Home Blog Page 3

ಪುಲಿಗೆರೆ ಉತ್ಸವದಲ್ಲಿ ಚಿತ್ರಕಲಾ ಶಿಬಿರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬೆಂಗಳೂರಿನ ಇನ್ಫೋಸಿಸ್ ಪ್ರತಿಷ್ಠಾನದಿಂದ ನಡೆದ `ಪುಲಿಗೆರೆ ಉತ್ಸವ’ ಸಂದರ್ಭದಲ್ಲಿ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಲಕ್ಷ್ಮೇಶ್ವರ ದೃಶ್ಯ ವಲ್ಲರಿ ಚಿತ್ರಕಲಾ ಶಿಬಿರ ಆಯೋಜಿಸಲಾಗಿತ್ತು. ಈ ಚಿತ್ರ ಕಲಾ ಶಿಬಿರದಲ್ಲಿ ಕಲಾವಿದರು ಬಿಡಿಸಿದ ಲಕ್ಷ್ಮೇಶ್ವರದಲ್ಲಿರುವ ಪ್ರಾಚೀನ ದೇವಸ್ಥಾನ, ಸ್ಮಾರಕಗಳ ಎಲ್ಲ ಚಿತ್ರಗಳು ಭಾನುವಾರ ಸೋಮೇಶ್ವರ ದೇವಸ್ಥಾನದಲ್ಲಿ ಪ್ರದರ್ಶನಗೊಂಡು ಕಲಾರಸಿಕರ ಮನಸೂರೆಗೊಂಡವು.

ಕಲಾವಿದರು ಲಕ್ಷ್ಮೇಶ್ವರದ ಸೋಮೇಶ್ವರ, ಗೊಲ್ಲಾಳೇಶ್ವರ, ಲಕ್ಷ್ಮಿಲಿಂಗನ ದೇವಸ್ಥಾನ, ಬಸದಿ, ಮಸೀದಿ, ಜಾನಪದಗಳ ಶಿಲ್ಪಕಲೆಯನ್ನು ತಮ್ಮ ಕೈ ಚಳಕದಿಂದ ಚಿತ್ರಿಸುವ ಮೂಲಕ ನಾಡಿನ ಸಂಸ್ಕೃತಿ ಪರಂಪರೆಯನ್ನು ಜೀವಂತಗೊಳಿಸುವ ಪ್ರಯತ್ನ ಮಾಡಿದ್ದರು. ಕಲಾ ಶಿಬಿರದಲ್ಲಿ ವಿವಿಧ ಜಿಲ್ಲೆಗಳ ಕಲಾವಿದರಾದ ರಾಜು ತೇರದಾಳ, ಮಾರುತಿ, ಹೇಮರೆಡ್ಡಿ ಎನ್, ಶಂಕರ ಕಡಕುಂಟ್ಲ, ಗಂಗಧರ ಬಿ, ಪೂನಂ ಬಸವಾ, ಕೌಶಿಕ ಹೆಗಡೆ, ಮಹೇಶ ಹೊನಲು, ಕೌಶಿನಾಥ ಕಾಳೆ ಮತ್ತು ಲಕ್ಷ್ಮೇಶ್ವರದ ಚಿತ್ರಕಲಾ ಶಿಕ್ಷಕ ಪ್ರವೀಣ ಗಾಯಕರ ಸೇರಿದಂತೆ ಒಟ್ಟು 10 ಕಲಾವಿದರಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಭಾರತೀಯ ವಿದ್ಯಾಭವನದ ನಿರ್ದೇಶಕಿ ನಾಗಲಕ್ಷ್ಮಿ ರಾವ್, ನಮ್ಮ ಸಾಂಸ್ಕೃತಿಕ ಲೋಕದ ಗತವೈಭವವನ್ನು ಭವಿಷ್ಯದ ದಿನಗಳಿಗೆ ಪರಿಚಯಿಸುವ ಮಹತ್ತರ ಕಾರ್ಯ ಕಲಾವಿದರದ್ದಾಗಿದೆ. ಅವರ ಕಲಾ ಪ್ರತಿಭೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಕಾರ್ಯಕ್ಕೆ ಭಾರತೀಯ ವಿದ್ಯಾಭವನ ಕೈ ಜೋಡಿಸುತ್ತಿದೆ. ನಾಡಿನ ಅನೇಕ ಕಲಾವಿದರಿಂದ ಇಲ್ಲಿನ ಶಿಲ್ಪಕಲೆಗಳ ಕುರಿತ ಚಿತ್ರಗಳನ್ನು ಬರೆಸುವ ಎಲ್ಲ ಚಿತ್ರಗಳನ್ನು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸಂರಕ್ಷಿಸಿ ಪ್ರದರ್ಶಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಈ ವೇಳೆ ಗೋವಿಂದ ಕುಲಕರ್ಣಿ, ಜಿ.ಎಸ್. ಗುಡಗೇರಿ, ರಾಘವೇಂದ್ರ ಪೂಜಾರ ಸೇರಿ ಸೋಮೇಶ್ವರ ಭಕ್ತರ ಸೇವಾ ಕಮಿಟಿಯ ಸದಸ್ಯರು ಇದ್ದರು.

