ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ನಗರ, ಪಟ್ಟಣಗಳನ್ನು ಸ್ವಚ್ಛ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುವ ಸೇನಾನಿಗಳಾಗಿದ್ದಾರೆ. ಸಮಾಜ ಇವರನ್ನು ಗೌರವದಿಂದ ಕಾಣಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಮಂಗಳವಾರ ಪುರಸಭೆ ಆವರಣದಲ್ಲಿ 14ನೇ ವರ್ಷದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.
ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಪೂರ್ಣಿಮಾ ಪಾಟೀಲ, ಮಹೇಶ ಹೊಗೆಸೊಪ್ಪಿನ ಮಾತನಾಡಿ, ಸ್ವಚ್ಛ ಪಟ್ಟಣ, ನಗರ ನಿರ್ಮಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರನ್ನು ಎಲ್ಲ ಕಡೆ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದು, ಸೌಜನ್ಯಕ್ಕಾದರೂ ಕಾರ್ಯಕ್ರಮಗಳಲ್ಲಿ ಹೂ ನೀಡುವ ಮೂಲಕ ಗೌರವಿಸುವ ಕಾರ್ಯವಾಗಲಿ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಪಟ್ಟಣದ ಜನಸಂಖ್ಯೆಗನುಗುಣವಾಗಿ ಪೌರಕಾರ್ಮಿಕರ ಅವಶ್ಯಕತೆಯಿದೆ. ಆದರೆ ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಪುರಸಭೆಗೆ ಒಟ್ಟು 87 ಪೌರಕಾರ್ಮಿಕರ ಹುದ್ದೆಗಳಿದ್ದು, ಅದರಲ್ಲಿ 32 ಜನರು ಮಾತ್ರ ಇದ್ದಾರೆ. ಸುಮಾರು 55 ಪೌರಕಾರ್ಮಿಕರ ಅವಶ್ಯಕತೆ ಇದ್ದು, ಇದೀಗ ನಮ್ಮಲ್ಲಿ ಕೇವಲ 7 ಜನ ಸಿಬ್ಬಂದಿಗಳಿದ್ದಾರೆ. ಈ ಕುರಿತಂತೆ ಆಡಳಿತ ಮಂಡಳಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರೆಲ್ಲರಿಗೂ ಸನ್ಮಾನಿಸಿ ಸರ್ಕಾರದಿಂದ ಕೊಡಮಾಡಿದ ಚೆಕ್ಗಳನ್ನು ವಿತರಿಸಲಾಯಿತು. ಸಭೆಯಲ್ಲಿ ತಹಸೀಲ್ದಾರ ಧನಂಜಯ ಎಂ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಪೌರ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ, ದೇವಣ್ಣ ನಂದೆಣ್ಣವರ, ಪುರಸಭೆ ಸದಸ್ಯರಾದ ವಾಣಿ ಹತ್ತಿ, ಮಂಜುಳಾ ಗುಂಜಳ, ಶೋಭಾ ಮೆಣಸಿನಕಾಯಿ, ಕವಿತಾ ಶರಸೂರಿ, ಪೂಜಾ ಖರಾಟೆ, ಕಿರಣ ನವಲೆ, ನೀಲಪ್ಪ ಪೂಜಾರ, ಮಹಾಂತೇಶ ಗುಡಿಸಲಮನಿ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಬೆಳಿಕೊಪ್ಪ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಹನುಮಂತ ನಂದೆಣ್ಣವರ, ಸುರೇಶ ಪೂಜಾರ ಹಾಗೂ ಪೌರಕಾರ್ಮಿಕರು ಹಾಜರಿದ್ದರು.
ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭಗಳಾಗಿರುವ ಪೌರ ಕಾರ್ಮಿಕರು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಮ್ಮನ್ನೇ ತಾವು ಸಮರ್ಪಿಸಿಕೊಂಡಿರುತ್ತಾರೆ. ಪೌರ ಕಾರ್ಮಿಕರನ್ನು ಸಮಾಜ ಗೌರವದಿಂದ ಕಾಣಬೇಕು. ಪೌರಕಾರ್ಮಿಕ ದಿನಾಚರಣೆಯಂದು ಮಾತ್ರ ಅವರನ್ನು ಗೌರವಿಸದೆ ನಿತ್ಯ ಅವರ ಬಗ್ಗೆ ಸಮಾಜ ಉತ್ತಮ ಭಾವನೆಯಿಂದ ಕಾಣಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.


