ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ಜಮ್ಮು-ಕಾಶ್ಮೀರ ಮೂಲದ ವೈದ್ಯನಿಂದ ₹2.70 ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿ ಸುಜಯೇಂದ್ರ ವಿರುದ್ಧ ಪೊಲೀಸರು ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಯದುಗಿರಿ ಯತಿರಾಜ ಮಠದೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಂಡಿದ್ದ ಸುಜಯೇಂದ್ರ, ಮಠಕ್ಕೆ ಧನಸಹಾಯ ನೀಡಿ ವಿಶ್ವಾಸ ಗಳಿಸಿದ್ದ. ನಂತರ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,
ರಾಜಕೀಯ ವ್ಯಕ್ತಿಗಳೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಬಳಸಿಕೊಂಡು ಜನರನ್ನು ನಂಬಿಸುವ ಮೂಲಕ ವಂಚನೆ ನಡೆಸುತ್ತಿದ್ದನು. 2023ರಲ್ಲಿ ಏರ್ಪೋರ್ಟ್ ಸಮೀಪ ಜಮೀನು ಒದಗಿಸುವುದಾಗಿ ಹೇಳಿ ಮೋಸ ಮಾಡಿದ ಪ್ರಕರಣವೂ ಈತನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಡಾ. ರಾಜಾ ಲಂಗೇರ್ ಎಂಬ ವೈದ್ಯರು ಕೂಡ ಮಠದ ಭಕ್ತರಾಗಿದ್ದು, ಅಲ್ಲಿಯೇ ಸುಜಯೇಂದ್ರನ ಪರಿಚಯವಾಗಿತ್ತು. ತನ್ನನ್ನು ಅಮಿತ್ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ಪರಿಚಯಿಸಿಕೊಂಡ ಆತ, ಬೆಂಗಳೂರಿನ ಏರ್ಪೋರ್ಟ್ ಸಮೀಪ ಮಠಕ್ಕೆ ಸೇರಿದ ಜಮೀನನ್ನು ಕಡಿಮೆ ದರದಲ್ಲಿ ಕೊಡಿಸುವುದಾಗಿ ಹೇಳಿ ವಿಶ್ವಾಸ ಗಳಿಸಿದ್ದ.
ಸ್ವಾಮೀಜಿಯ ಸಹಮತವೂ ಇದೆ ಎಂದು ಹೇಳಿ ವೈದ್ಯರಿಂದ ₹2.70 ಕೋಟಿ ಹಣ ಪಡೆದುಕೊಂಡಿದ್ದನು. ಆದರೆ ಭರವಸೆ ನೀಡಿದಂತೆ ಜಮೀನು ಒದಗಿಸದೇ ವಿಳಂಬವಾಗುತ್ತಿದ್ದಂತೆ ಅನುಮಾನಗೊಂಡ ವೈದ್ಯರು ವಿಚಾರಣೆ ನಡೆಸಿದಾಗ ಮೋಸದ ಅಸಲಿ ಮುಖ ಬಹಿರಂಗವಾಗಿದೆ.
ಇದರ ಜೊತೆಗೆ, ಸುಜಯೇಂದ್ರನ ವಿರುದ್ಧ ರಾಜ್ಯಪಾಲರ ನಕಲಿ ಸಹಿ ಮತ್ತು ಲೋಕಭವನದ ಅಧಿಕೃತ ಲೆಟರ್ಹೆಡ್ ಬಳಸಿಕೊಂಡು ವಂಚನೆ ನಡೆಸಿದ ಆರೋಪವೂ ಕೇಳಿಬಂದಿದೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
2025ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗೆ ಪತ್ರ ಬರೆದಿದ್ದ ಸುಜಯೇಂದ್ರ, ರಾಜ್ಯಪಾಲರ ಶಿಫಾರಸ್ಸು ಇದೆ ಎಂದು ನಂಬಿಸಿ ವಿದ್ಯಾರ್ಥಿಗೆ ಸೀಟ್ ನೀಡುವಂತೆ ಒತ್ತಡ ಹೇರಿದ್ದನೆಂಬ ಆರೋಪವೂ ಇದೆ. ಈತನ ಮನೆ ಮೇಲೆ ನಡೆದ ದಾಳಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಮತ್ತು ಲೋಕಭವನದ ಹೆಸರಿನ ನಕಲಿ ಲೆಟರ್ಹೆಡ್ಗಳು ಹಾಗೂ ನಕಲಿ ಮುದ್ರೆಗಳು ಪತ್ತೆಯಾಗಿದ್ದು, ವಂಚನೆ ಜಾಲದ ವ್ಯಾಪ್ತಿ ದೊಡ್ಡದಾಗಿರುವ ಅನುಮಾನ ಮೂಡಿಸಿದೆ.