ಸಮಾಜದ ಉನ್ನತಿಗೆ ವಚನ ಸಾಹಿತ್ಯ ಮುಖ್ಯ:ತೋಂಟದ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ಗದಗ : 12ನೇ ಶತಮಾನದ ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಅಡಗಿವೆ. ಸಮಾಜದ ಉನ್ನತಿಗೆ, ಮಾನವನ ಬದುಕಿಗೆ ವಚನಸಾಹಿತ್ಯ ಮುಖ್ಯ ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2689ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಬೆಳೆಯಬೇಕಾದರೆ ವಚನಗಳನ್ನು ಕಲಿಸುವುದು ಅನಿವಾರ್ಯ. ಬದುಕಿಗೆ ಬೆಳಕನ್ನು ಮತ್ತು ಆದರ್ಶಗಳನ್ನು ಕಲಿಸಿಕೊಡುವ ಕೆಲಸವನ್ನು ವಚನಗಳು ಮಾಡುತ್ತವೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ವಿದ್ಯೆ, ವಿನಯ, ಶಿಸ್ತು, ಸೌಜನ್ಯ ರೂಢಿಸಿಕೊಳ್ಳಬೇಕು ಎಂದರು.

ಅಕ್ಕಮಹಾದೇವಿ ಮಹಿಳಾ ವಿ.ವಿ. ವಿಜಯಪುರದ ವಿಶ್ರಾಂತ ಉಪಕುಲಪತಿ ಪ್ರೊ. ವಿ.ಬಿ. ಮಾಗನೂರ ಉಪನ್ಯಾಸ ನೀಡಿ, ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಮೌಢ್ಯತೆಗಳನ್ನು ಹೋಗಲಾಡಿಸಲು ಶಿಕ್ಷಣ ಬಹಳ ಮುಖ್ಯವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿಗಳು. ಬುದ್ಧ-ಬಸವ-ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಂಗಮೇಶ್ವರ ದೇವರು ಮಾತನಾಡಿ, ಆಧ್ಯಾತ್ಮ ಎಂದರೆ ಪರಮಸತ್ಯವನ್ನು ಅರಿಯುವುದು. ಜಗತ್ತಿನಲ್ಲಿ ಬಾಳಿ ಬೆಳಗಿದ ಸಂತರು, ಶರಣರು, ಜ್ಞಾನಿಗಳು, ದಾಸರು, ದಾರ್ಶನಿಕರು ಜೀವನದುದ್ದಕ್ಕೂ ಒಳ್ಳೆಯದನ್ನು ಕೇಳಿದರು, ಒಳ್ಳೆಯದನ್ನು ನೋಡಿದರು, ಒಳ್ಳೆಯ ಕಾರ್ಯಗಳನ್ನು ಮಾಡಿದರು. ಮನಸ್ಸಿನ ತುಂಬೆಲ್ಲಾ ಒಳ್ಳೆಯ ಆಲೋಚನೆಗಳನ್ನು ತುಂಬಿಕೊAಡು ಬಹಳ ದೊಡ್ಡವರಾದರು, ಶ್ರೇಷ್ಠರಾದರು. ಸತ್ಯ-ಅಸತ್ಯ, ಧರ್ಮ-ಅಧರ್ಮ ಇವೆಲ್ಲವುಗಳನ್ನು ಪರಾಮರ್ಶಿಸಿ ಬದುಕಿದ್ದಾರೆ ಎಂದು ಹೇಳಿದರು.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ. ರೇಣುಕಾ ವೀರಪ್ಪ ತಾಳಿ ಅವರನ್ನು ಸಂಮಾನಿಸಲಾಯಿತು.

ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಸಂಗಡಿಗರು ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಕೋಮಲ ಅನಿಲಗೌಡ ಅಳಗುಂಡಿ, ವಚನ ಚಿಂತನೆಯನ್ನು ಅಮೃತಾ ಯಲ್ಲನಗೌಡ ಅಳಗುಂಡಿ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಕೊಂಡಿದ್ದ ಕೆವಿಎಸ್‌ಆರ್ ಕಾಲೇಜಿನ ವಿಶ್ರಾಂತ ಉಪನ್ಯಾಸಕ ಪ್ರೊ. ವೀರಪ್ಪ ಬಸಪ್ಪ ತಾಳಿ, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ-೨೦೨೪ರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಪೂಜ್ಯರು ಸಂಮಾನಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಎಸ್.ವ್ಹಿ. ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚೆಗೆ ಹುಬ್ಬಳ್ಳಿ ನಗರದ ಕಾಲೇಜ್ ಕ್ಯಾಂಪಸ್‌ನಲ್ಲಿ ಹಾಡುಹಗಲೇ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತನಿಖೆ ಕೈಗೊಂಡು ತಪ್ಪಿತಸ್ಥನಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಬದಲು ವ್ಯಕ್ತಿಗತ ಕಾರಣಗಳಿಂದ ಈ ಕೃತ್ಯ ಜರುಗಿದೆ, ಆರೋಪಿ ಅಮಾಯಕ ಎಂಬಂತೆ ಸಚಿವರೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ತನಿಖೆ ಕೈಗೊಳ್ಳುವ ಅಧಿಕಾರಿಗಳ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಪರಿಜ್ಞಾನವಿಲ್ಲದ ಗೃಹಮಂತ್ರಿಗಳ ಹೇಳಿಕೆ ಖಂಡನೀಯವಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರಕಾರ ಅಸಮರ್ಥವಾಗಿದೆ ಎಂದು ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ ಆರೋಪಿಸಿದರು.

