ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ದಾರಿಯಲ್ಲಿ ಹೋಗುವಾಗ ಇಲ್ಲಿನ ಬಾಲಕನೊಬ್ಬನಿಗೆ ಚಿನ್ನವಿರುವ ಬ್ಯಾಗೊಂದು ಸಿಕ್ಕಿದ್ದು, ಅದನ್ನು ಗ್ರಾಮ ಪಂಚಾಯಿತಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಬಾಲಕನನ್ನು ಸಚಿವ ಎಚ್.ಕೆ. ಪಾಟೀಲ ಸನ್ಮಾನಿಸಿ ಗೌರವಿಸಿದರು.
ಅರ್ಮಾನ್ ತಾಜುದ್ದೀನ ವಡಗೇರಿ (12) ಎಂಬ ಬಾಲಕನಿಗೆ 3 ತೊಲೆ ಬಂಗಾರದ ಆಭರಣವಿರುವ ಕೈಚೀಲ ಸಿಕ್ಕಿತ್ತು. ಅದನ್ನು ಪ್ರಮಾಣಿಕವಾಗಿ ಗ್ರಾ.ಪಂ ಅಧ್ಯಕ್ಷರಿಗೆ ತಲುಪಿಸಿದ್ದ. ಈತನ ಪ್ರಾಮಾಣಿಕ ನಡೆಯನ್ನು ಮೆಚ್ಚಿ ಭಾನುವಾರ ಇಲ್ಲಿಯ ಹಾಲಗೊಂಡ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಅರಕ್ಷಿತ ಸ್ಮಾರಕಗಳ ಅಭಿವೃದ್ಧಿ ಕಾಮಗಾರಿಗಳ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದ ಸಚಿವರು, ಈ ಬಾಲಕನಿಗೆ ಮತ್ತೊಂದು ವೇದಿಕೆಯಲ್ಲಿ ಪ್ರಶಸ್ತಿ ನೀಡುವ ವ್ಯವಸ್ಥೆಯನ್ನು ಮಾಡಬೇಕು ಎಂದು ವೇದಿಕೆಯಲ್ಲಿದ್ದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.
ಬಾಲಕ ಅರ್ಮಾನ್ ಪೊಲೀಸ್ ಪೇದೆ ತಾಜುದ್ದೀನ ವಡಗೇರಿ ಅವರ ಪುತ್ರನಾಗಿದ್ದಾನೆ. ಈ ಸಂದರ್ಭದಲ್ಲಿ ಶಾಸಕರಾದ ಸಿ.ಸಿ. ಪಾಟೀಲ, ಜಿ.ಎಸ್. ಪಾಟೀಲ, ವಿ.ಪ ಸದಸ್ಯ ಎಸ್.ವಿ. ಸಂಕನೂರು, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಇದ್ದರು.
ವಾರದ ಹಿಂದೆ ತರಕಾರಿ ಸಂತೆ ನಡೆದ ದಾರಿಯಲ್ಲಿ ಬಾಲಕ ಹೋಗುವಾಗ ಸಣ್ಣದೊಂದು ಬ್ಯಾಗ್(ಪರ್ಸ್) ಸಿಕ್ಕಿದ್ದು, ಅದನ್ನು ತೆರೆದು ನೋಡಿದಾಗ ಅದರಲ್ಲಿ ಆಭರಣಗಳು ಇರುವುದು ಗೊತ್ತಾಗಿದೆ. ಅದನ್ನು ಮನೆಗೆ ತೆಗುದುಕೊಂಡು ಹೋಗಿ ತಾಯಿಗೆ ತೋರಿಸಿದ್ದಾನೆ. ಅದರಲ್ಲಿ ಅಂದಾಜು 3 ತೊಲೆ ಬಂಗಾರದ ಆಭರಣಗಳು ಇರುವುದು ಗೊತ್ತಾಗಿದೆ. ತಕ್ಷಣವೇ ಅದನ್ನು ಗ್ರಾ.ಪಂ ಅಧ್ಯಕ್ಷರಿಗೆ ತಲುಪಿಸಲಾಗಿದೆ. ಅದಕ್ಕೂ ಪೂರ್ವ ಕಳೆದುಕೊಂಡವರು ಮಸೂತಿಯಲ್ಲಿರುವ ಧ್ವನಿವರ್ಧಕ ಮೂಲಕ ಹೇಳಿಸಿದ್ದರು. ಅವರದೇ ಖಾತರಿ ಎನ್ನುವುದನ್ನು ಪರೀಶಿಲಿಸಲು ಗ್ರಾ.ಪಂಗೆ ಕರೆಯಿಸಿ ನಂತರ ಪರ್ಸ್ ಕಳೆದುಕೊಂಡವರಿಗೆ ಒಪ್ಪಿಸಿದ್ದರು.