Home Blog Page 4

ಕಾರ್ಮಿಕ ಹೋರಾಟದಲ್ಲಿ ಅಂತಿಮ ಉಸಿರಿನವರೆಗೂ ಸಕ್ರಿಯರಾಗಿದ್ದರು: ಅನಂತ ಸುಬ್ಬರಾವ್ʼಗೆ ಸಿಎಂ ಸಿದ್ದರಾಮಯ್ಯ ನಮನ

0

ಬೆಂಗಳೂರು: ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬಾರಾವ್ ಅವರೊಬ್ಬ ಬದ್ಧತೆಯ ಸಿಪಿಐ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಿವಂಗತ ಕಾಮ್ರೇಡ್ ಹೆಚ್ ವಿ ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾರ್ಮಿಕರ ಧ್ವನಿಯಾಗಿ ಹಲವು ಹೋರಾಟಗಳಲ್ಲಿ ಭಾಗಿ

ಕಾಮ್ರೆಡ್ ಅನಂತ ಸುಬ್ಬರಾವ್ ಅವರು ಕಾರ್ಮಿಕರ ಧ್ವನಿಯಾಗಿ ಹಲವು ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ತಿಂಗಳ ಹಿಂದೆ ನಡೆದ ಕೆಎಸ್ ಆರ್ ಟಿಸಿ ನೌಕರರ ಪ್ರತಿನಿಧಿಯಾಗಿ ಅವರನ್ನು ಭೇಟಿ ಮಾಡಿದ್ದರು. ಅವರು ಕೆಎಸ್ ಆರ್ ಟಿಸಿಯ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ, ಸಿಬ್ಬಂದಿ ಯೂನಿಯನ್ ನ ಅಧ್ಯಕ್ಷರಾಗಿದ್ದರು. ಬದ್ಧತೆಯ ಜಾತ್ಯಾತೀತ ಹಾಗೂ ಸಿಪಿಐ ನಾಯಕರಾಗಿದ್ದರು.

ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವುಂಟಾಗಿದ್ದು, ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಸಾವಿನ ದು:ಖವನ್ನು ಭರಿಸುವ ಶಕ್ತಿಯನ್ನು ಭರಿಸಲು ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಅನಂತ ಸುಬ್ಬಾರಾವ್ ಅವರು ನನಗೆ ಚಿರಪರಿಚಿತರು

ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬಾರಾವ್ ಅವರು ನನಗೆ ಚಿರಪರಿಚಿತರು. ನಾನು ಸಾರಿಗೆ ಸಚಿವನಾಗಿದ್ದ ಸಂದರ್ಭದಿಂದಲೂ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದಾಗಿ ತಿಳಿಸಿದರು.

ಕುಮಟಾ ಬಳಿ KSRTC ಬಸ್, ಬೊಲೆರೋ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಾಯ

0

ಉತ್ತರ ಕನ್ನಡ: ಜಿಲ್ಲೆಯ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಮಾನೀರು ದೇವಸ್ಥಾನದ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೊಲೆರೋ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋ ವಾಹನ ಚಾಲಕ ಸೇರಿದಂತೆ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.

ಬೊಲೆರೋ ವಾಹನ ಚಾಲಕ ಕಾರವಾರ ನಿವಾಸಿ ಡೇವಿಡ್ ಪಾಸ್ಕಲ್ ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿದ್ದ ಉಳಿದ ಏಳು ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರವಾರದಿಂದ ಕುಮಟಾಗೆ ಮೀನು ಸಾಗಿಸಿಕೊಂಡು ತೆರಳುತ್ತಿದ್ದ ಬೊಲೆರೋ ವಾಹನ, ಕುಮಟಾದಿಂದ ಕಾರವಾರದತ್ತ ಮರಳುತ್ತಿದ್ದ ವೇಳೆ ಗೋಕರ್ಣದ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಗುಡ್ ನ್ಯೂಸ್: ಕುಟುಂಬಸ್ಥರ ಜತೆ ಕಾಲ ಕಳೆಯಲು ರಜೆ ಭಾಗ್ಯ