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗು ನ್ಯಾಯಪರ ತನಿಖೆಯನ್ನು ಚುರುಕುಗೊಳಿಸಿ, ತಪ್ಪಿತಸ್ಥ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಮಾತನಾಡಿ, ಕಳೆದ 8-10 ದಿನಗಳಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ 8ಕ್ಕೂ ಹೆಚ್ಚು ಸರಣಿ ಹತ್ಯೆಗಳು ನಡೆದಿದ್ದು, ರಾಜ್ಯದ ಜನರನ್ನು ಆತಂಕಕ್ಕೀಡುಮಾಡಿದೆ. ಇದರಿಂದಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿರುವದು ಕಂಡುಬರುತ್ತದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅನಿಲ ಮೆಣಸಿನಕಾಯಿ, ಬಸವರಾಜ ಇಟಗಿ, ಎಂ.ಎಂ. ಹಿರೇಮಠ, ರಾಜು ಕುಲಕರ್ಣಿ, ಎಂ.ಎಸ್. ಕರಿಗೌಡರ, ಅನಿಲ ಅಬ್ಬಿಗೇರಿ, ಜಗನ್ನಾಥಸಾ ಭಾಂಡಗೆ, ಸುರೇಶ ಚಿತ್ತರಗಿ, ಭದ್ರೇಶ ಕುಸ್ಲಾಪೂರ, ಬಾಬು ಸುಂಕದ, ದ್ಯಾಮಣ್ಣ ನೀಲಗುಂದ, ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ಪಕ್ಕಿರೇಶ ರಟ್ಟಿಹಳ್ಳಿ, ವೀರಣ್ಣ ಅಂಗಡಿ, ಸಂತೋಷ ಅಕ್ಕಿ, ಪುನಿತ್ ಬೆನಕನವಾರಿ, ರವಿ ನೆರೆಗಲ್, ರವಿ ದಂಡಿನ, ರಾಜೇಂದ್ರಪ್ರಸಾದ ಹೊನ್ನಗಲ್, ಕೆ.ಪಿ. ಕೋಟಿಗೌಡರ, ಡಿ.ಬಿ. ಕರಿಗೌಡ್ರ, ಅಶೋಕ ಕರೂರ, ರಾಘವೇಂದ್ರ ಯಳವತ್ತಿ, ಮಂಜುನಾಥ ಶಾಂತಗೇರಿ, ನಿಂಗಪ್ಪ ಹುಗ್ಗಿ, ವಂದನಾ ವರ್ಣೇಕರ್, ಶಶಿಧರ ದಿಂಡೂರ, ವಿಜಯಲಕ್ಷ್ಮಿ ಮಾನ್ವಿ, ಅಶ್ವಿನಿ ಜಗತಾಪ, ರೆಖಾ ಬಂಗಾರಶೆಟ್ಟರ, ನಿರ್ಮಲಾ ಕೊಳ್ಳಿ, ಸ್ವಾತಿ ಅಕ್ಕಿ, ಉಷಾ ದಾಸರ, ಪದ್ಮಾ ಮುತ್ತಲದಿನ್ನಿ, ರವಿ ವಗ್ಗನವರ, ರಮೇಶ ಸಜ್ಜಗಾರ, ಅಮರನಾಥ ಬೆಟಗೇರಿ, ಅಶ್ವಿನಿ ಅಂಕಲಕೋಟಿ, ಪವಿತ್ರಾ ಕಲ್ಕುಟರ, ಜ್ಯೋತಿ ಪಾಯಪ್ಪಗೌಡ್ರ, ಪಾರ್ವತಿ ಪಟ್ಟಣಶೆಟ್ಟಿ, ಕಮಲಾಕ್ಷಿ ಗೊಂದಿ, ವಿದ್ಯಾವತಿ ಗಡಗಿ, ಪಾರ್ವತಿ ಪಟ್ಟಣಶೆಟ್ಟಿ, ರತ್ನಾ ಕುರಗೊಡ, ಸುಧೀರ ಕಾಟಿಗಾರ, ವಿನಾಯಕ ಹಬೀಬ, ನಾಗರಾಜ ತಳವಾರ, ವಿನೋದ ಹೌಸನೂರು ಮುಂತಾದವರು ಇದ್ದರು.

ಅಲ್ಪಸಂಖ್ಯಾತರ ತುಷ್ಟೀಕರಣ, ಹಿಂದೂಗಳ ಮೇಲಿನ ದ್ವೇಷದ ರಾಜಕಾರಣ, ಅಮಾಯಕ ಹಿಂದೂ ಹೆಣ್ಣುಮಕ್ಕಳ ಕಗ್ಗೊಲೆ, ಜೈ ಶ್ರೀರಾಮ್ ಎಂದು ಕೂಗಿದವರ ಮೇಲೆ ಹಲ್ಲೆ, ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಪುರಸ್ಕಾರ ಹೀಗೆ ಮತೀಯ ಭಾವನೆಯಿಂದ ಸರ್ಕಾರವನ್ನು ನಡೆಸುತ್ತಿರುವದು ಖಂಡನೀಯ ಎಂದು ರಾಜು ಕುರುಡಗಿ ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿ ಫಯಾಜ್‌ಗೆ ಗಲ್ಲುಶಿಕ್ಷೆ ವಿಧಿಸಿ : ಬಿ.ಎಸ್. ನೇಮಗೌಡ

