ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ತಕ್ಷಣವೇ ಜಾರಿಗೆ ತಂದು ಮಾದಿಗ ಸಮಾಜಕ್ಕೆ ನ್ಯಾಯ ಕೊಡಿಸಬೇಕೆಂದು ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಪರಸಪ್ಪ ಪರಾಪೂರ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಪರಸಪ್ಪ ಪರಾಪೂರ, ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಸಮುದಾಯವು ಇಡೀ ದಕ್ಷಿಣ ಭಾರತದಲ್ಲಿ ಮಾದಿಗ ಸಮುದಾಯವು ಅತ್ಯಂತ ಶೋಷಿತ ಸಮಾಜವಾಗಿದ್ದು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಮತ್ತು ರಾಜಕೀಯ ವಲಯದಲ್ಲಿ ಹಿಂದುಳಿದಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಸಮಾನತೆ ಸಾಧಿಸಲು ಮಾದಿಗ ಸಮುದಾಯ ಕಳೆದ ಆರು ದಶಕಗಳಿಂದ ಹೋರಾಟ ನಡೆಸಿದೆ.
ಆದರೆ ಇಲ್ಲಿಯವರೆಗೆ ಒಳಮೀಸಲಾತಿ ಅನುಷ್ಠಾನಕ್ಕೆ ಸರಕಾರ ಮುಂದಾಗದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಒಳಮೀಸಲಾತಿಯನ್ನು ಜಾರಿಗೆ ತಂದು ಕಳೆದ 6 ದಶಕಗಳ ಹೋರಾಟಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಅಶೋಕ ಹಾದಿಮನಿ, ಮುಖಂಡರಾದ ಪಂಪಾಪತಿ ಅಗಸಿನಕೊಪ್ಪ, ವಿರೂಪಾಕ್ಷಪ್ಪ ಗೌಡರ, ಮಂಜುನಾಥ ತೌಜಲ್, ರಮೇಶ ರಾಲದೊಡ್ಡಿ, ಸುಂಕಣ್ಣ ಗುತ್ತಿ, ಮರಿಯಪ್ಪ ಪರಾಪೂರ, ಪರಶುರಾಮ ಸಂಗಾಪೂರ, ಸದಾಶಿವ ಕೋಟ್ನಿಕಲ್, ಗೋಪಾಲ ಕೋಣಿಮನಿ, ಗೋವಿಂದ ಗುತ್ತಿ, ಮಂಜುನಾಥ ಪರಾಪೂರ, ವಿಕ್ರಮ ಮಾದರ, ವಿನಾಯಕ ಹೊಸಳ್ಳಿ, ವಿಶಾಲ ಹಾದಿಮನಿ ಮುಂತಾದವರಿದ್ದರು.