿಯೂ ಪರದಾಟ ನಡೆಸಿದರು.

ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ವಿತರಣೆಗೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಜನರು ಯಾವುದೇ ಸುಳ್ಳು ವದಂತಿಯನ್ನು ನಂಬುವ ಅಗತ್ಯವಿಲ್ಲ. ಆದರೂ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಸುಳ್ಳು ಸುದ್ದಿಗೆ ಜನ ಭಯಗೊಂಡು ಬಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯ ಕಂಡುಬಂದಿದೆ.

ಬೆಂಗಳೂರಿನಲ್ಲಿ ಇಂದಿನಿಂದ ಟೋಯಿಂಗ್ ಮತ್ತೆ ಆರಂಭ: ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಟೋಯಿಂಗ್ ಕಾರ್ಯಾಚರಣೆ ಪುನರ್ ಪ್ರಾರಂಭವಾಗಲಿದೆ.

ಜಿಬಿಎ ಮತ್ತು ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು, ವಾಹನಗಳು ಹಾಗೂ ಸಿಬ್ಬಂದಿ ಸುರಕ್ಷತೆಗೆ ವಿಶೇಷ ಗಮನ ಹರಿಸಲಾಗಿದೆ.

ಟೋಯಿಂಗ್ ಇಲ್ಲದ ಕಾರಣ ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡೋದು, ಅಡ್ಡಾದಿಡ್ಡಿ ನಿಲ್ಲಿಸಿ ಹೋಗೋದು, ಹಳೆಯ ವಾಹನಗಳನ್ನು ಪಾರ್ಕ್ ಮಾಡಿ, ತಿಂಗಳಗಟ್ಟಲೇ ರಸ್ತೆಯಲ್ಲೇ ಬಿಡ್ತಿದ್ದ ಕಾರಣದಿಂದಾಗಿ ನಗರದಲ್ಲಿ ಇತ್ತೀಚಿಗೆ ಟ್ರಾಫಿಕ್ ಜಾಸ್ತಿಯಾಗಿದೆ. ಇದರ ಬಗ್ಗೆ ದೂರುಗಳು ಬಂದ ಹಿನ್ನೆಲೆ ಕೆಲ ದಿನಗಳ ಹಿಂದಷ್ಟೆ ಡಿಸಿಎಂ ಡಿಕೆ ಶಿವಕುಮಾರ್ ನಗರದಲ್ಲಿ ಮತ್ತೆ ಟೋಯಿಂಗ್ ಆರಂಭಿಸೋ ಬಗ್ಗೆ ಹೇಳಿಕೆ ನೀಡಿದ್ರು. ಈ ಹೇಳಿಕೆ ಬೆನ್ನಲ್ಲೆ ಅಲರ್ಟ್ ಆಗಿದ್ದ ಪೊಲೀಸ್ ಇಲಾಖೆ, ಟೋಯಿಂಗ್ ಮಾಡೋಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ.

ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ತಲಾ ಎರಡು ಟೋಯಿಂಗ್ ವಾಹನಗಳು ನೀಡಲಿದ್ದು, ಪ್ರತಿ ತಂಡದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್, ಒಬ್ಬ ಕಾನ್‌ಸ್ಟೇಬಲ್ ಮತ್ತು ನಾಲ್ಕು ಜಿಬಿಎ ಸಿಬ್ಬಂದಿ ನೇಮಕಗೊಂಡಿದ್ದಾರೆ. ಟೋಯಿಂಗ್ ವಾಹನಗಳಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಯಾವುದೇ ಗಲಾಟೆ ಅಥವಾ ಅವಘಡವನ್ನು ದಾಖಲು ಮಾಡಲಾಗುತ್ತದೆ.

ಮುಖ್ಯವಾಗಿ ಅತಿ ಹೆಚ್ಚು ಟ್ರಾಫಿಕ್ ಇರುವ ರಸ್ತೆಗಳು ಮತ್ತು ನೋ ಪಾರ್ಕಿಂಗ್ ಜಾಗಗಳು ಟೋಯಿಂಗ್ ಕಾರ್ಯಾಚರಣೆಯ ಕೇಂದ್ರವಾಗಿವೆ. ಹಿರಿಯ ಅಧಿಕಾರಿಗಳು ಸಿಬ್ಬಂದಿಯ ವರ್ತನೆ ಮೇಲೂ ಕಣ್ಣಿಡಲಿದ್ದಾರೆ.