0

ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ನಗರದ ಜನರಲ್ ಕಾರ್ಯಪ್ಪ ಸರ್ಕಲ್ (ಹಳೇ ಜಿಲ್ಲಾಧಿಕಾರಿ ಕಚೇರಿ ವೃತ್ತ)ದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಂತರ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಆರೋಪಿ ಫಯಾಜ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ವಿದ್ಯಾರ್ಥಿಗಳ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಜಿಲ್ಲಾಧಿಕಾರಿಗಳು ಆಗಮಿಸಲೇಬೇಕು ಎಂದು ಪ್ರತಿಭಟನೆ ಮುಂದುವರಿಸಿದರು.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠರನ್ನು ಹಾಡುಹಗಲೇ ಕಾಲೇಜ್ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೊಲೆ, ದರೋಡೆ, ಹಲ್ಲೆಗಳಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಣ್ಮುಚ್ಚಿ ಕುಳಿತಿದೆ. ಹತ್ಯೆಯ ಪ್ರಕರಣಗಳಲ್ಲಿ ವೈಯಕ್ತಿಕ ಕಾರಣ ಎಂಬ ಹೇಳಿಕೆ ನೀಡುವ ಮೂಲಕ ಹಲ್ಲೆಕೋರರಿಗೆ ಬಹಿರಂಗವಾಗಿ ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಹುಬ್ಬಳ್ಳಿ ನಗರದ ಕಾಲೇಜ್ ಕ್ಯಾಂಪಸ್‌ನಲ್ಲಿ ಹಾಡುಹಗಲೇ ವಿದ್ಯಾರ್ಥಿನಿ ನೇಹಾಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತನಿಖೆ ಕೈಗೊಂಡು ತಪ್ಪಿತಸ್ಥನಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಬದಲು ತನಿಖೆಗೂ ಮುನ್ನವೇ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗೃಹಮಂತ್ರಿಗಳು ವ್ಯಕ್ತಿಗತ ಕಾರಣಗಳಿಂದ ಈ ಕೃತ್ಯ ಜರುಗಿದೆ ಎಂದು ನೀಡಿರುವ ಹೇಳಿಕೆಗಳು ಖಂಡನೀಯ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಮಾತನಾಡಿ, ಕಳೆದ 8-10 ದಿನಗಳಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ 8ಕ್ಕೂ ಹೆಚ್ಚು ಸರಣಿ ಹತ್ಯೆಗಳು ನಡೆದಿದ್ದು, ರಾಜ್ಯದ ಜನರಲ್ಲಿ ಆತಂಕ ಹೆಚ್ಚಿಸಿದೆ. ಇದರಿಂದಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿರುವದು ಮೇಲ್ನೊಟಕ್ಕೆ ಕಂಡುಬರುತ್ತದೆ ಎಂದರು.

ಪ್ರತಿಭಟನೆಯ ಸಂದರ್ಭದಲ್ಲಿ ಮುಖಂಡರಾದ ಅನಿಲ ಮೆಣಸಿನಕಾಯಿ, ಬಸವರಾಜ ಇಟಗಿ, ಎಂ.ಎಂ. ಹಿರೇಮಠ, ರಾಜು ಕುಲಕರ್ಣಿ, ಎಂ.ಎಸ್. ಕರಿಗೌಡರ, ಜಗನ್ನಾಥಸಾ ಭಾಂಡಗೆ, ಸುರೇಶ ಚಿತ್ತರಗಿ, ಭದ್ರೇಶ ಕುಸ್ಲಾಪೂರ, ಬಾಬು ಸುಂಕದ, ದ್ಯಾಮಣ್ಣ ನೀಲಗುಂದ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಕ್ರಮ ಕೈಗೊಳ್ಳುವುದು ಹಾಗು ನ್ಯಾಯಪರ ತನಿಖೆಯನ್ನು ಚುರುಕುಗೊಳಿಸಿ ತಪ್ಪಿತಸ್ಥ ವ್ಯಕ್ತಿಯನ್ನು ಶಿಕ್ಷಿಸುವ ಕುರಿತು ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ಮನವಿ ಸಲ್ಲಿಸಲಾಯಿತು.

ದೇಶದ ಭವಿಷ್ಯ ಬರೆವ ಚುನಾವಣೆ

0

ವಿಜಯಸಾಕ್ಷಿ ಸುದ್ದಿ, ಗದಗ : ಅಧಿಕಾರಕ್ಕೆ ಬಂದ ಕೇವಲ ಹತ್ತು ತಿಂಗಳೊಳಗೆ ಭರವಸೆ ನೀಡಿದ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿದ್ದು ಕಾಂಗ್ರೆಸ್ ಸರ್ಕಾರ. ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ 25 ಗ್ಯಾರಂಟಿಗಳನ್ನು ನೀಡಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬಂದ ಕ್ಷಣವೇ ಕೊಟ್ಟ ಮಾತಿನಂತೆ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮನವಿ ಮಾಡಿದರು.

ಗದಗ ಜಿಲ್ಲೆಯ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ಬಾಲೆಹೊಸೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆ ಹಾಗೂ ರೋಡ್‌ಶೋ ನಡೆಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮುಂಡರಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಪೂಜ್ಯ ಶ್ರೀಗಳ ಆಶೀರ್ವಾದ ಪಡೆದರು. ಮಾಜಿ ಶಾಸಕರು ರಾಮಕೃಷ್ಣ ದೊಡ್ಮನಿ, ಸುಜಾತಾ ದೊಡ್ಮನಿ ಸೇರಿದಂತೆ ಕಾರ್ಯಕರ್ತರು ಇದ್ದರು.

ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ಶ್ರಮಿಸಿದೆ:ಆನಂದಸ್ವಾಮಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಅಪಹಾಸ್ಯ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಅವರು ಸೋಮವಾರ ಶಿರಹಟ್ಟಿಯಲ್ಲಿ ಲೋಕಸಭಾ ಚುನಾವಣೆ ಪ್ರಚಾರದ ನಿಮಿತ್ತ ಪ್ರಮುಖ ಬೀದಿಗಳಲ್ಲಿ ರೋಡ್‌ಶೋ ನಡೆಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ದೇಶದ ಅಭಿವೃದ್ಧಿಗೆ ಶ್ರಮಿಸಿದೆ. ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿ ಎಲ್ಲ ವರ್ಗದವರ ಹಿತವನ್ನು ಕಾಪಾಡುತ್ತಾ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ಆದ್ದರಿಂದ ಕೇಂದ್ರದಲ್ಲೂ ಸಹ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಹಕರಿಸಿ ಎಂದರು.

ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಗುರುನಾಥ ದಾನಪ್ಪನವರ, ಸುಜಾತಾ ದೊಡ್ಡಮನಿ ಮಾತನಾಡಿದರು.

ಬ್ಲಾಕ್ ಅಧ್ಯಕ್ಷ ಹುಮಾಯೂನ್ ಮಾಗಡಿ, ದೇವಪ್ಪ ಲಮಾಣಿ, ಡಿ.ಕೆ. ಹೊನ್ನಪ್ಪನವರ, ಮೈಲಾರೆಪ್ಪ ಹಾದಿಮನಿ, ಶಿವನಗೌಡ ಪಾಟೀಲ, ಚನ್ನಪ್ಪ ಜಗಲಿ, ವಿ.ಪಿ. ಮಠಪತಿ, ಪರಮೇಶ ಪರಬ, ರಾಜಣ್ಣ ಕುಂಬಿ, ಬುಡನಶ್ಯಾ ಮಕಾನದಾರ, ಹೊನ್ನಪ್ಪ ಶಿರಹಟ್ಟಿ, ಅಶ್ರತಅಲಿ ಢಾಲಾಯತ, ಎಂ.ಸಿ. ಹಿರೇಮಠ, ಮುತ್ತುರಾಜ ಭಾವಿಮನಿ, ಮಹಾಂತೇಶ ದಶಮನಿ, ಅಜ್ಜು ಪಾಟೀಲ, ಜಗದೀಶ ಗಾಂಜಿ, ಮಾಬುಸಾಬ ಲಕ್ಷ್ಮೇಶ್ವರ, ವಿರುಪಾಕ್ಷಪ್ಪ ನಂದೆಣ್ಣವರ ಮುಂತಾದವರು ಉಪಸ್ಥಿತರಿದ್ದರು.

ಸರಳ ವಿವಾಹ ಉತ್ತಮ ನಿರ್ಧಾರ

0

ವಿಜಯಸಾಕ್ಷಿ ಸುದ್ದಿ, ಡಂಬಳ : ಸಾಲ ಮಾಡಿ ಮದುವೆ ಮಾಡಿಕೊಳ್ಳುವುದಕ್ಕಿಂತ, ಹಣ ಉಳಿತಾಯದ ಜೊತೆಗೆ ಸರಳ- ಸಾಮೂಹಿಕ ಮದುವೆ ಮಾಡಿಕೊಳ್ಳುವುದು ಉತ್ತಮ ನಿರ್ಧಾರ ಎಂದು ವಿರಪಾಪುರದ ಗುರು ಮುದಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಡಂಬಳ ಹೋಬಳಿಯ ಪೇಠಾ ಆಲೂರ ಗ್ರಾಮದ ಶ್ರೀ ಹಾಲೇಶ್ವರ 46ನೇ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂತಹ ದುಬಾರಿ ಸಮಯದಲ್ಲಿ ಮನೆ ಕಟ್ಟುವುದು ಮತ್ತು ಮದುವೆ ಮಾಡುವುದು ಬಹಳ ಕಷ್ಟದ ಕೆಲಸ. ಜೊತೆಗೆ ಆರ್ಥಿಕ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಇದನ್ನು ಮನಗಂಡು ತ್ರಿವಿಧ ದಾಸೋಹಿ ಹಾಲೇಶ್ವರ ಶಿವಶರಣರು ಪ್ರತಿ ವರ್ಷ ಬಡವರಿಗಾಗಿ 450ಕ್ಕೂ ಹೆಚ್ಚು ಜೋಡಿಗಳಿಗೆ ಮದುವೆ ಮಾಡಿಸಿದ್ದು ಪ್ರಶಂಸನೀಯ ಎಂದು ಹೇಳಿದರು.