0

ಬೆಂಗಳೂರು, ಜನವರಿ 29: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅವರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ದಿನದಂದು ಕಡ್ಡಾಯ ಸಾಂದರ್ಭಿಕ ರಜೆ ನೀಡುವಂತೆ ಪೊಲೀಸ್ ಮಹಾನಿರ್ದೇಶಕ (DG & IGP) ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಕಲ್ಪಿಸುವುದು, ಕೆಲಸದ ಒತ್ತಡ ಕಡಿಮೆ ಮಾಡುವುದು ಹಾಗೂ ವೈಯಕ್ತಿಕ ಜೀವನ ಮತ್ತು ಕರ್ತವ್ಯಗಳ ನಡುವಿನ ಸಮತೋಲನ ಕಾಪಾಡುವುದು ಈ ಆದೇಶದ ಮುಖ್ಯ ಉದ್ದೇಶವಾಗಿದೆ. ಇದರಿಂದ ಮನೋಬಲ ಹೆಚ್ಚಾಗಿ, ಕಾರ್ಯಕ್ಷಮತೆಯೂ ಉತ್ತಮವಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಒಳಾಡಳಿತ ಇಲಾಖೆ, ಪೊಲೀಸ್ ಸಿಬ್ಬಂದಿಗೆ ಈ ರೀತಿಯ ರಜೆ ಸೌಲಭ್ಯ ಕಲ್ಪಿಸುವ ಕುರಿತು ಪೊಲೀಸ್ ಮಹಾನಿರ್ದೇಶಕರಿಗೆ ಅಧಿಕೃತ ಪತ್ರ ಬರೆದಿತ್ತು. ಈ ಪತ್ರವನ್ನು ಪರಿಶೀಲಿಸಿದ ನಂತರ ಡಿಜಿ ಡಾ. ಸಲೀಂ ಅವರು ಕಡ್ಡಾಯ ರಜೆ ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಯಾರಿಗೆ ಈ ರಜೆ ಸಿಗಲಿದೆ?

ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರ ಸಲಹೆಯ ಮೇರೆಗೆ ಈ ನಿರ್ಧಾರಕ್ಕೆ ಚಾಲನೆ ಸಿಕ್ಕಿದೆ. ಮುಖ್ಯವಾಗಿ ಕೆಳ ಹಂತದ ಸಿಬ್ಬಂದಿಗಳಾದ ಪೊಲೀಸ್ ಕಾನ್ಸ್‌ಟೇಬಲ್ (PC) ಹೆಡ್ ಕಾನ್ಸ್‌ಟೇಬಲ್ (HC) ಸಹಾಯಕ ಪೊಲೀಸ್ ಉಪನಿರೀಕ್ಷಕ (ASI) ಈ ಶ್ರೇಣಿಯ ಸಿಬ್ಬಂದಿಗೆ ಈ ಸೌಲಭ್ಯ ಅನ್ವಯವಾಗಲಿದೆ.

ಆದೇಶದಲ್ಲಿ ಏನು ಉಲ್ಲೇಖಿಸಲಾಗಿದೆ?

ಪೊಲೀಸರು ಕಠಿಣ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ವೈಯಕ್ತಿಕ ಜೀವನಕ್ಕೂ ಮೌಲ್ಯ ನೀಡಬೇಕು ಎಂಬ ದೃಷ್ಟಿಯಿಂದ, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದಂತಹ ಮಹತ್ವದ ದಿನಗಳಲ್ಲಿ ರಜೆ ನೀಡುವುದು ಅಗತ್ಯ ಎಂದು ಡಿಜಿ-ಐಜಿಪಿ ಹೇಳಿದ್ದಾರೆ.

