ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಜಕ್ಕಲಿ ಗ್ರಾಮದ ಈದ್ಗಾ ಮೈದಾನದಲ್ಲಿ ನೂರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದೊಂದಿಗೆ ಆಚರಿಸಿದರು.
ಇದಕ್ಕೂ ಮೊದಲು ಮುಸ್ಲಿಂ ಬಾಂಧವರು ಮುಂಜಾನೆ 9 ಗಂಟೆಗೆ ಊರ ಮಧ್ಯದ ಜುಮ್ಮಾ ಮಸೀದಿಯಿಂದ ಮೆರವಣಿಗೆ ಹೊರಟು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಊರ ಹೊರ ವಲಯದಲ್ಲಿರುವ ಈದ್ಗಾ ಮೈದಾನದವರೆಗೆ ಮೆರವಣಿಗೆ ನಡೆಸಿದರು.
ಶಾಂತಿ, ಸಹಬಾಳ್ವೆಯ ಸಂಕೇತವಾಗಿರುವ ರಂಜಾನ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದ ಮುಸ್ಲಿಂ ಸಮುದಾಯದವರು, ಬಡ ಜನರಿಗೆ ದಾನ, ದೇಣಿಗೆ ನೀಡಿದ್ದು ವಿಶೇಷವಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ದಿನನಿತ್ಯ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಈ ಪವಿತ್ರ ಧಾರ್ಮಿಕ ರಂಜಾನ್ ಮಾನಸಿಕ ನೆಮ್ಮದಿ ನೀಡುತ್ತದಯಲ್ಲದೇ, ಈ ತಿಂಗಳಲ್ಲಿ ಉಪವಾಸ ವ್ರತ (ರೋಜಾ) ಮಾಡುವುದರಿಂದ ವ್ಯಕ್ತಿಯು ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದರು.
ತಾ.ಪಂ ಮಾಜಿ ಸದಸ್ಯ ಮಲ್ಲಣ್ಣ ಮೇಟಿ ಮಾತನಾಡಿ, ಅಲ್ಲಾನನ್ನು ಮನದಲ್ಲಿ ನೆನದು ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ನಾವೆಲ್ಲರೂ ಒಂದೇ ಎನ್ನುವ ತತ್ವದ ಅಡಿಯಲ್ಲಿ ಜೀವನ ಸಾಗಿಸುವುದು ಪ್ರತಿಯೊಬ್ಬ ಮುಸ್ಲಿಂ ಬಾಂಧವರ ಕರ್ತವ್ಯ ಎಂದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಅಶೋಕಪ್ಪ ಯಾವಗಲ್ಲ ಮಾತನಾಡಿದರು. ನಜೀರಸಾಬ ಬಸಾಪೂರ ರಂಜಾನ್ ಮಹತ್ವ ಕುರಿತು ತಿಳಿಸಿದಲ್ಲದೇ, ಇಸ್ಲಾಂ ಧರ್ಮದ ಸಾರವನ್ನು ಬೋಧಿಸಿದರು. ಪತ್ರಕರ್ತ ಸಂಗಮೇಶ ಮೆಣಸಗಿ, ವೀರಭದ್ರಪ್ಪ ಗಾಣಿಗೇರ, ಅಂಜುಮನ್ ಇಸ್ಲಾಂ ಕಮಿಟಿಯ ಚೇರ್ಮನ್ ಯಮನೂರಸಾಬ ನದಾಫ್, ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿಯ ಸದಸ್ಯರು, ಬೂದಿಹಾಳ ಗ್ರಾಮದ ಮುಸ್ಲಿಂ ಬಾಂಧವರು ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ರಾಜು ನದಾಫ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.