ತ್ರಿವಿಧ ದಾಸೋಹಿ ಹಾಲೇಶ್ವರ ಶಿವಶರಣರು ಮಾತನಾಡಿ, ಸಾಮೂಹಿಕ ಮದುವೆ ಮೂಲಕ ಗುರು-ಹಿರಿಯರ, ಮಠಾದೀಶರ ಆಶೀರ್ವಾದಕ್ಕೆ ಭಾಜನರಾದ ನೀವೇ ಧನ್ಯರು. ನಿಮ್ಮ ನವ ದಾಂಪತ್ಯ ಜೀವನ ಸುಖಕರವಾಗಲಿ ಎಂದು ಹಾರೈಸಿದರಲ್ಲದೆ, ದಾಂಪತ್ಯ ಜೀವನದಲ್ಲಿ ಕೋಪ ಮತ್ತು ದುಡುಕಿನ ನಿರ್ಧಾರಗಳನ್ನು ಬದಿಗಿಟ್ಟು ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಸೊಸೆಯನ್ನು ನಿಮ್ಮ ಮನೆಯ ಮಗಳಂತೆ ಕಂಡರೆ ನಿಮ್ಮ ಮನೆ ಅನೋನ್ಯತೆಯ ಕೇಂದ್ರವಾಗಿರುತ್ತದೆ ಎಂದು ಕಿವಿಮಾತನ್ನು ಹೇಳಿದರು.

ಈ ಸಂದರ್ಭದಲ್ಲಿ 8 ಜೋಡಿಗಳು ಕಂಕಣ ಭಾಗ್ಯ ಪಡೆದರು. ಈರಮ್ಮ ಬ್ಯಾಲಿಹಾಳ ಕುಟುಂಬದವರಿಂದ ಅನ್ನಸಂತರ್ಪಣೆ ಜರುಗಿತು. ಕಾರ್ಯಕ್ರಮದಲ್ಲಿ ಹಾಲೇಶ್ವರ ಮಠದ ಕಾರ್ಯದರ್ಶಿ ವೇ.ಮೂ ಪಂಚಾಕ್ಷರಯ್ಯ ಹಿರೇಮಠ, ವೇ.ಮೂ. ಮಲ್ಲಯ್ಯ ಹಿರೇಮಠ, ಈರಮ್ಮ ಬ್ಯಾಲಿಹಾಳ, ಚಂದ್ರು ನಾಗರಡ್ಡಿ, ನಾಗಪ್ಪ ಚಿಕರಡ್ಡಿ, ವೀರನಗೌಡ ಸುಳ್ಳದ, ಶರಣಪ್ಪ ಬೂತರಡ್ಡಿ, ರವಿ ಚಾಕಲಬ್ಬಿ, ಹಾಲೇಶ ಸೂಡಿ, ಶರಣಪ್ಪ ಪರಡ್ಡಿ, ಮುನಿಯಪ್ಪ ಯು, ಹಾಲೇಶ್ವರ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಗುರುವೃಂದದವರು, ಗ್ರಾಮಸ್ಥರು ಇದ್ದರು.

ದೇವಸ್ಥಾನದ ಕಳಸಾರೋಹಣ ಇಂದು

0

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಆದಿತ್ಯ ನಗರದಲ್ಲಿ ಶ್ರೀ ಮಾರುತಿ ವಿವಿಧೋದ್ದೇಶಗಳ ಸೇವಾ ಸಂಘದ ವತಿಯಿಂದ ಶ್ರೀ ಮಾರುತಿ, ಶ್ರೀ ಗಣೇಶ, ಶ್ರೀ ಈಶ್ವರ ನಂದಿ, ಶ್ರೀ ಅನ್ನಪೂರ್ಣೇಶ್ವರಿ, ನವಗ್ರಹ ದೇವಸ್ಥಾನಗಳ ಕಳಸಾರೋಹಣ ಹಾಗೂ ಹನುಮ ಜಯಂತಿ ಕಾರ್ಯಕ್ರಮದ ಅಂಗವಾಗಿ ಸೋಮವಾರ ಸಾಯಂಕಾಲ ಮಹಿಳೆಯರ ಪೂರ್ಣ ಕುಂಭದೊಂದಿಗೆ ಆರತಿ, ಭಜನೆ, ಡೊಳ್ಳು, ವಾದ್ಯ ಮೇಳಗಳೊಂದಿಗೆ ಪಂಚ ಕಳಸಗಳ ಭವ್ಯ ಮೆರವಣಿಗೆ ಜರುಗಿತು.

ಏ. 23ರ ಬೆಳಿಗ್ಗೆ 4.30ಕ್ಕೆ ಮಹಾಗಣಪತಿ, ನವಗ್ರಹ ಹೋಮ, ರುದ್ರಾಭಿಷೇಕ, 7 ಗಂಟೆಗೆ ದೇವಸ್ಥಾನಗಳ ಕಳಸಾರೋಹಣ, 8 ಗಂಟೆಗೆ ಬಾಲ ಹನುಮನ ತೊಟ್ಟಿಲೋತ್ಸವ ಜರುಗಲಿದೆ. 9 ಗಂಟೆಗೆ ಧರ್ಮ ಚಿಂತನ ಸಭೆ ಜರುಗಲಿದ್ದು, ಸಭೆಯ ದಿವ್ಯ ಸಾನ್ನಿಧ್ಯವನ್ನು ಮಲ್ಲಸಮುದ್ರದ ಓಂಕಾರೇಶ್ವರ ಹಿರೇಮಠದ ಶ್ರೀ ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಅಡ್ನೂರಿನ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ನೀಲಗುಂದ ಗುದ್ನೇಶ್ವರ ಮಠದ ಶ್ರೀ ಪ್ರಭುಲಿಂಗದೇವರು, ನಂದಿವೇರಿಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ಜರುಗಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಸಿರಿಧಾನ್ಯ ಭಾರತೀಯರ ಸಾಂಪ್ರದಾಯಿಕ ಆಹಾರ

