ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಹಿಂದೂ ಧರ್ಮದ ವರ್ಷದ ಕೊನೆಯ ಹಬ್ಬವಾದ ಹೋಳಿ ಹುಣ್ಣಿಮೆಯ ಆಚರಣೆಯನ್ನು ಇಲ್ಲಿಯ ಯುವಕ-ಯುವತಿಯರು, ಮಕ್ಕಳು ಪ್ರೀತಿ, ವಿಶ್ವಾಸದಿಂದ ಪರಸ್ಪರ ಬಣ್ಣವನ್ನು ಹಾಕುವದರೊಂದಿಗೆ ಸಂಭ್ರಮದಿಂದ ಆಚರಿಸಿದರು.
ಮಕ್ಕಳು ಮುಂಜಾನೆ 8ರಿಂದಲೇ ಆರಂಭವಾದ ಬಣ್ಣದೋಕುಳಿಯಲ್ಲಿ ತಮ್ಮ ಗೆಳೆಯ, ಗೆಳತಿಯರಿಗೆ ಬಣ್ಣವನ್ನು ಹಚ್ಚಿ ಸಂಭ್ರಮಿಸಿದರು. 10ರಿಂದ ರಂಗೇರಿದ ಹೋಳಿಯು ತಮ್ಮ ಗಲ್ಲಿ ಗಲ್ಲಿಯಲ್ಲಿ ಯುವಕ-ಯುವತಿಯರು ಪರಸ್ಪರ ಬಣ್ಣವನ್ನು ಹಾಕುತ್ತಾ ಸಂತಸ ಪಟ್ಟರು. ಮಧ್ಯಾಹ್ನ 3ರವರೆಗೂ ಆಚರಿಸಲಾಯಿತು. ಗ್ರಾಮದ ವಿವಿಧ ಗಲ್ಲಿಗಳಲ್ಲಿ ಸಂಪ್ರದಾಯದಂತೆ ಸಗಣಿಯ ಕುಳ್ಳುಗಳನ್ನು ಸಂಗ್ರಹಿಸಿ ಗುರುತಿಸಿದ ಸ್ಥಳದಲ್ಲಿ ಪೂಜೆಯೊಂದಿಗೆ ಕಾಮನ ಮೂರ್ತಿಯನ್ನು ದಹನ ಮಾಡಲಾಯಿತು.
ಮನೆ ಮನೆಗೆ ಇದರ ಬೆಂಕಿಯನ್ನು ತೆಗೆದುಕೊಂಡು ಹೋಗಿ ಕಡಲೆಕಾಳುಗಳನ್ನು ಸುಟ್ಟು ಎಲ್ಲರಿಗೆ ಹಂಚಲಾಯಿತು. ಇದಕ್ಕೂ ಮೊದಲು ಅಂಬೇಡ್ಕರ ನಗರದಲ್ಲಿ ಕಾಮದಹನ ಕಾರ್ಯಕ್ರಮ ನೆರವೇರಿತು.
ಇದರ ಬೆಂಕಿಯನ್ನು ಗ್ರಾಮ ಚವಡಿ ಸಿಬ್ಬಂದಿಯು ತೆಗೆದುಕೊಂಡು ಹೋಗಿ ಗ್ರಾಮ ಚವಡಿ ಮುಂದೆ ಕಾಮ ದಹನ ಮಾಡಿದ ನಂತರ ಗ್ರಾಮದ ವಿವಿಧೆಡೆ ಕಾಮದಹನ ಕಾರ್ಯವು ಸಂಪ್ರದಾಯದಂತೆ ನೆರವೇರಿತು.
ಭಾನುವಾರ ಸಂಜೆಯೇ ವಿವಿಧೆಡೆ ಕಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಗ್ರಾಮ ದೇವತೆ ಯುವಕ ಸಂಘವು ಗ್ರಾಮದ ಪ್ರಮುಖ ಬೀದಿಯಲ್ಲಿ ಹೋಳಿ ಪದದೊಂದಿಗೆ ರಗ್ಗಲಗಿಗಳನ್ನು ಬಾರಿಸುತ್ತಾ ಸಾಗಿದ್ದು ವಿಶೇಷ ಗಮನ ಸೆಳೆಯಿತು. ಭಾನುವಾರ ರಾತ್ರಿ 10ರಿಂದ 12ರವರೆಗೆ ಗೀಗೀ ಪದಗಳ ಸ್ಪರ್ಧೆ ನಡೆಯಿತು. ಗ್ರಾಮದ ಜಾನಪದ ಕಲಾವಿದರಾದ ಬಸವರಾಜ ಹಡಗಲಿ, ಕಲ್ಲಪ್ಪ ಬಣವಿ, ಶೇಖಪ್ಪ ಗುಂಡಳ್ಳಿ ತಂಡ ಇವರ ವಿರುದ್ಧ ಹುಲಿಗೆವ್ವ ಹೊಸಳ್ಳಿ ಸಂಗಡಿಗರು ಗಂಡು ಹೆಚ್ಚೂ ಹೆಣ್ಣು ಹೆಚ್ಚೂ ಎಂಬುದರ ಕುರಿತು ಗೀಗೀ ಪದಗಳ ಮೂಲಕ ಪ್ರಸ್ತುತಪಡಿಸಿ ಮನರಂಜಿಸಿದರು.