ಮಂಗಳೂರು:- ಹಿಂದೂ ಧರ್ಮದ ಒಂದು ಸಮಾಜದ ಹೆಣ್ಣುಮಕ್ಕಳನ್ನು ವೇಶ್ಯೆಯರು ಎಂದು ಹೇಳುವ ಮೂಲಕ ಸರ್ಕಾರಿ ಅಧಿಕಾರಿ ನಾಲಿಗೆ ಹರಿಬಿಟ್ಟಿದ್ದಾರೆ. ಅಧಿಕಾರಿ ಓರ್ವನ ಆಡಿಯೋ ವೈರಲ್ ಆಗುತ್ತಿದ್ದಂತೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಬೆಳ್ಳಾರೆ ಪೊಲೀಸ್ ಠಾಣೆ ಸೇರಿದಂತೆ ಎರಡು ಕಡೆ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಹಿಂದೂ ಸಂಘಟನೆಯ ಕಾರ್ಯಕರ್ತ ಸುರೇಶ್ ಎಂಬುವರ ಜೊತೆ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ದೂರವಾಣಿ ಮುಖಾಂತರ ಮಾತನಾಡುವಾಗ ನಾಲಿಗೆ ಹರಿಬಿಟ್ಟಿದ್ದಾನೆ.ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಎರಡು ದಿನಗಳ ಹಿಂದೆ ತನ್ನ ಫೇಸ್ ಬುಕ್ ಖಾತೆಯಲ್ಲಿ ಮುಸ್ಲಿಮರ ಪರವಾಗಿ ಪೋಸ್ಟ್ ಹಾಕಿದ್ದನು. ಸಹಾಯ ಮಾಡುವುದರಲ್ಲಿ ಮುಸ್ಲಿಮರು ಎತ್ತಿದ ಕೈ ಎಂದು ಪೋಸ್ಟ್ ಹಾಕಿದ್ದನು. ಈ ಪೋಸ್ಟ್ ವಿರೋಧಿಸಿ ಹಿಂದೂ ಕಾರ್ಯಕರ್ತ ಸುರೇಶ್ ಕಾಸರಗೋಡು ಅವರು ಸಂಜೀವ್ ಪೂಜಾರಿಗೆ ಕರೆ ಮಾಡಿದ್ದರು.
ದೂರವಾಣಿಯಲ್ಲಿ ಮಾತನಾಡುವಾಗ “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಮಾಜಕ್ಕೆ ಸೇರಿದ ಒಂದು ಲಕ್ಷ ಹುಡುಗಿಯರು ವೇಶ್ಯೆಯಾಗಿದ್ದಾರೆ. ಇದಕ್ಕೆ ನನ್ನ ಬಳಿ 10,000 ದಾಖಲೆಗಳಿವೆ. ಹಿಂದುತ್ವದ ಹುಡುಗರು ವೇಶ್ಯೆಯರನ್ನಾಗಿ ಮಾಡಿದ್ದಾರೆ. ಒಂದು ಸಮಾಜದ ಒಂದು ಲಕ್ಷ ಹುಡುಗಿಯರು ವೇಶ್ಯೆಯರಾಗಲು ಹಿಂದೂ ಸಂಘಟನೆಯ ಯುವಕರು ಕಾರಣರಾಗಿದ್ದಾರೆ. ಭಜನೆ ಮಾಡಿದ ಹಿಂದೂ ಹುಡುಗಿಯರನ್ನು ಮರದ ಅಡಿಯಲ್ಲಿ ಮಲಗಿಸಿದವರು ಹಿಂದೂ ಹುಡುಗರು” ಎಂದು ಹಿಂದೂ ಹೆಣ್ಣುಮಕ್ಕಳ ಬಗ್ಗೆ ತೀರ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ.