0

ವಿಜಯಸಾಕ್ಷಿ ಸುದ್ದಿ, ಗದಗ : ಭಾರತಕ್ಕೆ ಬ್ರಿಟಿಷರ ಆಗಮನದ ನಂತರ ನಾವು ಮೈದಾ, ಗೋಧಿಯಂಥ ಪಾಶ್ಚಾತ್ಯ ಆಹಾರದ ಕಡೆಗೆ ವಾಲಿದೆವು. ಆದರೆ ಅವರ ಆಗಮನಕ್ಕೂ ಮೊದಲು ಸಿರಿಧಾನ್ಯಗಳೇ ಭಾರತೀಯರ ಆಹಾರವಾಗಿದ್ದವು ಎಂದು ಕೆಎಲ್‌ಇ ಮಹಾವಿದ್ಯಾಲಯದ ಉಪನ್ಯಾಸಕಿ ವೀಣಾ ತಿರ್ಲಾಪೂರ ನುಡಿದರು.

ಅವರು ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಿಳೆಯರಿಗಾಗಿ ಜರುಗಿದ ಸಿರಿಧಾನ್ಯಗಳ ಅಡುಗೆ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿ ಮಾತನಾಡಿದರು.

ಪಾಶ್ಚಾತ್ಯ ಖಾದ್ಯಗಳಿಂದ ಪ್ರಭಾವಿತರಾಗಿ ನಮ್ಮ ಮೂಲ ಆಹಾರವಾದ ಸಿರಿಧಾನ್ಯಗಳನ್ನು ನಾವು ಕಡೆಗಣಿಸಿದ ಫಲವಾಗಿ ಆಧುನಿಕ ದಿನಗಳಲ್ಲಿ ರೋಗಗಳು ಹೆಚ್ಚಾಗುತ್ತಿದೆ. ರೋಗಮುಕ್ತವಾದ-ಆರೋಗ್ಯಕರ ಜೀವನಕ್ಕೆ ಸಿರಿಧಾನ್ಯಗಳ ಬಳಕೆ ಅವಶ್ಯಕ. ಶ್ರೀಮಠದ ಜಾತ್ರೆಯು ತನ್ನ ಸಾಮಾಜಿಕ ಕಾಳಜಿಗೆ ಹೆಸರುವಾಸಿಯಾಗಿದ್ದು, ಈ ಬಾರಿ ಸಿರಿಧಾನ್ಯಗಳ ಮಹತ್ವದ ಅರಿವು ಮೂಡಿಸುವ ಉದ್ದೇಶದಿಂದ ಮಹಿಳೆಯರಿಗಾಗಿ ಸಿರಿಧಾನ್ಯ ಅಡುಗೆ ತಯಾರಿಕೆಯ ಸ್ಪರ್ಧೆ ಆಯೋಜಿಸಿದ್ದು ಶ್ಲಾಘನೀಯವಾಗಿದೆ ಎಂದರು.

ಇನ್ನೋರ್ವ ನಿರ್ಣಾಯಕರಾದ ಅನುಸೂಯಾ ದೇವಾಂಗಮಠ ಮಾತನಾಡಿ, ಅಡುಗೆ ಹೆಣ್ಣಿಗೆ ದೈವದತ್ತವಾಗಿ ಒಲಿದುಬಂದಿದ್ದು, ಇತ್ತೀಚಿನ ದಿನಗಳಲ್ಲಿ ಮಹಿಳೆ ಅಡುಗೆಕೋಣೆಯನ್ನೂ ಮೀರಿ ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ವಿಶೇಷ. ಇಂಥ ಅರ್ಥಪೂರ್ಣ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ವಿನಃ ಗೆಲ್ಲುವುದಷ್ಟೇ ಅಲ್ಲ ಎಂದರು.

ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರೊ. ಕೆ.ಎಚ್. ಬೇಲೂರ, ಉಪಾಧ್ಯಕ್ಷರಾದ ಶ್ರೀದೇವಿ ಶೆಟ್ಟರ್, ಕಾರ್ಯದರ್ಶಿ ಪ್ರವೀಣ ವಾರಕರ, ಶ್ರೀಮಠದ ಮ್ಯಾನೇಜರ್ ಎಂ.ಎಸ್. ಅಂಗಡಿ, ಅಮರೇಶ ಅಂಗಡಿ, ಗವಿಸಿದ್ಧಪ್ಪ ಗಾಣಿಗೇರ, ಶಿವಲೀಲಾ ಅಕ್ಕಿ, ಸುರೇಖಾ ಪಿಳ್ಳೆ, ಅಕ್ಕಮಹಾದೇವಿ ಚಟ್ಟಿ, ರತ್ನಕ್ಕ ಪಾಟೀಲ, ಪ್ರಭು ಗಂಜಿಹಾಳ ಮುಂತಾದವರು ಉಪಸ್ಥಿತರಿದ್ದರು.