 

ಕಾರು ಡ್ರಿಫ್ಟಿಂಗ್ ಪ್ರಕರಣ: ವಿಚಾರಣೆ ಬಳಿಕ ರಿಕ್ಕಿ ರೈಯನ್ನ ಹಿಂಬಾಗಿಲಿನಿಂದ ಕಳುಹಿಸಿದ ಪೊಲೀಸರು

ಬೆಂಗಳೂರು: ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣ ಸಂಬಂಧ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿಚಾರಣೆಗೆ ಹಾಜರಾಗಿದ್ದು, ವಿಚಾರಣೆ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ಅವರನ್ನು ಹಿಂಬಾಗಿಲಿನಿಂದ ಹೊರಬಿಟ್ಟಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಕ್ರಮವು ತೀವ್ರ ಚರ್ಚೆಗೆ ಕಾರಣವಾಗಿದೆ.

ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ವಕೀಲರೊಂದಿಗೆ ಹಾಜರಾದ ರಿಕ್ಕಿ ರೈ ವಿಚಾರಣೆಗೆ ಒಳಗಾದರು. ವಿಚಾರಣೆ ಮುಗಿದ ನಂತರ ಮಾಧ್ಯಮದ ಕಣ್ಣಿಗೆ ತಪ್ಪಿಸಿ, ಹಿಂಬಾಗಿಲು ಮೂಲಕ ಬಿಡುಗಡೆ ಮಾಡಲಾಗಿದೆ. ಈ ಕ್ರಮ ಸಾರ್ವಜನಿಕರಲ್ಲಿ ಕುತೂಹಲ ಮತ್ತು ಚರ್ಚೆ ಹುಟ್ಟಿಸಿದೆ.

ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಎಸಿಎಂಎಂ ಕೋರ್ಟ್ ರಿಕ್ಕಿ ರೈಗೆ ನಿರೀಕ್ಷಣಾ ಜಾಮೀನು ನೀಡಿದೆ. ಬಿಎನ್‌ಎಸ್ 184 ಅಡಿ ಎಫ್‌ಐಆರ್ ದಾಖಲಾಗಿದ್ದ ಹಿನ್ನೆಲೆ, ಕೋರ್ಟ್‌ನಲ್ಲಿ ಖುದ್ದಾಗಿ ಹಾಜರಾಗಿರುವ ರಿಕ್ಕಿ ರೈ 1 ಲಕ್ಷ ರೂ. ಬಾಂಡ್ ಮತ್ತು ಶ್ಯೂರಿಟಿ ಹೊಂದಿ ಜಾಮೀನು ಪಡೆದಿದ್ದಾರೆ. ತನಿಖೆಗೆ ಸಹಕರಿಸಲು ಸೂಚನೆ ನೀಡಲಾಗಿದೆ.

ರಿಕ್ಕಿ ರೈ ಪರ ವಕೀಲ ನಾರಾಯಣ ಸ್ವಾಮಿ ಮಾಧ್ಯಮಗಳಿಗೆ ವಿವರಿಸಿದರು: “ಕಾರಿನಲ್ಲಿ ಬ್ರೇಕ್ ತೊಂದರೆ ಆಗಿದ್ದು, ಡ್ರೈವರ್‌ನ ತಪ್ಪು. ರಿಕ್ಕಿ ರೈ ಯಾವುದೇ ಡ್ರಿಫ್ಟಿಂಗ್ ಮಾಡಿದ್ದಾರೆ ಅಥವಾ ಉದ್ದೇಶಪೂರ್ವಕ ಕ್ರೇಜ್ ಹೊಂದಿಲ್ಲ. ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಅರ್ಥವಾಗುತ್ತಿಲ್ಲ” ಎಂದಿದ್ದಾರೆ.

ರಾಜ್ಯದೆಲ್ಲೆಡೆ ಇಂದು ಮಳೆ ಆರ್ಭಟ? 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರು: ರಾಜ್ಯದ ಕರಾವಳಿ ಸೇರಿ ಹತ್ತಾರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಗದಗ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ದಾವಣಗೆರೆ, ಬಳ್ಳಾರಿ, ವಿಜಯನಗರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿಯೂ ಗುಡುಗು ಸಿಡಿಲು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

error: Content is protected !!