ವಿಜಯಸಾಕ್ಷಿ ಸುದ್ದಿ, ಅಣ್ಣಿಗೇರಿ
ಬಸವಣ್ಣ ದೇವರ ಜಾತ್ರೆಯ ತೇರಿನ ಗಾಲಿಗೆ ಸಿಲುಕಿ ವ್ಯಕ್ತಿಯೋರ್ವ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಶುಕ್ರವಾರ ಸಂಜೆ ಜರುಗಿದೆ.
ಮೃತನನ್ನು ಮಜ್ಜಿಗುಡ್ಡ ಗ್ರಾಮದ ದಾವಲಸಾಬ ಹಸನಸಾಬ ಮೊಕಾಶಿ (50) ಎಂದು ಗುರುತಿಸಲಾಗಿದೆ.
ಬಸವ ಜಯಂತಿ ಅಂಗವಾಗಿ ಮಜ್ಜಿಗುಡ್ಡ ಗ್ರಾಮದಲ್ಲಿ ಬಸವಣ್ಣ ದೇವರ ಜಾತ್ರೆ ಇತ್ತು. ಸಂಜೆ ತೇರು ಎಳೆಯುವ ಸಂದರ್ಭದಲ್ಲಿ ಭಕ್ತರ ನೂಕು ನುಗ್ಗಲು ಉಂಟಾಗಿ ಮೃತ ದಾವಲಸಾಬ ಕೆಳಗೆ ಬಿದ್ದಿದ್ದಾನೆ. ಆಗ ತೇರಿನ ಗಾಲಿ ತಲೆ ಮೇಲೆ ಹರಿದಿದ್ದರಿಂದ ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸಂಭ್ರಮದಿಂದ ನಡೆದಿದ್ದ ಜಾತ್ರೆಯಲ್ಲಿ ಈ ಘಟನೆ ಗ್ರಾಮದಲ್ಲಿ ಶೋಕದ ವಾತಾವರಣಕ್ಕೆ ಕಾರಣವಾಯಿತು.
ಸುದ್ದಿ ತಿಳಿದ ಅಣ್ಣಿಗೇರಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.