ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಹನುಮಜಯಂತಿ ಅಂಗವಾಗಿ ಮಂಗಳವಾರ ಪಟ್ಟಣ ಸೇರಿ ತಾಲೂಕಿನಾದ್ಯಂತ ಹನಮಂತದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ತೊಟ್ಟಿಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶೃದ್ಧಾ-ಭಕ್ತಿಯಿಂದ ನೆರವೇರಿದವು.
ಪಟ್ಟಣದ ಪೇಟೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಅಲಂಕರಿಸಲಾದ ಬೆಳ್ಳಿಯ ತೊಟ್ಟಿಲಲ್ಲಿ ಹನುಮಂತದೇವರ ಉತ್ಸವ ಮೂರ್ತಿಯನ್ನಿರಿಸಿ ಮಹಿಳೆಯರು, ಮಕ್ಕಳು ಸೇರಿ ತೊಟ್ಟಿಲು ಪೂಜೆ ಮಾಡಿ ಜೋಗುಳ ಪದ ಹಾಡಿದರು.
ಈ ವೇಳೆ ಮಾತನಾಡಿದ ಅರ್ಚಕ ಮುರಘೇಂದ್ರಸ್ವಾಮಿ ಹಿರೇಮಠ, ಸೇವೆ, ತ್ಯಾಗ, ನಿಷ್ಠೆ ಹಾಗೂ ಭಕ್ತಿಗೆ ಮತ್ತೊಂದು ಹೆಸರೇ ಹನಮಮಂತ ದೇವರು. ಎಲ್ಲದರಲ್ಲಿಯೂ ಮಿಗಿಲಾದ ಅದಮ್ಯ ಶಕ್ತಿ ಹೊಂದಿದ್ದರೂ ಭಕ್ತಿ, ವಿನಯಶೀಲತೆ, ಸದ್ಗುಣಗಳನ್ನು ಹನಮಂತ ಹೊಂದಿದ್ದ. ರಾಮನ ಭಕ್ತ ಹನುಮಂತ ತನ್ನ ಶೃದ್ಧೆ, ಭಕ್ತಿ-ನಿಷ್ಠೆಯಿಂದ ಇಂದು ಜಗತ್ತಿಗೆ ಆದರ್ಶ ಪುರುಷೋತ್ತಮನಾಗಿದ್ದಾನೆ. ಪಾಲಕರು ನಿತ್ಯ ಮಕ್ಕಳೊಂದಿಗೆ ದೇವಸ್ಥಾನಗಳಿಗೆ ಹೋಗುವುದು ಸೇರಿ ದೇವರು, ಧರ್ಮ, ಗುರು-ಹಿರಿಯರು, ತಂದೆ-ತಾಯಿಗಳನ್ನು ಗೌರವ ಭಾವನೆಯಿಂದ ಕಾಣುವ ಮನೋಧರ್ಮ ರೂಢಿಸಬೇಕು ಎಂದರು.
ಈ ವೇಳೆ ಹಿರಿಯರಾದ ಭರಮಪ್ಪ ಕೆರ್ಜಕಣ್ಣವರ, ಶಿವಜೋಗೆಪ್ಪ ಚಂದರಗಿ, ನೀಲಪ್ಪ ಕರ್ಜೆಕಣ್ಣವರ, ಈಶ್ವರಪ್ಪ ಕುಂಬಾರ, ಶಂಕರಪ್ಪ ಗೋಡಿ, ರಾಮಪ್ಪ ಕುಂಬಾರ, ಶೇಖಪ್ಪ, ಸೋಮಪ್ಪ, ಕವಿತಾ ಹತ್ತಿಕಾಳ, ಸವಿತಾ ಹಿರೇಮಠ, ಲಕ್ಷö್ಮವ್ವ ವಾರದ, ದೀಪಾ ಕುಂಬಾರ, ಮಂಗಳಾ ಕುಂಬಾರ, ಜಗದೀಶ ಸೇರಿ ಹಲವರಿದ್ದರು. ಮಾರುತಿ ಆಂಜನೇಯ ಭಜನಾ ಸಂಘದಿಂದ ಭಜನೆ ಮತ್ತು ಕೃಷ್ಣ ಕ್ಷತ್ರಿ ಮತ್ತು ಮಕ್ಕಳು ಮಂಗಳವಾದ್ಯ ನುಡಿಸಿದರು.
ಪಟ್ಟಣದ ಬಸ್ತಿಬಣ, ಹಳ್ಳದಕೇರಿ, ಹುಲಗೇರಿಬಣ, ಶಿಗ್ಲಿ ನಾಕಾದಲ್ಲಿನ ದೇವಸ್ಥಾನಗಳಲ್ಲಿ ಸೇರಿ ತಾಲೂಕಿನ ದೊಡ್ಡೂರ, ಬಾಲೆಹೊಸೂರ, ಚಿಕ್ಕಸವಣೂರ, ಸೂರಣಗಿ, ಬಟ್ಟೂರ, ಬಡ್ನಿ, ಯಲ್ಲಾಪುರ, ಶಿಗ್ಲಿ, ಅಡರಕಟ್ಟಿ, ಗೊಜನೂರ, ಯಳವತ್ತಿ, ರಾಮಗಿರಿ ಗ್ರಾಮದ ಹನಮಂತದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.