ಬೆಂಗಳೂರು: ಕಳೆದ ಒಂದು ವರ್ಷದಿಂದ ಸಿಲಿಕಾನ್ ಸಿಟಿ ಬೆಂಗಳೂರಿನ ಆರ್ ಆರ್ ನಗರ ಏರಿಯಾ ಮನೆಗಳೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ರವಿ, ನಾಗಮಣಿ ಬಂಧಿತ ಆರೋಪಿಗಳಾಗಿದ್ದು, ಅಕ್ಕಸಾಲಿಗನ ಕೆಲಸ ಮಾಡಿಕೊಂಡಿದ್ದ ಆರೋಪಿ ರವಿ, ಹಗಲಲ್ಲಿ ಹೋಗಿ ಮನೆಗಳನ್ನ ಟಾರ್ಗೆಟ್ ಮಾಡಿಕೊಂಡು ಬರ್ತಿದ್ದನು.
ಅನಂತರ ತಮಿಳು ನಾಡಿನಿಂದ ನಾಗಮಣಿಯನ್ನ ಕರೆಸಿ, ಆತನಿಗೆ ಬೆಂಗಳೂರಿನಲ್ಲಿ ರೂಂ ಬುಕ್ ಮಾಡಿ ಒಂದು ಬೈಕ್ ಕೊಡ್ತಿದ್ದನು. ಅನಂತರ ಪಕ್ಕಾ ಅಡ್ರೆಸ್ ಕೊಟ್ಟು ಕಳ್ಳತನ ಮಾಡಿಸಿ ವಾಪಸ್ ತಮಿಳುನಾಡಿಗೆ ಕಳಿಸುತ್ತಿದ್ದನು.
ಇದೇ ರೀತಿ 1 ವರ್ಷದಲ್ಲಿ ಆರ್ ಆರ್ ನಗರವೊಂದರಲ್ಲೇ 6 ಮನೆಕಳ್ಳತನ ಮಾಡಿಸಿದ್ದನು. ಕೊನೆಗೂ ನಾಗಮಣಿ ಹಾಗೂ ರವಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 530 ಗ್ರಾಂ ಚಿನ್ನ , 8 ಕೆ.ಜಿ ಬೆಳ್ಳಿ ವಶಕ್ಕೆ ಪಡೆದು ಘಟನೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.