ಪಠ್ಯಕ್ರಮ ಬದಲಾವಣೆ ಮಾಡಿದ್ದೇಕೆ?

0
Curriculum change
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಖ್ಯಾತ ಚಿಂತಕ, ವಿದ್ವಾಂಸ ಚಕ್ರವರ್ತಿ ಸೂಲಿಬೆಲೆ ಬರೆದ `ತಾಯಿ ಭಾರತೀಯ ಅಮರ ಪುತ್ರರು’ ಎಂಬ ಪಾಠದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ರಾಜಗುರು, ಸುಖದೇವ್, ಭಗತ್ ಸಿಂಗ್‌ರ ಜೀವನ ಚರಿತ್ರೆ ಅಳವಡಿಸಲಾಗಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ಪಾಠವನ್ನು ಕೈಬಿಟ್ಟಿತು. ಇಂತಹ ಮಹಾನ್ ನಾಯಕರ ಪಾಠಗಳನ್ನು ಬದಲಾವಣೆ ಮಾಡಿದ್ದೇಕೆ? ಸರ್ಕಾರ ಚಕ್ರವರ್ತಿ ಸೂಲಿಬೆಲೆ ಮೇಲಿನ ದ್ವೇಷದಿಂದ, ಬಿಜೆಪಿ ಮೇಲಿನ ಸೇಡಿನಿಂದ ಪಠ್ಯಕ್ರಮ ಬದಲಾಯಿಸಿದ್ದು ಸೂಕ್ತವಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಶಿಕ್ಷಣ ವ್ಯವಸ್ಥೆ ಹದಗೆಡಲು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ನಿರ್ಲಕ್ಷ್ಯ ಮನೋಭಾವನೆ ಕಾರಣ. ಸರ್ಕಾರದ ಎಡವಟ್ಟು ಮಾಡಿ ಸಾರ್ವಜನಿಕರ, ಶಿಕ್ಷಣ ತಜ್ಞರ ಟೀಕೆಗೆ ಗುರಿಯಾಗಿದೆ.

ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಪಠ್ಯಕ್ರಮ ರದ್ದು ಮಾಡುತ್ತೇವೆಂದರು. ಶಿಕ್ಷಣ ಇಲಾಖೆಯಲ್ಲಿ ಪಠ್ಯಕ್ರಮದ ಕುರಿತು ರಾಜಕೀಯ ಹಸ್ತಕ್ಷೇಪ ಆಗಬಾರದು. 6ನೇ ತರಗತಿಯಿಂದ 8ನೇ ತರಗತಿಯವರೆಗಿನ ಕನ್ನಡ ಹಾಗೂ ಸಾಮಾನ್ಯ ವಿಜ್ಞಾನ ವಿಷಯದಲ್ಲಿ 9 ಪಾಠಗಳನ್ನು ರದ್ದು ಮಾಡಿ ಬದಲಾವಣೆ ಮಾಡಿದರು.

ಪಠ್ಯ ಪುಸ್ತಕ ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ತಲುಪಿಸಲಿಲ್ಲ. ಆದರೆ, ಕೇವಲ ಶಿಕ್ಷಕರಿಗೆ ಮಾತ್ರ ತಲುಪಿಸಿದರು. ಇದರಿಂದ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗಿದ್ದು ದುರಾದೃಷ್ಟಕರ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಅವಧಿಯಲ್ಲಿ ಕಸ್ತೂರಿ ರಂಗನ್ ಸಮಿತಿ ಮಾಡಿ, ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ವೈಜ್ಞಾನಿಕ ತಳಹದಿ ಮೇಲೆ ಸಿದ್ದಪಡಿಸಿದ ಎನ್‌ಇಪಿಯನ್ನು ಜಾರಿಗೆ ತರಲಾಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಎನ್‌ಇಪಿ ರದ್ದು ಮಾಡಿತು. ಶಿಕ್ಷಣ ವಿಷಯದಲ್ಲಿ ಜಗಳ ಯಾಕೆ ಎಂದು ಪ್ರಶ್ನಿಸಿದ ಅವರು, ರಾಜ್ಯಾದ್ಯತ ಸಿಬಿಎಸ್‌ಸಿ, ಐಸಿಎಸ್‌ಸಿ ಶಾಲೆಗಳಲ್ಲಿ ಎನ್‌ಇಪಿ ಜಾರಿಯಾಗುತ್ತಿವೆ. ಇದರಿಂದ ನಮ್ಮ ರಾಜ್ಯದಲ್ಲಿಯೇ ಎರಡು ರೀತಿಯ ಶಿಕ್ಷಣ ವ್ಯವಸ್ಥೆ ಜಾರಿಯಿದ್ದು, ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತದೆ ಎಂದು ಹೇಳಿದರು.

ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಗೆ ಮೂರು ಪರೀಕ್ಷೆ ಮಾಡಿದರು. ಮೂರು ಪರೀಕ್ಷೆ ಮಾಡಿದ್ದರಿಂದ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬಗ್ಗೆ ಗಂಭೀರತೆ, ಘನತೆ ಹೋಗಿದೆ. ಜುಲೈ ಕೊನೆಯ ತನಕ ಕೇವಲ ಪರೀಕ್ಷೆ ಬರೆಯುತ್ತಾ ಹೋಗಬೇಕು. ಇದರಿಂದ ಪಿಯುಸಿ ತರಗತಿಯ ಎರಡು ತಿಂಗಳ ಬೊಧನಾ ವ್ಯವಸ್ಥೆ ಮುಂದೆ ಹೋಗುತ್ತದೆ. ಮೂರು ಪರೀಕ್ಷೆ ಮಾಡಿ ಅಂತ ಸರ್ಕಾರಕ್ಕೆ ಸೂಚಿಸಿದವರು ಯಾರು? ಇದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸರ್ಕಾರ ಉತ್ತರ ಕೊಡಲಿ. ಈ ವ್ಯವಸ್ಥೆ ಸ್ಥಗಿತಗೊಳಿಸಿ ಹಳೆಯ ಪದ್ಧತಿ ಜಾರಿಗೋಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಯದೇವ ಮೇಣಸಗಿ, ಪುನೀತ್ ಬೆನಕನವಾರಿ, ರವಿ ನರೆಗಲ್, ಹನಮಂತ ಹಳ್ಳೂರ, ಶಿವು ಜೋಗಿನ, ಸೋಮು ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

* ವೆಬ್ ಕಾಸ್ಟಿಂಗ್ ವ್ಯವಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಾಣ.
* ರಾಜಗುರು, ಭಗತ್ ಸಿಂಗ್, ಸುಖದೇವರ ಪಠ್ಯಕ್ರಮ ತಗೆದು ಹಾಕಿದ್ದು ದುರಂತ.
* ಎಸ್‌ಎಸ್‌ಎಲ್‌ಸಿ, ಪಿಯುಸಿಗೆ ಮೂರು ಪರೀಕ್ಷೆ ಮಾಡಿದ್ದು ಸರಿಯಾದ ಕ್ರಮವಲ್ಲ.
* 6ರಿಂದ 8ನೇ ತರಗತಿಯ 9 ಪಾಠಗಳನ್ನು ರದ್ದು ಮಾಡಿದ್ದು ಸಮಂಜಸವಲ್ಲ.
* ರಾಜ್ಯದಲ್ಲಿ ಶೇ. 43 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, ಸರ್ಕಾರ ಶೇ. 73 ಫಲಿತಾಂಶ ತೋರಿಸಿದ್ದೇಕೆ?


Spread the love

LEAVE A REPLY

Please enter your comment!
Please enter your name here