ಸಿರಿಧಾನ್ಯಗಳ ಸಿಹಿ ಅಡುಗೆ ತಯಾರಿಕೆಯಲ್ಲಿ ಸುಧಾ ಕೆರೂರ ಪ್ರಥಮ, ವಿದ್ಯಾ ಗಂಜಿಹಾಳ ದ್ವಿತೀಯ, ಲತಾ ಮಾನೆ ತೃತೀಯ ಸ್ಥಾನ ಪಡೆದರೆ, ಸಿರಿಧಾನ್ಯಗಳ ಖಾರದ ಅಡುಗೆಯಲ್ಲಿ ಸುಮಲತಾ ಕೋರಿಶೆಟ್ಟರ ಪ್ರಥಮ, ವಿದ್ಯಾ ಗಂಜಿಹಾಳ ದ್ವಿತೀಯ, ರತ್ನಕ್ಕ ತೆಲ್ಲೂರ ತೃತೀಯ ಸ್ಥಾನ ಪಡೆದರು.

ಮುನ್ನೆಚ್ಚರಿಕೆಯಿಂದ ಜೀವ ಹಾನಿ ತಪ್ಪಿಸಿ : ಡಾ. ಎಸ್.ಎಸ್. ನೀಲಗುಂದ

0

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಗುಡುಗು-ಸಿಡಿಲಿನಿಂದ ಸಂಭವಿಸಬಹುದಾದ ಹಾನಿಯಿಂದ ಸಂರಕ್ಷಣೆಗೆ ಅಗತ್ಯ ಕ್ರಮ ಅನುಸರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ತಿಳಿಸಿದ್ದಾರೆ.

ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಕಂಡುಬರುವ ಮಳೆಗಾಲದ ಆರಂಭದ ಹಂತದಲ್ಲಿ ತೀವ್ರತರದ ಗುಡುಗು-ಸಿಡಿಲು ಕಂಡುಬರುವುದು ಸಾಮಾನ್ಯವಾಗಿದ್ದು, ಜೊತೆಗೆ ಬಿರುಸಾಗಿ ಗಾಳಿ ಸಹಿತ ಮಳೆ ಸುರಿಯುವುದು ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಯಲು ಪ್ರದೇಶಗಳಲ್ಲಿ, ಗಿಡಗಳ ಕೆಳಗಡೆ ಅಥವಾ ಕಬ್ಬಿಣದಿಂದ ಕೂಡಿರುವ ಕಟ್ಟಡ ಅಥವಾ ಶೆಡ್‌ಗಳಲ್ಲಿ ಆಶ್ರಯ ಪಡೆಯದೇ ಸೂಕ್ತ ಸ್ಥಳದಲ್ಲಿ ಇದ್ದು, ಜೀವ ಹಾನಿ ತಪ್ಪಿಸಬೇಕು ಎಂದು ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕಾಲಕಾಲಕ್ಕೆ ನೀಡುವ ಸೂಚನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆರೋಗ್ಯದ ದೃಷ್ಟಿಯಿಂದ ನೀಡುವ ಸಲಹೆಗಳನ್ನು ಅನುಸರಿಸಿ ವಿಪತ್ತಿನಿಂದ ರಕ್ಷಿಸಿಕೊಳ್ಳಲು ಕೈಜೋಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೈಗೊಳ್ಳಬೇಕಾದ ಕ್ರಮಗಳು: ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ಬಯಲಿನಲ್ಲಿ ನಿಲ್ಲದೆ, ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ತಗ್ಗು ಪ್ರದೇಶ ಇಲ್ಲದೇ ಬಯಲಿನಲ್ಲಿಯೇ ಇರಬೇಕಾದರೆ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಬೇಕು. ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.

ಮರಗಳಿದ್ದ ಪ್ರದೇಶದಲ್ಲಿದ್ದರೆ ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು. ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ. ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿಯಬೇಕು, ಕುರಿಮಂದೆ ಅಥವಾ ಜಾನುವಾರುಗಳ ನಡುವೆ ನಿಂತಿದ್ದರೆ ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ, ಏಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷ್ಯನನ್ನೇ ಆರಿಸಿಕೊಳ್ಳುತ್ತದೆ.

ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ. ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ. ವಿದ್ಯುತ್ ಕಂಬ, ಎಲೆಕ್ಟಿçಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬಾರದು. ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸ್ ಅನ್ನು ಸ್ವಚ್ಛ ಮಾಡುವ ಸಾಹಸ ಮಾಡಬಾರದು.

ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಿಡಿಲು ಬಾಧಿತ ವ್ಯಕ್ತಿಗಳು ಆಗಮಿಸಿದಾಗ ತಕ್ಷಣ ಚಿಕಿತ್ಸೆ ಕ್ರಮಗಳನ್ನು ಕೈಗೊಳ್ಳುವ ಕುರಿತು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಗತ್ಯ ಔಷಧಿಗಳನ್ನು ದಾಸ್ತಾನು ಇಟ್ಟಿಕೊಳ್ಳಲಾಗಿದೆ ಎಂದು ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಪೋನ್‌ನಲ್ಲಿ ಮಾತನಾಡಬಾರದು, ಅದನ್ನು ಚಾರ್ಚ್ ಮಾಡುವ ಸಾಹಸವೂ ಬೇಡ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ, ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೇ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು ಮತ್ತು ಕಂಪ್ಯೂಟರ್, ಲ್ಯಾಪ್‌ಟ್ಯಾಪ್‌ಗಳಿಂದ ದೂರವಿರಬೇಕು. ಮನೆಯ ಕಾಂಕ್ರೀಟ್ ಗೋಡೆಗಳನ್ನು ಸ್ಪರ್ಶಿಸದೇ ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ.

error: Content is protected !!