ವಿಜಯಸಾಕ್ಷಿ ಸುದ್ದಿ, ಗದಗ : ತೋಂಟದಾರ್ಯ ಮಠದ ರಥ ಬೀದಿಯಲ್ಲಿ ಆಕ್ರಮವಾಗಿ ವ್ಯಾಪಾರ-ವಹಿವಾಟು ನಡೆಸುತ್ತಿರುವ ವರ್ತಕರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಉಪಲೋಕಾಯುಕ್ತರಿಗೆ ಮನವಿ ಸಲ್ಲಿಸಲು ಯತ್ನಿಸಿದ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ರಾಜೂ ಖಾನಪ್ಪನವರ ಸೇರಿದಂತೆ 13 ಜನರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.
ಶನಿವಾರ ಮುಂಜಾನೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರಲ್ಲಿ ಆಕ್ರಮ ವ್ಯಾಪಾರಸ್ಥರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲು ಶ್ರೀರಾಮ ಸೇನೆಯ ಕಾರ್ಯಕರ್ತರು ಮುಂದಾಗಿದ್ದಾಗ, ಪೊಲೀಸರು ಅವರನ್ನು ತಡೆದು, ಮಲ್ಲಸಮುದ್ರ ಗ್ರಾಮದ ಪೊಲೀಸ್ ಕವಾಯತ್ ಮೈದಾನಕ್ಕೆ ರವಾನಿಸಿದ್ದಾರೆ ಎನ್ನಲಾಗಿದೆ.
ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ರಾಜೂ ಖಾನಪ್ಪನವರ, ಮಹೇಶ ರೋಖಡೆ, ಕುಮಾರ ನಡಗೇರಿ, ವೆಂಕಟೇಶ ದೊಡ್ಡಮನಿ, ಕಿರಣ ಹಿರೇಮಠ, ಸೋಮು ಗುಡಿ, ಮಂಜುನಾಥ ತುಪ್ಪದ, ಸದಾನಂದಸಿಂಗ್ ಗುರ್ಲಹೊಸೂರ, ಸಂಜೀವ ಚಟ್ನಿ, ಪ್ರಮೋದಸಿಂಗ್ ರಜಪೂತ, ಈರಣ್ಣ ಹೊಸಮನಿ, ಸೋಮು ಗೌರಿ, ಲೋಕೇಶ ರಾಮಜಿ ಇವರನ್ನು ಪೊಲೀಸರು ವಶಕ್ಕೆ ಪಡೆದು, ರಾತ್ರಿಯ ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.