ವಿಜಯಸಾಕ್ಷಿ ಸುದ್ದಿ, ಡಂಬಳ: ಗದಗ ಜಿಲ್ಲೆಯಲ್ಲಿ 2025ರ ಖಾರಿಫ್ ಹಂಗಾಮಿನ ಬೆಳೆವಿಮೆ ಪರಿಹಾರ ಹಾಗೂ ಸಿಸಿಇ (ಕ್ರಾಪ್ ಕಟಿಂಗ್ ಎಕ್ಸ್ಪೆರಿಮೆಂಟ್) ಪಾವತಿ ವಿಚಾರದಲ್ಲಿ ರೈತರಿಗೆ ತೀವ್ರ ಅನ್ಯಾಯವಾಗುತ್ತಿದ್ದು, ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಅಖಿಲ ಕರ್ನಾಟಕ ರಾಜ್ಯ ಕಿಸಾನ ಜಾಗೃತಿ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪಗೌಡ ಕರಮುಡಿ ಆರೋಪಿಸಿದರು.
ಡಂಬಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಬೆಂಗಳೂರು ವತಿಯಿಂದ ಜಂಟಿ ಕೃಷಿ ನಿರ್ದೇಶಕರಿಗೆ ಕಳುಹಿಸಿರುವ ಪತ್ರದಲ್ಲಿ 2025ರ ಖಾರಿಫ್ ಹಂಗಾಮಿನ ವಿವಿಧ ಬೆಳೆಗಳಿಗೆ ಒಟ್ಟು ₹89.71 ಕೋಟಿ ಸಿಸಿಇ ಕ್ಲೈಮ್ ಪ್ರಾರಂಭಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ 80-110 (ಕಪ್ ಮತ್ತು ಕ್ಯಾಪ್) ಮಾದರಿಯ ಪ್ರಕಾರ ಕಂಪನಿಯ ಹೊಣೆಗಾರಿಕೆ ₹45 ಕೋಟಿ ಮಾತ್ರವಾಗಿದೆ. ಇದರಲ್ಲಿ ಈಗಾಗಲೇ ₹16.17 ಕೋಟಿ ಎಲ್ಸಿ ಪಾವತಿ ಹಾಗೂ ₹60.50 ಲಕ್ಷ ಆರಂಭಿಕ ಸಿಸಿಇ ಪಾವತಿಗೆ ಬಳಸಲಾಗಿದೆ ಎಂದು ತಿಳಿಸಲಾಗಿದೆ ಎಂದರು.
ರಾಜ್ಯ ಕೃಷಿ ಇಲಾಖೆಯಿಂದ ಬಾಕಿ ಮೊತ್ತ ಬಿಡುಗಡೆಯಾಗದ ಕಾರಣ ಸಂಪೂರ್ಣ ಸಿಸಿಇ ಪರಿಹಾರವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಂಪನಿ ತನ್ನ ಪತ್ರದಲ್ಲಿ ಸ್ಪಷ್ಟಪಡಿಸಿರುವುದನ್ನೂ ಅವರು ಉಲ್ಲೇಖಿಸಿದರು.
ಜೂನ್ 25, 2026ರಂದು ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರೈತ ಸಂಘಗಳೊಂದಿಗೆ ನಡೆದ ಸಭೆಯಲ್ಲಿ ಕೆಂಪು ಮೆಣಸಿನಕಾಯಿ ಬೆಳೆಗಾರರಿಗೆ ಪರಿಹಾರ ನೀಡುವ ಕುರಿತು ಚರ್ಚೆ ನಡೆದಿತ್ತು. ಸಭೆಯ ಬಳಿಕ ಕಂಪನಿ ನೀಡಿದ ಪ್ರತಿಕ್ರಿಯೆಯಲ್ಲಿ, ರೈತ ಸಂಘಗಳ ಮನವಿ ಹಾಗೂ ಬೆಳೆ ಸಮೀಕ್ಷೆ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ದೊರೆತಲ್ಲಿ ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು ಎಂದು ಹೇಳಿದರು.
ಜಿಲ್ಲೆಯ ಸಾವಿರಾರು ರೈತರು ಬೆಳೆ ನಷ್ಟದಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಬಾಕಿ ಉಳಿದಿರುವ ಬೆಳೆವಿಮೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಜೊತೆಗೆ ರೈತರಿಗೆ ಅನ್ಯಾಯ ಎಸಗಿರುವ ಅಧಿಕಾರಿಗಳು ಹಾಗೂ ಓರಿಯಂಟಲ್ ಇನ್ಶುರೆನ್ಸ್ ಕಂಪನಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯಲ್ಲಪ್ಪಗೌಡ ಕರಮುಡಿ ಆಗ್ರಹಿಸಿದರು.
“ರೈತರಿಗೆ ನೀಡಬೇಕಿರುವ ಸುಮಾರು ₹28 ಕೋಟಿ ಬೆಳೆವಿಮೆ ಪರಿಹಾರವನ್ನು ವಿನಾಕಾರಣ ವಿಳಂಬ ಮಾಡಲಾಗುತ್ತಿದೆ. ಸರ್ಕಾರ ಮತ್ತು ವಿಮಾ ಕಂಪನಿ ಪರಸ್ಪರ ಹೊಣೆಗಾರಿಕೆಯನ್ನು ತಳ್ಳಿಹಾಕುತ್ತಿದ್ದು, ಅದರ ಹೊರೆ ರೈತರ ಮೇಲೆ ಬೀಳುತ್ತಿದೆ. ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು.”
– ಯಲ್ಲಪ್ಪಗೌಡ ಕರಮುಡಿ, ಜಿಲ್ಲಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ಕಿಸಾನ ಜಾಗೃತಿ ಸಂಘ