ಇಂತಹ ಮಾನವೀಯ ಕ್ರಮದಿಂದ ಮನೋಬಲ ವೃದ್ಧಿ, ಒತ್ತಡ ಕಡಿಮೆ, ಕೆಲಸದ ತೃಪ್ತಿ ಹೆಚ್ಚಳ, ಶಿಸ್ತು ಮತ್ತು ಬದ್ಧತೆ ಬಲವರ್ಧನೆ, ಸಾಧ್ಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಒಳಾಡಳಿತ ಇಲಾಖೆಯ ಪಾತ್ರ

ರಾಜ್ಯ ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿಯವರು ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ, ಮೋಹನ್ ಕುಮಾರ್ ದಾನಪ್ಪ ಅವರು ಪೊಲೀಸ್ ಕಾನ್ಸ್‌ಟೇಬಲ್‌ನಿಂದ ಎಎಸ್‌ಐ ಹಂತದವರೆಗಿನ ಸಿಬ್ಬಂದಿಗೆ ಈ ರಜೆ ನೀಡಬೇಕು ಎಂದು ಮನವಿ ಮಾಡಿಕೊಂಡಿರುವುದನ್ನು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು.

ದೆಹಲಿ ನಾಲ್ಕು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ಪರಿಶೀಲನೆ

0

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ನಾಲ್ಕು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿರುವ ಘಟನೆ ಆತಂಕ ಮೂಡಿಸಿದೆ. ಇದಲ್ಲದೆ, ಪಂಜಾಬ್–ಹರಿಯಾಣ ಸಚಿವಾಲಯಕ್ಕೂ ಇ-ಮೇಲ್ ಮೂಲಕ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ.

ಲಾರೆಟೋ ಕಾನ್ವೆಂಟ್ ಶಾಲೆ (ದೆಹಲಿ ಕ್ಯಾಂಟ್)ಗೆ ಬೆಳಿಗ್ಗೆ 8:22ಕ್ಕೆ, ಡಾನ್ ಬಾಸ್ಕೊ ಶಾಲೆ (ಸಿ.ಆರ್. ಪಾರ್ಕ್)ಗೆ 9:18ಕ್ಕೆ, ಕಾರ್ಮೆಲ್ ಶಾಲೆ (ಆನಂದ್ ನಿಕೇತನ್)ಗೆ 9:22ಕ್ಕೆ ಹಾಗೂ ಕಾರ್ಮೆಲ್ ಶಾಲೆ (ಸೆಕ್ಟರ್ 23, ದ್ವಾರಕಾ)ಗೆ 9:25ಕ್ಕೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಗಳಿಗೆ ದೂರವಾಣಿ ಮೂಲಕ ಬೆದರಿಕೆ ನೀಡಲಾಗಿದ್ದರೆ, ಪಂಜಾಬ್–ಹರಿಯಾಣ ಸಚಿವಾಲಯಕ್ಕೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿದೆ. ಮಾಹಿತಿ ದೊರಕುತ್ತಿದ್ದಂತೆ ಪೊಲೀಸ್ ತಂಡಗಳು ತಕ್ಷಣ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದವು.

ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಆಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಬುಧವಾರ ಚಂಡೀಗಢ, ಗುರುಗ್ರಾಮ್ ಹಾಗೂ ಹರಿಯಾಣದ ಇತರೆ ಭಾಗಗಳಲ್ಲಿಯೂ ಹಲವು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ತಪಾಸಣೆ ನಡೆಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಳ್ಳಾರಿ ಗಲಭೆ ಪ್ರಕರಣದಲ್ಲಿ ಸರ್ಕಾರದ ಗೊಂದಲಕಾರಿ ನಡೆ: ವರ್ಗಾವಣೆ ಮಾಡಿದ ಡಿವೈಎಸ್‌ಪಿಯನ್ನು ಮತ್ತೆ ಕೂರಿಸಿದ ಸರ್ಕಾರ!

