ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾಳನ್ನು ಹತ್ಯೆ ಮಾಡಿದ ದುಷ್ಕರ್ಮಿಯನ್ನು ಬಂಧಿಸಿ ಬಹಿರಂಗವಾಗಿ ಗಲ್ಲಿಗೇರಿಸಬೇಕು. ಮುಂದೆ ಯಾರೂ ಇಂತಹ ಅಮಾನವೀಯ, ನೀಚ ಕೃತ್ಯಕ್ಕೆ ಕೈ ಹಾಕದಂತೆ ಎಚ್ಚರಿಕೆ ನೀಡುವ ಕಾರ್ಯವಾಗಬೇಕು ಎಂದು ಎಬಿವಿಪಿ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಎಬಿವಿಪಿ ನೇತೃತ್ವದಲ್ಲಿ ಪಟ್ಟಣದ ಶಿಗ್ಲಿ ನಾಕಾ ಬಳಿ ಜಮಾಯಿಸಿದ್ದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವಿ ನರೆಗಲ್, ರಾಜ್ಯದಲ್ಲಿ ಮತಾಂಧ ಶಕ್ತಿಗಳ ಅಟ್ಟಹಾಸ ತಾಂಡವವಾಡುತ್ತಿದ್ದರೂ ರಾಜ್ಯ ಸರಕಾರ ಕಣ್ಮುಚ್ಚಿ ಕುಳಿತಿದೆ. ಹಾಡಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಫಯಾಜ್ಗೆ ಗಲ್ಲು ಶಿಕ್ಷೆ ವಿಧಿಸುವವರೆಗೂ ವಿದ್ಯಾರ್ಥಿಗಳ ಹೋರಾಟ ನಿಲ್ಲುವದಿಲ್ಲ. ಈ ಕೊಲೆಯ ತನಿಖೆಗೆ ಮೊದಲೇ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಇದು ವೈಯಕ್ತಿಕ ಕಾರಣಕ್ಕೆ ನಡೆದ ಘಟನೆ ಎನ್ನುವ ಹೇಳಿಕೆ ನೀಡಿರುವದನ್ನು ಎಬಿವಿಪಿ ಖಂಡಿಸುತ್ತದೆ.
ಶಿಗ್ಲಿ ನಾಕಾ ಬಳಿ ಜಮಾಯಿಸಿದ್ದ ಎಬಿವಿಪಿ ಕಾರ್ಯಕರ್ತರು ಫಯಾಜ್ ಭಾವಚಿತ್ರಕ್ಕೆ ಹಾಗೂ ಟೈರ್ಗಳಿಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಟೈರ್ಗೆ ಬೆಂಕಿ ಹಚ್ಚುವದನ್ನು ಮತ್ತು ರಸ್ತೆ ತಡೆ ಮಾಡಿ ಪ್ರತಿಭಟನೆಗಿಳಿಯದಂತೆ ತಡೆಯುತ್ತಿರುವದಕ್ಕೆ ವಿದ್ಯಾರ್ಥಿಗಳು ಅಕ್ರೋಶ ವ್ಯಕ್ತಪಡಿಸಿ ಪೊಲೀಸರು ಮತ್ತು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿದರು.
ಎಬಿವಿಪಿ ತಾಲೂಕಾ ಸಂಚಾಲಕ ಚಂದ್ರು ಕುಂದಗೋಳ, ಮಹಾಂತೇಶ ಮಣಕವಾಡ, ಅರುಣ ಕಳ್ಳಿಹಾಳ, ಸಾಗರ ಮೆಹರವಾಡೆ, ರಾಜಶೇಖರ ಅಕ್ಕೂರ, ಗಂಗಾಧರ ಸವಣೂರ, ಸೋಮಶೇಖರ ಶಿರೋಳ, ಶಿವರಾಜ ಸಿನ್ನೂರ, ಅನಿಲ, ಅಕ್ಷಯ ಮೇಡ್ಲೇರಿ, ಸಂತೋಷ ಸಾತಪೂತೆ, ಶರಣಪ್ಪ ಶಿವನಗೌಡ ಹಾಗೂ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು. ಪಿಎಸ್ಐ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿಭಟನೆಯಿಂದ 1 ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾದ ಸರಕಾರವೇ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವದು ಎಷ್ಟು ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರಲ್ಲದೆ, ಅವರ ಕುಟುಂಬಕ್ಕೆ ಆದ ನೋವು ಮತ್ತಾವುದೇ ಕುಟುಂಬದವರಿಗೆ ಆಗುವದು ಬೇಡ. ಮತಾಂಧರಿಂದ ಮಹಿಳೆಯರನ್ನು ರಕ್ಷಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು. ಫಯಾಜ್ನನ್ನು ಗಲ್ಲಿಗೇರಿಸುವವರೆಗೂ ಎಲ್ಲೆಡೆ ಹೋರಾಟ ಮುಂದುವರೆಸುತ್ತೇವೆ ಎಂದರು.