ವಿಜಯಸಾಕ್ಷಿ ಸುದ್ದಿ, ನರೇಗಲ್ : ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಹೋಬಳಿಯಾದ್ಯಂತ ಮುಸ್ಲಿಂ ಭಾಂದವರು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು.
ಮುಂಜಾನೆಯೇ ಪಟ್ಟಣದ ಗದಗ ರಸ್ತೆಯ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿ, ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು.
ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಎ.ಎ. ನವಲಗುಂದ ಮಾತನಾಡಿ, ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬವಾಗಿದೆ. ಹಜರತ್ ಇಬ್ರಾಹಿಂ (ಸ.ಅ) ಅವರ ತ್ಯಾಗವನ್ನು ಈ ಬಕ್ರೀದ್ ಸಾಂಕೇತಿಸುತ್ತದೆ. ಹೀಗಾಗಿ ಪ್ರವಾದಿ ಹಜರತ್ ಇಬ್ರಾಹಿಂ ಅವರ ಜೀವನ, ತತ್ವಗಳನ್ನು ಹಾಗೂ ಅವರಲ್ಲಿನ ಭಕ್ತವಂತ ದೈವನಿಷ್ಠೆ ಹಾಗೂ ತ್ಯಾಗಗುಣದೊಂದಿಗೆ ಬಕ್ರೀದ್ ಹಬ್ಬ ಬೆಸೆದುಕೊಂಡಿದೆ ಎಂದರು.
ದಾವುದ ಅಲಿ ಕುದರಿ, ಮಲ್ಲಿಕಸಾಬ ರೋಣದ, ಎಸ್.ರಾಹುತ, ಎನ್.ಡಿ. ನದಾಫ್, ಗಫಾರ ಲತೀಫಸಾಬನವರ, ಎಚ್.ಡಿ. ಅಣ್ಣಿಗೇರಿ, ಅಲ್ಲಾಭಕ್ಷಿ ನದಾಫ್, ರಹಿಮಾನಸಾಬ ಮುಲ್ಲಾ ಸೇರಿದಂತೆ ನೂರಾರು ಮುಸ್ಲಿಂ ಬಾಂದವರು ಇದ್ದರು.