0

ಬಳ್ಳಾರಿ: ಬಳ್ಳಾರಿ ಬ್ಯಾನರ್ ಗಲಭೆ (Ballari Clash) ಪ್ರಕರಣದ ಬಳಿಕ ಪೊಲೀಸ್ ಇಲಾಖೆಯಲ್ಲಿ ಕೈಗೊಂಡಿದ್ದ ಕ್ರಮಗಳಲ್ಲಿ ರಾಜ್ಯ ಸರ್ಕಾರ ಇದೀಗ ದಿಢೀರನೇ ಯು-ಟರ್ನ್ ತೆಗೆದುಕೊಂಡಿದೆ. ವರ್ಗಾವಣೆ ಮಾಡಲಾಗಿದ್ದ ಡಿವೈಎಸ್‌ಪಿ ಚಂದ್ರಕಾಂತ ನಂದಾರೆಡ್ಡಿ ಅವರನ್ನು ಮತ್ತೆ ಮುಂದುವರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಘಟನೆ ನಡೆದ ಮರುದಿನವೇ ಎಸ್ಪಿ ಪವನ್ ನೆಜ್ಜೂರ್ ಸಸ್ಪೆಂಡ್ ಆಗಿದ್ದರು. ಡಿಐಜಿ ವರ್ತಿಕಾ ಕಟಿಯಾರ್ ವರ್ಗಾವಣೆಯೂ ಆಗಿತ್ತು. ಇದಾದ ಬಳಿಕ ಡಿವೈಎಸ್‌ಪಿ ನಂದಾರೆಡ್ಡಿ ಅವರನ್ನು ಸ್ಥಳ ತೋರಿಸದೇ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ 2023 ಬ್ಯಾಚ್ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರನ್ನು ನೇಮಕ ಮಾಡಲಾಗಿತ್ತು.

ಆದರೆ ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಸರ್ಕಾರ ನಂದಾರೆಡ್ಡಿ ಅವರನ್ನು ವಾಪಸ್ ಕರೆಸಿಕೊಂಡಿದೆ. ಇದರಿಂದ ಚಾರ್ಜ್ ತೆಗೆದುಕೊಳ್ಳಲು ಬಂದ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾಗೆ ಭಾರೀ ಮುಜುಗರ ಉಂಟಾಗಿದ್ದು, ಅವರನ್ನು ಕೇಂದ್ರ ಸ್ಥಾನಕ್ಕೆ ರಿಪೋರ್ಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಬ್ಯಾನರ್ ಗಲಭೆ ಪ್ರಕರಣದಲ್ಲಿ ಪೊಲೀಸ್ ವೈಫಲ್ಯವಾಗಿದೆ ಎಂದು ಎಡಿಜಿಪಿ ಆರ್. ಹಿತೇಂದ್ರ ಸರ್ಕಾರಕ್ಕೆ ಸ್ಪಷ್ಟ ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಂದಾರೆಡ್ಡಿ ಅವರ ವರ್ಗಾವಣೆ ನಡೆದಿತ್ತು. ಈಗ ಅವರನ್ನು ಮತ್ತೆ ಮುಂದುವರಿಸಿರುವುದು ಸರ್ಕಾರದ ನಿರ್ಧಾರಗಳ ಮೇಲೆಯೇ ಹಲವು ಪ್ರಶ್ನೆಗಳು ಮತ್ತು ಅನುಮಾನಗಳಿಗೆ ಕಾರಣವಾಗುತ್ತಿದೆ.

Gadag Breaking: ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ವೇಳೆ 3 ಹೆಡೆಯ ನಾಗರ ಕಲ್ಲು ಪತ್ತೆ!

0

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಮಹತ್ವದ ಕಲ್ಲು ಪತ್ತೆಯಾಗಿದೆ. 12ನೇ ದಿನದ ಉತ್ಖನನ ವೇಳೆ ಮೂರು ಹಡೆಯ ನಾಗರ ಕಲ್ಲು ಪತ್ತೆಯಾಗಿದ್ದು, ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾರ್ಯ ಮುಂದುವರಿದಿದ್ದು, ಈ ವೇಳೆ ಪ್ರಾಚೀನ ನಾಗರ ಕಲ್ಲುಗಳು ಪತ್ತೆಯಾಗಿವೆ. ಪ್ರತಿದಿನವೂ ಒಂದಿಲ್ಲೊಂದು ಪ್ರಾಚ್ಯಾವಶೇಷಗಳು ಗೋಚರವಾಗುತ್ತಿದ್ದು,

ಉತ್ಖನನ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚಿನ ಕುತೂಹಲಕ್ಕೆ ಕಾರಣವಾಗುತ್ತಿದೆ. ಉತ್ಖನನ ಮುಂದುವರಿದಂತೆ ಇನ್ನಷ್ಟು ಮಹತ್ವದ ಐತಿಹಾಸಿಕ ವಸ್ತುಗಳು ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

Gold Rate: ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳ: ಒಂದೇ ದಿನಕ್ಕೆ 11,770 ರೂಪಾಯಿ ಏರಿಕೆ ಕಂಡ ಬಂಗಾರ..!

0

ಬೆಂಗಳೂರು: ಚಿನ್ನದ ದರ ಆಕಾಶಕ್ಕೇರುತ್ತಿದ್ದು, ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಗುರುವಾರದಂದು 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 17,885 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 1,78,850 ರೂ. ತಲುಪಿದ್ದು, ಏಕಕಾಲದಲ್ಲಿ 10 ಗ್ರಾಂಗೆ 11,770 ರೂ. ಏರಿಕೆಯಾಗಿದೆ.

ನಿನ್ನೆ 10 ಗ್ರಾಂ ಚಿನ್ನದ ಬೆಲೆ 5,000 ರೂ. ಹೆಚ್ಚಾಗಿದ್ದುದನ್ನು ಗಮನಿಸಿದರೆ, ಇಂದು ಹೆಚ್ಚಿನ ಏರಿಕೆ ದಾಖಲಾಗಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 16,395 ರೂ. ಇದ್ದರೆ, 10 ಗ್ರಾಂ ಬೆಲೆ 1,63,950 ರೂ. ತಲುಪಿದೆ.

ಬೆಳ್ಳಿ ಮಾರುಕಟ್ಟೆ ಕೂಡ ಉದ್ದೀಪನಗೊಂಡಿದೆ. ಇಂದು ಬೆಳ್ಳಿ ಬೆಲೆ 30 ರೂ. ಹೆಚ್ಚಳದೊಂದಿಗೆ 1 ಗ್ರಾಂಗೆ 410 ರೂ., 1 ಕೆಜಿ ಬೆಲೆ 4,10,000 ರೂ. ಆಗಿದೆ.

ಚಿನ್ನಬೆಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿ, ಚಿಲ್ಲರೆ ಬೇಡಿಕೆಯು ಹೆಚ್ಚಳ, ಡಾಲರ್ ದುರ್ಬಲತೆ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ನೆರೆದಿವೆ. ನೋಟಿಗೆ ಸೇರಿರುವ ಜಿಎಸ್ಟಿ ಹೊರತುಪಡಿಸಿ ಬೆಲೆ ಮಳಿಗೆಗಳಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು.

IND vs NZ: ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ!

0

ವಿಶಾಖಪಟ್ಟಣ: ಭಾರತ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪಂದ್ಯದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ, ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಬ್ಯಾಟರ್‌ಗಳನ್ನು ಔಟ್ ಮಾಡಿದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಯನ್ನು ಮ್ಯಾಟ್ ಹೆನ್ರಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ಜನವರಿ 25ರಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಸಹ ಮೊದಲ ಎಸೆತದಲ್ಲೇ ಔಟ್ ಮಾಡಿದ್ದರು.

ಈ ಮೂಲಕ ಒಂದೇ ಸರಣಿಯಲ್ಲಿ ಇಬ್ಬರು ಆರಂಭಿಕ ಬ್ಯಾಟರ್‌ಗಳನ್ನು ಮೊದಲ ಎಸೆತದಲ್ಲೇ ಔಟ್ ಮಾಡಿದ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ಮೊದಲ ಬೌಲರ್ ಎಂಬ ಗೌರವಕ್ಕೂ ಮ್ಯಾಟ್ ಹೆನ್ರಿ ಪಾತ್ರರಾದರು.

ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲೆಂಡ್ ತಂಡ 20 ಓವರ್‌ಗಳಲ್ಲಿ 215 ರನ್‌ಗಳನ್ನು ಕಲೆಹಾಕಿತು. ಈ ದೊಡ್ಡ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 165 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ನಾಲ್ಕನೇ ಟಿ20 ಪಂದ್ಯದಲ್ಲಿ ಕಿವೀಸ್ ಪಡೆ 50 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಸುಳ್ವಾಡಿ ವಿಷಪ್ರಸಾದ ಆರೋಪಿ ಇಮ್ಮಡಿ ಮಹದೇವಸ್ವಾಮಿ‌ಗೆ ಮಹದೇಶ್ವರ ಬೆಟ್ಟ ಪ್ರವೇಶ ನಿಷೇಧ

0

ಚಾಮರಾಜನಗರ: ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಮಲೆ ಮಹದೇಶ್ವರ ಬೆಟ್ಟ ಪ್ರವೇಶವನ್ನು ನಿಷೇಧಿಸಿ ಆಡಳಿತ ಕಠಿಣ ಕ್ರಮ ಕೈಗೊಂಡಿದೆ. ಹನೂರು ತಹಸೀಲ್ದಾರ್ ಚೈತ್ರಾ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಜಾಮೀನಿನ ಮೇಲೆ ಹೊರಬಂದಿರುವ ಇಮ್ಮಡಿ ಮಹದೇವಸ್ವಾಮಿ, ಸಾಲೂರು ಮಠದಲ್ಲಿ ನಡೆಯಲಿರುವ ಪಟ್ಟದ ಮಹದೇವಸ್ವಾಮೀಜಿಯ 32ನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂದಾಗಿದ್ದರು. ಆದರೆ, ಆರೋಪಿ ಭಾಗವಹಿಸಿದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಸಂತ್ರಸ್ತರು ಹಾಗೂ ದಲಿತ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.

ಸಾಲೂರು ಮಠದ ಆವರಣ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಪೊನ್ನಾಚಿ ಮಹದೇವಸ್ವಾಮಿ ಮನವಿ ಸಲ್ಲಿಸಿದ್ದೂ, ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತು. ಇಮ್ಮಡಿ ಮಹದೇವಸ್ವಾಮಿ ಸಾಲೂರು ಮಠದ ಮಹದೇಶ್ವರಸ್ವಾಮಿ ಎಜುಕೇಶನ್ ಸೊಸೈಟಿಯ ಸದಸ್ಯರಾಗಿದ್ದರೂ, ಅವರ ಹಾಜರಾತಿಯಿಂದ ಶಾಂತಿ ಭಂಗ ಮತ್ತು ಗಲಭೆ ಉಂಟಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವೇಶ ನಿಷೇಧ ಹೇರಿದೆ.

ಇಂದಿನಿಂದ ಮುಂದಿನ ಆದೇಶದವರೆಗೆ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಮಲೆ ಮಹದೇಶ್ವರ ಬೆಟ್ಟ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ.

ಲಾರಿ ಹರಿದು ಪಾದಚಾರಿ ಸಾವು: 32 ವರ್ಷಗಳ ಬಳಿಕ ಚಾಲಕನ ಬಂಧನ

0

ದಾವಣಗೆರೆ: ಲಾರಿ ಹರಿದು ಪಾದಚಾರಿ ಸಾವನ್ನಪ್ಪಿದ ಪ್ರಕರಣದಲ್ಲಿ, ಅಪಘಾತಕ್ಕೆ ಕಾರಣನಾಗಿದ್ದ ಚಾಲಕನನ್ನು 32 ವರ್ಷಗಳ ಬಳಿಕ ಜಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಗಂಗಾಧರಪ್ಪ (67) ಎಂದು ಗುರುತಿಸಲಾಗಿದೆ. ಈತ 1994ರಲ್ಲಿ ದಾವಣಗೆರೆ ಜಿಲ್ಲೆಯ ಕಲ್ಲೇದೇವಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ–13ರಲ್ಲಿ ನಡೆದ ಅಪಘಾತದಲ್ಲಿ ಪಾದಚಾರಿಯೊಬ್ಬರ ಸಾವಿಗೆ ಕಾರಣನಾಗಿದ್ದಾನೆ.

ಅಪಘಾತದ ಬಳಿಕ ಆರೋಪಿಯು ಇಷ್ಟು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಪ್ರಕರಣವನ್ನು ಪುನರ್ ಪರಿಶೀಲಿಸಿದ ಜಗಳೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ಸ್ಪೆಕ್ಟರ್ ಸಿದ್ದರಾಮಯ್ಯ ಹಾಗೂ ಎಸ್ಐ ವೆಂಕಟೇಶ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಜಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

error: Content is protected !!